Thursday, June 6, 2019

ಅನುಮಾನ ಹುಟ್ಟಿಸುತ್ತಿದೆ ಕಾಡುಕೋಣಗಳ ಸರಣಿ ಸಾವು

ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಲಿಯಾದವೇ ವನ್ಯಪ್ರಾಣಿಗಳು?


ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ತಾಲೂಕು ವ್ಯಾಪ್ತಿಯಲ್ಲಿರುವ ಅಣಶಿ-ದಾಂಡೇಲಿ ಕಾಳಿ ಹುಲಿ ರಕ್ಷಿತಾರಣ್ಯ ವ್ಯಾಪ್ತಿಯಲ್ಲಿ  ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಕಾಡುಕೋಣಗಳ ಸರಣಿ ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿದೆ. ಅಸಹಜ ಸಾವನ್ನು ಸಹಜ ಸಾವು ಎಂದು ಬಿಂಬಿಸಲು ಯತ್ನಿಸುವ ಮೂಲಕ ಅರಣ್ಯ ಇಲಾಖೆ ಯಾವುದೋ ದೊಡ್ಡ ತಪ್ಪನ್ನು ಮರೆಮಾಚಲು ಯತ್ನಿಸುತ್ತಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಕಾಳಿ ಸಂರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ 16ಕ್ಕೂ ಅಧಿಕ ಕಾಡುಕೋಣಗಳು ಮೃತಪಟ್ಟಿದ್ದರೂ ಕೇವಲ 4 ಕಾಡುಕೋಣಗಳು ಮಾತ್ರ ಸತ್ತಿವೆ ಎನ್ನುವ ಮೂಲಕ ಅರಣ್ಯ ಇಲಾಖೆ ನೈಜ ಕಾರಣವನ್ನು ಮುಚ್ಚಿಡಲು ಯತ್ನಿಸುತ್ತಿದೆ. ತನ್ಮೂಲಕ ಯಾವುದೋ ಅಂಶವನ್ನು ಮರೆಮಾಚಲು ಯತ್ನಿಸುತ್ತಿದೆ ಎನ್ನುವ ಮಾತುಗಳು ಕೇಳಿ ಬಂದಿದೆ.


ಕೆಳ ಹಂತದ ಅಧಿಕಾರಿಗಳ ನಿರ್ಲಕ್ಷ್ಯ
ಕಾಡುಕೋಣಗಳ ಸರಣಿ ಸಾವಿನ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಕೆಳ ಹಂತದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಜೋಯಿಡಾ ಕಾಡಿನಲ್ಲಿ ಪ್ರಾರಂಭಿಕ ಹಂತದಲ್ಲಿ ಕಾಡುಕೋಣಗಳು ಮೃತಪಟ್ಟ ಸಂದರ್ಭದಲ್ಲಿ ನಿರ್ಲಕ್ಷ್ಯ ತೋರಿದ ಕೆಳ ಹಂತದ ಅರಣ್ಯಾಧಿಕಾರಿಗಳು ಸ್ಥಳೀಯ ಹಂತದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಹಜ ಸಾವು ಎಂದು ವರದಿ ಬರುವಂತೆ ಮಾಡಿದ್ದರು ಎನ್ನುವ ಆರೋಪ ಕೇಳಿ ಬಂದಿದೆ.
ಕಾಡುಕೋಣಗಳ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿರುವುದು ಬೆಳಕಿಗೆ ಬರುತ್ತಿದ್ದಂತೆಯೇ ಎಚ್ಚೆತ್ತುಕೊಂಡ  ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗದ ತಜ್ಞ ವೈದ್ಯರ ಮೊರೆ ಹೋದರು ಎನ್ನುವ ಮಾತುಗಳು ಕೇಳಿ ಬಂದಿದೆ. ಕಾಡುಕೋಣಗಳು ಸಹಜ ಕಾರಣದಿಂದ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸಾಯುವುದಿಲ್ಲಘಿ. ಶಿವಮೊಗ್ಗ ದ ವೈದ್ಯರಿಗೆ ಕಾಡುಕೋಣಗಳ ತಾಜಾ ಮಾಂಸ ಸಿಗದ ಕಾರಣ ವೈದ್ಯಕೀಯ ಪರೀಕ್ಷೆಯಲ್ಲಿ ನಿಖರ ಕಾರಣಗಳು ತಿಳಿದುಬರುವ ಸಾಧ್ಯತೆಗಳು ಕಡಿಮೆ ಎನ್ನುವುದು ಶಿವಮೊಗ್ಗದ ವೈದ್ಯಕೀಯ ಮೂಲಗಳ ಮಾಹಿತಿ.
ಇದೀಗ ಬೆಂಗಳೂರಿನ ಎರಡು ಪ್ರಯೋಗಾಲಯಗಳಿಗೆ ಕಾಡುಕೋಣಗಳ ಅಂಗಾಂಗಗಳನ್ನು ಒಯ್ಯಲಾಗಿದೆ. 10-12 ದಿನಗಳಲ್ಲಿ ಅವುಗಳ ಪರೀಕ್ಷೆಯ ವರದಿಗಳು ಹೊರಬೀಳಲಿದೆ. ನಂತರವಷ್ಟೇ ಕಾಡುಕೋಣಗಳ ಸಾವಿನ ಕಾರಣಗಳು ತಿಳಿದುಬರಲಿದೆ.


ಇನ್ನಷ್ಟು ಕಾಡುಕೋಣಗಳ ಸಾವು
ಕಾಡುಕೋಣಗಳ ಸರಣಿ ಸಾವು ಕೇವಲ ಕಾಳಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಸೀಮಿತವಾಗಿಲ್ಲಘಿ. ಕಾಡುಕೋಣಗಳು ಕಾಳಿ ನದಿಗೆ ನಿರ್ಮಿಸಲಾಗಿರುವ ಕೊಡಸಳ್ಳಿ ಅಣೆಕಟ್ಟು ಹಿನ್ನೀರು ಪ್ರದೇಶದ ವ್ಯಾಪ್ತಿಯಲ್ಲಿಯೂ ಮೃತಪಟ್ಟಿವೆ. ನಾಲ್ಕಕ್ಕೂ ಅಧಿಕ ಕಾಡುಕೋಣಗಳು ಕೊಡಸಳ್ಳಿ ಅಣೆಕಟ್ಟೆ ಹಿನ್ನೀರು ಪ್ರದೇಶದಲ್ಲಿ ಸತ್ತಿವೆ ಎನ್ನುವ ಮಾಹಿತಿಗಳು ಹೊಸದಿಗಂತಕ್ಕೆ ಲಭ್ಯವಾಗಿದೆ.
ಅರಣ್ಯ ಸಚಿವರೇ ಇತ್ತ ಗಮನ ಕೊಡಿ
ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಳಿಯೇ ಅರಣ್ಯ ಇಲಾಖೆಯೂ ಇದೆ. ಜೋಯಿಡಾ ಕಾಡಿನಲ್ಲಿ ಕಾಡುಕೋಣಗಳ ಸರಣಿ ಸಾವಿನ ಕುರಿತು ಕುಮಾರಸ್ವಾಮಿಯವರು ಕ್ರಮ ಕೈಗೊಳ್ಳುವ ಅಗತ್ಯವಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಕಿವಿ ಹಿಂಡುವ ಮೂಲಕ ವನ್ಯಜೀವಿಗಳ ಸರಣಿ ಸಾವು ತಡೆಗೆ ಕ್ರಮ ಕೈಗೊಳ್ಳಬೇಕಿದೆ. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಖಡಕ್ ನಿರ್ಧಾರ ಕೈಗೊಂಡು ಕೆಲವೇ ಸಂಖ್ಯೆಗಳಷ್ಟಿರುವ ಕಾಡುಕೋಣಗಳ ರಕ್ಷಣೆಗೆ ಆದೇಶ ಹೊರಡಿಸಬೇಕು ಎನ್ನುವುದು ಪರಿಸರ ಪ್ರೇಮಿಗಳ ಮನವಿಯಾಗಿದೆ.

ಸಾವಿಗೇನು ಕಾರಣ?
ಕಾಡುಪ್ರಾಣಿಗಳಲ್ಲಿ ರೋಗನಿರೋಧಕ ಶಕ್ತಿ ಅಧಿಕವಾಗಿರುತ್ತದೆ. ಚಿಕ್ಕಪುಟ್ಟ ಸಮಸ್ಯೆಗಳೆಲ್ಲ ಕಾಡುಪ್ರಾಣಿಗಳನ್ನು ಕಾಡುವುದೇ ಇಲ್ಲಘಿ. ಕಾಡುಪ್ರಾಣಿಗಳು ಏಕಾಏಕಿ ಬಹಳಷ್ಟು ಸಂಖ್ಯೆಯಲ್ಲಿ ಅಸುನೀಗುತ್ತಿವೆ ಎಂದರೆ ಅದಕ್ಕೆ ಬಲವಾದ ಕಾರಣಗಳೇ ಇರುತ್ತವೆ. ಮಾರಕ ಖಾಯಿಲೆ, ಸೋಂಕು, ವಿಷ ಪ್ರಾಶನ ಅಥವಾ ಇನ್ನಿತರ ಯಾವುದೋ ಕಾರಣಗಳಿಂದ ಕಾಡುಕೋಣಗಳು ಸಾಯುತ್ತಿರಬಹುದು ಎನ್ನುವುದು ಪರಿಸರ ಪ್ರೇಮಿಗಳ ಮನಸ್ಸಿನಲ್ಲಿ ಮೂಡಿರುವ ಶಂಕೆ.
ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಮನುಷ್ಯರ ಅತಿಕ್ರಮ ಪ್ರವೇಶಕ್ಕೆ ಅವಕಾಶವಿಲ್ಲಘಿ. ಇಂತಹ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿರುವ ಕಾಡುಕೋಣಗಳು ಮಾತ್ರ ಮೃತಪಟ್ಟಿವೆ. ಸಂರಕ್ಷಿತ ಅರಣ್ಯ ಪ್ರದೇಶಗಳ ವ್ಯಾಪ್ತಿಯ ಹೊರಗಿನ, ಅಂದರೆ ಮನುಷ್ಯರ ಓಡಾಟ ಹೆಚ್ಚಿರುವ ಕಾಡುಗಳಲ್ಲಿನ ಕಾಡೆಮ್ಮೆಘಿ, ಕಾಡುಕೋಣಗಳು ಮೃತಪಟ್ಟಿಲ್ಲಘಿ. ಹೀಗಾಗಿ ಜೋಯಿಡಾ ಕಾಡಿನಲ್ಲಿ ಕಾಡುಕೋಣಗಳ ಸಾವಿಗೆ ಬೇರೇನೋ ಕಾರಣಗಳಿವೆ ಎನ್ನುವ ಸಂಶಯ ಬಲವಾಗಿದೆ.



ಮಾಧ್ಯಮಗಳಿಗೆ ನಿರ್ಬಂಧ
ಕಾಳಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಾಡುಕೋಣಗಳು ಸರಣಿ ರೂಪದಲ್ಲಿ ಮೃತಪಟ್ಟಿರುವ ವಿಷಯಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡ ತಕ್ಷಣ ಅರಣ್ಯ ಇಲಾಖೆ ಈ ಪ್ರದೇಶಗಳಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಹೇರಿದೆ. ಯಾವುದೇ ಅಧಿಕಾರಿಗಳಿಗೂ ಕಾಡುಕೋಣಗಳ ಸಾವಿನ ಕುರಿತು ಮಾಹಿತಿ ಹಂಚಿಕೊಳ್ಳಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಎನ್ನುವ ಮಾಹಿತಿಗಳು ಅಧಿಕಾರಿ ವಲಯದಿಂದ ಕೇಳಿ ಬಂದಿದೆ. ಮಾಧ್ಯಮಗಳಿಗೆ ನಿರ್ಬಂಧ ಹೇರಿರುವ ಅರಣ್ಯ ಇಲಾಖೆಯ ನಡೆ ಇನ್ನಷ್ಟು ಅನುಮಾನಕ್ಕೂ ಕಾರಣವಾಗಿದೆ.


------------------
ಕಾಡುಪ್ರಾಣಿಗಳಲ್ಲಿಯೇ ಅತ್ಯಂತ ಹೆಚ್ಚಿನ ರೋಗನಿರೋಧಕ ಶಕ್ತಿಯನ್ನು ಹೊಂದಿರುವ ಪ್ರಾಣಿಗಳೆಂದರೆ ಅದು ಕಾಡುಕೋಣಗಳು. ಆದರೆ ಕಾಳಿ ಸಂರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಕಾಡುಕೋಣಗಳು ಮೃತಪಟ್ಟಿರುವುದನ್ನು ಗಮನಿಸಿದರೆ ಇದು ಸಹಜವಾದುದಲ್ಲಘಿ. ಬೇರೇ ಏನೋ ಕಾರಣ ಇದೆ ಎನ್ನಿಸುತ್ತದೆ.
ಸಂಜಯ ಭಟ್ಟ ಬೆಣ್ಣೆ
ಪರಿಸರಪ್ರೇಮಿ

No comments:

Post a Comment