Thursday, February 12, 2015

ಅಘನಾಶಿನಿ ಕಣಿವೆಯಲ್ಲಿ-11

                ಇವತ್ತು ಎಪ್ರೀಲ್ 11. ಈ ಒಂದು ದಿನವೇ ಎಷ್ಟೆಲ್ಲ ಘಟನೆಗಳು ನಡೆದುಬಿಟ್ಟವಲ್ಲ. ಗಿರ ಗಿರಪತ್ಥರ್ ನೋಡಿದ್ದು, ಲಾಲಗುಳಿ ಜಲಪಾತ ದರ್ಶನ, ಸಿದ್ಧಿಯ ಜೊತೆಗಿನ ಮಾತು-ಕಥೆ, ಆ ವಿಷ್ಣುವಿಗೆ ಹಾವು ಕಚ್ಚಿದ್ದು, ಆತನ ವೃತ್ತಾಂತ, ಎಲ್ಲಕ್ಕಿಂತ ಮಿಗಿಲಾಗಿ ತನ್ನ ಅಪ್ಪ ಹೇಳಿದ ಸುದ್ದಿ, ವಿಜೇತಾಳ ವೃತ್ತಾಂತ ಇತ್ಯಾದಿಗಳ ಬಗ್ಗೆ ಯೋಚಿಸಿದ. ಎಲ್ಲವನ್ನೂ ತನಗಾಗಿ, ತನ್ನ ಮಗನಿಗಾಗಿ ಎಂಬ ಧೋರಣೆಯ ತನ್ನ ಅಪ್ಪ ಮಾಡುತ್ತಿದ್ದ ಈ ಕೆಲಸ, ಅದನ್ನೂ ತನಗೆ ಹೇಳದೇ ಇದ್ದುದು, ಜೊತೆಗೆ ಕೆಲಸ ಮಾಡುತ್ತಿದ್ದರೂ ತಾನು ಮೊದಲೇ ಪರಿಚಯದವಳು ಎಂಬುದನ್ನು ತಿಳಿಸದ ವಿಜೇತ, ಕೆಟ್ಟವನಂತೆ ಕಾಣಿಸಿಕೊಳ್ಳುತ್ತ ಒಳ್ಳೆಯದನ್ನೇ ಮಾಡುತ್ತಿದ್ದ ವಿಷ್ಣು, ಜೊತೆಗೆ ನಿಘೂಡ ವ್ಯಕ್ತಿತ್ವದ ಪ್ರದೀಪ ಇವರೆಲ್ಲರಿಂದ ತನಗೆ ಏನೋ ದೊಡ್ಡ ಗುಟ್ಟು ತಿಳಿಯುವುದು ಇರಬೇಕು. ಅದೆಲ್ಲವನ್ನೂ ಎಲ್ಲರೂ ಸೇರಿ ಮುಚ್ಚಿಟ್ಟಿದ್ದಾರಾ ಎಂದೆಲ್ಲ ಆಲೋಚಿಸಿದ.
                  ಹೀಗೆ ಯೋಚಿಸುತ್ತಿದ್ದ ಸ್ವಲ್ಪ ಹೊತ್ತಿನಲ್ಲಿಯೇ ಅಲ್ಲಿಗೆ ವಿಜೇತಾ ಬಂದಳು. ಆಕೆ ಬಂದವಳೇ `ಏನಪ್ಪಾ.. ಏನನ್ನೋ ಆಲೋಚನೆ ಮಾಡುತ್ತಿರೋ ಹಾಗಿದೆ..? ಏನಾದರೂ ಸಮಸ್ಯೆ ಆಗಿದೆಯಾ?' ಎಂದಳು.
                  `ಏನಿಲ್ಲಾ ನವೀನಚಂದ್ರ ಅವರು ವಹಿಸಿರುವ ಆ ಸ್ಮಗ್ಲಿಂಗ್ ಗುಂಪನ್ನು ಹುಡುಕೋ ಬಗ್ಗೆ ಎಲ್ಲಾ ಯೋಚನೆ ಮಾಡ್ತಾ ಇದ್ದೀನಿ. ನಾನು ಇಲ್ಲಿಗೆ ಬಂದಿದ್ದೇ ಇದಕ್ಕಾಗಿ. ಆದರೆ ಇಲ್ಲಿ ಮತ್ತಿನ್ನೇನೋ ಆಗ್ತಾ ಇದೆ. ನಾನು ಬಂದ ಕೆಲಸವೇ ಮರೆತು ಹೋಗುವಂತಾಗುತ್ತಿದೆ..' ಎಂದ ಅಸಹನೆಯಿಂದ ವಿಕ್ರಂ.
                   ` ಹೇಯ್.. ತಲೆ ಕೆಡಿಸಿಕೊಳ್ಳಬೇಡ ಮಾರಾಯಾ.. ಎಲ್ಲಾನೂ ಯಾವಾಗ ಆಗಬೇಕೋ.. ಅದೇ ಆಗುತ್ತೆ.. ನೀನು ಸುಮ್ನೆ ಗೊಂದಲ ಮಾಡ್ಕೋತಿದಿಯಾ ಅಷ್ಟೆ..' ಎಂದಳು ವಿಜೇತಾ.
                   `ಆದರೆ ನನ್ನ ಪ್ರಯತ್ನ ನಾನು ಮಾಡಲೇಬೇಕಲ್ಲ. ನಮ್ ಹೊಣೆಗಾರಿಕೆಯನ್ನೂ ಮರೀಬಾರದಲ್ಲ..'
                   `ನಿಂಗೊತ್ತಾ.. ನಾವು ನಿಂಗೆ ಈ ಕೆಲಸ ವಹಿಸಿರುವುದನ್ನು ಕೇಳಿದ ನಿಮ್ಮ ತಂದೆ ನವೀನಚಂದ್ರರ ಜೊತೆ ಗಲಾಟೆ ಮಾಡಿದ್ರು. ನಿನಗೆ ಇದರಿಂದ ಏನಾದ್ರೂ ತೊಂದ್ರೆ ಆದ್ರೆ ಎನ್ನೋ ಹಾಗೆ ವರ್ತಿಸಿದ್ರು. ಅದಕ್ಕಾಗ್ಲೇ ಒಂದ್ ಸಾರಿ ನಿನ್ಹತ್ರ ನವೀನಚಂದ್ರರು ಈ ಕೇಸಿನ ಬಗ್ಗೆ ಮುಂದುವರಿಯಬೇಡ ಎಂದಿದ್ದು..'
                   `ಏನು.. ಹೀಗೆಲ್ಲಾ ನಡೆದಿತ್ತಾ? ನಂಗ್ಯಾಕೆ ಹೇಳಲಿಲ್ಲ.. ಅಷ್ಟಕ್ಕೂ ನನ್ನಪ್ಪ ಯಾಕೆ ಹೀಗ್ಮಾಡಿದ?'
                  `ನೋಡು ವಿಕ್ರಂ. ನಮ್ಮ ಹೆತ್ತವರು ಎಷ್ಟೇ ನಮ್ಮನ್ನು ಬೈದರೂ, ಅದು ತೋರಿಕೆಗೆ ಮಾತ್ರ. ನಮ್ಮ ಮಕ್ಕಳು ಒಳ್ಳೆಯವರಾಗಬೇಕು, ಅವರು ಜೀವನದಲ್ಲಿ ಮುಂದೆ ಬರಬೇಕು. ಅವರಿಗೆ ಯಾವುದೇ ಕಷ್ಟಗಳು ಬರಬಾರದು ಎಂದೆಲ್ಲಾ ಅಂದ್ಕೊಂಡಿರ್ತಾರೆ. ಮಕ್ಕಳಿಗಾಗಿ ಎಷ್ಟೇ ಕಷ್ಟವನ್ನು ತಾವು ಎದುರಿಸೋಕೆ ತಯಾರಾಗಿರ್ತಾರೆ. ಈ ಕಾರಣಕ್ಕಾಗಿಯೇ ನಿನ್ನ ತಂದೆ ಈ ರೀತಿ ಮಾಡಿದ್ದು..'
                  `ಆದ್ರೂ ನಂಗೆ ಇದೆಲ್ಲ ಅರ್ಥಾನೇ ಆಗೋದಿಲ್ಲ. ಎಲ್ಲಾರ ಥರಹ ಇಲ್ಲಿ ಇಲ್ಲ. ಯಾವುದೋ ಮೂಲೆಯ ಹಳ್ಳಿಯೊಂದರಿಂದ ಅಲ್ಲಿರುವ ಓರ್ವ ವ್ಯಕ್ತಿ ತಾನು ಯಾವುದೇ ಇಂಗ್ಲೀಷ್ ಗಳಂತಹ ಭಾಷಾಜ್ಞಾನ ಜೊತೆಗೆ ಆತ ಯಾರನ್ನೂ, ದೊಡ್ಡ ಊರನ್ನೂ ನೋಡದೇ ಹೀಗೆಲ್ಲ ಮಾಡ್ಲಿಕ್ಕೆ ಸಾಧ್ಯವಾ?'
                  `ನೋಡು ವಿಕ್ರಂ. ನಮ್ಮ ಜನರ ಬಗ್ಗೆ ಒಂದ್ಮಾತು ಹೇಳಬೇಕು. ಅದೇನೆಂದ್ರೆ ನಮ್ಮ ಜನ ಏನೂ ಗೊತ್ತಿಲ್ಲದಿದ್ದರೂ ತನ್ನಿಂದ ತಾನೇ ಅವರಿಗೆ ಅದರ ಅರಿವಿರುತ್ತದೆ. ಯಾವುದೇ ಜ್ಞಾನ ಇಲ್ಲದಿದ್ದರೂ ಅವರು ಎಲ್ಲಿ, ಏನನ್ನು ಬೇಕಾದರೂ ಸಾಧಿಸಬಲ್ಲ, ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿರ್ತಾರೆ ನೆನಪಿಟ್ಕೋ.. ನಮ್ಮ ಹಳ್ಳಿಗರು ಯಾರಿಗೂ ಕಮ್ಮಿಯಿಲ್ಲ. ಅವರ ಜ್ಞಾನ ದೇಸೀ ಜ್ಞಾನ ಜಗತ್ತಿನಲ್ಲೇ ಶ್ರೇಷ್ಟವಾದುದು. ಅಂತವರು ಮನಸ್ಸು ಮಾಡಿದರೆ ಇನ್ನೆಂತದ್ದಾದರೂ ಸಾಧನೆ ಮಾಡಬಲ್ಲರು..'
                  `ಅದಿರ್ಲಿ ನೋಡೋಣ ಮುಂದೇನಾಗುತ್ತೆ ಅಂತ. ಬಹುಶಃ ನಾಳೆ ಅಥವಾ ನಾಡಿದ್ದು ನಾವು ಇಲ್ಲಿಂದ ಹೊರಡಬೇಕಾಗುತ್ತದೆ. ಶಿರಸಿ ನಮ್ಮ ಕಾರ್ಯಸ್ಥಾನ. ಹಾಗಾಗು ಶಿರಸಿಯ ಕಡೆಗೆ ನಾವು ಹೋಗಲೇಬೇಕು. ಶಿರಸಿಗೆ ಹತ್ತಿರದ ಊರಾದ ದಂಟಕಲ್ ಗೆ ಹೋಗೋಣ. ಅಲ್ಲಿ ಉಳಿದುಕೊಂಡೇ ನಾವೆಲ್ಲ ಕೆಲಸ ಮುಂದುವರಿಸೋಣ. ಮುಖ್ಯವಾಗಿ ನಾವು ಇನ್ನು ಮೊದಲಿನ ಹಾಗೆ ಇರಲು ಸಾಧ್ಯವಿಲ್ಲ. ಹೆಜ್ಜೆ ಹೆಜ್ಜೆಗೆ ಅಪಾಯ ಬಂದರೂ ಬರಬೌದು. ಜೊತೆಗೆ ಆ ನವೀನಚಂದ್ರರು ಹೇಳಿದಂತೆ ಯಾವುದಾದರೂ ರಿಸರ್ಚಿನವರು ಅಂಡ್ಕೊಂಡು ಹೋಗೋಣ. ಈ ವಿಷ್ಯಾನ ಕೇವಲ ವಿನಾಯಕನಿಗೆ ಮಾತ್ರ ತಿಳಿಸಬೇಕು. ಉಳಿದವರ್ಯಾರಿಗೂ ಗೊತ್ತಾಗಬಾರದು. ತಿಳೀತಾ..?'
                   `ಸರಿ ಯಾವ ರಿಸರ್ಚಿನೋರು ಅಂತಾ ಹೋಗೋದು..?'
                   `ಉಂ ಇದ್ದೇ ಇದೆಯಲ್ಲ ಉತ್ತರ ಕನ್ನಡದ ಕಾಡು ಮೃಗಗಳು ಹಾಗೂ ಜೀವ ವೈವಿಧ್ಯದ ಪರಿವೀಕ್ಷಣೆಯ ಹೆಸರು ಹೇಳಿದರಾಯ್ತು..'
                   `ಹುಂ.. ಒಳ್ಳೆ ಐಡಿಯಾ.. ಸರಿ ಹಾಗೇ ಮಾಡೋಣ..' ಎನ್ನುವಲ್ಲಿಗೆ ಆಗಲೇ ಹೊತ್ತು ಮದ್ಯರಾತ್ರಿಯನ್ನು ಮೀರಿತ್ತು. ಇಬ್ಬರೂ ಮಾತು ಮುಗಿಸಿ ನಿದ್ರೆಯ ಕಡೆಗೆ ಜಾರಿದರು.

***10***

                `ಮೊದ್ಲು ಯಾಣಕ್ಕೆ.. ಆ ನಂತ್ರ ಬೇರೆ ಕಡಿಗೆ..' ಎಂದು ಕಿರುಚಿದಳು ರಮ್ಯ.
                 `ಊಹೂ.. ಅದೆಲ್ಲಾ ಆಗ್ತಿಲ್ಲೆ.. ಮೊದಲು ಬನವಾಸಿ.. ನಂತರ ಯಾಣ.. ಆಮೇಲೆ ಸಹಸ್ರಲಿಂಗ..'ಎಂದು ಹೇಳಿದ ವಿನಾಯಕ.
                 `ಶ್.. ಸುಮ್ನಿರಿ ಎಲ್ಲರೂ.. ಮೊದಲು ದಂಟ್ಕಲ್ಲಿಗೆ ಹೋಗೋಣ. ಆ ನಂತ್ರ ಬೇರೆ ಕಡೆಗೆ. ನಾವು ಮುಖ್ಯವಾಗಿ ರಿಸರ್ಚಿಗೆ ಬಂದಿದದ್ದು. ಹಾಗಾಗಿ ಮೇರೆ ಕಡೆಗೆಲ್ಲಾ ನಿಧಾನವಾಗಿ ಹೋಗಿ ಬಂದರಾಯ್ತು' ಎಂದ ವಿಕ್ರಂ
                  `ಸರಿ ಹಾಗೇ ಆಗ್ಲಿ..' ಎಲ್ಲರ ಒಪ್ಪಿಗೆಯೂ ಸಿಕ್ಕೇ ಬಿಟ್ಟಿತು. ಜೊತೆಗೆ ಎಲ್ಲರೂ ದಂಟಕಲ್ಲಿಗೆ ಸಾಗಲು ಅಗತ್ಯ ವಸ್ತುಗಳನ್ನು ಸಂಗ್ರಹಿಸತೊಡಗಿದರು. ಆ ದಿನ ಮದ್ಯಾಹ್ನವೇ ದಂಟಕಲ್ ಗೆ ತೆರಳಲು ಮುಹೂರ್ತವನ್ನು ಹುಡುಕತೊಡಗಿದರು.
                 ಅಂತೂ ಕಣ್ಣೀರುಮನೆಗೆ ಬಂದು ಐದಾರಿ ದಿನ ಕಳೆದ ನಂತರ ಅಂದು ಅಂದರೆ ಎಪ್ರಿಲ್ 12ರಂದು ದಂಟಕಲ್ಲಿನೆಡೆಗೆ ಸಾಗಲು ಅವಸರಿಸಿದರು.
                 ವಿಕ್ರಂ, ವಿನಾಯಕ, ವಿಜೇತಾ, ರಮ್ಯ, ಪ್ರದೀಪ ಮದ್ಯಾಹ್ನದ ಉರಿಬಿಸಿಲ ಹೊತ್ತಿನೊಳು ಹೊರಡಲುಪಕ್ರಮಿಸಿದಾಗ ಅಲ್ಲಿಗೆ ಬಂದ ವಿಷ್ಣು ತಾನೂ ಬರುವೆನೆಂದ. ಬೇಡವೆಂದರೂ ಆತನ ಹಠಕ್ಕೆ ಎಲ್ಲರೂ ಕೊನೆಗೆ ಒಪ್ಪಿಗೆ ನೀಡಲೇಬೇಕಾಯಿತು. ಕೊನೆಗೊಮ್ಮೆ ಎಲ್ಲರೂ ಹೊರಟರು. ಅವರೆಲ್ಲರೂ ಹೊರಡಲು ಮುಂದಡಿಯಿಡುತ್ತಿದ್ದಾಗಲೇ ವಿಕ್ರಮನ ತಾಯಿಗೆ ಏತಕ್ಕೋ ಒಮ್ಮೆ ಬಲಗಣ್ಣು ಅದುರಲಾರಂಭಿಸಿತ್ತು. ಆದರೆ ಅವರು ಅದನ್ನು ಯಾರಲ್ಲೂ ಹೇಳಲಿಲ್ಲ.
                ಸಾಮಾನ್ಯವಾಗಿ ಗಂಡಸರಿಗೆ ಎಡಗಣ್ಣು ಅದುರಿದರೆ, ಹೆಂಗಸರಿಗೆ ಬಲಗಣ್ಣು ಅದುರಿದರೆ ಅವು ಬರಲಿರುವ ಅಪಾಯದ, ಕೇಡಿನ ಮುನ್ಸೂಚನೆ ಎಂಬ ನಂಬಿಕೆ ಜನಸಾಮಾನ್ಯರಲ್ಲಿದೆ. ಇದು ಬಹುತೇಕ ಸತ್ಯವಾಗಿದೆ ಕೂಡ. ಹಾಗಾದರೆ ಈ ಅದುರುವಿಕೆ ಮುಂದೆ ಬರುವ ಅಪಾಯದ ಮುನ್ನುಡಿಯಾ? ಅಥವಾ ಇಂದಿನ ವೈಜ್ಞಾನಿಕ ಅಧ್ಯಯನಿಗಳು ಹೇಳುವ ಪ್ರಕಾರ ನರಗಳ ಮಿಡಿತವಾ? ಈ ಬಗ್ಗೆ ಯೋಚನೆ ಮಾಡಿದಷ್ಟೂ ನಿಘೂಡವೇ ಮೆರೆದು ನಿಲ್ಲುತ್ತದೆ.

*****

                ಇತ್ತ ಬೇಣದಗದ್ದೆಯ ಸುಬ್ಬಣ್ಣನಿಗೆ ಅದೇಕೋ ಎಡಗಣ್ಣು ಅದುರುತ್ತಿತ್ತು. ಸ್ವಭಾವತಃ ಸಂಪ್ರದಾಯ ವಿರೋಧಿಯಾದ ಆತ ಆಗ ಇದನ್ನು ನಂಬುವ ಗೋಜಿಗೇನೂ ಹೋಗಲಿಲ್ಲ. ಅವನ ಪ್ರಕಾರ ಇದೊಂದು ನರಗಳ ಸ್ಪಂದನ-ಪ್ರತಿಸ್ಪಂದನ. ಹಾಗಾಗಿ ಆತ ಇದಕ್ಕೆ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ತಾನು ಮಾಡ್ತಾ ಇರುವ ಕೆಲಸ ತನ್ನ ಅಣ್ಣನಿಗೆ ಗೊತ್ತಾಗಲೇ ಬಾರದು ಎಂದು ಮತ್ತಷ್ಟು ಜಾಗರೂಕನಾಗಿ ಕಾರ್ಯ ನಿರ್ವಹಿಸಲು ಆರಂಭಿಸಿದ.

****

             ಅಂತೂ ಇಂತೂ ಹೊರಟ ಪಯಣ ನಿಧಾನವಾಗಿ ಯಲ್ಲಾಪುರವನ್ನು ದಾಟಿ ಮುಂದೆ ಸಾಗಿತು. ಕಾರಿನಲ್ಲಿ ವಿಕ್ರಂ, ಪ್ರದೀಪ, ವಿನಾಯಕ, ವಿಜೇತಾ, ರಮ್ಯ, ವಿಷ್ಣು ಇಷ್ಟು ಜನರು ಕಾಡು ಹರಟೆಗಳ ಜೊತೆಗೆ ಸಾಗುತ್ತಿದ್ದರು. ಪ್ರದೀಪನ ಹಾಸ್ಯ, ವಿನಾಯಕನ ಕವನಗಳ ಲಾಸ್ಯದ ಜೊತೆಗೆ ಇದ್ದವರಿಗೆ ಚಲಿಸಿದ ಮಾರ್ಗದ ಅರಿವೇ ಆಗಲಿಲ್ಲ. ಅವರು ಹಾದು ಬರುತ್ತಿದ್ದ ಯಲ್ಲಾಪುರ-ಶಿರಸಿ ಮಾರ್ಗದಲ್ಲಿ ಬಹುತೇಕ ಬಂದಂತೆ ವಿಕ್ರಮ ಒಮ್ಮೆಲೆ ಕಾರು ನಿಲ್ಲಿಸಿದ. ಎಲ್ಲರೂ ಏಕೆಂದು ಕೇಳಲಾಗಿ ಅದು ಹುಳಗೋಳವೆಂದೂ, ಸನಿಹದಲ್ಲೇ ಸಹಸ್ರಲಿಂಗವೆಂಬ ಅದ್ಭುತ ತಾಣವಿದೆಯೆಂದೂ ನೋಡಿ ಬರುವಾ ಎಂದೂ ತಿಳಿಸಿದ. ಎಲ್ಲರಿಂದ ಒಪ್ಪಿಗೆ ಸಿಗಲಾಗಿ ಅತ್ತ ಸಾಗಿದರು. ಅಂಕುಡೊಂಕಿನ ದಾರಿಯನ್ನು ಕ್ರಮಿಸಿದ ಕಾರು ಕೊನೆಗೊಮ್ಮೆ ಸಹಸ್ರಲಿಂಗದ ಬಾಯಿ ತಲುಪಿತು.
              ಸುತ್ತಲೂ ಕಾನನದ ಕರಿ ಮಟ್ಟಿಗಳು.ಕೆಳಗಡೆ ನಿತ್ಯ ಸಂಜೀವಿನಿಯಾದ ಶ್ಯಾಮಲ ನದಿ ಶಾಲ್ಮಲೆ ಜುಳು ಜುಳು ಸದ್ದನ್ನು ಮಾಡುತ್ತಾ ಹರಿಯುತ್ತಿದ್ದಳು. ಕಾರಿನಿಂದಿಳಿದ ಎಲ್ಲರೂ ಮೆಟ್ಟಿಲನ್ನು ಓಡುತ್ತಲೇ ಇಳಿದರು. ಆ ನದಿಯ ಒಡಲನ್ನು ಬಹುಬೇಗನೇ ನೋಡುವ ತವಕ ಅವರಿಗಿತ್ತು. ನದಿ ತಟಾಕದಲ್ಲಿ ಅವರಿಗೆ ಕಾಣಿಸಿದ್ದು ಕಾಲಿಟ್ಟ ಕಡೆಯಲ್ಲೆಲ್ಲ ಶಿವಲಿಂಗ. ಅದ್ಯಾವ ಶಿಲ್ಪಿ ಅದ್ಯಾವ ಕಾರಣಕ್ಕೆ ಕೆತ್ತಿದ್ದನೋ.. ಸಹಸ್ರ ಸಹಸ್ರ ಸಂಖ್ಯೆಯಲ್ಲಿದ್ದವು ಲಿಂಗಗಳು. ಪುಟ್ಟ ಪುಟ್ಟ ಲಿಂಗಗಳಿಂದ ಹಿಡಿದು ಬೃಹತ್ ಗಾತ್ರದ ಲಿಂಗಗಳು ಅಲ್ಲಿದ್ದವು.
              ಮೊದಲು ಓಡಿದ ಪ್ರದೀಪ ಅಲ್ಲಿಯೇ ಇದ್ದ ಬೃಹತ್ ನಂದಿಯನ್ನು ಕಂಡ. ಕಂಡವನೇ ಭವ್ಯವಾದ ನಂದಿಯ ಮೇಲೆ ಹತ್ತಿ ಕುಳಿತುಕೊಂಡ. ಆತನ ಮನಸ್ಸು ಮಗುವಂತಾಗಿತ್ತು.. ಕುದುರೆ ಸವಾರನಂತೆ ಕುಳಿತು `ಹೇಯ್... ಪೋಟೋ ತೆಗಿರ್ರೋ...' ಎಂದು ಕೂಗಿದ. ಯಾರೋ ಕ್ಯಾಮರಾವನ್ನು ಕ್ಲಿಕ್ಕಿಸಿದರು. ವಿಕ್ರಮನಂತೂ ಕೂಡಲೇ `ಬಸವನ ಮೇಲೊಬ್ಬ ಕೋಲೇಬಸವ..' ಎಂದ. ನಗು ಬುಗ್ಗೆಯಾಗಿ ಹರಡಿ, ಚಿಮ್ಮಿತು.
              ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಶಿಲ್ಪಿಯ ಉಳಿಯೇಟಿಗೆ ಬೆನ್ನೊಡ್ಡಿ ಸುಂದರ ದೃಶ್ಯ ಕಾವ್ಯವಾಗಿ ಮೈತಳೆದಿದ್ದ ಸಹಸ್ರಲಿಂಗ ಶಾಲ್ಮಲೆಯ ರಮ್ಯ ನಿನಾದಕ್ಕೂ, ರೌದ್ರ ಆರ್ಭಟಕ್ಕೂ ಹಿಡಿದ ಇರುಳ ಸೂಡಿಯಾಗಿತ್ತು. ಅಲ್ಲಲ್ಲಿ ಸವೆದ ಲಿಂಗಗಳು, ಒಡೆದ ಕಲ್ಲುಗಳು, ಚೆಲ್ಲಾಪಿಲ್ಲಿಯಾಗಿದ್ದ ಭಗ್ನ ಮೂರ್ತಿಗಳು ವಿನಾಯಕನ ಕಣ್ಣಲ್ಲಿ ನೀರು ತರಿಸಿದವು. ಅದ್ಯಾರೋ ಪ್ರೇಮಿಗಳು ಒಂದಿಷ್ಟು ಕಲ್ಲಿನ ಮೇಲೆ ತನ್ನ ಹಾಗೂ ತನ್ನ ಪ್ರೇಯಸಿಯ ಹೆಸರುಗಳನ್ನು ಕೆತ್ತಿ ವಿಕಾರ ಮಾಡಿದ್ದರು. ತಮ್ಮ ಅಜ್ಞಾನವನ್ನು, ಕೆಟ್ಟ ಸಂಸ್ಕೃತಿಯನ್ನು ಕಾರಿಕೊಂಡಿದ್ದರು.
               ಸಹಸ್ರಲಿಂಗದ ಸಹಸ್ರಬಿಂಬ ಛಿದ್ರ ವಿಛಿದ್ರದ ರೂಪದಲ್ಲಿ ಅಲ್ಲಿ ಕಾಣಿಸಲು ಆರಂಭವಾಗಿತ್ತು. ಸ್ತ್ರೀ ಲಲನೆಯರೋ ಆಗಲೇ ಶಾಲ್ಮಲೆಯ ನೀರಿನಲ್ಲಿ ಕಾಲನ್ನು ಇಳಿಬಿಟ್ಟು ಆಗಲೇ ಹರಟೆ ಕೊಚ್ಚಲು ಆರಂಭಿಸಿದ್ದರು. ಸೂರ್ಯ ಪಶ್ಚಿಮದ ಹೆಬ್ಬಾಗಿಲಿನ ಮೂಲಕ ಸಹ್ಯಾದ್ರಿಯ ಮನೆ-ಮನವನ್ನು ಕೊನೆಯ ಸಾರಿಯೆಂಬಂತೆ ನೋಡಿ ಅಸ್ತಮಿಸುತ್ತಿದ್ದ. ಎಲ್ಲರೂ ಲಗುಬಗೆಯಿಂದ ಮರಳುವಾಗಲೇ ಸಂಜೆಯ ಕಣ್ಣೋಟ ರಸ್ತೆಯ ಮೇಲೆ ಹರಡಿತ್ತು.

(ಮುಂದುವರಿಯುತ್ತದೆ)

No comments:

Post a Comment