Thursday, November 21, 2013

ಚದುರಂಗದ ಕುದುರೆಯ ಬೆನ್ನೇರಿ -ಭಾಗ 5

ದಿ ಬಾಕ್ಸಿಂಗ್ ಡೇ

ಸಾಲು ಸಾಲು ಟೇಬಲ್ಲುಗಳು..ನಾಲ್ಕು ಜನ ಎದುರು ಬದುರು ಕುಳಿತುಕೊಳ್ಳುವಂತೆ ಟೇಬಲ್ ಹಾಕಿತ್ತು. ಮೊದಲ ಬೋರ್ಡಿಗೆ ಆನಂದ, ೆರಡನೆಯದಕ್ಕೆ ನಾನು, ಮೂರನೇದಕ್ಕೆ ನವೀನ ಪಾವಸ್ಕರ, ನಾಲ್ಕನೆಯದಕ್ಕೆ  ಕಿಟ್ಟು ಕುಳಿತಿದ್ದ..
ಇವತ್ತು ಆಡಿದ್ದು ಎರಡು ಮ್ಯಾಚುಗಳು. ಮೊದಲು ನಮ್ಮ ಎದುರು ಬಿದ್ದವರು ಬಹುಶಹ ಹಾನಗಲ್ಲೋ, ಧಾರವಾಡದವರೋ ಇರಬೇಕು. ಮ್ಯಾಚ್ ಶುರುವಾದ ಹತ್ತೇ ನಿಮಿಷಗಳಲ್ಲಿ ಕೃಷ್ಣಮೂರ್ತಿ ಗೆದ್ದುಬಿಟ್ಟ. ನನ್ನ ಮ್ಯಾಚು ಗೆಲ್ಲುವ ಹಂತದಲ್ಲಿತ್ತು. . ಪಕ್ಕದಲ್ಲಿ ಕುಳಿತಿದ್ದ ನಾನು ನವೀನ ಪಾವಸ್ಕರನ ಪಕ್ಕೆಗೆ ತಿವಿದು `ಹೆಂಗೆ..? ' ಎಂಬಂತೆ ಸನ್ನೆ ಮಾಡಿದೆ. ಕಿಚಾಯಿಸಿದೆ.
ಅದಕ್ಕವನು ತನ್ನ ದೊಡ್ಡ ಹೊಟ್ಟೆ ಕುಲುಕಿಸಿ ನಗುತ್ತಾ.. `ನಮ್ಮ ಕಿಟ್ಟು ಅಲ್ವೇ..' ಎಂದ. !
ಕೊನೆಗೆ ನಾನು ಎರಡನೆಯವನಾಗಿ ಗೆದ್ದೆ. . ನವೀನ ಪಾವಸ್ಕರನೂ ಕೆಲವು ಕ್ಷಣಗಳಲ್ಲಿಯೇ ಗೆದ್ದು ನಮ್ಮ ಪಾಯಿಂಟನ್ನು ಮೂರಕ್ಕೇರುವಂತೆ ಮಾಡಿದ. ಆದರೆ ಮೊದಲ ಬೋರ್ಡಿನ ಪ್ಲೇಯರ್ ಆನಂದ ನಾಯ್ಕ ಸೋತುಬಿಟ್ಟ. ನಮಗೆ ಇಮ್ಮೆಲೆ ಆಘಾತವಾಯಿತಾದರೂ ತೋರಿಸಿಕೊಳ್ಳಲಿಲ್ಲ. ಆನಂದ ನಾಯ್ಕ ಮಾತ್ರ ಬಹಳ ಬೇಜಾರು ಮಾಡಿಕೊಂಡ. ಅವನನ್ನು ಸಮಾಧಾನ ಮಾಡುವಷ್ಟರಲ್ಲಿ ಸಾಕುಬೇಕಾಗಿ ಹೋಯಿತು. ನವೀನ ಪಾವಸ್ಕರನ ಮೇಲೇ ಸಿಟ್ಟು ಉಕ್ಕಿತು. ಪಕ್ಕಕ್ಕೆ ಕರೆದೊಯ್ದು `ಏನೋ.. ನಿನ್ನ ಪ್ಲೇಯರ್ರು ಹಿಂಗೆ..? ಏನೇನೋ ಹೇಳ್ತಿದ್ದೆಯಲ್ಲ..' ಎಂದು ಹಳೆಯ ಸೇಡನ್ನು ತೀರಿಸಿಕೊಳ್ಳುವಂತೆ ಕಿಚಾಯಿಸಿದೆ.. ಆತ ಏನೇನೋ ಸಮಜಾಯಿಶಿ ನೀಡಿದ. ನಾನು ನಕ್ಕು ಸುಮ್ಮನಾದೆ. ಕಿಟ್ಟು ಆನಂದನನ್ನು ಸಮಾಧಾನ ಮಾಡಿದ.
ಹಾಗೆಯೇ ಎರಡನೇ ಪಂದ್ಯಕ್ಕೆ ಅನುವಾದೆವು. ಈ ಸಾರಿ ಅದ್ಯಾವುದೋ ದುರ್ಬಲ ಟೀಂ ನಮ್ಮ ವಿರುದ್ಧ ಬಿದ್ದಿತ್ತು. ನಾವು ನಾಲ್ಕೂ ಜನ ಹೀನಾಯವಾಗಿ ಆ ಟೀಮನ್ನು ಸೋಲಿಸಿ ನಮ್ಮ ಪಾಯಿಂಟನ್ನು 7ಕ್ಕೆ ಏರಿಸಿಕೊಂಡೆವು. ಈಗ ಕಿಟ್ಟುವಿನ ಮ್ಯಾಚ್ ಸ್ವಲ್ಪ tuf ಇತ್ತು. ಆದರೆ cool ಆಗಿರುವ ಆತ ಅದನ್ನು ನಿಭಾಯಿಸಿ ಗೆದ್ದ.ಆನಂದ ಗೆಲುವನ್ನು ಪಡೆದು ಸ್ವಲ್ಪ ರಿಲ್ಯಾಕ್ಸ್ ಆಗಿದ್ದ. ಅಮತೂ ಇಂತೂ ಎರಡನೇ ದಿನ ಅರಾಮವಾಗಿಯೇ ಯಾವುದೇ ಹಾನಿಯಾಗದೇ ಎಲ್ಲ ಗೆಲುವಿನ ಸಡಗರದ ಜೊತೆಗೆ ನಡೆಯಿತೆನ್ನಿ.
ಹೇಗೆಂದರೂ ಮರುದಿನ ಬೆಳಗಾವಿಯ ಪ್ರಭಲ ಟೀಂ ಗೋಗಟೆ ಕಾಲೇಜಿನ ವಿರುದ್ಧ ನಮ್ಮ match ಬೀಳುತ್ತದೆ ಎಂದು ಲೆಕ್ಖ ಹಾಕಿದೆ. ಅದು ನಿಜ ಕೂಡ ಆಗಿ ಬಿಟ್ಟಿತು. ಹೀಗಾಗಿ ರಾತ್ರಿಯ ನಮ್ಮ ತಾಲೀಮು ಕೂಡ ಕೊಂಚ ಜೋರಾಯಿತು. ಮತ್ತೆ ಯಥಾಪ್ರಕಾರ ನಾನು-ಕಿಟ್ಟು, ನವೀನ ಪಾವಸ್ಕರ ಹಾಗೂ ಆನಂದರ ವಿರುದ್ಧ ಯದ್ವಾ ತದ್ವಾ ಸೋತು ಬಿಟ್ಟೆವು. ಹೇಗೆಂದರೂ ನನ್ನ ವಿರುದ್ಧ ರೇಟೆಡ್ ಪ್ಲೇಯರ್, ನ್ಯಾಚನಲ್ ಪ್ಲೇಯರ್ ಸಾಗರ್ ಚಿಂಚೋಳಿಮಠ ಬಿದ್ದೇಬೀಳುತ್ತಾನೆ ಎಂದುಕೊಂಡೆ. ಕೊಂಚ.. ಕೊಂಚವೇನು ಜಾಸ್ತಿ ಅಳುಕಿನಿಂದಲೇ ರಾತ್ರಿ 12 ಗಂಟೆಯವರೆಗೂ ಸೊಳ್ಳೆ ಸಾಮ್ರಾಜ್ಯದ ಸೈನಿಕರ ನಡುವೆ ಚದುರಂಗವನ್ನಾಡಿ ಮಲಗಿದೆವು.

19-09-2001, ಬುಧವಾರ
ಎಲ್ಲವೂ ಅಂದುಕೊಂಡಂತೆ ನಡೆದಿದ್ದವು. ನಮ್ಮ ವಿರುದ್ಧ ಗೋಗಟೆ ಕಾಲೇಜಿನ ಹುಡುಗರು ಬಿದ್ದಿದ್ದರು. ಆ ದಿನಗಳಲ್ಲಿ ಇವರದ್ದೇ ಅತ್ಯಂತ strong team. ನಾಲ್ವರಲ್ಲಿ ಇಬ್ಬರು national player. ಆದರೆ ಮೂವರು ರೇಟೆಡ್ ಪ್ಲೇಯರ್ಸ್. ಮುಂಜಾನೆ ಎದ್ದರೂ ಯಾಕೋ ಒಂಥರಾ ಅನ್ನಿಸುತ್ತಿತ್ತು. ನಮ್ಮ ಪ್ರೀತಿಯ ದುರ್ಗಾ ಹೊಟೆಲಿನಲ್ಲಿ ಹೋಗಿ ತಿಂಡಿ ತಿಂದರೆ ಏನೂ ಸರಿಯಾಗಿ ಸೇರುತ್ತಿಲ್ಲ. ನನಗೊಬ್ಬನಿಗೆ ಹೀಗೆ ಅನ್ನಿಸುತ್ತಿದೆಯೇನೋ ಅಂದುಕೊಂಡೆ. ಆನಂದ, ನವೀನ ಇಬ್ಬರಿಗೂ ಹಾಗೆ ಆಗಿತ್ತೆಂದು ಕೊನೆಗೊಮ್ಮೆ ಹೇಳಿದರು. ಕಿಟ್ಟು ಎಂದಿನ ಶಾಂತ ಸ್ವಭಾವದಲ್ಲಿ ಜಾಲಿಯಾಗಿದ್ದ. ಸ್ನಾನ, ಶೌಚ ಇತ್ಯಾದಿ, ಇತ್ಯಾದಿಗಳು ಎಂದಿನಂತೆ ಜರುಗಿದವು. ಅಂದುಕೊಂಡ ಮ್ಯಾಚ್ ಎದುರು ಬಂದೇ ಬಿಟ್ಟಿತು.
ತಕ್ಷಣವೇ ನಾನು ಎಲ್ಲರನ್ನೂ ಕರೆದು best of luck ಎಂದೆ. ಕೊನೆಗೆ ಪಾವಸ್ಕರನನ್ನು ಕರೆದು ' ನೋಡು, ನಿನ್ನ ವಿರುದ್ಧ ಸಮೀರ ಘೋಟ್ನೆ ಬಿದ್ದಿದ್ದಾನೆ. ಅಂವ ಹೋದ ವರ್ಷವೂ ನಿನ್ನನ್ನು ಸೋಲಿಸಿದ್ದ. ಆ ಉರಿ, ಸೇಡಿದ್ರೆ, ನಿನ್ನಲ್ಲಿ ತಾಕತ್ತಿದ್ರೆ ಅವನನ್ನು ಸೋಲಿಸು .. ನೋಡೋಣ.. ನೂರು ರೂಪಾಯ್ ಚಾಲೆಂಜು.. ' ಎಂದು ಗಾಳಿ ಹೊಡೆದೆ. ಅದಕ್ಕವನು `ನಾನು ಸೋಲಿಸುತ್ತೇನೆ.. ಈಗಾಗ್ಲೇ ಅರ್ಧಕ್ಕರ್ಧ ಅವನನ್ನು ಸೋಲಿಸಿಯಾಗಿದೆ..' ಎಂಬಂತೆ ಮಾತಾಡಿದ. ಆನಂದನ ಬಳಿಯೂ ಇದೇ ಚಾಲೆಂಜನ್ನು ಮಾಡಿ ಎದುರಾಳಿ ಅನಿಕೇತನ್ ಪಾವಸೆಯನ್ನು ಸೋಲಿಸು ಎಂದಿದ್ದೆ. ಆತ ಮಾತನಾಡದೇ ಸುಮ್ಮನುಳಿದಿದ್ದ. ಕಿಟ್ಟುವಿನ ಬಳಿ ನಾನು ಗಾಳಿ ಹೊಡೆಯುವುದು ವೇಸ್ಟ್ ಎನ್ನಿಸಿದ್ದರಿಂದ ಅಂತಹ ಕೆಲಸ ಮಾಡಲಿಲ್ಲ. ಆತ ತನ್ನ ಮಾತಿನ ಲಹರಿಯಲ್ಲಿ ಸುಮ್ಮನಿದ್ದ.
ನನಗೋ ಎದೆಯೊಳಗೆ ಪುಕಪುಕಿ. ತಂಡದ ಕ್ಯಾಪ್ಟನ್ ನಾನಾದ್ದರಿಂದ ತೋರಿಸಿಕೊಳ್ಳುವಂತಿಲ್ಲವಲ್ಲ. ನನ್ನ ಮುಂದಿನ ಆಟಗಾರ ಸಾಗರ ಚಿಮಚೋಳಿಮಠ ಎಂಬುದೂ ತಿಳಿದಿತ್ತು. ಭರ್ಜರಿ ಟೆನ್ಶನ್ ಮನದಲ್ಲಿತ್ತು. ಸುಮ್ಮನೇ.. ಆ ಕಾಲೇಜಿನ ಗ್ರವಂಡಿನಾಚೆ, ಹುಣಸೇ ಮರದ ಬಯಲಿನಲ್ಲಿ ಶಾಂತ ಪರಿಸರದಲ್ಲಿ ಮರಗಳ ಕೆಳಗೆ ಹತ್ತುನಿಮಿಷ ಕುಳಿತೆ. ಮಹಿಳಾ ತಂಡದ ಆಟಗಾರರು ಬಂದು ಹಲವು ಸಲಹೆಗಳನ್ನು ಕೊಟ್ಟರು. ಹುಂ.. ಎಂದೆ.. ಅವರುಗಳಿಗೆ ನನ್ನ ಮೇಲೆ ವಿಶ್ವಾಸ ಇತ್ತೇನೋ.. ಹೇಳಿದ್ದನ್ನು ಕೇಳಿದೆ. ಸರಿ ಎಂದೆ.  ಉತ್ಸಾಹ ಬಂದಿತ್ತು.

ದ ಬಾಕ್ಸಿಂಗ್ ಮ್ಯಾಚ್..
 ನಾನಂದುಕೊಂಡಂತಾಗಿದ್ದ ಮ್ಯಾಚು ಮುಂಜಾನೆ 8 ಗಂಟೆಗೆ ಶುರುವಾಯಿತು. ನಾನು ಬೇಕಂತಲೇ 10 ನಿಮಿಷ ತಡವಾಗಿ ಮ್ಯಾಚಿಗೆ ಹೋದೆ. ಆಗಲೇ ಅಲ್ಲಿ ಎಲ್ಲರೂ ಬಂದಿದ್ದರು. ಹಲವರು ಮ್ಯಾಚು ಆರಂಭಿಸಿದ್ದರು. ಮತ್ತೆ ಹಲವರ ಮ್ಯಾಚು ಅದಾಗಲೇ ಮುಗಿದೂ ಹೋಗಿತ್ತು ಕೂಡ..!! ಪಾವಸ್ಕರ, ಆನಂದ, ಕಿಟ್ಟು ಮ್ಯಾಚು ಆರಂಭಿಸಿದ್ದರು. ನನ್ನೆದುರು ಆಟಗಾರ ಚಿಂಚೋಳಿಮಠ ನನಗಾಗಿ ಕಾಯುತ್ತ ಕುಳಿತಿದ್ದ. ಪಾವಸ್ಕರ ಯಥಾಪ್ರಕಾರ ಸಿಕ್ಕಾಪಟ್ಟೆ ನಗುತ್ತಾ ಆಡುತ್ತಿದ್ದ.. ಾನಂದ ಕಿಟ್ಟು ಯಾವುದೇ ಟೆನ್ಶನ್ ಇಲ್ಲದೇ ಆಡುತ್ತಿದ್ದರು. ನಾನು ಬಂದವನೇ ಅವರೆಲ್ಲರಿಗೂ ಮತ್ತೊಮ್ಮೆ best of luck ಹೇಳಿ ಆಡಲು ಕುಳಿತೆ. ಆಟ ಟೆಸ್ಟ್ ಮ್ಯಾಚಿನಂತೆ ನಿಧಾನವಾಗಿ ಸಾಗಿತು. ನಾನು ಡಿಫೆನ್ಸ್ ಆಡತೊಡಗಿದ್ದೆ. ಆದರೆ ಹೋರಾಟಕ್ಕೆ ಪ್ರತಿಹೋರಾಟ ಸಾಗಿಯೇ ಇತ್ತು. ನಾನು-ಅವನು, ಅವನು-ನಾನು ಎಂಬಂತೆ ಸಮಬಲದಲ್ಲಿ ಪಾನುಗಳನ್ನು, ಪೀಸುಗಳನ್ನು ಹೊಡೆದುಕೊಳ್ಳುತ್ತ ಸಾಗಿದೆವು. ಆಟ ನಿಧಾನವಾಗಿ ರಂಗೇರತೊಡಗಿತ್ತು. ಮ್ಯಾಚು ಮುಗಿದವರೆಲ್ಲ ನಮ್ಮನ್ನು ಸುತ್ತುಗಟ್ಟಿ ನೋಡತೊಡಗಿದ್ದರು. ಏಕೆಂದರೆ ಧಾರವಾಡದ ಕರ್ನಾಟಕ ಯುನಿವರ್ಸಿಟಿಯ ಟಾಪ್ 2 ಟೀಮುಗಳ ನಡುವಿನ ಕದನ ಅದು ಎಂದು ಸುದ್ದಿ ಹಬ್ಬಿತ್ತು. ಎರಡು strong team ಗಳು ಪರಸ್ಪರ ಜಿದ್ದಿಗೆ ಬಿದ್ದಿದ್ದರು. ಆನಂದ, ನಾನು, ನವೀನ, ಕಿಟ್ಟುವಿನ ಸುತ್ತೆಲ್ಲ ಗುಂಪೇ ಗುಂಪು.. match ಹ್ಯಾಗಿರಬಹುದು, ಹೇಗೆ ಆಡಬಹುದು ಎಂಬ ಕುತೂಹಲ ಅವರಿಗೆ.. ಅಂಪಾಯರ್ರುಗಳೂ ನೋಡಲು ಬಂದಿದ್ದರು. ಆ ಕಾರಣದಿಂದ ನಮ್ಮ ಸುತ್ತಲೂ ನೆರೆದವರನ್ನು ಚದುರಿಸಲು ಅವರು ಹೋಗಲಿಲ್ಲ.
ಮ್ಯಾಚು ಆರಂಭವಾಗಿ ಅರ್ಧ-ಮುಕ್ಕಾಲು ಗಂಟೆ ಕಳೆದಿರಬಹುದು.. ಟೇಬಲ್ ಮೇಲೆ ಕೈಯೂರಿ, ಗದ್ದಕ್ಕೆ ಕೈಕೊಟ್ಟು ಗಂಭೀರದ ರೀತಿಯಲ್ಲಿ ಪೋಸು ಕೊಡುತ್ತಾ ಆಟವನ್ನಾಡುತ್ತಿದ್ದ ನವೀನ ಪಾವಸ್ಕರ ತಲೆ ಮೇಲೆ ಕೈಹೊತ್ತು ಎದ್ದು ಬಂದ.. `ಏನಾಯ್ತು..? ' ಎಂದು ಕೇಳಿದೆ.. `ಪುಸ್ಸಾಯ್ತು..' ಎಂದ.. ನಗು ಬಂತು..
ಬಂದವನೇ ನನ್ನ ಬಳಿ `ವಿನೂ.. 4-0 ದಿಂದ ಮ್ಯಾಚ್ ಸೋಲ್ತೀವಿ ಅನ್ಸುತ್ತೆ..' ಎಂದ..  `ಮುಚ್ಕೊಂಡು ನೋಡು..' ಎಂದೆ..ಸುಮ್ಮನಾದ.. ಒಮ್ಮೆ ನನ್ನ ಬಳಿ ಬರುವುದು, ಮ್ಯಾಚ್ ನೋಡಿ ಕಣ್ಣಿನಲ್ಲಿ ಕ್ವಶ್ಚನ್ ಮಾರ್ಕ್ ಮೂಡಿಸಿ ಪಕ್ಕದಲ್ಲಿದ್ದ ಆನಂದನ ಬಳಿ ಹೋಗುವುದು, ಕೊನೆಗೊಮ್ಮೆ ಕಿಟ್ಟುವಿನ ಬಳಿ ಹೋಗಿ ಆತನ ಬೆನ್ನು ತಟ್ಟಿ ಧೈರ್ಯ ತುಂಬುವ ಕೆಲಸಕ್ಕೆ ನವೀನ ನಿರತನಾದ.. ನವೀನ ಆಡಿದ ಟೇಬಲ್ಲನ್ನು ಗಮನಿಸಿದೆ. ನವೀನನ ರಾಜನೊಬ್ಬನೇ ಉಳಿದಿದ್ದರೆ ಉಳಿದೆಲ್ಲ ಢಮಾರ್ ಆಗಿದ್ದವು. ಎದುರಾಳಿ ಸಮೀರ್ ಘೋಟ್ನೆ ಮಿನಿಸ್ಟರ್, ಕುದುರೆ ಸೇರಿದಂತೆ ಸಾಕಷ್ಟು ಬಲಗಳನ್ನು ಹೊಂದಿದ್ದು ಮ್ಯಾಚನ್ನು ಗೆದ್ದಿದ್ದ.. `ತಥ್.. ನನ್ನ ಮಗನೇ.. ಇಷ್ಟ್ ಖರಾಬಾಗಿ ಸೋಲೋದಾ..?' ಎಂದು ಸನ್ನೆ ಮಾಡಿದೆ.. ನವೀನ ಕಣ್ಣು ತಪ್ಪಿಸುವ ಯತ್ನ ಮಾಡಿದ. ಮತ್ತೆ ಕೆಲವು ನಿಮಿಷಗಳು ಸಂದಿರುವಷ್ಟರಲ್ಲಿ ಫಸ್ಟ್ ಬೋರ್ಡ್ ಪ್ಲೇಯರ್ ಆನಂದ ಗೋಗಟೆಯ ಮತ್ತೊಬ್ಬ ನ್ಯಾಷನಲ್ ಪ್ಲೇಯರ್ ಅನಿಕೇತ್ ಪಾವಸೆ ವಿರುದ್ಧ ಸೋತು ಎದ್ದು ಬಂದ..ಪಾ...ಪ.. ಸೋತವನು ಅದೆಷ್ಟು ಸಾರಿ ಮುಖ ೊರೆಸಿಕೊಂಡನೋ.. ಕಣ್ಣೀರಿಗಾ..? ಬೆವರಿಗಾ..? ಸ್ಪಷ್ಟವಾಗಲಿಲ್ಲ.. ಮೂರೋ.. ನಾಲ್ಕನೆಯದೋ ಬೋರ್ಡನ್ನು ಆಡುವಂತಹವನನ್ನು ಮೊದಲ ಬೋರ್ಡಿಗೆ ಆಡಿಸಿ ತಪ್ಪು ಮಾಡಿದೆನಾ ಎಂದೆಲ್ಲಾ ಅನ್ನಿಸಿತು.. ಜೊತೆಯಲ್ಲಿ `ಅಯ್ಯೋ.. ಇವರ್ಯಾಕೆ ಇಷ್ಟು ಹೀನಾಯವಾಗಿ ಸೋತರು..' ಎಂದೂ ಅನ್ನಿಸದಿರಲಿಲ್ಲ.. ಆನಂದನೂ ಹೆಚ್ಚು ಕಡಿಮೆ ನವೀನನಷ್ಟೇ ಖರಾಬಾಗಿ ಸೋತಿದ್ದ.. ಻ಲ್ಲಿಗೆ ನಮ್ಮ ಟೀಮು ಆಗಲೇ 2-0ದಿಂದ ಹಿಂದುಳಿದಂತಾಗಿತ್ತು.
ತಂಡದ ಇಬ್ಬರು ಆಟಗಾರರು ಇಷ್ಟು ಹೀನಾಯವಾಗಿ ಸೋತರಲ್ಲಾ ಎನಿಸಿತಾದರೂ ಕಿಟ್ಟುವಿನ ಮೇಲೆ ಕೊಂಚ ಭರವಸೆಯುಳಿದಿತ್ತು. ಇವರಷ್ಟು ಹೀನಾಯವಾಗಿ ಸೋಲಲಾರ ಎನ್ನುವ ಭರವಸೆ ಮನಸ್ಸಿನಲ್ಲಿತ್ತು. ನನ್ನ ಮೇಲೆ, ನನ್ನ ಾಟದ ಮೇಲೆ ನನಗೆ ಇರುವ ಭರವಸೆಗಿಂತ ಹೆಚ್ಚು ಆತನ ಆಟದ ಮೇಲಿತ್ತು ಅಂದರೂ ತಪ್ಪಾಗಲಿಕ್ಕಿಲ್ಲ.  ಆತನ ಆಟದಲ್ಲಿನ ಟರ್ನಿಂಗ್ ಪಾಯಿಂಟುಗಳೇ ಹಾಗಿದ್ದವು. ಇದ್ದಕ್ಕಿದ್ದಂತೆ ಟ್ವಿಸ್ಟನ್ನು ಕೊಟ್ಟು ಎದುರಾಳಿಯನ್ನು ಗಲಿಬಿಲಿಗೊಳಿಸಿ ಸೋಲಿಸುತ್ತಿದ್ದ. ಟ್ವಿಸ್ಟು ನೀಡಿ ಸುಮ್ಮನಿರುವ ಕಿಟ್ಟು ಎದುರಾಳಿ ಗಲಿಬಿಲಿಯಲ್ಲಿದ್ದರೆ ಆತನ ಬಳಿ ಉಭಯಕುಶಲೋಪರಿ ಸಾಂಪ್ರತದ ಜೊತೆ ತಮಾಶೆಯನ್ನು ಮಾಡಿ ಎದುರಾಳಿಯ ಮನಸ್ಸನ್ನೂ ಫ್ರೀಯಾಗಿಸುವ ಗುಣವನ್ನೂ ಹೊಂದಿದ್ದ.. ಆತ ಇದ್ದಾನಲ್ಲ ನೋಡೋಣ.. ಎಂದು ಸುಮ್ಮನಾದೆ..
ನಮ್ಮ ಆಟದಲ್ಲಿ ಎದುರಾಳಿ ಸಾಗರ್ ಚಿಂಚೋಳಿಮಠ ಪ್ರತಿಯೊಂದು ನಡೆಗೂ 15-20 ನಿಮಿಷ time ತೆಗೆದುಕೊಳ್ಳುತ್ತಿದ್ದ.. ಇದು ನನಗೆ ಬಹಳ ಉಪಯೋಗಕಾರಿಯಾಯಿತು,. ಕಾಲೇಜುಗಳಲ್ಲಿ, ಪ್ರಾಕ್ಟೀಸಿನ ಸಂದರ್ಭಗಳಲ್ಲಿ ರ್ಯಾಪಿಡ್ ಚೆಸ್ ಆಡಿ ರೂಢಿಯಾಗಿದ್ದ ನಾನು ಆತ ಯೋಚನೆ ಮಾಡಿ ನಡೆಸುವ ಸಂದರ್ಭಗಳಲ್ಲಿಯೇ ನಾನೂ ಆಲೋಚನೆ ಮಾಡಿ ತಕ್ಷಣದಲ್ಲಿ ಆಡಿ free ಆಗುತ್ತಿದ್ದೆ. 
ಆಟದ ಮಧ್ಯದಲ್ಲೇ ಒಮ್ಮೆ ಎದ್ದು ಹೋಗಿ ಕಿಟ್ಟುವಿನ ಮ್ಯಾಚು ನೋಡಿದೆ. (ಪಂದ್ಯದ ನಡುವೆ ಏಳಬೇಡಿ, ಮಾತನಾಡಬೇಡಿ ಎಂಬ ರೂಲ್ಸುಗಳನ್ನು ಕಟ್ಟುನಿಟ್ಟಾಗಿ ಮಾಡಿದ್ದರೆ ಖಂಡಿತವಾಗಿಯೂ ನಾವು ಆಟಕ್ಕೆ ಸಲಾಂ ಹೊಡೆದು ಬರುತ್ತಿದ್ದೆವು ಬಿಡಿ) ಅರೇ....ವಿನ್ನಾಗುವ ತರದಲ್ಲಿತ್ತು..!!
ನನ್ನ ಮ್ಯಾಚು ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯಿತು ಎಂಬಂತೆ ಎತ್ತೆತ್ತಲೋ ಸಾಗುತ್ತಿತ್ತು.. ಆಡಿದ್ದು ಬಹುಶಃ 15-20ಸ್ಟೆಪ್ ಅಸ್ಟೇ ಇರಬೇಕು. ಸಮಯ ಎರಡೂವರೆ ಗಂಟೆಗೂ ಅಧಿಕ ಕಾಲವನ್ನು ವ್ಯಯಿಸಿತ್ತು. ನನ್ನ ಹಾಗೂ ಕಿಟ್ಟುವಿನ ಸುತ್ತ ಜನವೋ ಜನ.. ಆ ಜನರಲ್ಲಿ ಹೆಚ್ಚಿನವರು ನನಗೆ ಹಾಗೂ ಕಿಟ್ಟುವಿಗೆ ಸಪೋರ್ಟ್ ಮಾಡಿದ್ದರು. ಏಕೆಂದರೆ ಅದರಲ್ಲಿ ಹಲವರು ಗೋಗಟೆ ಕಾಲೇಜಿನ ವಿರುದ್ಧ ಹೀನಾಯವಾಗಿ ಸೋತಿದ್ದ ಹಲವರು, ಮೋಸದಿಂದಲೂ ಸೋತಿದ್ದ ಮತ್ತೆ ಕೆಲವರು ನಾವಾದರೂ ಗೆಲ್ಲಲಿ ಎಂದು ಹಾರೈಸುತ್ತಲಿದ್ದರು ಎಂಬುದು ಸ್ಪಷ್ಟವಾಗಿತ್ತು. ಮತ್ತೊಂದು ಅರ್ಧಗಂಟೆ ಕಳೆಯಿತು. ಬಹುಶಃ 11 ಗಂಟೆಯಾಗಿರಬೇಕು. ಆಗ ನನಗೆ ಕಿಟ್ಟುವಿನ ಕಡೆಗೆ ಟೆನ್ಶನ್ ಶುರುವಾಯಿತು.
ಏಕೆಂದರೆ ಕಾಲೇಜಿನಲ್ಲೆಲ್ಲ ಅನಾಮತ್ತು ಎರಡೂವರೆ-ಮೂರುಗಂಟೆಗಳ ಕಾಲ ಒಂದು ಕಡೆ ಕುಳಿತವನೇ ಅಲ್ಲ ಕಿಟ್ಟು.. ಎಂತದ್ದೇ ಮ್ಯಾಚಿರಲಿ, ಸೋಲಲಿ, ಗೆಲ್ಲಲಿ.. ಕುಳಿತು ಬೇಜಾರು ಬಂದ ತಕ್ಷಣ `ಸಾಯ್ಲಾ ದಂಟೂ.. ಬ್ಯಾಜಾರ್ ಬಂದ್ ಹೋತಲೆ..ಮ್ಯಾಚು ಬಿಟ್ ಕೊಡ್ತಿ.. ಎದ್ ಹೋಪನಾ..' ಎಂದು ಹೇಳಿ ಎದ್ದುಬಂದು ಬಿಡುತ್ತಿದ್ದ..ಆತನ ಪರಿಸ್ಥಿತಿ ಏನಾಯಿತೆಂದು ನೋಡೋಣ ಎಂದು ಪಕ್ಕದಲ್ಲಿ ನೋಡಿದರೆ .. ಅವನೆಲ್ಲಿ ಕಾಣುತ್ತಾನೆ..? ಸುತ್ತಲೂ ಜನ ತುಂಬಿ ಆತನಿಗೂ ನನಗೂ ಲಿಂಕೇ ಇಲ್ಲದಂತಾಗಿಬಿಟ್ಟಿತ್ತು. ಪಂದ್ಯ ಬೇರೆ ರೋಚಕವಾಗಿತ್ತು. ಟೀಮು 2-0ದಿಂದ ಹಿಂದಿತ್ತು..

(ಮುಂದುವರಿಯುತ್ತದೆ..)
(ಮುಂದಿನ ಭಾಗದಲ್ಲಿ ನಿರೀಕ್ಷಿಸಿ, ಮ್ಯಾಚಿನ ಕ್ಲೈಮ್ಯಾಕ್ಸ್.. ಹೆಲ್ಪ್ ಪುಲ್ ಮ್ಯಾಚುಗಳು)

No comments:

Post a Comment