Saturday, November 9, 2013

ಚದುರಂಗದ ಕುದುರೆಯ ಬೆನ್ನೇರಿ -ಭಾಗ 3

                  ಇನ್ನುಳಿದಂತೆ ನಮ್ಮ ಮಹಿಳಾ ಮಣಿಯರ ಕಡೆಗೆ ದೃಷ್ಟಿ ಹರಿಸೋಣ.. ಬಿ ಅಲರ್ಟ್..
ಅವರ ತಂಡದ ನಾಯಕಿ ನನ್ನದೇ ಕ್ಲಾಸಿನ ಪೂರ್ಣಿಮಾ ಟಿ. ಹೆಗಡೆ.. ಸೌಮ್ಯ ಸ್ವಭಾವದಾಕೆ.ಸಿಟ್ಟು ಬಂದು ತಿರುಗಿಬಿದ್ದಳು ಎಂದರೆ ಮುಗಿಯಿತು.. ತಕ್ಕ ಮಟ್ಟಿಗೆ  ಹಾಸ್ಯ ಕೂಡ ಕೂಡ ಮಾಡಬಲ್ಲಂತವಳು.
                 ಇನ್ನೊಬ್ಬಳು ಪೂರ್ಣಿಮಾ ಜಿ. ಹೆಗಡೆ. ಈಕೆಯಂತೂ (ಆಗಿನ ದಿನಗಳಲ್ಲಿ) ಒಮ್ಮೆ ಕಿವಿಗೆ ಮೋಬೈಲ್ ಇಟ್ಟರೆ ಮುಗಿಯಿತು. ಒಂದೋ ಕರೆನ್ಸಿ ಖಾಲಿಯಾಗಬೇಕು.. ಅಥವಾ ಎದುರಿಗಿದ್ದವರು ಹುಚ್ಚು ಹಿಡಿದುಬಿಡಬೇಕು.. ತಕ್ಕಮಟ್ಟಿಗೆ ಮುದ್ದು-ಮೊದ್ದು ಎಲ್ಲವೂ ಹೌದು. ಬಿಂದಾಸ್ ಸ್ವಭಾವ..
               ಮತ್ತೊಬ್ಬಾಕೆ ಪವಿತ್ರಾ ಹೆಗಡೆ. 2nd B.Aಯ ಹುಡುಗಿ. ಮುಗ್ದೆ ಅನ್ನುವುದಕ್ಕಿಂತ ಮಿಗಿಲಾಗಿ ಏನೂ ಅರಿಯದವಳು ಅಂದರೆ ಚೆನ್ನ.. ಆಕೆಗೋ ಮಿಸ್ ಸಂಜನಾ ಗಾಂಧಿ ಉರುಫ್ ಪೂಜಾ ಗಾಂಧಿ ಎಂದೇ ನಾನು ಕರೆಯುತ್ತಿದ್ದುದು. ತಕ್ಕಮಟ್ಟಿಗೆ ಹಾಗೆಯೂ ಕಾಣುತ್ತಾಳೆನ್ನಿ..
ಕೊನೆಯದಾಗಿ ಲೇಡೀಸ್ ತಂಡದ ಮತ್ತೊಬ್ಬ ಸದಸ್ಯೆ ತೃಪ್ತಿ ಹೆಗಡೆ. ನೋಡಲಿಕ್ಕೆ ಮಾತ್ರ ಕುಳ್ಳು ಹಾಗೂ ಸೈಲೆಂಟು... ಬಾಯಿ ಬಿಟ್ಟರೆ ಮಾತ್ರ ಆಟಂಬಾಂಬು..ಲಕ್ಷ್ಮಿ ಧಡಲ್ ಅಲ್ಲಲ್ಲಲ್ಲಲ್ಲ `ತೃಪ್ತಿ ದಢಲ್'.. ಬಹುಶಃ ಈ tourಗೆ, ಖುಷಿಗೆ ಈಕೆಯ ಕಾಣಿಕೆಯೂ ಬಹಳ ಹೆಚ್ಚಿದೆ ಅಂದರೆ ತಪ್ಪಿಲ್ಲ.. ಆದರೆ ಇಬ್ಬರು ಒಂದೇ ರೀತಿಯ ಗುಣದವರಲ್ಲಿ ಹೊಂದಾಣಿ ಇರುವುದಿಲ್ಲ ಎಂಬಂತೆ ಪಯಣದ ಆರಂಭದಿಂದ ಕೊನೆಯವರೆಗೂ ಮೆರೆದಿದ್ದು ತೃಪ್ತಿ-ಕೃಷ್ಣಮೂರ್ತಿ ಅವರ ಜಗಳ-ವಾದ-ಗಲಾಟೆ-ಮಾತುಕತೆ-ಕಾಲೆಳೆಯುವಿಕೆ.. ಇತ್ಯಾದಿ ಇತ್ಯಾದಿ. ಟೂರಿನುದ್ದಕ್ಕೂ ಇವರನ್ನು ನಿಯಂತ್ರಿಸಲು ಸಾಧ್ಯವೇ ಆಗಲಿಲ್ಲ..! ಯಾರಿಗೂ..

                               ಮತ್ತೆ ಮರಳಿ ಬಸ್ಸಿನ ಬಗ್ಗೆ ಹೇಳುತ್ತೇನೆ.. ಇನ್ನೂ ಮುಗಿದಿಲ್ಲ  ನೋಡಿ.. ಹುಬ್ಬಳ್ಳಿಯಲ್ಲಿ ರಾಣಿಚನ್ನಮ್ಮ ಟೂರ್ಸ್ & ಟ್ರಾವೆಲ್ಸಿನ ಖಾಲಿ ಬಸ್ಸಿನಲ್ಲಿ ಕುಳಿತ ನಮಗೆ ಹೊತ್ತು ಕಳೆಯಲು ಏನು ಮಾಡಬೇಕು ಎನ್ನುವುದೇ ತೋಚಲಿಲ್ಲ.  ಬಸ್ಸಿನೊಳಗೆ ಇದ್ದ ವೀಡಿಯೋ ಪ್ಲೇಯರ್ರಿನಲ್ಲಿ ಯಾವುದೋ ತಲೆನೋವು ತರುವಂತಕ ಭೀಖರ ಕನ್ನಡ ಸಿನೆಮಾ ಹಾಕಿದ್ದರು.. ಬಹುಶಃ ಯಾವುದೋ ಹಾರರ್ ಸಿನೆಮಾ ಇರಬೇಕು.. ಅದರಲ್ಲಿನ ಹಾರರ್ ಸನ್ನಿವೇಶಗಳನ್ನು ನೋಡಿದರೆ ಭಯದ ಬದಲಾಗಿ ನಗು ಉಕ್ಕುಕ್ಕಿ ಬರುವಂತಿದ್ದರೂ ಚಿತ್ರ ನೋಡಲು ಆಗಲಿಲ್ಲ. ಹೀಗಾಗಿ ನಾವು ಬಸ್ಸಿನ ಕೊನೆಯ ಸೀಟಿನ ಸರದಾರ/ಸರದಾರಿಣಿಯರು ಸೇರಿ `ಇಸಪೀಟ್' ಆಟ ಶುರುಹಚ್ಚಿಕೊಂಡೆವು. ಅದೂ ಸ್ವಲ್ಪ ಸಮಯದಲ್ಲಿಯೇ ಬೇಸರವನ್ನು ತಂದಿತು. ಅಂತ್ಯಾಕ್ಷರಿಯನ್ನು ಹೇಳಿದೆವು. ಅದೂ ಬೋರಾಯ್ತು.. ಕೊನೆಗೆ ಸುದ್ದಿಯನ್ನೂ ಹೇಳಿದೆವು.. ನಮ್ಮ ಸುದ್ದಿಯ ಭರಕ್ಕೆ ಅನೇಕರು ಬಲಿಯಾದರು. ಆದರೆ ಕಿಟ್ಟು-ತೃಪ್ತಿಯರ ವಾದದ ಕಾರಣದಿಂದಾಗಿ ಅದೂ ಕೆಲ ಸಮಯಗಳಲ್ಲಿ ಬೇಸರವನ್ನು ತಂದಿತು.
                     ಈ ಮದ್ಯದಲ್ಲಿಯೇ nature lover ಆದ ನಾನು ದಾರಿಯಲ್ಲಿ ಸಿಗುವ ಊರುಗಳ ಬೋರ್ಡುಗಳನ್ನೆಲ್ಲ ಕುತೂಹಲದಿಂದ ನೋಡಲು ಆರಂಭಿಸಿದ್ದೆ. ನವಲಗುಂದ-ನರಗುಂದ-ಕಿಲಾರ-ಕಲ್ಲೂರು.. ಅದೆಷ್ಟೋ ಉದ್ದುದ್ದದ ಮಜ ಮಜವಾದ ಹೆಸರುಗಳು.. ಅಗಲಗಲ ಊರುಗಳು.. ಊರಿನ ಹೊಟ್ಟೆಯನ್ನು ಸೀಳಿದಂತೆ ಹಾದು ಹೋದ ಹುಬ್ಬಳ್ಳಿ-ಬಿಜಾಪುರ ರಾಷ್ಟ್ರೀಯ ಹೆದ್ದಾರಿ. ಹಳ್ಳಿಗಳಲ್ಲೆಲ್ಲೋ ಬಸ್ಸು ನಿಲ್ಲುತ್ತಿದ್ದಷ್ಟು ಹೊತ್ತು ಕಲರವ. ಉಳಿದ ಸಮಯದಲ್ಲಿ ಬಸ್ಸಿನ ವಂಯ್ಯೋ ಸದ್ದು. ಟೈಂ ಕೀಪ್ ಮಾಡುವ ಕಾರಣದಿಂದ ಬಸ್ಸನ್ನು ಅದರ ಚಾಲಕ ವೇಗದೂತವಾಗಿ ಚಾಲನೆ ಮಾಡುತ್ತಿದ್ದ. ಬಸ್ಸಿನ ಅಕ್ಕಪಕ್ಕ ವೀಕ್ಷಣೆ ಮಾಡಿದರಂತೂ ಕಣ್ಣ ಬಿಂಬದ ದೃಷ್ಟಿ ಹರಿಯುವವರೆಗೂ ಬಯಲು-ಹೊಲಗಳೇ ಕಾಣುತ್ತಿದ್ದವು. ಸೂರ್ಯಕಾಂತಿಯ ಸೊಬಗು, ಹತ್ತಿ ಧಾನ್ಯಗಳ ಬೆಡಗು, ಬೆರಗು. ಕಬ್ಬಿನ ಗದ್ದೆಯ ಮೆರಗು, ನಡುನಡುವೆಯೆಲ್ಲೋ ಭತ್ತದ ಬಣವೆಗಳು, ಮನೆಗಳು, ಕೆರೆಗಳು, ಚಿಕ್ಕ ಚಿಕ್ಕ ಗುಡ್ಡಗಳು, ಬೋನ್ಸಾಯ್ ನಂತಹ ಕುಬ್ಜ ಮರಗಳು, ನಡು ನಡುವೆ ಸಿಗುತ್ತಿದ್ದ ನದಿಗಳು, ಕೆಲವು ಬತ್ತಿದ್ದವು. ಜೊತೆ ಜೊತೆಗೆ ವಿಶೇಷ ಎನ್ನಿಸಿದ್ದು ಬಿಸಿಲ ಬೇಗೆಯ ದಾರಿಯಲ್ಲಿ ಸಾಗುತ್ತಿದ್ದಂತೆ ಹೆದ್ದಾರಿ ಅಕ್ಕಪಕ್ಕದಲ್ಲಿ ನೆಟ್ಟಿದ್ದ ಸಾಲು ಸಾಲು ಮರಗಳು. ಇವುಗಳನ್ನೇ ಎಷ್ಟಂತ ನೋಡೋದು ಸ್ವಾಮಿ.. ನೋಡಿದ್ದನ್ನೇ ನೋಡಿದರೆ ಕೆಲವೊಮ್ಮೆ ಇಷ್ಟವಾಗುತ್ತದೆ ನಿಜ. ಆದರೆ ಹಲವು ಸಾರಿ ಬೇಸರ ಬಂದು ಬಿಡುತ್ತವೆ.ನನಗೂ ಹಾಗೆ ಆಯ್ತು.. ನೋಡಿ ನೋಡಿ ಬೇಸರ ಬಂದೇ ಬಿಟ್ಟಿತು. ಅದಕ್ಕೆ ಇನ್ನಷ್ಟು ಇಂಬೆನ್ನುವಂತೆ ಬಿಸಿಲಿನ ಕಾವು ಹೆಚ್ಚಾಯಿತು. ಇದುವರೆಗೂ ಗ್ಯಾಪ್ ಅಥವಾ ಬ್ರೇಕ್ ಇಲ್ಲದಂತೆ ವಟಗುಟ್ಟುತ್ತಿದ್ದ ಮಹಿಳಾಮಣಿಗಳು ಸುಸ್ತಾಗಿ, ಉತ್ಸಾಹ ರಹಿತರಾಗಿ ಕುಳಿತಿದ್ದರು. ವಿಚಿತ್ರವೋ, ವಿಶಿಷ್ಟವೋ, ಅಥವಾ ಇನ್ಯಾವುದೋ.. ಪೂರ್ಣಿಮಾ ಬೆಂಗ್ರೆಯ ಬೊಬೈಲಿಗೂ ಸುಸ್ತಾಗಿತ್ತೋ ಏನೋ ಗೊತ್ತಿಲ್ಲ.. ಬಹು ಹೊತ್ತಿನ ನಂತರ ಅದೂ ಸುಮ್ಮನಿತ್ತು.

ಬಸ್ಸು ಓಡುತ್ತಲೇ ಇತ್ತು.. ಅದೆಲ್ಲೋ ನಡುವೆ ಬಸ್ಸಿನ ಡ್ರೈವರ್ ಕೂಡ ಬದಲಾದ. ಪರಿಣಾಮವೋ ಎಂಬಂತೆ ಬಸ್ಸಿನ ವೇಗ ಇಮ್ಮಡಿಸಿತು. ಬಸ್ಸಿನಲ್ಲಿ ಕುಳಿತಿದ್ದ ನಮ್ಮ ತೂಕಡಿಕೆ ಮುಮ್ಮಡಿಸಿತು.  ಬಸ್ಸಿನ ತುಂಬ ಇದ್ದವರೆಲ್ಲ ಬಹುತೇಕ ಕುಂಭಕರ್ಣ ಸಿನಿಮಾದ ಹೀರೋಗಳೇ ಆಗಿದ್ದರು. ಇದ್ದವರ ಪೈಕಿ ನನಗೆ ಹಾಗೂ ಕಿಟ್ಟುವಿಗೆ ಮಾಡಲು ಏನೂ ಕೆಲಸವಿರಲಿಲ್ಲ.  ಹಾಗಾಗಿ ಎದ್ದು ಹೋಗಿ ಬಸ್ಸಿನ ಕಂಡಕ್ಟರ್ (ಏಜೆಂಟ್) ಬಳಿ ಅದೂ ಇದೂ ಮಾತಿಗೆ ಪ್ರಾರಂಭಿಸಿದೆವು.. ಕೊನೆಗೆ ಡ್ರೈವರ್ರನ್ನೂ ಮಾತಿಗೆ ಎಳೆದೆವು..
ನನಗೇಕೋ ಬಸ್ಸಿನ ಬಾಗಿಲಲ್ಲಿ ನಿಲ್ಲುವ ಅವ್ಯಕ್ತ ಆಸೆಯುಂಟಾಗಿ ಹೋಗಿ ನಿಂತೆ.. ಆಹ್... ಬೀಸುವ ಗಾಳಿಯ ರಭಸಕ್ಕೆ ಮೈಯೊಡ್ಡಿ ನಿಂತರೆ ಏನು ಆನಂದ.. ಅಂತೂ ಬಹಳ ಖುಷಿಯೇ ಲಭಿಸಿತು ಇದರಿಂದ.. ಈ ನಡುವೆ ಮತ್ತೆ ಉತ್ಸಹವನ್ನು ಗಳಿಸಿಕೊಂಡ ಕಿಟ್ಟು ಮತ್ತೆ ಮಹಿಳಾ ಮಣಿಯರ ಜೊತೆಗೆ ಕಾಡು ಹರಟೆ ಹೊಡೆಯಲು ಹೊರಟುಹೋದ.. ನನಗೋ ಬಸ್ಸಿನ ಕಂಡಕ್ಟರ್ ಬಳಿ ಜೊತೆಗೆ ಮಾತನಾಡುತ್ತಾ, ಬಸ್ಸಿನ ಬಾಗಿಲಲ್ಲಿ ನಿಂತು ಪಯಣಿಸುವುದು ಖುಷಿ ಕೊಟ್ಟಿತ್ತು.. ಪ್ರತಿ ಊರು-ನದಿ ಇವೆಲ್ಲವುಗಳಿಗೂ ಆತನಿಂದ live ಕಾಮೆಂಟರಿ ಕೇಳುತ್ತಿದ್ದೆ.. ವಿಚಿತ್ರವೋ, ವಿಶಿಷ್ಟವೋ.. ಪ್ರತಿಯೊಂದು ಊರಿನ ಇತಿಹಾಸದ ಸಮೇತ ಆತ ಹೇಳುತ್ತಿದ್ದ ಪರಿಗೆ ನಾನು ಬೆರಗಾಗಿದ್ದೆ.. ಇಂವ ಬಸ್ಸಿನ ಕ್ಲೀನರ್ರಾ..? ಏಜೆಂಟನಾ..? ಅಥವಾ ಯಾವುದೋ ಇತಿಹಾಸತಜ್ಞನಾ..? ಆತ ನೀಡುತ್ತಿದ್ದ ಮಾಹಿತಿಗಳು ನನ್ನನ್ನು ಗೊಂದಲಕ್ಕೆ ತಳ್ಳಿದ್ದಂತೂ ಸತ್ಯ. ಮಧ್ಯದಲ್ಲೆಲ್ಲೋ ಮಲಪ್ರಭೆಯೂ ಮರೆಯಾಗಿದ್ದಳು.. ಮಾತಿನ ಭರದಲ್ಲಿ ನನಗದು ಅರಿವೇ ಆಗಿರಲಿಲ್ಲ..

                                   ಹಾಗೆ ನೋಡುತ್ತಿದ್ದೆ.. ಥಟ್ಟನೆ ಒಂದು ಬಹುದೊಡ್ಡ ಸಾಗರ ನಮ್ಮೆದುರು ಕಾಣಿಸಿತು. ಅರೇ ಇದೇನಿದು ಬಯಲ ನಾಡಿನಲ್ಲಿ ಮಹಾಸಾಗರವೇ..? ಯಾಕೋ ನನ್ನ ಕವಿ ಮನಸ್ಸು ಜೀವತಳೆಯುತ್ತಿತ್ತು.. ಇಂತ ಬೆಂಗಾಡಿನಲ್ಲಿ ಸಮುದ್ರ ಎಲ್ಲಿಂದ ಬಂತು..? ಎಂದುಕೊಂಡೆ.. ಉದ್ದಾನುದ್ದ ಕಣ್ಣು ಹರಿಯುವವರೆಗೆ ನೋಡಿದರೂ ಬರೀ ನೀರು.. ನೀರು.. ನೀರು.. ನಡುವೆ ಉದ್ದಾನುದ್ದದ ಸೇತುವೆ..  ಸೇತುವೆ ಮೇಲೆ ನಮ್ಮ ವಾಹನದ ಒಂಟೀ ಪಯಣ.. 
ಇದೇನಿದು ಎಂದು ನಾನು ನನ್ನ ಪಕ್ಕದಲ್ಲಿದ್ದ ಬಸ್ಸಿನ ಏಜೆಂಟ್ ಬಳಿ ಕೇಳಿದೆ. ಅದಕ್ಕವನು ಅದು ಕೃಷ್ಣೆಯ ಅಣೆಕಟ್ಟಿನ ಹಿನ್ನೀರಿನ ಪ್ರದೇಶ ಎಂದು ಹೇಳಿದ. ಕೃಷ್ಣೆ ಮುಳುಗಿಸಿದ ಪ್ರದೇಶದಲ್ಲಿ ನಡುವೆ ನೇರಾನೇರವಾಗಿ ಸೇತುವೆ ನಿರ್ಮಾಣ ಮಾಡಲಾಗಿತ್ತು.. ಆಲಮಟ್ಟಿಯ ಅಗಾಧತೆ ವಿಸ್ಮಯವನ್ನು ಮೂಡಿಸಿತು.. ಅಷ್ಟರ ಜೊತೆಗೆ ಇದ್ದಕ್ಕಿದ್ದಂತೆ  ಈ ಸೇತುವೆ ಮುರಿದುಬಿದ್ದರೆ ಏನು ಮಾಡೋದು.. ದೇವಾ... ಮನಸ್ಸಿನಲ್ಲಿ ಯೋಚಿಸಿದಂತೆ ಭಯ ಉಂಟಾಯಿತು.. ಸೇತುವೆಯ ಉದ್ದ ಸರಿಸುಮಾರು 3 ಕಿಲೋಮೀಟರ್ ಅಂತೆ.. ಅಬ್ಬಾ ಅದೆಷ್ಟು ಉದ್ದ..? 3*1000 ಮೀಟರ್ =3000 ಮೀಟರ್ ಎಂದು ಹಲವಾರು ನಮೂನಿಯ ಲೆಕ್ಖವನ್ನೆಲ್ಲ ಮಾಡಿದೆ.
ಬಸ್ಸಿನಲ್ಲಿದ್ದ ಹಲವರು 1 ರುಪಾಯ್, 2 ರುಪಾಯ್, 5 ರು. ಕೆಲವರು 10 ರು. ಎಂಬಂತೆ ತೆಗೆದು ತೆಗೆದು ಆ ನೀರಿಗೆ ತೂರುತ್ತಿದ್ದರು. ಹಾಗೆ ಮಾಡಿದರೆ ಒಳ್ಳೆಯದಾಗುತ್ತದಂತೆ.. ಕೃಷ್ಣೆ ತೃಪ್ತಳಾಗುತ್ತಾಳಂತೆ.. ನಾವು ಮಾಡುವ ಪಯಣ ಸುರಳೀತವಾಗಿ ನಡೆಯುತ್ತದಂತೆ.. ಯಾವುದೇ ಅಡ್ಡಿ ಆತಂಕ ಬರದಂತೆ ಕೃಷ್ಣೆ ಕಾಪಾಡುತ್ತಾಳಂತೆ.. ಹಾಗಂತ ಅವರ ನಂಬಿಕೆಯೆಂದು ಏಜೆಂಟ್ ಹೇಳಿದ.. ನಾನೂ ಹಾಗೆ ಮಾಡಿದೆ...

(ಮುಂದುವರಿಯುತ್ತದೆ)
(ಮುಂದಿನ ಭಾಗದಲ್ಲಿ ನಿರೀಕ್ಷಿಸಿ : ಗುಮ್ಮಟ ನಗರಿ, ಬಾಗೇವಾಡಿ ಹಾಗೂ ಸೊಳ್ಳೆಯ ರೂಮು)

No comments:

Post a Comment