Tuesday, May 28, 2013

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು - ಭಾಗ 2

(ಎಂದೋ ಅರ್ಧ ಬರೆದಿಟ್ಟಿದ್ದ ನಮ್ಮ ಪ್ರವಾಸ ಕಥನಕ್ಕೆ ಮರು ಚಾಲನೆ.. ಈ ಪ್ರವಾಸ ಹೊರಟಿದ್ದು ನಾನು, ಕಿಟ್ಟು, ರಾಘವ ಹಾಗೂ ಮೋಹನ.. ಅದರ ಸಂತಸದ ಝಲಕ್ ಇಲ್ಲಿದೆ.)
(ಇಲ್ಲಿಯವರೆಗೆ.. ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಗುಂಡ್ಲುಪೇಟೆಗೆ ಬಂದಿದ್ದನ್ನು ಈ ಮೊದಲೇ ಹೇಳಿದ್ದೇನೆ.. ಹಳೆಯ ಪೋಸ್ಟನ್ನು ನೋಡಿ)

ಡವ ಡವ ನಡುಕವ..

ಮರುದಿನ ಮುಂಜಾನೆ 4 ಗಂಟೆಗೆಲ್ಲಾ ಎದ್ದು ಗುಂಡ್ಲುಪೇಟೆಯನ್ನು ಬಿಟ್ಟೆವು..
ರಾತ್ರಿ ಬಂಡಿಪುರ ಅರಣ್ಯದ ಬಾಗಿಲು ಮುಚ್ಚುತ್ತಾರೆ. ನಂತರ ಅದನ್ನು ತೆರೆಯುವುದು ಮುಂಜಾನೆಯೇ..
ಬೆಳಗಿನ ಕಾನನದ ನಿಸರ್ಗ ಸೌಂದರ್ಯವನ್ನು ಮಿಸ್ ಮಾಡ್ಕೋಬಾರದು ಎನ್ನುವ ದೃಷ್ಟಿಯಿಂದ ನಾವು ಮುಂಜಾನೆ ಹೊರಟೆವು.. ಅದಲ್ಲದೆ ಬಂಡಿಪುರ ಅರಣ್ಯ ತನಿಖಾ ಠಾಣೆಯಲ್ಲಿ ಸಾಕಷ್ಟು ಟ್ರಾಫಿಕ್ ಕೂಡ ಇರುತ್ತದೆಂಬುದು ನಮ್ಮ ಮುಖ್ಯ ಕಾರಣವಾಗಿತ್ತು.
ನಾವು ಅರಣ್ಯದ ಗೇಟ್ ತಲುಪುವ ವೇಳೆಗೆ ಆಗಲೇ ಗಂಟೆ ಐದನ್ನೂ ದಾಟಿತ್ತು..
ಮಧ್ಯದಲ್ಲಿ ಚಳಿ ನಡುಕ ಶುರುವಾಯಿತು ನೋಡಿ...
 ಹಲ್ಲು ಕಟ ಕಟ.. ಕೈಕಾಲು ಥರ ಥರ...
ಮೋಹನನಿಗೆ ಬೈಕ್ ಹೊಡೆಯುವ ಮನಸ್ಸೇ ಇಲ್ಲ..
ಅಲ್ಲೆಲ್ಲೋ ಒಂದು ಕಡೆ ಬೈಕ್ ನಿಲ್ಲಿಸಿದೆವು...
ರಸ್ತೆ ಪಕ್ಕದ ದರಕು, ಇತ್ಯಾದಿ ಸೇರಿಸಿ ಬೆಂಕಿ ಹಾಕಿಯೇಬಿಟ್ಟೆವು...
ಚಳಿ ಕಾಸಿದ ನಂತರವೇ ನಮ್ಮ ಕೈಗಳಿಗೆ ಜೀವ ಬಂದಿದ್ದು,,,!!!

ಅದ್ಯಾವುದೋ ಕಡೆ ಸೂರ್ಯ ನಿಧಾನವಾಗಿ ಬೆಳಗನ್ನು ಪಸರಿಸುತ್ತಿದ್ದ..
ಗುಂಡ್ಲುಪೇಟೆಯಿಂದ ಬಂಡಿಪುರದ ಕಡೆಗೆ ಹೋಗುವಾಗ ಬಲಭಾಗದಲ್ಲಿ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಕಾಣುತ್ತದೆ..
ಬಾನನ್ನು ಮುಟ್ಟಿದಂತೆ ಕಾಣುವ ಬೆಟ್ಟದ ಬೆಡಗು ಮೂಕ ವಿಸ್ಮಿತಗೊಳಿಸುತ್ತದೆ..
ನಾನು ಹಾಗೂ ಕಿಟ್ಟು ಇಬ್ಬರೂ ಅದೆಷ್ಟು ಬೆರಗುಗೊಂಡೆವೆಂದರೆ.. ಪದಗಳೇ ಸಾಲುತ್ತಿಲ್ಲ..
ರಾಘುವಿನ ಟಿವಿಎಸ್ ಎಕ್ಸಿಡಿ.. ಹಾಗೂ ಮೋಹನನ ವಿಕ್ಟರ್... ಝುಂ ಅನ್ನುತ್ತಿತ್ತು..

ಇಬ್ಬನಿ ಮಾಲೆ ಮಾಲೆಯಾಗಿ ಇಳಿಯುತ್ತಲಿತ್ತು....
10-15 ಮೀಟರ್ ದೂರದ ಇದುರು ಭಾಗ ಕಾಣುತ್ತಲೇ ಇಲ್ಲ...
ಇದೇ ಕಾರಣಕ್ಕೆ ಎದುರು ಬದಿ ಯಾರೇ ಬಂದರೂ ನಮಗೆ ಕಾಣುತ್ತಲೇ ಇರಲಿಲ್ಲ...
ಫೆ.19ರ ದಿನ..
ಇಬ್ಬನಿಯ ಕಾರಣದಿಂದಲೇ  ನಮಗೆ ಬಂಡಿಪುರದ ಕಾನನ ಸೌಂದರ್ಯ ಕೊಂಚ ತಪ್ಪಿಹೋಯಿತೆಂದರೂ ತಪ್ಪಿಲ್ಲ...
ಮುಂದೆ ಸಾಗಿದಂತೆ.. ಅದೊಂದು ಊರು.. ತಮಿಳಿನಲ್ಲಿ ಬರೆದಿತ್ತು ಹೆಸರು..
ಮಧುಮಲೆ ಅರಣ್ಯ ವ್ಯಾಪ್ತಿಯ ಒಳಗಿದೆ...
ಎದುರು ಭಾಗದಲ್ಲಿ ಒಂದು ದೈತ್ಯ ಆನೆ ನಿಂತಿದೆ....

ನನಗೆ ಏನೂ ಅನ್ನಿಸಲಿಲ್ಲ... ರಾಘುವಿನ ಬೈಕೇರಿ ಕುಳಿತಿದ್ದ ಕಿಟ್ಟು ಒಮ್ಮೆ ಹೌಹಾರಿದ್ದ...
ನಾನು, ರಾಘು ಆಗಲೇ ಅಧೇ ಮಾರ್ಗದಲ್ಲಿ ಊಟಿಗೆ ಒಂದು ಟ್ರಿಪ್ ಹಾಕಿ ಬಂದಿದ್ದರಿಂದ ಆ ಆನೆಯನ್ನು ಅದ್ಯಾವಾಗಲೋ ನೋಡಿದ್ದೆವು..
ಕಿಟ್ಟುವಿನ ಹೌಹಾರಿಕೆ ಕಂಡು ನನಗಂತೂ ಒಳಗೊಳಗೆ ನಗು...
ರಾಘವನ ಕ್ಯಾಮರಾ ಕಿಟ್ಟುವಿನ ಕೈಲಿತ್ತು...
ಬೈಕು ಚಲಿಸುತ್ತಿದ್ದಂತೆಯೇ ಪೋಟೋ ತೆಗೆಯುತ್ತಿದ್ದ...

ನಡುವೆ ತಮಿಳುನಾಡು ರಾಜ್ಯದ ಚೆಕ್ ಪೋಸ್ಟ್..
ಎಲ್ಲ ವಾಹನಗಳನ್ನೂ ಚೆಕ್ ಮಾಡುತ್ತಿದ್ದರು..
ನಾನು ರಾಘುವಿನ ಬೈಕ್ ಹೊಡೆಯುತ್ತಿದ್ದೆ..
ಹೆಲ್ ಮೆಟ್ ಹಾಕಿರಲಿಲ್ಲ..
ಹಿಂದೆ ಕುಳಿತ ರಾಘು ಹಾಕಿದ್ದ..
ಅಲ್ಲಿದ್ದ ಪೊಲೀಸ್ ಅಧಿಕಾರಿ ನನ್ನನ್ನು ನಿಲ್ಲಿಸಿ ಹೆಲ್ ಮೆಟ್ ಎಂದ...
ರಾಘುವನ್ನು ತೋರಿಸಿದೆ...
ಡೋಂಟ್ ಕ್ಯಾರ್ ಎಂದ...ಅಧಿಕಾರಿ..
ಪೇಪರ್ ಜಾಬಿತ್ತಲ್ಲ... ಪ್ರೆಸ್ ಕಾರ್ಡ್ ತೋರಿಸಿದೆ...
ಸಂಯುಕ್ತ ಕರ್ನಾಟಕದ ಜಾಬಿನಲ್ಲಿದ್ದ ಕಾಲ...
ಕನ್ನಡ ಪತ್ರಿಕೆ ಕಾರ್ಡು ತೋರಿಸಿದ್ದೇ ತಡ.. ಮತ್ತಷ್ಟು ಸಿಟ್ಟು ಏರಿತು ಅನ್ನಿಸುತ್ತದೆ...
ಸಿಟ್ಟಾಗಿ ಫೈನ್ ಹಾಕಿಯೇ ಬಿಟ್ಟ..

ಕಿಟ್ಟು.. ನಿನ್ನ ಜರ್ನಲಿಸಂ ಜಾಣತನ ಇಲ್ಲಿ ತೋರಿಸಬೇಡ ಮಾರಾಯ ಎಂದ..
ಒಂಥರಾ ಎನ್ನಿಸಿತು ನನಗೆ...ಅವಮಾನ..
ಝಾಡಿಸೋಣ ಎನ್ನಿಸಿಕೊಂಡರೂ ಸುಮ್ಮನಾದೆ..

ಅರ್ಣಯವಲಯ ದಾಟಿ ಕೊಂಚ ಮುಂದಕ್ಕೆ ಹೋದಂತೆ ರಸ್ತೆಯಲ್ಲಿ ಮಾರ್ಗ ಬದಲಾಯಿಸಬೇಕು...
ರಾಷ್ಟ್ರೀಯ ಹೆದ್ದಾರಿಯನ್ನು ಪಕ್ಕಕ್ಕೆ ಬಿಟ್ಟು ಇನ್ನೊಂದು ಸೀದಾ ಸಾದಾ ಹಾದಿಯಲ್ಲಿ ಹೋಗಬೇಕು..
ಆ ಮಾರ್ಗ ಹಿಡಿದೆವು.. ಊಟಿಗೆ ಮಾಸಿಲಮಣಿಯ ಮಾರ್ಗದಲ್ಲಿ ಹೋಗುವಂತಹ ದಾರಿ ಅದು.
ನಡುವೆಯೆಲ್ಲೋ ಹುಲಿ ರಕ್ಷಿತಾರಣ್ಯದ ಬೋರ್ಡಿತ್ತು...

ಕರ್ನಾಟಕ ಸರ್ಕಾರ ದ ಚಿತ್ರವೂ ಇತ್ತು... ಅರೆ ತಮಿಳುನಾಡಿನಿಂದ ಮತ್ತೆ ಕರ್ನಾಟಕಕ್ಕೆ ಬಂದೆವೆ..? ಎಂದು ಕೊಂಡೆವು...
ಸ್ವಲ್ಪ ಹೊತ್ತಿನ ನಂತರ ಮಾಸಿಲ ಮಣಿ ಎನ್ನುವ ಕರ್ನಾಟಕ ವ್ಯಾಪ್ತಯ ಊರು ಸಿಕ್ಕಿತು. ಸಂಪೂರ್ಣ ತಮಿಳರೇ ಇದ್ದ, ತಮಿಳು ಬೋರ್ಡುಗಳೇ ಇರುವ ಕರ್ನಾಟಕದ ಊರು.. ಸರಿಯಾಗಿ ಅಭಿವೃದ್ಧಿ ಮಾಡಿದ್ದರೆ ತಾಲೂಕಾ ಕೇಂದ್ರವಾಗಬಹುದಿತ್ತು.. ಅಂತಹ ಊರದು... ಕರ್ನಾಟಕದ ಯಾವುದೇ ರಾಜಕಾರಣಿ ಆ ಊರಿಗೆ ಹೋಗಿದ್ದಿಲ್ಲವೇನೋ... ಇಬ್ಬನಿಯ ಹಾಲೆಯೊಳಗೆ ಹುದುಗಿಹೋಗಿತ್ತು...

ಅಲ್ಲಿ ಹೋಗಿ ಹೊಟೆಲೊಂದನ್ನು ಹುಡುಕಿ ಬಿಸ್ಸಿ ಬಿಸ್ಸಿ ಮಸಾಲೆ ಟೀ ಕುಡಿದು .. ತಿಂಡಿ ತಿಂದೆವು... ಸೂರ್ಯ ಇಣುಕಿದ್ದ..
ಯಾವುದೋ ಕಲ್ಲುಬಂಡೆಯ ಮೇಲೆ ಆಡೊಂದು ಬಿಸಿಲು ಕಾಯಿಸುತ್ತಿತ್ತು...
ಕಿಟ್ಟು ಕ್ಯಾಮರಾ ಹಿಡಿದ...

ತಕ್ಷಣ ಎದ್ದು ನಿಂತ ಆಡು.. ಮೈ ಕೊಡವಿ.. ಮೊಖವನ್ನೊಮ್ಮೆ ತಿರುಗಿ ಪೋಸ್ ಕೊಟ್ಟಿತು... ಪೋಟೋ ತೆಗೆದ ಕಿಟ್ಟು ಥ್ಯಾಂಕ್ಸ್ ಎಂದರೆ ಆಡು ಕೇಳುತ್ತದೆಯೇ..? ಬೆನ್ನತ್ತಿತು... ಕೊನೆಗೆ ಬಾಳೆ ಹಣ್ಣಿನ ಹಪ್ತಾ ವಸೂಲಿ ಮಾಡಿ ಜಾಗ ಖಾಲಿ ಮಾಡಿತು...

ಮಾಸಿಲಮಣಿಯಲ್ಲಿ ನಮ್ಮದೂ ಪೋಟೋ ಸೆಷನ್ ನಡೆಯಿತು...
ಬೈಕೇರಿ ಊಟಿಯ ಗುಡ್ಡವನ್ನು ಹತ್ತಲು ಅನುವಾಗಿ ಹೊರಟೆ..
(ಮುಂದುವರಿಯುತ್ತದೆ..)



2 comments:

  1. ಹ್ಹೆ ಹ್ಹೆ ಹ್ಹೆ... ಆನೆ ನೋಡಿ ಬೆಚ್ಚಿ ಮಜವಾಗಿತ್ತು... ಮತ್ತೆ ಪ್ರೆಸ್ ಕಾರ್ಡು ತೋರಿಸಿದ್ದು ಕೂಡ ಚೆನ್ನಾಗಿತ್ತು... ಹೋತ(ಮೇಕೆ/ಆಡು)ಬೆನ್ನಟ್ಟಿದ್ದು ಇನ್ನೂ ಚೆನ್ನಾಗಿತ್ತು... ಹ್ಹ ಹ್ಹ ಹ್ಹಾ... ಮುಂದಿನ ಭಾಗಕ್ಕೆ ಕಾಯುತ್ತಿರುತ್ತೆನೆ, ಧನ್ಯವಾದ :-)

    ReplyDelete
  2. Kannadada nativity ge takkante badalayisalagide......

    ReplyDelete