Tuesday, December 17, 2013

ಚದುರಂಗದ ಕುದುರೆಯ ಬೆನ್ನೇರಿ -ಭಾಗ 10

ಕಪ್ಪಿನೊಂದಿಗೆ ನಮ್ಮ ತಂಡ
ನಾನು ತೃಪ್ತಿ ಹಾಗೂ ಕಿಟ್ಟು ಅವರ ಮಾತನ್ನು ಕೇಳುತ್ತ ಹಾಗೇ ಸಂಗಮವನ್ನು ನೋಡಿದೆ. ಕೆಂಪು ನೀರು.. ರಕ್ತದಂತೆ ರಭಸದಿಂದ ಉಕ್ಕಿ ಹರಿದಿತ್ತು. `ಹರಿ.. ಹರಿ.. ಎಸ್ಟ್ ದಿನಾ ಅಂತ ಹರೀತಿಯಾ... ? ಹುಡುಗಿಯರ ಆರ್ಭಟ.. ಅಬ್ಬರ ಏನಿದ್ರೂ ಮದುವೆ ಆಗೋವರಿಗಂತೆ.. ಆ ಮೇಲೆ ಏನಿಲ್ಲ.. ನೀನು ಇನ್ನೆಷ್ಟು ದಿನಾ ಅಂತ ಹೀಗೆ ಹುಚ್ಚೆದ್ದು ಹರೀತಿಯಾ..?' ಅನ್ನುತ್ತಾ ನಗುತ್ತಾ ಕೃಷ್ಣೆ ಮಲಪ್ರಭೆಗೆ ಹೇಳುತ್ತಾ ಸೌಮ್ಯವಾಗಿ ಹರಿಯುತ್ತಿದ್ದಾಳೇನೋ ಅನ್ನಿಸುತ್ತಿತ್ತು.
`ಕಿಟ್ಟು... ಕೃಷ್ಣೆಯ ನಿಲುವು ಅದೆಷ್ಟು ಭವ್ಯ ಅಲ್ಲ.. ಎಲ್ಲೋ ಹುಟ್ಟಿ, ಹರಿದು, ದೂರ ದೂ...ರ ಸಾಗಿ, ಸನಿಹ ಬಂದ ನದಿಗಳನ್ನೆಲ್ಲ ಬರಸೆಳೆದು ತೆಕ್ಕೆಗೆ ಹಾಕಿ ದೈತ್ಯವಾಗಿ ಎಲ್ಲೋ ಸಮುದ್ರ ರಾಜನ ಸನ್ನಿಧಿ ಸೇರ್ತದಲ್ಲಾ.. ಎಂಥಾ ನದಿಯಲ್ವಾ..' ಎಂದೆ..
`ನಿಜ.. ಈ ಕೃಷ್ಣ ಹೇಳದು ಇದ್ದಲಾ ಅದೇ ಹಂಗೆ..ಕೃಷ್ಣ ಯಾವತ್ತಿದ್ದರೂ ಯಾರಿದ್ರೂ ಎಲ್ಲಿದ್ರೂ ಭವ್ಯವೇ..' ಅಂದ..
ನಾನು ನಕ್ಕು ಸುಮ್ಮನಾದೆ..ಅಲ್ಲೂ ನಮ್ಮ ಪೋಟೋ ಸೆಷನ್ ಮುಗಿಯಿತು.. ಆ ನಂತರ ಕೂಡಲ ಸಂಗಮಕ್ಕೆ ನಾವು ಭೆಟಿ ನೀಡಿದ ನೆನಪಿಗಾಗಿ ಹಲವು ವಸ್ತುಗಳನ್ನು ಕೊಂಡದ್ದಾಯ್ತು.. ಎಲ್ಲರೂ ಏನೇನು ಕೊಂಡರೋ.. ನಾನೊಂದು ಸ್ಫಟಿಕ ಶುಭ್ರ ಶಿವಲಿಂಗ ಕೊಂಡೆ.. ಅದೆಷ್ಟು ಚನ್ನಾಗಿತ್ತು. ಆಹ್.. ಖೂಬ್ ಸೂರತ್.. ಹಾಗೇ ಅದನ್ನು ಜೋಪಾನವಾಗಿಟ್ಟುಕೊಂಡು ಕೂಡಲಕ್ಕೆ ಬಾಯ್ ಎಂದೆವು..
ವಾಪಾಸು ಕೂಡಲ ಕತ್ರಿಗೆ ಬರುವ ವೇಳೆಗೆ ಮಲಪ್ರಭೆಗೆ ಬಂದಿದ್ದ ನೆರೆ ಕೊಂಚ ಇಳಿದಿತ್ತು.. ಹಾಗಾಗಿ ಸೇತುವೆ ಬಂದಾಗಲೆಲ್ಲ ಇಳಿದು ದಾಟುವ ಕಾರ್ಯ ಬರಲಿಲ್ಲ.. ಆದರೆ ರಾಡಿ ಸಾಕಷ್ಟಿತ್ತು.. ಕಪ್ಪು ಕಪ್ಪು ರಗಡ್..

ಇಳಕಲ್ಲಿಗೆ ಆಟೋದಲ್ಲಿ..
ಕೂಡಲ ಕ್ರಾಸಿಗೆ ಇಳಕಲ್ಲಿನಿಂದ 41 ಚಿಲ್ಲರೆ ಕಿಲೋಮೀಟರ್ ದೂರ. ಇಳಕಲ್ಲಿಗೆ ಹೋದರೆ ಮಾತ್ರ ನಮಗೆ ಹುಬ್ಬಳ್ಳಿಗೆ ಹೋಗಲು ಬಸ್ಸು. ಇಲ್ಲವಾದರೆ ಕೊಂಚ ತಾಪತ್ರಯವೇ. ಆ ಕೂಡಲ ಕ್ರಾಸಿನಲ್ಲಿ ಎಷ್ಟು ಹೊತ್ತು ಕಾದರೂ ಬಸ್ಸುಗಳನ್ನು ನಿಲ್ಲಿಸಲಿಲ್ಲ. ಕೊನೆಗೆ ಪ್ಯಾಸೆಂಜರ್ ಆಟೋ ರಿಕ್ಷಾವೊಂದು ಇಳಕಲ್ಲಿಗೆ ಹೋಗೋದಿತ್ತು. ಆಟೋದವನು ನಮ್ಮ ಬಳಿ `ಬರ್ತೀರೇನ್ರಿ..' ಅಂದ.. ನಾವು ಹಿಂದು ಮುಂದು ನೋಡುತ್ತಿದ್ದಾಗಲೇ ಗೌಡರು `ಹೌದು..ಎಷ್ಟು ತಗೋತೀರಿ..' ಎಂದುಬಿಟ್ಟರು.
ಕಿಟ್ಟು, ಪಾವಸ್ಕರ ಗಾಬರಿಯಿಂದ `ಸರ್.. ಇದರಲ್ಲಿ ಹೋಗೋದಾ..?' ಎಂದರು.
`ಹೌದಪ್ಪಾ.. ಸೋವಿಯಾಗ್ತದಂತೆ.. ನಡ್ರಿ..' ಎಂದರು ಗೌಡರು.
ಏನ್ ಮಾಡೋದು..? ಒಲ್ಲದ ಮನಸ್ಸಿನಿಂದ ಗಾಡಿಯೇರಿದೆವು. ನಾವಲ್ಲದೇ ಮತ್ಯಾರೋ ಎರಡು ಜನ ಇಳಕಲ್ಲಿಗೆ ಹೋಗುವವರು ಅದರಲ್ಲಿ ಕುಳಿತರು. ನಿಧಾನವಾಗಿ ಹೊರಟಿತು ಆಟೋ.
ದಾರಿಯಿನ್ನೂ ಕಾಲು ಭಾಗ ಸವೆದಿಲ್ಲ ನಮಗೆ ಬೇಜಾರು ಬಂದು ಬಿಟ್ಟಿತು. ಕಿಟ್ಟು-ತೃಪ್ತಿಯರ ಪಂಚಿಂಗ್ ಡೈಲಾಗುಗಳ ಸರಮಾಲೆ ಓತಪ್ರೋತವಾಗಿ ಸಾಗಿತ್ತಾದರೂ ಅದನ್ನೇ ಎಷ್ಟೊತ್ತು ಅಂತ ಕೇಳೋದು..? ಕೊನೆಗೆ ನಾವು ಅಂತ್ಯಾಕ್ಷರಿಯನ್ನು ಶುರು ಹಚ್ಚಿಕೊಂಡೆವು. ಮಧ್ಯದಲ್ಲೆಲ್ಲೋ ಮುಡು ಬಂದ ಕಾರಣ ಗೌಡರೂ ತಮ್ಮ `ಸುಂದರ' ಕಂಠದಿಂದ ಗಾಯನ ಶುರು ಹಚ್ಚಿಕೊಂಡೇ ಬಿಟ್ಟರು. ಕ್ರಮೇಣ ಅದೂ ಬೋರಾಯಿತು.
ನಾನು ಭಟ್ಕಳ ಪೂರ್ಣಿಮಾನ ಜೊತೆ ಮಾತಿಗಿಳಿದೆ. ಇದ್ದವರಲ್ಲಿ ಆಕೆ ಸ್ವಲ್ಪ ಭಾವುಕಿ. . ಸೂರ್ಯಕಾಂತಿ ಸಾಲು ಸಾಲು, ದೂರದ ದಿಗಂತದಲ್ಲಿ ಇಣುಕುತ್ತಿದ್ದ ಸೂರ್ಯ, ಚಿನ್ನದ ಕಲರಿನ ಬಾನು, ಮುಂಗಾರು ಮಳೆ, ಕಳೆದ ಆರೇಳು ದಿನಗಳು, ಚದುರಂಗದ ಆಟ, ಹೀಗೆ ಏನೆಲ್ಲಾ ಇಣುಕಿದವು ನಮ್ಮ ಮಾತು-ಕಥೆಯಲ್ಲಿ. ಅಂತೂ ಇಂತೂ ಎರಡು ತಾಸಿನ ಅಮೋಘ ಪ್ರಯಾಣದ ನಂತರ ನಮಗೆ ಇಳಕಲ್ಲಿನ ದರ್ಶನವಾಯಿತು.
ನನಗೆ ಮನಸ್ಸಿನಲ್ಲಿಯೇ..,
ಇಳಕಲ್ ಸೀರೆ ಉಟ್ಕೊಂಡು
ಮೊಳಕಾಲ್ ತನಕ ಎತ್ಕೊಂಡು
ಏರಿ ಮ್ಯಾಲೆ ಏರಿ ಬಂದ್ಲು
ನಾರಿ... ಅನ್ನೋ ಹಾಡು ಗುನುಗುತ್ತಿತ್ತು.. ಅಷ್ಟೆಲ್ಲಾ ಹೆಸರಾದ `ಇಳಕಲ್'ನ್ನೇ ನಾನು ನೋಡ್ತಿದ್ದೇನಾ ಅನ್ನಿಸಿತು. ಸಮಯ ಏಳನ್ನು ದಾಟುತ್ತಿತ್ತು.

ಇಳಕಲ್ : ಸೀರೆಯ ನಾಡಿನಲ್ಲೊಂದು ಹಾಸ್ಯ ಸಂಜೆ
ಇಳಕಲ್ ಸೀರೆಗೆ ಫೇಮಸ್ಸು. ಸೀರೆಯನ್ನು ತಯಾರು ಮಾಡೋದನ್ನು ನೋಡೋಣ ಎಂದು ಹೊರಟೆವು. ನಂಗಂತೂ ತಂಗಿಗೊಂಡು ಚೆಂದದ ಚೂಡಿದಾರ, ಮಟೀರಿಯಲ್ಲು ಕೊಳ್ಳಬೇಕು ಎನ್ನಿಸಿತು. ಒಂದೆರಡು ಅಂಗಡಿಯ ಒಳಹೊಕ್ಕು ಸೀರೆಯನ್ನು ಆರಿಸಿದ ಶಾಸ್ತ್ರ ಮಾಡಿದೆವು. ರೇಟು ಕೇಳಿದರೆ ಗಗನವನ್ನು ಮುಟ್ಟಿದ ಅನುಭವ.. ತಂಗಿಗೆ ಚುಡಿದಾರ, ಮಟೀರಿಯಲ್ಲು ಕೊಳ್ಳುವ ಆಸೆ ಕೈಬಿಟ್ಟೆ..
ವಾಪಾಸಾಗತೊಡಗಿದೆವು.. ಹೀಗೆ ಬರತೊಡಗಿದಾಗ ಅಲ್ಲೊಂದು ಅಂಗಡಿ ಕಣ್ಣಿಗೆ ಬಿತ್ತು.. ಸಾಮಾನ್ಯವಾಗಿ ಎಲ್ಲ ಕಡೆ ನಂಗೆ ಅಂಗಡಿಗಳ ಬೋರ್ಡು ಓದುವ ಚಟ. ಈ ಅಂಗಡಿ ಬೋರ್ಡು ನೋಡಿ ನಗು ಉಕ್ಕಲಾರಂಭಿಸಿತು. ನನ್ನ ಜೊತೆಯಲ್ಲೇ ನಡೆದು ಬರುತ್ತಿದ್ದ ಕಿಟ್ಟು-ತೃಪ್ತಿ-ಪವಿತ್ರಾರಿಗೆ ತೋರಿಸಿದೆ. ಅವರೂ ನಕ್ಕರು.
`ಗೊಮ್ಮಟೇಶ್ವರ ಕ್ಲಾತ್ ಸೆಂಟರ್..'
ಇಲ್ಲೊಂದು ವಿಚಿತ್ರವೂ ನಡೆಯಿತು. ನಮ್ಮೆಲ್ಲರಿಗಿಂತ ಲೇಟಾಗಿ ನಡೆದು ಬರುತ್ತಿದ್ದ ಗೌಡರಿಗೆ ಈ ಬೋರ್ಡನ್ನು ನಾನು ತೋರಿಸಿದೆ. ಅವರು `ಅದರಾಗೇನೈತೋ..' ಅಂದರು..
`ಸರ ಓದಿ ನೋಡ್ರಿ..' ಅಂದೆ
`ಗೊಮ್ಮಟೇಶ್ವರ ಕ್ಲಾತ್ ಸೆಂಟರ್.. ಅಂತದ್ದೇನೈತಪಾ ಅದರಾಗೆ..' ಅಂದರು.
`ಅದರ ಅರ್ಥ ಹೇಳ್ರಿ..' ಅಂದೆ.. ಆಲೋಚಿಸಿದ ಮೇಲೆ ಟ್ಯೂಬ್ ಲೈಟ್ ಹತ್ತಿಕೊಂಡಿತು.. ಬಿದ್ದು ಬಿದ್ದು ನಗಲಾರಂಭಿಸಿದರು. ಗೌಡರ ಟ್ಯೂಬ್ ಲೈಟ್ ನೋಡಿ ನಾವು ಮತ್ತಷ್ಟು ನಕ್ಕೆವು. (ವಿ.ಸೂ : ಇಲ್ಲಿ ಕೊಂಚ ಬದಲಾವಣೆ ಇದೆ ಆಗಬೇಕು.. ಅದು ಗೊಮ್ಮಟೇಶ್ವರ ಅಲ್ಲ.. ಬಾಹುಬಲಿ ಕ್ಲಾತ್ ಸೆಂಟರ್ ಆಗಬೇಕು.ಕೊಂಚ ನೆನಪಿನ ದೋಷ ಇದೆ.. ಸರಿಪಡಿಸಿಕೊಳ್ಳಿ)
ನಂತರ ಇಳಕಲ್ಲಿನ ಪಾರ್ಕೊಂದಕ್ಕೆ ಸಾಗಿದೆವು. ಬಹುಹೊತ್ತು ಕುಳಿತು ಹರಟಿದೆವು. ಗೌಡರು ಮತ್ತೆ `ನೀನು ಲೇಡೀಸ್ ಟೀಮ್ ಆಡಿಸಿದ್ದಕ್ಕೆ ಬ್ಲೂ ಆಗಲಿಲ್ಲ' ಎಂದರು. ಅಸಹ್ಯ ಎನ್ನಿಸಿತು ನನಗೆ ಅವರ ಮಾತು.
ರಾತ್ರಿ ಊಟ ಮುಗಿಸಿ ಹುಬ್ಬಳ್ಳಿಯ ಬಸ್ ಹತ್ತಿದೆವು. ಬಸ್ಸಿನಲ್ಲಿ ಹುಬ್ಬಳ್ಳಿಯ ವರೆಗೂ ಎಚ್ಚರಾಗಿದ್ದವರೆಂದರೆ ಕಿಟ್ಟು-ತೃಪ್ತಿ ಇಬ್ಬರೇ. ನಾನು-ಕಿಟ್ಟಿ-ತೃಪ್ತಿ-ಪವಿತ್ರಾ ಆ ಸಂಜೆ-ರಾತ್ರಿ ಅದೆಷ್ಟು ಸುದ್ದಿಗಳನ್ನು ಹಲುಬಿದೆವೊ.ಬದುಕು, ಲೈಫು, ನಮಗೆ ಬೇಕಾದ ಲವ್ವರ್ರುಗಳು, ಲಕ್ಷಣ, ಮದುವೆ, ಸಂಸಾರ ಹೀಗೆ ಏನೆಲ್ಲಾ ಮಾತನಾಡಿಕೊಂಡೆವು.. ಗದಗ, ಗುಳೇದಗುಡ್ಡ ಇಲ್ಲೆಲ್ಲ ಬಂದ ಬಸ್ಸು ಹುಬ್ಬಳ್ಳಿ ಬಸ್ ನಿಲ್ದಾಣ ತಲುಪುವ ವೇಳೆಗೆ ನನಗೆ ಹಾಗೂ ಪವಿತ್ರ ಇಬ್ಬರಿಗೂ ನಿದ್ದೆ.. ಸುದ್ದಿ ಹೇಳುತ್ತಿದ್ದ ನಮಗೆ ಅದ್ಯಾವಾಗ ನಿದ್ದೆ ಬಂದಿತ್ತೋ. ದೇವರೇ ಬಲ್ಲ..! ಕೊನೆಗೆ ಕಿಟ್ಟು ಇಬ್ಬರನ್ನೂ ಬಡಿದು ಎಚ್ಚರಿಸಬೇಕಾಯಿತು.!
ಹುಬ್ಬಳ್ಳಿಗೆ ಬಂದಾಗ ಮಧ್ಯರಾತ್ರಿ 1.30. ನಾವು ಹುಬ್ಬಳ್ಳಿಯನ್ನು ಬಿಟ್ಟದ್ದು 2.30ಕ್ಕೆ. ಶಿರಸಿಗೆ ಬಸ್ಸನ್ನೇರಿ ಬಂದೆವು. ಶಿರಸಿಯವರೆಗೆ ನಮಗೆ ಪುನಃ ನಿದ್ದೆಯೇ. ಶಿರಸಿ ತಲುಪಿದಾಗ 5 ಗಂಟೆಯ ಚುಮು ಚುಮು. ಶಿರಸಿಗರಿಗೆ ಮತ್ತದೇ ಚಳಿಯ ಚುಮು ಚುಮು ಮುಂಜಾವು. ನಾನು, ಕಿಟ್ಟಿ, ವಾನಳ್ಳಿ ಪೂರ್ಣಿಮಾ ಏಳು ಗಂಟೆಯವರೆಗೂ ಬಸ್ ಸ್ಟಾಂಡಿನಲ್ಲಿಯೇ ಹರಟಿದೆವು.
ಮುಂಜಾನೆಯೇ ವೈಪರಿತ್ಯವೆಂದರೆ ನಮ್ಮದೇ ಕಾಲೇಜಿನ ಪ್ರಿನ್ಸಿಪಾಲರು ಅದೇಕೋ ಬಸ್ ಸ್ಟಾಂಡಿಗೆ ಬಂದಿದ್ದವರು ಸಿಕ್ಕರು. ಅವರಿಗೆ ಸುದ್ದಿಯನ್ನು ತಿಳಿಸಿದೆವು. ಅವರು ಎಂದುನ ತಮ್ಮ ಶೈಲಿಯಲ್ಲಿಯೇ `ಕಂಗ್ರಾಜ್ಯುಲೆಷನ್ಸ್.. ಭಾರಿ ಚೊಲೋ ಮಾಡಿದ್ರಿ..' ಎಂದರು.
ನಮಗೊಮ್ಮೆ ಖುಷಿಯಾಯಿತು. ಏಳಕ್ಕೆ ವಾನಳ್ಳಿ ಪೂರ್ಣಿಮಾಳ ಬಸ್ಸು ಬಂದು ಅವಳು ಹೊರಟಳು. 7.30ಕ್ಕೆ ಕಿಟ್ಟುವಿನ ಬಸ್ಸು ಬಂತು. ಆತನೂ ಹೊರಟ. ನನಗಿನ್ನೂ ಬಸ್ಸು ಬಂದಿರಲಿಲ್ಲ. ಕಾಯುತ್ತಿದ್ದೆ. ರಾಘುವಿಗೆ ಪೋನ್ ಮಾಡಿದರೆ ಆತನಿನ್ನೂ ಬೆಳಗಿನ ಸುಖ ನಿದ್ದೆಯಲ್ಲಿದ್ದ `ಸೂರ್ಯವಂಶಿ..' ಆತನಿಗೆ ನಾವು ವಾಪಾಸು ಬಂದಿರುವ ಸುದ್ದಿಯನ್ನು ತಿಳಿಸಿದೆ.
ಕೊನೆಗೆ ನನಗೆ 8.30ರ ವೇಳೆಗೆ ನನ್ನ ಬಸ್ಸು ಬಂದಿತು. ಬಸ್ ಹತ್ತಿ ಮನೆಯ ಕಡೆಗೆ ಹೊರಟೆ.
ಹೀಗೆ ನಮ್ಮ ಚೆಸ್ ಯಾನ ಸಾಗಿತು. ಒಂದು ರಿಸರ್ವ್ ಬ್ಲೂ, ಒಂದು ಮ್ಯಾನ್ ಆಫ್ ದಿ ಸೀರೀಸ್, ಲೇಡೀಸ್ ಟೀಂ ಪ್ರಥಮ ಹಾಗೂ ಬಾಯ್ಸ್ ಟೀಂ ದ್ವಿತೀಯ ಎಂಬ ಹೆಗ್ಗಳಿಕೆ, ಸಾಧನೆಯೊಂದಿಗೆ ನಾವು ಬಹು ಯಶಸ್ಸಿನ ಜೊತೆ  ಜೊತೆಗೆ ನಮ್ಮ ಚಸ್ಸಿನ ಈ ಬಾಗೇವಾಡಿಯ ಯಾತ್ರೆ ವಿಜಯ ಮೆಟ್ಟಿಲಂತೆ ಅನ್ನಿಸಿತು.
ಬಸ್ಸಿನಲ್ಲಿ ಮತ್ತೆ ನನಗೆ ಯಥಾ ಪ್ರಕಾರ ಭಾರಿ ನಿದ್ದೆ. ಮತ್ತೆ ಮತ್ತೆ ಬಾಗೇವಾಡಿಯದೇ ನೆನಪು.
ಸೂರ್ಯ ನಗುತ್ತಾ ನಗುತ್ತಾ ಬಾನಿನ ದಾರಿಯಲ್ಲಿ ಮೇಲ ಮೇಲಕ್ಕೆ ಬರುತ್ತಿದ್ದ.. ಚಸ್ ನ ಚೌಕಳಿ ಚೌಕಳಿ ಮನೆಗಳು ಕಣ್ಣಿನಿಂದ, ಬದುಕಿನಿಂದ ಮರೆಯಾಗುತ್ತಿದ್ದವು..!!

((ಮುಗಿಯಿತು))
(ಬರೆಯಲು ಆರಂಭಿಸಿದ್ದು 10-12-2007ರಂದು ಬರೆದು ಮುಗಿಸಿದ್ದು 25-03-2008ರಂದು)

No comments:

Post a Comment