Wednesday, October 30, 2013

ಚದುರಂಗದ ಕುದುರೆಯ ಬೆನ್ನೇರಿ -ಭಾಗ 1

ಆತ್ಮೀಯರೇ..,
ತಿರುಗಾಟವೇ ನನ್ನ ಬದುಕು..
ಅಲ್ಲಿ ಇಲ್ಲಿ.. ಹಾಗೆ ಸುಮ್ಮನೆ ತಿರುಗಾಡುತ್ತಿರುವುದು..
ಪ್ರಸ್ತುತ ಕಾಲೇಜು ಫೈನಲ್ ಇಯರ್ ಆಗಿದ್ದಾಗ ನಾನು ನಮ್ಮ  ಎಂ.ಎಂ.ಕಲಾ ಮತ್ತು ವಿಜ್ಞಾನ ಕಾಲೇಜಿನ ಚದುರಂಗ ತಂಡದ ಕ್ಯಾಪ್ಟನ್ ಆಗಿ ಬಸವನ ಬಾಗೇವಾಡಿಗೆ ಹೋಗಿದ್ದರ ಪ್ರವಾಸ ಕಥನ..
ಅಲ್ಲೇನೇನಾಯ್ತು ಎನ್ನುವುದನ್ನು ಇಲ್ಲಿಟ್ಟಿದ್ದೇನೆ..
ಇಲ್ಲಿ ಬರುವ ಪಾತ್ರಗಳು 8+1 ಹಾಗೂ ಇತರೆ ಇತರೆ.. ಇವರು ನನ್ನ ಜೊತೆ ಹೋದವರು.
ಉಳಿದವರು ಹೀಗೆ ಬಂದು ಹಾಗೆ ಹೋಗುತ್ತಾರಾದರೂ ನೆನಪಿನ್ನಲಿ ಉಳಿಯುತ್ತಾರೆ.
9 ಜನರೂ 9 ಮುಖಗಳಂತೆ ತಮ್ಮ ವಿಶಿಷ್ಟ ಮ್ಯಾನರಿಸಮ್ಮಿನಿಂದ ಸದಾಕಾಲ ಕಾಡಬಲ್ಲರು.
ನಾನು ಹೊರಟಿದ್ದು ಚೆಸ್ ಆಟದ ಕಾರಣಕ್ಕಾಗಿ. ಒಂದು ವಾರದ  ಈ ಪ್ರವಾಸದ ರಸ-ರುಚಿ-ಸ್ವಾದ, ಹಾಸ್ಯ-ಸಿಟ್ಟು-ಸೆಡವು ಇವುಗಳೆಲ್ಲದರ ಬಹುರೂಪ ನಿಮ್ಮೆದುರು.
ಓದಿ, ಖುಷಿಪಡಿ, ಎಂಜಾಯ್ ಮಾಡಿ.. ಆ ನಂತರ ನಿಮ್ಮದೊಂದು ಚಿಕ್ಕ ಅನಿಸಿಕೆ ಕೊಡಿ..


**
17-09-2007, ಸೋಮವಾರ
             ಮುಂಚಿನ ದಿನ ರಾತ್ರಿಯೇ ನಾನು-ಕಿಟ್ಟು ದೋಸ್ತ ರಾಘವನ ರೂಮಿನಲ್ಲಿ ಉಳಿದುಕೊಂಡ ಕಾರಣದಿಂದ ನಾವು ಬಸ್ ಸ್ಟಾಂಡಿಗೆ ಲೇಟಾಗಿ ಬರುವ ಸಂಭವವೇ ಇರಲಿಲ್ಲ. ಬೆಳಿಗ್ಗೆ ಐದಕ್ಕೇ ಎದ್ದು, ದಡಬಡಿಸಿ ತಯಾರಾಗಿ , ನನ್ನ ಅಶ್ವಿನಿ ಸರ್ಕಲ್ಲಿನ ರೂಮಿಗೆ ಬಂದು ಕುಳಿತು ಅಲ್ಲೊಂದರ್ಧ ಘಂಟೆ ಹಾಗೆ ಸುಮ್ಮನೇ ಚೆಸ್ ಆಡಿದೆವು. ಆದಿನ ರಾಘವ ಹಾಗೂ ಕಿಟ್ಟು ಅದ್ಭುತ ಫಾರ್ಮಿನಲ್ಲಿದ್ದರು. ಪರಿಣಾಮ ಗೆಲುವಿನ ಮೇಲೆ ಗೆಲುವು ಸಾಧಿಸುತ್ತಾ ಹೋದರು. ನಾನು ಸೋತು-ಸೋತು ಸುಣ್ಣವಾಗಿ ಹೋದೆ.
ಬೆಳಿಗ್ಗೆ ಏಳೂವರೆಗೆ ಬಸ್ ನಿಲ್ದಾಣದಲ್ಲಿರಬೇಕಾಗಿದ್ದ ನಾವು ಹತ್ತು ನಿಮಿಷ Late  ಆಗಿ ಹೋದೆವು. ಆಗಲೇ ಅಲ್ಲಿಗೆ ಬಂದಿದ್ದ ನವೀನ ಪಾವಸ್ಕರ `ಏನ್ರೋ..ಏಳೂವರೆಗೆ ಅಂದ್ರೆ ಈಗ ಬರೋದೇನು? ನಾನು ಏಳೂವರೆಯಿಂದ್ಲೇ ಕಾಯ್ತಾ ಇದ್ದೀನಿ..' ಎಂದು ವಟಗುಡಲು ಪ್ರಾರಂಭಿಸಿದ್ದ.
              ಆದರೆ ಬರಬೇಕಿದ್ದ ಮಹಿಳಾ ಮಣಿಗಳಿನ್ನೂ ಬಂದೇ ಇರಲಿಲ್ಲ. ಪವಿತ್ರಳೊಬ್ಬಳು ಮಾತ್ರ ಬಂದಿದ್ದಳು. ಉಳಿದವರು ಒಬ್ಬೊಬ್ಬರಾಗಿ ಬರುತ್ತಿದ್ದರು. ಮುಖ್ಯವಾಗಿ ನಮ್ಮ ತಂಡದ ಮ್ಯಾನೇಜರ್ ಆಗಿದ್ದ ಕಾಲೇಜಿನ ದೈಹಿಕ ಶಿಕ್ಷಕ ಎನ್. ಎಚ್. ಗೌಡರೇ ಬಂದಿರಲಿಲ್ಲ.
             ಅಂತೂ ಎಲ್ಲರೂ ಬಂದು ತಲುಪುವ ವೇಳೆಗೆ ಗಂಟೆ ಎಂಟನ್ನು ದಾಟಿ ಹದಿನೈದು ನಿಮಿಷವನ್ನು ಹೆಚ್ಚಿಗೆ ನುಂಗಿತ್ತು. ನಾನು, ಕಿಟ್ಟು, ರಾಘವ ಅವರಿಗಂತೂ ಇವರು ಇಸ್ಟು ಲೇಟಾಗಿ ಬರ್ತಾರೆ ಅಂತ ಗೊತ್ತಿದ್ದರೆ ನಾವುನ್ನೂ ನಾಲ್ಕೈದು ಮ್ಯಾಚ್ ಆಡಿ ಬರುತ್ತಿದ್ದೆವು ಎಂದು ಕೊಂಡೆವು.. ಕಿಟ್ಟು ಅಂತೂ ಚಿಕ್ಕದಾಗಿ `ಛೇ.. ವಿನಯನ್ನ  ಇನ್ನೊಂದೆರಡು ಮ್ಯಾಚಲ್ಲಿ ಹೊಡೆಯಲಾಗ್ತಿತ್ತು..' ಎಂದಾಗ ನನಗೆ ಹಾಗೂ ರಾಘುವಿಗೆ ನಗುವ ಬುಗ್ಗೆಯೇ ಹೊಮ್ಮಿತ್ತು.
          ಆಗಲೇ ನಮ್ಮ ಗೌಡರು ಹುಬ್ಬಳ್ಳಿಗೆ ಲಟ್ಟು ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ನಮ್ಮನ್ನು ಕರೆದೊಯ್ಯಲು ಅನುವಾದರು. ಅವರ ಜೊತೆಗೆ ಹೌದೆನ್ನಲು ಪಾವಸ್ಕರನಿದ್ದ. ನನಗೆ ಹಾಗೂ ಕಿಟ್ಟುವಿಗೆ ಶಿರಸಿಯಲ್ಲಿ ಆಗಿನ ಕಾಲಕ್ಕೆ ಚನ್ನಾಗಿದ್ದ `ಸಾಮ್ರಾಟ್' ಬಸ್ಸಿನಲ್ಲಿ ಹೋಗುವ ಆಸೆ.
          `ಸರ.. ಸಾಮ್ರಾಟ ಬಸ್ಸಿಗೆ ಹೋಗೋಣ್ರೀ..' ಅಂದರೆ ಗೌಡರು ಒಲ್ಲೆ ಎಂದರು. ನಮ್ಮ ಮನದಾಳವನ್ನು ತಕ್ಷಣ ಅರಿತ ರಾಘವ `ಸರ್ ನೀವು ಸಾಮ್ರಾಟ್ ಬಸ್ಸಿಗೆ ಹೋಗೋದೇ ಒಳ್ಳೇದು. ಯಾಕಂದ್ರೆ ಅದು ವೀಡಿಯೋ ಕೋಚ್ ಬಸ್ಸು. ಜೊತೆಗೆ ಕೆಎಸ್ಸಾರ್ಟಿಸಿಗಿಂತ 2 ರು. ಕಡಿಮೆ ರೇಟು.' ಎಂದ.
          ಒಂದು ತಲೆಗೆ ಎರಡು ರುಪಾಯಿಯಂತೆ 9 ತಲೆಗೆ 18 ರುಪಾಯಿ ಉಳಿಯುತ್ತದೆ ಎಂದು ಆಲೋಚನೆ ಮಾಡಿ ತಲೆ ಓಡಿಸಿದ ನಾಗಭೂಷಣ ಗೌಡರು ರಾಘವನ ಸಲಹೆಗೆ ಜೈ ಎಂದು ನಮ್ಮನ್ನು ಸಾಮ್ರಾಟ್ ಬಸ್ಸು ಹತ್ತಿಸಿದರು.
         ನಾನು, ನವೀನ ಪಾವಸ್ಕರ, ಆನಂದ ನಾಯ್ಕ, ಕೃಷ್ಣ ಮೂರ್ತಿ ದೀಕ್ಷಿತ, ಪೂರ್ಣಿಮಾ ಹೆಗಡೆ ವಾನಳ್ಳಿ, ಪೂರ್ಣಿಮಾ ಬೆಂಗ್ರೆ ಭಟ್ಕಳ, ತೃಪ್ತಿ ಹೆಗಡೆ, ಪವಿತ್ರಾ ಹೆಗಡೆ ಹಾಗೂ ನಾಗಭೂಷಣ ಗೌಡರನ್ನು ಹೊಂದಿದ ಬಸ್ಸು ಶಿರಸಿಯನ್ನು ಬಿಡುವ ಹೊತ್ತಿಗೆ ರಾಘವ ನಮಗೆ ಟಾಟಾ ಮಾಡಿ ಶುಭವಿದಾಯ ಹೇಳಿಯಾಗಿತ್ತು. ಸಮಯ ಆಗಲೇ 8.30ನ್ನೂ ಮೀರಿ ಮುಂದಕ್ಕೆ ಟಿಕ್ಕೆನ್ನುತ್ತಿತ್ತು..

(ಮುಂದುವರಿಯುತ್ತದೆ..)
(ಮುಂದಿನ ಭಾಗದಲ್ಲಿ ನಿರೀಕ್ಷಿಸಿ-ವಿಶಿಷ್ಟ ಸಾಮ್ರಾಟ್ ಬಸ್ಸು ಹಾಗೂ ದೋಸ್ತರ ದಂಡು)

2 comments:

  1. nimma ee kate sundara haagu olle arta purnavaagi mudi bandide .
    aadare idannu hige sanna sanna tunuku galannagi bareyuvadarinda odugaralli aasakti kadimeyaaga bahudeno?

    ReplyDelete
  2. ಅಂಬಿಕಾ ಅವರೆ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ..
    ಈ ಪ್ರವಾಸ ಕಥನವನ್ನು ಒಂದೇ ಸಾರಿ ಇಡಬೇಕೆಂಬುದು ನನ್ನ ಆಸೆಯೂ ಹೌದಾಗಿತ್ತು.
    ಆದರೆ ಅದು ಸಿಕ್ಕಾಪಟ್ಟೆ ದೊಡ್ಡದಾಗಿದೆ.. ಒಮ್ಮೆಗೆ ಬರೆಯುವುದು ಕಸ್ಟ..
    ಅದಕ್ಕೆ ಆಗೀಗ ಅಲ್ಪಸ್ವಲ್ಪ ಬರೀತಾ ಇದ್ದೇನೆ ..

    ReplyDelete