Monday, November 25, 2013

ಚದುರಂಗದ ಕುದುರೆಯ ಬೆನ್ನೇರಿ -ಭಾಗ 6

ಬಸವೇಶ್ವರ ಕಾಲೇಜು ಬಾಗೇವಾಡಿ
ನಮ್ಮ ಪಂದ್ಯಗಳು ಹೀಗೆ ಸಾಗಿದ್ದಾಗ ಪಾವಸ್ಕರ ದೊಡ್ಡ ಹೊಟ್ಟೆ ಕುಣಿಸುತ್ತಾ ಎದ್ದು ಓಡೋಡಿ ಬಂದ. ಬಂದವನೇ `ವಿನೂ...ಕಿಟ್ಟು ಗೆದ್ದ..' ಎಂದ..
ನಂಗೆ ಸಖತ್ ಖುಷಿಯಾಯಿತು. ನನ್ನ ಮ್ಯಾಚನ್ನು ಮಧ್ಯದಲ್ಲಿಯೇ ಬಿಟ್ಟು ಖುಷಿಯಿಂದ ಎದ್ದೋಡಿ ಕಿಟ್ಟುವನ್ನು ತಬ್ಬಿ ಹಾರೈಸಿ ಬಂದೆ. ಕಿಟ್ಟು ಗೋಗಟೆಯ 4th board ಆಟಗಾರ ಸಚಿನ್ ಸುಲ್ತಾನ್ ಪುರೆಯನ್ನು ಹೀನಾಯವಾಗಿ ಸೋಲಿಸಿ ಗೆದ್ದಿದ್ದ. ಮ್ಯಾಚ್  ಬಹಳ ಟಫ್ ಇತ್ತೆಂದೂ ಕೊನೆಯ ಕ್ಷಣದಲ್ಲಿ ಒಳ್ಳೆಯ ಟರ್ನಿಂಗ್ ಪಾಯಿಂಟ್ ನೀಡಿ ಗೆದ್ದ ಬಗೆಯನ್ನು ಕಿಟ್ಟು ಆ ದಿನ ಸಂಜೆ ತಿಳಿಸಿದ. ಇಲ್ಲಿಗೆ ನಮ್ಮ ಟೀಂ ಪಾಯಿಂಟ್ 7+1=8 ಆಯಿತು. ಆದರೂ ಗೋಗಟೆ ಕಾಲೇಜಿನ ವಿರುದ್ಧ 2-1ರಿಂದ ಹಿಂದಿತ್ತು. ಎಲ್ಲವೂ ನನ್ನ ಮೇಲೆಯೇ ನಿರ್ಧಾರವಾಗಿತ್ತು. ಕಿಟ್ಟುವಿನ ಮ್ಯಾಚ್ ಮುಗಿದಿದ್ದರಿಂದ ಎಲ್ಲರೂ ನನ್ನ ಪಂದ್ಯದ ಸುತ್ತ ನೆರೆಯಲಾರಂಭಿಸಿದ್ದರು.
ಮ್ಯಾಚ್ ಮತ್ತಷ್ಟು ಮುಂದುವರಿಯಿತು. ಆಟ ಹಾಗೆಯೇ ಸಾಗುತ್ತಿತ್ತು. ನನಗೆ ಸೆಕೆಯ ಜೊತೆಗೆ ಟೆನ್ಶನ್ ನಿಂದ ಬೆವರು ಕಿತ್ತುಕೊಂಡು ಬರುತ್ತಿತ್ತು. ಮ್ಯಾಚ್ ಗೆದ್ದು ರಿಲ್ಯಾಕ್ಸ್ ಆಗಿದ್ದ ಕಿಟ್ಟು ಈಗ ಫ್ರೀಯಾಗಿದ್ದ. ಆತನಂತೂ ಆಗಾಗ ನನ್ನ ಬೆನ್ನು ತಟ್ಟಿ `ಟೆನ್ಶನ್' ಮಾಡ್ಕೋಬೇಡ ಎನ್ನುತ್ತಿದ್ದ. ನನ್ನ ಎದುರಾಳಿ ಆಟಗಾರ ಚಿಂಚೋಳಿಮಠ cool ಆಗಿ ಆಡಿದಂತೆ ಕಾಣುತ್ತಿತ್ತು. ನನ್ನಂ ತಹಾಟಗಾರನನ್ನು ಅದೆಷ್ಟು ಜನರನ್ನು ನೋಡಿದ್ದನೋ.. ಬಿಡಿ.. ಆದರೆ ನನಗೆ ಬಹಳ ಟೆನ್ಶನ್ ಆಗುತ್ತಿತ್ತು. ಹೀಗೆಯೇ ಸುಮಾರು ಹೊತ್ತು ಕುಳಿತೆವು. ನಾನು ಬಹು ಬೇಗನೆ move ನಡೆಸುತ್ತಿದ್ದರೂ ಸಾಗರ್ ಚಿಂಚೋಳಿಮಠ ಒಂದು move ಮಾಡಲು ಬಹಳ ಸಮಯವನ್ನು ತೆಗೆದುಕೊಳ್ಳುತ್ತಿದ್ದ. ಅಷ್ಟರಲ್ಲಾಗಲೇ ನಮ್ಮ ಕಾಲೇಜಿನ ಲೇಡೀಸ್ ಟೀಂ ತಮ್ಮ ಎದುರಾಳಿ ಟೀಮುಗಳನ್ನು ಸೋಲಿಸಿ ಪ್ರಥಮ ಸ್ಥಾನವನ್ನು ಗಳಿಸಿಯಾಗಿತ್ತು. ಅವರೂ ಬಂದು ನನ್ನ ಆಟ ನೋಡಲಾರಂಭಿಸಿದ್ದರು.
ಕೊನೆಗೆ ಗಂಟೆ 12ನ್ನು ದಾಟಿತು. 8 ಗಂಟೆಗೆ ಆರಂಭವಾದ ಆಟ 12 ಗಂಟೆಯನ್ನು ಕಳೆದರೂ ಮುಗಿಯುವ ಲಕ್ಷಣ ತೋರಲಿಲ್ಲ. ಕೊನೆಗೊಮ್ಮೆ ಆಟ ಮುಕ್ತಾಯದ ಹಂತ ಕಾಣದೇ ಇರುವಾಗ ಕ್ಲಾಕ್ ಇಡುವ ತೀರ್ಮಾನಕ್ಕೆ ಅಂಪಾಯರ್ರುಗಳು ಬಂದರು. ಮೊದಲೊಂದು ಸಾರಿ ಟೆನ್ಶನ್ ಜೊತೆಗೆ ಭಯವಾದರೂ ನಾವು ಬಾಗೇವಾಡಿಗೆ ಹೊರಡುವ 4 ದಿನಗಳ ಮೊದಲು ನಮ್ಮ ಕಾಲೇಜಿನ ಚೆಸ್ ಕೋಚ್ ಎಂ. ಕೆ. ಹೆಗಡೆಯವರ ಜೊತೆಗೆ ಕ್ಲಾಕ್ ಇಟ್ಟು ಚೆಸ್ ಆಡಿದ್ದು ಸಹಾಯಕ್ಕೆ ಬಂದಿತು. ಥ್ಯಾಂಕ್ ಗಾಡ್ ಅಂದುಕೊಂಡೆ. ಕೊನೆಗೊಮ್ಮೆ ಗೋಗಟೆ ಕಾಲೇಜಿನದ್ದೇ ಆದ ಹಳೆಯ ಕ್ಲಾಕನ್ನು ಮ್ಯಾಚ್ ನಿರ್ಧಾರಕ್ಕೆ ಇಟ್ಟರು. ಇಬ್ಬರಿಗೂ ತಲಾ 10 ನಿಮಿಷಗಳನ್ನು ನಿಗದಿಪಡಿಸಲಾಯಿತು.
ಆಟ ಈಗ ಚಕ ಚಕನೆ ಸಾಗಿತು. ವಿಚಿತ್ರವೆಂದರೆ ನಾನು ಚಿಂಚೋಳಿಮಠನಿಗಿಂತ ಸಾಕಷ್ಟು ವೇಗವಾಗಿ ಚಸ್ ಆಡಿದೆ. ಏಕೆಂದರೆ ರಾಪಿಡ್ ಚಸ್ ನನ್ನ ಅತ್ಯಂತ ಪ್ರೀತಿಯ ಆಟವಾಗಿತ್ತು. ನವೀನ್ ಪಾವಸ್ಕರನ ಜೊತೆಗೆ ಚಾಲೆಂಜ್ ರೂಪದಲ್ಲಿ ಆಡುತ್ತಿದ್ದ ನಾನು ಎಡಗಣ್ಣಿನಲ್ಲಿ ಪಾವಸ್ಕರನನ್ನು ನೋಡಿ ನಕ್ಕೆ.. ಆತ ಕೈಸನ್ನೆಯ ಮೂಲಕ ಕೂಲ್ ಎನ್ನುತ್ತಿದ್ದ.. ನನ್ನ ವೇಗದ move ಬಹುಶಃ ಸಾಗರ್ ಚಿಂಚೋಳಿಮಠನನ್ನು ದಂಗುಪಡಿಸಿರಬೇಕು. ನನ್ನ ರಾಪಿಡ್ ಚೆಸ್ ಪರಿಣಾಮ ನನ್ನ ಬಳಿ 8 ನಿಮಿಷ ಬಾಕಿ ಉಳಿಯಿತು. ಚಿಂಚೋಳಿ ಮಠನದ್ದು 7 ನಿಮಿಷ ಕಳೆದು 3 ನಿಮಿಷ ಮಾತ್ರ ಉಳಿಯಿತು. ಅಂದರೆ ಸಾಗರ್ ಚಿಂಚೋಳಿಮಠನಿಗಿಂತ 5 ನಿಮಿಷ ನನಗೆ ಬೋನಸ್ ಸಿಕ್ಕಿತ್ತು. ಅಷ್ಟು ವೇಗವಾಗಿ ಆಟವನ್ನಾಡಿದ್ದೆ. ಇಷ್ಟಾಗಿದ್ದರೂ ಆಟದಲ್ಲಿ ಯಾರಿಗೂ ನಿಶ್ಚಿತ ಗೆಲುವಿನ ಅವಕಾಶವೇ ಇರಲಿಲ್ಲ. ಹೀಗಿದ್ದಾಗ ಯಾರ ಸಮಯ ಬೇಗನೆ ಮುಗಿಯುತ್ತದೆಯೋ ಅವರು ಆಟದಲ್ಲಿ ಸೋತಂತೆ ಎಂದು ನಿರ್ಣಯ ಮಾಡಲಾಗುತ್ತದೆ. ನಾನಂತೂ ಬೆಕ್ಕಿನ ಆಟವನ್ನು ಆರಂಭ ಮಾಡಿದ್ದೆ. ಸಾಗರ್ ಚಿಂಚೋಳಿ ಮಠನ ಬಳಿ ಗುದ್ಯಾಡಿ ಗೆಲ್ಲುವುದು ಸುಲಭವೇ ಆಗಿರದ ಕಾರಣ ನಾನು ಬೆಕ್ಕಿನಂತೆ ಚಲ್ಲಾಟವಾಡಿ ಸಮಯ ತಿಂದು ಆ ಮೂಲಕವಾದರೂ ಆತನನ್ನು ಸೋಲಿಸಬಹುದೆಂಬ ಐಡಿಯಾ ಹಾಕಿ ಆಡುತ್ತಿದ್ದೆ. ಮತ್ತೊಂದು ನಿಮಿಷ ಕಳೆಯಿತು. ಈಗ ಮೊದಲ ಬಾರಿಗೆ ಚಿಂಚೋಳಿಮಠನ ಮುಖದಲ್ಲಿ ಗಾಬರಿಯನ್ನು ಕಂಡಿದ್ದೆ. ಅಷ್ಟಲ್ಲದೇ ಅವನ ತಂಡದ ಅನಿಕೇತನ್ ಪಾವಸೆ ಹಾಗೂ ಸಮೀರ್ ಘೋಟ್ನೆ ಜೊತೆಗೆ ಅವರ ಕೋಚ್ ಕೂಡ ಕಂಗಾಲಾಗುವ ಹಂತ ಬಂದಿದ್ದರು. ನಾನೇ ಗೆದ್ದೇನೇನೋ ಎನ್ನುವ ಹಂತದಲ್ಲಿ ಖುರ್ಚಿಯ ತುದಿಗೆ ಕುಳಿತು ಆಡತೊಡಗಿದ್ದೆ. ಹೀಗಿರುವಾಗ ಆತನಿಗೆ ಏನನ್ನಿಸಿತೋ ಏನೋ ಕ್ಲಾಕ್ ಗೆ ನಿಧಾನವಾಗಿ ಮೊಡಕುವ ಬದಲು ಜೋರಾಗಿ ಗುದ್ದಿದ. ಹಳೆಯ ಕ್ಲಾಕು ಇದ್ದಕ್ಕಿದ್ದಂತೆ ತಟಸ್ಥವಾಯಿತು. ಮುಂದೆ ಏನು ಮಾಡಿದರೂ ಅದು ಸರಿಯಾಗಲೇ ಇಲ್ಲ.
ಇದನ್ನು ನೋಡಿದ ಪಾವಸ್ಕರ ಭರ್ಜರಿ ಸಿಟ್ಟಾದ. ಗಲಾಟೆಗೆ ಇಳಿದುಬಿಟ್ಟ. ಗೋಗಟೆ ಟೀಮಿನ ಮ್ಯಾನೇಜರ್ರಾಗಿದ್ದವರೇ ಅಂಪಾಯರ್ರಾಗಿದ್ದರು. ಅವರು ತಮ್ಮ ಟೀಮಿನ ಬೆಂಬಲಕ್ಕೆ ನಿಂತುಬಿಟ್ಟಿದ್ದರು. ಜೊತೆಗೆ ಆ ಟೀಮಿತ ಹುಡುಗರೂ ಜೋರಾದರು. ಒಂದು ಹಂತದಲ್ಲಿ ಕೈ ಮಿಲಾಯಿಸುತ್ತದೆಯೇನೋ ಎನ್ನುವ ಹಂತಕ್ಕೆ ತಲುಪಿತು. ನವೀನ ಪಾವಸ್ಕರ ಅಷ್ಟು ಸಿಟ್ಟಾಗಿದ್ದ. ನಾನು ಸುಮ್ಮನೆ ನೋಡುತ್ತಿದ್ದೆ. ಕಿಟ್ಟು, ಆನಂದರು ನವೀನನನ್ನು ಸಮಾಧಾನ ಮಾಡುವ ಯತ್ನ ಮಾಡುತ್ತಿದ್ದರು. ನಮ್ಮ ಟೀಮಿನ ಮ್ಯಾನೇಜರ್ ಆಗಿದ್ದ ಎನ್. ಎಚ್. ಗೌಡರು ಅಂಪಾಯರ್ರಾಗಿದ್ದರು. ಆದರೆ ಅವರು ನಮ್ಮ ಸಹಾಯಕ್ಕೆ ಬರಲೇ ಇಲ್ಲ. ಅವರು ತಂಡು ಕುಳಿತುಬಿಟ್ಟರು. ಪಾವಸ್ಕರ ಇದರಿಂದಾಗಿ ಇನ್ನಷ್ಟು ಸಿಟ್ಟಾದ. ಗೋಗಟೆ ಕಾಲೇಜಿನ ವಿರುದ್ಧ ಏರಿ ಹೋದ. ಇದೇ ಸಮಯದಲ್ಲಿ ನಾನು ಎರಡು ತಪ್ಪು ಮಾಡಿಬಿಟ್ಟೆ. ಅದರಿಂದ ನಮಗೆ ಸಾಕಷ್ಟು ನಷ್ಟವೇ ಆಯಿತು. ಮೊದಲನೇದಾಗಿ ನಾನು ಪಾವಸ್ಕರನನ್ನು ಸುಮ್ಮನಿರಿಸಿ ತಪ್ಪು ಮಾಡಿದೆ. ಎರಡನೇದಾಗಿ ಕ್ಲಾಕು ಹಾಳಾದ ನಂತರವೂ ಮತ್ತೆ ಚೆಸ್ ಆಡಲು ಕುಳಿತುಬಿಟ್ಟೆ. ನಾಗಭೂಷಣ ಗೌಡರು ಹೀಗೆ ಮಾಡಲು ಹೇಳಿದ್ದರು. ನವೀನ ಪಾವಸ್ಕರ ನನ್ನ ಮಾತನ್ನು ಮಾತ್ರ ಕೇಳುತ್ತಾನೆ ಎಂಬುದು ಅವರಿಗೆ ಗೊತ್ತಿತ್ತು.. ನಾನು ಆತನನ್ನು ಸುಮ್ಮನಿರಿಸುವ ಜೊತೆಗೆ ಆಟಕ್ಕೂ ಕುಳಿತುಬಿಟ್ಟೆ. ನಾನು ಈ ತಪ್ಪುಗಳನ್ನು ಮಾಡಲೇಬಾರದಿತ್ತು. ಇದರ ಪರಿಣಾಮ ನಾನು ಪಂದ್ಯದಲ್ಲಿ ಹೀನಾಯವಾಗಿ ಸೋತೆ. ಸಾಕಷ್ಟು ಸಮಯ ಸಿಕ್ಕ ಚಿಂಚೋಳಿಮಠ ನನ್ನನ್ನು ಸೋಲಿಸಿದ. ತಂಡದ ಸ್ಕೋರು 3-1 ಆಯಿತು. ಇದುವರೆಗಿನ ಒಟ್ಟೂ ಪಾಯಿಂಟು 8 ಆಯಿತು. ಕೊನೆಗೆ ನಾನು ಅಲ್ಲಿ ಆಡಲೇಬಾರದಿತ್ತು ಅಂಬುದರ ಅರಿವಾಯಿತು.
ನಾನು ಸೋತರೂ ಅದು ಸೋಲಲ್ಲ ಎಂದುಕೊಂಡೆ. ಒಬ್ಬ ನ್ಯಾಶನಲ್ ಪ್ಲೇಯರ್ ಹೀಗೆ ಆಡಿ ಗೆದ್ದನಲ್ಲಾ ಛೀ.. ಅಂದುಕೊಂಡೆ.. ಮೋಸ ಮಾಡದಿದ್ದರೆ ಕ್ಲಾಕ್ ನಿಯಮದಂತೆ ಗೆಲ್ಲಬಲ್ಲೆ ಎನ್ನುವ ಸಮಾಧಾನವಿತ್ತು. ಆದರೂ ಆತನ ಮಟ್ಟಕ್ಕೆ ಹೋರಾಡಿದ ಖುಷಿಯಿತ್ತು. ಒಂದು ಹಂತದಲ್ಲಿ ಆತನಿಗೂ ಬೆವರಿಳಿಸಿದ ಸಾರ್ಥಕತೆಯಿತ್ತು. ಇಷ್ಟು ಸಾಕೆಂದುಕೊಂಡೆ.. ಆದರೂ ಮನಸ್ಸು ತಲ್ಲಣಗೊಂಡಿತ್ತು.

ದುರ್ಗಾ ಹೋಟೆಲ್ ಇರುವ ಕಾಂಪ್ಲೆಕ್ಸ್..
ಅದೇ ದಿನ ಮದ್ಯಾಹ್ನ ನಮ್ಮ ಮುಂದಿನ ಪಂದ್ಯ ನಡೆಯಿತು. ಬೆಳಗಾವಿಯದ್ದೇ ಇನ್ನೊಂದು ಕಾಲೇಜು ಆರ್. ಪಿ.ಡಿ. ಅದರ ಜೊತೆಗೆ ನಮ್ಮ ಪಂದ್ಯ. ಅಲ್ಲಿನ ಕ್ಯಾಪ್ಟನ್ ನಮ್ಮ ಮಿತ್ರ ಗಣೇಶ. ಮ್ಯಾಚಿಗೂ ಮುನ್ನ ಬಂದು ಕಾಂಪ್ರೋಮೈಸ್ ಮಾಡಿಕೊಳ್ಳೋಣ 2 ನಮಗೆ 2 ನಿಮಗೆ ಎಂದ. ಟೀಂ ಕರೆದು ಕೇಳಿದೆ. ಅವರೂ ಸರಿಯಾದ ನಿರ್ಧಾರಕ್ಕೆ ಬರಲಿಲ್ಲ. ಏನು ಮಾಡಬೇಕೋ ತಿಳಿಯಲಿಲ್ಲ. ಕೊನೆಗೆ ಸೀದಾ ನಮ್ಮ ಎಂ. ಕೆ. ಹೆಗಡೆಯವರಿಗೆ ಪೋನಾಯಿಸಿದೆ.
ಅವರು `ಕಾಂಪ್ರೋಮೈಸ್ ಬೇಡ.. ಸರಿಯಾಗಿ ಆಡಿ.. ಎಷ್ಟು ಪಾಯಿಂಡ್ ಬರ್ತದೋ ಬರಲಿ..' ಎಂದರು.
ಸರಿಯೆಂದು ಆಡಲು ಕುಳಿತೆವು. ಮ್ಯಾಚಿನಲ್ಲಿ ಆನಂದ ಹಾಗೂ ಕಿಟ್ಟು ಬಹುಬೇಗನೆ ಗೆದ್ದು ನಮ್ಮ ಪಾಯಿಂಟನ್ನು 10ಕ್ಕೇರಿಸಿದರು. ಟೀಮಿಗೆ ಜೋಶ್ ಬಂದಿತ್ತು.
ಹಿಂದಿನ ಮ್ಯಾಚನ್ನು ಆ ರೀತಿ ಆಘಾತಕರವಾಗಿ ಸೋತ ಡಿಪ್ರೆಶನ್ ನಲ್ಲಿದ್ದ ನಾನು ಅನ್ಯಮನಸ್ಕತೆಯಿಂದಲೇ ಮ್ಯಾಚ್ ಆಡುತ್ತಿದ್ದೆ. ಪರಿಣಾಮವಾಗಿ ಅಷ್ಟೇನೂ ಒಳ್ಳೆಯ ಆಟಗಾರನಲ್ಲದ ನನ್ನ ಎದುರಾಳಿಯ ವಿರುದ್ಧ ನಾನು ಸೋತುಬಿಟ್ಟೆ.  ನಮ್ಮ ಟೀಮಿನಲ್ಲಿ ಕೋಲಾಹಲ. ಟೀಮಿನ ಕ್ಯಾಪ್ಟನ್ ಸತತ ಎರಡು ಸೋಲನ್ನು ತಿಂದಿದ್ದೆ. ಕಿಟ್ಟು ಹಾಗೂ ಆನಂದ ಚಿಂತಾಕ್ರಾಂತರಾಗಿದ್ದರು. ನಾನು ಸೋತಿದ್ದು ನವೀನನಿಗೂ ಗೊತ್ತಾಗಿ ಕಣ್ಣು ಸನ್ನೆಯಲ್ಲೇ ಕಿಡಿಕಾರತೊಡಗಿದ್ದ. ನಾನು ಆತನ ಕಣ್ಣು ತಪ್ಪಿಸತೊಡಗಿದ್ದೆ. ಇಲ್ಲಿ ಮೂರನೇ ಬೋರ್ಡ್ ಪ್ಲೇಯರ್ ನವೀನ ಪಾವಸ್ಕರ ನಿರ್ಣಾಯಕನಾಗಿದ್ದ. ಆತನ ಆಟ ಸಾಗಿತ್ತು. ಆತನ ಎದುರಾಳಿ ಗಣೇಶ. ಸರಿಯಾಗಿ ಆಡುತ್ತಿದ್ದ ನವೀನ ಪಾವಸ್ಕರನಿಗೆ ಇದ್ದಕ್ಕಿದ್ದಂತೆ ಅದ್ಯಾವ ದೆವ್ವ ಮೆಟ್ಟಿಕೊಂಡಿತೋ, ತನ್ನೆಲ್ಲ ಪಾನುಗಳನ್ನೂ ಕಾಯಿಗಳನ್ನೂ ಕಳೆದುಕೊಳ್ಳತೊಡಗಿದ. ನೋಡ ನೋಡುತ್ತಿದ್ದಂತೆ ನವೀನ ಪಾವಸ್ಕರನ ಬಲಗಳೆಲ್ಲ ಬರಿದಾಯಿತು. ಕೊನೆಗೊಮ್ಮೆ ಆತನ ಪಾಲಿಗೆ ರಾಜನೊಬ್ಬನೇ ಉಳಿದುಕೊಂಡ. ಅದಕ್ಕೆ ಪ್ರತಿಯಾಗಿ ಗಣೇಶ ಸಾಕಷ್ಟು ಬಲದೊಂದಿಗೆ ಅಟ್ಯಾಕ್ ಶುರು ಮಾಡಿಕೊಂಡಿದ್ದ. ಗ್ಯಾರಂಟಿ ಸೋಲುತ್ತಾನೆ ಬಿಡಿ ಎಂದುಕೊಂಡೆ. ಅಷ್ಟರಲ್ಲಿ 5 ತಾಸಿಗೂ ಹೆಚ್ಚಿನ ಕಾಲ ಕಟ್ಟಿಕೊಂಡಿದ್ದ ಜಲಬಾಧೆ ಬಹಳ ಕಾಡಿತು. `ಕಿಟ್ಟು ಬಾರೋ ಹೋಗಿ ಬರೋಣ, ನವೀನ ಪಾವಸ್ಕರ ಹೊಗೆ ಹಾಕಿಸ್ಕೊಂಡ ..'ಎಂದೆ. `ನವೀನಾ.. ಟೈಂ ವೇಸ್ಟ್ ಮಾಡ್ತಿದ್ದೀಯಾ..? ಸುನ್ಮೆ ರಿಸೈನ್ ಮಾಡು..' ಎಂದು ಆನಂದ ಆಗಲೇ ಎರಡು ಮೂರು ಸಾರಿ ಹೇಳಿಯಾಗಿತ್ತು. ಆದರೆ ನವೀನನ ಕಿವಿಗೆ ಅದು ಹೋಗಲಿಲ್ಲ. ಆಡುತ್ತಲೇ ಇದ್ದ. ಹಾಳಾಗ್ಲಿ ಎಂದು ನಾವು ಎದ್ದು ಬಂದೆವು.
ಮರಳಿ ಬರುವಾಗ ಒಂದರ್ಧ ಗಂಟೆಯೇ ಹಿಡಿಯಿತು. ನನ್ನ ಆಟದ ಪೋಸ್ಟ್ ಮಾರ್ಟಮ್ ಅಂದರೆ ಸೋತ ಬಗೆಯ ಬಗ್ಗೆ ಕಿಟ್ಟುವಿನ ಜೊತೆಗೆ ಚರ್ಚಿಸುತ್ತ ಬರುತ್ತಿದ್ದೆ. ನವೀನ ಪಾವಸ್ಕರ ಖುಷಿಯಿಂದ ಓಡಿ ಬರುತ್ತಿರುವುದು ಕಾಣಿಸಿತು. ಏನೋ ಆಗಿದೆ ಎಂದುಕೊಂಡೆ.. ಬಂದವನೇ ಆಟ ಡ್ರಾ ಆಯ್ತು ಕಣೋ ಎಂದ. ಅರೇ.. ಇದ್ಹೇಗೆ ಸಾಧ್ಯವಾಯ್ತು ಅನ್ನೋ ಕುತೂಹಲ..
ರಾಜನೊಬ್ಬನೇ ಇದ್ದ. ಹೇಗಿದ್ರೂ ನೀನು ಚೆಕ್ ಮೀಟ್ ಗ್ಯಾರಂಟಿ ಅಂದ್ಕೊಂಡಿದ್ವಿ... ಎಂದೆ
ಇಲ್ಲ ಮಾರಾಯಾ.. ಅಂವನಿಗೆ ನನ್ನ ರಾಜನನ್ನು ಕಟ್ಟಿ ಹಾಕಲು ಸಾಧ್ಯವಾಗಲಿಲ್ಲ.. ಪರಿಣಾಮವಾಗಿ ಸ್ಟೈಲ್ ಮೀಟ್ ಆದೆ.. ಸ್ಟೈಲ್ ಮೀಟ್ ಆದರೆ ಡ್ರಾ ಅಂತೆ.. ಸೋ.. ಅರ್ಧ ಪಾಯಿಂಟು ಬೋನಸ್ಸು ಸಿಕ್ಕಿತು.. ಅಂದ.. ಖುಷಿಯಾಯಿತು.
ಈ ಡ್ರಾದಿಂದಾಗಿ ನಮ್ಮ ತಂಡದ ಮೊತ್ತ 10.5 ಆಯಿತು. ಅಂದರೆ ಕಾಂಪ್ರೋಮೈಸ್ ಗಿಂತ ಅರ್ಧ ಪಾಯಿಂಟು ಹೆಚ್ಚು ಸಿಕ್ಕಿತು. ಕೊನೆಯ ಮ್ಯಾಚಿನಲ್ಲಿ 4 ಬೋರ್ಡಿನಲ್ಲಿ 1 ಮ್ಯಾಚನ್ನೂ ಸೋಲದಿದ್ದರೆ ಪ್ರೈಜ್ ಗ್ಯಾರಂಟಿ ಎಂಬ ಹಂತಕ್ಕೆ ಬಂದಿತು.

ದಿ ಹೆಲ್ಪ್ ಪುಲ್ ಮ್ಯಾಚ್.. ಹಾಗೂ ಹೆಲ್ಪರ್ಸ್..
ಈ ಪಂದ್ಯದಲ್ಲಿ ನಾಲ್ಕಕ್ಕೆ ನಾಲ್ಕನ್ನೂ ಗೆದ್ದರೆ ಫಸ್ಟಂತೂ ಸಿಗಲಾರದು. ಏಕೆಂದರೆ ಗೋಗಟೆ ಕಾಲೇಜು 14 ಪಾಯಿಂಟು ಗಳಿಸಿ ಆಗಲೇ ಮೊದಲನೇ ಸ್ಥಾನವನ್ನು ಖಾಯಂ ಮಾಡಿಕೊಂಡಿತ್ತು. ಆದರೆ ನಾಲ್ಕರ ಪೈಕಿ 3.5 ಪಾಯಿಂಟ್ ಗೆದ್ರೂ ಸಾಕಿತ್ತು ದ್ವಿತೀಯ ಸ್ಥಾನ ಪಡೆದುಕೊಳ್ಳುತ್ತಿದ್ದೆವು. ನಮ್ಮ ವಿರುದ್ಧ ಕಳೆದ ಸಾರಿಯ ಪಂದ್ಯವನ್ನಾಡಿದ್ದ ಆರ್. ಪಿ. ಡಿ. ಕಾಲೇಜಿನ ಪಾಯಿಂಟು 9.5 ಆಗಿತ್ತು.ನಾವು ನಾಲ್ಕಕ್ಕೆ ನಾಲ್ಕನ್ನು ಗೆದ್ದರೂ 14.5 ಆಗುತ್ತಿತ್ತು. ಒಂದು ಮ್ಯಾಚು ಡ್ರಾ ಆದರೂ 14 ಪಾಯಿಂಟಾಗುತ್ತಿತ್ತು. ಅದೇ ನಾವೇನಾದರೂ ಒಂದು ಮ್ಯಾಚನ್ನು ಸೋತು ಆರ್. ಪಿ. ಡಿ. ಕಾಲೇಜು 4ರ ಪೈಕಿ 4ನ್ನೂ ಗೆದ್ದರೆ 2ನೇ ಸ್ಥಾನವನ್ನು share ಮಾಡಿಕೊಳ್ಳಬೇಕಾಗುತ್ತಿತ್ತು. ಹೀಗಾಗುವುದನ್ನು ತಪ್ಪಿಸಲು ಅಷ್ಟಕ್ಕೆ ಅಷ್ಟೂ ಮ್ಯಾಚನ್ನು ಗೆಲ್ಲಲೇಬೇಕು ಎಂದುಕೊಂಡೆವು.  ನಮ್ಮ ನಿರೀಕ್ಷೆಯಂತೆ ಆರ್. ಪಿ. ಡಿ. ಕಾಲೇಜಿನವರು ಅವರ ಎದುರಾಳಿ ತಂಡದ ಜೊತೆಗೆ ಹೊಂದಾಣಿಕೆಯನ್ನು ಮಾಡಿಕೊಂಡು ನಾಲ್ಕಕ್ಕೆ ನಾಲ್ಕನ್ನೂ ಗೆದ್ದುಕೊಂಡರು. ಇದರಿಂದ ನನಗೆ ಕೊಂಚ ಟೆನ್ಶನ್ ಆಯಿತು. ನಮ್ಮ ಟೀಮಲ್ಲಿ ಯಾರಾದರೂ ಸೋತುಬಿಟ್ಟರೆ ಎನ್ನುವ ಭೀತಿ ಕಾಡಿತು.
ಆದರೆ...
ನಮ್ಮ ಪುಣ್ಯಕ್ಕೆ ನಮ್ಮ ವಿರುದ್ಧ ಬಿದ್ದವರು ಕುಮಟಾದ ಬಾಳಿಗಾ ಕಾಮರ್ಸ್ ಕಾಲೇಜಿನ ದೋಸ್ತರು. ಮ್ಯಾಚೇನೋ ಶುರುವಾಯಿತು. ಕಳೆದೆರಡು ಮ್ಯಾಚು ಸೋತಿದ್ದೆನಲ್ಲಾ.. ಸಿಟ್ಟೆಲ್ಲಿತ್ತೋ., ಮ್ಯಾಚು ಪ್ರಾರಂಭವಾದ 5 ನಿಮಿಷಗಳಲ್ಲಿಯೇ ಕನಿಷ್ಟ 20 step ಗಳಲ್ಲಿಯೇ ನನ್ನ ಎದುರಾಳಿಯನ್ನು ಸೋಲಿಸಿಬಿಟ್ಟೆ. ಮತ್ತೊಂದು 15-20 ನಿಮಿಷಗಳಲ್ಲಿ ಆನಂದನೂ ಗೆದ್ದುಬಿಟ್ಟ. ಆದರೆ ಮೂರನೇ ಬೋರ್ಡ್ ಪ್ಲೇಯರ್ ನವೀನ ಪಾವಸ್ಕರ ಸೋಲತೊಡಗಿದ. ಕಿಟ್ಟುವಿನ ಮ್ಯಾಚು ಕುತೂಹಲಕ್ಕೆ ಕಾರಣವಾಗಿತ್ತು. ನಮ್ಮ ಪಂದ್ಯಗಳನ್ನು ನೋಡಲು ಆರ್. ಪಿ. ಡಿ. ಕಾಲೇಜಿನ ಹುಡುಗರೂ ನೆರೆಯಲು ಆರಂಭಿಸಿಬಿಟ್ಟರು.
ಆಗ ಇದ್ದಕ್ಕಿದ್ದಂತೆ ನವೀನ ಪಾವಸ್ಕರನಿಗೆ ಏನನ್ನಿಸಿತೋ ಏನೋ ನನ್ನ ಕಿವಿಯಲ್ಲಿ `ಮ್ಯಾಚನ್ನು ಹೊಂದಾಣಿಕೆ ಮಾಡಿಕೊಳ್ಳೋಣ .. ' ಎಂದ. ಕಿಟ್ಟುವಿಗೂ ಹೇಳಿದ. ನಾನು ಬೇಡವೆಂದೆ. ಕಿಟ್ಟುವೂ ಹಾಗೆಯೇ ಹೇಳಿದ. ಆದರೆ ನವೀನ ಪಾವಸ್ಕರ ಬಿಡಬೇಕಲ್ಲ. ನಮ್ಮನ್ನು ಒಪ್ಪಿಸಿದ. ನಮ್ಮ ಎದುರಾಳಿ ತಂಡದ ಬಳಿ ಕೊನೆಗೆ ನವೀನನೇ `ಹೊಂದಾಣಿಕೆ ಮಾಡಿಕೊಳ್ಳೋಣ..' ಎಂದ.. ಅವರು ನನ್ನ ಹಾಗೂ ಕಿಟ್ಟುವಿನ ಮುಖವನ್ನು ನೋಡಲಾರಂಭಿಸಿದರು.
ನವೀನ ಪಾವಸ್ಕರ `ನೋಡಿ.. ಮ್ಯಾಚ್ ಹೊಂದಾಣಿಕೆ ಮಾಡಿಕೊಳ್ಳೋಣ.. ನಿಮಗೆ ದುಡ್ಡು ಕೊಡ್ತೀನಿ...' ಅಂದ.. ಕುಮಟಾ ಕಾಲೇಜಿನ 4ನೇ ಬೋರ್ಡ್ ಪ್ಲೇಯರ್ ಹೆಸರೂ ಕೃಷ್ಣ ಮೂರ್ತಿ ದೀಕ್ಷಿತ ಎಂಬುದೇ ಆಗಿತ್ತು. ಹಳೆಯ ಪರಿಚಯ. ಆತ ನವೀನನ ಬಳಿ `ನಾವು ಆಟವನ್ನು ದುಡ್ಡಿನಿಂದ ಅಳೆಯೋದಿಲ್ಲ.. ದುಡ್ಡಿಗಾದರೆ ನಾವು ಮ್ಯಾಚು ಬಿಟ್ಟುಕೊಡುವುದೇ ಇಲ್ಲ.. ' ಎಂದರು. ನನಗೆ ಏನು ಮಾಡಬೇಕೋ ಎಂಬುದು ತೋಚಲಿಲ್ಲ. ಕೊನೆಗೆ ಕಿಟ್ಟು ನಮ್ಮ ದೋಸ್ತ ರಾಘವನಿಗೆ ಪೋನ್ ಮಾಡಿದ. ಯಾಕಂದರೆ ನಮ್ಮ ವಿರುದ್ಧ ಆಡುತ್ತಿದ್ದ ಹುಡುಗರು ರಾಘವನ ಪರಮಾಪ್ತ ಮಿತ್ರರಾಗಿದ್ದರು ಅಷ್ಟೇ ಅಲ್ಲದೇ ರಾಘವನ ಅಜ್ಜನಮನೆಯಾದ ಗೋಕರ್ಣದಲ್ಲಿ ಆಡಿ ಬೆಳೆದಿದ್ದವರಾಗಿದ್ದರು.
ಕೊನೆಗೆ ರಾಘುವಿನ ಮಾತಿಗೆ ಹಾಗೂ ಒಂದು ಷರತ್ತಿಗೆ ಒಪ್ಪಿ ಅವರು ಆಟವನ್ನು ನಮಗೆ ಬಿಟ್ಟುಕೊಟ್ಟರು. ಅದೇನೆಂದರೆ ನಾಲ್ಕನೇ ಬೋರ್ಡಿನ ಆಟಗಾರರಾದ ಕೃಷ್ಣಮೂರ್ತಿ ದೀಕ್ಷಿತ್ ಹಾಗೂ ಕೃಷ್ಣಮೂರ್ತಿ ದೀಕ್ಷಿತ್ ಅವರ ನಡುವಿನ ಆಟವನ್ನು ಡ್ರಾ ಎಂದು ಪರಿಗಣಿಸಬೇಕು. ಬದಲಾಗಿ ಆ ಟೀಮಿನವರು ಸೋಲುತ್ತಿದ್ದ ನವೀನ ಪಾವಸ್ಕರನಿಗೆ ಗೆಲುವನ್ನು ಬಿಟ್ಟುಕೊಡುತ್ತಿದ್ದರು. ಹಾಗೆ ಮಾಡಿದರು ಕೂಡ. ಪರಿಣಾಮವಾಗಿ ಅರ್ಧ ಪಾಯಿಂಟಿನಿಂದ 2ನೇ ಸ್ಥಾನವನ್ನು ಗಳಿಸಿಕೊಂಡೆವು. ನಮ್ಮ ಟೀಮಿನ ಕೃಷ್ಣಮೂರ್ತಿ ದೀಕ್ಷಿತ್ ಇಡೀ ಟೂರ್ನಿಯಲ್ಲಿ ಒಂದೇ ಒಂದು ಮ್ಯಾಚನ್ನೂ ಸೋಲದೆ ಪ್ಲೇಯರ್ ಆಫ್ ದಿ ಟೂರ್ನಿಮೆಂಟ್ ಗೆ ಪಾತ್ರನಾಗಿದ್ದ. ಕಾಕತಾಳೀಯದಂತೆ ನಮ್ಮ ಎದುರಾಳಿ ತಂಡ ಕುಮಟಾದ ಕೃಷ್ಣಮೂರ್ತಿ ದೀಕ್ಷಿತನೂ ಟೂರ್ನಿಯಲ್ಲಿ ಒಂದೇ ಒಂದು ಮ್ಯಾಚನ್ನೂ ಸೋಲದೆ ಅಜೇಯನಾಗಿ ಉಳಿದಿದ್ದ.
ನನಗೆ ಬೇಜಾರಾಗಿತ್ತು. ಪಂದ್ಯ ಹೊಂದಾಣಿಕೆ ಮಾಡಿಕೊಂಡಿದ್ದು ನನಗೆ ಅಷ್ಟು ಖುಷಿಯನ್ನು ಕೊಟ್ಟಿರಲಿಲ್ಲ. ಆದರೆ ನಮ್ಮ ಟೀಮಿನ ಒಬ್ಬ ಆಟಗಾರನನ್ನು ಸೋಲಿಸಿದರೆ ತಲಾ 500 ರು. ಕೊಡುತ್ತೇನೆ ಎಂದು ಆರ್. ಪಿ. ಡಿ. ಕಾಲೇಜಿನ ಗಣೇಶ್ ಹಾಗೂ ಮಿತ್ರರು ಆಮಿಷ ಒಡ್ಡಿದ್ದರಂತೆ. ಹಣಕ್ಕಾಗಿ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ.. ನೀವು ನಮ್ಮವರು, ಉತ್ತರ ಕನ್ನಡದವರು ಗೆಲ್ಲಬೇಕು. ಅದಕ್ಕೂ ಹೆಚ್ಚಾಗಿ ನಮ್ಮ ರಾಘುವಿನ ದೋಸ್ತರು.. ನೀವು ಸೋಲಬಾರದು.. ಅದಕ್ಕಾಗಿ ಪಂದ್ಯ ಬಿಟ್ಟುಕೊಟ್ಟೆವು ಎಂದು ಹೇಳಿದರು. ಇದನ್ನು ಕೇಳಿದ ಮೇಲೆ ಅಷ್ಟಾಗಿ ನನಗೆ ಬೇಸರವಾಗಲಿಲ್ಲ.

(ಮುಂದುವರಿಯುತ್ತದೆ)
(ಮುಂದಿನ ಭಾಗದಲ್ಲಿ ಸಮಾರೋಪ ಸಮಾರಂಭ...ಬ್ಲೂ ಟೀಂ ಸೆಲೆಕ್ಷನ್) 


No comments:

Post a Comment