Thursday, October 10, 2013

ಬಾವಲಿ ಗುಹೆ

    ಉತ್ತರಕನ್ನಡ ಜಿಲ್ಲೆ ಪ್ರಾಕೃತಿಕವಾಗಿ ಸಂಪದ್ಭರಿತ. ಹೆಜ್ಜೆ ಹೆಜ್ಜೆಗೂ ಜಲಪಾತ, ತೊರೆ, ಝರಿ, ಇಳಿಜಾರು, ಗುಡ್ಡ, ಕಣಿವೆ, ಕಾಡು, ಗುಹೆ ಹೀಗೆ ಒಂದಿಲ್ಲೊಂದು ಬಗೆಯ ಸೃಷ್ಟಿ ಸೌಂದರ್ಯಗಳನ್ನೊಳಗೊಂಡಿದೆ. ಪ್ರಕೃತಿಯ ಮಡಿಲಲ್ಲಿ ಅದೆಷ್ಟೋ ವಿಸ್ಮಯ, ವಿಶಿಷ್ಟ ಸಂಗತಿಗಳು ಅಗೋಚರವಾಗಿದೆ. ಕೆಲವೊಂದು ಗೋಚರಿಸುತ್ತವೆ. ಅಂತಹ ವಿಶಿಷ್ಟ ತಾಣಗಳಲ್ಲಿ ಯಲ್ಲಾಪುರ ತಾಲೂಕಿನ ಬಾವಲಿ ಗುಹೆ ಒಂದಾಗಿದೆ.
    ಯಲ್ಲಾಪುರ ನಗರದಿಂದ 22 ಕಿ.ಮಿ ಕಡಿದಾದ ಮಾರ್ಗದಲ್ಲಿ ಸಾಗಿದರೆ ಬಾವಲಿ ಗುಹೆ ತಲುಪಬಹುದು. ಯಲ್ಲಾಪುರ-ವಜ್ರಳ್ಳಿ ಮಾರ್ಗದಿಂದ 3 ಕಿ.ಮಿ ದಟ್ಟಡವಿಯ ಮಧ್ಯ ಸಂಚಾರಕ್ಕೆ ಯೋಗ್ಯವಾದ ರಸ್ತೆಯಿದೆ. ಆ ಮೂಲಕ ಬೆಣ್ಣೆಜಡ್ಡಿ ಎನ್ನುವ ಊರನ್ನು ತಲುಪಬೇಕು. ಅಲ್ಲಿಂದ ಕಾಲ್ನಡಿಗೆಯಲ್ಲಿ ತೋಟಪಟ್ಟಿ ಮತ್ತು ಗುಡ್ಡದ ಇಳಿಜಾರಿನಲ್ಲಿಯ ಅಂಚಿನಲ್ಲಿ ಬಾವಲಿಗುಹೆಗೆ ತಲುಪಬಹುದಾಗಿದೆ. ಬಾವಲಿ ಗುಹೆಗೆ ತಲುಪುವವರಲ್ಲಿ ಬಾಹುಗಳು ಗಟ್ಟಿಯಾಗಿರಬೇಕು. ಸಾಹಸಕ್ಕೆ ಮತ್ತು ಚಾರಣಕ್ಕೆ ಹೇಳಿ ಮಾಡಿಸಿದ ಸ್ಥಳ.
    ಕಡಿದಾದ ಇಳಿಜಾರಿ, ತಗ್ಗುದಿಣ್ಣೆಗಳ ಸಾಲಿನಲ್ಲಿ ಕೊಂಚ ಯಾಮಾದಿರೂ ಪ್ರಪಾತ. ಅಂತಹ ಸ್ಥಳದಲ್ಲೇ ಸಾಗಬೇಕು. ಬಾವಲಿಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿ ವಾಸಿಸುತ್ತಿರುವ ಪ್ರದೇಶಕ್ಕೆ ಕಲ್ಲಿನಿಂದಾವೃತವಾದ ಕಡಿದಾದ ಮಾರ್ಗದಲ್ಲಿ ಕಲ್ಲು ಬಂಡೆಗಳನ್ನು ಹತ್ತಿ ಗುಹೆ ತಲುಪಿವಷ್ಟರಲ್ಲಿ ಜೀವ ಹೈರಾಣ ಎಂದೆನಿಸಿದರೂ ಅಲ್ಲಿಯ ಪ್ರಕೃತಿಯ ಸೊಬಗನ್ನು ಸವಿದಾಗ ಶ್ರಮ ಸಾರ್ಥಕವೆನಿಸುತ್ತದೆ. ಗುಹೆ ಪ್ರವೇಶಿಸುವಾಗ ಬೆಳಕಿನ ವ್ಯವಸ್ಥೆ ಸ್ಪಷ್ಟವಾಗಿರಬೇಕು. ಒಬ್ಬರು ನುಸುಳಿ ಒಳ ಪ್ರವೇಶ ಮಾಡಬಹುದಾಗಿದೆ. ಬ್ಯಾಟರಿ ಬೆಳಕನ್ನು ಗುಹೆಯ ಒಳಗಡೆ ಹಾಯಿಸುತ್ತಿದ್ದಂತೆ ಬಾವಲಿಗಳ ಹಾರಾಟ ಶುರುವಾಗುತ್ತದೆ. ಅದೆಷ್ಟೋ ಬಾವಲಿಗಳು ನಮಗೆ ಢೀ ಕೊಟ್ಟು ಹೊರಹಾರುತ್ತವೆ. ಒಳಗಡೆ ಪ್ರವೇಶ ಮಾಡಿದರೆ ಅಲ್ಲೊಂದು ಕೊಳವಿದೆ. ವರ್ಷವಿಡೀ ಈ ಕೊಳದಲ್ಲಿ ನೀರು ತುಂಬಿಕೊಂಡಿರುತ್ತದೆ. ಈ ನೀರು ಬೇಸಿಗೆಯಲ್ಲೂ ಹರಿದು ಕೆಳಗಿರುವ ತೋಟಪಟ್ಟಿಗಳಿಗೆ ತಂಪೆರೆಯುತ್ತದೆ. ಈ ನೀರಿಗೆ ಅಬ್ಬಿ ನೀರು ಎನ್ನಲಾಗುತ್ತದೆ.
  ಬಾವಲಿ ಗುಹೆಯಲ್ಲಿ ಧೈರ್ಯವಿದ್ದರೆ ಎಷ್ಟು ದೂರ ಬೇಕಾದರೂ ಸಾಗಬಹುದು. ಆದರೆ ಬಾವಲಿಗಳ ಹಿಕ್ಕೆ ಮತ್ತು ಮೂತ್ರದ ವಾಸನೆಗಳನ್ನು ತಡೆದುಕೊಳ್ಳುವ ಶಕ್ತಿ ನಿಮ್ಮಲ್ಲಿರಬೇಕು. ಒಳ ಪ್ರವೇಶ ಮಾಡಿದ ಮೇಲೆ 5-6 ಜನ ನಿಲ್ಲುವಷ್ಟು ಸ್ಥಳಾವಕಾಶವಿದೆ. ಗುಹೆ ಎಷ್ಟು ದೂರವಿದೆ ಎನ್ನುವುದು ಈ ವರೆಗೆ ಯಾರಿಗೂ ನಿಖರ ಮಾಹಿತಿಯಿಲ್ಲ. ಮನುಷ್ಯರನ್ನು ಕಂಡ ಬಾವಲಿಗಳು ಹೊರಡಿಸುವ ಶಬ್ದಗಳು ಅಲ್ಪಮಟ್ಟಿನ ಭಯವನ್ನು ಹುಟ್ಟುಹಾಕುತ್ತದೆ. ಆದರೂ ಬಾವಲಿ ಗುಹೆ ಸಾಹಸಿಗರ ಮತ್ತು ಪರಿಸರ ಪ್ರೇಮಿಗಳ ಅಚ್ಚುಮೆಚ್ಚಿನ ತಾಣ.
    ಬಾವಲಿ ಗುಹೆಯೊಳಗಡೆ ಹೋದಂತೆ ಹಲವಾರು ಉಪ ಮಾರ್ಗಗಳೂ ಇವೆ. ಅವು ಎಲ್ಲಿ ಸೇರುತ್ತವೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಅಷ್ಟು ದೂರ ಕ್ರಮಿಸಲೂ ಸಾಧ್ಯವಿಲ್ಲ. ಪಕ್ಕದಲ್ಲಿ ಇನ್ನೊಂದು ಗುಹೆಯಿದೆ. ಈ ಗುಹೆಯನ್ನು ಯಾರೂ ಹೊಕ್ಕಿಲ್ಲ. ಕಾರಣ ಆ ಗುಹೆಯಲ್ಲಿ ಬಾವಲಿಗಳಿಲ್ಲ. ಬಾವಲಿಗಳಿಲ್ಲದ ಸ್ಥಳಗಳಲ್ಲಿ ಹಾವು, ಚೇಳುಗಳಂತಹ ಅಪಾಯಕಾರಿ ಜೀವಿಗಳಿರುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ. ಬಾವಲಿ ಗುಹೆ ಕುರಿತಂತೆ ಸ್ಥಳೀಯರು ಹೇಳುವಂತೆ ಮಹಾಭಾರತದ ಸಂದರ್ಭದಲ್ಲಿ ಪಾಂಡವರು ವನವಾಸದಲ್ಲಿದ್ದಾಗ ಈ ಗುಹೆಯಲ್ಲಿ ಆಶ್ರಯ ಪಡೆದಿದ್ದರು. ಅದೇ ರೀತಿ ಗುಹೆಯ ಮೇಲಿನ ಗುಡ್ಡದಲ್ಲಿ ವನದೇವತೆಯಿದೆ.
    ಬಾವಲಿಗಳು ರೈತಸ್ನೇಹಿ ಎನ್ನುವುದು ಅನೇಕರಿಗೆ ಗೊತ್ತಿಲ್ಲ. ಬಾವಲಿಗಳ ಹಿಕ್ಕೆ ಕೃಷಿಗೆ ಉತ್ಕೃಷ್ಟ ಸಾವಯವ ಗೊಬ್ಬರ. ಸುತ್ತಮುತ್ತಲ ಐದಾರು ಕಿಲೋಮೀಟರ್ನ ಜನ ತಮಗೆಷ್ಟು ಬೇಕೋ ಅಷ್ಟು ಬಾವಲಿ ಹಿಕ್ಕೆಗಳನ್ನು ಕೊಂಡೊಯ್ದು ಕೃಷಿಗೆ ಬಳಸುತ್ತಾರೆ. ಗುಹೆಯ ಹೊರಭಾಗದಲ್ಲಿ ಅಬ್ಬಿ ನೀರಿರುವುದರಿಂದ ಅಲ್ಲಿಯ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ. ಬಾವಲಿ ಗುಹೆಗೆ ತೆರಳಲು ಪಕ್ವ ಕಾಲವೆಂದರೆ ನವೆಂಬರ್ನಿಂದ ಮೇ ವರೆಗಿನ ಅವಧಿಯಲ್ಲಿ ಯಾವಾಗಲೂ ಈ ಪ್ರದೇಶಕ್ಕೆ ತೆರಳಬಹುದಾಗಿದೆ.

    ಬಾವಲಿ ಗುಹೆಗೆ ಹೋಗುವವರು ಕಟ್ಟುನಿಟ್ಟಾಗಿ ಪಾಲಿಸಲೇ ಬೇಕಾದ ಹಲವಾರು ಅಂಶಗಳಿವೆ. ಬಾವಲಿಗಳ ಶಾಂತತೆಗೆ ಭಂಗವನ್ನು ತರಬಾರದು. ಒಂದು ವೇಳೆ ಅವುಗಳು ಸಿಟ್ಟಾದರೆ ಪ್ರವಾಸಿಗರ ಮೇಲೆ ದಾಳಿ ಮಾಡುವ ಸಾಧ್ಯತೆಗಳೂ ಇರುತ್ತವೆ. ನಿಸರ್ಗ ಮಧ್ಯದಲ್ಲಿರುವ ಈ ಸ್ಥಳದಲ್ಲಿ ಪ್ಲಾಸ್ಟಿಕ್ ಮುಂತಾದ ತ್ಯಾಜ್ಯಗಳನ್ನು ಎಸೆಯುವುದು ನಿಷೇಧ. ಹಾಗೊಂದು ವೇಳೆ ಪ್ಲಾಸ್ಟಿಕ್ ಎಸೆದರೆ ಸ್ಥಳೀಯರು ದಂಡ ಹಾಕುತ್ತಾರೆ. ಬಾವಲಿ ಗುಹೆಗೆ ಹೋಗ ಬಯಸುವವರು ತಾರಗಾರಿನ ಗಣೇಶ ಕಿರಿಗಾರಿ ಮೊಬೈಲ್ ಸಂಖ್ಯೆ : 9449112440 ಅಥವಾ 08419-238070 ಈ ದೂರವಾಣಿಗಳಿಗೆ ಸಂಪಕರ್ಿಸಿದರೆ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳುತ್ತಾರೆ. ಮೊದಲೇ ತಿಳಿಸಿದ್ದರೆ ಊಟದ ವ್ಯವಸ್ಥೆಯನ್ನೂ ಕೈಗೊಳ್ಳುತ್ತಾರೆ. ಬಾವಲಿ ಗುಹೆಗೆ ತೆರಳುವವರಿಗೆ ಮಾರ್ಗದರ್ಶನ ನೀಡುತ್ತಾರೆ.

No comments:

Post a Comment