Wednesday, December 4, 2013

ಚದುರಂಗದ ಕುದುರೆಯ ಬೆನ್ನೇರಿ -ಭಾಗ 8

ಭಯದ ನೆರಳಿನಲ್ಲಿ ತೀರ್ಥಂಕರನೊಂದಿಗೆ
ಇಗೀ ಇಲ್ಲಿದೆ ನೋಡಿ ಬಸವನ ಬಾಗೇವಾಡಿ

ಸಂಜೆಯವರೆಗೆ ನಾನು ಖುಷಿಯಾಗಿದ್ದೆ. ಸಂಜೆಯ ಅನಂತರ ಮುಂದಿನ ದಿನ ಅದ್ಯಾರು ನನ್ನ ವಿರುದ್ಧ ಮ್ಯಾಚಿಗೆ ಬೀಳ್ತಾರೋ ಎಂಬ ಕುತೂಹಲಭರಿತ ಭಯ ಆವರಿಸಿತು. ಅಲ್ಲದೇ ನಂಗೆ ಆಟಕ್ಕೆ ಬೀಳುವವರು ಅನಿಕೇತನ್ ಪಾವಸೆ, ಸಾಗರ್ ಚಿಂಚೋಳಿಮಠ, ಸಮೀರ್ ಘೋಟ್ನೆ ಈ ಮೂವರಲ್ಲಿ ಒಬ್ಬರು ಎಂಬುದು ಖಾತ್ರಿಯಾಗಿತ್ತು. ಈ ಮೂವರು ಮಾತ್ರ ನನಗಿಂತ ಹೆಚ್ಚಿನ ಪಾಯಿಂಟುಗಳನ್ನು ಗೆದ್ದಿದ್ದರು. ಆದ್ದರಿಂದ ಇವರಲ್ಲಿಯೇ ಮ್ಯಾಚು ಬೀಳುತ್ತದೆ ಎಂದುಕೊಂಡೆ. ಈ ಮೂವರ ಪೈಕಿ ಇಬ್ಬರನ್ನು ಸೋಲಿಸುವುದು ಕಷ್ಟವಿತ್ತಾದರೂ ಮೂರನೆಯವನನ್ನು ಸೋಲಿಸಬಲ್ಲೆ ಎನ್ನುವ ಆತ್ಮವಿಶ್ವಾಸ ನನ್ನಲ್ಲಿತ್ತು. ಆದರೆ ನನಗ್ಯಾಕೋ, ನನ್ನ ವಿರುದ್ಧ ಸಾಗರ್ ಚಿಂಚೋಳಿಮಠನೇ ನನ್ನ ವಿರುದ್ಧ ಬೀಳುತ್ತಾನೆ ಎನ್ನಿಸಿತು. ಏನುಮಾಡಬೇಕೋ ತಿಳಿಯಲಿಲ್ಲ. ಕತ್ತಲೆಯಲ್ಲಿ ಭಯ ಹೆಚ್ಚಂತೆ..ರಾತ್ರಿಯಾದಂತೆ ನನ್ನೊಳಗಿನ ಭೀತಿ, ತಳಮಳ ಹೆಚ್ಚಾಯಿತು.
ಆದರೆ, ನಮ್ಮ ಹುಡುಗರು ಆ ದಿನ ಕೊಂಚ ಹೆಚ್ಚಾಗಿಯೇ ತಿಂಡಿ ತಿಂದಿದ್ದರಿಂದ ರಾತ್ರಿಯ ಊಟಕ್ಕೆ ಸ್ವಲ್ಪ ದುಡ್ಡು ಕಡಿಮೆ ಬಿದ್ದುಬಿಟ್ಟಿತು. ಹಾಗಾಗಿ ಅದನ್ನು ಇಸ್ಕೊಂಡು ಬರೋಣವೆಂದು ನಾನು ಹಾಗೂ ಪಾವಸ್ಕರ ನಮ್ಮ ಮ್ಯಾನೇಜರ್ N H Goudaರು ಉಳಿದುಕೊಂಡಿದ್ದ `ವಿಮೋಚನ' ಬಾರ್ & ಲಾಡ್ಜಿಗೆ ಹೋದೆವು. ಹೇಗೋ, ಏನೋ ಅಂದ್ಕೊಂಡು ಒಳಗೆ ಕಾಲಿಟ್ಟೆವು. ಗೌಡರು 3ನೇ ಮಹಡಿಯಲ್ಲಿದ್ದಾರೆಂದು ತಿಳಿಯಿತು. ಹೋಗುವ ವೇಳೆಗೆ 2ನೇ ಮಹಡಿಯಲ್ಲಿ ಶಿರಸಿಯ ಹುಡುಗ ನಾಗರಾಜ ಹೆಗಡೆ ಸಿಕ್ಕ. ಬ್ಲೂ ಸೆಲೆಕ್ಷನ್ನಿಗೆ ಬಂದಿದ್ದ ಆತನೂ ಅಲ್ಲಿ ಉಳಿದುಕೊಂಡಿದ್ದ. ಅವನೊಂದಿಗೆ ಹರಟೆಗೆ ಕುಳಿತೆವು. ಕೊನೆಗೆ ಮಾತು ಗೌಡರ ಕುರಿತು ಹೊರಳಿದಾಗ ಆತ `ನೀವು ಈಗ ಗೌಡರನ್ನು ಕಾಣದೇ ಇರೋದೇ ಒಳ್ಳೆಯದು' ಅಂದ.
`ಯಾಕೆ..?' ಅಂದ್ವಿ.
`ಇದು ಬಾರ್ & ಲಾಡ್ಜ್..' ಅಂದ..
`ಅಂದ್ರೆ ಕುಡ್ದಿದ್ದಾರೆ ಅಂತ ಅರ್ಥನಾ..?' ಎಂದೆ.
`ನಿ..ನಿಂಗೆ ಅಷ್ಟೂ ಅರ್ಥ ಆಗಲಿಲ್ವಾ..' ಎಂದು ಕೆಣಕಿ ತಿವಿದ ಪಾವಸ್ಕರ.
`ಬಿಡು..ಅರ್ಥ ಆಯ್ತು..'ಅಂದೆ.
ಹಾಗೆಯೇ ಸ್ವಲ್ಪಹೊತ್ತು ಕಳೆದಿದ್ದರಿಂದ ಅನುಮಾನಗೊಂಡು ನಮ್ಮನ್ನು ಹುಡುಕಲು ಕಿಟ್ಟು ಹಾಗೂ ಆನಂದ ಅಲ್ಲಿಗೆ ಬಂದರು. ಕೊನೆಗೆ ಅವರನ್ನು ನಾಗರಾಜ ಹೆಗಡೆ ಬಳಿ ಮಾತನಾಡಲು ಬಿಟ್ಟು ನಾನು ಹಾಗೂ ಪಾವಸ್ಕರ ಗೌಡರಿದ್ದ ರೂಮಿನ ಕಡೆಗೆ ಸಾಗಿದೆವು. ಅವರ ರೂಮು ಹತ್ತಿರಾದಂತೆಲ್ಲ ನಂಗೆ ಒಂಥರಾ ಅನ್ನಿಸಿತು. ಪಾವಸ್ಕರನ ಬಳಿ `ನೀನ್ಹೋಗಿ ಕೇಳೋ..'ಅಂದೆ. ಆತನಿಗೆ ಏನನ್ನಿಸಿತೋ ಏನೋ., ನೀನೂ ಬಾ ಅಂದ. ಅಂತೂ ಇಂತೂ ನಾನು ಅಂವ ಇಬ್ಬರೂ ನಿಧಾನವಾಗಿ ಹೋಗಿ ಬಾಗಿಲಲ್ಲಿ ಇಣುಕಿದೆವು.
ಆಗ ಕಾಣ್ತು.. ಅಲ್ಲಲ್ಲ.. ಕಂಡವು.. ಕಂಡರು.. ಆರೇಳು ಜನ.. ಎಲ್ಲರ ಕೈಯಲ್ಲೂ ಗ್ಲಾಸುಗಳು. ಗೌಡರ ಕೈಯಲ್ಲೂ ಅರ್ಧ ಪೆಗ್ಗು. ಗೋಗಟೆ ಕಾಲೇಜಿನ ಲೆಕ್ಚರ್ ಕೈಯಲ್ಲಿ ಪೂರ್ತಿ ಪೆಗ್ಗು. ಜೊತೆಗೆ ಆಟದ ಲೀಸ್ಟು. ವಿಚಿತ್ರವೆಂದರೆ ಅಲ್ಲಿದ್ದರು ಗೋಗಟೇ ಕಾಲೇಜಿನ ಆ ಆರು ಜನ ಆಟಗಾರರು.
ಅವರ idea ಪ್ರಕಾರವೇ list ತಯಾರಾಗುತ್ತಿತ್ತು..! ಒಮ್ಮೆ ಇಣುಕಿದ ಪಾವಸ್ಕರ `ಸರ್..' ಅಂದ. ಎಲ್ಲರೂ ಒಮ್ಮೆ ಬೆಚ್ಚಿ ಬಿದ್ದರು. ನಂಗೆ ತಕ್ಷಣ ಅಲ್ಲಿ ನಿಲ್ಲಲಾಗಲಿಲ್ಲ. ಪಾವಸ್ಕರನನ್ನು ಹಿಡಿದು ಎಳೆದುಕೊಂಡು ಬಂದೆ. ಅಷ್ಟರಲ್ಲಿ ಆ ರೂಮಿನಿಂದ ಹೊರ ಬಂದಾತ `ಏನು..?' ಅಂದ. ನಾವು ಕಾರಣ ತಿಳಿಸಿದೆವು. `ನಿಲ್ಲಿ ಬರ್ತಾರೆ..' ಅಂದ ಆತ.  ನಮ್ಮ ಕಸಿವಿಸಿ, ಗಲಿಬಿಲಿಯನ್ನು ಗಮನಿಸಿದ ಆತ ಹೋಗುವ ಮುನ್ನ `ಸ್ವಲ್ಪ ಹುಷಾರು.. ಅವರು ದೇವರಾಗಿ ಬಿಟ್ಟಿದ್ದಾರೆ..' ಎಂದ.
ನಾನು ನವೀನನ ಬಳಿ `ಬಗಲ್ ಮೆ ಶತ್ರು.. ಇಲ್ಲೆ ಇದ್ದಾನೋ..' ಅಂದೆ.
ಅದಕ್ಕೆ ಉತ್ತರವಾಗಿ ಪಾವಸ್ಕರ `ನೀನು ಬ್ಲೂ ಆಗೋ ಆಸೆ ಬಿಟ್ಬಿಡು..' ಅಂದ.
ಅಷ್ಟರಲ್ಲಿ ಅಲ್ಲಿಗೆ ಬಂದ ಗೌಡರು ಏನೆಂದು ಕೇಳಿದರು. ಹೇಳಿದೆವು. ದುಡ್ಡು ಕೊಟ್ಟರು. ನಾವು ಹೊರಡಲು ಅನುವಾದ ತಕ್ಷಣ `ನಿಲ್ಲಿ' ಅಂದರು. ನನ್ನ ಕರೆದು `ನಾಳೆ ನಿನ್ನ ವಿರುದ್ಧ ಚಿಂಚೋಳಿಮಠನ ವಿರುದ್ಧ ಬಿದ್ದೈತಿ..' ಎಂದರು.
`ಗೊತ್ತು ಸಾರ್.. ಹಿಂಗೆ ಆಗ್ತದೆ ಎಂದು ಗೊತ್ತಿತ್ತು.. ' ಅಂದೆ ಸಿಟ್ಟು ಹಾಗೂ ಅಸಹನೆಯಿಂದ.
ಆಗ ಪಾವಸ್ಕರ `ಸರ.. ಇದನ್ನ ಹ್ಯಾಂಗೂ ಚೇಂಜ್ ಮಾಡ್ಲಿಕ್ಕೆ ಆಗೋದಿಲ್ಲೇನ್ರಿ.. ಸರ ಸಮೀರನನ್ನು ಹ್ಯಾಂಗಾದ್ರೂ ಮಾಡಿ ವಿನಯನ ವಿರುದ್ಧ ಹಾಕಿಸಿ.. ಬಹಳ ದಿನಗಳ ಸೇಡು ಬಾಕಿ ಉಂಟು.. ಅವನ್ನ ಹೊಡೀತಿವಿ.. ಹಾಕಿಸ್ರಿ..' ಅಂದ.
`ಏ.. ಹಂಗೆಲ್ಲಾ ಬರಾಂಗಿಲ್ಲಪ್ಪ.. ರೂಲ್ಸೋ.. ರೂಲ್ಸು.. ಅಂವ.. ಆ ಕುಂಟ ಲೆಕ್ಚರ್ರು ಕೇಳಾಂಗಿಲ್ಲೋ..' ಎಂದರು.
ನಾನು `ಗೊತ್ತಾಯ್ತು ಬಿಡಿ ಸಾರ್.. ನಾಳೆ ತಲೆಯೆತ್ತಿ ಸೋಲ್ತೀನಿ.. ಆದ್ರೂ ನೀವು ಹೀಗ್ಮಾಡ್ಬಾರ್ದಿತ್ತು..ಬಾರಲೇ ಪಾವಸ್ಕರ..ಹೋಗಾಣ..' ಎನ್ನುತ್ತಾ ಹೊರಟು ಬಂದೆ.. ಪಾವಸ್ಕರ ಹಿಂಬಾಲಿಸಿದ.. ಹಿಂಭಾಗದಲ್ಲಿ `ಯೇ.. ವಿನಯ.. ನನ್ ಮಾತ್ ಕೇಳಲೆ..' ಎಂದು ಪದೇ ಪದೆ ಹೇಳುತ್ತಿದ್ದುದು ಕಿವಿಯ ಮೇಲೆ ಬೀಳುತ್ತಿತ್ತು.
ಕೆಳಗೆ ನಾಗರಾಜನ ರೂಮಿಗೆ ಬಂದೆ. ನಾಗರಾಜ ಎಲ್ಲಾ ಗೊತ್ತಿದ್ದವನಂತೆ ನಗುತ್ತಿದ್ದ. ಆನಂದ `ಏನು..?' ಎಂಬಂತೆ ನೋಡಿದ. ನವೀನ ಸಿಟ್ಟಿನಿಂದ `ಲೋಫರ್ಸ್.. ಮ್ಯಾಚ್ ಫಿಕ್ಸಿಂಗ್ ಕಣಲೇ..' ಎಂದ. `ನಂಗೊತ್ತಿತ್ತು.. ಗೌಡರ ಹಕೀಕತ್ತು.. ಮೊದಲನೇ ದಿನವೇ ನನಗೆ ಇದರ ಬಗ್ಗೆ ಪರಿಚಯ ಇತ್ತು..' ಎಂದ ನಾಗರಾಜ.
`ಈಗೇನ್ ಮಾಡೋದು..?' ಎಂದ ಆನಂದ.
`ಒಂದ್ ಸಾರಿ ನಮ್ M K Hegdeರಿಗೆ ಪೋನ್ ಮಾಡಿ ಕೇಳೋಣ.. ಅವರೇನಂತಾರೆ ಅಂತ ತಿಳ್ಕೊಳ್ಳೋಣ. ಅವರು ಹೇಳ್ದಾಂಗೆ ಮಾಡೋಣ..' ಎಂಬ ಸಲಹೆ ಕೊಟ್ಟ ಪಾವಸ್ಕರ.
ಕೊನೆಗೆ ಅಲ್ಲಿಯೇ ಇದ್ದ ಕಾಯಿನ್ ಬೂತಿಗೆ ಹೋಗಿ ಪೋನಾಯಿಸಿ ಹಿಂಗಿಂಗಾಯ್ತು ಅಂದೆವು. ಅದೆಷ್ಟು ಸಿಟ್ಟು ಬಂದಿತ್ತೋ ಎಂ. ಕೆ. ಹೆಗಡೆಯವರಿಗೆ `ಆ ಗೌಡರು ಅಲ್ಲಿ ಅದೇನ್ ಮಾಡ್ತಾ ಇದ್ದಾರೆ..? ಅವರಿಗೆ ಏನೇನ್ ಮಾಡ್ಬೇಕು ಎಲ್ಲಾ ಗೊತ್ತಿದೆ.. ಅದನ್ನು ಬಿಟ್ಟು ಹಿಂಗೆಂತಕ್ಕೆ ಮಾಡ್ತಾ ಇದ್ದಾರೆ..'ಎಂದವರು ಸಡನ್ನಾಗಿ `ಬಹಳ ತಗೊಂಡಿದ್ದಾರಾ..? ದುಡ್ಡು ಸುಮಾರು ಓಡಾಡಿರಬೇಕು..' ಅಂದರು. ಕೊನೆಗೆ ನಾವು ಎಲ್ಲ ಉತ್ತರ ಹೇಳಿದ ಮೇಲೆ ಅವರು ನಮ್ಮ ಬಗ್ಗೆ ಕನಿಕರಿಸಿ `ನಿಮಗೆಲ್ಲಾ ಲಾಡ್ಜಲ್ಲಿ ವ್ಯವಸ್ಥೆ ಮಾಡಿದ್ದಾರಾ..? ವ್ಯವಸ್ಥೆನಾದ್ರೂ ಚನ್ನಾಗಿ ಮಾಡಿರಬಹುದು ಅಲ್ವಾ.. ಲೇಡೀಸ್ ಹೇಗಿದ್ದಾರೆ..?' ಎಂದರು.
ಅದಕ್ಕೆ ಉತ್ತರವಾಗಿ ನಾವು ನಮಗೆ ಕೊಟ್ಟಿದ್ದ ನುಶಿಕೋಟೆಯ ಕೋಣೆಯ ಬಗ್ಗೆ, ನಮ್ಮ ತಿಂಡಿಯ ಪಡಿಪಾಟಲು, ಲೇಡೀಸ್ ಪಡುತ್ತಿರುವ ತೊಂದರೆ ಇವೆಲ್ಲದರ ಬಗ್ಗೆ ಹೇಳಿದಾಗ ಮತ್ತೆ ಸಿಟ್ಟುಮಾಡಿಕೊಂಡ ಹೆಗಡೆಯವರು `ಅಲ್ರೋ.. ಮ್ಯಾನೇಜುಮೆಂಟು ಭಾರಿ ದುಡ್ಡು ಕೊಡ್ತದೆ ಕಣ್ರೋ.. ಅವ್ರು ಕೊಡೋ ದುಡ್ಡು ನೋಡಿದ್ರೆ ನಿಮ್ಮನ್ನು ತಿಂಗಳುಗಳ ಕಾಲ ಬೇಕಾದ್ರೂ ಲಾಡ್ಜಲ್ಲಿ ಇಡಬಹುದಾಗಿತ್ತು. ಹುಂ.. ಅದೆಲ್ಲಾ ಈಗ ಹಾಗೆ ಹಾಳಾಗ್ತಾ ಇದೆ..' ಅಂದರು. ಕೊನೆಯದಾಗಿ ಪಾವಸ್ಕರ `ಸರ್ ನಿಮ್ಮನ್ನು ನಾವು ತುಂಬಾ miss ಮಾಡ್ಕೋತಾ ಇದ್ದೀವಿ.. ನೀವಿರಬೇಕಿತ್ತು ಸಾರ್.. ಗೋಗಟೆಯ ಸೊಕ್ಕು ಮುರಿಯಬಹುದಿತ್ತು..' ಅಂದು ಪೋನ್ ಇಟ್ವಿ. ಸರಿಸುಮಾರು 30 ಕಾಯಿನ್ನುಗಳು ಖಾಲಿಯಾಗಿದ್ದವು.
ಅಷ್ಟರಲ್ಲಿ ಅದೇ ದಾರಿಯಲ್ಲಿ ಗೋಗಟೆ ಹುಡುಗರು ಮರಾಟಿಯಲ್ಲಿ ಅದೇನೇನೋ ದೊಡ್ಡದಾಗಿ ಹೇಳುತ್ತಾ ನಗುತ್ತಾ ಇಳಿದು ಹೋಗುತ್ತಿದ್ದರು. ನನಗೆ ಪಾವಸ್ಕರ ಎಲ್ಲಿ ಅವರ ಜೊತೆಗೆ ಹೊಡೆದಾಟಕ್ಕೆ ಹೊರಡುತ್ತಾನೋ ಎನ್ನುವ ದಿಗಿಲಿತ್ತು.
ನಮ್ಮ ತಂಡ ಗೌಡರಿಗೆ ಬಯ್ಯುತ್ತಾ ಊಟ ಮಾಡಿ ನಾಳೆ ಗೋಗಟೆ ಕಾಲೇಜಿನ ಹುಡುಗರನ್ನು ಸೋಲಿಸಿದಂತೆ ಕನಸು ಕಾಣುತ್ತಾ ನುಶಿಕೋಟೆಗೆ ವಾಪಸ್ಸಾದೆವು.
ದೂರದಲ್ಲಿ ಗುಡುಗುವ ಸದ್ದು ಕೇಳುತ್ತಿತ್ತು.. ಸಿಕ್ಕಾಪಟ್ಟೆ ಮೋಡವಾಗಿದ್ದ ಲಕ್ಷಣಗಳೂ ಇದ್ದವು. ಸೆಖೆ ಹೆಚ್ಚಿದ್ದು ಮೈಮೇಲಿನ ಬಟ್ಟೆ ಕಿತ್ತೊಗೆಯುವಷ್ಟಾಗಿದ್ದವು..  ಮಲಗಿ ನಿದ್ರಿಸಿದೆವು. ನನಗೆ ನಿದ್ದೆ ಹತ್ತಲಿಲ್ಲ. ಮೊದ ಮೊದಲು ಗೌಡರ ಮ್ಯಾಚ್ ಫಿಕ್ಸಿಂಗ್ ನೆನಪಾಯಿತು. ನಂತರ ಆನಂದ, ಕಿಟ್ಟು, ನವೀನ , ನಮ್ಮ ಲೇಡೀಸ್ ಟೀಮಿನ ಸದಸ್ಯೆಯರು ನನ್ನ ಮೇಲಿಟ್ಟ ಭರವಸೆ, ನಾನು ಬ್ಲೂ ಆಗಬೇಕೆಂದು ಅವರೆಲ್ಲ ಪ್ರಯತ್ನ ಪಡುತ್ತಿರುವುದನ್ನು ಅನ್ನಿಸಿ ಕಣ್ಣೀರಾಯಿತು. ಕೊಂಚ ಸಮಯ ಕಳೆದ ನಂತರ ನವೀನ `ವಿನೂ.. ನಿದ್ದೆ ಬರ್ಲಿಲ್ವಾ..' ಎಂದ. `ಹೂಂ..' ಅಂದೆ.. `ಮ್ಯಾಚ್ ಆಡೋಣ್ವಾ..' ಎಂದ.. `ಸತ್ರಿ ನನ್ ಮಕ್ಳಾ.. ಈಗ್ಲೆ 12 ಗಂಟೆಗೂ ಹೆಚ್ಚಾಗಿದೆ.. ಮುಚ್ಕೊಂಡು ಮಲಕ್ಕೋಳ್ರೋ.. ನಿದ್ದೆ ಬರ್ತದಾ ನೋಡ್ತೀನಿ..' ಎಂದು ಕಿಟ್ಟು ಬೈದ..
ಅರೇ... ಯಾರಿಗೂ ನಿದ್ದೆ ಬಂದಿರಲಿಲ್ಲವೇ..


21-09-2007, ಶುಕ್ರವಾರ
`ಏ ಏಳ್ರಲೆ.. ಲೋಫರ್ಸ್.. ಏಳೂವರೆಯಾಯ್ತು.. ಮಕ್ಳಾ.. ಹಂದಿ ಹಂಗೆ ಬಿದ್ಕೊಂಡಿದ್ರೇನ್ರೋ..' ಅನ್ನೋ ಧ್ವನಿಕೇಳಿ ಎಲ್ಲ ದಡಬಡಿಸಿ ಎದ್ದೆವು. ಬಾಗಿಲು ತೆರೆದವರಿಗೆ ಎದುರಿಗೆ ಕಂಡಿದ್ದು ಲೋಫರ್ರುಗಳಿಗಿಂತ ಲೋಫರ್ರಾದ ನಾಗರಾಜ..!!
ಆತ ಬೆಳಿಗ್ಗೆ ಎದ್ದವನೇ ಚೆಸ್ ಪ್ರಾಕ್ಟೀಸಿಗೆ ನಮ್ಮ ನುಶಿಕೋಟೆಗೆ ಬಂದುಬಿಟ್ಟಿದ್ದ. ನಾವಿನ್ನೂ ಎದ್ದೇ ಇರಲಿಲ್ಲ. ಕಾರಣ ಗೊತ್ತಿದ್ದುದ್ದೇ ಆಗಿತ್ತು.
ರೂಮಿಂದ ಹೊರಗೆ ಕಾಲಿಟ್ಟರೆ ನೆಲವೆಲ್ಲ ಒದ್ದೆಮುದ್ದೆ.. ರಾತ್ರಿ ಯಾವಾಗಲೋ ಮಳೆ ಬಂದ ಕುರುಹು.. ಮಣ್ಣಿನ ವಾಸನೆ ಗಮ್ಮೆನ್ನುತ್ತಿತ್ತು.. ಕೊನೆಗೆ ಒಂದಿಷ್ಟು ಚೆಸ್ ಆಡಿ ನಾವು ಸಂಪೂರ್ಣ ತಯಾರಾಗುವ ವೇಳೆಗೆ ಸಮಯ ಒಂಭತ್ತಕ್ಕೆ ಢಣ್ಣೆಂದಿತು. ಮ್ಯಾಚು ಚಿಂಚೋಳಿಮಠನ ಮೇಲೆ ಬಿದ್ದಿದ್ದು ಫಿಸ್ಕಾಗಿಯೇ ಇತ್ತು. ಛೇಂಜಾಗಿರಲಿಲ್ಲ. ಎಲ್ಲರೂ ನನ್ನ ಬಳಿ ಬಂದು ಸಂತಾಪ ಸೂಚಕ ಮಾತುಗಳನ್ನು ಆಡುವವರೇ.. `ಬಸವನ ಬಾಗೇವಾಡಿ ಬಸವಣ್ಣ.. ಕಾಪಾಡೋ ತಂದೆ..' ಎನ್ನುತ್ತಾ ಮ್ಯಾಚಿಗೆ ಕುಳಿತೆ.
ಯಾಕೋ ಕಣ್ಣಿಗೆ ಬೋರ್ಡು ಕಾಣಲೇ ಇಲ್ಲ. ಗೌಡರ ಮೋಸವೇ ಎದ್ದೆದ್ದು ಕಾಣುತ್ತಿತ್ತು. ಸಾಯ್ಲಿ ಬಿಡು ಎಂದು neglect ಮಾಡಿದೆ. ಆ ಚಿಂಚೋಳಿಮಠನೂ ಭಯಂಕರವಾಗಿ ಆಡಿಬಿಟ್ಟ. ಪಾವಸ್ಕರ ಪದೇ ಪದೆ ನನ್ನ ಬಳಿ ಇಣುಕಿ `ಡ್ರಾ ಕೇಳೋ.. ಕೊಟ್ಟರೆ ಕೊಡಲಿ..' ಎಂದ. ನಾನು ಕೇಳಿದೆ.. `ನೋ.. ಅಂದ..' ಟೈಂಪಾಸ್ ಮಾಡಿದೆ.. ವರ್ಕೌಟ್ ಆಗಲಿಲ್ಲ.. ಕೊನೆಗೆ ಮ್ಯಾಚನ್ನು ಹೀನಾಯವಾಗಿ ಸೋತೆ.
ಅಲ್ಲಿಗೆ ನನ್ನ ಬ್ಲೂ ಆಸೆಗೆ ತಿಲಾಂಜಲಿ ನೀಡಿದೆ. ಮುಂದಿನ ಮ್ಯಾಚು ಏನಾದರೇನು ಎಂದುಕೊಂಡೆ. ಅದಕ್ಕೆ ಸರಿಯಾಗಿ ಒಬ್ಬ ಬಕರಾ ಬಿದ್ದ. ಹೀನಾಯವಾಗಿ ಸೋಲಿಸಿದೆ. ಯಾರ ಮೇಲಿನ ಸೇಡನ್ನೋ, ಸಿಟ್ಟನ್ನೋ ಇನ್ಯಾರ ಮೇಲೋ ತೀರಿಸಿಕೊಂಡೆ. ಕೊನೆಗೆ ನನ್ನ ಪಾಯಿಂಟು 4.5 ಆಯಿತು. ಬ್ಲೂ ಆಗಲಿಲ್ಲ. ರಿಸರ್ವ ಬ್ಲೂ ಆದೆ.
ಶತಮಾನದ ದುರಂತವೆಂಬಂತೆ ನಾಗರಾಜ ಹೆಗಡೆ ಬ್ಲೂ ಆಗಿಬಿಟ್ಟ.! ಆತ ಮೊದಲನೇ ಮ್ಯಾಚಿನಲ್ಲೇ ಸೋತು ಪ್ರಭಲ ಎದುರಾಳಿಗಳು ಸಿಗದಂತೆ ಮಾಡಿಕೊಂಡು ಗೆದ್ದಿದ್ದ. ನಮ್ಮ ಕಾಲೇಜಿನ ಲೇಡೀಸ್ ಟೀಮಿನ 2-3 ಆಟಗಾರರು ಆತನಿಗೆ ಸಿಕ್ಕು ಸೋತಿದ್ದರು. ನಾವು ಸೋತು ಆತ ಬ್ಲೂ ಆದಮೇಲೆ ಶುರುವಾಯಿತು ನೋಡಿ ಆತನ ಅಸಲಿ ವರಸೆ..ನಮಗೆ ಆಟವೇ ಬರುವುದಿಲ್ಲ ಎಂಬಂತೆ ಮಾತಾಡತೊಡಗಿದ. ನಾನು ಹಾಗೆ ಮಾಡಿದೆ.. ಹೀಗೆ ಮಾಡಿದೆ.. ಎಂದು ಬಡಾಯಿ ಕೊಚ್ಚಿಕೊಂಡ.
ಅನಿಕೇತನ್ ಪಾವಸೆ, ಸಾಗರ ಚಿಂಚೋಳಿಮಠ, ನಾಗರಾಜ ಹೆಗಡೆ, ಸಮೀರ ಗೋಟ್ನೆ ಹಾಗೂ ಗೋಗಟೆ ಕಾಲೇಜಿನ ಇನ್ನೊಬ್ಬ ಆಟಗಾರ ಬ್ಲೂ ಆದರು. ನಾನು, ರಾಜೇಂದ್ರ ಬಾಬು ಹಾಗೂ ಕುಮಟಾದ ಹುಡುಗನೊಬ್ಬ ಸೇರಿ ಮೂವರು ರಿಸರ್ವ ಬ್ಲೂ ಆದೆವು.
ನನಗೆ ಬಹು ಬೇಜಾರಾಗಿತ್ತು. ಸೋತಿದ್ದಕ್ಕೂ, ಗೌಡರ ಮೇಲೂ.ಕೊನೆಗೊಮ್ಮೆ ನನ್ನೊಳಗಿನ ತಳಮಳವನ್ನು ತಾಳಲಾರದೇ `ಸರ್.. ನೀವು ಹೀಗ್ಮಾಡ್ಬಾರ್ದಿತ್ತು..' ಅಂದಿದ್ದೆ.. ಅದಕ್ಕವರು `ಅಲ್ಲೋ.. ನಾನೇನೂ ಮಾಡಾಕ ಬರ್ತಿಲ್ಲಿಲ್ಲೋ..' ಅಂದರು. ಹಾಗೇ ಮುಂದುವರಿದು `ಖರೆ ಹೇಳ್ಬೇಕು ಅಂದ್ರೆ ನಿನ್ನ ಸೋಲಿಗೆ ನೀನೇ ಕಾರಣ.. ನಂಗೊತ್ತೈತಿ.. ನೀನು ಚನ್ನಾಗಾಡ್ತಿ ಅಂತ.. ಆದರೆ ನಮ್ಮ ಕಾಲೇಜಿನ ಲೇಡೀಸ್ ಟೀಮನ್ನು ಬ್ಲೂ ಸೆಲೆಕ್ಷನ್ನಿಗೆ ಆಡ್ಸಿದ್ದಿ ನೋಡು ಅದೇ ನಿನ್ನ ಸೋಲಿಗೆ ಕಾರಣವಾಯಿತು. ಅದೇ ನಿನ್ನ ದೊಡ್ಡ ತಪ್ಪು. ನಮ್ಮ ಕಾಲೇಜಿನ ಲೇಡೀಸ್ ಟೀಂ ಆಟಗಾರರನ್ನು ಸೋಲಿಸಿಯೇ ಆ ನಾಗರಾಜ ಬ್ಲೂ ಆಗಿದ್ದು..ಹಿಂಗ್ ಮಾಡಬಾರದಿತ್ತು.. ನಿನ್ನ ಸೋಲಿಗೆ ನೀನೆ ಕಾರಣ..' ಎಂದರು.
ನಾನು ವಾದ ಮಾಡಿದೆ. ಆದರೆ ಗೌಡರು ಕೇಳುವ ಹುಮ್ಮಸ್ಸಿನಲ್ಲೇ ಇರಲಿಲ್ಲ.. ಕೊನೆಗೊಮ್ಮೆ ಪಾವಸ್ಕರನ ಜೊತೆಗೆ ಈ ವಿಷಯ ಚರ್ಚೆ ಮಾಡಿದೆ. ಅದೇ ಸಮಯಕ್ಕೆ ಅಲ್ಲಿಗೆ ಬಂದ ಲೇಡೀಸ್ ಟೀಂ ಕ್ಯಾಪ್ಟನ್ ಪೂರ್ಣಿಮಾ ಟಿ. ಹೆಗಡೆ ನನ್ನ ಜೊತೆ ಮಾತಿಗೆ ನಿಂತರು. `ನಮ್ಮ ಟೀಮನ್ನು ಆಡಿಸದಿದ್ದರೆ ತಲೆಗೆ 100 ರುಪಾಯಿಯಂತೆ 400 ರು. ಉಳಿತಿತ್ತು. ಅದು ಉಳಿಯಲು ನೀ ಕೊಡಲಿಲ್ಲ.. ಅದಕ್ಕೆ ನಮ್ಮನ್ನು ಆಡಿಸಿದ ನೆಪ ಹೇಳಿದರು..' ಎಂದಳು ಆಕೆ. ಹೌದೇನೋ ಅನ್ನಿಸಿತು. ದುಡ್ಡು ಏನನ್ನು ಬೇಕಾದರೂ ಮಾಡಿಸುತ್ತದಾ..? ಅಂದುಕೊಂಡೆವು..

(ಮುಂದುವರಿಯುತ್ತದೆ..)
(ಮುಂದಿನ ಭಾಗದಲ್ಲಿ ನಿರೀಕ್ಷಿಸಿ.. ಬಾಗೇವಾಡಿಯಿಂದ ಕೂಡಲಕ್ಕೆ..ನೆರೆಯ ದಾರಿಯಲ್ಲಿ ಕಣ್ಣೀರದಾರೆ..)

No comments:

Post a Comment