Wednesday, April 1, 2015

ಜಲಪಾತದ ಒಡಲಿನಲ್ಲಿ ನಡೆದ ಕವಿಗೋಷ್ಟಿ

(ಶಿರ್ಲೆ ಜಲಪಾತ)
ಒಂದೆಡೆ ಜಲಪಾತದ ಜುಳು ಜುಳು ನಿನಾದ ಕಿವಿಗಪ್ಪಳಿಸುತ್ತಿದ್ದರೆ ಮತ್ತೊಂದು ಕಡೆ ಕವಿಗಳ ಪ್ರೇಮ ಕವಿತೆಗಳ ವಾಚನ ಕಿವಿಗೆ ತಂಪನ್ನು ನೀಡುತ್ತಿತ್ತು. ಇದು ನಡೆದಿದ್ದು ಯಲ್ಲಾಪುರ ತಾಲೂಕಿನ ಶಿರಲೆ ಜಲಪಾತದಲ್ಲಿ ನಡೆದ ಕವಿತೆ ಬಳಗದ ಕವಿಗೋಷ್ಟಿಯಲ್ಲಿ.
ವಾಟ್ಸಾಪ್ ಮೂಲಕ ಪರಿಚಿತರಾದ ಕವಿಗಳು ತಮ್ಮ ತಮ್ಮಲ್ಲಿ ಸಮಾನಾಸಕ್ತರನ್ನು ಜೊತೆ ಸೇರಿಸಿಕೊಂಡು ಕವಿತೆ ಬಳಗವನ್ನು ಮಾಡಿಕೊಂಡು ರಚನಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ. ರಚನಾತ್ಮಕ ಕಾರ್ಯಕ್ರಮಗಳಿಗೆ ಮುನ್ನುಡಿ ಎನ್ನುವಂತೆ ಜಲಪಾತದಲ್ಲಿ ಕವಿಗೋಷ್ಟಿ ನಡೆಯಿತು. ಪ್ರೇಮಕವಿ ಎಂದೇ ಖ್ಯಾತಿಯನ್ನು ಗಳಿಸಿಕೊಂಡಿರುವ ಕೆ. ಎಸ್. ನರಸಿಂಹ ಸ್ವಾಮಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಕವಿಗೋಷ್ಟಿಯಲ್ಲಿ ಪಾಲ್ಗೊಂಡಿದ್ದ ಕವಿಗಳು ತಾವು ಬರೆದ ಪ್ರೇಮ ಕವಿತೆಗಳನ್ನು ವಾಚನ ಮಾಡಿದರು.
ಯಾವುದೋ ವೇದಿಕೆಯಲ್ಲಿ, ಸಬೆ ಸಮಾರಂಭಗಳಲ್ಲಿ, ಉತ್ಸವಗಳಲ್ಲಿ ಕವಿಗೋಷ್ಟಿಗಳು ನಡೆಯುತ್ತವೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಕವಿಗೋಷ್ಟಿಗಳು ನಡೆಯುವುದು ಸಾಮಾನ್ಯಲಾದರೆ ಪ್ರಕೃತಿಯ ಮಡಿನಿಲ್ಲಿ, ನಿಸರ್ಗದ ನಟ್ಟ ನಡುವೆ ಇರುವ ಜಲಪಾತದ ಎದುರು ಕವಿಗೋಷ್ಟಿ ನಡೆಯುವುದು ಹೊಸ ಕಲ್ಪನೆ. ಇಂತಹ ಹೊಸದೊಂದು ಕಾರ್ಯಕ್ರಮಕ್ಕೆ ಕವಿತೆ ಬಳಗ ನಾಂದಿ ಹಾಕಿಕೊಟ್ಟಂತಾಗಿದೆ. ಹೊಸ ಹೊಸ ಕವಿತೆಗಳಿಗೆ ವಿಶೇಷ ಪ್ರಾಧ್ಯಾನ್ಯತೆ ಕೊಟ್ಟು ನಡೆದ ಕವಿಗೋಷ್ಟಿ ಯಶಸ್ವಿಯಾಯಿತು. ಜಲಪಾತದಲ್ಲಿ ನಡೆದ ಕವಿಗೋಷ್ಟಿ ಹೊಸತನವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಯಿತು. ಕವಿಗೋಷ್ಟಿಯಲ್ಲಿ ಶಿರಸಿ, ಸಿದ್ದಾಪುರ, ಯಲ್ಲಾಪುರ, ಕುಮಟಾ, ಮುಂಡಗೋಡ, ಬೆಂಗಳೂರು, ಬೆಳಗಾವಿ ಈ ಮುಂತಾದ ಪ್ರದೇಶಗಳಿಂದ ಆಗಮಿಸಿದ್ದ ಕವಿಗಳು, ಕವಿತೆಗಳು ಆಗಮಿಸಿದ್ದವು.
(ಬೆಣ್ಣೆ ಭಟ್ಟರಿಂದ ಕವಿತಾ ವಾಚನ)
ಕವಿತೆ ಬಳಗ ಹಮ್ಮಿಕೊಂಡಿದ್ದ ಕವಿಗೋಷ್ಟಿಯನ್ನು ಕೃಷಿ ಸಂಶೋಧಕ ಡಾ. ರವಿ ಭಟ್ಟ ಬರಗದ್ದೆ ಅವರು ಪ್ರೇಮಕವಿ ಕೆ. ಎಸ್. ನರಸಿಂಹಸ್ವಾಮಿ ಅವರ ಕವಿತೆಯನ್ನು ಓದುವ ಮೂಲಕ ಉದ್ಘಾಟಿಸಿದರು. ಸಾಮಾಜಿಕ ಜಾಲತಾಣದಲ್ಲಿ ಹಟ್ಟಿಕೊಂಡ ಕವಿತೆ ಬಳಗ, ತನ್ನ ಆರಂಭಿಕ ದಿನಗಳಿಂದಲೂ ವಿಶಿಷ್ಟತೆಗಳಿಂದ ಹೆಸರನ್ನು ಪಡೆದುಕೊಂಡಿದೆ. ಇದೀಗ ಜಲಪಾತದಲ್ಲಿ ಕವಿಗೋಷ್ಟಿಯನ್ನು ಹಮ್ಮಿಕೊಳ್ಳುವ ಮತ್ತೊಂದು ವಿಶಿಷ್ಟತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಕವಿ ಟಿ. ಆರ್. ಪ್ರಕಾಶ ಭಾಗ್ವತ ಅವರು ಮಾತನಾಡಿ ಹೊಸ ಕವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕವಿತೆ ಬರೆಯುವುದಕ್ಕೆ ಮುಂದಾಗುತ್ತಿದ್ದಾರೆ. ಇದು ಸಂತಸದ ಸಂಗತಿ. ಹಿರಿಯ ಕವಿಗಳಲ್ಲಿ ಅದೆಷ್ಟೋ ಭಿನ್ನಾಭಿಪ್ರಾಯಗಳನ್ನು ನಾವು ಕಂಡಿದ್ದೇವೆ. ಕನ್ನಡ ಸಾಹಿತ್ಯದ ದಿಗ್ಗಜ ಕವಿಗಳೆಂದೇ ಗುರುತಿಸಿಕೊಂಡವರೂ ಕೂಡ ಪರಸ್ಪರ ಕಿತ್ತಾಡಿಕೊಂಡಿದ್ದನ್ನು ಕಂಡಿದ್ದೇವೆ. ಆದರೆ ಇಂದಿನ ತಲೆಮಾರಿನ ಕವಿಗಳು, ಯುವ ಸಾಹಿತಿಗಳು ಪರಸ್ಪರ ಕಿತ್ತಾಡಿಕೊಳ್ಳುತ್ತಿಲ್ಲ. ಒಬ್ಬರಿಗೆ ಇನ್ನೊಬ್ಬರು ಬೆಂಬಲವಾಗಿ ನಿಲ್ಲುತ್ತಿದ್ದಾರೆ. ಪರಸ್ಪರ ಸಹಕಾರವನ್ನು ಕೊಡುತ್ತಿದ್ದಾರೆ. ಅದೇ ರೀತಿ ಯುವ ಕವಿಗಳು ಭಾವಗೀತೆಗಳನ್ನು ಬರೆಯಲು ಮುಂದಾಗಬೇಕಾದ ಅಗತ್ಯವಿದೆ. ಭಾವಗೀತೆಗಳು ಜನಮಾನಸವನ್ನು ತಟ್ಟುತ್ತವೆ. ಬಾವಗೀತೆಗಳ ಮೂಲಕ ಕವಿತೆ ಯಶಸ್ವಿಯಾದಾಗ ಕಾವ್ಯ ಸಾರ್ಥಕ ಎನ್ನಿಸಿಕೊಳ್ಳುತ್ತವೆ. ಹಳೆಯ ತಲೆಮಾರಿನ ಭಾವಗೀತೆಗಳನ್ನು ಬರೆಯುವ ಕವಿಗಳ ನಂತರ ಉಂಟಾಗಿರುವ ಶೂನ್ಯವನ್ನು ಹೊಸ ಕವಿಗಳು ತುಂಬಿಕೊಡಬೇಕಾದ ಅಗತ್ಯವಿದೆ. ನಾವು ಇಂದು ನಿಸರ್ಗ ಹಾಗೂ ಸಾಮಾಜಿಕ ಸಮಾನತೆಗಳನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಈ ಕುರಿತು ಕಾವ್ಯ ಪ್ರಪಂಚ ಹೆಚ್ಚು ಸಂವೇದನಾಶೀಲವಾಗುವ ಅಗತ್ಯವಿದೆ ಎಂದು ಹೇಳಿದರು.
(ಸಂಚಾಲಕ ನಾಗರಾಜ ವೈದ್ಯರ ಮಾತು)
ಪ್ರಾಸ್ತಾವಿಕವಾಗಿ ಮಾತನಾಡಿದ ಕವಿತೆ ಬಳಗದ ಸಂಚಾಲಕ ನಾಗರಾಜ ವೈದ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಕವಿತೆ ಬಳಗದಲ್ಲಿದ್ದ ಕವಿಗಳ್ನು ಭೌತಿಕವಾಗಿ ಒಂದೆಡೆ ಸೇರಿಸುವುದು ಈ ಕವಿಗೋಷ್ಟಿಯ ಹಿಂದಿರುವ ಪ್ರಮುಖ ಕಾರಣ. ಸಾಮಾಜಿಕ ಜಾಲತಾಣಗಳಲ್ಲಿ ಕವಿತೆಗಳ ಮೂಲಕ ಸಿಗುತ್ತಾರೆ. ಆದರೂ ದೂರವಿದ್ದುಬಿಡುತ್ತಾರೆ. ಅಂತವರನ್ನು ಒಂದೆಡೆ ಸೇರಿಸಿ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳವುದು ಪ್ರಮುಖ ಉದ್ದೇಶ. ಈ ಉದ್ದೇಶ ಇಂದು ಸಫಲವಾಗಿದೆ ಎಂದರು.
ಉಪನ್ಯಾಸಕ, ಬರಹಗಾರ ರಾಜು ಹೆಗಡೆ ಅವರು ಸಾಂದರ್ಭಿಕವಾಗಿ ಮಾತನಾಡಿ ಕವಿತೆಯನ್ನು ವಾಚನ ಮಾಡಿದರು. ನಾಗರಾಜ ವೈದ್ಯ -ಪ್ರೇಮದ ಹತ್ತು ಹನಿಗಳು, ಸಂಜಯ ಭಟ್ಟ ಬೆಣ್ಣೆ - ಮಧುಕುಟಿಗ, ಸಿಂಧುಚಂದ್ರ - ಪ್ರೇಮವೆಂದರೆ ಇದೇನಾ, ಶರೀಪ ಹಾಸರ್ಿಕಟ್ಟಾ - ಬಾ ಮುತ್ತು ಚೆಂಡೇ, ಗಣಪತಿ ಬಾಳೆಗದ್ದೆ-ಅವಳು, ಎನ್. ವಿ. ಮಂಜುನಾಥ-ಅವನ ನೆನಪಿಗಾಗಿ, ಮಾನಸಾ ಹೆಗಡೆ-ಪುಟ್ಟ ಬೊಗಸೆಯ ಪದಗಳು, ವಿನಯ ದಂಟಕಲ್-ಒಮ್ಮೆ ತಿರುಗಿ ನೋಡು, ಚೈತ್ರಿಕಾ ಹೆಗಡೆ-ಮತ್ತೆ ಮಳೆ ಹೊಯ್ಯುತಿದೆ, ರಾಜು ಹೆಗಡೆ-ಒಂದು ಕವನ ವಾಚನ, ಪ್ರಕಾಶ ಭಾಗ್ವತ-ಬಾರದಿರು ಹಾಲಿರುಳೆ ಎನ್ನುವ ಕವಿತೆಗಳನ್ನು ವಾಚನ ಮಾಡಿದರು.
ಕವಿಗೋಷ್ಟಿಯಲ್ಲಿ ಕೇವಲ ಕವಿಗಳು ಮಾತ್ರ ಪಾಲ್ಗೊಳ್ಳದೇ `ಶಿರ್ಲೆ`ಯ ಸ್ಥಳೀಕರು, ಅನೇಕ ಪರ ಊರಿನ ಕಾವ್ಯಾಸಕ್ತರು ಪಾಲ್ಗೊಂಡಿದ್ದರು. ಯುವ ಕವಿಗಳ ಪ್ರೇಮ ಕವಿತೆಗಳಿಗೆ ಮೆಚ್ಚುಗೆ ಸೂಸಿ, ತಲೆದೂಗಿದರು. ಬರಹಗಾರ ಸಂಜಯ ಭಟ್ಟ ಬೆಣ್ಣೆ ಅವರು ಕಾರ್ಯಕ್ರಮ ನಡೆಸಿಕೊಟ್ಟರು.


***
(ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾಗಿದೆ)

Wednesday, March 25, 2015

ಅಘನಾಶಿನಿ ಕಣಿವೆಯಲ್ಲಿ-15


             ಕಾನನದ ಮಡಿಲಿನ ತುಂಬಾ ಓಡಾಡಿ ಮನ ಹಿಗ್ಗಾಗಿಸಿಕೊಂಡ ಆ ಸೈನ್ಯ ಮತ್ತೊಮ್ಮೆ ಅಘನಾಶಿನಿ ತೀರದತ್ತ ಹೊರಟರು. `ಅಯ್ಯ.. ಇವರ್ಯಾಕೆ ನಿಮಿಷಕ್ಕೊನ್ನಮ್ನಿ ಆಡ್ತಾವ್ರೆ..' ಅಂದುಕೊಂಡ ದ್ಯಾವ. ಮತ್ತೆ ತೀರವನ್ನು ತಲುಪಿದ ನಂತರ ದ್ಯಾವ ಪ್ರತಿಯೊಬ್ಬರಿಗೂ ತೆಪ್ಪವನ್ನು ಮಾಡುವುದು ಹೇಗೆ ಎನ್ನುವುದನ್ನು ವಿವರಿಸಿದ. ಬಿದಿರನ್ನು ಅಳತೆಯ ಪ್ರಕಾರ ಕಡಿದು, ಜೋಡಿಸಿ, ಬೈನೆ ಹಗ್ಗದಿಂದ ಕಟ್ಟಿ ಫಟಾ ಫಟ್ ತೆಪ್ಪ ತಯಾರಿಸಿದ್ ದ್ಯಾವ. ದ್ಯಾವನ ಕೈಚಳಕವನ್ನು ಪ್ರತಿಯೊಬ್ಬರೂ ವಿಸ್ಮಯದಿಂದ ಕಣ್ತುಂಬಿಕೊಂಡರು.
               `ದ್ಯಾವಾ.. ಮರಕಡೀಲಿಕ್ಕೆ ಅಂತ ದಡೆ ಮಾಡ್ತಾರಂತಲ್ಲ.. ಅದನ್ನು ತೋರ್ಸು.. ಹೆಂಗಿರ್ತದೆ ಅಂತ ನೋಡಬೇಕು..' ಎಂದ ವಿಕ್ರಂ ದ್ಯಾವನ ಬಳಿ.
             `ಹ್ವಾಯ್.. ನಿಮ್ದು ಯಾವ್ ಊರು ಹೇಳಿ .. ' ಎಂದ ದ್ಯಾವ.
            `ಯಲ್ಲಾಪುರ ಮಾರಾಯಾ.. ಯಾಕ್ ಕೇಳ್ತಾ ಇದ್ದೀಯೋ..' ಎಂದ ವಿಕ್ರಂ.
             `ಅಲ್ಲಾ ಯಲ್ಲಾಪುರದವರು ಅಂತೀರಾ ನೀವ್ ದಡೆ ನೋಡಿಲ್ಲಾ ಅಂದ್ರೆ ನಗು ಬರ್ತೈತಿ. ನೀವ್ ಮಜಾ ಇದ್ದೀರಿ ಬಿಡಿ..' ಎಂದ ದ್ಯಾವ. `ಇಲ್ಲಾ ಮಾರಾಯಾ.. ಚಿಕ್ಕಂದಿನಿಂದ ಪೇಟೆಯ ಕಡೆಯಲ್ಲಿ ಬೆಳೆದೆ ನೋಡು.. ಅದಕ್ಕೆ ದಡೆಯ ಬಗ್ಗೆ ಗೊತ್ತಿಲ್ಲ. ಮೊನ್ನೆ ಯಾರೋ ಹೇಳ್ತಾ ಇದ್ರು. ಅದಕ್ಕೆ ನೋಡುವ ಆಸೆಯಾಗ್ತಾ ಇದೆ.. ತೋರ್ಸೋ ಮಾರಾಯಾ..' ಎಂದ ವಿಕ್ರಂ
          ನಂತರ ಗಾಭರಿ ಪಟ್ಟುಕೊಂಡ ದ್ಯಾವ `ಅಲ್ಲಾ..  ಹೊಳೆಯಾಗೆ ಮೀನ್ ಹಿಡಯೋದ್ ತೋರ್ಸಿ ಅಂದ್ರೆ ತೂರುಸ್ತೀನಿ. ಜೇನು ಕೊಯ್ಯೋದು ತೋರ್ಸು ಅಂದ್ರೂ ಸೈ. ನಿಮಗೆಂತಕ್ಕೆ ಹುಚ್ಚು? ಮರ ಕೊಯ್ಯೋ ದಡೆ ನೋಡ್ತೀನಿ ಅಂತೀರಲ್ರೋ.. ಯಾಕ್ರೋ..ದಡೆ ತೋರ್ಸೋದು ಅಂದ್ರೆ ಸುಲಭದಾಗೆ ಐತಿ ಅಂದ್ಕೊಂಡ್ರಾ? ಸುಲಭ ಅಲ್ಲ ನೋಡಿ ಅದು.. ಭಯಂಕರ ಕಷ್ಟ ಉಂಟು.. ನೀವ್ ಹೇಳಿದ್ ಆಗೋದಿಲ್ಲೇಳಿ' ಎಂದು ಕೇಳಿದ್ದ ಆತ.
           `ದ್ಯಾವಾ.. ಪ್ಲೀಸ್ ಕಣೋ.. ತೋರ್ಸು.. ನಾನೂ ನೋಡಿಲ್ಲ..' ಎಂದು ಹೇಳಿದಳು ವಿಜೇತಾ.
           `ನಿಮ್ ಗೆ ಗೊತ್ತಾಗೂದಿಲ್ಲ ನೋಡಿ.. ದಡೆ ನೋಡಾಕ್ ಹೋಗೋದು ಅಂದ್ರೆ ಕಡ್ ಜೇನ್ ಹಲ್ಲೆಗೆ ಕೈ ತಡವಿಕೊಂಡ ಹಂಗೆ. ಭಾರಿ ಸಾಹಸ ಮಾಡಬೇಕು.. ನೀವೋ ವಟಾ ವಟಾ ಅಂತ ಮಾತಾಡ್ತಾ ಇರ್ತೀರಿ.. ಸುಮ್ಮನಿದ್ದರೆ ಏನಾದರೂ ಮಾಡಬೌದಿತ್ತು. ಇನ್ನು ಅಲ್ಲಿ ಯಾರ್ಯಾರು ಮರ ಕಡೀತಾ ಇರ್ತಾರೋ.. ಕೇರಳದ ಮಲಬಾರಿಗಳು, ಸಾಬ್ರು, ನಮ್ಮೂರ್ನವ್ವೇ ಒಂದಷ್ಟ್ ಮರಗಳ್ಳರು.. ಹಿಂಗೆ ಬಹಳಷ್ಟ್ ಮಂದಿ ಇರ್ತಾರೆ ನೋಡಿ. ನೆತ್ತಿ ಸುಡೋ ಬಿಸಿಲ್ನಾಗೂ ಟೈಟ್ ಆಗಿ ಮರ ಕಡಿತಾ ಇರ್ತಾರೆ. ಹೆಂಗೆಂಗೋ ಇರ್ತಾರೆ ಮಾರಾಯ್ರಾ.. ಅದನ್ನ ಹೇಳೋದ್ ಕಷ್ಟ. ನಾವ್ ನೋಡಾಕ್ ಹೋಗೋದು, ನಮ್ ಮ್ಯಾಗೆ ಗಲಾಟೆಗೆ ಬರೋದು.. ಅದು ಗಲಾಟೆಗೆ ನಿಲ್ಲದೇ ಮತ್ತಿನ್ನೇನೋ ಆಗೋದು.. ಇದೆಲ್ಲಾ ಬ್ಯಾಡ್ರಾ.. ಅವ್ರು ಕೊಲ್ಲೋದಕ್ಕೂ ಹೇಸಾದಿಲ್ಲ ನೋಡಿ.. ನಿಮ್ಮನ್ನ ಕರೆದುಕೊಂಡ್ ಹೋಗಿದ್ದು ನಾನು ಅಂತ ಗೊತ್ತಾದ್ರೆ ಸಾಕು.. ನನ್ನ ಹೆಣಾ ಉರುಳ್ತಾವೆ.. ಗೊತ್ತೈತಾ.. ಸುಮ್ಕಿರಿ..' ಎಂದು ಹೇಳಿದ ದ್ಯಾವ. ದ್ಯಾವನ ಮಾತಿನಿಂದ ಆ ಊರಿನ ಸುತ್ತಮುತ್ತಲ ನಡೆಯುತ್ತಿದ್ದ ಕರಾಳ ದಂಧೆಗಳ ಒಂದು ಪುಟ ತೆರೆದುಕೊಂಡಂತೆ ಅನ್ನಿಸುತ್ತಿತ್ತು. ಕೆಲವರ ಮನದಲ್ಲಿ ಭೀತಿಯ ಸೆಳಕು ಮೂಡಿತು.
             `ಹೆ. ಹೆ.. ಹೋಗೋ ದ್ಯಾವಾ.. ನಾವೆಂತಾ ಸುಮ್ಮನಿದ್ದು ಬಿಡ್ತೀವಾ.. ನಮ್ಮ ಮೇಲೆ ಅವರೇನಾದ್ರೂ ಬಂದ್ರು ಅಂತಾದ್ರೆ ನಾವೂ ತಿರುಗಿ ಬಿದ್ದರಾಯ್ತು.. ಹೊಡೆದಾಟವಾದರೂ ಸೈ.. ನಾವ್ ಇಷ್ಟೆಲ್ಲ ಜನ ಇಲ್ವಾ ದಾಂಢಿಗರು..' ಎಂದ ಪ್ರದೀಪ ತಮಾಷೆಯಾಗಿ.
             ಅದಕ್ಕೆ ಒಂದು ಸಾರಿ ನಕ್ಕ ದ್ಯಾವ `ನಿಮ್ಗೆ ತಮಾಷ್ಗಿ.. ಎಂತಾ ಗೊತ್ತೈತ್ರಾ ನಿಮ್ಗೆ.. ನಾಟಾ ಕೊಯ್ಯುವವರ ಸುದ್ದಿ..? ಬ್ಯಾರಿಗಳು ಅವ್ರು. ಅವರ ಉಸಾಬರಿಗೆ ಹೋಗೋದು ಒಂದೇ.. ನಮ್ ಶಿಖಾರಿ ನಾವ್ ಮಾಡ್ಕೊಳೋದೂ ಒಂದೆ ನೋಡಿ.. ಈಗೊಂದ್ ಇಪ್ಪತ್ ವರ್ಷದ ಹಿಂದೆ ಸಿರ್ಸಿ ಹತ್ರಕ್ಕೆ ಹೆಗಡೆಕಟ್ಟೆ ಐತಲ್ರಾ.. ಅದರ ಬುಡುಕೆ ಒಬ್ಬ ರೇಂಜರ್ನೇ ಜೀಪ್ ಹತ್ತಿಸಿ ಸಾಯಿಸಿದ್ದರು. ಅಂತ ಪಾರೆಸ್ಟ್ ಅಧಿಕಾರಿನೇ ಕೊಂದು ದಕ್ಕಿಸಿಕೊಂಡವರೆ.. ನಮ್ಮನ್ನ ಸುಮ್ಕೆ ಬಿಡ್ತಾರಾ..? ನಿಮಗೆ ಮಾಡಾಕ್ ಹ್ವಾರ್ಯ ಇಲ್ಲ ಅಂದ್ರೆ ಹೇಳಿ ಕಬ್ಬಿಗ್ ಮಣ್ ಹಾಕೂದ್ ಐತಿ.. ಎಲ್ಲಾ ಸೇರಿ ಮಾಡ್ವಾ.. ಸೇರೆಗಾರ್ಕೆ ನಾ ಮಾಡ್ತೆ.. ನಿಮ್ಗೆ ಸಂಬಳಾ ನೂ ಕೋಡ್ತೆ..' ಎಂದು ಗಂಭೀರವಾಗಿ ಉತ್ತರಿಸಿದ್ದ ದ್ಯಾವ.
              `ಹೋಗ್ಲಿ ಬಿಡೋ ದ್ಯಾವ.. ಅಷ್ಟೆಲ್ಲಾ ತೊಂದ್ರೆ ಉಂಟು ಅಂತಾದ್ರೆ ಈಗ ಬ್ಯಾಡಾ.. ಮತ್ಯಾವಾಗ್ಲಾದ್ರೂ ತೋರಿಸಬೌದಂತೆ.. ಈಗ್ ಎಲ್ಲಾ ಮನೆಗೆ ಹೋಗೋಣ ನಡೀರಿ..' ಎಂದ ವಿಕ್ರಮ. ಎಲ್ಲರೂ ಹೊರಡಲು ಅನುವಾದರು. `ಈಗಲ್ಲಾ.. ನೀವ್ ಯಾವಾಗ್ ತೋರ್ಸಾಕೆ ಬನ್ನಿ ಅಂದ್ರೂ ನಾ ಬರೋದಿಲ್ರೋ.. ನಂಗೆಂತಕ್ಕೆ ಬೇಕ್ರಾ ಬೆಂಕಿ ಜೊತೆ ಆಟ..' ಎಂದು ಕಡ್ಡಿ ಮುರಿದಂತೆ ಹೇಳಿದ ದ್ಯಾವ. ಎಲ್ಲರೂ  ಮೌನವಾಗಿ ಮನೆಯ ಕಡೆ ಹೆಜ್ಜೆ ಹಾಕಿದರು.

***

                 ಈ ಊರಿನ ಸುತ್ತ ಅನೇಕ ಚಿತ್ರ ವಿಚಿತ್ರ ಹೆಸರಿನ ಊರುಗಳಿವೆ. ಮುತ್ತಮೂರ್ಡು, ಅಡಕಳ್ಳಿ, ಕೋಡಶಿಂಗೆ, ಸಂಕದಮನೆ, ಹೊಸಮನೆ, ಬೇಣದಗದ್ದೆ, ಹಿತ್ತಲಕೈ ಹೀಗೆ ವಿಶಿಷ್ಟ, ವಿಚಿತ್ರ ಹೆಸರಿನ ಊರುಗಳು. ಊರಿನ ತುಂಬಾ ಕಾಡು. ಊರು ಊರುಗಳ ನಡುವೆಯೂ ಕಾಡು. ದೊಡ್ಡದೊಂದು ಗುಡ್ಡ. ಗುಡ್ಡದ ತಪ್ಪಲಲ್ಲಿ ಮನೆಗಳು. ಯಾವುದೇ ಊರಿನಲ್ಲೂ 20ಕ್ಕಿಂತ ಹೆಚ್ಚಿನ ಮನೆಗಳಿಲ್ಲ. ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಬೇಕೆಂದರೂ ಕನಿಷ್ಟ 2 ಕಿ.ಮಿ ನಡೆದಾಡಲೇ ಬೇಕು. ಒಂದು ಪಕ್ಕದಲ್ಲಿ ಅಘನಾಶಿನಿ ನದಿ. ಇನ್ನುಳಿದಂತೆ ಎಲ್ಲ ದಿಕ್ಕುಗಳಲ್ಲಿಯೂ ದಟ್ಟ ಕಾಡಿನಿಂದ ಕೂಡಿದ ಗುಡ್ಡ, ಬೆಟ್ಟ. ನಡು ನಡುವೆ ಅಡಿಕೆಯ ತೋಟಗಳು. ತುಣುಕು ತುಣುಕು ಗದ್ದೆಗಳ ಸಾಲುಗಳು. ಈ ಭಾಗದ ಕಾಡಂತೂ ಬೀಟೆ, ತೇಗ, ಹುನಾಲು, ಜಂಬೆ, ಮತ್ತಿಗಳಂತಹ ಬೆಲೆಬಾಳುವ ಮರಗಳ ತೊಟ್ಟಿಲು. ನಮ್ಮೂರಲ್ಲಿರೋದು ಆರೇ ಮನೆಗಳು ನೋಡಿ. ಊರಿನಲ್ಲಿ ಬಹುತೇಕರು ಕೃಷಿಕರು. ಹೊಸ ತಲೆಮಾರಿನ ಜನ ಊರಿನಿಂದ ಹೊರಗೆ ಉದ್ಯೋಗಕ್ಕಾಗಿ ಹೋಗುತ್ತಿದ್ದಾರೆ  ಎಂದು ತನ್ನೂರಿನ ಬಗ್ಗೆ ವಿವರಣೆ ನೀಡಿದ ವಿನಾಯಕ.
                 `ಮತ್ತೇನಾದ್ರೂ ವಿಶೇಷ ಇದೆಯಾ ವಿನಾಯಕ್..' ಅಂದ ಪ್ರದೀಪ.
                 `ಇದೆ. ಶೇಡಿಮಣ್ಣು ಅಂತೊಂದು ಅಪರೂಪದ ಮಣ್ಣು ನಮ್ಮೂರಿನಲ್ಲಿ ಸಿಗುತ್ತೆ. ಶೇಡಿ ಮಣ್ಣಿನ ಗುಡ್ಡವೇ ಇಲ್ಲಿದೆ. ಅದೇ ಕಾರಣಕ್ಕೆ ನಮ್ಮೂರನ್ನು ಶೇಡಿ ದಂಟಕಲ್ ಎಂದೂ ಕರೆಯಲಾಗುತ್ತದೆ. ಇನ್ನೂ ವಿಶೇಷತೆಗಳಿವೆ. ನಮ್ಮೂರಲ್ಲಿ ಈಗ್ಗೆ 50-60 ವರ್ಷಗಳ ಹಿಂದೆ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು. ಇನ್ನೂ ಒಂದ್ ವಿಶೇಷತೆ ಇದೆ ನೋಡಿ. ನಮ್ಮೂರಿನಲ್ಲಿ ಅನಂತ ಭಟ್ಟನ ಅಪ್ಪೆ ಎನ್ನುವ ಮಿಡಿಮಾವು ಸಿಗುತ್ತದೆ. ಈ ಅಪ್ಪೆ ಮಿಡಿ ಜಗತ್ತಿನಲ್ಲಿಯೇ ಅತ್ಯುತ್ಕೃಷ್ಟ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಈ ಅಪ್ಪೆ ಮಿಡಿ ನಮ್ಮೂರಿನಲ್ಲಿ ಸಿಗುತ್ತದೆ. ತಳಿ ಉಳಿಸಿದ ಖ್ಯಾತಿ ನಮ್ಮೂರಿನದ್ದು.. ಇದೊಂಥರಾ ಅಪರೂಪದ ಊರು..' ಎಂದ ವಿನಾಯಕ.
                `ಓಹ್.. ಅನಂತ ಭಟ್ಟನ ಅಪ್ಪೆ ಮಿಡಿಯ ಬಗ್ಗೆ ಯಾವಾಗಲೋ ಓದಿದ್ದೆ. ಕಳವೆಯವರು ಇದರ ಬಗ್ಗೆ ಬರೆದ ಹಾಗೆ ನೆನಪು. ಆಮೇಲೆ ದಕ್ಷಿಣ ಕನ್ನಡದ ಕೋಟಕ್ಕೆ ಯಾವುದೋ ಸುದ್ದಿಗೆ ಹೋಗಿದ್ದೆ. ಅಲ್ಲಿ ಶಿವರಾಮ ಕಾರಂತರ ಅಣ್ಣ ಕೋ. ಲ. ಕಾರಂತರ ಮನೆಯಿದೆ. ಫಾರ್ಮೊಂದಿದೆ. ಅಲ್ಲಿ ಅನಂತ ಭಟ್ಟನ ಅಪ್ಪೆ ಮರಗಳನ್ನು ಕಂಡಿದ್ದೆ. ಆಗ ಯಾರೋ ಈ ಊರಿನ ಸುದ್ದಿ ಹೇಳಿದ್ದ ನೆನಪು.. ವಾವ್.. ಸಖತ್ತಾಗಿದೆ. ಏನೆಲ್ಲಾ ವಿಶೇಷತೆಗಳು ನೋಡಿ. ವಿನಾಯಕ್ ನಾಳೆನೇ ಈ ಎಲ್ಲ ವಿಶೇಷತೆಗಳನ್ನು ನಮಗೆ ತೋರಿಸಿ..' ಎಂದಳು ವಿಜೇತಾ.
                 `ಓಹ್.. ಖಂಡಿತ.. ನಿಮಗೆಲ್ಲ ಇದನ್ನು ತೋರಿಸುತ್ತೇನೆ. ನಮ್ಮೂರಿಗೆ ಬಂದವರಿಗೆ ನಮ್ಮೂರಿನ ವಿಶೇಷತೆಗಳನ್ನು ತೋರಿಸದಿದ್ದರೆ ಹೇಗೆ ಹೇಳಿ..' ಎಂದ ವಿನಾಯಕ.
                 ಎಲ್ಲರೂ ಹೂಂ ಎಂದರು. ಎಲ್ಲ ಪುಂಗವರಿಗೆ ಊರಿನ ಬಗ್ಗೆ ಇದ್ದ ಕುತೂಹಲ ದುಪ್ಪಟ್ಟಾಯಿತು. ಜೊತೆಗೆ ಅಪ್ಪಟ ಮಲೆನಾಡಿನೊಳಗೆ ಹುದುಗಿರುವ ಊರೊಂದರ ವೈಶಿಷ್ಟ್ಯತೆಗಳ ಬಗ್ಗೆ ಕುತೂಹಲ ಮೂಡಿತು.
                ಮಲೆನಾಡೇ ಹಾಗೆ. ನಿಗೂಢ, ಅಬೇಧ್ಯ. ಇದೊಂಥರಾ ಸೊಕ್ಕಿದ ಕಾಡಾನೆಯಂತೆ. ಯಾರ ಅಂಕೆಗೂ ಸಿಲುಕದು. ಜಂಬಂಧ ಹೆಣ್ಣಿನಂತೆ ಯಾರನ್ನೂ ಗಮನಿಸುವುದಿಲ್ಲ. ಯಾರಿಗೂ ಸಲಾಂ ಹೊಡೆಯುವುದಿಲ್ಲ. ಪಟ್ಟಾಗಿ ಹೊರಟು ಎಷ್ಟು ಒಳಹೋಗಲು ಪ್ರಯತ್ನ ಪಟ್ಟರೂ ಒಳಹೋಗಲು ಸಾಧ್ಯವೇ ಇಲ್ಲ ಅನ್ನುವಷ್ಟು ಜಿಗ್ಗು. ಮೈ ಕೈ, ಬಟ್ಟೆ ಕಿತ್ತು ಬಿಡುವಷ್ಟು ಮುಳ್ಳು, ತರಚು. ಬಿಡಿಸಲಾಗದ ಸಿಕ್ಕು ಸಿಕ್ಕು ಗಂಟೆ. ಏನು ಇಲ್ಲದಾಗ ಸುಮ್ಮನೆ ತೆರೆದುಕೊಳ್ಳುವ ಜಾಗ. ವೈಚಿತ್ರ್ಯ-ವೈಶಿಷ್ಟ್ಯ. ಇಂಥ ಮಲೆನಾಡಿಗೆ ಬಂದು ಕಾಲಿಟ್ಟಿದೆ, ಒಳಹೊಕ್ಕಿದೆ. ನಿಧಾನವಾಗಿ ಸಿಕ್ಕು ಸಿಕ್ಕಾಗುತ್ತಿದೆ. ಜಡಕಾಗುತ್ತಿದೆ. ಸದ್ದಿಲ್ಲದೇ ಈ ಗುಂಪು ಒಳಕ್ಕೆ ಹೋಗಿ ಸಿಲುಕಿಕೊಳ್ಳುತ್ತಿದೆ. ಮುಂದೇನು? ವಾಪಾಸು ಬರುತ್ತಾರೆಯೇ? ಎಲ್ಲವೂ ಆಲೋಚನೆ ಮಾಡಿದಷ್ಟೂ ನಿಗೂಢ, ವಿಸ್ಮಯ.

(ಮುಂದುವರಿಯುತ್ತದೆ)

Tuesday, March 17, 2015

ಅಂ-ಕಣ-3

ಸುಮ್ನೇ ಕೇಳಕಂಡಿದ್ದು :-
ಸಮಾಜಕ್ಕೆ ಬುದ್ಧಿ ಹೇಳೋ ಪತ್ರಕರ್ತರಿಗೆ ಹಳ್ಳಿ ದಾರಿ ಕಾಣಿಸುತ್ತಿಲ್ಲ..
ಇನ್ನು ಈ ಜಮಾನಾದ ಯುವಕರಿಗೆ ಕಾಣಿಸುತ್ತಾ?

ಪ್ರಶ್ನೋತ್ತರ ಕಾಂಡ
ನಾನು ಹೇಳಿದೆ :
ಹಳೆಯ ಕವಿತೆ ಮತ್ತೆ ಸಿಕ್ಕಿದೆ
ನೆನಪಾಗಿದೆ
ಅವಳು ಕೇಳಿದ್ದು :
ಯಾರವಳು ಕವಿತಾ?

ಸರಣಿ-ಸರಪಣಿ
ಮೂರು ವರ್ಷದ ಹಿಂದೆ ದಾಂಡೇಲಿಯಲ್ಲಿ ಎಸಿಎಫ್ ಮದನ ನಾಯ್ಕ
ಒಂದೂವರೆ ವರ್ಷದ ಹಿಂದೆ ಪೊಲೀಸ್ ಅಧಿಕಾರಿ ಬಂಡೆ..
ಇದೀಗ ಡಿ. ಕೆ. ರವಿ.
ಇನ್ನೆಷ್ಟು ಬಲಿ ಬೇಕು ಪ್ರಾಮಾಣಿಕರದ್ದು?
ಇಷ್ಟೆಲ್ಲ ಬಲಿಯಾಗುತ್ತಿದ್ದರೂ ನಿದ್ದೆರಾಮಯ್ಯ ಇನ್ನೂ ಎದ್ದಿಲ್ಲವಲ್ಲ..

ಪಾದಯಾತ್ರೆ ಪುರಾಣ
2012ರ ವಿಧಾನಸಭಾ ಚುನಾವಣೆಗೂ ಮುನ್ನ ಬಳ್ಳಾರಿ ಸರಿಯಿಲ್ಲ ಅಂತ ನಿದ್ದೆರಾಮಯ್ಯ ಪಾದಯಾತ್ರೆ ಮಾಡಿದರು.
ಇದೀಗ ನಿದ್ದೆರಾಮಯ್ಯರ ನೇತೃತ್ವದಲ್ಲಿ ಕರ್ನಾಟಕವೇ ಸರಿಯಿಲ್ಲವಲ್ಲ..
ಹೇಳಿ ಎಲ್ಲಿಗೆ ಪಾದಯಾತ್ರೆ ಮಾಡೋಣ?

ಸಿಕ್ಕಾಪಟ್ಟೆ ಅಸಮಧಾನ:
ಬಳ್ಳಾರಿಗರ ಕಂಡು
ತೊಡೆತಟ್ಟಿ ನಿಂತಿದ್ದ ನಿದ್ದೆರಾಮಯ್ಯ
ಬೆಂಗಳೂರನ್ನೇ ಕಂಡು
ತೊಡೆಮುರಿದು ಬಿದ್ದಿದ್ದಾನೆ |

Monday, March 16, 2015

ಒಲವಿನ ಪಯಣ

ನೀನು ನನ್ನ ಬಾಳಿಗೆ
ಅರಿವಿನ ಮುನ್ನುಡಿ
ನಿನ್ನ ಕಣ್ಣು ನನ್ನ ಪಾಲಿ-
ಗೆಂದೂ ಒಂದು ಕನ್ನಡಿ ||

ಕಣ್ಣ ರೆಪ್ಪೆಯಾಗಿ ನಾನು
ನಿನ್ನನೆಂದೂ ಕಾಯುವೆ
ಒಲವ ಧಾರೆ ಸುರಿಸುತಿರಲು
ನಿನ್ನ ಜೊತೆಗೆ ಬಾಳುವೆ ||

ನಿನ್ನ ಬಿಂಬ ನನ್ನ ಮನಕೆ
ತಂಗಾಳಿಯಂತೆ ತಂಪು
ನಿನ್ನ ದನಿಯು ಕಿವಿಗೆ ಸೂಕಿ
ಹೃದಯದೊಳಗೆ ಇಂಪು ||

ನಾನು-ನೀನು ಒಂದೆ ಜೀವ
ಒಲವೆಂದೂ ಒಜ್ಜೆ
ಜೊತೆ ಜೊತೆಯಲಿ ಒಂದಾಗಿ
ಹಾಕೋಣ ಹೆಜ್ಜೆ ||

***
(ಈ ಕವಿತೆಯನ್ನು ಬರೆದಿರುವುದು ಮಾ.16, 2015ರಂದು ಶಿರಸಿಯಲ್ಲಿ)

Friday, March 13, 2015

ಅಂ-ಕಣ-2

ಅವಳಿಗಳಿಗೆ ಇಡುವ ಹೊಸ ತರಹದ ಹೆಸರು
ಹೊಸ ಹೆಸರಿನ ಫ್ಯಾಷನ್ ಹೀಗೂ ಇರ್ತವೆ ನೋಡಿ

ನಂದನಾ-ನಿಂದನಾ

ಸುಮ್ಮನೆ ಒಂದು ಲೈನ್, ತೀರಾ ಬುದ್ಧಿಜೀವಿ ಅಂದ್ಕೋಬೇಡಿ..

ಕೆಲವು ಪ್ರಶ್ನೆಗಳಿಗೆ ಉತ್ತರ ಬರುವುದಿಲ್ಲ ಎನ್ನುವುದು ಗೊತ್ತಿದ್ದರೂ
ಮತ್ತೆ ಮತ್ತೆ ಕೇಳುತ್ತಲೇ ಇರುತ್ತೇವೆ.
ಕೇಳಿಕೊಳ್ಳುತ್ತಲೇ ಇರುತ್ತೇವೆ ||

ಹೀಗೊಂದ್ ಪಂಚಿಂಗ್ ಲೈನ್ :

ನಿನ್ನ ಕಣ್ಣು ಬಹಳ ಚನ್ನಾಗಿದೆ.. ಕಣೇ ಗೆಳತಿ..
ನನ್ನ ಕಣ್ಣೇ ಬಿದ್ದು ಬಿಟ್ಟಾತು,,||

ಮತ್ತೊಂದ್ ಸ್ವಲ್ಪ ತಮಾಷೆ :

ದನಗಳಲ್ಲಿ ಒಳ್ಳೆಯ ದನ
ವಂ-ದನ
ಮನುಷ್ಯರಲ್ಲಿ ಒಳ್ಳೆಯ ದನ
ಚಂ-ದನ ||

ಒಂಚೂರು ದೇಶಪ್ರಮೇದ ಹನಿ :

ದೇಶದ ಗಡಿ
ಬಿಡಿಯಲ್ಲಿ ಸದಾ
ಭಾನಗಡಿಯಾದರೂ
ಗಂಡಾಗುಂಡಿಯಾಗುತ್ತಿದ್ದರೂ
ಉಗ್ರರು ದಾಂಗುಡಿ ಇಡುತ್ತಿದ್ದರೂ
ಜೀವ ಪಣಕ್ಕೊಡ್ಡಿ
ಕಾಯುವನು ಯೋಧ ||

ಕಾಡುವ ಹುಡುಗಿ

(ರೂಪದರ್ಶಿ : ಅನೂಷಾ ಹೆಗಡೆ)
ಕಾಡುತಾವೆ ಕಣೆ ಗೆಳತಿ
ನಿನ್ನ ಕಣ್ಣು
ನನ್ನ ಪಾಲಿಗೆ ನೀನೆ
ಪ್ರೀತಿಯ ಹೆಣ್ಣು ||

ನಿನ್ನ ಕಣ್ಣಲೊಂದು ಕಾಂತಿ
ನನ್ನ ಮನವ ಸೆಳೆದಿದೆ
ಬಿಟ್ಟೂ ಬಿಡದೆ ನಿನ್ನ ಕಡೆಗೆ
ನನ್ನ ಎಂದೂ ಎಳೆದಿದೆ ||

ಕಣ್ಣ ಕನಸು ಕರಗದಿರಲಿ
ನಗುತ ನೀನು ನಲಿದಿರು
ಕಣ್ಣ ಹನಿಯು ಜಾರದಿರಲಿ
ಮನಸು ನಕ್ಕು ಮೆರೆದಿರು ||

ನೀನೆ ನನ್ನ ಪಾಲಿಗೆಂದೂ
ಸದಾ ಚಿನ್ನ ರನ್ನ
ನಿನ್ನ ನೆನೆಯಲೆಂದೂ ಮನಕೆ
ಅದುವೆ  ಸುಣ್ಣ-ಬಣ್ಣ ||

ಕಣ್ಣು ಸಣ್ಣ ನೆಪ ಮಾತ್ರ
ನನ್ನ ಮನಸು ನಿನ್ನಲಿ
ಸದಾ ಕಾಲ ನಿನ್ನ ನೆನಪು
ಎದೆಯಲಿ ತುಂಬಲಿ

**

(ಈ ಕವಿತೆಯನ್ನು ಬರೆದಿರುವುದು 13-03-2015ರಂದು ಶಿರಸಿಯಲ್ಲಿ)
(ರೂಪದರ್ಶಿ ಅನೂಷಾ ಹೆಗಡೆ ಧನ್ಯವಾದಗಳು)

ಇತಿಹಾಸ ಹಾಗೂ ಪ್ರಕೃತಿಯ ವಿಸ್ಮಯ : ನಿಘೂಡ ಮಣ್ಣಿನ ಬೊಂಬೆಗಳು

ತರಹೇವಾರಿ ಮಣ್ಣಿನ ಗೊಂಬೆಗಳು, ಬೇರೆ ಬೇರೆ ರೀತಿಯ ಮಣ್ಣಿನ ಆಕೃತಿಗಳು, ನೀರಿನ ಹೂಜಿ, ಸ್ತ್ರೀ, ಕೊಡ, ಹೂದಾನಿ ಸೇರಿದಂತೆ ಬಗೆ ಬಗೆಯ ಮಡಿಕೆಯ ಚಿತ್ತಾರಗಳು. ಇವು ಶಿರಸಿ ತಾಲೂಕಿನ ಮುಷ್ಕಿ-ಶಿರಗುಣಿ ಸನಿಹದ ದೇವರ ಕಾಡಿನಲ್ಲಿ ಕಂಡಂತಹ ವಿಸ್ಮಯ.
ತಾಲೂಕಿನಲ್ಲಿ ಅನೇಕ ಕಡೆಗಳಲ್ಲಿ ಮಣ್ಣಿನ ಗೊಂಬೆಗಳು ಹಾಗೂ ಮಣ್ಣಿನ ವಿಚಿತ್ರ ಆಕೃತಿಗಳು ಸಿಗುತ್ತವೆ. ಮುಷ್ಕಿ-ಶಿರಗುಣಿ, ವಾನಳ್ಳಿ, ಜಡ್ಡೀಗದ್ದೆ, ಬಂಡಲ, ಸಾಲಕಣಿ ಅಲ್ಲದೇ ಸಿದ್ದಾಪುರ ತಾಲೂಕಿನ ಹಿತ್ತಲಕೈ ಈ ಮುಂತಾದ ಪ್ರದೇಶಗಳಲ್ಲಿ ಮಣ್ಣಿನ ಗೊಂಬೆಗಳು ಕಣ್ಣಿಗೆ ಬೀಳುತ್ತವೆ. ಈ ಗೊಂಬೆಗಳು ಸಿಗುವ ಪ್ರದೇಶದಲ್ಲಿ ಸೂರ್ಯನ ಕಿರಣಗಳು ಭೂಮಿಯನ್ನು ತಾಕದೇ ಇರುವಷ್ಟು ದಟ್ಟವಾದ ಕಾಡಿದೆ. ಸ್ಥಳೀಯರು ಇಂತಹ ಮಣ್ಣಿನ ಗೊಂಬೆಗಳು ಸಿಗುವ ಸ್ಥಳಕ್ಕೆ ದೇವರಿಗೆ ಸೇರಿದ ಪ್ರದೇಶ ಎಂದು ಕರೆಯುತ್ತಾರೆ. ಈ ಕಾಡಿನ ಜಾಗವನ್ನು ದೇವರ ಕಾನು ಎಂದೂ ಕರೆಯುತ್ತಾರೆ.
ಸ್ಥಳೀಯರ ಪ್ರಕಾರ ಇಂತಹ ಪ್ರದೇಶದಲ್ಲಿ ಪ್ರತಿ ವರ್ಷ ಮಡಿಕೆಗಳು ಏಳುತ್ತವಂತೆ. ವರ್ಷಂಪ್ರತಿ ಹೊಸ ಹೊಸ ಮಡಿಕೆ ಆಕೃತಿಗಳು ಮನ್ಣಿನ ಆಳದಿಂದ ಮೇಲೆ ಬರುತ್ತವಂತೆ. ಇಂತಹ ಆಕೃತಿಗಳನ್ನು ವರ್ಷಕ್ಕೊಮ್ಮೆ ಪೂಜೆ ಮಾಡಿ ನಂತರ ಅವನ್ನು ಒಂದೆಡೆ ಗುಡ್ಡದಂತೆ ಪೇರಿಸಿ ಇಡಲಾಗುತ್ತದೆ. ತಾಲೂಕಿನ ಶಿರಗುಣಿಯ ಬಳಿಯಲ್ಲಿ ಮಣ್ಣಿನ ಮಡಿಕೆಯ ವಿಚಿತ್ರ ಆಕೃತಿಗಳ ಗೊಂಬೆಗಳನ್ನೆಲ್ಲ ಒಂದೆಡೆ ಸೇರಿಸಿ ಚಿಕ್ಕದೊಂದು ದಿಬ್ಬವನ್ನೇ ಮಾಡಲಾಗಿದೆ. ಇಲ್ಲಿ ಎರಡು ದೈತ್ಯ ಹುತ್ತಗಳಿವೆ. ಈ ಹುತ್ತಗಳಿರುವ ಪ್ರದೇಶದಲ್ಲಿ ಮಡಿಕೆಗಳು ಉದ್ಭವವಾಗುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ. ಹುತ್ತದ ರಕ್ಷಣೆಗಾಗಿ ಗುಡಿಯನ್ನು ನಿರ್ಮಾಣ ಮಾಡಲಾಗಿದೆ. ಸ್ಥಳೀಕವಾಗಿ ನಾಗರ ಬನ ಎಂದು ಕರೆಯಲಾಗುತ್ತಿದೆ. ಜೊತೆ ಜೊತೆಯಲ್ಲಿ ದೇವರ ವಿವಿಧ ಗಣಗಳು ಇಲ್ಲಿವೆ ಎಂದೂ ಹೇಳಲಾಗುತ್ತದೆ.
ಮಾರ್ಚ್ ತಿಂಗಳ ಕೊನೆಯ ಭಾಗ, ಎಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಇಂತಹ ಮಡಿಕೆಗಳು ಏಳುವ ಸ್ಥಳದಲ್ಲಿ ಸ್ಥಳೀಯರು ಪೂಜೆ ಮಾಡುತ್ತಾರೆ. ವಾರ್ಷಿಕವಾಗಿ ಮಾಡುವ ಇಂತಹ ಪೂಜೆಗಳಲ್ಲಿ ಹೊಸದಾಗಿ ಉದ್ಭವವಾದ ಮಣ್ಣಿನ ಮಡಿಕೆಗಳನ್ನು ಪೂಜೆ ಮಾಡಲಾಗುತ್ತದೆ. ಸುಗ್ಗಿ ಹಬ್ಬ ಎಂದೂ ಈ ಪೂಜೆಯನ್ನು ಕರೆಯಲಾಗುತ್ತದೆ. ಬೆಳೆಗಳನ್ನು ಕಾಪಾಡುವ ಸಲುವಾಗಿ ಇಂತಹ ಪೂಜೆಗಳನ್ನು ಕೈಗೊಳ್ಳಲಾಗುತ್ತದೆ ಎಂದು ಶಿರಗುಣಿ ಭಾಗದ ಜನಸಾಮಾನ್ಯರು ಹೇಳುತ್ತಾರೆ. ಪೂಜೆಯ ಸಂದರ್ಭದಲ್ಲಿ ಶುಚಿತ್ವಕ್ಕೆ ಹೆಚ್ಚಿನ ಗಮನವನ್ನು ನೀಡಲಾಗುತ್ತದೆ. ಸ್ಥಳೀಯರ ಪ್ರಕಾರ ಇಂತಹ ವಾರ್ಷಿಕ ಪೂಜೆಗೆ ಗಾಮನ ಹಬ್ಬ ಎಂದೂ ಕರೆಯಲಾಗುತ್ತದೆ.
ನೆಲದಿಂದ ತನ್ನಿಂದ ತಾನೆ ಮಣ್ಣಿನ ಮೂರ್ತಿಗಳು ಹುಟ್ಟಿ ಬರುತ್ತವೆ. ಇದು ವಿಸ್ಮಯವನ್ನು ಮೂಡಿಸುತ್ತದೆ. ವರ್ಷದ ಎಲ್ಲಾ ಸಮಯದಲ್ಲಿಯೂ ಮಣ್ಣಿನ ಆಕೃತಿಗಳು ಮೂಡಿ ಬರುತ್ತವೆ. ಹೀಗೆ ಮಣ್ಣಿನ ಮೂರ್ತಿಗಳು ಹುಟ್ಟಿ ಬರುವ ಪ್ರದೇಶದಲ್ಲಿ ದೇವರ ತಾಣಗಳನ್ನು ಮಾಡಲಾಗಿದೆ. ಶಿರಗುಣಿ ಭಾಗದಲ್ಲಿ ಮೂರ್ತಿಗಳು ಉದ್ಭವವಾಗುವ ಪ್ರದೇಶದಲ್ಲಿ ಚೌಡಿ, ನಾಗರು ಸೇರಿದಂತೆ ದೇವ-ದೇವತೆಗಳ 11 ಗಣಗಳಿವೆ ಎನ್ನುವುದು ನಂಬಿಕೆ. ನಮ್ಮಲ್ಲಿ ಪ್ರತಿ ವರ್ಷ ವಿಶೇಷ ಪೂಜೆ ಮಾಡಲಾಗುತ್ತದೆ. ನನ್ನ ಅರಿವಿಗೆ ಬಂದಂತೆ ಕನಿಷ್ಟ 40 ವರ್ಷಗಳಿಂದ ಈ ಪ್ರದೇಶದಲ್ಲಿ ಮಣ್ಣಿನ ಮೂರ್ತಿಗಳು ಹುಟ್ಟುತ್ತಿವೆ. ಒಂದೊಂದು ವರ್ಷ ಒಂದೊ ಎದರೋ ಮೂರ್ತಿಗಳು ಹುಟ್ಟಿದರೆ ಒಂದೊಂದು ವರ್ಷ ಆರೆಂಟು ಮಡಿಕೆಗಳು ಮೇಲೆ ಬರುತ್ತವೆ. ಆದರೆ ಈ ಮಡಿಕೆಯ ಆಕರತಿಗಳು ಹೇಗೆ ಹುಟ್ಟುತ್ತವೆ ಎನ್ನುವುದು ನಮಗೆ ಗೊತ್ತಿಲ್ಲ ಎಂದು ಮುಸ್ಕಿಯ ಎ. ವಿ. ಭಟ್ಟ ಅವರು ಹೇಳುತ್ತಾರೆ.
ಮಣ್ಣಿನ ಮಡಿಕೆಗಳು ಏಳುವ ಸ್ಥಳಕ್ಕೆ ಬೇರೆ ಬೇರೆ ಪ್ರದೇಶಗಳಲ್ಲಿ  ಬೇರೆ ಬೇರೆ ರೀತಿಯ ನಂಬಿಕೆಗಳಿವೆ. ಚೌಡಿಕಟ್ಟೆ, ನಾಗರಬನ, ಬೀರಪ್ಪನ ಕಟ್ಟೆ, ದೇವರ ಕಾನು ಹೀಗೆ ವಿವಿಧ ಹೆಸರುಗಳಿಂದ ಕರೆಯುವ ಈ ಸ್ಥಳಗಳ ಕುರಿತು ಇತಿಹಾಸಕಾರರಾದ ಲಕ್ಷ್ಮೀಶ ಹೆಗಡೆ ಅಧ್ಯಯನವನ್ನು ಮಾಡಿದ್ದಾರೆ. ಪರಿಸರ ಬರಹಗಾರ ಶಿವಾನಂದ ಕಳವೆ ಅವರು ಹಲವಾರು ಮಾಹಿತಿಗಳನ್ನು ಕಲೆಹಾಕಿದ್ದಾರೆ. ಇಂತಹ ದೇವರಕಾಡುಗಳನ್ನು ಉಳಿಸುವ ಸಲುವಾಗಿ ಪಶ್ಚಿಮ ಘಟ್ಟ ಕಾರ್ಯಪಡೆಯ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹಲವು ಕ್ರಮಗಳನ್ನು ಕೈಗೊಂಡಿರುವುದೂ ಉಲ್ಲೇಖನೀಯ.
ಆದರೆ ವಾಸ್ತವದಲ್ಲಿ ಇಂತಹ ಪ್ರದೇಶದಗಳಲ್ಲಿ ಮಣ್ಣಿನ ಮಡಿಕೆ ಹುಟ್ಟುತ್ತದೆ ಎನ್ನುವುದು ಸ್ಥಳೀಯರ ಕಲ್ಪನೆಯಾಗಿದೆ. ಇಂತಹ ಮಣ್ಣಿನ ಮಡಕೆಗಳಿಗೆ 2 ಶತಮಾನಗಳ ಇತಿಹಾಸವಿದೆ. ಹಿಂದೆ ಈ ಪ್ರದೇಶಗಳು ಜೈನರ ಆಳ್ವಿಕೆಯ, ಜೈನರು ಪೂಜೆ ಮಾಡುವ ಸ್ಥಳಗಳಾಗಿದ್ದವು. ಜೈನರು ಮಣ್ಣಿನಿಂದ ವಿವಿಧ ಮೂತರ್ಿಗಳನ್ನು ಮಾಡಿ ಪೂಜಿಸಿ ಆ ನಂತರದಲ್ಲಿ ಅವನ್ನು ಮಣ್ಣಿನಲ್ಲಿ ಹೂಳುತ್ತಿದ್ದರು. ಆದರೆ ಕಾಲ ಕ್ರಮೇಣ ಈ ಭಾಗದಲ್ಲಿ ಜೈನರ ಪ್ರಾಬಲ್ಯ ಕಡಿಮೆಯಾಯಿತು. ಮನ್ಣಿನಲ್ಲಿ ಹೂಳಿದ ಮೂತರ್ಿಗಳು ನಿಧಾನವಾಗಿ ಮಳೆಗಾಲದ ಸಂದರ್ಭದಲ್ಲಿ ಭೂಮಿಯಿಂದ ಮೇಲೆ ಬರಲು ಆರಂಭಿಸಿದವು. ಇದನ್ನೇ ಸ್ಥಳೀಯರು ಮಣ್ಣಿನ ಮೂತರ್ಿ ಹುಟ್ಟುವುದು ಎನ್ನುತ್ತಿದ್ದಾರೆ. ಇದರಲ್ಲೇನೂ ನಿಗೂಡತೆಯಿಲ್ಲ ಎಂದು ಇತಿಹಾಸಕಾರರಾದ ಲಕ್ಷ್ಮೀಶ ಹೆಗಡೆ ಸೋಂದಾ ಹೇಳುತ್ತಾರೆ.
***
ಮಣ್ಣಿನ ಮಡಿಕೆಗಳು ಏಳುವ ಸ್ಥಳಗಳು ಶಿರಸಿಯಲ್ಲಿ ಸಾಕಷ್ಟಿವೆ. ಸ್ಥಲೀಯರು ಇಂತಹ ಸ್ಥಳದಲ್ಲಿ ವಾಷರ್ಿಕವಾಗಿ ಪೂಜೆ ಮಾಡುತ್ತಾರೆ. ಇದನ್ನು ಗಾಮನ ಹಬ್ಬ ಎಂದು ಕರೆಯಲಾಗುತ್ತದೆ. ಮಳೆ ಹನಿ ಬಿದ್ದು ಮಣ್ಣಿ ಸಡಿಲವಾದಾಗ ನೆಲದಲ್ಲಿ ಹೂತಿಟ್ಟ ಗೊಂಬೆಗಳು ಮೇಲಕ್ಕೆ ಬರುತ್ತವೆ. ಇದನ್ನು ಸ್ಥಳೀಯರು ಮಡಿಕೆ ಏಳುವುದು ಎನ್ನುತ್ತಾರೆ ಅಷ್ಟೇ. ಈ ಗೊಂಬೆಗಳಿಗೆ 300-400 ವರ್ಷಗಳ ಇತಿಹಾಸವಿದೆ.
ಶಿವಾನಂದ ಕಳವೆ

***

(ಮಾ.13ರಂದು ಕನ್ನಡಪ್ರಭದ ಉತ್ತರ ಕನ್ನಡ ಆವೃತ್ತಿಯಲ್ಲಿ ಪ್ರಕಟವಾಗಿದೆ)

Thursday, March 12, 2015

ವ್ಯತ್ಯಾಸ

ನನ್ನ ಬಳಿ ದುಡ್ಡಿಲ್ಲದಿದ್ದಾಗ
ಅವಳು ಪ್ರೀತಿಸಲಿಲ್ಲ |
ದುಡ್ಡು ಮಾಡಿದ ಮೇಲೆ
ನನಗೆ ಆ ಪ್ರೀತಿ
ಬೇಕೆನ್ನಿಸಲಿಲ್ಲ ||

***

ಬಡತನವಿದ್ದಾಗ ಬಳಿಯಲ್ಲಿ
ಮಿತ್ರರಿದ್ದರು, ನಗುವಿತ್ತು.
ಹರುಷದ ಅಲೆ-ಅಲೆದಿತ್ತು..
ಜೊತೆಗಾರರಿದ್ದರು...
ಸಿರಿ ಬಂದ ನಂತರ ಮಾತ್ರ
ಬದುಕಿಗೆ ವ್ಯವಹಾರವೇ
ಜೊತೆಗಾರನಾಗಿತ್ತು.|

***

ಬಡತನದಲ್ಲಿ ಅರಳುವ
ಪ್ರೀತಿ-ಸಂಭಂಧಗಳು
ಸಿರಿತನದಲ್ಲಿ ಕಮರುತ್ತದೆ
ಅಥವಾ ಅರ್ಥ
ಕಳೆದುಕೊಂಡು ಬಿಡುತ್ತವೆ ||

***

(ಈ ಕವಿತೆಯನ್ನು ಬರೆದಿರುವುದು 07-10-2008ರಂದು ದಂಟಕಲ್ಲಿನಲ್ಲಿ)

Wednesday, March 11, 2015

ಅಂ-ಕಣ

ಲೈಟಾಗಿ ಒಂದ್ ಹನಿ..
ಮತ್ತೆ ಮತ್ತೆ
ಮಾತನಾಡಿದಂತೆಲ್ಲ
ಇನ್ನಷ್ಟು ಹತ್ತಿರ |


ಸುಮ್ಮನೊಂದು ಲೈನ್-
ಅವನು ಸ್ಟಾಂಡ್ ಹಾಕಿ ಹಾಕಿ... ಸ್ಟಾಂಡರ್ಡ್ ಮೆಂಟೇನ್ ಮಾಡಿ ಬಿಟ್ಟ...|


ಚಿಕ್ಕದೊಂದು ಕಥೆ :-

ಇಷ್ಟ ಇದೆ. ಬಹಳ ಕಣೋ..
ಆದ್ರೂ ಏನೋ ತಳಮಳ..
ಒಂದ್ ಕೆಲ್ಸಾ ಮಾಡು..
ನೀನು ಬೇರೆಯವರನ್ನು ನೋಡ್ಕೋ.. ನನ್ನನ್ನು ಬಿಟ್ ಬಿಡು..|

ಮತ್ತೊಂದ್ ಲೈನು :
ಕನಸಿಗೆ
ಇನ್ನೊಂಚೂರು
ಟೈಮ್ ಬೇಕಂತೆ...

ಸುಮ್ನೆ ತಲೆಹರಟೆ :-
ಅವನು ಕಾಲ್ ಮಾಡುವಾಗಲೆಲ್ಲಾ ಕಾಲರ್ ಎತ್ತುತ್ತಾನೆ...

ಅಪಾರ್ಥ :-
ರಸ್ತೆಯಲ್ಲಿ ನಿಂತುಕೊಂಡಿದ್ದೆ.. ರೀ.. ಎತ್ರಿ... ಎಂದೆ..
ಗುರಾಯಿಸಿದಳು..
ರೀ..ಮೇಡಂ.. ನಂಗೆ ಅರ್ಜೆಂಟಿದೆ.. ಬೇಗ ಎತ್ರೀ ಎಂದೆ..
ಯಾಕೋ ಹೆಂಗೈತಿ ಮೈಗೆ ಅಂದ್ಲು..
ಥೋ.. ಮೇಡಂ.. ನಂಗೆ ನೇಗನೇ ಹೋಗ್ಬೇಕು.. ತಾವು ಬೇಗನೆ ಎತ್ತಿದ್ರೆ ಚನ್ನಾಗಿತ್ತು ಅಂದೆ..
ಇನ್ನೇನು ಕಪಾಳಕ್ಕೆ ಬೀಳಬೇಕು ಎನ್ನುವಷ್ಟರಲ್ಲಿ
ರೀ ಮೇಡಂ.. ಬೈಕ್ ಎತ್ರೀ.. ಏನ್ ರಿ.. ಆವಾಗಿಂದ ಹೇಳ್ತಾ ಇದ್ದೀನಿ.. ಎತ್ತೋಕಾಗಲ್ವಾ.. ರಸ್ತೆಗೆ ಅಡ್ಡ ಹಾಕಿದ್ದೀರಲ್ರೀ.. ಎಂದೆ..
ಸರಿಯಾಗಿ ಹೇಳೋಕೇನಾಗಿತ್ತು ನಿಮಗೆ.. ಎಂದು ಬೈದಳು ಮೇಡಂ.. ಸುಮ್ಮನಾದರೆ..
ಜನ ಎಂತಾ ವಿಚಿತ್ರ ಅಲ್ಲಾ.. ಬರೀ ಅಪಾರ್ಥ ಮಾಡ್ಕೋತಾರೆ..||

Tuesday, March 10, 2015

ಬೆಳಕಿನಂತ ಹುಡುಗಿಗೊಂದು ಪತ್ರ -(ಪ್ರೇಮಪತ್ರ-15)

ನನ್ನೊಲವಿನ ಬೆಳಕೆ...,

               ಬಹುಶಃ  ಕ್ರಿಕೆಟಿನಲ್ಲಾಗಿದ್ದರೆ ಶತಕದ ಸಂಭ್ರಮ ಆಚರಣೆ ಮಾಡಬಹುದಿತ್ತು. ಆದರೆ ಇದು ಕ್ರಿಕೆಟ್ ಅಲ್ಲ. ನಮ್ಮದೇ ಬಹುಕು. ಹೌದು ನಾ ನಿನ್ನ ಬಳಿ ಮೊಟ್ಟ ಮೊದಲ ಸಾರಿ ಪ್ರೇಮದ ಕೋರಿಕೆಯನ್ನು ಇಟ್ಟ ನಂತರ ಬಹುಶಃ ಇದು ನೂರೋ ಅಥವಾ ಇನ್ನೂ ಜಾಸ್ತಿಯೋ ಆಗಿರಬೇಕು. ನನ್ನ ಕೋರಿಕೆ ಕಥೆ ಏನಾಯ್ತು ಎಂದು ಕೇಳಿದ್ದು. ಆಗೆಲ್ಲಾ ನೀನು ಹೇಳಿದ್ದೊಂದೇ ಮಾತು ನಂಗಿನ್ನೂ ಸಮಯ ಬೇಕು.
               ನಾನು ನಿನ್ನ ಮೊಟ್ಟಮೊದಲ ಬಾರಿಗೆ ನೋಡಿದ್ದು ಅದ್ಯಾವುದೋ ಸಮಾರಂಭವೊಂದರಲ್ಲಿ. ನೀನು ಹಾಗೂ ನಿನ್ನ ಗೆಳತಿಯರು ಸಮಾರಂಭದ ವೇದಿಕೆಯ ಮೇಲೆ ವಿವಿಧ ಜವಾಬ್ದಾರಿಗಳನ್ನು ಹೊತ್ತುಕೊಂಡು ಪಾತರಗಿತ್ತಿಯಂತೆ ಅತ್ತ ಇತ್ತ ಓಡಾಡುತ್ತಿದ್ದಿರಿ. ನಿನ್ನನ್ನು ನೋಡಿದವನೇ ನಾನು ಬಹುವೇ ಇಷ್ಟ ಪಟ್ಟಿದ್ದೆ. ನಿನ್ನ ಹೆಸರು ಏನಿರಬಹುದು? ನೀನು ಏನು ಮಾಡುತ್ತಿರಬಹುದು ಎಂದೆಲ್ಲಾ ಆಲೋಚಿಸಿ ನಿನ್ನ ಬಗ್ಗೆ ನನ್ನ ದೋಸ್ತರ ಬಳಿ ಕೇಳೋಣ ಎಂದುಕೊಳ್ಳುತ್ತಿದ್ದಾಗಲೇ ಕಾರ್ಯಕ್ರಮ ಆಯೋಜಿಸಿದ್ದವರು ನಿನ್ನ ಹೆಸರನ್ನು ಹೇಳಿದ್ದರು. ಬೆಳಕಿನಂತಹ ಹುಡುಗಿ ನೀನು ನನ್ನ ಮನಸ್ಸಿನಲ್ಲಿ ಆಗಲೇ ಗೂಡು ಕಟ್ಟಿದ್ದೆ.
               ಆ ನಂತರ ನಿನ್ನನ್ನು ನೋಡಬೇಕು, ಮಾತನಾಡಬೇಕು ಎಂದುಕೊಂಡು ನಾನು ಮಾಡಿದ ಕೆಲಸ ಅಷ್ಟಿಷ್ಟಲ್ಲ. ನನ್ನ ದೋಸ್ತರಿಗೆ ನಿನ್ನ ಪರಿಚಯವಿತ್ತಾದರೂ ನಾನು ನಿನ್ನನ್ನು ಪರಿಚಯ ಮಾಡಿಕೊಳ್ಳಬೇಕು ಎಂದುಕೊಂಡೆ. ಗೆಳೆಯರೆಲ್ಲ ಸೇರಿ ಅದೆಲ್ಲೋ ಜಲಪಾತವೊಂದಕ್ಕೆ ಪ್ರವಾಸವನ್ನೂ ಏರ್ಪಡಿಸಿ ನಿನ್ನನ್ನು ಕರೆದಿದ್ದರು. ಖುಷಿಯೆಂಬಂತೆ ನೀನು ಬಂದಿದ್ದೆ. ನನ್ನ ಮನಸ್ಸು ಅರಳಿತ್ತು. ಬಂದವಳನ್ನು ನಾನು ಪರಿಚಯ ಮಾಡಿಕೊಂಡಿದ್ದೆ. ಜಲಪಾತಕ್ಕೆ ಸುಮ್ಮನೆ ಪ್ರವಾಸ ಹೋಗಿದ್ದು ನಾವು. ಜಲಪಾತ ನೋಡಿದ ಖುಷಿಗಿಂತ ನಿನ್ನೊಡನೆ ಮಾತನಾಡಿದ್ದಕ್ಕೆ ಮತ್ತಷ್ಟು ಆನಂದವಾಗಿತ್ತು ನನಗೆ. ಆಗಲೇ ಅಲ್ಲವೇ ನಿನ್ನ ಬಳಿ ನಾನು ಮೊಬೈಲ್ ನಂಬರ್ ಪಡೆದಿದ್ದು.
              ಮೊಬೈಲ್ ನಂಬರ್ ಪಡೆದದ್ದೇನೋ ಆಯ್ತು. ಆಮೇಲೆ ದಿನವಿಡೀ ವಾಟ್ಸಾಪ್ ನಲ್ಲಿ ಚಾಟಿಂಗು ಆರಂಭವಾಯಿತು. ಮೊಬೈಲಿನಲ್ಲಿ ಮಾತು ಕತೆ ಮಧ್ಯ ರಾತ್ರಿಯವರೆಗೂ ಮುಂದುವರಿಯುತ್ತಿತ್ತು. ಆಗಲೇ ನನ್ನೊಳಗೆ ಚಿಗುರಿದ್ದ ನೀನೆಂಬ ಗಿಡ ಮತ್ತಷ್ಟು ಹೆಮ್ಮರವಾಗಲು ಆರಂಭಿಸಿದ್ದು. ಹೀಗಿದ್ದಾಗಲೇ ನನ್ನದೇ ದೋಸ್ತನೊಬ್ಬ ನಿನ್ನ ಬಳಿ ನಾನು ಇಷ್ಟ ಪಡುತ್ತಿರುವುದನ್ನು ಹೇಳಿದ್ದ. ನೀನು ಅಚ್ಚರಿಯಿಂದ ನನ್ನ ಬಳಿ ಕೇಳಿದ್ದೆ `ಯಾಕೆ? ಯಾಕೆ ನನ್ನನ್ನು ಇಷ್ಟಪಟ್ಟೆ' ಅಂತ.
           ನಿನ್ನ ಪ್ರಶ್ನೆಗೆ ನಾನು ಮೊದಲು ತಬ್ಬಿಬ್ಬಾಗಿದ್ದು ನಿಜ. ಆದರೆ ಕೊನೆಗೆ ಸಾವರಿಸಿಕೊಂಡು ನಿನ್ನನ್ನು ಇಷ್ಟ ಪಡಲು ಕಾರಣ ಹೇಳಿದ್ದೆ. ಮಾರುದ್ದದ ಮೆಸೇಜನ್ನು ನಾನು ಅನಾಮತ್ತು 15 ನಿಮಿಷಗಳ ಕಾಲ ಟೈಪ್ ಮಾಡಿ ಬರೆದಿದ್ದೆ. ಆಗೆಲ್ಲಾ ಎಷ್ಟು ಚಡಪಡಿಕೆಯಾಗಿತ್ತು ಗೊತ್ತಾ. ಆದರೆ ಎಲ್ಲವನ್ನೂ ನೀನು ಆವತ್ತೇನೋ ಕೇಳಿದ್ದೆ. ಆದರೆ ನನ್ನ ಪ್ರಶ್ನೆಗೆ ಮಾತ್ರ ಉತ್ತರವನ್ನೇ ಕೊಡಲಿಲ್ಲ.
          ಆ ದಿನದ ನಂತರ ನಾನು ನೀನು ಅದೆಷ್ಟು ಸಾರಿ ಭೇಟಿಯಾಗಿದ್ದೇವಲ್ಲ. ಮಾತನಾಡಿದ್ದೇವೆ. ಮೆಸೇಜ್ ಮಾಡಿಕೊಂಡಿದ್ದೇವೆ. ಪೋನಿನಲ್ಲಿ ಹರಟಿದ್ದೇವೆ. ಮೆಸೇಜ್ ಮಾಡದೇ ಮಿಸ್ ಮಾಡಿಕೊಂಡಿದ್ದೇವೆ. ನಾಟ್ ರೀಚೆಬಲ್ ಆಗಿ ಕಾಡಿಸಿಕೊಂಡಿದ್ದೇವೆ. ನಾನು ಪಿರಿ ಪಿರಿ ಊರು ತಿರುಗುವುದನ್ನು ನೋಡಿ ನಿನ್ನ ಕಾಲಿಗೆ ಚಕ್ರದ ಸುಳಿ ಇದೆಯೇನೋ ಮಾರಾಯಾ ಎಂದೆಲ್ಲ ಕೇಳಿದ್ದು ನನಗಿನ್ನೂ ಹಸಿ ಹಸಿರಾಗಿಯೇ ಇದೆ.
            ಬಹುಶಃ ನಾನು ನೀನು ಮಾತನಾಡಿದ್ದು ಅದೆಷ್ಟು ತಾಸುಗಲೋ. ನೀನು ಒಂದೊಂದು ಅಕ್ಷರವಾಗಿಯೂ ನನ್ನ ಬಳಿ ಉಲಿಯುತ್ತಿದ್ದರೆ ನಾನು ಇಂಚಿಂಚು ನಿನಗೆ ಶರಣಾಗುತ್ತಿದ್ದೆ. ಮನಸ್ಸಿನಲ್ಲಿ ನಿನ್ನದೇ ರೂಪವನ್ನು ಕೆತ್ತಿಕೊಳ್ಳುತ್ತಿದ್ದೆ. ಹಾಗೆ ನೋಡಿದರೆ ನೀನು ನನ್ನ ಬಳಿ ನಕ್ಕು ಮಾತನಾಡಿದ್ದು ಕಡಿಮೆ. ಗಂಭೀರವಾಗಿ ಮಾತನಾಡಿದ್ದೀಯಾ. ಕಾಡಿಸಿದಾಗಲೆಲ್ಲ ಗದರಿದ್ದೀಯಾ. ಆದರೆ ಇವೆಲ್ಲವೂ ನನಗೆ ಇಷ್ಟವಾಗಿದೆ. ನಿನ್ನ ನಗುವಿಗಿಂತಲೂ ಹೆಚ್ಚು ಆಪ್ತವಾಗಿಬಿಟ್ಟಿದೆ.
            ಮೊದಲ ಸಾರಿ ನಾನು ನಿನಗೆ ಪ್ರಪೋಸ್ ಮಾಡಿದ ನಂತರ ಅದೆಷ್ಟು ನೂರು ಸಾರಿ ಕೇಳಿದ್ದೇನೋ. ಮೊದಲ ಸಾರಿ ಉತ್ತರ ಹೇಳದಿದ್ದರೂ ನಂತರದ ದಿನಗಳಲ್ಲಿ ನೀನು ನನಗೆ ಸಮಯ ಬೇಕು ಮಾರಾಯಾ ಎಂದಿದ್ದೆ. ಮನಸ್ಸಿನಲ್ಲಿ ಗೊಂದಲದ ತರಂಗಗಳು ಎದ್ದಿವೆ. ಏನು ಹೇಳಬೇಕೋ ಕಾಣೆ ಎಂದು ಹೇಳಿದ್ದೆ. ಮುಂದಿನ ಬದುಕು ಯಾವ ರೀತಿಯಿರುತ್ತದೆಯೋ ಕಾಣೆ ಎಂದೂ ಹೇಳಿದ್ದೆ. ಅದಕ್ಕೆಲ್ಲ ನಾನು ನನ್ನ ನಿಲುಕಿಗೆ ಸಿಕ್ಕಂತೆ ಉತ್ತರ ವನ್ನು ಕೊಟ್ಟಿದ್ದೆ. ನಾನು ಪದೇ ಪದೆ ಕೇಳುತ್ತಲೇ ಇದ್ದೆ. ನೀನು ಟೈಂ ಕೊಡು ಮಾರಾಯಾ.. ಇದು ಬದುಕಿನ ವಿಷಯ. ಆಲೋಚನೆ ಮಾಡಿ ಹೇಳ್ತೇನೆ ಎಂದಿದ್ದೆ. ಸ್ವಾರ್ಥಿ ನಾನು.. ಆಲೋಚನೆ ಮಾಡಿ ಹೇಳು. ಎಷ್ಟು ಬೇಕಾದರೂ ಟೈಂ ತಗೋ. ಆದರೆ ನನ್ನ ಪ್ರಪೋಸಲ್ಲಿಗೆ ನೋ ಅನ್ನಬೇಡ ಎಂದೂ ಹೇಳಿದ್ದೆ ಅಲ್ವಾ.
              ಈಗಲೂ ನಾನು ಕೇಳುತ್ತಿದ್ದೇನೆ. ಮುಕ್ಕಾಲು ಪಾಲು ನೀನು ಇಷ್ಟವಾಗಿದ್ದೀಯಾ ಕಣೋ. ಆದರೆ ಕಾಲು ಭಾಗದಷ್ಟು ನನ್ನಲ್ಲೇ ಏನೋ ಅಳುಕು. ಅದೇನೆಂಬುದನ್ನು ಹೇಳಲಿಕ್ಕೆ ಆಗುತ್ತಿಲ್ಲ. ಮನೆಯವರ ಭಯವಾ? ಮುಂದಿನ ಬದುಕಿನ ಪ್ರಶ್ನೆಯಾ? ಗೊಂದಲವಿನ್ನೂ ಸ್ಪಷ್ಟವಾಗಿಲ್ಲ. ಒಮ್ಮೊಮ್ಮೆ ಒಂದೊಂದು ರೀತಿ ಅನ್ನಿಸುತ್ತಿದೆ. ನಾನಿನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ ಮಾರಾಯಾ.. ನಂಗೆ ಯಾಕೋ ಇನ್ನೂ ಸ್ವಲ್ಪ ಸಮಯಬೇಕು ಅನ್ನಿಸ್ತಾ ಇದೆ ಅಂತಲೂ ಹೆಳಿದ್ದೆ. ನಾನು ಮತ್ತೆ ಮತ್ತೆ ಕಾಯುತ್ತಿದ್ದೇನೆ. ನೀನು ಒಂದು ಸಾರಿ ಹೂ ಅಂದು ಬಿಡುತ್ತಿದ್ದೀಯಾ ಎಂದುಕೊಂಡಿದ್ದೇನೆ.
            ನಿಜ ಹೇಳ್ತಾ ಇದ್ದೀನಿ ಬೆಳಕೇ.. ನಿನ್ನನ್ನು ನಾನು ಖಂಡಿತ ಚನ್ನಾಗಿ ನೋಡಿಕೊಳ್ಳುತ್ತೇನೆ. ಬದುಕಿನಲ್ಲಿ ನೋವು ಬರದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳುವುದಿಲ್ಲ. ನೋವುಗಳು ಆಕಸ್ಮಿಕವಂತೆ. ಥಟ್ಟನೆ ಬಂದು ಕಾಡುತ್ತವೆ. ಆದರೆ ಇಂತಹ ನೋವಿನ ಕ್ಷಣದಲ್ಲಿ ನಾನು ನಿನ್ನ ಜೊತೆಗೆ ಇರುತ್ತೇನೆ. ಕೈಹಿಡಿದು ಜೊತೆಗೆ ಸಾಗುತ್ತೇನೆ. ನಾನು ಒಳ್ಳೆ ಜಾಬ್ ಹಿಡಿಯಬೇಕು ಎಂದಿದ್ದೆ. ಖಂಡಿತ ಗೆಳತಿ, ನಾನು ನಿನ್ನ ಪಾಲಿಗೆ ಏಣಿಯಾಗುತ್ತೇನೆ. ನೀನು, ನಿನ್ನ ಕುಟುಂಬ, ನಾನು ಹಾಗೂ ನನ್ನ ಕುಟುಂಬ ಒಟ್ಟಾಗಿ ಖುಷಿಯಿಂದ ಬಾಳು ನಡೆಸಬೇಕು ಎನ್ನುವ ಕನಸು ನನ್ನದು. ನನಗೆ ನನ್ನ ಕುಟುಂಬ ಬೇರೆ ಅಲ್ಲ. ನಿನ್ನ ಕುಟುಂಬವೂ ಬೇರೆಯಲ್ಲ. ನಿನ್ನ ಅಪ್ಪ ಅಮ್ಮ ನನಗೂ ಅಪ್ಪ ಅಮ್ಮನಂತೆ ಅಲ್ಲವಾ? ಎಂದು ನಾನು ಕೇಳಿದ್ದಿನ್ನೂ ಕಿವಿಯಲ್ಲಿ ಮತ್ತೆ ಮತ್ತೆ ನೆನಪಾಗುತ್ತಿದೆ.
                 ನಿನ್ನ ಹತ್ತಿರ ಮಾತಾಡಬೇಕು ಸಿಗು ಅಂದಿದ್ದೆ ನಾನು. ಅದೆಷ್ಟೋ ಸಾರಿ ನಿನ್ನ ಹತ್ತಿರ ಕೇಳಿಕೊಂಡ ನಂತರ ಸಿಗಲು ನೀನು ಒಪ್ಪಿದ್ದೆ. ಆದರೆ ನೀನು ಜೊತೆಯಲ್ಲಿದ್ದಾಗ ಮಾತ್ರ ಏನನ್ನೂ ಮಾತನಾಡಲಿಕ್ಕೆ ಆಗಿರಲೇ ಇಲ್ಲ. ಎಷ್ಟೆಲ್ಲ ಮಾತನಾಡುವುದು ಬಾಕಿ ಇತ್ತು. ಆದರೆ ನಿನ್ನೆದುರು ನನ್ನ ಮಾತು ಹೊರಡಲೇ ಇಲ್ಲ. ಸುಮ್ಮನೇ ಉಳಿದಿದ್ದೆ ನಾನು. ನೀನು ಮಾತನಾಡುತ್ತಿದ್ದರೆ ನಾನು ನಿನ್ನನ್ನು ನೋಡುತ್ತ ಕುಳಿತಿರುತ್ತಿದ್ದೆ. ಬಹುಶಃ ಈ ಪತ್ರ ಬರೆಯಲು ಅದೇ ಕಾರಣ ಇರಬೇಕು ನೋಡು. ನಾನು ಬಾಯಲ್ಲಿ ಆಡಲು ಸಾಧ್ಯವಾಗದ ಮಾತುಗಳನ್ನೆಲ್ಲ ಅಕ್ಷರ ರೂಪದಲ್ಲಿ ಇಡುತ್ತಿದ್ದೇನೆ.
                 ಮತ್ತೊಮ್ಮೆ.. ಮಗದೊಮ್ಮೆ ಹೇಳುತ್ತೇನೆ ಬೆಳಕೇ.. ನಾ ನಿನ್ನ ಇಷ್ಟಪಟ್ಟಿದ್ದೇನೆ. ಮನದಲ್ಲಿ ನಿನ್ನದೊಂದು ಗುಡಿ ಭದ್ರವಾಗಿ ಸ್ಥಾಪನೆಯಾಗಿಬಿಟ್ಟಿದೆ. ನಾವು ಮುಂದೆ ಅದೆಷ್ಟೋ ವಸಂತಗಳನ್ನು ಜೊತೆಯಾಗಿ ಬಾಳಬೇಕಿದೆ. ಒಟ್ಟಾಗಿ ಹೆಜ್ಜೆ ಹಾಕಬೇಕಿದೆ. ನಾನು ಮುಂದಿನ ಬದುಕಿನ ತುಂಬ ನಿನ್ನ ಜೊತೆಗೆ ಆಸರೆಯಾಗಿ ಇರುತ್ತೇನೆ. ನೀನು ನನಗೆ ಜೊತೆಯಾಗಿರು. ಕಷ್ಟದಲ್ಲಿ, ಸುಖದಲ್ಲಿ, ಶಾಂತಿ, ನೆಮ್ಮದಿಯಲ್ಲಿ ಇಬ್ಬರೂ ಒಟ್ಟಾಗಿ ಸಾಗೋಣ. ಒಲವಿನ ಜೊತೆಗೆ ಜೀವನ ನಡೆಸೋಣ. ಒಲವನ್ನು ಕೊಟ್ಟು, ಒಲವನ್ನು ಪಡೆದು ನಡೆಯೋಣ. ಬೆಳಕಿನ ಹುಡುಗಿ.. ನನ್ನ ಬಾಳಲ್ಲಿ ಎಂದಿಗೂ ಬೆಳಕಿನಂತಿರು. ಜೊತೆಯಾಗಿರು.
                   ನಂಗೆ ಸಮಯ ಬೇಕು ಅಂದಿದ್ದೆ.. ತಗೋ.. ಆಲೋಚನೆ ಮಾಡು.. ಯಾವುದೇ ಅಳುಕು ಬೇಡ. ಭಯ ಬೇ...ಡ.. ನಿನ್ನ ಜೊತೆಗೆ ನಾನಿದ್ದೇನೆ. ಸಮಸ್ಯೆಯನ್ನು ಒಟ್ಟಾಗಿ ಪರಿಹಾರ ಮಾಡೋಣ. ಜೊತೆಗೆ ಹೆಜ್ಜೆಹಾಕೋಣ. ಬೇಗನೆ ನನಗೆ ಉತ್ತರ ಕೊಡು. ಖುಷಿ ಖುಷಿಯಾಗಿ ಜೀವನ ಸವೆಸೋಣ. ಮತ್ತೆ ಮತ್ತೆ ಹಸಿರಾಗೋಣ. ಬೇಗ ುತ್ತರ ಕೊಡು. ನೀ ಕೊಡುವ ಉತ್ತರ ನನ್ನ ಪಾಲಿಗೆ ಹಸಿರಾಗಿರಲಿ, ಉಸಿರಾಗಿರಲಿ. ಬರಡು ಮಾಡದೇ ಇರಲಿ.

ಇಂತಿ ನಿನ್ನವನು
ವಿನಯವಂತ        

Saturday, March 7, 2015

ಮಿನಿ ಹನಿಗಳು

ಮಾರುತಿ ಕಾರು

ಹವ್ಯಕನಿಗೆ ಹಣ ಬರತೊಡಗಿದರೆ
ಕೊಳ್ಳುವನು ಮಾರುತಿ ಕಾರು |
ಹಣ ಖಾಲಿಯಾದರೆ ಮಾತ್ರ
ಕಾರು ಮಾರುತಿ ||

ಮಂತ್ರಿ ಭ್ರ(ನಿ)ಷ್ಟ

ಅವನೊಬ್ಬ ಮಂತ್ರಿ
ಪಕ್ಷಕ್ಕೆ ಬಹುನಿಷ್ಟ |
ಹಣದ ವಿಷಯದಲ್ಲಿ ಆತ
ಅಷ್ಟೇ  ಭ್ರಷ್ಟ ||

ಹಾಸ್ಯಕವಿ

ಅವನೊಬ್ಬ ಹಾಸ್ಯಕವಿ
ಅವನ ನಗೆ ಹನಿಗಳಿಗೆ
ಮಾತ್ರ, ನಗಿ ಎಂದು
ಹೇಳಬೇಕಷ್ಟೆ||

ಹಾವಿನ ವಿಷ

ಭೂಮಿಯ ಮೇಲೆ
ತೆವಳಿಯೂ ಕೂಡ
ಸಂಗ್ರಹಿಸಿದೆ ವಿಷ |
ಅದು ಯಮನ ಪಾಷ ||

ಬದಲಾವಣೆ

ಮೊದಲೊಮ್ಮೆ ಆಗಿತ್ತು
ಚಿನ್ನದ ಬೆಳೆ ವೆನಿಲ್ಲಾ |
ಈಗ ಅದು ಆಗಿದೆ
ಬೆಳೆದವನಿಗೆ ಏನಿಲ್ಲಾ ||

Friday, March 6, 2015

ಬೆಣಚುಕಿಂಡಿ

ಪದೇ ಪದೆ ಇಣುಕುವಿಕೆ
ಹೊಸದೊಂದು ಲೋಕ-ಅರ್ಥವನ್ನೇ
ಕಟ್ಟಿ ಕೊಟ್ಟೀತು |

ಒಮ್ಮೆ ಕಪ್ಪು-ಬಿಳುಪು, ಮತ್ತೊಮ್ಮೆ
ವರ್ಣಮಯ|  ಒಮ್ಮೆ ಸರ್ವಸುಖ
ಮತ್ತೊಮ್ಮೆ ಜೀವಚ್ಛವ ||

ಒಮ್ಮೊಮ್ಮೆ ಕತ್ತಲು, ಅರೆಘಳಿಗೆ
ಬೆಳಕು, ಇಣುಕು ನೋಟದಲ್ಲೇ
ಬದುಕು-ಬಿರುಕು ||

ನಿಜ. ಬೆಣಚು ಕಿಂಡಿಯೇ ಹೀಗೆ
ಅನಂತ ವಿಶ್ವಕ್ಕೊಂದು ಚೌಕಟ್ಟು
ಚಿಕ್ಕ, ಚೊಕ್ಕ ಪರೀಧಿ ||

ಅಲ್ಲ... ಅಂಕೆಗೆ ನಿಲುಕದ,
ವಿಶ್ವವನ್ನು ಹಿಡಿದು ಕಣ್ಣೆದುರು
ಕಟ್ಟುಕೊಟ್ಟು ಬಿಡುತ್ತದೆ ||

***

(ಈ ಕವಿತೆಯನ್ನು 13-04-2007ರಂದು ದಂಟಕಲ್ಲಿನಲ್ಲಿ ಬರೆದಿದ್ದೇನೆ)

Wednesday, March 4, 2015

ಅಘನಾಶಿನಿ ಕಣಿವೆಯಲ್ಲಿ-14

              `ದೇವಸ್ತಾನಕ್ಕೆ ನಾನು ಹಾಗೂ ದೀಪು ಇಬ್ಬರೂ ಹೋಗಿದ್ವಿ. ದೇವಸ್ತಾನದಲ್ಲಿ ಸಿಕ್ಕಾಪಟ್ಟೆ ಜನ ಇದ್ದರು. ನಾನು ದೇವಸ್ತಾನದ ಒಳಕ್ಕೆ ಹೋದೆ. ಹಿಂದೆಯೇ ಉಳಿದುಕೊಂಡ ಪ್ರದೀಪ ಅದೆಲ್ಲೋ ತಪ್ಪಿಸಿಕೊಂಡುಬಿಟ್ಟ. ನಂತರ ದೇವಸ್ತಾನ, ಅಲ್ಲಿ ಇಲ್ಲಿ ಎಲ್ಲ ಕಡೆಗೆ ಹುಡುಕಿದೆ. ಬಹಳ ಹೊತ್ತು ಕಾದೆ. ಆದರೆ ಸಿಗಲಿಲ್ಲ. ಕೊನೆಗೆ ಬಸ್ ಸ್ಟಾಂಡಿಗೆ ಬಂದು ಇಲ್ಲಿ ಹುಡುಕಿದರೆ ಇಲ್ಲಿಯೂ ಇಲ್ಲ ಮಾರಾಯಾ.. ಎಲ್ಲಿಗೆ ಹೋಗಿಬಿಟ್ಟನೋ.' ಎಂದ ವಿನಾಯಕ.
             `ಹೌದಾ.. ಥೋ.. ಇದೊಂದು ಹೊಸ ತಲೆಬಿಸಿ ಬಂತಲಾ ಮಾರಾಯ... ಬಾ ಮೊದ್ಲು ಹುಡ್ಕನ.. ನಮಗೆಲ್ಲ ಶಿರಸಿ ಗೊತ್ತಿದ್ದು. ಅವಂಗೆ ಗೊತ್ತಿಲ್ಲೆ. ಎಲ್ಲಿ ಅಲೆದಾಡ್ತಾ ಇರ್ತ್ನೋ.. ಬನವಾಸಿ ರೋಡು ಹಿಡಿದು ಹೋದ್ನಾ ಎಂತದೇನ ಮಾರಾಯಾ.. ಥೋ..' ಎಂದು ಗೊಣಗಾಡುತ್ತ ಎಲ್ಲರ ಜೊತೆ ಸೇರಿ ಹುಡುಕಾಡತೊಡಗಿದ ವಿಕ್ರಮ.
             ಅರ್ಧ ತಾಸಿನ ಹುಡುಕಾಟದ ನಂತರ ಪ್ರದೀಪ ಸಿಕ್ಕ. ಅದ್ಯಾವುದೋ ಬಝಾರ ರಸ್ತೆಯಿಂದ ಬಸ್ ಸ್ಟಾಂಡ್ ಕಡೆಗೆ ನಡೆದುಕೊಂಡು ಬರುತ್ತಿದ್ದ. ಹುಡುಕುತ್ತಿದ್ದವರು ನಿರಾಳರಾದರು. `ಲೇ ಹಲ್ಕಟ್.. ಎಲ್ಲಿ ಹಾಳ್ ಬಿದ್ದು ಹೋಗಿದ್ಯಲೆ..' ಎಂದು ಬೈದ ವಿಕ್ರಮ
           `ಇಲ್ಲ ಮಾರಾಯಾ.. ದೇವಸ್ತಾನದಲ್ಲಿ ಸಿಕ್ಕಾಪಟ್ಟೆ ಜನ ಇದ್ದರು. ವಿನಾಯಕ ತಪ್ಪಿಹೋದ. ದೇವಸ್ತಾನದ ತುಂಬೆಲ್ಲ ಹುಡುಕಾಡಿದೆ. ಕಾಣಿಸಲಿಲ್ಲ. ನನ್ನನ್ನು ಹುಡುಕುತ್ತಾ ಇರಬೇಕು ಅಂತ ಎಲ್ಲ ಕಡೆ ಹುಡುಕಾಡುತ್ತ ಬಂದೆ. ಕೊನೆಗೆ ಬಸ್ ನಿಲ್ದಾಣದ ಬಳಿ ಇರಬೇಕು ಎಂದುಕೊಂಡು ಬಂದರೆ ಕಾಣಿಸಲಿಲ್ಲ ನೋಡು. ಎಲ್ಲಿ ಹೋದರೂ ಇಲ್ಲಿ ಬರ್ತಾರಲ್ಲಾ ಅಂದುಕೊಂಡು ನಾನೇ ಬರ್ತಾ ಇದ್ದಾಗ ಇದೋ ನೀವು ಸಿಕ್ಕಿದ್ರಿ ನೋಡಿ..' ಎಂದ ಪ್ರದೀಪ.
           ವಿಕ್ರಮನಿಗೆ ಪ್ರದೀಪ ಯಾಕೋ ಸುಳ್ಳು ಹೇಳುತ್ತಿದ್ದಾನೆ ಅನ್ನಿಸಿತು. ಅಲ್ಲದೇ ಅಪರಿಚಿತ ಪ್ರದೇಶದಲ್ಲಿ ಕಾಣೆಯಾದಾಗ ಇರಬೇಕಾದಂತಹ ಗಾಬರಿ, ಭಯ ಇತ್ಯಾದಿ ಭಾವನೆಗಳು ಪ್ರದೀಪನ ಮುಖದ ಮೇಲೆ ಇರಲಿಲ್ಲ. ವಿಕ್ರಮ ಇದನ್ನು ಗಮನಿಸಿದ್ದ. ಕೊನೆಗೊಮ್ಮೆ ಅವರೆಲ್ಲರೂ ಶಿರಸಿಯಿಂದ ವಾಪಾಸಾದರು.
           ಯಾರಿಗೂ ಮಾರಿಕಾಂಬಾ ದೇವಸ್ತಾನದ ರಸ್ತೆಯೇ ಬೇರೆ, ಪ್ರದೀಪ ಬಸ್ ಸ್ಟಾಂಡ್ ಕಡೆಗೆ ಆಗಮಿಸುತ್ತಿದ್ದ ಬಝಾರಿನ ರಸ್ತೆಯೇ ಬೇರೆ ಎನ್ನುವ ಅನುಮಾನ ಬರದೇ ಇರುವುದು, ಪ್ರದೀಪನನ್ನು ಹೆಚ್ಚಿಗೆ ವಿಚಾರಣೆ ನಡೆಸದೇ ಇರುವುದು ಕಥೆಯ ಮುಂದಿನ ಬಹುದೊಡ್ಡ ತಿರುವಿಗೆ ಕಾರಣವಾಗಿತ್ತು. ಪ್ರದೀಪ ಮಾತ್ರ ದೊಡ್ಡ ಸಮಸ್ಯೆಯಿಂದ ಪಾರಾದಂತಹ ಸಂತಸವನ್ನು ಅನುಭವಿಸಲು ಆರಂಭಿಸಿದ್ದ. ಆ ದಿನ ಎಪ್ರಿಲ್ 15 ನೇ ತಾರೀಕಾಗಿತ್ತು.

***

          ವಿಕ್ರಂ ಕೊನೆಗೊಂದು ದಿನ ವಿನಾಯಕನಿಗೆ ತಮ್ಮ ತಂಡ ಯಾವ ಕಾರಣಕ್ಕಾಗಿ ಶಿರಸಿ, ದಂಟಕಲ್ಲಿಗೆ ಆಗಮಿಸಿದೆ ಎನ್ನುವುದರ ಕಾರಣವನ್ನು ತಿಳಿಸಿದ. ವಿನಾಯಕ ಅದಕ್ಕೆ ಪ್ರತಿಯಾಗಿ ತನ್ನ ಸಹಾಯ ಯಾವಾಗಲೂ ಸಿಗುತ್ತದೆ. ಜೊತೆಯಲ್ಲಿ ಈ ವಿಷಯವನ್ನು ಮತ್ತಿನ್ಯಾರಿಗೂ ತಿಳಿಸುವುದಿಲ್ಲ ಎಂದೂ ಹೇಳಿದ.

****12****

            `ತಮಾ.. ದ್ಯಾವನ್ನ ಕರ್ಕಂಡು ಹೋಗಿ ನಿಂಗವೆಲ್ಲಾ ನಮ್ಮೂರ ಕಾನನ್ನು ಸುತ್ತಾಡ್ಕ್ಯಂಡ್ ಬರ್ರಾ...' ಎಂದು ಶ್ರೀಕಂಠ ಹೆಗಡೆಯವರು ಹೇಳಿದಾಗ ಎಲ್ಲರನ್ನೂ ಕರೆದುಕೊಂಡು ಕಾಡಿನ ಕಡೆಗೆ ಹೊರಟ ವಿನಾಯಕ ಶ್ರೀರಾಮಚಂದ್ರ ಕಪಿಗಳೊಡನೆ ಲಂಕೆಗೆ ಹೊರಟಂತೆ.
             ದ್ಯಾವ ತಂಡಕ್ಕೆ ಮುಂದಾಳು. ಇಡಿಯ ಮೈಗೊಂದು ಬಿಳಿಯ ನಿಲುವಂಗಿ, ಸೊಂಟಕ್ಕೊಂದು ಕೊಳಕಾದ ಪಂಚೆ ಇವಿಷ್ಟು ದ್ಯಾವನ ವಸ್ತವಿನ್ಯಾಸಗಳಾಗಿದ್ದವು. ಸೊಂಟಕ್ಕೊಂದು ಅಂಡುಗೊಕ್ಕೆ ಕಟ್ಟಿಕೊಂಡು ಅದಕ್ಕೆ ಕತ್ತಿಯನ್ನು ತೂಗು ಹಾಕಿದ್ದ. ದ್ಯಾವ ಮುಂದೆ ಮುಂದೆ ಹೋದಂತೆಲ್ಲ ಆ ಕತ್ತಿ ಲಟ ಲಟ ಎಂದು ಸದ್ದು ಮಾಡುತ್ತಿತ್ತಲ್ಲದೇ ದ್ಯಾವನ ಕಾಲಿಗೆ ಬಡಿಯುತ್ತಿತ್ತು. ಹೆಗಲ ಮೇಲೆ ಮಾರುದ್ದದ ಕೋಲನ್ನು ಹೊತ್ತು ನಡೆಯುತ್ತಿದ್ದ ದ್ಯಾವನಿಗೆ ಕನಿಷ್ಟ 50 ವರ್ಷಗಳಾಗಿವೆ. ಆತನ ಅಸಲೀ ವಯಸ್ಸು ಎಷ್ಟೆನ್ನುವುದು ಯಾರಿಗೂ ಗೊತ್ತಿಲ್ಲ. `ನಾನು ಚಿಕ್ಕವನಿದ್ದಾಗ ಹೇಗಿದ್ದನೋ.. ಈಗಲೂ ದ್ಯಾವ ಹಾಗೆಯೇ ಇದ್ದಾನೆ..' ಎಂದು ವಿನಾಯಕ ದ್ಯಾವನ ಬಗ್ಗೆ ಹೇಳಿಬಿಟ್ಟಿದ್ದ.
              ದ್ಯಾವನ ಬಳಿಯೇ ವಯಸ್ಸನ್ನು ಕೇಳಿದರೆ ಮೂರು ಮೂವತ್ತು ವಯಸ್ಸಾಯಿತು ಎನ್ನುತ್ತಾನೆ. ಮೂರು ಮೂವತ್ತು ಅಂದರೆ 90 ವರ್ಷ ವಯಸ್ಸಾಗಿರಬೇಕು. ತಮಾಷೆ ಮಾಡಬೇಡ ದ್ಯಾವ.. ನಿನ್ ವಯಸ್ಸೆಷ್ಟು ಎಂದು ಕೇಳಿದರೆ `ಅದನ್ನು ಕಟ್ಟಿಗ್ಯಂಡು ಎಂತಾ ಮಾಡ್ತೀರಿ ನೀವು ಹೇಳಿ..' ಎಂದು ಸಾಗಹಾಕುತ್ತಾನೆ. ಶ್ರೀಕಂಠ ಹೆಗಡೆಯವರು ಹೇಳಿದ ಪ್ರಕಾರ ದ್ಯಾವ ತನಗಿಂತ ದೊಡ್ಡವನು ಎಂಬುದು ಪಕ್ಕಾ. ವಯಸ್ಸು ಬಹಳ ಆಗಿದ್ದರೂ ಆತನ ತಲೆಗೂದಲು ನೆರೆತಿರಲಿಲ್ಲ. ಆತನ ಮೈಬಣ್ಣ  ಬಿಸಿಲಿನಲ್ಲಿ ಕೆಲಸ ಮಾಡಿ ಅದೆಷ್ಟು ಕಪ್ಪಗಾಗಿತ್ತೋ, ತಲೆಗೂದಲೂ ಕೂಡ ಅದೇ ರೀತಿ ಇತ್ತು. ಇಂತಹ ದ್ಯಾವ ಗ್ರಾಮೀಣ ಭಾಗದ ವಿಶ್ವಕೋಶ. ಕಾಡಿನ ಬಗ್ಗೆ ತಿಳಿದುಕೊಳ್ಳದ ವಿಷಯವೇ ಇಲ್ಲ. ಇಂತಹ ಮುಂದಾಳುಗಳನ್ನು ಹೊಂದಿದ್ದರೆ ಯಾರು ತಾನೆ ಕಾಡಿನಲ್ಲಿ ಭಯದಿಂದ ನಡೆಯುತ್ತಾರೆ?
             ದ್ಯಾವನ ಹಿಂದೆ ವಿಕ್ರಮ, ವಿನಾಯಕ, ವಿಷ್ಣು ಹಾಗೂ ಪ್ರದೀಪರು ವೀರ ಸೇನಾನಿಗಳಂತೆ ಮುಂದಕ್ಕೆ ಹೊರಟರು. ಈ ನಾಲ್ವರು ಗಂಭೀರವಾಗಿ ಮುಮದೆ ಸಾಗುತ್ತಿದ್ದರೆ ರಮ್ಯಾ, ಸ್ನೇಹ, ವಿಜೇತರ ಗುಂಪು ರಾಣೀವಾಸದ ಗುಂಪಿನಂತೆ ಕೇಕೆಯೊಂದಿಗೆ ಸಾಗುತ್ತಿತ್ತು. ಮುಂದಿದ್ದವರ ಸಾಲು ಯುದ್ಧಕ್ಕೆ ಹೊರಟವರಂತಿದ್ದರೆ ಹಿಂದಿದ್ದವರ ಸಾಲು ಯುದ್ಧಕ್ಕೆ ರಣಕಹಳೆಯನ್ನು ಊದುತ್ತಿದ್ದ ಹಾಗಿತ್ತು.
             `ಹೋಯ್.. ಸ್ವಲ್ಪ ಸುಮ್ಮಂಗ್ ಬನ್ನಿ ನೋಡ್ವಾ.. ಬರೀ ಕಚಾ ಪಚಾ ಹಲ್ಬಕಂತ ಬರ್ಬೇಡಿ.. ಅದೆಂತಾ ಗಲಾಟೆ ಮಾಡ್ಕಂತ ಬರ್ತೀರಿ..?' ಎಂದು ದ್ಯಾವ ಅಸಹನೆಯಿಂದ ಗದರಿದಾಗಲೇ ಮಹಿಳಾ ಮಣಿಗಳು ಸುಮ್ಮನಾಗಿದ್ದು.
              `ಕಾನ್ ನೋಡಕ್ಕೆ ಅಂತ ಬಮದ್ ಕಂಡು ಹಿಂಗ್ ಕೂಗ್ತಾ ಬರ್ತಾ ಇದ್ರೆ ಕಾಡ್ನಾಗೆ ಯಾವುದೇ ಪ್ರಾಣಿ ಇದ್ರೂ ಓಡಿ ಹೋಗ್ತದೆ. ನಿಮಗೆಂತ ಮಣ್ಣೂ ಸಿಗಾದಿಲ್ಲ ನೋಡಿ.. ಹಗಲ್ನಾಗೆ ಎಂತಾದ್ರೂ ಓಡಾಡ್ತಾ ಇದ್ರೆ ಅವೆಲ್ಲ ನಾಪತ್ತೆಯಾಗ್ತವೆ.. ಸ್ವಲ್ಪ ಸುಮ್ಮಂಗಿರಿ ನೋಡ್ವಾ..' ಎಂದು ಮತ್ತೊಮ್ಮೆ ಹೇಳಿದ ದ್ಯಾವ.
              `ದ್ಯಾವ ಇಲ್ಲಿ ಹುಲಿ ಉಂಟಾ..?' ಎಂದು ಕೇಳಿದಳು ವಿಜೇತಾ.
              `ಹೌದಮ್ಮಾ. ಈ ಕಾನಿನಾಗೆ ಮೂರು ಐತೆ. ಈಗ ಬ್ಯಾಸ್ಗೆ ಬಂತಲ್ರಾ.. ಹಂಗಾಗಿ ಕಣ್ಣಿಗ್ ಕಾಣೂದಿಲ್ಲಾ. ಮಳೆ ಮುಗದು ಚಳಿಗಾಲ ಬಂದ್ ತಕ್ಷಣ ಈ ಕಡೆಗೆ ಬರ್ತಾವೆ ನೋಡಿ. ಖಾಯಂ ಇಲ್ಲಿ ಇರೋದಿಲ್ಲ. ಮತ್ತೀಹಳ್ಳಿ, ನಿಲ್ಕುಂದ, ಭತ್ತಗುತ್ತಿಗೆ, ಹೆಗ್ಗರಣಿ ಹಿಂಗೆ ಸುತ್ತಾಡ್ತಾ ಇರ್ತಾವೆ. ಆದರೆ ಗಮಯಾ, ಹಂದಿ, ಬರ್ಕ, ಜಿಂಕೆ, ಮಿಕ ಇವೆಲ್ಲ ಐತೆ. ಆವಾಗಾವಾಗ ಕಾಣ್ತಾ ಇರ್ತದೆ ..' ಎಂದ ದ್ಯಾವ.
               `ನೀ ನೋಡಿದ್ಯಾ ಹುಲಿನಾ..?' ಎಂದು ಕೇಳಿದಳು ಆಕೆ.
               `ಹೌದಮ್ಮಾ.. ಸುಮಾರ್ ಸಾರಿ ಕಂಡೀನಿ. ನಾನು ಜೇನು ಕುಯ್ಯಾಕೆ ಹೋಗ್ತಿದ್ದಾಗೆಲ್ಲಾ ಕಾಣ್ತಿದ್ವು ಅವು..' ಎಂದ ಆತ.
                `ಆಗೆಲ್ಲಾ ನಿಂಗೆ ಭಯ ಆಗಿಲ್ವಾ..?'
                `ಹೋಗ್ರಮ್ಮಾ.. ನಾವ್ಯಾಕೆ ಹೆದರ್ಕಬೇಕು ಹುಲಿಗೆ.. ಹೆದರುವಂತದ್ದು ನಾವೇನಾದ್ರೂ ಮಾಡಿದ್ದೀವಾ ಹುಲಿ ಗೆ.. ಸುಮ್ಮ ಸುಮ್ಮನೆ ನಮ್ಮ ಮೇಲೆ ದಾಳಿ ಮಾಡಲಿಕ್ಕೆ ಹುಲಿಗೆ ತಲೆ ಹನ್ನೆರಡಾಣೆ ಆಗಿರ್ತದಾ? ನೋಡ್ರಮ್ಮಾ.. ಮನುಷ್ಯರಾದ್ರೆ ಸೊಕಾ ಸುಮ್ಮನೆ ಮೈಮೇಲೆ ಬರ್ತವೆ ಅನ್ನಬೌದು. ಆದರೆ ಹುಲಿ ಹಂಗಲ್ಲ ನೋಡಿ.. ನಾವೇನೂ ಮಾಡದೇ ಅದು ನಮ್ಮ ಮೈಮೇಲೆ ಏರಿ ಬರುವುದಿಲ್ಲ. ಅದರ ಪಾಡಿಗೆ ಅದು ಇರ್ತದೆ ನಮ್ಮ ಪಾಡಿಗೆ ನಾವಿರ್ತೇವೆ..' ಎಂದ ದ್ಯಾವ. ವಿಜೇತಾಳಿಗೆ ಅವನ ಮಾತು ಹೌದೆನ್ನಿಸಿತು.
               ನಂತರ ಮಾತುಗಳು ಕಾಡೆಮ್ಮೆ ಹಾಗೂ ಉಳಿದ ಪ್ರಾಣಿಗಳ ಬಗೆಗೆ ಸರಿಯಿತು. ವಿನಾಯಕ ತಾನು ಕಾಲೇಜು ಓದುತ್ತಿದ್ದ ಸಂದರ್ಭದಲ್ಲಿ ಕಾಲೇಜಿಗೆ ಹೋಗುವಾಗ ಪದೇ ಪದೆ ಕಾಡೆಮ್ಮೆ, ಜಿಂಕೆಗಳಿಗೆ ಎದುರಾ ಬದರಾಗುತ್ತಿದ್ದುದನ್ನು ಹೇಳಿದ. ಕೆಲವು ಸಾರಿ ಮನೆಯ ಪಕ್ಕದಲ್ಲಿಯೇ ಸೀಳುನಾಯಿಗಳ ಹಿಂಡು ಹಾದು ಹೋಗುತ್ತದೆ ಎನ್ನುವುದನ್ನೂ ಹೇಳಿದ. ಆತ ಕಾಡಿನ ಕತೆಗಳನ್ನು ವಿವರಿಸಿ ವಿವರಿಸಿ ಹೇಳುತ್ತಿದ್ದರೆ ಉಳಿದವರು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದರು.             

ಒಮ್ಮೆ ತಿರುಗಿ ನೋಡು

ಗೆಳತಿ ನೀನು ನನ್ನ ಕಡೆಗೆ
ಒಮ್ಮೆ ತಿರುಗಿ ನೋಡು
ಬದುಕಿ ನಾವು ಬಾಳಬೇಕು
ಸದಾ ಕಾಲ ಜೋಡು ||

ಸದಾ ಕಾಲ ಜೊತೆಗಿರಲಿ
ನಿನ್ನದೊಂದು ಕಿರುನಗು
ಕಳೆದು ಬಿಡಲಿ ಕಷ್ಟ ದು:ಖ
ಶತಮಾನದ ಬಿಗು ||

ಮುನ್ನಡೆಯುವ ಮುನ್ನ ನನ್ನ
ತಿರುಗಿ ನೋಡು ಗೆಳತಿ
ತುಂಬಿಕೊಂಡು ನಿಂತಿರುವೆ
ನನ್ನೊಳಗೆ ಪ್ರೀತಿ ||

ಹುಸಿಮುನಿಸ ಮರೆತು ಬಿಡು
ನಾನಿರುವೆ ಜೊತೆಗೆ
ಜೊತೆಗೆ ನೀನು ಹೆಜ್ಜೆ ಹಾಕು
ಮೆರೆದು ಬಿಡಲಿ ಒಸಗೆ ||

***
(ಈ ಕವಿತೆಯನ್ನು ಬರೆದಿರುವುದು 04-03-2014ರಂದು ಶಿರಸಿಯಲ್ಲಿ)

Monday, March 2, 2015

ದಾರಿ ಸಾಗುವಾಗ

ದೂರ ಸಾಗುವ ದಾರಿಯಲ್ಲಿ
ಹಿಂತಿರುಗಿ ನೋಡು ಗೆಳೆಯಾ
ಕಾಣುವವು ಕಳೆದ ಹಲವು
ಕಷ್ಟಗಳ ಪರೀಧಿ, ಛಲ, ಗೆಲುವು ||

ದೂರ ಸಾಗಿದಾಗ ಪಡೆದ ಗೆಲುವಿಗೆ
ಸಹಾಯ ಹಲವರದು
ಅವರ ಪ್ರೀತಿಯ ಕಾಣ್ಕೆ
ನಿನ್ನೀ ಗೆಲುವಿನ ಉಡುಗೊರೆ ||

ಗೆದ್ದು ಆಗಸವ ಮುಟ್ಟುವಾಗ
ಏರಿದೇಣಿಯ ಮರೆಯಬೇಡ..
ಕೊನೆಮುಟ್ಟಿ ಗೆದ್ದು ನಿಂತಾಗ
ಕಾಲಕೆಳಗಿನೇಣಿಯ ಒದೆಯಬೇಡ ||

ನೆನಪಿರಲಿ, ತಂದೆ-ತಾಯಿ ಪ್ರೀತಿ
ಬಿದ್ದಾಗಲೆತ್ತಿದವರ ನೆನಪು
ಕೈ ಹಿಡಿದು ನಡೆಸಿದವರು, ಜೊತೆ
ಸಾಕಿ ಬಾಳ ಸಲಹಿದವರು ||

ದೂರ ಸಾಗುವ ದಾರಿಯಲ್ಲಿ
ಎಲ್ಲರ ಜೊತೆ ಇರಲಿ ಗೆಳೆಯಾ.
ಜೊತೆ ಬಂದವರ ತೊರೆಯದೇ
ಅವರ ನೀ ಸಲಹು ಗೆಳೆಯಾ ||

****

(ಈ ಕವಿತೆಯನ್ನು ಬರೆದಿರುವುದು 05-10-2006ರಂದು ದಂಟಕಲ್ಲಿನಲ್ಲಿ)
(ಈ ಕವಿತೆಯನ್ನು ಆಕಾಶವಾಣಿ ಕಾರವಾರದಲ್ಲಿ ವಾಚನ ಮಾಡಲಾಗಿದೆ)

Sunday, March 1, 2015

ಹೊಸದಷ್ಟು ಹನಿಗಳು

ವೆಂಕಿಯ ಬೆಂಕಿ

ಭಾರತದ ಅದ್ಭುತ ಬೌಲರ್ ವೆಂಕಿ
ಅವನೆಂದರೆ ಪಾಕಿಸ್ತಾನಕ್ಕೆ ಬೆಂಕಿ |
ವೆಂಕಿಗೆ ಬಂದರೆ ಸಿಟ್ಟು
ಬೀಳುತ್ತಿತ್ತು ಅಮೀರ್ ಸೊಹೈಲ್ ವಿಕೆಟ್ಟು ||

ನಕ್ಷತ್ರಗಳ ಸುತ್ತುವಿಕೆ

ವಿಶ್ವದೆಲ್ಲೆಡೆಯಲ್ಲಿ
ನಕ್ಷತ್ರಗಳು ಸುತ್ತುತ್ತವೆ
ಎಂದು ವಿಜ್ಞಾನಿಗೆ ತಿಳಿದಿದ್ದು ಹೇಗೆ?
ಬಹುಶಃ ಅವನ ಹೆಂಡತಿ
ಲಟ್ಟಣಿಗೆಯಿಂದ ತಲೆಗೆ ಬಡಿದಾಗ
ಸುತ್ತಲೂ ನಕ್ಷತ್ರಗಳು ಸುತ್ತಿರಬೇಕು ||

ಮೊಡವೆ

ಮೊಡವೆ ಎಂದರೆ
ಹೆಣ್ಣು ಹುಡುಗಿಯ ಮೊಗದ
ಭಾವನೆಗಳು ಹೊರ ಹೋಗುವ
ಒಂದು way ||

ಬಸ್ಸಿನ ಪರಿಸ್ಥಿತಿ

ನಮ್ಮ ರಾಜ್ಯ ಸಾರಿಗೆಯ ಬಸ್ಸು
ಯಾವಾಗಲೂ ಹೋಗಲು ಬಯಸುತ್ತದೆ ಜೋರು |
ಆದರೆ ಏನು ಮಾಡಿದರೂ
ಸರಿಯಾಗಿ ಬೀಳುವುದೇ ಇಲ್ಲ ಇದರ ಗೇರು ||

ರೈತ

ರೈತನೆಂದರೆ ಬರೀ
ದುಡಿದು ಬೆಳೆಯುವವನಲ್ಲ |
ಕಾಲ ಬಂದಾಗ ಆತ
Riot ಕೂಡ
ಆಗಬಲ್ಲವ ಎಂದರ್ಥ ||


Saturday, February 28, 2015

ಮಲೆನಾಡಿನಲ್ಲೊಂದು ಅಪರೂಪದ ಕೆಂಡ ಹಾಯುವ ಕಾರ್ಯಕ್ರಮ

ಕೆಂಡದ ಮೇಲೆ ನಡೆಯುವುದು ಬಯಲು ಸೀಮೆಯಲ್ಲಿ ಸರ್ವೇ ಸಾಮಾನ್ಯ. ಜಾತ್ರೆಗಳಲ್ಲಿ ಕೆಂದ ಮೇಲೆ ನಡೆಯುವ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ಮಲೆನಾಡಿನಲ್ಲಿ ಇದು ಅಪರೂಪ. ಇಂತಹ ಅಪರೂಪದ ಕಾರ್ಯಕ್ರಮ ಸಿದ್ದಾಪುರ ತಾಲೂಕಿನ ಸರಕುಳಿಯಲ್ಲಿ ನಡೆಯಿತು.
ಮೇಲಿನ ಸರಕುಳಿ ಗ್ರಾಮದಲ್ಲಿ ಪ್ರತಿ ವರ್ಷ ಗ್ರಾಮದೇವಿಯ ಸನ್ನಿಧಾನದಲ್ಲಿ ಪರಿವಾರ ದೇವತೆಗಳಿಗೆ ವಾರ್ಷಿಕ ಕಾರ್ಯಕ್ರಮಗಳು ನಡೆಯುತ್ತವೆ. ಈ ಹಿನ್ನೆಲೆಯಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮುಂಜಾನೆ ಪರಿವಾರ ದೇವತೆಗಳ ಪೂಜೆಯಿಂದ ನಡೆದ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಇಡೀ ದಿನ ಮುಂದುವರಿದವು. ಮೇಲಿನ ಸರಕುಳಿಯಲ್ಲದೇ ತಟ್ಟೀಕೈ, ಕೆರೆಗದ್ದೆ, ಕಂಚೀಮನೆ, ತ್ಯಾರಗಲ್, ಗೋಳಿಕಟ್ಟಾ, ಮುಚುಗುಳಿ ಸೇರಿದಂತೆ ಸುತ್ತಮುತ್ತಲ ಗ್ರಾಮದ ಗ್ರಾಮಸ್ಥರು ಪಾಲ್ಗೊಂಡಿದ್ದರು.
                    ಕಳೆದ ಐದು ವರ್ಷಗಳಿಂದ ತಟ್ಟಿಕೈ ಬಳಿಯ ಮೇಲಿನ ಸರಕುಳಿ ಗ್ರಾಮದಲ್ಲಿ ಗ್ರಾಮದೇವಿಯ ವಾರ್ಷಿಕೋತ್ಸವದ ನಿಮಿತ್ತ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಕೆಂಡ ಹಾಯುವುದು ನಿಯಮಿತವಾಗಿ ನಡೆಯುತ್ತ ಬಂದಿದೆ. ಮಲೆನಾಡಿನಲ್ಲಿ ಅಪರೂಪ ಎನ್ನಿಸುವ ಕೆಂಡ ಹಾಯುವ ಕಾರ್ಯಕ್ರಮವನ್ನು ನೋಡುವ ಸಲುವಾಗಿಯೇ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಜನರು ಆಗಮಿಸುತ್ತಾರೆ. ಧಗ ಧಗನೆ ಉರಿಯುವ ಕೆಂಡದ ಮೇಲೆ ಯುವಕರು ನಡೆದುಕೊಂಡು ಹೋಗುತ್ತಿದ್ದರೆ ಸೇರಿದ್ದ ಜನರೆಲ್ಲ ದೇವರನ್ನು ಪ್ರಾರ್ಥಿಸುತ್ತ ನಿಲ್ಲುತ್ತಾರೆ. ದೇವರಿಗೆ ನಮಿಸಿ ತಮ್ಮನ್ನು ಕಷ್ಟಗಳಿಂದ ಪಾರುಮಾಡುವಂತೆ ಬೇಡಿಕೊಳ್ಳುತ್ತಾರೆ.
  ಪುರೋಹಿತರ ಸಾನ್ನಿಧ್ಯದಲ್ಲಿ ಚಂಡಿಕಾ ಪಾರಾಯಣ ನಡೆದ ನಂತರ ಮೇಲಿನ ಸರಕುಳಿ ಗ್ರಾಮದಲ್ಲಿಯೇ ಇರುವ 16 ದೇವ ಗಣಗಳನ್ನು ಊರಿನ ತುಂಬೆಲ್ಲ ಮೆರವಣಿಗೆಯ ಮೂಲಕ ಕೊಂಡೊಯ್ಯಲಾಯಿತು. ಸ್ಥಳೀಯ ಸುಬ್ರಹ್ಮಣ್ಯ ಕಟ್ಟೆಯ ಮೇಲೆ ದೇವರನ್ನು ಕೂರಿಸಿ ಹಲವಾರು ಧಾರ್ಮಿಕ ವಿಧಿ ವಿಧಾನಗಳನ್ನು ಕೈಗೊಳ್ಳಲಾಯಿತು. ನಂತರ ಕೆಂಡ ಹಾಯುವ ಸಲುವಾಗಿ ದೊಡ್ಡ ಕಟ್ಟಿಗೆಯ ರಾಶಿಗೆ ಅಗ್ನಿಸ್ಪರ್ಷ ಮಾಡಲಾಯಿತು. ಬೆಂಕಿಯ ಜ್ವಾಲೆ ಬಾನೆತ್ತರಕ್ಕೆ ಚಾಚುತ್ತಿರುವ ಸಂದರ್ಭದಲ್ಲಿಯೇ ಸಾರ್ವಜನಿಕ ಅನ್ನ ಸಂತರ್ಪಣೆ ಕಾರ್ಯಕ್ರಮಗಳೂ ನಡೆದವು.
ಅನ್ನ ಸಂತರ್ಪಣೆಯ ನಂತರ ಕೆಂಡ ಹಾಯುವ ಕಾರ್ಯಕ್ರಮ ನಡೆಯಿತು. ಮೆರವಣಿಗೆಯ ಸಂದರ್ಭದಲ್ಲಿ ದೇವರ ಗಣಗಳ ಮೂರ್ತಿಯನ್ನು ತಲೆಯ ಮೇಲೆ ಹೊತ್ತುಕೊಂಡು ಬಂದಿದ್ದ 16 ಜನ ಯುವಕರೂ ಸೇರಿದಂತೆ 20ಕ್ಕೂ ಅಧಿಕ ಜನರು ಉರಿಯುವ ಕೆಂಡದ ಮೇಲೆ ನಡೆದರು. ಉರಿವ ಕೆಂಡದ ಮೇಲೆ ನಡೆಯುವುದನ್ನು ಅದೆಷ್ಟೋ ಭಕ್ತರು ಕಣ್ತುಂಬಿಕೊಂಡರು. ಸ್ಥಳೀಯ ಗ್ರಾಮದೇವಿಯ ಮಹಿಮೆಯನ್ನು ಕೊಂಡಾಡಿದರು. ನಂತರ ಭಕ್ತರ ಶ್ರೇಯೋಭಿವೃದ್ಧಿಗಾಗಿ ಆಶ್ಲೇಷಾ ಬಲಿ ಹಾಗೂ ನಾಗಾರಾಧನೆ ಕಾರ್ಯಕ್ರಮಗಳು ನಡೆದವು. ನಡುರಾತ್ರಿ 2 ಗಂಟೆಯವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಮೇಲಿನ ಸರಕುಳಿಯಲ್ಲಿ ಕೆಂಡ ಹಾಯುವ ಕಾರ್ಯಕ್ರಮಕ್ಕೆ ಶತಮಾನಗಳ ಇತಿಹಾಸವಿದೆ. ಸ್ಥಳೀಯರ ಪ್ರಕಾರ ಹಿಂದೆ ಇದೇ ಊರಿನಲ್ಲಿ ಅದ್ಧೂರಿಯಾಗಿ ಕೆಂಡ ಹಾಯುವ ಕಾರ್ಯಕ್ರಗಳು ನಡೆಯುತ್ತಿದ್ದವಂತೆ.
                 ಗ್ರಾಮದೇವಿಗೆ ಭವ್ಯವಾದ ದೇವಸ್ಥಾನವಿದ್ದು ಮೂರ್ನಾಲ್ಕು ದಿನಗಳ ಕಾಲ ಅದ್ಧೂರಿ ಉತ್ಸವ ನಡೆಯುತ್ತಿತ್ತಂತೆ. ಆದರೆ ಕಾಲಾನಂತರದಲ್ಲಿ ದೇವಸ್ಥಾನ ಜೀರ್ಣವಾಯಿತು. ಕ್ರಮೇಣ ಗ್ರಾಮದಲ್ಲಿ ನಡೆಯುತ್ತಿದ್ದ ಉತ್ಸವಗಳೂ ನಿಂತು ಹೋದವು. ಆ ನಂತರ ಊರಿನಲ್ಲಿ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳಲು ಆರಂಭಿಸಿದವು. ಸಮಸ್ಯೆಗಳ ಪರಿಹಾರಾರ್ಥವಾಗಿ ಐದು ವರ್ಷಗಳ ಹಿಂದೆ ದೇವಸ್ಥಾನವನ್ನು ಮತ್ತೆ ಜೀರ್ಣೋದ್ಧಾರ ಮಾಡಲಾಗಿದೆ. ನಂತರ ನಿಯಮಿತವಾಗಿ ಕೆಂಡ ಹಾಯುವ ಕಾರ್ಯಕ್ರಮಗಳನ್ನೂ ನಡೆಸಿಕೊಂಡು ಬರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಅದ್ಧೂರಿಯಾಗಿ ಉತ್ಸವ ನಡೆಸಲಾಗುತ್ತದೆ. ಎರಡು ದಿನಕ್ಕೂ ಹೆಚ್ಚಿನ ಕಾಲ ಕಾರ್ಯಕ್ರಮಗಳನ್ನು ಏರ್ಪಡಿಸುವ ಆಲೋಚನೆ ಇಟ್ಟುಕೊಳ್ಳಲಾಗಿದೆ ಎಂದು ಹೇಳುತ್ತಾರೆ.
ಕಷ್ಟಗಳ ಪರಿಹಾರಕ್ಕೆ, ಸಮಸ್ಯೆಗಳಿಂದ ಬಿಡುಗಡೆ ಪಡೆಯುವ ಸಲುವಾಗಿ ನಡೆಯುವ ಕೆಂಡ ಹಾಯುವ ಕಾರ್ಯಕ್ರಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂರ್ನಾಲ್ಕು ಕಡೆಗಳಲ್ಲಷ್ಟೇ ನಡೆಯುತ್ತದೆ. ಕೆಂಡ ಹಾಯ್ದರೆ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಈ ಆಚರಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕೆಂಡ ಹಾಯುವವರು ವಿಶೇಷ ಆವೆಶಕ್ಕೂ ಒಳಗಾಗುತ್ತಾರೆ. ವಿಚಿತ್ರ ಅಭಿನಯ ಮಾಡುತ್ತ, ಸ್ವರಗಳನ್ನು ಹೊರಡಿಸುತ್ತಾ ಕೆಂಡವನ್ನು ಹಾಯುತ್ತಾರೆ. ಇಂತಹ ಅನೇಕ ಸಂಗತಿಗಳಿಗೆ ಸರಕುಳಿಯಲ್ಲಿ ನಡೆದ ಕಾರ್ಯಕ್ರಮ ಸಾಕ್ಷಿಯಾಯಿತು.

***

ನಮ್ಮ ಊರಿನಲ್ಲಿ ನಡೆಯುವ ಕೆಂಡ ಹಾಯುವ ಕಾರ್ಯಕ್ರಮ ಬಹು ವಿಶಿಷ್ಟವಾದುದು. ಇಲ್ಲಿ ಯುವಕರು ಮಾತ್ರ ಕೆಂಡ ಹಾಯುತ್ತಾರೆ. ಕೆಂಡ ಹಾಯುವವರಿಗೆ ವಿಶಿಷ್ಟವಾದ ನಿಯಮಗಳಿವೆ. ಯಾರು ಕೆಂಡ ಹಾಯುತ್ತಾರೋ ಅಂತಹ ವ್ಯಕ್ತಿಗಳು ಕನಿಷ್ಟ ಒಂದು ವಾರದಿಂದ ಮಾಂಸ ಹಾಗೂ ಮದ್ಯದಿಂದ ದೂರವಿರಬೇಕು. ಶುದ್ಧ ಸಸ್ಯಾಹಾರ ಸೇವನೆ ಮಾಡಬೇಕು. ತಣ್ಣೀರಿನ ಸ್ನಾನ ಕೈಗೊಳ್ಳಬೇಕು. ಧಾರ್ಮಿಕ ಪೂಜೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಯಾರು ಈ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುವುದಿಲ್ಲವೋ ಅವರಿಗೆ ಶಿಕ್ಷೆಯಾಗುತ್ತದೆ ಎನ್ನುವ ನಂಬಿಕೆ ಇದೆ. ನಿಮಯ ಪಾಲನೆ ಮಾಡದಿರುವವರಿಗೆ ಕೆಂಡ ಹಾಯಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಲೇ ಕೆಂಡ ಹಾಯುವ ಕಾರ್ಯಕ್ರಮ ಮಹತ್ವ ಪಡೆದುಕೊಂಡಿದೆ.
ವೆಂಕಟ್ರಮಣ ಅನಂತ ಗೌಡ
ಮೇಲಿನ ಸರಕುಳಿ

Wednesday, February 25, 2015

ಅಘನಾಶಿನಿ ಕಣಿವೆಯಲ್ಲಿ-13

                 `ಚನ್ನಾಗಿದೆ ಅದರ ಟೈಟಲ್ಲು..' ಎಂದರು ಎಲ್ಲರೂ. `ಒಂದ್ ಸಾರಿ ನಮಗೆಲ್ಲ ಓದಲಿಕ್ಕೆ ಕೊಡು...' ಎಂದರು ಕೆಲವರು. ವಿಜೇತಾ ವಿನಾಯಕನಲ್ಲಿದ್ದ ಬರಹದ ಶೈಲಿ,  ಆತನ ಬಾವುಕ ಪ್ರಪಂಚ, ಪ್ರತಿಯೊಂದನ್ನೂ ತನ್ನದೇ ಆದ ಬೆರಗಿನ ದೃಷ್ಟಿಯಲ್ಲಿ ನೋಡುವ ಆತನ ವ್ಯಕ್ತಿತ್ವವನ್ನು ಕಂಡು ವಿಸ್ಮಯಪಟ್ಟಳು. ಕೊನೆಗೆ ಇವನ ಜೊತೆಗೆ ಒಮ್ಮೆ ಒಬ್ಬಂಟಿಯಾಗಿ ಮಾತನಾಡಬೇಕು. ಹಾಗೆಯೇ ಇವನ ಒಳಗಿನ ವ್ಯಕ್ತಿತ್ವವನ್ನು ಕೊಂಚ ತಿಳಿದುಕೊಳ್ಳಬೇಕು ಎಂದು ಆಲೋಚಿಸಿದಳು.
                 ಅವರ ಅರಿವಿಗೆ ಬಾರದಂತೆ ಅಘನಾಶಿನಿ ಎಲ್ಲರ ಮನಸ್ಸಿನಲ್ಲಿ ಮೆರೆದಳು.. ಬಿಡದೇ ಸೆಳೆದಳು. ಆವರಿಸಿಕೊಂಡಳು. ಪ್ರದೀಪ ಆ ನದಿಗೆ ಅಡ್ಡಲಾಗಿ ಹಾಕಲಾಗಿದ್ದ ಹಗರುದಬ್ಬೆಯ ಕಾಲುಸಂಕದ ಮೇಲೆ ಕುಳಿತು ಕನಸು ಕಾಣಲಾರಂಭಿಸಿದ್ದ. ರಾಜೀವ ಸುಮ್ಮನೆ ನೀರಿಗೆ ಕಲ್ಲೆಸೆಯಲಾರಂಭಿಸಿದ್ದ. ದಡದ ಮೇಲಿದ್ದ ಚಪ್ಪಟೆ ಕಲ್ಲುಗಳನ್ನು ತಂದು ಕಾಲು ಡೊಂಕು ಮಾಡಿಕೊಂಡು ರಪ್ಪನೆ ಎಸೆಯುತ್ತಿದ್ದ ರಾಜೀವ. ಕಲ್ಲು ಕಪ್ಪೆಯಂತೆ ಕುಪ್ಪಳಿಸಿ ಕುಪ್ಪಳಿಸಿ ಆರೆಂಟು ಸಾರಿ ಎಗರಿ ಎದುರು ದಂಡೆಗೆ ಹೋಗಿ ಹಾರಿ ಹಾರಿ ಬೀಳುತ್ತಿದ್ದರೆ ತನ್ನೊಳಗೆ ಖುಷಿ ಪಡುತ್ತಿದ್ದ. ವಿನಾಯಕ ತಾನಾಯಿತು ತನ್ನ ಕಾವ್ಯಲೋಕವಾಯಿತು ಎಂಬಂತಾದ. ವಿಜೇತಾ ತನ್ನ ಡಿಎಸ್ಎಲ್ಆರ್ ಕ್ಯಾಮರಾದಲ್ಲಿ ಸುತ್ತಮುತ್ತಲ ಪ್ರಕೃತಿಯ, ರಾಜೀವನ ಕಲ್ಲೆಸೆಯುವ ಆಟವನ್ನು ಕ್ಲಿಕ್ಕಿಸಿದ್ದಲ್ಲದೇ ಕ್ಯಾಮರಾದ ಹಸಿವೆಯನ್ನು ಕಡಿಮೆ ಮಾಡಲು ಆರಂಭಿಸಿದ್ದಳು. ರಮ್ಯಾ ವಿಕ್ರಮ ಹಾಗೂ ವಿಷ್ಣುವಿನ ಜೊತೆಗೆ ಕೀಟಲೆಗೆ ಇಳಿದಿದ್ದಳು. ಬಾನ ಭಾಸ್ಕರ ಮಾತ್ರ ಇವರೆಲ್ಲರನ್ನೂ ನೋಡಿ ಪಶ್ಚಿಮದ ಕಡೆಗೆ ಇಳಿಯುತ್ತ ಎಲ್ಲರಿಗೂ ಶುಭ ವಿದಾಯವನ್ನು ಕೋರುತ್ತಿದ್ದ. ತಾರಕೆಗಳು ಮಿಣುಕು ಮಿಣುಕಾಗಿ ಕಣ್ಣು ಹೊಡೆಯಲು ಆರಂಭಿಸಿದ್ದವು.
             
***

               `ದಿನಗಳು ಸುಮ್ಮನೆ ಓಡಿ ಹೋಗ್ತಿದೆ ವಿಜೇತಾ..ನಾವಿನ್ನೂ ನಮ್ಮ ಕಾರ್ಯವನ್ನು ಆರಂಭಿಸಿಯೇ ಇಲ್ಲ. ಹೀಗೆ ಆದ್ರೆ ಹೇಗೆ?' ಎಂದು ವಿಕ್ರಮ ಕೇಳಿದ.
               `ನಾನೂ ಈ ಬಗ್ಗೆ ಆಲೋಚನೆ ಮಾಡ್ತಿದ್ದೇನೆ ವಿಕ್ರಮ್. ನನಗೆ ನಮ್ಮ ಜೊತೆಗಿರುವ ದಂಡು ಸುಖಾ ಸುಮ್ಮನೆ ದೊಡ್ಡದಾಗ್ತಾ ಇದೆಯೇನೋ ಅನ್ನಿಸಲು ಆರಂಭಿಸಿದೆ. ನಮ್ಮ ಕೆಲಸವನ್ನು ಗಂಭೀರವಾಗಿ ಮಾಡಲಿಕ್ಕೇ ಆಗ್ತಾ ಇಲ್ಲ. ತರಲೆ ಮಾತು.. ಹರಟೆ ಇಷ್ಟರಲ್ಲೇ ನಮ್ಮ ಕೆಲಸ ಕಳೆದು ಹೋಗುತ್ತಿದೆ. ಏನೂ ಪ್ರೊಗ್ರೆಸ್ ಆಗ್ತಾ ಇಲ್ಲ ನಾವು ಬಂದ ಕೆಲಸದಲ್ಲಿ...' ಎಂದಳು ವಿಜೇತಾ.
           `ಹೌದು.. ನಿಜ... ನನಗೂ ಒಂದೆರಡು ಸಾರಿ ಹಾಗೇ ಅನ್ನಿಸಿದೆ. ಈ ಪ್ರದೀಪನ ತರ್ಲೆ, ವಿಷ್ಣುವಿನ ಸಿಟ್ಟು, ರಮ್ಯಾಳ ಕಿರಿಕಿರಿ ಸಾಕು ಅನ್ನಿಸಿಬಿಟ್ಟಿದೆ. ಇದ್ದುದರಲ್ಲಿಯೇ ವಿನಾಯಕ ಪರವಾಗಿಲ್ಲ. ತಾನಾಯಿತು, ತನ್ನ ಪಾಡಾಯಿತು ಎಂದುಕೊಂಡು ಸುಮ್ಮನಿರುತ್ತಾನೆ.'
            `ಹೌದು ವಿಕ್ರಂ. ಮರೆತಿದ್ದೆ ಕಣೋ. ನಿನ್ನೆ ರಾತ್ರಿ ಯಾಕೋ ನಂಗೆ ಇದ್ದಕ್ಕಿದ್ದಂತೆ ಎಚ್ಚರಾಯ್ತು. ಆಗ ಈ ಊರಿನ ಆಚೆಯ ಕಾಡಿನಲ್ಲಿ ಅದೇನೋ ಸದ್ದಾಗ್ತಿತ್ತು. ಬಹುಶಃ ಮರ ಕಡಿಯುತ್ತಿರಬಹುದು. ಬಹಳ ಹೊತ್ತಿನ ತನಕ ಕೇಳ್ತಾ ಇತ್ತು ಅದು. ಯಾಕೋ ಬೆಳಿಗ್ಗೆ ಹೇಳಬೇಕು ಅಂತ ಅನ್ನಿಸಿದ್ದರೂ ಹೇಳಲಿಕ್ಕಾಗಿರಲಿಲ್ಲ ನೋಡು..' ಎಂದಳು ಆಕೆ.
             `ನಿಜ.. ನಿನ್ನೆ ನನಗೂ ಕೇಳಿತ್ತು. ಅದ್ಯಾರೋ ತಮ್ಮ ಮನೆಗಾಗಿ ಮರ ಕಡಿದು ಸಾಗಿಸ್ತಾ ಇರಬೌದು..' ಎಂದು ಉತ್ತರಿಸಿದ ವಿಕ್ರಂ.
             `ಇದೇನಿದು ಇಷ್ಟು ಆರಾಮಾಗಿ ಹೇಳ್ತಾ ಇದೀಯಾ ನೀನು... ಮರ ಕಡಿಯೋದು ತಪ್ಪಂತ ಗೊತ್ತಿಲ್ವಾ ನಿಂಗೆ..'
             `ಗೊತ್ತು.. ಆದ್ರೆ ಒಂದ್ ಮಾತು ಹೇಳ್ತೀನಿ ನೋಡು.. ಈ ಭಾಗದಲ್ಲೆಲ್ಲ ಮುಖ್ಯವಾಗಿ ಎರಡು ಥರದ ಜನರಿದ್ದಾರೆ. ಒಬ್ಬರು ಅತೀ ಶ್ರೀಮಂತರು. ಮತ್ತೊಬ್ಬರು ಬಡವರು. ಶ್ರೀಮಂತರು ಹಣ-ಲಂಚದ ಸಹಾಯದಿಮದ ಕಳ್ಳನಾಟಾ ಕೊಯ್ಯಿಸಿ ಅರಾಮಾಗಿ ಇರ್ತಾರೆ. ಆದ್ರೆ ಬಡವರು ಏನ್ಮಾಡಬೇಕು? ಅದಕ್ಕೇ ಈ ಥರಾ.. ಆದರೆ ಬಡವರು ಮಾತ್ರ ತಮ್ಮ ಮನೆಗಳಿಗಾಗಿ ಮಾತ್ರ ನಾಟಾ ಕೊಯ್ಯಿಸಿಕೊಳ್ಳುತ್ತಾರೆ. ಆದರೆ ಶ್ರೀಮಂತರು ಹಾಗಲ್ಲ. ದುರಾಸೆ. ಕಳ್ಳ ನನ್ನ ಮಕ್ಕಳಿಗೆ. ಅನೇಕ ಸಾರಿ ಅರಣ್ಯ ಇಲಾಖೆಯವರನ್ನೂ ಕೈಯೊಳಗೆ ಮಾಡಿಕೊಂಡು ತಮ್ಮ ಕೆಲಸ ಪೂರೈಸಿಕೊಳ್ಳತಾರೆ ಅವರು..' ಎಂದ. ಇದನ್ನು ಕೇಳಿ ವಿಜೇತಾ ಒಮ್ಮೆ ನಿಟ್ಟುಸಿರಿಟ್ಟಳು. ಕೊನೆಗೆ ವಿಕ್ರಂ ಅಲ್ಲಿನ ಶ್ರೀಮಂತರ ಅಧಿಕಾರ ಲಾಲಸೆ, ಹಣಕ್ಕಾಗಿ ಬಾಯ್ಬಿಡುವ ಅವರ ನೀಚತನ, ಮಾಡುವ ಅಡ್ಡಕಸುಬು ಇವೆಲ್ಲವನ್ನೂ ಸವಿವರವಾಗಿ ಹೇಳಿದ. ಹಾಗೆಯೇ ಬಡವರು ಜೀವನ ನಡೆಸಲು ಕಷ್ಟ ಪಡುವ ಬಗೆ, ಹೋರಾಟ ಇವುಗಳನ್ನೂ ಸಾಧ್ಯಂತವಾಗಿ ವಿವರಿಸಿದ.
              ಕೊನೆಯಲ್ಲಿ ಮಾತು ಮತ್ತೆ ತಾವು ಮಾಡಬೇಕೆಂದುಕೊಂಡಿದ್ದ ಕೆಲಸದ ಕಡೆಗೆ ಸಾಗಿತು. ಕೊನೆಗೆ ಮರುದಿನ ಶಿರಸಿಯ ಪೊಲೀಸ್ ಠಾಣೆಗೆ ಹೋಗಿ ಬರುವುದು ಎಂದು ನಿರ್ಧಾರ ಮಾಡಿಕೊಂಡರು. ಇವರೀರ್ವರ ಮಾತು-ಕತೆ ಮುಗಿಯುವ ವೇಳೆಗೆ ಆ ಮನೆಯಲ್ಲಿ ರಾತ್ರಿಯ ಊಟಕ್ಕೆ ಬುಲಾವ್ ಬಂದಿತ್ತು.

***

             `ನೋಡಿ.. ಆ ದಂಟಕಲ್ಲಿಗೆ ಯಾರೋ ನಾಲ್ಕು ಜನ ಬೇರೆ ಊರಿನವರು ಬಂದಿದ್ದಾರಂತೆ. ಬಂದವರೇ ಕಾಡು ತಿರುಗುತ್ತಿದ್ದಾರಂತೆ. ಕಾಡನ್ನು ನೋಡುವ ಆಸೆಯಂತೆ. ಅವರ್ಯಾರು..? ಯಾಕೆ ಬಂದಿದ್ದಾರೆ ಅಂತೆಲ್ಲ ಕೂಡಲೇ ಮಾಹಿತಿ ಪಡೆಯಬೇಕು. ನಮ್ಮೂರ ಬಳಿ ಅವರ್ಯಾಕೆ ಬಂದರು ಅಂತ...' ಎಂದು ಮುಖ್ಯಸ್ಥನಂತಿದ್ದ ಒಬ್ಬಾತ ಹೇಳಿದ.
            ಅದಕ್ಕೆ ಪ್ರತಿಯಾಗಿ ಮತ್ತೊಬ್ಬ `ಬಿಡಿ.. ಇದಕ್ಕೆಲ್ಲಾ ಯಾಕೆ ತಲೆ ಕೆಡಿಸಿಕೊಳ್ಳಬೇಕು? ಎಲ್ಲಿಗೋ ಯಾರೋ ಬಂದಿರ್ತಾರೆ.. ಸರ್ಕಾರ ಅದೇನೇನೋ ರಿಸರ್ಚ್.. ಮಣ್ಣು-ಮಸಿ ಅಂತೆಲ್ಲಾ ಹಾಕಿಕೊಂಡಿರುತ್ತದೆ.. ಇವರೂ ಹಾಗೇ.. ದಂಟಕಲ್ಲಿಗೆ ಅದೇ ಕಾರಣಕ್ಕೆ ಬಂದಿರ್ತಾರೆ.. ಇಷ್ಟಕ್ಕೂ ದಂಟಕಲ್ಲಿಗೆ ಅವರು ಬಂದರೆ.. ನಮಗೇನು ಸಮಸ್ಯೆ..?' ಎಂದ.
            `ಹಂಗಲ್ಲಪ್ಪಾ.. ಅವರ್ಯಾರೋ ಮಂಗಳೂರಿನ ಕಡೆಯವರಂತೆ. ಇಲ್ಲಿಗೆ ಅದೇನೋ ರಿಸರ್ಚಿಗೆ ಬಂದಿದ್ದಾರೆ ಎನ್ನುವುದು ನನಗೂ ಗೊತ್ತಿದೆ. ಅದೇನು ರಿಸರ್ಚಿರಬಹುದು ಎನ್ನುವ ಕುರೂಹಲ ನನಗೂ ಇದೆ. ಅಷ್ಟೇ. ಹಾಂಗೇ.. ಈ ರಿಸರ್ಚು ಅಂದ್ರೆ ಯಾರು ಬಂದು ಇಲ್ಲಿನ ಸರ್ವೆ ಮಾಡ್ಕೊಂಡು ಹೋಗ್ತಾರೋ ಅಂತ..' ಎಂದ ಆ ಮುಖ್ಯಸ್ಥ.
          `ಅಂದ್ರೆ ನೀನು ಏನ್ ಹೇಳ್ತಾ ಇರೋದು..?'
          `ನೋಡು.. ಬೇಡ್ತಿ-ಅಘನಾಶಿನಿ ಕಟ್ಟು ಹಾಕ್ತಾರೆ ಅನ್ನೋದು ಹಳೆಯ ಸುದ್ದಿ. ಈಗೀಗ ಅದೇನೋ ಮಿನಿ ಡ್ಯಾಂ ಆಗ್ತದಂತೆ. ಏನೇನೋ ಗಾಳಿ ಸುದ್ದಿಗಳು. ಅದರ ಬಗ್ಗೆಯೇ ಇವರೂ ಸರ್ವೆಗೆ ಬಂದಿರಬಹುದು. ಅಣೆಕಟ್ಟು ಹಾಕೋದ್ರಿಂದ ಅದೆಷ್ಟು ಭೂಮಿ-ಕಾಡು-ಜಮೀನು ಮುಳುಗಡೆ ಆಗ್ತದೆ ಅಂತ ಲೆಕ್ಖ ಹಾಕಲಿಕ್ಕೆ ಬಂದಿರಬಹುದಲ್ಲವಾ..?'
           `ಅದಕ್ಕಾಗಿ ಬಂದಿರಬಹುದು ಅಂತ ಹೇಗೆ ಹೇಳ್ತಿದ್ದೀರಿ?' ಇದು ಮತ್ತೊಬ್ಬನ ಪ್ರಶ್ನೆ.
           `ಸಾಮಾನ್ಯವಾಗಿ ರಿಸರ್ಚ್ ಮಾಡೋದು ಇಂತಹ ಕಾರಣಗಳಿಗಾಗಿಯೇ ಅಲ್ವೇ..'
           `ಬಿಡು.. ಅವ್ರು ಯಾವುದಕ್ಕೇ ಬಂದಿರಲಿ. ಮುಳುಗಡೆ ಆಗೇ ಆಗ್ತದೆ ಅನ್ನೋವಾಗ ನಾವು ಈ ಬಗ್ಗೆ ತಲೆ ಕೆಡಿಸಿಕೊಂಡರೆ ಆಯ್ತಪ್ಪಾ..' ಎನ್ನುವಲ್ಲಿಗೆ ಆ ಕಟ್ಟೆ ಪಂಚಾಯ್ತಿಯ ಮಾತು ಮುಗಿದಿತ್ತು.
             ಇದು ದಂಟಕಲ್ಲಿಗೆ ಆಗಮಿಸಿದ ವಿಕ್ರಮನ ತಂಡದ ಬಗ್ಗೆ ಪಕ್ಕದೂರು ಅರ್ಥೈಸಿದ ರೀತಿ. ಆ ಜನರ ಮಾತುಗಳು ಅಘನಾಶಿನಿಯ ಅಣೆಕಟ್ಟಿಗಾಗಿಯೇ ರಿಸರ್ಚು ನಡೆಯುತ್ತಿದೆ ಎನ್ನುವಂತೆ ಬಿಂಬಿತವಾಗಿದ್ದವು.

****

                ಮುಂಜಾನೆ ಎದ್ದು ವಿಕ್ರಮ್, ವಿಜೇತಾರು, ವಿನಾಯಕನ ಜೊತೆ ಮಾಡಿಕೊಂಡು ವಾಹನವನ್ನೇರಿ ಶಿರಸಿಗೆ ಹೊರಡಲು ಅನುವಾದರು. ಪ್ರದೀಪ ತಾನೂ ಬರುವೆನೆಂದ. ವಿಧಿಯಿಲ್ಲದೇ ಆತನನ್ನೂ ಶಿರಸಿಗೆ ಕರೆದೊಯ್ಯಬೇಕಾಯಿತು. ವಿಷ್ಣು ಮಾತ್ರ ದಂಟಕಲ್ಲಿನಲ್ಲಿಯೇ ಉಳಿದುಕೊಂಡಿದ್ದ.
                ಶಿರಸಿಗೆ ಬಂದ ಗುಂಪು ಮೊದಲು ಕೊಳ್ಳಬೇಕೆಂದುಕೊಂಡಿದ್ದ ಕೆಲ ವಸ್ತುಗಳನ್ನು ಕೊಂಡಿತು. ವಿಜೇತಾ-ವಿಕ್ರಮರಿಗೆ ಪ್ರದೀಪ ಪೊಲೀಸ್ ಠಾಣೆಗೆ ಬರುವುದು ಬೇಡವಾಗಿತ್ತು. ಹೀಗಾಗಿ ಆತನನ್ನು ವಿನಾಯಕನ ಜೊತೆ ಶಿರಸಿಯ ಶ್ರೀ ಅಧಿದೇವತೆಯಾದ ಮಾರಿಕಾಂಬೆಯನ್ನು ನೋಡಿ ಬರುವಂತೆ ಹೇಳಿ ಕಳುಹಿಸಿದರು. ಇವರೀರ್ವರೂ ಅದೇನೇನೋ ಸಬೂಬನ್ನು ಹೇಳಿ ಪೊಲೀಸ್ ಠಾಣೆಗೆ ಹೋದರು.
              ಪ್ರಾರಂಭದಲ್ಲಿ ಪೊಲೀಸ್ ಠಾಣೆಯಲ್ಲಿ ಇನ್ ಸ್ಪೆಕ್ಟರ್ ವಿಕ್ರಂ- ವಿಜೇತಾರೊಂದಿಗೆ ಸರಿಯಾಗಿ ವರ್ತಿಸಲಿಲ್ಲ. ಕೊನೆಗೆ ವಿಕ್ರಮ್ ಹಾಗೂ ವಿಜೇತಾರು ತಾವು ಖಾಸಗೀ ಪತ್ತೇದಾರರು ಎಂದು ಹೇಳಿದಾಗ ಅಧಿಕಾರಿ ಇವರ ಸಹಾಯಕ್ಕೆ ಬಂದು ಶಿರಸಿಯಲ್ಲಿ ನಡೆದ ಘಟನೆಗಳ ಮಾಹಿತಿಯನ್ನು ನೀಡಲಾರಂಭಿಸಿದರು. `ಇತ್ತೀಚೆಗೆ ಶಿರಸಿಯಲ್ಲಿ ನಿಗೂಢ ಗುಂಪೊಂದು ಕಾಣಿಸಿಕೊಂಡಿದೆಯಾದರೂ ಅದಕ್ಕೆ ಹದಿನೈದು-ಇಪ್ಪತ್ತು ವರ್ಷಗಳ ಇತಿಹಾಸವಿದೆ. ಇತ್ತೀಚಿನ ಒಂದೆರಡು ವರ್ಷಗಳಲ್ಲಿ ಆ ಗುಂಪು ಮತ್ತಷ್ಟು ಪ್ರಭಲವಾಗಿದೆ. ಕೊಲೆ-ದರೋಡೆ-ಕಳ್ಳತನ-ಸ್ಮಗ್ಲಿಂಗು ಇತ್ಯಾದಿಗಳು ಆ ಗುಂಪಿನ ಮುಖ್ಯ ದಂಧೆ. ಜೊತೆಗೆ ಆ ಗುಂಪು `ಎಸ್' ಮಾರ್ಕಿನ ಮೂಲಕ ಪ್ರಸಿದ್ಧವಾಗಿದೆ. ಈ ಭಾಗದಲ್ಲೆಲ್ಲ ಆ ಗುಂಪಿಗೆ ಸೂರ್ಯನ ಕುದುರೆ ಎಂದೇ ಹೆಸರು. ಅವರು ತಮ್ಮ ಕೆಲಸಕ್ಕೆ ಸೂರ್ಯಶಿಖಾರಿ ಎಂದು ಕರೆದುಕೊಳ್ಳುತ್ತಾರೆ ಎಂದು ಪೊಲೀಸ್ ಅಧಿಕಾರಿ ದೀರ್ಘ ವಿವರಣೆಯನ್ನು ನೀಡಿದ.
              ವಿಕ್ರಂ ಹಾಗೂ ವಿಜೇತಾರಿಗೆ ಪೊಲೀಸ್ ಅಧಿಕಾರಿ ನೀಡಿದ ಈ ಮಾಹಿತಿಯೊಂದ ತಮ್ಮ ಕೆಲಸಕ್ಕೆ ಸ್ವಲ್ಪವಾದರೂ ಅನುಕೂಲವಾಗಬಹುದು ಎನ್ನಿಸಿತು. ಹಾಗೆಯೇ ಇವರು ಮೊದಲೊಮ್ಮೆ ಹಿಡಿದಿದ್ದ ಹಾಗೂ ಆತನ ನಿಘೂಡ ಹತ್ಯೆಯ ಬಗ್ಗೆ ಕೇಳಿದರು. ಅಧಿಕಾರಿ ಆ ವ್ಯಕ್ತಿ ಸೂರ್ಯಗುದುರೆ ಗುಂಪಿಗೆ ಸೇರಿದ ವ್ಯಕ್ತಿಯೆಂದೂ ಆತನನ್ನು ಬಂಧಿಸಿದ ನಂತರ ಅವನ ಕೊಲೆ ನಡೆಯಿತೆಂದೂ ಕೊಲೆಗಾರನ ಸುಳಿವು ಸಿಕ್ಕಿಲ್ಲವೆಂದೂ ತಿಳಿಸಿದರು.
              ಯಾಕೋ ವಿಕ್ರಮ ಹಾಗೂ ವಿಜೇತಾರಿಗೆ ಪೊಲೀಸ್ ಇಲಾಖೆಯ ದಿವ್ಯ ನಿರ್ಲಕ್ಷ್ಯತನ-ನಿಧಾನ ತನಿಖೆ ಹೇಸಿಗೆ ಹುಟ್ಟಿಸಿತು. ಕೊನೆಗೆ ಹಲವಾರು ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಂಡ ನಂತರ ವಿಜೇತಾ ಹಾಗೂ ವಿಕ್ರಮರು ವಾಪಾಸು ಹೊರಟರು. ಇನ್ನೇನು ಐದು ರಸ್ತೆ ಸರ್ಕಲ್ ದಾಟಿ ಬಸ್ ನಿಲ್ದಾಣದ ಬಳಿ ಬರುತ್ತಿದ್ದಂತೆಯೇ ವಿನಾಯಕ ಎದುರಾದ. ಮುಖದಲ್ಲಿ ಗಾಭರಿ ತುಂಬಿತ್ತು. ತಕ್ಷಣ ಇವರಿಬ್ಬರೂ `ಏ... ಏನಾಯ್ತು..?' ಎಂದರು.

(ಮುಂದುವರಿಯುತ್ತದೆ..)

Tuesday, February 24, 2015

ಅಮ್ಮನೆಂದರೆ

ಅಮ್ಮನೆಂದರೆ
ಬರೀ ಎರಡಕ್ಷರವಲ್ಲ|
ಈ ಪ್ರಪಂಚವ ನೋಡೆಂದು
ಕಣ್ಣು ತೆರೆಸಿ, ಜೀವ ನೀಡಿದಾಕೆ ||

ಅಮ್ಮನೆಂದರೆ
ಬರೀ ಜೀವಿಯಲ್ಲ
ಕಣ್ಣಿಗೆ ಕಾಣುವ, ಪ್ರೀತಿಯ ನೀಡುವ
ಈ ಬಾವ ಲೋಕದ ದೇವರಾಕೆ ||

ಅಮ್ಮನೆಂದರೆ
ಬರೀ ಹೆಣ್ಣಲ್ಲ
ಬಿದ್ದಾಗಲೆತ್ತುವ, ಗೆದ್ದಾಗ ನಲಿವ
ಹೆಂಗರುಳು, ಹೆಣ್ಮನಸು ಆಕೆ ||

ಅಮ್ಮನೆಂದರೆ
ಬರೀ ಭೂಮಿಯಲ್ಲ
ಬರಡಲ್ಲೂ ಜೀವ ಸ್ಫುರಿಸಿ
ಜೀವ ನಿಡುವ ದಾತೆ ಆಕೆ ||

ಅಮ್ಮನೆಂದರೆ
ಬರೀ ಪದಗಳು ಸಾಲಲಿಲ್ಲ
ಆಕೆಯ ಗುಣ ಹೊಗಳಲು
ಅಷ್ಟು ಮೇಲಂತೆ ಆಕೆ ||

ಅಮ್ಮನೆಂದರೆ
ಬರೀ ಅಮ್ಮನಲ್ಲ
ಬಾಳಿನ ಪ್ರೇಮ, ಬದುಕಿಗೆ ಧಾಮ
ನಿಲುಕದ ಆಸೀಮ ಆಕೆ  ||

***

(ಈ ಕವಿತೆಯನ್ನು ಬರೆದಿರುವುದು 25-08-2006ರಂದು ದಂಟಕಲ್ಲಿನಲ್ಲಿ)

Saturday, February 21, 2015

ದಿವ್ಯಾ

ದಿವ್ಯಾ..
ಕಾಣದ ಊರಲ್ಲಿದ್ದರೂ
ಪ್ರತಿರೂಪ-ಕಲ್ಪನೆ
ಮನದೊಳಗೆ ಭವ್ಯ |

ಬದುಕು, ಬರಹ
ನಿತ್ಯ-ನವ್ಯ,
ಇರದಿರಲಿ ಅಪಸವ್ಯ |

ದಿವ್ಯಾ...
ಪಕ್ವ ಮನದ ಒಂದು
ಚಿಕ್ಕ ಪರಿಕಲ್ಪನೆ..|
ಆಕೆ ಅಗ್ನಿ ದಿವ್ಯವೋ,
ಜಲವೋ ಜೊತೆಗೆ
ಮೆರೆವ ಕಾಳೋರಗವೋ..
ಕೈಯೊಳಗೆ ಹಿಡಿದು
ಗೆಲ್ಲಬಲ್ಲೆನಾ, ನಾನರಿಯೆ |

ಅಲ್ಲ..
ಅರ್ಥೈಸಬಲ್ಲೊಂದು
ಸ್ಪಷ್ಟ ಕಾವ್ಯ |
ಹೊರಗೆ ನಗುವ ಪರದೆ
ಒಡಲೊಳಗೆ ಏನುಂಟು
ನಿಘೂಡ ಭವಿತವ್ಯ |

ಹೆಣ್ಣು-ಹೊನ್ನು-ಮಣ್ಣು
ದಿವ್ಯ ದರ್ಶನ |

ಸ್ಪಷ್ಟ ಮುಖವಾಡದ
ಹಿಂದೆ ಅರ್ಥವಾಗದ
ಬಯಕೆ-ಆಸೆ |

ದಿವ್ಯ..
ದೂರದ ಜಗತ್ತಿನಲ್ಲಿಹೆ..
ಎಂದಿಗೂ ದಿವ್ಯ|
ಕಾಣದ ಕಣ್ಣಿಗೆ ಭವ್ಯ |

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ
ಎಂಬ ಗಾದೆ ಮಾತು ಸತ್ಯ ||

***

(ಈ ಕವಿತೆಯನ್ನು ಬರೆದಿರುವುದು 11-03-2007ರಂದು ದಂಟಕಲ್ಲಿನಲ್ಲಿ)
(ಕಾಲೇಜು ದಿನಗಳಲ್ಲಿ ಪತ್ರ ಮೈತ್ರಿಯ ಮೂಲಕ ಗೆಳತಿಯಾಗಿದ್ದಾಕೆ ದಿವ್ಯಾ. ಆಕೆ ಅದೊಂದು ದಿನ ತನ್ನ ಬಗ್ಗೆ ಒಂದು ಕವಿತೆ ಬರೆಯಲು ಸಾಧ್ಯವಾ ಎಂದು ಕೇಳಿದ್ದಳು. ಆಕೆಯನ್ನು ಮುಖತಃ ಎಂದೂ ನೋಡದ ನಾನು ಆಕೆಯ ಬರವಣಿಗೆ ಹಾಗೂ ಪೋಟೋ ನೋಡಿ ಸುಮ್ಮನೆ ಬರೆದ ಕವಿತೆ ಇದು. ವಾವ್.. ಸೂಪರ್ರಾಗಿದೆ ಮಾರಾಯಾ... ಎನ್ನುವ ಕಾಂಪ್ಲಿಮೆಂಟ್ ಆ ದಿನಗಳಲ್ಲಿ ದಿವ್ಯಾಳಿಂದ ಸಿಕ್ಕಿದೆ. ಈಗಲೂ ಆಪ್ತ ಗೆಳತಿಯಾಗಿ ಆಗಾಗ ಪೋನ್ ಮಾಡುತ್ತ, ವಾಟ್ಸಾಪ್, ಫೇಸ್ ಬುಕ್ ಗಳಲ್ಲಿ ಹರಟೆಗೆ ಸಿಗುವ ಗೆಳತಿ ದಿವ್ಯಾ.. ನನ್ನ ಬೆಂಗಳೂರಿನ ದಿನಗಳಲ್ಲಿ ಆಕೆ ಸಿಕ್ಕು, ಮಾತನಾಡಿದ್ದೇವೆ. ಹರಟೆ ಕೊಚ್ಚಿದ್ದೇವೆ. ಒಂಚೂರು ದಪ್ಪ ಆಗು ಮಾರಾಯಾ.. ಎಂದು ಹೇಳಿದ ಆಕೆ, ನಾನು ದಪ್ಪಗಾಗುವ ಆಸಾಮಿಯಲ್ಲ ಎಂದು ತಿಳಿದುಕೊಂಡಾಕೆ. ಎಲೆಕ್ಟ್ರಾನಿಕ್ ಸಿಟಿ, ಗಾರೆ ಬಾವಿ ಪಾಳ್ಯ.. ಮುಂತಾದ ಪ್ರದೇಶಗಳಲ್ಲಿ ಆಕೆಯೊಡನೆ ಸುತ್ತಾಡಿದ ದಿನಗಳು ನೆನಪಿನಲ್ಲಿದೆ. ಆಕೆಯ ಕುರಿತು ಬರೆದ ಕವಿತೆಯಾದರೂ ಆಕೆಯ ಒಪ್ಪಿಗೆ ಇಲ್ಲದೇ ಬ್ಲಾಗ್ ಗೆ ಅಪ್ ಡೇಟ್ ಮಾಡುತ್ತಿದ್ದೇನೆ. ಇಂತಹ ಗೆಳತಿ ನೂರ್ಕಾಲ ಸುಖವಾಗಿ ಬಾಳಲಿ..)

Sunday, February 15, 2015

ಅಘನಾಶಿನಿ ಕಣಿವೆಯಲ್ಲಿ-12

(ದಂಟಕಲ್ಲಿನಲ್ಲಿರುವ ಆನೆಕಲ್ಲು)
                ಮತ್ತೆ ಕೆಲ ಘಳಿಗೆಯಾಚೆಯಲ್ಲಿಯೇ ಶಿರಸಿ ನಗರಿ ಬಂದಿತ್ತು. ಕ್ಯಾಮರಾ ಸೇರಿದಂತೆ ಅಗತ್ಯ ವಸ್ತುಗಳನ್ನು ಶಿರಸಿಯಲ್ಲಿ ಖರೀದಿ ಮಾಡಲಾಯಿತು. ಪ್ರದೀಪ ಯಾರಿಗೂ ತಿಳಿಯದಂತೆ ಚಿಕ್ಕದೊಂದು ಚಾಕುವನ್ನು ಕೊಂಡನಾದರೂ ವಿನಾಯಕನ ಸೂಕ್ಷ್ಮದೃಷ್ಟಿಗೆ ಅದು ಬಿದ್ದಿತ್ತು. ಗಮನಿಸಿಯೂ ಗೊತ್ತಿಲ್ಲದಂತೆ ಇದ್ದುಬಿಟ್ಟಿದ್ದ.
                ಮತ್ತೆ ಒಂದು ತಾಸಿನ ಒಳಗಾಗಿ ಅಘನಾಶಿನಿ ಗರ್ಭದ ದಂಟಕಲ್ಲಿನ ಹಾದಿಯನ್ನು ಹಿಡಿದಾಗಿತ್ತು. ಕಚ್ಚಾ ರಸ್ತೆಯನ್ನು ವಾಹನ ಸಾಕಷ್ಟು ವೇಗದಿಮದಲೇ ಹಾದುಬಿಟ್ಟಿತು. ಅಂಕುಡೊಂಕಿನ ದಾರಿಯಲ್ಲಿ ಬಿಂಕದ ಸಿಂಗಾರಿಯಾಗಿ, ಜಂಪು, ರಂಪಿನೊಂದಿಗೆ ಗಾಡಿ ಸಾಗಿತು. ಕಾಡು-ಕಾಡಿನ ಮೃಗ ಕೀಟಗಳ ಉಲಿ, ಬಳ್ಳಿಗಳ ಬಳುಕು, ರಸ್ತೆಯ ಧೂಳು, ನಿರಭ್ರಮೌನ ಇವರನ್ನು ಸ್ವಾಗತಿಸಿತು.
                ದೇವಿಮನೆ, ಅರಬೈಲು, ಬಡಾಳ ಮುಂತಾದ ಘಟ್ಟಗಳನ್ನು ನೆನಪಿಸುವ, ಅವುಗಳಂತೆ ಅಂಕು-ಡೊಂಕಿನ ರಸ್ತೆ ದಂಟಕಲ್ ಗೆ ತೆರಳುವ ಮಾರ್ಗದ ಮಧ್ಯವೂ ಇರುವುದನ್ನು ನೋಡಿ ವಿಜೆತಾ ವಿಸ್ಮಯ ಪಟ್ಟಳು. ಹಾಗೆಯೇ ಅವಳ ಕೈಯಲ್ಲಿನ ಮೊಬೈಲಿನ ಸಿಗ್ನಲ್ ಕೂಡ ಕಟ್ಟಾಯಿತು. ಸಮಯ ಸರಿದಂತೆ ಗಾಡಿಯೊಳಗಿನ ಸದ್ದು ಕೂಡ ತಣ್ಣಗಾಯಿತು. ದಂಟಕಲ್ ಸಮೀಪದ ಗುಡ್ಡೇತಲೆ, ಜಾರಾಬೊಂಡಿ, ಕಾನುಬೈಕ್ಲು, ಹೆಣಸುಟ್ಟ ಮುರ್ಕಿ ಈ ಮುಂತಾದ ನಾಮಾಂಕಿತ ಸ್ಥಳ ಹಾದಾಯಿತು. ಅವುಗಳಿಗೆಲ್ಲ ವಿನಾಯಕನ ಲೈವ್ ಕಾಮೆಂಟರಿಯೂ ದೊರೆಯಿತು. ಅಂತೂ ದಂಟಕಲ್ ಎಂಬ ನಿಸರ್ಗದ ಮಧ್ಯದ ಸುಂದರ ಊರಿನ ಅಂಗಳ ತಲುಪುವ ವೇಳೆಗೆ ಗವ್ವೆನ್ನುವ ಕತ್ತಲು, ಕಿರ್ರೆನ್ನುವ ಜೀರುಂಡೆಗಳ ಕೂಗು ಇವರ ಜೊತೆಗೆ ತೇಲಿ ತೇಲಿ ಬಂದಿತು. ಗಾಡಿಯ ಹಾರನ್ನು ಮನೆಯ ಬಹುತೇಕರಿಗೆ ಕೇಳಿಸಿ, ಬಾಗಿಲಲ್ಲಿ ಇಣುಕಿ, ಪರಿಚಿತರನ್ನು ನೋಡಿ ನಗುಸೂಸಿ, ಅಪರಿಚಿತ ಮುಖ ನೋಡಿ ಕುತೂಹಲ ಪಟ್ಟಿದ್ದೂ ಆಯಿತು.
               ಮನೆಯ ಯಜಮಾನರಾದ ಶ್ರೀಕಂಠ ಹೆಗಡೆಯವರು ಬಂದು `ಯಾರು..?' ಎಂಬಂತೆ ನೋಡಿದರು. ಪರಿಚಿತರನ್ನು ಕಾಣಲಾಗಿ ಸಂತಸ ಪಟ್ಟರು. ಭವ್ಯ ಮನೆ, ಎದುರಿಗಿರುವ ಅಟ್ಟ, ಪಕ್ಕದ ಕೊಟ್ಟಿಗೆ, ಸಾಕಷ್ಟು ದೊಡ್ಡದಾದ ಅಂಗಳ, ಪಕ್ಕದಲ್ಲಿ ಕುತೂಹಲದಿಂದೊಡಗೂಡಿದ ಒಂದೆರಡು ಮನೆ ಕತ್ತಲೆಯಲ್ಲಿ ವಿಜೇತಾಳಿಗೆ ಕಂಡಿದ್ದಿಷ್ಟು. ವಿನಾಯಕ ಎಲ್ಲರನ್ನೂ ಒಳಕ್ಕೆ ಕರೆದೊಯ್ದ. ಇಲ್ಲಿ ಮತ್ತೆ ಪರಿಚಯ ಪ್ರಕ್ರಿಯೆ ಮುಗಿಯಿತು. ಶ್ರೀಕಂಠ ಹೆಗಡೆಯವರು ಮನೆಯ ಯಜಮಾನರಾದರೆ ಗೋದಾವರಿ ಮನೆಯ ಆರದ ದೀಪ. ಸರ್ವೇಶ್ವರ ಹೆಗಡೆ ಶ್ರೀಕಂಠ ಹೆಗಡೆಯವರ ತಂದೆ. ಸ್ನೇಹಾ ವಿನಾಯಕನ ತಂಗಿ. ಮತ್ತೊಬ್ಬ ಚಿಕ್ಕ ಹುಡುಗ ರಾಜೀವ ಇಷ್ಟು ಜನ ಮನೆಯ ಸದಸ್ಯರೆಂಬುದು ತಿಳಿಯಿತು. ರಾಜೀವ ಆ ಮನೆಯಲ್ಲಿ ಓದುವುದಕ್ಕಾಗಿ ಉಳಿದುಕೊಂಡ ಹುಡುಗನಾಗಿದ್ದ.
               ಮನೆಯ ಒಳಗಣ ಜಗುಲಿ ಬಹು ವಿಶಾಲವಾಗಿತ್ತು. ನೂರಾರು ಜನರ ಹಿಡಿಯುವಂತಿದ್ದ ಅಲ್ಲಿ ಬಹು ಹಳೆಯ ಕಾಲದ ಆಕರ್ಷಕ ಕೆತ್ತನೆಯಿಂದ ತುಂಬಿ ನಿಂತಿರುವ ಕಂಬ ಎಲ್ಲರನ್ನೂ ಸೆಳೆಯಿತು. ಅಲ್ಲಿ ಪರಿಚಯ ಕಾರ್ಯಕ್ರಮವೂ ನಡೆಯಿತು. ಗೋದಾವರಿಯವರು ಎಲ್ಲರಿಗೂ `ಆಸರಿಗೆ' ಎಂದಾಯಿತು. ಸೇವನೆಯೂ ಮುಗಿಯಿತು.
               ವಿಜೇತಾಳಿಗಾಗಿಯೇ ವಿನಾಯಕ ಆ ಮನೆಯ ಮಹಡಿಯ ಮೇಲೆ ಒಂದು ಕೋಣೆಯನ್ನು ತೋರಿಸಿ ಆಕೆಯ ಲಗೇಜನ್ನು ಅಲ್ಲಿಯೇ ಇರಿಸಿ ಬಂದ. ಮಹಡಿಯೂ ಕೂಡ ಸಾಕಷ್ಟು ವಿಶಾಲವಾಗಿತ್ತು. ಇಡೀ ಮಹಡಿಯ ಮೂಲೆಯಲ್ಲಿ ಎರಡು ಕೋಣೆಗಳಿದ್ದವಾದರೂ ಒಂದು ಕೋಣೆಯಲ್ಲಿ ಸಾಕಷ್ಟು ಗುಜರಿ ವಸ್ತುಗಳನ್ನು ಪೇರಿಸಿ ಇಟ್ಟಿರುವುದು ಕಾಣಿಸುತ್ತಿತ್ತು. ಮಹಡಿಯ ತುಂಬ ಅಡಿಕೆ  ಚೀಲಗಳನ್ನೂ ಇಡಲಾಗಿತ್ತು.
                 ಸಂಜೆಯ ವೇಳೆಗೆ ಊಟ ಮುಗಿಸಿ, ತಕ್ಕಮಟ್ಟಿಗೆ ಸುಸ್ತಾಗಿದ್ದ ಎಲ್ಲರೂ ಹಾಸಿಗೆಯ ಮೇಲೆ ದಬಾರನೆ ಉರುಳಿಕೊಂಡರು. ವಿಜೇತಾಳಿಗೆ ಯಾಕೋ ಆ ರೂಮು ಬಹಳ ಸೆಳೆದುಬಿಟ್ಟಿತ್ತು. ಇಡಿಯ ಕೋಣೆಯಲ್ಲಿ ಹಲವಾರು ವಿಶಿಷ್ಟ ವಸ್ತುಗಳಿದ್ದವು. ಕೋಣೆಯ ಒಂದೆಡೆಯಲ್ಲಿ ಒಂದೆರಡು ಬೀರುಗಳೂ ಇದ್ದವು. ಒಂದೆಡೆ ಹಳೆಯ ಕೆತ್ತನೆಯ ಗಟ್ಟುಮುಟ್ಟಾದ ಮಂಚವೊಂದಿತ್ತು. ಅದಕ್ಕೆ ಎದುರಾಗಿದ್ದ ಗೋಡೆ ಖಾಲಿಯಿತ್ತು. ಅದು ಸಂಪೂರ್ಣವಾಗಿ ಬಿಳಿ ಬಣ್ಣದಿಂದ ಆವೃತವಾಗಿತ್ತು. ಹಾಗೆಯೇ ಅದು ನೋಡುಗರನ್ನು ಮತ್ತೆ ಮತ್ತೆ ಸೆಳೆಯುತ್ತಿತ್ತು. ಪತ್ರಿಕೆ, ಬಂದ ಕೆಲಸ, ಇಂತಹ ವಿಷಯಗಳ ಬಗ್ಗೆಯೇ ಆಲೋಚಿಸುತ್ತಾ ಹಾಸಿಗೆಗೆ ಒರಗಿದವಳಿಗೆ ಅದ್ಯಾವ ಮಾಯೆಯಲ್ಲಿ ನಿದ್ದೆ ಬಂದಿತ್ತೋ ತಿಳಿಯಲಿಲ್ಲ.
                 ಯಾವುದೋ ಜಾವದಲ್ಲಿ ಆಕೆಗೆ ಮತ್ತೆ ಥಟ್ಟನೆ ಎಚ್ಚರಾಯಿತು. ನಿರಭ್ರ ಮೌನವೇ ಮೆರೆಯುತ್ತಿದ್ದ ಆ ನಿಶೆಯಲ್ಲಿ ಆಗಾಗ `ಟಕ್.. ಟಾಕ್..' ಎಂದು ಏನನ್ನೋ ಕಡಿಯುತ್ತಿದ್ದ ಶಬ್ದ ಅಲೆ ಅಲೆಯಾಗಿ ತೇಲಿಬರುತ್ತಿತ್ತು. `ಅದೇನಿರಬಹುದು..?' ಎಂಬ ಕುತೂಹಲದ ಎಳೆ ಆಕೆಯ ಮನದ ಭಿತ್ತಿಯಲ್ಲಿ ಒಮ್ಮೆ ಮಿಂಚಿ ಮರೆಯಾಯಿತಾದರೂ, ಆ ಕುರಿತು ಹೆಚ್ಚಿಗೆ ಆಲೋಚನೆ ಮಾಡಲು ನಿದ್ದೆ ಬಿಡಲಿಲ್ಲ. ಒರಗಿಕೊಂಡು ಆಲಿಸುತ್ತಿದ್ದವಳಿಗೆ ಮತ್ತೆ ನಿದ್ದೆ.
                ಹಾಗಾದರೆ ಆಕೆಗೆ ಕೇಳಿದ ಶಬ್ದವೇನು? ಅದರ ಹಿನ್ನೆಲೆ ಏನಿರಬಹುದು? ಅದರ ಮೂಲ ಯಾವುದು? ವಿಜೇತಾ ಇದರ ಮೂಲವನ್ನು ತಿಳಿಯಲು ಪ್ರಯತ್ನಿಸಬೇಕಿತ್ತೆ? ಆ ಶಬ್ದ ಇಲ್ಲೇನಾದರೂ ತಿರುವು ನೀಡಬಹುದೇ? ಯೋಚಿದಂತೆಲ್ಲ ಪ್ರಶ್ನೆಗಳೇ ಧುತ್ತೆಂದು ಕಾಡಿತು.

****11****

            ಬೆಳಿಗ್ಗೆ ಇದ್ದಕ್ಕಿದ್ದಂತೆ ಮೊಬೈಲ್ ರಿಂಗಣಿಸಲು ಆರಂಭಿಸಿದಾಗ ವಿಜೇತಾ ಧಡ್ಡನೆ ಎದ್ದು ಕುಳಿತಳು. ನಿನ್ನೆ ಸಂಜೆ ಬರುವಾಗ ಮೊಬೈಲ್ ಸಿಗ್ನಲ್ ಕಟ್ಟಾಗಿತ್ತು. ತಮ್ಮೂರಿನ ಫಾಸಲೆಯಲ್ಲಿ ಒಂದೋ ಎರಡೋ ಕಡೆಗಳಲ್ಲಿ ಮಾತ್ರ ಮೊಬೈಲ್ ಸಿಗ್ನಲ್ ಸಿಗುತ್ತದೆ ಎಂದು ವಿನಾಯಕ ಹೇಳಿದ್ದ ನೆನಪು. ಆದರೆ ಈ ಕೋಣೆಯಲ್ಲಿ ಮೊಬೈಲ್ ರಿಂಗಾಗುತ್ತಿದೆಯಲ್ಲ ಎಂದುಕೊಂಡು ಮೊಬೈಲ್ ನೋಡಿದವಳಿಗೆ ಅಚ್ಚರಿ. ಮೊಬೈಲಿನಲ್ಲಿ ಸಿಗ್ನಲ್ಲಿನ ಮುೂರು ಕಡ್ಡಿಗಳನ್ನು ತೋರಿಸುತ್ತಿತ್ತು. ಅಬ್ಬಾ.. ಈ ಕುರಿತು ವಿನಾಯಕನ ಬಳಿ ಮಾತನಾಡಬೇಕು ಎಂದುಕೊಂಡಳು. ನವೀನಚಂದ್ರ ಅವರು ಪೋನ್ ಮಾಡಿದ್ದರು. ಬಂದ ಕೆಲಸ ಏನಾಯಿತೆಂಬ ಬಗ್ಗೆ ಮಾತನಾಡಿದರು. ಅರ್ಧಗಂಟೆಗಳ ಕಾಲ ಪೋನಿನಲ್ಲಿ ಮಾತನಾಡಿದ ವಿಜೇತಾ ಇನ್ನೇನು ಮೊಬೈಲ್ ಇಡಬೇಕೆನ್ನುವಷ್ಟರಲ್ಲಿ ಕೆಳಮನೆಯಿಂದ ಬುಲಾವ್ ಬಂದಿತು. ಮೈಮುರಿಯುತ್ತಾ ಹೊರಟಳು ವಿಜೇತಾ.
               ಮಹಡಿಯ ಮನೆಯಿಂದ ಕೆಳಕ್ಕೆ ಇಳಿಯುತ್ತಿದ್ದಂತೆಲ್ಲ `ತೆಳ್ಳೇವು, ಕಾಯಿ ಚಟ್ನಿಯ ಗಮ್ಮೆನ್ನುವ ಕಂಪು ಮೂಗಿಗೆ ಬಡಿಯಲಾರಂಭಿಸಿತು. ಈಕೆ ಅಡುಗೆ ಮನೆಗೆ ಹೋಗುವ ವೇಳೆಗಾಗಲೇ ಅಡುಗೆ ಮನೆಯಲ್ಲಿ ಉದ್ದನೆಯ ಸಾಲಿಲ್ಲಿ ಕುಳಿತ ಮನೆಯ ಸದಸ್ಯರು ಅಲ್ಲಿ ತಯಾರು ಮಾಡಿದ್ದ `ಮೊಗೆಕಾಯಿ ತಳ್ಳೇವು' ತಿನ್ನುವುದರಲ್ಲಿ ಒಬ್ಬರಗೊಬ್ಬರು ಸ್ಪರ್ಧೆಗೆ ಬಿದ್ದಿದ್ದಾರೋ ಎಂಬಂತೆ ಮಾಡುತ್ತಿದ್ದರು. ಪ್ರದೀಪ ಎಷ್ಟೋ ತೆಳ್ಳೇವು ತಿಂದ ಶಾಸ್ತ್ರ ಮಾಡಿ ಏಳಲು ಪ್ರಯತ್ನಿಸಿದಾಗ ಅಲ್ಲೇ ಇದ್ದ ಸರ್ವೇಶ್ವರ ಹೆಗಡೆಯವರು `ತಮಾ.. ನೀ ಎಂತಾ.. ಮಾರಾಯ.. ಬರಿ ನಾಲ್ಕು ತೆಳ್ಳೇವಿಗೆ ಟುಸ್ಸಾಗೋದ್ಯನಾ? ನಿನ್ ವಯಸ್ನಲ್ಲಿ ಆನು ಕನಿಷ್ಟ 12 ತೆಳ್ಳೆವ್ ತಿಂತಿದ್ದಿ ಗೊತ್ತಿದ್ದನಾ..' ಎಂದು ಹೇಳಿದವರೇ ಪ್ರದೀಪನನ್ನು ಮತ್ತೆ ಕೂರಿಸಿ ಮತ್ತೆರಡು ತೆಳ್ಳೇವನ್ನು ಹಾಕಿದರು. ಪ್ರದೀಪ ಕಕ್ಕಾಬಿಕ್ಕಿಯಾಗಿದ್ದ. ಆತನ ಪಾಡು ನೋಡಿ ವಿಜೇತಾಳಿಗೆ ನಗು ಬಂದಿತು. ನಂತರ ಆಕೆಯೂ ತಳ್ಳೇವು ತಿನ್ನುವವರ ಸಾಲಿಗೆ ಸೇರಿ ಕುಳಿತುಕೊಂಡಳು.
(ಅಘನಾಶಿನಿ ನದಿಗೆ ಅಡ್ಡಲಾಗಿ ದಂಟಕಲ್ಲಿನಲ್ಲಿ ಯುವಕರು ನಿರ್ಮಿಸುವ ಕಾಲುಸಂಕ)
              ತಿಂಡಿ ಮುಗಿಯಿತು. ರಾತ್ರಿ ಕನಸಿನಲ್ಲಿ ನಡೆದಂತಿದ್ದ ಆ ವಿಚಿತ್ರ ಘಟನೆಯ ಬಗ್ಗೆ ವಿಜೇತಾ ಕೇಳಬೇಕು ಎಂದುಕೊಂಡಿದ್ದಳು. ಆದರೆ ಯಾಕೋ ಆ ಮಾತು ಗಂಟಲಿನಲ್ಲಿಯೇ ಉಳಿದುಬಿಟ್ಟಿತು.
              ಆ ನಂತರ ಊರು ತಿರುಗಬೇಕೆಂಬ ಹಂಬಲ ಎಲ್ಲರಿಗೆ ಮೊದಲಾಯಿತು. ವಿನಾಯಕ ಸ್ಥಳೀಯನಾಗಿದ್ದರಿಂದ ಆ ಗುಂಪಿಗೆ ಆತ ನಾಯಕನಾದ. ಜೊತೆಗೆ ಪುಟ್ಟ ಹುಡುಗ ರಾಜೀವನೂ ಬಂದ. ಯಾಕೋ ಎಲ್ಲರಿಗೂ ಊರಿನ ಇತರ ಮನೆಗಳಿಗೆ ಹೋಗಬೇಕು ಎನಿಸಲಿಲ್ಲ. ಹಾಗಾಗಿ ವಿನಾಯಕ ಅವರನ್ನೆಲ್ಲ ಕಾಡು-ಮೇಡು ಸುತ್ತಿಸಲು ಹೊರಟ. ವಿನಾಯಕನ ಜೊತೆಗೆ ಸಾಗುತ್ತಿದ್ದ ವಿಕ್ರಂ, ವಿಷ್ಣು, ಪ್ರದೀಪ, ವಿಜೇತಾ, ರಮ್ಯಾ, ರಾಜೀವ ಇವರೆಲ್ಲ ಸಾಗುತ್ತಿದ್ದರೆ ಆ ಊರಿಗೆ ಊರೇ ಇದ್ಯಾವ ದಂಡು ಇಲ್ಲಿಗೆ ಬಂದು ಅಟಕಾಯಿಸಿತು ಎಂದುಕೊಂಡಿತು.
               ಮೊದಲು ತನ್ನ ಮನೆಯ ಜಮೀನನ್ನು ತೋರಿಸುತ್ತೇನೆ ಎಂದು ಹೇಳಿದ ವಿನಾಯಕ ಒಂದೆರಡು ಅಂಕುಡೊಂಕಿನ ದಾರಿಯಲ್ಲಿ ಹಲ-ಕೆಲ ಗುಡ್ಡ ಬೆಟ್ಟಗಳನ್ನು ಹತ್ತಿಳಿಸಿಕೊಂಡು ಬಂದು ಅದೊಂದು ವಿಶಾಲವಾದ ಗದ್ದೆ ಬಯಲಿನ ಕಡೆಗೆ ಕರೆದುಕೊಂಡು ಬಂದ. ವಿಶಾಲವಾದ ಗದ್ದೆಯ ಪಕ್ಕದಲ್ಲಿ ಆಗಸದ ಕಡೆಗೆ ಚಾಚಿ ನಿಂತಿದ್ದ ಅಡಿಕೆ, ತೆಂಗಿನ ಮರಗಳು ಎಲ್ಲರನ್ನೂ ಸ್ವಾಗತಿಸಿದವು. ಅದ್ಯಾವಾಗಲೋ ತೋಟಕ್ಕೆ ಬಂದು ಅಲ್ಲಿ ಆಳುಗಳಿಂದ ತೆಂಗಿನ ಕಾಯಿಗಳನ್ನು ಕೀಳಿಸುತ್ತಿದ್ದ ಶ್ರೀಕಂಠ ಹೆಗಡೆಯವರು `ಬರ್ರ ತಮಾ... ಕುಂತ್ಗಳಿ..' ಎಂದವರೇ ಎಲ್ಲರಿಗೂ ಸೀಯಾಳಗಳನ್ನು ಕೀಳಿಸಿಕೊಟ್ಟರು.
               ಅಷ್ಟರಲ್ಲಿ ಅಲ್ಲಿಗೆ `ಹೋಯ್.. ಹೆಗುಡ್ರು.. ಹನಿ ಇಲ್ ಬನ್ನಿ.. ಈ ತೆಂಗಿನ ಮರಕ್ಕೆ ತುಂಬಿ ಹುಳ ಹೊಡದದೆ ನೋಡಿ...' ಎನ್ನುವ ಧ್ವನಿ ಕೇಳಿ ಬಂದಿತು. ಶ್ರೀಕಂಠ ಹೆಗಡೆಯವರು `ಯಾರಾ ಅದು ದ್ಯಾವನನಾ.. ಆ ತೆಂಗಿನ ಮರ ಸೊಯ್ಸಾ.. ತುಂಬೆ ಹೊಡೆದಿದ್ದನ್ನು ಸರಿ ಮಾಡು..' ಎಂದು ಹೇಳಿ ಆತನ ಧ್ವನಿ ಕೇಳಿದ ಕಡೆಗೆ ಹೊರಟರು. ಅವರಿಬ್ಬರಲ್ಲಿ ಏನೋ ಮಾತುಕತೆ ನಡೆಯಿತು. ಹಿಂತಿರುಗಿ ಬಂದ ಹೆಗಡೆಯವರು ಎಲ್ಲರ ಬಳಿ `ಅಂವ ದ್ಯಾವ ಹೇಳಿ.. ಯಮ್ಮನೆ ಆಳುಮಗ. ಒಳ್ಳೆಯ ಕೆಲಸದ ಆಳು. ಜೇನು ಕೊಯ್ಯುವುದು, ಮೀನು ಹಿಡಿಯುವುದು, ತೆಪ್ಪ ಮಾಡುವುದು, ಕೊನೆ ಕೊಯ್ಯುವುದು, ಬೇಡೆ ಮಾಡೋದು ಇವೆಲ್ಲ ದ್ಯಾವನ ಕೆಲಸಗಳು..' ಎಂದು ಹೇಳಿ ಮುಗಿಸುತ್ತಿದ್ದಂತೆ ದ್ಯಾವ ಅಲ್ಲಿ ಹಾಜರಾಗಿ `ಸುಮ್ಮನಿರ್ರಾ ಹೆಗಡ್ರು,, ನನ್ನ ಬಗ್ಗೆ ಎಂತಾ ಹೇಳ್ತಿ...' ಎಂದು ನಾಚಿ ನೀರಾದ. ಕಪ್ಪಾಗಿದ್ದ ಆತನ ಮುಖ ನಾಚಿಕೆಯಿಂದ ಮತ್ತಷ್ಟು ಕಪ್ಪಾಯಿತು. ಪೆಕರ ಪೆಕರನಂತೆ `ಯಾರು ಇವ್ರು..?'ಎಂದು ಕೇಳಿದ.
               ಎಲ್ಲರ ಪರಿಚಯ ಆದ ನಂತರ `ಕಾಡನ್ನ ನೋಡ್ಲಿಕ್ಕೆ ಅಲ್ಲಿಂದ ಇಲ್ಲಿಗೆ ಬಂದ್ರಾ.. ನಿಮಗೆಂತಕ್ಕೆ ಹ್ವಾರ್ಯ ಇಲ್ಲ ಹೇಳಿ..' ಎಂದ. ಆತ ಇವರ ರಿಸರ್ಚ್ ಎಂದರೆ ಕಾಡು ನೋಡೋದಷ್ಟೆ ಎಂದುಕೊಂಡಿರಬೇಕು.
               ಮರಳಿ ಸಂಜೆಯ ವೇಳೆಗೆ ಆ ಊರಿನ ಜೀವನ್ಮುಖಿ ನದಿ ಅಘನಾಶಿನಿಯೆಡೆಗೆ ಕರೆದೊಯ್ದ ವಿನಾಯಕ. ಊರಿನಿಂದ ಕೇವಲ ಅರ್ಧ ಕಿಲೋಮೀಟರಿನಾಚೆ ಹರಿಯುತ್ತಿದ್ದಳು ಆಕೆ. ನದಿಯ ಇಕ್ಕೆಲಗಳಲ್ಲಿ ಹಸಿರು ತೋಟ, ಗದ್ದೆ, ವಾಟೆಯ ಮಟ್ಟಿಗಳು ತುಂಬಿಕೊಂಡಿದ್ದವು. ಇವೆಲ್ಲವನ್ನೂ ದಾಟಿ ಬಂದವರಿಗೆ ತಣ್ಣಗೆ ಹರಿಯುವ ಅಘನಾಶಿನಿ ಬಳುಕಯತ್ತಾ ಹರಿಯುತ್ತಿದ್ದುದು ಕಾಣಿಸಿತ್ತು. ಅಕ್ಕಪಕ್ಕದಲ್ಲೆಲ್ಲ ಬಂಡೆಗಳ ಹಂದರ. ಜೊತೆಯಲ್ಲಿಯೇ ಶಬ್ದ ಸಹಿತವಾಗಿ ಓಡಿದಂತೆ ಹರಿಯುತ್ತಿದ್ದ ನದಿ. ನದಿಯ ಒಂದು ಕಡೆಯಲ್ಲಿ ದಂಟಕಲ್ಲಿನ ಯುವಕರು ಹಾಕಿದ್ದ ಕಾಲು ಸಂಕ. ಇವಿಷ್ಟು  ಮೊದಲ ನೋಟಕ್ಕೆ ಅವರಿಗೆ ಕಾಣಿಸಿದ್ದ ದೃಶ್ಯ ವೈಭವ.
                 ಎಲ್ಲರೂ ಒಂದೊಂದು ಕಡೆಗೆ ಹೋಗಿ ಕುಳಿತರು. ವಿನಾಯಕ ಆ ನದಿಯನ್ನೇ ಮುತ್ತಿಕ್ಕುವಂತಿದ್ದ ಒಂದು ಬಂಡೆಗಲ್ಲನ್ನು ಏರಿ ಕುಳಿತ. ಹುಡುಗ ರಾಜೀವನಾಗಲೇ ಪ್ರದೀಪನೊಂದಿಗೆ ಗೆಳೆತನ ಬೆಳೆಸಿಬಿಟ್ಟಿದ್ದ. ಅವರಿಬ್ಬರೂ ಸಿಕ್ಕಾಪಟ್ಟೆ ಹರಟೆ ಕೊಚ್ಚಲು ಆರಂಭಿಸಿಬಿಟ್ಟಿದ್ದರು.
              ರಮ್ಯಾ, ವಿಜೇತಾರು ನೀರಿನಲ್ಲಿ ಕಾಲನ್ನು ಇಳಿಬಿಟ್ಟು ನೀರಾಟಕ್ಕೆ ತೊಡಗಿಕೊಂಡಿದ್ದರು. ವಿಕ್ರಂ, ವಿಷ್ಣು ಅವರದ್ದೇ ಆದ ಲೋಕದಲ್ಲಿ ತಾವಿದ್ದರು. ರಾಜೀವ ಇದ್ದಕ್ಕಿದ್ದಂತೆ ದೊಡ್ಡದಾಗಿ ಎಲ್ಲರಿಗೂ ಕೇಳಿಸುವಂತೆ `ನಮ್ ವಿನಾಯ್ಕಣ್ಣ ೀ ಕಲ್ಲಿನ ಬಗ್ಗೆ ಒಂದ್ ಬರಹ ಬರದ್ದಾ.. ಅದಕ್ಕೆ ಪ್ರಶಸ್ತಿ ಬಂಜು..' ಎಂದ.
              ತಕ್ಷಣ ಎಲ್ಲರೂ ಆ ಪ್ರಬಂಧದ ಬಗ್ಗೆ, ಬರಹದ ಬಗ್ಗೆ ಕೇಳಲಾರಂಭಿಸಿದರು. ಮೊದಲು ನಾಚಿಕೊಂಡನಾದರೂ ಕೊನೆಗೆ ಹೇಳಲು ಆರಂಭಿಸಿದ ವಿನಾಯಕ. `ಆ ಬರಹದ ಹೆಸರು ಅಘನಾಶಿನಿ ತೀರದ ಮೌನ ತಪಸ್ವಿಯ ನೆತ್ತಿಯ ಮೇಲೆ ಕುಳಿತು.. ಅಂತ. ಈ ಕಲ್ಲಿಗೆ ನಮ್ಮೂರಿನಲ್ಲಿ ಎಲ್ಲರೂ ಆನೆ ಕಲ್ಲು ಅಂತಾನೇ ಕರೆಯೋದು. ಅದರ ಬಗ್ಗೆ ಬರೆದಿದ್ದು ಆ ಬರಹ. ಈ ಕಲ್ಲಿನ ಮೇಲೆಯೇ ಕುಳಿತು ಬರೆದಿದ್ದು ಅದು. ನಾನು ಈ ಕಲ್ಲಿನ ಮೇಲೆ ಕುಳಿತು ಒಂದು ದಿನದಲ್ಲಿ ಅದೇನೇನನ್ನು ಅನುಭವಿಸಿದ್ದೆನೋ ಅವೆಲ್ಲವನ್ನೂ ಸುಮ್ಮನೆ ಅಕ್ಷರ ರೂಪಕ್ಕೆ ಇಳಿಸುತ್ತ ಹೋದೆ. ಖಂಡಿತವಾಗಿಯೂ ಅದೊಂದು ಉತ್ತಮ ಬರಹವಾಗುತ್ತದೆ ಎಂಬ ನಿರೀಕ್ಷೆ ನನಗೆ ಇರಲಿಲ್ಲ. ಸುಮ್ಮನೆ ಬರೆಯುತ್ತ ಹೋದೆ. ಯಾವುದೋ ಪ್ರಶಸ್ತಿಗೆ ಬರಹ ಆಹ್ವಾನಿಸಿದ್ದರು. ಕಳಿಸಿದ್ದೆ. ಅದಕ್ಕೆ ಬಹುಮಾನ ಬಂದಿತ್ತಷ್ಟೇ..' ಎಂದ.

(ಮುಂದುವರಿಯುತ್ತದೆ)

Saturday, February 14, 2015

ಮಾತಾಡು ಮಲ್ಲಿಗೆ

ಮಾತಾಡು ನನ್ನ ಮಲ್ಲಿಗೆಯೇ
ಆ ಬದುಕು ಬರಡಾಗಿಸುವ
ಮೌನವೋಡಿಸಲೊಮ್ಮೆ |
ಆ ಗ್ರೀಷ್ಮದುರಿಯ ಬೆಂದು ತಿನ್ನುವ
ಬಿಸಿಲೆಡೆಗೆ ತಂಪಾಗಲೊಮ್ಮೆ |

ಬತ್ತಿ ಹೋದ ಒಡಲ ಭಾವನೆಗಳು
ಚಿಗಿತು ಹಸಿರಾಗಿ ನಳನಳಿಸಲೊಮ್ಮೆ |
ಮನ ಕೊರೆವೇಕಾಂತವ ಹಿಡಿದು
ಬಡಿದು ಓಡಿಸಲೊಮ್ಮೆ |
ಖಾಲಿಯಾಗಿರುವ ಕವಿಮನಕ್ಕೆ
ಸ್ಪೂರ್ತಿಯಾಗಿ ಕವನ ಬರೆಸಲೊಮ್ಮೆ ||

ಮಾತಾಡು ನನ್ನ ಮಲ್ಲಿಗೆಯೇ
ಹೆಚ್ಚೆಲ್ಲ ನುಡಿ ಬೇಡ |
ಒಂದೆರಡು ನುಡಿ ಸಾಕು. ಇಷ್ಟು
ದಿನಗಳ ಕಾಯುವಿಕೆಗೆ, ಕಾತರಿಕೆಗೆ
ಮೌನವ ಮರೆಸುವಿಕೆಗೆ |
ಸ್ಪರ್ಷ ಬೇಡ, ಮುತ್ತೂ ಬೇಡ
ನಿನ್ನ ಮಧುರ ಮಾತೆರಡಷ್ಟೇ ಸಾಕು |
ಜೊತೆಗಷ್ಟು ಬೆಚ್ಚ ನಗು, ನಟ್ಟ ನೋಟ
ಅಷ್ಟು ಸಾಕು, ಅಷ್ಟೇ ಸಾಕು ||

***
(ಈ ಕವಿತೆಯನ್ನು ಬರೆದಿರುವುದು 02-09-2006ರಂದು ದಂಟಕಲ್ಲಿನಲ್ಲಿ)

Thursday, February 12, 2015

ಅಘನಾಶಿನಿ ಕಣಿವೆಯಲ್ಲಿ-11

                ಇವತ್ತು ಎಪ್ರೀಲ್ 11. ಈ ಒಂದು ದಿನವೇ ಎಷ್ಟೆಲ್ಲ ಘಟನೆಗಳು ನಡೆದುಬಿಟ್ಟವಲ್ಲ. ಗಿರ ಗಿರಪತ್ಥರ್ ನೋಡಿದ್ದು, ಲಾಲಗುಳಿ ಜಲಪಾತ ದರ್ಶನ, ಸಿದ್ಧಿಯ ಜೊತೆಗಿನ ಮಾತು-ಕಥೆ, ಆ ವಿಷ್ಣುವಿಗೆ ಹಾವು ಕಚ್ಚಿದ್ದು, ಆತನ ವೃತ್ತಾಂತ, ಎಲ್ಲಕ್ಕಿಂತ ಮಿಗಿಲಾಗಿ ತನ್ನ ಅಪ್ಪ ಹೇಳಿದ ಸುದ್ದಿ, ವಿಜೇತಾಳ ವೃತ್ತಾಂತ ಇತ್ಯಾದಿಗಳ ಬಗ್ಗೆ ಯೋಚಿಸಿದ. ಎಲ್ಲವನ್ನೂ ತನಗಾಗಿ, ತನ್ನ ಮಗನಿಗಾಗಿ ಎಂಬ ಧೋರಣೆಯ ತನ್ನ ಅಪ್ಪ ಮಾಡುತ್ತಿದ್ದ ಈ ಕೆಲಸ, ಅದನ್ನೂ ತನಗೆ ಹೇಳದೇ ಇದ್ದುದು, ಜೊತೆಗೆ ಕೆಲಸ ಮಾಡುತ್ತಿದ್ದರೂ ತಾನು ಮೊದಲೇ ಪರಿಚಯದವಳು ಎಂಬುದನ್ನು ತಿಳಿಸದ ವಿಜೇತ, ಕೆಟ್ಟವನಂತೆ ಕಾಣಿಸಿಕೊಳ್ಳುತ್ತ ಒಳ್ಳೆಯದನ್ನೇ ಮಾಡುತ್ತಿದ್ದ ವಿಷ್ಣು, ಜೊತೆಗೆ ನಿಘೂಡ ವ್ಯಕ್ತಿತ್ವದ ಪ್ರದೀಪ ಇವರೆಲ್ಲರಿಂದ ತನಗೆ ಏನೋ ದೊಡ್ಡ ಗುಟ್ಟು ತಿಳಿಯುವುದು ಇರಬೇಕು. ಅದೆಲ್ಲವನ್ನೂ ಎಲ್ಲರೂ ಸೇರಿ ಮುಚ್ಚಿಟ್ಟಿದ್ದಾರಾ ಎಂದೆಲ್ಲ ಆಲೋಚಿಸಿದ.
                  ಹೀಗೆ ಯೋಚಿಸುತ್ತಿದ್ದ ಸ್ವಲ್ಪ ಹೊತ್ತಿನಲ್ಲಿಯೇ ಅಲ್ಲಿಗೆ ವಿಜೇತಾ ಬಂದಳು. ಆಕೆ ಬಂದವಳೇ `ಏನಪ್ಪಾ.. ಏನನ್ನೋ ಆಲೋಚನೆ ಮಾಡುತ್ತಿರೋ ಹಾಗಿದೆ..? ಏನಾದರೂ ಸಮಸ್ಯೆ ಆಗಿದೆಯಾ?' ಎಂದಳು.
                  `ಏನಿಲ್ಲಾ ನವೀನಚಂದ್ರ ಅವರು ವಹಿಸಿರುವ ಆ ಸ್ಮಗ್ಲಿಂಗ್ ಗುಂಪನ್ನು ಹುಡುಕೋ ಬಗ್ಗೆ ಎಲ್ಲಾ ಯೋಚನೆ ಮಾಡ್ತಾ ಇದ್ದೀನಿ. ನಾನು ಇಲ್ಲಿಗೆ ಬಂದಿದ್ದೇ ಇದಕ್ಕಾಗಿ. ಆದರೆ ಇಲ್ಲಿ ಮತ್ತಿನ್ನೇನೋ ಆಗ್ತಾ ಇದೆ. ನಾನು ಬಂದ ಕೆಲಸವೇ ಮರೆತು ಹೋಗುವಂತಾಗುತ್ತಿದೆ..' ಎಂದ ಅಸಹನೆಯಿಂದ ವಿಕ್ರಂ.
                   ` ಹೇಯ್.. ತಲೆ ಕೆಡಿಸಿಕೊಳ್ಳಬೇಡ ಮಾರಾಯಾ.. ಎಲ್ಲಾನೂ ಯಾವಾಗ ಆಗಬೇಕೋ.. ಅದೇ ಆಗುತ್ತೆ.. ನೀನು ಸುಮ್ನೆ ಗೊಂದಲ ಮಾಡ್ಕೋತಿದಿಯಾ ಅಷ್ಟೆ..' ಎಂದಳು ವಿಜೇತಾ.
                   `ಆದರೆ ನನ್ನ ಪ್ರಯತ್ನ ನಾನು ಮಾಡಲೇಬೇಕಲ್ಲ. ನಮ್ ಹೊಣೆಗಾರಿಕೆಯನ್ನೂ ಮರೀಬಾರದಲ್ಲ..'
                   `ನಿಂಗೊತ್ತಾ.. ನಾವು ನಿಂಗೆ ಈ ಕೆಲಸ ವಹಿಸಿರುವುದನ್ನು ಕೇಳಿದ ನಿಮ್ಮ ತಂದೆ ನವೀನಚಂದ್ರರ ಜೊತೆ ಗಲಾಟೆ ಮಾಡಿದ್ರು. ನಿನಗೆ ಇದರಿಂದ ಏನಾದ್ರೂ ತೊಂದ್ರೆ ಆದ್ರೆ ಎನ್ನೋ ಹಾಗೆ ವರ್ತಿಸಿದ್ರು. ಅದಕ್ಕಾಗ್ಲೇ ಒಂದ್ ಸಾರಿ ನಿನ್ಹತ್ರ ನವೀನಚಂದ್ರರು ಈ ಕೇಸಿನ ಬಗ್ಗೆ ಮುಂದುವರಿಯಬೇಡ ಎಂದಿದ್ದು..'
                   `ಏನು.. ಹೀಗೆಲ್ಲಾ ನಡೆದಿತ್ತಾ? ನಂಗ್ಯಾಕೆ ಹೇಳಲಿಲ್ಲ.. ಅಷ್ಟಕ್ಕೂ ನನ್ನಪ್ಪ ಯಾಕೆ ಹೀಗ್ಮಾಡಿದ?'
                  `ನೋಡು ವಿಕ್ರಂ. ನಮ್ಮ ಹೆತ್ತವರು ಎಷ್ಟೇ ನಮ್ಮನ್ನು ಬೈದರೂ, ಅದು ತೋರಿಕೆಗೆ ಮಾತ್ರ. ನಮ್ಮ ಮಕ್ಕಳು ಒಳ್ಳೆಯವರಾಗಬೇಕು, ಅವರು ಜೀವನದಲ್ಲಿ ಮುಂದೆ ಬರಬೇಕು. ಅವರಿಗೆ ಯಾವುದೇ ಕಷ್ಟಗಳು ಬರಬಾರದು ಎಂದೆಲ್ಲಾ ಅಂದ್ಕೊಂಡಿರ್ತಾರೆ. ಮಕ್ಕಳಿಗಾಗಿ ಎಷ್ಟೇ ಕಷ್ಟವನ್ನು ತಾವು ಎದುರಿಸೋಕೆ ತಯಾರಾಗಿರ್ತಾರೆ. ಈ ಕಾರಣಕ್ಕಾಗಿಯೇ ನಿನ್ನ ತಂದೆ ಈ ರೀತಿ ಮಾಡಿದ್ದು..'
                  `ಆದ್ರೂ ನಂಗೆ ಇದೆಲ್ಲ ಅರ್ಥಾನೇ ಆಗೋದಿಲ್ಲ. ಎಲ್ಲಾರ ಥರಹ ಇಲ್ಲಿ ಇಲ್ಲ. ಯಾವುದೋ ಮೂಲೆಯ ಹಳ್ಳಿಯೊಂದರಿಂದ ಅಲ್ಲಿರುವ ಓರ್ವ ವ್ಯಕ್ತಿ ತಾನು ಯಾವುದೇ ಇಂಗ್ಲೀಷ್ ಗಳಂತಹ ಭಾಷಾಜ್ಞಾನ ಜೊತೆಗೆ ಆತ ಯಾರನ್ನೂ, ದೊಡ್ಡ ಊರನ್ನೂ ನೋಡದೇ ಹೀಗೆಲ್ಲ ಮಾಡ್ಲಿಕ್ಕೆ ಸಾಧ್ಯವಾ?'
                  `ನೋಡು ವಿಕ್ರಂ. ನಮ್ಮ ಜನರ ಬಗ್ಗೆ ಒಂದ್ಮಾತು ಹೇಳಬೇಕು. ಅದೇನೆಂದ್ರೆ ನಮ್ಮ ಜನ ಏನೂ ಗೊತ್ತಿಲ್ಲದಿದ್ದರೂ ತನ್ನಿಂದ ತಾನೇ ಅವರಿಗೆ ಅದರ ಅರಿವಿರುತ್ತದೆ. ಯಾವುದೇ ಜ್ಞಾನ ಇಲ್ಲದಿದ್ದರೂ ಅವರು ಎಲ್ಲಿ, ಏನನ್ನು ಬೇಕಾದರೂ ಸಾಧಿಸಬಲ್ಲ, ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿರ್ತಾರೆ ನೆನಪಿಟ್ಕೋ.. ನಮ್ಮ ಹಳ್ಳಿಗರು ಯಾರಿಗೂ ಕಮ್ಮಿಯಿಲ್ಲ. ಅವರ ಜ್ಞಾನ ದೇಸೀ ಜ್ಞಾನ ಜಗತ್ತಿನಲ್ಲೇ ಶ್ರೇಷ್ಟವಾದುದು. ಅಂತವರು ಮನಸ್ಸು ಮಾಡಿದರೆ ಇನ್ನೆಂತದ್ದಾದರೂ ಸಾಧನೆ ಮಾಡಬಲ್ಲರು..'
                  `ಅದಿರ್ಲಿ ನೋಡೋಣ ಮುಂದೇನಾಗುತ್ತೆ ಅಂತ. ಬಹುಶಃ ನಾಳೆ ಅಥವಾ ನಾಡಿದ್ದು ನಾವು ಇಲ್ಲಿಂದ ಹೊರಡಬೇಕಾಗುತ್ತದೆ. ಶಿರಸಿ ನಮ್ಮ ಕಾರ್ಯಸ್ಥಾನ. ಹಾಗಾಗು ಶಿರಸಿಯ ಕಡೆಗೆ ನಾವು ಹೋಗಲೇಬೇಕು. ಶಿರಸಿಗೆ ಹತ್ತಿರದ ಊರಾದ ದಂಟಕಲ್ ಗೆ ಹೋಗೋಣ. ಅಲ್ಲಿ ಉಳಿದುಕೊಂಡೇ ನಾವೆಲ್ಲ ಕೆಲಸ ಮುಂದುವರಿಸೋಣ. ಮುಖ್ಯವಾಗಿ ನಾವು ಇನ್ನು ಮೊದಲಿನ ಹಾಗೆ ಇರಲು ಸಾಧ್ಯವಿಲ್ಲ. ಹೆಜ್ಜೆ ಹೆಜ್ಜೆಗೆ ಅಪಾಯ ಬಂದರೂ ಬರಬೌದು. ಜೊತೆಗೆ ಆ ನವೀನಚಂದ್ರರು ಹೇಳಿದಂತೆ ಯಾವುದಾದರೂ ರಿಸರ್ಚಿನವರು ಅಂಡ್ಕೊಂಡು ಹೋಗೋಣ. ಈ ವಿಷ್ಯಾನ ಕೇವಲ ವಿನಾಯಕನಿಗೆ ಮಾತ್ರ ತಿಳಿಸಬೇಕು. ಉಳಿದವರ್ಯಾರಿಗೂ ಗೊತ್ತಾಗಬಾರದು. ತಿಳೀತಾ..?'
                   `ಸರಿ ಯಾವ ರಿಸರ್ಚಿನೋರು ಅಂತಾ ಹೋಗೋದು..?'
                   `ಉಂ ಇದ್ದೇ ಇದೆಯಲ್ಲ ಉತ್ತರ ಕನ್ನಡದ ಕಾಡು ಮೃಗಗಳು ಹಾಗೂ ಜೀವ ವೈವಿಧ್ಯದ ಪರಿವೀಕ್ಷಣೆಯ ಹೆಸರು ಹೇಳಿದರಾಯ್ತು..'
                   `ಹುಂ.. ಒಳ್ಳೆ ಐಡಿಯಾ.. ಸರಿ ಹಾಗೇ ಮಾಡೋಣ..' ಎನ್ನುವಲ್ಲಿಗೆ ಆಗಲೇ ಹೊತ್ತು ಮದ್ಯರಾತ್ರಿಯನ್ನು ಮೀರಿತ್ತು. ಇಬ್ಬರೂ ಮಾತು ಮುಗಿಸಿ ನಿದ್ರೆಯ ಕಡೆಗೆ ಜಾರಿದರು.

***10***

                `ಮೊದ್ಲು ಯಾಣಕ್ಕೆ.. ಆ ನಂತ್ರ ಬೇರೆ ಕಡಿಗೆ..' ಎಂದು ಕಿರುಚಿದಳು ರಮ್ಯ.
                 `ಊಹೂ.. ಅದೆಲ್ಲಾ ಆಗ್ತಿಲ್ಲೆ.. ಮೊದಲು ಬನವಾಸಿ.. ನಂತರ ಯಾಣ.. ಆಮೇಲೆ ಸಹಸ್ರಲಿಂಗ..'ಎಂದು ಹೇಳಿದ ವಿನಾಯಕ.
                 `ಶ್.. ಸುಮ್ನಿರಿ ಎಲ್ಲರೂ.. ಮೊದಲು ದಂಟ್ಕಲ್ಲಿಗೆ ಹೋಗೋಣ. ಆ ನಂತ್ರ ಬೇರೆ ಕಡೆಗೆ. ನಾವು ಮುಖ್ಯವಾಗಿ ರಿಸರ್ಚಿಗೆ ಬಂದಿದದ್ದು. ಹಾಗಾಗಿ ಮೇರೆ ಕಡೆಗೆಲ್ಲಾ ನಿಧಾನವಾಗಿ ಹೋಗಿ ಬಂದರಾಯ್ತು' ಎಂದ ವಿಕ್ರಂ
                  `ಸರಿ ಹಾಗೇ ಆಗ್ಲಿ..' ಎಲ್ಲರ ಒಪ್ಪಿಗೆಯೂ ಸಿಕ್ಕೇ ಬಿಟ್ಟಿತು. ಜೊತೆಗೆ ಎಲ್ಲರೂ ದಂಟಕಲ್ಲಿಗೆ ಸಾಗಲು ಅಗತ್ಯ ವಸ್ತುಗಳನ್ನು ಸಂಗ್ರಹಿಸತೊಡಗಿದರು. ಆ ದಿನ ಮದ್ಯಾಹ್ನವೇ ದಂಟಕಲ್ ಗೆ ತೆರಳಲು ಮುಹೂರ್ತವನ್ನು ಹುಡುಕತೊಡಗಿದರು.
                 ಅಂತೂ ಕಣ್ಣೀರುಮನೆಗೆ ಬಂದು ಐದಾರಿ ದಿನ ಕಳೆದ ನಂತರ ಅಂದು ಅಂದರೆ ಎಪ್ರಿಲ್ 12ರಂದು ದಂಟಕಲ್ಲಿನೆಡೆಗೆ ಸಾಗಲು ಅವಸರಿಸಿದರು.
                 ವಿಕ್ರಂ, ವಿನಾಯಕ, ವಿಜೇತಾ, ರಮ್ಯ, ಪ್ರದೀಪ ಮದ್ಯಾಹ್ನದ ಉರಿಬಿಸಿಲ ಹೊತ್ತಿನೊಳು ಹೊರಡಲುಪಕ್ರಮಿಸಿದಾಗ ಅಲ್ಲಿಗೆ ಬಂದ ವಿಷ್ಣು ತಾನೂ ಬರುವೆನೆಂದ. ಬೇಡವೆಂದರೂ ಆತನ ಹಠಕ್ಕೆ ಎಲ್ಲರೂ ಕೊನೆಗೆ ಒಪ್ಪಿಗೆ ನೀಡಲೇಬೇಕಾಯಿತು. ಕೊನೆಗೊಮ್ಮೆ ಎಲ್ಲರೂ ಹೊರಟರು. ಅವರೆಲ್ಲರೂ ಹೊರಡಲು ಮುಂದಡಿಯಿಡುತ್ತಿದ್ದಾಗಲೇ ವಿಕ್ರಮನ ತಾಯಿಗೆ ಏತಕ್ಕೋ ಒಮ್ಮೆ ಬಲಗಣ್ಣು ಅದುರಲಾರಂಭಿಸಿತ್ತು. ಆದರೆ ಅವರು ಅದನ್ನು ಯಾರಲ್ಲೂ ಹೇಳಲಿಲ್ಲ.
                ಸಾಮಾನ್ಯವಾಗಿ ಗಂಡಸರಿಗೆ ಎಡಗಣ್ಣು ಅದುರಿದರೆ, ಹೆಂಗಸರಿಗೆ ಬಲಗಣ್ಣು ಅದುರಿದರೆ ಅವು ಬರಲಿರುವ ಅಪಾಯದ, ಕೇಡಿನ ಮುನ್ಸೂಚನೆ ಎಂಬ ನಂಬಿಕೆ ಜನಸಾಮಾನ್ಯರಲ್ಲಿದೆ. ಇದು ಬಹುತೇಕ ಸತ್ಯವಾಗಿದೆ ಕೂಡ. ಹಾಗಾದರೆ ಈ ಅದುರುವಿಕೆ ಮುಂದೆ ಬರುವ ಅಪಾಯದ ಮುನ್ನುಡಿಯಾ? ಅಥವಾ ಇಂದಿನ ವೈಜ್ಞಾನಿಕ ಅಧ್ಯಯನಿಗಳು ಹೇಳುವ ಪ್ರಕಾರ ನರಗಳ ಮಿಡಿತವಾ? ಈ ಬಗ್ಗೆ ಯೋಚನೆ ಮಾಡಿದಷ್ಟೂ ನಿಘೂಡವೇ ಮೆರೆದು ನಿಲ್ಲುತ್ತದೆ.

*****

                ಇತ್ತ ಬೇಣದಗದ್ದೆಯ ಸುಬ್ಬಣ್ಣನಿಗೆ ಅದೇಕೋ ಎಡಗಣ್ಣು ಅದುರುತ್ತಿತ್ತು. ಸ್ವಭಾವತಃ ಸಂಪ್ರದಾಯ ವಿರೋಧಿಯಾದ ಆತ ಆಗ ಇದನ್ನು ನಂಬುವ ಗೋಜಿಗೇನೂ ಹೋಗಲಿಲ್ಲ. ಅವನ ಪ್ರಕಾರ ಇದೊಂದು ನರಗಳ ಸ್ಪಂದನ-ಪ್ರತಿಸ್ಪಂದನ. ಹಾಗಾಗಿ ಆತ ಇದಕ್ಕೆ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ತಾನು ಮಾಡ್ತಾ ಇರುವ ಕೆಲಸ ತನ್ನ ಅಣ್ಣನಿಗೆ ಗೊತ್ತಾಗಲೇ ಬಾರದು ಎಂದು ಮತ್ತಷ್ಟು ಜಾಗರೂಕನಾಗಿ ಕಾರ್ಯ ನಿರ್ವಹಿಸಲು ಆರಂಭಿಸಿದ.

****

             ಅಂತೂ ಇಂತೂ ಹೊರಟ ಪಯಣ ನಿಧಾನವಾಗಿ ಯಲ್ಲಾಪುರವನ್ನು ದಾಟಿ ಮುಂದೆ ಸಾಗಿತು. ಕಾರಿನಲ್ಲಿ ವಿಕ್ರಂ, ಪ್ರದೀಪ, ವಿನಾಯಕ, ವಿಜೇತಾ, ರಮ್ಯ, ವಿಷ್ಣು ಇಷ್ಟು ಜನರು ಕಾಡು ಹರಟೆಗಳ ಜೊತೆಗೆ ಸಾಗುತ್ತಿದ್ದರು. ಪ್ರದೀಪನ ಹಾಸ್ಯ, ವಿನಾಯಕನ ಕವನಗಳ ಲಾಸ್ಯದ ಜೊತೆಗೆ ಇದ್ದವರಿಗೆ ಚಲಿಸಿದ ಮಾರ್ಗದ ಅರಿವೇ ಆಗಲಿಲ್ಲ. ಅವರು ಹಾದು ಬರುತ್ತಿದ್ದ ಯಲ್ಲಾಪುರ-ಶಿರಸಿ ಮಾರ್ಗದಲ್ಲಿ ಬಹುತೇಕ ಬಂದಂತೆ ವಿಕ್ರಮ ಒಮ್ಮೆಲೆ ಕಾರು ನಿಲ್ಲಿಸಿದ. ಎಲ್ಲರೂ ಏಕೆಂದು ಕೇಳಲಾಗಿ ಅದು ಹುಳಗೋಳವೆಂದೂ, ಸನಿಹದಲ್ಲೇ ಸಹಸ್ರಲಿಂಗವೆಂಬ ಅದ್ಭುತ ತಾಣವಿದೆಯೆಂದೂ ನೋಡಿ ಬರುವಾ ಎಂದೂ ತಿಳಿಸಿದ. ಎಲ್ಲರಿಂದ ಒಪ್ಪಿಗೆ ಸಿಗಲಾಗಿ ಅತ್ತ ಸಾಗಿದರು. ಅಂಕುಡೊಂಕಿನ ದಾರಿಯನ್ನು ಕ್ರಮಿಸಿದ ಕಾರು ಕೊನೆಗೊಮ್ಮೆ ಸಹಸ್ರಲಿಂಗದ ಬಾಯಿ ತಲುಪಿತು.
              ಸುತ್ತಲೂ ಕಾನನದ ಕರಿ ಮಟ್ಟಿಗಳು.ಕೆಳಗಡೆ ನಿತ್ಯ ಸಂಜೀವಿನಿಯಾದ ಶ್ಯಾಮಲ ನದಿ ಶಾಲ್ಮಲೆ ಜುಳು ಜುಳು ಸದ್ದನ್ನು ಮಾಡುತ್ತಾ ಹರಿಯುತ್ತಿದ್ದಳು. ಕಾರಿನಿಂದಿಳಿದ ಎಲ್ಲರೂ ಮೆಟ್ಟಿಲನ್ನು ಓಡುತ್ತಲೇ ಇಳಿದರು. ಆ ನದಿಯ ಒಡಲನ್ನು ಬಹುಬೇಗನೇ ನೋಡುವ ತವಕ ಅವರಿಗಿತ್ತು. ನದಿ ತಟಾಕದಲ್ಲಿ ಅವರಿಗೆ ಕಾಣಿಸಿದ್ದು ಕಾಲಿಟ್ಟ ಕಡೆಯಲ್ಲೆಲ್ಲ ಶಿವಲಿಂಗ. ಅದ್ಯಾವ ಶಿಲ್ಪಿ ಅದ್ಯಾವ ಕಾರಣಕ್ಕೆ ಕೆತ್ತಿದ್ದನೋ.. ಸಹಸ್ರ ಸಹಸ್ರ ಸಂಖ್ಯೆಯಲ್ಲಿದ್ದವು ಲಿಂಗಗಳು. ಪುಟ್ಟ ಪುಟ್ಟ ಲಿಂಗಗಳಿಂದ ಹಿಡಿದು ಬೃಹತ್ ಗಾತ್ರದ ಲಿಂಗಗಳು ಅಲ್ಲಿದ್ದವು.
              ಮೊದಲು ಓಡಿದ ಪ್ರದೀಪ ಅಲ್ಲಿಯೇ ಇದ್ದ ಬೃಹತ್ ನಂದಿಯನ್ನು ಕಂಡ. ಕಂಡವನೇ ಭವ್ಯವಾದ ನಂದಿಯ ಮೇಲೆ ಹತ್ತಿ ಕುಳಿತುಕೊಂಡ. ಆತನ ಮನಸ್ಸು ಮಗುವಂತಾಗಿತ್ತು.. ಕುದುರೆ ಸವಾರನಂತೆ ಕುಳಿತು `ಹೇಯ್... ಪೋಟೋ ತೆಗಿರ್ರೋ...' ಎಂದು ಕೂಗಿದ. ಯಾರೋ ಕ್ಯಾಮರಾವನ್ನು ಕ್ಲಿಕ್ಕಿಸಿದರು. ವಿಕ್ರಮನಂತೂ ಕೂಡಲೇ `ಬಸವನ ಮೇಲೊಬ್ಬ ಕೋಲೇಬಸವ..' ಎಂದ. ನಗು ಬುಗ್ಗೆಯಾಗಿ ಹರಡಿ, ಚಿಮ್ಮಿತು.
              ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಶಿಲ್ಪಿಯ ಉಳಿಯೇಟಿಗೆ ಬೆನ್ನೊಡ್ಡಿ ಸುಂದರ ದೃಶ್ಯ ಕಾವ್ಯವಾಗಿ ಮೈತಳೆದಿದ್ದ ಸಹಸ್ರಲಿಂಗ ಶಾಲ್ಮಲೆಯ ರಮ್ಯ ನಿನಾದಕ್ಕೂ, ರೌದ್ರ ಆರ್ಭಟಕ್ಕೂ ಹಿಡಿದ ಇರುಳ ಸೂಡಿಯಾಗಿತ್ತು. ಅಲ್ಲಲ್ಲಿ ಸವೆದ ಲಿಂಗಗಳು, ಒಡೆದ ಕಲ್ಲುಗಳು, ಚೆಲ್ಲಾಪಿಲ್ಲಿಯಾಗಿದ್ದ ಭಗ್ನ ಮೂರ್ತಿಗಳು ವಿನಾಯಕನ ಕಣ್ಣಲ್ಲಿ ನೀರು ತರಿಸಿದವು. ಅದ್ಯಾರೋ ಪ್ರೇಮಿಗಳು ಒಂದಿಷ್ಟು ಕಲ್ಲಿನ ಮೇಲೆ ತನ್ನ ಹಾಗೂ ತನ್ನ ಪ್ರೇಯಸಿಯ ಹೆಸರುಗಳನ್ನು ಕೆತ್ತಿ ವಿಕಾರ ಮಾಡಿದ್ದರು. ತಮ್ಮ ಅಜ್ಞಾನವನ್ನು, ಕೆಟ್ಟ ಸಂಸ್ಕೃತಿಯನ್ನು ಕಾರಿಕೊಂಡಿದ್ದರು.
               ಸಹಸ್ರಲಿಂಗದ ಸಹಸ್ರಬಿಂಬ ಛಿದ್ರ ವಿಛಿದ್ರದ ರೂಪದಲ್ಲಿ ಅಲ್ಲಿ ಕಾಣಿಸಲು ಆರಂಭವಾಗಿತ್ತು. ಸ್ತ್ರೀ ಲಲನೆಯರೋ ಆಗಲೇ ಶಾಲ್ಮಲೆಯ ನೀರಿನಲ್ಲಿ ಕಾಲನ್ನು ಇಳಿಬಿಟ್ಟು ಆಗಲೇ ಹರಟೆ ಕೊಚ್ಚಲು ಆರಂಭಿಸಿದ್ದರು. ಸೂರ್ಯ ಪಶ್ಚಿಮದ ಹೆಬ್ಬಾಗಿಲಿನ ಮೂಲಕ ಸಹ್ಯಾದ್ರಿಯ ಮನೆ-ಮನವನ್ನು ಕೊನೆಯ ಸಾರಿಯೆಂಬಂತೆ ನೋಡಿ ಅಸ್ತಮಿಸುತ್ತಿದ್ದ. ಎಲ್ಲರೂ ಲಗುಬಗೆಯಿಂದ ಮರಳುವಾಗಲೇ ಸಂಜೆಯ ಕಣ್ಣೋಟ ರಸ್ತೆಯ ಮೇಲೆ ಹರಡಿತ್ತು.

(ಮುಂದುವರಿಯುತ್ತದೆ)

Thursday, February 5, 2015

ಜನಪದ-ಹೊಸಪದ

ಹೊಸದಯ್ಯ ಹೊಸತು
ತಾನಿ ತಂದಾನ..
ಹೊಸ ಹೊಸತು ಬದುಕೇ
ಕೋಲಣ್ಣಕೋಲೆ ||

ವಾಟ್ಸಾಪ್ ನಲ್ಲಿ ನಾನು ಬರ್ತಿನಿ
ಟ್ವೀಟರಲ್ಲಿ ನೀನು ಬಾರೋ
ಚಾಟಿಂಗ್ ಮಾಡ್ತಾ
ಮಾತನಾಡೋಣ ||

ಅಚ್ಚುಮೆಚ್ಚು ಪ್ರೀತಿ ಹುಚ್ಚು
ಆದ ಮೇಲೆ ಹುಚ್ಚು ಹೆಚ್ಚು
ಸದಾ ಕಾಲ
ಎಂಜಾಯ್ ಮಾಡೋಣ ||

ಫಲ್ಸರ್ನಲ್ಲಿ ನಾನು ಬರ್ತಿನಿ
ಸ್ಕೂಟಿಯಲ್ಲಿ ನೀನು ಬಾರೆ
ಟ್ರಿಪ್ಪು ಮಾಡ್ತ
ಮಾತನಾಡೋಣ ||

ನಲ್ಲಿ ನೀರಿಗ್ ನಾನು ಬರ್ತೀನಿ
ಹಾಲು ಹಾಕೋಕ್ ನೀನು ಬಾರೋ
ಸೈಲೆಂಟಾಗಿ
ಮಾತನಾಡೋಣ ||

ಹೊಸದಯ್ಯ ಹೊಸತೋ
ತಾನ ತಂದನಾ..
ಹೊಸ ಹೊಸತು ಬದುಕೇ
ಕೋಲಣ್ಣಕೋಲೆ ||

***
ವಿ. ಸೂ : ಚಲುವಯ್ಯ ಚಲುವೋ ತಾನಿತಂದಾನ ಅಂತ ಒಂದು ಜಾನಪದ ಗೀತೆಯಿದೆ.. ನನ್ನ ಬಹಳ ಇಷ್ಟದ ಜಾನಪದ ಗೀತೆ ಇದು.. ಇದೇ ಗೀತೆಯನ್ನು ಇಂದಿನ ಕಾಲಕ್ಕೆ ತಕ್ಕಂತೆ ಅಲ್ಪ ಸ್ವಲ್ಪ ಬದಲಾಯಿಸಿ ಬರೆದಿದ್ದೇನೆ. ಯಾರೋ ಜಾನಪದ ಕವಿ ಪುಣ್ಯಾತ್ಮ ಇದನ್ನು ಬರೆದಿದ್ದಾನೆ. ಆತನಿಗೆ ಶರಣು ಶರಣಾರ್ಥಿ. ಆತನ ಬಳಿ ಕ್ಷಮೆ ಕೋರುತ್ತಿದ್ದೇನೆ. ಸುಮ್ಮನೆ ತಮಾಷೆಗೆಂಬಂತೆ ನಾನು ಬರೆದಿರುವ ಈ ಕವಿತೆ ನಿಮ್ಮ ಮುಂದೆ.
ಈ ಕವಿತೆ ಬರೆದಿದ್ದು ಶಿರಸಿಯಲ್ಲಿ ಫೆ.5, 2014ರಂದು.

Wednesday, January 28, 2015

ನಾನು-ನೀನು-ಪ್ರೀತಿ (ಗಝಲ್)

ನಾನು ಪ್ರೇಮದ ದೋಣಿ ನೀನೇ ಹಾಯಿ
ನಾನು ಉಲಿಯುವ ಸ್ವರ ನೀನೇ ಬಾಯಿ ||

ನಾನು ಹರಿಯುವ ನದಿ ನೀನೇ ಕಡಲು
ದುಮ್ಮಿಕ್ಕಿ, ಓಡೋಡಿ ಸೇರುವೆ ಒಡಲು ||

ನಾನು ಕಪ್ಪೆಯ ಚಿಪ್ಪು ನೀನು ಮುತ್ತು
ನೀನಿಲ್ಲದಿರೆ ಮಾತ್ರ ಬದುಕಿಗೆ ಕುತ್ತು ||

ನಾನು ಬಣ್ಣ ನೀನು ನೀರಿನ ತಿಳಿ
ಆಡೋಣ ಎಂದೆಂದೂ ಬಣ್ಣದೋಕುಳಿ ||

ನಾನು ಬಿರು ಭೂಮಿ ನೀನು ಹನಿಮಳೆ
ಬಾನಿಂದ ನೀನಿಳಿಯೆ ಹಸಿಯಾಗಲಿ ಇಳೆ ||


***

(ಸುಮ್ಮನೆ ಬರೆಯುತ್ತ ಸಾಗಿದ ಎರಡೆರಡು ಸಾಲುಗಳು.. ಗಝಲ್ ವ್ಯಾಪ್ತಿಗೆ ಬರುತ್ತದೋ ನಾನರಿಯೆ.. ಸುಮ್ಮನೆ ಒಂದು ಪ್ರಯತ್ನ ಮಾಡಿದ್ದೇನೆ ಅಷ್ಟೇ )
(ಕವಿತೆ ಬರೆದಿದ್ದು 28-1-2015ರಂದು ಶಿರಸಿಯಲ್ಲಿ)


Tuesday, January 27, 2015

ಅಘನಾಶಿನಿ ಕಣಿವೆಯಲ್ಲಿ-10

(ಸೀತಾದಂಡೆ.)
            ವಾಪಸ್ಸಾಗುವ ದಾರಿಯನ್ನು ಹಿಡಿದು ಎಲ್ಲರೂ ಬರುತ್ತಿದ್ದರು. ಸ್ವಲ್ಪ ದೂರ ಬಂದಿರಬಹುದಷ್ಟೇ, ಆಗ ಅಲ್ಲಿ ಒಬ್ಬ ವ್ಯಕ್ತಿ ನೆಲದ ಮೇಲೆ ಬಿದ್ದು ಹೊರಳಾಡುತ್ತಿರುವುದು, ಒದ್ದಾಡುತ್ತಿರುವುದು ಕಾಣಿಸಿತು. ಆ ವ್ಯಕ್ತಿಯ ಬಾಯಲ್ಲಿ ಬಿಳಿ ನೊರೆ ಬರುತ್ತಿತ್ತು. ಹತ್ತಿರ ಹೋಗಿ ನೋಡಿದಾಗ ಅಲ್ಲಿ ಬಿದ್ದಾತ ಆಗಷ್ಟೇ ಜಲತಾತದಿಂದ ಓಡಿ ಕಣ್ಮರೆಯಾದ, ಎಲ್ಲೆಂದರಲ್ಲಿ ಹಿಂಬಾಲಿಸಿ ಕಾಟಕೊಟ್ಟು ಕಾಡುತ್ತಿದ್ದ ಅಪರಿಚಿತನೇ ಎಂಬುದು ತಿಳಿಯಿತು. ಎಲ್ಲರೂ ಗಡಬಡಿಸಿ ಕೇಳಿದಾಗ ಆತ `ಹಾವು.. ಹಾವು..' ಎಂದು ಅಸ್ಪಷ್ಟವಾಗಿ ತೊದಲಿದ. ಎಲ್ಲರೂ ನೋಡಲಾಗಿ ಕಾಲಿನ ಪಾದದ ಬಳಿ ಹಾವು ಕಚ್ಚಿದ ಗುರುತು ಕಾಣಿಸಿತು. ವಿಕ್ರಮ ತಕ್ಷಣ ಪ್ರಥಮ ಚಿಕಿತ್ಸೆಗೆಂಬಂತೆ ಒಂದು ದಾರ ಹಾಗೂ ಬ್ಲೇಡನ್ನು ತೆಗೆದುಕೊಂಡ. ತಕ್ಷಣವೇ ಪ್ರದೀಪ `ಏ ವಿಕ್ರಂ.. ನಿನಗೆ ತಲೆ ಕೆಟ್ಟಿದೆಯಾ.. ಎಲ್ಲೆಂದರಲ್ಲಿ ಆತ ನಿನ್ನನ್ನು ಫಾಲೋ ಮಾಡಿ, ಕಾಟಕೊಟ್ಟವನು ಇವನು.. ಇಂತವನಿಗೆ ಪ್ರಥಮ ಚಿಕಿತ್ಸೆ ಯಾಕೆ ಮಾರಾಯಾ? ನಿನ್ನ ಫಾಲೋ ಮಾಡಿದವನ ಜೀವ ಉಳಿಸಲಿಕ್ಕೆ ನೋಡ್ತೀಯಲ್ಲೋ..' ಎಂದ.
             `ಏ ಸುಮ್ನಿರೋ.. ಪಾಪ ಆತ ಸಾಯ್ತಿದ್ದಾನೆ. ಸೇಡಿದ್ದರೆ ಅದು ಕೊನೆಗಿರಲಿ. ಈಗ ಆತನನ್ನು ಉಳಿಸೋದು ಮುಖ್ಯ. ಬದುಕಿ ಉಳಿದರೆ ಯಾಕೆ ನಮ್ಮನ್ನು ಆತ ಹಿಂಬಾಲಿಸುತ್ತಿದ್ದ ಎಂಬುದನ್ನು ಕೇಳಿದರಾಯ್ತು..' ಎಂದ ವಿಕ್ರಂ. ಜೊತೆಗೆ ಪ್ರದೀಪನ ಮಾತನ್ನು ನಿರ್ಲಕ್ಷಿಸಿ ಆಗಂತುಕನಿಗೆ ಪ್ರಥಮ ಚಿಕಿತ್ಸೆ ನೀಡಿದ.
              ಸ್ವಲ್ಪ ಹೊತ್ತಿನ ನಂತರ ಆ ಅಪರಿಚಿತ ವ್ಯಕ್ತಿ ಚೇತರಿಸಿಕೊಂಡ. ತಕ್ಷಣ ವಿಕ್ರಂ `ಈಗ ಹೇಳು.. ಯಾರು ನೀನು..?' ಎಂದ.
            `ಅದನ್ನೆಲ್ಲಾ ಆಮೇಲೆ ಹೇಳ್ತೀನಿ.. ಮೊದಲು ನಿಮ್ಮ ಮನೆಗೆ ಹೋಗೋಣ ನಡೀರಿ..' ಎಂದ ಆಗಂತುಕ.
            `ನಮ್ಮ ಮನೆಗಾ..? ಅದೆಲ್ಲಾ ಆಗೋದಿಲ್ಲ..'
            `ಮೊದ್ಲು ಹೋಗೋಣ.. ಆ ನಂತ್ರ ನಾನ್ಯಾರು ಎನ್ನುವುದನ್ನೆಲ್ಲಾ ಹೇಳ್ತೀನಿ.. ಪ್ಲೀಸ್ ನಾನು ಹೇಳೋದನ್ನು ಕೇಳಿ..' ಅಂಗಲಾಚಿದ ಆಗಂತುಕ.
             `ಓಕೆ.. ಸರಿ..' ಎಂದ್ಹೇಳಿ ಆತನನ್ನು ಕರೆದೊಯ್ಯಲು ಹೊರಟ ವಿಕ್ರಮನನ್ನು ಪ್ರದೀಪ ಮತ್ತೆ ವಿರೋಧಿಸಿದ. ಈಗಲೂ ಪ್ರದೀಪನ ಮಾತನ್ನು ತೆಗೆದುಹಾಕಲಾಯ್ತು. ಅಂತೂ ಸಂಜೆಯ ವೇಳೆಗೆ ಆ ಆಗಂತುಕನೊಡಗೂಡಿ ಅವರ ತಂಡ `ಕಣ್ಣೀರು ಮನೆ'ಗೆ ವಾಪಸಾಯಿತು.
              ಹಾಗಾದರೆ ಇದೇ ಕಥೆಗೆ ದೊಡ್ಡ ತಿರುವೇ? ಆ ಆಗಂತುಕ ಯಾರಿರಬಹುದು? ಆತ ಒಳ್ಳೆಯವನೇ? ಕೆಟ್ಟವನೇ? ಎಲ್ಲವುಗಳಿಗೂ ಕಾಲವೇ ಉತ್ತರ ಹೇಳಬೇಕು.

*****9*****

            ಅತ್ತ ಬೇಣದಗದ್ದೆಯ ಶಿವರಾಮನ ಮನೆಯಲ್ಲಿ, ಅಲ್ಲಿಗೆ ಬಂದಿದ್ದ ಸುಬ್ರಮಣ್ಯ ಅಲಿಯಾಸ್ ಸುಬ್ಬಣ್ಣ ಯಾವುದೋ ವಿಷಯಕ್ಕಾಗಿ ಶತಪಥ ತಿರುಗುತ್ತಿದ್ದ. ಆತನಿಗೆ ಬರಬೇಕಿದ್ದ ವಸ್ತುಗಳಿಗೋ, ಬರಬೇಕಿದ್ದ ವ್ಯಕ್ತಿಗಳಿಗೋ ಕಾಯುತ್ತಿರುವುದು ಸ್ಪಷ್ಟವಾಗಿತ್ತು. ಅದಲ್ಲದೇ ಈಗ್ಗೆರಡು ದಿನಗಳಿಂದ ತನ್ನ ಅಣ್ಣ ಬೇಣದಗದ್ದೆಯ ಶಿವರಾಮನಲ್ಲಿಯೂ ಏನೋ ಒಂದು ಬದಲಾವಣೆ ಆಗಿತ್ತು. ಮೊದಲಿನ ಹಾಗೇ ಇಲ್ಲದ ಆತನಿಗೆ ತಾನು ಮಾಡುತ್ತಿರುವ ಕೆಲಸದ ಬಗ್ಗೆ ಅನುಮಾನ ಬಂದಿದೆಯಾ ಎಂದೂ ಸುಬ್ರಹ್ಮಣ್ಯ ಯೋಚನೆ ಮಾಡುತ್ತಿದ್ದ. `ಹಾಗಾಗದಿದ್ದರೆ ಸಾಕು..' ಎಂದುಕೊಳ್ಳುತ್ತಿದ್ದ.
             ಹಾಗಾದರೆ ಆತ ಮಾಡುತ್ತಿದ್ದ ಕೆಲಸ ಏನು? ಮುಂದೆ ಶಿವರಾಮ್ ಹಾಗೂ ಸುಬ್ಬಣ್ಣ ಏನಾಗುತ್ತಾರೆ? ಎಲ್ಲವೂ ಗೋಜಲು ಗೋಜಲಾಗಲು ಆರಂಭಿಸಿತ್ತು.

*****

                `ಅದಕ್ಕುತ್ತ ಆನು ಹೇಳ್ತಿ.. ತಡಿ...' ಎಂದು ಧ್ವನಿ ಬಂದಾಗ ಎಲ್ಲರಿಗೆ ಅಚ್ಚರಿ. ತಿರುಗಿ ನೋಡಿದರೆ ರಾಜಾರಾಮ ಭಟ್ಟರು.
                  ಆ ಆಗಂತುಕನನ್ನು ಕಣ್ಣೀರು ಮನೆಗೆ ಕರೆತಂದ ನಂತರ ಆತನನ್ನು ವಿಚಾರಿಸಲಾಗಿ ರಾಜಾರಾಮ ಭಟ್ಟರು ಹೀಗೆಂದಿದ್ದರು.
               `ವಾಟ್.. ಇಂವನ ಬಗ್ಗೆ ನಿಂಗೊತ್ತಿದ್ದನಾ ಅಪ್ಪಯ್ಯಾ..' ಎಂದು ಕಕ್ಕಾಬಿಕ್ಕಿಯಾಗಿ ಕೇಳಿದ್ದ ವಿಕ್ರಮ. `ಹುಂ.. ಹೌದಾ.. ಪ್ವಾರಾ.. ಯಂಗೊತ್ತಿದ್ದು.. ಅದು ದೊಡ್ಡ ಕಥೆ.. ಇಂವ ಇದ್ನಲಾ.. ಇಂವ ಬೇರೆ ಯಾರೂ ಅಲ್ದಾ.. ಯಂಗಳ ರಾಂಕೃಷ್ಣ ಗಾಂವ್ಕಾರರ ಮನೆ ಪ್ವಾರನಾ.. ವಿಷ್ಣು..' ಎಂದು ಹೇಳಿದರು ಭಟ್ಟರು.
                `ಆ..? ಹೌದಾ..? ಹಂಗಾದ್ರೆ ಅಂವ ಯನ್ನ ಫಾಲೋ ಮಾಡಿದ್ದೆಂತಕ್ಕೆ? ಎಲ್ಲೋದ್ರೂ ಹಿಂದಿಂದೇ ಬರ್ತಿದ್ದಿದ್ದು, ಹುಡುಕ್ತಿದ್ದು, ಮಾತು ಕೇಳಲು ಪ್ರಯತ್ನ ಮಾಡ್ತಿದ್ದಿದ್ದು ಯಂತಕ್ಕೆ..?' ಕೇಳಿದ ವಿಕ್ರಮ.
                `ಹೇಳ್ತಿ ತಡಿ.. ಇಂವ ಸಣ್ಣಕ್ಕಿದ್ದಾಗ ಮನೆ ಬಿಟ್ಟು ಓಡಿ ಹೋಯಿದ್ನಡಾ ಹೇಳಿ ಹೇಳ್ತಿಪ್ವಿಲ್ಯಾ.. ಅದಾದ ಮೇಲೆ ಒಂದ್ ಸಲ ಯಂಗ ಯಾವ್ದೋ ಊರಲ್ಲಿ ಸಿಕ್ಕಿದ್ದ ಬಿಲ್ಯ.. ಅಲ್ಲಿ ಇವ್ನ ಪರಿಸ್ಥಿತಿ ಭಾಳ ತೊಂದ್ರೇಲಿ ಇತ್ತು.. ಆಗ ಇಂವನ್ನ ಾನೇ ಕಾಪಾಡಿದ್ದು..'
              `ಅದೇನೋ ಸರಿ.. ಆದ್ರೆ ಅಂವ ಯನ್ನ ಹಿಂದಿಂದೇ ಬರ್ತಿದ್ದಿದ್ದು ಯಂತಕ್ಕೆ? ವಿಷ್ಣೂನೇ ಹೇಳಿ ಯಂಗೆಂತಕ್ಕೆ ತಿಳೀದಿಲ್ಲೆ? ನಿ ಯಂತಕ್ಕೆ ಹೇಳಿದ್ಲೆ?'' ಎಂದು ನಡುವೆ ಬಾಯಿ ಹಾಕಿ ಕೇಳಿದ ವಿಕ್ರಮ.
               ``ಅಂವನ್ನ ನಿಂಗೆ ಸಹಾಯ ಮಾಡ ಹೇಳಿ ಆನೆ ಕಳಿಸಿದ್ದಿದ್ದಿ ಬಿಲ್ಯ. ನಿಂಗೆ ಯಾರೇ ತೊಂದ್ರೆ ಕೊಟ್ಟರೂ ಅಂವ ನಿನ್ನ ಉಳಿಸ್ತಿದ್ದ. ಹಂಗಾಗಿ ನಿನ್ನ ಜೊತೆಗೆ ಅಂವ ಬರ್ತಿದ್ದ. ಅಂವ ಆವಾಗಾವಾಗ ತನ್ನ ವೇಷ ಬದಲಾಯಿಸ್ತಿದ್ದ. ಅದಕ್ಕಾಗಿ ನಿಂಗೆ ಗೊತ್ತಾಯ್ದಿಲ್ಲೆ.. ಮತ್ತೆ ಅದನ್ನ ನಿಂಗೆ ತಿಳಿಸದು ಯಂಗೆ ಸಡಿ ಕಂಡಿದ್ಲೆ. ಜೊತಿಗೆ ನೀನು ಯಂತದ್ದನ್ನೇ ಮಾಡಿದ್ರೂ ಮಾಡ್ತಿದ್ರೂ ಅದನ್ನ ಯಂಗೆ ತಿಳಿಸ್ತಿದ್ದ. ನೀನು ಕುಂಗ್ ಫು ಶಾಲೆ ಬಿಟ್ಟು ಪೇಪರ್ರಿಗೆ ಸೇರಿದ್ದನ್ನೆಲ್ಲಾ ಯಂಗೆ ಇವನೇ ಹೇಳಿ ಬಿಟ್ಟಿಕಿದ.' ಎಂದರು ಭಟ್ಟರು.
            `ಅಯ್ಯಪ್ಪಾ.. ಎಲ್ಲಿಂದ ಎಲ್ಲೀವರೆಗೆ ಲಿಂಕ್ ಉಂಟಪ್ಪಾ..' ಎಂದು ಗೊಣಗಿದ ಪ್ರದೀಪ. ವಿಕ್ರಮ ಕಕ್ಕಾಬಿಕ್ಕಿಯಾಗಿದ್ದ.
            `ಇಷ್ಟೇ ಅಲ್ಲ ತಡಿ.. ನಿನ್ನ ಆ ಕುಂಗ್ ಫೂ ಶಾಲೆ ಯಂಗೆ ಇಷ್ಟ ಆಯ್ದಿಲ್ಲೆ.. ನಿಂಗೂ ಅದು ಗೊತ್ತಿದ್ದು.. ಅದಕ್ಕಾಗೇ ನೀನಾಗೇ ಆ ಶಾಲೆ ಬಾಗಿಲು ಹಾಕ್ಲಿ ಹೇಳಿ ನಾನು ಮಾಡಿದ್ದಿ.. ಕೊನೆಗೆ ಆ ಮಂಗ್ಳೂರಿನ ಪೇಪರ್ರಿನಲ್ಲಿ ಕೆಲ್ಸ ಸೊಗೋ ಹಂಗೆ ಮಾಡಿ, ನಿನ್ನ ಕೆಲಸ ಬದ್ಲು ಮಾಡದಿ.. ಇಷ್ಟೇ ಅಲ್ದಾ.. ಇನ್ನೂ ಒಂದು ಮುಖ್ಯ ಸಂಗ್ತಿ ಹೇಳ್ತಿ ಕೇಳು.. ಈ ವಿಜೇತಾ ಇದ್ದಲಾ.. ಇದು ಯಂಗೆ ಮೊದಲಿಂದ್ಲೂ ಗೊತ್ತಿತ್ತಿದ್ದೇಯಾ.. ಯನ್ನ ಷಡ್ಕ ಅಂದ್ರೆ ನಿನ್ನ ಆಯಿಯ ಕೌಟುಂಬಿಕ ಸಂಬಂಧಿಕರಡ. ಹಂಗಾಗಿ ಅವ್ಳೂ ಇದರಲ್ಲಿ ಮುಖ್ಯ ಪಾತ್ರ ವಹಿಸಿದ್ದ..' ಎಂದರು ಭಟ್ರು.
             ವಿಕ್ರಮನಿಗೆ ಮತ್ತೆ ದಿಘ್ಬ್ರಾಂತಿ. ತಾನು ನಂಬಿದ್ದ ವಿಜೇತಾ ಹೀಗಿರಲು ಸಾಧ್ಯ ಎಂದುಕೊಂಡಿರದ ವಿಕ್ರಮನಿಗೆ ಶಾಕ್ ಮೇಲೆ ಶಾಕ್. ತಾನು ನಂಬಿಕೊಂಡಿದ್ದೆಲ್ಲವೂ ಸುಳ್ಳಾದಂತೆ, ಜಗತ್ತಿನಲ್ಲಿ ತನ್ನ ವಿರುದ್ಧದಲ್ಲಿ ಗೂಢಚಾರಿಕೆ ಮಾಡಿದಂತೆ ಅನ್ನಿಸಿತು. ತಾನಂದುಕೊಂಡಿದ್ದೆಲ್ಲವೂ ನಿಜವಲ್ಲ. ತಾನೊಬ್ಬನೆ ಒಂದು ಕಡೆ.. ಉಳಿದವರೆಲ್ಲ ತನ್ನ ವಿರುದ್ಧ ಇರುವವರೇ.  ತನ್ನ ಅಸ್ತಿತ್ವವೇ ಸುಳ್ಳಾ.. ಇವರೆಲ್ಲರ ಆಟದ ಕಾಯಿಯಾಗಿ ತಾನು ಬಳಕೆಯಾದೆನಾ ಎಂದುಕೊಂಡ ವಿಕ್ರಮ. `ವಾಟ್.. ಇದನ್ನೆಲ್ಲಾ ನಂಬೂಲೆ ಆವ್ತ್ಲೆ.. ಹೌದಾ ವಿಜೇತಾ..?' ಎಂದ ವಿಕ್ರಮ.
               `ಯಸ್.. ಇದೆಲ್ಲಾ ನಂಗೂ ಗೊತ್ತಿತ್ತು.. ನನ್ನ ಹೆಲ್ಪ್ ಕೂಡ ಇತ್ತು. ಏನೋ ಲೈಫ್ ನಲ್ಲಿ ಒಂದು ಟ್ವಿಸ್ಟ್ ಇರಲಿ ಅಂತ ಹೀಗೆ ಮಾಡಿದೆ. ಆದರೆ ಈ ಊರನ್ನು ನಾನು ನೋಡಿರಲಿಲ್ಲ. ಯಾರ್ಯಾರದ್ದೋ ಮೂಲಕ ಭಟ್ರ ಬಗ್ಗೆ, ನಿನ್ನ ಬಗ್ಗೆ ನನಗೆ ತಿಳೀತು. ಏನೋ ಹೀಗೆ ಮಾಡಿದೆ. ಆದರೆ ಈ ವಿಷ್ಣುವಿನ ಬಗ್ಗೆ ನನಗೆ ಗೊತ್ತಿರಲಿಲ್ಲ. ಇನ್ನು ನಿನ್ನ ಬಗ್ಗೆ ಹೇಳಬೇಕಂದ್ರೆ ನಿನ್ನ ಚಿಕ್ಕಂದಿನಿಂದ್ಲೂ ನೋಡ್ತಿದ್ದೆ. ಆದರೆ ನಾನು ಬೆಳೆಯುತ್ತಿದ್ದಂತೆ ನನ್ನ ಮಮ್ಮಿ ಡ್ಯಾಡಿ ಮಂಗಳೂರಿಗೆ ಬಂದರು. ಹಾಗಾಗಿ ನೀನು ಏನಾದೆ ಎನ್ನುವುದು ಗೊತ್ತಾಗಿರಲಿಲ್ಲ. ಆ ನಂತರ ನಿನ್ನನ್ನು ನೋಡಿದ್ದು ಮಂಗಳೂರಿನಲ್ಲಿ ಕುಂಗ್ ಫೂ ಸಂದರ್ಶನದಲ್ಲಿ. ನಂತರ ಭಟ್ರು ಪರಿಚಯವಾದರು. ಕೊನೆಗೆ ನೀನು ಗೊತ್ತಿದ್ರೂ ಗೊತ್ತಿಲ್ಲದ ಹಾಗೆ ನಡೆದುಕೊಂಡೆ. ನಿಂಗೊತ್ತಿರಬಹುದು, ಒಂದಿನ ನೀನು ನಮ್ಮನೆಗೆ ಬಂದಿದ್ದಾಗ ನನ್ನ ಡ್ಯಾಡಿ ಶಿರಸಿ ಏರಿಯಾದಲ್ಲಿ ಎಲ್ಲಾ ಗೊತ್ತಿದೆ ಎಂದಿದ್ದರು. ಹೀಗೆ.. ಮೂಲತಃ ಅವರೂ ಇಲ್ಲಿಯ ಏರಿಯಾದವರೇ. ಜೊತೆಗೆ ನನಗೂ ಕೂಡ ಈ ಏರಿಯಾ ನೋಡೋಣ ಎನ್ನಿಸ್ತು ನಿಂಜೊತೆ ಬಂದು ಬಿಟ್ಟೆ..' ಎಂದಳು ವಿಜೇತಾ..
                ಉಫ್... ಒಂದು ಹೊಡೆತದ ಮೇಲೆ ಇನ್ನೊಂದು ಹೊಡೆತ.. ಒಂದನ್ನು ನಂಬಬೇಕೋ ಬೇಡ್ವೋ ಎನ್ನುವುದರೊಳಗೆ ಇನ್ನೊಂದು... ಯಾವ ಯಾವ ರೀತಿಯ ತಿರುವುಗಳು.. ಎಷ್ಟೆಲ್ಲಾ ಚೇಂಜು.. ಇದೆಲ್ಲ ಹೌದಾ.. ಆದರೆ ಯಾಕಾಗಿ ಇವೆಲ್ಲಾ? ನಿಮ್ಮೆಲ್ಲರ ಪಾಲಿಗೆ ನಾನು ಆಟದ ವಸ್ತು ಆದೆನಾ? ನಿಮ್ಮೆಲ್ಲರಿಗೂ ಎಲ್ಲವೂ ಗೊತ್ತಿದೆ. ಆದರೆ ನಾನು ಮಾತ್ರ ಏನೂ ಗೊತ್ತಿಲ್ಲದ ಹಾಗೆ ಬಫೂನ್ ಆಗಿಬಿಟ್ಟೆ.. ಪ್ರದೀಪ, ವಿನಾಯಕ.. ನೀವೂ ಈ ಸುರುಳಿಯ ಒಂದು ಭಾಗ ಆಗಿದ್ದರೆ ಹೇಳಿ ಬಿಡ್ರಪ್ಪಾ.. ಶಾಕುಗಳ ಸರಮಾಲೇ ಈಗಲೇ ಮುಗಿದು ಹೋಗಲಿ..' ದೀನನಾಗಿದ್ದ ವಿಕ್ರಮ
            ಪ್ರದೀಪ ಹಾಗೂ ವಿನಾಯಕರು ತಮಗೂ ಇದಕ್ಕೂ ಯಾವುದೇ ಸಂಬಂಧಿವಿಲ್ಲ. ತಮಗೇನೂ ಗೊತ್ತಿಲ್ಲ ಎಂದರು.
            `ತಂದೆಯಾದವಂಗೆ ಮಗನ್ನ ಸರಿಯಾದ ಹಾದಿಯಲ್ಲಿ ಹೋಗೂಲೆ ಹೇಳೋ ಹೊಣೆ ಇರ್ತು. ನೀನೂ ಕೂಡ ಒಳ್ಳೆಯ ದಾರಿಯಲ್ಲಿ ಹೋಗೂದು ನಂಗೆ ಬೇಕಿತ್ತು ಅದಕ್ಕಾಗಿ ಹಿಂಗೆ ಮಾಡಿದೆ..' ಎಂದರು ಭಟ್ಟರು.
              `ಹಂಗಾರೆ ಕುಂಗ್ ಫೂ ಕಲ್ಸೂದು ಒಳ್ಳೆ ದಾರಿ ಅಲ್ದಾ..?'
              `ಒಳ್ಳೇದೋ ಕೆಟ್ಟದ್ದೋ.. ನಮಗ್ಯಾಕೆ ಬೇಕು ಆ ಹೊಡೆದಾಟದ ವೃತ್ತಿ? ನಿನ್ನ ಆ ಹೊಲ್ಸು ಉಸಾಬರಿ ನಮಗೆ ಬೇಕಾದ ಹಣ ಕೊಡ್ತ್ಲೆ. ಅದು ಜೊತೆಗೆ ಸುಖಾ ಸುಮ್ನೆ ಮೈ ಮುರಿಯೋ ಹಂಗೆ ಒದ್ದಾಡೂದು. ಇನ್ನು ನಾವು ಹವ್ಯಕರು. ನಮಗೆಲ್ಲಾ ಇದು ಅವ್ತ್ಲೆ.. ನಾವು ಯಂತಿದ್ರೂ ಸಸ್ಯಾಹಾರಿಗಳು. ಅಂತಾದ್ದೆಲ್ಲಾ ಆ ನಾಯ್ಕರಿಗೋ, ಗೌಡ್ರಿಗೋ, ಕುಣಬಿ ಮರಾಟ್ಯಕ್ಕಗೋ, ಸಿದ್ದಿಗಳಿಗೋ ಲಾಯಕ್ಕು.. ಅದ್ಕೆ ಹಿಂಗ್ಮಾಡಿದಿ ಬಿಲ್ಯ. ಇನ್ನು ನೀನು ಪತ್ರಿಕೆಗೆ ಸೇರಿದ್ದು ನಾನು ಒಪ್ದಿ. ಯಂತಕ್ಕಂದ್ರೆ ಅದರಲ್ಲಿ ನಿಂಗೆ ಹೆಸರು ಬತ್ತು. ನಾಕು ಜನ ನಿನ್ನ ಬಗ್ಗೆ ಹೆಮ್ಮೆಯಿಂದ ಮಾತಾಡದ್ನ ನೋಡಲಾವುತು,, ಹಂಗಾಗಿ ಹಿಂಗ್ ಮಾಡದಿ..'
              ಭಟ್ಟರ ಈ ಮಾತಿಗೆ ವಿಕ್ರಮ ಏನೂ ಮಾತಾಡಲಿಲ್ಲ. ಅವನ ತಲೆಯ ತುಂಬಾ ದಿಗ್ಬ್ರಾಂತಿ, ವಿಶಿಷ್ಟತೆ, ಅಚ್ಚರಿ, ನಿಘೂಡತೆಗಳಲ್ಲೇ ತುಂಬಿ ಹೋಗಿತ್ತು. ಅಷ್ಟು ಹೊತ್ತಿಗೆ ಸಾಕಷ್ಟು ಕತ್ತಲೂ ಆವರಿಸಿದ್ದರಿಂದ ಎಲ್ಲರೂ ಮುಂದಿನ ಕಾರ್ಯಗಳತ್ತ ಮುಖಮಾಡಿದರು. ವಿಕ್ರಮ ಯೋಚಿಸಡೊಗಿದ್ದ.
               ಅಷ್ಟರಲ್ಲೇ ಊಟಕ್ಕೆ ಬುಲಾವ್ ಬಂದಿತ್ತು. ಊಟ ಮುಗಿದ ನಂತರ ವಿನಾಯಕ, ಪ್ರದೀಪ, ವಿಜೇತಾ ಇವರೆಲ್ಲ ವಿಷ್ಣುವಿನ ಬಳಿ ಮಾತನಾಡತೊಡಗಿದ್ದರು. ಆದರೆ ವಿಕ್ರಂ ಅವರ ಜೊತೆಗೆ ಸೇರಲಿಲ್ಲ. ಮನೆಯ ಹೊರಗೆ ಅಂಗಳದಲ್ಲಿ ಒಮದು ಕಡೆ ಕುಳಿತು ಆಲೋಚಿಸತೊಡಗಿದ್ದ.

(ಮುಂದುವರಿಯುತ್ತದೆ..)