Tuesday, February 11, 2014

ಬೆಂಗಾಲಿ ಸುಂದರಿ-7

(ಕಾಂತಾಜಿ ದೇವಾಲಯ, ಬಾಂಗ್ಲಾದೇಶ)
                   ಎದುರಲ್ಲಿ ನಿಂತಿದ್ದಾಕೆಯನ್ನು ಬಿಟ್ಟ ಕಣ್ಣಿನಿಂದ ನೋಡುತ್ತಿದ್ದ ವಿನಯಚಂದ್ರ ಸೂರ್ಯನ್ ಧ್ವನಿ ಕೇಳಿ ವಾಸ್ತವಕ್ಕೆ ಬಂದ. ತಕ್ಷಣ `ಏನು..?' ಎಂಬಂತೆ ನೋಡಿದ. ಅದಕ್ಕೆ ಆಕೆ ಹಿಂದಿಯಲ್ಲಿ ಬಾಂಗ್ಲಾದೇಶದ ಪ್ರವಾಸಿ ತಾಣಗಳನ್ನು ಭಾರತ ಕಬ್ಬಡ್ಡಿ ತಂಡಕ್ಕೆ ತೋರಿಸುವ ಹೊಣೆಗಾರಿಕೆಯನ್ನು ತನಗೆ ನೀಡಿದ್ದಾರೆಂದೂ ಎಲ್ಲ ಆಟಗಾರರ ಬಳಿ ವಿಷಯ ತಿಳಿಸಿಯಾಗಿದೆಯೆಂದೂ ಈ ರೂಮೊಂದೆ ಬಾಕಿಯಿತ್ತೆಂದೂ ತಿಳಿಸಿದಳು. ಬೇಗನೆ ಹೊರಡಲು ತಯಾರಾಗಬೇಕೆಂದು ಹೇಳಿದಳು.
                  ತಾನು ಬಂದ ವಿಷಯವನ್ನು ಆಕೆ ಅರಳುಹುರಿದಂತೆ ಪಟಪಟನೆ ಮಾತನಾಡುತ್ತಿದ್ದರೆ ವಿನಯಚಂದ್ರ ಮರುಳನಂತೆ ನೋಡುತ್ತಿದ್ದ. ಅವನಿಗೆ ಹೂಂ ಅನ್ನಲೂ ಮರೆತುಹೋಗಿತ್ತು. ಸೂರ್ಯನ್ ಬಂದು ಏನಿವರ ಹಕ್ಕೀಕತ್ತು ಎಂದು ನೋಡದೇ ಇದ್ದಿದ್ರೆ ವಿನಯಚಂದ್ರ ಎಲ್ಲಿ ಕಳೆದುಹೋಗುತ್ತಿದ್ದನೋ.  ಸೂರ್ಯನ್ ಬಂದವನೆ ವಿನಯಚಂದ್ರನನ್ನು ತಟ್ಟಿ ಎಬ್ಬಿಸಿ `ಏನೂ.. ನೀನು ಕಳೆದುಹೋದ್ಯಾ..?' ಎಂಬಂತೆ ನೋಡಿದ. ವಿನಯಚಂದ್ರ ನೋಡುತ್ತಿದ್ದ ಪರಿಯನ್ನು ವಿಚಿತ್ರವಾಗಿ ಗಮನಿಸುತ್ತಿದ್ದ ಆ ಬೆಂಗಾಲಿ ಹುಡುಗಿಯೂ ಒಮ್ಮೆ ಹಿತವಾಗಿ ನಕ್ಕಿದ್ದಳು. ವಿನಯಚಂದ್ರನಿಗೆ ಅವಳ ಹೆಸರನ್ನು ಕೇಳಿಬಿಡಬೇಕೆನ್ನುವ ತವಕವಿತ್ತು. ಆದರೆ ಕೇಳಲು ಶಬ್ದಗಳು ಹೊರಬರಲೇ ಇಲ್ಲ.
                 ಸೂರ್ಯನ್ ಹುಡುಗಿಯ ಮುಖ ಕಂಡಿದ್ದೇ ತಡ ಪಟಪಟನೆ ತಾನು ಮಾತನಾಡಲು ಆರಂಭಿಸಿದ್ದ. ಆತ ಅವಳ ಬಳಿ ಅದೇನು ಮಾತನಾಡಿದನೋ.. ವಿನಯಚಂದ್ರ ಮಾತ್ರ ಅವಳನ್ನು ನೋಡುವುದರಲ್ಲಿಯೇ ತಲ್ಲೀನನಾಗಿದ್ದ. ಜೀವನದಲ್ಲಿ ಮೊಟ್ಟ ಮೊದಲಬಾರಿಗೆ ವಿನಯಚಂದ್ರನ ಹೃದಯ ಕಳುವಾಗಿತ್ತು. ಮನಸು ತನ್ನನ್ನೇ ತಾನು ಮರೆತು ಹೋಗಿತ್ತು. ಮಾತು ಮೌನವಾಗಿತ್ತು. ಸೂರ್ಯನ್ ನ ಬಳಿಯಾದರೂ ಆಕೆಯ ಹೆಸರನ್ನು ಕೇಳುವಂತೆ ಹೇಳಬೇಕು ಎಂದು ಸನ್ನೆ ಮಾಡಿದ. ಸೂರ್ಯನ್ ಬೇಕಂತಲೆ ಅದನ್ನು ಕಡೆಗಣಿಸಿದ. ವಿನಯಚಂದ್ರನಿಗೆ ಉರಿದುಹೋಯಿತು. ಸೂರ್ಯನ್ ಬಳಿ ಏನೇನೋ ಮಾತನಾಡಿದ ಆಕೆ ವಾಪಸಾದ ತಕ್ಷಣ ವಿನಯಚಂದ್ರ ಸೂರ್ಯನ್ ಮೇಲೆ ಮುಗಿಬಿದ್ದ.
`ಆಕೆಯ ಹೆಸರು ಕೇಳಬೇಕಿತ್ತು ಕಣೋ..' ಎಂದ
`ನಾನು ಕೇಳಿದೆ..' ಎಂದ ಸೂರ್ಯನ್
`ಏನು..?'
`ಹೆಸರುಕಾಳು..'
`ತಮಾಷೆ ಸಾಕು..'
`ಹೋಗೋ.. ಹೋಗೋ..'
`ಹೇಳೋ ಮಾರಾಯಾ...'
`ಏನು ಅವಳ ಮೇಲೆ ಅಷ್ಟೆಲ್ಲ ಆಸಕ್ತಿ..'
`ಏನಿಲ್ಲ.. ಹಾಗೆ ಸುಮ್ಮನೆ... '
`ಇದೆಲ್ಲಾ ಬೇಡ.. ನಮಗೂ ಗೊತ್ತಾಗುತ್ತೆ...'
`ಏನ್ ಗೊತ್ತಾಗುತ್ತೆ..? ಏನ್ ಗೊತ್ತಾಯ್ತು ನಿಂಗೆ..?'
`ಚನ್ನಾಗಿದ್ದಾಳೆ... ಮಾತಾಡಿಸಬೇಕು ಎನ್ನಿಸಿತಲ್ವಾ?.. ಅಂತೂ ನೀನು ಮರುಳಾದೆ ಅನ್ನು..'
`ಹೆ.. ಹಂಗೇನಿಲ್ಲ ಮಾರಾಯಾ... ಯಾಕೋ ಸುಮ್ಮನೆ ಕೇಳೋಣ ಅನ್ನಿಸಿತು..' ವಿನಯಚಂದ್ರ ಮಾತು ಹಾರಿಸಲು ಯತ್ನಿಸಿದ.
`ನಾನು ಅವಳ ಹೆಸರನ್ನು ಕೇಳಿದೆ.. ಬಹಳ ಚನ್ನಾಗಿದೆ ಅವಳ ಹೆಸರು.. ಅವಳಂತೆ..'
`ಏನು ಹೆಸರು..?'
`ಹೇಳೋದಿಲ್ಲ... ಯಾಕೆ ಹೇಳಬೇಕು ನಿಂಗೆ..? ಹೋಗಲೋ...' ಎಂದು ಛೇಡಿಸಿದ.. ಆ ನಂತರ ಎಷ್ಟು ಗೋಗರೆದರೂ ಸೂರ್ಯನ್ ಹೇಳಲಿಲ್ಲ. ಅವನಿಗೂ ವಿನಯಚಂದ್ರನನ್ನು ಆಟವಾಡಿಸಬೇಕು ಎನ್ನಿಸಿರಬೇಕು. ವಿನಯಚಂದ್ರನಿಗೆ ಬೇಜಾರಾದಂತೆನಿಸಿತು. ಇನ್ನು ಸೂರ್ಯನ್ ಬಳಿ ಕೇಳಿ ಉಪಯೋಗವಿಲ್ಲ ಎಂದುಕೊಂಡ. ಮಾತು ಬದಲಿಸಿದ.
                  ಸಂಜೆಯ ವೇಳೆಗೆ ಸೂರ್ಯನ್ ಗೆ ವಿಷಯ ಮರೆತಂತಾಗಿತ್ತಾದರೂ ವಿನಯಚಂದ್ರನ ಮನದಲ್ಲಿ ಬೆಂಗಾಲಿ ಸುಂದರಿ ಕಾಡುತ್ತಲೇ ಇದ್ದಳು. ಏನ್ ಮಾಡ್ತಾ ಇರಬಹುದು ಆಕೆ? ಎಲ್ಲಿ ಇರಬಹುದು? ಮತ್ತೊಮ್ಮೆ ನೋಡಬೇಕಲ್ಲಾ ಎನ್ನಿಸಿತು. ನೋಡಿದಷ್ಟೂ ನೋಡಬೇಕೆನ್ನಿಸುವಂತಿದ್ದಳು ಆಕೆ. ಹೊಟೆಲಿನಲ್ಲಿ ಎಲ್ಲಾದರೂ ಕಾಣಬಹುದೆ ಎಂದು ಅಡ್ಡಾಡಲು ಹೊರಟ. ಇನ್ನೇನು ರೂಮಿನಿಂದ ಹೊರಬೀಳಬೇಕು ಎನ್ನುವಷ್ಟರಲ್ಲಿ ಸೂರ್ಯನ್ ಮತ್ತೊಮ್ಮೆ `ಏನೋ.. ಅವಳನ್ನು ನೋಡಲು ಹೊರಟೆಯಾ..? ನಿನಗಿಲ್ಲಿ ಅವಳು ಕಾಣಿಸೋದಿಲ್ಲ..' ಎಂದು ಛೇಡಿಸಿದ. ಮುಂದುವರಿದು `ನಾನು ಬರಲಾ ನಿನ್ಜೊತೆ...' ಎಂದ. ವಿನಯಚಂದ್ರ ಮಾತನಾಡದೆ ಮುನ್ನಡೆದ. ಹುಸಿಮುನಿಸನ್ನೂ ನೋರಿದ.
               ಹೊಟೆಲ್ ಭವ್ಯವಾಗಿತ್ತು. ದೊಡ್ಡದಾಗಿಯೂ ಇತ್ತು. ಹೊಳಪಿನ ಟೈಲ್ಸಿನ ಮೇಲೆ ನಡೆಯುವವನ ಪ್ರತಿಬಿಂಬ ಬೀಳುತ್ತದೆ ಎನ್ನುವಂತಿತ್ತು. ಬಾಂಗ್ಲಾದೇಶ ಬಡ ರಾಷ್ಟ್ರ ಎಂದು ಎಲ್ಲೋ ಓದಿದಂತಿತ್ತು. ಆದರೆ ಈ ಹೊಟೆಲಿನಲ್ಲಿ ಶ್ರೀಮಂತಿಕೆ ಎದ್ದು ಕಾಣಿಸುತ್ತಿದೆ. ಬಡತನದ ಲವಲೇಶವೂ ಇಣುಕುತ್ತಿಲ್ಲವಲ್ಲ ಎಂದುಕೊಂಡ ವಿನಯಚಂದ್ರ. ಹಾಗೆ ಹೊಟೆಲಿನ ಕಂಪೌಂಡಿನ ಬಳಿ ಬಂದ. ಅಲ್ಲೊಂದು ಸ್ವಿಮ್ಮಿಂಗ್ ಫೂಲ್ ಇತ್ತು. ಭಾರತ ತಂಡದ ಒಂದಿಬ್ಬರು ಆಟಗಾರರು ಅಲ್ಲಿ ಈಜಾಟವನ್ನು ನಡೆಸಿದ್ದರು. ಯಾಕೋ ವಿನಯಚಂದ್ರನಿಗೂ ಮನಸ್ಸು ತಡೆಯಲಿಲ್ಲ. ಸೀದಾ ಬಂದವನೆ ನೀರಿಗಿಳಿದ.
                 ತನ್ನೂರಿನ ಫಾಸಲೆಯಲ್ಲಿ ಹರಿದುಹೋಗುವ ನದಿಯಲ್ಲಿ ಈಜು ಕಲಿತಿದ್ದುದು ನೆನಪಾಯಿತು. ಬಾಲ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಈಜು ಕಲಿತ ಸಾಹಸವೂ ಅರಿವಿಗೆ ಬಂದಿತು. ಕಾಲು ತಪ್ಪುವಷ್ಟು ಆಳದ ಗುಂಡಿಗೆ ಹೋಗಿ, ಇದ್ದಕ್ಕಿದ್ದಂತೆ ಕಾಲು ಜಾರಿ ನೀರೊಳಗೆ ಕಂತಿ ಒಮ್ಮೆ ನೀರು ಕುಡಿದು ಖು.. ಖು.. ಖು ಅಂತ ಕೆಮ್ಮಿ ಯಡರಾ ಬಡರಾ ಕಾಲು ಬಡಿದು ನೀರಿನಿಂದ ಹೇಗ್ಹೇಗೋ ಎದ್ದು ಬಂದಿದ್ದರ ನೆನಪಾಯಿತು. ಆ ನಂತರ ಅನೇಕ ದಿನಗಳ ಕಾಲ ಈಜೂ ಬೇಡ ನದಿಯೂ ಬೇಡ ಎಂದು ನಮಸ್ಕಾರ ಹಾಕಿದ್ದೂ ನೆನಪಿಗೆ ಬಂದು ಹಿತವಾಗಿ ನಕ್ಕ. ಅಷ್ಟರ ನಂತರ ತನ್ನ ಓರಗೆಗಿಂತ ಹಿರಿಯ ಹುಡುಗರ ಒತ್ತಾಯಕ್ಕೆ ಕಟ್ಟು ಬಿದ್ದು ನದಿಯಲ್ಲಿ ಕಷ್ಟಪಟ್ಟಾದರೂ ಈಜು ಕಲಿತಿದ್ದ. ಆದರೆ ಒಂದು ಆತನಿಗೆ ಸ್ವಲ್ಪ ಸಮಸ್ಯೆ ಉಂಟುಮಾಡುತ್ತಿತ್ತು. ಹರಿಯುವ ನೀರಿನಲ್ಲಿ ಸೆಳವಿಗೆ ಅಡ್ಡವಾಗಿ, ಉದ್ದವಾಗಿ ಈಜುತ್ತಿದ್ದ ಆತ ನಿಂತ ಸ್ಮಿಮ್ಮಿಂಗ್ ಫೂಲ್ ನ ನೀರಿನಲ್ಲಿ ಈಜಲು ಆರಂಭದಲ್ಲಿ ಸ್ವಲ್ಪ ಕಷ್ಟವನ್ನೇ ಪಟ್ಟ ಎನ್ನಿ. ಬಾಲ್ಯದ ಹುಡುಗಾಟಗಳು, ಈಜಿನ ಜೊತೆಗೆ ಕೆಣಕಾಟಗಳು ಆತನಲ್ಲಿ ಒಮ್ಮೆ ನಗುವಿಗೆ ಕಾರಣವಾದವು. ಅದು ಅವನ ಜೊತೆಯಲ್ಲಿ ಈಜುತ್ತಿದ್ದ ಪಂಜಾಬಿನ ಆಟಗಾರನೊಬ್ಬನಿಗೆ ಕಂಡು `ಏನ್ ಉಸ್ತಾದ್.. ಒಬ್ಬೊಬ್ನೆ ನಗ್ತೀದಿಯಾ..? ನಿನ್ ಲವ್ವರ್ ನೆನಪಾದಳಾ..?' ಎಂದ.
                `ಲವ್ವೂ ಇಲ್ಲ ಎಂತ ಮಣ್ಣೂ ಇಲ್ಲ.. ನಾನು ಇದುವರೆಗೂ ಯಾರನ್ನೂ ಲವ್ ಮಾಡಿಲ್ಲ..' ಎಂದ..
`ಥೂ ನಿನ್ನ.. ವೇಸ್ಟು ಕಣೋ ನೀನು.. ಯಾಕೆ ಬದುಕ್ತಿದ್ದೀಯಾ..? ಲವ್ ಮಾಡಿಲ್ಲ ಅಂದ್ರೆ ನಿಂದೂ ಒಂದು ಬದುಕಾ.. ಚಲ್...ಚಲ್.. ನಾನ್ ನೋಡು ಕನಿಷ್ಟ ಹತ್ತು ಲವ್ ಮಾಡಿದ್ದೇನೆ.. ಗಂಡಸಾದ ಮೇಲೆ ಲವ್ ಮಾಡದೇ ಇರೋಕಾಗತ್ತಾ.. ಥೂ ನಿನ್ನ.. ಎಳಸು ನೀನು' ಎಂದ. ಪಂಜಾಬಿಯ ದೃಷ್ಟಿಯಲ್ಲಿ ವಿನಯಚಂದ್ರ ಏನಕ್ಕೂ ಬಾರದವನು. ಆದರೆ ವಿನಯಚಂದ್ರ ಯಾರನ್ನೂ ಪ್ರೀತಿಸದೇ ಇರಲು ಹಲವಾರು ಕಾರಣಗಳಿದ್ದವು. ಆತ ಹರೆಯಕ್ಕೆ ಕಾಲಿಟ್ಟಾಗಲೇ ತಾನು ಪ್ರೀತಿಸುವ ಹುಡುಗಿ ಹೀಗಿರಬೇಕು ಎನ್ನುವ ಹಲವಾರು ಅಂಶಗಳನ್ನು ಮನದಲ್ಲಿಯೇ ಹಾಕಿಕೊಂಡಿದ್ದ. ತನ್ನ ಪ್ರೀತಿಯ ಹುಡುಗಿಯ ಲಕ್ಷಣಗಳಿಗೊಂದು ಚೌಕಟ್ಟನ್ನು ರೂಪಿಸಿದ್ದ. ಹುಡುಗಿ ಚನ್ನಾಗಿರದಿದ್ದರೂ, ಸುರಸುಂದರಿಯಾಗಿ ಇರದೇ ಇದ್ದರೂ ತಪ್ಪಿಲ್ಲ. ಆದರೆ ಲಕ್ಷಣವಂತೆಯಾಗಿರಬೇಕು. ಉದ್ದನೆಯ ಜಡೆ ಆಕೆಗೆ ಇರಬೇಕು. ಕಾಡು ಸುತ್ತಬೇಕು. ಹಾಡು ಹೇಳಬೇಕು. ಹೀಗೆ ಏನೇನೋ ಅಂಶಗಳು.. ಒಂದಿಬ್ಬರು ಹುಡುಗಿಯರು ವಿನಯಚಂದ್ರನ ಬಳಿ ಪ್ರೇಮನಿವೇದನೆ ಮಾಡಿಕೊಂಡಿದ್ದೂ ಇದೆ. ಆದರೆ ತಾನು ಬಯಸಿದ ಅಂಶಗಳು ಅವರಲ್ಲಿ ಇರದ ಕಾರಣ ಅವರಿಗೆ ಒಪ್ಪಿಗೆಯನ್ನು ಸೂಚಿಸಿರಲಿಲ್ಲ ಆತ.
                    ಇದೀಗ ಅಪರೂಪಕ್ಕೆ ಒಬ್ಬಳು ಹುಡುಗಿ ವಿನಯಚಂದ್ರನ ಮನಸ್ಸಿಗೆ ಹಿಡಿಸಿದ್ದಳು. ನೋಡಲು ಚನ್ನಾಗಿದ್ದಳು. ಜೊತೆಗೆ ಯಾಕೋ ಆಕೆಯನ್ನು ನೋಡಿದಾಕ್ಷಣ ಆಪ್ತಭಾವ ಕಾಡಲಾರಂಭಿಸಿತ್ತು. ಮೇಲ್ನೋಟಕ್ಕೆ ಆಕೆಯದು ಉದ್ದವಾದ ಜಡೆಯಂತೆ ಕಂಡು ಆತ ಒಳಗೊಳಗೆ ಖುಷಿ ಪಟ್ಟಿದ್ದ. ಆಕೆಯ ಅಗಲ ಹಣೆ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾಳನ್ನು ನೆನಪಿಗೆ ತಂದುಕೊಟ್ಟಿದ್ದರೂ ಆಕೆಯನ್ನು ನೋಡುತ್ತಿದ್ದರೆ ಏನೋ ಒಂದು ಹಿತವಾದ ಭಾವನೆ ಅವನಲ್ಲುಂಟಾಗುತ್ತಿತ್ತು. ಸೂರ್ಯನ್ ಹೇಳದಿದ್ದರೂ ಪರವಾಗಿಲ್ಲ. ಸಿಕ್ಕರೆ ನಾನು ಮಾತನಾಡಿಸಬೇಕು. ಹೋಗಿ ಅವಳ ಬಳಿ ಹೆಸರು ಹೇಳಿ, ಏನು ಮಾಡ್ತಿರೋದು ಎಂದೆಲ್ಲಾ ವಿಚಾರಿಸಬೇಕು ಎಂದುಕೊಂಡ. ಆಕೆ ಮುಸ್ಲೀಂ ಹುಡುಗಿಯಾದರೆ ಏನ್ ಮಾಡೋದು ಎಂಬ ಭಾವನೆಯೂ ಕಾಡದಿರಲಿಲ್ಲ. ಹಾಗಾಗದಿರಲಿ ಎಂದು ಒಮ್ಮೆ ಬೇಡಿಕೊಂಡ. ಹಿಂದೂ ಹುಡುಗಿಯೇ ಇರಬೇಕು. ಇಲ್ಲವಾದರೆ ಅಷ್ಟು ಚಂದಾಗಿ ಸೀರೆ ಉಡ್ತಿದ್ದಳಾ.. ಹಣೆಗೆ ಬಿಂದಿ ಇತ್ತು. ಖಂಡಿತ ಹಿಂದೂ ಹುಡುಗಿಯೇ ಇರಬೇಕು ಎಂದುಕೊಂಡ ವಿನಯಚಂದ್ರ. ಯಾಕೋ ಸಮಾಧಾನವಾದಂತಾಯಿತು.
                      ಕತ್ತಲಾಗುವ ವೇಳೆಗೆ ಮತ್ತೆ ಹೊಟೆಲ್ ಒಳಗೆ ಮುಖಮಾಡಿದ. ಬದುಕು ಚಿಕ್ಕದಾಗಿ ಹಳಿತಪ್ಪಿದಂತಿತ್ತು. ಸೂರ್ಯನ್ ಮಾತ್ರ ಕೆಣಕುವಿಕೆ ಹಾಗೂ ನಗುವಿನಲ್ಲಿ ತಲ್ಲೀನನಾಗಿದ್ದ. ಆಕೆಯ ಪ್ರತಿರೂಪದೊಂದಿಗೆ ಆದಿನವನ್ನು ಕಳೆಯಲು ಯತ್ನಿಸಿದ ವಿನಯಚಂದ್ರ. ಹುಡುಗಿಯರು ಹೇಗಿದ್ದರೂ ಚಂದ. ಮೇಕಪ್ಪು ಮಾಡದಿದ್ದರೆ ಇಷ್ಟವಾಗುತ್ತಾರೆ. ಹುಡುಗರು ಮೇಕಪ್ ಮಾಡಿದ ಹುಡುಗಿಯನ್ನು ಅಷ್ಟಾಗಿ ಇಷ್ಟಪಡುವುದಿಲ್ಲ. ಮೇಕಪ್ ಇಲ್ಲದೇ ಸಹಜ ಸುಂದರಿಯಾಗಿದ್ದರೆ ಬಹಳ ಖುಷಿ ಪಡುತ್ತಾರೆ. ಇವಳೂ ಅಷ್ಟೇ ಮೇಕಪ್ ಮಾಡಿದಂತೆ ಕಾಣಲಿಲ್ಲ. ಸಹಜ ಸುಂದರಿ ಎಂದುಕೊಂಡ ವಿನಯಚಂದ್ರ. ಮನಸ್ಸಿನಲ್ಲಿ ಮತ್ತೆ ಅವಳ ರೂಪವನ್ನು ಕಣ್ತುಂಬಿಕೊಳ್ಳಲು ಯತ್ನಿಸಿದ.

**

                 ಮರುದಿನ ಬೆಳಿಗ್ಗೆ ಟೀಂ ಪ್ರಾಕ್ಟೀಸಿಗೆ ತಯಾರಾಗಬೇಕಿತ್ತು. ಹೊಟೆಲಿನಿಂದ ಹತ್ತಿರದ ತರಬೇತಿ ಗ್ರೌಂಡಿಗೆ ಕರೆದೊಯ್ಯಲಾಯಿತು. ಮೂರು ಗಂಟೆಗಳಿಗೂ ಅಧಿಕ ಕಾಲ ಬೆವರಿಳಿಸಿದ ಮೇಲೆ ತಂಡದ ಆಟಗಾರರು ಹಾಗೂ ಇತರರಿಗೆ ಆ ದಿನ ಬಾಂಗ್ಲಾದೇಶದ ಪ್ರವಾಸಿ ಸ್ಥಳಗಳ ಬಗ್ಗೆ ಕರೆದೊಯ್ಯಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಯಿತು. ವಿನಯಚಂದ್ರನ ಆದಿಯಾಗಿ ಎಲ್ಲರೂ ಸಂತಸಪಟ್ಟರು. ಪ್ರವಾಸಿ ಸ್ಥಳಕ್ಕೆ ತೆರಳುವಲ್ಲಿ ಆ ಬೆಂಗಾಲಿ ಸುಂದರಿ ಜೊತೆಯಾಗುತ್ತಾಳೆ ಎನ್ನುವುದು ಆತನ ನೆನಪಿಗೆ ಬಂದು ಮತ್ತಷ್ಟು ಉಲ್ಲಸಿತನಾದ. ಜಾಧವ್ ಅವರು ಬಂದು ಎಲ್ಲರನ್ನೂ ಬಾಂಗ್ಲಾದೇಶದ ಪ್ರಸಿದ್ಧ ಸ್ಥಳ, ಹಿಂದೂ ದೇವಾಲಯವಾದ ಕಾಂತಾಜಿ ಟೆಂಪಲ್ ಗೆ ಕರೆದೊಯ್ಯಲಾಗುತ್ತದೆ ಎಂದು ಮಾಹಿತಿ ನೀಡಿ ಹೋದರು. ಟೀಮ್ ಆಟಗಾರರೆಲ್ಲ ಅದಕ್ಕಾಗಿ ತಯಾರಾದರು.
                   ಬಾಂಗ್ಲಾದೇಶದ ದಿನಾಜ್ ಪುರದಲ್ಲಿರುವ ಐತಿಹಾಸಿಕ ಹಿಂದೂ ದೇವಾಲಯ ಇದು. ಹಿಂದೂಗಳೇ ಅಧಿಕವಿರುವ ಬಾಂಗ್ಲಾದೇಶದ ಸ್ಥಳ ಇದು ಎಂದರೂ ತಪ್ಪಾಗಲಿಕ್ಕಿಲ್ಲ. ಭಾರತ ತಂಡದ ಆಟಗಾರರೆಲ್ಲ ಹಿಂದೂಗಳು ಎನ್ನುವ ಕಾರಣಕ್ಕೆ ಈ ಸ್ಥಳವನ್ನು ಆಯ್ಕೆ ಮಾಡಿಕೊಂಡಿರಬೇಕು ಎಂದು ತರ್ಕಿಸಿದ ವಿನಯಚಂದ್ರ.
               ಮದ್ಯಾಹ್ನದ ವೇಳೆ ಎಲ್ಲರೂ ತಯಾರಾಗಿದ್ದರು. ಹೈಟೆಕ್ ಬಸ್ಸೊಂದು ಆಟಗಾರರನ್ನು ಕರೆದೊಯ್ಯಲು ಹೊಟೆಲ್ ಗೆ ಆಗಮಿಸಿತ್ತು. ವಿನಯಚಂದ್ರ ಲಗುಬಗೆಯಿಂದ ಬಸ್ಸನ್ನೇರಿದ. ಅಲ್ಲಿ ನಿಂತು ಬೆಂಗಾಲಿ ಸುಂದರಿಗಾಗಿ ಹುಡುಕಾಡಿದ. ಆದರೆ ಆಕೆ ಕಾಣಲಿಲ್ಲ. ಒಮ್ಮೆ ನಿರಾಸೆಯಾದಂತಾಯಿತು.
                 ಇನ್ನೇನು ಬಸ್ಸು ಹೊರಡಬೇಕು ಎನ್ನುವಷ್ಟರಲ್ಲಿ ಆಕೆ ಬಂದು ಬಸ್ಸನ್ನೇರಿದಳು. ವಿನಯಚಂದ್ರನ ಮುಖ ಹುಣ್ಣಿಮೆ ಚಂದ್ರನಂತೆ ಬೆಳಗಿತು.  ಅವಳನ್ನೇ ನೋಡಲು ಆರಂಭಿಸಿದ. ಆಕೆ ಮೊದಲಿಗೆ ಬಾಂಗ್ಲಾಶೈಲಿಯಲ್ಲಿ `ನಮೋಷ್ಕಾರ್..' ಎಂದವಳೇ `ನಾನು ಮಧುಮಿತಾ ಬಂಡೋಪಧ್ಯಾಯ.. ನಿಮ್ಮ ತಂಡದ ಮೇಲ್ವಿಚಾರಣೆಗಾಗಿ ನನ್ನನ್ನು ನೇಮಕ ಮಾಡಲಾಗಿದೆ. ನಿಮಗೆ ಬಾಂಗ್ಲಾದೇಶದಲ್ಲಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು..' ಎಂದಳು.
ವಿನಯಚಂದ್ರನ ಮನಸ್ಸಿನಲ್ಲಿ ಮತ್ತೆ ತರಂಗಗಳು ಎದ್ದಿದ್ದವು. ಕವಿತೆಯೊಂದು ಸದ್ದಿಲ್ಲದಂತೆ ಹೊರಬರಲು ಸಜ್ಜಾದಂತಿತ್ತು.
ನಿನ್ನ ಸನಿಹವೆನ್ನ ಮನದ
ದುಗುಡ ದೂರ ಮಾಡಿದೆ... 
ಎನ್ನಲು ತವಕಿಸುತ್ತಿತ್ತು ಮನಸ್ಸು. ವಿನಯಚಂದ್ರನಿಗೆ ಖುಷಿಯೋ ಖುಷಿ. ಮೊದಲನೆಯದಾಗಿ ಆಕೆಯ ಹೆಸರು ಗೊತ್ತಾಯಿತಲ್ಲ ಎಂಬಿದಾದರೆ ಆಕೆ ಹಿಂದುವೂ ಹೌದು. ಬಂಡೋಪಾಧ್ಯಾಯ ಎಂದರೆ ಬೆಂಗಾಲಿ ಬ್ರಾಹ್ಮಣರಿರಬೇಕು ಎಂದುಕೊಂಡು ಮತ್ತಷ್ಟು ಸಂತಸಪಟ್ಟ.
                  ಆಕೆ ಮುಂದುವರಿಸಿದಳು `ನಾವು ಈಗ ಹೋಗುತ್ತಿರುವ ಸ್ಥಳ ಕಾಂತಾಜಿ ಟೆಂಪಲ್ ಅಂತ. ಢಾಕಾದಿಂದ ಸರಿಸುಮಾರು 7 ಗಂಟೆ 30 ನಿಮಿಷದ ಬಸ್ಸಿನ ಪಯಣ. 371 ಕಿ.ಮಿ ದೂರದಲ್ಲಿದೆ. ನಾವು ಈ ಮದ್ಯಾಹ್ನ ಹೊರಟವರು ಸಂಜೆಯಷ್ಟೊತ್ತಿಗೆ ಕಾಂತಾಜಿ ದೇವಸ್ಥಾನದಲ್ಲಿ ಇರುತ್ತೇವೆ. ಅಲ್ಲಿ ಸಂಜೆ ಉಳಿದು, ದೇವಸ್ಥಾನವನ್ನು ನಾಳೆ ನೋಡಿ ನಾಳೆ ಸಂಜೆಯೊಳಗಾಗಿ ಢಾಕಾಕ್ಕೆ ವಾಪಾಸಾಗುತ್ತೇವೆ.. ಬಾಂಗ್ಲಾದೇಶದಲ್ಲಿರುವ ಕೆಲವೇ ಕೆಲವು ವಿಶೇಷ, ವಿಶಿಷ್ಟ ಹಾಗೂ ಪ್ರಾಚೀನ ಹಿಂದೂ ದೇವಾಲಯಗಳಲ್ಲಿ ಇದೂ ಒಂದು. ಅಪರೂಪವಾದದ್ದು. ಕಾಂತಾಜಿ ದೇವಾಲಯ ನಿರ್ಮಾಣ ಆರಂಭವಾಗಿದ್ದು 1704ರಲ್ಲಿ. ಮಹಾರಾಜ ಪ್ರಾಣನಾಥ ಎಂಬಾತ ಈ ದೇವಾಲಯ ನಿರ್ಮಾಣವನ್ನು ಆರಂಭ ಮಾಡಿದ. 1722ರಲ್ಲಿ ಮಹಾರಾಜ ಪ್ರಾಣನಾಥನ ಮಹ ರಾಜಾ ರಾಮನಾಥ ಈ ದೇವಾಲಯ ಕಟ್ಟಡವನ್ನು ಪೂರ್ತಿಗೊಳಿಸಿದ. ಟೆರ್ರಾಕೋಟಾದ ವಾಸ್ತುಶಿಲ್ಪಕ್ಕೆ ಇದೊಂದು ಪ್ರಮುಖ ಉದಾಹರಣೆ ಎನ್ನಬಹುದು. 1897ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಬೀಕರ ಭೂಕಂಪದಲ್ಲಿ ಈ ದೇವಾಲಯ ಬಹುತೇಕ ಹಾಳಾಗಿತ್ತು. ಆದರೆ ಆ ನಂತರ ಇದನ್ನು ಮತ್ತೊಮ್ಮೆ ಮರು ನಿರ್ಮಾಣ ಮಾಡಲಾಗಿದೆ..' ಎಂದು ಮಧುಮಿತಾ ಹೇಳುತ್ತಿದ್ದರೆ ವಿನಯಚಂದ್ರ ಆಕೆಯ ಕಣ್ಣನ್ನು ತದೇಕಚಿತ್ತದಿಂದ ನೋಡುತ್ತಿದ್ದ.
                `ಬ್ರಿಟೀಷರ ಆಗಮನ, ಬ್ರೀಟಷರು ಭಾರತವನ್ನು ಆಕ್ರಮಿಸಿದ್ದು, ಸ್ವಾತಂತ್ರ್ಯ ಹೋರಾಟ, ಸ್ವಾತಂತ್ರ್ಯ ಪಡೆದರೂ ಬಾಂಗ್ಲಾದೇಶದ ಭಾಗ ಹಿಸೆಯಾಗಿದ್ದು, 1971ರಲ್ಲಿ ಪ್ರತ್ಯೇಕ ರಾಷ್ಟ್ರೋದಯ, ಹಿಂದೂಗಳ ಮೇಲೆ ಮಾರಣಹೋಮ ಇತ್ಯಾದಿಗಳನ್ನೆಲ್ಲ ಕಂಡರೂ ದೃಢವಾಗಿ ನಿಂತಿದೆ ಈ ದೇವಸ್ಥಾನ.. ಎಲ್ಲರೂ ಖುಷಿಯಿಂದ ನೋಡಿಕೊಂಡು ಬರೋಣ..' ಎಂದು ಮಧುಮಿತಾ ಹೇಳುತ್ತಿದ್ದರೆ ವಿನಯಚಂದ್ರ ಅವಳ ಮಾತಿನ ಮಧುರತೆಯಲ್ಲಿ ಕಳೆದೇ ಹೋದಂತಿದ್ದ.

(ಮುಂದುವರಿಯುತ್ತದೆ..)

Monday, February 10, 2014

ನಗು ಗೆಳತಿ

ಎಲ್ಲಿ ಮರೆತೆ ನಗುವ ನೀನು
ಮೊಗದ ಮೇಲಿನಿಂದ,
ನಗು ನೀನು ಎಂದೂ ಗೆಳತಿ
ನಗುವೆ ನಿನಗೆ ಚಂದ ||

ನಿನ್ನೆ ತನಕ ಚನ್ನಾಗಿದ್ದೆ
ಇಂದೇನಾಯ್ತೇ ಗೆಳತಿ ?
ಹಿಂದೂ ಇಲ್ಲ, ಮುಂದೂ ಇಲ್ಲ
ಮುನಿಸಲ್ಯಾಕೆ ಕುಳಿತಿ ? ||

ಮುನಿಸಿಗಿಂತ ನಗುವೆ ಚಂದ
ನಿನ್ನ ಮೊಗದ ಬೆಳಕಿಗೆ
ಸಿಟ್ಟಿನೊಳಗೆ ಏನೂ ಇಲ್ಲ
ನಗುವಿನಲ್ಲಿ ಬದುಕಿದೆ ||

ಗೆಳತಿ ನೀನು ನಗುತಲಿರು
ನನ್ನೇ ನಾನು ಮರೆಯುವೆ,
ನೀನು ಮುನಿದು ಕುಳಿತರೆ
ಜಗವ ನಾನು ತೊರೆಯುವೆ ||

**
(ಈ ಕವಿತೆಯನ್ನು ಬರೆದಿದ್ದು 8.04.2007ರಂದು ದಂಟಕಲ್ಲಿನಲ್ಲಿ)
(ಈ ಕವಿತೆಗೆ ಸುಪರ್ಣ ದಂಟಕಲ್ ಹಾಗೂ ಪೂರ್ಣಿಮಾ ಹೆಗಡೆ ರಾಗ ಹಾಕಿ ಹಾಡಿದ್ದಾರೆ. ಅವರಿಗೆ ಧನ್ಯವಾದಗಳು)

Sunday, February 9, 2014

ಬ್ರಹ್ಮಚಾರಿಯ ಮಗಳು (ಕಥೆ)ಭಾಗ-2

                 ಅವಳು ನನ್ನನ್ನು ಸೀದಾ ತಮ್ಮ ಮನೆಗೆ ಕರೆದುಕೊಂಡು ಬಂದಳು. ಕಣ್ಣು ಕೆಂಪಾಗಿತ್ತಾದರೂ ಅದು ದುಃಖದಿಂದಲೋ ಅಥವಾ ಸಿಟ್ಟಿನಿಂದಲೋ ಎನ್ನುವುದು ನನ್ನ ಯೋಚನೆಗೆ ನಿಲುಕಲಿಲ್ಲ. ನಾನು ಮೌನದಿಂದ ಜೊತೆಗೆ ಬಂದಿದ್ದೆ. ಮನೆಗೆ ಬಂದವಳೇ ಮನೆಯ ಜಗುಲಿಯ ಮೇಲೆ ತನ್ನನ್ನು ಕುಕ್ಕರು ಬಡಿ ಎಂಬಂತೆ ಕುಳ್ಳಿರಿಸಿ ಒಳಹೋದಳು. ಒಂದರೆಘಳಿಗೆ ಪತ್ತೆಯಿರಲಿಲ್ಲ. ನನಗೆ ಆ ಸಮಯದಲ್ಲಿ ಉಂಟಾದ ನೀರವತೆ, ಮೌನವನ್ನು ಸಹಿಸಲು ಸಾಧ್ಯವಾಗಲಿಲ್ಲ. ಅವಳು ನನ್ನನ್ನು ಕುಳ್ಳಿರಿಸಿದ್ದ ಜಾಗದಲ್ಲಿಯೂ ಕುಳಿತುಕೊಳ್ಳಲು ಸಾಧ್ಯವಾಗಲಿಲ್ಲ. ಎದ್ದು ಜಗುಲಿಯಲ್ಲಿ ಓಡಾಡತೊಡಗಿದೆ.
                  ಜಗುಲಿಯ ಮೇಲೆ ಗೋಡೆಗೆ ವಿವಿಧ ಪೋಟೋಗಳನ್ನು ನೇತು ಹಾಕಲಾಗಿತ್ತು. ಹಳೆಯ ಕಾಲದಲ್ಲಿ ವರ್ಣಚಿತ್ರದಲ್ಲಿ ರಚಿಸಿದ್ದ ಹಿರಿಯರ ಚಿತ್ರಗಳು, ನಡುವಲ್ಲಿದ್ದ ಮುಂಡಿಗೆ ಕಂಭವೊಂದಕ್ಕೆ ಹಾಕಿದ್ದ ಕಟ್ಟಿನ ಸರ್ದಾರ್ ವಲ್ಲಭ ಭಾಯ್ ಪಟೇಲರದ್ದೊಂದು ಪೋಟೋ ಹಾಗೂ ನೇತಾಜಿಯವರ ಮಿಲಿಟರಿ ಉಡುಗೆಯ ಪೋಟೋಗಳು ಒಮ್ಮೆಗೆ ಸೆಳೆದಂತಾಯಿತು. ಅಂಬಿಕಾಳ ಅಪ್ಪನಿಗೆ ತೀರಾ ವಯಸ್ಸಾಗಿಲ್ಲ. ತೀರಾ ಸ್ವಾತಂತ್ರ್ಯ ಹೋರಾಟದ ಕಾಲದವರೂ ಅಲ್ಲ.  ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಸ್ವಾತಂತ್ರ್ಯ ಪಡೆದ ನಂತರ ಒಂದು ದಶಕದೀಚೆಗೆ ಹುಟ್ಟಿದವರಿರಬೇಕು ಅವರು. ಹಳೆ ಮನೆಯಲ್ಲಿ ಅವರು ಈ ಪೋಟೋ ಖಂಡಿತ ಹಾಕಿರಲು ಸಾಧ್ಯವಿಲ್ಲ. ಅಂಬಿಕಾಳ ತಂದೆಯ ಹಿರಿಯರ್ಯಾರೋ ಹಾಕಿದ್ದನ್ನು ಜೋಪಾನವಾಗಿ ಕಾಯ್ದಿಟ್ಟುಕೊಂಡು ಬಂದಿರಬೇಕು ಎಂದು ತರ್ಕಿಸಿದೆ.
                 ಅಷ್ಟರಲ್ಲಿ ಅಂಬಿಕಾ ತನ್ನ ತಂದೆಯೊಡನೆ ಬಂದಳು. ಬಂದವರೆ.. `ತಮಾ.. ಏನು ನಿನ್ನ ಕಥೆ..?..' ಎಂದರು. ನಾನು ಮಾತನಾಡುವುದರೊಳಗಾಗಿ `ಇದು ಹೀಗೇ ಆಗುತ್ತದೆ ಎಂದು ಗೊತ್ತಿತ್ತು.. ನೀನು ಆವತ್ತು ನಮ್ಮ ಮನೆಗೆ ಬಂದಿದ್ದಾಗಲೇ ಈ ವಿಷಯದ ಕುರಿತು ನಾನು ಸ್ಪಷ್ಟಪಡಿಸಬೇಕಿತ್ತು.. ಆದರೆ ನಾನು ಹಾಗೆ ಮಾಡಲಿಲ್ಲ ನೋಡು.. ಅದಕ್ಕೇ ಈಗ ನಿನ್ನಲ್ಲಿ ಅನುಮಾನ ಮೂಡಿದೆ..' ಎಂದು ನೇರವಾಗಿ ವಿಷಯವನ್ನು ನನ್ನ ಬಳಿ ಹೇಳಿದ್ದರು.
                ನಾನು ಅವರ ಮುಖವನ್ನೊಮ್ಮೆ ಅಂಬಿಕಾಳ ಮುಖವನ್ನೊಮ್ಮೆ ನೋಡಿದೆ. ಅವಳು ಬೇರೆಲ್ಲೋ ದೃಷ್ಟಿಯನ್ನು ಹಾಯಿಸಿದ್ದಳು. ಮೊಟ್ಟ ಮೊದಲ ಬಾರಿಗೆ ನಾನು ಕೇಳಬಾರದ್ದನ್ನು ಕೇಳಿದೆನೇ ಎನ್ನಿಸಿತು. `ಅದು.. ಅದು.. ನನ್ನ ಪ್ರಶ್ನೆ ಅದಲ್ಲ..' ಎಂದು ನನ್ನೊಳಗಿದ್ದ ವಿಷಯವನ್ನು ಸ್ಪಷ್ಟಪಡಿಸಲು ಯತ್ನಿಸಿದೆ.
               `ನಿನ್ನ ವಿಷಯ ನನಗೆ ಅರ್ಥವಾಗುತ್ತದೆ. ನಿನ್ನೊಳಗಿನ ಗೊಂದಲವೂ ನನಗೆ ಗೊತ್ತಾಗುತ್ತದೆ.. ನೀನು ಮತ್ತಷ್ಟು ಸಮಸ್ಯೆಗೆ ಒಳಗಾಗಿ ತೊಳಲುವ ಮೊದಲು ನಾನೇ ಹೇಳಿಬಿಡ್ತೆನೇ..' ಎಂದವರೇ ಬ್ರಹ್ಮಚಾರಿಯ ಮಗಳು ಎಂದು ಅಂಬಿಕಾಳನ್ನು ಕರೆಯುತ್ತಿದ್ದುದರ ಹಿಂದಿನ ಗುಟ್ಟನ್ನು ನನ್ನ ಬಳಿ ಹೇಳಲು ಮುಂದಾದರು.

**
               ನಾನು ಹೇಳುವುದು ಹೆಚ್ಚೂ ಕಡಿಮೆ 1980ರ ದಶಕದಲ್ಲಿ ನಡೆದಿದ್ದು ಎಂದರೆ ನಿನ್ನ ಅರಿವಿಗೆ ನಿಲುಕುವುದಿಲ್ಲ ಬಿಡು. ನಾನು ಆಗ ನಿನ್ನಂತೆ ಹೈದ. ಈಗಿನಂತೆ ವಯಸ್ಸಾದ ಕುರುಹನ್ನು, ನೆರಿಗೆಗಟ್ಟಿದ ಮುಖವನ್ನೂ ಗುಳಿಬಿದ್ದ ಕಣ್ಣನ್ನೂ ನೀನು ಕಲ್ಪಿಸಿಕೊಳ್ಳಲೂ ಸಾಧ್ಯವೇ ಇಲ್ಲ ಬಿಡು. ನಾನು ಆಗಿನ ಕಾಲದಲ್ಲಿಯೇ ಕಾಲೇಜು ಮೆಟ್ಟಿಲನ್ನು ಹತ್ತಿದವನು. ನೀವು ಹೋಗುತ್ತಿದ್ದೀರಲ್ಲಾ.. ಅದೇ ಕಾಲೇಜು ನನ್ನದು. ಆದರೆ ಈಗಿನ ಹಾಗೆ ಆಧುನಿಕತೆಯ ಕುರುಹು ಇರಲಿಲ್ಲವಾಗಿದ್ದರೂ ಆಗಿನ ಝಲಕು ಬೇರೆಯ ರೀತಿಯೇ ಇತ್ತು. ನಮ್ಮ ಜಮಾನಾದ ಕಾಲೇಜನ್ನು ನೆನಪು ಮಾಡಿಕೊಂಡರೆ ನಿಮ್ಮದೆಲ್ಲ ಏನಿಲ್ಲ ಬಿಡು.
               ನಾನು ಕಾಲೇಜಿನ ಎರಡನೇ ವರ್ಷದ ಡಿಗ್ರಿಯಲ್ಲಿ ಓದುತ್ತಿದ್ದಾಗ ನನ್ನ ಕಣ್ಣಿಗೆ ಬಿದ್ದಾಕೆಯೇ ಅವಳು. ಆಗಿನ ಕಾಲದಲ್ಲಿ ನಮ್ಮ ಕಾಲೇಜಿನಲ್ಲಿ ಹಲವರು ರೂಪಸಿಯರಿದ್ದರು. ಇವಳೂ ಅವಳ ಸಾಲಿಗೆ ಸೇರಬಹುದಾಗಿತ್ತು. ಅವಳನ್ನು ನಾನು ನೋಡಲು ಒಂದೆರಡು ತಿಂಗಳುಗಳೇ ಬೇಕಾಗಿತ್ತು. ಗೆಳೆಯರೆಲ್ಲ ಇವಳನ್ನು ಉದ್ದ ಜಡೆಯ ಸುಂದರಿ ಎಂದು ಹೇಳುತ್ತಿದ್ದರು. ನಾನು ಅವಳನ್ನು ನೋಡಿದಾಗಲೆಲ್ಲ ಅವಳ ಉದ್ದ ಜಡೆ ಮಾತ್ರ ನನ್ನ ಕಣ್ಣಿಗೆ ಬೀಳುತ್ತಿತ್ತು. ಅದೆಷ್ಟೋ ಸಾರಿ ನಾನು ಅವಳ ಮುಖವನ್ನು ನೋಡಬೇಕು ಎಂದುಕೊಂಡಿದ್ದೆ. ಆಗೆಲ್ಲ ಅದು ಯಾವ್ಯಾವುದೋ ಕಾರಣಗಳಿಂದಾಗಿ ಸಾಧ್ಯವಾಗುತ್ತಲೇ ಇರಲಿಲ್ಲ. ಕೊನೆಗೊಮ್ಮೆ ಸಿಕ್ಕಳು. ಅವಳ ಸಿಕ್ಕ ದಿನ ಇಂತದ್ದೇ ವಿಶೇಷ ಘಟನೆ ಜರುಗಿತು ಎನ್ನಲಾರೆ. ನನಗೆ ಅವಳ ಮುಖ ಕಂಡಿತು ಎನ್ನುವುದೇ ವಿಶೇಷ ಸಂಗತಿ. ಅಪರೂಪಕ್ಕೆ ಎದೆಯಲ್ಲಿ ರೋಮಾಂಚನ. ಉದ್ದ ಜಡೆಯ ಸುಂದರಿ ನಿಜಕ್ಕೂ ಚನ್ನಾಗಿದ್ದಳು. ಬೆಳ್ಳಗಿದ್ದಳು. ಮನಮೋಹಕವಾಗಿದ್ದಳು.
                 ಇಂದಿನ ಜಮಾನಾದ ನೀವಾದರೆ `ಲವ್ ಎಟ್ ಫಸ್ಟ್ ಸೈಟ್..' ಎನ್ನುತ್ತೀರಲ್ಲ. ಅದೇ ರೀತಿ. ನನಗೂ ಹಾಗೆಯೇ ಆಯಿತು. ನಾನು ಒಂದೇ ನೋಟದಲ್ಲಿ ಮೆಚ್ಚಿದೆ. ಎದೆಯೊಳಗೆ ಪುಕ ಪುಕವಾದರೂ ಹೋಗಿ ಮಾತನಾಡಿಸಿದೆ. ಅವಳೂ ಮಾತನಾಡಿದಳು. ನೆಪಕ್ಕೆ ನಮ್ಮ ಪರಿಚಯವಾದಂತಾಯಿತು. ನಂತರ ನಾವು ಆತ್ಮೀಯರಾದೆವು. ನಾವು ಆತ್ಮೀಯರಾಗಲು ಇಂತಹ ಕಾರಣಗಳೆಂಬುದಿರಲಿಲ್ಲ. ಆಕೆ ನನ್ನ ಬಳಿ ಆತ್ಮೀಯಳಾಗಿದ್ದನ್ನು ಕಂಡು ಹೊಟ್ಟೆಉರಿ ಪಟ್ಟುಕೊಂಡರು. ಆದರೆ ಅವರ ಹೊಟ್ಟೆಯುರಿ ನಮ್ಮ ಆತ್ಮೀಯತೆಗೆ ಭಂಗ ತರಲಿಲ್ಲ. ಹೀಗೆ ಒಂದು ಸಂದರ್ಭದಲ್ಲಿ ನನಗೆ ಆಕೆಯ ಮೇಲೆ ಪ್ರೀತಿ ಬೆಳೆಯಿತು. ಆದರೆ ಹೇಳಿಕೊಳ್ಳಲು ಸಾಧ್ಯವಾಗಲಿಲ್ಲ. ನಾನು ಅವಳನ್ನು ಪ್ರೀತಿಸುತ್ತಿದ್ದ ಸಂಗತಿ ನನ್ನ ತಂಗಿಗೆ ಗೊತ್ತಿತ್ತು. ಒಂದಿನ ಆಕೆ ಹೋಗಿ ಅವಳ ಬಳಿ ಹೇಳಿದಳು. ಇದರಿಂದ ಆಕೆ ಮೊದಲು ರೇಗಾಡಿದಳಂತೆ. ಆದರೆ ನಂತರ ಒಪ್ಪಿಕೊಂಡಳು. ನಿರಂತರ ಮೂರ್ನಾಲ್ಕು ವರ್ಷ ನಾವು ಪ್ರೀತಿಸಿದ್ದೆವು.
                 ಆ ದಿನಗಳಲ್ಲಿ ನಾನು ಬಹಳ ಕಷ್ಟಕ್ಕೆ ಸಿಲುಕಿಕೊಂಡಿದ್ದೆ. ಜೀವನ ನಿರ್ವಹಣೆ ತೊಂದರೆಯಲ್ಲಿತ್ತು. ನನ್ನ ಬಳಿ ಅವಳು ತನ್ನನ್ನು ಮದುವೆಯಾಗುತ್ತೀಯಾ ಎಂದು ಕೇಳಿದಳು. ನಾನು ನನ್ನ ಪರಿಸ್ಥಿತಿಯನ್ನು ಅವಳಿಗೆ ತಿಳಿಸಿ ಈಗ ಕಷ್ಟ. ಇನ್ನೊಂದು ವರ್ಷ ಕಾಯೋಣ ಅಂದೆ.
ಅದಕ್ಕವಳು ಇಲ್ಲ ಕಣೋ.. ನಮ್ಮ ಮನೆಯಲ್ಲಿ ನನಗೆ ಗಂಡು ಹುಡುಕುತ್ತಿದ್ದಾರೆ ಎಂದಳು.
`ನಾನು ಹೇಗಾದರೂ ಮಾಡಿ ಮನೆಯಲ್ಲಿ ಕೇಳು..' ಅಂದೆ
`ಹುಲಿಯಂತ ನಮ್ಮಪ್ಪ.. ಭಯವಾಗುತ್ತೆ..'
`ನಾನು ಬಂದು ಕೆಳಲಾ..?'
`ಬೇಡ.. ಬಾರಾಯಾ.. ಆ ಕೆಲಸವನ್ನು ಮಾಡಿಬಿಡಬೇಡ.. ಸ್ವಲ್ಪ ದಿನ ಹೇಗೋ ಕಾಲತಳ್ತೀನಿ.. ಒಂದ್ನಾಲ್ಕು ತಿಂಗಳು ಮುಂದೂಡಬಹುದು.. ಆದರೆ ನೀನು ಬೇಗ ನಿನ್ನ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬೇಕು..'
`ಅಷ್ಟಾದರೂ ಸಮಯ ಕೊಟ್ಯಲ್ಲಾ ಮಾರಾಯ್ತಿ.. ಥ್ಯಾಂಕ್ಯೂ..'
                 ಇಷ್ಟಾದ ಮೇಲೆ ಒಂದೆರಡು ತಿಂಗಳು ನನ್ನ ಜೀವನದ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವಲ್ಲಿಯೇ ಕಳೆದುಹೋಯಿತು. ಆ ಸಂದರ್ಭದಲ್ಲಿ ಅವಳನ್ನು ಮಾತನಾಡಿಸಲೂ ಸಮಯ ಸಿಗಲಿಲ್ಲ. ನನಗೂ ಅವಳಿಗೂ ಭೇಟಿಯೇ ಆಗುತ್ತಿರಲಿಲ್ಲ. ಅಷ್ಟು ಒತ್ತಡದಲ್ಲಿ ಕಳೆದುಹೋಗಿದ್ದೆ.  ಬದುಕಿನ ಅರಲು ಗದ್ದೆಯಲ್ಲಿ ಕಾಲು ಹೂತು ಬೀಳುತ್ತಿದ್ದಾಗ ಕಷ್ಟಪಟ್ಟು ಎತ್ತಿ ಎತ್ತಿ ಹೆಜ್ಜೆ ಹಾಕಲು ಯತ್ನಿಸುತ್ತಿದ್ದೆ. ಹೀಗಿದ್ದಾಗ ಒಂದಿನ ಯಾರೋ ಅಂದರು `ನೀನು ಪ್ರೀತಿಸ್ತಾ ಇದ್ದೆಯಲ್ಲ ಹುಡುಗಿ ಅವಳಿಗೆ ಮದುವೆ ಆಯ್ತು..' ಅಂತ..
                ನನಗೆ ದಿಘ್ಭ್ರಮೆ, ಭಯ, ಆತಂಕ ಎಲ್ಲ ಒಟ್ಟೊಟ್ಟಿಗೆ ಆಯಿತು. ಮನಸ್ಸು ಕಸಿವಿಸಿಗೊಂಡಿತು. ಏನೂ ಮಾಡಲಾರೆ.. ಏನೋ ಹೇಳಲಾರೆ.. ಮನಸ್ಸು ಕತ್ತಲು ಕತ್ತಲಂತೆ ಭಾಸವಾಯಿತು. ಅವಳ ಮನೆಗೆ ಹೋಗಿ ಕೂಗಾಡಿ, ರೇಗಾಡಿ ಬರುವ ಅನ್ನಿಸಿತು. ಹೇಗೋ ತಡೆದುಕೊಂಡೆ. ಆಕೆ ನನ್ನ ಮನಸ್ಸಿನಲ್ಲಿ ಆರದ ಗಾಯವನ್ನು ಮಾಡಿ ಹೋಗಿದ್ದಳು. ಇನ್ನೊಂದು ಸ್ವಲ್ಪ ಸಮಯವಿದೆ ಎಂದ ಅವಳು ಕಾರಣವನ್ನು ಹೇಳದೇ ಹೊರಟು ಹೋಗಿದ್ದಳು. ಅವಳ ತಪ್ಪಾ, ಅವಳ ಅಪ್ಪನ ಬಲವಂತಾ..? ತೋಚಲಿಲ್ಲ. ಅವಳು ಹೇಳದೇ ಹೋಗಿದ್ದಳು. ಕಾರಣ ಹೇಳಿ ಹೋಗಿದ್ದರೂ ಇಷ್ಟು ಬೇಜಾರಾಗುತ್ತಿರಲಿಲ್ಲವೇನೋ.. ನಾಲ್ಕೈದು ತಿಂಗಳುಗಳೇ ಬೇಕಾದವು ಅವಳ ಧೋಖಾವನ್ನು ನಾನು ಮೆಟ್ಟಿ ನಿಲ್ಲಲು. ಅವಳಿಗಿಂತ ಹೊರತಾದ ಬದುಕು ಇದೆ ಎಂದು ಅನ್ನಿಸಲಾರಂಭವಾಗಿತ್ತು. ಅವಳೆದುರು ನಾನೂ ಯಾಕೆ ಅವಳಿಗಿಂತ ಚನ್ನಾಗಿ, ಆದರ್ಶವಾಗಿ ಬದುಕಬಾರದು ಎಂದುಕೊಂಡೆ. ನಾನಾಗಲೇ ನಿರ್ಧಾರ ಮಾಡಿದೆ. ಅವಳೆದುರು ಅವಳಿಗಿಂತ ಚನ್ನಾಗಿ ಬದುಕ ಬೇಕೆಂದು. ಅದಕ್ಕೇ ಆ ಕ್ಷಣವೇ ನಾನು ಜೀವನದಲ್ಲಿ ಮದುವೆಯಾಗಬಾರದು ಎಂಬ ನಿರ್ಧಾರಕ್ಕೆ ಬಂದೆ. ಇದುವರೆಗೂ ನನ್ನ ಬದುಕಿನಲ್ಲಿ ಇನ್ನೊಬ್ಬಳನ್ನು ನನ್ನ ಪ್ರೇಮಿಯಾಗಿ ಕಂಡಿಲ್ಲ. ನನ್ನ ಪಾವಿತ್ರ್ಯತೆಯನ್ನು ಹಾಳುಮಾಡಿಕೊಂಡಿಲ್ಲ. ಜನರು ನನ್ನ ಬಗ್ಗೆ ನಾನಾ ರೀತಿ ಹೇಳುತ್ತಾರಾದರೂ ನಾನು ತಲೆಕೆಡಿಸಿಕೊಳ್ಳಲಿಲ್ಲ. ಇಂವನೇನೋ ಹುಚ್ಚು ಆದರ್ಶದ ಹಾದಿ ಹಿಡಿದು ಹೋದ. ಪಿರ್ಕಿಯಿರಬೇಕು ಎಂದುಕೊಂಡರು.  ಆದರೆ ನಾನು ಅದಕ್ಕೆ ಸೊಪ್ಪು ಹಾಕಲಿಲ್ಲ. ಕೊನೆಗೆ ಅನಾಥಾಶ್ರಮದಿಂದ ಹೋಗಿ ಒಂದು ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡು ಬಂದೆ. ಅವಳಿಗೆ ನನ್ನನ್ನು ಬಿಟ್ಟುಹೋದ ಹುಡುಗಿಯ ನೆನಪಿಗಾಗಿ ಅಂಬಿಕಾ ಎಂಬ ಹೆಸರನ್ನಿಟ್ಟೆ. ಅಂದಹಾಗೆ ನಾನು ಪ್ರಿತಿಸಿದ್ದ ಹುಡುಗಿಯ ಹೆಸರು ನಿಂಗೆ ಹೇಳಲಿಲ್ಲ ಅಲ್ವಾ.. ಹೌದು.. ಅವಳ ಹೆಸರು ಅಂಬಿಕಾ ಅಂತಲೇ ಆಗಿತ್ತು. ಅಂಬಿಕಾಳ ನೆನಪಿಗಾಗಿಯೇ ಈ ನನ್ನ ಮಗಳಿಗೂ ಆ ಹೆಸರನ್ನೇ ಇಟ್ಟಿದ್ದೇನೆ. ಅವಳೇ ಈ ಹುಡುಗಿ ಎಂದು ಅಂಬಿಕಾಳನ್ನು ತೋರಿಸಿದ ಅವಳಪ್ಪ.
                     `ನಾನು ಪ್ರೀತಿಸಿದ ಹುಡುಗಿಗೆ ದಕ್ಕಿದ ಪ್ರೀತಿಗಿಂತ ಹೆಚ್ಚು ಇವಳಿಗೆ ಸಿಕ್ಕಿದೆ. ನಾನು ಒಳ್ಳೆಯ ಪ್ರೇಮಿಯಾಗಲಿಲ್ಲವೇನೋ ಎಂಬ ಭಾವ ಕಾಡುತ್ತಿತ್ತು. ಆದರೆ ಇವಳನ್ನು ಸಾಕಿ ಒಳ್ಳೆಯ ಅಪ್ಪನಂತೂ ಆಗಿದ್ದೇನೆ. ಈಗ ಹೇಳು.. ಬ್ರಹ್ಮಚಾರಿಗೆ ಮಕ್ಕಳಿರಬಾರದಾ..? ಬ್ರಹ್ಮಚಾರಿಯ ಮಗಳು ಎಂದರೆ ಯಾಕೆ ತಪ್ಪಾಗಿಯೇ ನೋಡಬೇಕು..? ಎಲ್ಲರಂತೆ ನೀನೂ ಆಲೋಚನೆಯನ್ನೇಕೆ ಮಾಡಿಬಿಟ್ಟೆ..? ನೀನು ಎಲ್ಲರಂತಲ್ಲ.. ಏನೋ ಅಂದುಕೊಂಡಿದ್ದೆ. ಆದರೆ ಏನೂ ಇಲ್ಲವಲ್ಲ ನೀನು' ಎಂದು ಕೇಳಿದರು.
                  ಅವರ ಮಾತು ನನ್ನ ಮನಸ್ಸನ್ನು ಇರಿಯಲಾರಂಭಿಸಿತ್ತು. ನನಗೆ ಏನು ಮಾತಾಡಬೇಕೆಂಬುದು ತೋಚಲಿಲ್ಲ. ಸುಮ್ಮನುಳಿದೆ. ಅಂಬಿಕಾಳ ತಂದೆ ನನ್ನ ಮೌನವನ್ನು ಏನೆಂದುಕೊಂಡರೋ..? ಅರ್ಥವಾಗಲಿಲ್ಲ. ತಪ್ಪಿತಸ್ಥ ಭಾವನೆ ನನ್ನನ್ನು ಕಾಡುತ್ತಿತ್ತು. ಅವರು ನಿಟ್ಟುಸಿರು ಬಿಟ್ಟು ತಮ್ಮ ದೊಡ್ಡ ಮನೆಯ ಚಿಕ್ಕ ಬಾಗಿಲನ್ನು ದಾಟಿ ಒಳಹೋದರು. ಮತ್ತೊಮ್ಮೆ ನಾನೆಂತ ತಪ್ಪು ಮಾಡಿಬಿಟ್ಟೆನಲ್ಲಾ ಛೀ.. ಎಂದುಕೊಂಡೆ.. ಅಂಬಿಕಾಳ ಅಪ್ಪನ ಬಗ್ಗೆ ಹೆಮ್ಮೆಯೂ ಮೂಡಿತು.

**
              `ಅಂಬಿಕಾ.. ಪ್ಲೀಸ್.. ಕ್ಷಮಿಸು ಮಾರಾಯ್ತಿ.. ನಂಗೆ ಗೊತ್ತಾಗಲಿಲ್ಲ.. ಅನುಮಾನಿಸಿದೆ.. ನಿಜಕ್ಕೂ ಹೀಗಾಗಿರಬಹುದು ಎನ್ನುವ ಚಿಕ್ಕ ಸುಳಿವೂ ಸಿಗಲಿಲ್ಲ. ಈ ನಿಟ್ಟಿನಲ್ಲಿ ನಾನು ಆಲೋಚಿಸಲೂ ಇಲ್ಲ.. ಯಾರೋ ಏನೋ ಹೇಳಿದರು ಅಂತ ಅವರ ಮಾತನ್ನು ಕೇಳಿದೆ. ಇನ್ನು ಮುಂದೆ ಯಾವತ್ತೂ ನಿನ್ನನ್ನು ಅನುಮಾನಿಸೋದಿಲ್ಲ. ನಿನ್ನ ಮೇಲಾಣೆ...' ನಾನು ಅಂಬಿಕಾಳ ಬಳಿ ಗೋಗರೆದೆ.
              `ಸಾಕು.. ಸಾಕು... ಈಗ ನೀನು ಮಾಡಿದ್ದೆ ಸಾಕು ಮಾರಾಯಾ.. ನಾನೆಂತಾ ನಿಷ್ಕಲ್ಮಶವಾಗಿ ನಿನ್ನನ್ನು ಪ್ರೀತಿಸಿದ್ದೆ.. ಯಾರೋ ಬ್ರಹ್ಮಚಾರಿಯ ಮಗಳು ಅಂದರಂತೆ.. ನೀನು ಬಂದು ಕೇಳಿದೆಯಂತೆ.. ಎಂತಾವ್ಯಕ್ತಿತ್ವ ನಿಂದು..? ನಿನ್ನಿಂದ ನಾನು ಇಂತಹ ಮಾತುಗಳನ್ನು ಖಂಡಿತ ನಿರೀಕ್ಷೆ ಮಾಡಿರಲಿಲ್ಲ. ನಾನೆಲ್ಲಾದರೂ ನಿನ್ನ ಹಿನ್ನೆಲೆಯ ಬಗ್ಗೆ ಅಥವಾ ನಿನ್ನವರ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ದೆನಾ..? ಆ ಬಗ್ಗೆ ಒಂದೇ ಒಂದಕ್ಷರ ಕೇಳಿರಲಿಲ್ಲ.  ಆದರೂ ನಿನ್ನಿಂದ ಇಂತಹ ಮಾತುಗಳು.. ನೀನು ನನ್ನನ್ನು ನಿಷ್ಕಲ್ಮಷವಾಗಿ ಪ್ರೀತಿಸಿದ್ದೆ ಅನ್ನುವುದನ್ನು ಹೇಗೆ ನಾನು ನಂಬಬೇಕು..? ಬೇಡ... ನನಗೆ ಇಂಥ ಪ್ರಿತಿ ಬೇಡವೇ ಬೇಡ. ನಾನು ನಿನ್ನನ್ನು ಇಷ್ಟು ದಿನ ಪ್ರೀತಿಸಿದ್ದಕ್ಕೆ ನನಗೆ ನಾಚಿಕೆಯಾಗುತ್ತಿದೆ. ಇಂತವನನ್ನು ಪ್ರೀತಿಸಿದೆನಾ ಎಂದೂ ಅನ್ನಿಸಲು ಆರಂಭಿಸಿದೆ. ಕೊನೆಯದಾಗಿ ಹೇಳುತ್ತಿದ್ದೇನೆ. ಇನ್ನು ಮುಂದೆ ನೀನು ನನಗೆ ಮುಖ ತೋರಿಸಬೇಡ. ಐ ಹೇಟ್ ಯೂ.. ಗುಡ್ ಬಾಯ್...' ಎಂದು ಹೇಳಿದ ಅವಳ ಮುಖ ಕೆಂಪಾಗಿ ದೇಹ ಥರಗುಡುತ್ತಿತ್ತು. ನಾನು ಮಾತಿಲ್ಲದೇ ಅವಳನ್ನು ಬೀಳ್ಕೊಟ್ಟಿದ್ದೆ.   ಬ್ರಹ್ಮಚಾರಿಯ ಮಗಳು ಗ್ರೇಟ್ ಅಷ್ಟೇ ಅಲ್ಲ ಮತ್ತಷ್ಟು ಒಗಟಾಗಿದ್ದಳು. ಅವಳೆಡೆಗೆ ನನ್ನ ಮನಸ್ಸು ಹೆಮ್ಮೆಯನ್ನು ಪಡುತ್ತಿತ್ತು.

**
(ಮುಗಿಯಿತು)

Saturday, February 8, 2014

ನನ್ನೆದೆಯ ಗುಡಿಯೊಳಗೆ

ನನ್ನೆದೆಯ ಗುಡಿಯೊಳಗೆ
ನಿನ್ನ ರೂಪವ ನಿಲಿಸಿ
ಆರಾಧನೆಯ ಸಲಿಸಿ
ಬದುಕು ನಡೆಸಿರುವೆ ||

ಮನದ ಸವಿ ಬಟ್ಟಲಲಿ
ನಿನ್ನ ಬಿಂಬದ ಹಾಲ
ಮಧುರಾಮೃತವೆ ಎಂದು
ಹಿಡಿದು ನಲಿದಿರುವೆ ||

ನಿನ್ನೊಡಲ ಕಂಗಳಿಗೆ
ನಾ ಮಿಡಿವ ರೆಪ್ಪೆಗಳು,
ನಿನ್ನೊಡಲ ಕಾಂತಿಯನು
ನಾ ಮೆರೆಸುತಿರುವೆ ||

ನಿನ್ನುಸಿರೆ ನನ್ನುಸಿರು
ಮನದಿ ನಿನ್ನದೆ ಹೆಸರು
ನನ್ನ ನೀ ಮರೆತಿರಲು
ನಾ ಪ್ರಾಣ ಬಿಡುವೆ ||

**
(ಈ ಕವಿತೆಯನ್ನು ಬರೆದಿದ್ದು 06-09-2007ರಲ್ಲಿ ದಂಟಕಲ್ಲಿನಲ್ಲಿ)
(ಈ ಕವಿತೆಯು ಮೆ.31, 2009ರ ಕರ್ಮವೀರ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ)
(ಸಹೋದರಿ ಸುಪರ್ಣ ದಂಟಕಲ್, ಪೂರ್ಣಿಮಾ ಹೆಗಡೆ ಹಾಗೂ ಸಹೋದರ ಗಿರೀಶ್ ಕಲ್ಲಾರೆ ಅವರುಗಳು ಈ ಕವಿತೆಗೆ ರಾಗ ಹಾಕಿ ಹಾಡಲು ಪ್ರಯತ್ನಿಸಿದ್ದಾರೆ. ಅವರಿಗೆ ಧನ್ಯವಾದಗಳು)

Friday, February 7, 2014

ಬೆಂಗಾಲಿ ಸುಂದರಿ-6


               ಮರುದಿನ ಮುಂಜಾನೆ 4 ಗಂಟೆಗೆ ವಿಮಾನದ ಮೂಲಕ ಬಾಂಗ್ಲಾದೇಶದ ರಾಜಧಾನಿ ಢಾಕಾಕ್ಕೆ ಹೋಗುವುದೆಂಬ ನಿರ್ಣಯವಾಗಿತ್ತು. ಬಾಂಗ್ಲಾದೇಶದ ರಾಜಧಾನಿ ಢಾಕಾದ ಹೊರವಲಯದಲ್ಲಿರುವ ಕ್ರೀಡಾ ಗ್ರಾಮದಲ್ಲಿ ಕಬ್ಬಡ್ಡಿ ವಿಶ್ವಕಪ್ ನಡೆಯಲಿತ್ತು. ಕಬ್ಬಡ್ಡಿ ವಿಶ್ವಕಪ್ಪಿಗಾಗಿ `ಎ' ಮತ್ತು `ಬಿ' ಎಂಬ ಎರಡು ಗುಂಪನ್ನು ಮಾಡಲಾಗಿತ್ತು. ವಿಶ್ವಚಾಂಪಿಯನ್ ಪಟ್ಟ ಹಾಗೂ ನಂಬರ್ 1 ಎಂಬ ರಾಂಕಿನಲ್ಲಿರುವ ಭಾರತ `ಎ' ಗುಂಪಿನ ಮೊದಲ ಸ್ಥಾನದಲ್ಲಿತ್ತು. ಮೂರನೇ ರಾಂಕಿನ ಪಾಕಿಸ್ತಾನ, ಐದನೇ ರಾಂಕಿನ ಉಕ್ರೇನ್, ಏಳನೆ ರಾಂಕಿನ ಕೆನಡಾ, ಒಂಭತ್ತನೇ ರಾಂಕಿನ ಚೀನಾಗಳು ಇದೇ ಗ್ರೂಪಿನಲ್ಲಿದ್ದವು. ಜೊತೆಯಲ್ಲಿ ಥೈಲ್ಯಾಂಡ್, ಸೌಥ್ ಕೋರಿಯಾ ಹಾಗೂ ನ್ಯೂಝಿಲ್ಯಾಂಡ್ ತಂಡಗಳೂ `ಎ'ಗ್ರೂಪಿನಲ್ಲಿದ್ದವು.
                 `ಬಿ' ಗುಂಪಿನಲ್ಲಿ ಬಾಂಗ್ಲಾದೇಶದ ಜೊತೆಗೆ ಇರಾನ್, ಚೈನೀಸ್ ತೈಪೇ, ಮಲೇಶಿಯಾ, ನೇಪಾಳ ತಂಡಗಳು ಪ್ರಮುಖವಾಗಿದ್ದವು. ಅವುಗಳ ಜೊತೆಯಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಹಾಗೂ ಶ್ರೀಲಂಕಾಗಳಿದ್ದವು. ಭಾರತದ ಗುಂಪಿನಲ್ಲಿ ಪಾಕಿಸ್ತಾನ ಹಾಗೂ ಉಕ್ರೇನ್ ತಂಡಗಳು ಭಲಿಷ್ಟವಾಗಿದ್ದವು. ಈ ತಂಡಗಳ ಎದುರು ಜಿದ್ದಿನ ಆಟವನ್ನು ನಿರೀಕ್ಷೆ ಮಾಡಲಾಗುತ್ತಿತ್ತು. ತಂಡದ ತರಬೇತುದಾರರೂ ಈ ಕುರಿತು ಹೆಚ್ಚಿನ ಸಲಹೆಗಳನ್ನು ನೀಡಿದ್ದರು. ಆಟ ರೋಚಕವಾಗಲಿದೆ ಎನ್ನುವುದರ ಸುಳಿವನ್ನು ಈ ಗುಂಪುಗಳೇ ನೀಡುತ್ತಿದ್ದವು.
                  ವಿನಯಚಂದ್ರ ಮರುದಿನ ಮುಂಜಾನೆ ಹೊರಡಬೇಕಾಗುತ್ತದೆ ಎಂದು ತನ್ನ ಲಗೇಜುಗಳನ್ನೆಲ್ಲ ತುಂಬಿಟ್ಟುಕೊಂಡಿದ್ದ. ರೂಮಿನ ಜೊತೆಗಾರ ಸೂರ್ಯನೂ ಕೂಡ ತನ್ನ ಬಟ್ಟೆ ಬರೆಗಳನ್ನೆಲ್ಲ ತುಂಬಿಕೊಂಡಿದ್ದ. ಸೂರ್ಯನ್ ಬಾಂಗ್ಲಾದೇಶದ ಕುರಿತು ಮಾಹಿತಿ ನೀಡುವ ಸಿಡಿಯಲ್ಲಿ ಬೆಂಗಾಲಿ ಹುಡುಗಿಯರನ್ನು ನೋಡಿದ ನಂತರ ಮರುಳನಂತೆ ಆಡುತ್ತಿದ್ದ. ಮಾತೆತ್ತಿದರೆ  `ಮಗಾ.. ಯಾರಾದರೂ ಬೆಂಗಾಲಿ ಹುಡುಗಿಯನ್ನು ಬಲೆಗೆ ಬೀಳಿಸಿಕೊಂಡು ಹಾರಿಸಿಕೊಂಡು ಬರಬೇಕು ಕಣೋ.. ಬಹಳ ಮನಸ್ಸಿಗೆ ಇಷ್ಟವಾಗಿದ್ದಾರೆ. ಹೃದಯ ಕದ್ದುಬಿಟ್ಟಿದ್ದಾರೆ ಮಾರಾಯಾ' ಎಂದು ಬಡಬಡಿಸುತ್ತಿದ್ದ.
                 `ಅಯ್ಯೋ ಮಳ್ಳೆ.. ಹಾಗೆಲ್ಲಾದರೂ ಮಾಡಿಬಿಟ್ಟೀಯಾ.. ಹುಷಾರು ಮಾರಾಯಾ.. ನಮಗೆ ವಾಪಾಸು ಬರಲಿಕ್ಕೆ ಸಾಧ್ಯವಾಗದಂತೆ ಮಾಡಿಬಿಟ್ಟಾರು.. ಅಂತಹ ಭಾನಗಡಿ ಮಾಡಬೇಡವೋ.. ' ಎಂದು ವಿನಯಚಂದ್ರ ಮಾರುತ್ತರ ನೀಡಿದ್ದ.
                  `ಹೇ ಹೇ.. ಬಾಂಗ್ಲಾದೇಶಿಯರಿಗೆ ಗೊತ್ತಾಗದಂತೆ ಎತ್ತಾಕ್ಕೊಂಡು ಬರ್ತೇನೆ ನೋಡ್ತಾಯಿರು..'
                  `ಹೋಗೋ.. ಹೋಗೋ.. ಬೊಗಳೆ ಕೊಚ್ಚಬೇಡ.. ಬರೀ ಇದೆ ಆಯ್ತು.. ಬಾಂಗ್ಲಾದಲ್ಲಿ ಹುಡುಗಿಯರನ್ನು ಹೊರತು ಪಡಿಸಿದಂತೆ ಬೇಕಾದಷ್ಟು ವಿಷಯಗಳಿವೆ ಮಾರಾಯಾ.. ಅದರ ಬಗ್ಗೆ ಮಾತನಾಡು...'
                  `ಊಹೂ.. ನನಗೆ ಹುಡುಗಿಯರ ವಿಷಯ ಬಿಟ್ಟು ಬೇರೇನೂ ತಲೆಗೆ ಹೋಗುವುದೇ ಇಲ್ಲ.. ಜಗತ್ತಿನ ಪರಮ ಆಕರ್ಷಣೀಯ ಅಂಶ, ವ್ಯಕ್ತಿಗಳು ಅಂದರೆ ನನಗೆ ಹುಡುಗಿಯರು...ಮತ್ತಿನ್ಯಾವ ವಿಷಯವೂ ನನಗೆ ಬೇಡ.. ಊಹೂ' ಎಂದು ದೃಢವಾಗಿ ಹೇಳಿದ್ದ.
                   ಇಂವ ಉದ್ಧಾರ ಆಗುವ ಆಸಾಮಿಯಲ್ಲ ಎಂದುಕೊಂಡ ವಿನಯಚಂದ್ರ ತಲೆಕೊಡವಿ ಎದ್ದು ಹೊರಡಬೇಕೆನ್ನುವಷ್ಟರಲ್ಲಿ ಸೂರ್ಯನ್ `ಹೇಯ್ ದೋಸ್ತ್.. ಬೆಂಗಾಲಿ ಹುಡುಗಿಯರಿಗೆ ಜಗತ್ತಿನ ಸುಂದರಿಯರಲ್ಲಿ ಪ್ರಮುಖ ಸ್ಥಾನವಿದೆ ಗೊತ್ತಾ.. ನಮ್ ಬಾಲಿವುಡ್ಡಲ್ಲೇ ನೋಡು ಅದೆಷ್ಟೆಲ್ಲಾ ಜನ ಬೆಂಗಾಲಿ ಸುಂದರಿಯರಿದ್ದಾರೆ.. ಬಿಪಾಶಾ ಬಸು, ಕೊಂಕಣಾ ಸೇನ್ ಶರ್ಮಾ, ಸುಚಿತ್ರ ಸೇನ್, ಮೂನ್ ಮೂನ್ ಸೇನ್, ಇನ್ನೂ ಹಲವರು.. ನಿಮ್ ಕನ್ನಡದಲ್ಲೂ ಇದ್ದಾಳಲ್ಲೋ ಏಂದ್ರಿತಾ ರೇ...' ಅಂದ.
                  `ಅದು ಏಂದ್ರಿತಾ ರೇ ಅಲ್ಲ.. ಐಂದ್ರಿತಾ ರೈ..' ಎಂದು ಸರಿಪಡಿಸಲು ಮುಂದಾದ ವಿನಯಚಂದ್ರ. `ಅವಳ ಬಗ್ಗೆಯೂ ಗೊತ್ತಾ ನಿಂಗೆ..?' ವಿಸ್ಮಯದಿಂದ ಕೇಳಿದ್ದ.
                  `ಅವಳೂ ನನಗೆ ಇಷ್ಟವಾದವಳೇ ನೋಡು.. ಇರ್ಲಿ.. ನೋಡು ನಾ ಹೇಳಿ ಮುಗಿಸಿಲ್ಲ ಆಗಲೇ ಬೆಂಗಾಲಿ ಹುಡುಗಿಯರ ಬಗ್ಗೆ ನೀನೂ ಮಾತನಾಡಲು ಆರಂಭ ಮಾಡಿಬಿಟ್ಟೆ.. ಹೆ ಹೆ.. ಬಾಂಗ್ಲಾದೇಶದಲ್ಲಿ ನೀನೂ ಏನೋ ಒಂದು ಆಗ್ತೀಯಾ ಬಿಡು..' ಎಂದು ಸೂರ್ಯನ್ ಛೇಡಿಸಿದಾಗ ವಿನಯಚಂದ್ರನಿಗೆ ಆತನ ಬುರಡಿಗೆ ಒಂದು ಬಿಗಿಯುವ ಅನ್ನಿಸಿತ್ತಾದರೂ ಸರಿಯಲ್ಲ ಎಂದುಕೊಂಡು ಸುಮ್ಮನಾದ.

**

                    ನಸುಕಿನಲ್ಲೆದ್ದು ಸ್ನಾನ ಮುಗಿಸುವ ವೇಳೆಗೆ ಎಲ್ಲರೂ ತಯಾರಾದಿರಾ ಎಂದು ಟೀಂ ಮ್ಯಾನೇಜರ್ ಕೋಣೆಯ ಕದವನ್ನು ದೂಡಿಕೊಂಡೇ ಬಂದರು. ಸೂರ್ಯನ್ ಇನ್ನೂ ತಯಾರಾಗುತ್ತಿದ್ದ.. `ಹೇಯ್ ಲೇಝಿ ಫೆಲ್ಲೋ.. ಬೇಗ.. ಕ್ವಿಕ್.. ಲೇಟಾಗ್ತಾ ಇದೆ..' ಎಂದು ಮ್ಯಾನೇಜರ್ ಅವಸರಿಸಿದರು.
                   ತಯಾರಾಗಿ ಬೆಳಗಿನ ಜಾವದಲ್ಲಿ ಟ್ರಾಫಿಕ್ಕೇ ಇಲ್ಲದ ದೆಹಲಿಯ ರಸ್ತೆಗಳಲ್ಲಿ ಮಂಜಿನ ಮುಸುಕನ್ನು ಕಣ್ಣಲ್ಲಿ ಸೆಳೆಯುತ್ತಾ ಕಬ್ಬಡ್ಡಿ ತಂಡ ಏರ್ಪೋರ್ಟ್ ತಲುಪಿತು. ವಿಮಾನವನ್ನೇರುವ ಮುನ್ನ ನಡೆಯುವ ಎಲ್ಲಾ ಚೆಕ್ಕಿಂಗ್ ಪ್ರಕ್ರಿಯೆಗಳೆಲ್ಲ ಮುಗಿಯುವ ವೇಳೆಗೆ ಕೊಂಚ ವಿಳಂಬವಾದರೂ ಸಾವರಿಸಿಕೊಂಡು ಮುನ್ನಡೆದರು.
                  ವಿಮಾನದ ಒಳಕ್ಕೆ ಹೋದೊಡನೆ ಸೂರ್ಯನ್ ಅಲ್ಲಿದ್ದ  ಗಗನಸಖಿಯರ ಬಳಿ ಮಾತಿಗೆ ನಿಂತಿದ್ದ. ಮನಸು ಸೆಳೆಯಲು ಯತ್ನಿಸುತ್ತಿದ್ದ. ವಿನಯಚಂದ್ರನಿಗೆ ವಿಮಾನದಲ್ಲಿ ಕುಳಿತ ತಕ್ಷಣವೇ ನಿದ್ದೆ. ಕಣ್ಣುಬಿಡುವ ವೇಳೆಗೆ ಬಾಂಗ್ಲಾದೇಶದ ನೆತ್ತಿಯ ಮೇಲೆ ವಿಮಾನ ಹಾರಾಡುತ್ತಾ ಢಾಕಾದ ಹಜರತ್ ಶಾ ಜಲಾಲ್ ಅಂತರಾಷ್ಟ್ರೀಯ ವಿಮಾನದಲ್ಲಿ ಕಾಲೂರಲು ಹವಣಿಸುತ್ತಿತ್ತು. ಬಾಂಗ್ಲಾದೇಶದ ನೆಲಕ್ಕೆ ಕಾಲಿಡುವ ವೇಳೆಗೆ ಅಲ್ಲಿ ಬೆಳಗಿನ ಏಳು ಗಂಟೆ. ಅಂದರೆ ದೆಹಲಿಯಿಂದ ಮೂರುವರೆ ಗಂಟೆಗಳ ಪಯಣ. ಭಾರತಕ್ಕಿಂತ ಅರ್ಧಗಂಟೆ ಮುಂದಿದೆ ಬಾಂಗ್ಲಾದೇಶ. ಬೆಂಗಾಲಿಗಳಿಗೆ ಚುಮು ಚುಮು ಮುಂಜಾನೆ. ಬಾನಂಚಿನಲ್ಲಿ ನೇಸರನೂ ಕಣ್ಣುಬಿಡಲು ತಯಾರಾಗುತ್ತಿದ್ದ. ಆಗತಾನೆ ಎದ್ದು ಕಣ್ಣುಜ್ಜಿದ ಪರಿಣಾಮ ಕಣ್ಣು ಕೆಂಗಾಗಿದೆಯೇನೋ ಎಂದುಕೊಳ್ಳುವಂತೆ ಕಾಣುವ ನೇಸರ ಮನಸೆಳೆಯುತ್ತಿದ್ದ.
                ಎದ್ದವನಿಗೆ ಕೈಗೆ ಧರಿಸಿದ್ದ ವಾಚನ್ನು ನೋಡಿ ಒಮ್ಮೆ ದಿಘಿಲಾಯಿತು. ಏನೋ ಯಡವಟ್ಟಾಗಿದೆ.. ಭಾರತದಲ್ಲಿ, ಅದೂ ತನ್ನೂರಿನಲ್ಲಿದ್ದರೆ ಇನ್ನೂ ಐದೂವರೆಯೂ, ಆರು ಗಂಟೆಯೋ ಆಗಿರುವಂತಹ ಸಮಯ. ಆದರೆ ಇಲ್ಲಿ ಬೆಳ್ಳನೆ ಬೆಳಗಾಗಿದೆ. ಕೊನೆಗೆ ತಾನು ಬಾಂಗ್ಲಾದೇಶದಲ್ಲಿ ಇದ್ದೇನೆ ಎನ್ನುವುದು ಅರಿವಾಗಿ ಕೈಗಡಿಯಾರದ ಸಮಯವನ್ನು ಒಂದು ತಾಸು ಮುಂದೋಡಿಸಿದ. ಆಗ ಸಮಯಕ್ಕೆ ತಾಳೆಯಾದಂತೆನ್ನಿಸಿತು. ನಿರಾಳನಾದ.
                 ಭಾರತ ತಂಡದ ಆಟಗಾರರನ್ನು ಎದುರುಗೊಳ್ಳಲು ಸಜ್ಜಾಗಿದ್ದ ಬಾಂಗ್ಲಾದೇಶದ ಅಧಿಕಾರಿಗಳು ಗೌರವ ವಂದನೆ ಸಲ್ಲಿಸಿದರು. ಅವರಿಗೊಂದು ಬಸ್ಸನ್ನೂ ತಯಾರು ಮಾಡಲಾಗಿತ್ತು, ಸಾಮಾನ್ಯವಾಗಿ ಕ್ರಿಕೇಟಿಗರಿಗೆ ಅದ್ಧೂರಿ, ಐಶಾರಾಮಿ ಬಸ್ಸುಗಳನ್ನು ನೀಡಲಾಗುತ್ತದೆ. ಆದರೆ ಕಬ್ಬಡ್ಡಿ ಆಟಗಾರರಿಗೆ ಸಂಚಾರಕ್ಕೆ ನೀಡಲಾದ ಬಸ್ಸು ಅದ್ಧೂರಿಯಾಗಿರದಿದ್ದರೂ ಚನ್ನಾಗಿತ್ತು. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಅಂತರ್ಯುದ್ಧ, ದಂಗೆ, ಗಲಾಟೆಯ ನೆಪದಿಂದ ಎಲ್ಲಿ ಆಟಗಾರರು ಭದ್ರತೆಯ ನೆಪವೊಡ್ಡಿ ಆಗಮಿಸಲು ಹಿಂದೇಟು ಹಾಕುತ್ತಾರೋ ಎನ್ನುವ ಕಾರಣಕ್ಕಾಗಿ ಬಾಂಗ್ಲಾ ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ಒದಗಿಸುವ ಪ್ರಯತ್ನವನ್ನು ಮಾಡಿತ್ತು. ಬೆಂಗಾಲಿ ಪೊಲೀಸರು ಸಾಕಷ್ಟು ಸಂಖ್ಯೆಯಲ್ಲಿದ್ದರು. ಪರವಾಗಿಲ್ಲ, ಕಬ್ಬಡ್ಡಿ ಆಟಗಾರರಿಗೂ ಸುಮಾರು ಬೆಲೆಯಿದೆ ಎಂದುಕೊಂಡ ವಿನಯಚಂದ್ರ. ತಕ್ಕಮಟ್ಟಿಗೆ ಸಿದ್ಧತೆಗಳು ನಡೆದಿದ್ದವು.
                    ಬಾಂಗ್ಲಾದೇಶದ ಹೊರವಲಯಕ್ಕೆ ಅವರನ್ನು ಹೊತ್ತ ಬಸ್ಸು ಕರೆದೊಯ್ಯಿತು. ಢಾಕಾದ ಜಿಯಾವುರ್ ಹೊಟೆಲ್ ಎಂಬ ಐಶಾರಾಮಿ ಹೊಟೆಲಿನಲ್ಲಿ ವಾಸ್ತವ್ಯಕ್ಕೆ ಏರ್ಪಾಡು ಮಾಡಲಾಗಿತ್ತು. ಈ ಹೊಟೆಲಿನಿಂದ ಕಬ್ಬಡ್ಡಿ ಪಂದ್ಯಾವಳಿಗಳು ನಡೆಯಲಿದ್ದ ನ್ಯಾಷನಲ್ ಸ್ಟೇಡಿಯಂ ಅಜಮಾಸು ಆರೆಂಟು ಕಿ.ಮಿ ದೂರದಲ್ಲಿತ್ತು. ಭಾರತದ ಕಬ್ಬಡ್ಡಿ ತಂಡ ಉಳಿದುಕೊಂಡಿದ್ದ  ಹೊಟೆಲಿನಲ್ಲಿಯೇ ಎರಡು-ಮೂರು ವಿದೇಶಿ ತಂಡಗಳಿಗೂ ವಾಸ್ತವ್ಯದ ಏರ್ಪಾಡು ಮಾಡಲಾಗಿತ್ತು. ಭಾರತದ ತಂಡ ಬಾಂಗ್ಲಾದೇಶವನ್ನು ತಲುಪಿದ ಐದು ದಿನಗಳ ನಂತರ ಕಬ್ಬಡ್ಡಿ ವಿಶ್ವಕಪ್ ಪಂದ್ಯಾವಳಿಗಳು ಜರುಗಲಿದ್ದವು. ಮೊದಲ ಪಂದ್ಯದಲ್ಲಿ ಸ್ಥಳೀಯ ಬಾಂಗ್ಲಾದೇಶ ತಂಡವು ದಕ್ಷಿಣ ಆಪ್ರಿಕಾ ತಂಡದೊಂದಿಗೆ ಆಡಲಿತ್ತು. ಅದೇ ದಿನ ಎರಡನೇ ಪಂದ್ಯದಲ್ಲಿ ಭಾರತ ತಂಡವು ನ್ಯೂಝಿಲ್ಯಾಂಡ್ ತಂಡವನ್ನು ಎದುರಿಸಲಿತ್ತು.
                    ಪ್ರತಿದಿನ ಎರಡು-ಮೂರು ಪಂದ್ಯಗಳನ್ನು ನಡೆಸಲಾಗುತ್ತಿತ್ತು. ಒಂದೊಂದು ಗುಂಪಿನಲ್ಲಿದ್ದ ಎಂಟೆಂಟು ತಂಡಗಳಲ್ಲಿ ಅತ್ಯಂತ ಹೆಚ್ಚು ಪಂದ್ಯಗಳನ್ನು ಗೆದ್ದ ಅಥವಾ ಅತ್ಯಂತ ಹೆಚ್ಚು ಪಾಯಿಂಟ್ ಗಳಿಸಿದ ನಾಲ್ಕು ತಂಡಗಳು ಕ್ವಾರ್ಟರ್ ಫೈನಲ್ ತಲುಪುತ್ತಿದ್ದವು. ಕ್ವಾರ್ಟರ್ ಫೈನಲ್ಲಿನಲ್ಲಿ 8 ತಂಟಗಳ ನಡುವೆ ಹಣಾಹಣಿ ನಡೆದು ಅದರಲ್ಲಿ 4 ತಂಡಗಳು ಸೆಮಿಫೈನಲ್ಲಿಗೆ ತೇರ್ಗಡೆಯಾಗುತ್ತಿದ್ದವು. ನಂತರ ಫೈನಲ್ ನಡೆಯಲಿತ್ತು. ದಿನಗಳೆದಂತೆಲ್ಲ ಕಬ್ಬಡ್ಡಿ ಆಟದ ರೋಚಕತೆ ವಿನಯಚಂದ್ರನ ಅರಿವಿಗೆ ಬರಲು ಆರಂಭವಾಗಿತ್ತು.
                   ವಿನಯಚಂದ್ರ ಹಾಗೂ ತಂಡ ಹೊಟೆಲಿಗೆ ಬಂದಿಳಿದ ನಂತರ ಇಲ್ಲಿ ಜಾಧವರ ಬಳಿ ಹೇಳಿ ಸೂರ್ಯನ್ ನನ್ನು ತನ್ನ ರೂಮ್ ಮೇಟ್ ಮಾಡಿಕೊಂಡ. ಬಂದವನೆ ಹೊಟೆಲಿನಲ್ಲಿ ತಿಂಡಿ ತಿಂದು ಫ್ರಶ್ ಆದ. ಅರೆರಾತ್ರಿಯಲ್ಲಿ ಎದ್ದು ಹೊರಟಿದ್ದರಿಂದ ನಿದ್ದೆ ಬಾಕಿಯಿದ್ದ ಕಾರಣ ಚಿಕ್ಕದೊಂದು ನಿದ್ದೆ ಮಾಡಬೇಕೆಂದು ಹಾಸಿಗೆಯಲ್ಲಿ ಅಡ್ಡಾದವನಿಗೆ ಸಮಯ ಜಾರಿದ್ದೇ ತಿಳಿಯಲಿಲ್ಲ. ಎಚ್ಚರಾಗುವ ವೇಳೆಗೆ ಸೂರ್ಯನ್ ಇರಲಿಲ್ಲ. ಎಲ್ಲಿ ಹೋದನೋ ಪುಣ್ಯಾತ್ಮ ಎಂದು ಹಲುಬಿಕೊಂಡು ಕೋಣೆಯನ್ನು ಹುಡುಕಿದ. ಸೂರ್ಯನ್ ಸುಳಿವಿರಲಿಲ್ಲ.
                 ಸೀದಾ ಹೊರ ಬಂದು ಹೊಟೆಲಿನ ಹೊರಭಾಗದಲ್ಲಿ ಅಡ್ಡಾಡಿದಂತೆ ಮಾಡಿದನಾದರೂ ಯಾಕೋ ಮನಸ್ಸು ಮಂಕಾಗಿತ್ತು. ಮತ್ತೆ ರೂಮೊಳಗೆ ಹೋದವನೇ ಅಲ್ಲಿದ್ದ ಟಿ.ವಿ.ಯನ್ನು ಹಚ್ಚಿದ. ಟಿ.ವಿಯಲ್ಲಿ ಯಾವುದೋ ಚಾನಲ್ಲಿನಲ್ಲಿ ಹೆಸರಾಂತ ಅಥ್ಲಿಟ್ ಸೈಕಲಿಂಗ್ ಪಟು ಲ್ಯಾನ್ಸ್ ಆರ್ಮ್ ಸ್ಟ್ರಾಂಗ್ ಜೀವನದ ಕುರಿತು ಚಿತ್ರಣ ಬಿತ್ತರವಾಗುತ್ತಿತ್ತು. ನೋಡುತ್ತ ನೋಡುತ್ತ ತನ್ನ ನೆನಪಿನಾಳಕ್ಕೆ ಜಾರಿದ.
                 ಎಲ್ಲರೂ ನಡೆದ ದಾರಿಯಲ್ಲಿ ತಾನು ನಡೆಯಬಾರದು. ಬೇರೆಯದೇ ಆದ ಒಂದು ದಾರಿಯಲ್ಲಿ ಸಾಗಿ ಕೆಲವರನ್ನಾದರೂ ತನ್ನ ದಾರಿಯಲ್ಲಿ ಕರೆದುಕೊಂಡು ಬರಬೇಕು ಎನ್ನುವುದು ವಿನಯಚಂದ್ರನ ಭಾವನೆ. ಓರಗೆಯ ಹುಡುಗರು ಕ್ರಿಕೆಟ್ ಬ್ಯಾಟನ್ನು ಎತ್ತಿಕೊಂಡು ಮೈದಾನಗಳಲ್ಲಿ ಓಡತೊಡಗಿದ್ದರೆ ಈತ ಮಾತ್ರ ಕಬ್ಬಡ್ಡಿ ಕಬ್ಬಡ್ಡಿ ಎನ್ನತೊಡಗಿದ್ದುದು ಹಲವರಿಗೆ ವಿಚಿತ್ರವಾಗಿತ್ತು. ಕಬ್ಬಡ್ಡಿ ಆಡುವ ವಿನಯಚಂದ್ರ ಸಮಾ ಇಲ್ಲ ಎಂದು ಮಾತನಾಡುತ್ತಿದ್ದರೂ ಆ ಬಗ್ಗೆ ವಿನಯಚಂದ್ರ ತಲೆಕೆಡಿಸಿಕೊಂಡಿರಲಿಲ್ಲ.
                  ಮನೆಯಲ್ಲಿ ತಾನು ಬೆಳೆದ ಪರಿಸರ ಸಸ್ಯಾಹಾರದ್ದಾದದ್ದರಿಂದ ಚಿದಂಬರ ಅವರು ಮೊಟ್ಟಮೊದಲು ಎಗ್ ರೈಸ್ ತಿನ್ನಲು ಹೇಳಿದಾಗ ಮುಖ ಕಿವಿಚಿದ್ದ ವಿನಯಚಂದ್ರ. ಆದರೆ ಆತನ ಆಟಕ್ಕೆ ಮೊಟ್ಟೆಯನ್ನ ಪೂರಕವಾಗಿತ್ತಾದ್ದರಿಂದ ಅದನ್ನು ರೂಢಿಸಿಕೊಂಡಿದ್ದ. ಈಗೀಗ ಮೊಟ್ಟೆಯನ್ನ ಆತನ ಪರಮ ಇಷ್ಟದ ತಿಂಡಿಯಾಗಿತ್ತು. ಕಬ್ಬಡ್ಡಿಯ ಕಾರಣದಿಂದಲೇ ತಾನು ಭಾರತದ ಹಲವಾರು ರಾಜ್ಯಗಳಿಗೆ ತಿರುಗಿದ್ದೂ ವಿನಯಚಂದ್ರನ ನೆನಪಿಗೆ ಬಂದಿತು. ಪಶ್ಚಿಮ ಬಂಗಾಳಕ್ಕೆ ಬಂದಿದ್ದ ಆತ ಅಲ್ಲಿನ ಗಡಿಯಲ್ಲೊಮ್ಮೆ ನಿಂತು ಬಾಂಗ್ಲಾದೇಶವನ್ನು ನೋಡಿದ್ದ. ಭೂಮಿ ಒಂದೇ ಥರಾ ಇದೆ.. ನೋಡಲಿಕ್ಕೆ ಎಂತದ್ದೂ ವ್ಯತ್ಯಾಸ ಇಲ್ಲವಲ್ಲಾ ಎಂದುಕೊಂಡಿದ್ದ. ಅದ್ಯಾರೋ ಒಬ್ಬಾತ ಎದುರಿಗಿದ್ದ ಗಡಿಯನ್ನು ತೋರಿಸಿ ಅದೋ ನೋಡಿ ಆ ಬೆಟ್ಟ ಕಾಣ್ತದಲ್ಲಾ ಅಲ್ಲಿಂದ ಬಾಂಗ್ಲಾದೇಶ ಆರಂಭವಾಗುತ್ತದೆ..ಎಂದು ಹೇಳಿದ್ದ. ಮುಂದೊಂದಿನ ಬಾಂಗ್ಲಾಕ್ಕೆ ಹೋಗಬೇಕು ಎಂದು ಆಗಲೇ ಅಂದುಕೊಂಡಿದ್ದ. ಅದು ರೂಪದಲ್ಲಾಗುತ್ತದೆ ಎಂಬ ಭಾವನೆ ಖಂಡಿತ ಇರಲಿಲ್ಲ ಬಿಡಿ.
                  `ಯಾವುದೇ ದೇಶಕ್ಕೆ ಬೇಕಾದರೂ ಹೋಗು ನೀನು. ಅಲ್ಲಿನ ಮಣ್ಣುಗಳೆಲ್ಲ ಒಂದೆ... ನೀ ಹೋದ ದೇಶದಲ್ಲಿ ನಮ್ಮ ದೇಶದ ಪ್ರಕೃತಿ, ವಾತಾವರಣವನ್ನು ನೀನು ಕಲ್ಪಿಸಿಕೊಳ್ಳುತ್ತ ಹೋಗ್ತೀಯಾ ವಿನು.. ನೀನು ಹೋದಕಡೆಯಲ್ಲಿಯೂ ನಿಮ್ಮೂರಿನಂತಹ ಊರಿದೆಯಾ ಎಂದು ಹುಡುಕಲು ಆರಂಭ ಮಾಡುತ್ತೀಯಾ' ಎಂದು ತಮ್ಮದೇ ಊರಿನಿಂದ ವಿದೇಶಕ್ಕೆ ಹೋಗಿ ನೆಲೆಸಿರುವ ಒಬ್ಬ ವ್ಯಕ್ತಿ ಹೇಳಿದ್ದ. ಅದೆಲ್ಲವೂ ವಿನಯಚಂದ್ರನಿಗೆ ನೆನಪಾಯಿತು.
                  ಬಾಂಗ್ಲಾದೇಶದ ಸರಹದ್ದಿಗೆ ಬಂದ ನಂತರ ಕೋಚ್ ಜಾಧವ್ ಅವರು ಎಲ್ಲಾ ಆಟಗಾರರಿಗೆ ಬಾಗ್ಲಾದೇಶದ ಸಿಮ್ ಕಾರ್ಡನ್ನು ನೀಡಿದ್ದರು. ತಕ್ಷಣ ತನ್ನ ಮನೆಗೆ ಪೋನಾಯಿಸಿ ಮಾತನಾಡಿದ. ಬಾಂಗ್ಲಾದೇಶಕ್ಕೆ ತಾನು ಸುರಕ್ಷಿತವಾಗಿ ಬಂದಿರುವುದನ್ನು ಹೇಳಿದಾಗ ಮನೆಯ ಸದಸ್ಯರೆಲ್ಲ ಸಂತಸಪಟ್ಟರು. ಚಿದಂಬರ ಅವರಿಗೂ ದೂರವಾಣಿ ಕರೆ ಮಾಡಿದ. ಅವರು ಉಭಯಕುಶಲೋಪರಿಯ ಜೊತೆಗೆ ಸಲಹೆಗಳನ್ನೂ ನೀಡಿದರು. ಸಂಜಯನಿಗೆ ಅಪರೂಪಕ್ಕೆಂಬಂತೆ ಕರೆ ಮಾಡಿದ.
ಸಂಜಯ `ಬಾಂಗ್ಲಾದಲ್ಲಿ ಕನ್ನಡಿಗನ ವಿಜಯ ಯಾತ್ರೆ..' ಎನ್ನುವ ತಲೆಬರಹದ ಸುದ್ದಿ ತಯಾರಿಸಲು ನಾನು ತುದಿಗಾಲಲ್ಲಿದ್ದೇನೆ. ಯಶಸ್ಸು ನಿನ್ನಿಂದ ಬರಲಿ ಎಂದು ಹಾರೈಸಿದ.
                  ಮಾತನಾಡುತ್ತ ಬಾಂಗ್ಲಾದೇಶದ ಸುಂದರಿಯರ ಬಗ್ಗೆ, ಅಲ್ಲಿನ ಹಿಂದೂ ಹುಡುಗಿಯರ ಬಗ್ಗೆ, ಅತ್ಯಲ್ಪ ಸಂಖ್ಯೆಯಲ್ಲಿದ್ರೂ ಚನ್ನಾಗಿರುವ ಬೆಂಗಾಲಿ ಬ್ರಾಹ್ಮಣರ ಬಗ್ಗೆ ಸಂಜಯ ವಿವರಗಳನ್ನು ನೀಡಿದ. ವಿನಯಚಂದ್ರ ಅದಕ್ಕೆ ಪ್ರತಿಯಾಗಿ ಉತ್ತರಿಸುತ್ತ ಅಂತವರು ಸಿಕ್ಕತೆ ಖಂಡಿತ ಮಾತನಾಡಿಸುತ್ತೇನೆ ಎಂದೂ ಹೇಳಿದ.
                  `ಬರಿ ಮಾತನಾಡಿಸಬೇಡ ಮಾರಾಯಾ.. ಅವರ ಬಗ್ಗೆ ಹೆಚ್ಚು ತಿಳಿದುಕೊ.. ನೀನು ಭಾರತಕ್ಕೆ ಮರಳಿದ ನಂತರ ನಮ್ಮ ಪತ್ರಿಕೆಗೆ ಬಾಂಗ್ಲಾದೇಶದ ಹಿಂದೂಗಳ ಪರಿಸ್ಥಿತಿಯ ಬಗ್ಗೆ ಒಂದು ಸುಂದರ ಲೇಖನವನ್ನೂ ಬರೆದುಕೊಡು..' ಎಂದು ತಾಕೀತು ಮಾಡಿದ.
                   `ಖಂಡಿತ..' ಎಂದವನಿಗೆ ತಾನು ಬರಹಗಳನ್ನು ಬರೆಯದೇ ಎಷ್ಟು ಕಾಲವಾಯ್ತಲ್ಲ ಎಂದುಕೊಂಡ...ಟಿ.ವಿಯಲ್ಲಿ ಆರ್ಮಸ್ಟ್ರಾಂಗ್ ಬಗ್ಗೆ ಬರುತ್ತಿದ್ದ ವೀಡಿಯೋ ಮುಗಿದಿತ್ತು. 20ಕ್ಕೂ ಹೆಚ್ಚು ಬಾರಿ ಟೂರ್ ಡಿ ಪ್ರಾನ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವನು ಲ್ಯಾನ್ಸ್ ಆರ್ಮಸ್ಟ್ರಾಂಗ್. ವೃಷಣದ ಕ್ಯಾನ್ಸರ್ ಗೆ ತುತ್ತಾಗಿದ್ದರೂ ಮತ್ತೆ ಎದ್ದು ಬಂದು ವಿಜಯ ದುಂಧುಬಿ ಭಾರಿಸಿದವನು ಆತ. ಕೊನೆಯಲ್ಲಿ ಮಾತ್ರ ಉದ್ದೀಪನ ಮದ್ದು ಸೇವನೆ ಮಾಡಿದ್ದು ನಿಜವೆಂದು ಸಾಬೀತಾದಾಗ ತನ್ನೆಲ್ಲ ಪದಕಗಳನ್ನೂ ವಾಪಾಸು ನೀಡಿದವನು ಆತ. ಆತನ ಜೀವನ ಕಥೆಯನ್ನು ನೋಡಿ ಕ್ಷಣಕಾಲ ಕಸಿವಿಸಿಗೊಂಡ ವಿನಯಚಂದ್ರ. ಆ ಕಾರ್ಯಕ್ರಮದ ನಂತರ ಟಿ.ವಿಯಲ್ಲಿ ಇನ್ನೇನೋ ಬೆಂಗಾಲಿ ನರ್ತನ ಶುರುವಾಗಿತ್ತು.. ಹೊಟೆಲ್ ರೂಮ್ ತಡಕಾಡಿದವನಿಗೆ ಒಂದಿಷ್ಟು ಖಾಲಿಹಾಳೆಗಳು ಸಿಕ್ಕವು. ಪೆನ್ ಕೈಗೆತ್ತಿಕೊಂಡವನೇ ಅಕ್ಷರಗಳನ್ನು ಪೋಣಿಸಲು ಶುರುಮಾಡಿಕೊಂಡ..
ಹಾಗೆ ಸುಮ್ಮನೇ ಹಾಳೆಯ ಮೇಲೆ..
`ನಿನ್ನ ಪ್ರೀತಿಗೆ ಒಳ್ಳೆಯವನಲ್ಲ..
ನಿಜ ಗೆಳತಿ
ಒಳ್ಳೆಯವ ನಲ್ಲ..'
ಎಂದು ಬರೆದ.. ಯಾಕೋ ಮನಸ್ಸು ಖುಷಿಗೊಂಡಂತಾಯಿತು. ತನ್ನನ್ನೇ ತಾನು ಭೇಷ್ ಎಂದುಕೊಳ್ಳುವಷ್ಟರಲ್ಲಿ `ಸಾರಿ ಯಾರ್.. ಈ ಹುಡುಗೀರು.. ಎಲ್ಲೋದ್ರೂ ನನ್ನನ್ನು ಕಾಡ್ತಾರೆ.. ಏನ್ ಮಾಡೋದು.. ಹೊರಗಡೆ ಗಾರ್ಡನ್ನಿನಲ್ಲಿ ಅಡ್ಡಾಡಲು ಹೋಗಿದ್ದೆ..' ಎಂದುಕೊಳ್ಳುತ್ತ ಒಳಬಂದ ಸೂರ್ಯನ್..
                 ವಿನಯಚಂದ್ರನಿಗೆ ಒಮ್ಮೆ ರಸಭಂಗವಾದಂತಾಯಿತಾದರೂ ಸುಮ್ಮನಾದ. ಸೂರ್ಯನ್ ಈತನ ಕೈಲ್ಲಿನ ಹಾಳೆ ಕಿತ್ತುಕೊಂಡ. `ವಾಟ್ ಈಸ್ ದಿಸ್..' ಎಂದ..
`ಹೆ.. ಹೆ.. ಕನ್ನಡದಲ್ಲಿ ಏನೋ ಒಂದು ಸುಮ್ಮನೆ ಗೀಚಿದ್ದೇನೆ..' ಎಂದ..
`ಏನಪ್ಪಾ ಅದು.. ನಂಗೆ ಗೊತ್ತಾಗಬಾರದು ಎಂತ ಹಿಂಗೆ ಮಾಡಿದ್ದೀಯಾ..?..'
                  `ಹಂಗೇನಿಲ್ಲ ಮಾರಾಯಾ.. ತಾಳು ಅದನ್ನು ಹಿಂದಿಗೆ ಅನುವಾದಿಸಿ ಹೇಳುತ್ತೇನೆ..' ಎಂದು ವಿನಯಚಂದ್ರ ಹಿಂದಿಯಲ್ಲಿ ಉಸುರಿದ. ಸೂರ್ಯನ್ ಹಿಂದಿಯ ಅವತರಣಿಕೆಯ ಆ ಸಾಲುಗಳನ್ನು ಕೇಳಿ ಖುಷಿಯಾಗಿ `ನೀನು ಬರೀತಿಯಾ.. ಮೊದಲೇ ಹೇಳಿದ್ದರೆ ಸುಮಾರಷ್ಟು ಪ್ರೇಮಪತ್ರಗಳನ್ನು ಬರೆಸಿಕೊಳ್ಳಬಹುದಿತ್ತಲ್ಲ ಮಾರಾಯಾ.. ಎಂತಾ ಛಾನ್ಸು ತಪ್ಪಿಹೋಯಿತು.. ಇರ್ಲಿ ಬಿಡು.. ಹಿಂಗೆ ಬರೀತಾ ಇರು.. ಬರೆದಿದ್ದನ್ನು ನನಗೆ ಕೊಡು.. ನಾನು ಹೇಳಿದಾಗಲೆಲ್ಲ ನೀನು ಬರೆದುಕೊಡು. ನಂಗೆ ಹೇಳು.. ನಾನು ಅದರಿಂದ ಒಂದಷ್ಟು ಹುಡುಗಿಯರನ್ನು ಸಂಪಾದಿಸಿಕೊಳ್ಳುತ್ತೇನೆ..' ಎಂದು ಕಣ್ಣು ಮಿಟುಕಿಸಿದ.
                ವಿನಯಚಂದ್ರ ಪೆಚ್ಚುನಗೆ ಬೀರೀದ. ಅಷ್ಟರಲ್ಲಿ ರೂಮಿನ ಬಾಗಿಲು ಸದ್ದಾಯಿತು. ವಿನಯಚಂದ್ರ `ಯಾರು..' ಎಂದ. ಹುಡುಗಿಯೊಬ್ಬಳ ಧ್ವನಿ ಕೇಳಿಸಿತು. ಹೋಗಿ ಬಾಗಿಲು ತೆರೆದ.. ಬಾಗಿಲ ಎದುರಲ್ಲಿ ಒಬ್ಬಾಕೆ ನಿಂತಿದ್ದಳು. ಪಕ್ಕಾ ಬೆಂಗಾಲಿ ಕಾಟನ್ ಸೀರೆಯನ್ನುಟ್ಟ ಯುವತಿ. ಈಗತಾನೆ ಸ್ವರ್ಗದಿಂದಿಳಿದು ಬಂದಳೋ ಎನ್ನುವಷ್ಟು ಚನ್ನಾಗಿದ್ದಳು. ಬಿಳಿಬಣ್ಣದ ಸೀರೆ, ಚಿನ್ನದ ಬಣ್ಣದ  ಅಂಚಿನಲ್ಲಿ ಮತ್ತಷ್ಟು ಚನ್ನಾಗಿ ಕಾಣುತ್ತಿದ್ದಳು. ಬೆಂಗಾಲಿಯರು ಯಾವು ಯಾವುದೋ ವಿಚಿತ್ರ ಸೀರೆಗಳನ್ನು ಧರಿಸುತ್ತಾರೆ ಎಂದುಕೊಳ್ಳುತ್ತಿದ್ದ ವಿನಯಚಂದ್ರನಿಗೆ ಬೆಂಗಾಲಿ ಸೀರೆಗೆ ಈ ಹುಡುಗಿಯಿಂದ ಮತ್ತಷ್ಟು ಮೆರಗು ಬಂದಂತಾಗಿದೆ ಎಂದುಕೊಂಡ.
                ಬೆಂಗಾಲಿಗಳು ಚನ್ನಾಗಿರುತ್ತಾರೆ. ಆದರೆ ಬಿಳಿ ಬಣ್ಣದ ಸೀರೆ ಉಡುತ್ತಾರೆ. ತಥ್.. ಬಿಳಿ ಬಣ್ಣದ ಮೇಲೆ ಅದೇನೇನೋ ಬಗೆ ಬಗೆಯ ಚಿತ್ತಾರಗಳು. ನಮ್ ಕಡೆ ಬಿಳಿ ಸೀರೆ ಉಟ್ಟರೆ ಬೇರೆಯದೇ ಅರ್ಥವಿದೆ. ಆದರೆ ಈ ಹುಡುಗಿ ಬಿಳಿ ಸೀರೆ ಉಟ್ಟರೂ ಚನ್ನಾಗಿ ಕಾಣುತ್ತಾಳಲ್ಲಾ ಎಂದುಕೊಂಡ ವಿನಯಚಂದ್ರ.
                ಅರ್ಧಕ್ಕೆ ನಿಂತ ಕವಿತೆ ಇನ್ನೇನು ಹೊರಬರಬೇಕು ಎಂದು ತವಕಿಸುವಂತಿತ್ತು. ಬಾಗಿಲ ಎದುರು ನಿಂತವಳನ್ನು ಹಾಗೆಯೇ ದಿಟ್ಟಿಸುತ್ತಿದ್ದ. ಎದುರಿದ್ದಾಕೆ ಕಸಿವಿಸಿಗೊಂಡಿರಬೇಕು. ಆದರೆ ವಿನಯಚಂದ್ರನ ಮನಸ್ಸಿಗೆ ಅದು ಗೊತ್ತಾಗಲಿಲ್ಲ. ವಿನಯಚಂದ್ರನ ಮನಸ್ಸಿನಲ್ಲಿ ತರಂಗಗಳೆದ್ದಿದ್ದವು. ಅವನಿಗೆ ಅದು ಅರ್ಥವಾಗುತ್ತಿರಲಿಲ್ಲ. `ವಿನು.. ಯಾರೋ ಅದು..' ಎಂದು ಸೂರ್ಯನ್ ಹಿಂದಿನಿಂದ ಕೂಗದಿದ್ದರೆ ವಿನಯಚಂದ್ರ ಇನ್ನೆಷ್ಟು ಹೊತ್ತು ಹಾಗೆ ಅವಳನ್ನು ನೋಡುತ್ತ ನಿಲ್ಲುತ್ತಿದ್ದನೋ..

(ಮುಂದುವರಿಯುತ್ತದೆ..)

Thursday, February 6, 2014

ಬ್ರಹ್ಮಚಾರಿಯ ಮಗಳು (ಕಥೆ)-ಭಾಗ-1

          ನಾನು ಹಾಗೂ ಅಂಬಿಕಾ ಪ್ರೀತಿಸಲು ಆರಂಭಿಸಿ ಹೆಚ್ಚೂ ಕಡಿಮೆ ನಾಲ್ಕೈದು ವಸಂತಗಳು ಸರಿದುಹೋಗಿದ್ದವು. ಹರಟೆ, ಜಗಳ, ಪಿಸುಮಾತು, ಮೌನ, ಕಾಡುವಿಕೆ, ಚೇಷ್ಟೆ ಮುಂತಾದ ಹಲವಾರು ಸಂಗತಿಗಳು ನಮ್ಮ ಪ್ರೇಮದ ನಡುವೆ ಇಣುಕಿದ್ದವು. ಅವಳಿಗೆ ನಾನು, ನನಗೆ ಅವಳು ಎಂಬಂತೆ ಬದುಕಿದ್ದೆವು. ನಮ್ಮ ಪ್ರೇಮದಲ್ಲಿ ಅನುಮಾನದ ಲವಲೇಶವೂ ಈ ಅವಧಿಯಲ್ಲಿ ಕಂಡುಬಂದಿರಲಿಲ್ಲ. ಆದರೆ ಮೊನ್ನೆ ಜಯಂತ ಬಂದು ನನ್ನ ಬಳಿ `ಅಲ್ಲಾ ಮಾರಾಯಾ.. ನೀನು ಪ್ರೀತಿಸ್ತಾ ಇರೋ ಹುಡುಗಿಯ ಹಿನ್ನೆಲೆಯೇನಾದರೂ ನಿನಗೆ ಗೊತ್ತಿದೆಯಾ? ನಮ್ಮ ಕಡೆಗಳಲ್ಲೆಲ್ಲ ಅವಳನ್ನು ಬ್ರಹ್ಮಚಾರಿಯ ಮಗಳು ಎಂದೇ ಕರೆಯುತ್ತಾರೆ. ನೀನು ಅವಳ ಕುಲ ಗೋತ್ರ ನೋಡದೆ ಪ್ರೀತಿ ಮಾಡಿದ್ದೀಯಲ್ಲ ಮಾರಾಯಾ.. ಆಕೆಯ ಹಿನ್ನೆಲೆ ಗೊತ್ತಿದೆಯಾ?' ಎಂದು ಹೇಳಿ ಮನಸ್ಸಿನೊಳಗೆ ಅನುಮಾನದ ಬೀಜವನ್ನು ಬಿತ್ತಿದ್ದ.
           ಜಯಂತನ ಬಿತ್ತಿದ ಅನುಮಾನದ  ಬೀಜಕ್ಕೆ ನಾನು ಮೊದಲು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಒಂದೆರಡು ದಿನ ಕಳೆದಂತೆ ಅದು ಹೆಮ್ಮರವಾಗಿ ಬಿಡಲು ಆರಂಭಿಸಿತ್ತು. ಆದರೆ ಅವಳ ಬಳಿ ಈ ಕುರಿತು ಕೇಳುವುದು ಹೇಗೆ ಎಂಬುದು ಗೊತ್ತಾಗಿರಲಿಲ್ಲ. ನನ್ನಲ್ಲಿ ಮೂಡಿದ್ದ ಅನುಮಾನವೂ ಹೆಮ್ಮರವಾಗುತ್ತಲಿತ್ತು. ಮನಸ್ಸೇ ಹೀಗೆ. ಒಮ್ಮೆ ಅನುಮಾನ ಮೊಳೆಯಿತೆಂದಾದರೆ ಅದು ಪರಿಹಾರವಾದಂತೂ ಸುಮ್ಮನಾಗುವುದಿಲ್ಲ. ಆದರೆ ನಾನು ಅಂಬಿಕಾಳ ಬಳಿ ವಿಷಯವನ್ನು ಪ್ರಸ್ತಾಪ ಮಾಡುವುದು ಹೇಗೆ ಎಂಬ ಗೊಂದಲಕ್ಕೆ ಬಿದ್ದಿದ್ದೆ. ನನ್ನ ಭಾವನೆ ತಿಳಿದ ಆಕೆ ಅದಕ್ಕೆ ಹೇಗೆ ಪ್ರತಿಕ್ರಿಯೆ ನೀಡಬಹುದು ಎನ್ನುವ ಆಲೋಚನೆಯೂ ಮನದಲ್ಲಿ ಮೂಡಿತು.
            ನಾವು ಪ್ರೀತಿಸಲು ಆರಂಭಿಸಿ ಇಷ್ಟು ವರ್ಷಗಳು ಕಳೆದಿದ್ದರೂ ನಾನು ಆಕೆಯ ಹಿನ್ನೆಲೆಯನ್ನೂ ಆಕೆ ನನ್ನ ಹಿನ್ನೆಲೆಯನ್ನೂ ಎಂದಿಗೂ ಕೇಳುವ ಗೋಜಿಗೆ ಹೋಗಿರಲಿಲ್ಲ. ಅವಳಾಗಿಯೇ ಹೇಳಿದರೆ ನಾನು ಕೇಳುವುದು ಅಥವಾ ನಾನಾಗಿಯೇ ಹೇಳಿದರೆ ಅವಳು ಕೇಳುವುದು ಎನ್ನುವ ಭಾವನೆಯಿಂದ ಇಬ್ಬರೂ ಸುಮ್ಮನಿದ್ದೆವು.  ನಾನಾಗಿಯೇ ನನ್ನ ಕುಟುಂಬದ ವಿವರಗಳನ್ನು ಅವಳ ಬಳಿ ಹೇಳಿದ್ದೆನಾದರೂ ಅವಳು ತನ್ನ ಕುಟುಂಬದ ಕುರಿತು ಎಂದಿಗೂ ಹೇಳಿರಲಿಲ್ಲ. ನನಗೂ ಅಷ್ಟೆ ಅವಳು ಮುಖ್ಯವಾಗಿದ್ದಳೇ ಹೊರತು ಅವಳ ಕುಟುಂಬವಾಗಿರಲಿಲ್ಲ. ಆದರೆ ಜಯಂತನ ಮಾತುಗಳು ನನ್ನಲ್ಲಿ ಬೇರೆಯ ಭಾವನೆಗಳನ್ನು ಹುಟ್ಟಿಸಿದ್ದವು. ಬ್ರಹ್ಮಚಾರಿಗೆ ಮಗಳಾ..? ಮಗಳಿರಲು ಸಾಧ್ಯವೇ? ಇನ್ನೇನಾದರೂ ಹೆಚ್ಚೂ ಕಡಿಮೆ ಆಗಿದೆಯಾ..? ಎಂಬಿತ್ಯಾದಿ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡಿದವು. ನನಗೆ ಸುಮ್ಮನಿರಲು ಸಾಧ್ಯವೇ ಆಗಲಿಲ್ಲ. ನಾನು ಅವಳಿದ್ದಲ್ಲಿ ಹೊರಟೆ.

**
            ನಮ್ಮೂರಿನ ಬಸ್ಸಿನ ರಶ್ಶಿನಲ್ಲಿ ಜೋತಾಡುತ್ತ ನಿಂತಿದ್ದ ನಾನು ನನ್ನೆದುರಿನ ಸೀಟಿನಲ್ಲಿ ಕುಳಿತಿದ್ದ ಅಂಬಿಕಾಳನ್ನು ಅದಕ್ಕೂ ಮೊದಲೇ ಹಲವು ಸಾರಿ ನೋಡಿದ್ದೆನಾದರೂ ಹೆಚ್ಚಿನ ಗಮನ ಹರಿಸಿರಲಿಲ್ಲ. ಕಾಲೇಜಿನ ದಿನಗಳಾದ್ದರಿಂದ ನನ್ನ ಗೆಳೆಯರು ಅವಳನ್ನು ಕಂಡು ಹಲವಾರು ಬಾರಿ ಕಾಟ ಕೊಟ್ಟಿದ್ದರು. ಆ ದಿನಗಳಲ್ಲಿ ನಾನು ಹುಡುಗಿಯರ ಬಳಿ ಮಾತನಾಡುತ್ತೇನೆ ಎನ್ನುವ ಆರೋಪಗಳನ್ನು ಹೊತ್ತಿದ್ದರಿಂದ ಇವಳನ್ನು ಮಾತನಾಡಿಸಿ ಇವಳ ಹೆಸರನ್ನು ಕೇಳಬೇಕು ಎನ್ನುವ ಸವಾಲನ್ನು ನನ್ನ ಗೆಳೆಯರು ಮುಂದಿಟ್ಟಿದ್ದರು. ಹುಂಭ ದೈರ್ಯದಿಂದ ಆಗಬಹುದು ಎಂದಿದ್ದೆ.
            ಹಲವು ದಿನಗಳು ಕಳೆದಿದ್ದರೂ ಆಕೆಯನ್ನು ಮಾತನಾಡಿಸುವ ಧೈರ್ಯ ನನಗೆ ಬಂದಿರಲಿಲ್ಲ. ಆದರೆ  ನಾನು ಬಸ್ಸಿನ ರಶ್ಶಿನಲ್ಲೂ ಅವಳನ್ನು ಗಮನಿಸಿದ್ದೆ. ಆಕೆಯೂ ನನ್ನನ್ನು ಗಮನಿಸಿ ಕಿರುನಗೆ ಎಸೆದಿದ್ದಳು. ನನಗೆ ಒಮ್ಮೆ ಅಚ್ಚರಿ ಹಾಗೂ ಆಘಾತ ಎರಡೂ ಒಟ್ಟಿಗೆ ಆಗಿತ್ತು. `ಹಾಯ್..' ಎಂದಿದ್ದೆ. `ನಮಸ್ತೆ..' ಎಂದವಳು `ನೀವು ಅವರಲ್ವಾ.. ನಿಮ್ಮ ಕಥೆಗಳನ್ನು ಓದ್ತಾ ಇರ್ತೀನಿ.. ಬಹಳ ಚನ್ನಾಗಿರ್ತವೆ..' ಎಂದು ಹೇಳಿದ್ದಳು. ಅಷ್ಟೇ ಅಲ್ಲದೇ ತನ್ನ ಪಕ್ಕದ ಸೀಟನ್ನು ನನಗಾಗಿ ಹಿಡಿದುಕೊಂಡು ನನಗೆ ನೀಡಿದ್ದಳು. ಆಕೆಯ ಪಕ್ಕ ಕುಳಿತಾಗಲೇ ನನಗೆ ಅವಳ ಕುರಿತು ಮೋಹ ಬೆಳೆದಿದ್ದು ಎಂದರೆ ತಪ್ಪಾಗಲಿಕ್ಕಿಲ್ಲ. ತೀರಾ ಹತ್ತಿರದಿಂದ ಕುಳಿತು ಅವಳ ಮುಖವನ್ನು ನಾನು ಗಮನಿಸಿದ್ದೆ. ಯಾಕೋ ಆ ಮುಖದ ಮೇಲೆ ಆಕೆಯಿಟ್ಟುಕೊಂಡಿದ್ದ ಹಳೆಯ ಮೇಲಿನ ಚಿಕ್ಕದೊಂದು ಗೋಪಿಚಂದನದ ಬಿಂದು ನನ್ನನ್ನು ಬಿಟ್ಟು ಬಿಡದೇ ಕಾಡಿಬಿಟ್ಟತು. ನಾನೂ ಒಂದೆರೆಘಳಿಗೆ ನನ್ನನ್ನೇ ಮರೆತು ಆ ಬಿಂದುವನ್ನು ದಿಟ್ಟಿಸಿದ್ದೆ. ಆಕೆ ನನ್ನಬಳಿ ಪ್ರಶ್ನಾರ್ಥಕವಾಗಿ ನೋಡಿದ್ದಳು. ನಾನು ಕಸಿವಿಸಿಗೊಂಡು ಮುಖ ತಿರುಗಿಸಿದ್ದೆ. ನಾ ಕೇಳದಿದ್ದರೂ ಅವಳು ತನ್ನ ಪರಿಚಯವನ್ನು ಹೇಳಿಕೊಂಡಿದ್ದಳು. ನಾನು ನನ್ನ ಪ್ರವರ ಹೇಳುವ ವೇಳೆಗೆ ಆಕೆಯಿಳಿಯುವ ಸ್ಥಳ ಬಂದಿತ್ತು.
             ಅಲ್ಲಿಂದಾಚೆಗೆ ನನಗೂ ಅವಳಿಗೂ ಯಾವುದೋ ನಂಟು ಬೆಳೆಯಿತು. ಕಾಲೇಜಿನಲ್ಲಿ, ಕಾಲೇಜಿನ ದಾರಿಯಲ್ಲೆಲ್ಲ ನಾವು ಸಿಕ್ಕಾಗ ದೀರ್ಘ ಮಾತಿಗೆ ನಿಲ್ಲುತ್ತಿದ್ದೆವು. ಮಾತುಗಳ ನಂಟು ಮೊದಲು ನನ್ನಲ್ಲೇ ಪ್ರೇಮದ ಛಾಯೆಯನ್ನು ಮೂಡಿಸಿದ್ದು. ಕಾಲೇಜಿನಲ್ಲಿ ನಾವು ಇತರರಿಗೆ ಅಸೂಯೆ ಮೂಡುವಷ್ಟು ಮಾತನಾಡುತ್ತಿದ್ದೆವು. ನಮ್ಮ ನಡುವಿನ ಬಾಂಧವ್ಯ ದಿನದಿಂದ ದಿನಕ್ಕೂ ಬಲವಾಗುತ್ತಲೇ ಸಾಗುತ್ತಿತ್ತಾದರೂ ನಾನು ಅವಳ ಬಳಿಯಲ್ಲಿ ನನ್ನ ಮನಸ್ಸಿನ ಭಾವನೆಯನ್ನು ಹೇಳಿಕೊಳ್ಳಲೇ ಇಲ್ಲ. ನನ್ನ ಭಾವನೆಗಳನ್ನು ಹೇಳಿ, ಅವಳು ಅದನ್ನು ವಿರೋಧಿಸಿ ಎಲ್ಲಿ ನಮ್ಮ ಗೆಳೆತನಕ್ಕೂ ಕುತ್ತು ಬಂದು ಹೋಗುತ್ತದೆಯೋ ಎನ್ನುವ ದುಗುಡ ನನ್ನನ್ನು ಕಾಡಿದ ಕಾರಣ ನನ್ನ ಪ್ರೀತಿಯನ್ನು ಮನಸ್ಸಿನಲ್ಲೇ ಬೆಳೆಸಿಕೊಂಡಿದ್ದೆ.
             ನನ್ನ ಮನದಾಳದ ಭಾವನೆಗಳು ಮಿತ್ರ ಸಂಜಯನಿಗೆ ತಿಳಿದಿತ್ತು. ಆತನಿಗಂತೂ ನಮ್ಮಿಬ್ಬರ ಮಾತುಕತೆ ಮಜವನ್ನು ಕೊಟ್ಟಿದ್ದರೂ ನಾನು ನನ್ನ ಭಾವನೆಗಳನ್ನು ಹೇಳಲಾಗದೇ ಪಡಿಪಾಟಲು ಪಡುತ್ತಿರುವುದನ್ನು ಗಮನಿಸಿ ಖುಷಿ ಪಟ್ಟಿದ್ದೂ ಇದೆ. ಹೀಗಿದ್ದಾಗಲೇ ಒಂದು ದಿನ ಆತ ನನ್ನ ಭಾವನೆಗಳನ್ನು ಅವಳ ಬಳಿ ಹೇಳಿಬಿಟ್ಟಿದ್ದ. ನನಗೆ ಒಮ್ಮೆ ಬಾಂಬ್ ಬಿದ್ದಂತಾಗಿತ್ತು ಬಾಳಿನಲ್ಲಿ.
             ಮರುದಿನ ನಾನು ಅವಳಿಂದ ದೂರವುಳಿಯಬೇಕು ಎನ್ನುವ ಕಾರಣಕ್ಕಾಗಿ ಕಾಲೇಜಿಗೆ ಹೋಗಿರಲಿಲ್ಲ. ಅದರ ಮರುದಿನ ಹೋದೆ. ಹೋದವನು ಉದ್ದೇಶಪೂರ್ವಕವಾಗಿ ಅವಳಿಂದ ಕಣ್ತಪ್ಪಿಸಿಕೊಳ್ಳತೊಡಗಿದ್ದೆ.  ಅವಳೂ ನನ್ನನ್ನು ಹುಡುಕಿರಬೇಕು. ಸಂಜಯನ ಬಳಿಯೂ ನನ್ನನ್ನು ಹುಡುಕುವಂತೆ ಹೇಳಿರಬೇಕು. ಸಂಜಯ ಲೈಬ್ರರಿ ಮೂಲೆಯಲ್ಲಿ ಯಾರಿಗೂ ಕಾಣದಂತೆ ಕುಳಿತಿದ್ದ ನನ್ನನ್ನು ಹುಡುಕಿ ಬಂದಿದ್ದ. ಬಂದವನೇ `ಮಾರಾಯಾ.. ನಿನ್ನ ಹುಡುಕುವ ಉಸಾಬರಿ ಬೇಡ ನಂಗೆ..' ಎಂದು ಹೇಳುತ್ತ ತುಂಟ ನಗೆ ನಕ್ಕಿದ್ದ.
            ಸಂಜಯನಿಗೆ ಚೆಲ್ಲಾಟ.. ನನಗೆ ಪ್ರಾಣಸಂಕಟ ಎನ್ನುವಂತಾಗಿತ್ತು. ಮಾಡುವ ಕಿತಾಪತಿ ಮಾಡಿ ಈಗ ನಗುತ್ತಿದ್ದಾನೆ, ಹಿಡಿದು ಬಡಿದುಬಿಡೇಕು ಎನ್ನಿಸಿಬಿಟ್ಟಿತ್ತು ಒಮ್ಮೆ. ಕಷ್ಟಪಟ್ಟು ಸಮಾಧಾನ ಮಾಡಿಕೊಂಡಿದ್ದೆ. ಆತ ಹೇಳಿದರೂ ನಾನು ಅವಳಿಗೆ ಸಿಕ್ಕಿರಲಿಲ್ಲ. ನಾಲ್ಕೈದು ದಿನವಾದರೂ ಅವಳ ದೃಷ್ಟಿಯಿಂದ ನಾನು ತಪ್ಪಿಸಿಕೊಳ್ಳುತ್ತಲೇ ಇದ್ದೆ. ಅವಳೂ ಹುಡುಕಾಡಿರಬೇಕು. ಕೊನೆಗೊಂದು ದಿನ ನಾನು ಬರುವುದನ್ನೇ ಕಾಯುತ್ತ ಕಾಲೇಜು ಬಾಗಿಲಲ್ಲಿ ನಿಂತಿದ್ದಳು. ನಾನು ದೂರದಿಂದ ಕಂಡವನೇ ಪಕ್ಕಕ್ಕೆ ಸರಿದು ತಪ್ಪಿಸಿಕೊಳ್ಳಲು ಯತ್ನಿಸಿದೆ. `ನಿಲ್ಲೋ ಮಾರಾಯಾ.. ನಿನ್ ಹತ್ರ ಮಾತಾಡಬೇಕು.' ಎಂದಳು.. ನಾನಾಗಲೇ ಬೆವರಿ, ಬೆದರಿ ನೀರಾಗಿದ್ದೆ.
             `ಏನ್ ಮಾರಾಯಾ.. ಇಸ್ಟ್ ದಿನ ಆಯ್ತು..  ಎಲ್ಲೋಗಿದ್ದೆ..? ಎಲ್ಲಂತ ಹುಡುಕೋದು ನಿನ್ನ? .. ಯಾರ್ಯಾರನ್ನು ಬಿಟ್ಟು ಹುಡುಕಿಸೋದು ನಿನ್ನ ? ಪೇಪರಿನಲ್ಲಿ ಕಾಣೆಯಾಗಿದ್ದಾರೆ ಅಂತ ಕೊಡಬೇಕೆನೋ ಅಂದುಕೊಂಡಿದ್ದೆ..' ಎಂದಾಗ ನಾನು ಪೆಚ್ಚು ನಗೆ ಬೀರಿದ್ದೆ.
             `ಏನೋ ಸುದ್ದಿ ಕೇಳಿದ್ನಲ್ಲಾ..' ನೇರವಾಗಿ ಅವಳು ಕೇಳಿದ್ದಳು.. ನಾನು ಬೆಚ್ಚಿದ್ದೆ. ನಾನು ಏನಿಲ್ಲ ಎಂದು ಹಾರಿಕೆಯ ಉತ್ತರ ನೀಡಿ ಜಾರಿಕೊಳ್ಳುವುದರೊಳಗಾಗಿ ನನ್ನ ಕಣ್ಣಿನಲ್ಲಿ ಕಣ್ಣನಿಟ್ಟು ಮಾತಿಗೆ ಶುರುಹಚ್ಚಿಕೊಂಡಿದ್ದಳು.
              `ಏನೋ.. ನಿನ್ ಮನಸ್ಸಿನ ಭಾವನೆಗಳಿಗೆ ಬೇರೊಬ್ಬರು ಧ್ವನಿಯಾಗ್ಬೇಕಾ..? ನಿಂಗೆ ಅನ್ನಿಸಿದ್ದನ್ನು ಇನ್ಯಾರೋ ಬಂದು ಹೇಳಬೇಕಾ..? ಯಾಕೆ ನೀನೇ ಹೇಳೋದಿಲ್ಲ..? ನೀನೆ ನೇರವಾಗಿ ಬಂದು ಹೇಳಿದ್ರೆ ಏನಾಗ್ತಿತ್ತು..? ನಾ ಏನಾದ್ರೂ ಹೇಳ್ ಬಿಡ್ತೀನಿ ಅನ್ನೋ ಭಯವಿತ್ತಾ..? ಕೋತಿ..' ಎಂದಳು. ನಾನು ಮತ್ತೊಮ್ಮೆ ಪೆಚ್ಚಾಗಿದ್ದೆ.
               `ನಿನ್ನಲ್ಲಿ ಮೂಡಿದ ಭಾವನೆ ನನ್ನಲ್ಲೂ ಇತ್ತು ಕಣೋ.. ಆದರೆ  ನನಗೂ ಹೇಳಿಕೊಳ್ಳಲು ಏನೋ ಒಂಥರಾ ಆಗ್ತಿತ್ತು. ಒಳ್ಳೆ ಸಮಯಕ್ಕೆ ಕಾಯ್ತಾ ಇದ್ದೆ. ಆ ದಿನ ಸಂಜಯ ಬಂದು ಹೇಳಿದಾಗ ನಾನು ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ಕುಣಿದಾಡಿದ್ದೆ. ನನ್ನ ಮನಸ್ಸಿನ ಭಾವನೆ ಅವನಿಗೂ ಗೊತ್ತಾಗಿತ್ತು. ಆತನೇ ನಿನ್ನ ಬಳಿ ಹೇಳಿರಾತ್ರೇನೋ ಅಂದುಕೊಂಡಿದ್ದೆ. ಆದರೆ ನಿನ್ನನ್ನು ನೋಡಿದ ಮೇಲೆ ಹಾಗೆ ಹೇಳಿಲ್ಲ ಅನ್ನೋದು ಗೊತ್ತಾಯ್ತು ಬಿಡು. ಮತ್ತೆ.. ನಿನ್ನ ಭಾವನೆಗಳನ್ನು ಇನ್ನೊಬ್ಬರ ಬಳಿ ಹೇಳಿ ಅವರ ಮೂಲಕ ನಾನು ತಿಳಿದುಕೊಳ್ಳುವಂತೆ ಮಾಡಬೇಡ ಮಾರಾಯಾ..' ಎಂದು ಹೇಳಿ ನಕ್ಕಿದ್ದಳು ಅಂಬಿಕಾ..
                ನನ್ನ ಪ್ರೀತಿಗೆ ಅವಳು ಒಪ್ಪಿದಳಾ.. ಬಿಟ್ಟಳಾ..? ಗೊಂದಲ ಇನ್ನಷ್ಟು ಜಾಸ್ತಿಯಾಗಿತ್ತು.. ಅರ್ಥವಾಗದವನಂತೆ `ನನ್ನಲ್ಲಿ ಮೂಡಿದ ಭಾವನೆಗೆ ನಿನ್ನ ಉತ್ತರ..?' ಎಂದು ಕೇಳಿದ್ದೆ.. `ಇನ್ನೆಷ್ಟು ಸಾರಿ ಹೇಳಬೇಕೋ ಕೋತಿ ನಿಂಗೆ.. ಅರ್ಥವಾಗೋದಿಲ್ವಾ.. ಹೂಂ ಹೂಂ ಹೂಂ..' ಎಂದು ಹೇಳಿದಾಗ ಅವಳನ್ನೊಮ್ಮೆ ತಬ್ಬಿ ಮುದ್ದಾಡಬೇಕೆನ್ನಿಸುವಷ್ಟು ಸಂತೋಷವಾಗಿತ್ತು ನನಗೆ.. ಸುತ್ತಮುತ್ತ ನೋಡಿ ಸುಮ್ಮನಾಗಿದ್ದೆ.
                 ಆ ನಂತರದ ದಿನಗಳು ನಮ್ಮ ಪಾಲಿಗೆ ಅತ್ಯಂತ ಹರ್ಷದಾಯಕವಾಗಿದ್ದವು. ಪ್ರೇಮದಲ್ಲಿ ನಾವು ಮಿಂದೆದ್ದಿದ್ದೆವು. ಆದರೆ ಯಾವುದೇ ಕಾರಣಕ್ಕೂ ನಾನಾಗಿಯೇ ಅವಳ ಬಳಿ ಅವಳ ಹಿನ್ನೆಲೆಯನ್ನು ಕೇಳಿರಲಿಲ್ಲ. ಅವಳಾದರೂ ಹೇಳುತ್ತಾಳೆಂದುಕೊಂಡಿದ್ದೆ ಹೇಳಿರಲಿಲ್ಲ. ಹುಡುಗಿಯ ಎದುರು ಹುಡುಗರು ಹಲವು ಸಾರಿ ಭಾವನಾತ್ಮಕವಾಗಿ ಬೆತ್ತಲಾಗುತ್ತಾರೆ ಎಂಬ ಮಾತಿದೆ. ನಾನು ನನ್ನ ಮನಸ್ಸಿನ ಎಲ್ಲ ಭಾವನೆಗಳನ್ನೂ ಅವಳೆದುರು ತೆರೆದಿಟ್ಟಿದ್ದೆ. ನನ್ನದೇ ಎಂಬಂತಹ ಗುಟ್ಟು ಏನೊಂದೂ ಇರಲಿಲ್ಲ. ನನ್ನ ಮನೆಗೆ ನಾನು ಅನೇಕ ಸಾರಿ ಅವಳನ್ನು ಕರೆದೊಯ್ದಿದ್ದೆ. ಅವಳೂ ನನ್ನನ್ನು ಅವಳ ಮನೆಗೆ ಕರೆದೊಯ್ದಿದ್ದಳು. ಮನೆಯಲ್ಲಿ ಅವಳಿಗೆ ಅಪ್ಪನಿದ್ದ. ತಾಯಿಯಿರಲಿಲ್ಲ. ತಾಯಿಯ ಕುರಿತು ಕೇಳಿದಾಗ ಮೌನವಾಗಿದ್ದಳು. ನಾನು ಅವಳ ಮನದ ಭಾವನೆಯನ್ನು ಅರಿತು ಮತ್ತೆ ಪ್ರಶ್ನಿಸಲು ಹೋಗಿರಲಿಲ್ಲ.
                ಈಗ ಜಯಂತನ ಮಾತುಗಳು ಮತ್ತೆ ನನ್ನನ್ನು ಕಾಡಲು ಆರಂಭಿಸಿದ್ದವು. ತಾಯಿಯಿಲ್ಲ ತನಗೆ ಎಂದು ಅವಳು ಸುಳ್ಳು ಹೇಳಿದಳಾ..? ಅಥವಾ ಬೇಕಂತಲೇ ನನ್ನಿಂದ ವಿಷಯವನ್ನು ಮುಚ್ಚಿಟ್ಟಳಾ..? ಬ್ರಹ್ಮಚಾರಿಯ ಮಗಳು ಎಂದರೆ ಏನರ್ಥ..? ಬ್ರಹ್ಮಚಾರಿಗೆ ಮಕ್ಕಳಿರಲು ಸಾಧ್ಯವೇ..? ಎಂದೆಲ್ಲ ಆಲೋಚಿಸಿದೆ. ಏನಾದರಾಗಲಿ ಅವಳ ಬಳಿ ಈ ಕುರಿತು ಕೇಳಲೇಬೇಕು ಎಂದುಕೊಂಡು ಅಂದು ಹೊರಟಿದ್ದೆ. ಏನು ಕಾರಣವೋ.. ಆದಿನ ಅವಳು ನನಗೆ ಸಿಗಲೇ ಇಲ್ಲ. ಅನುಮಾನದ ಮನಸ್ಸಿಗೆ ಪ್ರತಿಯೊಂದೂ ಅನುಮಾನವಾಗಿಯೇ ಕಾಣುತ್ತದಂತೆ.. ನನಗೂ ಈಕೆ ಆ ದಿನ ಸಿಗದೇ ಇದ್ದುದು ಉದ್ದೇಶಪೂರ್ವಕದಂತೆ ಅನ್ನಿಸಿತು. ಮರುದಿನ ಸಿಕ್ಕಳು. ಸಿಕ್ಕ ತಕ್ಷಣ ಮೊದಲು ಕೇಳಿದ್ದೇ ಈ ಕುರಿತು.
                `ಅಲ್ಲಾ ಕಣೇ.. ನಿನ್ನನ್ನು ಎಲ್ಲರೂ ಬ್ರಹ್ಮಚಾರಿಯ ಮಗಳು ಅಂತ ಕರೀತಾರಂತೆ.. ಯಾಕೆ ಹೀಗೆ..?' ಎಂದು ಕೇಳಿದೆ.
                `ನನ್ನೆದುರು ನಗುತ್ತ ಬಂದ ಆಕೆಯ ಮುಖ ಒಮ್ಮೆಲೇ ಮುದುಡಿತು. ನಾನು ಮುಂದುವರಿದು ಕೇಳಿದೆ. `ಬ್ರಹ್ಮಚಾರಿಯ ಮಗಳಾ..? ಎಂತಾ ಹೆಸರು ಮಾರಾಯ್ತಿ.. ಮಜಾ ಇದೆ ನೋಡು.. ಬ್ರಹ್ಮಚಾರಿಗೆ ಮಗಳಿರಲು ಸಾಧ್ಯವೇ..? ಬ್ರಹ್ಮಚಾರಿಗೆ ಮಗಳಿದ್ದಾಳೆ ಎಂದರೆ ಅವನೆಂತ ಬ್ರಹ್ಮಚಾರಿಯಾಗಲು ಸಾಧ್ಯ..? ಬ್ರಹ್ಮಚಾರಿ ಹಾಗೂ ಮಗಳು.. ಎಂತಾ ವಿತ್ರ ಅಲ್ವಾ..? ಹಿಂಗಂದ್ರೆ ಬ್ರಹ್ಮಚಾರಿ ವ್ಯಕ್ತಿತ್ವದ ಬಗ್ಗೆ ಅನುಮಾನ ಹುಟ್ಟುತ್ತದಲ್ಲ.. ನಿಂಗೆ ಬ್ರಹ್ಮಚಾರಿ ಮಗಳು ಅಂತ ಕರೀತಾರಂತೆ.. ಯಾಕೆ..? ಏನೋ ಅನುಮಾನ ಮೂಡ್ತಾ ಇದೆಯಲ್ಲ..' ಎಂದು ಕೇಳಿದೆ.. ಎಂದಿನ ಸಲಿಗೆ.. ಖುಶಾಲಿಯಿಂದ ಮಾತಾಡಿದ್ದೆ.. ಸ್ವಲ್ಪ ಉಢಾಫೆಯೂ ಇತ್ತೆನ್ನಿ..
               ಆಕೆ ಏನೊಂದೂ ಮಾತಾಡಲಿಲ್ಲ. ಮುಖ ಕಪ್ಪಾಗಿತ್ತು. ನನ್ನನ್ನು ಕೈಹಿಡಿದುಕೊಂಡವಳೇ ಸೀದಾ ಎಳೆದುಕೊಂಡು ಹೋದಳು.. ನಾನು ಆಕೆಯ ಹಿಂದೆ ನಡೆದುಕೊಂಡು ಹೋದೆ.. ಎಲ್ಲಿಗೆ ಕರೆದೊಯ್ಯುತ್ತಿದ್ದಾಳೆ ನಾನು ಕೇಳಲಿಲ್ಲ.. ಕೇಳುವ ಮನಸ್ಸಾಗಲಿಲ್ಲ.. ಅಪರೂಪಕ್ಕೆ ಯಾಕೋ ನನಗೆ ಭಯವಾಯಿತು.. ಮೌನವಾಗಿ ನಡೆಯುತ್ತಿದ್ದ ಅವಳನ್ನು ಹಿಂಬಾಲಿಸಿದೆ. ಮನಸ್ಸಿನೊಳಗೇ ಅವಳು ಅಳುತ್ತಿದ್ದಳಾ..? ಗೊತ್ತಾಗಲಿಲ್ಲ..

(ಮುಂದುವರಿಯುತ್ತದೆ..)  

Wednesday, February 5, 2014

My Heart

My Heart is full of
Pother and Pain.
It is also full of pine.
And sweet memory rain ||4||

My heart is a black den
Bad luck is its wilkin.
And it is a large desert
It is full of small sands.  ||8||

But my heat wants a
Smile and sweet love
And also friendship
And praise with like  ||12||





** (ಇದು ನನ್ನ ಇಂಗ್ಲೀಷ್ ನ ಮೊದಲ ಕವಿತೆ. ಖಂಡಿತವಾಗಿಯೂ ಈ ಕವಿತೆ ಹೇಗಿದೆಯೋ ಗೊತ್ತಿಲ್ಲ. ಕಾಲೇಜಿಗೆ ಹೋಗುವಾಗ ನಮ್ಮ ಇಂಗ್ಲೀಷ್ ಪ್ರೊಫೆಸರ್ ಒಬ್ಬರಿಗೆ ಕೊಟ್ಟಿದ್ದೆ. ಅಭಿಪ್ರಾಯ ತಿಳಿಸಲು ಹೇಳಿದ್ದೆ. ಇದುವರೆಗೂ ಅವರ ಅಭಿಪ್ರಾಯಕ್ಕೆ ಕಾಯುತ್ತಲೇ ಇದ್ದೇನೆ. ಕನ್ನಡ ಮೀಡಿಯಮ್ಮಿನ ಹುಡುಗನೊಬ್ಬ ಇಂಗ್ಲೀಷ್ ಕವಿತೆ ಬರೆದರೆ...ಇದು ಅದೇ.. ಖಂಡಿತ ಕವಿತೆಯಲ್ಲಿ ಸಾಕಷ್ಟು ತಪ್ಪುಗಳಿವೆ ನನಗೆ ಗೊತ್ತಿದೆ.. ನಿಮ್ಮ ಅಭಿಪ್ರಾಯ ಬರಲಿ.)
(ಕವಿತೆ ಬರೆದಿದ್ದು 28-01-2007ರಂದು ದಂಟಕಲ್ಲಿನಲ್ಲಿ)

Tuesday, February 4, 2014

ನಕ್ಕು ಹಗುರಾಗಿ

ರೂಪದರ್ಶಿ : ಸಮನ್ವಯ ಸುದರ್ಶನ್
ನಕ್ಕು ಹಗುರಾಗಿ
ಕಮರುತಿಹ ಜೀವಗಳೇ..||


ನಗುವೆ ಹೃದಯದ ಚಿಲುಮೆ
ನಗುವೆ ಜೀವ ಸ್ಪೂರ್ತಿ |
ಇದುವೆ ಮಧುರ ಕ್ಷಣ
ಇದು ಪ್ರೀತಿ ಮೂರ್ತಿ ||

ನಗುವೆ ಕನಸಿನ ಕಿರಣ
ಹೊಸತು ಜೀವಸ್ಫುರಣ |
ನಗುವೆ ಮಾತಿನ ಮೂಲ
ಇದುವೆ ಸ್ನೇಹದ ಜಾಲ ||

ನಗುವೆ ದ್ವೇಷಕೆ ಕೊನೆಯು
ಹರ್ಷ ಪ್ರೀತಿಗೆ ಗೊನೆಯು |
ನಗುವೆ ಮೊಗದ ಚೆಲುವು
ಇದರಿಂದಲೇ ಭವ್ಯ ನಿಲುವು ||

ನಗುವ ನಲಿವಿನಿಂದಲೇ
ಜೀವ ಹಸಿರು ಆಗಿಸಿ |
ಎದೆಯಾಳದ ನೋವು, ದುಃಖ
ತೊರೆದು ದೂರಕೆ ಓಡಿಸಿ ||

**
(ಈ ಕವಿತೆಯನ್ನು ದಂಟಕಲ್ಲಿನಲ್ಲಿ 13.12.2006ರಲ್ಲಿ ಬರೆದಿದ್ದೇನೆ)

Monday, February 3, 2014

ನಿಖಿತಾ ಹಾಗೂ ನಾನು


                    ಯಾವ ಮುಹೂರ್ತದಲ್ಲಿ ಈ ನಿಖಿತ ಮನೆಯ ಸದಸ್ಯಳಾದಳೋ ಗೊತ್ತಾಗಲೇ ಇಲ್ಲ. ಒಟ್ಟಿನಲ್ಲಿ ಆಕೆ ನಮ್ಮ ಮನೆಯಲ್ಲಿ ನಮ್ಮವಳಾಗಿದ್ದಳು.
                    ಒಂದು ದಿನ ಮನೆಗೆ ಇಳಿಸಂಜೆಯ ಹೊತ್ತು ಬೈಕೇರಿ ಮನೆಯ ಕಡೆಗೆ ಬರುತ್ತಿದ್ದೆ. ಬೈಕಿನ ಹಿಂದೆ ಆಯಿ ಇದ್ದಳು. ಅಡಕಳ್ಳಿ ಶಾಲೆಗೆ ಬರುವ ಹೊತ್ತಿನಲ್ಲಿ ನನ್ನ ಕಣ್ಣಿಗೆ ಬಿದ್ದಿದ್ದಳು ನಿಖಿತಾ. `ಆಯಿಯ ಬಳಿ ನಮ್ಮನಿಗೆ ಕರಕೊಂಡು ಹೋಪನನೆ ಕೇಳಿದ್ದೆ..' `ತಮಾ.. ಮನೆಯಲ್ಲಿ ರಾಗಿಣಿ, ಶ್ರೀದೇವಿ, ದರ್ಶನ.. ಎಲ್ಲಾ ಇದ್ದ ಈಗ ನಿಖಿತಾನೂ ಬೇಕನಾ..?' ಎಂದು ಕೇಳಿದಳು ಆಯಿ.
`ಇರ್ಲೆ.. ಥೋ ರಾಗಿಣಿ ದನಿಕರ ಆತು.. ಶ್ರೀದೇವಿ ದನ ಆತು.. ಇನ್ನು ದರ್ಶನ ಅಂತೂ ಹಂಡಾಪಟ್ಟೆ ಬಣ್ಣದ ಹೋರಿಗರ ಆತು.. ನಿಖಿತಾ ಇರ್ಲಿ.. ಕರೆದುಕೊಂಡು ಹೋಪನ ತಗಾ.. ನಮಗೆ ಹೊರೆಯಾಗ್ತಿಲ್ಲೆ..' ಎಂದವನೇ ಆಯಿಯ ತೊಡೆಯ ಮೇಲೆ ಕುಳ್ಳಿರಿಸಿ ಮನೆಯತ್ತ ಬೈಕು ಚಲಾಯಿಸಿದ್ದೆ.
                    ಹೇಳ್ತಿ ತಡಿರಿ.. ನಿಖಿತಾ.. ಅವಳಲ್ಲಿ ಇವಳಲ್ಲ.. ಆಕೆ ನಮ್ಮ ಮನೆಯಲ್ಲಿದ್ದ ಹೆಣ್ಣು ನಾಯಿ ಮಾರಾಯ್ರೆ.. ಆಯಿಯ ವಿರೋಧವನ್ನು ಕಟ್ಟಿಕೊಂಡೂ ಆಕೆಯನ್ನು ಮನೆಗೆ ತಂದ ದಿನ ಟಿವಿಯಲ್ಲಿ ದರ್ಶನ್ ಗಲಾಟೆ ಬರುತ್ತಿತ್ತು. ತಂದಿದ್ದು ಹೆಣ್ಣು ನಾಯಿಮರಿ. ಏನಾದರೂ ವಿಶೇಷ ನಾಮಕರಣ ಮಾಡಬೇಕಲ್ಲ ಎಂದುಕೊಂಡವನಿಗೆ ನೆನಪಾದದ್ದು ನಿಖಿತಾ. ಶುಭ ಮುಹೂರ್ತದಲ್ಲಿ ರಾಹುಕಾಲದ ಸಂದರ್ಭದಲ್ಲಿ ನಿಖಿತಾ ಎಂದು ನಾಮಕರಣ ಮಾಡಿದೆ.
`ಇಶ್ಶೀ.. ರಾಗಿಣಿಯಾತು, ಶ್ರೀದೇವಿಯಾತು, ದರ್ಶನನೂ ಆದ.. ನಿಖಿತ ಬೇರೆ ಬಾಕಿಯಿತ್ತನಾ..?' ಎಂದು ಆಯಿ ರಾಗವೆಳೆದಿದ್ದಳು. `ಸುಮ್ನಿರೆ ಮಜಾ ಇರ್ತು..' ಹೇಳಿ ಆಕೆಯನ್ನು ಸುಮ್ಮನಿರಿಸಿದ್ದೆ.
                   ನಾನು ಹೊಸ ನಾಯಿಮರಿ ತಂದ ವಿಚಾರ ಹಾಗೂ ಅದಕ್ಕೆ ನಿಖಿತಾ ಎಂದು ನಾಮಕರಣ ಮಾಡಿದ ವಿಚಾರ ನಮ್ಮೂರಿಗರಿಗೆ ಜಗಜ್ಜಾಹೀರಾಗಲು ಹೆಚ್ಚಿನ ಸಮಯ ಬೇಕಾಗಲಿಲ್ಲ ನೋಡಿ. ಬಂದವರೇ.. `ಅಯ್ಯೋ ತಮಾ.. ನಿಖಿತಾ ಹೇಳಿ ಹೆಸರಿಟ್ಟಿದ್ದಿದ್ ನೋಡಿ ಲ್ಯಾಬ್ರಡಾರೋ, ಪಮೋರಿಯನ್ನೋ ಹೌಂಡೋ ಅಂದ್ ಕಂಡನಲಾ.. ನೋಡಿದ್ರೆ ಜಾತಿ ನಾಯಿ..' ಎಂದು ಹೇಳುತ್ತಿದ್ದುದು ಗೋಡೆಯ ಮೇಲಿನ ಹಲ್ಲಿಯ ಲೊಚಗುಡುವ ಮಾತಿನಂತೆ ನನಗನ್ನಿಸಿತ್ತು.
                   ತರುವಾಗ ಬಡಕಲು ಬಡಕಲಾಗಿದ್ದ ನಿಖಿತಾ ಆರಂಭದ ಹಲವು ದಿನಗಳ ಕಾಲ ತನ್ನ ಜೀರೋ ಫಿಗರ್ ಮೆಂಟೇನ್ ಮಾಡಿದ್ದಳು. ನಾನು `ಎಂತಕ್ಕೋ ನಿಖಿತಾ ದೊಡ್ಡಾಗ್ತೇ ಇಲ್ಲೆ ಕಾಣ್ತು..' ಎಂದು ಹೇಳಿ ಒಂದು ಕೋಳಿಮೊಟ್ಟೆ ತಂದು ಹಾಕಿದ್ದೆ. ಒಂದೇ ಗುಕ್ಕಿಗೆ ತಿಂದ ನಿಖಿತಾ ನಂತರದ ನಾಲ್ಕೈದು ದಿನದಲ್ಲಿ ಸೋನಾಕ್ಷಿ ಸಿನ್ಹಾಳಂತೆ ದಷ್ಟಪುಷ್ಟವಾಗಿದ್ದಳು. ಎಲ್ಲರಿಗೂ ಕಾಣುವಂತಾಗಿದ್ದಳು.
                   ನಿಖಿತಾಳಲ್ಲಿ ಹಲವು ಒಳ್ಳೆಯ ಗುಣಗಳಿದ್ದವು. ಕೆಲವು ದುರ್ಗುಣಗಳೂ ಇದ್ದವು. ದುರ್ಗುಣಗಳಲ್ಲಿ ಮುಖ್ಯವಾದದ್ದೆಂದರೆ ಕಂಡ ಕಂಡಿದ್ದನ್ನು ಕಚ್ಚುವ ಚಟ. ಬುಟ್ಟು, ಕಾಲುಮಣೆ, ಕಂಬ, ಕುತ್ತಿಗೆಗೆ ಕಟ್ಟಿದ ಸರಪಳಿ, ಯಾಮಾರಿ ಅದರ ಬಳಿ ಬಿಟ್ಟು ಹೋದ ಚಪ್ಪಲ್ಲು.. ಏನೂ ಸಿಕ್ಕಿಲ್ಲ ಎಂದರೆ ಕೊಟ್ಟಿಗೆಯಲ್ಲಿ ಕಟ್ಟಿದ್ದ ರಾಗಿಣಿ ದನಿಕರದ ಕಿವಿ.. ಹೀಗೆ ನಿಖಿತಾಳ ಕಚ್ಚುವ ಚಟಕ್ಕೆ ಬಲಿಯಾಗಿದ್ದು ಹಲವು. ನಿಖಿತಾಳಿಗೊಂದು ಸುಂದರ ಗೂಡನ್ನೂ ತಯಾರು ಮಾಡಿಕೊಟ್ಟಿದ್ದೆ. ಆದರೆ ಆಕೆಯ ಹಲ್ಲಿನ ಕಾವಿಗೆ ಅದೂ ಮುರಿದುಹೋಗಿತ್ತು. ಆಕೆಯ ಕಡಿತದ ಕಾಟ ತಾಳಲಾರದೇ ಒಂದೆರಡು ಸಾರಿ ದಬ್ಬನೆ ನಿಖಿತಾಳ ಬಾಯಿಗೆ ಬಡಿದಿದ್ದೂ ಇದೆ. ಆಗೆಲ್ಲಾ `ಕುಂಯಕ್..' ಎಂದು ಕೂಗಿ ತಪ್ಪು ಮಾಡಲಾರೆ ಎಂದಿದ್ದರೂ ಮತ್ತೆ ಯಥಾ ಪ್ರಕಾರ ನಿಖಿತಾಳ ಬಾಲ ಡೊಂಕೆಂಬುದನ್ನು ಸಾಬೀತುಪಡಿಸುತ್ತಿತ್ತು.
                  ರಾತ್ರಿಯ ವೇಳೆ  `ಊ...' ಎಂದು ಅರಚುವುದು ನಿಖಿತಾಳ ಇನ್ನೊಂದು ದುರ್ಗುಣ. ಅದೆಂತ ಕನಸು ಬೀಳುತ್ತವೋ ಏನೋ.. ಅಷ್ಟಷ್ಟು ಹೊತ್ತಿಗೆ `ಊ...' ಎಂದು ಅರಚಿಕೊಳ್ಳುತ್ತಿದ್ದಳು ನಿಖಿತಾ.. ರಾತ್ರಿಯ ಸುಖನಿದ್ರೆಯಲ್ಲಿರುತ್ತಿದ್ದ ನಾನು ದಡಕ್ಕನೆ ಎದ್ದು ಹೊರ ಬಂದು ಲೈಟ್ ಹಾಕುವಷ್ಟರಲ್ಲಿ ಗಪ್ ಚುಪ್. ಗದರಿ ಮತ್ತೆ ಹಾಸಿಗೆಯನ್ನು ಸೇರುವಷ್ಟರಲ್ಲಿ ಮತ್ತೆ `ಊ...' ಹಲವು ರಾತ್ರಿಗಳು ನಿಖಿತಾಳ ಅರಚುವಿಕೆಗೆ ಹೀಗೆ ಬಲಿಯಾಗಿದ್ದಿವೆ. ಬಹುಶಃ ಈ ಊಳಾಟವೇ ಆಕೆಯ ಅಂತ್ಯಕ್ಕೆ ಕಾರಣವಾಗಿರಬೇಕು. ಅದನ್ನು ಕ್ಲೈಮ್ಯಾಕ್ಸಿನಲ್ಲಿ ಹೇಳ್ತಿ ಅಲ್ಲಿತನಕ ತಡಕಳಿ..
                  ಆಕೆಯ ಇನ್ನೊಂದು ಪ್ರಮುಖ ದುರ್ಗುಣ ಎಂದರೆ ಕಂಡಕಂಡಲ್ಲಿ ಅಗೆಯುವುದು. ಅಂಗಳವಿರಲಿ, ಹೊಡ್ಸಲಿನ ಬುಡವಿರಲಿ ಅಥವಾ ಅಡಿಕೆ ಬೇಯಿಸುವ ಒಲೆಯಿರಲಿ ಅದನ್ನು ತನ್ನು ಉಗುರಿನಿಂದ ಅಗೆದು ಹಾಕುವ ಮಹಾಗುಣವನ್ನು ನಿಖಿತಾ ಹೊಂದಿದ್ದಳು.
                  ನಾನು ಮನೆಯಿಂದ ಎಲ್ಲಿಗೇ ಹೊರಡಲಿ ನಿಳಿತಾ ಕೂಡ ಬಣ್ಣ ಬೆಗಡೆಯಿಂದ ತಯಾರಾಗುತ್ತಿದ್ದುದು ವಿಶೇಷ. ನಾನು ಪ್ಯಾಂಟ್ ಹಾಕಿದ ತಕ್ಷಣ ನಿಖಿತಾಳ ಸಂಭ್ರಮ ಸಡಗರ ನೋಡಬೇಕು.. ಆಹಾ..ಅಂಗಳದ ತುಂಬೆಲ್ಲ ಅವಳೇ ಅವಳು.. ಕುಣಿಯುವುದೇನು ನಲಿಯುವುದೇನು ಆಹಾ.. ನಾನು ಬೈಕ್ ಹತ್ತುವವರೆಗೂ ನನ್ನ ಮುಂದೆ ಹಿಂದೆ ಹೆಚ್ಚೂ ಕಡಿಮೆ ಡ್ಯಾನ್ಸ್ ಮಾಡಿದಂತೆ ನಡೆಯುವುದು ಅವಳ ರೂಟೀನು ಕೆಲಸ. ಕೆಲವೊಮ್ಮೆ ನನ್ನ ಬೈಕಿನ ಹಿಂದೆ ಕಿಲೋಮೀಟರುಗಟ್ಟಲೆ ಹಿಂಬಾಲಿಸಿ ಬಂದಿದ್ದೂ ಇದೆ.. ನಾನು `ಹಚ್ಯಾ..' ಎಂದು ಹದರಿದಾಗಲೆಲ್ಲ.. ಅಕ್ಕಪಕ್ಕದಲ್ಲಿ ಏನೋ ಬ್ಯೂಸಿ ಕೆಲಸ ಇದೆ ಎಂಬಂತೆ ಪೋಸು ಕೊಡುತ್ತ `ಬಕ್ ಬಕ್ ಬೌ...' ಎಂದು ಕೂಗುತ್ತಾ ಗಮನವನ್ನು ಎತ್ತಲೋ ಹರಿಸಿದ ಸಂದರ್ಭಗಳೂ ಇವೆ.
                  ಮನೆಯಲ್ಲಿ ಪುರಸೊತ್ತಿದ್ದಾಗ ನಾನು ಮನೆಯ ದನಗಳನ್ನು ಬಿಟ್ಟುಕೊಂಡು ಕಾಯಲು ಹೋಗುತ್ತೇನೆ. `ಇಂವ ಎಂತದಾ ದನಕಾಯ್ತಾ..' ಎಂದು ನೀವು ನನ್ನ ಬಗ್ಗೆ ಆಡಿಕೊಂಡರೂ ತಪ್ಪಿಲ್ಲ. ದನಕಾಯುವುದು ನನಗೆ ಖಂಡಿತವಾಗಿಯೂ ಖುಷಿ ಕೊಡುವ ಸಂಗತಿ. ಬಹುಶಃ ನಾನು ದನಕಾಯುವಾಗ ಕಂಡಷ್ಟು ಕನಸನ್ನು ಬೆಳಗಿನ ಜಾವದಲ್ಲೂ ಕಂಡಿಲ್ಲ ಬಿಡಿ. ಹೀಗೆ ನಾನು ದನ ಕಾಯಲು ಹೊರಟೆನೆಂದಾಗ ನನಗಿಂತ ಮೊದಲು ಸಾಗುವವಳೇ ನಿಖಿತಾ. ನೋಡಿದರೆ ನನಗೆ ಬಾಡಿಗಾರ್ಡೇನೋ ಎಂದುಕೊಳ್ಳಬೇಕು. ದುರಂತವೆಂದರೆ ಯಾರಾದರೂ ನಿಖಿತಾಳ ಎದುರು ಬಂದು ದಾರಿಯಲ್ಲಿದ್ದ ಕಲ್ಲನ್ನೆತ್ತಿ ಒಗೆದಂತಹ ಸನ್ನೆ ಮಾಡಿದರೆ ಸಾಕು `ಕಂಯ್.. ಕಂಯ್.. ಕಂಯ್..' ಎಂದು ಕೂಗುತ್ತಾ ನನ್ನ ಹಿಂದೆ ಅಡಗುವಷ್ಟು ಧೈರ್ಯವಂತೆ.
                  ದನವನ್ನು ಬಿಟ್ಟಾಗ ನಿಖಿತಾ ಸುಮ್ಮನಿರೋದಿಲ್ಲ. ಆಕೆಗೆ ಆಟವಾಡುವ ಚಟ. ಅದಕ್ಕಾಗಿ  ರಾಗಿಣಿಯನ್ನೋ, ಶ್ರೀದೇವಿಯನ್ನೋ, ಇಲ್ಲ ಆಗ ತಾನೇ ಮೀಸೆ ಬಂದಿದ್ದ ದರ್ಶನನನ್ನೋ ಕರೆಯುತ್ತಾಳೆ. ರಾಗಿಣಿ ಸುಮ್ಮನೆ ನಿಖಿತಾಳ ಬಳಿ ಸಿಟ್ಟಿನಿಂದ ಹೊತ್ತಂತೆ ಮಾಡಿದರೆ ಶ್ರೀದೇವಿ ನಿಖಿತಾಳನ್ನು ಹಲವು ಸಾರಿ ಬೆನ್ನಟ್ಟಿ ದೂರಕ್ಕೆ ಓಡಿಸಿದ್ದಳು. ಹುಡುಗುಬುದ್ಧಿಯ ದರ್ಶನ ನಿಖಿತಾಳ ಜೊತೆ ಜೂಟಾಟ ಆಡಿ ಬಾಯಲ್ಲಿ ನೊಜಲು ಸುರಿಸಿ ಎಲ್ಲಾದರೂ ನೆರಳಿನಲ್ಲಿ ನಿಂತು ಸುಧಾರಿಸಿಕೊಳ್ಳುತ್ತಿದ್ದ ನೆನಪಿನ್ನೂ ಹಸಿ ಹಸಿಯಾಗಿದೆ.
                  ನಿಖಿತಾಳ ಕ್ರಿಯಾಶೀಲತೆಯನ್ನು ಆಕೆಯ ಡೊಂಕು ಬಾಲದಲ್ಲೇ ಅಳೆಯಬೇಕು ನೋಡಿ. ಆಟದ ಮೂಡಿನಲ್ಲಿದ್ದಾಗ ನಿಖಿತಾಳ  ಬಿಎಸ್ಸಾರ್ ಫ್ಯಾನಿಗಿಂತ ಜೋರಾಗಿ ಬೀಸುತ್ತಿರುತ್ತದೆ. ಕಾಲಂತೂ ರಪ್ಪ ರಪ್ಪನೆ ನೆಲಕ್ಕೆ ಬಡಿಯುವ ವೈಖರಿ ಇಂದಿನ ಕನ್ನಡ ಸಿನಿಮಾಗಳ ಐಟಮ್ ಡ್ಯಾನ್ಸರಿಗಿಂತ ಚನ್ನಾಗಿರುತ್ತದೆ ಎಂದರೆ ಖಂಡಿತ ಅತಿಶಯೋಕ್ತಿಯಲ್ಲ ಬಿಡಿ. ಆದರೆ ತನಗೆ ಭಯವಾದರೆ ಸಾಕು ನಿಖಿತಾಳ ಬಾಲವನ್ನು ಮಾತ್ರ ಹುಡುಕಬೇಕು. ಅಫ್ಕೋರ್ಸ್.. ಇಂತಹ ಸಂದರ್ಭದಲ್ಲಿಯೇ ಆಕೆಯ ಬಾಲ ನೆಟ್ಟಗಾಗುವುದೂ ಇದೆ.. ಯಾರಾದರೂ ನಾಯಿ ಬಾಲ ಡೊಂಕು ಮಾರಾಯ್ರೆ ಎಂದರೆ ಅವರಿಗೆ ನಿಖಿತಾಳನ್ನು ತೋರಿಸುವಾ ಎಂದುಕೊಂಡಿದ್ದಿದ್ದೂ ಇದೆ.
                 ಇಂತಹ ನಿಖಿತಾ ಒಂದು ಮುಂಜಾನೆ ಸರಪಳಿಯಿಂದ ಬೋಳು ಉಳುಚಿಕೊಂಡು ಗುಡ್ಡದತ್ತ ಓಡಿತ್ತು. ನಾನಂತೂ ಆಕೆಯ ಹೆಸರು ಹೇಳಿ `ಕ್ರೂಯ್.. ಕ್ರೂಯ್..' ಎಂದು ಸಾಕಾಗಿತ್ತು. ಅರ್ಧಗಂಟೆಯಾದರೂ ಪತ್ತೆಯೇ ಇರಲಿಲ್ಲ. ಎಲ್ಲೋ ಹಡಬೆ ತಿರುಗಲು ಹೋಗಿದೆ ಎಂದುಕೊಂಡ ಹತ್ತೇ ನಿಮಿಷದಲ್ಲಿ ನಿಖಿತಾ ವಾಪಾಸ್ ಆಗಿತ್ತು. ಬಾಯಲ್ಲಿ ಚಿಕ್ಕ ಮೊಲದ ಮರಿಯನ್ನು ಕಚ್ಚಿ ತಂದಿತ್ತು. ಪುಟ್ಟ ಮರಿ. ನಿಖಿತಾಳ ದಾಳಿಗೆ ಸಿಕ್ಕಿ ಆಗಲೇ ಸತ್ತು ಹೋಗಿತ್ತು. `ಧರಿದ್ರ ನಾಯಿಗೊಡ್ಡೆ..' ಎಂದು ಬೈದು ಬಡಿಗೆ ತೆಗೆದುಕೊಳ್ಳುವಷ್ಟರಲ್ಲಿ ನಿಖಿತಾ ಮತ್ತೆ ಪರಾರಿಯಾಗಿತ್ತು. ಆಕೆಗೆ ಆ ಮೊಲದ ಮರಿ ಆ ದಿನ ಭೋರಿ ಭೋಜನವಾಗಿತ್ತು. ರಾತ್ರಿ ನಾನು ಇಲ್ಲದ ಹೊತ್ತನ್ನು ನೋಡಿ ಮನೆಗೆ ವಾಪಾಸಾಗಿತ್ತು. ಮರುದಿನ ಎನ್ನುವ ವೇಳೆಗೆ ನನ್ನ ಸಿಟ್ಟೂ ತಣಿದಿತ್ತು.
                 ನಿಖಿತಾಳ ಪುರಾಣ ಇಷ್ಟೆಲ್ಲ ಕೇಳಿದ ಮೇಲೆ ವರ್ಷಗಟ್ಟಲೆ ಇದು ನಮ್ಮ ಮನೆಯ ನಿವಾಸಿಯಾಗಿತ್ತು ಎಂದುಕೊಳ್ಳುತ್ತಿದ್ದೀರೇನೋ.. ಹಾಗೇನೂ ಆಗಿಲ್ಲ ಬಿಡಿ. 10 ತಿಂಗಳೋ ಅಥವಾ ಹನ್ನೊಂದೋ ಇರಬೇಕು. ಅಷ್ಟರಲ್ಲಿ ಅದು ಮಾಡಿದ ಪ್ರತಾಪ ಬಹಳಷ್ಟು ಎಂದರೆ ತಪ್ಪಲ್ಲ ಬಿಡಿ. ಮೊದ ಮೊದಲು ನಿಖಿತಾಳನ್ನು ಕಂಡರೆ ಮಾರು ದೂರ ಹಾರಿ ಬೈದುಬಿಡುತ್ತಿದ್ದ ಆಯಿಗೂ ಅಚ್ಚುಮೆಚ್ಚಿನದಾಗಿತ್ತು. ಬೆಳಗ್ಗಿನ ದೋಸೆಗೋ, ಮದ್ಯಾಹ್ನದ ಉಪ್ಪಿಲ್ಲದ ಮಜ್ಜಿಗೆಯನ್ನಕ್ಕೋ  ನಿಖಿತಾ ಕಾಯ್ದು ನಿಲ್ಲುತ್ತಿದ್ದ ಪರಿಯನ್ನು ಗಮನಿಸಿದ ಆಯಿ ಅನೇಕ ಸಾರಿ ನಿಖಿತಾಳಿಗೆ ವಿವಿಧ ರುಚಿಯ ತಿಂಡಿಗಳನ್ನು ಹಾಕಿ ಸಾಕಿ ಸಲಹುವ ಪ್ರಯತ್ನವನ್ನೂ ನಡೆಸಿದ್ದಳು. ತನಗೆ ಊಟ ತಂದಾಗಲೆಲ್ಲ ಕಾಲು ಸುತ್ತುತ್ತ ಬರುವ ನಿಖಿತ ಊಟ ಹಾಕಿದ ನಂತರ ಅದರ ಊಟದ ಬಟ್ಟಲ ಬಳಿ ನನ್ನನ್ನೂ ಸೇರಿದಂತೆ ಯಾರೇ ಹೋದರೂ `ಗುರ್ರೆ'ನ್ನುತ್ತಿದ್ದ  ಪರಿ ಮಾತ್ರ ಭಯಂಕರವಾಗಿ ಕಂಡಿತ್ತು.
                ಮನೆಯ ಸುತ್ತ ಕಾಡಿರುವ ಕಾರಣ ನಾಯಿಗಳನ್ನು ಕಚ್ಚಿ ಒಯ್ಯುವ ಗುರಕೆಗಳ ಕಾಟ ನಮ್ಮಲ್ಲಿ ಬಹಳ ಜಾಸ್ತಿ. ಈ ಕಾರಣಕ್ಕಾಗಿಯೇ ನಾನು ನಿಖಿತಾಳಿಗೊಂದು ಪಂಜರವನ್ನೂ ಮಾಡಿದ್ದೆ. ಪಂಜರ ಚನ್ನಾಗಿತ್ತಾದರೂ ನಿಖಿತಾಳಿಗೆ ಮಾತ್ರ ಅದರೊಳಗೆ ಹೋಗಲು ಮನಸ್ಸಾಗುತ್ತಿರಲಿಲ್ಲ. `ನಿಖಿತಾ.. ಗೂಡೊಳಗೆ ಹೋಗು..' ಎಂದು ಜೋರುಮಾಡಿದಾಗಲೆಲ್ಲ ಜೋಲು ಮುಖದೊಂದಿಗೆ ಮೊಂಡು ಹಟ ಮಾಡುತ್ತಿತ್ತು. ಆದರೂ ಅದನ್ನು ನಾನು ಗೂಡೊಳಗೆ ದಬ್ಬುತ್ತಿದ್ದೆ. ಅಲ್ಲಿಗೆ ಹೋದ ನಂತರ ಭಯಂಕರ ಸಿಟ್ಟು ಮಾಡುತ್ತಿತ್ತು ನಿಖಿತಾ. ಕೂಗಾಟವಂತೂ ಜೋರಾಗುತ್ತಿತ್ತು. ಪಂಜರದ ಸರಳುಗಳನ್ನು ಹಲ್ಲಿನಿಂದ ಕಚ್ಚುವುದು, ಕಾಲಿನಿಂದ ಗೆಬರುವ ಕೆಲಸವನ್ನು ಅದು ಮಾಡುತ್ತಿತ್ತು. ಇಂತಹ ಅದರ ಅಬ್ಬರದ ಕಾರ್ಯಕ್ಕಾಗಿಯೇ ಆ ಪಂಜರದ ಒಂದು ಭಾಗ ಕಿತ್ತು ಬಂದಿತ್ತು. ನನ್ನ ಅರಿವಿಗೆ ಹಲವು ದಿನಗಳ ಕಾಲ ಅದು ಬಂದೇ ಇರಲಿಲ್ಲ.
               ನಿಖಿತಾಳನ್ನು ಕಂಡರೆ ನನಗೆ ಖಂಡಿತವಾಗಿಯೂ ಪೂರ್ಣಚಂದ್ರ ತೇಜಸ್ವಿಯವ `ಕಿವಿ'ಯ ನೆನಪಾಗುತ್ತದೆ. ಅವರೊಡನೆ ಆತ್ಮೀಯವಾಗಿ ಒಡನಾಡಿದ ನಾಯಿ ಅದು. ನನ್ನ ಜೊತೆಗೂ ನಿಖಿತ ಹಾಗೆಯೇ ಇತ್ತು. ನಾನು ಅಘನಾಶಿನಿ ನದಿಯಲ್ಲಿ ಈಜಲು ಹೊಳೆಗೆ ಜಿಗಿದರೆ ಅದೂ ಜಿಗಿಯುತ್ತಿದ್ದುದು ವಿಶೇಷ. ಒಂದೆರಡು ಸಾರಿ ಜಿಗಿಯುವ ಭರದಲ್ಲಿ ನೀರೊಳಗೆ ಕಂತಿ ನೀರು ಕುಡಿದ ಮೇಲೆ ಮತ್ತೆ ಅಂತಹ ಸಾಹಸ ಮಾಡಲಿಲ್ಲ. ನಿಖಿತಾಳ ವೈರಿಗಳ ಕುರಿತು ಸ್ವಲ್ಪವಾದರೂ ಹೇಳದಿದ್ದರೆ ಏನೋ ಮಿಸ್ ಹೊಡೆಯುತ್ತದೆ.
               ತನ್ನ ಮೈಮೇಲೆ ಸದಾ ಬೀಡು ಬಿಟ್ಟುಕೊಂಡಿರುವ ಕಡಿತದ ಹುಳು ನಿಖಿತಾಳ ವೈರಿ ನಂಬರ್ 1. ಈ ಕಡಿತದ ಹುಳುವಿನ ಬಾಧೆಯನ್ನು ತಾಳಲಾರದೇ ಅನೇಕ ಸಾರಿ ತನ್ನ ಮೈಯನ್ನು ತಾನು ಕಚ್ಚಿಕೊಂಡಿದ್ದೂ ಇದೆ. ಅದರ ಮೈ ಕಡಿತದ ಕಾರಣ ನಮ್ಮ ಮನೆಯ ಸದಸ್ಯರು ಆಕೆಯ ಮೈ ತುರಿಸಬೇಕಿತ್ತು. ಹಾಗೆ ಮಾಡದಿದ್ದರೆ ನಮ್ಮ ಮೈಮೇಲೆ ಜಿಗಿಯುವ ಕಾರ್ಯವನ್ನೂ ಅದು ಮಾಡುತ್ತಿತ್ತು. ಹಾಕಿದ ಆಹಾರವನ್ನು ಕದ್ದು ತಿನ್ನಲು ಬರುವ ಕಾಗೆಗಳ ಜೋಡಿ ನಿಖಿತಾಳ ವೈರಿ ನಂಬರ್ 2. ಎಷ್ಟೇ ನಾಜೂಕಿನಿಂದ ಯಾರಿಗೂ ಹತ್ತಿರ ಬರಲು ಅವಕಾಶವಿಲ್ಲದಂತೆ ತನಗೆ ಹಾಕುವ ತಿಂಡಿ ಅಥವಾ ಊಟವನ್ನು ತಿನ್ನುತ್ತಿದ್ದರೂ ಬುದ್ಧಿವಂತ ಕಾಗೆಗಳು ಅದನ್ನು ಎಗರಿಸಲು ಯತ್ನಿಸುತ್ತಿದ್ದವು. ಇದರಿಂದ ಸಿಟ್ಟಾಗುತ್ತಿದ್ದ ನಿಖಿತಾ ಅನೇಕ ಸಾರಿ ಅವುಗಳನ್ನು ಬೆನ್ನಟ್ಟಿತ್ತು. ಅವರನ್ನು ಹಿಡಿಯುವ ಭರದಲ್ಲಿ ಎರಡೋ ಮೂರೋ ಸಾರಿ ನಮ್ಮ ಮನೆಯ ಹಂಚಿನ ಮಾಡನ್ನೂ ಏರಿಬಿಟ್ಟಿದ್ದ ನಿಖಿತಾ ಅಪ್ಪನ ಬಡಿಗೆಯ ಏಟಿಗೆ ಹೆದರಿ ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ಕೆ ಮುಂದಾಗಿರಲಿಲ್ಲ.
              ನಿಖಿತಾ ನಮ್ಮ ಮನೆಯಲ್ಲಿದ್ದ ಸಮಯದಲ್ಲಿಯೇ ಸಾಂಬ ಹಾಗೂ ರಂಗ ಎಂಬ ಎರಡು ಮುದ್ದಾದ ಬೆಕ್ಕಿನ ಮರಿಗಳು ನಮ್ಮಲ್ಲಿದ್ದವು. ಈ ಮರಿಗಳಿಗೆ ಯಾವುದೇ ಸ್ಥಳವಾದರೂ ಸರಿ. ಎಗ್ಗಿಲ್ಲ. ನಾವು ನಾಯಿಯನ್ನು ಮನೆಯೊಳಗೆ ಬಿಟ್ಟುಕೊಳ್ಳುತ್ತಿರಲಿಲ್ಲ. ಆದರೆ ಬೆಕ್ಕಿನ ಮರಿಗಳು ಮನೆಯೊಳಗೆ ಲೈಯನ್ ಕಿಂಗ್ ಮರಿಯಂತೆ ರಾಜಾರೋಷವಾಗಿ ಓಡಾಡುತ್ತಿದ್ದವು. ಸಾಂಬ ಹಾಗೂ ರಂಗ ಬೆಕ್ಕಿನ ಮರಿಗಳು ಮನೆಯೊಳಗೆ ಓಡ್ಯಾಡುತ್ತಿದ್ದುದು ನಿಖಿತಾಳಿಗೆ ಹೊಟ್ಟೆಕಿಚ್ಚು ತರುತ್ತಿತ್ತೋ ಏನೋ. ಅನೇಕ ಸಾರಿ ಇವುಗಳನ್ನು ಬೆನ್ನಟ್ಟಿದ್ದೂ ಇದೆ. ಸಾಂಬ ಹಾಗೂ ರಂಗನ ಹಿಂದೆಯೇ ತಾನೂ ಮನೆಯೊಳಗೆ ಬರಲು ಪ್ತಯತ್ನಿಸಿ ಹೊಡೆತ ತಿಂದಿದ್ದೂ ಇದೆ. ಈ ಕಾರಣದಿಂದಲೇ ನಿಖಿತಾಳ ಶತ್ರು ನಂಬರ್ 3 ಪಟ್ಟವನ್ನು ಈ ಬೆಕ್ಕಿನ ಮರಿಗಳು ಹೊತ್ತುಕೊಳ್ಳಬೇಕಾಯಿತು.
               ಅಡಿಕೆ ಮರದಲ್ಲಿ ಕೆಂಪಾದ ಅಡಿಕೆಯನ್ನು ಸೀಬಿ ಸೀಬಿ ಒಗೆಯುತ್ತಿದ್ದ ಕಪ್ಪು ಮುಸುಡಿಯ ಉದ್ದ ಬಾಲದ ಮಂಗಗಳು ನಿಖಿತಾಳ ನಾಲ್ಕನೆಯ ಹಾಗೂ ಫೈನಲ್ ಶತ್ರು. ನಿಖಿತಾಳನ್ನು ಕಂಡರೆ ಹಲ್ಲುಕಿಸಿದು ಏಡಿಸುತ್ತಿದ್ದ ಇವುಗಳು ನಿಖಿತಾಳ ಬಾಯಿಗೆ ಬೆದರಿ ಮರ ಹತ್ತಿ ಕೂರುತ್ತಿದ್ದುದೂ ಇದೆ. ಮನೆಯ ಅಂಗಳದಲ್ಲಿರುವ ಕಂಚಿಮರದ ಕಂಚಿಕಾಯಿಗಳನ್ನು ಎಗರಿಸುವ ಪ್ರಯತ್ನ ಮಂಗನ ಬಳಗದ್ದಾದರೆ ಅವನ್ನು ತಡೆಯಬೇಕು ಎನ್ನುವುದು ನಿಖಿತಾಳ ಕಾರ್ಯ. ಅನೇಕ ಸಾರಿ ನಿಖಿತಾಳ ಕಣ್ಣು ತಪ್ಪಿಸಿ ಈ ಮಂಗನ ಗ್ವಾಲೆ ಕಂಚಿ ಮರ ಏರಿದ್ದೂ ಇದೆ. ಅದನ್ನು ಕಂಡು ಓಡಿ ಬರುವ ನಿಖಿತಾಳ ಮೈಮೇಲೆ ಹಲವು ಸಾರಿ ಕಂಚಿ ಕಾಯಿಗಳಿಂದ ಮಂಗಗಳು ಹೊಡೆದಿದ್ದೂ `ಕಂಯ್ ಕಂಯ್..' ಗುಡುತ್ತಲೇ ಅಬ್ಬರದಿಮದ ಮಂಗನ ಗ್ವಾಲೆ ಬೆದರಿಸಿದ್ದು ನಿಖಿತಾಳ ಘನ ಕಾರ್ಯಗಳಲ್ಲಿ ಒಂದೆನ್ನಿಸಿದೆ.
             ಇಂತಹ ಗುಣದ ನಿಖಿತಾಳ ಅಂತ್ಯ ಅತ್ಯಂತ ದುರಂತದಿಂದ ಕೂಡಿತ್ತು. ಕಳೆದ ಶಿರಸಿ ಜಾತ್ರೆಯ ಸಂದರ್ಭದಲ್ಲಿ ನಾನು ಜಾತ್ರೆಗೆ ಬಂದಿದ್ದೆ. ರಾತ್ರಿ 2 ಗಂಟೆಯಾಗಿರಬೇಕು. ನಾನು ವಾಪಾಸು ಬಂದು ದಣೀ ಹಾಸಿಗೆಯ ಮೇಲೆ ಅಡ್ಡಾಗಿದ್ದೆ. ಪಂಜರವನ್ನು ತೂತು ಮಾಡಿದ್ದ ನಿಖಿತಾ ಅದ್ಯಾವುದೋ ಮಾಯೆಯಲ್ಲಿ ಗೂಡಿನಿಂದ ಹೊರಬಿದ್ದು ಅಂಗಳದಲ್ಲೆಲ್ಲೋ ಮಲಗಿತ್ತಿರಬೇಕು. ಕೊಬ್ಬಿದ ನಿಖಿತಾಳ ಮೇಲೆ ಅದ್ಯಾವುದೋ ಗುರುಕೆ(ನಾಯಿ, ಮೊಲ, ಚಿಕ್ಕ ಚಿಕ್ಕ ಸಸ್ಯಾಹಾರಿ ಪ್ರಾಣಿಗಳನ್ನು ಹಿಡಿಯುವ ಚಿರತೆ ಜಾತಿಗೆ ಸೇರಿದ ಪ್ರಾಣಿ: ಮರಿಚಿರತೆ ಎನ್ನಬಹುದು)ಗೆ ಅನೇಕ ದಿನಗಳಿಂದ ಕಣ್ಣಿತ್ತೆಂದು ಕಾಣಿಸುತ್ತದೆ. ಇನ್ನೇನು ನನಗೆ ನಿದ್ದೆ ಬರಬೇಕು ಅಷ್ಟರಲ್ಲಿ `ಕಂಯ್.. ಕೊಂಯಯ್ಯೋ..' ಎಂಬ ಶಬ್ದ.. ಒಮ್ಮೆ ಗುರ್ರೆಂದಂತಾಯ್ತು.. ನಿಶಬ್ದ. ನಾನು ದಡಬಡಿಸಿ ಎದ್ದು ಲಯಟ್ ಹಾಕಿ ಅಂಗಳಕ್ಕೆ ಹೋಗುವಷ್ಟರಲ್ಲಿ ನಿಖಿತಾ ಇಲ್ಲವೇ ಇಲ್ಲ. ಅಂಗಳದಲ್ಲಿ ಹುಡುಕಾಡುವಷ್ಟರಲ್ಲಿ ಸದ್ದು ಕೇಳಿದ ಅಪ್ಪಯ್ಯನೂ ಎದ್ದು ಬಂದಿದ್ದ. ಅದೇ ವೇಳೆ ತೋಟದ ಮೂಲೆಯಲ್ಲೇಲ್ಲೋ ಗುರಕೆ ಕೈಗಿದಂತಾಯ್ತು. `ತಡಿಯಾ ತಮಾ..' ಎಂದವನೇ ಅಪ್ಪ ಬ್ಯಾಟರಿಯನ್ನು ಹಿಡಿದು ತೋಟದತ್ತ ನಡೆದ. ಸ್ವಲ್ಪ ಹೊತ್ತಿಗೆ ಮರಳಿ ಬಂದ. `ಏನಾಯ್ತು..' ಎಂದೆ. `ಕಂಡಿದ್ದಿಲ್ಲೆ..' ಎಂದವನೇ `ಗುರಕೆ ಹೊತ್ಕಂಡು ಹೋತಾ..' ಎಂದ. ನಾನು ನಿಟ್ಟುಸಿರು ಬಿಟ್ಟೆ.
            ಬೆಳಗಾದ ಕೂಡಲೇ ಅಂಗಳದಲ್ಲಿ ಹುಡುಕಿದೆ. ಗೂಡಿನ ಒಂದು ಭಾಗ ಬಾಯಿ ಬಿಟ್ಟುಕೊಂಡಿತ್ತು. ನಿಖಿತಾ ಮಲಗಿದ್ದ ಜಾಗದಲ್ಲಿ ರಕ್ತದ ಕಲೆಗಳು, ಗುರಕೆ ಬಾಯಿ ಹಾಕಿದ್ದೇ ತಡ ಅದರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಕುರುಹುಗಳೂ ಕಂಡವು. ಕಾಲಿನ ಉಗುರಿನಿಂದ ನೆಲವನ್ನು ಬಲವಾಗಿ ಊರಿದ್ದ ನಿಖಿತಾಳನ್ನು ಗುರಕೆ ಹಾಗೆಯೇ ಎಳೆದುಕೊಂಡು ಹೋಗಿತ್ತು. ಅದಕ್ಕೆ ಸಾಕ್ಷಿಯೆಂಬಂತೆ ಮಾರುದ್ದದ ಗೀರು ಅಂಗಳದಲ್ಲಿ ಬಿದ್ದಿತ್ತು. ರಾತ್ರಿ ಗುರಕೆ ಕೂಗಿದ ಸ್ಥಳದತ್ತ ಹೋಗಿ ನೋಡಿದೆ. ಅಲ್ಲೆಲ್ಲೋ ನಿಖಿತಾಳನ್ನು ಹೊತ್ತೊಯ್ದ ಗುರಕೆ ವಿಜಯೋತ್ಸವದ ಧ್ವನಿಯನ್ನು ಹೊರಡಿಸಿರಬೇಕು. ತೋಟದ ಮಂಡಗಾದಿಗೆ ಸಂಕದ ಮೇಲೆ ರಕ್ತ ಕಂಡಂತಾಯ್ತು. `ಹಾಳಾದ ಗುರಕೆ..'  ಎಂದು ಬೈದೆ. `ಧರಿದ್ರ ಕುನ್ನಿಗೊಡ್ಡು.. ಅಷ್ಟು ಚಂದ ಗೂಡು ಮಾಡಿಟ್ಟಿದ್ರೂ ಅದನ್ನು ಮುರದು ಹೊರಗೆ ಬಂದಿತ್ತು. ಸಾಯವು ಹೇಳೆ ಹಿಂಗ್ ಮಾಡ್ಕಂಡಿತ್ತು ಕಾಣ್ತು..' ಎಂದು ಅಪ್ಪ ಗೊಣಗಿದ. ನಿಖಿತ ನೆನಪಾಗಿದ್ದಳು.

Sunday, February 2, 2014

ಸುಳಿವ ಪ್ರೀತಿ

ಮಣ್ಣ ಕಣ ಕಣದೊಳಗೆ
ವರ್ಷಧಾರೆಯು ಸುರಿದು
ಕಂಪು ತಾ ಸೂಸಿರಲು
ಪ್ರೀತಿ ಸುಳಿದಿತ್ತು ||

ಹೊಸ ಚಿಗುರು ಮೊಳೆತಿರಲು
ನವ ಹಕ್ಕಿ ನಲಿದಿರಲು
ಬದುಕ ಬಯಸಲು ಅಲ್ಲಿ
ಪ್ರೀತಿ ಸುಳಿದಿತ್ತು ||

ಹಾರಿರುವ ಕೋಗಿಲೆಯು
ಮರಳಿ ಮಾಮರ ಬಯಸಿ
ಜೊತೆಗೂಡ ಬಂದಾಗ
ಪ್ರೀತಿ ಸುಳಿದಿತ್ತು ||

ಮನಸು ಹಸಿರಾಗಿರಲು
ಜೊತೆಯುಸಿರು ಬೆರೆತಾಗ
ಮನಸು ಮನಸಿನ ನಡುವೆ
ಪ್ರೀತಿ ಸುಳಿದಿತ್ತು ||

**
(ಈ ಕವಿತೆಯನ್ನು 01.11.2006ರಂದು ದಂಕಲ್ಲಿನಲ್ಲಿ ಬರೆದಿದದ್ದು)
(23.01.2208ರಂದು ಆಕಾಶವಾಣಿ ಕಾರವಾರದಲ್ಲಿ ಕವಿತೆಯನ್ನು ವಾಚಿಸಲಾಗಿದೆ)
(ಮುತ್ಮೂರ್ಡ್ ಮಾದತ್ತೆ, ಸುಪರ್ಣ ದಂಟಕಲ್ ಹಾಗೂ ಪೂರ್ಣಿಮಾ ಹೆಗಡೆ ಈ ಕವಿತೆಗೆ ರಾಗವನ್ನು ಹಾಕಿ ಹಾಡಿದ್ದಾರೆ. ಅವರಿಗೆ ಧನ್ಯವಾದಗಳು )

Saturday, February 1, 2014

ಬೆಂಗಾಲಿ ಸುಂದರಿ-5

                    ವಿನಯಚಂದ್ರ ಹಾಗೂ ಜೊತೆಗಾರರು ನವದೆಹಲಿಯನ್ನು ತಲುಪುವ ವೇಳೆಗೆ ದೆಹಲಿಯನ್ನು ದಟ್ಟ ಮಂಜು ಆವರಿಸಿತ್ತು. ಕಣ್ಣೆದುರು 10-15 ಮೀಟರ್ ದೂರದವರೆಗೆ ಏನೂ ಕಾಣಿಸದು ಎನ್ನುವಷ್ಟು ಮಂಜು. ಮಿಳಿಯ ಪರದೆ. ಚುಮು ಚುಮು ಚಳಿ. ನಾಲ್ವರೂ ಏರ್ ಪೋರ್ಟಿನಿಂದ ಸೀದಾ ಕಬ್ಬಡ್ಡಿ ತರಬೇತಿಗೆಂದು ನಿಗದಿ ಪಡಿಸಿದ್ದ ಸ್ಥಳಕ್ಕೆ ತೆರಳಿದ್ದರು. ಅಲ್ಲಾಗಲೇ ತಂಡದ ಬಹುತೇಕ ಎಲ್ಲ ಆಟಗಾರರೂ ಬಂದಿದ್ದರು. ಒಟ್ಟೂ 12 ಜನರ ತಂಡ. ಏಳು ಜನ ಕಬ್ಬಡ್ಡಿ ಆಡುವವರಾದರೆ ಐವರು ಇತರೆ ಆಟಗಾರರು. ಆಟಗಾರರಲ್ಲಿ ಹೆಚ್ಚಿನವರು ದಕ್ಷಿಣ ಭಾರತದವರಾಗಿದ್ದರು. ಕರ್ನಾಟಕದಿಂದ ವಿನಯಚಂದ್ರನಿದ್ದರೆ ತಮಿಳುನಾಡಿನಿಂದ ಇಬ್ಬರು, ಕೇರಳದಿಂದ ಒಬ್ಬಾತ, ಮಹಾರಾಷ್ಟ್ರದಿಂದ ಇಬ್ಬರು, ಆಂದ್ರದಿಂದ ಇಬ್ಬರು, ಓರಿಸ್ಸಾದ ಒಬ್ಬಾತ, ಇದ್ದರೆ ಉಳಿದ ಆಟಗಾರರು ಮದ್ಯಪ್ರದೇಶ, ಜಾರ್ಖಂಡ್, ಉತ್ತರಪ್ರದೇಶಕ್ಕೆ ಸೇರಿದವರಾಗಿದ್ದರು. ಇಬ್ಬರು ಪಂಜಾಬಿನವರೂ ಇದ್ದರು. ಎಲ್ಲ ಒಟ್ಟು ಸೇರುವ ವೇಳೆಗೆ ಮದ್ಯಾಹ್ನವೂ ಆಗಿತ್ತು.
                   ಅಷ್ಟರಲ್ಲಿ ಕೋಚ್ ಪ್ರಕಾಶ ಜಾಧವ್ ಅವರೂ ಆಗಮಿಸಿದ್ದರು. ಅವರಿಗೆ ಟೀಮಿನಲ್ಲಿದ್ದ ಹಳೆಯ ಆಟಗಾರರ ಪರಿಚಯವಿತ್ತು. ಎಲ್ಲರನ್ನೂ ಮಾತನಾಡಿಸಿ ಕೊನೆಯದಾಗಿ ವಿನಯಚಂದ್ರ ಹಾಗೂ ಸೂರ್ಯನ್ ಬಳಿಗೆ ಆಗಮಿಸಿದರು. ಬಂದವರೇ ಸೂರ್ಯನ್ ನ್ನು ಮಾತನಾಡಿಸಿದರು. ನಂತರ ವಿನಯಚಂದ್ರನ ಬಳಿ ತಿರುಗಿ `ವಿನಯ್ ಅವರೆ ಚಿದಂಬರ್ ಅವರು ಎಲ್ಲಾ ಹೇಳಿದ್ದಾರೆ. ಆಲ್ ದಿ ಬೆಸ್ಟ್.. ಚನ್ನಾಗಿ ಆಡಿ' ಎಂದರು.
                 ವಿನಯಚಂದ್ರ `ಥ್ಯಾಂಕ್ಸ್..ಖಂಡಿತ.. ಎಲ್ಲಾ ನಿಮ್ಮ ಆಶೀರ್ವಾದ ಸರ್' ಎಂದ.
                 ನಂತರ ತರಬೇತಿ ಶುರುವಾದವು. ವಿಶ್ವಕಪ್ ವಿಜಯಕ್ಕೆ ಅಗತ್ಯವಾದಂತಹ ಎಲ್ಲ ತರಬೇತಿಗಳನ್ನೂ ಅಲ್ಲಿ ನೀಡಲಾಗುತ್ತಿತ್ತು. ದಿನದಿಂದ ದಿನಕ್ಕೆ ವಿನಯಚಂದ್ರ ಹೊಸತನ್ನು ಕಲಿಯುತ್ತ ಹೋದ. ವಿನಯಚಂದ್ರ ಇದುವರೆಗೂ ಏನು ಕಲಿತಿದ್ದನೋ ಅದಕ್ಕಿಂತಲೂ ಹೆಚ್ಚಿನದನ್ನೇನೋ ಕಲಿಯುತ್ತಿದ್ದೇನೆ ಎನ್ನಿಸಿತು. ಚುಮು ಚುಮು ಚಳಿಯಲ್ಲಿಯೂ ಬೆವರು ಸುರಿಸುವಂತೆ ತರಬೇತಿ ನಡೆಯುತ್ತಿತ್ತು. ಕಬ್ಬಡ್ಡಿ ತರಬೇತಿ ನಡೆಯುತ್ತಿದ್ದ ನ್ಯಾಶನಲ್ ಗ್ರೌಂಡ್ ನಲ್ಲಿ ಆಗೊಮ್ಮೆ ಈಗೊಮ್ಮೆ ಸೂರ್ಯಕಿರಣದ ಪರಿಚಯವಾಗುತ್ತಿತ್ತಾದರೂ ದಿನದ ಬಹು ಸಮಯ ತಿಳಿಮೋಡವೋ, ಮಂಜಿನ ಪೊರೆಯೋ ಆವರಿಸುತ್ತಿತ್ತು. ಇಂತಹ ವಾತಾವರಣದಲ್ಲಿಯೂ ಕಷ್ಟಪಟ್ಟು ತರಬೇತಿ ನಡೆಸುತ್ತಿದ್ದರು ಆಟಗಾರರು.

**

                      ನವದೆಹಲಿ ವಿನಯಚಂದ್ರನ ಪಾಲಿಗೆ ನಿತ್ಯನೂತನವಾಗಿತ್ತು. ಪ್ರತಿದಿನ ಹೊಸ ತರವಾಗಿ ಆತನಿಗೆ ಕಲಿಸುತ್ತ ಹೋಯಿತು. ಈ ಮುನ್ನ ಆರೆಂಟು ಸಾರಿ ವಿನಯಚಂದ್ರ ನವದೆಹಲಿಗೆ ಬಂದಿದ್ದನಾದರೂ ದೆಹಲಿಯ ಬೀದಿಗಳಲ್ಲಿ ಸುತ್ತಾಡಲು ಸಾಧ್ಯವಾಗಿರಲಿಲ್ಲ. ಆದರೆ ಈ ಸಾರಿ ಸಾಕಷ್ಟು ಸಮಯ ಸಿಕ್ಕಿತು. ತಿರುಗಾಡಲು ಜೊತೆಗೆ ಸೂರ್ಯನ್ ಸಿಕ್ಕಿದ್ದ. ಆ ಕಾರಣದಿಂದ ನವದೆಹಲಿಯ ಬೀದಿಗಳತ್ತ ವಿನಯಚಂದ್ರ ಮುಖ ಮಾಡಿದ್ದ.
                     ಕ್ರಿಕೆಟ್ ಆಟಗಾರರು ಭಾರತದಲ್ಲಿ ಸಾಕಷ್ಟು ಹೆಸರು ಮಾಡಿಕೊಂಡಿರುತ್ತಾರೆ. ಈ ಕಾರಣದಿಂದ ಅವರು ಹೋದಲ್ಲೆಲ್ಲ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಟೆನ್ನಿಸ್ ಹಾಗೂ ಫುಟ್ ಬಾಲ್ ಆಟಗಾರರಿಗೂ ಕೆಲವೊಮ್ಮೆ ಅಭಿಮಾನಿಗಳ ಕಾಟವಿರುತ್ತದೆ. ಹಾಕಿಗೂ ಆಗೀಗ ಅಭಿಮಾನಿಗಳು ಕಾಣುತ್ತಾರೆ. ಆದರೆ ಕಬ್ಬಡ್ಡಿಯನ್ನು ಕೇಳುವವರು ಬಹಳ ಕಡಿಮೆಯೇ ಎನ್ನಬಹುದು. ಈ ಕಾರಣಕ್ಕಾಗಿ ಯಾವುದೇ ತೊಂದರೆಯಿಲ್ಲದೇ ವಿನಯಚಂದ್ರ ದೆಹಲಿಯಲ್ಲಿ ಸುತ್ತಾಡಿದ. ತನ್ನಿಷ್ಟದ ದಾಲ್ ಚಾವಲ್ ತಿಂದ. ಪಾನಿಪುರಿಯನ್ನೂ ತಿಂದ. ಸೂರ್ಯನ್ ಕೂಡ ಆತನಿಗೆ ಜೊತೆಗಾರಿಕೆ ನೀಡಿದ. ದೆಹಲಿಯ ರಾಜಪಥ, ಹೊಸ ದಿಲ್ಲಿಯ ಬೀದಿಗಳು, ಫಿರೋಜ್ ಷಾ ಕೋಟ್ಲಾ ಮೈದಾನಗಳಿಗೆಲ್ಲ ಹೋಗಿ ಬಂದ. ಮಂಜಿನ ಮುಂಜಾವಿನಲ್ಲಿ, ಮೋಡಕವಿದ ವಾತಾವರಣದಲ್ಲಿ ದೆಹಲಿಯಲ್ಲಿ ಓಡಾಡುವುದು ಹೊಸ ಖುಷಿಯನ್ನು ನೀಡುತ್ತಿತ್ತು.
                   ದಿನಕಳೆದಂತೆ ವಿನಯಚಂದ್ರನ ಮನದ ದುಗುಡ ಹೆಚ್ಚುತ್ತ ಹೋಯಿತು. ಬಾಂಗ್ಲಾದೇಶಕ್ಕೆ ಹೋಗುವ ದಿನವೂ ಹತ್ತಿರ ಬರುತ್ತಿತ್ತು. ಬಾಂಗ್ಲಾದೇಶದಲ್ಲಿ ಹೇಗೋ ಏನೋ ಅನ್ನುವ ತಳಮಳ ಆತನಲ್ಲಿ ಶುರುವಾದಂತಿತ್ತು. ಆದರೂ ಅದನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದ.
                  `ವಿನು.. ಬಾಂಗ್ಲಾದೇಶಕ್ಕೆ ಹೋಗೋಕೆ ಇನ್ನು ಮೂರೇ ದಿನ ಇದೆ ಕಣೋ.. ಬಾಂಗ್ಲಾದೇಶದಲ್ಲಿ ಬೇರೆ ಗಲಾಟೆ ಆರಂಭವಾಗುತ್ತಿದೆ. ಆಡಳಿತ ಪಕ್ಷ ಹಾಗೂ ವಿರೋಧಿ ಪಕ್ಷದ ನಡುವೆ ಬಹಳ ಘರ್ಷಣೆ ನಡೆಯುತ್ತಿದೆಯಂತೆ.. ವಿಶ್ವಕಪ್ ನಡೆಯುವುದು ಅನುಮಾನ ಎಂದು ಜಾಧವ್ ಹೇಳುತ್ತಿದ್ದರು..' ಎಂದು ಸೂರ್ಯನ್ ವಿನಯಚಂದ್ರನ ಬಳಿ ಹೇಳಿದಾಗ ವಿನಯಚಂದ್ರನಲ್ಲಿ ಒಮ್ಮೆ  ನಿರಾಸೆಯ ಕಾರ್ಮೋಡ ಸುಳಿದಿದ್ದು ಸುಳ್ಳಲ್ಲ. ಮುಂದೇನು ಮಾಡೋದು ಎನ್ನುವ ಭಾವನೆ ಮೂಡಿದ್ದೂ ಸುಳ್ಳಲ್ಲ. ವಿಶ್ವಕಪ್ ಪಂದ್ಯಾವಳಿ ರದ್ದಾದರೆ ಇದುವರೆಗೂ ಮಾಡಿಕೊಂಡ ತಯಾರಿಗಳೆಲ್ಲ ವ್ಯರ್ಥವಾಗುತ್ತವೆ. ಇದೇ ಮೊದಲ ಬಾರಿಗೆ ತಾನು ಕಬ್ಬಡ್ಡಿ ಪಂದ್ಯಾವಳಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದೇನೆ. ಈಗ ಪಂದ್ಯಾವಳಿಯೇ ರದ್ಧಾದರೆ ಇದರಿಂದ ಬೇಜಾರಾಗುತ್ತದೆ. ಮೊದಲ ಪ್ರಯತ್ನವೇ ಹೀಗಾಗಿಬಿಟ್ಟಿತಲ್ಲ ಎನ್ನುವ ಕೊರಗೂ ಇರುತ್ತದೆ. ಸಿಕ್ಕ ಅವಕಾಶದಲ್ಲಿ ಎಲ್ಲರ ಮನಸ್ಸನ್ನು ಗೆಲ್ಲುವಂತಹ ಆಟವಾಡಬೇಕು ಎಂದುಕೊಂಡಿದ್ದ ವಿನಯಚಂದ್ರ ಒಮ್ಮೆ ಮಂಕಾಗಿದ್ದು ಸುಳ್ಳಲ್ಲ.
               ನಡೆಯುತ್ತದೆ, ನಡೆಯುವುದಿಲ್ಲ.. ಈ ಗೊಂದಲಗಳ ನಡುವೆ ವಿಶ್ವಕಪ್ ನಡೆದೇ ನಡೆಯುತ್ತದೆ ಎಂದು ಬಾಂಗ್ಲಾ ಸರ್ಕಾರ ಕೊನೆಗೊಮ್ಮೆ ಘೋಷಣೆ ಮಾಡಿತ್ತು. ಬಾಂಗ್ಲಾದೇಶಕ್ಕೆ ಆಗಮಿಸುವ ಬೇರೆ ಬೇರೆ ದೇಶಗಳ ಆಟಗಾರರಿಗೆ ಎಲ್ಲ ಸೌಕರ್ಯ ಕೈಗೊಳ್ಳಲಾಗುತ್ತದೆ. ಸುರಕ್ಷತೆಯ ಬಗ್ಗೆ ಅನುಮಾನ ಬೇಡ. ಭಾರಿ ಭದ್ರತೆಯನ್ನು ಒದಗಿಸಲಾಗುತ್ತದೆ ಎಂದು ಬಾಂಗ್ಲಾದೇಶ ಭರವಸೆಯನ್ನು ನೀಡಿತು. ಇಷ್ಟೆಲ್ಲ ಆದ ನಂತರ ಕೊನೆಗೊಮ್ಮೆ ಬಾಂಗ್ಲಾದೇಶಕ್ಕೆ ಹೋಗೋದು ಪಕ್ಕಾ ಆದಾಗ ಮಾತ್ರ ವಿನಯಚಂದ್ರ ನಿರಾಳನಾಗಿದ್ದ. ಜಾಧವ್ ಅವರು ಎಲ್ಲ ಆಟಗಾರರನ್ನು ಕರೆದು ಬಾಂಗ್ಲಾದೇಶದಲ್ಲಿ ನಡೆದುಕೊಳ್ಳುವ ಬಗ್ಗೆ ತಿಳಿ ಹೇಳಿದರು. ಹಿರಿಯ ಆಟಗಾರರಿಗೆ ಇದು ಮಾಮೂಲಿ ಸಂಗತಿಯಾಗಿದ್ದರೂ ವಿನಯಚಂದ್ರನಿಗೆ ಮೊದಲ ಅನುಭವವಾಗಿತ್ತು. ಜಾಧವ್ ಅವರು `ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಗಲಾಟೆಯ ಬಗ್ಗೆ ತುಣುಕಾಗಿ ವಿವರಿಸಿ ಯಾರೂ ಕೂಡ ತಮ್ಮ ತಮ್ಮ ಹೊಟೆಲ್ ಹಾಗೂ ವಿಶ್ವಕಪ್ ನಡೆಯುವ ಸ್ಥಳಗಳನ್ನು ಬಿಟ್ಟು ಹೊರಗೆ ಹೋಗಬಾರದು. ಹೋಗಲೇಬೇಕೆಂಬ ಅನಿವಾರ್ಯತೆ ಒದಗಿಬಂದರೆ ತಂಡದ ಮ್ಯಾನೇಜ್ ಮೆಂಟಿಗೆ ವಿಷಯವನ್ನು ತಿಳಿಸಿ, ಅವರಿಂದ ಒಪ್ಪಿಗೆ ಪಡೆದು, ಭದ್ರತೆಗಾಗಿ ಜೊತೆಯಲ್ಲಿ ಭದ್ರತಾ ಸಿಬ್ಬಂದಿಗಳನ್ನು ಕರೆದೊಯ್ಯಬೇಕು ಎಂದು ತಾಕೀತು ಮಾಡಿದ್ದರು. ವಿನಯಚಂದ್ರ ಎಲ್ಲರಂತೆ `ಹೂಂ' ಅಂದಿದ್ದ.
              ಮರುದಿನ ಬಾಂಗ್ಲಾದೇಶಕ್ಕೆ ಹೊರಡುವ ಸಲುವಾಗಿ ತಯಾರಿ ನಡೆದಿತ್ತು. ತನ್ನ ತಾಲೀಮನ್ನು ಮುಗಿಸಿ ವಿನಯಚಂದ್ರ ರೂಮಿನತ್ತ ಮರಳುತ್ತಿದ್ದಾಗ ಜಾಧವ್ ಆತನನ್ನು ಕರೆದರು. ಕುತೂಹಲದಿಂದಲೇ ಹೋದ.
`ವಿನಯ್.. ಹೇಗಿದ್ದೀರಿ?'
`ಚನ್ನಾಗಿದ್ದೇನೆ ಸರ್..'
`ಇದು ನಿನ್ನ ಮೊದಲ ವಿಶ್ವಕಪ್ ಅಲ್ಲಾ.. ಏನನ್ನಿಸ್ತಾ ಇದೆ..?'
`ಏನ್ ಹೇಳಬೇಕು ಅಂತಾನೇ ಗೊತ್ತಾಗುತ್ತಿಲ್ಲ ಸರ್.. ಬಹಳ ತಳಮಳ ಆಗ್ತಾ ಇದೆ..ಹೇಗಾಗುತ್ತೋ, ಏನಾಗುತ್ತೋ ಎನ್ನುವ ಭಾವ ಕಾಡುತ್ತಿದೆ'
`ಓಹ್.. ಹೌದಾ.. ಗುಡ್.. ಎಲ್ಲರಿಗೂ ಹಾಗೆ ಆಗುತ್ತೆ.. ಇರ್ಲಿ.. ಬಾಂಗ್ಲಾದೇಶದಲ್ಲಿ ಸ್ವಲ್ಪ ಹುಷಾರಾಗಿರಬೇಕಪ್ಪ.. ಅಲ್ಲಿ ಪರಿಸ್ಥಿತಿ ಸರಿಯಾಗಿಲ್ಲ. ಅಲ್ಲಿನ ಸರ್ಕಾರ ಎಲ್ಲ ಸರಿಯಿದೆ ಅಂತ ಹೇಳಿದೆ. ಆದರೂ ನಾವು ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು. ನಿನ್ನನ್ನು ಹುಷಾರಾಗಿ ನೋಡಿಕೊಳ್ಳುವ ಜವಾಬ್ದಾರಿಯನ್ನು ಚಿದಂಬರ ಅವರು ನನಗೆ ವಹಿಸಿದ್ದಾರೆ..'
`ಸರ್.. ಸರಿ ಸರ್..'
`ನೋಡು.. ಬಾಂಗ್ಲಾದೇಶದ ಕುರಿತು ನಾನು ನಿಂಗೆ ಹೆಚ್ಚು ಹೇಳಬೇಕಿಲ್ಲ ಅಂದ್ಕೋತೀನಿ.. ಮೈಯೆಲ್ಲಾ ಕಣ್ಣಾಗಿರಬೇಕು.. ಆಟದ ಕುರಿತು ಬಂದ್ರೆ ಯಾವ ಸಮಯದಲ್ಲಿ ಎಂತಹ ಪರಿಸ್ಥಿತಿ ಎದುರಾದರೂ ಅದನ್ನು ಎದುರಿಸಬಲ್ಲೆ ಎಂಬ ಛಾತಿ ಬೇಕು.. ತಿಳೀತಾ..' ಎಂದರು.
`ಹುಂ ಸರ್.. ಅಲ್ಲಿ ಗಲಾಟೆ ಇದೆ ಅಂದಿದ್ದರು. ನಮಗೆ ಸಮಸ್ಯೆ ಇಲ್ವಾ..?' ವಿನಯಚಂದ್ರ ಮನದಾಳದ ತುಮುಲವನ್ನು ಹೊರ ಹಾಕಿದ್ದ.
`ನಮಗೆ ಟೈಟ್ ಸೆಕ್ಯೂರಿಟಿ ಅರೇಂಜ್ ಮಾಡಿದ್ದಾರಂತೆ.. ಸಮಸ್ಯೆ ಆಗೋದಿಲ್ಲ ಅಂದ್ಕೊಂಡಿದ್ದೀವಿ. ಅಂತಹ ಸಮಸ್ಯೆಗಳು ಎದುರಾದರೆ ಬಾಂಗ್ಲಾ ಮಿಲಿಟರಿಯವರು ನಮ್ಮನ್ನು ಕಾಪಾಡೋಕೆ ಹೊಣೆ ಹೊತ್ತಿದ್ದಾರಂತೆ..ಹಾಗಾಗಿ ಯಾವುದೇ ಸಮಸ್ಯೆ ಇಲ್ಲ.. ಆದರೂ ನೋಡೋಣ..' ಎಂದು ಹೇಳಿದರು ಜಾಧವ್.
ವಿನಯಚಂದ್ರ ಮಾತಾಡಲಿಲ್ಲ.

**

               ರೂಮಿನಲ್ಲಿ ಸೂರ್ಯನ್ ತಯಾರಾಗಿದ್ದ. `ವಿನು ಬೇಗ ತಯಾರಾಗು.. ಜಾಧವ್ ಸರ್ ನಮಗೆಲ್ಲ ಬಾಂಗ್ಲಾದೇಶದ ಕುರಿತು ಮಾಹಿತಿ ನೀಡೋ ಸಿಡಿ ಕೊಟ್ಟಿದ್ದಾರೆ ನೋಡೋಣ..' ಎಂದ.
              ಸಿಡಿಯನ್ನು ಹಾಕಿ ನೋಡುತ್ತಿದ್ದಂತೆ ಬಾಂಗ್ಲಾದೇಶ ಅವರ ಕಣ್ಮುಂದೆ ಅನಾವರಣಗೊಂಡಿತು.
              ಒಂದಾನೊಂದು ಕಾಲದಲ್ಲಿ ಭಾರತದ್ದೇ ಒಂದು ಭಾಗವಾಗಿದ್ದ ಆ ನಾಡು ನಂತರ ಪಾಕಿಸ್ತಾನದ ಪ್ರದೇಶವಾಗಿ ಆ ನಂತರ ಪಾಕಿಸ್ತಾನಕ್ಕೂ ಈಗಿನ ಬಾಂಗ್ಲಾದೇಶಕ್ಕೂ ಘರ್ಷಣೆ ನಡೆದಿತ್ತು. ಕೊನೆಗೆ 1971ರಲ್ಲಿ ಭಾರತದ ಐರನ್ ಲೇಡಿ ಇಂದಿರಾಗಾಂಧಿ ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ಸಿಗುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಳು. ನಂತರದ ದಿನಗಳಲ್ಲಿ ಭಾರತದ ಕಡೆಗೆ ಬಹಳ ನಿಷ್ಟವಾಗಿದ್ದ ಬಾಂಗ್ಲಾದೇಶ ಕೊನೆ ಕೊನೆಗೆ ಭಾರತದ ವಿರುದ್ಧ ಭಯೋತ್ಪಾದಕ ಕಾರ್ಯಗಳನ್ನು ಕೈಗೊಳ್ಳುವಲ್ಲಿಯೂ ಕಾರ್ಯ ನಿರ್ವಹಣೆ ಮಾಡಲಾರಂಭಿಸಿತ್ತು.
              ಸಾವಿರ ಕಿಲೋಮೀಟರುಗಟ್ಟಲೆ ಗಡಿಯನ್ನು ಬಾಂಗ್ಲಾದೇಶ ಭಾರತದೊಂದಿಗೆ ಹಂಚಿಕೊಂಡಿದೆ. ಆದರೆ ಗಡಿಗುಂಟ ಬೇಲಿಯೇ ಇಲ್ಲ. ಈ ಕಾರಣದಿಂದ ಪ್ರತಿ ದಿನ ನೂರಾರು ಜನ ಭಾರತದತ್ತ ನುಸುಳಿ ಬರುತ್ತಲೇ ಇದ್ದಾರೆ. ಭಾರತ ಈ ಸಮಸ್ಯೆಗೆ ಎಚ್ಚರಿಕೆಯ ಮೂಲಕ ತಡೆ ಹಾಕಲು ಯತ್ನಿಸುತ್ತಲೇ ಇದೆ. ಆಗಾಗ ಒಂದಷ್ಟು ಜನರನ್ನು ಗುಂಡಿಕ್ಕಿ ಸಾಯಿಸುವ ಮೂಲಕ ಭಾರತದೊಳಗೆ ನುಸುಳಿ ಬರುವ ಬಾಂಗ್ಲಾದೇಶಿಯರಿಗೆ ಎಚ್ಚರಿಕೆ ನೀಡುವ ಯತ್ನವನ್ನೂ ಮಾಡುತ್ತಿದೆ. ಟಿ.ವಿ ಪರದೆಯ ಮೇಲೆ ಮಾಹಿತಿ ಬರುತ್ತಲೇ ಇತ್ತು.
              `ತಥ್.. ಏನ್ ವೀಡಿಯೋನಪ್ಪಾ.. ಒಳ್ಳೇದು ಏನೂ ಇಲ್ವಾ?' ಎಂದು ಗೊಣಗಿದ. ವಿನಯಚಂದ್ರ ನೋಡುತ್ತಲೇ ಇದ್ದ. ಸ್ವಲ್ಪ ಹೊತ್ತಿನ ಬಳಿಕ ಆ ವೀಡಿಯೋದಲ್ಲಿ ಬಾಂಗ್ಲಾದೇಶಿ ಮಹಿಳೆಯರು, ಹುಡುಗಿಯರ ಬಗ್ಗೆ ವಿವರಣೆ ಬರಲಾರಂಭಿಸಿತು. ತಕ್ಷಣ ಚುರುಕಾದ ಸೂರ್ಯನ್ `ಅಬ್ಬಾ.. ಅಂತೂ ನಮಗೆ ಬೇಕಾದ ವಿಷಯ ಬಂತಪ್ಪಾ..ಇನ್ನು ಕಣ್ಣಿಗೆ ಹಬ್ಬ' ಎಂದ.
               ಬಾಂಗ್ಲಾದೇಶದಲ್ಲಿ ಮುಸಲ್ಮಾನರು ಬಹುಸಂಖ್ಯಾತರಾದರೂ ಕೆಲವು ಪ್ರದೇಶಗಳಲ್ಲಿ ಹಿಂದೂಗಳೂ ಇದ್ದಾರೆ. ಅಲ್ಲಲ್ಲಿ ಬೌದ್ಧರನ್ನೂ ಕಾಣಬಹುದಾಗಿದೆ. ಬೆಂಗಾಲಿ ಹಿಂದುಗಳಲ್ಲಿ ಬೆಂಗಾಲಿ ಬ್ರಾಹ್ಮಣರ ಸಂಖ್ಯೆ ಹೆಚ್ಚಿದೆ. ಬೆಂಗಾಲಿ ಹುಡುಗಿಯರು ಖಾದಿ, ಕಾಟನ್ ಸೀರೆಯ ಮೂಲಕ ಸೆಳೆಯುತ್ತಾರೆ. ಈಗೀಗ ಅವರ ಮೇಲೆ ದೌರ್ಜನ್ಯಗಳು ಹೆಚ್ಚಳವಾಗುತ್ತಿವೆ ಎಂದು ವೀಡಿಯೋ ಹೇಳುತ್ತಿತ್ತು.
                `ಬೆಂಗಾಲಿ ಹುಡುಗಿಯರು ಚನ್ನಾಗಿರ್ತಾರಂತೆ ವಿನು.. ನಾವು ಒಂದು ಕೈ ನೋಡೋಣ ಅಲ್ವಾ..'  ಎಂದ ಸೂರ್ಯನ್.
                `ಖಂಡಿತ.. ನೋಡೋಣ.. ನಿನಗೆ ಬೇಕಾದ್ರೆ ಹೇಳು ನಾನು ಸೆಲೆಕ್ಟ್ ಮಾಡ್ತೀನಿ.. ಹುಡುಗಿಯರನ್ನು ನೋಡಿದ ತಕ್ಷಣ ಅವರ ಗುಣವನ್ನು ಅಳೆಯುವಲ್ಲಿ ನಾನು ವಿಶೇಷತೆಗಳನ್ನು ಹೊಂದಿದ್ದೇನೆ..' ಎಂದ ವಿನಯಚಂದ್ರ.
                `ಹೋ.. ಖಂಡಿತ.. ನನಗೊಂದು ಬೆಂಗಾಲಿ ಹಿಂದೂ ಹುಡುಗಿ ಹುಡುಕು ಮಾರಾಯಾ.. ಈ ವೀಡಿಯೋ ಏನು ತೋರಿಸಿತೋ ಅದು ನನಗೆ ಅರ್ಥವಾಗಲಿಲ್ಲ. ಆದರೆ ಬೆಂಗಾಲಿ ಹುಡುಗಿಯರ ಕುರಿತು ಹೇಳಿದ ವಿಷಯಗಳು ಮಾತ್ರ ಶಬ್ದಶಬ್ದವೂ ನೆನಪಿನಲ್ಲಿದೆ..ಬೆಂಗಾಲಿ ಹುಡುಗಿಯರು ಬಹಳ ಚನ್ನಾಗಿ ಕಂಡರಪ್ಪಾ..' ಎಂದ ಸೂರ್ಯನ್..
                 `ಹೇಯ್.. ಬಾಂಗ್ಲಾದೇಶದ ಪ್ರಧಾನಿ ಕೂಡ ಹೆಣ್ಣು ಮಾರಾಯಾ..' ವಿನಯಚಂದ್ರ ಛೇಡಿಸಿದ.
                 `ಹೋಗೋ ಮಾರಾಯಾ.. ನನಗೆ ಅದು ಗೊತ್ತಿಲ್ಲ ಅಂದುಕೊಂಡೆಯಾ..? ಅಲ್ಲಿ ಪ್ರಧಾನಿ ವಿರುದ್ಧ ಪ್ರತಿಸ್ಪರ್ಧಿಯಾಗಿ ನಿಂತವಳೂ ಹೆಣ್ಣೇ ಮಾರಾಯಾ..ಈಗ ಗಲಾಟೆ ನಡೆಯುತ್ತಿರುವುದು ಇಬ್ಬರು ಹೆಂಗಸರ ಪಕ್ಷಗಳ ನಡುವೆ...' ಸೂರ್ಯನ್ ಮಾತಿನ ತಿರುಗುತ್ತರ ನೀಡಿದ.
               `ಹೌದು ಹೌದು ಈ ಇಬ್ಬರು ಹೆಂಗಸರಿದಂಲೇ ಅಲ್ಲವಾ ಬಾಂಗ್ಲಾದೇಶದಲ್ಲಿ ಒಳಜಗಳ, ಅರಾಜಕತೆ, ದಂಗೆ, ಹೋರಾಟ, ಗಲಾಟೆಗಳಾಗ್ತಾ ಇರೋದು.. ಚಂದ ಇದ್ದಾರೆ ಅಂತ ನಂಬೋಕಾಗೋಲ್ಲ ಅನ್ನೋದು ಇದಕ್ಕೇ ಇರಬೇಕು ನೋಡು..' ಎಂದ ವಿನಯಚಂದ್ರ.
                  ಮಾತು ತಮಾಷೆಯಿಂದ ಗಂಭೀರ ವಿಷಯದ ಕಡೆಗೆ ಹೊರಳುತ್ತಿತ್ತು. ಬಾಂಗ್ಲಾದೇಶದ ಕುರಿತು ಏನೇ ಮಾತು ಶುರುವಿಟ್ಟುಕೊಂಡರೂ ಕೊನೆಗೆ ಅದು ಅಲ್ಲಿನ ಅರಾಜಕತೆ, ದಂಗೆಯ ವಿಷಯಕ್ಕೇ ಬಂದು ಮುಟ್ಟುತ್ತಿತ್ತು. ಆ ವಿಷಯ ಬಂದ ನಂತರ ಮಾತು ಮುಂದುವರಿಯುತ್ತಿರಲಿಲ್ಲ. ಮೌನ ಆವರಿಸುತ್ತಿತ್ತು. ಮನಸ್ಸಿನಲ್ಲಿ ಎಷ್ಟೇ ಭೀತಿ, ಗೊಂದಲ, ಮುಂದೇನು ಎನ್ನುವ ಭಾವನೆಗಳು ಮೂಡಿದರೂ ಸಹ ಸೂರ್ಯನ್ ಹಾಗೂ ವಿನಯಚಂದ್ರ ಈ ಕುರಿತು ಹೆಚ್ಚಿಗೆ ಮಾತನಾಡುತ್ತಿರಲಿಲ್ಲ.
                  ಇಷ್ಟರ ನಡುವೆ ಸೂರ್ಯನ್ ವ್ಯಕ್ತಿ ಚಿತ್ರಣ ನೀಡದಿದ್ದರೆ ಕಥೆ ಮುಂದುವರಿಯುವುದಿಲ್ಲ. ನೋಡಲು ಪಕ್ಕಾ ತಮಿಳಿನವನಂತೆ ಕಾಣುವ, ಕಪ್ಪು ಬಣ್ಣವನ್ನು ಹೊಂದಿರುವ ಸೂರ್ಯನ್ ಗೆ  ಒಂದು ರೀತಿಯ ರಂಗೀನ್ ಮನುಷ್ಯ. ಯಾವುದೇ ಹುಡುಗಿ ಕಣ್ಣಿಗೆ ಬಿದ್ದರೂ ಅವಳನ್ನು ಮಾತನಾಡಿಸುವ ಪ್ರವೃತ್ತಿಯವನು. ವಯೋಸಹಜ ಫ್ಲರ್ಟಿಂಗ್ ಗುಣವಿತ್ತಾದರೂ ಅದು ಅತಿಯಾಗಿರಲಿಲ್ಲ. ಹುಡುಗಿಯರು ಸ್ವಲ್ಪ ಪರಿಚಯವಾದರು ಎಂದರೆ ಹರಟೆಗೆ ಬಿದ್ದು ಬಿಡುವ ವ್ಯಕ್ತಿತ್ವದವನಾಗಿದ್ದ ಸೂರ್ಯನ್. ಇಂತವನಿಗೆ ಬಾಂಗ್ಲಾದೇಶದ ಹುಡುಗಿಯರು ಸೆಳೆದಿರುವುದರಲ್ಲಿ ತಪ್ಪಿಲ್ಲ ಬಿಡಿ.

(ಮುಂದುವರಿಯುತ್ತದೆ..)

Friday, January 31, 2014

ಚಿಪಗಿ ದ್ಯಾಮವ್ವ ಸನ್ನಿಧಿಯಲ್ಲಿ ವನಭೋಜನ

ವನಭೋಜನ ಎಂಬ ವಿಶಿಷ್ಟ ಸಂಪ್ರದಾಯ ಮರೆಯಾಗುತ್ತಿರುವ ಸಂದರ್ಭದಲ್ಲಿ ತಾಲೂಕಿನ ಚಿಪಗಿಯಲ್ಲಿ ವನಭೋಜನವನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ದ್ಯಾಮವ್ವ ದೇವಾಲಯದ ಆವರಣದಲ್ಲಿ ನಡೆದ ವನಭೋಜನ ಯಶಸ್ವಿಯಾಯಿತು.

ಗ್ರಾಮಸ್ಥರೆಲ್ಲ ಸೇರಿ ತಮ್ಮೂರಿನ ಸನಿಹದ ಅರಣ್ಯಕ್ಕೆ ತೆರಳಿ ಒಂದು ದಿನ ಅಲ್ಲಿ ಊಟ ಮಾಡಿ, ಸಂತಸ ಪಡುವ ವಿಶಿಷ್ಟ ಹಾಗೂ ಉತ್ತಮ ಪರಂಪರೆಯೇ ವನಭೋಜನ. ಇದರಲ್ಲಿ ಭಾಗಿಯಾಗಿವ ಪ್ರತಿಯೊಬ್ಬ ಗ್ರಾಮಸ್ಥನೂ ವನಭೋಜನಕ್ಕಾಗಿ ತನ್ನ ಕೈಲಾದ ಸಹಾಯವನ್ನು ಮಾಡುತ್ತಾನೆ. 

ಗ್ರಾಮಸ್ಥರ ಒಗ್ಗೂಡುವಿಕೆ: 

ಒಬ್ಬರು ಅಕ್ಕಿ ತಂದರೆ ಇನ್ನೊಬ್ಬರು ಬೆಲ್ಲ, ಮತ್ತೊಬ್ಬರು ತೆಂಗಿನಕಾಯಿ, ಮಗದೊಬ್ಬರು ಹಾಲು, ಹೀಗೆ ಒಬ್ಬೊಬ್ಬ ವ್ಯಕ್ತಿಯೂ ಒಂದೊಂದು ವಸ್ತುಗಳನ್ನು ತರುವ ಮೂಲಕ ವನಭೋಜನದ ಯಶಸ್ವಿಗೆ ಕಾರಣನಾಗುತ್ತಾನೆ. ಗ್ರಾಮಸ್ಥರೆಲ್ಲರ ಸೇರುವಿಕೆಯಿಂದ ವನಭೋಜನವೂ ಅತ್ಯುತ್ತಮವಾಗಿ ಜರುಗುತ್ತದೆ. 

ವನಭೋಜನ ಇಡೀ ಗ್ರಾಮದ ಒಗ್ಗಟ್ಟಿನ ಪ್ರತೀಕ. ಗ್ರಾಮಸ್ಥರು ಒಂದುಗೂಡಿ ಮಾಡುವ ಈ ಕಾರ್ಯಕ್ರಮ ಏಕತೆಗೆ ಸಾಕ್ಷಿಯಾಗುವಂತದ್ದಾಗಿದೆ. ವರ್ಷಕ್ಕೊಮ್ಮೆಯೋ ಎರಡು ಸಾರಿಯೋ ತಮ್ಮೂರಿನ ಫಾಸಲೆಯಲ್ಲಿ ಅರಣ್ಯದಲ್ಲಿಯೋ, ನದಿ ದಂಡೆಯಲ್ಲಿಯೋ ಸೇರಿ ಅಡುಗೆ ಮಾಡಿ, ವನಭೋಜನ, ಹೊಳೆಯೂಟ ಕಾರ್ಯಕ್ರಮ ಪ್ರಾಚೀನ ಕಾಲದಲ್ಲಿ ಬಹಳಷ್ಟು ಸಾರಿ ನಡೆದ ಉದಾಹರಣೆಗಳು ಸಿಗುತ್ತವೆ.

ಹರಕೆ: 

ಚಿಪಗಿ ಊರಿನ ಗ್ರಾಮಸ್ಥರು ದ್ಯಾಮವ್ವ ದೇವಿಯ ಸನ್ನಿಧಿಯಲ್ಲಿ ವನಭೋಜನದ ಹರಕೆಯನ್ನು ಹೊತ್ತುಕೊಳ್ಳುತ್ತಾರೆ. ಊರಿನ ಯಾವುದೇ ವ್ಯಕ್ತಿ ಅಥವಾ ಮನೆಯವರು ವನಭೋಜನದ ಹರಕೆಯನ್ನು ಹೊತ್ತುಕೊಂಡರೂ ಇಡೀ ಊರಿನವರು ಇದರಲ್ಲಿ ಪಾಲ್ಗೊಳ್ಳುವುದು ಇಲ್ಲಿನ ವಿಶೇಷವಾಗಿದೆ. ಊರಿನವರಷ್ಟೇ ಅಲ್ಲದೇ ಹೊರ ಊರಿನ ಜನರೂ, ಸಂಬಂಧಿಕರೂ ಈ ವನಭೋಜನದಲ್ಲಿ ಪಾಲ್ಗೊಳ್ಳುತ್ತಾರೆ.ಮಳೆಗಾಲ ಕಳೆದ ನಂತರ ಆರಂಭಗೊಳ್ಳುವ ಚಿಪಗಿ ವನಭೋಜನ ಜಾತ್ರೆಯ ವರ್ಷವಾದರೆ ಜಾತ್ರೆಯ ವರೆಗೆ ನಡೆಯುತ್ತದೆ. ಅದಿಲ್ಲವಾದರೆ ಮಾರ್ಚ್ ತಿಂಗಳಿನ ವರೆಗೂ ನಡೆಯುತ್ತದೆ.  

ಶಿರಸಿ ಜಾತ್ರೆಯ ಮುನ್ನ ನಡೆಯುವ ಹೊರಬೀಡು ಕಾರ್ಯಕ್ರಮಕ್ಕೆ ಮೊದಲು ಇಲ್ಲಿ ವನಭೋಜನವನ್ನು ಹಮ್ಮಿಕೊಳ್ಳಲಾಗುತ್ತದೆ. ಶಿರಸಿ ಮಾರಿಕಾಂಬಾ ದೇವಿ ಜಾತ್ರೆಯ ನಂತರ ಚಿಪಗಿ ದ್ಯಾಮವ್ವನ ಸನ್ನಿಧಿಯಲ್ಲಿ ವನಭೋಜನವನ್ನು ಹಮ್ಮಿಕೊಳ್ಳುವುದಿಲ್ಲ. ವರ್ಷಕ್ಕೆ ಎಂಟಕ್ಕೂ ಹೆಚ್ಚಿನ ವನಭೋಜನಗಳು ನಡೆದ ದಾಖಲೆಗಳೂ ಇವೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಬೆಳಗಿನ ಹಾಲು ಪಾಯಸಕ್ಕೆ ಮೀಸಲು ಊರಿನಲ್ಲಿ ವನಭೋಜನ ನಡೆಯುವ ದಿನದಂದು ಇಡೀ ಊರಿನವರು ತಮ್ಮ ತಮ್ಮ ಮನೆಗಳ ಬೆಳಗಿನ ಹೊತ್ತಿನ ಹಾಲನ್ನು ವನಭೋಜನಕ್ಕೆ ಬಳಕೆ ಮಾಡುತ್ತಾರೆ. ಅಂದಿನ ಹಾಲು ವನಭೋಜನದಲ್ಲಿ ಮಾಡಲಾಗುವ ಪಾಯಸಕ್ಕಾಗಿ ಬಳಸುತ್ತಾರೆ. ವನಭೋಜನಕ್ಕಾಗಿ ಸ್ಥಳೀಯರಿಗಿಂತ ಹೆಚ್ಚು ಹೊರ ಊರುಗಳಲ್ಲಿರುವವರೇ ಹರಕೆ ಹೊತ್ತುಕೊಳ್ಳುತ್ತಾರೆ ಎನ್ನುವುದೂ ವಿಶೇಷ ಸಂಗತಿಯಾಗಿದೆ. 

ದ್ಯಾಮವ್ವ ದೇವಸ್ಥಾನದಲ್ಲಿ ಪೂಜೆ ಮಾಡಲಾಗುತ್ತದೆ. ನಂತರ ವನಭೋಜನಕ್ಕಾಗಿ ಊರಿನವರೇ ಅಡುಗೆ ಮಾಡುತ್ತಾರೆ. ಊಟವನ್ನು ಬಡಿಸುವವರೂ ಅವರೇ. ಆದರೆ ಕಾರಣಾಂತರಗಳಿಂದ ಈಗ ಕೆಲವು ವರ್ಷಗಳಿಂದ ಅಡುಗೆ ಮಾಡುವವರನ್ನು ಕರೆಸಲಾಗುತ್ತಿದೆ. ಹಸಿರು ಮರಗಳ ನೆರಳಿನಲ್ಲಿ ಊಟಕ್ಕಾಗಿ ಬಾಳೆ ಎಲೆಗಳನ್ನು ಹಾಕಲಾಗುತ್ತದೆ. ಊಟದ ನಂತರ ಈ ಬಾಳೆಗಳನ್ನು ತೆಗೆದು ಎಸೆಯುವುದಿಲ್ಲ. ಬದಲಾಗಿ ಅವುಗಳನ್ನು ಹಾಗೆಯೇ ನೆಲದ ಮೇಲೆ ಬಿಡಲಾಗುತ್ತದೆ. ಈ ಬಾಳೆಗಳನ್ನು ದನಗಳು ಬಂದು ತಿನ್ನಬೇಕು. ವನಭೋಜನದಲ್ಲಿ ಮನುಷ್ಯನ ಜೊತೆಗೆ ಎಲ್ಲ ಪ್ರಾಣಿಗಳೂ ಸೇರ್ಪಡೆಯಾಗಬೇಕು ಎನ್ನುವ ಕಾರಣಕ್ಕಾಗಿ ಇಂತಹ ಸಂಪ್ರದಾಯವನ್ನು ತಂದಿರಬಹುದೆಂದು ಸ್ಥಳೀಯರಾದ ಆರ್.ವಿ. ಹೆಗಡೆ ಹೇಳುತ್ತಾರೆ.

ಆಧುನಿಕ ಸಮಾಜದ ಯಾಂತ್ರಿಕ ಜೀವನದ ಭರಾಟೆಯಲ್ಲಿ ಇಂತಹ ವಿಶಿಷ್ಟ ಕಾರ್ಯಕ್ರಮಗಳು ಸಮಾಜದಿಂದ ಮರೆಯಾಗದಂತೆ ನೋಡಿಕೊಳ್ಳಬೇಕಾದ ಅಗತ್ಯವೂ ಇದೆ.

 

(ಕನ್ನಡಪ್ರಭದಲ್ಲಿ ಜ.28ರಂದು ಬರೆದಿದ್ದ ಲೇಖನ)

Thursday, January 30, 2014

ಸವಿ ನೆನಪುಗಳ ನಡುವೆ (ಪ್ರೇಮಪತ್ರ-10)

ಪ್ರೀತಿಯ ಪ್ರೀತಿ..,


ಬಾರ ಬಾರ್ ಆತೀ ಹೈ ಮುಝಕೋ
ಮಧುರ ಯಾದ್ ಬಚಪನ್ ತೇರಿ...|
                 ಓ ಬಾಲ್ಯ ನೀನೆಲ್ಲಿರುವೆ? ಕಳೆದ ನಿನ್ನ ಸಮಯ ಮತ್ತೆ ನನಗ್ಯಾಕೆ ಸಿಗುತ್ತಿಲ್ಲ?  ಈ ಹರೆಯದಲ್ಲಂತೂ ನಿನ್ನ ಸಮಯ ಬಹಳ ನನ್ನ ಕಾಡ್ತಿದೆ. ಓ ಬಾಲ್ಯ.. ನೀನು ಸುಂದರ ಸವಿ ನೆನಪಾಗಿ ಕಾಡ್ತಾ ಇರೋದು ಗ್ರೇಟ್.. ಜೊತೆಗೆ ಅದಕ್ಕೆ thanks..

ಸವಿ ಸವಿ ನೆನಪು
ಸಾವಿರ ನೆನಪು
ಸಾವಿರ ಕಾಲಕು
ಸವೆಯದ ನೆನಪು
               ನಿಂಗೆ ಈ ಬಾಲ್ಯ, ಬಾಲ್ಯದ ಆಟ-ಹುಡುಗಾಟ-ಮೆರೆದಾಟ-ನಲಿದಾಟ-ಕುಣಿದಾಟ ಎಷ್ಟೊಂದು ಗ್ರೇಟ್ ಅನ್ನಿಸೋಲ್ವಾ? ಅದಕ್ಕಾಗಿಯೇ ನಾನು ಈ ಸಲದ ಪತ್ರದ ವಿಷಯವನ್ನು ಬಾಲ್ಯದೆಡೆಗೆ ಹೊರಳಿಸಿದ್ದು.
               ನಿಜವಾಗ್ಲೂ ಈ ಬಾಲ್ಯ ಅನ್ನೋ  great boat ನಂಗೆ  ಎಷ್ಟೆಷ್ಟೋ ಮರೆಯಲಾಗದೇ ಇರುವಂತಹ ಅನುಭವಗಳನ್ನು ನೀಡಿದೆ. ಜೊತೆಗೆ ಅದಕ್ಕಿಂತ ಹೆಚ್ಚಾಗಿ ಖುಷಿ ಕೊಟ್ಟಿದೆ. ಎಲ್ಲಕ್ಕಿಂತ ಹೆಚ್ಚಾಗಿ ಗೆದ್ದಾಗ ಬೀಳಿಸಿ, ಬಿದ್ದಾಗ ಸಂತೈಸಿ, ಕಿಚ್ಚು, ಮೆಚ್ಚು, ಪ್ರೀತಿ, ಕರುಣೆಗಳ ಸೇರಿಸಿದೆ. ಸ್ವಾಭಿಮಾನದಿಂದ ಬದುಕುವುದನ್ನು ಕಲಿಸಿದೆ.
               ಇಂತಹ ಬಾಲ್ಯ ನನ್ನ ಬದುಕಿನಲ್ಲಿ ಅದೊಂದು ಸುಸಮೃದ್ಧೋತ್ತಮ ನೆನಪಿನ ಗಣಿ, ಸುಂದರ ಖಜಾನೆ. ಓ.. ನಿನಗೆ ನನ್ನ ಬಾಲ್ಯದ ಸವಿ ನೆನಪ ಸನ್ನಿವೇಶಗಳನ್ನು ಹೇಳ್ಲೇ ಇಲ್ಲ. ತಾಳು ಹೇಳ್ತೀನಿ. ನನಗೆ ನೆನಪಿದ್ದಂತೆ ಕಂಡಕ್ಟರಿನೆ ಕಾಣದಂತೆ ಬಸ್ಸಿನ ಸೀಟಿ ಸ್ಪಂಜು ಹರಿದಿದ್ದೇ ಬಾಲ್ಯದ ಮೊದಲ ನೆನಪು ಹಾಗೂ ಮೊದಲ ಕಿತಾಪತಿಯೇನೋ..? ಮತ್ತೊಮ್ಮೆ, ಶಾಲೆಗೆ ಹೋಗಿ ಆಟಗಳಲ್ಲಿ ಭಾಗವಹಿಸದೇ ಇದ್ದರೂ ಕೂಡ ಸಮಾಧಾನಕರ ಬಹುಮಾನ ಪಡೆದಿದ್ದು, ಗೆಳತಿಯೊಬ್ಬಳ ಬ್ಯಾಗಿನಿಂದ ಗೆರೆಪಟ್ಟಿ ಕದ್ದಿದ್ದು, ಜಂಬುನೇರಳೆ ಮರದಿಂದ ತಲೆಕೆಳಗಾಗಿ ಬಿದ್ದಿದ್ದು, ತಲೆ ಧಿಮ್ಮೆನ್ನುವಾಗ ವಾಲಾಡುತ್ತ ಓಡಿ ಬಂದಿದ್ದು, ಯಾರೋ ಮಾಡಿದ ಕಾರ್ಯಕ್ಕೆ ನಾನು ಬಲಿಯಾದೆ ಎಂಬಂತೆ ಊರ ಬ್ಯಾಣಕ್ಕೆ ಬೆಂಕಿ ಇಟ್ಟ ಎಂಬ ಅಪವಾದ ಹೊತ್ತಿದ್ದು.. ಓಹ್..! ಇನ್ನೆಷ್ಟೆಷ್ಟೋ ಮಜವಾದ, ವಿಸ್ಮಯವಾದ ಸನ್ನಿವೇಶಗಳು. ಇಂತಹ ಪ್ರತಿಯೊಂದು ಸನ್ನಿವೇಶಗಳೂ ಹೊಸ ಹೊಸ ವಿಷಯವನ್ನೂ, ಪಾಠವನ್ನೂ, ಜ್ಞಾನವನ್ನೂ ಜೊತೆಗೆ ಅನುಭವವನ್ನೂ ನೀಡಿದೆ.
ಚಿಕ್ಕ ಚಿಕ್ಕ ಮನಸು
ಮನದ ತುಂಬಾ ಕನಸು
ಕನಸಿನೊಡನೆ ಆಟ
ಆಟದ ಜೊತೆಗೆ ಪಾಠ
                 ಇದೇ ಆಗಿನ ನಮ್ಮ ದೈನಂದಿನ ಕಾರ್ಯವಾಗಿತ್ತು. ಚಿಕ್ಕ, ಅರಳುತ್ತಿರುವ ಮನಸುಗಳು ಸುಂದರ ಕನಸುಗಳೋಡನೆ ಆಡಿ, ಪಾಡಿ ನಲಿಯುತ್ತಿದ್ದವು. ಮುಂದೊಮ್ಮೆ ಅವು ಸುಂದರವಾಗಿ ಅರಳುತ್ತಿದ್ದವು.
                 ನಿಂಗೆ ಇನ್ನೂ ಮಜಾ ಸುದ್ದಿ ಹೇಳ್ಬೇಕಂದ್ರೆ ಬಾಲ್ಯದಲ್ಲಿ ನಾನು ಬಹಳ ಕಿಲಾಡಿಯ, ತಂಟೆಕೋರ ಹುಡುಗನಾಗಿದ್ದೆ. ಹೀಗಾಗಿ ನಂಗೆ ಶಾಲೆಯಲ್ಲೂ, ಮನೆಯಲ್ಲೂ ಹೊಡೆತಗಳು ಬೀಳದೇ ಇದ್ದ ದಿನವೇ ಇರಲಿಲ್ಲ ಎನ್ನಬಹುದು. ಅಷ್ಟೇ ಅಲ್ಲ ಆಗ ನಮ್ಮ ಕುಟುಂಬ ಅವಿಭಕ್ತ ಕುಟುಂಬ. ಮನೆಯ ಹಿರಿಯ ಮಗನ ಮಗನಾದರೂ ನನ್ನೆಡೆಗೆ ಉಳಿದವರಿಗೆ ಅದೇಕೋ ತಾತ್ಸಾರ, ಸಿಟ್ಟು. ಜೊತೆಗೆ ನಮ್ಮ ಮನೆಯಲ್ಲಿ ಮಕ್ಕಳ ಸಂಖ್ಯೆಯೂ ಹೆಚ್ಚಿತ್ತು. ಅವರಲ್ಲಿ ಯಾರೇ ತಪ್ಪು ಮಾಡಿದ್ರೂ ಕೂಡ ಲತ್ತೆ ಮಾತ್ರ ನನಗೆ ಆಗಿತ್ತು. ಇಂಥ ಸನ್ನಿವೇಶಗಳ ನೆನಪು ಮಾಡಿಕೊಂಡ್ರೆ ಕಂಗಳಲ್ಲಿ ನೀರಾಡುತ್ತವೆ.
                ಆಗ ಕಲಿತ ಈಜು, ಕಲಿತ ಪಾಠ, ನಡೆ-ನುಡಿ, ಸಂಸ್ಕಾರ ಇವನ್ನೆಲ್ಲಾ ಎಂದಿಗೂ ಮರೆಯಲಾಗೋಲ್ಲ. ಮಳೆಯ ನೀರಿನಲ್ಲಿ ಕಾಗದದ ದೋಣಿ ಮಾಡಿ ತೇಲಿ ಬಿಟ್ಟಿದ್ದು, ಮಳೆ ನೀರಿನಲ್ಲಿ ಜಾರಿ ಬಿದ್ದಿದ್ದು, ಉಕ್ಕೇರಿ ಹರಿಯುತ್ತಿದ್ದ ತಾಯಿ ಅಘನಾಶಿನಿಯನ್ನು ನೋಡಿ ಭಯಗೊಂಡಿದ್ದು, ಅಮ್ಮನೊಡನೆ ಪ್ರತಿ ಮಳೆಗಾಲದ ಹೊಳೆ ಉಕ್ಕೇರುವಿಕೆಗೆ `ಭಾಗಿನ' ಕೊಡಲು ಹೋಗುತ್ತಿದ್ದುದು, ಶಾಲೆಗೆ ಹೋಗುವಾಗ ಮಳೆಯಿಂದ ಬರುತ್ತಿದ್ದ ಗಾಳಿಗೆ ಹಿಡಿದ ಛತ್ರಿ ಉಲ್ಟಾ ಆಗಿ `ಚಪ್ಪರ' ಆದಾಗ ಖುಷಿ ಪಟ್ಟಿದ್ದು, ಕುಣಿದು ಕೇಕೆ ಹಾಕಿದ್ದು, ಮಳೆಯ ನಡುವೆಯೂ ಶಾಲೆಯ ಕ್ರಿಕೆಟ್ ಪಂದ್ಯದಲ್ಲಿ ಮೊಟ್ಟ ಮೊದಲ ಅರ್ಧಶತಕ (ಕೊಟ್ಟ ಕೊನೆಯದೂ ಕೂಡ) ಗಳಿಸಿದ್ದು ಇಂಥದ್ದನ್ನೆಲ್ಲಾ ಜೀವವಿರೋ ತನಕ ಮರೆಯಲು ಸಾಧ್ಯವಿಲ್ಲ.
ಸಣ್ಣಾಕಿನಾ ನಾ ಸಣ್ಣಾಕಿನಾ
ಪುಟಾಣಿ ಬೆಲ್ಲನಾ ತಿನ್ನಾಕಿನಾ
                  ಓಹ್ ! ನನಗೇನಾದ್ರೂ ಮಾಟ-ಮಂತ್ರ-ವರ-ಶಾಪ ಇತ್ಯಾದಿಗಳ ಶಕ್ತಿ ಇದ್ದಿದ್ರೆ, ನಾನು ಯಾವಾಗಲೂ ಚಿಕ್ಕವನಾಗಿ ಇರಲಿಕ್ಕೆ ಇಷ್ಟಪಡ್ತಿದ್ದೆ. ಕಳೆದ ಬಾಲ್ಯದ ಸಂತಸವನ್ನು ಮತ್ತೆ ಮತ್ತೆ ಸವಿಯುತ್ತಿದ್ದೆ. ಹೀಗೆ ಆಗಲು ಸಾಧ್ಯವಿಲ್ಲವೆಂದು ಗೊತ್ತು. ಆಗೆಲ್ಲಾ ನಾನು ಮಕ್ಕಳ ಕೇಕೆ, ನಗುವನ್ನೂ, ಆಟ-ಪಾಟವನ್ನೂ ನೋಡಿಯಾದರೂ ಕಳೆದು ಹೋದ ಬಾಲ್ಯವನ್ನು ಮೆಲುಕು ಹಾಕಲು ಯತ್ನಿಸುತ್ತೇನೆ. ವ್ಯರ್ಥವೆಂದು ಗೊತ್ತಿದ್ದರೂ ನಾನು ಹಾಗೆ ಮಾಡುತ್ತೇನೆ. ಬಾಲ್ಯದ ಸಂತಸವೇ ನನ್ನನ್ನು ಹೀಗೆ ಮಾಡಲು ಪ್ರೇರೇಪಿಸುತ್ತಿದೆಯಾ? ಗೊತ್ತಿಲ್ಲ.
ಬಾಲ್ಯದ ಆಟ, ಆ ಹುಡುಗಾಟ
ಇನ್ನೂ ಮಾಸಿಲ್ಲ.....

                  ನಿಜ..! ನಾವು ಎಷ್ಟೇ ದೊಡ್ಡವರಾದ್ರೂ ಈ ಬಾಲ್ಯವ ಮರೆಯೋಕೆ ಆಗೋಲ್ವಲ್ಲ. ಹಾಗೆಯೇ ಅಂದಿನ ಅಂದಿನ ಹುಡುಗಾಟವನ್ನೂ ಕೂಡ. ಇಂತಹ ನೆನಪುಗಳೇ ನನಗೆ time and tide wait for none ಅಂದ್ರೆ ಕಳೆದ ಸಮಯ, ಕಡಲ ಅಲೆಯ ಮತ್ತೆ ಪಡೆಯಲು ಸಾಧ್ಯವಿಲ್ಲ ಎಂಬುದನ್ನು ತಿಳಿಸಿತು. ಇನ್ನೇನಿದ್ದರೂ ನಾವು ಸವಿ ನೆನಪುಗಳ ತಳಹದಿಯ ಮೇಲೆ ಕಾಣದ ಭವಿಷ್ಯವನ್ನು ಕನಸಲ್ಲಿ ಕಟ್ಟುತ್ತಾ ಜೀವನ ನಡೆಸಬೇಕು.
                  ಕೊನೆಯದಾಗಿ, ನನ್ನ ಮೊದಲ ಓಲೆಗೆ ನೀನು ಚನ್ನಾಗಿ ಪ್ರತಿಕ್ರಿಸಿದ್ದೀಯಾ. ನನ್ನಿಂದಾಗಿ ನಿನ್ನ ಮನವೂ ಕೂಡ ಭಾವನೆಯ ಬೆನ್ನೇರಿದ್ದಕ್ಕೆ ಸಂತಸವಾಗುತ್ತಿದೆ. ಮತ್ತೊಮ್ಮೆ ಮುಂದೆ ಹೊಸ ವಿಷಯಗಳೊಂದಿಗೆ, ತಾಜಾತನದೊಂದಿಗೆ ಪತ್ರಿಸುತ್ತೇನೆ. ಅಲ್ಲಿಯತನಕ ಸವಿ ನೆನಪುಗಳ ನಡುವೆ ಒಮ್ಮೆಯಾದರೂ ನುಸುಳಿಬಾ. ಅದರಿಂದುಂಟಾಗುವ ಖುಷಿಯನ್ನು ತಿಳಿಸು.
                   ತಿಳಿಸ್ತೀಯಲ್ಲಾ..?

ಇಂತಿ ನಿನ್ನೊಲವಿನ
ವಿನು

(ಈ ಬರಹ ಬರೆದಿದ್ದು ಜೂನ್ 2006ರಂದು ದಂಟಕಲ್ಲಿನಲ್ಲಿ.)
(ಶಿರಸಿಯ ಕದಂಬವಾಣಿ ಪತ್ರಿಕೆಯಲ್ಲಿ ಈ ಬರಹ ಪ್ರಕಟಗೊಂಡಿತ್ತು.)

Wednesday, January 29, 2014

ನಿನ್ನ ನಗು

(ರೂಪದರ್ಶಿ : ಅನೂಷಾ ಹೆಗಡೆ)
ನಿಂತು ಒಮ್ಮೆ ನನ್ನ ಬಳಿಗೆ
ನಕ್ಕು ಹೋಗು ಹುಡುಗಿ
ಸಿಟ್ಟು ಬೇಡ, ಸೆಡವು ಬೇಡ
ನಲಿದು ಹೋಗು ಬೆಡಗಿ ||

ನಿನ್ನ ನಗುವೆ ನನ್ನ ಬದುಕು
ಮಾತು ಹಸಿರು-ಜೀವನ,
ಒಮ್ಮೆ ನಕ್ಕು ಹಾಗೆ ಸಾಗು
ಬಾಳು ಎಂದೂ ನಂದನ ||

ನಿನ್ನ ನಗುವು ಏಕೋ ಕಾಣೆ
ನನ್ನುಸಿರಿಗೆ ಅಮೃತ
ಅದುವೆ ಜೀವ ನನ್ನೊಳಾಣೆ
ಎದೆ ಬಡಿತಕೆ ಮಾರುತ ||

ನಿನ್ನ ನಗುವು ಮಾಸದಿರಲಿ
ನನ್ನದೆಂದೂ ಪಾಲಿದೆ
ದುಃಖ ದಾಳಿ ಇಡದೆ ಇರಲಿ
ನಗುವು ದೂರ ಓಡದೆ  ||

(ಈ ಕವಿತೆಯನ್ನು ಶಿರಸಿಯಲ್ಲಿ 15.03.2007ರಂದು ಬರೆದಿದ್ದೇನೆ)
(ಮೊಟ್ಟಮೊದಲನೆ ಬಾರಿಗೆ ಮುತ್ಮೂರ್ಡ್ ಮಾದತ್ತೆ ಈ ಕವಿತೆಗೆ ರಾಗ ಹಾಕಿ ಹಾಡಿದ್ದಳು.. ನಂತರ ತಂಗಿ ಸುಪರ್ಣ ಹಾಗೂ ಪೂರ್ಣಿಮಾ ಅವರುಗಳು ಇದನ್ನು ಹಾಡಿದ್ದಾರೆ.)
(ಕವಿತೆಗೆ ಚಿತ್ರ ಬಳಕೆ ಮಾಡಿಕೊಳ್ಳಲು ಅನುಮತಿ ನೀಡಿದ ಅನೂಷಾ ಹೆಗಡೆ ಗೆ ಧನ್ಯವಾದಗಳು)

Tuesday, January 28, 2014

ಬೆಂಗಾಲಿ ಸುಂದರಿ-4

                ವಿನಯಚಂದ್ರ ಹೊರಡುವ ಸಲುವಾಗಿ ತಯಾರಾಗಿ ನಿಂತಿದ್ದ ಹೊತ್ತಿಗೆ ಅವನ ರೂಮಿಗೆ ಏದುಸಿರು ಬಿಡುತ್ತ ಹತ್ತಿಬಂದ ಸುಶೀಲಮ್ಮ `ಇದೇ ಈ ಹಲಸಿನ ಕಾಯಿ ಚಿಪ್ಸ್ ತಗಂಡು ಹೋಗಾ.. ದಾರಿ ಮದ್ಯ ತಿಂಬಲೆ ಆಕ್ತು..' ಎಂದು ಹೇಳುತ್ತಿದ್ದಂತೆ ವಿನಯಚಂದ್ರನಿಗೆ ರೇಗಿಹೋಯಿತು.
                  `ಥೋ ಸುಮ್ಮಂಗಿರೆ ಮಾರಾಯ್ತಿ.. ಹಂಗಿದ್ದೆಲ್ಲಾ ಕೊಟ್ಟು ಕಳಸಡಾ.. ಮೊದಲೇ ಈ ರೀತಿ ಮಣಭಾರ ಲಗೇಜಿದ್ದು.. ಇದರ ಜೊತಿಗೆ ಅಂತವನ್ನೂ ಕೊಡಡಾ...' ಎಂದು ಹೇಳಿದ್ದನ್ನು ಕೇಳಿ ಮನಸ್ಸನ್ನು ಮುದುಡಿದಂತೆ ಮಾಡಿಕೊಂಡು ಸುಶೀಲಮ್ಮ ಹಿಂದಕ್ಕೆ ಮರಳಿದರು.
               ಹೊರಡಲು ಜೀಪಿನ ಬಳಿಗೆ ಬಂದಾಗ ಶಿವರಾಮ ಹೆಗಡೆಯವರು ಬಾಂಗ್ಲಾದೇಶಕ್ಕೆ ಸಂಬಂಧಪಡುವಂತಹ ಒಂದಿಷ್ಟು ಮ್ಯಾಪುಗಳು, ಚಿಕ್ಕ ಪುಟ್ಟ ಪುಸ್ತಕಗಳನ್ನು ವಿನಯಚಂದ್ರನ ಕೈಯಲ್ಲಿ ಇರಿಸಿದರು. ಅಪರೂಪಕ್ಕೆ ತನ್ನ ಅಪ್ಪನ ಮುಂದಾಲೋಚನೆ ನೋಡಿ ವಿನಯಚಂದ್ರ ವಿಸ್ಮಯಗೊಂಡಿದ್ದ. ಅದನ್ನು ಕೈಯಲ್ಲಿ ಹಿಡಿದು ತನ್ನ ಬ್ಯಾಗಿನೊಳಗೆ ತುರುಕಿ ಜೀಪಿನ ಹಿಂಭಾಗದಲ್ಲಿ ಇಟ್ಟ. ತಾನು ಅಪ್ಪನ ಪಕ್ಕದಲ್ಲಿ ಕುಳಿತ. ಶಿವರಾಮ ಹೆಗಡೇರು ಡ್ರೈವಿಂಗ್ ಸೀಟಿನಲ್ಲಿ ಕುಳಿತಿದ್ದರು. ತಂಗಿ ಅಂಜಲಿ ತಾನೂ ಬರುವುದಾಗಿ ಹೇಳಿದ್ದ ಕಾರಣ ಮೊದಲೇ ಜೀಪಿನಲ್ಲಿ ಆಸೀನಳಾಗಿದ್ದಳು.
           ಅಷ್ಟರಲ್ಲಿ ಅಲ್ಲಿಯೇ ಇದ್ದ ಆಳು ರಾಮ `ಹೋಯ್ ಸಣ್ ಹೆಗ್ಡೇರು... ದೊಡ್ ಸುದ್ದಿ ಮಾಡ್ಕಂಡು ಬನ್ನಿ.. ಪೇಪರ್ನಾಗೆ ಪೋಟೋ ಬರ್ತೈತಿ ಅಲ್ಲನ್ರಾ..? ನಾ ಆವಗ ನೋಡ್ತೇನಿ..' ಎಂದ.
             `ಆಗ್ಲೋ ರಾಮಾ.. ಹಂಗೆ ಆಗ್ಲಿ...' ಎಂದು ಜೀಪನ್ನೇರಿದ್ದ ವಿನಯಚಂದ್ರ. ವಿನಯಚಂದ್ರ ಹೊರಡುವುದನ್ನು ಊರಲ್ಲಿದ್ದನ ನಾಲ್ಕೈದು ಮನೆಗಳ ಜನರು ವಿಶೇಷ ಕುತೂಹಲದಿಂದ ನೋಡುತ್ತಿದ್ದರು.
               `ತಮಾ... ಬಾಂಗ್ಲಾದೇಶದಲ್ಲಿ ಸ್ವಲ್ಪ ಹುಷಾರಾಗಿರೋ.. ಅಲ್ಲಿ ಗಲಭೆ ಶುರುವಾಜಡಾ ಮಾರಾಯಾ.. ಅವರವರ ನಡುವೆ ಅದೆಂತದ್ದೋ ಗಲಾಟೆನಡಾ.. ದೇಶದ ತುಂಬಾ ಹಿಂಸಾಚಾರ ತುಂಬಿದ್ದಡಾ.. ಯಾವದಕ್ಕೂ ಸೇಪ್ಟಿ ನೋಡ್ಕ್ಯ..' ಎಂದು ಮತ್ತೆ ಮತ್ತೆ ಹೆಗಡೇರು ಮಗನಿಗೆ ಹೇಳಿದ್ದರು.
                 `ಅಣಾ.. ಬಾಂಗ್ಲಾದೇಶದಲ್ಲಿ ಬೆಂಗಾಲಿ ಸುಂದರಿಯರು ಭಾರಿ ಚೊಲೋ ಇರ್ತ ಹೇಳಿ ಕೇಳಿದ್ದಿ.. ಹುಷಾರೋ..ಯಾರಾದ್ರೂ ನಿನ್ ಪಟಾಯ್ಸಿದ್ರೆ ಹುಷಾರು.. ಅವರನ್ನ ನೋಡ್ಕತ್ತ ಅಲ್ಲೇ ಉಳ್ಕಂಡು ಬಿಡಡಾ.. ' ಎಂದು ಅಂಜಲಿ ಛೇಡಿಸಿದಾಗ ವಿನಯಚಂದ್ರ ಒಮ್ಮೆ ಸಣ್ಣದಾಗಿ ನಕ್ಕ.. `ಅರ್ರೆ .. ಬಾಂಗ್ಲಾದೇಶಕ್ಕೆ ಹೋಗುತ್ತಿರುವವನು ನಾನು.. ಆದರೆ ನನಗಿಂತ ಹೆಚ್ಚು ಇವರು ಹೋಂ ವರ್ಕ್ ಮಾಡಿಕೊಂಡಿದ್ದಾರಲ್ಲ..' ಎನ್ನಿಸಿತ್ತು..
                  ತಮ್ಮೂರಿನ ತಗ್ಗು ದಿಣ್ಣೆಗಳ ರಸ್ತೆಯನ್ನು ಹಾದು ಶಿರಸಿಯನ್ನು ತಲುಪುವ ವೇಳೆಗೆ ಜೀಪಿನಲ್ಲಿ ಕುಳಿತಿದ್ದ ವಿನಯಚಂದ್ರ ಹಣ್ಣಾಗಿದ್ದ. ಹಿಂದಿನ ಸೀಟಿನಲ್ಲಿ ಕುಳಿತಿದ್ದ ಅಂಜಲಿ ಲಟ್ಟು ಜೀಪಿನ ಬಗ್ಗೆ ಸಾಕಷ್ಟು ಸಾರಿ ಮಂತ್ರಾಕ್ಷತೆ ಮಾಡಿದ್ದಳು.. `ಈ ಹಾಳ್ ಜೀಪನ್ ಮಾರಾಟಾ ಮಾಡಿ ಮಾರುತಿ ಕಾರ್ ತಗ ಹೇಳಿ ಅಪ್ಪಯ್ಯಂಗೆ ಆವತ್ತೇ ಹೇಳಿದ್ದಿ.. ಕೇಳಿದ್ನಿಲ್ಲೆ.. ಈ ಹೊಂಡದ ರಸ್ತೆಲ್ಲಿ ಬರತನಕ ಯನ್ ಸ್ವಂಟೆಲ್ಲ ನೊಯಲೆ ಹಿಡದೋತು.. ಮಾರಾಯ್ನೆ.. ಈ ಜೀಪ್ ಕೊಟ್ ಬೇರೆ ಯಾವುದಾದ್ರೂ ತಗಳಾ...' ಎಂದು ಅಂಜಲಿ ಮಾರ್ಗಮಧ್ಯದಲ್ಲಿ ಅದೆಷ್ಟು ಸಾರಿ ಹೇಳಿದ್ದಳೋ.  ಶಿವರಾಮ ಹೆಗಡೆಯವರು ನಕ್ಕು ನಕ್ಕು ಸುಮ್ಮನಾಗಿದ್ದರು. `ಕೂಸಿನ ಸೊಕ್ಕು ಇವತ್ತು ಅರ್ಧಮರ್ಧ ಕಮ್ಮಿ ಆತು ನೋಡು...' ಎಂದು ನಕ್ಕಿದ್ದರು ಹೆಗಡೆಯವರು.
                 ಶಿರಸಿಯಲ್ಲಿ ಊಟ ಮುಗಿಸಿ ಬೆಂಗಳೂರು ಬಸ್ಸನ್ನೇರುವ ವೇಳೆಗೆ ಸರಿಸುಮಾರು ರಾತ್ರಿಯಾಗಿತ್ತು. ಮಗನಿಗೆ ಮತ್ತೆ ಮತ್ತೆ ಸಲಹೆಗಳನ್ನು ಹೇಳಿದ ಶಿವರಾಮ ಹೆಗಡೇರು ಅಂಜಲಿಯ ಜೊತೆಗೆ ಮನೆಗೆ ಮರಳಿದ್ದರು. ಹೀಗೆ ಮರಳುವಾಗ ಬಹುಶಃ ಅವರಿಗೂ ಗೊತ್ತಿರಲಿಕ್ಕಿಲ್ಲ.. ವಿನಯಚಂದ್ರ ಬಾಂಗ್ಲಾದೇಶಕ್ಕೆ ಹೋದವನು ಸಧ್ಯದಲ್ಲಿ ತಮ್ಮೂರಿಗೆ ಮರಳುವುದಿಲ್ಲ ಎನ್ನುವುದು.. ಬಾಂಗ್ಲಾ ನಾಡಿನಲ್ಲಿ ವಿನಯಚಂದ್ರ ಅದೆಷ್ಟು ಬವಣೆಗಳನ್ನು ಅನುಭವಿಸುತ್ತಾನೆ ಎನ್ನುವುದು ಗೊತ್ತಿದ್ದಿದ್ದರೆ ಮೊದಲೇ ತಡೆದುಬಿಡುತ್ತಿದ್ದರೇನೋ. ವಿನಯಚಂದ್ರ ಬಸ್ಸನ್ನೇರಿ, ಮೊದಲೆ ಬುಕ್ಕಿಂಗ್ ಮಾಡಿದ್ದ ಸೀಟಿನಲ್ಲಿ ಕುಳಿತ ತಕ್ಷಣ ಗಾಢ ನಿದ್ದೆ.. ಸಿಹಿ ಕನಸು. ಕನಸಿನ ತುಂಬೆಲ್ಲ ಬಾಂಗ್ಲಾದೇಶ ಹಾಗೂ ಅಲ್ಲಿನ ಕಬ್ಬಡ್ಡಿ ಪಂದ್ಯವೇ ಮತ್ತೆ ಮತ್ತೆ ಕಾಣುತ್ತಿತ್ತು.

**

                   ಬೆಳಗಾಗುವ ವೇಳೆಗೆ ಬೆಂಗಳೂರು ನಗರಿ ಕಣ್ಣೆದುರು ನಿಂತಿತ್ತು. ಬಸ್ಸಿಳಿದ ವಿನಯಚಂದ್ರ ಆಟೋ ಹಿಡಿದು ಸೀದಾ ತನ್ನ ಕಬ್ಬಡ್ಡಿಯ ಅಕಾಡೆಮಿಯತ್ತ ತೆರಳಿದ. ಅಕಾಡೆಮಿಗೆ ಬಂದು ತನ್ನ ಲಗೇಜನ್ನು ತನ್ನ ಎಂದಿನ ಕೊಠಡಿಯಲ್ಲಿ ಇಟ್ಟು ತಿಂಡಿ ತಿಂದು ವಾಪಸಾಗುವುದರೊಳಗಾಗಿ ಅದೇ ಅಕಾಡೆಮಿಯ ಅವನ ಅನೇಕ ಜನ ಜೊತೆಗಾರರು ಅಲ್ಲಿಗೆ ಬಂದಿದ್ದರು. ವಿನಯಚಂದ್ರನನ್ನು ಕಂಡವರೇ ಎಲ್ಲರೂ ಶುಭಾಷಯಗಳನ್ನು ತಿಳಿಸುವವರೇ ಆಗಿದ್ದರು. ತಮ್ಮ ಜೊತೆಗೆ ತರಬೇತಿ ಪಡೆಯುತ್ತಿದ್ದವನು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿ ವಿಶ್ವಕಪ್ಪಿಗೆ ತೆರಳುತ್ತಿದ್ದುದರ ಬಗ್ಗೆ ಎಲ್ಲರಿಗೂ ಸಂತೋಷವಾಗಿತ್ತು. ಮನಃಪೂರ್ವಕವಾಗಿ ವಿನಯಚಂದ್ರನನ್ನು ಹಾರೈಸಿದರು.
                 ಮದ್ಯಾಹ್ನದ ವೇಳೆಗೆ ರಾಷ್ಟ್ರೀಯ ತಂಡದಲ್ಲಿ ಆಡುತ್ತಿದ್ದ ತಮಿಳುನಾಡಿನ ಇಬ್ಬರು ಆಟಗಾರರು, ಕೇರಳದ ಒಬ್ಬಾತ ಬೆಂಗಳೂರಿನ ಆ ಅಕಾಡೆಮಿಗೆ ಬರುವವರಿದ್ದರು. ಅವರು ಬಂದ ನಂತರ ವಿಮಾನದ ಮೂಲಕ ನವದೆಹಲಿ ತೆರಳುವುದು, ಅಲ್ಲಿ ಉಳಿದ ಆಟಗಾರರ ಜೊತೆಗೆ ಸೇರಿ ಒಂದು ವಾರಗಳ ಕಾಲ ತಾಲೀಮು ನಡೆಸಿ ನಂತರ ಬಾಂಗ್ಲಾದೇಶದತ್ತ ಪ್ರಯಾಣ ಮಾಡುವುದು ಎಂಬ ಯೋಜನೆ ಮಾಡಲಾಗಿತ್ತು. ವಿನಯಚಂದ್ರ ಅವರಿಗಾಗಿ ಕಾಯುತ್ತ ನಿಂತ.
                ಮದ್ಯಾಹ್ನದ ವೇಳೆಗೆ ತಮಿಳುನಾಡಿನ ವೀರಮಣಿ, ಸೂರ್ಯನ್ ಬಂದರು. ಸ್ವಲ್ಪ ಹೊತ್ತಿನಲ್ಲಿಯೇ ಕೇರಳದಿಂದ ರೈಲಿನ ಮೂಲಕ ಕೃಷ್ಣಾ ನಾಯರ್ ಕೂಡ ಬಂದು ತಲುಪಿದ. ಈ ಮೂವರ ಪೈಕಿ ವಿನಯಚಂದ್ರನಿಗೆ ಸೂರ್ಯನ್ ನ ಪರಿಚಯವಿತ್ತು. ಉಳಿದಿಬ್ಬರ ಬಗ್ಗೆ ಕೇವಲ ಕೇಳಿ ತಿಳಿದಿದ್ದ ಅಷ್ಟೇ. ರಾಷ್ಟ್ರೀಯ ತಂಡದಲ್ಲಿ ಆಡಿದ ಇಬ್ಬರೂ ದೇಶದ ಅತ್ಯುತ್ತಮ ಕಬ್ಬಡ್ಡಿ ಆಟಗಾರರು ಎನ್ನುವುದನ್ನು ಕೇಳಿದ್ದ. ಪತ್ರಿಕೆಗಳಲ್ಲೂ ನೋಡಿದ್ದ. ವಿನಯಚಂದ್ರನಿಗೆ ಭಾರತದ ಕಬ್ಬಡ್ಡಿ `ಎ' ತಂಡದಲ್ಲಿ ಆಡುವಾಗ ಸೂರ್ಯನ್ ಪರಿಚಯವಾಗಿತ್ತು. ಉಳಿದಿಬ್ಬರೂ ಸೀನಿಯರ್ ಪ್ಲೇಯರ್ ಆಗಿದ್ದರಿಂದ ಅವರ ಬಗ್ಗೆ ತಿಳಿದಿದ್ದ ಅಷ್ಟೇ. ಮಾತಾಡಿರಲಿಲ್ಲ.
                 ಇವರ ಪೈಕಿ ವಿನಯಚಂದ್ರ ಹಾಗೂ ಸೂರ್ಯನ್ ಗೆ ನಿಧಾನವಾಗಿ ದೋಸ್ತಿ ಬೆಳೆಯಲಾರಂಭವಾಯಿತು. ತಮಿಳುನಾಡಿನ ಮಧುರೈ ಬಳಿಯವನು ಆತ. ತಮಿಳುನಾಡಿನವನು ಎಂಬುದು ಆತನ ಬಣ್ಣ ನೋಡಿದರೇ ಗೊತ್ತಾಗುತ್ತಿತ್ತು. ಕಪ್ಪಗಿದ್ದ. ದೃಢಕಾಯನಾಗಿದ್ದ. ಆದರೆ ಅಸಾಮಾನ್ಯ ವೇಗ ಆತನಲ್ಲಿತ್ತು. ಬೆಂಗಳೂರಿನ ಅಕಾಡೆಮಿಯಲ್ಲಿ ವಿನಯಚಂದ್ರ ಹಾಗೂ ಸೂರ್ಯನ್ ಇಬ್ಬರೇ ಹಲವಾರು ಸಾರಿ ಪ್ರಾಕ್ಟೀಸ್ ಮಾಡಿದರು. ಆಗಲೇ ವಿನಯಚಂದ್ರನಿಗೆ ಸೂರ್ಯನ್ ನಲ್ಲಿದ್ದ ಅಸಾಧಾರಣ ಆಟದ ವೈಖರಿ ಪರಿಚಯವಾಗಿದ್ದು. ಬಲವಾದ ರೈಡಿಂಗ್ ಸೂರ್ಯನ್ನನ ತಾಕತ್ತಾಗಿತ್ತು. ತನ್ನದು ಕ್ಯಾಚಿಂಗ್ ಕೆಲಸವಾಗಿದ್ದ ಕಾರಣ ತರಬೇತಿ ಮಾಡುತ್ತಿದ್ದ ಸಂದರ್ಭದಲ್ಲಿ ಇಬ್ಬರಿಗೂ ಅನೇಕ ಸಾರಿ ಜಿದ್ದಾ ಜಿದ್ದಿನ ಪೈಪೋಟಿ ಬೀಳುತ್ತಿತ್ತು. ಇಬ್ಬರೂ ಸೋಲೋಪ್ಪಿಕೊಳ್ಳಲು ಇಷ್ಟಪಡದ ಕಾರಣ ಸಾಕಷ್ಟು ರೋಚಕತೆಗೆ ಕಾರಣವಾಗುತ್ತಿದ್ದರು.
                 ವೀರಮಣಿ ಹಾಗೂ ಕೃಷ್ಣ ನಾಯರ್ ಇಬ್ಬರೂ ಪರಸ್ಪರ ಪರಿಚಿತರೇ ಆಗಿದ್ದರು. ಹಲವಾರು ಪಂದ್ಯಗಳಲ್ಲಿ ಒಟ್ಟಾಗಿ ಆಡಿದ್ದರು. ಸೂರ್ಯನ್ ಹಾಗೂ ವಿನಯಚಂದ್ರನಿಗೆ ಇವರಿಬ್ಬರೂ ಸೀನಿಯರ್ ಆದ ಕಾರಣ ತಮ್ಮ ಅನುಭವಗಳನ್ನು ಅವರೆದುರು ತೆರೆದಿಟ್ಟರು. ಈ ಇಬ್ಬರು ಸೀನಿಯರ್ ಆಟಗಾರರ ಜೊತೆಗೆ ಕೆಲ ಪಂದ್ಯಗಳನ್ನೂ ಆಡಿ ಅನುಭವ ಪಡೆದುಕೊಂಡರು.
           ವಿಮಾನ ಹೊರಡಲು ಅರ್ಧಗಂಟೆಯಿದ್ದಾಗ ವಿನಯಚಂದ್ರನ ಕೋಚ್ ಚಿದಂಬರ್ ಅವರಿಂದ ದೂರವಾಣಿ ಕರೆ ಬಂದಿತು. `ಹಲೋ..' ಎಂದ.
              `ಹ್ಯಾಪ್ಪಿ ಜರ್ನಿ.. ಚೊಲೋ ಆಟವಾಡು .. ನಿನ್ನ ಮೇಲೆ ಬಹಳಷ್ಟು ಹೋಪ್ಸ್ ಇದ್ದು.. ನಂಬಿಗೆ ಹುಸಿ ಮಾಡಡಾ.. ನಮ್ಮೆಲ್ಲರ ಕನಸಿನ ಪೊಟ್ಟಣ ನೀನು. ಆ ಪೊಟ್ಟಣ ಹಾಳಾಗದಿರಲಿ. ಅದರಲ್ಲಿ ಸುಂದರ ಫಲ ಸಿಗಲಿ' ಎಂದು ಹೇಳಿದ ಚಿದಂಬರ್ ಅವರು ಮತ್ತಷ್ಟು ಸಲಹೆ ನೀಡಿ `ದೆಹಲಿ ತಲುಪಿದ ನಂತರ ಪೋನ್ ಮಾಡು..'  ಎಂದು ಹೇಳಿ ಪೋನಿಟ್ಟರು.
               ವಿನಯಚಂದ್ರ ನಿರಾಳನಾದ. ಅಷ್ಟರಲ್ಲಿ ವಿಮಾನದ ಬಳಿ ತೆರಳಲು ಸಜ್ಜಾಗುವಂತೆ ಏರ್ ಪೋರ್ಟಿನಲ್ಲಿ ಧ್ವನಿ ಮೊಳಗಿತು. ತನ್ನ ಮೂವರು ಒಡನಾಡಿಗಳೊಂದಿಗೆ ವಿನಯಚಂದ್ರ ಅತ್ತಹೊರಟ.
               ಚೆಕ್ಕಿಂಗು, ಅದೂ ಇದೂ ಕೆಲಸಗಳು ಮುಗಿದು ವಿಮಾನ ಏರಿ ತನ್ನ ಸೀಟಿನಲ್ಲಿ  ಕುಳಿತ ವಿನಯಚಂದ್ರನ ಪಕ್ಕದ ಸೀಟಿನಲ್ಲಿ ಯಾರೋ ಅಪರಿಚಿತರು ಕುಳಿತಿದ್ದರು. ಕೊನೆಗೆ ಸೂರ್ಯನ್ ಬಳಿ ತನ್ನ ಪಕ್ಕದ ಸೀಟಿಗೆ ಬರುವಂತೆ ಹೇಳಿ ತನ್ನ ಪಕ್ಕದ ಅಪರಿಚಿತರನ್ನು ಕನ್ವಿನ್ಸ್ ಮಾಡಿದ. ಅವರು ಒಪ್ಪಿಕೊಂಡರು. ವಿಮಾನ ನಭಕ್ಕೆ ಜಿಗಿಯುವ ವೇಳೆಗೆ ಇವರು ಹಲವಾರು ಸುದ್ದಿಗಳನ್ನು ಹಲುಬಿದ್ದರು. ಬಾಂಗ್ಲಾದೇಶದ ಬಗ್ಗೆಯೂ ಮಾತುಕತೆಗಳು ನಡೆದಿದ್ದವು.
               ಮಧುರೈನ ಗಲ್ಲಿಗಳಲ್ಲಿ ಕಬ್ಬಡ್ಡಿ ಆಡುತ್ತ ಬೆಳೆದ ಸೂರ್ಯನ್ ತಾನು, ತಂದೆ, ತಾಯಿ ಹಾಗೂ ಇಬ್ಬರು ತಂಗಿಯರ ಜೊತೆ ಇರುವ ವಿವರ ಹೇಳಿದ. ತಮಿಳುನಾಡಿನ ಟಿಪಿಕಲ್ ಹಳ್ಳಿಯನ್ನು ತೆರೆದಿಟ್ಟ. ಸುಮ್ಮನೆ ಕೇಳುತ್ತ ಹೋದ ವಿನಯಚಂದ್ರ. ಜೊತೆಗೆ ತನ್ನ ಕುಟುಂಬದ ವಿವರಗಳನ್ನೂ ತಿಳಿಸಿದ. ತಾನು ಬೆಳೆದ ಉತ್ತರ ಕನ್ನಡದ ಹಳ್ಳಿಯ ಬಗ್ಗೆ ಹೇಳುತ್ತ ಹೇಳುತ್ತ ರೋಮಾಂಚನಗೊಂಡ. ಸುಮಾರು ಹೊತ್ತು ಮಾತಾಡಿದ ನಂತರ ಇಬ್ಬರಿಗೂ ಸಾಕೆನ್ನಿಸಿತು. ಮೌನವಾದರು. ವಿನಯಚಂದ್ರ ಕನಸಿನ ಲೋಕಕ್ಕೆ ಜಿಗಿಯಲು ಕಣ್ಣುಮುಚ್ಚಿದ. ಕಣ್ಮುಂದೆ ಚಿದಂಬರ್ ಅವರ ವ್ಯಕ್ತಿಚಿತ್ರಣ ಮೂಡಿಬಂದಿತು.
                 ಕುರುಚಲು ಗಡ್ಡ, ಮಧ್ಯಮ ಗಾತ್ರದ ಚಿದಂಬರ ಮಾಸ್ತರ್ರನ್ನು ತಾನು ಮೊದಲನೇ ಬಾರಿಗೆ ನೋಡಿದ್ದು ಹೈಸ್ಕೂಲಿನಲ್ಲಿ. ಹೈಸ್ಕೂಲಿನ ದೈಹಿಕ ಶಿಕ್ಷಕರ ಬಳಿ ತಾನು ಕಬ್ಬಡ್ಡಿ ಆಡುತ್ತೇನೆ ಎಂದು ಹೇಳಿದಾಗ ಅವರು ವಿಚಿತ್ರವಾಗಿ ನಕ್ಕಿದ್ದರು. ಬ್ರಾಹ್ಮಣ ಹುಡುಗನಾಗಿ ಅಪ್ಪಟ ಸಸ್ಯಾಹಾರಿಯಾಗಿ ಇವನೆಂತ ಕಬ್ಬಡ್ಡಿ ಆಡುತ್ತಾನೆಂದು ವ್ಯಂಗ್ಯವಾಗಿ ನಕ್ಕಿದ್ದು, ಆ ನಂತರದ ದಿನಗಳಲ್ಲಿ ಹೈಸ್ಕೂಲು ಟೀಮಿನಲ್ಲಿ ಕಬ್ಬಡ್ಡಿಯನ್ನು ಆಡಿ ಗೆಲುವನ್ನು ಕಾಣಲು ಹಿಡಿದಾಗಲೇ ದೈಹಿಕ ಶಿಕ್ಷಕರು ತನ್ನ ಕಡೆಗಿದ್ದ ವ್ಯಂಗ್ಯದ ಮನೋಭಾವವನ್ನು ತೊರೆದಿದ್ದು ವಿನಯಚಂದ್ರನಿಗೆ ನನಪಾಯಿತು. ಇಂತಹ ದಿನಗಳಲ್ಲೇ ಅವರು ವಿನಯಚಂದ್ರನಿಗೆ ಚಿದಂಬರ್ ಅವರನ್ನು ಪರಿಚಯ ಮಾಡಿಕೊಟ್ಟಿದ್ದರು.
                 `ನೋಡ್ರೀ ಚಿದಂಬರ್.. ಇಂವನೂ ನಿಮ್ಮ ಹಾಗೇ.. ಬ್ರಾಮರವನು... ಕಬ್ಬಡ್ಡಿ ಆಡ್ತಾನ್ರೀ.. ಆಟ ಚನ್ನಾಗೈತಿ..ಇವನಿಗೊಂದು ಸ್ವಲ್ಪ ತರಬೇತಿ ಕೊಟ್ಟರೆ ಒಳ್ಳೆ ತಯಾರಾಗಬಲ್ಲ ನೋಡ್ರಿ.. ' ಎಂದು ಹೇಳಿದಾಗ ಚಿದಂಬರ್ ಅವರು ಅಚ್ಚರಿಯಿಂದ ನೋಡಿದ್ದರು. ಕೊನೆಗೆ `ದಿನಾ ಚಿದಂಬರ್ ಅವರ ಬಳಿ ಪ್ರಾಕ್ಟೀಸ್ ಮಾಡು.. ಅವರು ನಿನ್ನಂತೆ ಹಲವು ಜನರಿಗೆ ಕಬ್ಬಡ್ಡಿ ಹೇಳಿಕೊಡ್ತಾರೆ..' ಎಂದಿದ್ದ ನೆನಪು ಆತನ ಮನಸ್ಸಿನಲ್ಲಿನ್ನೂ ಹಸಿಯಾಗಿಯೇ ಇತ್ತು.
                 ಮೊದಲ ದಿನ ಕಬ್ಬಡ್ಡಿ ಆಡಲು ಹೋಗಿದ್ದಾಗ ತುಸು ಅಂಜಿಕೆಯಿಂದ ಆಡಿದ್ದ ವಿನಯಚಂದ್ರ. ನಂತರದ ದಿನಗಳಲ್ಲಿ ಆತ ನಿಧಾನವಾಗಿ ಪಳಗಿದ್ದ. ಕೊನೆಗೆ ಒಂದು ದಿನ ಚಿದಂಬರ್ ಅವರಿಗೆ ಏನನ್ನಿಸಿತೋ ಏನೋ ವಿನಯಚಂದ್ರನಿಗೆ ಆತನ ಅಂಗಿಯನ್ನು ಬಿಚ್ಚಿ ನಂತರ ಕಬ್ಬಡ್ಡಿ ಆಡೆಂದಿದ್ದರು. ಆತ ನಾಚಿಕೊಂಡಿದ್ದ. ಕೊನೆಗೆ ಸಿಕ್ಕಾಪಟ್ಟೆ ಬೈದು ಆತನನ್ನು ಆಟಕ್ಕೆ ಒಪ್ಪಿಸಿದ್ದರು.
                ವಿನಯಚಂದ್ರ ಅಂಜಿಕೆಯಿಂದ ಆಡಿದ. ಮೊದಲನೇ ಸಾರಿ ರೈಡಿಂಗಿಗೆ ಹೋದಾಗಲೇ ಸೋತು ಹೊರ ಬಿದ್ದು ಬಿಟ್ಟಿದ್ದ. ಕೊನೆಗೆ ಚಿದಂಬರ ಅವರು ಪರೀಕ್ಷೆ ಮಾಡಿದಾಗ ವಿನಯಚಂದ್ರನ ಜನಿವಾರ ಆತನ ಆಟಕ್ಕೆ ತೊಡಕನ್ನು ತಂದಿತ್ತು, ಆಡುವ ಭರದಲ್ಲಿ ಅದು ಫಟ್ಟೆಂದು ಹರಿದುಹೋಗಿತ್ತೆಂಬುದು ಗಮನಕ್ಕೆ ಬಂದಿತು. ಇದೇ ಕಾರಣಕ್ಕೆ ಮುಜುಗರಪಟ್ಟಿದ್ದ. ತೀರಾ ಶಾಸ್ತ್ರೀಯವಾಗಿ ಬ್ರಾಹ್ಮಣಿಕೆಯಲ್ಲಿ ತೊಡಗಿಕೊಂಡಿರದಿದ್ದರೂ ಜನಿವಾರ ಹರಿದುಹೋಯಿತು ಎಂದಾಗ ವಿನಯಚಂದ್ರ ನರ್ವಸ್ ಆಗಿದ್ದ. ಅದೇ ಭಾವನೆಯಲ್ಲಿಯೇ ಆಟದಲ್ಲಿ ಸೋತಿದ್ದ.
               ಹಾಗೆಂದ ಮಾತ್ರಕ್ಕೆ ಸಂದ್ಯಾವಂದನೆ ಸೇರಿದಂತೆ ಇತರೆ ಯಾವುದೇ ಧಾರ್ಮಿಕ ಕಾರ್ಯಗಳಲ್ಲಿ ಆತ ತೊಡಗಿಕೊಳ್ಳುತ್ತಾನೆಂದುಕೊಳ್ಳಬಾರದು. `ಸರ್.. ಜನೀವಾರ ಹರಿದುಹೋಯ್ತು.. ಎಂತಾ ಆಕ್ತೋ.. ಗೊತ್ತಾಗ್ತಾ ಇಲ್ಲೆ.. ಎಂತಾ ಮಾಡಕಾತು.. ಯಂಗೆ ಬಹಳ ಹೆದರಿಕೆ ಆಕ್ತಾ ಇದ್ದು..' ಎಂದು ತನ್ನ ಮನದಾಳದ ತುಮುಲವನ್ನು ತೋಡಿಕೊಂಡಿದ್ದ.
               `ಓಹೋ ಇದಾ ನಿನ್ ಸಮಸ್ಯೆ.. ಜಕನಿವಾರ ಹರಿದು ಹೋದ್ರೆ ಇನ್ನೊಂದು ಹಾಕ್ಯಂಡ್ರಾತಾ ಮಾರಾಯಾ.. ಆದರೆ ಮುಂದಿನ ಸಾರಿ ಆಡೋವಾಗ ಅಥವಾ ಆಡಲೆ ಬಂದಾಗ ಜನಿವಾರವನ್ನು ಸೊಂಟಕ್ಕೆ ಸಿಕ್ಕಿಸ್ಕ್ಯ..' ಎಂದು ಸಲಹೆ ನೀಡಿದ್ದರು ಚಿದಂಬರ್ ಅವರು.
                 `ಹಂಗೆ ಮಾಡಲೆ ಅಡ್ಡಿಲ್ಯಾ..? ಎಂತಾ ತೊಂದರೆ ಇಲ್ಯಾ?' ಎಂದು ಬೆಪ್ಪನಾಗಿ ಕೇಳಿದ್ದ ವಿನಯಚಂದ್ರ.
                 `ಹುಂ. ನಮ್ಮಲ್ಲಿ ಬಹುತೇಕ ಹಿರಿಯರು ತೋಟಕ್ಕೆ ಇಳಿದು ಕೆಲಸ ಮಾಡ್ತ. ಒಜೆ ಕೆಲಸ ಅಥವಾ ಬೇರೆ ರೀತಿ ಗಟ್ಟಿ ಕೆಲಸ ಮಾಡುವಾಗ ಜನಿವಾರ ಸೊಂಟಕ್ಕೆ ಸುತ್ತಿಕೊಳ್ತ. ಅನಿವಾರ್ಯ ಸಂದರ್ಭದಲ್ಲಿ ಅಡ್ಡಿಲ್ಲೆ.. ಹಿಂಗ್ ಸೊಂಟಕ್ಕೆ ಸುತ್ತಿಕ್ಯಂಡ್ರೆ ಜನಿವಾರ ಹರಿತು ಅನ್ನೋ ಭಯನೂ ಇರ್ತಿಲ್ಲೆ.. ನಿಂಗೆ ಅದರ ಬಗ್ಗೆ ಅಷ್ಟಾಗಿ ಗಮನ ಹರಿಸೋ ಅಗತ್ಯವೂ ಇರ್ತಿಲ್ಲೆ.. ಸೊಂಟಕ್ಕೆ ಜನಿವಾರ ಸುತ್ತಿಕೊಳ್ಳುವುದು ತಪ್ಪಲ್ಲ. ಯಂಗವ್ವೆಲ್ಲಾ ಹಂಗೇ ಮಾಡ್ತಾ ಇದ್ದಿದ್ದು ಮಾರಾಯಾ.. ನಿನ್ ಅಪ್ಪಯ್ಯ ಗದ್ದೆ ಅಥವಾ ತೋಟಕ್ಕೆ ಹೋಗಿ ಕೆಲಸ ಮಾಡ್ತಾ ಹೇಳಾದ್ರೆ ಅವನ ಹತ್ರಾನೇ ಸರಿಯಾಗಿ ಕೇಳ್ಕ್ಯ' ಎಂದು ಹೇಳಿದ್ದರಲ್ಲದೇ ಇಂದಿನ ಜಮಾನಾದಲ್ಲಿ ಹಲವು ಬ್ರಾಹ್ಮಣ ಹುಡುಗರು ಜನಿವಾರ ಕಿತ್ತೆಸೆದಿದ್ದನ್ನೂ ಮಾಡುವ ಆಚಾರ ವಿಚಾರ ಸುಳ್ಳೆಂದು ವಾದ ಮಾಡುವುದನ್ನೂ ಪ್ರತಿದಿನ ನಾನ್ ವೆಜ್ ತಿನ್ನುವುದನ್ನೂ ಹೇಳಿದಾಗಲೇ ವಿನಯಚಂದ್ರ  ಸ್ವಲ್ಪ ಬೇರೆಯ ತರಹ ಆಲೋಚನೆ ಮಾಡಿದ್ದು. ಸುತ್ತಮುತ್ತಲ ಊರುಗಳಿಗೆ ಹೆಗಡೇರು ಎಂದು ಕರೆಸಿಕೊಳ್ಳುತ್ತಿದ್ದ ತನ್ನ ಅಪ್ಪ ಶಿವರಾಮ ಹೆಗಡೆಯವರು ಅನೇಕ ಸಾರಿ ತೋಟದ ಕೆಲಸಕ್ಕೋ, ಮರ ಹತ್ತುವ ಕಾರ್ಯದಲ್ಲೋ ತೊಡಗಿಕೊಂಡಿದ್ದಾಗ ಜನಿವಾರವನ್ನು ಸೊಂಟಕ್ಕೆ ಸುತ್ತಿಕೊಳ್ಳುತ್ತಿದ್ದುದನ್ನು ವಿನಯಚಂದ್ರ ಗಮನಿಸಿದ್ದ. ಅದು ಮತ್ತೊಮ್ಮೆ ನೆನಪಿಗೆ ಬಂದಿತು.
                 ಹೈಸ್ಕೂಲು ಮುಗಿದ ನಂತರ ಚಿದಂಬರ್ ಅವರೇ ವಿನಯಚಂದ್ರನನ್ನು ಹುಬ್ಬಳ್ಳಿಯಲ್ಲಿ ಕಾಲೇಜಿಗೆ ಪಿಯುಸಿಗೆ ಸೇರಿಸಿದ್ದರು. ಅಲ್ಲಿ ಕಬ್ಬಡ್ಡಿಯ ಬಗ್ಗೆ ತರಬೇತಿಯ ಜೊತೆಗೆ ಬೇರೆ ಬೇರೆ ವಿಭಾಗದ ಕಬ್ಬಡ್ಡಿ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದರು. ಬಹುಶಃ ಆಗಲೇ ಇರಬೇಕು ವಿನಯಚಂದ್ರ ತನ್ನ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಎಗ್ ರೈಸ್ ತಿಂದಿದ್ದು. ಮೊದಲ ಸಾರಿ ತಿನ್ನುವಾಗ ಮನಸ್ಸೊಂಥರಾ ಆಗಿತ್ತು. ಆದರೆ ಚಿದಂಬರ್ ಅವರು ಆತನಿಗೆ ಮತ್ತೆ ಸಲಹೆಗಳ ಸುರಿಮಳೆಯನ್ನು ಸುರಿಸಿದ್ದರು. ಅವರ ಸಲಹೆಯ ಮೇರೆ ಎಗ್ ರೈಸ್ ತಿನ್ನಲು ಆರಂಭಿಸಿದ್ದ.
                  `ಕಬ್ಬಡ್ಡಿ ಆಟಗಾರನಾದವನು ಎಗ್ ರೈಸ್ ಆದರೂ ತಿನ್ನಲೇಬೇಕು.. ಇಲ್ಲವಾದರೆ ಕಷ್ಟವಾಗ್ತು ಮಾರಾಯಾ.. ನಿನ್ನ ಊಟದಲ್ಲಿ ಆಟಕ್ಕೆ ಬೇಕಾದ ತಾಕತ್ತು ಸಿಗಬೇಕು ಅಂದರೆ ಹೇಗೆ ಸಾಧ್ಯ ಹೇಳು. ಎಗ್ ರೈಸ್ ದೇಹಕ್ಕೆ ಸಾಕಷ್ಟು ತಾಕತ್ತನ್ನು ನೀಡ್ತು.. ಅದು ಹಾಲಿನ ಹಂಗೇಯಾ ಮಾರಾಯಾ.. ಹಾಲಿನಷ್ಟೇ ಪೌಷ್ಟಿಕ. ಹಾಲು+ಮೊಟ್ಟೆ ಎರಡೂ ಸೇರಿದರೆ ದೇಹಕ್ಕೆ ಬಹಳ ಶಕ್ತಿದಾಯಕ ' ಎಂದೂ ಹೇಳಿಬಿಟ್ಟಿದ್ದರು. ಈಗ ಸಲೀಸಾಗಿ ತಿನ್ನಲು ತೊಡಗಿದ್ದ. ನಂತರದ ದಿನಗಳಲ್ಲಿ ಎಗ್ ರೈಸ್ ವಿನಯಚಂದ್ರನ ಬದುಕಿನ ಭಾಗವಾಗಿ ಹೋಗಿತ್ತಾದರೂ ಆತನ ಮನೆಯಲ್ಲಿ ಈ ಕುರಿತು ಗೊತ್ತಿರಲಿಲ್ಲ.
                    ಹುಬ್ಬಳ್ಳಿ, ಬೆಳಗಾವಿ ವಲಯ, ರಾಜ್ಯ ತಂಡ, ದಕ್ಷಿಣ ಭಾರತ ವಲಯ ಸೇರಿದಂತೆ ಹಲವಾರು ವಲಯಗಳಲ್ಲಿ ವಿನಯಚಂದ್ರ ಮುಂದಿನ ದಿನಗಳಲ್ಲಿ ಆಡುತ್ತ ಹೋದ. ಚಿದಂಬರ್ ಆತನ ಬೆನ್ನಿಗೆ ನಿಂತಿದ್ದರು. ತಮ್ಮ ಆಟವನ್ನು ವಿನಯಚಂದ್ರನಿಗೆ ಧಾರೆಯೆರೆದು ಕೊಟ್ಟಿದ್ದರು. ತಾನು ಕಬ್ಬಡ್ಡಿ ಆಟಗಾರನಾಗಿ ಸಾಧಿಸಲು ಸಾಧ್ಯವಾಗದ್ದನ್ನೆಲ್ಲ ವಿನಯಚಂದ್ರ ಮಾಡಬೇಕು ಎನ್ನುವುದು ಚಿದಂಬರ ಸರ್ ಅವರ ಒತ್ತಾಸೆಯಾಗಿತ್ತು. ಆತ ಮೇಲ್ಮೇಲಿನ ಮಟ್ಟಕ್ಕೆ ಹೋದಂತೆಲ್ಲ ಅವರ ತರಬೇತಿ ಕಠಿಣವಾಗುತ್ತಿತ್ತು. ಅವರ ಒತ್ತಾಸೆಯನ್ನು ತಾನು ನಿರಾಸೆ ಮಾಡಿರಲಿಲ್ಲ. ಕಬ್ಬಡ್ಡಿಯಲ್ಲಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿ ವಿಶ್ವಕಪ್ ಆಡಲು ಹೊರಟಿದ್ದ. ಬಹುಶಃ ತನಗಿಂತಲೂ ಚಿದಂಬರ ಸರ್ ಹೆಚ್ಚು ಸಂತಸ ಪಟ್ಟಿರುತ್ತಾರೆ ಎಂದುಕೊಂಡ ವಿನಯಚಂದ್ರ. ಅವರ ಖುಷಿಗೆ ಪಾರವಿರಲಿಲ್ಲ ಎನ್ನುವುದು ಅವರ ಮಾರಿನಲ್ಲೇ ಸ್ಪಷ್ಟವಾಗುತ್ತಿತ್ತು. ಕಬ್ಬಡ್ಡಿಯನ್ನು ಶಾಸ್ತ್ರೋಕ್ತವಾಗಿ ಕಲಿಸಿದವರಿಗೆ ನಿರಾಸೆ ಮಾಡಲಿಲ್ಲವಲ್ಲ.. ಎಂದು ನಿಟ್ಟುಸಿರು ಬಿಟ್ಟ. ಹೀಗೆ ಚಿದಂಬರ ಸರ್  ನೆನಪುಮಾಡಿಕೊಂಡ ವಿನಯಚಂದ್ರ ಕಣ್ಣು ತೆರೆಯುವ ವೇಳೆಗಾಗಲೇ ವಿಮಾನ ನವದೆಹಲಿಯಲ್ಲಿ ಇಳಿಯಲು ಸಜ್ಜಾಗುತ್ತಿತ್ತು. ಪಕ್ಕದಲ್ಲಿದ್ದ ಸೂರ್ಯನ್ ಹಿತವಾಗಿ ಭುಜವನ್ನು ಅಲುಗಾಡಿಸಿ.. `ಅರೇ.. ಉಠೋ ಭಾಯ್...' ಎನ್ನುತ್ತಿದ್ದ. ನಸುನಕ್ಕು ವಿನಯಚಂದ್ರ ಇಳಿಯಲು ಸಜ್ಜಾಗಿದ್ದ.

(ಮುಂದುವರಿಯುವುದು)