Friday, November 1, 2013

ಚದುರಂಗದ ಕುದುರೆಯ ಬೆನ್ನೇರಿ -ಭಾಗ 2

ವಿಶಿಷ್ಟ ಸಾಮ್ರಾಟ್ ಬಸ್ಸು...


ನನ್ನ ಈ ಪ್ರವಾಸ ಕಥನದಲ್ಲಿ ವಿಶೇಷ ಪಾತ್ರವಾಗಿದ್ದು ಈ ಸಾಮ್ರಾಟ್ ಬಸ್ಸಿ ಅಂದರೂ ತಪ್ಪಿಲ್ಲ. ಈ ಬಸ್ಸಿನಲ್ಲಿ ನಾವು ಅಜಮಾಸು 8 ಗಂಟೆಗಳ ಕಾಲ ಪ್ರಯಾಣ ಮಾಡಿದ ಕಾರಣ ಅದರ ನೆನಪಿನ್ನೂ ಹಸಿಹಸಿಯಾಗಿದೆ. ಶಿರಸಿಯಿಂದ ಹುಬ್ಬಳ್ಳಿ ಹಾಗೂ ಹುಬ್ಬಳ್ಳಿಯಿಂದ ದೂರದ ಗುಮ್ಮಟ ನಗರಿ ಬಿಜಾಪುರದ ವರೆಗೆ ಈ ಬಸ್ಸು ನಮ್ಮ ಸಾಥಿಯಾಗಿತ್ತಲ್ಲ ಅದರ ಪಯಣವೇ ಮಜವಾಗಿದೆ.
ಶಿರಸಿಯಲ್ಲಿ ಬಸ್ಸು ಏರಿದಾಗ ಅದರ ಸೀಟೆಲ್ಲ ಖಾಲಿ ಖಾಲಿಯಾಗಿದ್ದವು. ಬಸ್ಸಿನಲ್ಲಿದ್ದ ಟಿವಿಯಲ್ಲಿ ಕ್ರೇಜಿ ಸ್ಟಾರ್ ನ ಬಣ್ಣದ ಗೆಜ್ಜೆ ಚಿತ್ರ ಮೂಡಿಬರುತ್ತಿತ್ತು. ಯಾಕೋ ಗೊತ್ತಿಲ್ಲ ಆ ಹೀರೋ ಅಂದರೆ ನಮ್ಮ ಬಳಗದಲ್ಲಿದ್ದ ತೃಪ್ತಿಗೆ ಆಗದು. ಅದನ್ನು ತಿಳಿದುಕೊಂಡ ಕೃಷ್ಣಮೂರ್ತಿ ಆಕೆಯ ಜೊತೆಗೆ ಕೀಟಲೆಗಿಳಿದ. ಮಾತಿನ ಮೂಲಕ ಛೇಡಿಸಹತ್ತಿದ. ತೃಪ್ತಿ ಆ ಹೀರೋನನ್ನು ಬೈಯ್ಯಲು ಆರಂಭಿಸಿದರೆ ಕಿಟ್ಟು ಅವನನ್ನು ಹೊಗಳುವುದು, ಆಕೆ ಆತನ ಸಿನಿಮಾ ಡಬ್ಬಾ ಇದೆ ಎಂದರೆ ಆತ ಇಲ್ಲ ಅದು ಚನ್ನಾಗಿದೆ ಎನ್ನುವುದು..ಆತನ ಹಾಡುಗಳೆಲ್ಲ ನನಗೆ ಪಂಚಪ್ರಾಣ. ಹಾಡನ್ನು ನೋಡುತ್ತಿದುವುದೇ ಹೊಸದೊಂದು ಕ್ರೇಜ್ ಹುಟ್ಟುಹಾಕುತ್ತದೆ ಎನ್ನುವುದು.. ಈ ಮುಂತಾಗಿ ಆಕೆಯನ್ನು ಛೇಡಿಸುತ್ತಿದ್ದ.
ಚಿತ್ರ ಮುಂದುವರಿದಂತೆಲ್ಲ ಬಸ್ಸು ರಶ್ಶೋ ರಶ್ಶಾಗತೊಡಗಿತು. ಕೊನೆಗೆ ಇದೇ ಜನಜಂಗುಳಿಯ ಪ್ರತಾಪದಿಂದಲೇ ಬಣ್ಣದ ಗೆಜ್ಜೆಯ ಕೊನೆ ಕೊನೆಯ ಝಲಕುಗಳನ್ನು ಕಣ್ಣಲ್ಲಿ ತುಂಬಿಕೊಳ್ಳಲು ಆಗಲೇ ಇಲ್ಲ.
ಮಧ್ಯದಲ್ಲೆಲ್ಲೋ, ಮುಂಡಗೋಡಿರಬೇಕು. ಪ್ರಯಾಣಿಕನೊಬ್ಬ ಬಸ್ ಕಂಡಕ್ಟರ್ ಬಳಿ ಜಗಳ ಪ್ರಾರಂಭಿಸಿದ. ಚಿಲ್ಲರೆ ಜಗಳ ತಾರಕಕ್ಕೇರುವ ಹೊತ್ತಿಗೆ ಪ್ರಯಾಣಿಕರು ತಮ್ಮ ಜೊತೆಗಾರನ ಮೇಲೆ ತಿರುಗಿಬಿದ್ದರು. ಪರಿಣಾಮವಾಗಿ ಆತ ಗಪ್ ಚುಪ್ ಆದ. ಹಾಳಾದ ರಸ್ತೆ, ಚಾಲಕನ ನಿಯಂತ್ರಣ ಮೀರಿದ ವೇಗ.. ಇವುಗಳ ಪರಿಣಾಮ ಶಿರಸಿಯಲ್ಲಿ ತಿಂದಿದ್ದ ಪುರಿ ಭಾಜಿ ಹೊಟ್ಟೆಯಲ್ಲಿ ಕಲಸು ಮೇಲೋಗರವಾಗಿದ್ದರೂ ಹುಬ್ಬಳ್ಳಿಯನ್ನು ತಲುಪುವ ವೇಳೆಗೆ ಸಂಪೂರ್ಣ ಜೀರ್ಣೋದ್ಧಾರಗೊಂಡಿತ್ತು.

ಹುಬ್ಬಳ್ಳಿಯಿಂದ ಬಿಜಾಪುರದವರೆಗೆ...
ಇದು ಅನಾಮತ್ತು ಐದೂವರೆ ಗಂಟೆಗಳ ಮ್ಯಾರಥಾನ್ ಪಯಣ. ಬಯಲುಸೀಮೆಯಲ್ಲಿ ವಾಹನದಲ್ಲಿ ಕುಳಿತು ಸಾಗುವುದಕ್ಕೂ ಸಹನೆ ಬೇಕು. ಸುಮಾರು 350 ಕಿ.ಮಿ ದೂರದ ಈ ಪಯಣಕ್ಕೆ ದೈಹಿಕ ಸಾಮರ್ಥ್ಯದ ಜೊತೆಗೆ ಮಾನಸಿಕ ಶಕ್ತಿಯೂ ಅಗತ್ಯ. ಹುಬ್ಬಳ್ಳಿಯಲ್ಲಿ ಟಿಪಿಕಲ್ ಬೈಲು ಸೀಮೆಯ ಖಾರದ ಊಟ ಮಾಡಿ 11.30ಕ್ಕೆ ರಾಣಿ ಚನ್ನಮ್ಮಾ ಬಸ್ಸನ್ನೇರಿದೆವು. ಅದರ ಜೊತೆಯಲ್ಲಿಯೇ ನಮ್ಮ ಅಷ್ಟದಳ  ಹಾಗೂ ಒಂದು ದಳದಳ ದ  ಗೌಜು ಬಸ್ಸಿನ ಟಾಪನ್ನೂ ಮೀರಿ ಆಚೆಗೆ ಹಾಯ್ದಿತ್ತು. ಬಸ್ಸಿನಲ್ಲಿ ಅಷ್ಟು ಜನರಿರಲಿಲ್ಲ. ಹಾಗಾಗಿ ಕೊನೆಯ 8 ಸೀಟುಗಳು ನಮಗಾಗಿಯೇ ಎಂಬಂತೆ ಖಾಲಿಖಾಲಿಯಾಗಿದ್ದವು. ನಮ್ಮ ಗೌಡರನ್ನು ಮುಂದೆಲ್ಲೋ ಒಂದು ಸೀಟಲ್ಲಿ ಒಬ್ಬಂಟಿಯಾಗಿ ಕುಳ್ಳಿರಿಸಿ ನಾವು ಎಮಟೂ ಜನರು ಕೊನೆಯ ಸೀಟಿನಲ್ಲಿ ಆಸೀನರಾಗುವ ವೇಳೆಗೆ ಬಸ್ಸಿನಲ್ಲಿ ಪೋಂ.. ಪೋಂ..

ಇಷ್ಟರ ಜೊತೆಗೆ  ನಮ್ಮ ಎಂಟೂ ಜನರ ಗುಣಾವಗುಣಗಳನ್ನು ಪರಿಚಯ ಮಾಡಿಕೊಡದಿದ್ದರೆ ತಪ್ಪಾಗುತ್ತದೆ. ಮೊದಲು ನನ್ನಿಂದಲೇ ಶುರುವಾಗಲಿ..ನಾನೊಂಥರಾ ಇದ್ದವರಲ್ಲಿಯೇ ಭಾವಾರ್ಥಿ. ಜೊತೆಗೆ nature lover. ಜೊತೆಗೆ ಈಗ ಬಾಯ್ಸ್ ಟೀಮಿನ ಕ್ಯಾಪ್ಟನ್. ಹರಟೆಗೆ ಹರಟೆ. ಕೊರೆತಕ್ಕೆ ಸಮಯ ಸಿಕ್ಕಾಗಲೆಲ್ಲ ಕೊರೆತ. ಹಾಡಿಗೆ ಹಾಡು ಹಾಗೆಯೇ ಸಿಟ್ಟಿಗೆ ಸಿಟ್ಟು ನನ್ನ ಆಸ್ತಿ. . ಜೊತೆಗೆ ಇನ್ನೂ ಹತ್ತು ಹಲವು ಗುಣಗಳಿವೆ.. ಆದರೆ ಇಲ್ಲಿ ಅದು ಅನ್ ಇಂಟರೆಸ್ಟಿಂಗ್ ಬಿಡಿ..
ಇನ್ನು ನಮ್ಮ ಟೀಂ ಎಂಇಎಸ್ ಬಗ್ಗೆ ಹೇಳಬೇಕೆಂದರೆ ಎರಡನೇಯವನಾಗಿ ಆನಂದ ನಾಯ್ಕ. ನಮ್ಮಲ್ಲಿದ್ದವರ ಪೈಕಿ ಥಂಡು ಥಂಡು ಕೂಲ್ ಕೂಲ್.. ಬಸ್ಸಿನಲ್ಲಿ ಮಾತನಾಡದೇ ತನ್ನದೇ ಲೋಕದಲ್ಲಿ ತಾನು ಕುಳಿತು ಕಣ್ಣಿನಲ್ಲಿಯೇ ಕನಸು ಕಾಣುತ್ತಿರುವಂತಹ ವ್ಯಕ್ತಿ. ಜೊತೆಗೆ ಎಲ್ಲರಿದ್ದರೂ ಏಕಾಂಗಿ.. ಥಟ್ಟನೆ ನೋಡಿದರೆ ಇವನಿಗೆ ಲವ್ ಫೇಲ್ಯೂರಾ ಎಂದು ಭಾವಿಸುವಷ್ಟು ಒಬ್ಬಂಟಿ. ಒಂಥರಾ ಗುಜರಿಗೆ ಹಾಕಿದ ಬಸ್ಸಿನ ಹಾಗೇ.. ನಮ್ಮ ಜೊತೆಗೆ ಪಯಣ ಮಾಡಿದ ಬಡಪಾಯಿ. ಅಫ್ಕೋರ್ಸ್..LOVE ಅಂದರೆ ಪರಮ ಕುತೂಹಲ. ನಾವು ಲವ್ವಿನ ಕುರಿತು ಹೇಳುತ್ತಿದ್ದ ಸತ್ಯ ಹಾಗೂ ಸುಳ್ಳಿನ ಸುದ್ದಿಗಳನ್ನೆಲ್ಲ ನಂಬಿಬಿಟುವಷ್ಟು ಒಳ್ಳೆಯವನು. ಇನ್ನೊಂದು ಈತನ ದೊಡ್ಡಗುಣವೆಂದರೆ ಅನುಕರಣೆ. ಎಂತವರನ್ನಾದರೂ ಬೆಹತರೀನ್ ಆಗಿ ಅನುಕರಣೆ ಮಾಡುವ ಈತನನ್ನು ನಮ್ಮ ಪಯಣದಲ್ಲಿ ಅನೇಕ ಸಾರಿ ಅನುಕರಣೆಯ ಹಾದಿಗಿಳಿಸಿ ನಮ್ಮೊಳಗೊಂದಾಗುವಂತೆ ಮಾಡಿದ್ದು ನಮ್ಮ ದೊಡ್ಡ ಸಾಧನೆಗಳಲ್ಲಿ ಒಂದು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ನಾಗಭೂಷಣ ಗೌಡರ ತೀರ್ಥ ಪ್ರಸಾದ ಸೇವನೆ ಯ ನಟನೆಯನ್ನು ಅತ್ಯತ್ತಮವಾಗಿ ಅನುಕರಣೆ ಮಾಡಿ ತೋರಿಸಿ ನಮ್ಮಿಂದ ಅಭಿನವ ಕಲಾವಿದ ಎನ್ನುವ ಬಿರುದನ್ನು ಪಡೆದುಕೊಂಡಿದ್ದ..
ಉಳಿದ ಇನ್ನಿಬ್ಬರು ಹುಡುಗರ ಬಗ್ಗೆ ವಿಶೇಷವಾಗಿ ಹೇಳಲೇಬೇಕು. ಒಬ್ಬ ಧಡಿಯ ನವೀನ ಪಾವಸ್ಕರ ಇನ್ನೊಬ್ಬ ಲಂಬೂ ಕಿಟ್ಟಿ. ನಮ್ಮ ಈ ಪ್ರವಾಸ ಕಥನ -ಯಾನಕ್ಕೆ ವಿಶೇಷ ಅರ್ಥ, ಮೆರಗು ಬಂದಿದ್ದೇ ಈ ಇಬ್ಬರಿಂದ. ಮೊದಲು ನವೀನನ ಪ್ರವರ ಹೇಳಿಕೊಂಡು ಮುಂದಕ್ಕೆ ಸಾಗುತ್ತೇನೆ. ಇಂವ ನವೀನ ಪಾವಸ್ಕರ. ವಯಸ್ಸಿಗೆ ಮೀರಿದ ದೇಹ ಈತನ  ಭೌಗೋಳಿಕ ಲಕ್ಷಣ. ಹೋಲಿಸಿ ಹೇಳಬೇಕೆಂದರೆ ದೊಡ್ಡ ವೋಲ್ವೋ ಲಾರಿಯಂತವನು. ಅಂತಹ ದೈತ್ಯ ದೇಹಕ್ಕೆ ತಕ್ಕ ಹೊಟ್ಟೆ ಇರದಿದ್ದರೆ ಹೇಗೆ ಹೇಳಿ..? ಜೊತೆಗೆ ಗಟ್ಟುಮುಟ್ಟಾದ ಆಳುವೂ ಹೌದು. ಪ್ರೀತಿಗೆ ಜೈ. ಜಗಳ-ಗಲಾಟೆ ಹೊಡೆದಾಟಕ್ಕೂ ಸೈ. ಈತ ಸಾಮಾನ್ಯವಾಗಿ ನಡೆದುಕೊಂಡರೂ ಎದುರಿನವರಿಗೆ ಹುಚ್ಚಾಪಟ್ಟೆ ನಗು ಹುಟ್ಟುತ್ತದೆ. ಈತನ ಹಾವ-ಭಾವ-ನಡೆ-ನುಡಿಗಳೇ ನಮಗೆ ಆಕರ್ಷಣೀಯ ಎನ್ನಿಸುತ್ತದೆ. ಇವುಗಳೇ ನಮ್ಮ ಪಯಣಕ್ಕೆ ವಿಶೇಷವಾದ ಮೆರಗಿನ ಜೊತೆಗೆ ಖುಷಿಯನ್ನು ನೀಡಿದ್ದು ಎಂದರೆ ತಪ್ಪಿಲ್ಲ. ಚನ್ನಾಗಿ ಚೆಸ್ ಆಡುತ್ತಾನೆ. ಆನಂದ ನಾಯ್ಕ ಹಾಗೂ ನವೀನ ಪಾವಸ್ಕರ ಸೇರಿದರೆ 3-4 ಗಂಟೆಗಳ ಕಾಲ ಚೆಸ್ ಆಡಿಬಿಡಬಲ್ಲರು. ನೋಡುಗರು ಹಣ್ಣಾಗುವುದಂತೂ ಗ್ಯಾರಂಟಿ.
ಇನ್ನುಳಿದವನೆಂದರೆ ಕಿಟ್ಟು. ಅಲಿಯಾಸ್ ಕರಷ್ಣಮೂರ್ತಿ ದೀಕ್ಷಿತ್ ಉರುಫ್ ದೀಕ್ಷಿತ ಅಥವಾ ಕೆಡಿ. ಈತನ ಬಗ್ಗೆ ಹೇಳಬೇಕೆಂದರೆ ಕಷ್ಟದ ಕೆಲಸವೂ ಹೌದು. Onle line ನಲ್ಲಿ ಹೇಳಬೇಕೆಂದರೆ ಈತನೊಬ್ಬ ಡಿಫರೆಂಟ್ ಫೆಲ್ಲೋ.. ಬಹುಶಃ ಈತ ನಮ್ಮ ಪಯಣದಲ್ಲಿಲ್ಲ ಎಂದಾಗಿದ್ದರೆ ನಾನು ಈ ಪ್ರವಾಸ ಕಥನವನ್ನು ಬರೆಯುತ್ತಿಲೇ ಇರಲಿಲ್ಲವೇನೋ..
ಕಿಟ್ಟು/ಕಿಟ್ಟಿಯ ಬಗೆಗ ಹೇಳಬೇಕಾದರೆ ಸ್ವಲ್ಪ ಫ್ಲಾಷ್ ಬ್ಯಾಕ್ ಗೆ ಹೋಗಿ ಬರುತ್ತೇನೆ. ಮನಸ್ಸಿನಲ್ಲಿ ನಿಮ್ಮಿಷ್ಟದ ಫ್ಲಾಷ್ ಬ್ಯಾಕಿನ ಸಿನೆಮಾ ನೆನಪು ಮಾಡಿಕೊಳ್ಳಬಹುದು. ನಿಜವಾಗಿಯೂ ಹೇಳಬೇಕೆಂದರೆ ಕಿಟ್ಟುವನ್ನು ಕಾಲೇಜಿನ CHESS ತಂಡದ ಆಟಗಾರನಾಗಿ ಕರೆದೊಯ್ಯಲು ಆಟದ ಗಂಧಗಾಳಿಯೇ ಗೊತ್ತಿರದಿದ್ದ ಎನ್. ಎಚ್. ಗೌಡರಿಗೆ ಸುತಾರಾಮ್ ಇಷ್ಟವಿರಲಿಲ್ಲ. ನಾವು ಹೊರಡಲು ಎರಡು ಮೂರು ದಿನಗಳಿರುವ ವರೆಗೂ ಆತ ಬರುವುದೋ ಇಲ್ಲವೋ ಎನ್ನುವ ಹೊಯ್ದಾಟ ನಡೆದೇ ಇತ್ತು. ಕೋಚ್ ಎಂ. ಕೆ. ಹೆಗಡೆಯವರೂ ಈ ಕುರಿತು ಸ್ಪಷ್ಟ ನಿರ್ಧಾರ ಮಾಡಲು ಅನುಮಾನಿಸುತ್ತಿದ್ದರು. ಆದರೆ ನನಗೆ ಮಾತ್ರ ಕಿಟ್ಟುವನ್ನು ಕರೆದೊಯ್ಯಲೇ ಬೇಕು ಎಂಬ ಭಾವನೆ ಬಂದಿತ್ತು. ಇದಕ್ಕೆ ಕಾರಣಗಳು ಹಲವಿದ್ದವು. ಕಿಟ್ಟುವಿನ ಆಟ ಚನ್ನಾಗಿತ್ತು. ಕೆಲವು ಸಾರಿ ಸುಲಭದಲ್ಲಿ ಮ್ಯಾಚ್ ಸೋತಿದ್ದರೂ ಆತನ ಮೇಲೆ ಒತ್ತಡ ಬಿದ್ದಂತೆಲ್ಲ ಗೆಲ್ಲುತ್ತಾ ಹೋಗುವ ಗುಣವಿತ್ತು. ಟೆನ್ಶನ್ ಮಾಡಿಕೊಳ್ಳದೇ ಆಡುವುದು ಆತನ ವಿಶೇಷ ಗುಣ. ಎಂತದ್ದೇ ಸೋಲಿನ ಸಂದರ್ಭವಿರಲಿ ನಗುತ್ತಾ, ಎದುರಾಳಿಯನ್ನು ನಗಿಸುತ್ತಾ ಆಟವಾಡುವುದು ಆತನಿಗೆ ಒಲಿದು ಬಂದ ಗುಣ ಎಂದರೂ ತಪ್ಪಿಲ್ಲ ಬಿಡಿ. ಜೊತೆಯಲ್ಲಿ ಆಟಕ್ಕೆ ಸಡನ್ ತಿರುವು ನೀಡಬಲ್ಲವನಾಗಿದ್ದ.  ಇದ್ದಕ್ಕಿದ್ದಂತೆ ಪಿನ್ ಇಟ್ಟು ಢಂ ಅನ್ನಿಸುವ ಆತನ ಆಟಕ್ಕೆ ಹಲವಾರು ಸಾರಿ ನಾನೇ ಬಲಿಯಾಗಿದ್ದೆ.!
ಅಲ್ಲದೇ ಈತ ನನ್ನ ಪರಮಾಪ್ತ ಮಿತ್ರ. ನಾನು-ರಾಘು-ಕಿಟ್ಟು ಕಾಲೇಜಿನಲ್ಲಿ ಪರಮಾಪ್ತ ದೋಸ್ತರು ಎಂಬುದು ಕಾಲೇಜಿನ ಕಾರಿಡಾರಿನಲ್ಲಿ ಕೊಬ್ಬಿನಿಂದ ಬೆಳೆದಿದ್ದ ಆಕೇಸಿಯಾ ಮರಗಳಿಗೂ ಗೊತ್ತಿದ್ದವು. ಆತ ಇಂತಹ ಪಯಣದಲ್ಲಿ ಜೊತೆಗೂಡಿದರೆ ಪ್ರಯಾಣ ಖುಷಿಯಾಗಿರುತ್ತದೆ. ಪ್ರಯಾಣ ಹಸಿ ಹಸಿರಾಗಿ ನೆನಪಿನಾಳದಲ್ಲಿ ನಿಲ್ಲಬೇಕೆಂದರೆ ಕಿಟ್ಟುವಿನಂತಹವರು ಒಬ್ಬರಾದರೂ ಇರಬೇಕು ಎಂದು ನನಗೆ ಅನ್ನಿಸಿತ್ತು. ಪರಮಾಪ್ತ ದೋಸ್ತ ಬರ್ತಾನೆ ಅಂದ್ರೆ ಯಾರು ಬಿಡ್ತಾರೆ ಹೇಳಿ..?
ಇಂತಹ ಕಾರಣಗಳೇ ನನಗೆ ಕಿಟ್ಟುವಿನ ಅಗತ್ಯತೆಯನ್ನು ಎದ್ದು ತೋರಿಸುವಂತೆ ಮಾಡಿದವು. ಅಲ್ಲದೇ team ನ captain ಆದ ನನಗೆ ಆತನೊಬ್ಬ ಸಮರ್ಥ ಹಾಗೂ ಅತ್ಯಗತ್ಯ ಆಟಗಾರನಂತೆ ಕಾಣಿಸಿದ. ಹಾಗಾಗಿಯೇ ನಮಗೆ ಚೆಸ್ ಕಲಿಸಿದ ಎಂ. ಕೆ. ಹೆಗಡೆಯವರ ಬಳಿ ಚಿಕ್ಕ ಚಾಲೆಂಜೊಂದನ್ನು ಮಾಡಿ ಅವನನ್ನು ಕಳಿಸಲು ಕೇಳಿದೆ. ಬಗಲ್ ಮೆ ದುಷ್ಮನ್ ಎನ್ನುವಂತೆ ಕಿಟ್ಟು ಬರುವುದು ನವೀನ ಪಾವಸ್ಕರನಿಗೆ ಇಷ್ಟವೇ ಇರಲಿಲ್ಲ. ನೀರಾರು ಸಾರಿ ಅಂವ ಬ್ಯಾಡ.. ಅಂವ ಬಂದರೆ ಹೊಗೆ ಗ್ಯಾರಂಟಿ ಎಂದು ನನ್ನಲ್ಲಿಯೂ, ಕ್ರೀಡಾ ವಿಭಾಗದ ಮುಖ್ಯಸ್ಥರಾಗಿದ್ದ ನಾಗಭೂಷಣ ಗೌಡರ ಬಳಿಯೂ ಹೇಳಿದ್ದ. ಆದರೆ ನಾನು ಪಟ್ಟು ಸಡಿಲಿಸಿರಲಿಲ್ಲ. ಅವನಿಂದಾಗಿ ತಂಡ ಸೋತರೆ ಅದಕ್ಕೆ ನಾನೇ ಹೊಣೆಯಾಗುತ್ತೇನೆ ಎಂದೂ ಮಾತಿನ ಭರದಲ್ಲಿ ಹೇಳಿಬಿಟ್ಟಿದ್ದೆ. ಕೊನೆಗೆ ಒಲ್ಲದ ಮನಸ್ಸಿನಿಂದ ಕಿಟ್ಟುವನ್ನು ಟೀಂ ಮೆಂಬರ್ ಆಗಿ ಕಳಿಸಿದ್ದರು.
ಆದರೆ ನನ್ನ ನಿರೀಕ್ಷೆ ಹುಸಿಯಾಗಲಿಲ್ಲ ಎಂಬುದು ಮುಂದಕ್ಕೆ ನಿಮಗೆ ಗೊತ್ತಾಗುತ್ತದೆ.. ಓದಿ.. ಆತ ನಮ್ಮ ಪಯಣದಲ್ಲಿ ಆಟವೊಂದೇ ಅಲ್ಲದೇ ಎಲ್ಲ ಕಡೆಗಳಲ್ಲಿಯೂ ಟ್ವಿಂಕಲ್ ಟಸ್ಟಾರ್ ಆಗಿ ಮೆರೆದುಬಿಟ್ಟ. ಕೊನೆಗೊಮ್ಮೆ ನನ್ನ ಚಾಲೆಂಜನ್ನು ಉಳಿಸಿದ ಕೀರ್ತಿಯೂ ಈತನಿಗೆ ಸಲ್ಲಲೇ ಬೇಕು. ಈತನ ಒಡನಾಟದಿಂದ ಪಯಣದ ನಡುವೆ ಅನೇಕ ಗಂಭೀರ ಸಮಸ್ಯೆಗಳು ನಮ್ಮನ್ನು ಹಿಡಿಬಿಡದೇ ಕಾಡಿದರೂ ತನ್ನಿಂದ ತಾನೇ ಸಾಲ್ವ್ ಆಗಿ ಹೋದವು. ಟೆನ್ಶನ್ ಸಮಯದಲ್ಲಿ ಆತ ಉಕ್ಕಿಸುತ್ತಿದ್ದ ಟೈಮಿಂಗ್ಸ್ ಭರಿತ ಡೈಲಾಗ್ ಹಾಗೂ ಹಾಸ್ಯದ ಮಾತುಗಳು ನಮ್ಮನ್ನು ಪಯಣದುದ್ದಕ್ಕೂ ಜೀವಂತಿಕೆಯಿಂದ ಕಾಪಾಡಿದವು ಎಂದರೆ ಅತಿಶಯೋಕ್ತಿಯಲ್ಲ.

(ಮುಂದುವರಿಯುತ್ತದೆ)
(ಮುಂದಿನ ಭಾಗದಲ್ಲಿ ನಿರೀಕ್ಷಿಸಿ ಮಹಿಳಾ ಮಣಿಗಳ ಪರಿಚಯ, ಕಾಡಿದ ಗೌಡರು ಹಾಗೂ ಬಿಜಾಪುರದ ಕಡೆಗಿನ ಪಯಣ)

No comments:

Post a Comment