Saturday, June 1, 2013

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು - ಭಾಗ 3

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು - ಭಾಗ 3


ಮಾಸಿಲ ಮಣಿಯಿಂದ ಕಣ್ಣೆತ್ತಿ ನೋಡಿದರೆ ದೂರದಲ್ಲಿ ಊಟಿಯ ಗಿರಿಶಿಖರಗಳು ನಮ್ಮನ್ನು ಕೈಬೀಸಿ ಕರೆಯುತ್ತವೆ...
ಬಾನು ಚುಂಬಿಸಿದಂತೆ ಕಾಣು ಈ ಗಿರಿಶಿಖರಗಳ ಮರೆಯಿಂದ ಸೂರ್ಯ ಆಣುಕುತ್ತಾನೆ..
ಆಗ ಕಾಣುವ ದೃಶ್ಯ ಚಿತ್ತಾರ ವರ್ಣನೆಗೆ ನಿಲುಕದ್ದು..

ಇಲ್ಲಿ ಕೊಂಚ ಮಾಸಿಲಮಣಿಯ ರಸ್ತೆಯ ಬಗ್ಗೆ ಹೇಳಬೇಕು...
ಮೈಸೂರಿನಿಂದ ಊಟಿಗೆ ಹೋಗುವುದಾದರೆ ಮುಖ್ಯವಾಗಿ ಇರುವುದು ರಾಷ್ಟ್ರೀಯ ಹೆದ್ದಾರಿ.. ಬಂಡಿಪುರದಿಂದ ಮಧುಮಲೈ ಅರಣ್ಯಕ್ಕೆ ಪ್ರವೇಶ ಮಾಡುವಾಗ ಒಂದು ಡಾಂಬರು ರಸ್ತೆ ಸಾಗುತ್ತದೆ.. ಇದು ಮಾಸಿಲಮಣಿಯ ಮೂಲಕ ಊಟಿಗೆ ಹೋಗುತ್ತದೆ.. ರಾಷ್ಟ್ರೀಯ ಹೆದ್ದಾರಿಯ ಮೂಲಕ ಘಟ್ಟ ಹತ್ತಿದರೆ 65-70 ಕಿ.ಮಿ ದೂರ. ಆದರೆ ಮಾಸಿಲ ಮಣಿಯದ್ದು ಶಾರ್ಟ್ ಕಟ್ ರಸ್ತೆ.. 36-40 ಕಿ.ಮಿಗೆ ಊಟಿ ಕಾಣಬಲ್ಲದು..

ರಸ್ತೆ ಚನ್ನಾಗಿದೆ ಎಂದು ಯಾರೋ ಹೇಳಿದರು..
ನಾವು ಹೊರಟೆವು..
ಅದು ನೋಡಿದರೆ ಯದ್ವಾತದ್ವಾ ಘಟ್ಟ...
36 ಕಿ.ಮಿ ಏರುವಷ್ಟರಲ್ಲಿ 70 ಕಿ.ಮಿ ಸುತ್ತಿಬಂದಷ್ಟೇ ಅನುಭವವಾಗುತ್ತದೆ.. ಹೆಚ್ಚೂ ಕಡಿಮೆ 65 ಡಿಗ್ರಿ ಕೋನದಲ್ಲಿ ಏರಬೇಕು..
ಹತ್ತಿರ ಹತ್ತಿರ 70ಕ್ಕೂ ಹೆಚ್ಚು ಹೇರ್ ಪಿನ್ ತಿರುವುಗಳು.. ಟೆರ್ರಿಬಲ್...
ನಮ್ಮ ಹುಚ್ಚುಖೋಡಿಗೆ ಇದೆಲ್ಲಾ ಎಲ್ಲಿ ತಾಗ್ತದೆ ಹೇಳಿ...

ಸಿನೆಮಾ ಇದ್ದಿದ್ದು ತ್ರೀ ಈಡಿಯೆಟ್ಸ್ ಆದರೂ ನಾವು ಫೋರ್ ಈಡಿಯೆಟ್ಸ್ ಹೊರಟಿದ್ದೆವು...
ಏನೋ ಥ್ರಿಲ್ಲು... ಮನಸ್ಸು ಫ್ರಿಲ್ಲು...

ಮಂಗದ ಜೊತೆಗೆ ಮಂಗನಾಟ... 

ಮಾಸಿಲಮಣಿಯಲ್ಲಿ ಚಾ ಕುಡಿದ ಸುದ್ದಿ ಆಗಲೆ ಹೇಳಿದ್ದೇನೆ...
ಇಬ್ಬನಿ ತಬ್ಬಿದ ಇಳೆಯಲ್ಲಿ...4-5 ಕಿ.ಮಿ ಸಾಗಿದೆವು...
ಅಲ್ಲೊಂದು ಸೇತುವೆ...
ಮಂಗಗಳ ಸಾಲು..
ರಸ್ತೆಗಡ್ಡಲಾಗಿ ನಿಂತಿದ್ದವು...

ನಾವು ಗಾಡಿ ನಿಲ್ಲಿಸಿದೆವು..
ಮಂಗಗಳು ಮುಗಿಬಿದ್ದಿದ್ದವು..
ಓಡಿಸಿದೆವಾದರೂ ಒಂದು ಮಂಗ ಅಲ್ಲಾಡಲೇ ಇಲ್ಲ...
ಸುತ್ತೆಲ್ಲ ಕಾಡು..
ನಾವು ನಿಂತದ್ದು ಸೇತುವೆಯ ಮೇಲೆ...
ಬೈಕಿನ ಹಾರನ್ ಸದ್ದಿಗೆ ಮಂಗ ಹೆದರಲಿಲ್ಲ...
ನಮ್ಮಂತವರನ್ನು ಅದೆಷ್ಟು ಜನರನ್ನು ಕಂಡಿತ್ತೋ...
ಹಫ್ತಾ ವಸೂಲಿಗೆ ನಿಂತು ಬಿಟ್ಟಿತ್ತು ಅನ್ನಿಸುತ್ತದೆ.. ನಮ್ಮ ಕೈಯಲ್ಲಿ ಏನೆಂದರೆ ಏನೂ ಇರಲಿಲ್ಲ.. ಅದು ತಿನ್ನುವಂತದ್ದು...
ಇದೊಳ್ಳೆ ಗ್ರಾಚಾರಕ್ಕೆ ಬಂತಲ್ಲಾ ಸಿವಾ ಅಂದ್ಕೊಂಡೆವು...
ಮಂಗ ದಾರಿಯನ್ನು ಬಿಡುತ್ತಿಲ್ಲ...

ನಾವು ಬೈಕಿಂದ ಇಳಿದೆವು..
ಮೋಹನ ಫುಲ್ ಜೋಷಲ್ಲಿದ್ದ..
ಕೈತೋಳು ಮಡಿಸುತ್ತಲೂ ಇದ್ದ...
ಹಿಂದೆ ಕಿಟ್ಟು ಕ್ಯಾಮರಾ ರೆಡಿ ಇಟ್ಕೊಂಡಿದ್ದ...
ನಾನು ಕಾಮೆಂಟರಿ ಹೇಳಬೇಕಾ.. ಸುದ್ದಿ ಬರೆಯಲು ರೆಡಿ ಆಗಬೇಕಾ.. ಅನ್ನೋ ಗೊಂದಲದಲ್ಲಿದ್ದೆ..
ಮಂಗಕ್ಕೂ ಮೋಹನನಿಗೂ ಮಾರಾಮಾರಿ ಗ್ಯಾರಂಟಿ ಅಂದ್ಕೊಂಡಿದ್ದೆವು..
ಮೋಹನ ಬರುವ ಸ್ಟೈಲಿಗೆ ಮಂಗ ಗುರ್ ಎಂದಿತು..
ಒಮ್ಮೆ ಹಿಂದೇಟು ಹಾಕಿದ..
`ಸಾಯ್ಲಪಾ.. ಇದೊಳ್ಳೆ ಗ್ರಾಚಾರ ಬಂತಲೋ ಮಾರಾಯಾ..' ಅಂದ...
ಮಾರಾಮಾರಿಗೆ ಮುಗಿಯುವುದಿಲ್ಲ ಪ್ರಕರಣ ಅನ್ನಿಸಿತು..
ರಾಜಿ ಪಂಚಾಯ್ತಿಗೆ ಮಾಡುವುದೊಂದೆ ಬಾಕಿ...

ಇಳಿದು ರಸ್ತೆ ಪಕ್ಕದಲ್ಲಿ ಹೋಗಿ ನಿಂತೆವು.. ಸೇತುವೆ ತಡೆಗೋಡೆಯಬಳಿ ಆಪ್ತ ಸಮಾಲೋಚನೆ ಸಾಗಿತು..
ಮಂಗಕ್ಕೂ ಕುತೂಹಲ ಅನ್ನಿಸ್ತು.. ಸೀದಾ ಬಂದು ನಮ್ಮ ನಡುವೆ ಕುಳಿತಿತು..
ರಾಘವ ಸಿಕ್ಕಿದ್ದೇ ಛಾನ್ಸು ಅಂದುಕೊಂಡು ಪೋಟೋ ತೆಗೆದ...
ಮಂಗನ ಜೊತೆಗೂ ಫೋಟೋ ಸೆಷನ್ನು... ಮುಗಿಯಿತು...
ಮಂಗ ಪೋಟೋಕ್ಕೆ ಪೋಸು ಕೊಟ್ಟು... ಸುಮ್ಮನೆ ಹೋಯಿತು...
ಮಂಗನ ಭಾಷೆ ನಮೆಗ ಬರೋದಿಲ್ಲವಲ್ಲ...
`ಕಂಜೂಸಿ ನನ್ಮಕ್ಕಳು..' ಅಂತ ಬೈದಿರಬೇಕು... ಇನ್ನೇನೇನು.. `ಎ..' ಸರ್ಟಿಪೀಕೇಟ್ ಡೈಲಾಗುಗಳನ್ನು ಹೊಡೆಯಿತೋ.. ನಮಗೆ ಅರ್ಥವಾಗಲಿಲ್ಲ... ಮಂಗಕ್ಕೆ ಮಂಗನಾಟಕ್ಕೆ ಸಲಾಮು ಹೊಡೆದು ಮುಂದಕ್ಕೆ ಹೊರಟೆವು...

****

ಅಲ್ಲಿಂದ ಮುಂದೆ ಶುರುವಾದದ್ದು ಊಟಿಯ ಘಟ್ಟ..
ಅಂಕುಡೊಂಕಿನ ಹಾದಿ...
ಎಂಟೆದೆಯ ಭಂಟರೆಂಬ ಪೋಸಿನಲ್ಲಿ ನಾವು ಹತ್ತಲು ಗಾಡಿಯನ್ನು ಗುರ್ರೆನ್ನಿಸಿದೆವು...
ಎಷ್ಟೇ ಎಕ್ಸಲರೇಟರ್ ವತ್ತಿದರೂ ಗಾಡಿಯ ಕಿಲೋಮೀಟರ್ ಕಡ್ಡಿ 5-10ಕ್ಕಿಂತ ಜಾಸ್ತಿಯನ್ನು ತೋರಿಸುತ್ತಿರಲಿಲ್ಲ..
ಹೊಸ ಗಾಡಿಯಾದರೂ ಉಬ್ಬಸ ಬಿಡುತ್ತದೆಯೇ..
ಆಗಾಗ ಇಂಜಿನ್ನನ್ನು ತಣಿಸಲು 5 ನಿಮಿಷಗಳ ಬಿಡುವು...


ಅಲ್ಲೆಲ್ಲೋ...
ಬಾನಿನಿಂದ ಮುತ್ತಿನ ನೀರ ಹನಿ ಕೆಳಗಿಳಿದು ಬರುತ್ತಿತ್ತು...
ಹಣೆಯ ಮೇಲೆ ವಿಭೂತಿಯಂತೆ ನೀಳ...
ಬಿಳಿ ಮುತ್ತುಗಳು...
ದೂರದಲ್ಲಿ ಜುಳು ಜುಳು ನಿನಾದ...
ತಮಿಳು ಭಾಷೆಯಲ್ಲಿ ಜಲಪಾತದ ಹೆಸರು ಬರೆದಿತ್ತು...
ಈ ಜಲಪಾತಕ್ಕೆ ಎಂತಾ ಹೆಸರು ಎಂದು ತಲೆ ಕೆರೆದುಕೊಳ್ಳುವಷ್ಟರಲ್ಲಿ ಆಂಗ್ಲರು `ಕಲ್ಲಟ್ಟಿ ಫಾಲ್ಸ್...' ಎಂದು ಬರೆದಿಟ್ಟಿದ್ದೂ ಕಂಡಿತು..
ತಮಿಳರಿಗೆ ಬೈದು...
ಇಂಗ್ಲೀಷಿನವರಿಗೆ ಥ್ಯಾಂಕ್ಸುಗಳನ್ನು ಹೇಳಿ ಮುಂದೆ ಹೆಜ್ಜೆ ಹಾಕಿದೆವು...

ಏರಿದಂತೆಲ್ಲ... ತೂಕ ಕಳೆದುಕೊಳ್ಳುತ್ತ ಹೋದೆವೇನೋ ಅನ್ನುವ ಅನುಭವ..
ನಾವು ಚಿಕ್ಕವರಾದಂತೆ... ಕಾಡುವ ಭಾವ..
ಮನಸ್ಸು ಉಲ್ಲಾಸಂಗಾ ಉತ್ಸಾಹಂಗಾ...

ಮೇಲೆರಿ ಒಮ್ಮೆ ಹಿಂತಿರುಗಿ ನೋಡಿದರೆ ನಾವು ಬಂದ ಜಾಗದ ಸುಳಿವೇ ಇಲ್ಲ..
ಮೋಡ ಮುತ್ತಿಕ್ಕಿ ಸಂಪೂರ್ಣ ಪ್ರದೇಶವನ್ನು ತನ್ನ ತೆಕ್ಕೆಯೊಳಗೆ ಸೆಳೆದು ಬಚ್ಚಿಟ್ಟುಕೊಂಡಿದೆ...
ಚಿಕ್ಕ ಚಿಕ್ಕ ಮನೆಗಳು ಕಾಣುತ್ತಿತ್ತು..
ಹೂಕೋಸು, ಎಲೆಕೋಸು, ಚಹಾ ಗಿಡಗಳ ಪ್ಲಾಂಟೇಷನ್ನುಗಳು ಕಾಣತೊಡಗಿದೆವು...
ವಾಸ್ತುಪ್ರಕಾರ ಊಟಿಗೆ ಬಂದಂತಾಯಿತು.. ಎಂದುಕೊಂಡೆವು...

ಬಂಡೆಗಲ್ಲಿನ ಗುಡ್ಡ, ಒಂದಕ್ಕಿಂತ ಒಂದು ದೊಡ್ಡದು.. ಅದರ ಎದುರು ನಾವು ಇರುವೆಯಂತವರು ಎನ್ನಿಸುವಂತಹ ದೈತ್ಯದೇಹಿ ಗುಡ್ಡಗಳು... ಒಂದೊಂದು ಗುಡ್ಡಕ್ಕೂ ಅಲ್ಲಿ ನೋಡಲೆ.. ಇಲ್ಲಿ ನೋಡಲೆ ವಾಹ್... ಸೂಪರ್ರ ಎನ್ನವು ಉದ್ಗಾರ..

ನಾವು ಚಳಿಗಾಲ ಸೂರ್ಯನ ಬಿಸಿಲಿಗೆ ಮೈ ಒಡ್ಡಿ ನಿಲ್ಲುತ್ತೇವೆ..
ಹವ್ಯಕರು ಅದನ್ನು ಬಿಸಿಲು ಕಾಸುವುದು ಎನ್ನುತ್ತಾರೆ..
ಊಟಿಯ ಜನರು ಬಿಸಿಲು ಕಾಯಿಸುತ್ತ ರಸ್ತೆ ಪಕ್ಕ ನಿಂತಿದ್ದರೆಂದರೆ ಊಹಿಸಿಕೊಳ್ಳಿ ಚಳಿಯ ಅಗಾಧತೆ ಎಷ್ಟಿರಬಹುದೆಂದು..

ಅಷ್ಟರಲ್ಲಿ ನಾವು ಬಿಟ್ಟು ಬಂದಿದ್ದ ರಾಷ್ಟ್ರೀಯ ಹೆದ್ದಾರಿ ಸುತ್ಹಾಕಿಕೊಂಡು ಬಂದಿದ್ದು.. ಅದನ್ನು ಹಿಡಿದು ಹೊರಟೆವು...
ಅಲ್ಲೆಲ್ಲೋ.. ಎತ್ತೆತ್ತರದ ನೀಲಗಿರಿ ಮರಗಳು...
ಮೂಗಿನ ತುಂಬ ನೀಲಗಿರಿಯ ಕಂಪು..
ಜೊತೆ ಜೊತೆಗೆ ಮೆಂಥಾಲನ್ನು ಹಾಕಿದಂತಹ ತಂಪು ತಂಗಾಳಿ ನಮ್ಮ ಮೂಗಿನ ಮೂಲಕ ನಮ್ಮ ಹೃದಯವನ್ನು ನಾಟಿ ಹಾಯೆನಿಸಿತಯ,,,..

ರಸ್ತೆಗೆ ಫ್ಲೆವರ್ಸುಗಳನ್ನು ಹಾಕಿದ್ದರು..
ಟಾರು ರಸ್ತೆಯಲ್ಲ.. ಇಂಗ್ಲೆಂಡೋ.. ನೆದರ್ಲೆಂಡೋ...
ಯಾವುದೋ ಕೌಂಟಿಯನ್ನು ನೆನಪಿಗೆ ತಂದವು...
ಊಟಿಯ ಸರಹದ್ದಿಗೆ ಬಂದಿದ್ದರೂ ಊಟಿಯ ನಗರದೊಳಗೆ ನಾವುನ್ನೂ ಕಾಲಿರಿಸಿರಲಿಲ್ಲ...
ಅದಿನ್ನೂ ಬೋರ್ಡುಗಳ ಮೂಲಕ ಹೀಗೆ ಬನ್ನಿ.. ಹೀಗೆ ಬನ್ನಿ ಎಂದು ಹೇಳುತ್ತಲೇ ಇತ್ತು...

---

ತಮಿಳರಿಗೆ ಲೆಕ್ಖ ಬರೋದಿಲ್ವಾ ಸಾರ್...

ಈ ತಮಿಳರಿಗೆ ಲೆಕ್ಖ ಸರಿಯಾಗಿ ಬರೋದಿಲ್ಲವೇ ಅನ್ನುವ ಅನುಮಾನ ಊಟಿಗೆ ಹೋಗುವಾಗ ನಮಗೆ ಆಯಿತು..
ಕಿಲೋಮೀಟರು ಕಲ್ಲುಗಳಲ್ಲೆಲ್ಲ ತಪ್ಪು ತಪ್ಪು ಲೆಕ್ಖ..
ಒಂದು ಕಡೆ ಊಟಿ 10 ಕಿ.ಮಿ ಎಂದು ಬರೆಯುತ್ತಾರೆ.. ಮತ್ತೆ ನಾಲ್ಕೈದು ಕಿ.ಮಿ ಹಾದು ಬಂದ ನಂತರ ಊಟಿಯ ದೂರ 12 ಕಿಮಿ ಆಗಿರುತ್ತದೆ..
ದಾರಿ ಸಾಗಿದಂತೆಲ್ಲ ಖರ್ಚಾಗಬೇಕು ತಾನೆ.. ಆದರೆ ತಮಿಳಿಗರ ಲೆಕ್ಖ ಹೆಚ್ಚಾಗಿತ್ತು..
ನಾಲ್ಕೈದು ಕಡೆಗಳಲ್ಲಿ ಇಂತಹ ಅನುಭವ ಆದ ನಂತರ ನಮಗೆ ಲೆಕ್ಖ ಬರೋದಿಲ್ಲ ಎನ್ನುವುದು ಕನ್ ಫರ್ಮ್ ಆಯಿತು...

ಇತ್ತೀಚೆಗೆ ಜಯಲಲಿತಾ ಮು.ಮಂ ಆದ ನಂತರ ಕಾವೇರಿ ವಿಷಯದಲ್ಲಿ ಎಷ್ಟು ನೀರು ಕೊಟ್ಟರೂ ಕಡಿಮೆ ಎಂದಳಲ್ಲಾ.. ಆಗ ಪಕ್ಕಾ ಆಯ್ತು ನೋಡಿ.. ತಮಿಳಿಗರ ಲೆಕ್ಖ ಹಾಕುವ ರೀತಿ...
ಅವರಿಗೊಂಡು ವಣಕ್ಕಂ ಹೇಳುತ್ತ ನಾವು ಒಣಗಿದೆವು...


(ಮುಂದುವರಿಯುತ್ತದೆ...)

Thursday, May 30, 2013

ಮಿಡಿ-ಮಿನಿ ಕಥೆಗಳು

ಮಿನಿ ಕಥೆಗಳು...
 ಒಂದೆರಡು ಮಾತುಗಳು :
ಹಾಗೆ ಸುಮ್ಮನೆ ಬರೆದಿದ್ದು... ಇವು ನ್ಯಾನೋ ಕಥೆಗಳ ಜಾತಿಗೆ ಸೇರುತ್ತವಾ.. ಗೊತ್ತಿಲ್ಲ..
ಸುಮ್ಮ ಸುಮ್ಮನೆ ನೀನು ಉದ್ದುದ್ದ ಕಥೆಗಳನ್ನು ಬರೀತಿಯಾ.. ಎಳೀತೀಯಾ ಅಂತ ಯಾರೋ ಭಯಂಕರ ಕಾಮೆಂಟು ಮಾಡಿದ್ದರು..
ಚಿಕ್ಕ ಕಥೆ ಬರೆಯಲು ಬರುತ್ತದಾ ಎಂದು ಪ್ರಯತ್ನ ಮಾಡಿದಾಗ ಹೊರಬಿದ್ದದ್ದು... ಓದ್ಹೇಳಿ..

=========================================

ಸೇಡು

ಅವಳನ್ನು ತಿರಸ್ಕರಿಸಿ ಅವಳ ಮೇಲೆ ಸೇಡು ತೀರಿಕೊಳ್ಳಬೇಕೆಂದು ಹವಣಿಸಿದ್ದೆ...
ಮರೆಯಲು ಯತ್ನಿಸಿದಂತೆಲ್ಲ ನೆನಪಾಗಿ ಕಾಡಿದಳು..


**

ಭೀತಿ

ಯಾವುದೇ ಮದುವೆ ದಿಬ್ಬಣಗಳು ಕಂಡರೂ... ಬೋರ್ಡುಗಳು ಕಣ್ಣಿಗೆ ಬಿದ್ದರೂ...
ಮನಸ್ಸು ದೇವರೆ ಅಲ್ಲಿ ಅವಳ ಹೆಸರು ಕಾಣದಿರಲಿ... ಎಂದು ಯಾಚಿಸುತ್ತದೆ..

**

ಮೌನ..

ಗಂಡನನ್ನು ಬಯ್ಯುತ್ತಿದ್ದ ನೇತ್ರಕ್ಕನ ಬಾಯಿ ಕೊನೆಗೂ ಬಂದಾಯಿತು...
ಮಣ್ಣಾದಳು...ಹೆಣ್ಣಾದಳು..

***


ದುರ್ವಿಧಿ

ಭವಿಷ್ಯ ಹೇಳುವುದೇ ಅನ್ನ ಎಂದುಕೊಂಡಿದ್ದವನಿಗೆ ಸಾಡೇಸಾತ್ ಶನಿ ಹಿಡಿದದ್ದು ಗೊತ್ತಾಗಲೇ ಇಲ್ಲ..

****

ದೂರಾಲೋಚನೆ

ಅವಳಿಗೆ ಇಷ್ಟ ಅನ್ನುವ ಕಾರಣಕ್ಕಾಗಿ ಅವನು ಮನೆಯ ಜಮೀನಿನ ತುಂಬ ಪಪ್ಪಾಯಿ ಗಿಡಗಳನ್ನು ಹಚ್ಚಿದ. ಅದು ದೊಡ್ಡದಾಗಿ ಬೆಳೆದು ಹಣ್ಣು ನೀಡುವ ಹೊತ್ತಿಗೆ ಅವಳು ಅವನನ್ನು ಬಿಟ್ಟು ಹೋದಳು.
ಅವನೀಗ ಪಪ್ಪಾಯಿ ವ್ಯಾಪಾರಿ.
ಕೈಯಲ್ಲಿ ಝಣ ಝಣ ರುಪಾಯಿ.


**
ಅಭಿಮಾನಿ

ನನ್ನ ಗೆಳತಿ ಬಿಟ್ಟೂ ಬಿಡದೆ ಕಾಡಿಸಿ ನಿನಾಸಂ ಸತೀಶನ ಸಿನೆಮಾಗಳನ್ನು ತೋರಿಸಿದಳು..
ಅವಳ ಒತ್ತಾಯಕ್ಕೆ ನೋಡಿದೆ. ಅವಳ ಬಿಟ್ಟು ಹೋದಳು..
ನಾನು ಸತೀಶನ ಫ್ಯಾನ್ ಆಗಿಬಿಟ್ಟೆ.

Tuesday, May 28, 2013

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು - ಭಾಗ 2

(ಎಂದೋ ಅರ್ಧ ಬರೆದಿಟ್ಟಿದ್ದ ನಮ್ಮ ಪ್ರವಾಸ ಕಥನಕ್ಕೆ ಮರು ಚಾಲನೆ.. ಈ ಪ್ರವಾಸ ಹೊರಟಿದ್ದು ನಾನು, ಕಿಟ್ಟು, ರಾಘವ ಹಾಗೂ ಮೋಹನ.. ಅದರ ಸಂತಸದ ಝಲಕ್ ಇಲ್ಲಿದೆ.)
(ಇಲ್ಲಿಯವರೆಗೆ.. ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಗುಂಡ್ಲುಪೇಟೆಗೆ ಬಂದಿದ್ದನ್ನು ಈ ಮೊದಲೇ ಹೇಳಿದ್ದೇನೆ.. ಹಳೆಯ ಪೋಸ್ಟನ್ನು ನೋಡಿ)

ಡವ ಡವ ನಡುಕವ..

ಮರುದಿನ ಮುಂಜಾನೆ 4 ಗಂಟೆಗೆಲ್ಲಾ ಎದ್ದು ಗುಂಡ್ಲುಪೇಟೆಯನ್ನು ಬಿಟ್ಟೆವು..
ರಾತ್ರಿ ಬಂಡಿಪುರ ಅರಣ್ಯದ ಬಾಗಿಲು ಮುಚ್ಚುತ್ತಾರೆ. ನಂತರ ಅದನ್ನು ತೆರೆಯುವುದು ಮುಂಜಾನೆಯೇ..
ಬೆಳಗಿನ ಕಾನನದ ನಿಸರ್ಗ ಸೌಂದರ್ಯವನ್ನು ಮಿಸ್ ಮಾಡ್ಕೋಬಾರದು ಎನ್ನುವ ದೃಷ್ಟಿಯಿಂದ ನಾವು ಮುಂಜಾನೆ ಹೊರಟೆವು.. ಅದಲ್ಲದೆ ಬಂಡಿಪುರ ಅರಣ್ಯ ತನಿಖಾ ಠಾಣೆಯಲ್ಲಿ ಸಾಕಷ್ಟು ಟ್ರಾಫಿಕ್ ಕೂಡ ಇರುತ್ತದೆಂಬುದು ನಮ್ಮ ಮುಖ್ಯ ಕಾರಣವಾಗಿತ್ತು.
ನಾವು ಅರಣ್ಯದ ಗೇಟ್ ತಲುಪುವ ವೇಳೆಗೆ ಆಗಲೇ ಗಂಟೆ ಐದನ್ನೂ ದಾಟಿತ್ತು..
ಮಧ್ಯದಲ್ಲಿ ಚಳಿ ನಡುಕ ಶುರುವಾಯಿತು ನೋಡಿ...
 ಹಲ್ಲು ಕಟ ಕಟ.. ಕೈಕಾಲು ಥರ ಥರ...
ಮೋಹನನಿಗೆ ಬೈಕ್ ಹೊಡೆಯುವ ಮನಸ್ಸೇ ಇಲ್ಲ..
ಅಲ್ಲೆಲ್ಲೋ ಒಂದು ಕಡೆ ಬೈಕ್ ನಿಲ್ಲಿಸಿದೆವು...
ರಸ್ತೆ ಪಕ್ಕದ ದರಕು, ಇತ್ಯಾದಿ ಸೇರಿಸಿ ಬೆಂಕಿ ಹಾಕಿಯೇಬಿಟ್ಟೆವು...
ಚಳಿ ಕಾಸಿದ ನಂತರವೇ ನಮ್ಮ ಕೈಗಳಿಗೆ ಜೀವ ಬಂದಿದ್ದು,,,!!!

ಅದ್ಯಾವುದೋ ಕಡೆ ಸೂರ್ಯ ನಿಧಾನವಾಗಿ ಬೆಳಗನ್ನು ಪಸರಿಸುತ್ತಿದ್ದ..
ಗುಂಡ್ಲುಪೇಟೆಯಿಂದ ಬಂಡಿಪುರದ ಕಡೆಗೆ ಹೋಗುವಾಗ ಬಲಭಾಗದಲ್ಲಿ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಕಾಣುತ್ತದೆ..
ಬಾನನ್ನು ಮುಟ್ಟಿದಂತೆ ಕಾಣುವ ಬೆಟ್ಟದ ಬೆಡಗು ಮೂಕ ವಿಸ್ಮಿತಗೊಳಿಸುತ್ತದೆ..
ನಾನು ಹಾಗೂ ಕಿಟ್ಟು ಇಬ್ಬರೂ ಅದೆಷ್ಟು ಬೆರಗುಗೊಂಡೆವೆಂದರೆ.. ಪದಗಳೇ ಸಾಲುತ್ತಿಲ್ಲ..
ರಾಘುವಿನ ಟಿವಿಎಸ್ ಎಕ್ಸಿಡಿ.. ಹಾಗೂ ಮೋಹನನ ವಿಕ್ಟರ್... ಝುಂ ಅನ್ನುತ್ತಿತ್ತು..

ಇಬ್ಬನಿ ಮಾಲೆ ಮಾಲೆಯಾಗಿ ಇಳಿಯುತ್ತಲಿತ್ತು....
10-15 ಮೀಟರ್ ದೂರದ ಇದುರು ಭಾಗ ಕಾಣುತ್ತಲೇ ಇಲ್ಲ...
ಇದೇ ಕಾರಣಕ್ಕೆ ಎದುರು ಬದಿ ಯಾರೇ ಬಂದರೂ ನಮಗೆ ಕಾಣುತ್ತಲೇ ಇರಲಿಲ್ಲ...
ಫೆ.19ರ ದಿನ..
ಇಬ್ಬನಿಯ ಕಾರಣದಿಂದಲೇ  ನಮಗೆ ಬಂಡಿಪುರದ ಕಾನನ ಸೌಂದರ್ಯ ಕೊಂಚ ತಪ್ಪಿಹೋಯಿತೆಂದರೂ ತಪ್ಪಿಲ್ಲ...
ಮುಂದೆ ಸಾಗಿದಂತೆ.. ಅದೊಂದು ಊರು.. ತಮಿಳಿನಲ್ಲಿ ಬರೆದಿತ್ತು ಹೆಸರು..
ಮಧುಮಲೆ ಅರಣ್ಯ ವ್ಯಾಪ್ತಿಯ ಒಳಗಿದೆ...
ಎದುರು ಭಾಗದಲ್ಲಿ ಒಂದು ದೈತ್ಯ ಆನೆ ನಿಂತಿದೆ....

ನನಗೆ ಏನೂ ಅನ್ನಿಸಲಿಲ್ಲ... ರಾಘುವಿನ ಬೈಕೇರಿ ಕುಳಿತಿದ್ದ ಕಿಟ್ಟು ಒಮ್ಮೆ ಹೌಹಾರಿದ್ದ...
ನಾನು, ರಾಘು ಆಗಲೇ ಅಧೇ ಮಾರ್ಗದಲ್ಲಿ ಊಟಿಗೆ ಒಂದು ಟ್ರಿಪ್ ಹಾಕಿ ಬಂದಿದ್ದರಿಂದ ಆ ಆನೆಯನ್ನು ಅದ್ಯಾವಾಗಲೋ ನೋಡಿದ್ದೆವು..
ಕಿಟ್ಟುವಿನ ಹೌಹಾರಿಕೆ ಕಂಡು ನನಗಂತೂ ಒಳಗೊಳಗೆ ನಗು...
ರಾಘವನ ಕ್ಯಾಮರಾ ಕಿಟ್ಟುವಿನ ಕೈಲಿತ್ತು...
ಬೈಕು ಚಲಿಸುತ್ತಿದ್ದಂತೆಯೇ ಪೋಟೋ ತೆಗೆಯುತ್ತಿದ್ದ...

ನಡುವೆ ತಮಿಳುನಾಡು ರಾಜ್ಯದ ಚೆಕ್ ಪೋಸ್ಟ್..
ಎಲ್ಲ ವಾಹನಗಳನ್ನೂ ಚೆಕ್ ಮಾಡುತ್ತಿದ್ದರು..
ನಾನು ರಾಘುವಿನ ಬೈಕ್ ಹೊಡೆಯುತ್ತಿದ್ದೆ..
ಹೆಲ್ ಮೆಟ್ ಹಾಕಿರಲಿಲ್ಲ..
ಹಿಂದೆ ಕುಳಿತ ರಾಘು ಹಾಕಿದ್ದ..
ಅಲ್ಲಿದ್ದ ಪೊಲೀಸ್ ಅಧಿಕಾರಿ ನನ್ನನ್ನು ನಿಲ್ಲಿಸಿ ಹೆಲ್ ಮೆಟ್ ಎಂದ...
ರಾಘುವನ್ನು ತೋರಿಸಿದೆ...
ಡೋಂಟ್ ಕ್ಯಾರ್ ಎಂದ...ಅಧಿಕಾರಿ..
ಪೇಪರ್ ಜಾಬಿತ್ತಲ್ಲ... ಪ್ರೆಸ್ ಕಾರ್ಡ್ ತೋರಿಸಿದೆ...
ಸಂಯುಕ್ತ ಕರ್ನಾಟಕದ ಜಾಬಿನಲ್ಲಿದ್ದ ಕಾಲ...
ಕನ್ನಡ ಪತ್ರಿಕೆ ಕಾರ್ಡು ತೋರಿಸಿದ್ದೇ ತಡ.. ಮತ್ತಷ್ಟು ಸಿಟ್ಟು ಏರಿತು ಅನ್ನಿಸುತ್ತದೆ...
ಸಿಟ್ಟಾಗಿ ಫೈನ್ ಹಾಕಿಯೇ ಬಿಟ್ಟ..

ಕಿಟ್ಟು.. ನಿನ್ನ ಜರ್ನಲಿಸಂ ಜಾಣತನ ಇಲ್ಲಿ ತೋರಿಸಬೇಡ ಮಾರಾಯ ಎಂದ..
ಒಂಥರಾ ಎನ್ನಿಸಿತು ನನಗೆ...ಅವಮಾನ..
ಝಾಡಿಸೋಣ ಎನ್ನಿಸಿಕೊಂಡರೂ ಸುಮ್ಮನಾದೆ..

ಅರ್ಣಯವಲಯ ದಾಟಿ ಕೊಂಚ ಮುಂದಕ್ಕೆ ಹೋದಂತೆ ರಸ್ತೆಯಲ್ಲಿ ಮಾರ್ಗ ಬದಲಾಯಿಸಬೇಕು...
ರಾಷ್ಟ್ರೀಯ ಹೆದ್ದಾರಿಯನ್ನು ಪಕ್ಕಕ್ಕೆ ಬಿಟ್ಟು ಇನ್ನೊಂದು ಸೀದಾ ಸಾದಾ ಹಾದಿಯಲ್ಲಿ ಹೋಗಬೇಕು..
ಆ ಮಾರ್ಗ ಹಿಡಿದೆವು.. ಊಟಿಗೆ ಮಾಸಿಲಮಣಿಯ ಮಾರ್ಗದಲ್ಲಿ ಹೋಗುವಂತಹ ದಾರಿ ಅದು.
ನಡುವೆಯೆಲ್ಲೋ ಹುಲಿ ರಕ್ಷಿತಾರಣ್ಯದ ಬೋರ್ಡಿತ್ತು...

ಕರ್ನಾಟಕ ಸರ್ಕಾರ ದ ಚಿತ್ರವೂ ಇತ್ತು... ಅರೆ ತಮಿಳುನಾಡಿನಿಂದ ಮತ್ತೆ ಕರ್ನಾಟಕಕ್ಕೆ ಬಂದೆವೆ..? ಎಂದು ಕೊಂಡೆವು...
ಸ್ವಲ್ಪ ಹೊತ್ತಿನ ನಂತರ ಮಾಸಿಲ ಮಣಿ ಎನ್ನುವ ಕರ್ನಾಟಕ ವ್ಯಾಪ್ತಯ ಊರು ಸಿಕ್ಕಿತು. ಸಂಪೂರ್ಣ ತಮಿಳರೇ ಇದ್ದ, ತಮಿಳು ಬೋರ್ಡುಗಳೇ ಇರುವ ಕರ್ನಾಟಕದ ಊರು.. ಸರಿಯಾಗಿ ಅಭಿವೃದ್ಧಿ ಮಾಡಿದ್ದರೆ ತಾಲೂಕಾ ಕೇಂದ್ರವಾಗಬಹುದಿತ್ತು.. ಅಂತಹ ಊರದು... ಕರ್ನಾಟಕದ ಯಾವುದೇ ರಾಜಕಾರಣಿ ಆ ಊರಿಗೆ ಹೋಗಿದ್ದಿಲ್ಲವೇನೋ... ಇಬ್ಬನಿಯ ಹಾಲೆಯೊಳಗೆ ಹುದುಗಿಹೋಗಿತ್ತು...

ಅಲ್ಲಿ ಹೋಗಿ ಹೊಟೆಲೊಂದನ್ನು ಹುಡುಕಿ ಬಿಸ್ಸಿ ಬಿಸ್ಸಿ ಮಸಾಲೆ ಟೀ ಕುಡಿದು .. ತಿಂಡಿ ತಿಂದೆವು... ಸೂರ್ಯ ಇಣುಕಿದ್ದ..
ಯಾವುದೋ ಕಲ್ಲುಬಂಡೆಯ ಮೇಲೆ ಆಡೊಂದು ಬಿಸಿಲು ಕಾಯಿಸುತ್ತಿತ್ತು...
ಕಿಟ್ಟು ಕ್ಯಾಮರಾ ಹಿಡಿದ...

ತಕ್ಷಣ ಎದ್ದು ನಿಂತ ಆಡು.. ಮೈ ಕೊಡವಿ.. ಮೊಖವನ್ನೊಮ್ಮೆ ತಿರುಗಿ ಪೋಸ್ ಕೊಟ್ಟಿತು... ಪೋಟೋ ತೆಗೆದ ಕಿಟ್ಟು ಥ್ಯಾಂಕ್ಸ್ ಎಂದರೆ ಆಡು ಕೇಳುತ್ತದೆಯೇ..? ಬೆನ್ನತ್ತಿತು... ಕೊನೆಗೆ ಬಾಳೆ ಹಣ್ಣಿನ ಹಪ್ತಾ ವಸೂಲಿ ಮಾಡಿ ಜಾಗ ಖಾಲಿ ಮಾಡಿತು...

ಮಾಸಿಲಮಣಿಯಲ್ಲಿ ನಮ್ಮದೂ ಪೋಟೋ ಸೆಷನ್ ನಡೆಯಿತು...
ಬೈಕೇರಿ ಊಟಿಯ ಗುಡ್ಡವನ್ನು ಹತ್ತಲು ಅನುವಾಗಿ ಹೊರಟೆ..
(ಮುಂದುವರಿಯುತ್ತದೆ..)



ವಿಸ್ಮಯಗಳ ಗೂಡು ಈ ಮಲೆನಾಡು ಭಾಗ -3

    ಮಲೆನಾಡಿಗೆ ಮಲೆನಾಡೇ ಸಾಟಿ. ಇಲ್ಲಿನ ವೃಕ್ಷ ಸಂಕುಲ, ಪಕ್ಷಿ, ಮೃಗ ಸಮೂಹ ಇವುಗಳಿಗೆ ಮಲೆನಾಡನ್ನು ಬಿಟ್ಟರೆ ಬೇರೆ ಏನೂ ಇಲ್ಲ. ಇಲ್ಲಿನ ಕಾನನ-ತಾಣಗಳೆಲ್ಲ ನಿತ್ಯ ಹಸಿರು ಹಸಿರು.
    ಮಲೆನಾಡೇ ಹಾಗೆ ದೂರದಿಂದ ನೋಡಿದರೆ ಅರ್ಥವೇ ಆಗದು. ಒಳಹೊಕ್ಕರೆ ವಿಸ್ಮಯ ಲೋಕ. ಇಲ್ಲಿ ಸಿಕಾಡಗಳ ಮಧುರಾತಿ ಮಧುರ ಉಲಿಯಿದೆ. ರಕ್ತ ಹೀರುವ ಉಂಬಳಗಳ ಜೊತೆಯಿದೆ. ವಿಶಿಷ್ಟ ಎನ್ನಿಸುವ ಬಸವನ ಹುಳುಗಳಿವೆ. ಮಂಗಟ್ಟೆ ಹಕ್ಕಿಯ ಶ್ರೀಮಂತ ತಾಣವೂ ಇದೇ ಮಲೆನಾಡು. ಇಲ್ಲಿ ಬಣ್ಣಬಣ್ಣಗಳ ಅಣಿಬೆಗಳಿವೆ. ಮಿಗಿಲಾಗಿ ಹಸುರು ಎಲೆಯನ್ನೂ ಮರೆಸುವ ಹಸುರುಳ್ಳೆ ಹಾವಿದೆ. ಪ್ರೀತಿಯ, ದುರ್ಬೀನಿಗೆ ಮಾತ್ರ ಕಾಣಿಸುವಂತಹ ದಾಟುಬಳ್ಳಿ ಹಾವಿದೆ.
    ಜೊತೆ ಜೊತೆಗೆ ಇಲ್ಲಿ ನಮ್ಮನ್ನೇ ಆಕರ್ಷಿಸಬಲ್ಲಂತಹ ನಿಸರ್ಗ ಧಾಮಗಳಿವೆ. ಜಲಪಾತಗಳಿವೆ. ಮಹಾರಾಷ್ಟ್ರದಿಂದ ಕೇರಳದವರೆಗೆ ಹಬ್ಬಿರುವ ಪಶ್ಚಿಮ ಘಟ್ಟದ ಸೆರಗಿನಲ್ಲಿಯೇ ಇರುವ ಮಲೆನಾಡು ಎಂದರೆ ಮಲೆಗಳ ನಾಡು. ಭೂದೇವಿಯ ಮೊಲೆ ನಾಡು. ಇದೇ ಜೀವಸದೃಷ ಅಮೃತಸವಿಯನ್ನೂ, ಜೀವರಸವನ್ನೂ ಹಿಡಿದಿಟ್ಟ ತಾಣ.
    ಬಾನೆತ್ತರಕ್ಕೆ ಚಾಚಿ ನಿಂತ ಮರಗಳು ಮಲೆನಾಡಿಗೆ ಕಿರೀಟದಂತೆ ಕಂಡರೆ ಬಳುಕುವ ನದಿಗಳು ಹಳ್ಳಗಳು ಮಲೆನಾಡಿನ ಆಭರಣಗಳು. ಅಲ್ಲಲ್ಲಿ ಕಾಣುವ ಜಲಪಾತ ಆಭರಣದ ಹೊಳೆಯುವ ಮಣಿಗಳು. ಹಸಿರು ಕಾನನವೇ ಮಲೆನಾಡಿನ ಸೀರೆ. ಗಿರಿ ಕಂದರಗಳು ಮೇಳೈಸಿ, ಮೆರೆವ ಈ ನಾಡೇ ವಿಸ್ಮಯಗಳ ಗೂಡು. ಭುವಿಯ ಸ್ವರ್ಗ. ಬೊಮ್ಮನ ಕಲ್ಪನೆಯ ಪ್ರದೇಶ.
    ಯಾಕೋ ಗೊತ್ತಿಲ್ಲ....
    ಹುಟ್ಟುವಿಯಾದರೆ
    ಇಲ್ಲೇ ಇನ್ನು...
    ಈ ಮಲೆನಾಡಲ್ಲೇ ಅನ್ನು...
    ಎಂದು ಹಾಡೋಣ ಅನ್ನಿಸುತ್ತಿದೆ. ಕವಿ ದಿನಕರದ ಹಾಡುಗಳು ಹಾಗೇ ಸುಮ್ಮನೆ ಕಿವಿಯ ಮೇಲೆ ಸುಳಿದು ಹೋಗುತ್ತವೆ..
    ಬ್ರಹ್ಮ ಪುರಸೊತ್ತು ಸಿಕ್ಕಾಗ ಬಿಡಿಸಿದ ಚಿತ್ರವೇ ಮಲೆನಾಡು ಇರಬೇಕು. ಅಷ್ಟು ಸುಂದರವಾಗಿದೆ. ಸೊಗಸಾಗಿ ಮೂಡಿಬಂದಿದೆ. ಈ ನಾಡಿನಲ್ಲಿ ಭೀಮ, ಪರಶುರಾಮ ಅಡ್ಡಾಡಿದ್ದಾರಂತೆ. ಅಲ್ಲಲ್ಲಿ ಕುರುಹಗಳನ್ನು ಬಿಟ್ಟುಹೊಗಿದ್ದು ಈಗಲೂ ನಮಗೆ ಕಾಣಸಿಗುತ್ತದೆ. ದೇವತೆಗಳು ಇಲ್ಲೆಲ್ಲೋ ಬಂದು ಅಡಗಿ ಕುಳಿತಂತೆ ನಮಗೆ ಭಾಸವಾಗುತ್ತದೆ.
    ಇಲ್ಲಿ ನಿಸರ್ಗ ಮಾತೆ ನಿಂತು ಮೆರೆದಿದ್ದಾಳೆ. ಮೆರೆದು ನಲಿದಿದ್ದಾಳೆ. ನಲಿದು ಕುಣಿದಿದ್ದಾಳೆ. ಕುಣಿದು ದಣಿದಿದ್ದಾಳೆ. ದಣಿದು ಮೈಚೆಲ್ಲಿ ಮಲಗಿಬಿಟ್ಟಿದ್ದಾಳೆ. ಆಕೆಗೆ ಎಚ್ಚರವೇ ಇಲ್ಲ. ಅಂತಹ ಮೈಮರೆವಿನಲ್ಲಿಯೂ ಚೆಲುವು ಚೆಲ್ಲಿ ನಿಂತಿದೆ..
    ಯಾಕೋ ಗೊತ್ತಿಲ್ಲ.. ಇಂತಹ ಮಲೆನಾಡಿನ ನಡುವೆ ಕಳೆದುಹೋಗಬೇಕು ಎನ್ನಿಸುತ್ತಿದೆ. ಗವ್ವೆನ್ನುವ ಕಾಡುಗಳು, ಟ್ವಂಯ್ ಟ್ವಂಯ್ ಎಂದು ಕೂಗುವ ಸಿಕಾಡಗಳ ಸದ್ದಿನ ನಡುವೆ ನನ್ನನ್ನೇ ನಾನು ಮರೆತು ಬಿಡಬೇಕು ಎನ್ನಿಸುತ್ತಿದೆ. ಅದ್ವಾವನೋ ಅಧಿಕಾರಿ.. ಬ್ರಿಟೀಷರವನು.. ಉತ್ತರಕನ್ನಡದ ಕಾಡುಗಳನ್ನೆಲ್ಲ ಪಾದಯಾತ್ರೆಯ ಮೂಲಕ ಸುತ್ತಿದ್ದನಂತೆ.. ನನಗೂ ಅದೇ ಆಸೆ.. ಶಿವಾನಂದ ಕಳವೆಯಂತೆ ಮತ್ತೊಮ್ಮೆ ಕಾಡು ಮೇಡಿನ ಜಾಡು ಹಿಡಿದು ಸಾಗಬೇಕು.. ಆಗಾಗ ಕಣ್ಣೆದುರು ಬರುವ ಮೃಗ ಸಮೂಹಕ್ಕೆ ಹಾಯ್ ಹೇಳಿ ಬರಬೇಕು..ಅನ್ನಿಸುತ್ತಿದೆ..
    ಭಯವಾಗುತ್ತಿದೆ.. ವಿಸ್ಮಯಗಳ ಗೂಡಿಗೆ ಯಾರದ್ದೂ ದೃಷ್ಟಿ ತಾಗಿದಂತಿದೆ. ಒಂದಾದ ಮೇಲೆ ಒಂದರಂತೆ ಯೋಜನೆಗಳ ಶಾಪ ಬಂದೆರಗುತ್ತಿದೆ. ಯೋಜನೆಗಳ ಭಾರಕ್ಕೆ ಕಾಳಿ ನದಿ ಸುಸ್ತಾಗಿದೆ. ಭದ್ರಾ ಬಣ್ಣಕಳೆದುಕೊಂಡಿದ್ದಾಳೆ. ತುಂಗಿ ಅಳುತ್ತಿದ್ದಾಳೆ. ಶರಾವತಿಯ ಚೆಲುವು ಮರೆತಿದೆ. ಇನ್ನುಳಿದವುಗಳು ಅಘನಾಶಿನಿ, ನೇತ್ರಾವತಿ, ಗಂಗಾವಳಿ.. ಮುಂತಾದ ಮೂರೋ ನಾಲ್ಕೋ ನದಿಗಳು... ಅವುಗಳ ಕಡೆಗೂ ಆಡಳಿತ ಶಾಹಿಗಳ ಕಣ್ಣು ಬಿದ್ದಂತಿದೆ. ಅಘನಾಶಿನಿಗೆ ಅಣೆಕಟ್ಟು ಕಟ್ಟಿ ವಿದ್ಯುತ್ ಉತ್ಪಾದನೆಗೆ ತೊಡಗುವ ಹವಣಿಕೆ ಅವರದ್ದು. ನೇತ್ರಾವತಿಯನ್ನೇ ತಿರುಗಿಸಿ ಬಿಡುವ ಹೂಟವೂ ಅವರದ್ದು. ಆದರೆ ಬಲಿಯಾಗುವುದು ಮಾತ್ರ ಮಲೆನಾಡು. ಇಲ್ಲಿನ ಜೀವಿ ಸಂಕುಲ.
    ಈಗಲೇ ಹಲವಾರು ಯೋಜನೆಗಳಿಂದ ಬೆಂದಿದೆ ಮಲೆನಾಡು. ಇನ್ನೆಷ್ಟು ಯೋಜನೆಗಳು ಬೇಕೋ.. ಮಲೆನಾಡಿನ ಒಡಲು ಭೂದೇವಿಯ ಗುಡಿ. ಅದನ್ನು ಹಾಳುಮಾಡುವ ಯತ್ನ ನಡೆಯುತ್ತಿದೆ. ಅಧಿಕಾರ ಶಾಹಿಗಳಿಗೆ ಧಿಕ್ಕಾರ ಹೇಳೋಣ. ಮಲೆನಾಡಿನ ಮಡಿಲಲ್ಲಿ ನನಗೆ ವಾಸಸ್ಥಾನ ನೀಡಿ ಪೋಷಿಸುತ್ತಿರುವಾಕೆಗೆ ಥ್ಯಾಂಕ್ಸ್ ಹೇಳೋಣ.

Monday, May 27, 2013

ಅಂತರ



ಗೊತ್ತಿರಬಹುದು...
ಬಹುತೇಕ ಪ್ರೇಮದ
ಚಲನ ಚಿತ್ರಗಳೆಲ್ಲವೂ
ಮದುವೆಯೊಂದಿಗೆ ಕೊನೆಯಾಗುತ್ತವೆ...!!!

ಆದರೆ, ಮದುವೆಯ ನಂತರದ ದೃಶ್ಯ
ಇಲ್ಲವೇ ಇಲ್ಲ...! ಯಾಕೀಥರಾ..?
ಏಕೆಂದರೆ.., ಪ್ರೇಮ ಚಿತ್ರಗಳೆಲ್ಲ
ಸಂತೋಷದಾಯಕ.. ಸಿಹಿ ಕನಸು..!!
ಆದರೆ ಮದುವೆಯ ಕಥೆ
ಹಾಗಲ್ಲ.. ಕಠು ವಾಸ್ತವ..!!

ಹೀಗಾಗಿ, ಪ್ರೇಮ ಚಿತ್ರವನ್ನು
ಸುಲಭವಾಗಿ ನಿರ್ಮಿಸುವಾತರು
ಮದುವೆ ಕಥೆಗೆ ಮಾತ್ರ
ಹೋಗಲಾರರು..!! ಏಕಂದರೆ ಅದು
ಕಹಿ, ಭಯಾನಕ..!!

ಇದೇ ಪ್ರೇಮಕ್ಕೂ-ಸಂಸಾರಕ್ಕೂ
ನಡುವಿರುವ ವ್ಯತ್ಯಾಸ.. ಅಂತರ..!

=
(ಇದನ್ನು ಬರೆದಿದ್ದು ದಂಟಕಲ್ಲಿನಲ್ಲಿ ದಿನಾಂಕ 16-05-2008ರಂದು)

Saturday, May 25, 2013

ಕನಸೆಂಬ ಭ್ರಮಿತ ಮಾಯಾಲೋಕದಲ್ಲಿ ಒಂದು ಸುತ್ತು..

ಕನಸೆಂಬ ಭ್ರಮಿತ ಮಾಯಾಲೋಕದಲ್ಲಿ 

ಒಂದು ಸುತ್ತು..

ಬೇಕಾದರೆ ನೀವು ನೆನಪಿಟ್ಕೊಂಡು ನೋಡಿ. ನಿಮ್ಮ ಬಳಿ ಜಪ್ಪಯ್ಯ ಅಂದ್ರೂ ಆಗೋದಿಲ್ಲ. ಅದೇನು ಅಂದ್ರೆ ರಾತ್ರಿ ಮಲಗಿದಾಗ ಕನಸಿನ ಮಧ್ಯೆ ಯಾವುದೋ ಹಾವೋ, ಹುಲಿಯೋ ನಿಮ್ಮನ್ನು ಬೆನ್ನಟ್ಟಿ ಬರ್ತಿದೆ ಎನ್ನುವಾಗ ಓಡಿ ಹೋಗಲು ಯತ್ನಿಸುವುದು. ಊಹೂಂ.. ಆಗುವುದೇ ಇಲ್ಲ. ಹಾಗೆಂದು ರಾತ್ರಿ ಬೀಳುವ ಕನಸಿನಲ್ಲಿ ನಾವು ನಡೆದಾಡಬಹುದು. ಆದರೆ ಓಡಲು ಮಾತ್ರ ಆಗುವುದೇ ಇಲ್ಲ.. ಕಾಲು ಕಟ್ಟಿಹಾಕಿದಂತಹ ಅನುಭವ. ಜಪ್ಪಯ್ಯ ಅಂದರೂ ಓಡಲಿಕ್ಕೆ ಆಗುವುದೇ ಇಲ್ಲ.. ಕನಸಿನಲ್ಲಿ ಕಾಲು ಬರುವುದೇ ಇಲ್ಲ..
    ಇಂತಹ ಚಿತ್ರ ವಿಚಿತ್ರ, ವಿಲಕ್ಷಣ ಅನುಭವವನ್ನು ನೀಡುವ ಕನಸೆಂಬ ಭ್ರಮಿತ ಮಾಯಾಲೋಕದಲ್ಲಿ ಸುತ್ತು ಹಾಕಿದಾಗ ಅದು ನಮ್ಮನ್ನು ಸೂಜಿಗಲ್ಲು ಸೆಳೆಯುವಂತೆ ಸೆಳೆಯುತ್ತದೆ. ಈ ಮನದಾಳದ ಗರ್ಭದೊಳಗಿನ ಕನಸುಗಳಲ್ಲಿ ಕೆಲವು ಮಧುರವಾಗಿದ್ದರೆ, ಸಂತಸವನ್ನು ಉಂಟುಮಾಡುವಂತಿದ್ದರೆ ಉಳಿದ ಹಲವು ಭೀಖರತೆಯಿಂದ ಕೂಡಿರುತ್ತದೆ. ರೌದ್ರಮಯವಾದುದು ಹಲವು. ಕೆಲವು ಅರ್ಥವತ್ತಾದರೆ ಮತ್ತೆ ಕೆಲವುಗಳಿಗೆ ತಲೆಬುಡವಿರುವುದಿಲ್ಲ.
    ನಮಗೆ ಬೀಳುವ ಕನಸುಗಳಲ್ಲಿ ಶೇ.99ರಷ್ಟು ನೆನಪಿನಲ್ಲಿ ಉಳಿಯುವುದಿಲ್ಲವೆಂದು ಯಾವುದೋ ಮಾನಸಿಕ ಶಾಸ್ತ್ರಜ್ಞರು ಹೇಳಿದ್ದಾರೆ. ನೆನಪಿರುವ ಕನಸುಗಳೇ ದಿನಕ್ಕೆ ಐಆದಾರು ಇರುತ್ತವೆ. ಅಂದರೆ ನಮಗೆ ಒಂದು ದಿನದಲ್ಲಿ ಅದೆಷ್ಟು ಕನಸು ಬೀಳಬಹುದು ಎಂಬುದನ್ನು ನೀವೇ ಊಹೆ ಮಾಡಿ ನೋಡಿ..!!
    ಇಂತಹ ಕನಸುಗಳಲ್ಲೇ ನಾನು ಮತ್ತೊಂದೆರಡು ಅನುಭವಗಳನ್ನು ಪಡೆದಿದ್ದೇನೆ. ಅದೇನೆಂದರೆ ಕೆಲವು ಸಲ ಕನಸು ಬಿದ್ದಿರುತ್ತದೆ. ಆ ನಂತರ ಎಷ್ಟೋ ಕಾಲದ ನಂತರ ಆ ಘಟನೆ ನಮ್ಮ ಬದುಕಿನಲ್ಲಿ ನಿಜವಾಗಿಯೂ ಘಟಿಸುತ್ತದೆ. ಇಂತಹ ಕನಸುಗಳು ನಾವು ನೋಡಿರದ ನಮ್ಮ ಭವಿತವ್ಯವನ್ನು ಮುಂಚಿತವಾಗಿ ತಿಳಿಸುವ ಕೆಲಸವನ್ನು ಮಾಡುತ್ತವೆ. ಬಲ್ಲವರು ಇದನ್ನು ಸಿಕ್ಸ್ತ್ ಸೆನ್ಸ್ ಎನ್ನಬಹುದೇನೋ.. ಕೆಲವು ಸಲ ನಿದಿರೆಯ ಮಧ್ಯ ಸುಳಿದು ಬರುವ ಈ ಕನಸುಗಳು ಮುಂದಾಗುವ ದುರಂತಕ್ಕೆ ಮುನ್ಸೂಚನೆ ನೀಡಿದ್ದೂ ಇದೆ.
    ಕನಸಿನ ಕುರಿತು ಕೆಲವು ಮೂಢ ನಂಬಿಕೆಗಳೂ ಇವೆ. ಆದರೆ ಆ ಮೂಢನಂಬಿಕೆಗಳು ಸತ್ಯವಾಗಿದ್ದೂ ಇವೆ. ಅದೆಂದರೆ ನಮ್ಮ ಹಿರಿಯರು ಕನಸಿನಲ್ಲಿ ನಮ್ಮ ಹಲ್ಲು ಉದುರಿದಂತೆ ಕಂಡರೆ ಹಿರಿಯರು ಸಾಯುತ್ತಾರೆಂದು ದವಡೆ ಹಲ್ಲು ಬಿದ್ದರೆ ನಮ್ಮ ಕುಟುಂಬದವರೆಂದು ಹೇಳುತ್ತಾರೆ. ಎಡ ದವಡೆ ಹಲ್ಲಾದರೆ ತಾಯಿಯ ಕುಟುಂಬದವರು, ಬಲ ದವಡೆ ಹಲ್ಲಾದರೆ ತಂದೆಯ ಕುಟುಂಬದವರು ಎನ್ನುವ ನಂಬಿಕೆಗಳಿವೆ. ಹಲ್ಲುಗಳು ಹಾಳಾದಂತೆ ಕಂಡರೆ ಕುಟುಂಬಸ್ತರು ಖಾಯಿಲೆ ಬೀಳುತ್ತಾರೆ ಎನ್ನುವುದರ ಸೂಚನೆ ಎಂದು ಹೇಳುವವರನ್ನು ಕೇಳಿದ್ದೇನೆ. ಮುಂದಿನ ಬಾಚಿ ಹಲ್ಲು ಉದುರಿದಂತೆ ಕಂಡರೆ ತಂದೆ ತಾಯಿ ಸಾವಿನ ಮುನ್ಸೂಚನೆ ಎನ್ನುವವರಿದ್ದಾರೆ. ತೆಂಗಿನ ಮರ ಬಿದ್ದಂತೆ ಕಂಡರೆ ಊರಿನಲ್ಲಿ ಅತ್ಯಂತ ಹಿರಿಯರು ಸಾವನ್ನಪ್ಪುವುದು, ಹುಲಿ ಕಂಡರೆ ಅದೃಷ್ಟದ ಸಂಕೇತ, ದನ ಕಂಡರೆ ಶುಭ, ಹೋರಿ ಹೊರುತ್ತ ಬಂದಂತೆ ಕಂಡರೆ ದುಷ್ಟ ಗೃಹಗಳ ಕಾಟಹೀಗೆ ಅನೇಕ ಬಗೆಯ ನಂಬಿಕೆಗಳನ್ನು ಹೇಳಿದವರನ್ನು ಕಂಡಿದ್ದೇನೆ. ವಿಚಿತ್ರವೋ, ಕಾಕತಾಳೀಯವೋ ಮತ್ತೇನೆನ್ನಬೇಕೋ ಗೊತ್ತಿಲ್ಲ.. ಇವುಗಳಲ್ಲಿ ಕೆಲವಷ್ಟು ನಿಜವಾಗಿದೆ.
    ನನ್ನ ನೆನಪಿನಲ್ಲಿ ಉಳಿದಂತಹ ಕೆಲವು ವಿಶಿಷ್ಟ, ವಿಕ್ಷಿಪ್ತ, ವಿಚಿತ್ರ ಕನಸುಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ಸ್ವಾರಸ್ಯ ತರಬಹುದು ಓದಿ. ಒಮ್ಮೆ ಒಂದು ದಿನ ಇದ್ದಕ್ಕಿದ್ದಂತೆ ನಾನು ಓದುತ್ತಿದ್ದ ಹೈಸ್ಕೂಲನ್ನೇ ನಾನು ಬಿಟ್ಟು ಬಿಟ್ಟಿದ್ದೆ. ಖುಷಿ ಆಗಿ ಬಿಟ್ಟಿತ್ತು. ಆಗ.. ಮುಂಜಾನೆ ಯಾರೋ ನನ್ನನ್ನು ಎಚ್ಚರಿಸಿದಾಗಲೇ ಇದು ನನ್ನ ಕನಸು ಎಂಬ ಅರಿವು ನನಗಾದದ್ದು.
    ಇನ್ನೊಮ್ಮೆ ನನ್ನನ್ನು ಬೆನ್ನಟ್ಟಿಕೊಂಡು ಬಂದ ಹಾವೊಂದು ನನ್ನನ್ನು ಕಚ್ಚಿಬಿಟ್ಟಿತು. ಓಡಲು ಕಾಲೇ ಬರದಂತಾದ ನಾನು ಆ ಕ್ಷಣವೇ ಸತ್ತುಹೋದೆ. ಮತ್ತೆ ಯಥಾ ಪ್ರಕಾರ ಬೆಳಗಿನ ಸವಿ ಮುಂಜಾವಿನಲ್ಲಿ ಅಮ್ಮ ನನ್ನನ್ನು ಎಬ್ಬಿಸಿದಾಗಲೇ ನಾನು ವಾಸ್ತವಕ್ಕೆ ಇಳಿದಿದ್ದು. ಬೆಳಿಗ್ಗೆ ನನ್ನನ್ನು ಎಬ್ಬಿಸಲು ಅಮ್ಮ ಒಂದೆರಡು ಕೂಗು ಹಾಕಿದಾಗಲೆಲ್ಲ `ನಾನು ಸತ್ತು ಹೋಗಿದ್ದೇನೆ ನನ್ನನ್ನು ಯಾರೂ ಕರೆಯಬೇಡಿ.. ನಾನು ಮರಳಿ ಬರುವುದಿಲ್ಲ..' ಎಂದು ಕನವರಿಸಿಬಿಟ್ಟಿದ್ದೆನಂತೆ.. ಈಗಲೂ ಅಮ್ಮ ಇದನ್ನು ಹೇಳಿ ನಗುತ್ತಿರುತ್ತಾಳೆ.
    ಇದು ಕೇವಲ ಒಂದೆರಡು ಉದಾಹರಣೆಗಳಷ್ಟೆ. ಇವನ್ನು ನೆನಪಿನ ಬುತ್ತಿಯಿಂದ ಮೊಗೆದಷ್ಟೂ ಮತ್ತೆ ಮತ್ತೆ ಕೊನೆಯಿಲ್ಲದಂತೆ ನಮಗೆ ಸಿಗುತ್ತಲೇ ಇರುತ್ತವೆ. ಇಷ್ಟರ ನಡುವೆ ಮರೆತಿದ್ದ ವಿಷಯ ಎಂದರೆ ಕಸನುಗಳು ಬೆಳಗಿನ ಜಾವದಲ್ಲಿ ಮಾತ್ರ ಮೂಡುವಂತದ್ದಲ್ಲ. ಅದು ರಾತ್ರಿಯಿಡೀ ಬಿದ್ದಿರುತ್ತವೆ. ಆದರೆ ನಮಗೆ ನೆನಪಿರುವ ಕನಸುಗಳು ಬೆಳಗಿನ ಜಾವದಲ್ಲಿ ಬಿದ್ದಂತವುಗಳು ಮಾತ್ರ. ಕನಸು ಪೂರ್ತಿಯಾಗುವುದರೊಳಗೆ ನಮ್ಮನ್ನು ಎಚ್ಚರಿಸಿದರೆ ಅವು ನೆನಪಿನಲ್ಲಿ ಉಳಿಯುತ್ತವೆ ಎಂದು ಹೇಳುತ್ತಾರೆ. ಇದು ನಿಜವಿರಬೇಕು. ಬೆಳಗಿನ ಜಾವದಲ್ಲಿ ಸವಿಗನಸು ಕಾಣುತ್ತಿರುವಾಗಲೇ ಯಾರಾದರೂ ನಮ್ಮನ್ನು ಎಚ್ಚರಿಸುತ್ತಾರೆ. ಕನಸು ನೆನಪಿರುತ್ತದೆ.
    ಇನ್ನೂ ಒಂದು ಮುಖ್ಯ ಸಂಗತಿ ಹೇಳಲೇ ಬೇಕು. ಅರ್ಧ ಆಗಿದ್ದಾಗ ಅಥವಾ ಕನಸು ಪೂರ್ತಿಯಾದಾಗ ಎಚ್ಚರಾದಾಗ ನಮಗೆ ಕನಸು ನೆನಪಿನಲ್ಲಿರುತ್ತದೆ ಎಂದೆನಲ್ಲ ಇದೊಂಥರಾ ಕಂಪ್ಯೂಟರಿನಲ್ಲಿ ಒಂದು ಪ್ರೋಗ್ರಾಂ ಸೇವ್ ಮಾಡಿದ ನಂತರವೇ ಇನ್ನೊಂದಕ್ಕೆ ಹೋಗಬೇಕಲ್ಲಾ ಹಾಗೆ. ಮನುಷ್ಯ ನಿದಿರೆ ಎಂಬ ಮದಿರೆಯ ತೆಕ್ಕೆಗೆ ಜಾರಿದ ಕೂಡಲೇ ಕನಸ್ಸೆಂಬ ಶರಾಬು ನಮ್ಮನ್ನು ಅಮಲುಗಡಲಲ್ಲಿ ಮುಳುಗಿಸಿಬಿಡುತ್ತದೆ. ಇದೊಂಥರಾ ಚಲನಚಿತ್ರವಿದ್ದಂತೆ.. ಮನಸ್ಸೆಂಬ ಪ್ರೊಜೆಕ್ಟರಿನ ಮೂಲಕ ಹಾದು ಬರುವ ಕನಸು ಕಣ್ಣಿನ ಪರದೆಯ ಮೇಲೆ ಮೂಡಿ ಓಡಾಡುತ್ತವೆ..
    ಇನ್ನೊಂದ್ವಿಷಯ.. ನಿಮ್ಮಲ್ಯಾರಿಗೆ ಈ ಅನುಭವ ಆಗಿದೆಯೋ ಗೊತ್ತಿಲ್ಲ.. ನಾವು ಕನಸ್ಸನ್ನು ಕಾಣುತ್ತಿದ್ದಾಗ ಕನಸಿನಲ್ಲಿ ಯಾರೋ ಏನನ್ನೋ ಹೇಳಿದರು ಅಥವಾ ಬೈದರು ಎಂದು ಇಟ್ಟುಕೊಳ್ಳಿ.. ಹೊರಗೆ ಅದೇ ಘಟನೆ ಜರುಗಿರುತ್ತದೆ.. ಅಂದರೆ ಹಗಲು ವೇಳೆ ಯಾವುದಾದರೂ ಜನಜಂಗುಳಿ ವಾತಾವರಣದಲ್ಲಿ ಮಲಗಿದ್ದರೆ ನಮ್ಮ ಕನಸ್ಸಿನಲ್ಲಿ ಆ ಜನಜಂಗುಳಿಯ ಮಾತುಗಳು ಕನಸ್ಸಿನಲ್ಲಿಯ ಪಾತ್ರಗಳಿಗೆ ತಕ್ಕಂತೆ ಆಡುತ್ತಿರುತ್ತವೆ.. ಹೊರಗೆ ಯಾರೋ ಆಡಿದ ಮಾತು ಕನಸ್ಸಿನಲ್ಲಿಯ ಪಾತ್ರಗಳ ಬಾಯಿಯ ಮೂಲಕ ಬಂದಂತಹ ವಿಚಿತ್ರ ಅನುಭವ ನೀಡುತ್ತವೆ..
    ಇಂತಹ ಅನುಭವಗಳು ನನಗಾಗಿವೆ.. ನನಗೆ ಮಾತ್ರವಲ್ಲ ನಿಮ್ಮಲ್ಲಿ ಕೆಲವರಿಗೂ ಆಗಿರಬಹುದು.. ಹಗಲುಗನಸ ಹೊರತಾಗಿ ನಿಮಗೆ ಅನೇಕ ವಿಶಿಷ್ಟ, ವಿಕ್ಷಿಪ್ತ, ವಿಚಿತ್ರ ಕನಸುಗಳು ಎಡಬಿಡದೇ ನಿಮ್ಮ ಮನಸನ್ನು ಕಾಡಿರಲೂಬಹುದು.  ಇಂತಹ ಕನಸಿನ ಬುತ್ತಿಯನ್ನು ನೀವು ನಿಮ್ಮ ಆತ್ಮೀಯರಲ್ಲಿ ಅಥವಾ ಇನ್ಯಾರಲ್ಲಿಯೋ ಹಂಚಿಕೊಂಡಾಗ ಮಾತ್ರ ಅದೊಂದು ಹೊಸದಾದ ರಸಘಟ್ಟವನ್ನು ಕಟ್ಟಿಕೊಡಬಲ್ಲದು. ನವಿರು ಭಾವನೆಯನ್ನು ಇದು ಕಟ್ಟಿಕೊಟ್ಟು ರಸಸ್ವಾದ ನೀಡಬಲ್ಲದು.. ನೆನಪಿಟ್ಟು ಹೇಳಿನೋಡಿ... ಅದರ ಮಜಾನೇ ಬೇರೆ.

Wednesday, May 22, 2013

ಟೈಂಪಾಸಿಗಷ್ಟು ಹನಿಗವಿತೆಗಳು

48.ಮೋಸ

ಆಕೆಯ ಸುಂದರ ದಂತದ
ಮೋಡಿಗೆ ಬಲಿಯಾದ
ಮೋಸ ಹೋದ ನನಗೆ
ಕೊನೆಗೆ ತಿಳಿದಿದ್ದು
ಅದು ಹಲ್ಲುಸೆಟ್ಟು..!!

49.ತಾಳಿ
ಹರೆಯಕ್ಕೆ,
ಯವ್ವನದೊಡಲಿಗೆ
ಸಿಕ್ಕ ಒಂದು 
ಕಡಿವಾಣ
ಗಂಡಿನ ಲಗಾಮು..!!

50.ಸೂರ್ಯ
ಭೂಮಿಯೊಡಲ 
ಸಂಪತ್ತನ್ನು ಹುಡುಕಲು 
ದೇವರು ಬಿಡುವ 
ಟಾರ್ಚು..!!

51.) ಮದುವೆ
ಮದುವೆಯೆಂದರೆ
ಮಧುರ ಜೀವನ
ಕಳೆದು ಹೋಗುವ
ಒಂದು ವೇ..!!

52)ಸ್ವಾತಂತ್ರ್ಯ ದಿನ
ದೇಶ
ಬ್ರಿಟೀಷರ ಕೈ ತಪ್ಪಿ
ರಾಜಕಾರಣಿಗಳ ಕೈ 
ಅಪ್ಪಿದ ದಿನ..!!

53.ಚಪ್ಪಾಳೆ
ಸಭೆಯ ಮಾತು ಕೇಳುತ್ತಿದ್ದ
ಸಭಿಕರು ಚಪ್ಪಾಳೆ ತಟ್ಟಿದರು.
ಮಾತು ಮುಗಿಯಿತೆಂದು,
ಜೊತೆಗೆ ಮಾತನ್ನು 
ಮುಗಿಸಲೆಂದು..!!

54.ಪತ್ರಕರ್ತ
ಪತ್ರಕರ್ತನಾಗಲೆಂದು
ದಾರಿ ಹುಡುಕಿ ಹೊರಟ ನಾನು
ಆದೆ ಮುಂದೆ
ಪುತ್ರಕರ್ತ..!!

55.ದುಂಡೀರಾಜ
ಕವನ ಬರೆಯುವ ಮುನ್ನ 
ನಾನಾಗ ಬಯಸಿದ್ದೆ ದುಂಡೀರಾಜ..!
ಕವನ ಬರೆದು ವಾಚಿಸಿದಾಗ
ಜನರೆಂದರು, ನೀನು, ನಿನ್ನ ಕವನ 
ದಂಡ ರಾಜಾ..!!

56.ಹೋಲಿಕೆ
ಕುವೆಂಪು ಕವನಗಳೆಂದರೆ
ಕಿವಿಗಿಂಪು, ಕನ್ನಡದ ಕಂಪು,
ಭಾವನೆಗಳ ಸೋಂಪು, ಮನಕೆ ತಂಪು..!!
ನನ್ನ ಕವನವೆಂದಕೂಡಲೆ
ಬರತೊಡಗುತ್ತದೆ ಕಣ್ಣಿಗೆ
ನಿದ್ದೆಯ ಜೋಂಪು..!!

57.ದಂತದ ಬೊಂಬೆ
ಮಹಾನ್ ಕವಿಯೊಬ್ಬ ತಾನು
ಪ್ರೇಯಸಿಯ ಹೊಗಳುತಿದ್ದ
`ಪ್ರಿಯೆ, ನೀನು ದಂತದ ಬೊಂಬೆ..'
ಅದನ್ನು ಕೇಳಿದ ಪ್ರಿಯೆಯೆಂದಳು
`ಕ್ಷಮಿಸು ಪ್ರಿಯಾ..,
ನಾನು ವೀರಪ್ಪನ್ ಗೆ ಬಲಿಯಾಗಲಾರೆ..' 

Tuesday, May 21, 2013

ಎಲ್ಲ ಮರೆತಿರುವಾಗ.. (ಕಥೆ ಭಾಗ -10)

ಎಲ್ಲ ಮರೆತಿರುವಾಗ..


ಭಾಗ -10


ಆ ನಂತರದ ಕೆಲವು ದಿನಗಳು ನನ್ನ ಪಾಲಿಗೆ ಸುವರ್ಣಾಕ್ಷರದಲ್ಲಿ ಬರೆದಿಡಬಲ್ಲಂತವುಗಳಾಗಿದ್ದವು.
ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತಿದ್ದವು.. ಕಾಲೇಜಿನ, ಅಂತರ ಕಾಲೇಜಿನ, ವಿಶ್ವವಿದ್ಯಾಲಯ ಮಟ್ಟದ ಸಂಗೀತ ಸ್ಪರ್ಧೆಗಳಲ್ಲೆಲ್ಲ ಜಯಗಳಿಸಿದೆ..
ನನ್ನ ಗೆಲುವಿನ ಹಿಂದೆ ನನ್ನ ಸಂಗೀತಾ ಇದ್ದಳು..
ನಮ್ಮ ಪ್ರೇಮ ಪಯಣ ಹಾಗೇ ಸಾಗುತ್ತಿತ್ತು.
ನಾನು ಎಡವಿದಾಗಲೆಲ್ಲ ಕೈಹಿಡಿದು ನಡೆಸುತ್ತಿದ್ದ ಸಂಗೀತಾ ನನ್ನ ಪಾಲಿಗೆ ಸ್ಪೂರ್ತಿ ಚಿಲುಮೆಯಾಗಿದ್ದಳು..

ಆದರೆ ಸಂತೋಷದ ಬೆನ್ನಿನಲ್ಲಿ ಹೇಗೆ ದುಕ್ಕವಿರುತ್ತದೆಯೋ.. ಹಾಗೆಯೇ ನನ್ನ ಬಾಳಿನಲ್ಲಿಯೂ ಆಯಿತು.
ಗೆಲುವಿನ ಕುದುರೆಯ ಬೆನ್ನ ಹಿಂದೆ ಸೋಲಿನ ಕರಿಮೋಡವಿರುತ್ತದಂತಲ್ಲ... ಹಾಗಯೇ ಅವು ನನ್ನನ್ನು ಕಾಡಿದವು..
ತುಂಬು ಚಂದಿರನಂತಿದ್ದ ನನ್ನ ಬಾಳಲ್ಲಿ ಗ್ರಹಣ ಹಿಡಿಯಲಾರಂಭಿಸಿತು.

ನನ್ನ ಹಾಗೂ ಸಂಗೀತಾಳ ಪ್ರೇಮದ ವಿಷಯ ಆಕೆಯ ಮನೆಯಲ್ಲಿ ತಿಳಿದುಬಿಟ್ಟಿತು.
ಎಲ್ಲ ತಂದೆ ತಾಯಿಗಳಂತೆ ಅವರ ಮನೆಯಲ್ಲಿಯೂ ರಾದ್ಧಾಂತ ಏರ್ಪಡುವ ಸಂಭವವಿದ್ದವು.
ಆದರೆ ನನ್ನ ವಿಷಯವನ್ನು ಸಂಪೂರ್ಣವಾಗಿದ್ದ ಸಂಗೀತಾಳ ತಮದೆ ತಾಯಿ ನಮ್ಮ ಪ್ರೇಮಕ್ಕೆ ಹಸಿರುನಿಶಾನೆ ಕೊಟ್ಟರು.
ಆದರೆ ನಮ್ಮ ಕಾಲೇಜು ಜೀವನ ಮುಗಿಸಬೇಕೆಂದೂ ನಾನು ಒಳ್ಳೆಯ ಉದ್ಯೋಗ ಪಡೆದುಕೊಳ್ಳಬೇಕೆಂದು ಕರಾರು ಮಾಡಿದರು.
ಕರಾರಿಗೆ ನಾನು ಒಪ್ಪಿಕೊಂಡೆ..

ಹೀಗಿರಲು ಒಂದು ದಿನ ಸಂಗೀತಾ ಇದ್ದಕ್ಕಿದ್ದಂತೆ ಕಾಣೆಯಾದಳು..
ಯಾವತ್ತೂ ನನ್ನಿಂದ ಹಾಗೂ ಆಕೆಯ ಮನೆಯಿಂದ ದೂರವಿರದ ಆಕೆ ಎರಡು ದಿನವಾದರೂ ಪತ್ತೆಯಿರಲಿಲ್ಲ.
ಮನೆಯವರು ಗಾಬರಿಬಿದ್ದರು. ಅವರಿಗಿಂತ ಹೆಚ್ಚು ನಾನು ಗಾಬರಿಬಿದ್ದೆ.
ಪೊಲೀಸ್ ಕಂಪ್ಲೇಂಟ್ ಕೊಟ್ಟೆವು.

ಪೊಲೀಸರು ಆಕೆಯನ್ನು ಪ್ರೀತಿಸುತ್ತಿದ್ದ ನನ್ನ ಮೇಲೆ ಅನುಮಾನ ಪಟ್ಟರು.
ಯದ್ವಾತದ್ವಾ ತಪಾಸಣೆ ಮಾಡಿದರು.
ಆಕೆಯನ್ನು ನಾನೇ ಎಲ್ಲೋ ಬಚ್ಚಿಟ್ಟಿದ್ದೇನೆ ಎನ್ನುವಂತೆ ತೀವ್ರವಾಗಿ ನನ್ನನ್ನು ಹೊಡೆದು ಬಡಿದು ವಿಚಾರಣೆ ಮಾಡಿದರು.
ನಾನು ಏನೂ ಮಾಡಿಲ್ಲ.. ನನಗೆ ಏನೂ ಗೊತ್ತಿಲ್ಲ ಎಂದು ಎಷ್ಟು ಸಾರಿ ಹೇಳಿದರೂ ಬಿಡಲಿಲ್ಲ.
ಆಕೆಯ ಪತ್ತೆಯೂ ಆಗಲಿಲ್ಲ.
ನನ್ನನ್ನು ಬಡಿದು ಪ್ರಯೋಜನವಿಲ್ಲ ಎಂದು ಪೊಲೀಸರು ಬಿಡುಗಡೆ ಮಾಡಿದರು..
ನಾನೂ ಸಂಗೀತಾಳನ್ನು ಹುಡುಕಲು ಯತ್ನಿಸಿದೆ. ಸಿಗಲಿಲ್ಲ..

--

ಮೂರ್ನಾಲ್ಕು ದಿನ ಕಳೆದ ನಂತರ ಸಂಗೀತಾಳ ಮನೆಯಿಂದ ಆರೇಳು ಕಿ.ಮಿ ದೂರದಲ್ಲಿ ಯಾವುದೋ ಹುಡುಗಿಯ ಶವ ಸಿಕ್ಕಿದೆ ಎನ್ನುವ ಸುದ್ದಿ ಬಂದಿತು. ಸಂಗೀತಾಳ ಮನೆಯವರು ನನಗೆ ಈ ಸುದ್ದಿ ತಿಳಿಸುವಾಗ ಧ್ವನಿಯಲ್ಲಿ ಆತಂಕವಿತ್ತು.
ಓಡಿಹೋಗಿ ನೋಡುವ ವೇಳೆಗೆ ಆಗಲೇ ಅಲ್ಲಿ ಪೊಲಿಸರು, ಸಾರ್ವಜನಿಕರು ಜಮಾಯಿಸಿದ್ದರು.
ದೇವರೆ ಈಕೆ ನನ್ನ ಸಂಗೀತಾ ಆಗದಿರಲಿ... ಎಂದುಕೊಂಡೆ..
ಹತ್ತಿರ ಹೋಗಲು ಭಯವಾಯಿತು.
ಸಂಗೀತಾಳ ಮನೆಯವರೂ ಬಂದರು. ಅವರಿಗೂ ಹತ್ತಿರ ಹೋಗಲು ಏನೋ ಅಳುಕು..

ಹತ್ತಿರ ಹೋಗಿ ನೋಡಿದರೆ ಆ ಶವ ಆಗಲೆ ಕೊಳೆತು ಹೋಗಿತ್ತು..
ಮುಖವನ್ನು ಜಜ್ಜಿ ಯಾರೋ ಕೊಲೆ ಮಾಡಿದ್ದರು. ಮುಖದ ಚಹರೆಯ ಮೂಲಕ ಅದು ಯಾರೆಂದು ಗುರುತು ಮಾಡಲು ಸಾಧ್ಯವೇ ಇರಲಿಲ್ಲ. ಪೊಲೀಸರು ಎಲ್ಲ ವಸ್ತುಗಳನ್ನು ಪರಿಶೀಲನೆ ಮಾಡತೊಡಗಿದ್ದರು.
ಕೊನೆಗೆ ಆ ಹುಡುಗಿಯ ದೇಹದ ಮೇಲಿದ್ದ ಬಟ್ಟೆ ಹಾಗೂ ಬ್ಯಾಗಿನಲ್ಲಿದ್ದ ವಸ್ತುಗಳ ಸಹಾಯದಿಂದ ಗುರುತು ಹಿಡಿದಾಗ ...
..
.
.
.
.
.
.
.
ಆಕೆ ನನ್ನ ಸಂಗೀತಾಳೇ ಆಗಿದ್ದಳು....
ಯಾರೋ ಆಕೆಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿದ್ದರು...

ಯಾರದ್ದೋ ಕ್ಷಣಿಕ ಆಸೆಗೆ ನನ್ನ ಸಂಗೀತಾ ಬಲಿಯಾಗಿದ್ದಳು..
ನನಗಂತೂ ದಿಗಂತವೇ ತಲೆಯಮೇಲೆ ಕಳಚಿ ಬಿದ್ದಂತೆ...
ಏನು ಮಾತಾಡಲೂ ಒಲ್ಲೆ.. ಎನ್ನುವ ಭಾವ..
ಏನು ಮಾಡುವುದೂ ಬೇಡ ಎನ್ನುವ ಶೂನ್ಯ...

ಪೊಲೀಸರಿಗೆ ಮತ್ತೆ ನನ್ನ ಮೇಲೆಯೇ ಅನುಮಾನ..
ಒಂದಷ್ಟು ಪ್ರಶ್ನೆಗಳನ್ನು ಕೇಳಿದರು..
ನನಗೆ ಗೊತ್ತಿದ್ದಷ್ಟನ್ನು ಹೇಳಿದೆ. ಪೊಲೀಸ್ ಠಾಣೆಗೆ ಬರುವಂತೆ ಹೇಳಿದರು.
 ಶವವನ್ನು ಪೋಸ್ಟ್ ಮಾರ್ಟಮ್ಮಿಗೆ ಕಳಿಸಲಾಯಿತು.

---

ನನ್ನ ಪ್ರೀತಿಯ ಸಂಗೀತಾಳನ್ನು ಅವರ ಮನೆಯವರ ಬಳಿ ಹೇಳಿ ಆಕೆಯ ದೇಹಕ್ಕೆ ನಾನೇ ಅಗ್ನಿಸ್ಪರ್ಷ ಮಾಡಿದೆ..
ಮನಸ್ಸು ಕಲ್ಲವಿಲವಾಗಿತ್ತು...
ಹೇಳಿಕೊಳ್ಳಲಾಗದ ವೇದನೆ.. ನೋವು.. ಹತಾಶೆ.. ತಳಮಳ, ಶೂನ್ಯ,..
ಕಣ್ಣಮುಂದೆಲ್ಲ ಆಕೆಯದೇ ನೆನಪು..ಗಳ ಮಾಲೆ..
ಕಣ್ಣು ಮುಚ್ಚಿದ ತಕ್ಷಣ ಪರದೆಯ ಮೇಲೆ ಆಕೆಯ ಚಿತ್ರಣ.. ಆಕೆ ಬಂದು ತನ್ನ ಮುಂಗುರಳನ್ನು ಗಾಳಿಯೂದಿ ಹಾರಿಸುತ್ತಿದ್ದ  ಚಿತ್ರವೇ ಮೂಡಿತ್ತಿತ್ತು...
ಅದೆಷ್ಟು ದಿನ ನಿದ್ದೆ ಹತ್ತಲಿಲ್ಲವೋ...
--

ಹೀಗಿರಲು
ಆಕೆಯ ನೆನಪಿನಲ್ಲಿ ನಮ್ಮೂರಿನಿಂದ ಸೈಕಲೆ ಹೊಡೆದುಕೊಂಡು ನಾನು ಬರುತ್ತಿದ್ದೆ.. ಏನಾಯಿತೋ ಗೊತ್ತಿಲ್ಲ..
ಹಿಂದಿನಿಂದ ಯಾರೋ,.. ಯಾವುದೋ ವಾಹನ ಗುದ್ದಿದ ಅನುಭವ...
ಕೆಳಗೆ ಬಿದ್ದದ್ದಷ್ಟೇ ನನಗೆ ನೆನಪಿದೆ..
ಆಮೇಲಿನದೆಲ್ಲ ನಿನಗೆ ಗೊತ್ತುಂಟಲ್ಲ...
ನನ್ನ ಅಲೆದಾಟ.. ಅಲೆಮಾರಿ ಬದುಕು...
ದುರಂತ ಚಿತ್ರಣ...

ಎಂದು ಹೇಳಿ ಜೀವನ್ ದೀರ್ಘ ನಿಟ್ಟುಸಿರು ಬಿಟ್ಟ. ರಚನಾಳ ಕಣ್ಣಲ್ಲಿ ನೀರು ಜಿನುಗಿತ್ತು...
ಜೀವನ್ ಗೆ ಗೊತ್ತಾಗದಂತೆ ಒರೆಸಿಕೊಂಡಳು...

--

ಜೀವನ್..ನಿನ್ನ ಬದುಕು ಹೀಗಿದೆ ಅನ್ನುವುದು ಗೊತ್ತಿರಲಿಲ್ಲ..
ಯಾರೋ ಏನೇನೋ ಹೇಳಿದ್ದರು.. ಇಲ್ಲಸಲ್ಲದ ವಿಷಯ.. ಆದರೆ ನಿನ್ನ ಮನದಾಳದ ದುಗುಡ ಇಂತಹ ದುಕ್ಕಕರವಾಗಿದೆ ಎನ್ನುವುದು ನಂಬಲಾಗುವುದಿಲ್ಲ... ಮುಂದೆ ಸಂಗೀತಾಳನ್ನು ಯಾರು ಕೊಂದರು ಎನ್ನೋದು ಗೊತ್ತಾಯ್ತಾ..? ಎಂದು ಕೇಳಿದಳು ರಚನಾ..
ಹುಂ.. ಸಂಗೀತಾಳ ದೂರದ ಸಂಬಂಧಿಕರೊಬ್ಬರಿಗೆ ಅವಳನ್ನು ಮದುವೆಯಾಗುವ ಆಸೆಯಿತ್ತಂತೆ... ಆಕೆಯ ಹಾಗೂ ನನ್ನ ಪ್ರೇಮ ಪ್ರಸಂಗ ತಿಳಿದವರು ಹೀಗೆ ಮಾಡಿದರು ಎನ್ನುವುದು ಕೊನೆಗೆ ತಿಳಿಯಿತು.. ನನಗೆ ಎಕ್ಸಿಡೆಂಟ್ ಮಾಡಿದ್ದೂ ಅವರೇ ಎನ್ನುವುದೂ ಇತ್ತೀಚೆಗೆ ತಿಳಿಯಿತು..
ನನ್ನ ಮೇಲೆ ಯಾಕೆ ದ್ವೇಷ ಎನ್ನುವುದು ಗೊತ್ತಾಗಲೇ ಇಲ್ಲ..ಎಂದ ಜೀವನ್..

-- ಹೋಗ್ಲಿ ಬಿಡು...
ಅದೊಂದು ಕೆಟ್ಟ ಕನಸು ಎಂದು ಮರೆತುಬಿಡೋಣ...
ನಿನಗೀಗ ಹೊಸ ಜನ್ಮ ಸಿಕ್ಕಿದೆ..ಹಳಿತಪ್ಪಿದ್ದ ನಿನ್ನ ಸಂಗೀತದ ಬದುಕು ಮತ್ತೊಮ್ಮೆ ಹಳಿಗೆ ಬಂದು ತಲುಪಿದೆ...
ನಿನಗೆ ನಾನಿದ್ದೇನೆ...
ನೀನೊಪ್ಪಿದರೆ ನಾವಿಬ್ಬರೂ ಜೊತೆ ಸೇರಿ ಬದುಕಿನಲ್ಲಿ ಹೆಜ್ಜೆ ಹಾಕೋಣ...
ನಿನ್ನನ್ನು ನಾನು ಇಷ್ಟ ಪಡುತ್ತಿದ್ದೇನೆ...
ನಿನ್ನ ಒಪ್ಪಿಗೆಗೆ ಕಾಯುತ್ತಿದ್ದೇನೆ.. ಏನಂತೀಯಾ.. ಎಂದು ಕೇಳಿದಳು.. ರಚನಾ...

-- ಕೆಲಕಾಲ ಯೋಚಿಸಿದ ಜೀವನ್ ಹೇಳಿದ..
ನಿಜ.. ನೀನು ನನಗೆ ಮರು ಜನ್ಮ ಕೊಟ್ಟವಳು..
ಬೀದಿಪಾಲಾಗಿದ್ದ ನನ್ನ ಬದುಕನ್ನು ಹಳಿಗೆ ತಂದವಳು..
ನನ್ನಲ್ಲಿನ ಸಂಗೀತಕ್ಕೆ ಹೊಸ ರೂಪ ಕೊಟ್ಟವಳು...
ಅರ್ಧದಲ್ಲಿಯೇ ಕರಗಿ ಹೋಗುತ್ತಿದ್ದ ಕನಸನ್ನು ಮತ್ತೆ ಗಟ್ಟಿಗೊಳಿಸಿದವಳು..
ನಿನಗೆ ನಾನು ಏನೆಂದು ಕರೆಯಲಿ ..?
ಜೊತೆಯಾಗಿ..ಹಿತವಾಗಿ ಬಾಳ್ವೆ ನಡೆಸೋಣ ಎಂದು ಕೇಳುವುದು ನಿನ್ನ ಹಕ್ಕು..ಆದರೆ...
ನನಗೆ ಮಾತ್ರ ಗೊಂದಲ..
ಏನು ಮಾಡಬೇಕು ತಿಳಿಯುತ್ತಿಲ್ಲ...ಎಂದ..

--

ನಾಲ್ಕಾರು ದಿನ ಕಳೆಯಿತು...
ಕೊನೆಗೊಮ್ಮೆ ಆಕೆಯ ಬಳಿ ತನ್ನ ನಿರ್ಧಾರವನ್ನು ತಿಳಿಸಿದ..

ನಿನ್ನ ಕೋರಿಕೆ ಸರಿಯಾಗಿದೆ.. ಆದರೆ ನನಗೆ ಮಾತ್ರ ಅದನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ.
ನಾನು.. ನನ್ನ ಸಂಗೀತಾಳ ನೆನಪಲ್ಲಿ ಸುಖವಾಗಿದ್ದೇನೆ.. ಯಾಕೋ ಅವಳಿದ್ದ ೀ ಮನಸ್ಸಿನಲ್ಲಿ ಇನ್ನೊಬ್ಬರು ಬರಲು ಇಷ್ಟವೇ ಆಗುತ್ತಿಲ್ಲ...
ನೀನು ಬೇಸರಿಸಿಕೊಂಡರೂ ತೊಂದರೆಯಿಲ್ಲ...
ನಾನು ನಿಗೆ ಸಿಗಲಾರೆ..
ನಾನು ಹಾಗೂ ನನ್ನ ಸಂಗೀತ ಇವೆರಡೇ ನನಗಿರಲಿ...
ಸಂಗೀತಾಳ ಜಾಗದಲ್ಲಿ ಇನ್ನೊಬ್ಬಳು ... ಯಾಕೋ.. ಊಹೂಂ.. ಕಲ್ಪನೆಗೆ ನಿಲುಕುತ್ತಿಲ್ಲ...
ಬಾಯ್....

ರಚನಾಳ ಕಣ್ಣಂಚಿನಲ್ಲಿದ್ದ ನೀರು.. ಕೇಳುತ್ತಿದ್ದ ಸಾವಿರ ಪ್ರಶ್ನೆಗಳು ಹಾಗೆಯೇ ಉಳಿದವು...
ಮನೆಯೊಳಗಿನ ಮೊಬೈಲ್
ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ
ಎನ್ನುವ ಹಾಡು ಹೇಳುತ್ತಿತ್ತು....


(ಮುಗಿಯಿತು..)

Monday, May 20, 2013

ಒಂದು ರಿಸರ್ಚಿನ ಜೊತೆಗೆ

`ಹಲೋ.. ನಾನು ಅಪರಾಜಿತಾ.., ಐ ಆಮ್ ಫ್ರಾಂ ಬ್ಯಾಂಗಲೂರ್..', `ನಾನು ರಮೇಶ, ಅಂವ ನನ್ನ ಮಿತ್ರ ಹರೀಶ.. ನಾವಿಬ್ರೂ ಮುಧೋಳದವರ್ರಿ.., ಈಗ ಶಿರಸಿಯ ಅರಣ್ಯ ಕಾಲೇಜಿನಲ್ಲಿ ಓದಾಕ್ ಹತ್ತೀದಿವಿ..' `ನಾನು ಶೇಖರ ಭಟ್ಟ.. ನನ್ನೂರು ಯಲ್ಲಾಪುರದ ಹತ್ತಿರ ತಟಗಾರು.. ಆನು ಜೋಯ್ಡಾದಲ್ಲಿ ಎಸ್ಸೆಲ್ಸಿ ಓದ್ತಾ ಇದ್ದಿ..' ಹೀಗೆಂದು ನನ್ನ ಬಳಿ ಪರಿಚಯ ಮಾಡಿಕೊಂಡಿದ್ದು ಒಂದು ತಂಡ. ಐದಾರು ವರ್ಷಗಳ ಹಿಂದೆ ಒಂದು ಕ್ರಿಸ್ಮಸ್ ದಿನ ನಮ್ಮ ಸುತ್ತಮುತ್ತಲ ಕಾಡಿನ ಪ್ರಾಣಿಗಳ ರಿಸರ್ಚಿಗೆಂದು ಬಂದಿದ್ದ ಗುಂಪನ್ನು ಕಂಡು ನನ್ನ ಅಪ್ಪ ನನ್ನ ಬಳಿ ಅವರ ಜೊತೆಗೆ ಹೋಗಿ ನಮ್ಮೂರ ಕಾಡು ತೋರಿಸಿಕೊಂಡು ಬಾ ಎಂದಿದ್ದ. ಆ ಗುಂಪಿನ ಜೊತೆಗೆ ನಮ್ಮೂರಿನ ಅರಣ್ಯ ಇಲಾಖೆಯ ಅಧಿಕಾರಿ ದಿನಕರ್ ಅವರಿದ್ದರು. ಅವರಿಗೆ ಸರಿಸಮನಾಗಿ ನಾನೂ ನನ್ನ ಪರಿಚಯ ಮಾಡಿಕೊಂಡೆ.
        ನನ್ನ ಅಪ್ಪ ನನ್ನನ್ನು ಕರೆಯುವ ಮುನ್ನ ಅವರ ಬಳಿ ನನ್ನ ಕುರಿತು ಅದೆಷ್ಟು ಕೊಚ್ಚಿಕೊಂಡಿದ್ದರೋ... ನೀವು ದಿನದಲ್ಲಿ ಎಷ್ಟು ಹೊತ್ತು ಕಾಡಲ್ಲಿರ್ತೀರಿ..? ಕಾಡೆಮ್ಮೆ ಎಲ್ಲಾ ಇಲ್ಲಿ ನಿಮ್ಮ ಕೊಟ್ಟಿಗೆ ಬಳಿ ಬರ್ತದಂತೆ ಹೌದಾ,..,? ನಿಮ್ಮ ಬೈಕಿಗೆ ಹಂದಿ ಅಡ್ಡಬಂದು ನೀವು ಬಿದ್ದಿದ್ದರಂತೆ..? ಈ ಕಾಡಲ್ಲಿ ಹುಲಿ ಇದೆಯಾ..? ನೀವು ಶಿಖಾರಿ ಮಾಡ್ತೀರಾ..? ಎನ್ನುವ ಪ್ರಶ್ನೆಗಳ ಸರಮಾಲೆಯನ್ನು ನನ್ನ ಬಳಿ ಕೇಳಿದ್ದರು. ಅಪ್ಪನ ಹೊಗಳುವಿಕೆಯಿಂದ ನನ್ನನ್ನು ಅವರು ಕಾಡು ಮನುಷ್ಯ, ಕಾಡಿನ ಒಡನಾಡಿ ಎಂದುಕೊಂಡಿರಲೂ ಸಾಕು. ವಾರಕ್ಕೊಮ್ಮೆಯ ವೀಕೆಂಡಿನಲ್ಲಿ ಕಾನು, ಬೆಟ್ಟ ಗುಡ್ಡ ತಿರುವುದು ನನ್ನ ಹವ್ಯಾಸ. ನಮ್ಮೂರಿನ ಹುಡುಗರ ದಂಡು ನನ್ನ ಜೊತೆಗೆ ಇದ್ದು ಬಾಯಿಪಟಾಕಿ ಬಾರಿಸುತ್ತ ಮುನ್ನಡೆದಾಗಲೆಲ್ಲ ನಾನು ಘನ ಗಾಂಭೀರ್ಯದಿಂದ ಹೆಜ್ಜೆ ಹಾಕಿದ್ದಿದೆ. ಆದರೆ ಇಷ್ಟು ಕಾಡನ್ನು ನೋಡದ ಬೆಂಗಳೂರಿಗರು, ಬಯಲುಸೀಮೆಯವರು ನನ್ನನ್ನು ಅವರ ಪ್ರಶ್ನೆಗಳ ಮೂಲಕ ಕಾನುವಾಸಿ ಮಾಡಿಬಿಟ್ಟಿದ್ದರು. 
ಚಿಕ್ಕಂದಿನಿಂದ ಟ್ರೆಕ್ ಮಾಡುವ ಹುಚ್ಚು ಹಂಬಲವಿತ್ತಲ್ಲ, ಅವರು ಕರೆದಾಗ ಸರ್ರನೆ ಹೊರಟೆ. ಸ್ಟೈಲ್ ಮಾಡಲು ಬೇಕೆಂದು ಒಮದು ಬ್ಯಾಗು. ಬ್ಯಾಗಲಿ ಎಂತ ಮಣ್ಣು ಮಸಿಯೂ ಇರಲಿಲ್ಲ. ನೋಟ್ಸ್ ಮಾಡಿಕೊಳ್ಳಲು ಒಂದು ಪುಸ್ತಕ, ಜೊತೆಗೊಂದು ಹರಿತವಾದ ಕತ್ತಿ. ರಿಸರ್ಚಿಗೆ ಬಂದಿದ್ದವರು ಹೋಗಬೇಕಿದ್ದುದು ನಮ್ಮೂರಿನಿಂದ ಸೀದಾ ಹಸರಗೋಡಿಗೆ. ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಅದೆಲ್ಲಿದ್ದನೋ ಎನ್ನುವಂತೆ ನಮ್ಮೆದುರು ಪ್ರತ್ಯಕ್ಷನಾಗಿದ್ದು ನಮ್ಮ ಪಕ್ಕದ ಮನೆಯ ದತ್ತಣ್ಣ. ಬಂದವನು ಕವಳದ ಬಾಯಿಯ ಕೆಂಪುದಂತಪಂಕ್ತಿಗಳನ್ನು ತೋರಿಸಿ ಅದೂ ಇದೂ ಬಹಳಷ್ಟು ಹಲುಬಿ., `ಹಿಂಗೆ ಬನ್ನಿ.. ನಮ್ಮ ಮನೆಯಲ್ಲೂ ನೋಡುವಂತದ್ದು ಭಾಳಷ್ಟಿದೆ....' ಎಂದು ತಮ್ಮ ಮನೆಗೆ ಬರುವಂತೆ ದುಂಬಾಲುಬಿದ್ದ. ಇವರು ಬೇಡ ಎಂದಷ್ಟೂ ಅವನ ಒತ್ತಾಯ ಹೆಚ್ಚಾಗತೊಡಗಿತು. ಕೊನೆಗೆ ಅರಣ್ಯ ಇಲಾಖೆ ಅಧಿಕಾರಿ ದಿನಕರ್ ಅವರು ಹಳೆಯ ಪರಿಚಯವನ್ನು ನೆನಪು ಮಾಡಿಕೊಂಡು ರಿಸರ್ಚಿನ ತಂಡವನ್ನು ಕರೆದೊಯ್ದರು. ದತ್ತಣ್ಣ ಇವರಿಗೆ ಅವರ ಅಪ್ಪ ಕಾಶ್ಮೀರದ ಕಾನಿನಿಂದ ತಂದು ನೆಟ್ಟಿದ್ದ ಚಹಾ ಗಿಡವನ್ನೂ, ಲೀಚಿ ಹಣ್ಣಿನ ಗಿಡವನ್ನೂ ತೋರಿಸಿದ. ಕೊನೆಯಲ್ಲಿ ರಾಜನೆಲ್ಲಿ ಗಿಡಗಳನ್ನು ತೋರಿಸಿ ಮನೆಗೆ ಕರೆದೊಯ್ದ.
ಆ ಟೀಮ್ ಬಂದಿದ್ದು ಆಲೇಮನೆಯ ಸೀಸನ್ನಿನಲ್ಲಿ. ದತ್ತಣ್ಣನ ಮನೆಯಲ್ಲಿ ಆಲೆಮನೆಯ ಸಡಗರ. ಆಲೆಮನೆಯಲ್ಲಿ ಉತ್ತರಕನ್ನಡದ ಸ್ಪೆಷಲ್ ತೊಡದೇವು ರೆಡಿಯಾಗುತ್ತಿತ್ತು. ಬೆಂಗಳೂರು, ಮುಧೋಳದ ಮಂದಿಗೆ ಇದು ಹೊಸದು. ದಿನಕರ್ ಅವರಿಗೂ ಅಷ್ಟೇ. ಮಾಡುವ ವಿಧಾನ ತಿಳಿದುಕೊಮಡರು. ಕ್ಯಾಮರಾ ಕಣ್ಣಿನಲ್ಲಿ ತುಂಬಿಕೊಂಡರು. ಸತ್ಕಾರಪ್ರಿಯರಿಂದ ತೊಡದೇವು ಸಮರ್ಪಯಾಮಿ ಆಯಿತು. ಪ್ರಾರಂಬದಲ್ಲಿಯೇ ಅಡ್ಡದಾರಿ ಹಿಡಿದರೂ ಬಾಯಿ ಸಿಹಿಯಾಗಿದ್ದಕ್ಕೆ ರಿಸರ್ಚಿನ ತಂಡ ಖುಷಿಯಾಗಿ ರಸ್ತೆಯೆಡೆಗೆ ಹೆಜ್ಜೆ ಹಾಕುವ ಹೊತ್ತಿಗೆ ಸೂರ್ಯ ನೆತ್ತಿಗೆ ಬಂದಿದ್ದ. ಇಲ್ಲಿಂದ ನಮ್ಮೂರಿನಲ್ಲಿ ಅಳಿದುಳಿದ ಕಾಡನ್ನು ತೋರಿಸುವ ಹೊಣೆಗಾರಿಕೆ ನನ್ನದಾಯಿತು. ಮೊದಲು ನಮ್ಮೂರಿನ ಅಘನಾಶಿನಿ ನದಿಗೆ ಕರೆದೊಯ್ದು ನದಿ ನೀರಿನ ವಿಶೇಷತೆಯನ್ನು ವಿವರಿಸಿದೆ. ನದಿಯ ಎರಡೂ ಬದಿಗಳಲ್ಲಿ ಬಾನೆತ್ತರಕ್ಕೆ ಚಾಚಿ ನಿಂತಿದ್ದ ನಮ್ಮೂರಿನ ಸ್ಪೆಷಲ್ ಅನಂತ ಭಟ್ಟನ ಅಪ್ಪೆಮರಗಳನ್ನು ತೋರಿಸಿ ವಿವರಣೆಯನ್ನು ನೀಡಿದೆ. ಅದರ ಜೊತೆ ಜೊತೆಯಲ್ಲಿ ತೋಟದ ಬದುಗಳನ್ನು ಹೊಳೆಯ ಕೊರೆತದಿಂದ ತಪ್ಪಿಸುವ ವಾಟೆಮಟ್ಟಿಯ ದೈತ್ಯತೆಯನ್ನು ವಿವರಿಸಿದೆ. ಆ ಟೀಮು ಅವನ್ನು ಕ್ಯಾಮರಾದಲ್ಲಿ ಕಟ್ಟಿಕೊಂಡು ಅಗತ್ಯ ವಿವರಗಳನ್ನು ಬರೆದುಕೊಂಡು ಮುಂದಕ್ಕೆ ಹೆಜ್ಜೆ ಹಾಕಿತು.
ಆ ನಂತರ ಅವರ ಕೋರಿಕೆಯಂತೆ ನಾನು ಅವರನ್ನು `ಕುಚಗುಂಡಿ' ಊರಿನ ಕಡೆಗೆ ಕರೆದೊಯ್ದೆ. ಸನೀಹದ ಬೇಣದಮನೆ ಎಂಬಲ್ಲಿ ಮತ್ತೊಮ್ಮೆ ಅಡ್ಡದಾರಿಯನ್ನು ಹಿಡಿದು ನಮ್ಮ ಟೀಮು ಸಾಗಿತು. ಬೇಟಣದ ಮನೆಯ ಅಂಚಿನಲ್ಲೇ ನಮ್ಮೂರಿನ ಆಲೆಮನೆ ರಂಗೇರಿತ್ತು. ಆ ದಿನ ನಮ್ಮೂರಿನ ಸುಬ್ಬಣ್ಣ ಎನ್ನುವವರಿಗೆ ಸೇರಿದ ಕಬ್ಬಿನ ಆಟವಿತ್ತು. ಸುಬ್ಬಣ್ಣನ ಕೋರಿಕೆಯ ಮೇರೆಗೆ ಆಲೇಮನೆಯಲ್ಲಿ ಹಾಲನ್ನೂ, ನೊರೆಬೆಲ್ಲವನ್ನೂ ತಿಂದು ಮುಂದಕ್ಕೆ ಹೆಜ್ಜೆ ಹಾಕಿದೆವು. ಬೇಣದ ಮನೆಯನ್ನು ಸುತ್ತಿಬಳಸಿ ಅಲ್ಲಿನ ಕಾಡನ್ನು ಹೊಕ್ಕೆವು. ಕಾಡು ಹೊಕ್ಕವರಿಗೆ ಸಿಕ್ಕಿದ್ದು ಕಾಡೆಮ್ಮೆಯ ಹೆಜ್ಜೆ ಗುರುತು. ಬರ್ಕ ಹಾಗೂ ಕಾನುಕುರಿಗಳ ಸೆಗಣಿ. ರಿಸರ್ಚಿನ ತಂಡ ಕಾಡೆಮ್ಮೆ ಹೆಜ್ಜೆ ಗುರುತಿನ ಪೋಟೋ ಕ್ಲಿಕ್ಕಿಸಿ ಬರ್ಕಗಳ ಸಗಣಿಯನ್ನು ಸಂಗ್ರಹಿಸಿ ಮುನ್ನಡೆಯಿತು.
`ನೀವು ಹುಲಿ ನೋಡಿದ್ದೀರಾ..? ಹೆಂಗಿದೆ..? ಕಾಡೆಮ್ಮೆ ಹೇಗಿದೆ..? ಕಾಡೆಮ್ಮೆ ಮೈಮೇಲೆ ಎರಗಿ ಬರುವುದಿಲ್ಲವಾ..?'ಇಂತಹ ನಾಲ್ಕೆಂಟು ತರಲೆ ಪ್ರಶ್ನೆಗಳು ಹರೀಶ ಹಾಗೂ ರಮೇಶರಿಂದ ನನ್ನ ಕಡೆ ತೂರಿ ಬಂದವು. ಅದಕ್ಕೆ ನಾನು `ನಮ್ಮೂರಿನಲ್ಲಿ ಅಡ್ಡಾಡುವ ಕಾಡೆಮ್ಮೆಗಳನ್ನು ನಾನು ಆಗಾಗ ಕಾಣುತ್ತಿರುತ್ತೇನೆ. ಅವಾಗಿಯೇ ಅವೇನೂ ತೊಂದರೆ ಕೊಡುವುದಿಲ್ಲ. ಬಹಳ ಸಾಧು ಪ್ರಾಣಿ. ಆದರೆ ಇತ್ತಿತ್ತಲಾಗಿ ಅವುಗಳ ಬೇಟೆ ಬಹಳ ಹೆಚ್ಚಿದೆ. ಮೊದ ಮೊದಲೆಲ್ಲ ನಮ್ಮೂರಿನ ಕಡೆಗೆ ಮುಖ ಮಾಡುವ ಕಾಡೆಮ್ಮೆಗಳ ಗುಂಪಿನಲ್ಲಿ 20-22 ಇರುತ್ತಿದ್ದವು. ಈಗ ಅವುಗಳ ಸಂಖ್ಯೆ 10-12ಕ್ಕೆ ಇಳಿದಿದೆ. ಆದರೆ ನಮ್ಮೂರಿನ ಕಾಡಿನಲ್ಲಿ ಹುಲಿಯಿಲ್ಲ. ಕಪ್ಪು ಚಿರತೆಯನ್ನು ಕಂಡವರಿದ್ದಾರೆ..' ಎಂದೆ. ಅದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಅಪರಾಜಿತಾ `ಅದ್ಯಾಗ್ರೀ ಹೇಳ್ತೀರಾ ಹುಲಿ ಇಲ್ಲ ಅಂತ ನೀವು ಅಷ್ಟು ಫರ್ಫೆಕ್ಟಾಗಿ..? ಕಪ್ಪು ಚಿರತೆಯೇ ಕಂಡಿದೆ ಎನ್ನುವುದಕ್ಕೆ ಸಾಕ್ಷಿ ಇದೆಯಾ..? ಕಾಡೆಮ್ಮೆ ಬೇಟೆ ನಿಷೇಧ ಇದ್ದರೂ ಅದನ್ನು ಯಾರು ಯಾಕ್ರೀ ಬೇಟೆ ಆಡ್ತಾರೆ.." ಎಂದು ರೇಗುವ ರೀತಿಯಲ್ಲಿ ಕೇಳಿದಳು. ನಾನು ಅದಕ್ಕೆ ಚುಟುಕಾಗಿ ಉತ್ತರಿಸಿ ಸುಮ್ಮನಾದೆ. ಅರಣ್ಯಾಧಿಕಾರಿ ದಿನಕರ್ ನನ್ನನ್ನು ನೋಡಿ ನಕ್ಕರು.
ಕೊನೆಗೊಮ್ಮೆ ಅವರು ಹೇಳಿದಂತೆ ಹಸರಗೋಡಿಗೆ ತೆರಳುವ ಮಾರ್ಗಕ್ಕೆ ಕರೆದೊಯ್ದು ಅವರನ್ನು ನಿಲ್ಲಿಸಿದೆ. ಹೋಗುವ ಮುನ್ನ `ಅಘನಾಶಿನಿ ನದಿ ದಾಟಿ ಹೋಗಬೇಕು..' ಅಂದೆ. ಆಗ ಅಪರಾಜಿತಾ ತನ್ನ ಬ್ಯಾಗಿನೊಳಗಿದ್ದ ನಕಾಶೆ ಹಾಗೂ ಚಿಕ್ಕ ಮೊಬೈಲಿನಾಕಾರದ ಯಂತ್ರವೊಂದನ್ನು ತೆಗೆದು ಅದೇನೋ ಲೆಕ್ಖಾಚಾರದಲ್ಲಿ ತೊಡಗಿದಳು. ಹತ್ತು ನಿಮಿಷ ಅಂದಾಜು ಮಾಡಿ, ಅಳೆದು ತೂಗಿ `ನಾವು ನಕಾಶೆಯಿಂದ ಹೊರಗಿದ್ದೇವೆ..' ಎಂದಾಗ ಅರಣ್ಯ ಅಧಿಕಾರಿ ದಿನಕರ್ರಾದಿಯಾಗಿ ನಮಗೆಲ್ಲ ಗೊಂದಲ. ಎಲ್ಲರೂ ಅವರವರ ಭಾವಕ್ಕೆ ತಕ್ಕಂತೆ ತೋಚಿದ್ದನ್ನು ಹೇಳತೊಡಗಿದರು. ಸಿಡುಕಿ ಅಪರಾಜಿತಾ ದಾರಿತಪ್ಪಿಸಿ ಕರೆದುಕೊಂಡುಬಂದಿದ್ದೀರಿ ಎಂದು ನನ್ನನ್ನು ರೇಗುವ ಮೊದಲು ನಾವು ಬರಬೇಕಿದ್ದುದು ಹಸರಗೋಡೇ ಹೌದಾ ಕನ್ ಫರ್ಮ್ ಮಾಡಿಕೊಳ್ಳಿ ಅಂದೆ. ಕೊನೆಗೆ ಕ್ರಾಸ್ ಚೆಕ್ ಮಾಡಿದಾಗ ಹೆಸರು ತಪ್ಪಾಗಿತ್ತು, ನಾವು ಬರಬೇಕಿದ್ದುದು ಹಸರಗೋಡಿಗಲ್ಲವಾಗಿತ್ತು. ಅರಶಿಣಗೋಡು ಎನ್ನುವ ಊರಿಗೆ ಹೋಗಬೇಕಿತ್ತು. ನಕಾಶೆಯಲ್ಲಿ ಬೃಹಸ್ಪತಿಗಳು ಬರೆದ ಪ್ರಕಾರ ಅರಶಿಣಗೋಡು ಎನ್ನುವ ಹೆಸರು ಹಸರಗೋಡು ಆಗಿತ್ತು(ಅ ಕ್ಕೆ ಹ ಎಂದು ಬಳಕೆ ಮಾಡುವ ಹಾಗೂ ಹ ಕ್ಕೆ ಅ ಎಂದು ಬಳಕೆ ಮಾಡುವ ಸಂಪ್ರದಾಯ ಬೆಂಗಳೂರು ಕಡೆಯಲ್ಲಿ ಇರುವುದರಿಂದ ಇಂತಹ ಪ್ರಮಾದ ಉಂಟಾಗಿತ್ತು.. ಬಹಳಷ್ಟು ಕಡೆಗಳಲ್ಲಿ ಇನ್ನೂ ಹಲವು ಇಂತಹ ಸಮಸ್ಯೆಗಳು ಇವೆ.). ಈ ಹೆಸರು ಕೆಳಿದವನೇ ನಾನು `ಅಯ್ಯೋ ಅರಶಿಣಗೋಡ ಇಲ್ಲಿಂದ 10 ಕಿ.ಮಿ ಆಗುತ್ತದೆ. ನಾವು ಈಗ ಇರುವ ಸ್ಥಳದಿಂದ ಸರಿಯಾಗಿ ವಿರುದ್ಧ ದಿಕ್ಕಿನಲ್ಲಿದೆ. ಬಂದ ದಾರಿಯಲ್ಲೇ ಮರಳಿ ಹೋಗಬೇಕು. ಕಾನಸೂರಿನ ಆಚೆಗೆ ಆ ಊರಿದೆ..'ಎಂದೆ.
ಇಷ್ಟು ಹೇಳಿದ್ದೇ ತಡ ರಿಸರ್ಚಿನ ತಂಡದಲ್ಲಿ ಅಪಸ್ವರದ ತರಂಗಗಳ ಹೊರ ಬಿದ್ದವು. 2 ಜನ ಹೋಗುವ ಎಂದರೆ ಮತ್ತೆರಡು ಜನ ಬೇಡ ಎನ್ನುವ ವಾದ. ನಾನು ದಿನಕರ್ ಇಬ್ಬರು ಸುಮ್ಮನಿದ್ದೆವು. 10-15 ನಿಮಿಷ ಕಳೆದರೂ ಅವರ ಚರ್ಚೆಗೆ ಕೊನೆ ಬೀಳಲಿಲ್ಲ. ಕೊನೆಗೆ ನಾನು `ಇಲ್ಲಿಂದ 1-2 ಕಿ.ಮಿ ನಡೆದರೆ ಕಾನಸೂರು -ಬಾಳೇಸರ ಬಸ್ಸಿನ ಮಾರ್ಗ ಸಿಗುತ್ತದೆ. ಈಗ ಹೇಗೂ ಬಸ್ಸು ಬರುವ ಟೈಮಾಗಿದೆ. ಕಾನಸೂರಿಗೆ ಬಸ್ಸಿನಲ್ಲಿ ಹೋಗಿ ಅಲ್ಲಿಂದ ಅರಶಿಣಗೋಡಿಗೆ ನಡೆದು ಹೋಗುವಾ. ಅದೇ ಅತ್ಯಂತ ಪ್ರಸ್ತುತ, ಸಮಯ ಉಳಿಸುವ ಹಾಗೂ ಸರಿಯಾದ ದಾರಿ..' ಎಂದೆ. ಶೇಖರ, ರಮೆಶ, ದಿನಕರ್ ಅದಕ್ಕೆ ಸಮ್ಮತಿ ಸೂಚಿಸಿದರು. ಆದರೆ ಅಪರಾಜಿತಾ ಮಾತ್ರ `ರಿಸರ್ಚ್ ಅಂದರೆ ಏನೆಂದುಕೊಂಡಿದ್ದೀರಿ..? ಕಾಡಿನಲ್ಲೇ ಹೋಗಬೇಕು ಕಾಡಿನಲ್ಲೇ ಬರಬೇಕು.. ರಿಸರ್ಚೆಂದರೆ ಬಸ್ಸಿನಲ್ಲಿ ಹೋಗೋದಲ್ಲ.. ನಿಮಗೆ ರಿಸರ್ಚಿನ ಬಗ್ಗೆ ಎಂತ ಗೊತ್ತುಂಟ್ರೀ..?'ಎಂದು ಮತ್ತೊಮ್ಮೆ ರೇಗಿದಳು. 
ನನಗಂತೂ ಒಮ್ಮೆ ಸಿಟ್ಟು ಬಂದು ಬಿಟ್ಟಿತು. `ರಿಸರ್ಚೆಂದರೆ ಏನೆಂದು ನಿಮಗಿಂತ ನನಗೆ ಚನ್ನಾಗಿ ಗೊತ್ತು. ನಿಮ್ಮಂತೆ ಫಾರ್ಮಾಲಿಟಿಯ ರಿಸರ್ಚನ್ನು ನಾನು ಮಾಡದಿದ್ದರೂ ರಿಸರ್ಚೆಂದರೆ ಹೇಗಿರುತ್ತದೆ ಎನ್ನುವುದನ್ನು ಅನುಭವದ ಆಧಾರದ ಮೇಲೆ ಅರಿತುಕೊಂಡಿದ್ದೇನೆ ಎನ್ನೋಣ..' ಎಂದುಕೊಂಡೆ.. ಆದರೂ ಯಾಕೋ ಹೇಳಲೇ ಇಲ್ಲ. ಸುಮ್ಮನಾಗಿಬಿಟ್ಟೆ.. ಹುಡುಗು ಬುದ್ದೀ ನೋಡಿ... ಅಪರಾಜಿತಾ ಎಂಬ ಹುಡುಗಿ ತೆಳ್ಳಗೆ, ಬೆಳ್ಳಗೆ ಚನ್ನಾಗಿದ್ದಳು.. ಸಿಟ್ಟಿನಲ್ಲೂ ಚನ್ನಾಗಿ ಕಾಣುತ್ತಿದ್ದಳು. ಈ ಕಾರಣದಿಂದಲೇ ಏನೋ ನನ್ನಲ್ಲಿನ ಮಾತು ಹೊರಬೀಳಲೇ ಇಲ್ಲ. ಏನಾದರೂ ಮಾಡಿಕೊಳ್ಳಲಿ ಎಂದು ಸುಮ್ಮನಾದೆ. ದಿನಕರ್ ಅವರೂ ತೆಪ್ಪಗಿದ್ದರು.
        ಆಗಲೇ ಸಮಯ 2 ಗಂಟೆಯನ್ನು ಮೀರಿತ್ತು. ಆ ದಿನದ ಕಾರ್ಯವನ್ನು 5 ಗಂಟೆಯೊಳಗೆ ಮುಗಿಸಬೇಕು ಎನ್ನುವ ಕರಾರಿತ್ತಂತೆ. ಈ ಕಾರಣದಿಂದ ಅಪರಾಜಿತಾ ನನ್ನ ಸಲಹೆಯನ್ನು ಒಪ್ಪಿಕೊಂಡಳು. ಈಗ ಬಂದಳು ನನ್ನ ದಾರಿಗೆ ಎಂದುಕೊಂಡೆ. ಬಾಳೇಸರ ಬಸ್ಸಿನ ಮಾರ್ಗದ ಕಡೆಗೆ ಆ ಟೀಮನ್ನು ಕರೆದೊಯ್ದೆ. ಮತ್ತೆ ಒಮದೆರಡು ಕಿ.ಮಿ ಮೌನವೇ ಆಭರಣ ಎನ್ನುವಂತೆ ಸುಮ್ಮನೆ ನಡೆದುಕೊಂಡು ಹೊರಟೆವು. ದಾರಿಮಧ್ಯ ನಮ್ಮ ಜೊತೆಗಿದ್ದ ಶೇಖರ ಭಟ್ಟನಿಗೆ ಹೊತ್ತುಹೋಗಲಿಲ್ಲವೇನೋ ಎನ್ನಿಸುತ್ತದೆ. ನನ್ನ ಜೊತೆ ಮಾತಿಗಿಳಿದ. ಮಾತಿಗಿಳಿದವನು ಕಾಡಿನ ಬಗ್ಗೆ ಕೇಳುತ್ತಾನೇನೋ ಅಮದುಕೊಂಡೆ. ಅವ ಗ್ರಾಫಾಲಜಿ, ಟೆಲಿಪತಿ, ಎಂದೆಲ್ಲಾ ಹೇಳುವ ಮೂಲಕ ನನ್ನ ತಲೆಯನ್ನು ತಿನ್ನಲಾರಂಭಿಸಿದ್ದ. ನಾನಂತೂ ನನಗೆ ಗೊತ್ತಿದ್ದ ಅಲ್ಪಸ್ವಲ್ಪ ಸತ್ಯವನ್ನೂ ಅದಕ್ಕಿಂತ ಉದ್ದದ ಒಂದಷ್ಟು ಸುಳ್ಳನ್ನೂ ಸತ್ಯವೆನ್ನುವಂತೆ ಹೇಳಿದೆ. ನಂಬಿದನೋ, ಬಿಟ್ಟನೋ ಗೊತ್ತಾಗಲಿಲ್ಲ. ನಮ್ಮ ಮಾತು ಹೆಚ್ಚಿದಂತೆಲ್ಲ ಒಮ್ಮೆ ನಮಗಿಂತ ಮುಂದೆ ನಡೆದುಹೋಗುತ್ತಿದ್ದ ಅಪರಾಜಿತಾ ಒಮ್ಮೆ ತಿರುಗಿ ನನ್ನನ್ನು ನೋಡಿ ಶೇಖರ ಭಟ್ಟನ ಬಳಿ ರೇಗಿ ಸುಮ್ಮನಿರುವಂತೆ ಬೈದಳು. ಹೀಗೆ ಕಾಡಿನಲ್ಲಿ ಮಾತನಾಡುತ್ತಾ ಹೋದರೆ ಪ್ರಾಣಿಗಳು ಕಾಣ ಸಿಗುವುದಿಲ್ಲ. ಕೆಲವೊಮ್ಮೆ ಅವು ನಮ್ಮ ಮೇಲೆ ದಾಳಿ ಮಾಡಬಹುದು ಎಂದೆಲ್ಲಾ ಹೇಳಿದಳು. ಈ ಸಾರಿ ನನಗೆ ನಗು ತಡೆಯಲು ಸಾಧ್ಯವೇ ಆಗಲಿಲ್ಲ. ದಿನಕರ್ ಅವರೂ ನಕ್ಕರು. ಪೆಚ್ಚೆನ್ನಿಸಿರಬೇಕು. ಅಪರಾಜಿತಾ ಸುಮ್ಮನೆ ಮುನ್ನಡೆದಳು.
ನಮ್ಮೂರಿನ ಕಾಡಿನಲ್ಲಿ ಪ್ರಾಣಿಗಳು ಮಾನವನ ಧ್ವನಿಗೆ ಅಷ್ಟಾಗಿ ಹೆದರಿಕೊಳ್ಳುವುದಿಲ್ಲ. ಮನುಷ್ನ ಮಾತಿಗೆ ಹೆದರಿ ದಾಳಿ ಮಾಡುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಹಗಲು ವೇಳೆಯಲ್ಲಿ ಪ್ರಾಣಿಗಳು ಕಾಣುವುದು ಕಡಿಮೆ ಎಂದು ಹೇಳಬೇಕು ಎನ್ನಿಸಿತು. ಸುಮ್ಮನಾದೆ. ದಿನಕರ್ ಅವರಿಗೂ ಹಾಗೆಯೇ ಅನ್ನಿಸಿರಬೇಕು. ಆದರೆ ಯಾಕೆ ಸಲ್ಲದ ರಗಳೆ ಎಂದು ಸುಮ್ಮನೆ ತೆರಳಿದೆವು. ಬಸ್ಸಿಗಾಗಿ ನಾವು ಕೊನೆಗೆ ಸ್ಥಲೀಯ ಲಕ್ಕೀಸವಲಿನ ಬಸ್ ನಿಲ್ದಾಣಕ್ಕೆ ಬಂದು ತಲುಪಿದೆವು. ಈ ನಡುವೆ ಒಂದು ತಮಾಷೆಯ ಘಟನೆಯೂ ಜರುಗಿತು. ಅದೇನೆಂದರೆ ನಾವು ಸಾಗಿಬರುತ್ತಿದ್ದ ಮಾರ್ಗದಲ್ಲಿ ಕುರಿಯ ಸಗಣಿಯಾಕಾರದಲ್ಲಿ ಕೆಲವು ಕಡೆ ಸೆಗಣಿಗಳು ಬಿದ್ದಿದ್ದವು. ರಮೆಶ ಹಾಗೂ ಹರೀಶ ಅದು ಕಾಡುಕುರಿಯ ಸೆಗಣಿ ಎಂದೆ ವಾದ ಶುರು ಹಚ್ಚಿಕೊಂಡರು. ಕೊನೆಗೆ ದಿನಕರ್ ಅವರೂ ಪರೀಕ್ಷೆ ಮಾಡಿದರು. ಆದರೆ ಅದು ಇಂತಹ ಪ್ರಾಣಿಯ ಸೆಗಣಿ ಎಂದು ಸ್ಪಷ್ಟ ನಿರ್ಧಾರಕ್ಕೆ ಬರಲು ಅವರಿಗೆ ಆಗಲೇ ಇಲ್ಲ. ಕಾಡುಕುರಿಯ ಸೆಗಣಿ ಎಂದು ಸಂಗ್ರಹಿಸಿ ಪ್ಲಾಸ್ಟಿಕ್ ಕೊಟ್ಟೆಯಲ್ಲಿ ತುಂಬಿಕೊಂಡು ಹೋದವರಿಗೆ ಮತ್ತೆ ಕೆಲವು ಸಮಯದ ನಂತರ ಮೇಯುತ್ತಿದ್ದ ದನ ಹಾಗೂ ಕುರಿಗಳ ಹಿಂಡನ್ನು ಕಂಡಾಗ ಮಾತ್ರ ಮುಖ ಇಂಗು ತಿಂದ ಮಂಗನಂತಾಗಿತ್ತು..
ಬಸ್ ಸ್ಟಾಪಿನಲ್ಲಿ ಮಾತ್ರ ನಾವು ಬಹಳ ಹೊತ್ತು ಕಾದೆವು. ಬಸ್ಸು ಬೇಗನೆ ಬರಲು ನಿರಾಕರಿಸಿತು. ಎಲ್ಲರಿಗೂ ಸುಸ್ತಾಗಿತ್ತು. ಆದರೆ ಶೇಖರನ ಬಾಯಿಗೆ ಸುಸ್ತಾಗಿರಲಿಲ್ಲ. ವಟಗುಡುತ್ತಲೇ ಇದ್ದ. ನನಗೆ ಹರೀಶ ಹಾಗೂ ರಮೆಶ ಅವರ ಬಳಿಯಲಿದ್ದ ಪುಸ್ತಕವೊಮದು ಸಿಕ್ಕಿತ್ತು. ಕುತೂಹಲದಿಂದ ಅದನ್ನು ಓದತೊಡಗಿದ್ದೆ. `ದಿ ವ್ಹೋಲ್ ಡಿಟೇಲ್ ಆಫ್ ಇಂಡಿಯನ್ ಸ್ನೇಕ್ಸ್..' ಎನ್ನುವ ತಲೆಬರಹ ಹೊಂದಿದ್ದ ಭಾರತದ ಹಾವುಗಳ ಕುರಿತಾದ ಬಹುತೇಕ 800 ಪುಟಗಳ ಶಿರಸಿ ಅರಣ್ಯ ಮಹಾವಿದ್ಯಾಲಯದ ಗ್ರಂಥಾಲಯದ ಪುಸ್ತಕ ಅದು. ಭಾರತದಲ್ಲಿ ಕಾಣಸಿಗುವ ಅದೆಷ್ಟೋ ಸಹಸ್ರ ಬಗೆಯ, ಪ್ರಬೇಧದ ಎಲ್ಲ ಹಾವುಗಳ ಚಿತ್ರ ಸಹಿತ ವಿವರಣೆ ಅದರೊಳಗಿತ್ತು. ಕೆಲವು ಹಾವುಗಳ ಕುರಿತು ನನ್ನಲ್ಲಿ ಹಾಗೂ ಮಹೇಶನಲ್ಲಿ ಚರ್ಚೆಗಳೂ ನಡೆದವು. ಮೇಲ್ನೋಟಕ್ಕೆ ಸಂಪೂರ್ಣವಾಗಿ ಆ ಪುಸ್ತಕವನ್ನು ನಾನು ತಿರುವಿ ಹಾಕಿದೆ. ಆದರೆ ನನಗೆ ಬೇಕಾದ ಒಂದು ಹಾವಿನ ಕುರಿತು ಅದರಲ್ಲಿ ವಿವರಗಳೇ ಸಿಗಲಿಲ್ಲ. ಅದೇ `ದಾಟುಬಳ್ಳಿ'ಹಾವು. ನನಗೆ ತಿಳಿದಂತೆ ಮಲೆನಾಡಿನ ಕೆಲವೇ ಕೆಲವು ಕಡೆಗಳಲ್ಲಿ ಅದರಲ್ಲೂ ಮುಖ್ಯವಾಗಿ ಉತ್ತರಕನ್ನಡದಲ್ಲಿ ಮಾತ್ರ ಕಾಣಸಿಗುವ ಅಪರೂಪದ ಹಾವು. ಕೂದಲಿಗಿಂತ ತೆಳ್ಳಗೆ ಇರುವ ಈ ಹಾವನ್ನು ಭೂತಗನ್ನಡಿಯಲ್ಲಿ ನೋಡಿದಾಗ ಸ್ಪಷ್ಟವಾಗಿ ಕಾಣಸಿಗುತ್ತವೆ. ಈ ಕುರಿತು ಎಷ್ಟು ಹುಡುಕಿದರೂ ವಿವರಣೆ ಸಿಗಲಿಲ್ಲ. ಈ ಸಂದರ್ಭದಲ್ಲಿ ಮತ್ತೊಮ್ಮೆ ಅಪರಾಜಿತಾ ರೇಗಿದಳು. ಸುಮ್ಮನಿರಿ ಎಂದಳು. ಬಸ್ ಸ್ಟಾಪಿನಲ್ಲಿ ಮಾತನಾಡುತ್ತಿದ್ದರೆ ಇವಳಿಗ್ಯಾಕೆ ಸಿಟ್ಟುಬರಬೇಕು ಎಂಬುದು ನನಗೆ ಅರ್ಥವಾಗಲಿಲ್ಲ. ಅಷ್ಟರಲ್ಲಿ ಬಸ್ಸು ಬಂದ ಪರಿಣಾಮ ನಾವು ಕಾನಸೂರನ್ನು ತಲುಪಿದೆವು. 
ಕಾನಸೂರಿನಲ್ಲಿ ಹೊಟ್ಟೆಗೆ ಉಪ್ಪಿಟ್ಟು ಬಿದ್ದ ತಕ್ಷಣ ನಮ್ಮ ಯೋಜನೆ ಅಡ್ಡದಾರಿ ಹಿಡಿಯಿತು. ಅರಶಿಣಗೋಡ ಕ್ಕೆ ಹೋಗಬೇಕಾದ ನಮ್ಮ ರಿಸರ್ಚ್ ತಂಡ ಅಡ್ಡದಾರಿ ಹಿಡಿದು ಹಳದೋಟಕ್ಕೆ ಹೋಗುವ ಎನ್ನುವ ನಿರ್ಣಯ ಕೈಗೊಳ್ಳಲಾಯಿತು. ಸಮಯ 4 ಗಂಟೆ ಮೀರಿದ್ದರೂ ಸರಿಯೆನ್ನುವಂತೆ ಹೊರಟೆವು. ಏಕೆಂದರೆ ಈ ಪ್ಲಾನ್ ಹಾಕಿದ್ದು ಅಪರಾಜಿತಾ. ಅವಳು ಹೇಳಿದರೆ ಬೇಡ ಎನ್ನಲಾಗುತ್ತದೆಯೇ.. ಬೈದರೂ, ರೇಗಿದರೂ ಪರವಾಗಿಲ್ಲ ಎಂದುಕೊಂಡು ಹೊರಟೆವು. ಸುಮಾರು ಅರ್ಧದಾರಿ ಕ್ರಮಿಸಿರಬಹುದಷ್ಟೇ. ಅಲ್ಲೊಂದು ಕಡೆಗೆ ಯಾವುದೋ ಪ್ರಾಣಿಯ ಮಲ ಕಾಣಿಸಿತು. ಕೊನೆಗೆ ಪರೀಕ್ಷೆಯನ್ನು ಮಾಡಿದ ರಿಸರ್ಚಿನ ತಂಡ ಇದು ಚಿರತೆಯ ಮಲ ಎನ್ನುವ ತೀರ್ಮಾನಕ್ಕೆ ಬಂದಿತು. ನನ್ನಲ್ಲಿ ಇದು ನಾಯಿಯ ಮಲವಿರಬಹುದಾ ಎನ್ನುವ ಅನುಮಾನ ಮೂಡಿದರೂ ಸುಮ್ಮನಾದೆ. ಅರಣ್ಯಾಧಿಕಾರಿ ದಿನಕರ್ಗೆ ಅಚ್ಚರಿಯೋ ಅಚ್ಚರಿ. ಏಕೆಂದರೆ ಅವರು ಮಲ ಸಂಗ್ರಹಿಸಿದ ಜಾಗ ಕಾನಸೂರಿನಿಂದ ಕೇವಲ 200 ಮೀಟರ್ ದೂರದಲ್ಲಿತ್ತು. ಅಲ್ಲದೇ ಅರಣ್ಯ ಇಲಾಖೆಯ ಸಸ್ಯಪಾಲನಾ ಕೇಂದ್ರದಿಂದ 100 ಮೀಟರ್ ಒಳಭಾಗದಲ್ಲಿತ್ತು. `ಅರೇ ಇಲ್ಲಿ ಚಿರತೆ ಬರಲು ಹೇಗೆ ಸಾಧ್ಯ..? ಇಲ್ಲಿ ಹೇಳಿಕೊಳ್ಳುವಷ್ಟು ದೊಡ್ಡ ಕಾಡಿಲ್ಲ. ಆದರೂ ಚಿರತೆಯ ಮಲವಾ..?'ಎನ್ನುವ ಅನುಮಾನ ವ್ಯಕ್ತಪಡಿಸಿದರು. ಶೇಖರ ನನ್ನ ಬಳಿ ಬಂದು `ಅರಣ್ಯ ಅಧಿಕಾರಿಗಳು ಕಾಡಿನ ಕಡೆ ಹೋದರೆ ಗೊತ್ತಾಗ್ತಿತ್ತು..'ಎಂದು ಗೊಣಗಿದ. ಅದನ್ನು ಸಂಗ್ರಹಿಸಿ ತಂಡ ಮರಳಿತು. ಈಗಲೂ ನನ್ನ ಪ್ರಕಾರ ಅದು ನಾಯಿಯ ಮಲವೇ. ಚಿರತೆಯದ್ದಲ್ಲವೇ ಅಲ್ಲ. ಆ ಭಾಗದಲ್ಲಿ ಚಿರತೆ ಇಲ್ಲವೇ ಇಲ್ಲ. ದಿನಕರ್ ಅವರ ಅಭಿಪ್ರಾಯ ಸರಿಯಿದ್ದರೂ ಆಗ ಸುಮ್ಮನಿದ್ದೆ. ಅಪರಾಜಿತಾ ಹಾಗೂ ತಂಡದ ಹುಮ್ಮಸ್ಸನ್ನು ಯಾಕೆ ಭಂಗ ಮಾಡುವುದು ಹೇಳಿ..? ಆಕೆಯ ಬೇಜಾರಿನ ಮುಖವನ್ನು ನೋಡ್ಲಿಕ್ಕಾಗ್ತಾ ಇರ್ಲಿಲ್ಲ.
ಹಳದೋಟದ ಕಾಡಿನಲ್ಲಿ ಹುಲಿಯಿರುವ ಕುರುಹು ಸಿಕ್ಕಿದ ನಂತರ ನಾನಿದ್ದ ಆ ರಿಸರ್ಚಿನ ತಂಡ ಮರಳಿತು. ಬೆಂಗಳೂರಿನಿಂದ ಯಾವುದೋ ಎನ್ಜಿಓ ದಿಂದ ನಿಯೋಜನೆಗೊಂಡು ಉತ್ತರಕನ್ನಡದ ಕಾಡನ್ನು ತಿಳಿಯಲು ಕಾಡೇ ಗೊತ್ತಿಲ್ಲದವರನ್ನು ರಿಸರ್ಚಿಗೆ ಕಳಿಸಲಾಗಿತ್ತು. ಕಾಡೆಂದರೆ ಹಾಗೆ ಹೀಗೆ ಎನ್ನುವುದನ್ನು ತಲೆಯಲ್ಲಿ ತುಂಬಿ ಕಳಿಸಿದ್ದವರಿಗೆ ಈ ರಿಸರ್ಚಿನಿಂದ ಏನು ಉಪಯೋಗವಾಯಿತೋ ಗೊತ್ತಿಲ್ಲ. ಆದರೆ ನಾನಂತೂ ಅಲ್ಪಸ್ವಲ್ಪ ಪ್ರಮಾಣದಲ್ಲಿ ಅಪರಾಜಿತಾಳನ್ನು ರಿಸರ್ಚ್ ಮಾಡಿದ್ದಂತೂ ಸತ್ಯ. ಹುಡುಗುಬುದ್ಧಿ ನೋಡಿ.. ಅಷ್ಟೂ ಮಾಡದಿದ್ರೆ ಹೇಗೆ..? ಒಟ್ಟಿನಲ್ಲಿ ಈ ರಿಸರ್ಚಿನ ತಂಡದ ಜೊತೆಗೆ ಹೋಗಿದ್ದರಿಂದ ಕೆಲವು ವಿಷಯಗಳನ್ನು ನಾನು ತಿಳಿದುಕೊಳ್ಳುವಂತಾದರೆ ಇನ್ನೂ ಹಲವಾರು ಪ್ರಶ್ನೆಗಳನ್ನು, ನಿಗೂಢತೆಗಳನ್ನು ಹುಟ್ಟುಹಾಕಿತು. 

Tuesday, April 30, 2013

ನಾ ಹೀಗೆ ಕಣೆ ಹುಡುಗಿ

ನಾ ಹೀಗೆ ಕಣೆ ಹುಡುಗಿ


ನಾ ಹೀಗೆ ಕಣೆ ಹುಡುಗಿ
ಸುಮ್ಮನೆ, ಬಿಮ್ಮನೆ..!
ಬದುಕಲಿಕೆ, ನಲಿಯಲಿಕೆ..!!

ಅರಿತು ನಡೆಯಲಿಕ್ಕಾಗೇ
ನೋವಲ್ಲೂ ನಕ್ಕೆ..!
ನಗು ನಗುವ ನಡುವೆಯೇ
ಮನದೊಳಗೆ ಅತ್ತೆ..!!

ನಾ ಹೀಗೆ ಕಣೆ ಹುಡುಗಿ
ಪ್ರೀತಿ ಹುಡುಕಲಿಕೆ
ಗೆದ್ದು ಪಡೆಯೋಕೆ..!
ಸಿಕ್ಕರೆ ನಲಿವೆನಾದರೂ
ಸಿಗದಿರೆ ಅಳಲಾರೆ..!!

ಗೊತ್ತಿಲ್ದೇ ಹೇಳ್ಕೋತೀನಿ ನಾ
ಹೇಳ್ಕೊಂಡು ನಗ್ತೀನಿ.
ನಗ್ತೀನಿ ನಗಿಸ್ತೀನಿ..!
ಒಬ್ಬೊಬ್ನೆ ಅಳ್ತೀನಿ,
ಅಳೋರ್ನೂ ನಗಿಸ್ತೀನಿ..!!

ನಾ ಒಗಟಿನಂತಲ್ಲ ಹುಡುಗಿ
ಚಿಪ್ಪು ಬಾದಾಮಿ.
ಕನಸು ಕಾಣುವ ಪ್ರೇಮಿ.!
ನಾ ನಿರಾಸೆ ಆಗಲಾರೆ ಕಣೆ
ಅರಿಯದುತ್ತರಕ್ಕೆ..!
ಪ್ರತಿ ಸೋಲಿನಲ್ಲೂ ಗೆಲುವ
ಕಾಣ್ತೇನೆ, ಗೆಲ್ತೇನೆ..!!

ನಾ ಹೇಗ್ಹೇಗೋ ಇಲ್ಲ ಕಣೆ ಗೆಳತಿ,
ಒಗಟೂ ಅಲ್ಲ, ಮುಗುಟೂ ಅಲ್ಲ.
ಎಲ್ಲ ಪರೀಕ್ಷೆಗಾಗಿ,
ಅರಿವಿಗಾಗಿ ಮಾತ್ರ..!!

ನಾ ಹೀಗೆ ಕಣೆ ಗೆಳತಿ,
ನಿನಗಾಗಿ, ನಿನ್ನ ಪ್ರೀತಿಗಾಗಿ,
ಮನದೊಳು ಮನೆ ಮಾಡಲು
ಹೊಸ ಹಸಿರಾಗಲು, ಮನಸಾಗಲು ..!!
ಕವಿಯಾಗಲು, ಕವನಕಟ್ಟಲು
ಅರ್ಥವಾಗಲು..!!

ನಾ ಉಬ್ಬಿ ಒಡೆವ ಬಲೂನಿನಂತಲ್ಲ ಕಣೆ
ಲಂಗರು ಕಿತ್ತ ಹಡಗಿನಂತಿದ್ದೇನೆ..!
ಪದೇ ಪದೆ ನಾ
ನಿನ್ನ ಬಯಸಿದ್ದೇನೆ..!!

ಹೇಳೇ ಹುಡುಗಿ,
ನಾ ಹೀಗೆ ಇರಲೇನೇ.
ಒಗಟಿನಂತೆ ಅರ್ಥವಾಗದೇ,
ಅಥವಾ ಬತ್ತಿನಂತೆ..?

ನಗುವಾಗಲೇ ಅಥವಾ
ಅಳುವಾಗಲೇ ಹೇಳು ನೀ..

ಗೆಳತಿ,
ಒಗಟಾಗಿದ್ದರೆ ಮಾತ್ರ
ಅರ್ಥವೇ ಆಗದಂತಿದ್ದರೆ ಮಾತ್ರ
ಕುತೂಹಲ ಅಲ್ಲಿರುತ್ತದೆ ಕಣೆ.
ಇಲ್ಲದಿದ್ದರೆ ಅದು ತೆರೆದ
ಪುಸ್ತಕ ಖೋರಾ ಖಾಗಜé..!
ಅದಕ್ಕೇ ನಾ ಹೀಗೆ ಕಣೆ
ಅರ್ಥವಾಗದ ಒಗಟಿನ ಹಾಗೆ...

(ಪ್ರಸ್ತುತ ಕಾಲೇಜು ದಿನಗಳಲ್ಲಿ `ನೀ ಯಾಕೆ ಹೀಗೆ ಗೆಳೆಯಾ..? ಅರ್ಥವಾಗದ ಒಗಟಿನ ಹಾಗೆ..' 
ಎಂದು ನನ್ನ ಬಳಿ ಅಸ್ಪಷ್ಟವಾಗಿ ಕೇಳಿದ ಗೆಳತಿಯೊಬ್ಬಳಿಗೆ ಬರೆದಿದ್ದ ಕವನ ಇದು...)
ಬರೆದಿದ್ದು : 24-07-2008
ಸ್ಥಳ ದಂಟಕಲ್ಲಿನಲ್ಲಿ

Monday, April 29, 2013

ವಿಸ್ಮಯಗಳ ಗೂಡು : ಈ ಮಲೆನಾಡು ಭಾಗ -2

ವಿಸ್ಮಯಗಳ ಗೂಡು : ಈ ಮಲೆನಾಡು

ಭಾಗ -2

ಮಲೆನಾಡ ಒಡಲಿನೊಳು
ಏನುಂಟು ಏನಿಲ್ಲ..?
ಕಣ್ಣ ನೋಟದ ತುಂಬ
ಹಸಿರು ಮಡಿಲು.
.
    ನಿಜ.., ಮಲೆನಾಡೆಂದರೆ ಹಾಗೆ.. ಸುಳಿದು ಬರುವ ಹೂ ಕಂಪು. ತಳಿರು, ತರುಲತೆಗಳ ಸೋಂಪು. ಕೋಗಿಲೆ, ಹಕ್ಕಿ ಪಕ್ಷಿಗಳ ಇಂಪು. ಹಸಿರು ಒನಪು.. ಒಬ್ಬಂಟಿಯಾದಾಗಲೆಲ್ಲ ಕಾಡುವ ನೆನಪು..
    ಮಲೆನಾಡೆಂದೂಡಲೆಲ್ಲ ನೆನಪಾಗುವಂತದ್ದು ಹಸಿರು ಅಡಿಕೆಯ ತೋಟ.., ಅಲ್ಲಲ್ಲಿ ಕಣ್ತಣಿಪ ಭತ್ತದ ಗದ್ದೆಗಳ ಸೊಬಗು, ಮಾವಿನ, ಅಪ್ಪೆಯ ಮರಗಳ ನರ್ತನ, ಒಂದಕ್ಕಿಂತ ಒಂದು ಎತ್ತರಕ್ಕೆ ಸ್ಪರ್ಧೆ ಮಾಡುವಂತಹ ಪರ್ವತ ಶೀಖರಗಳು.. ಅಲ್ಲಲ್ಲಿ ಕಾಫಿಯೂ ಇದೆ.. ಮತ್ತೆ ಹಲವೆಡೆ ಅರ್ಧಮರ್ಧ ಕಾನು..
    ಇಲ್ಲಿಯ ವಿಶಿಷ್ಟತೆಗಳನ್ನು ಹೆಸರಿಸಿ ಪಟ್ಟಿಮಾಡುವುದು ಬಹಳ ಕಷ್ಟದ ಕೆಲಸವೇ ಸರಿ. ಅದೊಂದು ಬೃಹತ್, ಹೆಮ್ಮೆಯ ಕೆಲಸ. ಕನ್ಣಿಗೆ ಕಾಣದ ಜೀವಿ ಸಂಕುಲದಿಂದ ಕಣ್ಣಿನಲ್ಲಿ ಹಿಡಿಯದಂತಹ ಜೀವಿ ಜಗತ್ತಿನ ಆಶ್ರಯ ತಾಣವೂ ಈ ಮಲೆನಾಡು ಎಂದರೆ ತಪ್ಪಾಗಲಿಕ್ಕಿಲ್ಲ. ಕನ್ಣಿಗೆ ಕಾಣದಂತಹ ಜೀವ ಪ್ರಬೇಧವಾದ `ದಾಟುಬಳ್ಳಿ' ಹಾವು ಈ ಮಲೆನಾಡಿನ ವಿಶ್ಷತೆಗಳಲ್ಲೊಂದು. ಹಾರ್ನಬಿಲ್, ಉದ್ದ ಬಾಲದ ಮಂಗ, ಲಂಗೂರ್ ಗಳು, ಕಣ್ಣಲ್ಲಿಯೇ ಕಾಡುವ, ಕಾಟಕೊಡುವ ಕಾಡುಪಾಪ.. ಅಷ್ಟೇ ಏಕೆ ದಿನ ಬೆಳಗಾದರೆ ಮನೆಯಂಗಳಕ್ಕೆ ಬಂದು ಹಾಯ್ ಹೇಳಿ ಹೋಗುವ ಕಾಡೆಮ್ಮೆಗಳ ಹಿಂಡು, ಮಳೆಗಾಲದ ಮಧುರ ಭಾವದಿಂದ ಕುಣಿದು ಎಲ್ಲರ ಕರೆಯುವ ನವಿಲು.. ಇವಿಷ್ಟನ್ನು ಹೇಳಿದರೆ ಮಲೆನಾಡಿನ ದೇಷ್ಯವೈಭವದ ಸವಿಗೆ ಸ್ವಲ್ಪ ಕಾಣಿಕೆ ಕೊಟ್ಟಂತಾಗುತ್ತದೆಯಲ್ಲವೇ..?
    ಕಂಡ ಕಂಡಕಡೆಯಲ್ಲೆಲ್ಲ ಧುಮ್ಮಿಕ್ಕಿ ಹರಿದು ಕೆಳಗೆ ಹೋಗುವ ಜಲಪಾತ, ನಲಿದು-ಕುಣಿದು-ಬಳಸಿ-ಬಳುಕಿ-ಬೆಳೆಸಿ ಹರಿಯುವ ನದಿಗಳು, ವರ್ಷದ ಆರು ತಿಂಗಳುಗಳ ಕಾಲ ಜಿಟಿ ಜಿಟಿಯೆನ್ನುವ ಮಳೆ, ಕಾಲಿಟ್ಟಲ್ಲಿ ಸದ್ದಿಲ್ಲದೇ ಅಂಟಿಕೊಂಡು ರಕ್ತಹೀರಿ ಡೊಣೆಯನಂತಾಗುವ ಉಂಬಳ, ಜಿಗಳೆಗಳು, ಮಳೆಗಾಲ ಬಂದ ತಕ್ಷಣ ಟ್ವಂಯ್ ಟ್ವಂಯ್ ಎಂದು ವದರಿ ಎಲ್ಲರನ್ನೂ ಸಜ್ಜುಗೊಳಿಸುವ ಮಳೆಜಿರಲೆಗಳು ಅಥವಾ ಸಿಕಾಡಗಳು.. ಇವುಗಳೆ ಮಲೆನಾಡಿನ ಯಜಮಾನರುಗಳು.. ಅಥವಾ ಮಲೆನಾಡನ್ನು ಸಾಕ್ಷೀಕರಿಸುವ ಪ್ರಾಣಿ, ಪಕ್ಷಿ ಕೀಟ ಪ್ರಬೇಧಗಳು..
    ಕೆಂಪು, ಅರಶಿಣ ಬಣ್ಣದಲ್ಲಿರುವ ಕಾದಾಳಿ ಮಣ್ಣು, ಮಳೆಗಾಲದಲ್ಲಿ ಬರಿ ಅರಲು, ಬೇಸಿಗೆಯಲ್ಲಿ ಹುಡಿ ಹುಡಿ ಧೂಳನ್ನು ರಾಚುವ ಈ ಮಣ್ಣು ಇನ್ಯಾವ ಕಡೆಯಲ್ಲೂ ಕಾಣಸಿಗುವುದಿಲ್ಲ.. ಕಚಕ್ಕನೆ ಕಾಲನ್ನು ಬಗೆಯುವ ಬಿಳಿಗಲ್ಲುಗಳು ಮಲೆನಾಡಿನ ಮತ್ತಷ್ಟು ವಿಶೇಷತೆಗಳು.
    ಹಸಿರು ಚಾದರವನ್ನು ಹೊದ್ದು ಶತಮಾನದಿಂದ ಕಾಲುಚಾಚಿ ಮಲಗಿರುವ ದೈತ್ಯ ಗುಡ್ಡಗಳು, ಬಾನಿಗೆ ಸವಾಲು ಹಾಕಿ ಚುಂಬನಕ್ಕಾಘಿ ನಿಂತಿರುವ ದೈತ್ಯ ಮರಗಳು, ಮುಳ್ಳು ಮುಳುಗಳ ಬೆತ್ತ, ಹಕ್ಕಿಗಳ ಪಾಲಿನ ಸ್ವರ್ಗವಾಗಿ, ಮಣ್ಣನ್ನು ಕೊಚ್ಚಿಕೊಂಡು ಹೋಗದಂತೆ ತಡೆದು ನಿಂತು ರೈತ ಸ್ನೇಹಿಯಾಗಿರುವ ವಾಟೆಮಟ್ಟಿ, ಅಂಡಿನಲ್ಲಿ ವಿಷದ ಬಾಣವನ್ನೇ ಹೊತ್ತುಕೊಂಡು ಸೊಂಯ್ಯನೆ ಹಾರಾಡುವ ಭಂಡಾರಮಡಿಕೆ ಹುಳುಗಳೆಂಬ ಪ್ರಕೃತಿ ಸೈನಿಕರು, ಕಡಜೀರಿಗೆ ಹುಳುಗಳು, ಸವಿ ಸವಿಯ ತುಪ್ಪವನ್ನು ಕರುಣಿಸುವ ಮಿಸರಿ, ತುಡುವಿ, ಕೋಲ್ಜೇನುಗಳು., ಇವೆಲ್ಲ ಮಲೆನಾಡಿನ ಮೆರಗಿನ ಚೌಕಟ್ಟುಗಳೆನ್ನುವುದು ಸುಳ್ಳಲ್ಲ..
     ಪಟ್ಟೆಪಟ್ಟೆಯ ಕೊಳಕು ಮಂಡಲ, ಹಸಿರೆಲೆಯ ನಡುವೆ ಹಾಯಾಗಿ ಜೀವನ ನಡೆಸುವ ಹಸುರುಳ್ಳೆ ಹಾವು, ಕಣ್ಣಿಲ್ಲದಿದ್ದರೂ ಎರಡೂ ತಲೆಗಳನ್ನು ಒಳಗೊಂಡು ಅತ್ತ ಇತ್ತ ಎಂಬಂತೆ ಸುಳಿದಾಡುವ ಮಣ್ಣಮುಕ್ಕ ಹಾವು, ಮನುಷ್ಯನನ್ನೂ ಮೀರಿಸುವ ಕಾಳಿಂಗ, ಕೇರೆ ಹಾವು, ಸರ್ಪ, ಕುದುರುಬೆಳ್ಳ, ಹಾರಗಿಣಿ ಮುಂತಾದ ಹಾವುಗಳ ಸಮೂಹ, ವೂವೂಝಿಲಾ ವಾದ್ಯವನ್ನೂ ಮೀರಿಸುವ ವಂಡರು (ಡೊಂಗರು) ಕಪ್ಪೆಗಳು.., ಚಕ್ಕನೆ ನೀರನಿಂದ ಜಿಗಿದು ಕೈಗೆ ಮುತ್ತಿಕ್ಕಿ ಕೈಯಲ್ಲಿನ ತಿಂಡಿಯನ್ನು ಕಳ್ಳತನ ಮಾಡುವ ಬಳ್ಳಿ ಮಿಂಚಿನ ಮೀನುಗಳು, ಹೊಳೆಯ ದಡದಲ್ಲಿ ತಲೆಯೆತ್ತಿ ನಿಂತು ಸವಿ ಹಣ್ಣನ್ನು ನೀಡುವ ಹೂಡಲು.. ಇನ್ನೆಷ್ಟು ನಮೂನೆಗಳನ್ನು ಹೇಳಿದರೂ ಮಲೆನಾಡಿನ ದೃಶ್ಯ ವೈಭವವನ್ನು ಕಿಂಚಿತ್ತೂ ತಿಳಿಸಿದಂತೆ ಆಗುವುದಿಲ್ಲ...
    ಮಲೆನಾಡಿನ ಒಡಲೊಳಗೆ ಹೆಜ್ಜೆ ಹಾಕಿದಂತೆಲ್ಲ ನಿಘೂಡಗಳು ಆವರಿಸುತ್ತವೆ.. ಕುತೂಹಲಕ್ಕೆ ಕೈಹಾಕಿದಂತೆಲ್ಲ ಹೊಸ ಹೊಸ ಬೆಡಗುಗಳು ಬೆರಗುಗಳು ತೆರೆದುಕೊಳ್ಳುತ್ತವೆ.. ಇವುಗಳೆಲ್ಲ ಮಲೆನಾಡಿನ ಚಿಕ್ಕದೊಂದು ತುಣುಕಷ್ಟೇ.. ಮಲೆನಾಡಿನ ಅಸಲೀತನದ ಪರಿಚಯ ನಮಗಾಗಬೇಕಾದರೆ ಅಲ್ಲಿಗೇ ಹೋಗಬೇಕು. 1801ರಲ್ಲಿ ಬ್ರಿಟಿಷರ ಜಾನ್ ಬುಕಾನನ್ ಎಂಬಾತ ಮಲೆನಾಡಿನ ಒಡಲೊಳಗೆ ಹೆಜ್ಜೆ ಹಾಕಿ ಇಲ್ಲಿನ ಬೆರಗನ್ನೆಲ್ಲ ದಾಖಲಿಸಿದ್ದಾನಂತೆ.. ಅವನಂತೆ ಇನ್ನೊಮ್ಮೆ ನಾವು ಹೆಜ್ಜೆ ಹಾಕಿದಾಗಲೇ ಅಲ್ಪಸ್ವಲ್ಪವಾದರೂ ಮಲೆನಾಡು ಅರ್ಥವಾಗಬಲ್ಲದೇನೋ.. ಮಲೆನಾಡೆಂಬ ಸಾಗರದೊಳಗೆ ಒಮ್ಮೆಯಾದರೂ ಬುಕಾನನ್ ನಂತೆ ದೋಣಿಯಾನ ಮಾಡೋಣ.. ಮಲೆನಾಡಿನ ಸೊಬಗನ್ನು ಆಸ್ವಾದಿಸೋಣ ಅಲ್ಲವೇ..

Wednesday, April 24, 2013

ಮೋಹ...

 ಮೋಹ...



ಸಮುದ್ರದ ಅಲೆಗಳಿಗೆ
ನನ್ನ ಮೇಲೆ..
ಏಕಿಷ್ಟು ಹುಚ್ಚು ಪ್ರೀತಿ..?
ಪದೇ ಪದೆ ಬಂದು
ನನ್ನನ್ನು ಚುಂಬಿಸುತ್ತಾಳೆ..?

ತಪ್ಪಿಸಿಕೊಂಡು ಹೋದಷ್ಟೂ 
ಬೆನ್ನಟ್ಟಿ ಬಂದು
ಕಾಲು ತೋಯಿಸುತ್ತಾಳೆ.. 
ತಂಪಾಗುತ್ತಾಳೆ..

ಕಾಲಡಿಯಲ್ಲೆಲ್ಲ ಸುಳಿದು 
ಕಚಗುಳಿಯಿಕ್ಕಿ
ಒಮ್ಮೆಲೆ ಕಕ್ಕಾಬಿಕ್ಕಿ...

ನಾನು ಏನನ್ನೇಕೊಟ್ಟರೂ
ಬಿಡದೆ ಬರಸೆಳೆದು 
ಕಣ್ಣಿಗೆ ಕಾಣದಂತೆ
ತೆಕ್ಕೆಯೊಳಗೆಳೆದುಕೊಂಡು 
ಓಡಿ ಹೋಗುತ್ತಾಳೆ..

ಅಲೆಯಲೆಯಾಗಿ
ಮನದಲ್ಲಿ ನಿಲ್ಲುತ್ತಾಳೆ..
ಅಪ್ಪಿ ತಪ್ಪಿ ನಾವು ಒದ್ದೆಯಾದರೂ
ತಾಳಲಾರೆನೆಂಬ ಕಿರಿ ಕಿರಿ..
ಉಪ್ಪು ಉಪ್ಪು ನವೆ..

ಬಿಸಿ ಬೇಗೆಯ ಬೆಂಕಿ..
ಉರಿ ಉರಿ..

ಮೋಹದ ಕಡಲ ಪ್ರೀತಿಯ ಪರಿಗೆ 
ಸೋತರೂ ಸೋಲರಾರೆ..
ನಿಂತರೂ ನಿಲ್ಲಲಾರೆ

Tuesday, April 23, 2013

ನಿನ್ನದೇ ನೆನಪು ನೆರಳಿನಲ್ಲಿ : ಪ್ರೇಮಪತ್ರ-4

ಪ್ರೇಮಪತ್ರ-4

ನಿನ್ನದೇ ನೆನಪು ನೆರಳಿನಲ್ಲಿ

   
ಪ್ರೀತಿಯ ಗೆಳತಿ,
    ಛೇ.., ನೀನು ಹೀಗೆ ಮಾಡ್ತೀಯಾ ಅಂತ ನಾನು ಅಂದುಕೊಂಡಿರಲಿಲ್ಲ. ನೀನು ಬರ್ತೀಯಾ.. ಬಂದು ನನ್ನ ಬಳಿಯಲ್ಲಿ ನಾಲ್ಕೆಂಟು ಮಾತುಗಳನ್ನಾಡಿ, ಹಾಗೆ ಸುಮ್ಮನೇ ನಕ್ಕು ನಲಿದು ವಾತಾವರಣವನ್ನು ಸೆಳೆದುಹೋಗುತ್ತೀಯಾ ಅಂದುಕೊಂಡಿದ್ದೆ.. ಆದರೆ ನನ್ನ ನಿರೀಕ್ಷೆ ಹುಸಿಯಾಗಿ ಹೋಯ್ತು. ನಾನು ನಿನಗಾಗಿ ಕಾದು ಕಾದು ಸುಸ್ತಾಗಿ ಬಸವಳಿದು ಹೋದೆ.
    ಅಂದು ನಿನಗೆ ನೆಪಿತ್ತಲ್ಲ. ಫೆಬ್ರವರಿ 14. ನನ್ನ ನಿನ್ನಂತಹ ಪ್ರೇಮಿಗಳಿಗೆಂದೇ ರಿಸರ್ವ್ ಆಗಿರೋ ದಿನ. ವ್ಯಾಲಂಟಾಯಿನ್ಸ್ ಡೇ. ನಿನಗೆ ಮರೆತಿಲ್ಲ. ಮರೆಯೋದೂ ಇಲ್ಲ ಅಂದ್ಕೊಂಡಿದ್ದೀನಿ. ಆವತ್ತು ನೀನು ನನ್ನ ಬಳಿ ಬಂದು ಮಾತನಾಡಿ ಹೋಗ್ತೀಯಾ ಅಂದ್ಕೊಂಡಿದ್ನಲ್ಲೆ ಗೆಳತಿ., ಯಾಕೆ ನೀನು ಬರ್ಲೇ ಇಲ್ಲ..? ನೀನು ಬರದೇ ಇರಲು ಅಂತಹುದೇನಾದರೂ ಕಾರಣವಿದೆಯಾ..? ಇಲ್ಲವಾದಲ್ಲಿ ನನ್ನನ್ನು ಸುಮ್ಮ ಸುಮ್ಮನೇ ಕಾಡಿಸಬೇಕೆಂಬ ಕಾರಣದಿಂದಲೇ ಬಂದಿಲ್ಲವಾ..?
    ನೀನಾಗಿಯೇ ಮೈಮೇಲೆ ಬಿದ್ದು, ಕಾಟಕೊಟ್ಟು ಅದೆಷ್ಟೋ ಪರಿ ಬಳಸಿ ಬಯಸಿ ನನ್ನಿಂದ ಪ್ರೇಮವನ್ನು ಪಡೆದ ನಿನಗೆ ಪ್ರೇಮಿಗಳ ದಿನದಂದು ನನ್ನ ಮರೆತುಹೋಯಿತಾ..?
    ನನ್ನೊಲವೆ., ನಿನಗಾಗಿ ಅಂತ್ಲೇ ಒಂದು ಬಿಳಿಯ ಹಾಗೂ ಮತ್ತೊಂದು ನಸುಗೆಂಪಿನ ಗುಲಾಬಿಯನ್ನು ತಂದು, ಕೊಡಬೇಕೆಂದು ಕೈಯಲ್ಲಿ ಹಿಡಿದು ನಿಂತಿದ್ದೆ. ಆದರೆ ನೀನು ಎಷ್ಟು ಹೊತ್ತಾದರೂ ಬರಲೇ ಇಲ್ಲ. ಅದರ ದಂಟಿನಲ್ಲಿದ್ದ ಮುಳ್ಳೊಂದು ಹಾಗೆ ಸುಮ್ಮನೆ ಚುಚ್ಚಿ ರಕ್ತವನ್ನು ಒತ್ತರಿಸಿದ ಗಾಯ ನಿಧಾನವಾಗಿ ಮಾಯುತ್ತಿದೆ. ಕೈಯಲ್ಲಿ ಹಿಡಿದ ಹೂವಿನ ಎಸಳುಗಳೆಲ್ಲ ಉದುರಿ ಕೇವಲ ದಂಟೊಂದೆ ಉಳಿದುಕೊಂಡಿದೆ. ಯಾಕ್ಹೀಗೆ ಗೆಳತಿ..? ನಾನು ನಿನಗೆ ಬೇಡವಾದ್ನಾ..?
    ಫೆಬ್ರವರಿ 14ರಂದು ನಿನ್ನ ನೋಟ ಮಾತ್ರದಿಂದಲೇ ಹೊಸದೊಂದು ಲೋಕ ಕಟ್ಟಿಕೊಳ್ಳೋಣ ಎಂದು ಬಯಸಿದ್ದೆ. ನಿನ್ನ ನಗುವಲ್ಲಿ ನಾನು ಮಗುವಾಗ ಬಯಕೆಯನ್ನು ಹೊಂದಿದ್ದೆ..ನಿನ್ನ ಉಸಿರಾಗಬೇಕೆಂದುಕೊಂಡಿದ್ದೆ. ಕಣ್ಣಲ್ಲಿ ಕಣ್ಣಿಟ್ಟು ಮನದ ಭಾವನೆಗಳನ್ನು ನಿನ್ನ ಜೊತೆ ಹಂಚಿಕೊಳ್ಳಬಯಸಿದ್ದೆ.. ಆದರೆ ಅದೆಲ್ಲ ಭಾವನೆಗಳ ಗಾಳಿ ಗೋಪರುವನ್ನು ಉಫ್ ಎಂದು ಊದಿದೆ. ಕಾಯುತ್ತಲೇ ಇರುವ ನನ್ನ ಭಾವನೆಗೆ ಪೂರಕವಾಗಿ ನಡೆದುಕೊಳ್ಳಲೇ ಇಲ್ಲ. ಬೆಳಗ್ಗಿನಿಂದ ಸಂಜೆಯವರೆಗೆ ನಮ್ಮ ರೆಗ್ಯೂಲರ್ ಜಾಗದಲ್ಲಿ ನಾನು ಕಾದಿದ್ದೇ ಬಂತು. ಹಾಂ.. ನೀನು ನಮ್ಮ ಟ್ರಿಪ್ಪಿನ ಸಂದರ್ಭದಲ್ಲಿ ಕೊಡಿಸಿದ್ದೆಯಲ್ಲ ತಿಳಿನೀಲಿ ಬಣ್ಣದ ಟೀಷರ್ಟ್.. ಎದೆಯ ಮೇಲೆ ಚೆ ಗುವೆರಾ ನ ಉತ್ಸಾಹ ಉಕ್ಕಿಸುವ ಪೋಟೋ. ಅದನ್ನು ಧರಿಸಿಯೇ ಬಂದಿದ್ದೆ.. ಆದಿನ ಅದೇನಾಗಿತ್ತೋ ಏನೋ ನಾವು ಸೇರುತ್ತಿದ್ದ ಆ ಜಾಗದ್ದಿ ನಮ್ಮಂತಹ ಎಂಟ್ಹತ್ತು ಜೋಡಿಗಳು. ನಾನೊಬ್ಬನೆ .. ಒಂಟಿ ಒಂಟಿ.. ಅದೆಷ್ಟು ನಕ್ಕರೋ..
    ನಿನಗಾಗಿ ಕಾದು ಕಾದು ಈಗ ಬರುತ್ತೀಯಾ ಆಗ ಬರುತ್ತೀಯಾ ಎಂದು ಗಡಿಯಾರದ ಮೇಲೆ ಕಣ್ಣೊಟ ಬೀರಿದ್ದೇ ಬಂತು.. ಆದರೆ ನೀನು ಬರಲೇ ಇಲ್ಲ. ನಿನ್ನ ನೋಡುವ ತವಕದ ನನ್ನ ಮನಸ್ಸಿಗೆ ಉರಿಕೆಂಡವನ್ನು ಸೋಕಿಬಿಟ್ಟೆ ನೀನು. ಯಾಕೆ ಹೀಗೆ..? ಎಷ್ಟು ಬೇಜಾರಾಗಿದೆ ಗೊತ್ತಾ..? ಅಳೋಣ ಎಂದರೆ ನಾನು ಗಂಡಸು. ನಕ್ಕುಬಿಡುತ್ತದೆ ಸಮಾಜ. ಆದರೆ ಸೀದಾ ಸಾದಾ ಇರಲೋ ಎಂದರೆ ಮೀರಿ ಮೆರೆವ ಎದೆ ಭಾರ.. ನಿಟ್ಟುಸಿರು. ನೀನು ಹಾಗೆ ಮಾಡಿದ್ದರ ಕಾರಣ ಏಕೋ.. ಏನೋ.. ನಾನರಿಯೆ.. ಯಾಕೋ ಭಯವಾಗುತ್ತಿದೆ ಗೆಳತಿ..
    ಇರಲಿ ಬಿಡು.., ಮತ್ತೆ ನಿನ್ನದೇ ನೆನಪು ನೆರಳಿನಲ್ಲಿ ಕನವರಿಕೆಯಲ್ಲಿ ಬದುಕಿದ್ದೇನೆ. ಗೋಡೆಗಂಟಿಸಿದ ನವಿಲುಗರಿ  ನಿನ್ನ ನೆನಪನ್ನು ಮತ್ತಷ್ಟು ತರುತ್ತಿದೆ. ನಮ್ಮ ಮನೆಗೆ ಬಂದಾಗ ಗುಡ್ಡದ ಮೇಲೆ ನಿನಗೆ ಸಿಕ್ಕ ನವಿಲುಗರಿಯನ್ನು ಜತನದಿಂದ ಎತ್ತಿಕೊಂಡು ನನಗೆ ಕೊಟ್ಟಿದ್ದೆ.. ನಾನು ಅದನ್ನು ಅಷ್ಟೇ ಜತನದಿಂದ ನನ್ನ ಮಲಗುವ ಕೋಣೆಯ ಪಕ್ಕದ ಗೋಡೆಗೆ ಅಂಟಿಸಿದ್ದೆ... ಅಮೃತವರ್ಷಿಣಿಯ ಥರ.. ನಿನ್ನ ನೆನಪಾದಾಗ ನವಿಲುಗರಿಯ ಟೆಲಿಪತಿ ಸಂದೇಶ ರವಾನೆ ಮಾಡುತ್ತಿದ್ದೆ..
    ಬಿಡು.. ನೀನು ಬರಲಿಲ್ಲ.. ಆದರೂ ನಾನು ಕಾಯುತ್ತಿದ್ದೇನೆ.. ನಿನ್ನ ನೆನಪಿನಲ್ಲಿ.. ಭಯದ ನೆರಳಿನಲ್ಲಿ.. ನೀ ಬಂದರೆ ನನ್ನ ಹಳೆಯ ದುಕ್ಕ ಬೇಗುದಿಯನ್ನೆಲ್ಲ ಮರೆತುಬಿಡುತ್ತೆನೆ.. ಬರುವೆಯಲ್ಲ..?
ಇಂತಿ ನಿನ್ನವ
ಜೀವನ

Sunday, April 14, 2013

ಎಲ್ಲ ಮರೆತಿರುವಾಗ ( ಕಥೆ ಭಾಗ -9)

ಎಲ್ಲ ಮರೆತಿರುವಾಗ


ಭಾಗ -9


ಹೀಗೆ ದಿನಗಳು ಸಾಗಿದವು...
ನನ್ನ ಹಾಗೂ ಅವಳ ನಡುವೆ ಇದ್ದುದು ಸ್ನೇಹವೋ ಪ್ರೇಮವೋ ಯಾವುದೂ ಅರ್ಥವಾಗಲಿಲ್ಲ. ಗೊಂದಲಕ್ಕೆ ಬಿದ್ದಿದ್ದೆ..
ಬಹುಶಃ ಅದೇ ಗೊಂದಲ ಅವಳಲ್ಲಿತ್ತೋ ಇಲ್ಲವೋ ನಾ ಕಾಣೆ...
ಈ ಗೊಂದಲದ ಗೂಡಿನಲ್ಲಿಯೇ ಅನೇಕ ದಿನಗಳನ್ನೂ ದೂಡಿದೆವು...

--

ಪ್ರೇಮದ ಗುಂಗು ಅಪಾರ.. ಅದನ್ನು ಅದುಮಲು ಯತ್ನಿಸಿದಂತೆಲ್ಲ ಹೆಚ್ಚುತ್ತದೆ...
ಒಂದಿನ ಶುಭ ಮುಂಜಾನೆ ಕಾಲೇಜಿಗೆ ಬಂದವನೇ ಇವತ್ತು ನನ್ನ ಪ್ರೇಮದ ಪರಿಯನ್ನು ಅವಳಿಗೆ ತಿಳಿಸಲೇ ಬೇಕೆಂದು ನಿರ್ಧರಿಸಿದೆ...
ಆದರೆ ಆಕೆ ಆ ದಿನ ಬರಲೇ ಇಲ್ಲ...
ಮರು ದಿನ ಮತ್ತೆ ಯಥಾ ಪ್ರಕಾರ ಅದೇ ನಿರ್ಧಾರ..
ಆ ದಿನ ನಮ್ಮ ಕಾಲೇಜಿ ಎದುರಿನ ಚಿಕ್ಕ ುದ್ಯಾನಕ್ಕೆ ಕರೆದೊಯ್ದು ನನ್ನ ಮನದಾಳದ ಭಾವನೆಗಳನ್ನು ಹೇಳಿಯೇ ಬಿಟ್ಟೆ...

ಬೈಗುಳಗಳೋ.. ಮತ್ತೇನೋ ನಿರೀಕ್ಷೆಯಲ್ಲಿದ್ದೆ... ಹೂಂ ಅನ್ನಲಿಲ್ಲ.. ಊಹೂಂ ಅಂತಲೂ ಹೇಳಲಿಲ್ಲ..
ಮರುದಿನ ಸಿಗ್ತೇನೆ ಅಂದವಳು ನಾಲ್ಕು ದಿನ ನಾಪತ್ತೆ...
ಅಲ್ಲಿಗೆ ನನ್ನ ಪ್ರೇಮಕ್ಕೆ ದಿ ಎಂಡ್ ಗ್ಯಾರಂಟಿ ಅಂದುಕೊಂಡೆ...


ಐದನೇ ದಿನ ಬಂದಳು...
ಸಂಗೀತದಂತೆ...
ಬಂದವಳು ನನ್ನ ಕಣ್ಣನ್ನು ಸಾಕಷ್ಟು ಸಾರಿ ತಪ್ಪಿಸಲು ಯತ್ನಿಸಿದಳು..
ಕೊನೆಗೊಮ್ಮೆ ಸಿಕ್ಕಳು...
ಏನು..? ಎಂದೆ..
ಯೆಸ್ ಅಂದಳು...

ನನಗಂತೂ ಒಮ್ಮೆ ಆಕಾಶ ಕೈಗೆ ಸಿಕ್ಕಂತಹ ಅನುಭವ...
ಎದೆಯೊಳಗೆ ನೂರು ಗಿಟಾರು ಮೀಟಿದಂತಹ ಸಂಭ್ರಮ...

ಅದಾಗಿ ನಾಲ್ಕುದಿನ ನಾನು ಅಕ್ಷರಶಹ ನೆಲದಿಂದ ನಾಲ್ಕು ಇಂಚು ಮೇಲಿದ್ದೆ.. ಅಂದರೂ ತಪ್ಪಿಲ್ಲ..
ಮೊದಲ ಪ್ರೇಮದ ಮಧುರ ಭಾವನೆ ಅಂದರೆ ಇದೇ ಏನೋ... ಅದು ಹೀಗೆಯೇ ಇರ್ತದೇನೋ...
ಅಂತೂ ಇಂತೂ ಮೊಟ್ಟ ಮೊದಲ ಬಾರಿಗೆ ನಾನು ಇಷ್ಟಪಟ್ಟದ್ದು ನನ್ನ ಕೈಗೆ ಸಿಕ್ಕ ಸಂತಸ...

ಮುಂದಿನ ದಿನಗಳು ಅತ್ಯಂತ ಸಂಬ್ರಮದಿಂದ ಕಳೆದವು ಎನ್ನುವುದನ್ನು ಮತ್ತೆ ನಾನು ಹೇಳಬೇಕಿಲ್ಲವಲ್ಲ...
ಒಮ್ಮೆ ಅದೃಷ್ಟ ಕೈ ಹಿಡಿದರೆ ಎಲ್ಲಕಡೆಯಿಂದ ಒದ್ದುಕೊಂಡು ಬರ್ತದಂತಲ್ಲ ಅದೇ ರೀತಿ..
ಆ ದಿನಗಳಲ್ಲಿ ನನ್ನ ಹಾಡನ್ನು ಕೇಳಿದ ಅದ್ಯಾರೋ..
ಪ್ರಖ್ಯಾತ ಟಿ.ವಿ. ವಾಹಿನಿಯ ಸಂಗೀತ ಕಾರ್ಯಕ್ರಮಕ್ಕೂ ಆಯ್ಕೆ ಮಾಡಿ ಕಳಿಸಿದರು.
ಕಾರ್ಯಕ್ರಮ ಬಹಳ ಸಕ್ಸಸ್ಸೂ ಆಯಿತು...

ತೀರಾ ಬಹುಮಾನ ಗೆಲ್ಲದಿದ್ದರೂ 3 ನೇ ಸ್ಥಾನವನ್ನು ಗೆದ್ದುಕೊಂಡೆ...

ಆದರೆ ಮುಂದಿನ ದಿನಗಳು ದುರಂತಮಯವಾಗಿದ್ದವು..

(ಮುಂದುವರಿಯುವುದು...)

Monday, April 1, 2013

ಒಂದಿಷ್ಟು ಹನಿ ಚುಟುಕಗಳು

ಒಂದಿಷ್ಟು ಹನಿ ಚುಟುಕಗಳು


43)ತೋರಿಕೆಗಳು

ಭಾರತ ದೇಶದ
ಮೂರು ಜಗತ್ಪ್ರಸಿದ್ಧ
ತೋರಿಕೆಗಳೆಂದರೆ
ಗೊರಕೆ,
ತುರಿಕೆ ಹಾಗೂ
ಕಲಬೆರಕೆ..!!


44)ಲಕ್ ವಾ

ಲಕ್ ಲಕ್ ಎಂದು
ಪದೆ ಪದೇ ಹೇಳುತ್ತಾ
ಸಾಗುತ್ತಿದ್ದವನಿಗೆ
ಲಕ್ಕೋ ಎಂಬಂತೆ
ಲಕ್ವಾ ಹೊಡೆದುಬಿಟ್ಟಿತು..!!

45)ಸ್ಮಿತ

ಅವಳ ಹೆಸರೇನೋ
ಚೆಂದದ ಸ್ಮಿತ.!
ಆಕೆ ಬಾಯಿಬಿಟ್ಟರೆ ಮಾತ್ರ
ತಾಳಲಾರದ ಗಬ್ಬುನಾಥ...!!

 

46)ಮೊಡವೆ

ಮೊಡವೆ ಎಂದರೆ
ಹೆಣ್ಣು ಹುಡುಗಿಯ ಮೊಗದ
ಭಾವನೆಗಳು ಹೊರಹೋಗುವ
ಒಂದು way..!!

47)`ಕೋಲಾ'ಹಲ

ನಮ್ಮೂರಿನ ಯಶಸ್ವಿ ರೈತ
ಬೋರನಲ್ಲಿದೆ ಬೆಳೆದ ಸೋಂಪಾದ ಹೊಲ..!!
ಅದಕ್ಕೆ ಕಾರಣ ಹುಡುಕಿದಾಗ
ಸಿಕ್ಕಿದ್ದು ಮಾತ್ರ
ಕೋಕಾ ಕೋಲ..!!!

Saturday, March 23, 2013

ಬೇಡರ ವೇಷದ ಸಡಗರ

ನಗರದಾದ್ಯಂತ ಬೇಡರ ವೇಷದ ಸಡಗರ. ನಗರದ ಪ್ರಮುಖ ವೃತ್ತಗಳಲ್ಲಿ ಬೇಡನ ಅಬ್ಬರಕ್ಕೆ ಕ್ಷಣಗಣನೆ ಆರಂಭವಾಗಿದೆ. ಇನ್ನೂ ಮೂರ್ನಾಲ್ಕು ದಿನಗಳ ಕಾಲ ನಗರದಾದ್ಯಂತ ತಮಟೆಯ ಸದ್ದಿನ ಜೊತೆಗೆ ಬೇಡನ ಹೂಂಕಾರ, ಬೇಡರ ವೇಷವೆಂಬ ಸಂಪ್ರದಾಯದ ಕುಣಿತವನ್ನು ಕಾಣಬಹುದಾಗಿದೆ.
    ಶಿರಸಿ ಹಾಗೂ ಸುತ್ತಮುತ್ತಲಿನ ಕೆಲವೇ ಕಡೆಗಳಲ್ಲಿ ಕಾಣಬಹುದಾದ ಬೇಡರ ವೇಷ ಸಂಪ್ರದಾಯ ಪ್ರತಿ ಎರಡು ವರ್ಷಕ್ಕೊಮ್ಮೆ ಕಾಣಸಿಗುತ್ತದೆ. ಶಿರಸಿಯ ಮಾರಿಕಾಂಬೆ ಜಾತ್ರೆ ನಡೆಯುವ ವರ್ಷ ಹೋಳಿ ಹಬ್ಬ ಇರುವುದಿಲ್ಲ. ಉಳಿದ ವರ್ಷಗಳಂದು ಹೋಳಿ ಹುಣ್ಣಿಮೆಯ ಮುನ್ನಾ ದಿನಗಳಲ್ಲಿ ಬೇಡರ ವೇಷದ ಸಂಬ್ರಮ ಮುಗಿಲುಮುಟ್ಟುತ್ತದೆ. ಹೋಳಿ ಹುಣ್ಣಿಮೆಗೂ ಮುಂಚಿನ ಮೂರು ದಿನ ಬೇಡರ ವೇಷದ ಸಡಗರ ಸಂಭ್ರಮ ಕಾಣಸಿಗುತ್ತದೆ. ಕಳೆದ 20-22 ದಿವಸಗಳಿಂದಲೇ ಬೇಡರ ವೇಷದ ತಾಲೀಮು ಶುರುವಾಗಿದೆ. ಇದರಿಂದಾಗಿ ನಗರದ ಪ್ರಮುಖ ವೃತ್ತಗಳಲ್ಲಿ ಬೇಡರ ವೇಷದ ತಾಲೀಮು, ತಮಟೆ ಸದ್ದು ಸವರ್ೇ ಸಾಮಾನ್ಯವಾಗಿದೆ.
    ಕಳೆದ ಒಂದು ದಶಕಗಳ ಹಿಂದೆ ನಗರದಲ್ಲಿ ಕೆಲವೇ ಕೆಲವು ಕಡೆಗಳಲ್ಲಿ ಮಾತ್ರ ಬೇಡರ ವೇಷವನ್ನು ಹಾಕಲಾಗುತ್ತಿತ್ತು. ಆದರೆ ಈಗ ಅವುಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಹೀಗೆ ಬೇಡರ ವೇಷವನ್ನು ಹಾಕುವ ಗುಂಪೊಂದನ್ನು ಬಂಡಿ ಎಂದು ಕರೆಯಲಾಗುತ್ತದೆ. ದಶಕಗಳ ಹಿಂದೆ ಕೆಲವೇ ಕೆಲವಿದ್ದ ಬಂಡಿಗಳ ಸಂಖ್ಯೆ ಈಗ ಬಹಳಷ್ಟು ಹೆಚ್ಚಿದೆ. ನಗರದ ಪ್ರಮುಖ ಭಾಗದಲ್ಲಿ ದಿನವೊಂದಕ್ಕೆ 15-20 ಬಂಡಿಗಳು ಸಂಚರಿಸಿ ಬೇಡರ ನೃತ್ಯವನ್ನು ಮಾಡಲಾಗುತ್ತದೆ. ಈ ವರ್ಷ ಅಜಮಾಸು 40ಕ್ಕೂ ಹೆಚ್ಚು ಬಂಡಿಗಳಿವೆ ಎಂದು ಹೇಳಲಾಗುತ್ತಿದೆ. ಗಲ್ಲಿಗೊಂದರಂತೆ ಬಂಡಿಗಳು ಹುಟ್ಟಿಕೊಂಡಿದ್ದು ಈಗಾಗಲೇ ತಾಲೀಮಿನಲ್ಲಿ ತೊಡಗಿಕೊಂಡಿವೆ. ನಗರದ ಅಧಿದೇವತೆ ಮಾರಿಕಾಂಬಾ ದೇವಸ್ಥಾನಕ್ಕೆ ತೆರಳಿ ಮಾರಿಕಾಂಬೆಗೆ ಪೂಜೆ ಸಲ್ಲಿಸುವ ಬಂಡಿ ನಂತರ ನಗರದ ವಿವಿಧ ಬೀದಿಗಳಲ್ಲಿ ರಾತ್ರಿಯಾಗುತ್ತಿದ್ದಂತೆ ಸಂಚರಿಸುತ್ತವೆ. ರಾತ್ರಿ 10 ಗಂಟೆಯಿಂದ ಮುಂಜಾನೆ 4 ಗಂಟೆಯವರೆಗೆ ಬೇಡರ ವೇಷದ ವೈವಿಧ್ಯತೆ ಕಾಣಬಹುದಾಗಿದೆ.
ಹಿನ್ನೆಲೆ
       ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾತ್ರ ಕಾಣ ಸಿಗಬಹುದಾದ ಬೇಡರ ವೇಷ ಎಂಬ ಸಾಂಪ್ರದಾಯಿಕ ಕಲೆಗೆ ನಾಲ್ಕಾರು ಶತಮಾನಗಳ ಇತಿಹಾಸವಿದೆ. ಶಿರಸಿ ಪ್ರದೇಶಗಳನ್ನು ಆಳ್ವಿಕೆ ನಡೆಸಿದ್ದ ಸೋದೆಯ ಅರಸರ ಕಾಲದಿಂದ ಬೇಡರ ವೇಷವೆಂಬುದು ಚಾಲ್ತಿಗೆ ಬಂದಿದೆ ಎನ್ನುವ ಮಾಹಿತಿಗಳು ಲಭ್ಯವಾಗುತ್ತವೆ.
    ಬೇಡರ ವೇಷ ಎಂಬ ಸಾಂಪ್ರದಾಯಿಕ ಕಲೆ ಬೆಳೆದು ಬಂದ ಕುರಿತು ಹಲವಾರು ಕಥೆಗಳೂ ಚಾಲ್ತಿಯಲ್ಲಿವೆ. ಶಿರಸಿ ಭಾಗದಲ್ಲಿ 15-16ನೇ ಶತಮಾನದಲ್ಲಿ ಜನರನ್ನು ಹೆದರಿಸಿ, ಬೆದರಿಸಿ ಸುಲಿಗೆ ಮಾಡುತ್ತಿದ್ದ ದರೋಡೆಕೋರ ಬೇಡನ ಕಥೆಯನ್ನು ಈ ಕುರಿತು ಉಲ್ಲೇಖಿಸಲಾಗುತ್ತದೆ. ಜನರನ್ನು ಕಾಡುತ್ತಿದ್ದ ಕಾನನ ವಾಸಿ ಬೇಡನನ್ನು ಹಿಡಿಯಲು ಸೋದೆಯ ಅರಸ ಸೈನಿಕರನ್ನು ಅಟ್ಟಿ, ಹರಸಾಹಸದಿಂದ ಆತನನ್ನು ಬಂಧಿಸಲು ಯಶಸ್ವಿಯಾಗುತ್ತಾನೆ. ಬಂಧನಕ್ಕೊಳಗಾದ ಬೇಡ ಆಕ್ರೋಶದಿಂದ ಹೂಂಕರಿಸುತ್ತಾನೆ. ಆತನನ್ನು ನಗರದಾದ್ಯಂತ ಮೆರವಣಿಗೆ ಮಾಡಲಾಗುತ್ತದೆ ಎನ್ನುವುದೊಂದು ಕಥೆ.
    ಸೋದೆ ಅರಸರ ಕಾಲದಲ್ಲಿ ಶಿರಸಿಯೆಂಬುದು ಚಿಕ್ಕ ಹಳ್ಳಿ. ಆದರೂ ಇಲ್ಲಿ ನಾಲ್ಕಾರು ಅಂಗಡಿ ಮುಂಗಟ್ಟುಗಳಿದ್ದು, ಸಾರ್ವಜನಿಕರು ಅಗತ್ಯವಸ್ತುಗಳನ್ನು ಕೊಳ್ಳುವ ಪ್ರಮುಖ ಸ್ಥಳವಾಗಿತ್ತು. ಅಲ್ಲದೇ ಬಯಲುಸೀಮೆ ಹಾಗೂ ಕರಾವಳಿಯನ್ನು ಸಂಪಕರ್ಿಸುವ ಆಯಕಟ್ಟಿನ ಸ್ಥಳವೂ ಇದಾಗಿತ್ತು. ಸಂಪದ್ಭರಿತ ಈ ಸ್ಥಳದ ಮೇಲೆ ಬಹಮನಿ ಅರಸರ ಹಾಗೂ ಮೊಘಲರ ದಾಳಿ ಪದೆ ಪದೆ ನಡೆಯುತ್ತಿತ್ತು. ಅದನ್ನು ತಡೆಯುವ ಸಲುವಾಗಿ ಸೋದೆಯ ಅರಸ ಕಲ್ಯಾಣ ಶೆಟ್ಟಿ ಎನ್ನುವವನನ್ನು ಶಿರಸಿಯಲ್ಲಿ ನೇಮಕ ಮಾಡುತ್ತಾನೆ. ಕಲ್ಯಾಣ ಶೆಟ್ಟಿ ತನ್ನ ಬಂಟರ ಸಹಾಯದಿಂದ ಹೊರ ಭಾಗದ ಧಾಳಿಯನ್ನು ತಡೆಗಟ್ಟಲು ಯಶಸ್ವಿಯಾಗುತ್ತಾನೆ.
    ಮಲ್ಲೇಶಿ ಎನ್ನುವವನು ಕಲ್ಯಾಣ ಶೆಟ್ಟಿಯ ಬಂಟರಲ್ಲೊಬ್ಬ. ಈತನ ಕಣ್ಣಿನಲ್ಲಿ ವಿಶೇಷ ಶಕ್ತಿಯಿದೆ ಎನ್ನುವ ಕಾರಣದಿಂದಲೇ ವೈರಿಗಳ ದಾಳಿಯನ್ನು ಹಿಮ್ಮೆಟ್ಟಿಸುವಲ್ಲಿ ಈತ ಪ್ರಮುಖ ಪಾತ್ರ ವಹಿಸುತ್ತಾನೆ. ಕಣ್ಣಿನಲ್ಲಿ ವಿಶೇಷ ಶಕ್ತಿಯುಳ್ಳ ಮಲ್ಲೇಶಿ ರಾತ್ರಿಯ ಸಂದರ್ಭದಲ್ಲಿ ವೈರಿ ಪಡೆಯನ್ನು ಸೋಲಿಸಲು ಕಾರಣನಾಗುತ್ತಾನೆ. ಕೊನೆಗೊಮ್ಮೆ ಕಣ್ಣಿನ ವಿಶೇಷ ಶಕ್ತಿಯೇ ಆತನಲ್ಲಿ ಅಹಂಕಾರ ಬೆಳೆಯುವುದಕ್ಕೆ ಕಾರಣವಾಗುತ್ತದೆ. ವಿಶೇಷ ಶಕ್ತಿಯಿರುವ ತನ್ನನ್ನು ಸೋಲಿಸಲು ಯಾರಿಗೂ ಸಾಧ್ಯವಿಲ್ಲ. ತಾನೊಬ್ಬ ಮಹಾನ್ ವ್ಯಕ್ತಿ ಎಂದು ಸೊಕ್ಕಿನಿಂದ ಮೆರೆಯುವ ಮಲ್ಲೇಶಿ ಪಟ್ಟಣದ ಮಹಿಳೆಯರ ಮೇಲೆ ಕಣ್ಣು ಹಾಕಲು ಯತ್ನಿಸುತ್ತಾನೆ.
    ಅಂದಿನ ಶಿರಸಿಯ ಮಹಿಳೆಯರು, ಹುಡಿಗಿಯರಿಗೆ ತೊಂದರೆ ನೀಡುವ ಮಲ್ಲೇಶಿ ಅವರನ್ನು ಹೊತ್ತೊಯ್ಯಲು ಪ್ರಾರಂಭಿಸುತ್ತಾನೆ. ಹೀಗಿರಲು ಒಂದು ದಿನ ಕಲ್ಯಾಣ ಶೆಟ್ಟಿಯ ಮಗಳಾದ ರುದ್ರಾಂಬೆಯ ಮೇಲೆ ಮಲ್ಲೇಶಿಯ ದೃಷ್ಟಿ ಹಾಯುತ್ತದೆ. ರುದ್ರಾಂಬೆಯನ್ನು ಬಯಸುವ ಮಲ್ಲೇಶಿ ಆಕೆಯನ್ನು ತನ್ನ ಜೊತೆಗೆ ಬರುವಂತೆ ಕೇಳಿಕೊಳ್ಳುತ್ತಾನೆ. ಆತನ ಹಾವಳಿಯನ್ನು ಅರಿತಿದ್ದ ರುದ್ರಾಂಬೆ ಮಲ್ಲೇಶಿಗೆ ಪಾಠವನ್ನು ಕಲಿಸುವ ಸಲುವಾಗಿ ಆತನ ಜೊತೆಗೆ ಹೋಗಲು ಒಪ್ಪಿಕೊಳ್ಳುತ್ತಾಳೆ.
    ಈ ನಡುವೆ ಮಲ್ಲೇಶಿಯ ಗುಣಾವಗುಣಗಳನ್ನು ತಿಳಿದುಕೊಳ್ಳುವ ರುದ್ರಾಂಬೆ ಆತನಿಗೆ ತಕ್ಕ ಪಾಠ ಕಲಿಸುವ ಸಲುವಾಗಿ ಸೂಕ್ತ ಸಮಯವನ್ನು ಎದುರುನೋಡುತ್ತಿರುತ್ತಾಳೆ. ಪ್ರತಿ ಹುಣ್ಣಿಮೆಯ ದಿನ ಮಾರಿಕಾಂಬೆ (ದೇವಿ)ಯ ಪೂಜೆ ಮಾಡುವ ವಿಷಯವನ್ನು ತಿಳಿದುಕೊಳ್ಳುವ ರುದ್ರಾಂಬೆ ಆತನಿಗೆ ಪಾಠ ಕಲಿಸಲು ಇದೇ ಸೂಕ್ತ ಸಮಯವೆಂದು ನಿರ್ಧರಿಸಿ ಹೋಳಿ ಹುಣ್ಣಿಮೆ ಸಂದರ್ಭದಲ್ಲಿ ಆತ ಪೂಜೆ ಮಾಡುತ್ತಿದ್ದಾಗ ಮಲ್ಲೇಶಿಯ ಕಣ್ಣಿಗೆ ರಾಸಾಯನಿಕಗಳನ್ನು ಎರಚಿಬಿಡುತ್ತಾಳೆ. ಇದರಿಂದಾಗಿ ಕಣ್ಣಿನ ಶಕ್ತಿ ಕಳೆದುಕೊಳ್ಳುವ ಮಲ್ಲೇಶಿ ವೇದನೆಯಿಂದ ಕೂಗಿಕೊಳ್ಳುತ್ತಾನೆ. ಆತನ ಕಣ್ಣು ಕುರುಡಾಗುತ್ತದೆ. ಇದರಿಂದಾಗಿ ಹಳ್ಳಿಯ ಜನರಿಗೆಲ್ಲ ಸಂತಸವಾಗಿ ಸಂಭ್ರಮಾಚರಣೆಗಳನ್ನು ನಡೆಸುತ್ತಾರೆ. ಮಲ್ಲೇಶಿಯನ್ನು ಹಗ್ಗದಿಂದ ಬಂಧಿಸಿ ಆತನನ್ನು ಊರಿನಾದ್ಯಂತ ಮೆರವಣಿಗೆ ಮಾಡುತ್ತಾರೆ. ಕಣ್ಣಿನ ವೇದನೆ ಹಾಗೂ ಬಂಧನದ ಸಿಟ್ಟಿನಿಂದ ಹೂಂಕರಿಸುವ ಮಲ್ಲೇಶಿಯನ್ನು ರುದ್ರಾಂಬೆ ಕೆಣಕುತ್ತ ಮುಂದೆ ಸಾಗುತ್ತಾಳೆ. ನಂತರ ಸತಿ ಸಹಗಮನದ ಮೂಲಕ ತನ್ನ ಜೀವನವನ್ನು ಕೊನೆಗೊಳಿಸಿಕೊಳ್ಳುವ ರುದ್ರಾಂಬೆಯ ನೆನಪಿಗಾಗಿ ಬೇಡರ ವೇಷವನ್ನು ಹಾಕಿ ಕುಣಿಯಲಾಗುತ್ತದೆ ಎನ್ನುವುದು ಹಿರಿಯರ, ಪ್ರಾಜ್ಞರ ಅಂಬೋಣವಾಗಿದೆ.
ಆಚಾರ ವಿಚಾರ   
ಬೇಡರ ವೇಷವನ್ನು ಹಾಕಿ ಕುಣಿಯುವವನು ಕೈಗೊಳ್ಳಬೇಕಾದ ಕೆಲವು ವಿಶಿಷ್ಟ ಆಚಾರ ವಿಚಾರಗಳೂ ಇವೆ. ಮೂರು ದಿನಗಳ ಕಾಲ ನಡೆಯುವ ಬೇಡರ ವೇಷದ ಕುಣಿತವನ್ನು ಮೊದಲೇ ನಿರ್ಧರಿಸಿಕೊಳ್ಳಲಾಗುತ್ತದೆ. ಯಾವ ದಿನ ಯಾವ ಭಾಗದ ವ್ಯಕ್ತಿ ವೇಷ ಹಾಕಬೇಕೆಂದು ಮೊದಲೇ ತಿಳಿದುಕೊಂಡು ಅವರದೇ ಆದ ಕೆಲವು ಆಚಾರ ವಿಚಾರ, ಸಂಪ್ರದಾಯಗಳನ್ನು ಕೈಗೊಳ್ಳುತ್ತಾರೆ. ಬೇಡರ ವೇಷವನ್ನು ತೊಡುವ ವ್ಯಕ್ತಿ ಬಣ್ಣ ತೊಡುವ ಮೊದಲು ದೇವರಿಗೆ ಕಾಯಿ ಇಟ್ಟು ಪೂಜೆ ಮಾಡುತ್ತಾನೆ. ಆ ದಿನ ಆತನಿಗೆ ಮಾಂಸಾಹಾರ ನಿಷಿದ್ದ. ಕೇವಲ ಹಾಲು ಹಾಗೂ ದೇವರ ನೈವೇದ್ಯದ ಹಣ್ಣುಗಳನ್ನು ಮಾತ್ರ ತಿನ್ನುತ್ತಾನೆ.
          ಬೇಡರ ವೇಷ ತೊಡುವವನಿಗೆ ಇನ್ನೊಬ್ಬ ವ್ಯಕ್ತಿ ಬಣ್ಣ ಹಚ್ಚುತ್ತಾನೆ. ಬಣ್ಣ ಹಚ್ಚುವ ವ್ಯಕ್ತಿ ಮೊದಲೇ ವೀಳ್ಯದೆಲೆ, ದಕ್ಷಿಣೆ, ಕಾಣಿಕೆಗಳನ್ನು ನೀಡಿ ಬಣ್ಣ ಹಚ್ಚಲು ಪ್ರಾರಂಭಿಸುತ್ತಾನೆ. ಬೇಡರ ವೇಷವನ್ನು ತೊಡುವ ವ್ಯಕ್ತಿ ದೇವರಿಗೆ ಸಮಾನ ಎನ್ನುವ ನಂಬಿಕೆಯಿರುವ ಕಾರಣ ಆತನನ್ನು ವಿಶೇಷ ಗೌರವದಿಂದ ಕಾಣಲಾಗುತ್ತದೆ. ಬೇಡನ ವೇಷ ತೊಟ್ಟವನು ಬಣ್ಣ ಹಚ್ಚಿದ ನಂತರ ಕನ್ನಡಿಯಲ್ಲಿ ತನ್ನ ಮುಖವನ್ನು ತಾನೇ ನೋಡಿಕೊಳ್ಳಬಾರದು ಎನ್ನುವ ಸಂಪ್ರದಾಯವೂ ಚಾಲ್ತಿಯಲ್ಲಿದೆ.
    ನಂತರ ಆತನನ್ನು ನಾಲ್ಕಾರು ಜನರು ತಮಟೆ ಬಡಿಯುವ ಮೂಲಕ ನಗರ ಸಂಚಾರಕ್ಕೆ ಕರೆದೊಯ್ಯುತ್ತಾರೆ. ನಗರದಲ್ಲಿ ವಿವಿಧ ಪ್ರದೇಶಗಳಲ್ಲಿ ವಿವಿಧ ದೇವರಿಗೆ ಸೇರಿದ ಸ್ಥಳಗಳಿವೆ. ಅಂದರೆ ಮಾರಿಕಾಂಬೆಗೆ ಸೇರಿದ ಪ್ರದೇಶ, ದೇವಿಕೆರೆಯಲ್ಲಿ ಭೂತಪ್ಪನ ಕಟ್ಟೆ, ಶಿವಾಜಿ ಚೌಕದಲ್ಲಿ ವೀರಾಂಜನೇಯನಿಗೆ ಸೇರಿದ ಕಟ್ಟೆ ಪ್ರದೇಶ ಹೀಗೆ. ಆ ದೇವರಿಗೆ ಸೇರುವ ಜಾಗದ ಗಡಿಯನ್ನು ಬೇಡರ ವೇಷಧಾರಿ ಕಾಲಿಟ್ಟ ತಕ್ಷಣ ಆತನಿಗೆ ಆ ದೇವರು ರಕ್ಷಣೆ ನೀಡಿ, ದುಷ್ಟ ಶಕ್ತಿಗಳ ಕಾಟವನ್ನು ತಡೆಗಟ್ಟುವಂತೆ ಸುಳಿಕಾಯಿ ಒಡೆಯಲಾಗುತ್ತದೆ. ಇದು ಬೇಡ ವೇಷಧಾರಿಗೆ ಶ್ರೇಯಸ್ಸನ್ನು ತಂದುಕೊಡುತ್ತದೆ ಎನ್ನುವ ನಂಬಿಕೆಯಿದೆ.
    ಬದಲಾದ ಕಾಲಘಟ್ಟದಲ್ಲಿ ಈ ಸಂಪ್ರದಾಯಗಳಲ್ಲಿ ಹಲವು ಬಿಟ್ಟುಹೋಗಿದೆ. ಸಾರ್ವಜನಿಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಸಂಪ್ರದಾಯಗಳನ್ನು ಬದಲಾಯಿಸಿಕೊಂಡಿದ್ದಾರೆ. ಕಷ್ಟದ ಕೆಲವು ಸಂಪ್ರದಾಯಗಳು ಮರೆಯಾಗಿದೆ. ಸುಲಭದ ಸಂಪ್ರದಾಯಗಳು ಹಾಗೆಯೇ ಉಳಿದಿವೆ. ಬೇಡರ ವೇಷವನ್ನು ಹಾಕುವ ವ್ಯಕ್ತಿಗೆ ಅಪಾರವಾದ ದೈಹಿಕ ಸಾಮಥ್ರ್ಯದ ಅಗತ್ಯವಿರುತ್ತದೆ. ಮೈಲಿಗಟ್ಟಲೆ ನಡೆಯಬೇಕು, ಕುಣಿಯಬೇಕು. ರಂಜಿಸಬೇಕು. ಇದಕ್ಕಾಗಿ ಸಾಕಷ್ಟು ಶ್ರಮವಹಿಸಬೇಕು ಎಂದು ಬೇಡರ ವೇಷದ ಖ್ಯಾತಿಯ ಸಂತೋಷ ಕುಮಾರ್ ಅಭಿಪ್ರಾಯಪಡುತ್ತಾರೆ.
ವೇಷ-ಭೂಷಣ
    ನವಿಲುಗರಿಯ ಕಿರೀಟ, ಕೈಯಲ್ಲೊಂದು ಕತ್ತಿ, ಗುರಾಣಿ, ಕತ್ತಿಯ ತುದಿಯಲ್ಲಿ ನಿಂಬೆಯಹಣ್ಣು, ಕುತ್ತಿಗೆಗೆ ನೋಟಿನ ಹಾರ, ಕೆಂಪು ಬಣ್ಣದ ಧಿರಿಸು, ಕಡಿ ಕಾರುವ ಕಣ್ಣು, ಕೋಡು ಈ ಮುಂತಾದ ವಿಚಿತ್ರ ರೌದ್ರ ಧಿರಿಸನ್ನು ಧರಿಸುವ ಬೇಡರ ವೇಷಧಾರಿ ಕುಣಿಯುತ್ತ ಸಾಗಿದರೆ ಆತನನ್ನು ಹಗ್ಗದ ಮೂಲಕ ಎರಡೂ ದಿಕ್ಕಿನಲ್ಲಿ ಇಬ್ಬರು ಹಿಡಿದು ನಿಯಂತ್ರಿಸುತ್ತಾರೆ. ತಮಟೆ, ವಾದ್ಯಗಳನ್ನು ಬಾರಿಸುತ್ತ ಸಾಗುತ್ತಿದ್ದರೆ ಬೇಡರ ವೇಷಧಾರಿ ಹೂಂಕರಿಸುತ್ತಾ, ಕುಣಿಯುತ್ತಾ ಸಾಗುವ ದೃಷ್ಯವೇ ಸುಂದರವಾದುದು. ಈ ಬೇಡರವೇಷವನ್ನು ನೋಡುವ ಸಲುವಾಗಿಯೇ ಜಿಲ್ಲೆಯ ವಿವಿಧ ಭಾಗಗಳಿಂದ ಹಾಗೂ ರಾಜ್ಯದ ಹಲವಾರು ಕಡೆಗಳಿಂದ ಪ್ರವಾಸಿಗರು ಶಿರಸಿಗೆ ಆಗಮಿಸುತ್ತಾರೆ.
    ಶನಿವಾರ, ಭಾನುವಾರ ಹಾಗೂ ಸೋಮವಾರ ರಾತ್ರಿ ನಡೆಯುವ ಈ ಬೇಡರ ವೇಷವನ್ನು ನೋಡುವ ಸೊಬಗೇ ಬೇರೆ. ಬೇಡರ ವೇಷವೆಂಬ ನಮ್ಮೊಳಗಿನ ವಿಶೇಷ ಸಂಪ್ರದಾಯ, ಕಲೆ, ಜಾನಪದ ಪ್ರಾಕಾರಕ್ಕೆ ಸಾರ್ವಜನಿಕರೂ ಸಹಕರಿಸಿ, ಬೇಡರ ವೇಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರ ನೃತ್ಯಕ್ಕೆ, ತಲೆದೂಗಿ ಶ್ರಮಕ್ಕೆ ವಿಸ್ಮಯ ಪಡಬೇಕಿದೆ.
ಹಾಗಾದ್ರೆ ಯಾಕೆ ತಡ ಮಾಡ್ತಾ ಇದ್ದೀರಿ... ಈಗ್ಲೇ ಬನ್ನಿ.... ಮುಗಿದು ಹೋಗುವ ಮುನ್ನ ಕಣ್ಮನವನ್ನು ತಣಿಸಿಕೊಳ್ಳಿ....
ಹೋ....... ಹಾ........ಹೀ.....

Tuesday, March 19, 2013

ಕೊನೆ ಗೌಡರೆಡೆಗಿನ ಹೊಣೆ

ಕೊನೆ ಗೌಡರೆಡೆಗಿನ ಹೊಣೆ


ತೀರಾ ಇತ್ತೀಚೆಗೆ ಯಲ್ಲಾಪುರದ ಗ್ರಾಮೀಣ ಭಾಗದಲ್ಲಿ ಒಬ್ಬ ಕೊನೆ ಗೌಡ ಮರದಿಂದ ಬಿದ್ದು ತೀವ್ರವಾಗಿ ಗಾಯಗೊಂಡು ಸತ್ತೇ ಹೋದ. ಶಿರಸಿ ಸೀಮೆಯಲ್ಲಿ ಇನ್ನೊಬ್ಬ ಮರದಿಂದ ಬಿದ್ದು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ. ಕಳೆದ ಒಂದೆರಡು ವರ್ಷಗಳ ಹಿಂದೆ ನಮ್ಮೂರ ಬಳಿಯ ಗವಿನಗುಡ್ಡದಲ್ಲಿ ಒಬ್ಬ ಕೊನೆಗೌಡ ಮರದಿಂದ ಬಿದ್ದಿದ್ದ., ಬಿದ್ದವನು ಒಕ್ಕುಡುತೆ ನೀರಿಗೆ ಬಾಯ್ದೆರೆಯಲಿಲ್ಲ. ನಂತರವೇ ಇರಬಹುದು ನಮ್ಮೂರ ಭಾಗದಲ್ಲಿ ಕೊನೆಗೌಡರ ಕಡೆಗಷ್ಟು ಹೊಣೆಗಾರಿಕೆಯನ್ನು ತೋರಿಸಿ ಅದನ್ನು ನೆನಪು ಮಾಡಿಕೊಂಡಿದ್ದು.
 ಕೊನೆಗೌಡ ಎಂದ ಮೇಲೆ ಆತನ ಸ್ಪಷ್ಟ ಚಿತ್ರಣ ನೀಡಬೇಕಲ್ಲ..!! ಇಲ್ಲಿದೆ ಕೇಳಿ., ಕೊನೆಗೌಡನೆಂದಕೂಡಲೇ ನಮಗೆ ನೆನಪಿಗೆ ಬರುವಂತದ್ದು, ಉದ್ದನೆಯ ದೋಟಿ ಅಡಿಕೆ ಮರವನ್ನು ಎಳೆದು ಬಾಗಿಸಿ ತರಲು ಉಪಯೋಗಿಸುವಂತದ್ದು, ಕೊಯ್ದ ಕೊನೆ ಉದುರದಂತೆ, ಚದುರದಂತೆ ಭೂಮಿಗಿಳಿಸಲು ಹನುಮನ ಬಾಲದಂತಹ ಉದ್ದನೆಯ ಹಗ್ಗ, ಕೈಯಲ್ಲಿ ಮೋಟುಗತ್ತಿ, ಕಾಲಲ್ಲಿ ತಳೆ, ಮರದ ಮೇಲೆಯೇ ಕುಳಿತು ಕೆಲಸ ಮಾಡಲು ಕಡಕುಮಣೆ ಹಾಗೂ ಮೀಟರುಗಟ್ಟೆ ದೂರಕ್ಕೆ ಬರುವ ಆತನ ಮೈಯ ಎಣ್ಣೆಯ ವಾಸನೆ.
 ಇವೆಲ್ಲವುಗಳ ಜೊತೆಗೆ ನಮಗೆ ನೆನಪಾಗುವುದು ಮರವೇರುವ ಆತನ ಕೌಶಲ್ಯ. ಜೊತೆ ಜೊತೆಯಲ್ಲಿಯೇ ಮರದಿಂದ ಮರಕ್ಕೆ ದಾಟುವ ಆತನ ಚಾಕಚಕ್ಯತೆ. ಒಂದೆ ಒಂದು ಅಡಿಕೆಯೂ ಉದುರದಂತೆ ಕೊನೆಯನ್ನು ಕೊಯ್ದು ಭೂಮಿಯ ಮೇಲೆ ಹಗ್ಗ ಹಿಡಿದು ನಿಲ್ಲುವ ವ್ಯಕ್ತಿಗೆ ತಲುಪುವಂತೆ ರೊಂಯ್ಯನೆ ಬಿಡುವ ಕೊನೆಗೌಡನ ಕೆಲಸ ಸುಲಭದ್ದಲ್ಲ ಬಿಡಿ. ಹಾಳಾದವ್ನು.., ಇವತ್ತು ಬರ್ಲೇ ಇಲ್ಲ ಮಾರಾಯಾ ಎಂದು ಕೊನೆಗೌಡನನ್ನು ಬಯ್ಯುವುದು ಸುಲಭ.. ಆದರೆ ಆತನ ಕೆಲಸದ ಕುರಿತು ಬಲ್ಲವರೇ ಹೇಳಬೇಕು.
 ಕೊನೆಗೌಡನ ಕುರಿತು ಬರಹದ ಮೂಲಕ ಹೇಳುವುದು ಬಹಳ ಸುಲಭ. ಆದರೆ ಕೊನೆಗೌಡರ ವೃತ್ತಿ ಬಹಳ ಕಠಿಣವಾದುದು. ಮರವೇರಿದ ಕೊನೆಗೌಡನನ್ನು ಕೆಳಗಿನಿಂದ ಯಾರಾದರೂ ನೋಡಿದರೆ ಕೆಳಗಿನವರಿಗೆ ತಲೆ ತಿರುಗುತ್ತದೆ. ಅಂತದ್ದರಲ್ಲಿ ಮಂಗನಿಗಿಂತ ಸಲೀಸಾಗಿ, ಮಿಗಿಲಾಗಿ ಚಕಚಕನೆ ಕುಪ್ಪಳಿಸಿ ಮರವನ್ನೇರುವ, ಅಷ್ಟೇ ಸಲೀಸಾಗಿ ಮರದಿಂದ ಮರಕ್ಕೆ ದಾಟುವ ಕೊನೆಗೌಡರಿಗೆ ಭಯವಾಗುವುದಿಲ್ಲವಾ..? ಗೊತ್ತಿಲ್ಲ. ಜೀವ ಕೈಯಲ್ಲಿ ಹಿಡಿದಾದರೂ ಮರವೇರಿ ಆತ ಅಡಿಕೆ ಕೊಯ್ಯುತ್ತಾನಲ್ಲಾ, ಅಂಥವರೇ ಗ್ರೇಟ್ ಆಗುತ್ತಾರೆ. ಆದರೆ ನಮಗದು ತಿಳಿಯುವುದೇ ಇಲ್ಲ.
 ನಾವು ಕೊಡುವ ನಾನೂರು ರೂಪಾಯಿ ಕಡಿಮೆಯಾಯ್ತು ವಡಿಯಾ ಎಂದು ಕೊನೆಗೌಡ ಕ್ಯಾತೆ ತೆಗೆದ ಸಂದರ್ಭದಲ್ಲಿ ಹಚ್ಚಾಹುಚ್ಚಿ ಬಯ್ಯುವ ನಮಗೆ ಆತನ ಕೆಲಸದ ವೈಖರಿಯೇಕೆ ತಿಳಿದುಬರುವುದಿಲ್ಲ..? ಕೆಲಸಕ್ಕೆ ಬಂದ ವಪ್ಪತ್ತಿನಲ್ಲೆ ಕನಿಷ್ಟವೆಂದರೂ ಮೂರ್ನಾಲ್ಕು ಕ್ವಿಂಟಾಲು ಅಡಿಕೆ ಕೊಯ್ಯುವ ಸಾಮಥ್ರ್ಯವಿರುವ ಕೊನೆಗೌಡರಿಗೆ ನಾನೂರು ರೂಪಾಯಿ ಕಡಿಮೆಯ ಬಾಬ್ತೇ ಸರಿ. ಅವನ ಕೆಲಸದ ವೈಖರಿಗೆ ಅಷ್ಟಾದರೂ ಬೇಡವೇ..? ಅಡಿಕೆಗೆ ಕೊಳೆಮದ್ದು ಹೊಡೆಸಿ, ಕೊನೆಕೊಯ್ಲಿನ ಸಂದರ್ಭದಲ್ಲಿ ಹಸಿಯಡಿಕೆ-ಗೋಟಿನ ಕೊನೆ (ತೆರಿಯಡಿಕೆ ಪ್ರೀ..), ಕೊಯ್ಯುವ ವ್ಯಕ್ತಿಗೆ ಮಾಡಿದ ಶ್ರಮಕ್ಕೆ ತಕ್ಕ ಬೆಲೆ ಬಂದರೆ ಆತ ಹಷರ್ಿಸುತ್ತಾನೆ.
 `ಹ್ವಾಯ್.. ಹೆಗುಡ್ರೂ... ನಾನ್ ಬಂದೇನಿ.. ಜಲ್ದಿ ಆಸ್ರಿಗೆ ರೆಡಿ ಮಾಡಿ.. ಮರಾ ಹತ್ತಾಕ್ ಹೋಗ್ಬೇಕು.. ಇವತ್ತೆಷ್ಟೇ ಹೊತ್ತಾದ್ರೂ.. ದೊಡ್ಡಪಾಲು, ಹೊಳೆಯಂಚಿನ ಪಾಲು ಕೊನೆಕೊಯ್ದೇ ಮರ ಇಳಿಯೂದ್ ಸಯ್ಯಿ... ಕೊನೆ ಕೊಯ್ಯಾಕ್ ನೀವ್ ಗಟ್ಟಿಯಾಗಿರ್ರಿ... ಮಧ್ಯ ಕೈಕೊಟ್ಬುಡ್ಬೇಡಿ... ' ಎಂದು ತಮಾಷೆಯಾಗಿ ಹೇಳುತ್ತಾ... ತನಗೆ ತಾನೇ ಗುರಿಯನ್ನೂ ನಿರ್ಧರಿಸಿಕೊಂಡು ಕೆಲಸ ಪ್ರಾರಂಭಿಸುವ ಕೊನೆಗೌಡನ ಕಾರ್ಯಕ್ಕೆ ತಲೆದೂಗಲೇಬೇಕು.. ಬಿಡಿ ಇದು ಆಗಿನ ಮಾತು. ಈಗಿನ ಕೊನೆಗೌಡರುಗಳು ಆದಷ್ಟು ಕಳ್ಳಬೀಳಲು ಯತ್ನಿಸುತ್ತಾರೆ. ಸಾಕಷ್ಟು ಕಿರಿಕಿರಿಯನ್ನೂ ಮಾಡುತ್ತಾರೆ. ಆದ್ರೂ ಅವರ ಕೆಲಸಕ್ಕೆ ನಮ್ಮದೊಂದು ಹ್ಯಾಟ್ಸಾಫ್ ಹೇಳಲೇ ಬೇಕು. ಅಲ್ವೇ.

Tuesday, March 12, 2013

ಮುಖಗಳು

ಮುಖಗಳು




ಭಾವಗಳು ಉಕ್ಕಿದಂತೆಲ್ಲ
ಪ್ರವಾಹಗಳು ಏರುತ್ತವೆ..!!

**

ಪ್ರೀತಿಗೆ ಬೇಕಿದ್ದುದು
ದೇಹಗಳಲ್ಲ, ಕಾಮವಲ್ಲ.
ಮೋಹವಲ್ಲ, ಆಸೆಯಲ್ಲ
ದೋಷವಲ್ಲ, ದ್ವೇಷವಲ್ಲ
ಬರೀ ನಂಬಿಕೆ ಮಾತ್ರ !!!

**

ಅವಳು ಬಯಸಿದಾಗೆಲ್ಲಾ
ನಾ ಸಿಗಲಿಲ್ಲ....
ನಾ ಬಯಸುತ್ತಿರುವಾಗೆಲ್ಲಾ
ಅವಳು ಸಿಗೋಲ್ಲಾ..!!!

**

ನಿರಾಸೆಯಿದ್ದಾಗ
ಬೀಳುವ ಕನಸೂ
ಕೆಟ್ಟದ್ದಾಗಿರುತ್ತದೆ..!!!

**

ಸಾಯಲಿಕ್ಕೆ ಭೂಕಂಪ,
ನೆರೆ, ಬರ, ಸಾಲವೇ
ಬೇಕೆಂದಿಲ್ಲ..
ಒಂದು ಮರಣಪತ್ರ
ಅಷ್ಟೇ ಸಾಕು.. !!!

**

ಬದುಕಿನಲ್ಲಿ ಸಮಸ್ಯೆಗಳು
ತುಂಡಾಗುವುದೇ ಇಲ್ಲ..
ಒಂದು ಮುಗಿಯುವುದರೊಳಗೆ
ಇನ್ನೊಂದು ಹುಟ್ಟಿರುತ್ತದೆ..!!!

**

ಬರೆದ ಅಕ್ಷರ ಎಷ್ಟೇ
ಸುಂದರವಾಗಿದ್ದರೂ ಕೂಡ
ಒಂದು ಹನಿ ನೀರು ಬಿದ್ದರೆ ಸಾಕು
ಹಿಂಜಿ ಬಿಡುತ್ತದೆ..!!!

**

ವ್ಯಕ್ತಿ ಮರಕಾಲು
ಕಟ್ಟಿಕೊಂಡರೂ
ವ್ಯಕ್ತಿತ್ವ ಎತ್ತರ
ವಾಗುವುದಿಲ್ಲ..!!!

**

ಹೇಗೆ ಇರಲಿ,
ನನ್ನ ಪ್ರೀತಿಯ ಹುಡುಗಿ
ದೇವತೆಯೇ....

**

ಶತಮಾನಗಳ ವೈರಿ
ಸುಮ್ಮನೊಂದು ನಗುವಿಗೆ
ಮಿತ್ರನಾಗಿಬಿಟ್ಟ ..!!

**

ಆಕಳಿಕೆ,
ನಿದ್ದೆಯ ಮೊದಲ
ಮೆಟ್ಟಿಲು..!!

**

ಎಂಥ ಸರ್ವಾಧಿಕಾರಿಯೇ
ಆಗಿರಲಿ... ಆತ
ಮಲಗಿ ನಿದ್ರಿಸುತ್ತಿದ್ದಾಗ
ಮಗುವೇ...!!

(ಬದುಕಿನ ಎಂತದ್ದೋ ದಿನಗಳಲ್ಲಿ... ಏನೋ ಅನುಭವಗಳಾದಾಗ.. ಹಾಗೆ ಸುಮ್ಮನೇ ಗೀಚಿದ್ದು.. ಕೆಲವು ಸತ್ಯ.. ಮತ್ತೆ ಕೆಲವು ಫನ್ನಿ...ಸುಮ್ಮನೇ ಓದಲು... ನಾಲ್ಕಷ್ಟು ಸಾಲುಗಳು... ಖಯಾಲಿಯ, ಲಹರಿಯ ಸಮಯದಲ್ಲಿ ಬರೆಯಲಾಗಿದ್ದಷ್ಟೇ... ಓದಿ ಅನಿಸಿಕೆಗಳನ್ನು ಗೀಚಿ..)

Sunday, February 10, 2013

ತುರಗ ಕರ್ನಾಟಕ


ಬೆಂದ ಕಾಳನ್ನು ಹುಡುಕುತ್ತ
ಕಾಣದೂರಿಗೆ ಹೊರಟಿದೆ
ನಮ್ಮ ತುರಗ..!

ಆಚೆ ಈಚೆ ನೋಡದಂತೆ ತುರಗಕ್ಕೆ
ಕಣ್ಣು ಪಟ್ಟಿ ಕಟ್ಟಿದ್ದಾರೆ..
ತುರಗದ ಬಾಲ ಥೇಟು
ಅವಳ ಜಡೆಯಂತೇ ಕುಣಿಯುತ್ತಿದೆ..
ಅಂತಿಂತದ್ದಲ್ಲ ಈ
ತುರಗಕ್ಕೆ ಕೊಂಬೂ ಇದೆ. !!

ಅಜ್ಜ ಅಜ್ಜಿ ಅಪ್ಪ ಅಮ್ಮ
ಯಾರಮಾತಿಗೂ ಕವಡೆ ಕಾಸಿನ ಕಿಮ್ಮತ್ತಿಲ್ಲ
ಸಾಕಿ ಬೆಳೆಸಿದವನ ಕೂಗಿಗೆ ಬೆಲೆಯಿಲ್ಲ
ತುರಗಕ್ಕೆ ಹಸಿರು ಹುಲ್ಲು ಬೇಡ
ದಾಣಿ ಬೂಸಾವನ್ನು ಹುಡುಕುತ್ತಿದೆ..!!


ತುರಗಕ್ಕೆ ತುರಗವೇ ಜೊತೆಗಾರ
ಬೆನ್ನ ಮೇಲೆ ಜೀನಿಲ್ಲ..!
ಮಲೆನಾಡಿನ ಕಸುವೆಲ್ಲ
ತಿಂದು ಕೊಬ್ಬಿದರೂ
ನಾಗಾಲೂಟದಲ್ಲಿರುವ ತುರಗಕ್ಕೆ
ಇದೆಲ್ಲ ಕಾಲು ಕಸ..!!

ನುಗ್ಗುವ ಕುದುರೆಗೆ ಅದ್ಯಾರೋ
ಲಗಾಮು ಹಾಕಿ ಗಾಣಕ್ಕೆ ಕಟ್ಟಿದರೂ
ಆಸೆಗೆ ಅಂಕೆಯಿಲ್ಲ..!
ಉಸಿರುಕಟ್ಟಿ ಓಡಿದ ಬೆಟ್ಟದ ತುದಿ
ಬಯಲಾದರೂ ಓಟ ನಿಂತಿಲ್ಲ..!!


ಇಷ್ಟರ ನಡುವೆ ಮನೆಯೊಳಗಣ
ಅಪ್ಪ ಅಮ್ಮ ಅಜ್ಜ ಅಜ್ಜಿಯ ಕಣ್ಣೀರು
ಬ್ರೇಕಿಂಗ್ ನ್ಯೂಸ್ ಆಗಲೇ ಇಲ್ಲ..!!

ವಸಂತಗಳಾಚೆ
ಮರದ ಹಣ್ಣೆಲೆಗಳು ಉದುರಿದವು
ಇತಿಹಾಸ ಮರುಕಳಿಸಿತು..
ತುರಗ ಹಣ್ಣಾಯಿತು.!!

ಕೊನೆಗೂ ಕಾಲಚಕ್ರದಲ್ಲಿ
ತುರಗ ಅಜ್ಜ ಅಜ್ಜಿ..
ಅನಿವಾರ್ಯ ಅಸಹಾಯಕ ಪಾತ್ರಧಾರಿ..!!

ಕವಿತೆಯನ್ನು ಬರೆಯದೇ ಬಹಳ ದಿವಸಗಳೇ ಕಳೆದಿದ್ದವು ನೋಡಿ...ವರುಷಗಳೆ ಸಂದಿದ್ದವೇನೋ.. ಮೊನ್ನೆ ತಾನೆ ಶಿರಸಿಯಲ್ಲಿ ತಾಲೂಕಾ ಮಟ್ಟದ ಸಾಹಿತ್ಯ ಸಮ್ಮೇಳನ ನಡೆಯಿತು. ಕವಿ ಸಮಯದಲ್ಲಿ ನನ್ನ ಹೆಸರನ್ನೂ ಹಾಕಿ ಕವಿತೆ ವಾಚನ ಮಾಡಬೇಕೆಂದರು.. ಅದಕ್ಕೆ ಬರೆದು ವಾಚಿಸಿದ ಕವಿತೆ ಇದೆ..

Thursday, January 31, 2013

ಅಬ್ಬ...ಆಲೆಮನೆ ಹಬ್ಬ..!!

ಅಬ್ಬ...ಆಲೆಮನೆ ಹಬ್ಬ..!! 

 ಒಂದು ಕಾಲವಿತ್ತು. ಆಲೆಮನೆ ಅಂದರೆ ಹಬ್ಬದ ವಾತಾವರಣವನ್ನೇ ಸೃಷ್ಟಿಸುವಂತಹ ಕಾಲ ಅದಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಆಲೆಮನೆ ಎಂಬುದು ತೀರಾ ಅಪರೂಪ ಎನ್ನುವಂತಾಗಿದೆ. ಆಲೆಮನೆ ಎಲ್ಲಿ ನಡೆಯುತ್ತಿದೆ ಎಂದು ಹುಡುಕಬೇಕಾದಂತಹ ಸ್ಥಿತಿ ಇಂದಿನದು.
    ಮಲೆನಾಡಿನಲ್ಲಿ ಕಬ್ಬುಬೆಳೆಸುವುದು ಸಾಹಸದ ಕೆಲಸ. ಅರಣ್ಯಗಳು ನಾಶವಾಗಿದ್ದರಿಂದ ಕಾಡುಪ್ರಾಣಿಗಳು ರೈತನ ಹೊಲಗದ್ದೆಗಳಿಗೆ ಮುಗಿ ಬೀಳುತ್ತಿವೆ. ಅದೇ ರೀತಿ ಕಬ್ಬಿನ ಗದ್ದೆಗಳಿಗೂ ಮಂಗ, ಕಾಡುಹಂದಿ, ಇಣಚಿ ಮುಂತಾದವುಗಳ ಕಾಟ. ಇವೆಲ್ಲವನ್ನೂ ಮೀರಿ ಕಬ್ಬು ಬೆಳೆದು ಆಲೆಮನೆ ಮಾಡೋಣವೆಂದರೆ ಕೂಲಿ ಕಾರ್ಮಿಕರ ಸಮಸ್ಯೆ. ಮತ್ತೊಂದೆಡೆ ಕಬ್ಬಿನ ಹಾಲನ್ನು ಬೇಯಿಸಿ ಬೆಲ್ಲ ತಯಾರಿಸಲು ಉರುವಲು ಸಮಸ್ಯೆ. ಉರುವಲು ತರಬೇಕೆಂದರೆ ಅರಣ್ಯ ಇಲಾಖೆಯವರ ಕಾಟ. ಹಾಗಾಗಿ ರೈತಾಪಿ ವರ್ಗ ಆಲೆಮನೆ ಸಹವಾಸದಿಂದಲೇ ದೂರ ಸರಿದಿದೆ. ಬೆಲ್ಲವನ್ನು ಕೊಂಡು ತರುವುದೇ ಸಲೀಸು ಎನ್ನುವ ಧೋರಣೆಯಿಂದಾಗಿ ಆಲೆಮನೆಗಳು ಮಾಯವಾಗುತ್ತಲಿವೆ. ಇನ್ನೊಂದೆಡೆ ಬೆಲ್ಲದ ದರ ವರ್ಷದಿಂದ ವರ್ಷಕ್ಕೆ ಏರುಮುಖದತ್ತ ಸಾಗಿದೆ.
    ಆಲೆಮನೆ ಈ ಪದವೇ ಸಾಕು ಮೈಮನಗಳನ್ನು ರೋಮಾಂಚನಗೊಳಿಸುತ್ತದೆ. ಕಬ್ಬು ಕಡಿದು ಅದನ್ನು ಗಾಣಕ್ಕೆ ಕೊಟ್ಟು ಹಾಲನ್ನು ಕುಡಿದು ಬೆಲ್ಲವನ್ನು ತಿಂದರೆ ಹಬ್ಬದ ಮೆರುಗು, ಮೆಲುಕು ಅನಿರ್ವಚನೀಯ. ಈಗ ಆಲೆಮನೆಯನ್ನು ಹಬ್ಬವನ್ನಾಗಿ ಮಾಡುವ ಮೂಲಕ ಅಚನಳ್ಳಿಯಲ್ಲಿ ಅದಕ್ಕೊಂದು ವಾಣಿಜ್ಯಾತ್ಮಕ ರೂಪವನ್ನು ನೀಡುತ್ತಿರುವುದು ವಿಶೇಷ.
    ಆಲೆಮನೆಯೆಂದಕೂಡಲೇ ಕಬ್ಬು, ಕಣೆ, ಬೃಹತ್ ಕೋಣಗಳು, ಅವನ್ನು ಓಡಿಸುವವನು, ವಾರಗಟ್ಟಲೆ ಕಬ್ಬು ಕಡಿಯುವ ಸಂಭ್ರಮ, ಕಬ್ಬಿನ ಹಾಲು ಸಂಗ್ರಹಣೆ, ಬಂದ ಅತಿಥಿಗಳಿಗೆಲ್ಲ ಅದನ್ನು ನೀಡುವುದು, ಬೆಲ್ಲ ತಯಾರಿಸುವುದು ಇತ್ಯಾದಿಗಳು ನೆನಪಾಗುತ್ತವೆ. ಬದಲಾದ ಸಂಗತಿಯಲ್ಲಿ ಈ ಆಲೆಮನೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಬೆಳೆದಿದೆ. ಕೂಲಿ ಕಾಮರ್ಿಕರ ಸಮಸ್ಯೆಯ ಕಾರಣ ವಾರಗಟ್ಟಲೆ ನಡೆಯುತ್ತಿದ್ದ ಆಲೆಮನೆಗಳು ಈಗ ಒಂದೆರಡು ದಿನಕ್ಕೆ ಇಳಿದುಬಿಟ್ಟಿವೆ. ಎಕರೆಗಟ್ಟಲೆ ಕಬ್ಬುಬೆಳೆಯುತ್ತಿದ್ದವರೀಗ ಒಂದೆರಡು ಗದ್ದೆಗಳಿಗೆ ಸೀಮಿತವಾಗಿದ್ದಾರೆ. ಹಳೆಯಕಾಲದ ಕೋಣನ ಕಣೆಯ ಜಾಗದಲ್ಲಿ ಆಧುನಿಕ ಯಂತ್ರದ ಮೂಲಕ ಓಡುವ ಕಣೆ ಬಂದಿದೆ. ಅದರ ಜೊತೆಗೆ ಬೆಲ್ಲ ತಯಾರಿಸುವ ಕೊಪ್ಪರಿಗೆಗೂ ಚಕ್ರಗಳು, ನಲ್ಲಿಗಳನ್ನು ಕೂಡ್ರಿಸುವ ಮೂಲಕ ಆಲೆಯಮನೆಗೆ ಮತ್ತಷ್ಟು ಆಧುನಿಕ ಮೆರಗನ್ನು ನೀಡಲಾಗಿದೆ.
            ಹಿಂದೆಲ್ಲ ಆಲೆಮನೆ ಬಂತೆಂದರೆ ಸುತ್ತಮುತ್ತಲ ಊರುಗಳಲ್ಲಿ ಸಂಭ್ರಮ ಸಡಗರ. ಯಾವುದೇ ಕಡೆಗಳಲ್ಲಿ ಆಲೆಮನೆ ಇದೆಯೆಂಬ ಸುದ್ದಿ ಕಿವಿಗೆ ಬಿದ್ದರೆ ಸಾಕು ತಂಡೋಪತಂಡವಾಗಿ ಬಂದು ಜನರು ಹಾಲುಕುಡಿದು ಕಬ್ಬನ್ನು ಪಡೆದು ಹೋಗುತ್ತಿದ್ದರು. ಎಷ್ಟೇ ಜನ ಬಂದರೂ ಮನೆಯವರು ಬೇಸರಿಸದೇ, ಸಿಟ್ಟಾಗದೇ ಕೇಳಿದಷ್ಟು ಹಾಲುಕೊಟ್ಟು ಕಳಿಸುತ್ತಿದ್ದರು. ಕಬ್ಬಿನ ಹಾಲು ಹಾಗೂ ಕಬ್ಬನ್ನು ಬೇರೆಯವರಿಗೆ ಹೆಚ್ಚು ಹೆಚ್ಚು ಕೊಟ್ಟಷ್ಟೂ ಮುಂದಿನ ವರ್ಷ ನಮ್ಮ ಬೆಳೆ ಜಾಸ್ತಿಯಾಗುತ್ತದೆ ಎಂಬ ಮಾತುಗಳನ್ನು ಹಿರಿಯರು ಆಡುತ್ತಿದ್ದರು. ಆದರೆ ಆಧುನಿಕ ದಿನಮಾನದಲ್ಲಿ ಅವೆಲ್ಲವೂ ಕಳೆದುಹೋಗಿ ಆಲೆಮನೆಯೆಂದರೆ ಸ್ವಂತ ಬಳಕೆಗಷ್ಟೇ ಎಂಬಂತಹ ವಾತಾವರಣ ನಿರ್ಮಾಣವಾಗತೊಡಗಿತ್ತು.
    ತುಂಡು ಹಿಡುವಳಿ, ಕಡಿಮೆ ಪ್ರಮಾಣದಲ್ಲಿ ಕಬ್ಬು ಬೆಳೆಯುವುದು ಇತ್ಯಾದಿಗಳ ಜೊತೆಗೆ ಒಂದೆರಡು ದಿನಗಳಲ್ಲಿ ಮುಗಿದುಹೋಗುವ ಆಲೆಮನೆಗಳಲ್ಲಿ  ಮೊದಲಿದ್ದ ಬಾಂಧವ್ಯದ ವಾತಾವರಣ ಕಾಣಲು ಸಾಧ್ಯವೇ ಇಲ್ಲ. ಅದಕ್ಕೆ ತಕ್ಕಂತೆ ಬೆಲ್ಲದ ಬೆಲೆ ಗಗನವನ್ನು ಮುಟ್ಟಿದಾಗ ಬೆಳೆಗಾರರು ಕಬ್ಬಿನ ಬೆಳೆಯನ್ನು ವಾಣಿಜ್ಯಾತ್ಮಕ ದೃಷ್ಟಿಯಿಂದ ನೋಡುವುದು ಹೆಚ್ಚಾಯಿತು. ಅದು ಅನಿವಾರ್ಯವೂ ಆಯಿತು. ಅದಕ್ಕೆ ತಕ್ಕಂತೆ ಮಾರ್ಪಾಡುಗಳೂ ಬಂದವು.
    ಇಂತಹ ದಿನಗಳಲ್ಲಿ ಆಲೆಮನೆಯನ್ನು ಹಬ್ಬವಾಗಿ ಮಾಡುವ ಆಲೋಚನೆಗೆ ಮುಂದಾಗಿದ್ದು ಅಚ್ಚನಳ್ಳಿಯ ಮಂಜುನಾಥ ಹೆಗಡೆ ಹಾಗೂ ಮಿತ್ರರು. ತುಂಡು ತುಂಡು ಕಬ್ಬು ಬೆಳೆಗಾರರು ಒಂದೆಡೆಗೆ ಸೇರಿ ಒಂದೆರಡು ದಿನಗಳ ಬದಲಾಗಿ ಹಿಂದಿನ ದಿನಮಾನದಲ್ಲಿದ್ದಂತೆ ವಾರಗಟ್ಟಲೆ ಆಲೆಮನೆಯನ್ನು ಮಾಡಿ, ಆಲೆಮನೆಗೆ ಪ್ರವಾಸಿಗರನ್ನು ಕರೆತಂದು, ಮಾಹಿತಿ ನೀಡಿ ಕಬ್ಬು ಟೂರಿಸಂ ಮಾಡುವ ಆಲೋಚನೆಯನ್ನು ರೂಪಿಸಿ ಅದನ್ನು ಯಶಸ್ವಿಯಾಗುವಂತೆ ಮಾಡಿದವರು ಮಂಜುನಾಥ ಹೆಗಡೆ.
    ಮಂಜುನಾಥ ಹೆಗಡೆಯವರ ಕನಸಿನ ಆಲೆಮನೆ ಹಬ್ಬಕ್ಕೆ ಬೆನ್ನೆಲುಬಾಗಿ ನಿಂತಿದ್ದು ಶಿರಸಿಯ ಕದಂಬ ಮಾರ್ಕೇಟಿಂಗ್ ಸೊಸೈಟಿ ಮತ್ತು ಅದರ ಅಧ್ಯಕ್ಷ ಶಂಭುಲಿಂಗ ಹೆಗಡೆ ನಡಗೋಡ. ಈ ಹಬ್ಬ ಜ.11ರಂದು ನಡೆದು ಜ.16ರಂದು ಮುಕ್ತಾಯಗೊಂಡಿತು. ಅಚನಳ್ಳಿ, ದೊಡ್ನಳ್ಳಿ ಹಾಗೂ ಸುತ್ತಮುತ್ತಲ ಊರುಗಳ ಕಬ್ಬು ಬೆಳೆಗಾರರು ಸೇರಿ ಮಾಡುತ್ತಿರುವ ಈ ಆಲೆಮನೆ ಹಬ್ಬಕ್ಕೆ ಶಿರಸಿಯ ಕದಂಬ ಸಂಸ್ಥೆ ಪ್ರವಾಸೋದ್ಯಮದ ಕಲ್ಪನೆ ನೀಡಿತು. ವಾಣಿಜ್ಯೀಕರಣವನ್ನಾಗಿ ಮಾರ್ಪಡಿಸಿತು. ಹಬ್ಬಕ್ಕೆ ಆಗಮಿಸುವವರು 100 ರು.ನ ಟಿಕೆಟ್ ಖರೀದಿ ಮಾಡುವುದು ಅಗತ್ಯ. ಹಣ ಕೊಟ್ಟು ಟಿಕೆಟ್ ಪಡೆದ ಪ್ರವಾಸಿಗರಿಗೆ ತಕ್ಕ ಆಥಿತ್ಯವನ್ನು ಮಾಡಲಾಗುತ್ತದೆ. ಜೊತೆಯಲ್ಲಿ ಕಬ್ಬು ಬೆಳೆಗಾರನಿಗೆ ಹೆಚ್ಚಿನ ವರಮಾನವನ್ನೂ ಕಲ್ಪಿಸುತ್ತದೆ.
    ಹಬ್ಬಕ್ಕೆ ಆಗಮಿಸಿದವರಿಗೆ ಕಬ್ಬಿನ ಹಾಲಿನ ಜೊತೆಗೆ ನೊರೆಬೆಲ್ಲ ನೀಡಲಾಗುತ್ತದೆ. ನೂರು ರು. ನೀಡಿ ಟಿಕೆಟ್ ತೆಗೆದುಕೊಂಡವರಿಗೆ ಒಂದು ತೊಡದೇವು ಪ್ಯಾಕೇಟ್, ಮಿರ್ಚಿ ಬಜೆ ಪ್ಯಾಕೆಟ್, ಖಾಂದಾ ಬಜೆ ಪ್ಯಾಕ್, ಗೋಬಿ ಮಂಚೂರಿ ಹಾಗೂ ವಿವಿಧ ಸ್ನಾಕ್ಸ್ಗಳ ಪ್ಯಾಕೇಟನ್ನು ನೀಡಲಾಗುತ್ತದೆ. ಇಷ್ಟೇ ಅಲ್ಲದೇ ಆಲೆಮನೆಯ ಹಬ್ಬದಲ್ಲಿ ಸಾದಾ ಕಬ್ಬಿನ ಹಾಲಿನ ಜೊತೆಗೆ ಶುಂಟಿಯ ಕಬ್ಬಿನ ಹಾಲು, ಕಿತ್ತಳೆ ಹಣ್ಣು, ದಾಲ್ಚಿನ್ನಿ, ಲವಂಗ, ಲಿಂಬೆ ಹಾಗೂ ಮಜ್ಜಿಗೆ ಹುಲ್ಲಿನ ಕಬ್ಬಿನ ಹಾಲುಗಳೂ ಸವಿಯಲು ಸಿಗುತ್ತದೆ. ಸಾದಾ ಹಾಲಿಗಿಂತ ಹಾಗೂ ಅದರಷ್ಟೇ ವಿಶಿಷ್ಟ ರುಚಿಯ ಅನುಭವ ನೀಡುವ ಈ ರೀತಿಯ ಆರೋಗ್ಯಪೂರ್ಣ ಸುವಾಸನೆಯುಕ್ತ ಹಾಲುಗಳನ್ನು ಯಾರಾದರೂ ಕುಡಿದಲ್ಲಿ ಅವುಗಳಿಗೆ ಮಾರುಹೋಗುವುದು ಖಂಡಿತ.
    ಬೆಂಗಳೂರು, ಉತ್ತರ ಭಾರತ, ಬಿಹಾರ ಕಡೆಗಳಿಂದ ಬರುವ ಪ್ರವಾಸಿಗರಿಗಾಗಿ ಆಲೆಮನೆಯ ಕುರಿತು ಸಮಗ್ರ ಮಾಹಿತಿ ನೀಡಲಾಯಿತು. ಅಲ್ಲದೇ ಆಗಮಿಸುವ ಪ್ರವಾಸಿಗರಿಗೆ ಆಲೆಮನೆ, ಕಬ್ಬಿನಿಂದ ಬೆಲ್ಲ ತಯಾರಿಸುವ ಬಗೆ, ಕಬ್ಬನ ಹಾಲಿನಿಂದ ತಯಾರಿಸಬಹುದಾದ ಉಪ ಉತ್ಪನ್ನಗಳು,  ಸೇರಿದಂತೆ ಕಬ್ಬನ್ನು ಬೆಳೆಯುವುದು ಹೇಗೆ ಈ ಮುಂತಾದ ಎಲ್ಲ ವಿವರಗಳಿಗೆ ಮಾಹಿತಿಯನ್ನೂ ನೀಡಲಾಯಿತು. ಅನುಭವ ಟೂರಿಸ್ಟ್ ಮುಂತಾದ ಸಂಸ್ಥೆಗಳವರು ಆಲೆಮನೆ ಹಬ್ಬಕ್ಕೆ ಪ್ರವಾಸಿಗರನ್ನು ಕರೆತಂದಿದ್ದರು ಎಂದು ಹಬ್ಬದ ರೂವಾರಿಗಳಲ್ಲೊಬ್ಬರಾದ ಮಂಜುನಾಥ ಹೆಗಡೆ ಮಾಹಿತಿ ನೀಡುತ್ತಾರೆ.

    ಕಳೆದ ವರ್ಷ ಆಲೆಮನೆ ನಡೆಸುತ್ತಿದ್ದ ವೇಳೆ ಈ ಆಲೆಮನೆಯನ್ನೂ ಹಬ್ಬವನ್ನಾಗಿ ಮಾಡಿ ಆಲೆಮನೆ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯ ಮಾಡುವ ಆಲೋಚನೆ ಹೊಳೆಯಿತು. ಅಲ್ಲದೇ ಇದನ್ನೂ ಪ್ರವಾಸಿಗರನ್ನು ಕರೆತರುವ ತಾಣವನ್ನಾಗಿ ಮಾಡಬಹುದು. ಈ ಮೂಲಕ ಆಲೆಮನೆ ಲುಕ್ಸಾನು ಉಂಟು ಮಾಡದೇ, ಪ್ರವಾಸಿಗರನ್ನು ಕರೆತರುವ ಮೂಲಕ ಸಂಪೂರ್ಣ ಪ್ರವಾಸೋದ್ಯಮ ಹಾಗೂ ವಾಣಿಜ್ಯೀಕರಣಗೊಳಿಸುವ ಆಲೋಚನೆ ಬಂದಿತು. ಅದರ ಫಲವಾಗಿಯೇ ಈ ಹಬ್ಬವನ್ನು ನಡೆಸುತ್ತಿದ್ದೇವೆ ಎಂದು ಮಂಜುನಾಥ ಹೆಗಡೆ ವಿವರಿಸುತ್ತಾರೆ.
    ಒಟ್ಟಿನಲ್ಲಿ ಆಲೆಮನೆಯನ್ನು ವಿಶ್ವಕ್ಕೆ ಪರಿಚಯಿಸುವ, ಆಲೆಮನೆಯ ಮೂಲಕ ಪ್ರವಾಸಿಗರನ್ನು ಕರೆತರುವ ಹಾಗೂ ಅದರಲ್ಲಿ ವಿವಿಧತೆಗಳನ್ನು ಬಳಕೆ ಮಾಡಿಕೊಂಡು ವಾಣಿಜ್ಯಾತ್ಮಕವಾಗಿ ಹಬ್ಬವನ್ನಾಗಿ ಮಾಡಿದ ಅಚ್ಚನಳ್ಳಿಯ ಮಂಜುನಾಥ ಹೆಗಡೆಯವರ ಆಲೆಮನೆ ಹಬ್ಬ ಇತರ ಕಬ್ಬಿನ ಬೆಳೆಗಾರರಿಗೂ ಸ್ಫೂತರ್ಿಯಾಗುವುದರಲ್ಲಿ ಸಂದೇಹವೇ ಇಲ್ಲ. ಜೊತೆಗೆ ಮುಂದಿನ ದಿನಗಳಲ್ಲಿ ಶುಗರ್ಕೇನ್ ಟೂರಿಸಂ ಆಗುವ ಎಲ್ಲ ಸಾಧ್ಯತೆಗಳನ್ನೂ ಆಲೆಮನೆ ಹಬ್ಬ ಹುಟ್ಟುಹಾಕಿದೆ. ಈ ಹಬ್ಬದ ಕುರಿತು ನಿಮ್ಮಲ್ಲೂ ಕುತೂಹಲ ಮೂಡಿದ್ದರೆ ಯಾಕೆ ತಡ.. ಇಂತಹ ಪರಿಕಲ್ಪನೆಯನ್ನು ನೀವೂ ಮಾಡಿ..ಆಲೆಮನೆಯ ಹಬ್ಬ ಆಚರಿಸಿ.. ಹೆಚ್ಚಿನ ಮಾಹಿತಿ ನೀಡಲು ಮಂಜುನಾಥ ಹೆಗಡೆ 9483613900, 9036418230 ಅಥವಾ ಎಂ. ಎಸ್. ಹೆಗಡೆ 9483998511 ಈ ದೂರವಾಣಿ ಸಂಖ್ಯೆಯ ಮೂಲಕ ಪಡೆದುಕೊಳ್ಳಬಹುದಾಗಿದೆ.

    ಆಲೆಮನೆ ಹಬ್ಬಕ್ಕೆ ಕದಂಬ ಮಾರ್ಕೇಟಿಂಗ್ ಸಂಸ್ಥೆ ಬೆನ್ನೆಲುಬಾಗಿ ನಿಂತಿದೆ. ಸಹಾಯ, ಸಹಕಾರ, ಸಲಹೆಗಳನ್ನು ನೀಡುವ ಜೊತೆಗೆ ಈ ಆಲೆಮನೆಯಲ್ಲಿ ತಯಾರಾದ ಬೆಲ್ಲವನ್ನು ಸಂಸ್ಥೆ ಕೊಂಡು ಮಾರಾಟ ಮಾಡುತ್ತದೆ. ಕಬ್ಬು ಬೆಳೆಗಾರರಿಗೆ ಬೆಲ್ಲದ ದರ ವಿತರಿಸಲಾಗುತ್ತದೆ. ಆಲೆಮನೆಯನ್ನು ಹೊರ ಪ್ರದೇಶಗಳ ಪ್ರವಾಸಿಗರಿಗೆ ಪರಿಚಯಿಸುವ ನಿಟ್ಟಿನಲ್ಲಿ ಇದೊಂದು ಹೊಸ ಪ್ರಯತ್ನ
ಶಂಭುಲಿಂಗ ಹೆಗಡೆ
ಕೆ.ಎಂ.ಎಫ್. ನಿರ್ದೇಶಕ

    ನಮ್ಮೂರಿನ ಆಲೆಮನೆಯನ್ನೂ ಉದ್ಯಮವನ್ನಾಗಿ ಮಾಡಿ, ಪ್ರವಾಸಿಗರನ್ನು ಆಕಷರ್ಿಸುವುದು ನಮ್ಮ ಉದ್ದೇಶ. ಕೇವಲ ಕಬ್ಬು ಬೆಳೆದು ಆಲೆಮನೆ ಮಾಡಿ ಮುಗಿಸುವುದರ ಬದಲಾಗಿ ಹೀಗೆ ವಿವಿಧತೆಯನ್ನು ಅನುಸರಿಸಿ ಆದಾಯ ಗಳಿಸಬಹುದು. ಕಬ್ಬು ಬೆಳೆಗಾರರಿಗೆ ಇದೊಂದು ಹೊಸ ಆಶಯ ಮೂಡಿಸಬಲ್ಲದು. ಜೊತೆಗೆ ಆಲೆಮನೆ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯ ಮಾಡಬಹುದಾಗಿದೆ.
ಮಂಜುನಾಥ ಹೆಗಡೆ

Saturday, January 5, 2013

ಸೇಡು




ಸುತ್ತೆಲ್ಲ ಹೂವಿನ ಹಾರ
ಮಲ್ಲಿಗೆಯ ದಂಡೆ
ಮೊದಲ ನಿಶೆಯ ನಶೆಯ ದಿನ..|
ಮಿಲನದ ಜೋಡಿಯ ಸುಖದ
ಹುಚ್ಚು ಖೋಡಿಯ ದೇಹದ
ಅಡಿ ಬಿದ್ದು ಹೂ ಹಾರ
ನಲುಗಿತು, ಸೊರಗಿತು,
ಬಾಡಿ ಸೋತಿತು..||


ವ್ಯಕ್ತಿ ಸತ್ತ, ವಸಂತಗಳಾಚೆ
ಜನ ನೆರೆದರು, ಅತ್ತರು
ಹುಯ್ಯಲಿಟ್ಟರು....
ಸತ್ತ ವ್ಯಕ್ತಿಯ ಎದೆಯ
ಮೇಲೆ ನಿಂತಿತು ಹೂ ಹಾರ..|
ಕುಣಿಯಿತು, ಮೆಟ್ಟಿತು,
ಹಾಡಿತು, ನಕ್ಕಿತು..||


ಸೇಡು ತೀರಿಸಿಕೊಂಡಿತು..||


ಬರೆದಿದ್ದು05-10-2008ರಂದು ದಂಟಕಲ್ಲಿನಲ್ಲಿ