Monday, October 21, 2013

ಪೋಲಿ ಜಾನಿಯ ಕಾಲಿ ಪೀಲಿ ಸ್ಟೋರಿ

`ಯೇ ತಮಾ...
ನಿನ್ ಮಿಣ್ಣಿ ಕೊಯ್ತೇನಿ ನೋಡು...' ಎನ್ನುವ ಡೈಲಾಗ್ ಕೇಳಿಬಂತೆಂದರೆ ಅದು ಜಾನಿಯೇ ಹೌದು..
ಎತ್ತರದ, ಬಡಕಲು ದೇಹದ, ಮಾಸಲು ಮಾಸಲು ಸೀರೆಯ, ಕಪ್ಪು ಬಣ್ಣದ, ಬಾಯಿತುಂಬ ತಂಬಾಕಿನ ಕವಳದ ಕೆಂಪಿನ, ಕೈಯಲ್ಲಿ ಸದೆಗತ್ತಿಯ ಹಿಡಿದ ಜಾನಿಯ ಬಾಹ್ಯ ಚರ್ಯೆ ಎಂತವರಿಗಾದರೂ ದೀರ್ಘಕಾಲ ನೆನಪಿನಲ್ಲಿ ಇರುತ್ತದೆ.. ಅದಕ್ಕೆ ತಕ್ಕಂತೆ ಸೆನ್ಸಾರ್ ಇಲ್ಲದ ಆಕೆಯ  ಪೋಲಿ ಮಾತುಗಳು ಆಕೆಯನ್ನು ನೆನಪಿನ ಪುಟದಲ್ಲಿ ಅಚ್ಚಳಿಯದಂತೆ ಮಾಡುತ್ತವೆ..
ಜಾನಿ ನೋಡಲು ಬಡಕಲಾದರೂ ಆಕೆಯ ಮಾತುಗಳಿಂದಲೇ ವರ್ಡ್ ಫೇಮಸ್ಸಾಗಿರುವುದು.. ಊರಿಗೆ ಜಾನಿ ಕಾಲಿಟ್ಟಕೂಡಲೇ ಊರಲ್ಲಿರುವ ಹೆಂಗಸರು ತಮ್ಮ ಮನೆಯ ಬೆಳೆಯುತ್ತಿರುವ ಮಕ್ಕಳು, ಹರೆಯದ ಹುಡುಗ-ಹುಡುಗಿಯರನ್ನು ಏನೋ ನೆಪ ಹೇಳಿ ಜಾನಿಯ ಮಾತು ಕೇಳದಷ್ಟು ದೂರಕ್ಕೆ ಕಳಿಸಲು ನೋಡುತ್ತಾರೆ.. ಈಕೆಯ ಕಣ್ಣಿಗೇನಾದರೂ ಇಂತ ಹುಡುಗರು/ಹುಡುಗಿಯರು ಮಕ್ಕಳು ಬಿದ್ದರೋ, ಪೋಲಿ ಮಾತುಗಳು ಮೇರೆ ಮೀರುತ್ತವೆ. ಮಾತು ಮಾತಿಗೆ ದ್ವಂದ್ವಾರ್ಥದ ಸಂಭಾಷಣೆಗಳನ್ನು ಪುಂಖಾನುಪುಂಖವಾಗಿ ಬಿಡುತ್ತ ಸಾಗುವ ಈಕೆಯ ಎದುರು ಜಗ್ಗೇಶ, ಎನ್ನೆಸ್ ರಾವ್, ಉಮಾಶ್ರೀಯರೆಲ್ಲ ಮಂಡಿಗಾಲು ಊರಿ ಶರಣು ಶರಣಾರ್ಥಿ ಎನ್ನಬೇಕು. ಈಕೆಯ ಪೋಲಿ ಮಾತಿಗೋ ಅಂಕೆಯೇ ಇಲ್ಲ. ಒಂದರ ಹಿಂದೊಂದರಂತೆ. ಕೇಳುಗರೇ ನಾಚಿಕೆಯಿಂದ ಕಿವಿ ಮುಚ್ಚಿಕೊಳ್ಳಬೇಕು. ಆಕೆಯ ಪೋಲಿ ಮಾತು ಅಷ್ಟು ಪರಿಣಾಮಕಾರಿ.
ಈ ಜಾನಿಗೆ ನಮ್ಮೂರಿನ ಸನಿಹವೇ ಊರು. ಬಾಯಿ ಬೊಂಬಾಯಿ ಎನ್ನುವುದನ್ನು ಬಿಟ್ಟರೆ ದುರ್ಗುಣಗಳೇನಿಲ್ಲ. ಮನೆಗೆಲಸ, ತೋಟದ ಕೆಲಸ ಈಕೆಯ ಪ್ರಮುಖ ಕಾರ್ಯಗಳು.. ಸೀಸನ್ ಟೈಮಿನಲ್ಲಿ ಮಾತ್ರ ಈಕೆ ಸೂಲಗಿತ್ತಿಯಾಗುತ್ತಾಳೆ.. ಹೌದು ಸೂಲಗಿತ್ತಿ ಕೆಲಸ ಇವಳ ಪ್ರಮುಖ ಕೆಲಸಗಳಲ್ಲಿ ಒಂದು ಎಂದರೂ ತಪ್ಪಾಗಲಿಕ್ಕಿಲ್ಲ.
`ಹೆಗಡ್ರೆ ನಾ ಮಾಡೋ ಕೆಲ್ಸಾ ಸುಲಭದ್ದಲ್ಲ ತಿಳ್ಕಳಿ.. ನನ್ ಹಂಗೆ ಮಾಡೋವ್ರು ಯಾರೂ ಇಲ್ಲ ಸುತ್ತಮುತ್ತ 10 ಹಳ್ಳಿಯಾಗೆ.. ನಾ ಕೇಳದಷ್ಟು ಕೊಡ್ಲುಲ್ಲಾ ಅಂದ್ರೆ ನಾಳಿಂದ ಬೇರೆ ಯಾರ್ ಬತ್ತಾರೆ ಅಂತ ನೋಡ್ತೂನಿ..' ಎಂದು ಲೈಟಾಗಿ ರೋಪ್ ಹಾಕುವ ಗೌಡರ ಪೈಕಿಯ ಜಾನಿ ಖಯಾಲಿಯ ಸಮಯದಲ್ಲಿ `ಅಯ್ಯೋ ಸಣ್ ಹೆಗ್ಡೇರೆ.. ಅದೆಂತಾ ಹಂಗೆ ಮುಚ್ಕಂತೀರಿ.. ನಾ ನೋಡ್ದೇ ಇರೋದೆ..' ಎಂದು ಸರಕ್ಕನೆ ಹೇಳಿ ಗಲಿಬಿಲಿಯನ್ನೂ ಹುಟ್ಟು ಹಾಕುತ್ತಾಳೆ..
ಹರೆಯದಲ್ಲಿ ಹೀಗಿದ್ದಿರಬಹುದಾ ಜಾನಿ..?

ಹತ್ತಿರ ಹತ್ತಿರ ಆರು ಅಡಿಯಷ್ಟು ಎತ್ತರದ ಜಾನಿ ನಾಜೂಕಿನ ಹೆಂಗಸಲ್ಲ. ಯಾವುದೇ ಕೆಲಸ ಮಾಡಿದರೂ ಒರಟುತನವೆನ್ನುವುದು ಎದ್ದು ಕಾಣುತ್ತದೆ. ಪಾತ್ರೆ ತೊಳೆದರೆ ಕನಿಷ್ಟ ನಾಲ್ಕು ಕಡೆಯಾದರೂ ಅದು ನಪ್ಪತ್ತಬೇಕು. ಬಟ್ಟೆ ಒಗೆದರೆ ಹರಿಯದಿದ್ದರೆ ಪುಣ್ಯ ಎನ್ನುವಷ್ಟು ಒರಟುತನ. ಈ ಕಾರಣದಿಂದಲೇ ಅನೇಕ ಮನೆಗಳಲ್ಲಿ ಜಾನಿಯನ್ನು ಮನೆಗೆಲಸಕ್ಕೆ ಕರೆಯುವುದನ್ನು ಬಿಟ್ಟಿದ್ದಾರೆ ಎಂದರೂ ತಪ್ಪಿಲ್ಲ. ತೋಟದ ಕೆಲಸವನ್ನು ಜಾನಿ ನಿಜವಾಗಿಯೂ ಚನ್ನಾಗಿ ಮಾಡುತ್ತಾಳೆ.. ಗಂಡಾಳಿಗೆ ಸರಿಸಮನಾಗಿ ದುಡಿಯುತ್ತಾಳೆ ಎನ್ನಬಹುದು. ಗಂಡಾಳು ತರುವಂತಹ ಹುಲ್ಲು ಹೊರೆ, ಕಟ್ಟಿಗೆ ಹೊರೆ, ಸೊಪ್ಪಿನ ಹೊರೆಯನ್ನು ಹೊತ್ತು ತಂದಾಗ ನಾನೇ ಅನೇಕ ಸಾರಿ `ಜಾನಿ.. ನೀ ಗಂಡ್ಸಾಗಬೇಕಿತ್ತೆ..' ಎಂದು ಛೇಡಿಸಿದ್ದಿದೆ.. ಅದಕ್ಕವಳು ಸಿಟ್ಟಿನಿಂದ `ಸಣ್ಣ ಹೆಗುಡ್ರೆ.. ನಿಮ್ ಗಂಡುಸ್ರದ್ದೆಲ್ಲ ಕಂಡೀನಿ ಸುಮ್ಕಿರಿ.. ನನ್ ಹತ್ರ ಹೇಳೂಕ್ ಬರ್ಬೇಡಿ.. ಎಲ್ಲಾರ್ದೂ ಒಂದೇ ನಮೂನಿ..' ಎಂದು ಬಾಂಬ್ ಒಗೆದ ಮೇಲೆ ನಾನು ಮರುಮಾತಿಲ್ಲದೇ ಮಂಗಮಾಯವಾಗಬೇಕು.. ಅಂತಹ ಮಾತುಗಳು ಬರುತ್ತಿದ್ದವು.
`ಅಮ್ಮಾ..ನಮ್ ದೊಡ್ಡ ಹೆಗುಡ್ರಿಗೆ  ಲುಂಗಿ ಗಟ್ಟಿ ಕಟ್ಗಳಾಕೆ ಹೇಳಿ.. ಮೊನ್ನೆ ಗದ್ದೆ ಹಾಳಿ ಮ್ಯಾಲೆ ದೊಡ್ಡ ಗಾಳಿ ಬೀಸಿ ಲುಂಗಿ ಬಿಚ್ಚೋಗಿ ದೇವರ ದರ್ಶನ ಆಗೋತು..' ಎಂದು ಲೈಟಾಗಿ ವಾರ್ನಿಂಗು ಮಾಡುವ ಕಲೆಯೂ ಜಾನಿಗೆ ಗೊತ್ತಿದೆ.. ಅಗತ್ಯಬಿದ್ದ ಸಂದರ್ಭದಲ್ಲಿ ಸಮಯವನ್ನು ನೋಡಿ ರೈಲಾಗ್ ಹೊಡೆದು ಮರ್ಯಾದಿಯನ್ನು ಕಳೆಯುವ ಸಕಲಗುಣ ಸಂಪನ್ನೆ ಈ ಜಾನಿ.
ಜಾನಿಯ ಜನ್ಮಪುರಾಣ ಹೇಳಲೇ ಬೇಕು. ಆಕೆ ಹುಟ್ಟಿದ್ದು ಬೆಳೆದಿದ್ದು ಇತ್ಯಾದಿ ಇತಿಹಾಸಗಳೆಲ್ಲ ನಮ್ಮ ಪಕ್ಕದ ಊರಲ್ಲೇ. ಆಕೆಯ ತಾಯಿಯೂ ಜಾನಿಯಷ್ಟೇ ಪೋಲಿಮಾತಿನ ಸರದಾರಿಣಿಯಾಗಿದ್ದಳಂತೆ.. ತಾಯಿಯದೇ ಹುಟ್ಟುಗುಣ ಸುಡದೇ ಈಕೆಯ ಪಾಲಿಗೆ ಧಾರೆ ಧಾರೆಯಾಗಿ, ಓತಪ್ರೋತವಾಗಿ ಬಂದಿದೆ. ಬಾಲ್ಯದಲ್ಲಿ ಗಂಡುಬೀರಿಯಾಗಿದ್ದ ಈಕೆ ಹರೆಯದಲ್ಲೂ ಹಾಗೆಯೇ ಇದ್ದಳಂತೆ.. `ನಾ ನಿಮ್ ವಯಸ್ನಾಗೆ ಹೆಂಗಿದ್ದೆ ಗೊತ್ತಾ..? ಸುತ್ತಮನೆ ಮಾಬ್ಲು ಹಿಂದ್ ಬಿದ್ದು ಕಾಟ ಕೊಡ್ತಿದ್ದ.. ಆ ಮಾಬ್ಲೇಸ್ರ ಅಂತೂ ಮೂರ್ ಸಾರಿ ನನ್ ತಾವ ಮದ್ವೆ ಆಯ್ತೀಯೇನೆ..' ಎಂದು ಕೇಳಿದ್ದ.. ಕೊನೆಗೆ ಆಕೆಯನ್ನು ಮದುವೆಯಾಗಿದ್ದು ಅವಳದೇ ಊರಿನ ದ್ಯಾವ. ಈ ದ್ಯಾವನ ಪುರಾಣ ಬರೆದರೆ ಇನ್ನೊಂದು ದೊಡ್ಡ ಕಥೆಯಾಗುತ್ತದೆ ಬಿಡಿ.. ಅದನ್ನು ಅಲ್ಪಸ್ವಲ್ಪ ಹೇಳಿ ಮುಂದೊಮ್ಮೆ ತಿಳಿಸುತ್ತೇನೆಂಬ ಆಶ್ವಾಸನೆ ಕೊಟ್ಟು ಮುಂದಕ್ಕೆ ಹೋಗ್ತೇನೆ..
ದ್ಯಾವ ಏಕ್ ದಂ ಆರೂವರೆ ಅಡಿಯ ಆಳು. ಅಜಾನುಬಾಹು ಎನ್ನುವ ಪದ ಇವನನ್ನು ನೋಡಿಯೇ ಹುಟ್ಟಿದ್ದೇನೋ ಅನ್ನುವಂತಹ ವ್ಯಕ್ತಿ. ಎತ್ತರಕ್ಕೆ ತಕ್ಕ ದಪ್ಪ ಆತನ ಚಹರೆಯ ವಿಶೇಷ ಅಂಶ. ಕಪ್ಪು ಬಣ್ಣದ ನಗುಮೊಗದ ಸರದಾರ. ಓಸಿಯ ಚಟವೊಂದಿಲ್ಲದಿದ್ದರೆ ಆತ ಬಹಳ ಒಳ್ಳೆಯವನೆಂಬ ಸರ್ಟಿಫಿಕೇಟ್ ಕೊಡಬಹುದು.. ಪ್ರಾರಂಭದಲ್ಲಿ ಕೃಷಿಕನಾಗಿದ್ದ ದ್ಯಾವ ಕೊನೆ ಕೊನೆಗೆ ಕೊನೆಗೌಡನಾಗಿ ಬದಲಾಗಿದ್ದನ್ನು ಹಲವರು ವಿಸ್ಮಯದಿಂದ ನೋಡುತ್ತಾರೆ. ಕೊನೆಗೌಡನಾದ ಮೇಲೆ ದ್ಯಾವನದ್ದು ಪ್ಯಾಮಿಲಿ ಪ್ಯಾಕೇಜು ಎಂಬ ಜೋಕು ನಮ್ಮ ಸುತ್ತಮುತ್ತಲ ಊರುಗಳಲ್ಲಿ ಪ್ರಚಲಿತಕ್ಕೆ ಬಂದಿದೆ. ಕೊನೆಗೌಡನಾಗಿ ಚಾಲ್ತಿಗೆ ಬಂದ ದ್ಯಾವ ಸುಲಭದಲ್ಲಿ ಕೈಗೆ ಸಿಗುವ ಅಡಿಕೆ ಕೊನೆ ಕೊಯ್ಯುತ್ತಾನೆ. ಸ್ವಲ್ಪ ಕಸ್ಟಪಡಬೇಕು ಎಂದಾದರೆ ಆ ಕೊನೆಗೆ ದೋಟಿಗಳ ಹಾಕಿ ಎಳೆದು ತೆರಿಯಡಿಕೆ ಮಾಡಿ ಬಿಡುತ್ತಾನೆ ಎನ್ನುವುದು ಆತನ ಮೇಲಿನ ಗಂಭೀರ ಆರೋಪ. ಆರೋಪ ಮಾಡಿ ಕೆಲವು ವರ್ಷಗಳಾಗಿದೆ. ಇನ್ನೂ ಸ್ಪಷ್ಟನೆ ಸಿಕ್ಕಿಲ್ಲವಾದ್ದರಿಂದ ಹೌದೆಂದು ಒಪ್ಪಿಕೊಂಡಿದ್ದಾನೆ ಎಂಬ ಮಾತುಗಳೂ ಚಾಲ್ತಿಯಲ್ಲಿದೆ.  ಆತ ಕೊನೆಗೌಡನಾಗಿ ಹೋಗುವ ಮನೆಗೆ ಆತನ ಜೊತೆಗೆ ಜಾನಿ ಹೋಗಲೇಬೇಕೆಂಬ ಷರತ್ತು ಇದೆ. ಆತ ಕೊನೆಗೌಡಿಕೆ ಮಾಡಿದರೆ ಆಕೆ ತೆರಿಯಡಿಕೆ ಹೆಕ್ಕಲೇಬೇಕು. ಇದರಿಂದ ಆತನಿಗೆ ಡಬ್ಬಲ್ ಪ್ರಾಫಿಟ್ಟು. ತೆರಿಯಡಿಕೆ ಹೆಕ್ಕುವಿಕೆಯಲ್ಲಿ ಲಾಭವಾಗಲಿ ಎಂಬ ಕಾರಣಕ್ಕೆ ಆತ ಹಾಗೆಮಾಡುತ್ತಾನೆ. ಆತನಿಗೆ ಈ ಐಡಿಯಾ ಕೊಟ್ಟಿದ್ದು ಜಾನಿಯೇ ಎಂಬ ಆಪಾದನೆ ಜಾನಿಯ ಕಿವಿಗೆ ಬಿದ್ದ ದಿನ ಬಹಳ ರಂಪಗಳಾಗಿವೆ.
ಇಂತಹ ದ್ಯಾವ ಜಾನಿಯ ತಂದೆಯ ಒತ್ತಾಯಕ್ಕೆ ಕಟ್ಟುಬಿದ್ದು ಆಕೆಯನ್ನು ಮದುವೆಯಾದನಂತೆ. ಜಾನಿಗೆ ಹುಡುಗರ ಕಾಟ ಹೆಚ್ಚಾದಂತೆಲ್ಲ ಚಿಂತಾಕ್ರಾಂತನಾದ ಆಕೆಯ ಅಪ್ಪ ಸಾಕಷ್ಟು ಕಡೆಗಳಲ್ಲಿ ಜಾನಿಗೆ ಗಂಡು ಹುಡುಕಿದ್ದ. ಆದರೆ ಜಾನಿಯ ಮನಸ್ಸಿಗೆ ಹೋಗಿರಲಿಲ್ಲ. ಕೊನೆಗೆ ಬೇಸತ್ತು ಊರಿನಲ್ಲಿ ಆಗ ತಾನೇ ಪ್ರಾಯಕ್ಕೆ ಬಂದಿದ್ದ, ಜಾನಿಗಿಂತ ನಾಕು ವರ್ಷ ದೊಡ್ಡವನಾದ ದ್ಯಾವನ ಅಪ್ಪನ ಬಳಿ ಮದುವೆ ಪ್ರಸ್ತಾಪ ಇಟ್ಟಿದ್ದ. ಎಲ್ಲ ಪೋಲಿ ಸುದ್ದಿಗಳನ್ನೂ ದೊಡ್ಡದಾಗಿ ಒದರುವ ಜಾನಿ ಈ ವಿಷಯದಲ್ಲಿ ಮಾತ್ರ ನಾಚಿ ನೀರಾಗುತ್ತಾಳೆ..
`ಜಾನಿ.. ನೀ ಮದ್ವೆ ಆಗಿದ್ ಸುದ್ದಿ ಹೇಳೆ..' ಅಂದ್ರೆ
`ಈ ಶಣ್ ಹೆಗುಡ್ರಿಗೆ ಬ್ಯಾರೆ ಕೆಲ್ಸಿಲ್ಲಾ.. ಅದನ್ನ ತಗುಂಡ್ ಎಂತಾ ಮಾಡ್ತೀರಿ ಹೇಳಿ..?' ಎಂದು ಹೇಳುವಷ್ಟರಲ್ಲಿ ಕಪ್ಪನೆಯ ಆಕೆಯ ಮುಖ ಕೆಂಪಾದರೂ `ಈ ನಮ್ಮನೇವ್ರ್ ಇದ್ರಲ್ರಾ.. ಅವರು ನನ್ ಮದ್ವೇನೆ ಆಗೂದಿಲ್ಲಾ ಹೇಳಿ ಕುಂತೀರು,.. ನಮ್ ಅಪ್ಪುಗೆ ಸಾಕ್ ಬೇಕಾಗೋತ್ರಾ.. ನಮ್ಮನೇವ್ರ ಅಪ್ಪಂತೂ 100 ರುಪಾಯ್ ಮಡಗಿದ ಮೇಲೆ ಮದ್ವೆ ಅಂದ್ರು.. ಕೊನಿಗೆ ಕೋಡ್ಸರ ಹೆಗುಡ್ರ ಮನಿಂದ ಸಾಲ ತಂದ್ ಕೊಟ್ಟಾರ್ರಾ.. ಆಮೇಲೆ ಮದ್ವೆ ಆತು ನೋಡಿ..' ಎಂದಿದ್ದಳು..
ಈ ಕುರಿತು ದ್ಯಾವನನ್ನೂ ಕೇಳಿದ್ದೆ..ಆತ ಮೊದಮೊದಲು ನಾಚಿಕೆ ಪಟ್ಟಿದ್ದ.. ಆಮೇಲೆ ಮದುವೆಯ ಪ್ರವರ ಬಿಚ್ಚಿಟ್ಟಿದ್ದ.. `ಸುಳ್ಲೇಳ್ತಾಳ್ರಾ... ನೂರ್ ರುಪಾಯಿ ಕೇಳೋಕೆ ನಮಗೆಂತಾ ಮಳ್ಳನ್ರ..? ಅದೆಂತದೋ ಹೇಳದೆ.. ನೀವ್ ಕೇಳ್ಕಂಡ್ರಿ.. ಆಗ ನಂಗೆ ಮದ್ವೆ ಆಗೋ ವಯಸ್ಸೇಯಾ.. ಇವ್ಳನ್ನೂ ದಿನಾ ನೋಡ್ತಿದ್ನಾ.. ಆದ್ರೆ ಇಂತವ್ಳನ್ನೇ ಆಗ್ಬೇಕೂ ಅಂದಕಂಡಿದ್ದೆ.. ಆದ್ರೆ ಕೇಳೋದ್ ಹೆಂದೆ..? ಹಿಂಗೆ ಇದ್ದಾಗ ಹಾಕಿದ ಬಾಂಬಿಗೆ ಮೀನು ಬಿದ್ದಾಂಗೆಯಾ ಇವ್ಳ ಅಪ್ಪ ಬಂದು ಕೇಳಿದ್ನಾ.. ಆಮೇಲೆ ನಾ ಬ್ಯಾಡ ಹೇಳಿದ್ನಾ.. ಕೊನೆಗೆ ಮದ್ವೆ ಆದ ಮೇಲೆ ...' ಎಂದು ಹೇಳಿದ್ದ.. ಮುಂದಿನದು ಅನ್ ಇಂಟರೆಸ್ಟಿಂಗ್..
ಇಂಥ ಜಾನಿ ಮದುವೆಯಾಗಿ ಸಾಲು ಸಾಲಾಗಿ ನಾಲ್ಕು ಹೆಣ್ಣು ಮಕ್ಕಳನ್ನು ಹೆತ್ತಿದ್ದಳು.. ಕೊನೆಗೂ ಐದನೆಯವನು ಕುಲಪುತ್ರ ಹುಟ್ಟಿದ ಮೇಲೆಯೇ ಆಕೆಯ ಹಡೆಯುವ ಕಾಯಕ ನಿಂತಿದ್ದು. ಜಾನಿಯ ತಾಯಿಯಿಂದ ಪೋಲಿ ಮಾತು ಧಾರೆಯೆರೆದು ಬಂದಿದೆ ಎಂದೆನಲ್ಲ.. ಹಾಗೆಯೇ ಬಂದಿದ್ದು ಈ ಸೂಲಗಿತ್ತಿತನವೂ.. ತನ್ನ ಇದುವರೆಗಿನ ಜೀವನದಲ್ಲಿ ಏನಿಲ್ಲವೆಂದರೂ 50ಕ್ಕೂ ಹೆಚ್ಚು ಮಕ್ಕಳ ಬಾಳಂತನ ಆರೈದ ಖ್ಯಾತಿ ಜಾನಿಯದ್ದು. ಬಾಳಂತಿಗೆ ಅಗತ್ಯವಿರುವ ಎಲ್ಲ ಕೆಲಸಗಳನ್ನೂ ಮಾಡಿಸಿ, ನವಜಾತ ಮಗುವಿನ ಸ್ನಾನ, ಬಾಳಂತಿ ಸ್ನಾನ, ಮಗುವಿನ ಬಟ್ಟೆ ತೊಳೆಯುವ ಕಾಯಕ, ಬಾಳಂತಿಗೆ ಹಳ್ಳಿ ಔಷಧಿ ನೀಡುವಿಕೆ ಯಿಂದ ಹಿಡಿದು ಮಗುವಿನ ದೃಷ್ಟಿ ತೆಗೆದು, ಹಾನ ಸುಳಿದು ಮಲಗಿಸುವ ವರೆಗೆ ದೈನಂದಿನ ಕಾಯಕ ಸಾಂಗವಾಗಿ ಮುಗಿಯುವವರೆಗೂ ಪೋಲಿ ಮಾತುಗಳಿಗೆ ಬರವಿರಲಿಲ್ಲ.
ಸುತ್ತಮುತ್ತಲ ಊರಿನಲ್ಲಿ ಹೊಸ ಮಗು ಜನನ ವಾದರೆ ಈಕೆಗೆ ಆಹ್ವಾನ ನೀಡಲೇಬೇಕು ಎನ್ನುವ ಫಾರ್ಮಾಲಿಟೀಸ್ ಗಳು, ಪ್ರೋಟೋಕಾಲುಗಳಿಲ್ಲ. ಈಕೆ ಬಿಂಕವಿಲ್ಲದೇ ಬರುತ್ತಾಳೆ ಎಂಬುದು ಈಕೆಯ ದೊಡ್ಡಗುಣಗಳಲ್ಲೊಂದು. ನೀವ್ ಎಂತಾ ಬೇಕಂತ ಮಾಡ್ತೀರನ್ರಾ..? ಮಗು ಹುಟ್ಯದೆ.. ಎಲ್ಲೋ ಮರ್ತೋಕ್ತದೆ.. ಇರ್ಲಿ ಬಿಡಿ. ನಾ ಎಂತಾ ಅಂದ್ಕಳ್ಲಿಲ್ಲ.. ಎಂದು ಹೇಳಿ ಮಾತಿಗೆ ನಿಂತು ನಯವಾಗಿ ಬೆಣ್ಣೆ ಹಚ್ಚಿ ಡೀಲು ಕುದುರಿಸುವ ಜಾನಿ ಕೊನೆಗೆ ಹಣವನ್ನು ಮಾತ್ರ ಜಬರದಸ್ತಿನಿಂದಲೇ ಇಸಗೊಂಡು ಹೋಗುತ್ತಾಳೆ..
ದ್ಯಾವ ಜಾನಿಗೆ ಸಿಕ್ಕಾಪಟ್ಟೆ ಹೆದರುತ್ತಾನೆಂಬ ಗಾಳಿಮಾತುಗಳಿವೆ.. ಅದಕ್ಕೆ ತಕ್ಕಂತೆ ನಮ್ಮೆದುರು ಇಬ್ಬರೂ ಎದುರಾಬದುರಾ ಆಗಿಬಿಟ್ಟರೆ ಪರಸ್ಪರ ಮಾತೇ ಆಡುವುದಿಲ್ಲ. ಕೆಲವು ಸಮಯ ಜಾನಿ ವ್ಯಂಗ್ಯವಾಗಿ ಗಂಡನನ್ನು ಚುಚ್ಚುವುದೂ ಇದೆ. ಹುಲಿಯಂತಿದ್ದು, ಹಸುವಿನಂತಾಗಿರುವ ದ್ಯಾವ ಜಾನಿಯ ಮಾತುಗಳಿಗೆಲ್ಲ ಮೌನವಾಗಿ ಇದ್ದು ಬುದ್ದಿವಂತಿಕೆ ಪ್ರದರ್ಶನ ಮಾಡುತ್ತಾನೆ. ಇಂತಹ ಜಾನಿ ನಮ್ಮೂರಿನ ಹಲವು ಹೆಂಗಳೆಯರಿಗೆ ಗಂಡನನ್ನು ಬುಟ್ಟಿಯಲ್ಲಿ ಇಟ್ಟುಕೊಳ್ಳುವುದು ಹೇಗೆ ಎನ್ನುವ ಗುಟ್ಟನ್ನು ಹೇಳಿಕೊಟ್ಟು ಪಾಪ ಕಟ್ಟಿಕೊಂಡಿದ್ದಾಳೆ. ಜಾನಿಯ ಬಂಢಾರದಲ್ಲಿ ಅನೇಕ ಪಿಲಾನುಗಳಿದ್ದು ಆಗಾಗ ಒಂದೊಂದನ್ನೇ ಹೇಳಿಕೊಡುವ ಮೂಲಕ ನಮ್ಮೂರಿನಲ್ಲಿ ಕ್ರಾಂತಿಯಾಗಲು ಕಾರಣೀಭೂತವಾಗಿದ್ದಾಳೆ ಎಂದರೆ ತಪ್ಪಾಗಲಿಕ್ಕಿಲ್ಲ ಬಿಡಿ.
ಇಂತಹ ಜಾನಿಯನ್ನು ಕಂಡರೆ ಈಗಷ್ಟೇ ನಡೆಯಲು, ಮಾತನಾಡಲು ಕಲಿತ ಮಕ್ಕಳು ಚಿಟ್ಟನೆ ಚೀರಿ, ಬೆದರಿ ರಚ್ಚೆ ಹಿಡಿದು ಅಳುತ್ತಾರೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಸದೆಗತ್ತಿ ಹಿಡಿದು ಬರುವ ಜಾನಿಯನ್ನು ತೋರಿಸಿ ಮಕ್ಕಳನ್ನು ಸುಮ್ಮನಿರಿಸುವ ಯತ್ನ ಮಾಡುತ್ತಾರೆ ಮನೆಯ ದೊಡ್ಡವರು. ಅದಕ್ಕೆ ತಕ್ಕಂತೆ ಜಾನಿಯೂ ನಡೆದುಕೊಳ್ಳುತ್ತಾಳೆ. ಜಾನಿಯನ್ನು ತೋರಿಸಿ ಮಕ್ಕಳಿಗೆ ಊಟ ಮಾಡಿಸುವ, ಹಾಲು ಕುಡಿಸುವ ಕೆಲಸ ಮಾಡಿಸುವ ಭರದಲ್ಲಿ ಜಾನಿಯೆಂದರೆ ಯಾವುದೋ ಭೂತದಂತೆ ಚಿತ್ರಿಸಲಾಗುತ್ತದೆ.. ಅಪ್ಪಿತಪ್ಪಿ ಆ ಸಮಯದಲ್ಲಿ ಜಾನಿ ಎದುರಿಗೆ ಬಂದಳೋ ರಗಳೆ ಮಾಡುವ ಮಕ್ಕಳ ಬಳಿ ಹೋಗಿ ಕತ್ತಿಯನ್ನು ಎತ್ತಿ `ಏ ತಮಾ... ನೀ ಹಿಂಗೆ ರಗಳೆ ಮಾಡ್ತಾ ಇರು.. ನಿನ್ ಮಿಣ್ಣಿ ಕೊಯ್ದು ಸಾರಿಗೆ ಹಾಕ್ತೀನೊ ನೋಡು.. ' ಎಂದು ಅಭಿನಯ ಪೂರ್ವಕವಾಗಿ ತೋರಿಸುವ ಭರದಲ್ಲಿ ಮಕ್ಕಳು ಚಡ್ಡಿಯಲ್ಲೇ ಉಚ್ಚೆ ಹೊಯ್ದುಕೊಳ್ಳುತ್ತವೆ..
ಹೌದು.. ನಾನೂ ಹೀಗೆ ಮಾಡಿದ್ದೆನಂತೆ.. ಈ ವಿಷಯವನ್ನು ಜಗಜ್ಜಾಹೀರು ಮಾಡಿದ್ದು ಜಾನಿಯೇ.. ಇದಕ್ಕಾಗಿ ಆಕೆಗೆ ಕೆಜಿಗಟ್ಟಲೆ ಹಿಡಿಶಾಪ ಹಾಕಿದ್ದೇನೆ. ನಾನು ಹಿಡಿಶಾಪ ಹಾಕಿದ ಮೇಲೆ ಈ ವಿಷಯ ಜಗಜ್ಜಾಹೀರಾತಾಗುವುದು ತಪ್ಪಿದೆ.. ಇರ್ಲಿ ಬಿಡಿ..
ಹಾಗೆ ಉಚ್ಚೆಹೊಯ್ದುಕೊಳ್ಳುವ ಮಕ್ಕಳು ನಮ್ಮೂರ ಫಾಸಲೆಯಲ್ಲಿ ಜಾನಿ ಕಾಲಿಟ್ಟ ತಕ್ಷಣ ತಮ್ಮ ಕಿಲಾಡಿ, ರಗಳೆಗಳನ್ನೆಲ್ಲ ಬಂದ್ ಮಾಡಿ ಕೋಣೆಯನ್ನೋ, ಮೂಲೆಯನ್ನೋ ಸೇರುತ್ತವೆ. ಊಹೂಂ.. ಜಪ್ಪಯ್ಯ ಎಂದರೂ ಹೊರಬರುವುದಿಲ್ಲ..
ಇಷ್ಟರ ನಡುವೆ.. ಜಾನಿ `ನಾನೇ ಈ ಮಕ್ಕಳ ಕುಂಡೆ ತೊಳ್ಸೇನಿ.. ಶಣ್ಣಕಿದ್ದಾಗ ನಾನೇ ಎಲ್ಲಾ ಕೆಲ್ಸ ಮಾಡ್ಸೇನಿ.. ಈಗ ನನ್ ಹತ್ರಾ ಬರಾದಿಲ್ಲ ಅಂತಾವೆ.. ಎಂತಕ್ಕೇನ..' ಎಂದು ಅಲವತ್ತುಕೊಳ್ಳುತ್ತಾಳೆ.. ಜಾನಿಯ ವಿಶ್ವರೂಪಕ್ಕೆ ಬೆದರುವ ಮಕ್ಕಳು ಈ ಕಾರಣದಿಂದಲೇ ಅವಳಿಂದ ದೂರ ಉಳಿಯುತ್ತಾರೆ ಎನ್ನುವುದನ್ನು ಯಾರೂ ಅವಳೆದುರು ಹೇಳಲು ಹೋಗುವುದಿಲ್ಲ.
ಇತ್ತೀಚೆಗೆ ಈ ಜಾನಿ ಬಹಳ ಥಂಡಾಗಿದ್ದಾಳೆ.. ಮೊದಲಿನ ಹುರುಪಿಲ್ಲ. ಮೊದಲಿದ್ದಷ್ಟು ಪೋಲಿ ಮಾತುಗಳಿಲ್ಲ. ತನ್ನಷ್ಟಕ್ಕೆ ತಾನು ಬರುತ್ತಾಳೆ.. ಹೋಗುತ್ತಾಳೆ.. ಹೇಳಿದ ಕೆಲಸವನ್ನು ಮಾಡಿ ಹೋಗುತ್ತಾಳೆ.. ಬಡಕಾಗಿದ್ದ ಜಾನಿ ಮತ್ತಷ್ಟು ಬಡಕಾಗಿದ್ದಾಳೆ.. ಕವಳದ ಸೈಡೆ ಎಫೆಕ್ಟಿನಿಂದಾಗಿ ಕಡುಗೆಂಪಾಗಿದ್ದ ಹಲ್ಲುಗಳಲ್ಲಿ ಹಲವು ಬಿದ್ದು ಹೋಗಿ ಕನ್ನಂಬಾಡಿಯ ಗೇಟನ್ನು ಓಪನ್ ಮಾಡಿದಂತೆ ಕಾಣುತ್ತದೆ. ಇದನ್ನು ನೋಡಿದಾಗಲೆಲ್ಲ.. ಯಾಕೋ ಕಾಲ ಕಟ್ಹೋಯ್ತು ಎಂದು ನಾವು ಅಂದುಕೊಂಡಿದ್ದಿದೆ..ಆದರೆ ಯಾಕ್ಹೀಗೆ ಅನ್ನುವ ಕಾರಣ ಮೊನ್ನೆಯವರೆಗೂ ಗೊತ್ತಾಗಿರಲಿಲ್ಲ.. ಇದಕ್ಕೆ ಪ್ರಮುಖ ಎರಡು ಕಾರಣಗಳನ್ನು ಜಾನಿಯ ಅಕ್ಕಪಕ್ಕದ ಮನೆಯವರು ಕೊಡುತ್ತಾರೆ.
ಜಾನಿಗೆ ಯಾರೋ ಆಗದವರು ಮದ್ದು ಹಾಕಿದ್ದಾರೆ. ಅದರಿಂದಾಗಿ ಆಕೆ ಮೊದಲಿನ ಹುರುಪು ಕಳೆದುಕೊಂಡಿದ್ದಾಳೆ.. ತಲೆ ಹಾಳು ಮಾಡಿಕೊಂಡಿದ್ದಾಳೆ ಎನ್ನುವುದು ಒಂದು ಗಾಳಿಸುದ್ದಿಯ ಮಾಹಿತಿ. ಇನ್ನೊಂದೇನೆಂದರೆ ಆಕೆಯ ಹೆಣ್ಣುಮಕ್ಕಳ ಮದುವೆ. ಸಾಲು ಸಾಲು ನಾಲ್ಕು ಹೆಣ್ಣು ಮಕ್ಕಳು.. ಎಷ್ಟೇ ತನ್ನ ಸುಪರ್ದಿಯಲ್ಲಿದ್ದರೂ ಓಸಿಯಾಡುವ ದ್ಯಾವ ಮೊನ್ನೆ ಏನೋ ಭಯಂಕರ ಲುಕ್ಸಾನು ಮಾಡಿಕೊಂಡಿದ್ದಾನೆಂಬ ಮಾತುಗಳೂ ಕೇಳಿಬಂದಿವೆ. ಹೆಣ್ಣು ಮಕ್ಕಳ ಮದುವೆ ಮಾಡಿರುವ ಜಾನಿ ಪದೆ ಪದೆ ವರದಕ್ಷಿಣೆ ನೀಡಲಾಗುತ್ತಿಲ್ಲ ಎಂಬ ಸಮಸ್ಯೆಯಲ್ಲಿ ನಲುಗುತ್ತಿದ್ದಾಳಂತೆ.. ಅಳಿಯನ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ತೊಂದರೆ ಕೊಡುತ್ತಿರುವ ಸುದ್ದಿಯೂ ಇದೆ. ಇದರ ನಡುವೆ ಗಂಡನಿಗಾದ ಲುಕ್ಸಾನು ಆಕೆಯ ಧೈರ್ಯವನ್ನು ಕಿತ್ತುಹಾಕಿದೆ.. ಪರಿಣಾಮವಾಗಿ ಜಾನಿ ಥಂಡಾಗಿದ್ದಾಳೆ.. ಮಕ್ಕಳೂ ಅಷ್ಟೇ ಜಾನಿಗೆ ಹೆದರುವುದನ್ನು ಬಿಟ್ಟುಬಿಟ್ಟಿವೆ..
ಇಷ್ಟರ ನಡುವೆ ಬ್ರೇಕಿಂಗ್ ನ್ಯೂಸ್ ಒಂದು ಬಂದಿದೆ.. ಜಾನಿ ತನ್ನ ಆಜನ್ಮ ಕಸುಬಾಗಿದ್ದ ಸೂಲಗಿತ್ತಿ ಕಾರ್ಯ ಬಿಡಲು ನಿರ್ಧರಿಸಿದ್ದಾಳಂತೆ.. ಆಕೆಗೆ ಏನಾಯಿತೋ ಏನೋ.. ಎಲ್ಲ ಕೆಲಸಗಳಿಗೆ ಶರಣೆಂದು ಸನ್ಯಾಸಿ ಗಿನ್ಯಾಸಿ ಆಗಲು ಹೊರಟಳೋ ಎನ್ನುವ ಭಾವ ಕಾಡುತ್ತಿದೆ.. ಆಕೆಯಿಂದ ಹಲವು ಪಿಲಾನುಗಳನ್ನು ಕಲಿತಿದ್ದ ನಮ್ಮೂರ ಹೆಂಗಳೆಯರೂ ಇದರಿಂದ ಚಿಂತಾಕ್ರಾಂತರಾಗಿದ್ದಾರೆ. ಸಂಸಾರದ ಹಲವು ಮಂತ್ರಗಳನ್ನು ಹೇಳಿಕೊಟ್ಟಿದ್ದ ಗುರು ಜಾನಿಗೆ ಬಂದ ತೊಂದರೆ ತಮಗೆ ಬಂದಿದೆಯೇನೋ ಎಂಬಂತೆ ಕಸಿವಿಸಿಗೊಳಗಾಗಿ `ಪಾಪ.. ಹಂಗಾಗಕಾಗಿತ್ತಿಲ್ಲೆ..' ಎಂದು ಹೇಳುತ್ತಿರುವುದೂ ಆಗಾಗ ತಮ್ಮ ನಾಲ್ಕು ಗೋಡೆಯ ನಡುವಿನಿಂದ ಹೊರಬಂದು ಕೇಳಿದೆ.
ಜೊತೆಯಲ್ಲಿ ನಮ್ಮೂರಿನ ನಿಯೋಗವೊಂದು ತೆರಳಿ ಜಾನಿಗೆ ಸಾಕಷ್ಟು ಸಲಹೆಗಳನ್ನು  ನೀಡಿ, ಸಮಸ್ಯೆಗಳಿಗೆ ಪರಿಹಾರದ ಉಪಾಯಗಳನ್ನು ನೀಡಿ, ಮೊದಲಿನ ರಿತಿಯಾಗು, ಸೂಲಗಿತ್ತಿ ಕಾರ್ಯ ಬಿಡಬೇಡ ಎಂದು ಹೇಳಿ ಬಂದಿದೆಯಂತೆ..
ಅದಕ್ಕೆ ಪ್ರತಿಯಾಗಿ `ನೋಡ್ವಾ.. ಕಾಲ ಹೆಂಗಿರ್ತದೇನೋ.. ನಂಗೂ ವಯಸ್ಸಾಯ್ತಲ್ರ.. ನೋಡ್ವಾ,.. ನಾ ಎಷ್ಟೋ ನೋಡೀನಲ್ರ.. ಇನ್ನೂ ನನ್ನ ಜೀವನದಾಗೆ ಎಷ್ಟು ನೋಡಬೇಕು ಅಂತೈತೋ..ನೀವ್ ಹೇಳೀರಿ ಅಂತ ನಾ ಮಾಡ್ತೇನಿ.. ಈಗ ನಿಮ್ಮನಿಯವ್ರ ಜೊತೆ ಬೆಚ್ಚಗೆ ಮಲ್ಕಳಿ...' ಎಂದು ಹೇಳಿ ಕಳಿಸಿದ್ದಾಳಂತೆ..
ಅದಕ್ಕೆ ತಕ್ಕಂತೆ ನಮ್ಮೂರ ಲೋಕಲ್ ಪತ್ರಿಕೆಯವರು ಫಾರ್ಮಿಗೆ ಮರಳಿದ ಜಾನಿ ಎಂಬ ತಲೆಬರಹದಲ್ಲಿ ಸುದ್ದಿ ಬರೆಯಲು ರೆಡಿಯಾಗಿದ್ದಾರಂತೆ.. ಅಂತೂ ಜಾನಿ ಮತ್ತೆ ಫಾರ್ಮಿಗೆ ಬಂದಿದ್ದಾಳೆ... ಇನ್ನು ನಮ್ಮೂರಿನಲ್ಲಿ ಕಿವಿ ಬಿಡುವ ಹಾಗಿಲ್ಲ ಬಿಡಿ..


No comments:

Post a Comment