Monday, June 10, 2019

ಬಲಿದಾನ ಚಿಹ್ನೆ : ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದಕ್ಕೆ ಸುಣ್ಣ


ಧೋನಿ ಧರಿಸಿದ್ದ ಬಲಿದಾನ ಬ್ಯಾಡ್ಜ್‌ಗೆ ಸಂಬಂಧಿಸಿದಂತೆ ಐಸಿಸಿ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ನೀತಿಯನ್ನು ಅನುಸರಿಸುತ್ತಿದೆ ಎನ್ನುವ ಅಭಿಪ್ರಾಯ ಕ್ರಿಕೆಟ್ ಪ್ರೇಮಿಗಳದ್ದು. ಐಸಿಸಿಯ ನಡೆಗೆ ವ್ಯಾಪಕ ವಿರೋಧಗಳು ವ್ಯಕ್ತವಾಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ಸಂದರ್ಭದಲ್ಲಿ ಪ್ಯಾರಾಚೂಟ್ ರೆಜಿಮೆಂಟ್‌ನ ಚಿಹ್ನೆಯನ್ನು ಒಳಗೊಂಡ ಕೈಗವಸನ್ನು ಮಹೇಂದ್ರ ಸಿಂಗ್ ಧೋನಿ ಧರಿಸಿದ್ದರು. ಆದರೆ ಇದಕ್ಕೆ ಅಸಮಧಾನ ವ್ಯಕ್ತಪಡಿಸಿರುವ ಐಸಿಸಿ ಈ ಚಿಹ್ನೆಯನ್ನು ತೆಗೆದುಹಾಕುವಂತೆ ಬಿಸಿಸಿಐಗೆ ಮನವಿ ಮಾಡಿಕೊಂಡಿತ್ತು.
ಐಸಿಸಿಯ ಈ ನಿಲುವು ವ್ಯಾಪಕವಾಗಿ ಖಂಡನೆಗೆ ಒಳಗಾಗಿದೆ. ಕ್ರಿಕೆಟ್ ಅಭಿಮಾನಿಗಳು ಐಸಿಸಿಯ ನಡೆಯನ್ನು ವಿರೋಧಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಂತೂ ಪ್ರತ್ಯೇಕ ಹ್ಯಾಷ್‌ಟ್ಯಾಗ್ ಮೂಲಕ ಐಸಿಸಿಯ ವಿರುದ್ಧ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ. ಅಲ್ಲದೇ ಧೋನಿಯನ್ನು ಬೆಂಬಲಿಸುತ್ತಿರುವ ಅಭಿಮಾನಿಗಳು ಚಿಹ್ನೆಯನ್ನು ತೆಗೆಯದಂತೆ ಆಗ್ರಹಿಸಿದ್ದಾರೆ.

ಸೆಲ್ಯೂಟ್, ನಮಾಜ್‌ಗೆ ಇಲ್ಲ ವಿರೋಧ:
ಧೋನಿ ಧರಿಸಿದ್ದ ಕೈಗವಸಿನ ಮೇಲಿನ ಚಿಹ್ನೆಗೆ ಸಂಬಂಧಿಸಿದಂತೆ ಐಸಿಸಿ ಕಾನೂನು ಹಾಗೂ ನಿಯಮಗಳ ನೆಪ ಒಡ್ಡಿದೆ. ಆದರೆ ಮೈದಾನದಲ್ಲಿ ಬೇರೆ ಬೇರೆ ದೇಶಗಳ ಆಟಗಾರರು ಬೇರೆ ಬೇರೆ ನಡೆಯನ್ನು ಪ್ರದರ್ಶಿಸಿದಾಗ ಐಸಿಸಿ ವೌನ ವಹಿಸಿದ್ದು, ಧೋನಿ ವಿಷಯದಲ್ಲಿ ಮಾತ್ರ ಅನಾವಶ್ಯಕವಾಗಿ ಆಸಕ್ತಿ ತೋರುತ್ತಿದೆ ಎನ್ನುವ ಆರೋಪ ಅಭಿಮಾನಿಗಳದ್ದು.
ವೆಸ್ಟ್ ಇಂಡೀಸ್ ಆಟಗಾರನೋರ್ವ ಕ್ಯಾಚ್ ಹಿಡಿದ ನಂತರ ಸೆಲ್ಯೂಟ್ ಮಾಡಿದ ಸಂದರ್ಭದಲ್ಲಿ ಐಸಿಸಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಪಾಕಿಸ್ಥಾನದ ಆಟಗಾರರು ಮೈದಾನದಲ್ಲಿಯೇ ನಮಾಜ್ ಮಾಡಿದ ಸಂದರ್ಭದಲ್ಲಿಯೂ ಕೂಡ ಐಸಿಸಿ ಯಾವುದೇ ನಿಯಮಗಳ ನೆಪವನ್ನೂ ಹೇಳಿರಲಿಲ್ಲ. ಅಷ್ಟೇ ಏಕೆ ಹಿಂದೆ ಜಿಂಬಾಬ್ವೆಯ ಆಟಗಾರ ಹೆನ್ರಿ ಓಲಾಂಗಾ, ತನ್ನ ದೇಶದ ಸರ್ವಾಧಿಕಾರಿ ರಾಬರ್ಟ್ ಮುಗಾಬೆ ವಿರುದ್ಧ ಮೈದಾನದಲ್ಲಿಯೇ ಪ್ರತಿಭಟನೆಯನ್ನು ನಡೆಸಿದಾಗಲೂ ಕೂಡ ಐಸಿಸಿ ವೌನ ವಹಿಸಿತ್ತು. ಹಿಂದೆ ಭಾರತದ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರ ಇಯಾನ್ ಬೆಲ್, ಯುದ್ಧದಲ್ಲಿ ಮಡಿದ ಸೈನಿಕರ ಪರವಾಗಿ ಕೆಂಪು ಬಣ್ಣದ ಸ್ಟಿಕ್ಕರ್ ಧರಿಸಿ ಆಡಿದ್ದರು. ಅಷ್ಟೇ ಏಕೆ, ಇಂಗ್ಲೆಂಡ್ ತಂಡದ ಜೆರ್ಸಿಯ ಮೇಲೆ ಅದರ ಸೇನೆಯ ಚಿಹ್ನೆಗಳು ರಾರಾಜಿಸುತ್ತಿವೆ. ಆದರೆ ಅದ್ಯಾವುದೂ ಐಸಿಸಿಗೆ ಕಾಣಿಸುತ್ತಿಲ್ಲ. ಆದರೆ ಈಗ ಧೋನಿ ಕೈಗವಸಿನ ವಿಚಾರದಲ್ಲಿ ಮಾತ್ರ ಅನಗತ್ಯ ಆರೋಪಗಳನ್ನು ಮಾಡುತ್ತಿದೆ. ಈ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಪಾತ್ರವಾಗಿದೆ.
ಹಿಂದೆ ಐಸಿಸಿ ಹಲವು ವಿಷಯಗಳಲ್ಲಿಯೂ ಒಂದು ಕಣ್ಣಿಗೆ ಬೆಣ್ಣೆಘಿ, ಇನ್ನೊಂದು ಕಣ್ಣಿಗೆ ಸುಣ್ಣ ನೀತಿಯನ್ನು ಅನುಸರಿಸಿತ್ತುಘಿ. ಆಸ್ಟ್ರೇಲಿಯಾ, ಇಂಗ್ಲೆಂಡ್ ಮುಂತಾದ ದೇಶಗಳ ಆಟಗಾರರು ಸ್ಲೆಡ್ಜಿಂಗ್ ಮಾಡಿದ ಸಂದರ್ಭದಲ್ಲಿ ಅದರ ಕುರಿತು ಮೃದು ಧೋರಣೆ ತಾಳಿದ್ದ ಐಸಿಸಿ ಭಾರತೀಯ ಆಟಗಾರರು ಸ್ಲೆಡ್ಜಿಂಗ್ ಮೂಲಕ ಪ್ರತ್ಯುತ್ತರ ನೀಡಿದ ಸಂದರ್ಭದಲ್ಲಿ ಐಸಿಸಿ ನೀತಿ ಸಂಹಿತೆ ಉಲ್ಲಂಘನೆ ಹೆಸರಿನಲ್ಲಿ ಆಟಗಾರರಿಗೆ ನಿಷೇಧವನ್ನು ಹೇರಿದ ಸಂದರ್ಭಗಳೂ ಇದ್ದವು.
ಅನಾವಶ್ಯಕ ಕ್ಯಾತೆ
ಈ ವಿಶ್ವಕಪ್‌ನಲ್ಲಿ ಐಸಿಸಿ ಗಮನ ಹರಿಸಲು ಹಲವು ವಿಷಯಗಳಿವೆ. ಐಸಿಸಿ ನೇಮಿಸಿರುವ ಅಂಪಾಯರ್‌ಗಳು ತಪ್ಪುಗಳ ಮೇಲೆ ತಪ್ಪುಗಳನ್ನು ಂಆಡುವ ಮೂಲಕ ಪಂದ್ಯಗಳ ಲಿತಾಂಶ ಏರು ಪೇರಾಗಲು ಕಾರಣರಾಗುತ್ತಿದ್ದಾರೆ. ವಿಂಡೀಸ್ ಹಾಗೂ ಆಸಿಸ್ ಪಂದ್ಯದ ಸಂದರ್ಭದಲ್ಲಿ ಅಂಪಾಯರ್ 7-8 ತಪ್ಪು ತೀರ್ಪು ನೀಡಿದ ಸಂದರ್ಭದಲ್ಲಿಯೂ ಕೂಡ ಅದರ ಬಗ್ಗೆ ಐಸಿಸಿ ವೌನ ತಾಳಿದೆ. ಹೀಗಿರುವಾಗ ಧೋನಿ ವಿಷಯದ ಬಗ್ಗೆ ಅನಾವಶ್ಯಕ ಆಸಕ್ತಿ ತಳೆದಿರುವುದು ಮಾತ್ರ ವಿಚಿತ್ರ ಎನ್ನಿಸಿದೆ.
ವಿಶ್ವಕಪ್ ನಡೆಯುತ್ತಿದೆ. ಈ ಸಂದರ್ಭದಲ್ಲಿ ಐಸಿಸಿ ಕೈಗೊಳ್ಳಬೇಕಾದ ಅನೇಕ ಕಾರ್ಯಗಳಿವೆ. ವಿಶ್ವಕಪ್ ಸಮರ್ಪಕವಾಗಿ ನಡೆಯುವ ನಿಟ್ಟಿನಲ್ಲಿ ಐಸಿಸಿ ಕ್ರಮ ಕೈಗೊಳ್ಳಬೇಕಿದೆ. ತಪ್ಪು ನಿರ್ಣಯ ಕೊಡುತ್ತಿರುವ ಅಂಪಾಯರ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. ಅದನ್ನು ಬಿಟ್ಟು ಅನಾವಶ್ಯಕ ವಿವಾದ ಹುಟ್ಟು ಹಾಕುವುದು ಸರಿಯಲ್ಲ ಎನ್ನುವುದು ಕ್ರಿಕೆಟ್ ಅಭಿಮಾನಿಗಳ ಆಶಯ.

-----
ಪಾಕಿಸ್ಥಾನದ ಪ್ರಭಾವವೇ?
ಧೋನಿ ಕೈಗವಸಿನ ಚಿಹ್ನೆಯ ವಿಷಯದಲ್ಲಿ ಐಸಿಸಿ ಪಾಕಿಸ್ಥಾನದ ಪ್ರಭಾವಕ್ಕೆ ಮಣಿದಿದೆಯೇ ಎನ್ನುವ ಪ್ರಶ್ನೆಗಳು ಮೂಡಿದೆ. ಧೋನಿ ಸೇನಾಮುದ್ರೆ ಬಳಸಿರುವುದು ಪುಲ್ವಾಮಾ ದಾಳಿಗೆ ವಿರೋಧ ವ್ಯಕ್ತಪಡಿಸುವ ಸಲುವಾಗಿ ಎಂದು ಪಾಕಿಸ್ಥಾನ ಭಾವಿಸಿದೆ. ಧೋನಿ ಸೇನಾಮುದ್ರೆ ಬಳಸಿರುವುದರಿಂದ ಎಲ್ಲರಿಗಿಂತ ಹೆಚ್ಚು ಮುಜುಗರಕ್ಕೀಡಾಗಿದ್ದು ಪಾಕಿಸ್ಥಾನ ಮಾತ್ರಘಿ. ಹೀಗಾಗಿ ಪಾಕಿಸ್ಥಾನವು ಐಸಿಸಿ ಮೇಲೆ ಈ ಮುದ್ರೆ ತೆಗೆಯುವಂತೆ ಹೇಳಲು ಪ್ರಭಾವ ಬೀರಿತು ಎನ್ನುವುದು ಅಭಿಮಾನಿಗಳ ವಾದವಾಗಿದೆ.







No comments:

Post a Comment