Tuesday, May 28, 2013

ವಿಸ್ಮಯಗಳ ಗೂಡು ಈ ಮಲೆನಾಡು ಭಾಗ -3

    ಮಲೆನಾಡಿಗೆ ಮಲೆನಾಡೇ ಸಾಟಿ. ಇಲ್ಲಿನ ವೃಕ್ಷ ಸಂಕುಲ, ಪಕ್ಷಿ, ಮೃಗ ಸಮೂಹ ಇವುಗಳಿಗೆ ಮಲೆನಾಡನ್ನು ಬಿಟ್ಟರೆ ಬೇರೆ ಏನೂ ಇಲ್ಲ. ಇಲ್ಲಿನ ಕಾನನ-ತಾಣಗಳೆಲ್ಲ ನಿತ್ಯ ಹಸಿರು ಹಸಿರು.
    ಮಲೆನಾಡೇ ಹಾಗೆ ದೂರದಿಂದ ನೋಡಿದರೆ ಅರ್ಥವೇ ಆಗದು. ಒಳಹೊಕ್ಕರೆ ವಿಸ್ಮಯ ಲೋಕ. ಇಲ್ಲಿ ಸಿಕಾಡಗಳ ಮಧುರಾತಿ ಮಧುರ ಉಲಿಯಿದೆ. ರಕ್ತ ಹೀರುವ ಉಂಬಳಗಳ ಜೊತೆಯಿದೆ. ವಿಶಿಷ್ಟ ಎನ್ನಿಸುವ ಬಸವನ ಹುಳುಗಳಿವೆ. ಮಂಗಟ್ಟೆ ಹಕ್ಕಿಯ ಶ್ರೀಮಂತ ತಾಣವೂ ಇದೇ ಮಲೆನಾಡು. ಇಲ್ಲಿ ಬಣ್ಣಬಣ್ಣಗಳ ಅಣಿಬೆಗಳಿವೆ. ಮಿಗಿಲಾಗಿ ಹಸುರು ಎಲೆಯನ್ನೂ ಮರೆಸುವ ಹಸುರುಳ್ಳೆ ಹಾವಿದೆ. ಪ್ರೀತಿಯ, ದುರ್ಬೀನಿಗೆ ಮಾತ್ರ ಕಾಣಿಸುವಂತಹ ದಾಟುಬಳ್ಳಿ ಹಾವಿದೆ.
    ಜೊತೆ ಜೊತೆಗೆ ಇಲ್ಲಿ ನಮ್ಮನ್ನೇ ಆಕರ್ಷಿಸಬಲ್ಲಂತಹ ನಿಸರ್ಗ ಧಾಮಗಳಿವೆ. ಜಲಪಾತಗಳಿವೆ. ಮಹಾರಾಷ್ಟ್ರದಿಂದ ಕೇರಳದವರೆಗೆ ಹಬ್ಬಿರುವ ಪಶ್ಚಿಮ ಘಟ್ಟದ ಸೆರಗಿನಲ್ಲಿಯೇ ಇರುವ ಮಲೆನಾಡು ಎಂದರೆ ಮಲೆಗಳ ನಾಡು. ಭೂದೇವಿಯ ಮೊಲೆ ನಾಡು. ಇದೇ ಜೀವಸದೃಷ ಅಮೃತಸವಿಯನ್ನೂ, ಜೀವರಸವನ್ನೂ ಹಿಡಿದಿಟ್ಟ ತಾಣ.
    ಬಾನೆತ್ತರಕ್ಕೆ ಚಾಚಿ ನಿಂತ ಮರಗಳು ಮಲೆನಾಡಿಗೆ ಕಿರೀಟದಂತೆ ಕಂಡರೆ ಬಳುಕುವ ನದಿಗಳು ಹಳ್ಳಗಳು ಮಲೆನಾಡಿನ ಆಭರಣಗಳು. ಅಲ್ಲಲ್ಲಿ ಕಾಣುವ ಜಲಪಾತ ಆಭರಣದ ಹೊಳೆಯುವ ಮಣಿಗಳು. ಹಸಿರು ಕಾನನವೇ ಮಲೆನಾಡಿನ ಸೀರೆ. ಗಿರಿ ಕಂದರಗಳು ಮೇಳೈಸಿ, ಮೆರೆವ ಈ ನಾಡೇ ವಿಸ್ಮಯಗಳ ಗೂಡು. ಭುವಿಯ ಸ್ವರ್ಗ. ಬೊಮ್ಮನ ಕಲ್ಪನೆಯ ಪ್ರದೇಶ.
    ಯಾಕೋ ಗೊತ್ತಿಲ್ಲ....
    ಹುಟ್ಟುವಿಯಾದರೆ
    ಇಲ್ಲೇ ಇನ್ನು...
    ಈ ಮಲೆನಾಡಲ್ಲೇ ಅನ್ನು...
    ಎಂದು ಹಾಡೋಣ ಅನ್ನಿಸುತ್ತಿದೆ. ಕವಿ ದಿನಕರದ ಹಾಡುಗಳು ಹಾಗೇ ಸುಮ್ಮನೆ ಕಿವಿಯ ಮೇಲೆ ಸುಳಿದು ಹೋಗುತ್ತವೆ..
    ಬ್ರಹ್ಮ ಪುರಸೊತ್ತು ಸಿಕ್ಕಾಗ ಬಿಡಿಸಿದ ಚಿತ್ರವೇ ಮಲೆನಾಡು ಇರಬೇಕು. ಅಷ್ಟು ಸುಂದರವಾಗಿದೆ. ಸೊಗಸಾಗಿ ಮೂಡಿಬಂದಿದೆ. ಈ ನಾಡಿನಲ್ಲಿ ಭೀಮ, ಪರಶುರಾಮ ಅಡ್ಡಾಡಿದ್ದಾರಂತೆ. ಅಲ್ಲಲ್ಲಿ ಕುರುಹಗಳನ್ನು ಬಿಟ್ಟುಹೊಗಿದ್ದು ಈಗಲೂ ನಮಗೆ ಕಾಣಸಿಗುತ್ತದೆ. ದೇವತೆಗಳು ಇಲ್ಲೆಲ್ಲೋ ಬಂದು ಅಡಗಿ ಕುಳಿತಂತೆ ನಮಗೆ ಭಾಸವಾಗುತ್ತದೆ.
    ಇಲ್ಲಿ ನಿಸರ್ಗ ಮಾತೆ ನಿಂತು ಮೆರೆದಿದ್ದಾಳೆ. ಮೆರೆದು ನಲಿದಿದ್ದಾಳೆ. ನಲಿದು ಕುಣಿದಿದ್ದಾಳೆ. ಕುಣಿದು ದಣಿದಿದ್ದಾಳೆ. ದಣಿದು ಮೈಚೆಲ್ಲಿ ಮಲಗಿಬಿಟ್ಟಿದ್ದಾಳೆ. ಆಕೆಗೆ ಎಚ್ಚರವೇ ಇಲ್ಲ. ಅಂತಹ ಮೈಮರೆವಿನಲ್ಲಿಯೂ ಚೆಲುವು ಚೆಲ್ಲಿ ನಿಂತಿದೆ..
    ಯಾಕೋ ಗೊತ್ತಿಲ್ಲ.. ಇಂತಹ ಮಲೆನಾಡಿನ ನಡುವೆ ಕಳೆದುಹೋಗಬೇಕು ಎನ್ನಿಸುತ್ತಿದೆ. ಗವ್ವೆನ್ನುವ ಕಾಡುಗಳು, ಟ್ವಂಯ್ ಟ್ವಂಯ್ ಎಂದು ಕೂಗುವ ಸಿಕಾಡಗಳ ಸದ್ದಿನ ನಡುವೆ ನನ್ನನ್ನೇ ನಾನು ಮರೆತು ಬಿಡಬೇಕು ಎನ್ನಿಸುತ್ತಿದೆ. ಅದ್ವಾವನೋ ಅಧಿಕಾರಿ.. ಬ್ರಿಟೀಷರವನು.. ಉತ್ತರಕನ್ನಡದ ಕಾಡುಗಳನ್ನೆಲ್ಲ ಪಾದಯಾತ್ರೆಯ ಮೂಲಕ ಸುತ್ತಿದ್ದನಂತೆ.. ನನಗೂ ಅದೇ ಆಸೆ.. ಶಿವಾನಂದ ಕಳವೆಯಂತೆ ಮತ್ತೊಮ್ಮೆ ಕಾಡು ಮೇಡಿನ ಜಾಡು ಹಿಡಿದು ಸಾಗಬೇಕು.. ಆಗಾಗ ಕಣ್ಣೆದುರು ಬರುವ ಮೃಗ ಸಮೂಹಕ್ಕೆ ಹಾಯ್ ಹೇಳಿ ಬರಬೇಕು..ಅನ್ನಿಸುತ್ತಿದೆ..
    ಭಯವಾಗುತ್ತಿದೆ.. ವಿಸ್ಮಯಗಳ ಗೂಡಿಗೆ ಯಾರದ್ದೂ ದೃಷ್ಟಿ ತಾಗಿದಂತಿದೆ. ಒಂದಾದ ಮೇಲೆ ಒಂದರಂತೆ ಯೋಜನೆಗಳ ಶಾಪ ಬಂದೆರಗುತ್ತಿದೆ. ಯೋಜನೆಗಳ ಭಾರಕ್ಕೆ ಕಾಳಿ ನದಿ ಸುಸ್ತಾಗಿದೆ. ಭದ್ರಾ ಬಣ್ಣಕಳೆದುಕೊಂಡಿದ್ದಾಳೆ. ತುಂಗಿ ಅಳುತ್ತಿದ್ದಾಳೆ. ಶರಾವತಿಯ ಚೆಲುವು ಮರೆತಿದೆ. ಇನ್ನುಳಿದವುಗಳು ಅಘನಾಶಿನಿ, ನೇತ್ರಾವತಿ, ಗಂಗಾವಳಿ.. ಮುಂತಾದ ಮೂರೋ ನಾಲ್ಕೋ ನದಿಗಳು... ಅವುಗಳ ಕಡೆಗೂ ಆಡಳಿತ ಶಾಹಿಗಳ ಕಣ್ಣು ಬಿದ್ದಂತಿದೆ. ಅಘನಾಶಿನಿಗೆ ಅಣೆಕಟ್ಟು ಕಟ್ಟಿ ವಿದ್ಯುತ್ ಉತ್ಪಾದನೆಗೆ ತೊಡಗುವ ಹವಣಿಕೆ ಅವರದ್ದು. ನೇತ್ರಾವತಿಯನ್ನೇ ತಿರುಗಿಸಿ ಬಿಡುವ ಹೂಟವೂ ಅವರದ್ದು. ಆದರೆ ಬಲಿಯಾಗುವುದು ಮಾತ್ರ ಮಲೆನಾಡು. ಇಲ್ಲಿನ ಜೀವಿ ಸಂಕುಲ.
    ಈಗಲೇ ಹಲವಾರು ಯೋಜನೆಗಳಿಂದ ಬೆಂದಿದೆ ಮಲೆನಾಡು. ಇನ್ನೆಷ್ಟು ಯೋಜನೆಗಳು ಬೇಕೋ.. ಮಲೆನಾಡಿನ ಒಡಲು ಭೂದೇವಿಯ ಗುಡಿ. ಅದನ್ನು ಹಾಳುಮಾಡುವ ಯತ್ನ ನಡೆಯುತ್ತಿದೆ. ಅಧಿಕಾರ ಶಾಹಿಗಳಿಗೆ ಧಿಕ್ಕಾರ ಹೇಳೋಣ. ಮಲೆನಾಡಿನ ಮಡಿಲಲ್ಲಿ ನನಗೆ ವಾಸಸ್ಥಾನ ನೀಡಿ ಪೋಷಿಸುತ್ತಿರುವಾಕೆಗೆ ಥ್ಯಾಂಕ್ಸ್ ಹೇಳೋಣ.

No comments:

Post a Comment