Tuesday, December 10, 2013

ಹೊಟ್ಟೆ ತುಂಬಾ ಕಾಫಿ ಹಣ್ಣು ತಿಂದಾಗ..

ಪ್ರತಿಯೊಬ್ಬರಿಗೂ ಬಾಲ್ಯವೆಂದರೆ ಜೀವಂತಿಕೆ. ಮರೆಯಲಾಗದ ಮಹಾನ್ ಮಜಲುಗಳ, ಸುಂದರ ಸವಿ ನೆನಪುಗಳ ಆಗರ-ಸಾಗರ. ಹಾಗೆಯೇ ಕಿಲಾಡಿ-ತುಂಟತನಗಳ ಬುತ್ತಿ. ನನ್ನ ಬದುಕಿನಲ್ಲಿ ಬಾಲ್ಯದಲ್ಲಿ ನೂರಾರು ವಿಶಿಷ್ಟ ವಿಚಿತ್ರ ಹಾಗೂ ಖುಷಿ ನಿಡುವ ಘಟನೆಗಳು ಜರುಗಿವೆ. ಅಂತಹ ಘಟನೆಗಳ ಸರಮಾಲೆಯಲ್ಲೊಂದು ಈ ಪ್ರಸಂಗ.
ಮೊದಲೇ ಹೇಳಿ ಬಿಡುತ್ತೇನೆ. ಈ ಕಾಫಿ ಹಣ್ಣು ಇದೆಯಲ್ಲ ಇದರ ರುಚಿಯೇ ರುಚಿ. ಸಿಪ್ಪೆ ಸುಲಿದು ಬಾಯಿಗಿಟ್ಟರೆ ಸಿಹಿಯೋ ಸಿಹಿ. ಶಿರಸಿ, ಸಿದ್ದಾಪುರ ಕಡೆಗಳಲ್ಲಿ ಕಾಫಿ ಹಣ್ಣನ್ನು ತೋಟದ ನಡುವೆ ಅಲ್ಲೊಂದು ಇಲ್ಲೊಂದು ಎಂಬಂತೆ ಹಾಗೆ ಸುಮ್ಮನೆ ನೆಡುತ್ತಾರೆ. ಯಾವುದಾದರೂ ಅಧಿಕಾರಿಗಳು ಬಂದರೆ ನೋಡ್ರಿ ನಮ್ಮಲ್ಲಿ ಕಾಫಿಯೂ ಬೆಳೀತಿವೆ ಎಂದು ಸಾಕ್ಷಿ ಹೇಳುವಂತೆ. ಕೆಂಪ ಕೆಂಪನೆಯ ಹಣ್ಣು ಬಿಡುವ ಕಾಫಿ ಚಾಕಲೇಟು ಕೊಳ್ಳಲು ದುಡ್ಡಿಲ್ಲದ ಸಮಯದಲ್ಲು ಚಾಕಲೇಟಿನಂತೆ .. ಬಾಲ್ಯದಲ್ಲಿ ಇಂತಹ ಕಾಫಿ ಗಿಡಗಳಿಗೆ ದಾಳಿ ಇಟ್ಟರೆ ಕೆಂಬಣ್ಣದ ಹಣ್ಣುಗಳು ಮಾಯವಾಗಬೇಕು.. ಹಾಗೆ ತಿನ್ನುತ್ತಿದ್ದೆವು.
ಅದು ಹಾಗಿರ್ಲಿ ಬಿಡಿ.. ಈಗ ವಿಷಯಕ್ಕೆ ಬರುತ್ತೇನೆ. ಚಿಕ್ಕಂದಿನಲ್ಲಿ ನಮ್ಮೂರಿನ ಓರಗೆಯ ಹುಡುಗರಿಗೆ ನಾನೇ ನಾಯಕ. ಎಲ್ಲರಿಗಿಂತ ವಯಸ್ಸಿನಲ್ಲಿ ದೊಡ್ಡವನಾಗಿದ್ದರೂ ಆಕಾರ ಮಾತ್ರ ಕುಳ್ಳ ನೋಡಿ.. ಮಾತು, ಕಿಲಾಡಿ ಜೋರಾಗಿಯೇ ಇತ್ತು. ಇತರರೂ ಕಿಲಾಡಿಯ ವಿಷಯದಲ್ಲಿ ಜೋರಿದ್ದರೂ ನನ್ನಷ್ಟಿರದ ಕಾರಣ ನಾಯಕತ್ವವನ್ನು ನನಗೆ ದಯಪಾಲಿಸಿ ನಾನ್ ಸರಿಯಿಲ್ಲ ಎಂದು ಸುಮ್ಮನಾಗಿ ಸೈಡಿಗೆ ಹೋಗಿದ್ದರು. ನನ್ನ ಸೈನ್ಯ ಸುಮಾರು ದೊಡ್ಡದಿತ್ತು. ಹೆಚ್ಚೂ ಕಡಿಮೆ ಅರ್ಧ ಕ್ರಿಕೆಟ್ ಟೀಮಿನಷ್ಟು. ಉಳಿದವರೆಲ್ಲ ಚಿಕ್ಕವರು. ಚಿಕ್ಕ ಹುಡುಗರಲ್ವಾ.. ಅವರಿಗೆ ನಾನು ಹೇಳಿದ್ದೇ ವೇದವಾಕ್ಯ. ನಾನು ಸತ್ಯ ಹೇಳಿದರೂ, ಸುಳ್ಳು ಹೇಳಿದರೂ ನಂಬುತ್ತಿದ್ದರು. ಇದನ್ನು ನಾನು ಅಡ್ವಾಂಟೇಜ್ ಆಗಿ ತೆಗೆದುಕೊಂಡು ಹಲವು ಸುಳ್ಳುಗಳನ್ನು ಸತ್ಯದ ತಲೆಯ ಮೇಲೆ ಹೊಡೆದಂತೆ ಹೇಳಿ ಅವರನ್ನೆಲ್ಲ ನಂಬಿಸಿಬಿಡುತ್ತಿದ್ದೆ. ಬಿಡಿ.. ನಾನು ಆ ದಿನಗಳಲ್ಲಿ ಒಂಥರಾ.. ನಮ್ಮೂರಿಗೆ ಡಾನ್ ಇದ್ದಹಾಗೆ...
ಒಂದು ಭಾನುವಾರದ ಶುಭ ಮುಂಜಾವು. ಭಾನುವಾರದ ರಜಾದ ಮಜಾ ನಮ್ಮೆದುರಿಗಿತ್ತು. ಕಂಡಕಂಡಲ್ಲಿ ದಾಳಿ ಇಡುವ ಪರಿಪಾಠ ನಮ್ಮದು. ಇವತ್ತೇನು ಕಡಿದು ದಬ್ಬಾಕಬೇಕು ಎನ್ನುವ ಆಲೋಚನೆಯಲ್ಲಿ ಮುಂಜಾನೆಯೇ ಎದ್ದು ತಿಂಡಿಯನ್ನು ತಿಂದು ಕಣ್ಣಾ ಮುಚ್ಚಾಲೆಯೋ, ಮತ್ತಿನೇನೋ ಆಡುವ ನೆಪದಿಂದ  ನಮ್ಮೂರಿನ ಖ್ಯಾತಿಯೂ ಕುಖ್ಯಾತಿಯೂ ಆಗಿರುವ `ಜೀಡೇಹೋಂಡ' ಎಂಬ ಸ್ಥಳದ ಕಡೆಗೆ ಹೊರಟೆವು. ಆಟ ರಂಗೇರುತ್ತಿತ್ತು. ಸ್ವಲ್ಪ ಹೊತ್ತು ಆಡಿರಬೇಕು. ಅಷ್ಟರಲ್ಲಿ ನಮ್ಮೂರಿನ ಇನ್ನೊಂದು ಭಾಗದಿಂದ ಒಂದು ಬಹುದೊಡ್ಡ ದನ-ಎಮ್ಮೆ-ಕ್ವಾಣಗಳ ಗ್ವಾಲೆ ಕಂಡು ಬಂತು. ನಮ್ಮತ್ತಲೇ ಬರುತ್ತಿದ್ದ ಕಾರಣ ಯಾರೋ ಅದನ್ನು ಬೆನ್ನಟ್ಟುತ್ತಿದ್ದಾರೆ ಎನ್ನುವುದು ಕನ್ ಫರ್ಮ್ ಆಯಿತು. ನೋಡಿದರೆ ನಮ್ಮೂರಿನವರೇ ಆದ ಮೇಲಿನಮನೆಯ ನರಸಿಂಹಣ್ಣ.
ನಮ್ಮೂರಿನ ಬ್ಯಾಣಕ್ಕೆ ಕದ್ದು ಮೇಯಲು ಬರುತ್ತಿದ್ದ ಇನ್ನೊಂದು ಊರಿನ ಗ್ವಾಲೆ ಅದಾಗಿತ್ತು. ನಮ್ಮನ್ನು ಕಂಡವರೇ ನರಸಿಂಹಣ್ಣ ಈ ದನಗಳ ಗ್ವಾಲೆಯನ್ನು ದೂರಕ್ಕೆ ಅಟ್ಟಿ ಬನ್ನಿ. ಕಳ್ಳ ಮೇವು ಮಾಡುತ್ತಿವೆ, ನಮ್ಮ ಜಮೀನು ಹಾಳು ಮಾಡುತ್ತಿವೆ.. ಎಂದರು.
ನಮಗಂತೂ ಸಿಕ್ಕಿದ್ದೇ ಛಾನ್ಸು.. ಎಂತಾ ಕೆಲಸ.. ಆಹಾ... ಓಹೋ... ನನ್ನ ತಂಗಿ ಸುಪರ್ಣ, ಪಕ್ಕದ ಮನೆಯ ನಂದನ, ಗುರುಪ್ರಸಾದ ಮುಂತಾದ ಮಂತ್ರಿ-ಸೇನಾಧಿಪತಿಗಳೊಂದಿಗೆ ನಾನು ಯುದ್ಧಕ್ಕೆ ಜೊರಟಂತೆ ಬೆನ್ನಟ್ಟಿಕೊಂಡು ಹೊರಟೆ.
ದನದ ಗ್ವಾಲೆಯನ್ನು ಹತ್ತಿರದಲ್ಲೇ ಬಿಟ್ಟರೆ ನಮ್ಮ ಮನೆಯ ಗದ್ದೆಗೆ ನುಗ್ಗಿದರೆ ಏನ್ ಮಾಡೋದು ಎನ್ನುವ ಸಾಮಾಜಿಕ ಪ್ರಜ್ಞೆ.
ಆ ಗ್ವಾಲೆಯನ್ನು ಅಟ್ಟಿದೆವು.. ಅಟ್ಟಿದೆವು... ಓಡಿಸಿ ಓಡಿಸಿ ಸುಸ್ತಾಗಿಸಿದೆವು.. ಹಿಂದೆ ಓಡಿ ನಾವೂ ಸುಸ್ತಾದೆವು. ಕೊನೆಗೊಮ್ಮೆ ನಮ್ಮೂರಿನಿಂದ ಒಂದೋ ಎರಡೋ ಕಿಲೋಮೀಟರ್ ದೂರದಲ್ಲಿದ್ದ ಕಾಕಾಲಗದ್ದೆ ಎಂಬಲ್ಲಿ ಅಘನಾಶಿನಿ ನದಿಯನ್ನು ದಾಟಿಸಿ ಬಂದೆವು. ಮನೆಗೆ ಬರುವ ವೇಳೆಗೆ ಶುರುವಾಯ್ತು ನೋಡಿ ಮನೆಯ ಹಿರಿಯರಿಂದ ಮಂತ್ರಾಕ್ಷತೆ.. ಸಂಜೆಯಾದರೂ ಕುಂಭದ್ರೋಣ ಮಳೆಯಂತೆ ಸುರಿಯುತ್ತಲೇ ಇತ್ತು.
**
ಮರುದಿನ ಇನ್ನೂ ಭೀಕರ ಪರಿಸ್ಥಿತಿ. ಆ ದನದ ಗ್ವಾಲೆಯ ಯಜಮಾನ ಬಂದ. ನಮ್ಮ ದುರಾದೃಷ್ಟಕ್ಕೆ ಆ ಗ್ವಾಲೆಯಲ್ಲಿದ್ದ ಮರಿ ಕೋಣವೊಂದು ರಾತ್ರಿ ಹಿತ್ಲಕೈ ಎಂಬ ಊರಿನ ತೋಟಕ್ಕೆ ನುಗ್ಗಲೆತ್ನಿಸಿ, ಆ ಊರಿನವರು ತೋಟವನ್ನು ಹಂದಿ ಕಾಟದಿಂದ ರಕ್ಷಣೆ ಮಾಡಿಕೊಳ್ಳಬೇಕೆಂದು ಹಾಕಿಕೊಂಡಿದ್ದ ಕರೇಂಟ್ ಬೇಲಿಯ ಶಾಕ್ ಗೆ ಸಿಕ್ಕಿ ಸತ್ತು ಹೋಗಿತ್ತಂತೆ.
ಸಿಟ್ಟಿನಿಂದ ಹಾಗೂ ತೀರ್ಥ ಸೇವನೆಯಿಂದ ಕಂಣು ಕೆಂಪಗೆ ಮಾಡಿಕೊಂಡು ದಾರಿಯಡಿ ಬಯ್ಯುತ್ತ ಬರುತ್ತಿದ್ದ ಆತ. ನಮ್ಮೂರಿನ ಕಡೆಗೆ ಮುಖ ಮಾಡಿ ಬರುತ್ತಿದ್ದ ಆತ. ನಾನು ಹಾಗೂ ತಂಗಿ ಅದೇ ದಾರಿಯಲ್ಲಿ ನಮ್ಮ ದುರಾದೃಷ್ಟಕ್ಕೆ ಹೋಗುತ್ತಿದ್ದೆವು. ಹುಲಿ ಬಾಯಿಗೆ ಮಿಕವೇ ತಾನಾಗಿ ಬಂದು ಬಿದ್ದಂತೆ ನಾವು ಎದುರಿಗೆ ಸಿಕ್ಕೆವು. ತಿನ್ನಲು ಬಹಳ ಸಿಹಿ ಎನ್ನಿಸಿದ್ದ ಕಾಫಿ ಹಣ್ಣುಗಳು ನಮ್ಮ ಬೊಗಸೆ ಹಾಗೂ ಕಿಸೆಯ ತುಂಬ ತುಂಬಿಕೊಂಡಿದ್ದನ್ನು ಗಮನಿಸಿದ ಯಾರಾದರೂ ಕೂಡ ನಾವು ತೋಟದ ಕಾಫಿ ಗಿಡಕ್ಕೆ ಲಗ್ಗೆ ಇಟ್ಟು ಬಂದಿದ್ದೆವು ಎನ್ನುವುದನ್ನು ದೂಸರಾ ಮಾತಿಲ್ಲದೇ ಹೇಳಬಹುದಿತ್ತು.
ನಮ್ಮೂರಿನಲ್ಲಿ ಚೌಡಿ ಮಟ್ಟಿ ಎಂಬ ಇನ್ನೊಂದು ಫೇಮಸ್ ಜಾಗವಿದೆ. ಚೌಡಿಯ ಕಟ್ಟೆ ಇರುವ ಬೃಹತ್ ಮಾವಿನ ಮರ ಇರುವ ಸ್ಥಳವೇ ಚೌಡಿ ಮಟ್ಟಿ. ಮಧ್ಯಾಹ್ನದ ವೇಳಗೆ ಅಲ್ಲಿಗೆ ಹೋಗ ಬೇಡಿ ರಣ ತಿರುಗ್ತಿರ್ತದೆ ಎಂದು ಒಂದಾನೊಂದು ಕಾಲದಲ್ಲಿ ನಮ್ಮನ್ನು ಹೆದರಿಸಿದ್ದ ಪರಿಣಾಮ ನಮ್ಮೊಳಗೆ ಭೀತಿಯನ್ನು ಹುಟ್ಟುಹಾಕಿದ್ದ ಜಾಗ ಅದು. ಆತ ಸಮಾ ಅಲ್ಲೇ ನಮಗೆ ಸಿಕ್ಕ. ನಾವು ಸಿಗುವ ವರೆಗೂ ಆತನ ಬಾಯಿಂದ ಕನ್ನಡದ ಬೈಗುಳ ನಿಗಂಟು ಓತಪ್ರೋತವಾಗಿ ಬರುತ್ತಿದ್ದವು.. ಸೆನ್ಸಾರ್ ಪ್ರಾಬ್ಲಮ್ ಸಾರ್.. ಆತನ ಬೈಗುಳಗಳ ಪೈಕಿ `ಸೂ...ಮ..., ಬೋ...ಮ..' ಇತ್ಯಾದಿಗಳೆಲ್ಲ ಇದ್ದವು.. ನಮಗಂತೂ ಧಿಗಿಲ್ ದಬ್ಬಾಕ್ಕಂಡಂಗಾಗಿತ್ತು.
ಆತನ ಕಂಚಿನ ಕಂಠದ ಏರು ಧ್ವನಿಗೆ ನಾವೀ ಹೆದರಿ ಬಾಲವನ್ನು ಕಾಲ ಎಜ್ಜೆಯಲ್ಲಿ ಹಾಕಿ ಮುದುರುವ ಕುನ್ನಿಯಂತೆ.. ಕಮ್-ಕಿಮ್ ಅನ್ನದೇ ನಿಂತಿದ್ದೆವು.
ನಮ್ಮ ಬಳಿಗೆ ಬಂದ. ಅದ್ಯಾರೋ ಪುಣ್ಯಾತ್ಮ  ನಾವು ದನವನ್ನು ಬೆರೆಸಿದವರು ಎಂದು ಹೇಳಿದ್ದರಿಂದ ನಮಗೆ ಸಮಾ ಮಂತ್ರಾಕ್ಷತೆ ನಡೆಯಿತು. ಸುಮಾರು ಹೊತ್ತು ಬೈದ. ನಾವು ಸುಮ್ಮನೆ ನಿಂತಿದ್ದೆವು. ಕೊನೆಗೆ ಬಹಳ ಹೊತ್ತಿನ ನಂತರ ಆತ ಸಿಟ್ಟಿನಿಂದಲೇ `ಅಲ್ಲಾ.. ನೀವು ಹೊಟ್ಟಿಗೆ ಎಂತಾ ತಿಂತೀರಿ..?' ಎಂದು ಕೇಳಿದ.
ಆಗ ನನ್ನ ಜೊತೆಯಲ್ಲೇ ಇದ್ದ ಮಾತಿನ ಮಲ್ಲಿ ತಂಗಿ ಕೈಯಲ್ಲಿದ್ದ ಕೆಂಪು ಬಣ್ಣದ ಕಾಫಿ ಹಣ್ಣನ್ನು ತೋರಿಸುತ್ತಾ `ಅಷ್ಟೂ ಕಾಣೋದಿಲ್ವೇನೋ... ಕಾಫಿ ಹಣ್ಣು..' ಎಂದು ಬಿಡಬೇಕೆ..
ಆತ ಒಮ್ಮೆಲೇ ಬಯ್ಯುವುದನ್ನು ಬಿಟ್ಟು ದೊಡ್ಡದಾಗಿ ನಗಲು ಪ್ರಾರಂಭಿಸಿದಾಗಲೇ ನನಗೆ ಹಾಗೂ ತಂಗಿಗೆ ನಾವು ಏನು ಹೇಳಿದ್ದೆವೆಂದು ಅರ್ಥವಾಗಿದ್ದು.
ಬಹುಶಃ ಹೀಗೆ ಹೇಳಿದ್ದರಿಂದಲೇ ನಮಗೆ ಹೊಡೆತ ಬೀಳುವುದೂ ತಪ್ಪಿ ಹೋಯಿತೇನೋ.. ಆತನ ಸಿಟ್ಟು ಅರ್ಧಕ್ಕರ್ಧ ಇಳಿದಿತ್ತು. ಕೊನೆಗೆ ನಮ್ಮ ಬಳಿ `ನಿಮಗ್ಯರು ಹೇಳಿದ್ದು ದನಾ ಹೊಡಿಯಾಕೆ..?' ಎಂದ. ನಾವು ಬೋಳೆ ಸಂಕರನಂತೆ ಮೇಲಿನಮನೆಯ ನರಸಿಂಹಣ್ಣನ ಹೆರಸನ್ನು ಹೇಳಿಬಿಟ್ಟೆವು.
ಪಾಪ.. ಮನೆಯಲ್ಲಿ ನರಸಿಂಹಣ್ಣ ಇರಲಿಲ್ಲವಂತೆ.. ಅವರ ಮನೆಯಾಕಿ ಇದ್ದಳು.. ಈ ಯಜಮಾನ ಅಲ್ಲಿಗೆ ಹೋಗಿ ತನ್ನ ಸೆನ್ಸಾರ್ ಲೆಸ್ ಬೈಗುಳ ಬೈದು ಆಕೆ ಕಣ್ಣೀರು ಹಾಕಿದ ಪ್ರಸಂಗವೂ ನಡೆಯಿತು.
ಏನ್ ಮಾಡೋದು..? ಬಾಲ್ಯದಲ್ಲಿ ಹೀಗೆ ಇಲ್ಲದಿದ್ದರೆ ಆಗುತ್ತದೆಯೇ..? ನೆನಪು ಮಾಡಿಕೊಂಡಾಗಲೆಲ್ಲ.. ನಗು ಬರುತ್ತದೆ.. ಹಾಂ.. ನಾವು ಹಾಗೆ ಬೆನ್ನಟ್ಟಿ ದ್ದಕ್ಕೆ ತೀರಾ ಇತ್ತೀಚಿನ ಕೆಲ ವರ್ಷಗಳ ವರೆಗೂ ಆತನ ದನಗಳು ನಮ್ಮೂರಿನ ಬ್ಯಾಣಗಳಲ್ಲಿ ಕದ್ದು ಮೇಯುತ್ತಿರಲಿಲ್ಲ.. ನಮ್ಮೂರಿಗರು ಆ ಸಂದರ್ಭದಲ್ಲಿ ನಮಗೆ ಬೈದರೂ ಕಳ್ಳ ದನಗಳ ಕಾಟ ತಪ್ಪಿಸಿಕೊಂಡಿದ್ದಕ್ಕೆ ಮನಸ್ಸಿನಲ್ಲಿಯೇ ನಮಗೆ ಥ್ಯಾಂಕ್ಸ್ ಹೇಳಿರಲಿಕ್ಕೆ ಸಾಕು ಬಿಡಿ..
ನಮ್ಮೂರಿನ ಹುಡುಗರಿಗೆ ಕಾಡು ಸುತ್ತಿ ಗೊತ್ತಿಲ್ಲ.. ಕಿಲಾಡಿ ಮಾಡಿ ಗೊತ್ತಿಲ್ಲ.. ದಿನಾ ಶಾಲೆ-ಊಟ-ಮನೆ... ಹೋಂ ವರ್ಕುಗಳಲ್ಲಿ ಮುಳುಗಿ ಏಳುತ್ತಿವೆ. ರಜಾ ಸಿಕ್ಕರೆ ಸೈಕಲ್ ಹೊಡೆಯುತ್ತಾರಾದರೂ ಉಳಿದ ಕಿಲಾಡಿಗಳನ್ನು ಕೇಳಲೇ ಬೇಡಿ. ಈಗ ಮತ್ತೆ ಆತನ ದನಗಳು ಕಳ್ಳ ಮೇಯಲು ಬರುತ್ತಿವೆ.ನಮ್ಮೂರಿನ ಹುಡುಗರು ಜೋರಿಲ್ಲ ಬಿಡಿ..
ಆತನ ದನಗಳಿಗೂ ಇದು ಗೊತ್ತಾಗಿರಬೇಕು... ನಾವು ದೊಡ್ಡವರಾಗಿದ್ದೇವೆ... ಆ ಯಜಮಾನನಿಗೆ ವಯಸ್ಸಾಗಿದೆ.. ಸಿಕ್ಕಾಗ ಪ್ಯಾಲೆ ನಗುವನ್ನು ನಗುತ್ತಾನೆ.. ಅವನ ಪಾಲಿಗೆ ನಾವು `ಹೆಗುಡ್ರೇ...' ಆಗಿ ಬಿಟ್ಟಿದ್ದೇವೆ.. ನನ್ನ ತಂಗಿ `ಅಮ್ಮಾವ್ರಾ'ಗಿದ್ದಾಳೆ..

ಮೊನ್ನೆ ಒಮ್ಮೆ ಸಿಕ್ಕಾಗ ಆದನ್ನು ನೆನಪು ಮಾಡಿದ್ದೆ...ಆತನಿಗೆ ನೆನಪಿತ್ತೋ.. ಮರೆತಿತ್ತೋ ಗೊತ್ತಿಲ್ಲ.. ನಮ್ಮೂರಿನತ್ತ ದನವನ್ನು ಅವನೇ ಅಟ್ಟಿಕೊಂಡು ಬರುತ್ತಿದ್ದಾಗ ಈ ಪ್ರಸಂಗವನ್ನು ನೆನಪು ಮಾಡಿಕೊಟ್ಟು ಹುಷಾರು ಎಂದು ಲೈಟಾಗಿ ವಾರ್ನಿಂಗ್ ಮಾಡಿದ್ದೆ... ಅದಕ್ಕಾತ ಹೆಗುಡ್ರೆ.. ಈಗಿನ ಹುಡ್ರ ಹತ್ರ ಹಂಗಿದ್ದೆಲ್ಲಾ ಕೇಳ್ ಬ್ಯಾಡಿ ಎಂದು ದೇಶಾವರಿ ನಗೆ ನಕ್ಕಿದ್ದ..

ಹೌದಲ್ಲ ಅನ್ನಿಸುತ್ತಿದೆ.

No comments:

Post a Comment