Tuesday, December 11, 2012

ಎಲ್ಲ ಮರೆತಿರುವಾಗ (ಕಥೆ ಭಾಗ -7)

ಎಲ್ಲ ಮರೆತಿರುವಾಗ


ಭಾಗ -7

(ಇಲ್ಲಿಯವರೆಗೆ : ಮೆಂಟಲ್ ಆಗಿದ್ದ ಜೀವನ್ ರಚನಾ ಕೈಗೆ ಸಿಕ್ಕಿ ಸರಿಯಾದ.. ಅಂದುಕೊಂಡಂತೆ ಹಾಡುಗಾರನಾದ.. ನೀಯಾಕೆ ಹೀಗಾಗಿದ್ದೆ ಗೆಳೆಯಾ ಎಂದು ಕೇಳಿದ ರಚನಾಗೆ ತನ್ನ ಕಥೆಯನ್ನು ಹೇಳಲು ಪ್ರಾರಂಭ ಮಾಡಿದ್ದ ಆತ..ಮುಂದೆ.. ಓದಿ..)
-----------------
ನಮ್ಮೂರು ಮಲೆನಾಡಿನ ಪುಟ್ಟ ಹಳ್ಳಿ. ನಿಂಗೆ ಗೊತ್ತಲ್ಲ ರಚನಾ ನಿಮ್ಮೂರಿನ ತರಹವೇ. ಹಸಿರು ಗಿರಿ, ಗುಡ್ಡ, ಬೆಟ್ಟ, ಅಡಿಕೆ ತೋಟ, ಕರಡದ ಬ್ಯಾಣ.. ಇವೆಲ್ಲ ನಮ್ಮೂರಿನ ವಿಶೇಷ ಗುಣಲಕ್ಷಣಗಳು. ಅಪ್ಪ-ಅಮ್ಮ ಟಿಪಿಕಲ್ ಶಿರಸಿ ಭಾಗದ ಹವಿಗರು. ನಮ್ಮೂರಿನಲ್ಲಿ 8-10 ಮನೆಗಳಿವೆ. ನಮ್ಮೂರಿನಿಂದ ಮುಖ್ಯ ಪಟ್ಟಣ ಶಿರಸಿಗೆ ಬರಬೇಕೆಂದರೆ ಅನಾಮತ್ತು 6-8 ಕಿ.ಮಿ ನಡೆದು, ಬಸವಳಿದು ಬರುವ ಬಸ್ಸಿಗೆ ಕಾದು ಕಾದು ಸುಸ್ತಾಗಿ ಬರಬೇಕು. ಅಂತಹ ಹಳ್ಳಿ.
ನಮ್ಮೂರಿನ ಸುತ್ತ ಮುತ್ತೆಲ್ಲ ಕಗ್ಗಾಡು. ಕಗ್ಗಾಡೆಂದರೆ ಅಲ್ಲಿ ಕಡವೆ, ಕಾಡೆಮ್ಮೆ, ಕಪ್ಪು ಹುಲಿ, ಚಿರತೆ, ಹಂದಿ ಇವೆಲ್ಲ ಕಾಮನ್ನುಗಳು. ನಾನು ಪ್ರೈಮರಿ ಓದಿದ್ದೆಲ್ಲ ನಮ್ಮೂರು ಬಳಿಯ ಹಿ.ಪ್ರಾ. ಶಾಲೆಯಲ್ಲಿ. ಆಮೇಲೆ ನೆಂಟರ ಮನೆಯಲ್ಲಿ ಉಳಿದು ಹೈಸ್ಕೂಲು, ಪಿಯುಸಿಯನ್ನೂ ಮುಗಿಸಿದೆ. ಸರಿ, ಮುಂದೆ ಓದಬೇಕೋ ಬೇಡವೋ ಎಂಬ ಗೊಡವೆಯಲ್ಲಿದ್ದಾಗ ಹಲವರು ಡಿಗ್ರಿ ಮಾಡು ಅಂದರು. ಮನೆಯಲ್ಲಿ ಹರಪೆ ಬಿದ್ದು ಡಿಗ್ರಿಗೆ ಜಾಯಿನಾದೆ. ಅಲ್ಲಿಂದ ಬದಲಾಯಿತು ನನ್ನ ಬದುಕು. 
ನಾನು ಡಿಗ್ರಿಗೆ ಬರುವ ವೇಳೆಗೆ ಜಗತ್ತೆಂದರೆ ಹಾಗೆ, ಹೀಗೆ ಅಂತೆಲ್ಲ ಕನಸು ಕಂಡಿದ್ದೆ. ಡಿಗ್ರಿಯ ನಂತರವೇ ಜಗತ್ತಿನ ಬವಣೆ ಅರ್ಥವಾಗಿದ್ದು ನನಗೆ. ನಾನಂದುಕೊಂಡಂತಿಲ್ಲ ಜಗತ್ತು. ಅದು ಸಮ್ ಥಿಂಗ್ .. ಬೇರೆಯ ಥರಾ ಅಂದುಕೊಂಡೆ.. ನಿಧಾನವಾಗಿ ಬದಲಾಯಿತು ಬದುಕು.
ಇಷ್ಟರ ಜೊತೆಗೆ ಇನ್ನೊಂದೆರಡು ವಿಷಯ ಹೇಳಲೇ ಬೇಕು ನಿನಗೆ. ನಮ್ಮ ಮನೆಯ ಕುರಿತು ಒಂದು ವಿಷಯ ಆದರೆ ನಮ್ಮೂರಿನ ಕುರಿತು ಇನ್ನೊಂದು.  ನಮ್ಮ ಮನೆ.. ಎಲ್ಲ ಹವ್ಯಕರ ಮನೆಗಳಂತೆಯೇ ಮಧ್ಯಮವರ್ಗದ ಜನ. ಆರಕ್ಕೆ ಏರುವ ಕನಸು, ಮೂರಕ್ಕಿಳಿಯದಂತೆ ಜೀವನ ನಡೆಸುವ ಸರ್ಕಸ್ಸು.. ಮನೆಯ ಸದಸ್ಯರಿಗೆ ತಂದು ಹಾಕಲು ಒದ್ದಾಡುವ ಅಪ್ಪ. ಇದ್ದಿದ್ದರಲ್ಲೇ ಮೃಷ್ಟಾನ್ನ ಭೋಜನ ತಯಾರಿಸುವ ಅಮ್ಮ. ಹೈಸ್ಕೂಲು ಓದಲು 6-8 ಕಿ.ಮಿ ನಡೆಯುವ ತಂಗಿ. ಇದು ನಮ್ಮ ಆಗಿನ ಬದುಕು ಅಂದರೆ ನೀನು ನಂಬ್ತೀಯಾ ರಚನಾ?
ನಾನಂತೂ ಬಿಡು ಹುಡುಗ. ನನ್ನ ತಂಗಿಯ ಪಾಡು ಬಹಳ ಕೆಟ್ಟದಾಗಿತ್ತು. ಜೀವನ ಆ ಸಂದರ್ಭದಲ್ಲಿ ಅದೆಷ್ಟು ಕಷ್ಟವನ್ನು ನೀಡಿತೋ. ಪ್ರೈಮರಿ ಸ್ಕೂಲು ಓದಿದ ನಂತರ ಹೈಸ್ಕೂಲು ಓದಬೇಕಲ್ಲ. ಹೇಗೆ ಓದಿಸಲಿ ಅಂತ ತಿಳಿಯದೆ ಅಸಹಾಯಕನಾಗಿ ಕೈಚೆಲ್ಲಿದ್ದ ಅಪ್ಪ.  ಇಲ್ಲ ಓದಿಸೋಕೆ ಸಾಧ್ಯವೇ ಇಲ್ಲ ಅಂತ ಖಂಡತುಂಡವಾಗಿ ಹೇಳಿಯೂಬಿಟ್ಟಿದ್ದ. ಪಾಪ ತಂಗಿ. ಓದಬೇಕು ಅಂತ ಅಮ್ಮನ ಬಳಿ ಕಾಡಿ ಬೇಡಿದಳು. ಅಮ್ಮ ಅದ್ಯಾವ ಸಾಮಾನು ಡಬ್ಬದಲ್ಲಿ ಯಾವತ್ತು ಹುದುಗಿಸಿ ಇಟ್ಟಿದ್ದಳೋ, ಾ ಹಣವನ್ನು ಕೊಟ್ಟು ಹೈಸ್ಕೂಲಿಗೆ ಸೇರಿಸಿದ್ದಳು.

ಹೈಸ್ಕೂಲಿಗೆ ಹೋದರೆ ಮುಗಿಯಿತಾ? ಯುನಿಫಾರ್ಮ್ ಬೇಡವಾ, ಪಟ್ಟಿ, ಪುಸ್ತಕಗಳು ಬೇಡವಾ..? ಶುರುವಾಯಿತಲ್ಲ ಸಮಸ್ಯೆಗಳ ಸರಮಾಲೆ.. ಆಕೆ ನಮ್ಮೂರಿನಲ್ಲೇ ಇದ್ದ ಅವಳಿಗಿಂತ ಒಂದೆರಡು ವರ್ಷದ ದೊಡ್ಡ ವಾರಿಗೆಯಲ್ಲಿ ಅಕ್ಕನಾಗಬೇಕಾದ ಹುಡುಗಿಯಿಂದ ಹಳೆಯ ಪುಸ್ತಕಗಳನ್ನು ಪಡೆದಿದ್ದೂ ಆಗಿದೆ. ಜೊತೆಗೆ ಆಕೆಯೇ ಬಳಸಿ ಬಿಟ್ಟ ಯುನಿಫಾರ್ಮನ್ನೂ ಕೂಡ. ವಿಷಿತ್ರವೆಂದರೆ ಆ ಯುನಿಫಾರ್ಮ್ ಕೊಡುವಾಗಲೂ ಸಾಕಷ್ಟು ಬಯ್ದು ಕೊಟ್ಟಿದ್ದಳಂತೆ. 
ಯುನಿಫಾರ್ಮು ಡ್ರೆಸ್ಸು, ಹಳೆಯದು ಹೇಗಿತ್ತು ಅಂತೀಯಾ.. ಬಿಳಿಯ ಅಂಗಿ, ನೀಲಿ ಸ್ಕರ್ಟು. ಆ ಸ್ಕರ್ಟು ಕೂಡ ಸೊಂಟದ ಬಳಿ ಹರಿದುಹೋಗಿತ್ತು. ಹಾಕಿಕೊಂಡರೆ ಹಾಗೆಯೇ ಬಿದ್ದು ಬಿಡುತ್ತದೆಯೇನೋ ಎನ್ನಿಸುತ್ತಿತ್ತು. ಅದಕ್ಕೆ ಪಿಟ್ಟಾಗಿ ಪಿನ್ನನ್ನು ಸಿಕ್ಕಿಸಿಕೊಂಡು ಹೋಗುತ್ತಿದ್ದಳು ನನ್ನ ತಂಗಿ.
ಬಿಡು ಬವಣೆಯ ಕಾಲ ಅದು. ಆದರೂ ಸ್ಪೋರ್ಟ್ಸ್ ಅಂದರೆ ಆಗೆ ಎಂದೂ ಮುಂದು. ಓಡೋಕೆ ಬರ್ತಿರಲಿಲ್ಲ. ಆಡೋಕೆ ಬರ್ತಿರಲಿಲ್ಲ. ಮನೆಯಲ್ಲಿ ಪ್ರತಿದಿನ ಬೆಳಗಿನ ತಿಂಡಿ ಲೇಟಾಗುತ್ತಿತ್ತು. ಹೈಸ್ಕೂಲಿನ ಟೈಮಿಗೆ ಹೋಗಿ ತಲುಪಬೇಕಲ್ಲ. ಗಬಗಬನೆ ತಿಂಡಿ ತಿಂದು ವೇಗವಾಗಿ ನಡೆಯುತ್ತಿದ್ದಳು ನನ್ನ ತಂಗಿ. ಆಕೆ ನಡೆಯುವ ವೇಗ ಹೇಗಿತ್ತು ಅಂದ್ರೆ ಸಾಮಾನ್ಯರು ಅವಳ ಸರಿಸಮಕ್ಕೆ ನಡೆಯಬೇಕೆಂದರೆ ತುಸು ಓಡಲೇಬೇಕಿತ್ತು. ಅದನ್ನೇ ಅವಳ ಶಿಕ್ಷಕರೊಬ್ಬರು ಗುರುತಿಸಿ, ಪ್ರೋತ್ಸಾಹವನ್ನೂ ನಿಡಿದರು. ಅದಕ್ಕೆ ತಕ್ಕಂತೆ ಆಕೆ ಸ್ಥಳೀಯ,ಹೋಬಳಿ, ಜಿಲ್ಲಾಮಟ್ಟ, ವಲಯಮಟ್ಟಗಳಲ್ಲೂ ಗೆದ್ದು ರಾಜ್ಯಮಟ್ಟದವರೆಗೆ ಹೋಗಿಬಂದಿದ್ದಳು ಎಂಬುದನ್ನು ನಂಬುತ್ತೀಯಾ? ಆದರೂ ಚನ್ನಾಗಿ ಓದಿಯೂ ಎಸ್ಸೆಸ್ಸೆಲ್ಸಿಯಲ್ಲಿ ಒಂದು ಸಬ್ಜೆಕ್ಟಿನಲ್ಲಿ ಫೇಲಾದಳು.
ಬಿಡು ಛಲದಂಕಮಲ್ಲಿ ಆಕೆ. ಮತ್ತೆ ಪಾಸಾಗಿ, ಎಕ್ಸಟರ್ನಲ್ ಆಗಿ ಪಿಯು ಪಾಸು ಮಾಡಿ, ನಂತರ ಡಿಗ್ರಿಯನ್ನೂ ಮುಗಿಸಿ ಬಯಸಿದವನನ್ನೇ ಮದುವೆಯಾಗಿ ಈಗ ಆರಾಮಾಗಿದ್ದಾಳೆ. ಯಾಕೆ ಈ ವಿಷಯ ಹೇಳಿದೆ ಅಂದರೆ ನನ್ನ ಮನೆಯ ಹಾಗೂ ನನ್ನ ತಂಗಿಯ ವಿಷಯಗಳನ್ನು ಹೇಳಿದ ಹೊರತು ನನ್ನ ಬಗ್ಗೆ ಹೇಳಿದರೆ ಸರಿಯಾಗಿ ಅರ್ಥವಾಗೋಲ್ಲ.
ಇನ್ನು ನನ್ನ ವಿಷಯಕ್ಕೆ ಬರ್ತೀನಿ. ನಾನು ಕಾಲೇಜು ಸೇರಿದ ಸಮಯದಲ್ಲಿ ನಮ್ಮೂರಿನ ಪರಿಸ್ಥಿತಿ ಹೇಗಿತ್ತೆಂದರೆ ನಮ್ಮೂರಿನಿಂದ ನಾನೊಬ್ಬನೆ ಪ್ರತಿದಿನ ಶಿರಸಿಗೆ ಹೋಗಿ ಬರುತ್ತಿದ್ದೆ. ಆದ್ದರಿಂದ ಇಡೀಯ ನಮ್ಮೂರಿಗರು ತುರ್ತಾಗಿ ಏನಾದರೂ ತರಬೇಕಿದ್ದಲ್ಲಿ ನನ್ನನ್ನು ಸಂಪರ್ಕ ಮಾಡುತ್ತಿದ್ದರು. ಬೆಳಿಗ್ಗೆ ಎಷ್ಟೇ ಬೇಗನೆ ಎದ್ದು ತಯಾರಾದರೂ 6-8 ಕಿಮಿ ನಡೆದು ಕಾಲೇಜು ತಲುಪುವ ವೇಳೆಗೆ ಗಂಟೆ 11 ಆಗುತ್ತಿತ್ತು. ಗೆಳೆಯರೆಲ್ಲ ರೇಗಿಸುತ್ತಿದ್ದರು. ನಿನ್ನ ಮನೆಯಲ್ಲಿ ಸೂರ್ಯ 11ಕ್ಕೆ ಬರ್ತಾನಾ ಅಂತ.
ವಿಚಿತ್ರ ನೋಡಿ ಸುತ್ತ ದಶ ದಿಕ್ಕುಗಳೂ ಕಾಡು ಹಾಗೂ ಗುಡ್ಡಗಳಿಂದ ಆವೃತವಾಗಿದ್ದ ನಮ್ಮೂರಿಗೆ ಸೂರ್ಯನ ಮೊದಲ ಕಿರಣಗಳು ಬೀಳುತ್ತಿದ್ದುದು ಗಂಟೆ 11ಕ್ಕೆ. ಅಲ್ಲಿಯವರೆಗೂ ನಮ್ಮೂರನ್ನು ಇಬ್ಬನಿ ತಬ್ಬಿ ಆಳುತ್ತದೆ. ಆಗಲೂ.. ಈಗಲೂ.
ಸರಿ ನನ್ನ ಕಾಲೇಜು ಬದುಕಿನ ಕುರಿತು ಸ್ಪಲ್ಪವಾದರೂ ಹೇಳಬೇಕು. ಸ್ಪಲ್ಪವೇನು ಜಾಸ್ತಿಯೇ ಹೇಳಬೇಕು. ಯಾಕಂದರೆ ನನ್ನ ಬದುಕಿನಲ್ಲಿ ಔನ್ನತ್ಯ ಹಾಗೂ ಪಾತಾಳ ಎರಡನ್ನೂ ಕಾಣಿಸಿದ್ದು ಇದೇ ಕಾಲೇಜು ಬದುಕು ಎಂದರೆ ನೀನು ನಂಬಲೇ ಬೇಕು ರಚನಾ.
11 ಗಂಟೆಗೆ ಕಾಲೇಜಿಗೆ ಬರುತ್ತಿದ್ದೆನಾದ್ದರಿಂದ ಮೊದಲ ಎರಡು ಕ್ಲಾಸುಗಳು ಬಂಕಾಗಿರುತ್ತಿದ್ದವು. ಮತ್ತೆ ಮದ್ಯಾಹ್ನ 3ಅಥವಾ4ಕ್ಕೆ ಹೊರಡಲೇ ಬೇಕಿತ್ತು. ಇಲ್ಲವಾದಲ್ಲಿ ನಾನು ಕತ್ತಲೆಯಲ್ಲಿ ಕಾಡುಪಾಲಾಗುತ್ತಿದ್ದೆ. ಹೀಗಾಗಿ ಸಂಜೆಯೂ ಒಂದೆರಡು ಕ್ಲಾಸು ಬಂಕು. ನನ್ನ ಹಣೆಬರಹಕ್ಕೆ ನನಗೆ ದೋಸ್ತರ ದಂಡೂ ಬಹಳ ಇತ್ತು ನೋಡು.  ಆ ಕಾರಣಕ್ಕಾಗಿಯೇ ನಾನು ಅವರ ನಡುವೆ ಗೇಲಿಗೂ ತುತ್ತಾಗಿದ್ದೆ.
ಮೊದಲಿನಿಂದಲೂ ನಾನೊಂಥರಾ ಮೂಡಿ ಹುಡುಗ. ಎಲ್ಲೂ ತೆರೆದುಕೊಳ್ಳದ, ನನ್ನಷ್ಟಕ್ಕೆ ನಾನಿರುವ, ನನ್ನಲ್ಲೆ ನಾನು ಬಚ್ಚಿಟ್ಟುಕೊಳ್ಳುವ ಜಾಯಮಾನದವ. ಆ ಕಾರಣದಿಂದಲೇ ನನಗೆ ಗೊತ್ತಿಲ್ಲದ ನನ್ನೊಳಗಿನ ಅನೇಕ ವೈಶಿಷ್ಟಯಗಳು ಸುಪ್ತವಾಗಿದ್ದವು. ಈಗ ನನ್ನ ಕೈ ಹಿಡಿದಿರುವ ಸಂಗೀತವೂ ಅದರಲ್ಲಿ ಒಂದು.
ನಾನು ಹಾಡಬಲ್ಲೆ, ನಟನೆ ಮಾಡಬಲ್ಲೆ, ಅಪರೂಪಕ್ಕೆ ಬರೆಯಬಲ್ಲೆ ಎಂಬ ಯಾವ ಸಂಗತಿಗಳೂ ನನ್ನಿಂದ ಹೊರಬಂದಿರಲಿಲ್ಲ. ಆದರೆ ಕಾಲೇಜು ಲೈಫು ಅದಕ್ಕೊಂದು ವೇದಿಕೆಯಾಯಿತು.
ಈ ಸಂದರ್ಭದಲ್ಲೆ ನನ್ನ ಲೈಫಿನಲ್ಲಿ ಟರ್ನಿಂಗ್ ಪಾಯಿಂಟೂ ಬಂತು...

(ಮುಂದಿನದು.. ಇನ್ನೊಮ್ಮೆ...)

Monday, December 10, 2012

ನೀನು ಇಲ್ಲದ ವೇಳೆ : ಪ್ರೇಮ ಪತ್ರ-3

ಪ್ರೇಮ ಪತ್ರ-3

ನೀನು ಇಲ್ಲದ ವೇಳೆ

         ಅದೆಷ್ಟು ಸಹಸ್ರ ಸಾರಿ ನಾನು ನಿನ್ನನ್ನು ಮಿಸ ಮಾಡ್ಕೊಂಡಿದ್ದೀನಿ ಗೊತ್ತಾ..! ನಿನ್ನ ನೆನಪು ಬಂದಾಗಲೆಲ್ಲ ಜೊತೆಯಲ್ಲಿ ನೀನಿರಬೇಕಿತ್ತು ಕಣೆ ಅಂದ್ಕೊಂಡಿದ್ದೀನಿ. ಆಗೆಲ್ಲ ನಿನ್ನ ನೆನಪು ನನ್ನ ಕೈ ಹಿಡಿದಿದೆ.
    ಬೆಳಗಿನ ಮುಂಜಾನೆಯ ಸಂದರ್ಭದಲ್ಲಿ ಜಿಮ್ಮಿನಲ್ಲಿ ವರ್ಕೌಟ್ ಮಾಡುವಾಗ, ಸೆಮಿಸ್ಟರ್ ಮುಗಿದ ನಂತರ ಸಿಗುವ 15-20 ದಿನಗಳ ಬಿಡುವಿನ ವೇಳೆಯಲ್ಲಿ, ಸಂಜೆಯ ತಿಳಿ ಬೆಳಕಿನ ಓಡಾಟದಲ್ಲಿ, ಕಲ ಕಲನೆ ಹರಿಯುವ ಅಘನಾಶಿನಿಯ ಆಳದೊಡಲಿಗೆ ಧುಡುಮ್ಮನೆ ಜಿಗಿಯುವ ವೇಳೆಯಲ್ಲಿ, .. ಇನ್ನೂ ಅದೆಷ್ಟೋ ವೇಲೆಯಲ್ಲಿ ನಂಜೊತೆ ನೀನೂ ಇದ್ದಿದ್ರೆ ಅದೆಷ್ಟು ಹಿತವಾಗಿರ್ತಿತ್ತು.. ನನ್ನ ಜೊತೆ ನೀನು ಹೆಜ್ಜೆ ಹಾಕಿದ್ರೆ ಅದೆಷ್ಟು ಸೊಗಸಾಗಿತರ್ಿತ್ತು ಅಂತೆಲ್ಲಾ ಅಂದುಕೊಂದಿದ್ದೇನೆ.
    ನೀನು ನನ್ನ ಮನದಾಳದೊಳಗೆಲ್ಲೋ ಬಿಲ ತೋಡಿಕೊಂಡು ಕುಳಿತಿದ್ದೀಯಾ. ಹಾಗಾಗಿಯೇ ನೀನು ಬರಿ ನೆನಪಿಗೆ ಮಾತ್ರ ಬರ್ತೀಯಾ.. ಹಲೋ ಅಂದ್ರೆ ಮಾತಿಗೆ ಸಿಗೋಲ್ಲ.. ಸುಮ್ ಸುಮ್ನೆ `ಕಾಲ್ ಮಾಡು' ಅಂತೀಯಾ.. ಕಾಲ್ ಮಾಡಿದ್ರೆ ವಿಷಯವೇ ಇಲ್ಲ.. ಬರೀ ಕಾಡು ಹರಟೆ. ಮತ್ತೆ... ಮತ್ತೆ.. ಅನ್ನುವ ಶಬ್ದ ನಮ್ಮ ಒಂದು ಸಾರಿಯ ಸಂಬಾಷಣೆಯಲ್ಲಿ ಅದೆಷ್ಟೋ ಸಹಸ್ರ ಸಾರಿ ಇಣುಕಿ ಹೋಗುತ್ತೆ ಅಲ್ವಾ? ಬಿಡು.. ನೀನು ಅರಾಮಾಗಿ ಇದ್ದೀಯೇನೋ.. ನನಗೆ ನೆಮ್ಮದಿಯಿಂದೆ ನಿದ್ದೆ ಮಾಡೋಕಾದ್ರೂ ಬಿಡ್ತೀಯಾ ..? ಇಲ್ಲ.. ಕನಸ್ಸಿನಲ್ಲಿ ಬಂದುಯ ಕಾಡ್ತೀಯಾ.. !! ನಿಂಗೇನೋ ತುಂಟಾಟ. ತುಂಟ, ತಲರ್ೆ ಕ್ಷಣ. ಆದರೆ ನನ್ನ ಮನದ ಬೇಗುದಿ ನಿಂಗೆ ಹೇಗೆ ಅರ್ಥ ಆಗ್ಬೇಕು ಹೇಳು..
    ಆ ನಿನ್ನ ನಗು.. ಮನಸಾರೆ ಸಿನೆಮಾದಲ್ಲಿ ಐಂದ್ರಿತಾ ರೇ ತಿರುವುತ್ತಿದ್ದಳಲ್ಲ ಅಂತಹ ಮುಂಗುರುಳು ತಿರುಗಿಸುವಿಕೆ.. ಸುಮ್ಮನೆ ನಕ್ಕಂತೆ ಮಾಡುವ ಬಗೆ.. ಸಿಟ್ಟು ಬಂದಾಗ ರಂಗೇರುವ ಕೆನ್ನೆ ಇವೆಲ್ಲವನ್ನೂ ನಾನು ಅದೆಷ್ಟು ಮಿಸ್ ಮಾಡ್ಕೊಳ್ತಾ ಇದ್ದೀನಿ ಗೊತ್ತಾ.. ನಿನ್ನ ಬಯಕೆ ತುಂಬಿದ ಕಣ್ಣುಗಳನ್ನು ನನ್ನ ಕಣ್ಣುಗಳಲ್ಲಿ ತುಂಬಿಕೊಳ್ಳುವ ಆಸೆ. ಅದಕ್ಕಾಗಿ ಕಾತರಿಸಿ ಕುಳಿತಿದ್ದೇನೆ..
    ದೋಸ್ತರೆಲ್ಲಾ ನಿನ್ನ ನೆನಪಿನ ಬಗ್ಗೆ ನಾನು ಹೇಳುವುದನ್ನು ಕೇಳಿ ನಗ್ತಾ ಇದ್ದಾರೆ. ಆದರೆ ಅವರೂ ಲವ್ ಮಾಡಿದವರೇ ಅಲ್ವಾ.. ಅವರ ಸಂಗತಿ ಬಂದಕೂಡ್ಲೇ ಗಂಭೀರವಾಗೋದನ್ನು ನೋಡಬೇಕು. ಮಜವಾಗಿರುತ್ತದೆ. ಹೇಯ್ ಇನ್ನೊಂದ್ವಿಷ್ಯ, ನಾನು ಕವನ ಬರೀದೆ ಅದೆಷ್ಟು ದಿನ ಆಗಿತ್ತು ಗೊತ್ತಾ. ಬಹು ದಿನಗಳೇ ಸರಿದಿದ್ದವು. ನಿನ್ನ ನೆನಪು ಸವಿ ಸುಖದ ಸಾನ್ನಿಧ್ಯ, ಸಾಂಗತ್ಯ ನನ್ನನ್ನು ಮತ್ತೆ ಮತ್ತೆ ಬರೆಯಲು ಪ್ರೇರೇಪಿಸುತ್ತಿದೆ. ಕವನ ಕಟ್ಟುವಂತೆ ಮಾಡುತ್ತಿದೆ.
    ಗೆಳತೀ, ಯಾಕ್ಹೀಗೆ..?
    ನೀನೆಂಬ ಭೃಂಗವೆದೆಯ
    ಗೂಡಿಗೆ ಕಿಂಡಿಕೊರೆದು
    ನಿನ್ನ ನೆನಪನ್ನೇ ಭದ್ರವಾಗಿಸಿದೆಯಲ್ಲಾ...!!

ಹೀಗಾಗಿಬಿಟ್ಟಿದೆ ನನ್ನ ಬದುಕು.
    ಓ ಹಲ್ಕಟ್ಟು ಕೂಸೆ.. ಯಾವತ್ತು ಮತ್ತೆ ನನ್ನೆದುರು ಬರ್ತೀಯಾ? ಅದ್ಯಾವಾಗ ಬಂದು ನನ್ನ ಬಳಿ ಮಾತಾಡ್ತೀಯಾ ಅಂತ ಕಾದಿದ್ದೇನೆ.ನಿನ್ನನ್ನ ಭೇಟಿ ಮಾಡಿ ಮಾತಾಡುವ ಸವಿ ಘಳಿಗೆ ಅದೆಷ್ಟು ಬೇಗ ಬರುತ್ತೋ.. ಅಂತ ನನ್ನ ಕಣ್ಣ ಮುಂದೆರಡು ಭೂತಗನ್ನಡಿಗಳನ್ನು ಸಿಕ್ಕಿಸಿಕೊಂಡು ಕಾಯುತ್ತಿದ್ದೇನೆ. ಸವಿ ನೆನಪುಗಳು ಕರಗುವುದರೊಳಗೆ ಸಿಕ್ಕಿಬಿಡು ಮಾರಾಯ್ತಿ.
    ನಿಜ ಹೇಳಬೇಕೆಂದರೆ ನನ್ನ ಬದುಕಿಗೆ ನೀನೆಂಬುದು ಚೈತನ್ಯದ ಚಿಲುಮೆ. ನೀನು ಸಿಕ್ಕಾಗಲೆಲ್ಲ ನನ್ನ ಬದುಕೆಂಬ ಮೊಬೈಲಿನ ಬ್ಯಾಟರಿ ರೀಚಾರ್ಜ್ ಆದಹಂಗೆ ಅನ್ನಿಸುತ್ತದೆ. ನೀನು ಬಹಳ ಕಾಲ ಸಿಕ್ಕದೇ ಇದ್ದರೆ ಒಂದು ರೀತಿಯ ಮಂಕು ಆವರಿಸುತ್ತದೆ. ನೀನು ಸಿಕ್ಕಿಲ್ಲ ಅಂದರೆ ಯಾಕೋ ದಿನವೆಂಬದು ಯಾವಾಗಲೂ ಇಳಿ ಸಂಜೆಯ ಥರಾ ಕಾಣಿಸ್ತದೆ ನೋಡು. ನನ್ನ ಪಾಲಿಗೆ ಖುಷಿ ಕೊಡುವ ಅಘನಾಶಿನಿ ನದಿಯೂ ನನ್ನ ಬೇಸರ ಕಂಡು ಬೇಜಾರು ಮಾಡಿಕೊಳ್ಳುತ್ತದೆ. ಅದೇ ನೀನು ಸಿಕ್ಕ ದಿನ ಮಾತ್ರ ನನ್ನ ಉಲ್ಲಾಸ ಕಂಡು ತನಗೆ ಏನೋ ಆಯ್ತೆಂಬಂತೆ ಮತ್ತಷ್ಟು ಜುಳು ಜುಳು ಸದ್ದಿನೊಂದಿಗೆ ಕಾಕಾಲ ಗದ್ದೆಯ ಕಡೆಗೆ ನನ್ನ ಅಘನಾಶಿಸಿ ಹರಿದುಹೋಗುತ್ತಾಳೆ.
    ಇರ್ಲಿ ಬಿಡು. ನಾನೆಂದರೆ ಹೀಗೆ. ಭಾವುಕ. ನೀನು ಸಿಕ್ಕಿದ ಕೂಡಲೇ ಸೆಮಿಸ್ಟರ್ ರಜೆಯಲ್ಲಿ ಪಡೆದುಕೊಂಡ ಎಲ್ಲ ಅನುಭವಗಳ ಮೂಟೆಯನ್ನು ನಿನ್ನೆದುರಿಗೆ ಬಿಚ್ಚಿಡಬೇಕು. ದೇವಿಕೆರೆ ಏರಿಯ ಸಿಂಡೀಕೆಟ್ ಬ್ಯಾಂಕಿನ ಎದುರು ಸಿಗ್ತದಲ್ಲಾ ಬೇಯಿಸಿದ ಸೇಂಗಾ.. ಅದನ್ನು ತಿನ್ನುತ್ತಾ ನೀನು ಕೇಳಬೇಕು. ಬೇಗನೆ ಸಿಗು... ನಾನಂತೂ ಕಾಯ್ತಾ ಇರ್ತೀನಿ... ಅಲ್ಲಿಯವರೆಗೂ
    ನೀನೆಂದರೆ ನನ್ನೊಳಗೆ..
    ಏನೋ ಒಂದು ಸಂಚಲನ..

ಈ ಹಾಡು ಗುನುಗುತಾ ಇರ್ತೀನೀ.. ಬೇಗ ಬಾ ಪ್ಲೀಸ್..

ಇಂತಿ ನಿನ್ನವ
ಸೃಜನ

Sunday, December 9, 2012

ಹರಿಯುತಿರಲಿ ಅಂತರಗಂಗೆ

ಹರಿಯುತಿರಲಿ ಅಂತರಗಂಗೆ


ಹರಿಯುತಿರಲಿ ಎಂದೂ ಹೀಗೆ
ಬಾಳ ಅಂತರಗಂಗೆ
ಬತ್ತದಿರಲಿ ಕೊನೆಯ ತನಕ
ಅಂತರಾಳದ ತುಂಗೆ ||1||

ಕೊನೆಯ ತನಕ ತುಂಬಿಬರಲಿ
ಹೊಸತು ಹರಿವ ನೀರು
ಕೊಚ್ಚಿ ಕೊಚ್ಚಿ ಹೋಗುತಿರಲಿ
ಅಂತರಂಗದ ಕೆಸರು ||2||

ಈ ಗಂಗೆಗೆ ಉಸಿರಾಗಲಿ
ಭುವಿ-ಭಾನು-ಚೇತನಾ
ನೋವು-ದುಃಖ-ಬವಣೆಯೆಡೆಗೆ
ಮಿಡಿಯುತಿರಲಿ ಸ್ಪಂದನಾ ||3||

ಗಂಗೆಯೊಳಗೆ ಜನಿಸಿಬರಲಿ
ಶತ ಕನಸಿನ ಮೀನುಮರಿ
ಕನಸೆಲ್ಲವೂ ನನಸಾಗಲಿ
ಕರಗದಿರಲಿ ಜಾರಿ ||4||

ನಿಲ್ಲದಿರಲಿ ಅಂತರಗಂಗೆ
ಎಂದೂ ಹರಿಯುತಿರಲಿ
ಭಾವ-ಜೀವ-ಸ್ಫುರಿಸುತಿರಲಿ
ಎಂದೂ ನಲಿಯುತಿರಲಿ ||5||

ಒಂದು ಅಂತರಾತ್ಮದ ಕವಿತೆ.. ಭಾವಗಳು ಸ್ಪುರಿಸಿ ಕವಿತೆಯಾಗಿ ಹೊರ ಬರುತ್ತವೆ.. ಅಂತಹ ಭಾವನಾತ್ಮಕ ದಿನದಲ್ಲಿ ಬರೆದ ಕವಿತೆ ಇದು.
ದಂಟಕಲ್ಲಿನಲ್ಲಿ ಬರೆದ ಈ ಕವಿತೆ  ಹುಟ್ಟಿದ್ದು 28-11-2007ರಂದು

Saturday, December 8, 2012

ಉ.ಕ ರೋಧನ : ಭಾಗ-3

ಉ.ಕ ರೋಧನ ಭಾಗ-3

ಉತ್ತರಕನ್ನಡದ ಕುರಿತು ಬರೆದ ಮತ್ತಷ್ಟು ಚೌಪದಿಗಳು


ಗೂಡಿನ ವ್ಯಥೆ

ನನ್ನ ಉ,ಕವೊಂದು ಬೆಚ್ಚನೆಯ ಗೂಡು
ಈಗೀಗ ಆಗುತ್ತಿದೆ ಕಸದ ಬೀಡು|
ಒಡಲೊಳಗೆ ಕುದಿಯುತ್ತಿದೆ ಕೈಗಾ
ನಾಶಮಾಡಲು ಸಿದ್ಧವಾಗುತ್ತಿದೆ ಬೇಗ||

ಗುಬ್ಬಿಯ ಮೇಲೆ

ನನ್ನ ಉ.ಕವೊಂದು ಹಕ್ಕಿಮರಿ ಗುಬ್ಬಿ
ಯಾರೂ ಆದರಿಸಿಲ್ಲ ಬಾಚಿ ಹಿಡಿದು ತಬ್ಬಿ|
ತ್ಯಾಗಿಯಿದು, ಎಂದೆಂದೂ ಹಿಡಿದಿಲ್ಲ ಶಸ್ತ್ರ
ತೂಗುತಿದೆ ಇದರ ಮೇಲೆ ಯೋಜನೆಗಳ ಬ್ರಹ್ಮಾಸ್ತ್ರ||

ಪ್ರಾಣ-ಹರಣ

ನನ್ನ ಉ.ಕವೊಂದು ಯುಗಪುರುಷರ ನಾಡು
ಜೊತೆಗೆ ಉಂಟಲ್ಲ ಗಮ್ಯತೆಯ ಕಾಡು|
ಹಲವು ಮೃಗಜಂತುಗಳೇ ಇದರ ಮಾನ
ಎಲ್ಲವೂ ಕಳೆದುಕೊಳ್ಳುತ್ತಿವೆ ಈಗ ಪ್ರಾಣ||

ಪುಸ್ತಕದ ಕಥೆ

ನನ್ನ ಉ.ಕವೊಂದು ಹಳೇ ಪುಸ್ತಕ
ಓದಿದರೆ ಜ್ಞಾನ ತುಂಬುವುದು ಮಸ್ತಕ|
ತಿಂದುಬಿಟ್ಟಿದೆ ಅಲ್ಲಲ್ಲಿ ಹುಳವಿದರ ಪೇಜು
ಕಣ್ಣೆತ್ತಿ ನೋಡುವವರಿಲ್ಲ ಇದರ ಗೋಜು||

ಮೂರ್ತಿಯ ಕಥೆ

ಉತ್ತರಕನ್ನಡವೊಂದು ಸುಂದರ ಮೂರ್ತಿ
ಇದುವೇ ನನ್ನ ಕವನಕ್ಕೆ ಸ್ಫೂರ್ತಿ|
ಸುತ್ತೆಲ್ಲ ಹಬ್ಬಿಹುಸು ಭವ್ಯ ಮಲೆನಾಡು
ಇಂಚಿಂಚೂ ಸೂರೆಹೋಗುತ್ತಿದೆ ಇಲ್ಲಿಯ ಕಾಡು||

ಸಂಗೀತ-ರೋಗ

ನನ್ನ ಉ.ಕವೊಂದು ಸಂಗೀತದ ರಾಗ
ಆದರೆ ಅದಕ್ಕೆ ಹಿಡಿದಿದೆ ಹೊಸದೊಂದು ರೋಗ|
ಆಲಾಪನೆ ಮಾಡಿದರೆ ಬಾಯಲ್ಲಿ ಕೆಮ್ಮು
ಎದೆಯೊಳಗೆ ಕಟ್ಟಿದೆ ನೋವೆಂಬ ದಮ್ಮು||

 (ಉತ್ತರಕನ್ನಡದ ಬಗ್ಗೆ ಎಷ್ಟು ಬರೆದರೂ ಕಡಿಮೆ ನೋಡಿ... ಅದೊಂಥರಾ ಗಣಿ.. ಬಗೆದಷ್ಟೂ ಕಾಲಿಯಾಗುವುದಿಲ್ಲ.. ಆದರೆ ಯೋಜನೆಗಳ ಬಲಾತ್ಕಾರಕ್ಕೆ ಬಲಿಯಾಗುತ್ತಿರುವ ನನ್ನ ಜಿಲ್ಲೆಯ ಕುರಿತು ಇನ್ನೊಂದಷ್ಟು ಹನಿಗಳು...)

Wednesday, December 5, 2012

ಕತ್ತೆ ಹೇಳಿದ ಭವಿಷ್ಯ

ಕತ್ತೆ ಹೇಳಿದ ಭವಿಷ್ಯ

    ಬಹುತೇಕ ಎಲ್ಲರ ಬದುಕಿನಲ್ಲೂ ಇಂತಹ ಫನ್ನಿ ಅನ್ನಿಸೋ ಸಂದರ್ಭಗಳು ಬಂದೇ ಬಂದಿರ್ತವೆ. ಮಸ್ತ್ ತಮಾಶೆಯ, ಮುಜುಗರ ಉಂಟುಮಾಡಿದ, ವಿಲಕ್ಷಣವಾದ, ವಿಚಿತ್ರ ಅನ್ನಿಸುವ ಇಂತಹ ಘಟನೆಗಳು ಬಾಳ ಗೋಡೆಯಲ್ಲಿ ಹಾಗೇ ಸುಮ್ಮನೆ ಬಂದು ಸಂತಸ ನೀಡಿ ಹೋಗಿರುತ್ತದೆ. ಇಂತವುಗಳಿದ್ದರೇ ಬಾಳು ಸಮರಸ ಎನ್ನಬಹುದು.
    ನನ್ನ ಬಾಳಿನಲ್ಲಿ ನಡೆದ ಒಂದು ವಿಲಕ್ಷಣ ಘಟನೆಯನ್ನು ಹೇಳಬೇಕು. ಇದು ವಿಲಕ್ಷಣವೋ, ತಮಾಶೇಯೋ.. ಏನೋ ಒಂದು. ನಾನು 3 ನೇ ಕ್ಲಾಸೋ ಅಥವಾ ನಾಲ್ಕೋ ಏನೋ ಇರಬೇಕು. ಆಗ ನಡೆದಿದ್ದು. ಅದನ್ನು ನಿಮ್ಮೆದುರು ಹೇಳಲೇ ಬೇಕು... ಬಿಕಾಸ್ ಇಟ್ ಈಸ್ ಸೋ ಫನ್ನಿ ಯು ನೋ..(ಇಲ್ಲಿ ನೀವು.. ಮ್ಯಾಚ್ ಮುಗಿದ ನಂತರ ಪ್ರೆಸೆಂಟೇಶನ್ ಸೆರೆಮನಿಯಲ್ಲಿ ಮಾತನಾಡುವ ಧೋನಿ ಸ್ಟೈಲ್ ನೆನಪು ಮಾಡ್ಕೊಳ್ಳಿ..)
    ಸುಮಾರು 15-18 ವರ್ಷಗಳ ಹಿಂದಿನ ಕಥೆ. ಶಿರಸಿಯಲ್ಲಿ ಆ ವರ್ಷ ಜಾತ್ರೆಯ ಸಡಗರ. ಎರಡು ವರ್ಷಕ್ಕೊಮ್ಮೆ ನಡೆಯುವ ಶಿರಸಿ ಮಾರಿಕಾಂಬಾ ಜಾತ್ರೆ ಬಂತೆಂದರೆ ಆಗ ನಮಗೆಲ್ಲ ಹೊಸದೊಂದು ಲೋಕ ಅನಾವರಣವಾಗುತ್ತಿತ್ತು. ಪ್ರತಿ ಸಾರಿಯೂ ಜಾತ್ರೆ ಅಂದರೆ ನನಗೆ ನಿಂತಲ್ಲಿ ನಿಲ್ಲೋಕಾಗೋಲ್ಲ.. ಕುಂತಲ್ಲಿ ಕೂರೋಕಾಗೋಲ್ಲ.. ತುಂಡುಗುಪ್ಪಳದವನಾದ ನನಗೆ ಜಾತ್ರೆಗೆ ಹೋಗಿ, ಪೀಪಿಳಿ ತಂದು ಪುಂಯ್ ಅಂತ ಊದಿ, ಒತ್ತಿದರೆ ಪೆಕ್ ಪೆಕ್ ಅನ್ನೀ ಕುನ್ನಿ ಗೊಂಬೆಯನ್ನು ತಂದು ಎರಡೇ ದಿನಕ್ಕೆ ಅದನ್ನು ಹಾಳುತೆಗೆಯದಿದ್ದರೆ ನನಗೆ ಸಮಾಧಾನವೇ ಇರುತ್ತಿರಲಿಲ್ಲ. ಅಷ್ಟರ ಜೊತೆಗೆ ಜಾತ್ರೆ ತಿರುಗಬೇಕು, ಸರ್ಕಸ್ ನೋಡಬೇಕು, ತೊಟ್ಟಿಲು(ಜಾಯಿಂಟ್ ವೀಲ್) ಹತ್ತಬೇಕು, ಟೊರ ಟೊರದ ಮೇಲೆ ತಲೆ ತಿರುಗುವಂತೆ ಕುಣಿಯಬೇಕು ಎಂಬೆಲ್ಲ ನೂರೆಂಟು ಕನಸುಗಳ ಗುಚ್ಛ.
    ಜಾತ್ರೆಗೆ 15 ದಿನ ಇದೆ ಎನ್ನುವಾಗಲೇ ಮನೆಯಲ್ಲಿ ಹರಪೆ ಪ್ರಾರಂಭವಾಗುತ್ತಿತ್ತು. ಶಾಲೆಯಲ್ಲಿ ಜಾತ್ರೆಗೆಂತಲೇ ಒಂದೆರಡು ದಿನ ಕಳ್ಳ ಬೀಳುವುದು ಖಾಯಂ ಆಗಿತ್ತು. ಬಿಡಿ ನಮ್ಮ ತಾರಾ ಮೇಡಮ್ಮು (ಪ್ರೀತಿಯಿಂದ ತಾರಕ್ಕೋರು) ಅಂತಹ ನಮ್ಮ ತಪ್ಪನ್ನು ಮಾಫಿ ಮಾಡ್ತಿದ್ದರು. ಜಾತ್ರೆ ಬಂತೆಂದರೆ ಅಪ್ಪನಿಗೆ ನನ್ನ ಹಾಗೂ ತಂಗಿಯ ರಗಳೆಯನ್ನು ತಡೆಯಲು ಆಗುತ್ತಲೇ ಇರಲಿಲ್ಲ. ಓದಿನ ಸಂದರ್ಭಗಳಲ್ಲಿ ಅಮ್ಮ ನಮ್ಮನ್ನು ಹಿಡಿದು ಬಡಿದು, ಬಯ್ಯುತ್ತಿದ್ದರೂ ಇಂತಹ ವಿಷಯಗಳಲ್ಲೆಲ್ಲ ಪಕ್ಷಾಂತರ ಮಾಡುವ ಅಮ್ಮ ನಮ್ಮನ್ನು ಸಪೋರ್ಟ್ ಮಾಡಿ `ಒಂಚೂರು ಅವ್ರನ್ನ ಜಾತ್ರಿಗೆ ಕರ್ಕಂಡು ಹೋಗಿಬಂದ್ರೆ ಬತ್ತಿಲ್ಯನು..? ' ಎಂದು ಕೇಳುತ್ತಿದ್ದಳು. ಆಗ ಅಪ್ಪನಿಗೆ ಅನಿವಾರ್ಯವಾಗಿಬಿಡುತ್ತಿತ್ತು.
    ಸರಿ ಆ ವರ್ಷ ಅಪ್ಪ ಜಾತ್ರೆಗೆ ಕರೆದುಕೊಂಡು ಹೋದ. ಅದೇನು ಕಾರಣವೋ ತಂಗಿ ನನ್ನ ಜೊತೆಗೆ ಬಂದಿರಲಿಲ್ಲ. ಗತ್ತಾಗಿ ಜಾತ್ರೆ ತಿರುಗಿದೆ. ಸಂಜೆ ಟೈಮಿನ ರಶ್ಶಲ್ಲಿ ಮಾರಿಕಾಂಬಾ ಗದ್ದುಗೆಗೆ ಬಂದು ದೇವರಿಗಡ್ಡ ಬಿದ್ದಿದ್ದು ಆಗಿತ್ತು. ಹಣ್ಣು ಕಾಯಿ ಮಾಡಿಸುವಾಗ ಅಲ್ಲಿನ ಗಬ್ಬು ವಾಸನೆ ತಾಳಲಾರದೇ ಹೊಟ್ಟೆ ತೊಳೆಸಿ ಬಂದಂತಾಗಿ ಅಪ್ಪನ ಬಳಿ `ಇದೆಂತಕ್ ಹಿಂಗೆ ಗಬ್ಬು ವಾಸನೆ..? ' ಅಂತ ಕೇಳಿದ್ದಕ್ಕೆ `ಅದೆ ಅಲ್ಲಿ ಕಾಯಿ ವಡಿತ್ವಲಾ.. ಅದು ಅಷ್ಟು ವಾಸನೆ ಬರ್ತಾ ಇದ್ದು' ಎಂದು ಅಪ್ಪ ಹೇಳಿದ್ದಿನ್ನೂ ನೆನಪಿದೆ.
    ಸರಿ ಮುಂದೆ ಜಾತ್ರೆ ಪೇಟೆ ಎಂದು ಕರೆಸಿಕೊಳ್ಳುವ ಬೀಡಕಿ ಬಯಲು ಸುತ್ತಾಡಿ, ಬಳೆ ಪೇಟೆಯಲ್ಲಿ ತಿರುಗಿ, ನಟರಾಜ ರೋಡಿನಲ್ಲಿ ಉದ್ದಾನುದ್ದಕ್ಕೆ ಎರಡೆರಡು ಬಾರಿ ಓಡಾಡಿ, ತೊಟ್ಟಿಲು ಹತ್ತಿ, ಸರ್ಕಸ್ ನಡೆಯುವ ಕೋಟೆಕೆರೆಯ ಗದ್ದೆ ಬಯಲಿಗೆ ಹೋಗಿ ಬಂದದ್ದಾಯ್ತು. ಅಷ್ಟರ ವೇಳಗೆ ಅಪ್ಪನ ಜೇಬೂ ಸುಮಾರು ಬರಿದಾಗಿರಬೇಕು, ಸಿಡಿಮಿಡಿ ಪ್ರಾರಂಭವಾಗಿತ್ತಲ್ಲದೆ `ನೀ ಹಿಂಗೆ ರಗಳೆ ಮಾಡ್ತಾ ಇದ್ರೆ ಜಾತ್ರೆ ಪೇಟೆಲಿ ಬಿಟ್ಟಿಕ್ಕೆ ಹೋಗ್ತಿ ಹಾ..' ಎಂಬ ತಾಕೀತುಗಳೂ ಶುರುವಾಗಿದ್ದವು. ಎಲ್ಲ ಆಯಿತು. ಕೊನೆಯದಾಗಿ `ಭವಿಷ್ಯ ಹೇಳುವ ಕತ್ತೆಯನ್ನು ನೋಡುವ ಅಂತ ಅಪ್ಪನಿಗೆ ಹರಪೆ ಬಿದ್ದೆ. ಅಪ್ಪನಿಗೆ ಸಿಟ್ಟು ಬಂದರೂ, ಬಯ್ಯುತ್ತಲೆ ಕರೆದೊಯ್ದ.
    ಒಳಗಡೆ ದೊಡ್ಡ ವರ್ತುಲಾಕಾರದಲ್ಲಿ ಒಂದು ನಾಯಿ ಹಾಗೂ ಒಂದು ಕತ್ತೆ ಇದ್ದವು. ಅವುಗಳ ಮಾಲಿಕನೋ ಅಥವಾ ಗಾರ್ಡಿಯನ್ನೋ.. ಯಾರೋ ಒಬ್ಬಾತ ಕನ್ನಡ ಹಾಗೂ ಹಿಮದಿ ಭಾಷೆಯಲ್ಲಿ ಏನೇನೋ ಹೇಳುತ್ತಿದ್ದ, ಪ್ರಶ್ನೆಗಳನ್ನು ಕೇಳುತ್ತಿದ್ದ. ಆತನ ಮಾತನ್ನು ಕೇಳುತ್ತಿದ್ದ ಅವುಗಳು ಪ್ರಶ್ನೆಗೆ ಉತ್ತರ ಎಂಬಂತೆ ವ್ಯಕ್ತಿಗಳ ಮುಂದೆ ಹೋಗಿ ನಿಲ್ಲುತ್ತಿದ್ದವು. `ಅತ್ಯಂತ ಉದ್ದದ ವ್ಯಕ್ತಿ ಯಾರು ತೋರಿಸು..?' ಯಾರ ತಲೆಯಲ್ಲಿ ಅತ್ಯಂತ ಕಡಿಮೆ ಕೂದಲಿವೆ..? ಯಾರಿಗೆ ಅತ್ಯಂತ ಹೆಚ್ಚು ವಯಸ್ಸಾಗಿದೆ..? ಯಾರು ಅತ್ಯಂತ ಕುಳ್ಳರು..? ಹೀಗೆ ನೂರಾರು ಪ್ರಶ್ನೆಗಳನ್ನು ಕೇಳಿದ್ದಕ್ಕೆ ಕತ್ತೆ ಅಂತಹ ವ್ಯಕ್ತಿಗಳ ಮುಂದೆ ಹೋಗಿ ನಿಲ್ಲುತ್ತಿತ್ತು. ಅಂತಹ ಭವಿಷ್ಯ ಸುಮಾರು ಸತ್ಯವೂ ಆಗಿರುತ್ತಿದ್ದು ನನ್ನ ವಿಸ್ಮಯಕ್ಕೆ ಕಾರಣವಾಗಿತ್ತು.
    ಕೊನೆಗೊಮ್ಮೆ ಆ ಹಿಂದಿವಾಲಿ `ಈ ಗುಂಪಿನಲ್ಲಿರುವ ಅತ್ಯಂತ ಬುದ್ಧಿವಂತ ಹಾಗೂ ಚೂಟಿ ಹುಡುಗ ಯಾರು..?' ಎಂದು ಕೇಳಿದಳು. ಕತ್ತೆಗೆ ಬಹುಶಃ ತಲೆಕೆಟ್ಟಿತ್ತೇನೋ.. ಸೀದಾ ನನ್ನ ಎದುರು ಬಂದು ನಿಂತೇಬಿಟ್ಟಿತು. ನಾನೊಮ್ಮೆ ಕಕ್ಕಾಬಿಕ್ಕಿ. ಅಕ್ಕ-ಪಕ್ಕ, ಹಿಂದೆ ಮುಂದೆ ಎಲ್ಲ ನೋಡಿದೆ. ಕತ್ತೆ ನಿಂತಿದ್ದು ನನ್ನ ಬಳಿಯೇ. ನನಗೆ ಖುಷಿಯಾಗಬೇಕಿತ್ತು. ಊಹುಂ.. ಆಗಲಿಲ್ಲ. ಅವರ ಎದುರು ಮರ್ಯಾದೆಯೇ ಹೋದಂತಾಯಿತು. ಈ ಕತ್ತೆಯ ಬದಲು ಆ ನಾಯಿ ಆದ್ರೂ ನನ್ನೆದುರು ಬಂದು ನಿಲ್ಲಬಾರದಿತ್ತಾ.. ಅಂದುಕೊಂಡಿದ್ದಿದೆ.. ಕತ್ತೆ ಭವಿಷ್ಯ ನಿಜವೇ ಎಂದೆಲ್ಲಾ ಆಲೋಚನೆಗಿಟ್ಟುಕೊಂಡೆ ನಾನು. ಕತ್ತೆ ಭವಿಷ್ಯ ನುಡಿಯುವಷ್ಟು ಬುದ್ಧಿವಂತನೆ ನಾನು.. ಎಂಬ ಕ್ವಶ್ಚನ್ ಮಾರ್ಕ್ ಎದೆಯೊಳಗೆ..
    ಆ ಸಂದರ್ಭದಲ್ಲಿ ನಾನು ಹಾಗೆ ಚಿಂತಿಸಿದ್ದಕ್ಕೂ ಕಾರಣ ಇದೆ ನೋಡಿ... ಶಾಲೆಯಲ್ಲಿ ನಾನೆಂದರೆ ಬಹಳ ತಂಟೆಕೋರ, ಕಿಲಾಡಿ ಹುಡುಗ ಎಂಬ ಕುಖ್ಯಾತಿ ಇತ್ತು. `ಇಂವ ಓದಿದ್ರೆ ಜೋರಿದ್ದಿದ್ದ..' ಎಂಬ ಮಾತುಗಳು ನಮ್ಮ ಮಾಸ್ತರರಾದ ಸಿ. ಎಂ. ಹೆಗಡೆ ಅವರಿಂದ ನಾಲ್ಕಾರು ಬಾರಿ ಕೇಳಿದ್ದವು. ವಿಚಿತ್ರವೆಂದರೆ ನಾನು ಚನ್ನಾಗಿ ಓದುತ್ತಿದ್ದೆ. ಚನ್ನಾಗಿ ಬರೆಯುತ್ತಿದೆ. ಪಬ್ಲಿಕ್ ಪರೀಕ್ಷೆಯಲ್ಲಿ ಒಳ್ಳೆಯ ಮಾಕ್ಸರ್ುಗಳು ಬಿದ್ದು ಪಾಸಾಗಿದ್ದೇನೆ. ಆದರೆ ಶಾಲೆಯ ಟೆಸ್ಟುಗಳಲ್ಲಿ ಮಾತ್ರ ಪಾಸಿಗಿಂತ ಒಂದಂಕಿ ಮೇಲೆ ಇರುತ್ತಿದ್ದೆ.. ಅಂದರೆ ಸಕರ್ಾರದ ಲೆಕ್ಕದಲ್ಲಿ ಬಡತನ ರೇಖೆ ಅಂತಾರಲ್ಲ.. ಅಂತಹ ಮಾರ್ಜಿನ್ ಲೈನು. (ಇದಕ್ಕೆ ಕಾರಣ ಕೊನೆಗೆ ಗೊತ್ತಾಗಿದ್ದೆಂದರೆ ಮಾಸ್ತರ್ರು ಮಾಡುತ್ತಿದ್ದ ಹಕ್ಕಿಕತ್ತು ಅಂತ ಕೊನೆಗೆ ಗಿತ್ತಾಯಿತು.. ಅದನ್ನು ಇನ್ನೊಮ್ಮೆ ಹೇಳುವಾ.. ಆ ಸಂಗತಿ ಮಜವಾಗಿದೆ.,.)
    ಸರಿ ಕತ್ತೆ ಭವಿಷ್ಯ ಹೇಳಿತಲ್ಲ. ಇನ್ಯಾರಿದ್ದಾರ್ರೀ ನನ್ನ ಸಾಟಿ.. ಅದೆಂತದ್ದೂ ಹಮ್ಮು-ಬಿಮ್ಮು.. ತಲೆಯ ಮೇಲೆ. ಅಂದಿನಿಂದ ಪುಸ್ತಕ ಹಿಡಿಯುವುದು ಅರ್ಧಕ್ಕರ್ಧ ಬಂದಾಗಿತ್ತು. ಅಪ್ಪ-ಅಮ್ಮ ಬಯ್ದಾಗಲೆಲ್ಲ ಕತ್ತೆ ಭವಿಷ್ಯ ಹೇಳಿದ್ದನ್ನೇ ನೆನಪು ಮಾಡುತ್ತಿದ್ದೆ. ನನ್ನ ಬೆಲೆ ನಿಮಗೆ ಗೊತ್ತಾಗಲಿಲ್ಲ.. ಕತ್ತೆಗೆ ಗೊತ್ತಾಯಿತು ಎಂದು ಹೇಳುತ್ತಿದ್ದೆ. ಅಪ್ಪ-ಅಮ್ಮ ಅದೆಷ್ಟು ನಕ್ಕಿದ್ದರೋ. ಅವರ ನಗುವಿನ ಕಾರಣ ನನಗೆ ಆಗ ತಿಳಿದೇ ಇರಲಿಲ್ಲ.
    ಮುಂದಿನ ಪರಿಣಾಮ ಕೇಳಿ ಇನ್ನೂ ಮಜಬೂತಾಗಿದೆ. ಸರಿ ಆ ವರ್ಷ ಕತ್ತೆಯ ಭವಿಷ್ಯದ ನಶೆ ಯಾವ ರೀತಿ ಕೆಲಸ ಮಾಡ್ತಪ್ಪಾ ಅಂದ್ರೆ ಪಾಸಾಗಿದ್ದೇ ಪುಣ್ಯ ಎಂಬಂತಾಗಿತ್ತು. ಓದಿಗೆ ತಿಲಾಂಜಲಿ ಕೊಟ್ಟಿದ್ದೆ. ಕತ್ತೆ ಭವಿಷ್ಯ ನನ್ನನ್ನು ಮಳ್ಳು ಮಾಡಿತ್ತು. ಬಿಡಿ.. ಈ ಸಂಗತಿ ನನಗೆ ಈಗಲೂ ನೆನಪಾಗ್ತಾ ಇರ್ತದೆ. ಕತ್ತೆಯ ಭವಿಷ್ಯ ನನ್ನ ಪಾಲಿಗೆ ಗ್ರೇಡೋ..? ಡಿ.ಗ್ರೇಡೋ... ಊಹೂಂ.. ಒಂದೂ ತಿಳಿದಿಲ್ಲ. ಕತ್ತೆ ಭವಿಷ್ಯ ಹೇಳಿತ್ತು. ಹಿಂಗಾಗಿತ್ತು. ಅನ್ನೋ ಸುಂದರ ಸಂದರ್ಭ ನೆನಪಿದೆ. ಇದಕ್ಕಾಗಿ ಹೆಮ್ಮೆ ಪಡಲೋ, ಕತ್ತೆ ಭವಿಷ್ಯ ಹೇಳ್ ಬಿಡ್ತು.. ತಥ್ ನನ್ಮಗಂದು... ಅಂತ ವ್ಯಥೆ ಪಡಬೇಕೋ... ಊಹೂಂ ಏನೋಂದು ಗೊತ್ತಾಗಲಿಲ್ಲ.
    ಇಂತಹ ಮಜಬೂತು ಸಂಗತಿಗಳು ನಿಮ್ಮಲ್ಲೂ ಅನೇಕ ಇರುತ್ತವೆ. ಅವೆಲ್ಲ ಏಕಾಕಿತನದಲ್ಲಿ ನೆನಪಾದಾಗ ಕೊಡುವ ಅನುಭೂತಿ ಇದೆಯಲ್ಲ.. ಆಹ್.. ಅದೆಷ್ಟು ಮಜಬೂತು ಅಂತೀರಿ... ಹೋಗ್ಲಿ ಬಿಟ್ಹಾಕಿ.. ಇದು ಹ್ಯಾಂಗಿದೆ ಅನ್ನೋದನ್ನು ಹೇಳಿ ..

ಉ.ಕ ರೋಧನ : ಭಾಗ-2

ಉ.ಕ ರೋಧನ ಭಾಗ-2

ಉತ್ತರಕನ್ನಡದ ಕುರಿತು ಬರೆದ ಮತ್ತಷ್ಟು ಚೌಪದಿಗಳು


ಒಡಲ ವ್ಯಥೆ

ನನ್ನ ಉ.ಕದೆಡೆಗೆ ಬರೆದಷ್ಟೂ ಮುಗಿಯವು.,
ಬಂದ ಯೋಜನೆಗಳು ಬಂದಷ್ಟೂ ನಿಲ್ಲವು..|
ವನ, ಅರಣ್ಯ, ಭೂ ಸಂಪತ್ತುಗಳೇ ಇದರ ಒಡಲು
ಕತ್ತರಿಸಿ ಕೊಲ್ಲಲಾಗುತ್ತಿದೆ ಪ್ರತಿದಿನವೂ ಇದರ ಕೊರಳು||

ಕುತ್ತು-ಯೋಗ
ನನ್ನ ಉ.ಕಕ್ಕೆ ಬಂತೊಂದು ಹೊಸ ಕುತ್ತು
ಅಂತೆ ಕಾರವಾರ ಮರಾಠಿಗರ ಸ್ವತ್ತು|
ಎಲ್ಲದರ ಜೊತೆಗೆ ಇದು ಹೊಸದೊಂದು ರೋಗ
ಒಟ್ಟಿನಲ್ಲಿ ಉ.ಕ ಸಿಕ್ಕವನಿಗೆ ರಾಜಯೋಗ||

ಒಡಲು-ಗುಂಡಿ
ನನ್ನ ಉ.ಕವೆ ಒಂದು ಪ್ರೀತಿಯ ಒಡಲು
ಭೋರ್ಗರೆಯುತ್ತಿರುತ್ತದೆ ಕಾರವಾರದ ಕಡಲು
ನೋಡಲು ಸುಂದರ ಕಣೆ ಆ ಊರು ತದಡಿ
ಉಷ್ಣ ಸ್ಥಾವರಕ್ಕಾಗಿ ನಡೆದಿದೆ ಗಂಡಾಗುಂಡಿ||

ನದಿ-ಬೇರು
ನನ್ನ ಉ.ಕವೆ ಒಂದು ಗಮ್ಯ ನದಿ
ಕಟ್ಟಿದರು ಅಣೆಕಟ್ಟು ಹಲವು ಬದಿ
ಕುಡಿ ಕುಡಿದು ಬತ್ತಿದರೂ ಶುಭ್ರ ನೀರು
ಕಡಿಯುವುದ ಬಿಡಲಿಲ್ಲ ಇದರ ಬೇರು||

ಗೋವಾದ ಆಸೆ
ನನ್ನ ಉಕದ ಮೇಲೆ ಎಲ್ಲರಿಗೆ ಕಣ್ಣು
ಗೋವಾವೂ ಬಯಸುತಿದೆ ಇದರ ಮಣ್ಣು|
ಏನಿರಲಿ ಇದರ ಸಂಪತ್ತು ಮಾತ್ರ ಇಷ್ಟ
ಕೇಳುವವರು ಮಾತ್ರ ಇಲ್ಲ ನನ್ನೊಡಲ ಕಷ್ಟ||

ಸಂಪತ್ತಿಗಾಗಿ
ನನ್ನ ಉಕವು ಎಂದೂ ಕನ್ನಡದ ಸ್ವತ್ತು
ಗೋವಾ, ರಾಷ್ಟ್ರದಿಂದ ಬರುತ್ತಿದೆ ಇದಕೆ ಕುತ್ತು|
ಈ ನಾಡೇ ಒಂದು ಸುಂದರ ವನಸಿರಿ
ಸಂಪತ್ತುಗಳೇ ಇದರೊಡಲಿಗೆ ಮಾರಿ||

ನಿಸರ್ಗ ಗಮ್ಯ ಉತ್ತರಕನ್ನಡದ ಕುರಿತು ಬರೆದಷ್ಟೂ ಕಡಿಮೆ ಕಣ್ರೀ.. ಬರೆ ಬರೆದಂತೆಲ್ಲ ಭಾರವಾದ ನಿಟ್ಟುಸಿರು ಮನದಲ್ಲಿ ಮೂಡಿತ್ತದೆ. ಯೋಜನೆಗಳು ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ಕಡಿಮೆ ಇದೆ. ಆದರೆ ಇರುವ ಯೋಜನೆಗಳೆಲ್ಲ ಮಾರಕ.. ಹಾನಿಕಾರಕ.. ಕ್ಯಾನ್ಸರ್ ಹೆಚ್ಚಳಕ್ಕೆ ಕಾರಣವಾಗುತ್ತಿರುವ ಕೈಗಾ, ಮೀನುಗಾರರನ್ನು ಒಕ್ಕಲೆಬ್ಬಿಸಿದ ಸೀಬರ್ಡ್, ಅಡಿಕೆ ಬೆಳೆಗಾರರ ಒಡಲಿಗೆ ಕೊಳ್ಳಿ ಇಡಲು ತವಕಿಸುತ್ತಿರುವ ಅಣೇಕಟ್ಟುಗಳೆಂಬ ಗುಮ್ಮ... ಒಂದೇ ಎರಡೇ... ಬರೆದಷ್ಟೂ ಮುಗಿಯೋದಿಲ್ಲ... ಇಂತಹ ಹತಾಶೆಯ ಸಂದರ್ಭದಲ್ಲಿ ಹುಟ್ಟಿದ ಕೆಲವು ಸಾಲಿಗಳಿಲ್ಲಿವೆ.. ಓದಿ ನೋಡಿ..

Monday, December 3, 2012

ಆಡುವ ವಯಸ್ಸಿನಲ್ಲಿ ಕಾಡಿದ ಕ್ಯಾನ್ಸರ್...

ಆಡುವ ವಯಸ್ಸಿನಲ್ಲಿ ಕಾಡಿದ ಕ್ಯಾನ್ಸರ್...

ಇವನಿಗೆ ನೀವು ಸಹಾಯ ಮಾಡ್ತೀರಾ...??

ಆತನಿಗಿನ್ನೂ ಹದಿನಾಲ್ಕು ವರ್ಷ. ಶಾಲೆಗೆ ಹೋಗುತ್ತಾ, ಆಟವಾಡುತ್ತ ಬದುಕಬೇಕಿದ್ದ ವಯಸ್ಸು. ಆದರೆ ಆಡುವ ವಯಸ್ಸಿನಲ್ಲಿ ಕಾಡಿದ ಕ್ಯಾನ್ಸರ್ ಭೂತ ಆತನ ಜೀವನವನ್ನೆ ತಿಂದು ಹಾಕುತ್ತಿದೆ.
    ಶಿರಸಿ ತಾಲೂಕಿನ ದಾಸನಕೊಪ್ಪ ಗ್ರಾ.ಪಂ ವ್ಯಾಪ್ತಿಯ ಧನಗನಹಳ್ಳಿಯ ನಿವಾಸಿಯಾದ ಹಜರತ್ ಅಲಿಯ ಪುತ್ರ ನೌಶಾದ್ ಅಲಿ ಎಂಬ ಬಾಲಕನಿಗೆ ಕ್ಯಾನ್ಸರ್ ಕಾಯಿಲೆ ಬಂದಿದ್ದು, ಜೀವನವನ್ನೇ ಮಂಕಾಗಿಸಿದೆ. ಕಾಯಿಲೆಯಿಂದಾಗಿ ಶಾಲೆಗೆ ಹೋಗಲಾಗದೇ, ಇತರ ಮಕ್ಕಳ ಜೊತೆ ಆಡಲಾಗದೇ ದಿನಗಳನ್ನು ಕಳೆಯುವಂತಹ ಪರಿಉಸ್ಥಿತಿ ಎದುರಾಗಿದೆ.
    ಕ್ಯಾನ್ಸರ್ ಪೀಡಿತ ಬಾಲಕ ಶಾಲೆಗೆ ಹೋಗುತ್ತಿದ್ದರೆ ಇಷ್ಟರ ವೇಳೆಗೆ 9ನೇ ತರಗತಿಯಲ್ಲಿ ಓದುತ್ತಿದ್ದ. ಆದರೆ ವಿಧಿಯಾಟದ ಪರಿಣಾಮ ಆತ ಶಾಲೆಗೆ ಹೋಗುವುದನ್ನು ಮೊಟಕುಗೊಳಿಸಿದೆ. ಮನೆಯಲ್ಲಿ ಕಡುಬಡತನದ ಕಾರಣ ತಂದೆ ಹಜರತ್ ಅಲಿ ಮಗನಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಹಣ ಹೊಂದಿಕೆ ಮಾಡಲಾಗದೇ ಕಷ್ಟಪಡುತ್ತಿದ್ದಾರೆ.
    ಕಳೆದ ಒಂದು ವರ್ಷದ ಹಿಂದೆ ಆಟವಾಡುತ್ತಿದ್ದ ನೌಶಾದ್ ಇದ್ದಕ್ಕಿದ್ದಂತೆ ಜಾರಿಬಿದ್ದ. ಬಿದ್ದ ಪರಿಣಾಮ ಆತನ ಎದೆಯ ಭಾಗಕ್ಕೆ ಬಲವಾದ ಹೊಡೆತ ಬಿದ್ದು ಅಲ್ಲೊಂದು ದೊಡ್ಡ ಗಡ್ಡೆಯಾಯಿತು. ಅದಕ್ಕೆ ಪ್ರಾಥಮಿಕ ಚಿಕಿತ್ಸೆಯನ್ನೂ ಕೊಡಿಸಲಾಯಿತು. ಪ್ರಾರಂಭದಲ್ಲಿ ಚಿಕ್ಕದಾಗಿದ್ದ ಗಡ್ಡೆ ಒಂದೆರಡು ದಿನಗಳಲ್ಲಿಯೇ ದೊಡ್ಡದಾಗಲು ಪ್ರಾರಂಭಿಸಿತು. ಜೊತೆಗೆ ಜ್ವರವೂ ಬಂದ ಪರಿಣಾಮ ನೌಶಾದ್ ಅಲಿಯನ್ನು ತಂದೆ ತಾಯಿಯರು ಶಿರಸಿಯ ಒಂದೆರಡು ಆಸ್ಪತ್ರೆಗೆ ಕರೆದುಕೊಂಡು ಹೋದರು.
    ಶಿರಸಿ ಪಟವರ್ಧನ್ ಆಸ್ಪತ್ರೆಯಲ್ಲಿ ಮೊದಲು ಪರೀಕ್ಷೆ ಮಾಡಲಾಯಿತು. ನಂತರ ಬಳಗಂಡಿ ವೈದ್ಯರನ್ನು ಸಂಪಕರ್ಿಸಿದರೂ ಪರಿಣಾಮ ಕಾಣಲಿಲ್ಲ. ಕೊನೆಗೆ ಡಾ. ದಿನೇಶ್ ಶೆಟ್ಟಿ ಅವರ ಬಳಿಯೂ ಚಿಕಿತ್ಸೆ ಕೊಡಿಸಲಾಯಿತು. ಈ ಆಸ್ಪತ್ರೆಗಳಲ್ಲಿ ಗಡ್ಡೆಯ ನೀರನ್ನು ತೆಗೆದು ಕಳಿಸಿದರಾದರೂ ಮತ್ತೆ ಕೆಲವು ದಿನಗಳಲ್ಲಿ ಗಡ್ಡೆ ಊದಿಕೊಂಡಿತು. ಇದರಿಂದ ಪರೀಕ್ಷೆ ಮಾಡಿದ ವೈದ್ಯರು ನೌಶಾದ್ನನ್ನು ಉನ್ನತ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೆಎಂಸಿಗೆ ಕರೆದೊಯ್ಯುವಂತೆ ತಿಳಿಸಿದರು. ಅಲ್ಲಿ ಪರೀಕ್ಷೆ ಮಾಡಿಸಿದಾಗ ಆಡುವ ಹುಡುಗ ನೌಶಾದ್ಗೆ ಕ್ಯಾನ್ಸರ್ ಮಾರಿ ಇರುವುದು ತಪಾಸಣೆಯಲ್ಲಿ ಪತ್ತೆಯಾಯಿತು.
   ಇಲ್ಲಿಯವರೆಗೂ ಎಲ್ಲ ಮಕ್ಕಳಂತೆ ಆಟವಾಡಿ, ಓದಿಕೊಂಡು ನಲಿಯುತ್ತಿದ್ದ ನೌಶಾದ್ ಬಾಳಿನಲ್ಲಿ ಕತ್ತಲೆಯ ಪುಟಗಳು ಆರಂಭವಾದವು. ಹುಬ್ಬಳ್ಳಿಯಲ್ಲಿ ನೂರಾರು ತರಹೇವಾರಿ ಪರೀಕ್ಷೆಗಳು, ಚಿಕಿತ್ಸೆಗಳನ್ನು ಮಾಡಲಾಯಿತು. ಅದೆಷ್ಟೋ ಬಗೆಯ ಇಂಜೆಕ್ಷನ್ಗಳನ್ನು ಕೊಡಲಾಯಿತು. ಕೊನೆಗೊಮ್ಮೆ ಹುಬ್ಬಳ್ಳಿಯ ವೈದ್ಯರು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಸೂಚಿಸಿದರು. ಬಾಲಕ ನೌಶಾದ್ ಅಲಿ ಈಗ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
    ಇದುವರೆಗೂ ನೌಶಾದ್ನನ್ನು ಕನಿಷ್ಟ ಏಳು ಬಾರಿ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಕರೆದಿಕೊಂಡು ಹೋಗಿ ಬರಲಾಗಿದೆ. ಏಳು ಸಾರಿಯೂ ಭಾರಿ ಬೆಲೆಯ ಇಂಜೆಕ್ಷನ್ಗಳನ್ನು ನೀಡಲಾಗಿದೆ. ಒಂದೊಂದು ಚುಚ್ಚುಮದ್ದಿಗೂ 3 ರಿಂದ 5 ಸಾವಿರ ರು. ಖಚರ್ಾಗುತ್ತದೆ. ಒಮ್ಮೆ ಬೆಂಗಳೂರಿಗೆ ಹೋಗಿಬಂದರೆ ಕನಿಷ್ಟ 15 ಸಾವಿರ ರು. ಖಚರ್ಾಗಿರುತ್ತದೆ. ಮಗನ ಚಿಕಿತ್ಸೆಯ ಸಲುವಾಗಿಯೇ ಮನೆಯಲ್ಲಿದ್ದ ಕುರಿಮಂದೆಯನ್ನು ಮಾರಾಟ ಮಾಡಲಾಗಿದೆ. ಜೊತೆಗೆ ಕುಟುಂಬವನ್ನು ಸಾಕಬೇಕಾಗಿದ್ದ ಬಾಡಿಗೆ ಆಟೋವನ್ನೂ ಇದೀಗ ಮಾರಾಟ ಮಾಡಿ ನೌಶಾದ್ಗೆ ಅವರ ತಂದೆ ಹಜರತ್ ಅಲಿ ಚಿಕಿತ್ಸೆ ಕೊಡಿಸಿದ್ದಾರೆ.

    ನೌಶಾದ್ಗೆ ಈಗಾಗಲೇ ಕಿಮೋಥೆರಪಿಯನ್ನು ಮಾಡಲಾಗಿದೆ. ಅಲ್ಲದೇ 5 ಸಾವಿರ ರು.ಗಳ 5 ಚುಚ್ಚುಮದ್ದನ್ನು ನೀಡಲಾಗಿದೆ. ನೌಶಾದ್ಗೆ ಈಗ ಆಪರೇಶನ್ ಮಾಡುವ ಅಗತ್ಯವಿದೆ. ಅದಕ್ಕೆ 1.5 ಲಕ್ಷ ರು. ಮೊತ್ತದ ಅವಶ್ಯಕತೆಯಿದೆ. ಅದನ್ನು ಕಟ್ಟಿದರೆ ಶಸ್ತ್ರಚಿಕಿತ್ಸೆ ಮಾಡುವುದಾಗಿ ಕಿದ್ವಾಯಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಇದರಿಂದಾಗಿ ನೌಶಾದ್ನ ತಂದೆ ಹಜರತ್ ಅಲಿ ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ.
    ಹಜರತ್ ಅಲಿ ಮಗನ ಶಸ್ತ್ರ ಚಿಕಿತ್ಸೆಗಾಗಿ ಅಗತ್ಯವಿರುವ ಹಣಕ್ಕಾಗಿ ಹಲವು ಜನರ ಬಳಿ ಅಂಗಲಾಚಿದ್ದಾರೆ. ಅಷ್ಟೇ ಅಲ್ಲದೆ ರಾಜಕಾರಣಿಗಳ ಮನೆಯ ಬಾಗಿಲನ್ನೂ ತಟ್ಟಿ ಬಂದಿದ್ದಾರೆ. ಆದರೆ ಯಾರಿಂದಲೂ ಸಹಾಯವಾಗಿಲ್ಲ. ಮಾಜಿ ಸಚಿವ ಆರ್. ವಿ. ದೇಶಪಾಂಡೆ ಅವರು 25 ಸಾವಿರ ರು.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣವನ್ನು ಕೊಡಿಸಿದ್ದಾರೆ (ಈ ಹಣವನ್ನು ಕೊಡಿಸಲು ಮೂರು-ನಾಲ್ಕು ತಿಂಗಳು ಸತಾಯಿಸಲಾಗಿದೆ ಎಂಬುದು ಹಜರತ್ ಅಲಿಯ ಹೇಳಿಕೆ..!!). ಇನ್ನೂ ಕೆಲವು ಸಂಸ್ಥೆಗಳು ಹಣವನ್ನು ಕೊಡುತ್ತೇವೆ ಎಂದು ಹೇಳಿದ್ದಾರಾದರೂ ಹಣವನ್ನು ನೀಡಲು ಮುಂದಾಗಿಲ್ಲ. ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಹಜರತ್ ಅಲಿ ಕುಟುಂಬ ನೌಶಾದ್ ಅಲಿಗೆ ಚಿಕಿತ್ಸೆ ನೀಡುವುದು ಹೇಗೆ ಎನ್ನುವ ಚಿಂತೆಯಲ್ಲಿ ತೊಡಗಿದೆ.
    ಕುಟುಂಬದ ಪಾಲಿಗೆ ರೇಷನ್ ಕಾರ್ಡಿದ್ದರೂ ನಾಟ್ ವ್ಯಾಲಿಡ್ ಎಂದು ತೋರಿಸುತ್ತಿರುವುದರಿಂದ ಬೇಳಗಾವಿಯಲ್ಲಿ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯ ಅಡಿಯಲ್ಲಿ ನಡೆಸಬೇಕಿದ್ದ ಚಿಕಿತ್ಸೆಯನ್ನು ಕ್ಯಾನ್ಸಲ್ ಮಾಡಲಾಗಿದೆ. ಶಿರಸಿಯ ತಹಶೀಲ್ದಾರರು ಈ ಕುರಿತು ರೇಶನ್ಕಾರ್ಡ್ ವ್ಯಾಲಿಡ್ ಆಗಿದೆ ಎಂದು ಬರವಣಿಗೆಯ ಮೂಲಕ ಬರೆದುಕೊಟ್ಟಿದ್ದರೂ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಹಣವಿಲ್ಲದೇ ಚಿಕಿತ್ಸೆ ಹೇಗೆ ಕೊಡಿಸುವುದೋ ತಿಳಿಯದಾಗಿದ್ದು, ಬಾಲಕನ ಬದುಕು ಬರ್ಭರವಾಗಿದೆ.
    ಸಮಾಜಮುಖಿ ವ್ಯಕ್ತಿಗಳು, ಸಹೃದಯಿಗಳು ನೌಶಾದ್ ಅಲಿಯ ಚಿಕಿತ್ಸೆಗಾಗಿ ಧನಸಹಾಯ ಮಾಡಬೇಕೆಂದು ತಂದೆ ಹಜರತ್ ಅಲಿ ಕೇಳಿಕೊಂಡಿದ್ದಾರೆ. ಬಾಲಕನಿಗೆ ಸಹಾಯ ಮಾಡಲು ಇಚ್ಛಿಸುವವರು ಇಂಡಿಯನ್ ಓವರ್ಸಿಸ್ ಬ್ಯಾಂಕ್ನ ದಾಸನಕೊಪ್ಪ ಶಾಖೆಯಲ್ಲಿ ತೆರೆಯಲಾಗಿರುವ ನೌಶಾದ್ ಅಲಿಯ ಸೇವಿಂಗ್ಸ್ ಖಾತೆ ನಂ. 029501000008062 ಈ ನಂಬರಿಗೆ ಹಣವನ್ನು ನೀಡಬಹುದಾಗಿದೆ. ಈ ಕುರಿತು ನೌಶಾದ್ ಅಲಿಯ ತಂದೆ ಹಜರತ್ ಅಲಿಯನ್ನು 9741579371 ಈ ದೂರವಾಣಿ ಸಂಖ್ಯೆಯ ಮೂಲಕ ಸಂಪಕರ್ಿಸಬಹುದಾಗಿದೆ.
ನೌಶಾದ್ ನ ಸ್ವಗತ...

(ನೌಶಾದ್ ಅಲಿಯನ್ನು ಮಾತನಾಡಿಸುವ ಸಲುವಾಗಿ ಅವನ ಮನೆಗೆ ಹೋದಾಗ ಆತ ಹೇಳಿದ್ದು..)



    ಒಂದು ವರ್ಷದ ಹಿಂದೆ ಶಾಲೆಗೆ ರಜಾ ಇದ್ದಾಗ ಕುರಿ ಕಾಯಲು ಹೋಗಿದ್ದೆ. ಆಗ ಜಾರಿ ಬಿದ್ದೆ. ಆಮೇಲೆ ಪರೀಕ್ಷೆ ಮಾಡಿದಾಗ ನನಗೆ ಕ್ಯಾನ್ಸರ್ ಇದೆ ಎಂದು ಗೊತ್ತಾಯ್ತು. ಈಗ ಪ್ರತಿ ತಿಂಗಳು ಕಿಮೋಥೆರಪಿಗಾಗಿ ಬೆಂಗಳೂರಿಗೆ ಹೋಗಿ ಬರುತ್ತಿದ್ದೇನೆ. ಪ್ರತಿ ಸಾರಿ ಹೋದಾಗಲೂ 15 ದಿನ ಆಸ್ಪತ್ರೆಯಲ್ಲಿರಬೇಕು. ಚುಚ್ಚುಮದ್ದುಗಳನ್ನು ಕೊಡುತ್ತಾರೆ. ಅದನ್ನು ಕೊಟ್ಟಾಗ ಆಗುವ ಯಾತನೆಯನ್ನು ಹೇಳಲು ಆಗುವುದಿಲ್ಲ. ಆ ಚುಚ್ಚುಮದ್ದು ಕೊಟ್ಟ ನಂತರ 1 ತಿಂಗಳವರೆಗೆ ತೊಂದರೆಯಿಲ್ಲ. ಆಮೇಲೆ ಮತ್ತೆ ದೇಹದಲ್ಲಿ ತೊಂದರೆಗಳು ಕಾಣಿಸಲು ಶುರುವಾಗುತ್ತವೆ. ಮತ್ತೆ ಚಿಕಿತ್ಸೆಗೆ ಓಡಬೇಕು. ಒಂದು ಸಾರಿ ಆಸ್ಪತ್ರೆಗೆ ಹೋದಾಗಲೂ 10 ಸಾವಿರಕ್ಕಿಂತ ಹೆಚ್ಚು ಖಚರ್ಾಗುತ್ತದೆ ಎಂದು ನಮ್ಮ ಅಬ್ಬಾ ಹೇಳುತ್ತಾರೆ. ನನಗಾಗಿ ನನ್ನ ಅಬ್ಬಾ ಕುರಿಮಂದೆಯನ್ನು ಮಾರಿದರು. ನಮಗೆಲ್ಲ ಜೀವನಾಧಾರವಾಗಿದ್ದ ಬಾಡಿಗೆ ರಿಕ್ಷಾವನ್ನೂ ಮಾರಿದ್ದಾರೆ. ಆದರೆ ನನ್ನ ಚಿಕಿತ್ಸೆಗೆ ಇನ್ನೂ ಬಹಳ ಹಣಬೇಕಾಗುತ್ತದಂತೆ. ಯಾರಾದ್ರೂ ಸಹಾಯ ಮಾಡಬಹುದಲ್ವಾ? ಆಪರೇಶನ್ ಆಗಿ ಮತ್ತೆ ಎಲ್ಲ ಮಕ್ಕಳ ಜೊತೆ ಓಡಿ, ಆಡಿ ಖುಷಿಯಿಂದ ಇರಬಹುದಲ್ವಾ. ಯಾರಾದ್ರೂ ನನಗೆ ಸಹಾಯ ಮಾಡ್ತಾರಲ್ವಾ? 
--
ಈ ಬರಹದಲ್ಲಿ  ನೌಶಾದ್ ಅಲಿಯ ಅಕೌಂಟ್  ನಂಬರ್ ನೀಡಿದ್ದೇನೆ.. ಯಾರಾದ್ರೂ ಸಹಾಯ ಮಾಡುವ ಮನಸ್ಸು ಉಳ್ಳವರು ಮಾಡಬಹುದು... ಹಜರತ್ ಅಲಿಯ ದೂರವಾಣಿ ಸಂಖ್ಯೆಯೂ ಇದೆ ಸಂಪರ್ಕ ಮಾಡಬಹುದು...

Sunday, December 2, 2012

ಉಕರೋಧನ

ಉಕರೋಧನ


ಉತ್ತರಕನ್ನಡದ ಕುರಿತು ಬರೆದ ಒಂದಷ್ಟು ಚೌಪದಿಗಳು
ಯೋಜನೆಗಳ ಭಾರದಲ್ಲಿ ನಲುಗುತ್ತಿರುವ ಉತ್ತರಕನ್ನಡದ ಕುರಿತು ನಾಲ್ಕು ಸಾಲುಗಳ ಸಾಂತ್ವನ... ಚೌಪದಿಗಳ ಬ್ರಹ್ಮ ದಿನಕರ ದೇಸಾಯಿ ನನ್ನ ಈ ಚುಟುಕುಗಳಿಗೆ ಸ್ಫೂರ್ತಿಯ ಸೆಲೆ. ಅವರಿಗೆ ಧನ್ಯವಾದ.

ಅಳಲು

ಏರುತಿದೆ ತದಡಿಯ ಬಿಸಿ
ಜೀವ ಜನತೆ ಕಸಿಬಿಸಿ|
ಉತ್ತರಕನ್ನಡ ಹೋಗುತಿದೆ ಸೂರೆ
ಉಳಿಸುವವರಿಲ್ಲವಲ್ಲೇ ನೀರೆ..||

ಶಿಶುವಿನ ಗೋಳು

ನನ್ನ ಉತ್ತರಕನ್ನಡ ಪ್ರೀತಿಯ ಶಿಶು
ಹಲವು ಯೋಜನೆಗಳಿಗದೇ ಬಲಿಪಶು|
ಎಲ್ಲ ಜನರಿಗೆ ಇದು ನೀಡಿದರೂ ಕೂಳು
ಕೇಳುವವರಿಲ್ಲವಾಯ್ತಲ್ಲೇ ಇದರ ಗೋಳು..||

ಕವನದ ವ್ಯಥೆ

ನನ್ನ ಉ.ಕ ಒಂದು ಸುಂದರ ಕವನ
ಬಹು ಯೋಜನೆಗಳೇ ಇದರ ಚರಣ|
ದುಃಖ ಕಥೆ ಹೇಳುತಿದೆ ಪ್ರತಿಯೊಂದೂ ಪ್ಯಾರಾ
ಮುಗಿದುಹೋಗುತ್ತಿದೆ ಇದರ ಸಂಪತ್ತು ಪೂರಾ..|||

ಸೀರೆಯಂತೆ ಬದುಕು

ನನ್ನ ಉ.ಕವೆ ಒಂದು ರೇಶಿಮೆಯ ಸೀರೆ
ನಾಜೂಕು, ಜೋಪಾನ. ಇರಬೇಕು ನೀರೆ.|
ಛಂದವಿದ್ದರೆ ಅದು ಉಳಿಸುವುದು ಮಾನ
ಹರಿದು ಹೋದರೆ ನಿನ್ನ ಬದುಕೇ ಊನ||

ಮುತ್ತು ಕಾಶ್ಮೀರ

ನನ್ನ ಉಕವೆ ಒಂದು ಕಡಲ ಮುತ್ತು
ಬೆಸ್ತನ ತೀಟೆಯ ಬೇಟೆಗೆ ಬಲಿಯಾಗಿ ಬಿತ್ತು.|
ಈ ನಾಡೇ ಒಂದು ಮಿನಿ ಕಾಶ್ಮೀರ
ಪ್ರತಿಯೊಂದು ಭಾಗ ಎಂದೆಂದೂ ಅಸ್ಥಿರ|||

ಕಣ್ಣು-ಬೇನೆ

ನನ್ನ ಉ.ಕವೆ ಒಂದು ತೀಕ್ಷ್ಣ ಕಣ್ಣು
ನೂರೆಂಟು ಯೋಜನೆಗಳೇ ಅದರ ಹುಣ್ಣು|
ಜೊತೆಗೆ ಕಾಡುತಿವೆ ಹಲವೆಂಟು ಬೇನೆ
ಏನು ಮಾಡುವುದು ಇದಕೆ ಇಲ್ಲವಲ್ಲ ಕೊನೆ||


ಕಾಲೇಜು ಓದುತ್ತಿದ್ದ ದಿನಗಳಲ್ಲಿ ಬರೆದಿದ್ದ ಈ ಚುಟುಕಗಳನ್ನು ಶಿರಸಿಯ ಪತ್ರಕರ್ತ, ಕದಂಬವಾಣಿ, ನಾಗರೀಕ, ಕರ್ಮವೀರ, ಉತ್ತರಕನ್ನಡ ಜಿಲ್ಲಾ ವಾರ್ತಾ ಸಂಚಯ ಈ ಮುಂತಾದ ಅನೇಕ ಪತ್ರಿಕೆಗಳು ಪ್ರಕಟಿಸಿದ್ದವು. ಅದಕ್ಕೆ ಕಾರಣೀಭೂತರಾದವರಿಗೆ ಧನ್ಯವಾದಗಳು-ವಿನಯ್ ದಂಟಕಲ್

Friday, November 30, 2012

ನಿನ್ನ ನೆನಪು ಬಂದಾಗಲೆಲ್ಲ...



ನಿನ್ನ ನೆನಪು ಬಂದಾಗಲೆಲ್ಲ
ಬೇಸಿಗೆಯಲ್ಲೂ ಮಳೆ
ಬರುತ್ತದೆ ಗೆಳತೀ, ಕೊರೆವ
ಚಳಿಯೂ ಹಿತವೆನ್ನಿಸುತ್ತದೆ..||

ನಿನ್ನ ನೆನಪು ಬಂದಾಗಲೆಲ್ಲ
ಭಾವಗಳು ಹಾಡಾಗುತ್ತವೆ, ಗೆಳತೀ
ಮನಸುಗಳು ಹೂವಾಗುತ್ತವೆ..||

ನಿನ್ನ ನೆನಪು ಬಂದಾಗಲೆಲ್ಲ
ಕಣ್ಣೀರಿಗೂ ಅರ್ಥ ಬರುತ್ತದೆ ಗೆಳತೀ,
ಪ್ರತಿ ಮಾತೂ ವ್ಯರ್ಥವೆನ್ನಿಸುತ್ತದೆ...||

ನಿನ್ನ ನೆನಪು ಬಂದಾಗಲೆಲ್ಲ, ಸುಪ್ತ
ಪ್ರೀತಿಯ ಶೋಕಗೀತೆ ನೆನಪಾಗುತ್ತದೆ ಗೆಳತಿ,
ಕಂಡ ಕನಸುಗಳೆಲ್ಲ ಸದ್ದಿಲ್ಲದೇ ಕರಗುತ್ತವೆ...||

ನಿನ್ನ ನೆನಪು ಬಂದಾಗಲೆಲ್ಲ
ಉಸಿರು ಭಾರವೆನ್ನಿಸುತ್ತದೆ ಗೆಳತಿ,
ಸಂಗೀತದ ಮೋಡಿ ಚಿತ್ತ ಕಲಕುತ್ತಿದೆ..||

ನಿನ್ನ ನೆನಪುಬಂದಾಗಲೆಲ್ಲ, ಮತ್ತದೆ
ಪ್ರೀತಿ ಸೆಳೆಯುತ್ತದೆ ಗೆಳತೀ, ಈ
ಹೃದಯ ಪದೇ ಪದೆ ಹಿಂಡುತ್ತದೆ..
ಕಣ್ಣು ಮಂಜಾಗುತ್ತಿದೆ...||

(ಬರೆದಿದ್ದು: ದಂಟಕಲ್ನಲ್ಲಿ 09-02-2008ರಂದು)
(ವಿ.ಸೂ : ಮೇಲೆ ಹಾಕಿರೋ ಪೋಟೋವನ್ನು 4 ವರುಷದ ಹಿಂದೆ ಜೋಗ ಜಲಪಾತದ ತಳಭಾಗದಲ್ಲಿ ನಾನು ತೆಗೆದಿದ್ದು. ಜೋಗದ ಚಿತ್ರವನ್ನು ತೆಗೆಯೋಣ ಅಂತ ಕ್ಲಿಕ್ಕಿಸಿದ್ದು. ಕೊನೆಗೆ ಪ್ರಿಂಟ್ ಹಾಕಿಸಿದಾಗಲೇ ಇಷ್ಟು ಸುಂದರವಾಗಿ ಮೂಡಿಬಂದಿದ್ದು ಗೊತ್ತಾದದ್ದು. ಮಿತ್ರರಾದ ರಾಘವ, ಕೃಷ್ಣಮೂರ್ತಿ ಇವರು ಈ ಚಿತ್ರವನ್ನು ಚೆನ್ನಾಗಿ ವಿಮರ್ಷೆ ಮಾಡಿದ್ದಾರೆ. ಇದು ಹೇಗಿದೆ ಎಂಬುದನ್ನು ತಾವು ಹೇಳಬೇಕು.)

Thursday, November 29, 2012

ಕನಸಿನ ಪ್ರಶ್ನೆಗೆ ಉತ್ತರವಾಗಿ : ಪ್ರೇಮ ಪತ್ರ-2

ಪ್ರೇಮ ಪತ್ರ-2

ಕನಸಿನ ಪ್ರಶ್ನೆಗೆ ಉತ್ತರವಾಗಿ


ಒಲವಿನ ಗೆಳತಿ..,
    ನೀನ್ಯಾಕೆ ನನ್ನ ಮನಸ್ಸನ್ನು ಈ ಪರಿಯಲ್ಲಿ ಆವರಿಸಿದ್ದೀಯಾ? ಅದ್ಯಾಕೆ ನೀನು ನನ್ನೆದೆಯಾಳದ ಕೋಟೆಯೊಳಗೆ ಅವಿತುಕೊಂಡು ಹಗಲಿರುಳೂ ಮನದ ತುಂಬ ಪರಿತಾಪ ಮೂಡುವಂತೆ ಮಾಡುತ್ತೀಯಾ? ಬೆಳಗ್ಗಿನಿಂದ ಸಂಜೆಯ ತನಕ ಮಾಡಬಹುದಾಗಿದ್ದ ಎಲ್ಲ ಕೆಲವನ್ನೂ ಬದಿಗೊತ್ತಿ ಮಾತಾಡಿದ್ದು, ಕಾಡು ಹರಟೆ ಹೊಡೆದಿದ್ದು ನಿನಗಿನ್ನೂ ಸಾಕು ಎನ್ನಿಸಲಿಲ್ಲವೇ..? ಮತ್ಯಾಕೆ ನೀನು ನನ್ನ ಕನಸಲ್ಲಿ ಬಂದು ಮತ್ತೆ ಮತ್ತೆ ತಟ್ಟಿ ತಟ್ಟಿ ಎಬ್ಬಿಸುತ್ತೀಯಾ..? ಪದೇ ಪದೆ ಕನವರಿಸುವಂತೆ ಮಾಡುತ್ತೀಯಾ..?
    ನಿನ್ನೆ ಏನಾಯ್ತು ಗೊತ್ತಾ..? ಬೆಳಿಗ್ಗೆ ಎದ್ದ ಕೂಡಲೇ ಕನ್ನಡಿಯೊಳಗೆ ಇಣುಕಿದೆ. ಮುಖದ ಮೇಲೆ ಹಸಿ ಹಸಿ ಮೊಡವೆ. ಹಣ್ಣಾಗುವ ಲಕ್ಷಣಗಳನ್ನು ತೋರಿಸ್ತಾ ಇದೆ.! ಆ ತಕ್ಷಣ ನನಗೆ ಸುದೀಪನ `ಮೈ ಆಟೋಗ್ರಾಫ್' ಸಿನಹೆಮಾದಲ್ಲಿ ಆತನ ತಾಯಿ ಅವನ ಬಳಿ `ನಿನ್ನ ಮೇಲೆ ಯಾವುದೋ ಹುಡುಗಿಯ ಕಣ್ಣು ಬಿದ್ದಿರಬೇಕು' ಎಂದು ಹೇಳಿದ ಡೈಲಾಗ್ ನೆನಪಾಯ್ತು. ನನ್ನ ಮುಖದ ಮೇಲೆ ಎದ್ದಿರುವ ಮೊಡವೆಗೆ ಒಡತಿ ನೀನೇ ಬಿಡು. ಅದರಲ್ಲಿ ಎರಡು ಮಾತಿಲ್ಲ.
    ಹೇಯ್ ಮರೆತೇ ಬಿಟ್ಟಿದ್ದೆ ನೋಡು.. ನಾನು ಕೊಡಿಸಿದ್ನಲ್ಲಾ.. ಕ್ರೀಂ ಕಲರಿನ ಟೆಡ್ಡಿ ಬೇರ್. ನಿನ್ನ ಬೆಚ್ಚನೆಯ ತಬ್ಬುಗೆಯಲ್ಲಿ ಹಿತವಾಗಿ ಮಲಗಿದೆಯೇನೋ ಅಲ್ವಾ? ಏನು..? ಇನ್ನೂ ಮಲಗಿಲ್ವಾ? ಅದೂ ಕೂಡ ನೆನಪಿನ ಊಟೆಯಲ್ಲಿ ಮಿಂದೇಳ್ತಾ ಇರಬಹುದು ಬಿಡು..
    ಈಗಂತೂ ನಿನ್ನ ನೆನಪು ಅದ್ಯಾವಪರಿ ನನ್ನನ್ನು ಹಿಂಡಿ ಹಿಪ್ಪೆ ಮಾಡ್ತಾ ಇದೆ ಗೊತ್ತಾ..ಯಾವಾಗ ನಿಶೆ ಕಳೆದು ಬಾನಂಚಿನಲ್ಲಿ ಭಾಸ್ಕರ ಮೂಡಿ ಮೊದಲ ಕಿರಣಗಳು ಭೂಮಿಯನ್ನು ಚುಂಬಿಸುತ್ತದೆಯೋ ಎಂಬುದನ್ನು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದೇನೆ. ಯಾಕಂದ್ರೆ ಬೆಳಕು ಹರಿದರೆ ಸಾಕು ನಾನು ಓಡೋಡಿ ಬಂದು ನಿನ್ನನ್ನು ಕಾಣುತ್ತೇನೆ. ಮಾತಾಡುತ್ತೇನೆ. ಮೌನವನ್ನು ಸೀಳುತ್ತೇನೆ.. ಅಲ್ವಾ.. ಹಾಗೇ ನೀನು ಕಂಡೊಡನೆ ತುಟಿಯಂಚಿನಲ್ಲಿ ತುಂಟದೊಂದು ಕಿರುನಗೆಯನ್ನು ಎಸೆಯುತ್ತೀಯಲ್ಲಾ ಅದನ್ನು ಯಾವಾಗ ಕಾಣುತ್ತೀನೋ ಎಂಬ ತವಕ ನನ್ನ ಮನದೊಳಗೆ. ಹಾಳಾದ ಸಂಜೆ.. ಯಾಕೆ ಇಷ್ಟು ಲೇಟಾಗಿ ಸರಿಯುತ್ತಿದೆಯೋ..
    ಟೈಮಿಗಂತೂ ಸೆನ್ಸೇ ಇಲ್ಲ. ಯಾವಾಗ ಓಡಬೇಕೋ ಆಗ ಓಡೋದೆ ಇಲ್ಲ. ಟಕಾ ಟಕಾ.. ಅಂತ ನಿಧಾ......ನ ಓಡ್ತಾ ಇದೆ. ಅದಕ್ಕೇನು ಗೊತ್ತು ನನ್ನ ಪರಿತಾಪ..? ಪ್ರೀತಿಯ ಬಗ್ಗೆ ಆ ಮಿಷೀನಿಗೆ ಅರಿವಾದರೂ ಹೇಗಿರಬೇಕು ಹೇಳು. ಸಮಯದ ಕೈಗೊಂಬೆ ಅದು. ಟೈಂ ತೋರಿಸೋ ಭರದಲ್ಲಿ ತಾನು ಪ್ರೀತಿ ಎಂಬ ವಿಸ್ಮಯವನ್ನು ಕಳೆದುಕೊಳ್ಳುತ್ತಿದ್ದೇನೆ ಎಂಬುದನ್ನೂ ಗೊತ್ತು ಮಾಡಿಕೊಳ್ಳಲಾಗದಂತಹ ವಿಚಿತ್ರ ಯಂತ್ರ ಅದು. ಹೋಗ್ಲಿ ಬಿಡು. ಅದಕ್ಕೇ ಅಂದು ಏನು ಪ್ರಯೋಜನ..?
    ಹಾಂ.. ಮರೆತಿದ್ದೆ ನೋಡು. ನಾಳೆ ಬರುವಾಗ ಖಂಡಿತವಾಗಿಯೂ ಆ ಪುಟ್ಟ ನವಿಲುಗರಿಯನ್ನು ತರುತ್ತೇನೆ. ನವಿಲುಗರಿಯಾ ಅದು.. ಊಹುಂ ಅಲ್ಲ. ನವಿಲುಗರಿಯ ಮರಿ ಎನ್ನಬಹುದು. ನೀನು ನನ್ನ ಮನೆಗೆ ಬಂದಿದ್ದಾಗ, ನಿನ್ನ ಸಂಗಡ ಗುಡ್ಡೇ ತೋಟ ಗಣೇಶನ ದೇವಳಕ್ಕೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಸಿಕ್ಕಿತ್ತು. ಚಕ್ಕನೆ ಎತ್ತಿಕೊಂಡು ನಿನಗೆ ಕೊಟ್ಟಿದ್ದೆ. ದಾರಿಯಲ್ಲೆಲ್ಲಾದರೂ ಕಳೆದುಹೋದೀತು.. ಮನೆಯ ತನಕ ನೀನೆ ಇಟ್ಟುಕೋ ಎಂದವಳಿಗೆ ಕೊನೆಗೆ ಮರೆತು ಹೋಗಿತ್ತು. ಕಡೆಗೊಮ್ಮೆ ನೆನಪಾಗಿ ಕೊಡು ಎಂದು ಕಾಡಿದ್ದೆಯಲ್ಲ. ನಾಳೆ ಮಿಸ್ ಮಾಡದೇ ತರುತ್ತೇನೆ. ಅದು ನನ್ನ ಕಬೋರ್ಡಿನಲ್ಲಿ ಮಿನುಗುತ್ತಾ ಕುಳಿತಿದೆ. ಅದೆಷ್ಟೋ ವರ್ಣಗಳ ಚಿಕ್ಕ ಚುಲ್ಟಾರಿ ನವಿಲುಗರಿಗೂ ನಾಳೆ ನಿನ್ನನ್ನು ತಲುಪುವ ತವಕ.
    ಆಯ್ತು.. ಆಯ್ತು... ಖಂಡಿತ ಹಾಗೇ ಮಾಡ್ತೀನಿ.. ನೀ ಹೇಳಿದ ಹಾಗೆಯೇ ಆ ಹಸಿರು ಬಣ್ಣದ ಟಿ-ಷರ್ಟ್ ಹಾಕಿಕೊಂಡೇ ಬರ್ತೀನಿ. ಕಾಲೇಜಿನ ಟ್ರಿಪ್ ಸಂದರ್ಭದಲ್ಲಿ ಶಿವಮೊಗ್ಗೆಯ ಯಾವುದೋ ಬಝಾರಿನಲ್ಲಿ ನನಗಾಗಿ ನೀನು ಕೊಂಡು ತಂದ ಷರ್ಟ್ ಅದು. ನನ್ನ ಜೀವಾಳವೂ ಹೌದು. ಬೆನ್ನಮೇಲೊಂದು ದೊಡ್ಡ ಅಕ್ಷರಗಳಲ್ಲಿ ಬರೆದ ಯು ಕ್ಯಾನ್ ವಿನ್ ಎಂಬ ಬರಹ.. ಎದುರು ಭಾಗದಲ್ಲಿ ಚಿಕ್ಕ ಗಿಟಾರಿನ ಚಿತ್ರ.. ಯಾಕೆ ನಿನಗೆ ಇಂತಹ ವಿಶಿಷ್ಟ ಟೇಸ್ಟು ಅಂತ ಅರ್ಥ ಆಗ್ತಾ ಇಲ್ಲ. ವಿಭಿನ್ನ ಇಂಟರೆಸ್ಟಿನ ನಿನ್ನ ಈ ಟೀಷರ್ಟ್ ನನ್ನ ಪಾಲಿನ ಅಮೂಲ್ಯ ಆಸ್ತಿ. ಇದನ್ನು ಬಹಳ ಜೋಪಾನವಾಗಿ ಕಾಯ್ದಿಟ್ಟುಕೊಳ್ಳುತ್ತೇನೆ.
    ಸಾಕು.. ಸಾಕು.. ಇನ್ನು ಸಾಕು ಮಾಡ್ತೀನಿ.. ರಾತ್ರಿ ಒಂದೋ ಎರಡೂ ಆಯ್ತು ಇರಬೇಕು ಗಂಟೆಗಳು. ಮನೆಯ ಮಹಡಿಯ ಮೇಲೆ ಕುಳಿತವನಿಗೆ ದೂರದಲ್ಲೆಲ್ಲೋ ಸುಟ್ರನಕ್ಕಿ ಕಿಟ್ಟನೆ ಕಿರುಚಿದ ಅನುಭವಗಳು. ನೀರವತೆ.. ನಾಳೆ ಸಿಗುವ ಮೊದಲು ಈ ಏಕಾಂತ ಪರಿಹಾರಕ್ಕಾಗಿ ಸುಮ್ಮನಿರಲಾರದೇ ಬರೆದ ಬರಹ ಇದು. ಬೇಸರಿಸದಿರು ಮನವೇ. ಇನ್ನು ಹೆಚ್ಚು ಬರೆಯಲಾರೆ ಗೆಳತಿ..
    ನಿನ್ನ ಸವಿ ನೆನಪೆ ಮನದಲ್ಲಿ ಆರಾಧನೆ...
    ....ಪ್ರೀತಿಯ ಉಪಾಸನೆ..

    ನಾಳೆ ಬೆಳಗ್ಗೆ ಮುಂಜಾನೆ ಬಂದು ನಿನ್ನನ್ನು ಕಂಡು ಇದನ್ನು ಕೊಟ್ಟಾಗ ನಿನ್ನ ಮನದಲ್ಲಿ ಮೂಡುವ ಭಾವನೆಗಳನ್ನು ನಾನು ಗಮನಿಸಬೇಕು. ಆಗ ಮಾತ್ರ ನನಗೆ ಏನೋ ಒಂಥರಾ.. ಟಿಡ್ಡಿ ಬೇರ್ ಜೊತೆ ಬೆಚ್ಚಗಿರು. ನಾಳೆ ಸಿಗುತ್ತೇನೆ.
    ಮಿಸ್ ಯೂ..

ಇಂತಿ ನಿನ್ನವ

Wednesday, November 28, 2012

ಅಘನಾಶಿನಿ ತೀರದ ಮೌನ ತಪಸ್ವಿಯ ನೆತ್ತಿಯ ಮೇಲೆ ಕುಳಿತು...

 ಅಘನಾಶಿನಿ ತೀರದ ಮೌನ ತಪಸ್ವಿಯ ನೆತ್ತಿಯ ಮೇಲೆ ಕುಳಿತು...

ಲೆಕ್ಖ ಹಾಕಿದರೆ ಅದೆಷ್ಟು ಶತ ಸಹಸ್ರ ಮೀರುತ್ತದೆಯೇನೋ. ಅಷ್ಟು ಸಹಸ್ರಸಾರಿ ನಾನು ಹೋಗಿ ಅಲ್ಲಿ ಕುಳಿತೆದ್ದು ಬಂದಿದ್ದೇನೆ. ನನ್ನ ಅತ್ಯಂತ ಪ್ರೀತಿಯ ಜಾಗ. ಅಘನಾಶಿನಿ ತೀರದ ಇಷ್ಟದ ಸ್ಥಳಗಳ ಸಾಲಿನಲ್ಲಿ ಇದು ಮೊದಲನೆಯದು ಎಂದರೆ ತಪ್ಪಿಲ್ಲ. ಅದು ನನ್ನ ಸ್ಫೂತರ್ಿಯ ಸ್ಥಳ. ಕವನಗಳನ್ನು ಕಟ್ಟಲು ಕಾರಣವಾದ ಸ್ಥಳ. ನನ್ನೊಳಗಿನ ಕವಿಯನ್ನು ಉದ್ದೀಪನಗೊಳಿಸಿ ಕವಿಭಾವಕ್ಕೊಂದು ರೂಪ ನೀಡಿದ ಜಾಗ. ಬೇರೆನೂ ಅಲ್ಲ. ಅದೊಂದು ದೈತ್ಯ ಕಲ್ಲು ಬಂಡೆ.
    ಸುತ್ತಲೂ ಜುಳು ಜುಳು ನಿದಾದವನ್ನು ಹೊರಡಿಸುತ್ತ ನರ್ತನ ಮಾಡುತ್ತ ಹರಿಯುವ ಅಘನಾಶಿನಿ ನದಿ. ಆಗಾಗ ಆರ್ಭಟ, ಹೆಚ್ಚಿನ ಕಾತ ನೀರ ನರ್ತನದ ತನನ. ಯಾಕೋ ಈ ಕಲ್ಲುಬಂಡೆ ನನಗೆ ಬಹಳ ಆಪ್ತವಾಗಿದೆ. ಈ ಬಂಡೆ ಅದೆಷ್ಟು ನನ್ನನ್ನು ಕಾಡಿಸಿ, ಹಿಡಿದು ಇಟ್ಟುಕೊಂಡಿದೆ ಎಂದರೆ... ಮನಸ್ಸೆಷ್ಟೇ ಬೇಸರದಲ್ಲಿರಲಿ ಅಲ್ಲಿ ಹೋಗಿ ಆ ಬಂಡೆಯ ಮೇಲೆ ಕುಳಿತುಬಿಟ್ಟರೆ ಸಾಕು ಮನಸ್ಸಿನ ಎಲ್ಲ ಬೇಸರ ಮೂಟೆಗಳು ಕರಗಿ ಹರ್ಷ ಮನೆಮಾಡುತ್ತದೆ. ಖುಷಿ ಒಳಗೊಳಗೆ ಮೂಡಿ ನವ ಚೈತನ್ಯ ಚಿಮ್ಮುತ್ತದೆ.
    ಈ ಬಂಡೆಗಲ್ಲಿನ ಮೇಲೆ ನಾನು ಕುಳಿತಷ್ಟು ಮತ್ಯಾರೂ ಕುಳಿತಿಲ್ಲವೇನೋ. ನನ್ನ ದುಃಖ, ಸಂತಸಗಳಿಗೆ ಈ ಬಂಡೆಯೇ ಹೆಚ್ಚಿನ ಕಾಲ ಕೇಳುಗ, ನೋಡುಗ, ಜೊತೆಯಲ್ಲಿ ಮಾತನಾಡುವ ದೋಸ್ತಿ. ನನ್ನ ಏರಿಳಿವುಗಳಿಗೆ ಈ ಬಂಡೆಯೇ ಸಾಕ್ಷಿ ಎಂದರೂ ತಪ್ಪಿಲ್ಲ. ಅಘನಾಶಿನಿ ನದಿಗಂತೂ ಈ ಬಂಡೆಗಲ್ಲು ಹಾಗೂ ನನ್ನ ದೋಸ್ತಿಯ ಕುರಿತು ಬಹಳ ಹೊಟ್ಟೆಕಿಚ್ಚು ಕಣ್ರೀ. ಅದಕ್ಕೆ ಮಳೆಗಾಲ ಸೇರಿದಂತೆ ಆರುತಿಂಗಳಿಗೂ ಹೆಚ್ಚಿನ ಕಾಲ ನನ್ನನ್ನು ಈ ಬಂಡೆಗಲ್ಲಿನ ಬಳಿಗೆ ಹೋಗದಂತೆ ತಡೆದು, ಅದನ್ನು ಅಪ್ಪಿ ಹಿಡಿದುಬಿಡುತ್ತದೆ. ಮುಂದಿನ ಆರು ತಿಂಗಳುಗಳ ಕಾಲ ನಾನು ಅಘನಾಶಿನಿಯನ್ನು ಅಣಕಿಸುತ್ತ ಕೂರುತ್ತೇನೆ.
    ಈ ದೊಡ್ಡ ಕಲ್ಲಿಗೆ ನಮ್ಮೂರಿನಲ್ಲಿ ಆನೆಗಲ್ಲು ಅಥವಾ ಆನೆಕಲ್ಲು ಎನ್ನುತ್ತಾರೆ. ಕೆಲವು ಮಂದಿ ಇದು ಆನೆಕಲ್ಲಲ್ಲ ಎಂದೂ ಹೇಳುತ್ತಾರಾದರೂ ನಾನು ಇದಕ್ಕೆ ಆನೇಕಲ್ಲು ಎಂದು ವಿಧ್ಯುಕ್ತವಾಗಿ ನಾಮಕರಣ ಮಾಡಿ ಅದಕ್ಕೊಂದು ಜೀವ ಕೊಡುವ ಯತ್ನ ಮಾಡಿದ್ದೇನೆ. ನನಗೆ ಅಲ್ಪಸ್ವಲ್ಪ ನಡೆಯಲು ಬರುತ್ತಿದ್ದ ಸಂದರ್ಭ. ನೆನಪೆಲ್ಲ ಇನ್ನೂ ಮಾಸಲು ಮಾಸಲಾಗಿದ್ದಾಗ ಅಮ್ಮ ನನ್ನನ್ನು ಇಲ್ಲಿಗೆ ಕರೆದುಕೊಂಡು ಬರುತ್ತಿದ್ದಳು. ಯಾವಾಗಲೂ ಅಲ್ಲ. ತಿಂಗಳಿಗೊಮ್ಮೆ ಮುಟ್ಟಾದಾಗ ಅವಳಂತೆ ಊರಿನ ಒಂದೆರಡು ಸೊಸೆಯರು ಈ ಕಲ್ಲಿನ ಮೇಲೆ ಬಂದು ಸುದ್ದಿ ಹೇಳುತ್ತಿದ್ದರು. ಆಗೆಲ್ಲ ಅಮ್ಮ ನನ್ನನ್ನು ಕರೆದುಕೊಂಡು ಬರುತ್ತಿದ್ದಳು. ಆಕೆ ಆಕೆಯ ದೋಸ್ತಿಣಿಯರ ಜೊತೆ ಮಾತಾಡುತ್ತಿದ್ದರೆ ನಾನಂತೂ ಆನೆಕಲ್ಲಿನ ಬುಡದಲ್ಲಿ ಕಾಲನ್ನು ಇಳಿಬಿಟ್ಟುಕೊಂಡು ಮಿಸುಕಾಡದೇ ಕುಳಿತುಬಿಡುತ್ತಿದ್ದೆ. ಹೀಗೆ ಕುಳಿತಾಗ ನಮ್ಮ ಬಳಿಗೆ ಬರುವ ಮೀನುಗಳು ಕಾಲಿಗೆ ಕಚ್ಚಿ ಕಚಗುಳಿ ನೀಡುವುದನ್ನು ಬಹಳ ಬೆರಗಿನಿಂದ ಸವಿಯುತ್ತಿದ್ದೆ.
    ಆ ಮೇಲೆ ಈ ಆನೆಕಲ್ಲಿನ ಬುಡದ ಸಾಧಾರಣ ಗಾತ್ರದ ಹೊಂಡ ನನ್ನಂತಹ ತುಡುಗು ಹುಡುಗರಿಗೆ ಈಜುಕೊಳವಾಯಿತು. ಈಜು ಕಲಿಯುವ ತಾಣವಾಯಿತು. ಬೇಸಿಗೆ ರಜೆ ಬಂತೆಂದರೆ ಮದ್ಯಾಹ್ನದ 1 ಗಂಟೆಯ ಕಾಲವನ್ನು ಬಿಟ್ಟರೆ ಹಗಲಿಡಿ ಈ ಕಲ್ಲಿನ ಬುಡದಲ್ಲಿ ಈಸು ಬೀಳುವುದು ನಮ್ಮ ಪರಮಾಪ್ತ ಕಾರ್ಯವಾಗಿತ್ತು. ನನ್ನ ವೋರಗೆಯ 8-10 ಹುಡುಗರು ಸೇರಿ ಹೊಳೆಗೆ ಬಿದ್ದೆವೆಂದರೆ ಮೀನುಗಳೆಲ್ಲ ಕಕ್ಕಾಬಿಕ್ಕಿ. ಕಂತು ಈಸ ಹೊಡೆಯುವುದು, ನೀರೊಳಗೆ ಕಣ್ಣು ಬಿಟ್ಟು ಈಜುವುದು, ಯಾರು ಜಾಸ್ತಿ ಹೊತ್ತು ನೀರಿನಲ್ಲಿ ಮುಳುಗುಹಾಕುತ್ತಾರೆ ಎಂದು ಪಂಥ ಕಟ್ಟುವುದು, ಹೊಳೆಯ ನೀರು ಚಳಿ ಮಾರಾಯ ಎಂದು ಹೇಳುತ್ತ ಆನೆಕಲ್ಲಿನ ಮೇಲೆ ಕುಳಿತು ಸೂರ್ಯ ರಶ್ಮಿಗೆ ಬೆನ್ನು ಒಡ್ಡಿ ಕುಳಿತು ಅದು ನೀಡುವ ಆನಂದವನ್ನು ಸವಿಯುವುದು ನನಗಿನ್ನೂ ನೆನಪಿದೆ.
    ಈ ಕಲ್ಲಿನ ಮೇಲೆಯೇ ನಮ್ಮ ಕಿಲಾಡಿತನಗಳು ಅನಾವರಣಗೊಳ್ಳುತ್ತಿದ್ದುದೂ ಉಂಟು. ಯಾರದ್ದೋ ಮನೆಯ ಬಾಳೆ ಹಣ್ಣಿನ ಗೊನೆಯನ್ನು ಕದ್ದು ತಂದರೆ ಈ ಕಲ್ಲಿನಮೇಲೆಯೇ ಅವನ್ನು ಹಸಗೆ ಮಾಡಿಕೊಳ್ಳುತ್ತಿದ್ದೆವು. ಈ ಬಂಡೆಗಲ್ಲಿನ ಆಜು ಬಾಜಿನಲ್ಲಿ ಅಪ್ಪೆಮಿಡಿ ಮರಗಳ ಸಾಲು ಸಾಲೇ ಇದ್ದವಲ್ಲ ಅವುಗಳಿಗೆ ಅಡ್ಡಬಡ್ಚಿಗೆ ಹೊಡೆದು ಅಪ್ಪೆಮಿಡಿಯನ್ನು ಕೆಡವಿ ಅದಕ್ಕೆ ಉಪ್ಪು ಹಾಕಿಕೊಂಡು ತಿನ್ನುತ್ತಿದ್ದುದು ಇನ್ನೂ ನೆನಪಿದೆ. ಅಷ್ಟೇ ಏಕೆ ವಿಪರೀತ ಸೊನೆಯಿಂದ ಕೂಡಿರುತ್ತಿದ್ದ ಈ ಅಪ್ಪೆ ಮಿಡಿಯನ್ನು ತಿನ್ನುವಾಗ ಬಾಯಿಗೆಲ್ಲ ಸೊನೆ ತಾಗಿಸಿ ಸುಟ್ಟುಕೊಂಡಿದ್ದೂ ಇನ್ನೂ ಹಚ್ಚ ಹಸುರಾಗಿದೆ. ನನಗಿಂತಲೂ ನನ್ನ ಪ್ರೀತಿಯ ಬಂಡೆಗಲ್ಲಿಗೆ ಇದು ಇನ್ನೂ ಸ್ಫಷ್ಟವಾಗಿ ನೆನಪಿದೆ.
       ಇಷ್ಟೇ ಅಲ್ಲ. ಪ್ರತಿದಿನ ನಾನು ಓಡಿ ಬಂದು ಈ ಬಂಡೆಯ ಮೇಲೆ ಕುಳಿತು ಅಕ್ಕಪಕ್ಕದ ವಾಟೆ ಮಟ್ಟಿಯ ಸಾಲುಗಳ ಒಡಲಿನಿಂದ ಕೇಳಿಬರುವು ಹಕ್ಕಿಗಳ ವಿವಿಧ ರೀತಿಯ ನಾದ ತರಂಗಗಳನ್ನು ಸವಿದಿದ್ದೇನೆ. ಈ ಬಂಡೆಗಲ್ಲಿನ ಮೇಲೆ ಅಂಗಾತ ಮಲಗಿ ಆಕಾಶದಲ್ಲಿ ಓಡೋಡಿ ಹೋಗುವ ಮೋಡಗಳನ್ನು ಕಣ್ತುಂಬಿಕೊಳ್ಳುವುದು, ಅಪ್ಪೆ ಮಿಡಿಗಳು ಕಸ್ತ್ರಬಿಡುವ ವೇಳೆಯಲ್ಲಿ ಸುಳಿದು ಬರುವ ಗಾಳಿ ತಂದು ಕೊಡುವ ಸುಮಧುರ ವಾಸನೆಯನ್ನು ಮನದಣಿಯೆ ಆಘ್ರಾಣಿಸಿದ್ದೇನೆ. ಎಲ್ಲಕ್ಕಿಂತ ಮಿಗಿಲಾಗಿ ಈ ಬಂಡೆಗಲ್ಲಿನ ಮೇಲೆಯೇ ನಾನು ಅದೆಷ್ಟೋ ಚೆಂದದ ಪುಸ್ತಕಗಳನ್ನು ಓದಿದ್ದೇನೆ.
    ಈ ಬಂಡೆಗಲ್ಲು ನನಗೊಬ್ಬನಿಗೇ ಅಲ್ಲ.. ಇನ್ನೂ ಹಲವರಿಗೆ ಆಪ್ತವಾಗಿದೆ. ಮಿತ್ರನೊಬ್ಬ ಈ ಬಂಡೆಗಲ್ಲಿನ ಮೇಲೆ ಕುಳಿತು `ನನಗೆ ಅವಳು ಮೋಸ ಮಾಡಿಬಿಟ್ಟಳು ಕಣೋ ವಿನು..' ಅಂದಿದ್ದ. ನನ್ನ ಜೊತೆ ಖುಷಿಯಾಗಿ ಬಂದಿದ್ದ ಅವಳಿಗೆ ನನ್ನ ಮನಸ್ಸಿನ ತುಮುಲಗಳನ್ನು ಹೇಳಿಕೊಳ್ಳಲು ಆಗದೇ ಕಂಗಾಲಾಗಿದ್ದು ಇದೇ ಬಂಡೆಯ ಮೇಲೆ. ಇವುಗಳ ಜೊತೆಗೆ ಅವಿಭಕ್ತ ಕುಟುಂಬದ ನಮ್ಮ ಮನೆಯ ಅನೇಕ ಹಿಸೆ ಪಂಚಾಯ್ತಿಯ ಪ್ಲಾನುಗಳು ಈ ಕಲ್ಲಿನ ಮೇಲೆಯೇ ರೂಪುಗೊಂಡಿದೆ ಅನ್ನುವುದು ಓಪನ್ ಸೀಕ್ರೇಟ್ ಸಂಗತಿ. ಇಷ್ಟೆಲ್ಲ ರಸನಿಮಿಷಗಳನ್ನು ಈ ಬಂಡೆಗಲ್ಲು ನನಗೆ ತಗೋ ಮಾಣಿ.. ನಿನನ್ನ ಮಾತಿಗೆ ನನ್ನ ಕಾಣಿಕೆ ಅಂತ ನೀಡಿಬಿಟ್ಟಿದೆ.
    ಹಾಂ.. ಇಷ್ಟೆಲ್ಲ ವಿಷಯಗಳ ಜೊತೆಗೆ ಮುಖ್ಯ ಸಂಗತಿಯನ್ನೇ ಮರೆತಿದ್ದೆ ನೋಡಿ.. ಅದೆಂದರೆ, ಈ ಕಲ್ಲುಬಂಡೆಯ ಬುಡದಲ್ಲಿ ಹಾಕುತ್ತಿದ್ದ ಕಾಲುಸಂಕ. ನಮ್ಮೂರಿನ ಹಿರಿಕಿರಿಯ ಜೀವಗಳೆಲ್ಲ ಸೇರಿ ಅಘನಾಶಿನಿಯ ಆರ್ಭಟ ಕಡಿಮೆಯಾಗಿ ಸೌಮ್ಯ ಸುಕೋಮಲೆಯ ರೂಪ ತಾಳುತ್ತಿದ್ದ ಸಂದರ್ಭದಲ್ಲಿ ಈ ಕಲ್ಲಿನ ಬುಡಕ್ಕೆ ಮೂರ್ನಾಲ್ಕು ದೈತ್ಯ ಅಡಿಕೆ ಮರದ ತುಂಡುಗಳನ್ನು ಹೊತ್ತುತಂದು ಸಂಕ ಹಾಕುತ್ತಾರೆ. ಈ ಸಂಕ ನಮ್ಮೂರಿಗೂ, ಪಕ್ಕದ ಹಿತ್ಲಕೈ ಊರಿಗೂ ಬೇಸಿಗೆಯಾದ್ಯಂತ ಸಂಚಾರ ವ್ಯವಸ್ಥೆಯನ್ನು ಕಕ್ಲಿಸುತ್ತದೆ. ಇದಕ್ಕೂ ಮಿಗಿಲಾಗಿ ಈ ಕಾಲು ಸಂಕ ನಮ್ಮೂರಿನ ಹುಡುಗರಿ ಈಜುವ ಮನಸ್ಸಿಗೆ ನೀರೆರೆಯುತ್ತದೆ. ಈ ಸಂಕದ ಮೇಲಿಂದ ನಮ್ಮೂರಿನ ಹುಡುಗರು ನೀರಿನಾಳಕ್ಕೆ ಡೈವ್ ಹೊಡೆಯುತ್ತಿದ್ದರೆ... ಆಹಾ.. ಸ್ವರ್ಗಸುಖ. ಇಂತಹ ದಿವ್ಯಕಾರ್ಯಕ್ಕೆ ಸದ್ದಿಲ್ಲದೇ ಮೆಟ್ಟಿಲಾದದ್ದು ನನ್ನ ಪ್ರೀತಿಯ ಬಂಡೆಗಲ್ಲು.
    ಕಾಲ ಎಂದಿನಂತೆ ಇರುವುದಿಲ್ಲ ನೋಡಿ. ಕಾಲನ ಆರ್ಭಟವೋ ಅಥವಾ ಆಧುನಿಕತೆಯ ಭೀಖರ ಪರಿಣಾಮವೋ.. ನನ್ನ ಪ್ರೀತಿಯ ಕಲ್ಲಿಗೂ ಅದರ ಭೀಖರತೆ ಕಾಡುತ್ತಿದೆ ಸಾರ್.. ಏನು ಮಾಡಬೇಕೆಂದು ತೋಚದೇ ಒದ್ದಾಡುತ್ತಿದ್ದೇನೆ. ಮಳೆಗಾಲದಲ್ಲಿ ಬಳುಕಿ, ಬಳಸಿ ತಬ್ಬಿ ಹಿಡಿದಿದ್ದ ಅಘನಾಶಿನಿಯ ನೀರಿನ ಸುಳಿಗಳು ಕಲ್ಲುಬಂಡೆಯ ಮೇಲೆ ಉಂಟು ಮಾಡಿದ್ದ ಆಕೃತಿಗಳು ಚಿತ್ತಾರಗಳೆಲ್ಲ, ಹೊಪ್ಪಳಿಕೆ ಎದ್ದಂತೆ ಏಳುತ್ತಿವೆ. ಮೀನಿಗಾಗಿ ಬಾಂಬು ಹಾಕುವವರ ಬಾಂಬಿನ ಢಾಂ..ಗೆ ಕಲ್ಲು ಗಡಗಡನೆ ನಡುಗುತ್ತಿದೆ. ಅದೆಷ್ಟು ಮೂಕವಾಗಿ ರೋಧಿಸುತ್ತಿದೆಯೋ. ನಾನು ನನ್ನ ಭಾವನೆಗಳನ್ನು ಅದರ ಬಳಿ ಹಂಚಿಕೊಂಡಂತೆ ಅದೂ ನನ್ನ ಬಳಿ ಏನೋ ಹೇಳಲು ತವಕ ಗೊಂಡಂತೆ ನನಗೆ ಇತ್ತಿತ್ತಲಾಗಿ ಅನ್ನಿಸುತ್ತಿದೆ. ಅಘನಾಶಿನಿ ನದಿಗೆ ಅದೆಂತೆಂತದ್ದೂ ಯೋಜನೆಗಳು ಬರುತ್ತವೆ ಎನ್ನುವ ಭಯನೀಡುವ ಸುದ್ದಿಗಳು ಜೋರಾಗುತ್ತಿವೆ. ಈ ಯೋಜನೆಗಳ ಗೋಜಿನಲ್ಲಿ ನಾನು ನನ್ನ ಮಿತ್ರ ಆನೆಕಲ್ಲು ಒದ್ದಾಡುತ್ತಿದ್ದೇವೆ.
    ಕ್ರಮೇಣ ಮನಸ್ಸು ಬಾಲ್ಯದ ಖುಷಿ ಸಂಗತಿಯೆಡೆಗೆ ಹೊರಳುತ್ತದೆ. ಕಾಲ ಸರಿದಂತೆಲ್ಲ ಬಾಲ್ಯದ ಜಾಗದಲ್ಲಿ ಮುಪ್ಪು ಅಡರಿಕೊಳ್ಳುತ್ತದೆ. ನನ್ನನ್ನೂ, ನನ್ನಂತಹ ಅದೆಷ್ಟೋ ತುಡುಗರನ್ನೂ, ನೂರಾರು ತಲೆಮಾರನ್ನೂ ಕಂಡ ಆನೇಕಲ್ಲು ನನ್ನ ತಲೆಮಾರಿನಲ್ಲೇ ಕಾಣೆಯಾಗಿಬಿಡುತ್ತದಾ? ಯಾವುದೋ ಮೀನಿನ ಚಪಲದ ಮನುಷ್ಯನ ಬಾಂಬಿಗೆ ಈ ಕಲ್ಲು ಹೋಳಾಗಿಬಿಡುತ್ತದಾ ಎಂಬ ಭಯ ಕಾಡುತ್ತಿದೆ. ನನ್ನ ಹಾಗೂ ನನ್ನಂತಹ ನೂರಾರು ಜನರ ಭಾವನೆಗಳಿಗೆ ಸಾಕ್ಷಿಯಾಗಿರುವ ಈ ಆನೆಗಲ್ಲು ಮಾತ್ರ ಶತ ಸಹಸ್ರಮಾನಗಳಿಂದ ನಡೆದು ಪಂದ ಪ್ರಕೃತಿಯ ಆಟ, ಪ್ರಕೃತಿ-ಮಾನವನ ಹೊಡೆದಾಟಗಳಿಗೆ ಮೌನತಪಸ್ವಿಯಾಗಿ ನಿಂತಿದೆ..

Tuesday, November 27, 2012

ಸಾಂತ್ವನ


ಅಂಗಾತ ಮಲಗಿದ್ದೆ..
ಬಹುಕಾಲದಿಂದ ಕರೆಗಟ್ಟಿ
ಉಳಿದಿದ್ದವು ಕಣ್ಣೀರು...|

ಸುಮ್ಮನೆ ಮಗ್ಗುಲಾಗಿ
ಹೊರಳಿದೆ.,,
ಬಲಗಣ್ಣಿನೊಳಗೆ ಜಿನುಗಿದ ನೀರು
ಸೀದಾ ಮೂಗಿನ ಮೇಲ್ಗಡೆಯಲ್ಲಿ
ಹಾದುಹೋಗಿ
ಎಡಗಣ್ಣಿನೊಳಗೆ ಬಿದ್ದಿತು...||

ಸುಮ್ಮನೆ
ಒಮ್ಮೆ ತಂಪಾಯಿತು
ಸಾಂತ್ವನ ಹೇಳಿತು..||


(ವಿ. ಸು. : ಒಂದು ಬೇಸರಿನ ಸಂಜೆಯಲಿ ಬರೆದ ಕವಿತೆ..2-2-2009ರಂದು ದಂಟಕಲ್ಲಿನಲ್ಲಿ ಬರೆದಿದ್ದು..)

Friday, November 23, 2012

ವಾಸಂತಿ ಕೆರೆಯಲ್ಲಿ ಮುರುಕು ಮರದ ದೋಣಿಯಲ್ಲಿ...

ವಾಸಂತಿ ಕೆರೆಯಲ್ಲಿ ಮುರುಕು ಮರದ ದೋಣಿಯಲ್ಲಿ...

    ಅಲ್ಲಿ ನೀರಿನ ಮಧ್ಯ ಬಿದ್ದ ಮದರ ಒಂದು ಅಗಲವಾದ ತುಂಡು. ಎಂದೋ, ಯಾರೋ ಹಚ್ಚಿದ ಬೆಂಕಿಗೆ ಅರ್ಧಂಬರ್ಧ ಸುಟ್ಟು ಕರಕಲಾಗಿ ಉಳಿದಿದ್ದು. ಬಾಲ್ಯದ ನಮ್ಮಂತ ತುಡುಗಿನ ಹುಡುಗರಿಗೆ ಅದೇ ದೋಣಿ, ತೆಪ್ಪ, ಆಟವಾಡುವ ದೋಣಿಮನೆ ಎಲ್ಲ.
    ನಮ್ಮ ಗ್ಯಾಂಗೋ ಭಾರಿ ಇತ್ತು ಬಿಡಿ. ಎಲ್ಲರಿಗಿಂತ ಕಿರಿಯ ನಾನು. ಕಾನಲೆಯ ಗಿರೀಶಣ್ಣ, ಗುರಣ್ಣ, ಯೋಗೀಶ ಭಾವ, ಶಶಿ ಭಾವ, ಹರೆಯಕ್ಕೆ ಕಾಲಿಟ್ಟು ಗಂಭೀರತನ ಮೈಮೂಡಿದ್ದರೂ ಆಗೊಮ್ಮೆ ಈಗೊಮ್ಮೆ ಗಣಪಣ್ಣ ಭಾವನೂ ನಮ್ಮ ಪುಂಡರಪೂಟಿಗೆ ಸೈ. ನಮ್ಮ ಕಿಲಾಡಿ ತುಂಟತನಕ್ಕೆಲ್ಲ ರಾಮಚಂದ್ರಮಾವ ಕಾವಲುಗಾರ.. ಮಂತ್ರಾಕ್ಷತೆಯನ್ನು ಮನಸಾರೆ ಕೊಡುವ ಸಹೃದಯಿ.
    ಒಂದು ಬೇಸಿಗೆಯಲ್ಲಿ ನಮ್ಮ ದಂಡು ಅಜ್ಜನಮನೆಯಾದ ಬರಬಳ್ಳಿಯಲ್ಲಿ ಬೀಡು ಬಿಟ್ಟಿತ್ತು. ನಮ್ಮ ಲಿಗಾಡಿತನಕ್ಕೆ ಯಾವಾಗಲೂ ಅಲ್ಲಿ ಬೀಡು ಬಿಡುತ್ತಿದ್ದ ಮಂಗಗಳ ಗ್ಯಾಂಗು ನಾಪತ್ತೆ.. ಕಾಗೆಗಳಿಗೂ ನೆಲೆಯಿಲ್ಲದಂತಾಗಿದ್ದವು. ಒಂದು ಶುಭ ಮದ್ಯಾಹ್ನದಲ್ಲಿ ಅಜ್ಜನಮನೆಯ ಜಮೀನಿನ ಅತ್ಯಂತ ಮೇಲ್ಭಾಗಕ್ಕೆ ನಾವೆಲ್ಲ ಹೋಗಿದ್ದೆವು. ಕೆರೆ ಈಸುವುದು ನಮ್ಮ ಪರಮ ಉದ್ದೇಶವಾಗಿದ್ದರೂ ರಾಮಚಂದ್ರಮಾವನ ಕಾವಲುಗಾರಿಕೆ ನಮಗೆ ಅಡ್ಡಿಯಾಗಿತ್ತು. ಕೊನೆಗೆ ಹಾಗೂ ಹೀಗೂ ಅವನ ಕಣ್ಣು ತಪ್ಪಿಸಿ ದೋಣಿಯಾಟ ಆಡುವ ಎಂದು ಎಲ್ಲರೂ ಮರದ ತುಂಡಿನ ಮೇಲೆ ಏರಿದೆವು. ಬೆಂಡಿನಂತಹ ದೋಣಿ ನಮ್ಮೆಲ್ಲರ ಭಾರವನ್ನು ಅನಾಮತ್ತಾಗಿ ಹೊತ್ತುಕೊಂಡಿತು. ನಮ್ಮ ಭಾರಕ್ಕದು ಒಮ್ಮೆ ಅಲುಗಾಡಿತಾದರೂ ಸಾಕಷ್ಟು ಉದ್ದವಾಗಿದ್ದರಿಂದ ಮುಳುಗುವ ಭಯ ಇರಲಿಲ್ಲ.
    ಇದ್ದವರ ಪೈಕಿ ಅತ್ಯಂತ ಕಿಲಾಡಿ ಎಂದು ಜನಮಾನಸದಲ್ಲಿ ಹಸಿರಾಗಿದ್ದ ಯೋಗೀಶ ಭಾವ ಅದೆಲ್ಲಿಂದಲೋ ಒಂದು ಉದ್ದನೆಯ ಗಳವನ್ನು ಹಿಡಿದು ತಂದೇಬಿಟ್ಟ. ತಂದವನಿಗೆ ಕೈ ಸುಮ್ಮನಿರಬೇಕಲ್ಲ.. ಹುಟ್ಟುಹಾಕಲು ಪ್ರಾರಂಭಿಸಿದ. ಮರದ ತುಂಡು ನಿಧಾನವಾಗಿ ಮುಂದಕ್ಕೆ ಸಾಗಿತು. ಆಗ ನನಗೆ ಎದೆಯಲ್ಲಿ ಶುರುವಾಯಿತಲ್ಲ ನಡುಗ.. ಅದೇನೋ ಡುಕಡುಕಿ. ನನಗೆ ಆಗ ಆರೋ ಏಳೋ ವರ್ಷ ಇರಬೇಕಷ್ಟೇ. ನಮ್ಮೂರಿನ ಅಘನಾಶಿನಿ ನದಿಯಲ್ಲಿ ನೀರು ಕಡಿಮೆಯಾಗಿ ಮಳ್ಳಂಡೆ ಮುಳುಗುವಷ್ಟು ನೀರಿದ್ದಾಗ ಕಲಿತಿದ್ದ ಅಥವಾ ಕಲಿಯಲು ಪ್ರಯತ್ನಿಸಿದ್ದ ಈಜೆಂಬುದು ಮಾತ್ರ ನನ್ನ ಪಾಲಿಗಿದ್ದ ಆಸರೆಯಾಗಿತ್ತು.
    ಭಾವ ಯೋಗೀಶನಂತೂ ಕೆರೆಯ ಮಧ್ಯಕ್ಕೆ ನಮ್ಮೆಲ್ಲರನ್ನು ಕರೆದೊಯ್ದವನೇ ಮದರ ದಿಮ್ಮಿಯ ಮೇಲೆ ನಿಂತು ಚಿಟ್ಟಾಣಿಯನ್ನು ನೆನಪಿಸಿಕೊಂಡವನಂತೆ ಧಿತ್ತೋಂ ನರ್ತನ ಶುರಹಚ್ಚಿಕೊಂಡೇ ಬಿಟ್ಟ. ಇನ್ನೇನು ಮಾಡೋದಪ್ಪಾ ಅನ್ನೋ ತಲೆ ಬಿಸಿ ನಮ್ಮೆಲ್ಲರದ್ದು. ಇದೆಲ್ಲಕ್ಕಿಂತಲೂ ನಮ್ಮೆಲ್ಲರನ್ನೂ ಭಯಕ್ಕೆ ಈಡು ಮಾಡಿದ್ದೆಂದರೆ ವಾಸಂತಿ ಕೆರೆಯ ದಂತ ಕಥೆಗಳು. ಅದ್ಯಾರದ್ದೂ ಬಾಳಂತಿಯ ಬಲಿ ಪಡೆದ ವಾಸಂತಿ ಕೆರೆ ನಮಗೆ ಅದೆಷ್ಟು ಖುಷಿ ಕೊಟ್ಟಿದ್ದರೂ ಆಗಾಗ ಭಯದ ಸೆಳಕನ್ನು ಮೂಡಿಸುತ್ತಿದ್ದುದಂತೂ ಹೌದು. ನನಗಂತೂ ಅವೆಲ್ಲವೂ ಒಮ್ಮೆಲೆ ನೆನಪಾಗಿ ಅಳಲು ಪ್ರಾರಂಭಿಸಿದೆ. ನಾನು ಅಳಲು ಶುರುಮಾಡಿದರೆ ಭಾವ ಯೋಗೀಶ ತನ್ನ ನರ್ತನವನ್ನು ಹೆಚ್ಚಿಸಿಯೇ ಬಿಟ್ಟ.
    ನನಗಂತೂ ಏನು ಮಾಡುವುದೋ ತೋಚಲೇ ಇಲ್ಲ. ತಗಳಪ್ಪಾ ಜಿಗಿದೇ ಬಿಟ್ಟೆ ನೋಡಿ ನೀರಿಗೆ.. ಧಬಲ್ ಅಂತ.. ಒಮ್ಮೆಲೆ ಯೋಗೀಶನಾದಿಯಾಗಿ ಎಲ್ಲರೂ ಕಕ್ಕಾಬಿಕ್ಕಿ. ವಿನಯನ ಕಥೆ ಮುಗೀತು....
    ಸಿನಿಮಾ ಸ್ಯಾಡ್ ಎಂಡಿಂಗ್ ಅಲ್ಲ ಮಾರಾಯ್ರೇ.. ಕ್ಲೈಮ್ಯಾಕ್ಸ್ ಅಭೀ ತೋ ಬಾಕಿ ಹೈ ಮೆರೆ ದೋಸ್ತೋ.. 
    ಆ ದಿನಗಳಿಂದಲೂ ನಾನು ಕುಳ್ಳನೇ. ಈಗ 5.7 ಅಡಿ ಇದ್ದೇನೆ. ಆಗ 4-4.5 ಇದ್ದಿರಬಹುದು. ನಾನು ಜಿಗಿದೇನೋ ಜಿಗಿದೆ. ಏನು ಮಾಡಿದರೂ ಕಾಲಿಗೆ ನೆಲ ಸಿಗೋದೇ ಇಲ್ಲ. ಒಮ್ಮೆ ಕಂತಿದೆ. ಬುಳುಕ್ಕನೆ ನೀರು ಕುಡಿದೆ. ಒಂದೆರಡು ಸಾರಿ ಕೆಮ್ಮಿದೆ. ಹಣೆಬರಹಕ್ಕೆ ಹೊನೆ ಯಾರ್ರೀ.. ನಾನು ಜಿಗಿದ ಸ್ಥಳದಲ್ಲಿ ಅನಾಮತ್ತು ಏಳು ಅಡಿ ಆಳ. ಈಗಾದರೆ ಎಂತಹ ಆಳವನ್ನಾದರೂ ಈಜಬಲ್ಲೆ. ಆಗ.. ??!!
    ಒಮ್ಮೆಲೆ ಯಮಧರ್ಮರಾಜನ್ನು ನೆನೆದೆ ನೋಡಿ.. ಎಲ್ಲಿತ್ತೋ ಯಮ ಶಕ್ತಿ.. ಕೈಕಾಲನ್ನು ವಿಚಿತ್ರವಾಗಿ ಬಡಿದು, ನೀರನ್ನು ಸೀಳಿ, ಎಮ್ಮೆಗಳು ಕುಪ್ಪಳಿಸುವಂತೆ ಕುಪ್ಪಳಿಸಿ ದಡ ತಲುಪುವ ಹೊತ್ತಿಗೆ, ಎದೆಯಲ್ಲಿ ಗಿಟಾರು ನೂರು.... ಇನ್ನು ಕೈಕಾಲುಗಳ ಸ್ಥಿತಿಯಂತೂ ಬೇಡವೇ ಬೇಡ ಬಿಡಿ.. ಡಗಡಗ ಅಲ್ಲಲ್ಲ.. ಗಡಗಡ.. ಅಷ್ಟರ ಹೊತ್ತಿಗೆ ನಮ್ಮ ದಂಡನ್ನು ಹುಡುಕಿಕೊಂಡು ಬಂದಿದ್ದ ರಾಮಚಂದ್ರಮಾವನ ಕಣ್ಣಿಗೆ ನಾನು ಬಿದ್ದಿದ್ದೆ. ನೋಡಿದ ತಕ್ಷಣವೇ ನಮ್ಮ ಭಾನಗಡಿ ಗೊತ್ತಾಗಿಯೇ ಬಿಟ್ಟಿತು. ಶುರುವಾಯಿತು ನೋಡಿ.. ಪುರುಷ ಸೂಕ್ತ.. ಸಹಿತ ಮಂಗಳಾರತಿ.. ಸಾಕಪ್ಪಾ ಸಾಕು... ಕೇಳಲಾರೆ..
    ನಾನಂತೂ ಹಾಗೋ ಹೀಗೋ ಹಾರಿ ಬಂದೆ.. ಮುಂದಿನ ಕಥೆ ಕೇಳಿ ಇನ್ನೂ ಗಮ್ಮತ್ತಾಗಿದೆ. ಯೋಗೀಶ ಭಾವ ತನ್ನ ಲಿಗಾಡಿತನವನ್ನು ಇಷ್ಟಕ್ಕೆ ಎಲ್ಲಿ ಬಿಡ್ತಾನೆ ಹೇಳಿ.. ಮುಂದುವರಿದ, ಮುಂದುವರಿದ.. ಕೆರೆಯ ಮಧ್ಯ ಒಂದು ಚಿಕ್ಕ ಬಂಡೆಯಂತದ್ದು ಇತ್ತು. ವಾಸ್ತವದಲ್ಲಿ ಅದೂ ಇನ್ನೊಂದು ಮರದ ದಿಮ್ಮಿ. ಯಾವಾಗಲೋ ಕೆರೆಯಲ್ಲಿ ಬಿದ್ದು ಗಟ್ಟಿಯಾಗಿ ನಡುಗಡ್ಡೆಯಂತಾಗಿ ಹೋಗಿತ್ತು. ಅಲ್ಲಿಯವರೆಗೂ ಮುಂದುವರಿದ. ಅಲ್ಲಿ ಗಿರೀಶಣ್ಣನ ಬಳಿ ಒಂದ್ನಿಮಿಷ ಇಲ್ಲಿ ಇಳಿ ಅಂದ. ಯಂತಕ್ಕಾ ಹೇಳಿ ಕೇಳಿದ್ದಕ್ಕೆ ತಡಿ ಈಗ ಬತ್ತಿ ಎಂದು ಹೇಳಿ ವಾಪಾಸು ಬಂದುಬಿಟ್ಟ.
    ಯೋಗೀಶ ಭಾವ ವಾಪಾಸು ದಡಕ್ಕೆ ಬಂದು ನಗಲು ಪ್ರಾರಂಭಿಸಿದಾಗಲೇ ಗಿರೀಶಣ್ಣನಿಗೆ ತಾನು ಪೆಚ್ಚಾಗಿದ್ದು ಅರಿವಿಗೆ ಬಂದಿದ್ದು. ಅವನಂತೂ ಜೋರಾಗಿ ಅಳಲು ಪ್ರಾರಂಭಿಸಿದ. ಕೊನೆಗೆ ಅಲ್ಲೇ ಇದ್ದ ರಾಮಚಂದ್ರ ಮಾವ ಯೋಗೀಶನನ್ನು ಹಿಡಿದು ನಾಲ್ಕೇಟು ಬಡಿದು ಗಿರೀಶಣ್ಣನನ್ನು ಕರೆದುಕೊಂಡುಬಂದ.
    ಬಾಲ್ಯದಲ್ಲಿ ನಡೆದ ಈ ಘಟನೆ ನನ್ನ ಮನದಾಳದಲ್ಲಿ ಅಚ್ಚಳಿಯದೇ ನಿಂತಿದೆ. ಇಲ್ಲಿ ಪುಂಡರಪೂಟು ಮಾಡಿದ ನಾವೆಲ್ಲ ಇದೀಗ ಎಲ್ಲೆಲ್ಲೋ ನೆಲೆ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದೇವೆ. ನಮ್ಮೆಲ್ಲರ ಪಾಲಿಗೆ ಸ್ವಿಮ್ಮಿಂಗ್ ಫೂಲ್ ಆಗಿದ್ದ ವಾಸಂತೀಕೆರೆ ತನ್ನ ಗೂಢ ಕಥೆಗಳ ಜೊತೆಗೆ ಗೂಢವಾಗಿಯೇ ಉಳಿದು ಹೋಗಿದೆ. ಎಲ್ಲಕ್ಕಿಂತಲೂ ಮಿಗಿಲಾಗಿ ಕಾಳಿನದಿಗೆ ಕಟ್ಟಲಾಗಿರುವ ಕೊಡಸಳ್ಳಿ ಡ್ಯಾಮಿನ ನೀರು ವಾಸಂತಿ ಕೆರೆಯನ್ನು ಆಪೋಶನ ಪಡೆದುಕೊಂಡುಬಿಟ್ಟಿದೆ.
    ತಮಾಶೆಯಾಗಿದ್ದರೂ ಅನೇಕ ಜೀವನ ಅಂಶಗಳನ್ನು ಕಟ್ಟಿಕೊಟ್ಟ ಈ ಘಟನೆ ಎಂದು ಮರೆಯಲಾರದಂತದ್ದು. ಜೊತೆಗೆ ವಾಸಂತೀ ಕೆರೆಯೂ. 

(ಬಾಲ್ಯದ ಅನುಭವದ ಕಣಜದಿಂದ ಇದು ಚಿಕ್ಕ ಬರಹ ಇದು..ಸ್ವಲ್ಪ ಕುತೂಹಲ, ಸ್ವಲ್ಪ ಬಾಲಿಶ, ಸ್ವಲ್ಪ ಕಾಮಿಡಿ... ಜೊತೆಗೊಂದು ಕ್ಲೈಮ್ಯಾಕ್ಸ್.. )

Wednesday, November 21, 2012

ಮೂರು ಹಾಯ್ಕುಗಳು...


ಅವನು ನಕ್ಕು ನಕ್ಕು..
ಕಣ್ಣೀರು ಹಾಕಿಬಿಟ್ಟ|

--

ಅವನು ಬೆಳಿಗ್ಗೆ ಮೆಸೇಜು ಕಳಿಸಿದ್ದ
ಯಾಕೋ.... ರಾತ್ರಿ ಬಂದಿದೆ..||

--

ಅವನು ಕನಸು ಕಾಣುವ ರೀತಿ ಕಂಡು
ಕನಸಿಗೇ ಬೇಸರ ಬಂದುಬಿಟ್ಟಿದೆ||


ಬೆಳಕಿನೆಡೆಗೆ

ಮತ್ತೊಂದು ಕವಿತೆ...


ಬೆಳಕಿನೆಡೆಗೆ


ಯಾಕೋ ಗೊತ್ತಿಲ್ಲ..|
ಈ ಬೆಳಗು ಮುಂಜಾವಿನಲಿ
ಹಾಡು ಗುನುಗಬೇಕೆನ್ನಿಸುತ್ತಿದೆ||

ಚುಮು ಚುಮು ಚಳಿಯಲ್ಲಿ,
ಸುರಿವ ಇಬ್ಬನಿಯ ಧಾರೆಯಲ್ಲಿ,
ನಸುಕ ಮುಸುಕಲ್ಲಿ
ಕುಣಿಯಬೇಕೆನ್ನಿಸುತ್ತಿದೆ||

ಹೊನ್ನ ಬಣ್ಣದ ಸೂರ್ಯ ಕಿರಣಕ್ಕೆ
ಕೈಯ ತಾಕಿಸಿ, ಮೆರೆದು
ಮನ ಮಣಿಯಬಯಸಿದೆ||

ಸುರಿವ ಇಬ್ಬನಿಯ ಧಾರೆಯ ತಾಳಕ್ಕೆ
ತಕಪಕನೆ ಹೆಜ್ಜೆ ಹಾಕಬೇಕೆನ್ನಿಸುತ್ತಿದೆ||

ಯಾಕೋ ಗೊತ್ತಿಲ್ಲ..|
ಮನಸು ಹೊಸತಾಗುತ್ತಿದೆ..
ನಸುಕು ಹರಿಯುತ್ತಿದೆ..||


ಮನದಿ ಕತ್ತಲೆಯೋಡಿ..
ಬಾಳ ಬಾಂದಳದಲ್ಲಿ ಹೊಸ ಸೂರ್ಯ ಮೂಡಿ
ಮತ್ತೆ ಮುಂಜಾವುದಯಿಸುತ್ತಿದೆ..|


ಇದನ್ನು ಬರೆದಿದ್ದು -ದಂಟಕಲ್ಲಿನಲ್ಲಿ 7-11-2007ರಂದು

Tuesday, November 13, 2012

ನಮ್ಮೂರ ಜಲಪಾತ...

ನಮ್ಮೂರ ಜಲಪಾತ...

ನಮ್ಮೂರಲ್ಲೆ ಏನೆಲ್ಲ ಇದೆ.. ಆದರೆ ಜಲಪಾತ ಇಲ್ಲವಲ್ಲ ಅನ್ನೋ ಕೊರಗಿತ್ತು...
ಮೊನ್ನೆ ಮನೆಗೆ ಹೋದಾಗ ಹಾಗೆಯೇ ಗುಡ್ಡ ಬೆಟ್ಟ ತಿರುಗಾಡಲು ಹೋಗಿದ್ದೆ...
ಆಗ ಕಂಡಿದ್ದು ಈ ಜಲಪಾತ...

ಇದನ್ನು ಜಲಪಾತ ಎನ್ನಬಹುದೋ..ದಬದಬೆ ಎನ್ನಬಹುದೋ.. ಅಥವಾ.. ಇಳಿಜಾರಕಲಲ್ಲಿ ನೀರು ಬೀಳ್ತದೆ ಅಷ್ಟೇ ಅನ್ನಬಹುದೋ.. ನಿಮಗೆ ಬಿಟ್ಟದ್ದು..
ನಾನಂತೂ ಅದಕ್ಕೆ ಕಲ್ಯಾಣೇಶ್ವರ ಜಲಪಾತ ಉರುಫ್ ಕಲ್ಲೆ ಜಲಪಾತ ಎಂದು ಕರೆದಿದ್ದೇನೆ...
ಹೀಗೆ ಕರೆಯಲೂ ಕಾರಣ ಇದೆ ನೋಡಿ..

ಈ ಜಲಪಾತ ಇರುವುದು ನಮ್ಮೂರಿನ ಹತ್ತಿರದ ಕುಚಗುಂಡಿ ಎಂಬ ಊರಿನ ಬಳಿ..
ಈ ಊರಿನಲ್ಲಿಯೇ ಕಲ್ಯಾಣೇಶ್ವರ ದೇವಾಲಯ ಇದೆ..
ನಮ್ಮೂರಿಗರು ಈ ದೇವಸ್ಥಾನಕ್ಕೇ ನಡೆದುಕೊಳ್ಳುತ್ತಾರೆ. 
ಅದಕ್ಕೆ ಕಲ್ಯಾಣೇಶ್ವರ ದೇವಾಲಯ ಅಥವಾ ಶಾರ್ಟ್ ಆಗಿ ಕಲ್ಲೆ ಜಲಪಾತ ಎಂದು ಕರೆದಿದ್ದೇನೆ..

ಇದು ತೀರಾ ದೊಡ್ಡ ಜಲಪಾತ ಅಲ್ಲ.. ಆದ್ದರಿಂದ ಈ ಜಲಪಾತ ಅಷ್ಟು ಎತ್ತರ ಉಂಟು, ಇಷ್ಟು ಎತ್ತರ ಉಂಟು ಎಂಬ ಕಲ್ಪನೆಗಳು ಬೇಡ..15-20 ಅಡಿಗಳ ಎತ್ತರ ಇರಬಹುದು ಅಷ್ಟೇ.. ಮಳೆಗಾಲದಿಂದ ಡಿಸೆಂಬರ್ ತನಕ ನೀರು ಇರ್ತದೆ...
ಆ ಮೇಲೆ ಹಳ್ಳದಲ್ಲಿ ನೀರಿದ್ದರೆ ಮಾತ್ರ ಜಲಪಾತದ ದರ್ಶನ ಭಾಗ್ಯ ಸಾಧ್ಯ...
ಇಲ್ಲವಾದಲ್ಲಿ ಬಂದ ದಾರಿಗೆ ಸುಂಕವಿಲಲ್ಲ..

ಜಲಪಾತದ ಎದುರು ದೊಡ್ಡ ಗುಂಡಿ ಇದೆ.. ಆಳವಿಲ್ಲ. ಈಜಬಹುದು..
ಕಲ್ಲಿನ ಹಾಸು ಇಲ್ಲವಾದ ಕಾರಣ... ಮಣ್ಣು ಮಣ್ಣು.. ಆದರೆ ನೀರು ಮಾತ್ರ ಕೊರೆಯುವಷ್ಟು ತಂಪು..
ಪಿಕ್ ನಿಕ್ಕಿಗೆ ಬರಬಹುದು..
ಎದುರಿಗೆ ಗುರು ಗೌಡನ ಮನೆ ಇದೆ..
ಕುಡಿಯಲು ನೀರು ಕೊಟ್ಟಾರು..

ಬರುವ ಬಗೆ : ಶಿರಸಿಯಿಂದ ಕಾನಸೂರು, 2 ಕಿ.ಮಿ ದೂರದ ಅಡಕಳ್ಳಿ.. ಅಡಕಳ್ಳಿಯ ಭೂತನಕಟ್ಟೆಯಿಂದ ದಂಟಕಲ್ ದಾರಿಯಲ್ಲಿ 4.5 ಕಿ.ಮಿ ದೂರ ಈ ಜಲಪಾತಕ್ಕೆ. ದಂಟಕಲ್ಗೆ ಬಂದು ಕುಚಗುಂಡಿ ಊರಿನ ಕುರಿತು ಕೇಳಿದರೆ ಯಾರಾದರೂ ದಾರಿ ತೋರಿಸಿಯಾರು.. ಕುಚಗುಂಡಿಯಲ್ಲಿ ಕಲ್ಲೇ ದೇವಸ್ಥಾನವನ್ನು ಹಾದು, ಗುರು ನಾಯ್ಕನ ಮನೆ ಹತ್ತಿರ ಬರಬೇಕು.. ಮರಲಮನೆ ಬಳಿ ಇದೆ ಈ ಜಲಪಾತ...ಇದು ಒಂದು ದಾರಿ..
ಇನ್ನೊಂದು : ಶಿರಸಿಯಿಂದ ಕಾನಸೂರು.. ಕಾನಸೂರಿನಿಂದ ಬಾಳೇಸರ ರಸ್ತೆಯಲ್ಲಿ ಕೋಡ್ಸರ.. ಕೋಡ್ಸರದಿಂದ ಕುಚಗುಂಡಿ ಅಥವಾ ದಂಟಕಲ್ ರಸ್ತೆಯ ಗುಂಟ 2 ಕಿ.ಮಿ ಬಂದರೆ ಮರಲ ಮನೆ ಘಟ್ಟ ಅಥವಾ ಮರಲಮನೆ ಮುರುಕಿ ಸಿಗ್ತದೆ.. ಅದರ ಕೆಳಗೆ ಒಂದು ಹಳ್ಳ ಹರಿದು ಹೋಗ್ತದೆ.. ಅದಕ್ಕೆ ಈ ಜಲಪಾತ ಆಗಿದೆ.. ರಸ್ತೆ ಪಕ್ಕವೇ ಕಾಣ್ತದೆ..
ಸರ್ವ ಋತು ರಸ್ತೆ ಇದೆ..
ಆದರೆ ಸರ್ವ ಋತುವಿನಲ್ಲೂ ನೀರು ಇರೋದಿಲ್ಲ..

ಊರು ಚಿಕ್ಕದು.. ಮುಗ್ದ ಜನ.. ಬಂದವರು ಮಲಿನ ಮಾಡದಿದ್ದರೆ ಊರಿನವರಿಗೆ ಸಂತಸ...
ಹೊರ ಜಗತ್ತಿಗೆ ಇದರ ಬಗ್ಗೆ ಗೊತ್ತಿರಲಿಲ್ಲ.. ಈಗ ನಾನೇ ಎಲ್ಲರಿಗೆ ತಿಳಿಸ್ತಾ ಇರೋದ್ರಿಂದ..
ಅಲ್ಲಿ ಮಲಿನವಾದರೆ ನಾನೇ ಹೊಣೆಗಾರನಾಗಬೇಕಾಗುತ್ತದೆ..
ಪ್ಲಾಸ್ಟಿಕ್ ಬೇಡ..
ಸುಮ್ಮನೆ ಹೋಗಿ ಎಂಜಾಯ್ ಮಾಡ್ಕೊಂಡು ಬನ್ನಿ...
ನಿಮ್ಮ ಕುತೂಹಲ ತಣಿಕೆಗೆ ಇದೋ ಪೋಟೋ ಹಾಕಿದ್ದೇನೆ.. ಹೋಗಲಿಕ್ಕಾಗದವರು ಇಲ್ಲೇ ನೋಡಿ ಖುಷಿ ಪಡಿ..

Thursday, November 8, 2012

ಪರಿತಾಪಿಯ ಪ್ರೇಮಪತ್ರ

ಪರಿತಾಪಿಯ ಪ್ರೇಮಪತ್ರ

ಮನದ ಮೂಸೆಯಿಂದರಳಿದ ಪ್ರೇಮಕಾವ್ಯ


ಒಲವಿನ ಗೆಳತಿ,
    ನೀನು ಇಷ್ಟು ಬೇಗ ಹೀಗೆ ರಿಯಾಕ್ಟ್ ಆಗ್ತೀಯಾ ಅಂತ ನಾನು ತಿಳಿದಿರಲಿಲ್ಲ. ನೀನು ಒಪ್ಪದೇ ಇರಬಹುದು, ನನ್ನ ಲೈಕ್ ಮಾಡದೇ ಇರಬಹುದು ಅಂದ್ಕೊಂಡಿದ್ದೆ. ನಿನ್ನ ನಿರ್ಧಾರ ಕೇಳಿನ ನನ್ನೊಡಲಿನಲ್ಲಿ ಅದೆಷ್ಟೋ ಹರ್ಷಗಳು ಚಿಲುಮೆ ಉಕ್ಕಿ ಒಡೆದು ಎಂತಹ ಮಧುರ ಯಾತನೆಯಾಯ್ತು ಅಂತೀಯಾ...
    ನೀನು ನನ್ನ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ಟ ಕ್ಷಣವೇ ನನ್ನ ಮನದ ಮರುಭೂಮಿಯೊಳಗೆ ವರ್ಷಧಾರೆ ಸುರಿದಂತಾಗಿಬಿಟ್ಟಿತು. ಅಂತೂ ಜೀವನದಲ್ಲಿ ಮೊದಲಬಾರಿಯೋ ಎಂಬಂತೆ ನಾನು ಆಸೆ ಪಟ್ಟಿದ್ದು, ಇಷ್ಟಪಟ್ಟಿದ್ದು ನನ್ನ ಕೈ ಹಿಡಿದಿದೆ. ಇಂಥಾ ಹೊತ್ನಲ್ಲೇ ನನ್ನ ಮನಸ್ಸು ಅದೆಷ್ಟು ಕವನಗಳನ್ನು ದೊಡ್ಡ ಹಬ್ಬದಲ್ಲಿ ಪುಂಡಿ ನಾರಿನ ಹಗ್ಗ ಹೊಸೆದಂತೆ ಹೊಸೆಯಲಾರಂಭಿಸಿದೆ ಗೊತ್ತಾ...
    ಅದು ಹಾಗಿರಲಿ ಬಿಡು, ನನಗೆ ನೀನು ಯಾಕಿಷ್ಟವಾದೆ ಅನ್ನುವುದನ್ನು ಮೊದಲು ಹೇಳಿಬಿಡುತ್ತೇನೆ ಕೇಳು. ಆ ನಿನ್ನ ನಗು, ನಕ್ಕಾಗ ಗುಳಿ ಬೀಳುವ ಕೆನ್ನೆ, ಇಂಪಾದ ಧ್ವನಿ ಇವೆಲ್ಲವೂ ನನ್ನನ್ನು ಮೊದಲು ಇಂಪ್ರೆಸ್ ಮಾಡಿದ್ದು. ಆ ನಂತರ ನೀನು ಮೊದಲು ನನ್ನ ಕವನಗಳ ಅಭಿಮಾನಿಯಾಗಿ `ನೀನು ಚೊಲೋ ಕವನ ಬರೀತೆ ಹಾ.. ಐ ಲೈಕ್ ಇಟ್..' ಎಂದಾಗ ಹೊಸ ಗೆಳತಿಯೊಬ್ಬಳು ಸಿಕ್ಕಳು ಅಂದ್ಕೊಂಡಿದ್ದೆ. ಆ ನಂತರವೇ ಅಲ್ಲವೇ ನಾನು ನಿನ್ನನ್ನು ಸಂಪೂರ್ಣವಾಗಿ ಅರಿತಿದ್ದು.
    ನಿನ್ನ ಗುಣಗಳು, ನಿನ್ನ ಗುರಿಗಳು, ಮನದಾಳದ ತುಮುಲಗಳು, ಭಾವನೆಗಳು, ಜೊತೆಗೆ ಬದುಕೂ ಕೂಡ.. ಇವೆಲ್ಲ ನನ್ನದರಂತೆಯೇ ಇವೆ ಎಂದು ಅರಿತಿದ್ದು ಆ ನಂತರವೇ ಅಲ್ಲವೇ. ಹೀಗೆಲ್ಲಾ ಇಷ್ಟಪಟ್ಟರೂ ನಿನ್ನ ಬಳಿ ನನ್ನ ಮನದಾಳದ ಬಯಕೆಯನ್ನು ತಿಳಿಸಲು ಅದೆಷ್ಟು ಕಷ್ಟಪಟ್ಟುಬಿಟ್ಟಿದ್ದೆನಲ್ಲಾ... ಎಲ್ಲರಿಗೂ ಹಾಗೆಯೇ ಆಗ್ತದಾ ಎಂಬ ತಳಮಳ.. ಮನದೊಳಗೆ ಅದೇನೋ ದುಗುಡ. ಹೇಳಿಕೊಳ್ಳಲಾಗದ ಚಡಪಡಿಕೆ. ನೀನು ಒಪ್ಕೋತೀಯೋ, ಇಲ್ವೋ.. ಸಿಟ್ಟಾಗಿಬಿಡ್ತೀಯೋ.. ನಿನ್ನೆಡೆಗೆ ಹುಟ್ಟಿದ ಪ್ರೀತಿ ನಮ್ಮಿಬ್ಬರ ನಡುವಣ ಸ್ನೇಹವನ್ನು ಕೊಂದುಹಾಕಿದರೆ... ಎಂಬ ಆತಂಕ.. ನೀನು ಎಲ್ಲಿ ನನ್ನನ್ನು ತಿರಸ್ಕರಿಸಿ, ನನ್ನನ್ನು ಅವಮಾನದ ಕೋಟೆಯೊಳಗೆ ಮುಳುಗುವಂತೆ ಮಾಡುತ್ತೀಯೋ ಎಂಬ ಭಯ.. ಇಂತಹ ಭಾವನೆಗಳ ತೊಳಲಾಟದ ನಡುವೆ ಅನೇಕ ದಿನಗಳನ್ನು ದೂಡಿದೆ.
    ಇನ್ನಾಗೋದೇ ಇಲ್ಲ.. ಅಂತ ಕೊನೆಗೊಂದು ದಿನ ನೀನು ಕೇಳಿದ್ದ ಒಂದು ಪುಸ್ತಕದ ನಡುವಣ ಯಾವುದೋ ಪುಟದ ಮಧ್ಯ ನನ್ನ ಭಾವನೆಗಳನ್ನೆಲ್ಲ ಅಕ್ಷರ ರೂಪಕ್ಕೆ ಇಳಿಸಿ, ನನ್ನ ಪ್ರೀತಿಸ್ತೀಯಾ ಅಂತ ಕೇಳಿ ಬರೆದಿಟ್ಟುಬಿಟ್ಟಿದ್ದು ಇನ್ನೂ ನೆನಪಿದೆ ಅಲ್ವಾ.. ಕೊನೆಗೊಮ್ಮೆ ನೀನು ತಿರುಗಿ ಬಂದು ಸಿಟ್ಟಾಗದೇ ನನಗೆ ಪುಸ್ತಕ ಮರಳಿಸಿ ಹೂ ನಗು ನಕ್ಕು ಹೋದೆಯಲ್ಲಾ ಆಗಲೇ ನನಗೆ ಮೂರನೇ ಸಾರಿ ಜೀವ ಬಂದಿದ್ದು. ನಾನು ಕೊಟ್ಟ ಪತ್ರಕ್ಕೆ ಉತ್ತರವೋ ಎಂಬಂತೆ ನೀನು ಕೊಟ್ಟ ನವಿಲುಗರಿಯನ್ನು ಜೋಪಾನವಾಗಿ ಇಟ್ಟಿದ್ದೇನೆ. ಈ ವಿಷಯ ಯಾರಿಗೂ ಗೊತ್ತಿಲ್ಲ ಹಾಂ ಮತ್ತೆ...ನಾನು ಪ್ರೇಮ ಪತ್ರ ಕೊಟ್ಟು, ನೀನು ಮರಳಿ ಉತ್ತರ ಹೇಳುವ ನಡುವೆ ನಾನು ಎದುರಿಸಿದ ಭಾವನೆಗಳು ಶಬ್ದಕ್ಕೆ ನಿಲುಕೋದಿಲ್ಲ..ಮುಂದೊಂದು ದಿನ ಎಂದಾದರೂ ಕವಿತೆಯಾಗಿ ಹೊರ ಬೀಳಬಹುದು ಬಿಡು..
    ಆದರೂ.. ನೀನು ಒಪ್ಪಿಬಿಟ್ಟೆಯಲ್ಲಾ.. ಇನ್ನೇನು ಬಿಡು.. ಒಂದು ಟೆನ್ಶನ್ ತಪ್ಪಿದ ಹಾಗಾಯಿತು. ಹಾಗೇ ನನ್ನ ಬದುಕಿನಲ್ಲಿ ಬಂದಿದ್ದೀಯಾ.. ನನ್ನ ಮನಸ್ಸಿನ ಮೂಟೆಗೆ ನಿನ್ನ ಬದುಕೆಂಬ ಮೊಬೈಲಿನಿಂದ ಆಗಾಗ ಮೆಸೇಜ್ ಮಾಡ್ತಾ ಇರು ಮಾರಾಯ್ತಿ,,, ನನ್ನ ಇನ್ ಬಾಕ್ಸ್ ಖಾಲಿ ಹೊಡಿತಾ ಇದೆ. ಅದಕ್ಕಾಗಿಯೇ ಕಾಯ್ತಾ ಇದ್ದೇನೆ.. ಈಗಷ್ಟೇ ನೀನು ನನ್ನಿಂದ ಬೀಳ್ಕೊಟ್ಟು, ನಾಳೆ ಬರ್ತೀನಿ ಅಂತ ಹೇಳಿ ಹೋಗಿದ್ದೀಯಾ,.. ಹುಚ್ಚು ಖೋಡಿ ಮನಸ್ಸು ಕೇಳ್ತಾನೇ ಇಲ್ಲ ನೋಡು... ಬರಹಕ್ಕೆ ಹಚ್ಚಿಬಿಟ್ಟಿದೆ..
    ಮತ್ತೆ ನಾಳೆ ಸಿಗ್ತೀನಿ.. ಬದುಕಿನ ಭಾವನೆಗಳ ವಿನಿಮಯ ಮಾಡಿಕೊಳ್ಳೋಣ.. ಸರಿ ಮಾರಾಯ್ತಿ.. ಈಗ ಇನ್ನು ಹೆಚ್ಚು ಹೇಳಲಾರೆ.. ಭಾವದಾಟ ಮೇರೆ ಮೀರ್ತಾಇದೆ.. ಬರಹಕ್ಕೊಂದು ಕೊನೆ ಬಿಂದು ಇಡ್ತೀನಿ..

ಇಂತಿ ನಿನ್ನವ
ತೇಜಸ್ವಿ.

(ಪ್ರೇಮದ ಕಾಣಿಕೆ.. ಪ್ರೀತಿಯಲ್ಲಿ ಬಿದ್ದವನ ಮೊದಲ ಪ್ರೇಮಪತ್ರ ಹೀಗಿರಬಹುದಾ... ಸುಮ್ಮನೇ ಬರೆದಿದ್ದು.. ಹೆಂಗಿದೇ ಅನ್ನೋದನ್ನು ಕಮೆಂಟಿಸಿ..)

Wednesday, November 7, 2012

ಒಂದಷ್ಟು ಹನಿ ಚುಟುಕಗಳು...

28) ಪಾಣಿಗ್ರಹಣ
ಮದುವೆಯ ಸಂಪ್ರದಾಯ
ಪಾಣಿಗ್ರಹಣ...!
ಹೆಣ್ಣಿಗೋ ಒಂದು
ಪ್ರಾಣಿ ಗ್ರಹಣ..!!
ಆದರೆ ಗಂಡಿಗೆ ಮಾತ್ರ
ಬಾಳಿನ ತುಂಬಾ
ಖಗ್ರಾಸ ಗ್ರಹಣ...!!

29)ರಾಧಾ

ಜಗತ್ತಿನ ರಕ್ಷಕ
ಭಕುತರ ಪ್ರೇಮಿ
ಕೃಷ್ಣನನ್ನು love
ಮಾಡಿದರೂ ಈಕೆ
ಭಗ್ನ ಪ್ರೇಮಿ!!

30) ರಾಜಕಾರಣ

 ರಾ- ರಾಜ್ಯವನ್ನು
 -ಜಗಿದು ತಿಂದು
ಕಾ- ಕಾಲಿ ಮಾಡಿ
ರಣ-ರಣವನ್ನಾಗಿಸುವುದು
ರಾಜಕಾರಣ

31)ಭಾರತವೆಂದರೆ...

ಭಾರತವೆಂದರೆ
ಒಂದು ವಿಶ್ವ ಚೇತನ..!
ಭವ್ಯ ಸಮ್ಮೇಳನ...!!
ಹುಟ್ಟಿಬೆಳೆದಿದೆ ಮಹಾ ಚೇತನ..!!!
ಜೊತೆಗೆ ತುಂಬಿ ತುಳುಕಿದೆ
ಬಡತನ!

32) ತೋರಿಕೆಗಳು

ಭಾರತ ದೇಶದ 
ಮೂರು ಜಗತ್ಪ್ರಸಿದ್ಧ 
ತೋರಿಕೆಗಳೆಂದರೆ
ಗೊರಕೆ,
ತುರಿಕೆ ಹಾಗೂ
ಕಲಬೆರಕೆ...

Monday, November 5, 2012

ಹಾಯ್ಕುಗಳು


ನಾನು ವೀಕ್ ಆಗಿ ಆಗಿ...
ವೀಕಿಪೀಡಿಯಾ ಆಗಿಬಿಟ್ಟೆ...

--

ಆಕೆ ನೈಟ್ ಡ್ಯೂಟಿ ಮಾಡಿ ಮಾಡಿ..
ನೈಟಿಂಗೇಲ್ ಆಗಿಬಿಟ್ಟಳು..
--

ಆತ ಕನ್ನಡದಲ್ಲಿ ಓದಿ ಓದಿ
ಕನ್ನಡಕ ತಂದುಕೊಂಡುಬಿಟ್ಟ...

--

ನಾನು ಸ್ಟಾಂಡ್ ಹಾಕಿ ಹಾಕಿ
ಸ್ಟಾಂಡರ್ಡ್ ಮೆಂಟೇನ್ ಮಾಡಿಬಿಟ್ಟೆ..

ನನ್ನ ಚುನಾವಣಾ ಪರಿಣಯ

    ಯಾರ್ಯಾರಿಗೋ ಚುನಾವಣೆಯಲ್ಲಿ ನಿಲ್ಲಬೇಕು, ಗೆಲ್ಲಬೇಕು, ಖುಚರ್ಿ ಪಡೆಯಬೇಕು ಎನ್ನುವ ಆಸೆ ಆಕಾಂಕ್ಷೆಗಳು ಬೃಹದಾಕಾರವಾಗಿರುತ್ತದೆ. ನನಗೂ ಅಂತಹ ಒಂದಷ್ಟು ಆಸೆಗಳು ಇದ್ದವು. ಈಗಲೂ ಗೆಲ್ಲಿಸುತ್ತಾರೆ ಅಂತಾದರೆ ಆ ಖಯಾಲಿ ಮತ್ತೆ ಚಿಗುರು ಒಡೆಯುತ್ತದೆ.
    ಹಿಂದೆ ಅನೇಕ ಸಾರಿ ನಾನು ಚುನಾವಣೆಗೆ ನಿಂತಿದ್ದೆ. ಬಹುತೇಕ.. ಅಲ್ಲ ಹೆಚ್ಚಿನವು.. ಊಹೂ.. 100ಕ್ಕೆ 99 ಚುನಾವಣೆಯಲ್ಲಿ ನಾನು ಹೊಟ್ಟೆ ಪಕ್ಷದ ರಂಗಸ್ವಾಮಿಗೆ ಸಮ. ಗೆಲುವೆಂಬೋ ಕನಸ ಕುದುರೆಯನ್ನೇರಿ ಎಂಬುದು ನನ್ನ ಚುನಾವಣಾ ಪ್ರಣಾಳಿಕೆಯ ಮೂಲ ಮಂತ್ರವಾಗಿತ್ತು ಎಂದರೂ ತಪ್ಪಿಲ್ಲ. ಅಷ್ಟು ಕನಸಾರ್ಹ ಅದು.
    ನಾನು ನಿಂತಿದ್ದು ಅಂತ ದೊಡ್ಡ ಚುನಾವಣೆಗಳಿಗೇನೂ ಅಲ್ಲ ಬಿಡಿ. ಸೀದಾ ಸಾದಾ.. ಚುನಾವಣೆ ಯಾವುದಾದರೇನು..? ಚುನಾವಣೆ ಚುನಾವಣೆಯೇ ಅಲ್ಲವೇ.. ಅಲ್ಲೊಂಚೂರು ಒಣ ಪ್ರತಿಷ್ಠೆ ಪ್ರದರ್ಶನ ಮಾಡಬೇಕು. ಯಾರಾದ್ರೂ ಬಂದರೆ ಹಿಂದಕ್ಕೆ ಒಂದಷ್ಟು ಮಂದಿಯನ್ನು ಕಟ್ಟಿಕೊಂಡು ಓಡಾಡಬೇಕು. ಅವರು ಆಗಾಗ ಬೋಪರಾಕ್ ಹೇಳ್ತಾ ಇರಬೇಕು. ಹಲ್ಲು ಗಿಂಜುವವರೂ ಜೊತೆಗೆ ಇರಬೇಕು. ಭಾಷಣ ಕೊಚ್ಚಬೇಕು. ಹಾಗೆ ಮಾಡ್ತೇನೆ, ಹೀಗೆ ಮಾಡ್ತೇನೆ ಅನ್ನೋ ಭರವಸೆಗಳ ಸುರಿಮಳೆಯನ್ನೇ ಹರಿಸಬೇಕು. ಅವನ್ನು ಮಾಡದಿದ್ದರೂ ಲಾಲಾರಸವನ್ನಾದರೂ ಸುರಿಸಬೇಕು. ಇದು ಎಲ್ಲ ಚುನಾವಣೆಗಳಲ್ಲಿನ ರೂಟೀನ್ ಡ್ರಾಮಾ.
ಕಾಲೇಜು ಚುನಾವಣೆ, ಪ್ರಾಥಮಿಕ ಶಾಲೆಗೆ ಮುಖ್ಯಮಂತ್ರಿ, ವಿಧಾನಸಭಾ ಚುನಾವಣೆ ಹೀಗೆ ಎಲ್ಲಕಡೆಯೂ ಸ್ಫಧರ್ೆಯೇ ಬಹುಮುಖ್ಯ. ಕಾಲೇಜು ಚುನಾವಣೆ ಎಂದರೆ ಅದಕ್ಕೆ ಅದರದೇ ಆದ ರಂಗಿರುತ್ತದೆ. ರೀತಿ ರಿವಾಜು ಇರುತ್ತದೆ. ಕೆಲವರಿಗೆ ಕಾಲೇಜು ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾದರೆ ಮತ್ತೆ ಕೆಲವರಿಗೆ ತಮ್ಮ ಸಾಮಥ್ರ್ಯ ಟೆಸ್ಟ್ ಮಾಡುವ ತಾಣ. ಇಂತಹ ಕಾಲೇಜು ಚುನಾವಣೆಗಳಲ್ಲಿ ಬಹಳ ಸಾರಿ ಮಾರಾ ಮಾರಿಗಳು ನಡೆಯುವುದು ಸಹಜ. ರಕ್ತ ಸುರಿಯುವುದೂ ಉಂಟು. ಪ್ರೈಮರಿಯಲ್ಲಿ ಹಾಗೆಲ್ಲಾ ಆಗೋದಿಲ್ಲ ಬಿಡಿ. ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಗಳೆಲ್ಲ ದೊಡ್ಡವರಿಗೆ, ದಡ್ಡವರಿಗೆ ಬಿಟ್ಟದ್ದು. ಅದು ನಮಗೆ ಬೇಡ ಬಿಡಿ.
    ನಾನು ಚುನಾವಣೆಗೆ ನಿಂತಿದ್ದ ವಿಷಯ ಹೇಳದೇ ಹೋದರೆ ಏನನ್ನೋ ಕಳೆದುಕೊಂಡ ಫೀಲಿಂಗು ಕಾಡ್ತದೆ. ಕನ್ನಡ ಶಾಲೆಯ ಪ್ರಾರಂಭದಿಂದಲೂ ನಾನು ಹಲವಾರು ಚುನಾವಣೆಗಳಲ್ಲಿ ನಿಂತಿದ್ದಿದೆ. ಆದರೆ ಗೆದ್ದ ದಾಖಲೆಗಳು ಇಲ್ಲವೇ ಇಲ್ಲ ಬಿಡಿ. ಇಂದೊಂಥರಾ ನೆಟ್ ಪ್ರಾಕ್ಟೀಸ್ ಮಾಡಿದ ಹಾಂಗೆ.. ಆದರೆ ಕೊನೆಯ ತನಕ ಬ್ಯಾಟಿಂಗ್ ಅವಕಾಶ ಸಿಗಲೇ ಇಲ್ಲ.
    ನಾನು ಮೊದಲು ಚುನಾವಣೆಗೆ ಸ್ಪರ್ಧಿಸಿದ್ದು 4 ನೇ ಕ್ಲಾಸಿನಲ್ಲಿ. ನಮ್ಮೂರ ಶಾಲೆಯಲ್ಲಿ ಸ್ವಚ್ಛತಾ ಮಂತ್ರಿ ಎಂಬ ಪೋಷ್ಟಿಗೆ ನಾನು ನಿಂತಿದ್ದೆ. ಆದರೆ ಅದೇನು ದುರಂತವೋ ಕಾಣೆ.. ಆಗ ಆ ಚುನಾವಣೆಗೆ ನನ್ನ ಕಾಖಿ ಚೆಡ್ಡಿ ದೋಸ್ತ ವಿಜಯ ನಿಂತುಬಿಡಬೇಕೆ.. ವಿಜಯ ಅಂತೂ ಅದೇ ಊರತಿನ ದೊಡ್ಡವರ ಮನೆಯ ಹುಡುಗ. ಎಲ್ಲರೂ ಕೈ ಎತ್ತಿ ಅಂದ್ರ. ನನ್ನ ಪಾಲಿಗೆ ನನ್ನ ಕೈ ಒಂದೆ ಎದ್ದು ನಿಂತಿದ್ದು. ಮೊದಲ ಚುಂಬನವೇ ಸಾಕು ಸಾಕೆಂಬ ರೀತಿಯಲ್ಲಿ ಹೊಡೆತ ಕೊಟ್ಟಿತು. ವಿಜಯ ಸ್ವಚ್ಛತಾ ಮಂತ್ರಿ ಆದ. ಆತ ಆಗಿದ್ರಿಂದ ಲಾಭ ಆಗಿದ್ದು ಬೇರೆ ಯಾರಿಗಲ್ಲದಿದ್ರೂ ನನಗೆ. ಯಾಕಂದ್ರೆ ಉಗುರು ಉದ್ದ ಬೆಳೆಯಬಾರದು, ಕೂದಲು ಬಾಚಿರಬೇಕು. ಟೈ ಇರಬೇಕು ಇಂತಹ ಫರ್ಮಾನುಗಳಲ್ಲೆಲ್ಲ ವಿಜಯ ಇದ್ದಿದ್ದಕ್ಕೆ ನನಗೆ ಮಾಫಿಯಾಗಿದ್ದವು. ಅಘೋಷಿತ ಒಪ್ಪಂದದ ಹಾಗೆಯೇ ನನಗೆ ಅವುಗಳಲ್ಲಿ ರಿಯಾಯಿತಿ ಸಿಕ್ಕಿತ್ತು.
    ಆ ನಂತರ ಆರು-ಏಳನೇ ಕ್ಲಾಸಿನಲ್ಲಿ ಚುನಾವಣೆಗಳು ನಡೆದು ನಾನು ಸ್ಪರ್ಧಿಸಿದ್ದರೂ ಗೆಲುವು ನನ್ನ ಬಳಿ ಸುಳಿಯಲಿಲ್ಲ ಬಿಡಿ. ಆದರೂ ಬುದ್ದಿ ಬರಬೇಕಲ್ಲ. ಹೈಸ್ಕೂಲಿಗೆ ಹೋದರೆ ಮತ್ತೆ ಪುನಃ ಇದರ ಪುನರಾವರ್ತನೆಯೇ. ಎಂಟರಲ್ಲಿ ಸೋತೆ. ಒಂಭತ್ತರಲ್ಲಿ ಸೋತೆ. ಹತ್ತನೇ ಕ್ಲಾಸಿನಲ್ಲಿ ನಡೆದ ಚುನಾವಣೆಯ ಕುರಿತು ಸ್ಪಲ್ಪ ಹೇಳುವುದು ಒಳಿತು. ಅದೊಂತರಾ ಗೆಲುವನ್ನು ಕೊಡ್ತೀನಿ ಕೊಡ್ತೀನಿ ಅಂತ ಹೇಳಿ ಹೇಳಿ ಮಸ್ಕಾ ಹೊಡೆದು ಸೋತ ಕಥೆ.
    ನಾನು ಆ ಹೈಸ್ಕೂಲಿಗೆ ಬುದ್ಧಿವಂತ ವಿದ್ಯಾರ್ಥಿ ಎಂಬ ಖ್ಯಾತಿಯ ಜೊತೆಗೆ ಕಣಕ್ಕಿಳಿದಿದ್ದೆ. ಶಿಕ್ಷಕರ ಮನಸ್ಸು ನಾನಾಗಲಿ ಎಂದಿತ್ತು. 10 ನೇಕ್ಲಾಸಿನಲ್ಲಿ ಕಾರ್ಯದರ್ಶಿ ಸ್ಥಾನಕ್ಕೆ ನಿಂತಿದ್ದ ನನ್ನ ವಿರುದ್ಧ ನಿಂತಿದ್ದು ನಂಜುಂಡ ಎಂಬಾತ. 8, 9, 10 ಈ ಮೂರು ಕ್ಲಾಸಿನ ವಿದ್ಯಾರ್ಥಿಗಳು ಮತ ಹಾಕಬೇಕು. ಚುನಾವಣೆ ರಂಗೇರಿತು. ನನ್ನ ಕ್ಲಾಸಿನ ಕುರಿತು ಅಪಾರ ಆತ್ಮವಿಶ್ವಾಸ ಇದ್ದ ನಾನು ಒಳ್ಳೆಯ ಭಾಷಣ ಬಿಗಿದೆ. ಪ್ರತಿಯಾಗಿ ನಂಜುಂಡನಿಗಿಂತ 5 ಮತ ಜಾಸ್ತಿ ಬಿತ್ತು. 9ನೇ ಕ್ಲಾಸಿಗೆ ಹೋಗಿ ಹಾಗೆ ಮಾಡ್ತೀನಿ, ಹೀಗೆ ಮಾಡ್ತೀನಿ ಅಂತೆಲ್ಲ ಹೇಳಿ ಭಾಷಣ ಕೊಚ್ಚಿದ ಪರಿಣಾಮ ನಂಜುಂಡನಿಗಿಂತ 2 ಮತ ಜಾಸ್ತಿ ಆಯ್ತು. ಅಲ್ಲಿಗೆ ನನ್ನ ಲೀಡ್ 7. ಇನ್ನುಳಿದಿದ್ದು 8ನೇ ಕ್ಲಾಸು. ಬಿಡಿ ಅವರು ಬಚ್ಚಾಗಳು. ಹೇಗೆಂದರೂ ನನಗೆ ಮತ ಹಾಕ್ತಾರೆ ಅಲ್ಲಿಗೆ ನಾನು ಗೆದ್ದಂತೆಯೇ ಅಂದ್ಕೊಂಡು ಭಾಷಣ ಮಾಡಿದೆ. ಆದರೆ ಚುನಾವಣೆಯಲ್ಲಿ ಎಲ್ಲಾ ಉಲ್ಟಾ. ನನಗಿಂತ 10 ಮತಗಳನ್ನು ಜಾಸ್ತಿ ಪಡೆದ ನಂಜುಂಡ 3 ಮತಗಳ ಲೀಡ್ ಆಧಾರದ ಮೇಲೆ ಗೆಲುವಿನ ಕೇಕೆ ಹಾಕಿ ನಕ್ಕಿದ್ದ.
    ಅರೇ ಯಾಕ್ ಹಿಂಗಾಯ್ತು ಅಂತ ಮಥನ ಮಾಡಿದಾಗ ಕೊನೆಗೆ ತಿಳಿದಿದ್ದು, ನಂಜುಂಡನ ಊರಿನ ಹುಡುಗರೇ ಆ ಕ್ಲಾಸಿನಲ್ಲಿ ಮೆಜಾರಿಟಿ ಅಂತ. ಸೋಲೆಂಬ ಸೋಲು ಸೋಲಾಗಿಬಂದ ಪರಿಣಾಮ ನಾನು ಸೋತೆ. ವಿಚಿತ್ರ ನೋಡಿ ಆ ನಂಜುಂಡ  ಕಾರ್ಯದರ್ಶಿ ಆಗಿದ್ದೇನೋ ನಿಜ. ಆದರೆ ನಂತರ ಆ ವರ್ಷದಲ್ಲಿ ಆತ ಅರ್ಧದಲ್ಲಿಯೇ ಕಾಲೇಜು ಬಿಟ್ಟ ಪರಿಣಾಮ  ಕಾರ್ಯದರ್ಶಿ ಇದ್ದೂ ಇಲ್ಲದೇ ಅನಾಥವಾಗಿತು ನಮ್ಮ ಹೈಸ್ಕೂಲು.
    ಇನ್ನು ಕಾಲೇಜು ವಿಷಯ. ಕಾಲೇಜು ಚುನಾವಣೆಗಳಲ್ಲಿ ಜೆನರಲ್ ಸೆಕ್ರೆಟರಿಯ ಆಯ್ಕೆ ವಿಧಾನವಿದೆಯಲ್ಲ ಅದರ ಕುರಿತು ಹೇಳಲೇಬೇಕು. ಮೊದಲು ಕಾಲೇಜಿನ ಕ್ಲಾಸಿಗೆ ಚುನಾವಣೆಗೆ ನಿಲ್ಲಬೇಕು. ಆಮೇಲೆ ಗೆದ್ದವರಲ್ಲೇ ಮೇಲಿನ ಸ್ಥಾನಕ್ಕೆ ಆಯ್ಕೆ ನಡೆಯುತ್ತದೆ. ಇದೊಂತರಾ ಬಿಜೆಪಿಯಲ್ಲಿ ಗೆದ್ದರೂ ಮೇಲೆ ಮುಖ್ಯಮಂತ್ರಿ ಆಗಲು ಚುನಾವಣೆ ಮಾಡ್ಕೋತಾರಲ್ಲ ಹಾಗೆ. ಅದೊಂದೆ ಅಲ್ಲಾ ಎಲ್ಲ ಪಕ್ಷಗಳಲ್ಲೂ ಹೀಗೆಯೇ ಇದೆ. ಪ್ರಜಾಪ್ರಭುತ್ವದ ಮೂಲ ಬೇರೂ ಹೀಗೆಯೇ ಇದೆ ಅಲ್ವೇ.
    ಪಿಯು ಕಾಲೇಜಿನ ಚುನಾವಣೆಯಲ್ಲೂ ಒಂದು ಕೈ ನೋಡಿದ್ದೆ ನಾನು ಎಂಬುದು ಎಷ್ಟು ಮಜಬೂತು ವಿಷಯ ಅಂದ್ರೆ ಆಕುರಿತು ನೀವು ಬೇಡ ಎಂದರೂ ಕೇಳಲೇ ಬೇಕು. ಪಿಯು ಎರಡನೇ ವರ್ಷ. ನಾವೆಲ್ಲ ರಾಘವೇಂದ್ರ ಎನ್ನುವವನನ್ನು ಚುನಾವಣೆಗೆ ನಿಲ್ಲಿಸಿ, ಗೆಲ್ಲಿಸಬೇಕು ಎಂದು ಕೊಂಡಿದ್ವಿ. ಆದರೆ ಚುನಾವಣೆಯ ದಿನವೇ ಆದ ಕಾಣೆಯಾದವರ ಪಟ್ಟಿಯಲ್ಲಿ. ಮುಂದೇನು ಮಾಡೋದು. ಅಂತ ಚಿಂತಿಸ್ತಾ ಇದ್ದಾಗ ದೋಸ್ತ ಕಮಲಾಕರ ಚುನಾವಣೆಗೆ ನಿಲೀನಿ ಅಂತ ಘೋಷಿಸಿಬಿಟ್ಟ. ಅವನ ವಿರುದ್ಧ ನಿಲ್ಲೋರು ಯಾರೂ ಇಲ್ಲ. ಅವಿರೋಧವೇ ಆಯ್ತೇ ಅನ್ನೋ ಆಲೋಚನೆ. ಮಿತ್ರ ಕಮಲಾಕರ ಅವಿರೋಧ ಆಯ್ಕೆ ಆಗ್ತಾನೆ ಅಂದರೆ ಖುಷಿಯೇ. ಆದರೆ ಚುನಾವಣೆ ನಡೆದರೆ ಒಂದು ದಿನದ ಕ್ಲಾಸು ಹಾಳಾಗಿ ಸ್ವಲ್ಪ ಮನರಂಜನೆ ಸಿಗುತ್ತದಲ್ಲಾ. ಅದಕ್ಕೆ ಏನು ಮಾಡೋದು ಅಂತ ಆಲೋಚಿಸುತ್ತಿದ್ದಾಗ ಗೆಳೆಯ ಹೇಮರಾಜ ಬಂದು ನೀನು ನಿಂತ್ಕೋ ವಿನು ಅಂದ. ನಾನು ತಮಾಷೆ ಮಾಡ್ತಿರಬೌದು ಅಂದುಕೊಂಡೆ. ಏಕೆಂದರೆ ಬಹಿರಂಗವಾಗಿ ಹೇಮು ಕಮಲಾಕರನನ್ನು ಸಪೋಟರ್್ ಮಾಡ್ತಿದ್ದ. ಆದರೆ ಅವನೇ ಹೀಗೆ ಹೇಳ್ತಿದ್ದಾನಲ್ಲ ಅಂತ. ಸರಿ ಸೋಲಿನ ಸರಪಳಿಗೆ ಇನ್ನೊಂದು ಸೇರಿಸೋಣ ಅಂದ್ಕೊಂಡು ಚುನಾವಣೆಗೆ ನಿಂತೆ.
    ಚುನಾವಣೆಯ ಭಾಷಣದ ವೇಳೆ ಕಮಲಾಕರ `ನೀವು ಯಾರಿಗೆ ಬೇಕಾದ್ರೂ ಮತ ಹಾಕಿ. ಆದರೆ ಒಳ್ಳೆಯವರಿಗೆ ಹಾಕಿ. ದೋಸ್ತ ವಿನಯ್ ನನಗಿಂತ ಒಳ್ಳೆಯವ. ಆತನಿಗೆ ಮತ ಹಾಕಿದ್ರೂ ನನಗೆ ಬೇಜಾರಿಲ್ಲ' ಎಂದು ಭಾಷಣ ಮಾಡಿ ದೊಡ್ಡೋನಾಗಿಬಿಟ್ಟ. ನಾನಂತೂ ಹಾಗೆ ಮಾಡ್ತೇನೆ ಹೀಗೆ ಮಾಡ್ತೇನೆ ಅಂತ ಪಕ್ಕಾ ರಾಜಕಾರಣಿ ಥರಾ ಭರವಸೆಗಳ ಸುರಿಮಳೆ ಸುರಿಸಿದೆ. ಆದರೂ ನಾನು ಗೆಲ್ಲೋದು ಡೌಟು. ಇನ್ನೇನು ಮಾಡೋದು ಅಂತ ಆಲೋಚಿಸಿ, ಮಹಿಳಾ ಮಣಿಯರ ಬಳಿ ಹೋಗಿ ನನಗೆ ಮತ ಹಾಕಬೇಕು ಎಂದು ಮಾತನಾಡಿಸಿದೆ. ಕಮಲಾಕರನಿಗೆ ಅದೇನು ಆಗಿತ್ತೋ. ಒಬ್ಬೇ ಒಬ್ಬ ಹುಡುಗಿಯರ ಬಳಿಯೂ ಮತ ಯಾಚಿಸಲಿಲ್ಲ. ಇಷ್ಟ ಇದ್ದರೆ ಹಾಕ್ತಾರೆ ಬಿಡು ಅನ್ನೋ ಮೆಂಟಾಲಿಟಿಯ ಆತ ಸುಮ್ಮನಾಗಿ ಬಿಟ್ಟ. ಪರಿಣಾಮವಾಗಿ ಷುನಾವಣೆಯಲ್ಲಿ ಭೀಕರವಾಗಿ ಅಂದರೆ 27-9 ಮತಗಳ ಅಂತರದಲ್ಲಿ ಗೆದ್ದು ಬಿಟ್ಟೆ.
    ಸೋಲಿನ ಸರಪಳಿ ತುಂಡರಿಸಿದಂತಹ ಸಂಭ್ರಮ. ಸಾಲು ಸಾಲು ಮ್ಯಾಚುಗಳನ್ನು ಸೋತನಂತರ ಅಪರೂಪಕ್ಕೆ ಗೆಲ್ಲುವ ಭಾರತ ತಂಡವೂ ಇಷ್ಟು ಖುಷಿ ಪಟ್ಟಿಲ್ಲ ಅನ್ಸುತ್ತೆ. ಸರಿ ಹುಡುಗರ ಪ್ರತಿನಿಧಿಯಾದೆ. ಕಮಲಾಕರನನ್ನೇ ನನ್ನ ಆಪ್ತ ಸಲಹೆಗಾರನನ್ನಾಗಿ ನೇಮಕ ಮಾಡಿಕೊಂಡೆ. ಅಂವ ಹೇಳಿದ್ದು, ಇನ್ನೇನು ಕಾಲೇಜು ಜಿ.ಎಸ್. ಗೂ ನೀನೇ ನಿಲ್ಗಲು ಅಂತ. ಬೇಡ ಬೇಡ ಎನ್ನುವ ಮನಸ್ಥಿತಿಯಲ್ಲೇ ನಿಂತೆ. ನಮ್ಮದು ಹೈಸ್ಕೂಲು ಸೇರಿಕೊಂಡಿದ್ದ ಪಿಯು ಕಾಲೇಜಾದ್ದರಿಂದ ಹೈಸ್ಕೂಲು ಪ್ರತಿನಿಧಿಗಳ ಓಟಿಗೂ ಮಹತ್ವ ಇರುತ್ತದೆ. ಅವರೆಲ್ಲ ಮತ ಹಾಕಿದರು ಗೆದ್ದೆ.
    ಗೆದ್ದು ಜಿ.ಎಸ್. ಆದ ಮೇಲೆ ಶುರು ಆಯ್ತು ನೋಡಿ ಪಡಿಪಾಟಲು. ಒಂದೇ ಒಂದು ಕೆಲಸವನ್ನು ನೆಟ್ಟಗೆ ಮಾಡಲಿಕ್ಕೆ ಆಗಲೇ ಇಲ್ಲ. ವೋಟು ಹಾಕಿದ್ದ ಮಿತ್ರರು ಅದೆಷ್ಟು ಬೇಜಾರು ಮಾಡ್ಕೊಂಡ್ರೋ. ಸಾಂಸ್ಕೃತಿಕ ಕಾರ್ಯಕ್ರಮಗಳು ಸುಮಾರಾಗಿ ನಡೆದರೂ ಕ್ರೀಡಾ ಕಾರ್ಯಕ್ರಮ ಸೇರಿದಂತೆ ಇತರ ಎಲ್ಲವುಗಳೂ ಟುಸ್ಸಾಗಿದ್ದವು. ಅಷ್ಟೇ ಅಲ್ಲದೇ ಉಪನ್ಯಾಸಕರ ಜೊತೆ ಮುನಿಸು ಮಾಡ್ಕೊಂಡು ಮಾತು ಬಿಟ್ಟಿದ್ದೆ. ಕೆಲವು ಮಿತ್ರರ ಪರವಾಗಿದ್ದರಿಂದ ನಮ್ಮ ಹಾಗೂ ನಮ್ಮ ಪ್ರಾಧ್ಯಾಪಕರ ನಡುವೆ ಅಂತರ ಬೆಳೆದು ಆ ವರ್ಷ ಬೀಳ್ಕೊಡುಗೆ ಸಮಾರಂಭವನ್ನೂ ಮಾಡಲಾಗಲಿಲ್ಲ. ಅಂತೂ ಆ ವರ್ಷ ಮುಗಿದರೆ ಸಾಕು ಅನ್ನಿಸಿತು.
    ಕೊನೆಗೊಮ್ಮೆ ಗೆಲುವು ಪಡೆದೆ. ದೊಡ್ಡದಾಗಿ ಪಡೆದರೂ ಅದು ನನ್ನನ್ನು ಸಾಕು ಬೇಕು ಎನ್ನಿಸಿದ್ದು ಮಾತ್ರ ಸುಳ್ಳಲ್ಲ. ಅಷ್ಟರ ನಂತರ ಮತ್ಯಾವುದೇ ಚುನಾವಣೆಗೂ ನಿಲ್ಲಲಿಲ್ಲ ಬಿಡಿ. ಡಿಗ್ರಿಯಲ್ಲಿ ನಾನು ಸವರ್ೇ ಸಾಮಾನ್ಯ ಆಮ್ ಆದ್ಮಿಯಾಗಿದ್ದೆ. ಯಾರೋ ಬಂದು ನಂಗೆ ಮತ ಹಾಕು ಅನ್ನೋರು. ಹುಂ ಅನ್ನೋದು, ಇನ್ನೊಬ್ರು ಬಂದು ನಿಂದು ನನಗೆ ಅನ್ನೋರು.. ಅದಕ್ಕೂ ಹುಂ ಅಂತಿದ್ದೆ. ಯಾರು ಗೆದ್ರೋ ಯಾರು ಬಿಟ್ರೋ .. ಆದರೆ ಮತ ಎಣಿಕೆಗೆ ಮಾತ್ರ ಬಹಳ ಕುತೂಹಲದಿಂದ ಕುಳಿತ್ಕೊಳ್ತಿದ್ದೆ. ಯಾಕಂದ್ರೆ ಅದೊಂತರಾ ಪ್ಲೇವಿನ್ ಹಾಂಗೆ.. ಸಂಖತ್ ಖುಷಿ, ಟೆನ್ಶನ್ ಕೊಡೋವಂತದ್ದು.
    ಬಿಡಿ.. ಚುನಾವಣೆ ಅಂದ್ರೇ ಹಾಗೆ ಅಲ್ವಾ.. ಅಲ್ಲಿ ಸೋಲು ಗೆಲುವು ಇದ್ದದ್ದೇ. ಇಂತಹ ನನ್ನ ಬದುಕಿನ ಚುನಾವಣೆಗಳು ವಿಜಯ್, ಕಮಲಾಕರ, ಪ್ರದೀಪ್, ಸುರೇಂದ್ರ ಈ ಮುಂತಾದ ಕೆಲವು ಮಿತ್ರರನ್ನು ನನಗೆ ನೀಡಿದೆ ಎನ್ನುವುದಂತೂ ಸುಳ್ಳಲ್ಲ.

Saturday, November 3, 2012

ಒಂದು ಕವಿತೆ

ವಿಷಜಂತು

ಬಹು ದಿನಗಳಿಂದ
ವಿಷ ಸಂಗ್ರಹಿಸಿ
ಸೇಡಿಟ್ಟು ಕಾದ
ಹಾವು ಕೊನೆಗೊಂದು ದಿನ
ಅವನಿಗೆ ಕಚ್ಚಿತು...
ಬಿಡದೇ ವಿಷ ಕಕ್ಕಿತು.. ಕಾರಿತು...
ನಂಜೂ ಏರಿತು..
ಆದರೆ.,
ಹಾವು ಸತ್ತು ಹೋಯಿತು...!!!

ಎಲ್ಲ ಮರೆತಿರುವಾಗ... ( ಕಥೆ ಭಾಗ-6)

(ಭಾಗ ಐದರಿಂದ ಮುಂದುವರಿದಿದ್ದು..)

ಇಷ್ಟೆಲ್ಲ ಆದರೂ ಆತನ ಹೆಸರು ನೆನಪಾಗಲಿಲ್ಲ ನೋಡಿ...
ಜೀವನ್.. ಅವನ ಹೆಸರು..
ಶಿರಸಿ ಹತ್ತಿರದ ಅಪ್ಪಟ ಮಲೆನಾಡಿನ ಹಳ್ಳಿ..
ಒಂದು ಕಡೆ ದೈತ್ಯಾಕಾರದ ಗುಡ್ಡ.. ಿನ್ನೊಂದು ಕಡೆಗೆ ಅಡಿಕೆಯ ತೋಟ...
ಮತ್ತೊಂದು ಕಡೆ ಊರನ್ನು ಮುತ್ತಿಕ್ಕಿ ಕುತ್ತಿಕ್ಕಿ ಹರಿಯುವ ನದಿ ಅಘನಾಶಿನಿ,...

ಆತ ಬೆಂಗಳೂರಿನ ಭ್ರಮಾನಗರಿಯನ್ನು ಹೊಕ್ಕು ಹಾದಿದ ಕೆಲವೇ ದಿನಗಳಲ್ಲಿ ಆ ಊರಿನ ಪಟ್ಟುಗಳನ್ನೆಲ್ಲ ಕಲಿತುಬಿಟ್ಟ.
ಾತನ ಪಾಲಿನ ಹಾಡೂ ಅಷ್ಟೇ ಕೈ ಹಿಡಿಯಿತು.
ನಿಧಾನವಾಗಿ ಹಾಡಿನ ಕಛೇರಿ ಕೊಡಲು ಪ್ರಾರಂಭಿಸಿದ..
ಾತನ ಹಾಡುಗಳಿಗೆ ಎಫ್ ಎಂ ರೇಡಿಯೋಗಳು ಧ್ವನಿಯಾದವು..
ನಿಧಾನವಾಗಿ ಆತ ಕನಾಱಟಕಾದ್ಯಂತ ವರ್ಡ್ ಫೇಮಸ್ಸಾಗಲು ಪ್ರಾರಂಭಿಸಿದ..
ಮುಂದೊಮ್ಮೆ ಆಗಿಯೂಬಿಟ್ಟ..
ಪ್ರತಿಯಾಗಿ ರಾಜ್ಯೋತ್ಸವದಂತಹ ಹಿರಿಯ ಪ್ರಶಸ್ತಿಗಳೇ ಆತನಿಗೆ ಸಿಕ್ಕವು...
ಯುವ ವಯಸ್ಸಿನಲ್ಲೇ ಆತ ಬಹುದೊಡ್ಡ ಸೆಲೆಬ್ರಿಟಿಯಾಗಿ ಹೊರಹೊಮ್ಮಿದ.

---

ಾತನ ಯಶಸ್ಸನ್ನು ಕಂಡು ಹಿಗ್ಗಿದವಳು ರಚನಾ..
ಬೆಂಗಳೂರಿಗೆ ಕರೆತಂದು ಆತನನ್ನು ಸರಿಪಡಿಸಿ, ತನ್ನ ಮನೆಯಲ್ಲೇ ಆಶ್ರಯ ನೀಡಿದವಳು ಆಕೆ..
ಆಕೆಯೆಡೆಗೆ ಧನ್ಯತಾ ಭಾವ ಜೀವನ್ ಗೆ..
ಆಕೆಗೆ ಪ್ರೇಮದ ಭಾವ...

ಅದನ್ನು ಹೇಳಿಕೊಳ್ಳಲು ಆಗದ ತಳಮಳ...
ಹೇಳಿದರೆ ಅದ್ಯಾವ ರೀತಿಯ ಪ್ರತಿಕ್ರಿಯೆ ನೀಡ್ತಾನೋ ಅನ್ನುವ ಻ಳುಕು ಆಕೆಯ ಮನದೊಳಗೆ...

ಆದರೂ ಅದನ್ನು ಕೇಳುವ ನೆಪದಲ್ಲಿ ಜೀವನ್ನ ಬಳಿ ಒಂದು ದಿನ ಬಂದು ಮಾತನಾಡಲಾರಂಭಿಸಿದಳು...
ಹಾಯ್ ಜೀವನ್..
ಹೇಳು ರಚನಾ..
ಹೇಗಿದೆ ಹೊಸ ಲೈಫು..?
ಏನೋ ಬೇರೆಯ ಥರಾ ಇದ್ದು..
ನಿನ್ ಮೊದಲಿನ ಬದುಕಿಗೆ ಈಗಿನದಕ್ಕೆ ಸಂಪೂಣಱ ಬದಲಾವಣೆ ಸಿಕ್ಕಿದ್ದು...
ಹೌದು...
ಆದರೆ ನಂಗಿನ್ನೂ ನಿನ್ನ ಪೂರ್ವ ಿತಿಹಾಸ ತಿಳಿದ್ದಿಲ್ಲೆ... ಏನಾಗಿತ್ತು ನಿಂಗೆ... ಯಾಕೆ ನಿಂಗೆ ಹುಚ್ಚು ಹಿಡಿದಿತ್ತು.. ಇಂತಹ ಟ್ಯಾಲೆಂಟೆಡ್ ವ್ಯಕ್ತಿ ನೀನು.. ಯಾಕೆ ಶಿರಸಿಯಲ್ಲಿ ಆ ಪರಿಯ ಕೆಟ್ಟಾ ಕೊಳಕು ಜೀವನ ನಡಿಸ್ತಾ ಇದ್ದಿದ್ದೆ?

ಚಿಂತನೆಗೆ ಬಿದ್ದ ಜೀವನ್ ನಿಟ್ಟುಸಿರು ಬಿಟ್ಟು... ಏನ್ ಹೇಳವ್ವು... ನನ್ನ ಬದುಕಿನ ಬಗ್ಗೆ ಹೇಗೆ ಹೇಳೋದು... ಅದೊಂದು ಥರಾ ಕಹಿ ಘಟನೆಗಳ ಗೋಜಲು ಗೋಜಲು.. ಹೇಳು ಹೋದರೆ ಮನಸ್ಸಿಗೆ ಬೇಸರ... ಹೇಳೋದಾದ್ರೋ ಹ್ಯಾಂಗೆ ಅಂತ....

ರಚನಾ: ಹೇಳೋ ಮಾರಾಯ.. ಕೇಳಿ ಸ್ವಲ್ಪ ತಿಳ್ಕತ್ತಿ..
ಜೀವನ್ : ಹೌದು.. ಆದರೆ ಹೆಂಗೆ ಹೇಳೋದು..? ನಂಗೆ ತಳಮಳ...
ರಚನಾ: ಟೈಂ ತಗಂಡಾದ್ರೂ ಹೇಳು ಮಾರಾಯಾ...

ಜೀವನ್ ಆಲೋಚಿಸಿ.. ಆಲೋಚಿಸಿ ಹೇಳಲು ತೊಡಗಿದ....

(ಮುಂದಿನದು.... ಮುಂದಕ್ಕೆ....)

Friday, November 2, 2012

ನಮ್ಮೂರಿನ ಕುರಿತು ವೀಕಿಪೀಡಿಯಾದಲ್ಲಿ ಬರೆಯಲಾಗಿರುವ ಸಾಲುಗಳು...

ನಮ್ಮೂರಿನ ಕುರಿತು ವೀಕಿಪೀಡಿಯಾದಲ್ಲಿ ಬರೆಯಲಾಗಿರುವ ಸಾಲುಗಳು...

ಗೂಗಲ್ಗೆ ಹೋಗಿ DANTKAL ಎಂದು ಸರ್ಚ್ ಕೊಟ್ಟರೆ ಈ ಪುಟ ಪ್ರತ್ಯಕ್ಷ... 

ನಮ್ಮೂರಿನ ಕುರಿತು ಕೆಲವು ವಿಶೇಷಗಳನ್ನು ಇಲ್ಲಿ ದಾಖಲಿಸುವ ಪ್ರಯತ್ನ ಅಷ್ಟೆ...

Dantkal

From Wikipedia, the free encyclopedia
Jump to: navigation, search
Dantkal is a village near Sirsi, Siddapura Taluk, North Kanara, State of Karnataka, India. All people staying there are Havyaka Brahmins, and the village is only connected with roads from Sirsi and Siddapur. This place is famous for "Shedi" So this place is known as Shedi Dantkal.[citation needed] The place is on the shore of river "Aghanashini". "Agha" means "sin" and "Nashini" means "remover". Dantkal is mainly famous for Ananta Bhattana Appe. This is a different type of mango. Locations Dantkalis in between hosmane, hittalakai, muttamurdu, adkalli and sankada mane.. every side full of forest. one side is in AGHANASHINI Rivar. Most of the peoples are Areconout grovers.Some of the younger generations peoples are in Bangalore, Sirsi, Tumkur, Shimogga etc.. Dantkal from sirsi 16 Kms, from siddapura 30 Kms, form Kanasuru 6.5 Kms.
Notable Persons
  • Ganapati Ganesh Hegde -Kasi tajna, Appemidi tali ulisida vyakti
  • Ganesh Hegde- Freedom Fighter, Vidyuth tayarisida vyakti.
  • Ramachandra Hegde- Abakari ilakheyalli kelasamaadi nivrutti hondiddare..
  • Ganapati vi. Hegde-ISRO dalli karya nirvahisuttiddare..
  • Subraya V. Hegde-Founder of ANAGHA HARBAL PRODUCTS, Nati vaidya, Aakala kechchalu baavige oushadhi koduva vishesha vyakti
  • Ganga Hegde- Ayurveda Salahegarti, Ayurveda tajne
  • Madhukeshvara t. hegde- Koogilu balliya vastugala tayarika vyakti
  • Kamalaxi hegde- Halli haadugala saradaarini
  • V. V hegde Melnamane-Homeopathya Doctor
  • V. V. Hegde- Teacher
  • R. V. Hegde- Sahakaari dhureena, At present lokhadhvaniyalli karya nirvahane..
  • Vinay Hegde- Journalist
  • Sindhu Hegde- Rank Holder student, at present Charted accountent..
Notable Areas

ಇದು ಏಕಾದಶಿ ಗುಡ್ಡದಲ್ಲಿ ಕಾಣಸಿಗುವ ಸುಂದರ ಸೂರ್ಯೋದಯದ ದೃಶ್ಯ ವೈಭವ...
  • Ekadashi Gudda- Famous for sunset
  • Shedi Gudda - It is famous for Shedi mannu
  • Devara Kaanu - famous of historical idols, old pots.


Thursday, November 1, 2012

ಎಲ್ಲ ಮರೆತಿರುವಾಗ... (ಕಥೆ - ಭಾಗ : 5)

 (ಮೊದಲಿಗೆ ಒಂದಷ್ಟು ಮಾತು.... ಎಂದೋ ಅರ್ಧಂಬರ್ಧ ಬರೆದಿಟ್ಟಿದ್ದ ಈ ಕಥೆಗೆ ಮತ್ತೆ ಜೀವ ತುಂಬುವ ಯತ್ನ... ಬಹಳ ತಡವಾಗಿದೆ.. ಕ್ಷಮೆ ಇರಲಿ... ಮುಂದೆ ಓದಿ... ಹೇಗಿದೆ ಎಂಬುದನ್ನು ತಿಳಿಸಿ...)

(ನಾಲ್ಕನೇ ಭಾಗದಿಂದ.....)

ಆದರೆ ಅದನ್ನು ಪ್ರೇಮವೆನ್ನಬೇಕಾ... ತಿಳಿಯದಂತಾಗಿದೆ...
ರಚನಾ ಳ ಸಂದಿಗ್ಧತೆಗೆ ಉತ್ತರ ಬಲು ಕಷ್ಟವಾದುದೇ ಹೌದು... ಆದರೂ ಅದನ್ನು ಏನೆಂದು ಕರೆಯೋಣ..?
ಆಕರ್ಷಣೆಯಾ..? ಅರ್ಥವಾಗುತ್ತಿಲ್ಲ... ಆದರೆ ದಿನದಿಂದ ದಿನಕ್ಕೆ ಸನಿಹವಾಗುತ್ತಿದ್ದಾನೆ...
 ದಿನದ ತೊಳಲಾಟಗಳಲ್ಲಿ ಬಳಲಿ ಬಸವಳಿದವಳು ಈಕೆ...

--

ಅಷ್ಟರಲ್ಲಾಗಲೇ ಅವನು ಸಂಪೂರ್ಣ ಚೇತರಿಕೆ ಕಂಡಿದ್ದ... ಹಳೆಯ ನೆನಪುಗಳು ನಿಧಾನವಾಗಿ ಮರುಕಳಿಸಲು ಪ್ರಾರಂಭವಾಗಿದ್ದವು.. ಎಲ್ಲಕ್ಕಿಂತ ಮಿಗಿಲಾಗಿ ಆತನ ಹಾಡು ಕಳೆಕಟ್ಟಲಕಾರಂಭವಾಗಿತ್ತು...
ಆತನ ಹಾಡುವ ವೈಖರಿಯನ್ನು ಗಮನಿಸಿದ ರಚನಾ ಆತನನ್ನು ಸಂಗೀತ ತರಗತಿಗೆ ಸೇರಿಸಿದಳು..
ಸಂಗೀತ ತರಗತಿಯಲ್ಲಿಯೇ ಆತನ ಬದುಕು ಹೊರಳು ದಾರಿಯನ್ನು ಕಂಡಿತು..
ಬೆಂಗಳೂರೆಂಬ ಭ್ರಮಿತ ೂರಿನಲ್ಲಿ ಹಲವಾರು ಸಂಗೀತದಿಗ್ಗಜರಿದ್ದಾರೆ..
ಅವರಲ್ಲೊಬ್ಬರು ಆತನಿಗೆ ಗುರುವಾಗಿ ಸಿಕ್ಕಿದರು...
ಹಳೆಯ ನೆನಪುಗಳ ಸಹಾಯದಿಂದ ಾತ ಬಹು ಬೇಗನೆ ಸಂಗೀತದ ಮಟ್ಟುಗಳನ್ನೆಲ್ಲ ಕಲಿತ...
ಹಾಡಿಗೆ ಸ್ಪಷ್ಟ ರೂಪ ಸಿಕ್ಕಿತು....

ಕೊಚ್ಚಿ ಹೋಗುವ ಎಲೆಗೆ..
ಬಲೆಯ ಹಾಕಿದ ಹಾಗೆ..
ನನ್ನ ಬಾಳಲಿ ನೀನು...
ಸುಳಿದು ಬಂದೆ....

ಇದು ಆತನ ಪಾಲಿಗೆ ಎಂದೂ ಮರೆಯದ ಸಾಲುಗಳಾದವು....

(ಮುಂದುವರಿಯುತ್ತದೆ...)

Saturday, September 1, 2012

ಗೆಳತಿ....


ಮೋಡವಾಗಿ 
ನನ್ನೊಳು ಬಂದ
ನೀನು ಮೊದಲು
ಮಿಂಚಾದೆ.
ಗುಡುಗಾದೆ..
ಸಿಡಿಲಾದೆ...
ಮಳೆಯೂ ಆಗಿ 
ಹೋದ ನೀನು
ಕೊನೆಗೊಮ್ಮೆ 
ನನ್ನ ಪಾಲಿಗೆ 
ಕಂಠ ಮುಟ್ಟಿದ
ಪ್ರವಾಹವಾಗಿ ಹೋದೆ....| 

ನನ್ನ ಕನ್ನಡಿಯೊಳಗೆ


ಹಾಯ್....
ಅಪರೂಪಕ್ಕೆ ಬರೆದ ಕವನವೊಮದನ್ನು ನಿಮ್ಮ ಮುಂದಕ್ಕೆ ಇಡುತ್ತಿದ್ದೇನೆ... ಓದಿ ಅಭಿಪ್ರಾಯ ತಿಳಿಸಿ...

ನನ್ನ ಕನ್ನಡಿಯೊಳಗೆ

ನನ್ನ ಕನ್ನಡಿಯೊಳಗೆ
ನಿನ್ನ ಬಿಂಬವು ಯಾಕೋ
ಸುಮ್ಮನೇ ಇಣುಕುತಿದೆ
ಅಚ್ಚಳಿಯದೇ....

ಮನದ ದಿಕ್ಪಟಲದಲಿ
ನಿನ್ನ ಕನಸದು ನನಗೆ
ಬರಿದೆ ನೆನಪಾಗುತಿದೆ
ಹುಚ್ಚಿನಂತೆ....

ಕನಸಿನಾ ಕಣ್ಗಳಿಗೆ
ನಿನ್ನ ಒಲವದು ಯಾಕೋ
ತಟ್ಟನೆ ಮುತ್ತುತಿವೆ
ಬರಿದಾಗದೇ...

ಉಸಿರಿನಾ ಜೀವದಲಿ
ನಿನ್ನ ನಾಮವು ಹಾಗೆ
ಸುಮ್ಮನೇ ಬರೆದಿರುವೆ
ಅಳಿಸದಂತೆ..