Tuesday, December 24, 2013

ಭಾವನೆಯ ಬೆನ್ನೇರಿ (ಪ್ರೇಮಪತ್ರ-9)

ಪ್ರೀತಿಯ ಗೆಳತಿ
ಪ್ರೀತಿ

ದಿನಾಲೂ ಪೋನಿನಲ್ಲಿ ತಲೆ ತಿಂತಿರ್ತೀಯಲ್ಲಾ.. ಪತ್ರ ಬರಿ ಪತ್ರ ಬರಿ.. ಬಹಳ ದಿನಗಳಾದವು ನಿನ್ನ ಬರಹಗಳನ್ನು ಓದದೆ ಅಂತ.. ಅದಕ್ಕೆ ಇವತ್ತು ಪುರಸೊತ್ತು ಮಾಡ್ಕೊಂಡು ಬರೀತಾ ಇದ್ದೇನೆ. ನಿಧಾನವಾಗಿ ಓದು. ನನ್ನಿಂದ ಏನನ್ನಾದರೂ ಬರೆಸಿಕೊಂಡೆ ಎಂಬ ನಿನ್ನ ಆಸೆ ಇದೀಗಲಾದರೂ ಈಡೇರಬಹುದು.
ನಾನು ಆಗಾಗ ಪತ್ರ ಬರೆಯಬೇಕೆನ್ನುವುದು ನಿನ್ನ ಬಯಕೆ. ನನಗೋ ಪತ್ರ ಬರೆಯಬೇಕೆಂಬ ಅದಮ್ಯ ತುಡಿತ. ಆದರೆ ಹಾಳಾದ ಬದುಕಿನ ಕ್ರಮಗಳು. ಪುರಸೊತ್ತು ಸಿಗಬೇಕಲ್ಲ.. ಸಿಕ್ಕಾಗಲೆಲ್ಲ ಹೀಗೆ ಬರೆಯುತ್ತೇನೆ. ಲೇಆಟದರೆ ಬೇಸರ ಪಡಬಾರದು ಅಷ್ಟೇ.. ಆಯ್ತಾ..
ನಿನಗೆ ಪತ್ರ ಬರೆಯುವ ಕುರಿತು ಅದಕ್ಕೊಂದು ವಿಷಯ ಬೇಕಲ್ಲ ಎಂದು ಹಲವು ಸಾರಿ ಚಿಂತಿಸಿದೆ. ಕಾಡು ಹರಟೇಯೇ ಪತ್ರವಾಗಬಾರದಲ್ಲ. ಅದಕ್ಕೆ ಏನಾದರೂ ಹೊಸತನ ಕೊಡಬೇಕಂತ ಚಿಂತಿಸುತ್ತಿದ್ದೇನೆ. ಮನಸ್ಸಂತೂ ಭಾವುಕತೆಯ ಕಡೆಗೆ ಭಾವನಾ ಲೋಕದೆಡೆಗೆ ತುಡಿಯುತ್ತಿದೆ. ಮೊನ್ನೆ ಏನಾಯ್ತು ಗೊತ್ತಾ.. ಯಾವುದೋ ಪೇಪರ್ ಕೆಲಸ ಮಾಡ್ತಾ ಇದ್ದೆ. ಆಗ ಕನ್ನಡದ ಮೇರು ನಟ ಡಾ. ರಾಜಕುಮಾರ್ ಅವರು ನಿಧನರಾದರು ಎನ್ನುವ ಸುದ್ಧಿ ತಿಳಿದು ಬಂದಿತು. ರಾಜಕುಮಾರ್ ಅವರ ಅಭಿನಯದ ಕಟ್ಟಾ ಅಭಿಮಾನಿಯಾದ ನನಗೆ ಒಮ್ಮೆಲೆ ದಿಗ್ಭ್ರಮೆ.
ಮನದಲ್ಲಿ ಏನೋ ಚಡಪಡಿಕೆ. ಏನು ಮಾಡಿದರೂ ಕೆಲಸದಲ್ಲಿ ಆಸಕ್ತಿಯೇ ಇಲ್ಲ. ಸರಿ.. ಕೆಲಸವನ್ನು ಅರ್ಧದಲ್ಲಿಯೇ ಬಿಟ್ಟು ಮನೆಗೆ ಬಂದೆ. ಮನೆಯಲ್ಲಿ ಆಗಲೋ ಎಲ್ಲರೂ ಟಿ.ವಿ.ಯ ಎದುರು ಆಸೀನರಾಗಿದ್ದರು. ನಾನು ಬರುವ ಸಮಯಕ್ಕೆ ವಿಪರ್ಯಾಸವೋ ಎಂಬಂತೆ ಟಿವಿಯಲ್ಲಿ
ಆಡಿಸಿದಾತ ಬೇಸರ ಮೂಡಿ
ಆಟ ಮುಗಿಸಿದ
ಸೂತ್ರವ ಹರಿದ ಬೊಂಬೆಯ ಮುರಿದ
ಮಣ್ಣಾಗಿಸಿದ..
ಎಂಬ ಹಾಡು ತೆರೆಯ ಮೇಲೆ ಬರುತ್ತಿತ್ತು. ಎಂತಾ ಅದ್ಭುತ ಹಾಡಲ್ವಾ ಅದು? ಆ ಹಾಡಿಗೆ ರಾಜಕುಮಾರ್ ಅವರದ್ದೂ ಅಷ್ಟೇ ಅದ್ಭುತ ಅಭಿನಯ. ನೋಡ್ತಾ ನೋಡ್ತಾ ಇದ್ದೆ. ಮನಸ್ಸಿನಲ್ಲಿ ಒಮ್ಮೆಲೆ ಅದೇನನ್ನೋ ಕಳೆದುಕೊಂಡಂತೆ ಆಯಿತು. ರಾಜಣ್ಣನ ಅಭಿನಯದ ಝಲಕಿನ ಪರಿಯಾ ಇದು? ಅಥವಾ ಹಾಡಿನ ಸೆಳಕಾ ಏನೊಂದೂ ಅರ್ಥವಾಗಲಿಲ್ಲ. ಅವರು ಸತ್ತಾಗ ಆ ಹಾಡನ್ನು ಹಾಕಿದ್ರು ಅದಕ್ಕಾಗಿ ಮನಸ್ಸಿನಲ್ಲಿ ಒಂದು ಥರಹ ಅಂದ್ಕೊಂಡೆ. ಇದು ಭಾವನೆಗಳ ಮೇಲಿನ ಪರಿಣಾಮವಾಗಿತ್ತು. ಜೊತೆಗೆ ಭಾವುಕತೆಯಾಗಿತ್ತು. ಇದನ್ನು ನಾನು ಆಗ ಅರಿತಿರಲಿಲ್ಲವಷ್ಟೆ.
ನಂತರ ಅದೇ ಬೇಜಾರು ಕಳಿಯೋಣವೆಂದುಕೊಂಡು ಮನೆಯಲ್ಲಿದ್ದ ಟೇಪ್ ರೆಕಾರ್ಡರ್ ನಲ್ಲಿ ಹಾಡು ಕೇಳಲೋಸುಗ ಸಿಕ್ಕಿದ ಕ್ಯಾಸೆಟ್ ಒಂದನ್ನು ಹಾಕಿದೆ. ಅದೋ ನಿಸಾರರ ಭಾವಗೀತೆಗಳು. ಹಚ್ಚಿದೊಡನೆಯೇ ಕೇಳಿದ್ದು..,
ಮತ್ತದೇ ಬೇಸರ, ಅದೆ ಸಂಜೆ
ಅದೆ ಏಕಾಂತ..
ನಿನ್ನ ಜೊತೆಯಿಲ್ಲದೇ, ಮಾತಿಲ್ಲದೇ
ಮನ ವಿಭ್ರಾಂತ...
ಎಂಬ ಹಾಡು. ಈ ಹಾಡಂತೂ ಮನಸ್ಸನ್ನು ಅದ್ಯಾವ ಪರಿ ಆಕ್ರಮಿಸಿಕೊಂಡುಬಿಟ್ಟಿತೆಂದರೆ ಬಹುಶಃ ನಂತರ ಇಡೀ ದಿನ ನನ್ನ ಮನಸ್ಸು ಯಾವುದೋ ರೀತಿಯಲ್ಲಿ ಇದ್ದುಬಿಟ್ಟಿತು. ಆಗ, ಕವಿ ಎಂತಹ ಭಾವನಾತ್ಮಕ ಸಾಲುಗಳನ್ನು ರಚಿಸುತ್ತಾನಲ್ಲ.. ಅನ್ನಿಸಿತು. ಅಂತಹ ಕವಿಹೃದಯ ಗ್ರೇಟ್ ಅನ್ನಿಸಿತು. ಅದಕ್ಕೂ ಮಿಗಿಲಾಗಿ ಕವಿಯ ಸಾಲಿನ ಭಾವನೆಗಳ ತೀವ್ರತೆಯನ್ನು ಗುರುತಿಸಿ ಅದರಲ್ಲಿ ಜೀವವನ್ನು ತುಂಬಿ ಅದನ್ನೊಂದು ಕರ್ಣಾಮೃತ ರಸಧಾರೆಯನ್ನಾಗಿ ಮಾಡ್ತಾನಲ್ಲಾ ಅಂತಹ ಗಾಯಕ/ಕಿ ಗ್ರೇಟ್ ಅನ್ನಿಸ್ತು.
ಬಹುಶಃ ಆ ನಂತರವೇ ನಾನು ಭಾವನೆಗಳ, ಭಾವುಕತೆಯ ಬಗ್ಗೆ ಹೆಚ್ಹೆಚ್ಚ್ಉ ಯೋಚಿಸಲು ಪ್ರಾರಂಭಿಸಿದೆನೋ ಅನ್ನಿಸುತ್ತೆ. ಮೊದ ಮೊದಲು ನಂಗೊಬ್ನಿಗೆ ಹಿಂಗಾಯ್ತಾ ಅಂತ ಯೋಚಿಸಿದೆ. ಕೊನೆಗೆ ಯಾವುದೇ ಕವಿ, ಒಳ್ಳೆಯ ಸಹೃದಯಿ, ಒಳ್ಳೆಯ ಓದುಗನಿಗೂ ಹೀಗೆಯೇ ಆಗಿರಲಿಕ್ಕೆ ಸಾಕು ಅನ್ನಿಸಿತು.
ನಂತರ ಒಳ್ಳೊಳ್ಳೆಯ ಪುಸ್ತಕಗಳನ್ನು ಓದಿದ ನಂತರ ಭಾವುಕತೆಯ ಬಗ್ಗೆ ಗೊತ್ತಾಯಿತು. ಮೊದಲೊಂದ್ಸಲ ಕುವೆಂಪು ಅವರ ಕಾನೂರು ಹೆಗ್ಗಡತಿ ಪುಸ್ತಕ ಓದಿದ್ದೆ. ಅದರಲ್ಲಿ ಭಾವುಕತೆ, ಭಾವಸಮಾಧಿಯೆಡೆಗೆ ವಿವರಣೆ ಬಂದಿತ್ತು. ಆಗ ಅದು ಸರಿಯಾಗಿ ಅರ್ಥವಾಗಿರಲಿಲ್ಲ. ಈಗ ಸಂಪೂರ್ಣ ಅರ್ಥವಾಗಿದೆ. ನನಗರಿವಿಲ್ಲದೇ ಬೆಳೆದಿರುವ ಭಾವುಕತನದಿಂದ ನನಗೆ ಖುಷಿಯೂ ಆಯಿತು.
ಇಂತಹ ಖುಷಿಯಲ್ಲಿಯೇ ಭಾವಗೀತೆ ಎಂಬ ಕವನವನ್ನೂ ರಚಿಸಿದೆ. ಅದಕ್ಕೆ ಭಾವನೆಗಳ ಹರಿವು-ತಿಳಿವುಗಳನ್ನು ಜೊತೆಗೆ ಸೇರಿಸಿದೆ. ನಿನಗೆ ಕುತೂಹಲ ಇರಬಹುದು. ತಾಳು ನಿನಗಾಗಿ ಅದನ್ನೂ ಬರೆದು ಕಳಿಸುತ್ತಿದ್ದೇನಮೆ. ಓದು,
ಭಾವಗೀತೆ ನಾನು ಬರೆದೆ
ಭಾವ ಜೀವಿಯಾಗಿ
ಹೃದಯ ಹೃದಯಗಳ ಜೊತೆಗೆ ಬೆರೆತೆ
ಭಾವ ಭಾಷಿಯಾಗಿ
ಎಂಬುದು. ಈಗ ನಿನಗೆ ಈ ನಾಲ್ಕೇ ಸಾಲುಗಳನ್ನು ಬರೆದು ಕಳಿಸುತ್ತೇನೆ. ಯಾಕಂದ್ರೆ ಬೇಸರ ಬರಬಾರದಲ್ಲ. ಇನ್ನೊಮ್ಮೆ ಯಾವತ್ತಾದ್ರೂ ಈ ಕವನವನ್ನು ಪೂರ್ತಿಯಾಗಿ ನಿನ್ನ ಬಳಿ ಪಿಸುಗುಟ್ಟುತ್ತೇನೆ. ಆಗಬಹುದಲ್ಲ.
ಇನ್ನೊಂದೇನು ಗೊತ್ತಾ, ಕವಿಗಳೆಲ್ಲ ಇಂತಹ ಭಾವುಕತೆಯ ಸನ್ನಿವೇಶದಲ್ಲೇ ಕವಿತೆಗಳನ್ನು, ಭಾವಗೀತೆಗಳನ್ನು ರಚಿಸುತ್ತಾರೆ. ಆದರೆ ಭಾವುಕತೆಯ ಬಗ್ಗೆ ಏನೇನೂ ಅರಿಯದಿರೋ ವ್ಯಕ್ತಿಗಳು ಭಾವುಕ ವ್ಯಕ್ತಿಗಳನ್ನು ಕಂಡರೆ ಆತ ಭೋಳೆ ವ್ಯಕ್ತಿ, ಆತನಿಗೆ ಮಂಕು ಹಿಡಿದೆ ಎನ್ನುತ್ತಾರೆ. ವಿಪರ್ಯಾಸ ನೋಡು `ಹುಚ್ಚು' ಎಂಬುದು ಇಂತಹ ಭಾವುಕತೆಯ ಅತ್ಯಂತ ಕಡೆಯ ಹಂತ  ಎಂಬುದನ್ನು ನಾನೆಲ್ಲೋ ಓದಿದ್ದೇನೆ. ಆದರೆ ಈಗಿನ, ನಾನು ಹೇಳುತ್ತಿರುವ ಭಾವುಕತೆಯಿಂದ -ಹುಚ್ಚಿನೆಡೆಗೆ ಬಹಳ ಬದಲಾವಣೆಗಳು ಆಘಬೇಕು. ಸಾಮಾನ್ಯರು ಇವೆರಡನ್ನೂ ಒಂದೇ ಎಂದು ತಿಳಿದಿದ್ದಾರೆ. ಆದರೆ ಅದು ನೋಡುಗರ ಕಣ್ಣಿಗೆ ಈ ಪೂರಕವಾಗಿಯೇ ಕಾಣುತ್ತದೆ.
ಬಹುಶಃ ಭಾವುಕತೆಯ ಬಗ್ಗೆ ನಿನಗೆ ಬಹುತೇಕ ಏನೇನೂ ತಿಳಿದಿರಲಿಕ್ಕಿಲ್ಲ. ಸಾಧ್ಯವಾದರೊಮ್ಮೆ ನೀನು ಕುವೆಂಪು ಅವರ ಕಾನೂರು ಹೆಗ್ಗಡತಿ ಕಾದಂಬರಿಯನ್ನು ಓದು. ಇಲ್ಲಾವದರೆ ನಿಸಾರರದ್ದೋ, ದೊಡ್ಡರಂಗೇಗೌಡರದ್ದೋ, ಲಕ್ಷ್ಮೀನಾರಾಯಣ ಭಟ್ಟರದ್ದೋ, ಶಿವರುದ್ರಪ್ಪಅವರದ್ದೋ, ಬೇಂದ್ರೆ, ಕೆ.ಎಸ್.ನರಸಿಂಹಸ್ವಾಮಿ ಅವರ ಭಾವಗೀತೆಗಳ ಕ್ಯಾಸೆಟ್ ಕೇಳು. ಸಿ. ಅಶ್ವಥ್ ಅವರ ಭಾವಗೀತೆಗಳ ಹಾಡುಗಳನ್ನು ಕೇಳು. ಒಬ್ಬನೇ ಇದ್ದಾಗ ಆ ಬಗ್ಗೆ think ಮಾಡು. ಆಗ ನಿನಗೆ ಭಾವುಕತೆ, ಭಾವಾವೇಶ ಎಂದರೇಣು ಎಂಬುದು ತಂತಾನೆ ಅರಿವಾಗಬಹುದು. ಈಗ ಬರೀತಾ ಇದ್ದಾಗ ನನ್ನ ಮನಸ್ಸೇನೋ ಭಾವುಕತೆಗೆ ಒಳಗಾಗಿದೆ. ಆದರೆ ಭಾವುಕತೆಗೆ ಒಳಗಾದಷ್ಟು ಸಲೀಸಾಗಿ ಅದರ ಬಗ್ಗೆ ಬರೆಯುವುದು ಕಷ್ಟ. ಇದು ನೆನಪಿರ್ಲಿ.
ಏನೇ ಇರಲಿ, ನಿನ್ನ ಪತ್ರ ಬರೆಯುವ ಸಂಸ್ಕೃತಿಗೆ ನನ್ನ ಪ್ರಶಂಸೆ ಇದೆ. ಇಂದಿನ ಮೊಬೈಲ್ ಪೋನ್ ಯುಗದಲ್ಲಿ, ಅವುಗಳ ಹಾವಳಿಯ ನಡುವೆಯೂ ಪತ್ರ ಸಂಸ್ಕ್ಋತಿ ಮರೆಯದೇ ನೆನಪಿನಲ್ಲಿಟ್ಟು ಪತ್ರ ಬರೆಯಲು ಪ್ರೇರೇಪಿಸಿದ್ದಕ್ಕೆ ಧನ್ಯವಾದ. ಬಹುಶಃ ಇವತ್ತಿಗಿಷ್ಟು ಸಾಕು ಅನ್ನಿಸುತ್ತಿದೆ. ಹೆಚ್ಚು ಬರೆದು ಅಜೀರ್ಣವಾಗಬಾರದಲ್ಲ. ಮುಂದೆ ಮತ್ತೆ ಬರೆಯುತ್ತೇನೆ.

ಇಂತಿ ನಿನ್ನೊಲವಿನ
ಜೀವನ್

(ಇದನ್ನು ಬರೆದಿದ್ದು ಮೇ 2006ರಲ್ಲಿ, ಶಿರಸಿಯ ಕದಂಬ ವಾಣಿಯಲ್ಲಿ ಇದು ಪ್ರಕಟಗೊಂಡಿದೆ.)

No comments:

Post a Comment