Sunday, July 14, 2013

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು - ಭಾಗ 5


 
ಕೊಳ್ಳುವುದು ಏನನ್ನು ಎನ್ನುವ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಮೂಡಿತು..
ನನಗೆ ಕ್ರಾಂತಿ ನಾಯಕ `ಚೆ ಗುವೆರಾ' ನ ಚಿತ್ರವಿರುವ ಟಿ ಷರ್ಟ್ ಕೊಳ್ಳಬೇಕು ಎನ್ನಿಸಿತ್ತು..
ದೋಸ್ತರ ಬಳಿ ಹೇಳಿದೆ..
ಅವರಿಗೂ ಹೇಳಿದೆ..
ಮೋಹನನಿಗೆ ಚೆಗುವೆರಾ ನ ಬಗ್ಗೆ ಗೊತ್ತಿರಲಿಲ್ಲವೋ ಅಥವಾ ಬೇಕಂತಲೇ ಹೇಳಿದನೋ ಗೊತ್ತಿಲ್ಲ..
ಜಾಗ್ವಾರ್ ಷರ್ಟ್ ಜಾಗ್ವಾರ್ ಷರ್ಟ್ ಎನ್ನಲು ಶುರುಹಚ್ಚಿಕೊಂಡ..
ನಮಗೆ ತಮಾಷೆಯಾಗಿ ನಗು ಬಂತು..
ಹಿಂದಿನ ಸಾರಿ ನಾನು, ರಾಘು ಊಟಿಗೆ ಬಂದಾಗ ಒಂದು ಅಂಗಡಿಯಲ್ಲಿ ಜರ್ಕಿನ್ನುಗಳನ್ನು ಕೊಂಡಿದ್ದೆವು.. ಅದರತ್ತ ಮುಖ ಮಾಡಿದೆವು..
ನಮಗೆ ಬೇಕಾದಂತಹ ಯಾವುದೇ ಬಟ್ಟೆ ಅಲ್ಲಿ ಸಿಗಲಿಲ್ಲ..
ಇನ್ನೊಂದು ದೊಡ್ಡ ಮಳಿಗೆ..
ನಾವು ಅಪ್ಪಟ ಕನ್ನಡಿಗರು..
ತಮಿಳಿನ ಸಾಪಡ್ ಬಿಟ್ಟರೆ ಇನ್ನೆಂತದ್ದೂ ಗೊತ್ತಿಲ್ಲ..
ಕೊನೆಗೆ ಆ ಮಳಿಗೆಯಲ್ಲಿ ಕನ್ನಡ ಗೊತ್ತಿದ್ದ ತಮಿಳರಿದ್ದರು...
ಅವರು ತಮಿಳರೋ ಅಥವಾ ಕನ್ನಡಿಗರೇ ಹೊಟ್ಟೆಪಾಡಿಗೆ ಅಲ್ಲಿಗೆ ಹೋಗಿದ್ದಾರೋ ಗೊತ್ತಿಲ್ಲ..
 ಆದರೆ ಅವರ ಪ್ರನೌನ್ಸಿಯೇಷನ್ ಮಾತ್ರ ತಮಿಳಿನಂತೆಯೇ ಇತ್ತು.. ಸೋ ತಮಿಳ್ಗನ್ನಡಿಗರೇ ಇರಬೇಕು...
ಅಂದುಕೊಂಡೆವು..
 
ಅಂಗಡಿ ತುಂಬೆಲ್ಲ ನಮನಮೂನೆಯ ಜರ್ಕಿನ್ನುಗಳು ಸ್ವೆಟ್ಟರುಗಳು..
ಯಾವುದನ್ನೇ ಹಿಡಿದರೂ ಕೊಳ್ಳಬೇಕೆನ್ನಿಸುವ ಮೋಹ..
ನಾವು `ವಿಟಮಿನ್ ಎಂ' ಅನ್ನೂ ದೃಷ್ಟಿಯಲ್ಲಿಟ್ಟುಕೊಳ್ಳಬೇಕಲ್ಲ ಮಾರಾಯ್ರೆ..
ಆದ್ದರಿಂದ ನಾವು ನಾಲ್ವರೂ ತಲಾ ಒಂದೊಂದು ಜರ್ಕಿನ್ ಕಂ ಸ್ವೆಟರ್ ಕೊಳ್ಳುವುದು ಎಂಬ ತೀರ್ಮಾನ ಬಹುಮತ ಪಡೆಯಿತು..
ಅದೃಷ್ಟಕ್ಕೆ ಅಲ್ಲಿ ನನ್ನ ಪ್ರೀತಿಯ ಚೆ ಗುವೆರಾ ಷರ್ಟ್ ಇತ್ತು..
ಎಲ್ಲರಿಗೂ ಉಷ್ಟವಾದದ್ದೂ ನನ್ನ ಅದೃಷ್ಟವೇ ಸರಿ..
ನಾಲ್ಕರ ಜೊತೆಗೆ ಒಂದು ಎಕ್ಸ್ ಟ್ರಾ.. ಒಟ್ಟೂ ಐದು ಷರ್ಟ್ ಕೊಂಡೆವು..
ಟ್ರಿಪ್ ಕಳೆದು ಸರಿಸುಮಾರು 3-4 ವರ್ಷ ಕಳೆಯುತ್ತಿದೆ..
ಇಂದಿಗೂ ಚೆಗುವೆರಾ ನನ್ನ ಬಳಿ ಅರಾಮವಾಗಿದೆ.. ಮಳೆಗಾಲದ ತಂಪಿನಲ್ಲಿ, ಚಳಿಗಾಲದ ಕೊರೆಯುವಿಕೆಯಲ್ಲಿ ನನ್ನ ಎದೆಯ ಮೇಲೇರುತ್ತಾನೆ ಆತ.. ಬೆಚ್ಚಗೆ ಮಾಡಿದ್ದಕ್ಕೆ ಥ್ಯಾಂಕ್ಸ್ ಮಾರಾಯ..
ನಿನ್ನ ಕ್ರಾಂತಿಯ ಕಿಡಿಗಳು ಚಿರಾಯುವಾಗಿರಲಿ..
 
ಅಲ್ಲೊಂದು ಅಂಗಡಿ ನಮ್ಮ ಮನಸ್ಸನ್ನು ತಟ್ಟನೆ ಸೆಳೆಯಿತು..
ಅದೊಂದು ಟೆಡ್ಡಿ ಬೇರ್ ಅಂಗಡಿ..
ಸಾವಿರ ಸಾವಿರ ಸಂಖ್ಯೆಯಲ್ಲಿ ಟೆಡ್ಡಿ ಬೇರ್ ಗಳು ಅಲ್ಲಿದ್ದವು..
ಚಿಕ್ಕವು, ದೊಡ್ಡವು, ಪುಟ್ಟವು, ಕೆಂಪು, ನೀಲಿ, ಹಳದಿ, ಗುಲಾಬಿ.. ನಮ್ಮದು ಕೊರತೆಯ ಅರ್ಥಶಾಸ್ತ್ರ,,
ನೋಡಲು ಅರ್ಥಶಾಸ್ತ್ರದ ಲೆಕ್ಖಾಚಾರ ಬೇಕಿಲ್ಲವಲ್ಲ ನೋಡುತ್ತ ನಿಂತೆವು.,.
ಅರೇ/.. ಟೆಡ್ಡಿ ಬೇರ್ ತಲೆಯನ್ನು ಅತ್ತಿತ್ತ ಅಲ್ಲಾಡಿಸುತ್ತಿದೆ..
ಅರೇ.. ನಗುತ್ತಲೂ ಇದೆ.. ನೋಡ ನೋಡುತ್ತಿದ್ದಂತೆಯೇ ಮಾತನ್ನೂ ಆಡಲು ಪ್ರಾರಂಭಿಸಿತು..
ಇದೇನಿದೆ ಎನ್ನುವಷ್ಟರಲ್ಲಿ ಅದೊಂದು ಹುಡುಗಿ..!!
ಅಂಗಡಿಯ ಒಡತಿಯೋ ಯಾರೋ..
ನೇಪಾಳಿಯಂತೆ ಟಾರಿನ ಬಣ್ಣವಲ್ಲ..
ಕಣ್ಣು ಕಿರಿದು.. ಕಿಟ್ಟುವಂತೂ ``ಹ್ವಾ ಇದು ಜಿಂಪೋ ಛೇ... ಕಡೆಯಿರಬೇಕು'  ಅಂದ
ಅಂದರೆ ನೇಪಾಳಿಯೋ.. ಗೂರಖಾವೋ.. ಟಿಬೇಟಿಯನ್ನರೂ ಇರಬೇಕು ಎಂಬುದು ನಮ್ಮ ಅಂದಿನ ಕೋಡ್ ವರ್ಡ್ ಆಗಿತ್ತು..
ಹೌದು.. ಆಕೆ ನೇಪಾಳಿಯೇ..
ಸರಿ ಟೆಡ್ಡಿಯನ್ನು ಕೊಳ್ಳುವ ಮನಸ್ಸಿಲ್ಲ..
ಗೊಂಬೆಗಳನ್ನು ಕೊಳ್ಳುವ ನಾಟಕ ಶುರುಹಚ್ಚಿಕೊಂಡು ಚೌಕಾಸಿಗಿಳಿದೆವು..
ನಮ್ಮಂತವರನ್ನು ಎಷ್ಟುಮಂದಿಯನ್ನು ಆಕೆ ಕಂಡಿದ್ದಳೋ..
ಬಲೆ ಘಾಟಿ.. ಮಾತಿನಲ್ಲೇ ಮೋಡಿ ಮಾಡುವ ಛಾತಿ.. ವ್ಯಾಪರಾದ ಸಕಲ ಎಬಿಸಿಡಿ ಗೊತ್ತಿದ್ದ ಅವಳ ಮುಂದೆ ನಮ್ಮ ಆಟ ನಡೆಯಲಿಲ್ಲ.. ಹಾಗಂತ ನಾವು ಟೆಡ್ಡಿಬೇರ್ ಕೊಳ್ಳಲಿಲ್ಲ ಮಾರಾಯ್ರೆ..
ಹಾಲುಬಿಳುಪಿ ಟೆಡ್ಡಿಯಂತಹ ಹುಡುಗಿಯನ್ನು ನೋಡಿ ಮಾತನಾಡಿ.. ಪುಳಕಿತರಾಗಿ ಮರಳಿದೆವು..
`ಎದೆಯೊಳಗೆ ಗಿಟಾರು ನೂರು...ಮಿಡಿ ಮಿಡಿ ಮಿಡಿದು...'

 
ನಮ್ಮ ಶಾಪಿಂಗು ಮುಗಿಯಿತು...
ಇನ್ನೇನು ಮಾಡುವುದು..?
ಬೊಟಾನಿಕ್ಕಲ್ ಗಾರ್ಡನ್ ಸೆಳೆಯಲಿಲ್ಲ..
ಪ್ರಾಥಮಿಕ ಶಾಲೆಯ ಪಾಠದಲ್ಲಿ ಓದಿದ್ದ ಅದು ನಮ್ಮಲ್ಲಿ ಬೆರಗನ್ನು ಮೂಡಿಸಲಿಲ್ಲ..
ನೇಮಿ ಚಂದ್ರರ ಅವರು ಹೇಳಿವಂತೆ `ನಾ ಓಡಿ ಓಡಿ ಮುಟ್ಟಿದ ಬೆಟ್ಟದ ತುದಿಯಲ್ಲಿ ಏನಿದೆ ಬಟ್ಟಾ ಬಯಲು' ಎನ್ನುವಂತೆ ಭಾಸವಾಯಿತು.. ಅಲ್ಲಿನ ಮರಗಿಡಗಳನ್ನು ಕತ್ತರಿಸಿ, ಬಗ್ಗಿಸಿ ವಿವಿಧ ಆಕೃತಿಗಳನ್ನಾಗಿ ಮಾಡಿದ್ದು ನಮ್ಮನ್ನು ಕಾಡಲಿಲ್ಲ..
ಸರಿ ಊಟಿ ನೋಡಿದ್ದಾಯ್ತು.. ಚಳಿಯಲ್ಲಿ ಕೂಲ್ ಆಗಿದ್ದಾಯ್ತು.. ಮುಂದೇನು..? ಎನ್ನುವ ಕ್ವಶ್ಚನ್ ಮಾರ್ಕು ನಮ್ಮ ಮನದಲ್ಲಿ ಮೂಡಿ ಉತ್ತರಕ್ಕಾಗಿ ತಡಕಾಡುತ್ತಿತ್ತು..
ಅಷ್ಟರಲ್ಲಿ ನಮಗೆ ಟೀ ಫ್ಯಾಕ್ಟರಿ ನೋಡಬೇಕು ಎನ್ನುವ ಚಿಕ್ಕದೊಂದು ಆಸೆ..
ಆಸೆಯ ಹುಳು ಮನದಲ್ಲಿ ಹೊಕ್ಕ ನಂತರ ಅದಕ್ಕೆ ಅಂತ್ಯ ಹಾಕಲೇ ಬೇಕು..
ಸರಿ ಅಲ್ಲೊಂದು ಫ್ಯಾಕ್ಟರಿ ಕಣ್ಣಿಗೆ ಬಿತ್ತು.. ಹೊರಟರೆ ಅದಕ್ಕೆ ಪ್ರವೇಶಫೀಸಿದೆ.. ಅದೆಷ್ಟೋ ಕೊಟ್ಟು ಹೋಗಬೇಕೆಂದರೆ ಚಿಕ್ಕ ಕ್ಯೂ ಕೂಡ ಇದೆ.. ಸುಮ್ಮನೇ ಲಾಸು ಮಾಡಿಕೊಂಡು ಹೋಗುವುದು ಬೇಡ ಎನ್ನುವ ಎಕನಾಮಿಕ್ಸು ನಮ್ಮ ಮನದಲ್ಲಿ..
ಆದರೆ ಕ್ಯೂನಲ್ಲಿ ನೋಡಿದರೆ ಮೂರ್ನಾಲ್ಕು ಬೆಳ್ಳಗಿನ ಹುಡುಗಿಯರು..!
ಜೈ... 
ನಾವೂ ಕ್ಯೂನಲ್ಲಿ ನಿಂತೆವು..
 
ಹತ್ತುನಿಮಿಷದ ನಂತರ ಫ್ಯಾಕ್ಟರಿಯ ಒಳಭಾಗದಲ್ಲಿ ನಾವು..
ಅದರೊಳಗೆ ಇಂಗ್ಲೀಷ್ ಭಾಷೆಯಲ್ಲಿ ಕಾಮೆಂಟರಿ..
ಏನೋ ಹೇಳುತ್ತಿದ್ದರು..
ನಾವು ನಾಲ್ವರೂ ಘನ ಗಂಬೀರವಾಗಿ ಕೇಳುವ ನಟನೆ ಮಾಡಿದೆವು..
ನಮ್ಮ ನಟನೆ ನೋಡಿದರೆ ನಮಗೆ ಸಂಪೂರ್ಣ ಅರ್ಥವಾಗಿದೆ ಎನ್ನುವಂತಿತ್ತು..
ಹೊರ ಬಂದಾಗ ಕಿಟ್ಟು ಕೇಳಿದ್ದು `ಅಂವ ಎಂತಾ ಹೇಳಿದ್ನಲೆ..' ನನ್ನ ಉತ್ತರ `ಸಾಯ್ಲಾ ಟಸ್ ಪುಸ್ ಅಂದ ಅರ್ಥ ಆಜಿಲ್ಲೆ..' ಮೋಹನ, ರಾಘು ಕೂಡ ಇದಕ್ಕೆ ಹೊರತಾಗಿರಲಿಲ್ಲ ಎನ್ನುವುದು ಅವರ ಮುಖದಿಂದ ಗೊತ್ತಾಗುತ್ತಿತ್ತು..
ಆ ಫ್ಯಾಕ್ಟರಿಯಲ್ಲಿ ಚಾಕಲೇಟುಗಳು ತಯಾರಾಗುತ್ತಿದ್ದವು. ನೋಡಿದ ತಕ್ಷಣ ಬಾಯಲ್ಲಿ ಚವುಳು ನೀರು ಸುರಿಯಬೇಕು.. ಅಷ್ಟು ಚನ್ನಾಗಿದ್ದವು..
ಬೆಲೆ ಕೇಳಿದರೆ ಈಗಿನ ಪೆಟ್ರೂಲ್ ರೇಟಿಗಿಂತ ಜಾಸ್ತಿ... ಅದಕ್ಕೆ ಪ್ರತಿಯಾಗಿ ಅವರು ಕೊಡುವುದು ಕಡಿಮೆ ಗಾತ್ರದ ಚಾಕಲೇಟು..
ನೋಡಿದಷ್ಟರಲ್ಲೇ ಹೊಟ್ಟೆ ತುಂಬಿತು ಎಂದು ಹೇಳಿ ವಾಪಾಸು ಬಂದೆವು...
ಮುಂದೆ... `ಎಲ್ಲಿಗೆ ಪಯಣ..? ಯಾವುದು ದಾರಿ..' ಮರಳಿ ಬೆಂಗಳೂರಿಗಾ..? 
ಊಹೂಂ ಬಗೆ ಹರಿಯಲಿಲ್ಲ..

 
ಅಷ್ಟರಲ್ಲಿ ನಮ್ಮ ಭಭ್ರವಾಹನದ ಹೊಟ್ಟೆ ಖಾಲಿಯಾಗಿದ್ದು ನೆನಪಾಯಿತು..
ಬಂಕಿಗೆ ಹೋಗಿ ನೋಡಿದರೆ ಕರ್ನಾಟಕಕ್ಕಿಂತ 1.5 ರು.ಗಿಂತಲೂ ಕಡಿಮೆ ದರದಲ್ಲಿ ಪೆಟ್ರೂಲು..
ವೀರ ಕನ್ನಡಿಗರಾದ ನಾವು ಕರ್ನಾಟಕವನ್ನು ಹಿಗ್ಗಾ ಮುಗ್ಗಾ ಬೈದು ಟ್ಯಾಂಕ್ ಫುಲ್ ಮಾಡಿಕೊಂಡು ಗಾಡಿಯನ್ನು ಗುರ್ರೆನ್ನಿಸುವಾಗಲೇ ನಮ್ಮ ಹೊಟ್ಟೆ ಖಾಲಿಯಾದದ್ದು ನೆನಪಾಯಿತು...

ಮತ್ತದೆ ದಾರಿ ಮಧ್ಯದ ಹೊಟೆಲನ್ನು ನೆನಪು ಮಾಡಿಕೊಂಡು ಮುಂದಕ್ಕೆ ಹೆಜ್ಜೆಯನ್ನಿಟ್ಟೆವು..
ಹೋಗುವಾಗ ಏದುಸಿರು ಬಿಟ್ಟಿದ್ದ ನಮ್ಮ ಭಭ್ರುವಾಹನರಿಗೆ ಈಗ ವೇಗ ಇಮ್ಮಡಿಸಿತ್ತು..
ಫೇವರ್ಸ್ ಹಾಕಿದ್ದ ರಸ್ತೆ.. ಗಾಡಿಯನ್ನು ಆಫ್ ಮಾಡಿಕೊಂಡರೂ 10-20 ಕಿ.ಮಿ ಅರಾಮವಾಗಿ ಸಾಗಬಹುದು.. ಅಷ್ಟು ಇಳಿಜಾರು..
10-12 ಕಿ.ಮಿ ಬಂದ ನಂತರ ನಮ್ಮ ಅದೇ ಹೊಟೆಲ್ ಸಿಕ್ಕಿತು..
ಬಾಗಿಲು ಹಾಕಿತ್ತು..
ಮತ್ತಷ್ಟು ಬೈಗುಳ.. ಹೊಟ್ಟೆಪಾಡು ತಾಳಹಾಕುತ್ತಿತ್ತು..
ಅಲ್ಲೆಲ್ಲೋ ಇನ್ನೊಂದು ಹೊಟೆಲು ಸಿಕ್ಕಿತು.. ಊಟದ ಶಾಸ್ತ್ರ ಮುಗಿಸಿದೆವು..
ಆಮೇಲೆ ಮತ್ತೆ ನಮ್ಮೆದುರು ಮೂಡಿದ್ದು `ಎಲ್ಲಿಗೆ ಪಯಣ..? ಯಾವುದು ದಾರಿ..?'
ಗಾಡಿ ನಿಲ್ಲಿಸಿ ವಾಪಾಸು ಬೆಂಗಳೂರಿಗೆ ಹೋಗುವುದಾ..?  ಎಂದು ಸಮಾಲೋಚನೆ ಮಾಡಿದೆವು..
 
ಅಷ್ಟರಲ್ಲಿ ಅದ್ಯಾವ ಟ್ಯೂಬ್ ಲೈಟ್ ಹೊತ್ತಿಕೊಂಡಿತೋ.. ಮೋಹನ ಇಲ್ಲೆಲ್ಲೋ ವಯನಾಡಿದೆ ನೋಡಿ ಬರೋಣ ಎಂದ..
ನಮಗೆ ಅನುಮಾನ.. ಸುಮ್ನಿರು ಮಾರಾಯಾ ವಯನಾಡು ಇರುವುದು ಕೇರಳದಲ್ಲಿ ಎಂದೆವು..
ಇಲ್ಲಪ್ಪಾ.. ಎಲ್ಲೋ ನೋಡಿದ್ದೇನೆ.. 
ಊಟಿಯ ಹತ್ತಿರದಲ್ಲೇ ಇದೆ ವಯನಾಡು.. ಎಂದ..
ನಮಗೆ ನಂಬಿಕೆ ಬರಲಿಲ್ಲ..
ಕೊನೆಗೆ ತನ್ನ ಬ್ಯಾಗಿನಲ್ಲಿದ್ದ ಮ್ಯಾಪನ್ನು ತೆಗೆದು ತೋರಿಸಿದ ನಂಬಿಕೆ ಬಂತು..
ಅಲ್ಲೆ ಹತ್ತಿರದಲ್ಲಿದ್ದ ಅಂಗಡಿಯಾತನ ಬಳಿ ಮತ್ತೊಮ್ಮೆ ಕನ್ ಫರ್ಮ್ ಮಾಡಿಕೊಂಡೆವು..
ಆದರೆ ಹೋಗುವುದಾ ಬೇಡ್ವಾ.. ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಲಿಲ್ಲ..
ನನಗೆ ರಜಾ ಸಿಗುವುದು ಅನುಮಾನವಿತ್ತು..
ಏನ್ ಮಾಡೋದು..?

ಆ ನಾಲ್ವರಲ್ಲಿ ನಾನು ವಾರದ ರಜಾ ಪಡೆದು ಬಂದಿದ್ದೆ..
ರಾಘು ಇನ್ನೂ ಓದುತ್ತಿದ್ದ..
ಕಿಟ್ಟು, ಮೋಹನ ಸ್ವ ಉದ್ಯೋಗದಲ್ಲಿದ್ದರು..
ನನಗೆ ಆಫೀಸಿನಲ್ಲಿ ರಜಾ ಕೊಡ್ತಾರೋ ಇಲ್ಲವೋ ಎನ್ನುವ ಶಂಕೆ..
ಕೊನೆಗೆ ಅಳುಕಿನಿಂದ ಆಫೀಸಿಗೆ ಪೋನ್ ಮಾಡಿದೆ..
ನನ್ನ ಮೇಲಿನವರು `ಏನ್ ವಿನಯ್,ಎಂದರು..
ಸರ್ ನಾಳೆ ಆಫೀಸಿಗೆ ಬರೋದಿಕ್ಕಾಗೋದಿಲ್ಲ ಎಂದೆ..
ಯಾಕೆ ಏನಾಯ್ತು ಎಂದರು/..
ಹುಷಾರಿಲ್ಲ.. ತುಂಬಾ ಕೋಲ್ಡಾಗಿದೆ. ಚಿಕ್ಕದಾಗಿ ಫೀವರ್ರು ಬೇರೆ ಎಂದು ರೈಲು ಬಿಟ್ಟೆ..
ಅದಕ್ಕವರು ಏನ್ರಿ.. ನಿನ್ನೆ ಚನ್ನಾಗಿದ್ರಲ್ರಿ.. ಅಷ್ಟು ಬೇಗ ಏನಾಯ್ತು  ಎಂದರು//
ಗೊತ್ತಿಲ್ಲ ಸಾರ್.. ಏನೋ ಹೆಚ್ಚೂ ಕಡಿಮೆಯಾಗಿದೆ ಅನ್ಸುತ್ತೆ.. ಎಂದೆ..
ನಿಮ್ದೊಳ್ಳೆ ಗೋಳಾಯ್ತು ಕಣ್ರಿ.. ಓಕೆ.. ರೆಸ್ಟ್ ತಗೊಂಡು ಬನ್ನಿ.. ನಾಡಿದ್ದಿನಿಂದ ನೈಟ್ ಡ್ಯೂಟಿ ಎಂದರು..
ಮನದಲ್ಲಿ ಗಾಳಿಯ ಬಲೂನು ಒಡೆದ ಅನುಭವ..
ಆದರೆ ರಜಾ ಸಿಕ್ಕಿತೆಂಬ ಖುಷಿ..

ಅದನ್ನು ಮಿತ್ರವೃಂದದ ಬಳಿ ಹೇಳಿದಾಗ ಅವರಿಗೂ ಖುಷಿಯಾಗದೇ ಇರಲಿಲ್ಲ/..
ವಯನಾಡಿಗೆ ಹೋಗುವ ಮೊದಲು ಊಟಿ ಬೆಟ್ಟವನ್ನಿಳಿದು ಗುಡಲೂರಿಗೆ ಹೋಗಿ ಅಲ್ಲಿಂದ ಹೋಗಬೇಕಿತ್ತು..
ಅದಕ್ಕಾಗಿ ಮೊದಲು ಗುಡಲೂರಿಗೆ ಹೋಗುವಾ ಎಂದು ನಮ್ಮ ಪ್ಲಾನ್ ತಯಾರಾಯಿತು..
ಊಟಿಯಿಂದ 40ಓ, 45ಓ ಕಿ.ಮಿ ದೂರದಲ್ಲಿದ್ದ ಗುಡಲೂರಿನ ಮಾರ್ಗ ರಾಷ್ಟ್ರೀಯ ಹೆದ್ದಾರಿ..
ನಿಸರ್ಗದ ಖನಿ..
ಎಲ್ಲವನ್ನೂ ಕಣ್ತುಂಬಿಕೊಂಡು ಹೋಗಬೇಕೆಂದರೆ ಕನಿಷ್ಟ 4 ತಾಸುಗಳಾದರೂ ಬೇಕೇಬೇಕು..
ಮಾರ್ಗಮಧ್ಯ ತಮಿಳಿನ ಉದ್ದುದ್ದ ಹೆಸರಿನ ಊರುಗಳು..
ಪೈಕರ ಡ್ಯಾಂ, ಉದ್ದುದ್ದ ನೀಲಗಿರಿ ಕಾಡುಗಳು.. ಎಷ್ಟು ನೋಡಿದರೂ ಮನಸ್ಸು ತಣಿಯುವುದಿಲ್ಲ ಬಿಡಿ..

(ಮುಂದುವರಿಯುತ್ತದೆ.,...,)

Wednesday, July 3, 2013

ಮಹಾಮಳೆಯ ನೋಟಗಳು

ಮಹಾಮಳೆಯ ನೋಟಗಳು


ಕಳೆದೆರಡು ದಿನಗಳ ಹಿಂದೆ ವರುಣ ರಾಯ ರಜಾ ಹಾಕಿದ್ದ.. ಆಮೇಲಿನದೆಲ್ಲ ಓವರ್ ಡ್ಯೂಟಿ...
ಟೈಂ ಪಿಕಪ್ ಮಾಡಲು ನಮ್ಮ ಡ್ರೈವರ್ರುಗಳು ಬಸ್ಸನ್ನು ಯದ್ವಾತದ್ವಾ ಓಡಿಸುವಂತೆ..
ಶುರುವಾಯ್ತು ನೋಡಿ... ಮಹಾಮಳೆ...
ಉತ್ತರಖಂಡವನ್ನು ನೆನಪಿಸಿಬಿಟ್ಟಿತು..


ಸೋಮವಾರ ಸಂಜೆ ಜಿಟಿ ಜಿಟಿ ಎಂದ ಮಲೆ ಮಂಗಳವಾರ ಮದ್ಯಾಹ್ನವೂ ಜಿಟಿಜಿಟಿಯಿತ್ತು..
ಆರಿದ್ರಾ ಮಳೆಯ ಅಬ್ಬರ ಕಾಣ್ತಾ ಇಲ್ಲವೋ ಅಂದುಕೊಂಡಿದ್ದೆವು...
ಮಂಗಳವಾರ ಸಂಜೆ ಶುರುವಾಯ್ತು ನೋಡಿ ಮಳೆ...
ಸ್ಮಾಲ್ ಬ್ರೇಕ್.... ಇಲ್ಲವೇ ಇಲ್ಲ...
ಜೊರ.. ಜೊರ... ಜೊರ...
ಒಂದೇ ವೇಗ... ಮೈಲೇಜ್ ಮೆಂಟೇನ್ ಮಾಡುತ್ತಿತ್ತು...
ಒಂದೇ ಏಟಿಗೆ ಭೂಮಿ ತನ್ನ ಬಿಸಿಯನ್ನೆಲ್ಲ ಕಳೆದುಕೊಂಡು ಹಸಿಯಾಗಿತ್ತು...


ಬುಧವಾರ ಮದ್ಯಾಹ್ನದ ವರೆಗೂ ಮಳೆ ಬ್ರೇಕಿಲ್ಲದೆ ಸುರಿಯುತ್ತಿತ್ತು.
ಪರಿಣಾಮ ನೋಡಿ ಭೀಖರವಾಗಿತ್ತು..
ಹಳ್ಳ, ಕೊಳ್ಳಗಳು ತುಂಬಿದವು.. ಬೋರ್ಘರೆದವು...

ಜೊರಗುಡುವ ಮಳೆ.. ಮಂಗಳವಾರ ರಾತ್ರಿ ನಾನು ಮಲಗಿದ್ದೆ.. ಮಳೆಯ ಸದ್ದಿಗೆ ಮಧ್ಯರಾತ್ರಿ ಪದೆ ಪದೆ ಎಚ್ಚರಾಗುತ್ತಿತ್ತು...
ನಮ್ಮೂರಿನಿಂದ ಅರ್ಧ ಮೈಲಿ ದೂರದಲ್ಲಿ ಅಘನಾಶಿನಿ ಹರಿಯುತ್ತಾಳೆ.. ಅದರ ಸದ್ದು ಮೊದ ಮೊದಲು ಚಿಕ್ಕದಿತ್ತು.. ಕೊನೆ ಕೊನೆಗೆ ದೊಡ್ಡದಾಯಿತು..
ಬೆಳಿಗ್ಗೆಯಾದರೆ ಸಾಕಪ್ಪಾ ಅಂದುಕೊಂಡೆ..
ಅದ್ಯಾವುದೋ ಜಾವದಲ್ಲಿ ಎಚ್ಚರಾಯಿತು..
ಸುತ್ತೆಲ್ಲ ಬೆಳಕು..
ಮಳೆ ಸುರಿಯುತ್ತಲೇ ಇತ್ತು..
ಆದರೆ ಗಂಟೆ ಎಸ್ಟಿರಬಹುದು? ನೋಡಲು ಕರೆಂಟಿರಲಿಲ್ಲ..
ಸಿಕಾಡಗಳ ಟ್ರೊಂಯ್ ಟ್ರೊಂಯ್ ಸದ್ದಿನ ಮೇಲೆ ಸಮಯ ಅಳೆಯಲು ಯತ್ನಿಸಿದೆ. ಊಹುಂ ಕೇಳಲಿಲ್ಲ..
ಅರೇ.. ಇದೆಂತ ಭ್ರಮೆ ಅಂದುಕೊಂಡೆ..
ಆಮೇಲೆ ಮತ್ತೆ ನಿದ್ರೆ.. ಅದೆಷ್ಟೋ ಸಮಯದ ನಂತರ ಶಿರಸಿಯಿಂದ ನಮ್ಮ ಸರ್ ಪೋನ್ ಮಾಡಿದರು.. ಮನೆಯಲ್ಲಿ ಯಾರಿಗೂ ಎಚ್ಚರಿರಲಿಲ್ಲ..
ಟೈಂ ನೋಡಿದರೆ 8.30.. ಆಗಸ ನೋಡಿದೆ.. 6 ಗಂಟೆಗೆ ಆಗುವಂತಹ ಮಬ್ಬು ಬೆಳಗು..
ಇದೆನಾಯ್ತು ಅಂದರೆ ಅದೇ ಮಳೆ...


ತೋಟದ ಕೆಳಗೆ 40 ಅಡಿ ಕೆಳಗೆ ಅಘನಾಶಿನಿ ಹರಿಯುತ್ತಿದ್ದಳು.. ನೋಡಿ ಬರೋಣ ಎಂದು ಹೊರಟೆ..
ಆಕೆ ರೌದ್ರಾವತಾರ ತೋರಿರಲಿಲ್ಲ..
ಬರುವಾಗ ಅಘನಾಶಿನಿ ನೆರೆ ಬಂದರೆ ಪೋಟೋ ತಗೊಂಡು ಬನ್ನಿ.. ಹುಡಾಯಲೆ ಹೋಗಡಿ..ಎನ್ನುವ ನಮ್ಮ ಸರ್ ಮಾತಿಗೆ ಬೆಲೆ ಕೊಟ್ಟು ಪೋಟೋ ತೆಗೆಯೋಣ ಎಂದು ಯತ್ನಿಸಿದರೆ ವಂದೂ ಸರಿ ಬರಲಿಲ್ಲ..
ಹೊಳೆಯ ದಂಡೆಗೆ ಹೋದೆ.. ಕ್ಷಣಕ್ಷಣಕ್ಕೂ ನೀರು ಉಕ್ಕುತ್ತಿತ್ತು.. ಒಂದಷ್ಟು ಪೋಟೋ ಕ್ಲಿಕ್ಕಿಸುವ ವೇಳಗೆ ಒಂದು ಮಹಾಮಳೆ ಸುರಿಯಿತು ನೋಡಿ..
ಎದ್ದೋಡಿ ಬಂದೆ..
ಮನೆಗೆ ಮರಳುವಷ್ಟರಲ್ಲಿ ಮನೆಯೊಳಗೆಲ್ಲ ನೀರು..ನೀರು..

ಹೊಟ್ಟೆಗೆ ಕೊಂಚ ತಿಂಡಿ ತಿಂದು ಮುಗಿಸುವ ವೇಳೆಗೆ ಸುದ್ದಿ ಬಂದಿತ್ತು.. ಶಿರಸಿಯ ಚಿನ್ನಾಪುರ ಕೆರೆ ಒಡೆದಿದೆ.. ಅಂತ.. ಕೋಟೆಕೆರೆ ತುಂಬಿದೆಯಂತೆ.. ಯಾವ ಕ್ಷಣದಲ್ಲೂ ಒಡೆಯಬಹುದು.. ಅಂತಲೂ ಅಂದರು ನಮ್ಮ ವಿಶ್ವಣ್ಣ..
ಸುದ್ದಿ ಮಾಡಲು ಹೋಗಬೇಕು...
ಮಹಾಮಳೆ.. ಎಲ್ಲ ಕಡೆ ನೆರೆ ಬಂದಿದೆ.. ಎಲ್ಲಿ ಸುದ್ದಿ ಮಾಡೋಣ ಹೇಳಿ..?
ಅಷ್ಟರಲ್ಲಿ ಕಾನಸೂರಿನಿಂದ ಸುಭಾಷ ನಾಯ್ಕರು ಪೋನ್ ಮಾಡಿ ಅರ್ಜೆಂಟು ಬನ್ನಿ ನಮ್ಮೂರಿನ ನಾಲ್ಕು ಮನೆ ಮುಳುಗಿದೆ ಎಂದರು.
ದಡಬಡಿಸಿ ಹೋಗಬೇಕೆಂದರೂ ನಮ್ಮೂರಿನ ಗಬ್ಬು ರಸ್ತೆಯಲ್ಲಿ ಹುಗಿಯುತ್ತ ಏಳುತ್ತ, ಬೀಳುತ್ತ ಆರು ಕಿ.ಮಿ ಕಾನಸೂರು ಮುಟ್ಟುವ ವೇಳಗೆ ಅರ್ಧ ಗಂಟೆ...
ಮಳೆ ಅಬ್ಬರಕ್ಕೆ ಅಘನಾಶಿನಿಯ ಸೋದರ ಸಂಬಂಧಿ ಉಕ್ಕಿತ್ತು...
ಪರಿಣಾಮ ನದಿಯ ಪಕ್ಕದಲ್ಲಿದ್ದ ನಾಲ್ಕು ಮನೆಗೆ ನೀರು ನುಗ್ಗಿ ಐದನೇ ಮನೆಯ ಒಳಗೆ ಇಣುಕುತ್ತಿತ್ತು...

ಮನೆಯಲ್ಲಿದ್ದವರೆಲ್ಲ ಹೊರಗೆ ಬಂದಿದ್ದರು.. ಸಾಮಾನು ಸರಂಜಾಮು ಸಾಗಾಟದಲ್ಲಿ ನಿರತರಾಗಿದ್ದರು..
ತಾ.ಪಂ, ಗ್ರಾ.ಪಂ, ಸೇರಿದಂತೆ ಇಲಾಖೆಗಳ ಹಲವು ಮಂದಿ ಆಗಲೇ ಆಗಮಿಸಿದ್ದರು.. ಕೊನೆಗೆ ಎಷ್ಟು ನಷ್ಟ.. ಆಯ್ತು ಎನ್ನುವ ಆಲೋಚನೆ ಅವರದ್ದು.. ಓಯ್ ಇವ್ರೆ.. ನಮ್ಮ ಮನೆಯ ಇದೂ ಕೊಚ್ಚಿಕೊಂಡು ಹೋಗಿದೆ... ಎಂದು ಮರೆತಿದ್ದದ್ದನ್ನು ಲೀಸ್ಟಿನಲ್ಲಿ ಸೇರಿಸುತ್ತಿದ್ದರು...
ಕಳೆದ 3 ವರ್ಷದ ಹಿಂದೆ ಅಘನಾಶಿನಿ ನದಿಯ ಬಲದಂಡೆಗೆ ಪಿಚ್ಚಿಂಗ್ ಕಟ್ಟಿ ಅಂತ ಹೇಳಿದ್ವಿ.. ಇಲಾಖೆಯವರು `ಕಾಗೆ' ಹಾರಿಸಿದರು.. ಅಂತ ರಾಜಕಾರಣದಲ್ಲಿ ಮಾತನಾಡುತ್ತಿದ್ದ ಹಲವರು ಅಲ್ಲಿದ್ದರು..

ಪೋಟೋ.. ಅಹವಾಲು ಎಲ್ಲ ಪಡಕೊಂಡು ಹೊಸಗದ್ದೆ ಸೇತುವೆಗೆ ಹೋಗಬೇಕು ಎಂದು ಗಾಡಿ ತಿರುಗಿಸಿದೆ..
ಕಲ್ಮಟ್ಟಿ ಹಳ್ಳದ ನೀರು ಉಕ್ಕುಕ್ಕಿ ಹರಿಯುತ್ತಿತ್ತು...
ಬಾಳೆಸರ ರಸ್ತೆಯನ್ನು ಬಂದು ಮಾಡಿ ಬಿಡುತ್ತೇನೆ ಎಂದು ಮೈಮೇಲೆ ಬಂದವರಂತೆ ಆಡುತ್ತಿತ್ತು..
ಹಾಗೂ ಹೀಗೂ ಮುನ್ನಡೆದೆ..
ಕೋಡ್ಸರಕ್ಕೆ ಹೋಗುವಾಗ ಅಲ್ಲೊಂದು ಕಡೆ ಭೂಕುಸಿತದ ಜಾಗವಿದೆ..
ನಾನು ಹೋಗುವ ಮುನ್ನ ಒಂದಿಷ್ಟು ಭೂ ಕುಸಿತವಾಗಿತ್ತು..
ಪರಿಣಾಮ ಕರೆಂಟು ಕಂಬ ಹಾಗೂ ಕಂಬದ ಜಡೆಗಳಾದ ಲೈನುಗಳನ್ನೆಲ್ಲ ಮುಲಾಜಿಲ್ಲದೇ ಕಿತ್ತು ಹಾಕಿತ್ತು...
ಅದರ ಪೋಟೋ ತೆಗೆಯೋಣ ಅಂತ ಗಾಡಿ ನಿಲ್ಲಿಸಿದೆ..
ಅಲ್ಲಿ ಪರಿಸ್ಥಿತಿ ಅವಲೋಕನ ಮಾಡುತ್ತಿದ್ದ ನಾಲ್ಕು ಜನ ಯಂಗ್ ಸ್ಟಾರ್ ಗಳು.. ಹೋಯ್.. ಮೊದ್ಲು ಇತ್ಲಾಗೆ ಬನ್ನಿ.. ಎಂದು ಕೂಗಿದರು..
ಗಡಬಡಿಸಿ ಮುಮದೆ ಹೋದೆ..
ನೀವೆಂತ.. ಬೆಳಿಗ್ಗೆ ಅಲ್ಲಿ ಕುಸಿದಿತ್ತು.. ಈಗ ಅದೇ ಅಲ್ಲಿ ನೋಡಿ ಮಣ್ಣು ಅರ ಸರ ಇಳಿತಾ ಅದೆ.. ಈಗ ಕುಸಿತದೆ ನೋಡಿ ಅಂದರು..

ಲೈವ್ ಆಗಿ ಕಣ್ಣೆದುರು ಕುಸಿಯುತ್ತದೆ ಅಂತಾದರೆ ಪೋಟೋ ಕ್ಲಿಕ್ಕಿಸೋಣ ಅಂತ ಕಾದೆ..
ಊಹೂಂ.. ವಂದಿಂಚೂ ಕುಸಿಯಲಿಲ್ಲ.. ಮಣ್ಣು ಮಾತ್ರ ಆಗಾಗ ನಾ ಬಿದ್ದೆ ನಾ ಬಿದ್ದೆ ಅಂತ ಬೀಳುತ್ತಿತ್ತು..
ಕೊನೆಗೆ ಹೊಸಗದ್ದೆ ಸೇತುವೆ ಮೇಲೆ ನೀರು ಬಂದದೆ ಎಂಬ ಗಾಳಿ ಸುದ್ದಿ ಕೇಳಿ ಗುಡ್ಡ ಕುಸಿತದ ಲೈವ್ ಪ್ರೋಗ್ರಾಮನ್ನು ಅಲ್ಲಿಗೆ ಬಿಟ್ಟು ಹೋದೆ...
ನಾನು ಹೊಸಗದ್ದೆ ಕಡೆಗೆ ಹೋದಂತೆಲ್ಲ ದಾರಿಯಲ್ಲಿ ಸಿಕ್ಕ ಬೈಕುಗಳು, ಬಸ್ಸು, ವಾಹನಗಳು ಹೋಯ್ ದಾರಿ ಬಂದಾಗದೆ.. ಹೋಗ್ಲಿಕ್ಕಾಗೂದಿಲ್ಲ.. ಎನ್ನುತ್ತಿದ್ದರು..ಆದರೂ ಮುಂದುವರಿಯುತ್ತಿದ್ದ ನನ್ನನ್ನು ಪಿರ್ಕಿಯಂತೆ ಕಂಡು ಮುಂದಕ್ಕೆ ಸಾಗುತ್ತಿದ್ದರು..

ಹೊಸಗದ್ದೆ ಸೇತುವೆಯತ್ತ ಹೋದರೆ ಸೇತುವೆ ಮೇಲೆ ನೀರೇ ಇಲ್ಲ..!!!
ಬರೀ ಜನ...
ಅಘನಾಶಿನಿ ಸೇತುವೆಗೆ ಮುತ್ತಿಕ್ಕುತ್ತ ಸಾಗುತ್ತಿತ್ತು..
ಆಗೀಗ ಸೇತುವೆ ಮೇಲೆ ನೀರು ಉಕ್ಕುತ್ತಿತ್ತು..
ಹೊಸಗದ್ದೆ ಹಾಗೂ ಸುತ್ತಮುತ್ತಲ ಜನ ಜಮಾಯಿಸಿದ್ದರು..
ಉಕ್ಕೇರುವ ಹೊಳೆ ನೋಡಲು ಬಂದಿದ್ದಾರೆ ಎಂದುಕೊಂಡೆ..
ಹೊಳೆ ನೋಡುವವರು ಸೇತುವೆ ಮೇಲೆ ಯಾಕೆ ನಿಂತಿದ್ದಾರೆ ಎನ್ನಿಸಿತು..
ಯಾರಾದ್ರೂ ಹೊಳೆಗೆ ಹಾರಿದರೇ..? ಅದರ ಪರಾಮರ್ಶೆ ಮಾಡ್ತಾ ಇದ್ದಾರೆಯೇ ಎಂಬೆಲ್ಲ ಶಂಕೆ ಮೂಡಿ ಮನದಲ್ಲಿ ಭೀತಿ..

ಹೋಗ್ಲಿ ಎಂದು ಮುಂದಕ್ಕೆ ಹೋದರೆ ಅಲ್ಲಿ ಜಮಾಯಿಸಿದ್ದ ಜನರ ಕೆಲಸವೇ ಬೇರೆ ನಮೂನಿಯಾಗಿತ್ತು..
ಹೊಳೆಯಲ್ಲಿ ತೇಲಿ ಬರುತ್ತಿದ್ದ ತೆಂಗಿನ ಕಾಯಿಯನ್ನು ಕ್ಯಾಚ್ ಹಿಡಿಯುವುದಕ್ಕಾಗಿ ಜನರು ಸೇರಿದ್ದರು.. ಸೇತುವೆ ಮೇಲೆ ನಿಂತು ಅಲ್ಲ ಬರುವ ತೆಂಗಿನ ಕಾಯಿಯನ್ನು ಹಿಡಿಯಲು ಸ್ಪರ್ಧೆಯೇ ನಡೆಯುತ್ತಿತ್ತು..
ಮಹಿಳೆಯರೂ ಪುರುಷರಿಗೆ ಪೈಪೋಟಿ ನೀಡುತ್ತಿದ್ದರು..
ಆದರೆ ಮಹಿಳೆಯರು ತೆಂಗಿನ ಕಾಯಿಗೆ ಮುಗಿ ಬೀಳುತ್ತಿರಲಿಲ್ಲ.
ಬದಲಾಗಿ ಹೊಳೆಯಲ್ಲಿ ತೇಲಿ ಬರುತ್ತಿದ್ದ ಕಟ್ಟಿಗೆ, ಕುಂಟೆಗಳನ್ನು ಹಿಡಿಯುವ ಕಾಯಕದಲ್ಲಿ ನಿರತರಾಗಿದ್ರು..

ಆಗಾಗ ನದಿ ನೀರು ಸೇತುವೆ ಮೇಲೆ ಉಕ್ಕುತ್ತಿತ್ತುಉ.
ಆಗೆಲ್ಲ ಜನಮಾನಸದಲ್ಲಿ ಹೋ ಎನ್ನುವ ಕೂಗು...
ಆದರೂ ಇವರ ಕಾಯಕ ನಿಲ್ಲುತ್ತಿರಲಿಲ್ಲ..
ನಂಗೆ 12 ಕಾಯ್ ಸಿಕ್ತು .. ನಂಗೆ 14 ಎನ್ನುವ ಲೆಕ್ಕಾಚಾರವೂ ಇತ್ತು..
4 ವರ್ಷದವರಿಂದ ಹಿಡಿದು 85 ವರ್ಷದ ವರೆಗೆ ಎಲ್ಲ ವಯೋಮಾನದ ಗಂಡು ಹಾಗೂ ಹೆಣ್ಣುಗಳು ಎಲ್ಲಿದ್ದವು..

ದಾರಿಯಲ್ಲಿ ಸಾಗುವ ವಾಹನಗಳ ಕಡೆಗೆ ಖಬರಿರಲಿಲ್ಲ..
ಇವರದ್ದೇ ಆಟ..
ದೇವರೇ ಈ ಸೇತುವೆ ಅಘನಾಶಿನಿಯ ಆರ್ಭಟಕ್ಕೆ ಕೊಚ್ಚಿ ಹೋದರೆ ಕತೆಯೇನಪ್ಪಾ.. ಎನ್ನುವ ಭಯದ ಚಿಕ್ಕ ಶಾಕ್..
ಹಳೆ ಸೇತುವೆ.. ಸೇತುವೆಯ ಅಕ್ಕಪಕ್ಕದ ಸೈಡ್ ಬಾರ್ ಗಳು ಕಿತ್ತುಹೋಗಿವೆ..
ಯಾರಾದ್ರೂ ತೆಂಗಿನ ಕಾಯಿ ಅಥವಾ ಕುಂಟೆಗಳನ್ನು ಕ್ಯಾಚ್ ಮಾಡಲು ಹೋಗಿ ಲಗಾಪಾಟಿ ಹೊಡೆದರೆ ಏನಪ್ಪಾ.. ಎಂದು ಕೊಂಡು ಹಗೂರಕ್ಕೆ ಕ್ಯಾಮರಾ ತೆಗೆದೆ..

ಆಗ ಶುರುವಾಯ್ತು ನೋಡಿ..
ಹೈಕಳೆಲ್ಲ..
ಯಾವ ಟೀವಿ? ಎಂದರು..
ಟಿವಿ ಅಲ್ಲ ಕಾಣ್ತದಾ.. ಪೇಪರ್ರಿರಬೇಕು ಎನ್ನುವ ವೇದವಾಕ್ಯ ಇನ್ನೊಬ್ಬನದ್ದು..
ಸುಮ್ನಿರ್ರಾ.. ಪೇಸ್ ಬುಕ್ಕಿಗೆ ಹೊಡ್ಕಳಾಕೆ ಹಿಡಿದಿದ್ದು ಎಂದು ಗುಂಪಲ್ಲಿರುವ ಗೋವಿಂದನ ಮಾತು..
ಎಲ್ಲ ಕಿವಿಗೆ ಬಿತ್ತು..
ನನ್ನ ಪಾಡಿಗೆ ನಾನು ಕ್ಯಾಮರಾ ಕ್ಲಿಕ್ ಕ್ಲಿಕ್..
ಕೊನೆಗೆ ಇಡಿಯ ಸೇತುವೆ ಮೇಲೆ ನಿಧಾನವಾಗಿ ನೀರು ಉಕ್ಕಲಾರಂಭಿಸಿತು..
ಅದರ ಪರಿವೆಯೂ ಇಲ್ಲ..
ಇಡಿ ಸೇತುವೆ ಪೋಟೋ ಹೊಡೆದುಕೊಳ್ಳಬೇಕಿತ್ತು...
ಕೊನೆಗೆ ಆ ಗುಂಪಿನ ಮುಖ್ಯಸ್ಥರ ಬಳಿ ಸ್ವಲ್ಪ ಸೇತುವೆಯಿಂದ ಆಚೆ ಹೋಗಿ ಎಂದೆ..
ನಮ್ ಪೋಟೋ ಹೊಡೀರಿ ಹೋಗ್ತೇವೆ ಅಂದ..
ಸರಿ ಎಂದೆ..
ಆತನಂತೂ ಸ್ವರಗಕ್ಕೆ 12 ಗೇಣು...
ಎಲ್ಲಾರನ್ನೂ ದೂರಕ್ಕೆ ಸರಿಸುವ ಆತನ ಗತ್ತು ಗಾಂಭೀರ್ಯ ಎಲ್ಲಾ ನೋಡಿದಾಗ ಖಂಡಿತವಾಗಿಯೂ ಮುಂದಿನ ಸಾರಿ ಗ್ರಾಮ ಪಂಚಾಯತ ಚುನಾವಣೆಗೆ ಸ್ಪರ್ಧಿಸುತ್ತಾನೆ ಎನ್ನಿಸಿತು. ನೆರೆಯ ಎಫೆಕ್ಟ್ ಪೋಟೋ ಹೊಡೆಯೋಣ ಎಂದುಕೊಂಡರೆ ಈ ಹೈದರ ಪೋಟೋ ಸೆಷನ್ ಮಾಡಬೇಕಾಗಿ ಬಂತಲ್ಲ ದೇವರೆ.. ಅಂದುಕೊಂಡೆ.. ಅಲ್ಲಿದ್ದವನೊಬ್ಬ ವೀಡಿಯೋ ಮಾಡ್ಕೋ ಅಂದ..
ಅಷ್ಟರಲ್ಲಿ ಪೋನು ಕಿಣಿ ಕಿಣಿ..
ಕಾರವಾರದ ಮಂಜು ವೀಡಿಯೋ ಮಾಡ್ಕಳಿ ನನಗೆ ಕಳಿಸಿ ಅಂದ..
ಸಿಕ್ಕಿದ್ದೆ ಸಿವಾ.. ಅದೂ ಆಯ್ತು...

ಸುಮಾರು ಪೋಟೋ ತೆಗೆದ ನಂತರವೂ ಅಗನಾಶಿನಿ ಸೇತುವೆಯ ಮೇಲೆ ಬರಲಿಲ್ಲ..
ಕಾದುಕಾದುವ್ಯರ್ಥ..
ಅದ್ಯಾವನೋ ಪುರ ಜನ ಹೇಳಿದ..
ಬಾಳೂರಲ್ಲಿ ಮನೆಗೆ ನೀರು ನುಗ್ಗಿದೆ ಅಂದ..
ಹೋಗಲು ಸಾಧ್ಯವೇ ಎಂದರೆ ರಸ್ತೆಯಲ್ಲಿ ನೀರು ಬಂದಿದೆ ಎಂದ..
ಟುಸ್ಸಾಯ್ತು ಉತ್ಸಾಹ..
ಅಷ್ಟರಲ್ಲಿ ಶಿರಸಿಯಿಂದ, ಬೇಗ ಆಫೀಸಿಗೆ ಬನ್ನಿ.. ಕೋಟೆಕೆರೆ ಢಂ ಅನ್ನೋ ಛಾನ್ಸಿದೆ ಎನ್ನುವ ದೂರವಾಣಿ...
ಮರಳಿ ದಾರಿ ಹಿಡಿದೆ..
ಕೋಡ್ಸರದ ಭೂಕುಸಿತ ಜಾಗಕ್ಕೆ ಬಂದರೆ.. ಅಲ್ಲಿ ಅದೇ ಯಂಗ್ ಸ್ಟಾರ್ಸ್ ಅವರಿಂದ ಅದೇ ಡೈಲಾಗ್ ಪುನರಾವರ್ತನೆ..
ಭೂಮಿಯೂ ಅಷ್ಟೇ ಈಗ ಕುಸಿತೆನೆ ನೋಡು..
ಈಗ ಕುಸಿತೇನೆ ನೋಡು..ಅನ್ನುತ್ತಿತ್ತು.. ಬಿಟ್ಟು ಹೋದೆ..

ಕಾನಸೂರಿಗೆ ಬರುವ ವೇಳೆಗೆ ಸುಭಾಷ್ ನಿಂದ ಮತ್ತೆ ಪೋನ್..
ಮಾದ್ನಕಳ್ ಸೇತುವೆ ಮೇಲೆ ನೀರು ಹೋಗ್ತಾ ಇದೆ.. ನೋಡಿ.. ಅಂದ..
ಹೋಗಿ ನೋಡಿದರೆ.. ಸೇತುವೆಯೇ ಕಾಣದಂತೆ ಮಳೆ ನೀರು..
ಕೆಂಪು ಕೆನ್ನೀರು.. ರಾಡಿ ರಾಡಿ.. ಪಕ್ಕದ ತೆಂಗಿನ ತೋಟಗಳಲ್ಲೆಲ್ಲ ನೀರೇ ನೀರು..
ಪಾಪ ಅಲ್ಲಿ 4 ಗಂಟೆಗಳಿಂದ ಸೇತುವೆ ದಾಟಲು ನಿಂತುಕೊಂಡಿದ್ದರಂತೆ...
ಮಳೆ ನೀರು ಬಿಡಲೊಲ್ಲದು..

ನಾನೂ ಸೇತುವೆ ಮೇಲೆ ಓಡಾಡಿದೆ...
ಮಳ್ಳಂಡೆ ತನಕ ನೀರು...
ತಂಪು ತಂಪು ಕೂಲ್ ಕೂಲ್ ಆಯಿತು.. ಅವ್ಯಕ್ತ ಬೀತಿ ಬಗಲಿನಲ್ಲಿ ಬೆವರನ್ನೂ ತಂದಿತು...
ಪೋಟೋ ಸಾಕಷ್ಟು ತೆಗೆದುಕೊಂಡೆ..
ಅಷ್ಟರಲ್ಲಿ ಆಗಲೇ ಶಿರಸಿಯಿಂದ ಮತ್ತೆರಡು ಸಾರಿ ಪೋನ್ ಬಂದಿತ್ತು..

ಶಿರಸಿಗೆ ಹಾಗೂ ಹೀಗೂ ಹೋಗುವ ವೇಳೆಗೆ ಮಳೆ ಕಡಿಮೆ ಆಗಿತ್ತು..
ಕೋಟೆಕೆರೆಗೆ ಬಂದರೆ ನೀರಿನ ಪ್ರಮಾಣ ಇಳಿದಿತ್ತು..
ಥೋ ನೀವು ಆಗಲೇ ಬರಬೇಕಿತ್ತು...
ಪೋಟೋ ಮಿಸ್ ಮಾಡಿಕೊಂಡ್ರಿ ಎಂದು ಜೊತೆಗಾರ ಪತ್ರಕರ್ತರು ಛೇಡಿಸಿದರು...
ಅವರಿಗೆ ನಾನು ಬೇರೆ ಕಡೆಯ ನೆರೆ ಪೋಟೋ ತೆಗೆಯಲು ಹೋದ ಸುದ್ದಿಯನ್ನು ಹೇಳಲೇ ಇಲ್ಲ..
ಯಾವಾಗಲೂ ಸತ್ಯ ಹರಿಶ್ಚಂದ್ರನ ಪೋಸು ಕೊಡುತ್ತಿದ್ದ ನನು ಈಗ ಮಾತ್ರ ಸುಳ್ಳು ಹರಿಶ್ಚಂದ್ರನಾದೆ..!!

ಅಂತೂ ಇಂತೂ ಮಳೆಯ ಕುರಿತು ರಿಪೋರ್ಟ್ ಬರೆದು ಕಳಿಸಿದಾಗ.. ಅದೇನೋ ದಿಲ್ ಖುಷ್...
ಪತ್ರಕರ್ತನಾಗಿದ್ದಕ್ಕೆ ಇಂತದ್ದು ಕಾಮನ್ನು ಗುರು ಎಂದು ಅದ್ಯಾರೋ ಹೇಳಿದರು..
ಬೆಂಗಳೂರಲ್ಲಿದ್ದರೆ ಹಿಂಗಾಗ್ತಿತ್ತಾ ಎಂದವರೂ ಇದ್ದಾರೆ,,,
ಏನೋ ಒಂಥರಾ ಎನ್ನಿಸಿದರೂ
ಮನದಲ್ಲಿ ಮಹಾಮಳೆಯ ನೆನಪು..
ಉತ್ತರಕನ್ನಡವೂ ಉತ್ತರಕಾಂಡದಂತಾಯ್ತು.. ಎಂಬಂತೆ...

Monday, June 24, 2013

ಆ ಸಾಲಿಗೆ ಸೇರದ ಹನಿಚುಟುಕಗಳು

ಆ ಸಾಲಿಗೆ ಸೇರದ ಹನಿಚುಟುಕಗಳು

ಮೊದಲೊಂಚೂರು : ಬರಿ ಹನಿಕವಿಯಾಗಬೇಡ ಮಾರಾಯಾ.. ಜಾಸ್ತಿ ಕಾಲ ನಿಲ್ಲೋದಿಲ್ಲ.. ಹನಿಯಿದ್ದದ್ದು ಬನಿಯಾಗಲಿ.. ಎಂದು ಅನೇಕ ಮಿತ್ರರು ಅಮದಕಾಲತ್ತಿಲೆ ಸಲಹೆ ನೀಡುತ್ತಿದ್ದರು.. ಆ ಸಲಹೆಯನ್ನು ಮನ್ನಿಸಿ ಆಗಾಗ ಅನೇಕ  ವ್ಯರ್ಥ ಪ್ರಯತ್ನಗಳನ್ನೂ ಮಾಡಿದ್ದೆ. ಅಂದಿನ ಸಮಯದಲ್ಲಿ ನಾನು ನಡೆಸಿದ ಕೆಲವು ವ್ಯರ್ಥ ಪ್ರಯತ್ನಗಳು ಈ ಹನಿಗಳು.. ಎಲ್ಲೋ ಅಡಿಯಲ್ಲಿ ಬಿದ್ದಿದ್ದು ಸಿಕ್ಕಿತು.. ಓದಿ ಹೇಳಿ.. ನಿಮ್ಮಭಿಪ್ರಾಯ

58.ಬಯಕೆ

ಉರುಳುತ್ತಿರುವ ತಲೆ
ಅರಳುತ್ತಿರುವ ಹೂ
ಎರಡೂ ಬಯಸಿದ್ದು
ಪ್ರೀತಿ ಮಾತ್ರ ||



59.ಸಾಂತ್ವನ
ಅಳುವ ಮನಕ್ಕಷ್ಟು ಸಮಾಧಾನ
ಭಾವನೆಗಳು ಜೋಪಾನ
ಪ್ರೀತಿಯ ಸೋಪಾನ
ಅಳುವೆಡೆಗೆ ನಗುವಿಡುವ ತೀರ್ಮಾನ
ಅದು ಬದುಕ ಸಾಂತ್ವನ ||


60.ಕೊನೆ ಮೊದಲು
ಗೆದ್ದಾಗ ನಗು,
ಅತ್ತಾಗ ದುಃಖ |
ನಡುವೆ ಸಾಧನೆ,
ಒಳಗೆ ವೇದನೆ.|
ಬಾಳಲ್ಲಿ ಸರಸ
ಜೊತೆಯಲ್ಲಿ ವಿರಸ..||
ಕೊನೆಯಿಲ್ಲ ಮೊದಲಿಲ್ಲ
ಎರಡೂ ಬೇರೆ.., ಎರಡೂ ಒಂದೇ ..||

61.ಅಂತ್ಯ
ಅವರೋ ಜೋಡಿ
ಅಮರ ಪ್ರೇಮಿ |
ಅವರಿಗೆ ಸಿಕ್ಕಿದ್ದು ಮಾತ್ರ
ಮರಣ ಭೂಮಿ ||


62.ನನ್ನ-ನಿನ್ನ ಪ್ರೀತಿ
ಗೆಳತೀ.., ನನ್ನ ನಿನ್ನ ಪ್ರೀತಿ
ರೈಲ್ವೆ ಕಂಬಿಗಳಂತೆ,
ಎಂದೂ ಜೊತೆಗೂಡುವುದಿಲ್ಲ..
ಕೊಬೆತನಕ ಬೇರೆ ಬೇರೆ
ಜೊತೆ ಸೇರಿಲ್ಲ..
ಸೇರುವುದೂ ಇಲ್ಲ..!!

63.ಕ-ವನ
ಪ್ರತಿಯೊಂದು
ಉತ್ತಮ ವನಗಳೂ
ಅತ್ಯುತ್ತಮ
ಕ-ವನಗಳು..||


64.ಕುಮಾರ ಸಂಭವ
ಕೆಲವರಿಗೆ ಮಲೆನಾಡು
ಕಾಲೀದಾಸನ ಕಾವ್ಯ..||
ಆದರೆ
ಕುಮಾರ ಸಂಭವವಾಗುವುದು ಎಲ್ಲೋ..?

65.ಗುಲಾಬಿ
ಒಡಲಲ್ಲಿ ಮುಳ್ಳಿದ್ದೂ
ಮೇಲೆ ಮಾತ್ರ
ಚೆಂದನೆಯ ನಗೆ
ಸೂಸುವುದು..|

Sunday, June 16, 2013

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು - ಭಾಗ 4

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು - ಭಾಗ 4

ಊಟಿಗೆ ಬಂದಿದ್ದರ ಕುರುಹಾಗಿ ಚಳಿ ನಮ್ಮನ್ನು ಆವರಿಸಿತು..
ಬೈಕಿನ ಎಕ್ಸಲರೇಟರ್ ಹಿಡಿದ ಕೈ ಚಳಿಯಿಂದಾಗಿ ಕೊರಟಾಗುತ್ತಿತ್ತು.
ಆದರೂ ನಮ್ಮ ಹುಮ್ಮಸ್ಸಿಗೆ ತಡೆಯಿಲ್ಲ.  ವೇಗಕ್ಕೆ ಮಿತಿಯಿಲ್ಲ ..
ಒಮ್ಮೆ ರಾಘವ-ಕಿಟ್ಟುವಿನ ಬೈಕ್ ಮುಂದೆ.. ಮತ್ತೊಮ್ಮೆ ನಮ್ಮದು..

ಅಂತೂ ಇಂತೂ ಊಟಿಯನ್ನು ತಲುಪಿದೆವು..
ಗುಡ್ಡ ಬೆಟ್ಟಗಳ ನಡುವೆ ತಂಪಾಗಿರುವ ಊರು.. ನಮ್ಮ ಶಿರಸಿಯಷ್ಟು ದೊಡ್ಡದಿರಬಹುದು..
ಕರ್ನಾಟಕ ಹಾಗೂ ಕೇರಳಗಳ ಮಧ್ಯ ಸಿಲುಕಿ ಅಪ್ಪಚ್ಚಿಯಂತಾಗಿರುವ ಊರು.. ಅದ್ಯಾಕೆ ತಮಿಳುನಾಡಿಗೆ ಸೇರಿತೋ..
ಈ ಊರಿನಲ್ಲಿ ಮೋಡಗಳು ಬಂದು ಚುಂಬಿಸುತ್ತವೆ..
ನಮ್ಮನ್ನು ಆವರಿಸುತ್ತವೆ.. ಕಾಡುತ್ತವೆ.. ಗೊತ್ತಿಲ್ಲದಂತೆ ಕವನವಾಗಿ ಹರಿಯುತ್ತವೆ..

ನಾವು ಊಟಿಯನ್ನು ತಲುಪಿದಾಗ ಗಂಟೆ 9 ದಾಟಿರಬೇಕು..
ಇನ್ನೂ ಮಂಜಿನ ಮುಸುಕಿನಿಂದ ಎದ್ದಿರಲಿಲ್ಲ..
ಸೂರ್ಯ ಊಟಿಯ ಪಾಲಿಗೆ ರಜಾ ಡ್ಯೂಟಿ ಇರಬೇಕೇನೋ..
ಕಾಣೆಯಾಗಿದ್ದ..
ಊಟಿಯ ಕೆಳ ಭಾಗದಲ್ಲಿ ನಮ್ಮನ್ನು ಕಂಡು ನೆತ್ತಿ ಸುಡಲು ಯತ್ನಿಸಿದ್ದ ಸೂರ್ಯ ಇಲ್ಲಿ ಸದ್ದಿಲ್ಲದೇ ಓಡಿ ಹೋಗಿದ್ದ..
ಸೂರ್ಯನನ್ನು ಅಣಕಿಸೋಣ ಎನ್ನುವ ಭಾವ ನಮ್ಮಲ್ಲಿ ಕಾಡಿದ್ದು ಸುಳ್ಳಲ್ಲ..
ಹಾಳು ಹೊಟ್ಟೆಗೆ ಎಷ್ಟು ತಿಂದರೂ ಸಾಕಾಗೋದಿಲ್ಲ ಕಣ್ರಿ..
ಮತ್ತೆ ಹಸಿವಾಗಿತ್ತು.... ಏನಾದರೂ ತಿನ್ನಬೇಕು...
ಹೊಟೆಲ್ ಹುಡುಕಾಟ ಜಾರಿಯಾಯಿತು..

ಹಿಂದಿನ ಸಾರಿ ನಾನು, ರಾಘವ ಬಂದಿದ್ದೆವಲ್ಲ..
ಅದೇ ಹೋಟೆಲ್ ಹೋದೆವು..
ಒಳ ಹೋಗಿ ಕೈಕಾಲು ತೊಳೆಯೋಣ ಎಂದು ವಾಷಿಂಗ್ ಸಿಂಕಿಗೆ ಕೈಯೊಡ್ಡಿದರೆ ಆಹಾ ಸ್ವರ್ಗ ಸುಖ...
ನಳದಲ್ಲಿ ಬರುತ್ತಿದ್ದುದು ಬಿಸಿ ನೀರು...
ಮುತ್ತಿಕ್ಕುವ ಚಳಿಯಲ್ಲಿ.. ಕೊರೆಯುವ ಚಳಿಯಲ್ಲಿ... ಕಾಡುವ ಚಳಿಯಲ್ಲಿ...
ಬೆನ್ನಟ್ಟಿ ಆವರಿಸುವ ಚಳಿಯಲ್ಲಿ ಬಿಸಿನೀರನ್ನು ಕೊಟ್ಟರೆ ಏನಾಗಬೇಡ ನೀವೇ ಹೇಳಿ ಸಾರ್...
ಆಹಾ... ಎಷ್ಟು ಹೊತ್ತಾದೂ ಕೈ ತೊಳೆಯುವುದು ಮುಗಿಯುವುದೇ ಇಲ್ಲವೇನೋ..
ಹೊಟೆಲಿನ ಸಪ್ಲಾಯರ್ ಬಂದು ಬಯ್ಯಬಹುದೆಂಬ ಭಯದ ನಡುವೆ ಕೈ ತೊಳೆಯುವ ದೀರ್ಘ ಶಾಸ್ತ್ರ ಮುಗಿಯಿತು..

ಆರ್ಡರ್ ಮಾಡಬೇಕಲ್ಲ..
ನಾನು, ರಾಘು, ಕಿಟ್ಟು ನಮ್ಮ ಎಂದಿನ ಮಸಾಲೆ ದೋಸೆಯನ್ನು ಆರ್ಡರ್ ಮಾಡಿದೆವು..
ಇದೇನಿದು ಊಟಿಗೆ ಹೋಗಿ ಮಸಾಲೆದೋಸೆಯೇ ಎಂದು ಕೇಳಬೇಡಿ..
ನಮಗೆ ತಮಿಳು ಬರೋದಿಲ್ಲ..
ಬೇರೆ ತಿಂಡಿ ಸಿಗುತ್ತಿತ್ತೇನೋ..
ನಮಗೆ ಆರ್ಡರ್ ಮಾಡಲು ಭಾಷೆ ಬರಲಿಲ್ಲ..
ಮಸಾಲೆ ದೋಸೆ ಎಂದೆವು..
ತಿಂದೆವು...

ಮೋಹನ ಮಾತ್ರ ದೋಸೆಯಲ್ಲಿಯೇ ಇನ್ನೊಂದೆನೋ ಬಗೆ ಆರ್ಡರ್ ಮಾಡಿದ..
ತಂದಿಟ್ಟರು ನೋಡಿ.. ಅಬ್ಬಬ್ಬಾ...
ದೋಸೆಯ ತುಂಬಾ ಬೇವಿನ ಸೊಪ್ಪಿನ ರಾಶಿ..
ಆಗ ಮೋಹನನ ಮುಖ ನೋಡಬೇಕಿತ್ತು...
ಅದ್ಹೇಗೆ ತಿಂದನೋ... ಪಾಡು ಪಟ್ಟನೋ... ನಾವಂತೂ ನಕ್ಕೆವು...
ಹೊಟ್ಟೆಗಂತೂ ಬಿದ್ದಿತು.. ಮುಂದೆನು ಮಾಡೋದು..?

ಊಟಿಯಲ್ಲಿ ವರ್ಡ್ ಫೇಮಸ್ಸಾಗಿರುವ ಬೊಟಾನಿಕ್ಕಲ್ ಗಾರ್ಡನ್ ನೋಡೋಣ್ವಾ ಎಂಬ ಚರ್ಚೆ ನಮ್ಮದು..
ನೋಡುವಂತದ್ದು ಎಂತದೂ ಇಲ್ಲ.. ಬರಿ ಗಾರ್ಡನ್ನು ಎನ್ನುವ ತೀರ್ಮಾನಕ್ಕೆ ಬಂದು ಬೇರೆ ಎಲ್ಲಾದರೂ ಹೋಗಬಹುದಾ..? ಎನ್ನುವ ಚರ್ಚೆ ಮತ್ತೆ ಸಾಗಿತು..
ಊಟಿಯಲ್ಲಿಯೇ ಅತ್ಯಂತ ಎತ್ತರವಾದ  ಹಾಗೂ ದಕ್ಷಿಣ ಭಾರತದಲ್ಲೇ ಅತ್ಯಂತ ಎತ್ತರದ ಸ್ಥಳ ಎಂದು ಹೆಸರಾಗಿರುವ `ದೊಡ್ಡಬೆಟ್ಟ'ಕ್ಕೆ ಹೋಗೋಣ ಎಂದು ಗಾಡಿಯನ್ನು ಗುರ್ರೆನ್ನಿಸಿದೆವು...
ಊಟಿಯ ರಸ್ತೆಗಳು ತುಂಬಾ ವಿಚಿತ್ರ ಕಣ್ರೀ.. ಬಳುಕಿ ಬಳುಕಿ ಸಾಗುತ್ತವೆ.. ಎಲ್ಲಲೆಲ್ಲೋ ಒಳಹೊಕ್ಕಿ ಮತ್ತೆಲ್ಲೋ ಹೊರಬರುತ್ತವೆ..
ಊಟಿಯನ್ನು ತಲುಪುವ ಎರಡು ಪ್ರಮುಖ ರಸ್ತೆಗಳೆಂದರೆ ಒಂದು ಮೈಸರೂ ಇನ್ನೊಂದು ಕೂನೂರು..
ಸುತ್ತಮುತ್ತ ಚಿಕ್ಕ ಪುಟ್ಟ ಊರುಗಳಿವೆ..
ಟೈಮಿದ್ದರೆ ಹೋಗಬಹುದು.. ಆದರೆ ದೊಡ್ಡಬೆಟ್ಟವನ್ನು ಮರೆಯುವ ಹಾಗಿಲ್ಲ..
ಸುತ್ತುಬಳಸಿ, ಇಣುಕಿ, ಬಳುಕಿ ದೊಡ್ಡಬೆಟ್ಟವನ್ನು ಹತ್ತತೊಡಗಿದೆವು..

ದಾರಿಯಲ್ಲೆಲ್ಲೋ ಫಾರಿನ್ನು ಮಂದಿಗಳ ಗುಂಪು ಸಿಕ್ಕಿತು.. ಅದ್ಯಾರೋ ಗೂಡು ಅವರನ್ನು ಪಾದಯಾತ್ರೆಯ ಮೂಲಕ ದೊಡ್ಡಬೆಟ್ಟಕ್ಕೆ ಕರೆದೊಯ್ಯುತ್ತಿದ್ದ.
ಅವರನ್ನು ನಿಲ್ಲಿಸಿ ಹಾಯ್ ಎಂದೆವು... ನಡು ನಡುವೆ ನಮ್ಮ ಕ್ಯಾಮರಾ ಕೆಲಸದಲ್ಲಿ ನಿರತವಾಗಿತ್ತು.

ಅಂತೂ ಇಂತೂ ದೊಡ್ಡ ಬೆಟ್ಟವನ್ನು ಹತ್ತಿದೆವು..
ಆಗಲೇ ಮಂಜಿನ ಮುಸುಕು ಅದನ್ನು ಆವರಿಸಿತ್ತು..
ಏನೋ ಅವ್ಯಕ್ತ ಖುಷಿಯಲ್ಲಿ ಮನಸ್ಸು ಪ್ರಫುಲ್ಲವಾಗಿತ್ತು..
ಬ್ರಿಟೀಷರು ಎಂತ ಚಂದ ಜಾಗ ಹುಡುಕ್ತಾರಲ್ಲ ಅನ್ನಿಸಿತು.

ಯಾಕೋ ಮನಸ್ಸು ಮಾತ್ರ..

ಮಂಜು ತಬ್ಬಿತು ನೆಲವ ಬಿಮ್ಮನೆ... ಎಂದು ಹಾಡೋಣ ಎನ್ನಿಸತು.. ಆದರೆ ಅಶ್ವತ್ ಅವರು ನೆನಪಾಗಿ ಸುಮ್ಮನಾದೆ..
ಚಳಿಯಲಿ ಜೊತೆಯಲಿ.. ಆಗಾ.. ನಿಸರ್ಗ ಸುಂದರ ಸ್ಥಳಕ್ಕೆ ವರ್ಣನೆ ಮಾಡಲು ಪದಪುಂಜಗಳು ಸಾಲುತ್ತಿಲ್ಲ...

ದೊಡ್ಡಬೆಟ್ಟದ ತುದಿಯಲ್ಲೊಂದು ಬಿಎಸ್ಸೆನ್ನೆಲ್ ಟವರ್ ಇದೆ.. ನಮ್ಮಲ್ಲಿ ಟವರ್ ಗಳ ಹಾಗೆ ಸಿಗ್ನಲ್ ಪ್ರಾಬ್ಲಮ್ಮಾ ಗೊತ್ತಿಲ್ಲ..
ನಮ್ಮ ಮೊಬೈಲಿನಲ್ಲಿದ್ದ ಐಡಿಯಾ ಅಲ್ಲಿ ಏರ್ ಸೆಲ್ ಆಗಿ ಧೋನಿಯನ್ನು ನೆನಪು ಮಾಡ್ತಾ ಇತ್ತು..
ದೊಡ್ಡಬೆಟ್ಟದ ತುದಿಯಲ್ಲೊಂದು ದೂರದರ್ಶಕ ಇಡಲಾಗಿದೆ..

ಫೀಸಿನೊಂದಿಗೆ ನೋಡಬಹುದು..
ಬೆಟ್ಟದ ತುದಿಯಿಂದ ಊಟಿಯ ಯಾವುದೋ ಮೂಲೆಯನ್ನೋ, ಜನಜಂಗುಳಿಯನ್ನೋ ತೋರಿಸುತ್ತಾರೆ..
ಎರಡು ಸಾರಿ ನೋಡಿದ ಮೇಲೆ ಮುಗಿಯಿತು..
ಮುಂದಿನವರಿಗೆ ಬಿಟ್ಟುಕೊಡಬೇಕು... ಸಕ್ಕತ್ ಲಾಸ್ ಬಡ್ಡಿಮಕ್ಕಳು ಅಂತ ಬಯ್ದು ಬಂದಿದ್ದಾಯ್ತು..

ಅಲ್ಲೆ ಹತ್ತಿರದಲ್ಲಿ ಡೆತ್ ಪಾಯಿಂಟಿದೆ..
ಅಮೃತವರ್ಷಿಣಿಯಲ್ಲಿ ತೋರಿಸ್ತಾರಲ್ಲ ಅದೇ.. ಸುಹಾಸಿನಿ, ಶರತ್ ಬಾಬು ಬೀಳುವ ಜಾಗ..
ಅಲ್ಲಿಗೆ ಹೋಗಿ ನಿಂತರೆ ಏನೋ ಭಯ ನಮ್ಮನ್ನು ಕಾಡುತ್ತದೆ...

ಸಾಲು ಸಾಲಿಗೆ ಬೇಲಿಗಳು... ವಾರ್ನಿಂಗನ್ನು ಮಾಡುವ ವಾಚ್ ಮೆನ್ನುಗಳು..
ಕಬ್ಬಿಣದ ಬೇಲಿ ಸಾಕಾಗದು ಎಂಬಂತೆ ಹಗ್ಗವನ್ನು ಹಾಕಿರುತ್ತಾರೆ...
ಮುಂದೆ ಹೋಗಬೇಡಿ ಎಂದು ತಮಿಳಿನಲ್ಲಿ ಹೇಳುತ್ತಾರೆ.. ನಮಗೆ ಅರ್ಥವಾಗುವುದಿಲ್ಲ... ಇರಲಿ..


ಅಲ್ಲಿಂದ ಮತ್ತೆ ಮರಳಿ ಬಂದು ದೊಡ್ಡಬೆಟ್ಟದ ತುದಿಯಲ್ಲಿರುವ ಕಲ್ಲಿನ ಬೇಂಚಿನ ಮೇಲೆ ನಾವು ನಾಲ್ವರು ಕುಳಿತುಕೊಳ್ಳುವ ವೇಳೆಗೆ ಆಗಲೇ ನಮ್ಮ ಸುತ್ತಮುತ್ತ ಮಂಜಿನ ಮೋಡ ಬರಲಾರಂಭಿಸಿತ್ತು..
ಮುಖವನ್ನೆಲ್ಲ ತಣ್ಣಗೆ ಮಾಡುತ್ತ.. ಹನಿಯನ್ನು ತೊಟ್ಟಿಕ್ಕುತ್ತ ಮಂಜು ನಮ್ಮನ್ನು ಆವರಿಸಿತು..
ಏನೋ ಸಂತೋಷ.. ಮತ್ತಷ್ಟು ಪೋಟೋಗಳು ಕ್ಲಿಕ್ಕಿಸಲ್ಪಟ್ಟವು...
ಮರಳಿ ಬರುವಾಗ ಅಲ್ಲಿನ ಲೋಕಲ್ ಮಾರ್ಕೆಟ್ ಗೆ ಹೋದೆವು.. ತರಹೇವಾರಿ ಚಸ್ಮಾಗಳಿದ್ದವು.. ಟೋಪಿಗಳಿದ್ದವು.. ಇನ್ನೂ ಏನೇನೋ ಚಿತ್ರ ವಿಚಿತ್ರ ಐಟೆಮ್ಮುಗಳಿದ್ದೆವು..
ಕೊಳ್ಳುವವರ ಪೋಸಿನಲ್ಲಿ ಹೋಗಿ ರೇಟು ಕೇಳಿ.. ಚೌಕಾಸಿ ಮಾಡಿ.. ಬ್ಯಾಡ ಎಂದು ಬಿಟ್ಟು ಬಂದೆವು...
ಹಳೆಯಕಾಲದ ಯಾವುದೋ ಸೇಡನ್ನು ತೀರಿಸಿಕೊಂಡ ಖುಷಿ ನಮಗೆ..
ಕೆಕ್ಕರುಗಣ್ಣಿನ ಉತ್ತರ ನೀಡಿದ್ದ ಅಂಗಡಿಯ ಹುಡುಗಿ.../ಮಧ್ಯವಯಸ್ಸಿನ ಹೆಂಗಸು...
ಅಂತೂ ದೊಡ್ಡ ಬೆಟ್ಟ ನೋಡಿದ್ದಾಯ್ತು.. ಕಣ್ತುಂಬಿಕೊಂಡಿದ್ದಾಯ್ತು.. ಮರಳಬೇಕಲ್ಲ...
ಸೂರ್ಯ ನೆತ್ತಿಗೆ ಬರುವ ಹೊತ್ತಾಗಿದ್ದರೂ ಪತ್ತೆಯಿರಲಿಲ್ಲ.. ಹಾಳು ಹೊಟ್ಟೆ ಮತ್ತೆ ಮತ್ತೆ ಬೆಲ್ಲು ಬಾರಿಸುತ್ತದೆ ನೋಡಿ...

ಬರ್ರೋ ಹೋಗೋಣ ಎಂದು ವಾಪಸ್ಸಾಗಲು ಹೊರಟೆವು...
ಊಟಿಯಲ್ಲಿ ಊಟಕ್ಕೊಂದು ಹೋಟೆಲ್ ಹುಡುಕಬೇಕು... ಲೋಕಲ್ ಮಾರ್ಕೇಟನ್ನು ಸುತ್ತಾಡುವ ಕುತೂಹಲವಿತ್ತು..
ಊಟದ ನಂತರ ಮಾಡೋಣ ಎನ್ನುವ ಚರ್ಚೆ.. ತಿಂಡಿ ತಿಂದು ಹೋಗೋಣ.. ಊಟಿಯಿಂದ ಮರಳುವ ದಾರಿಯಲ್ಲಿ ಒಂದು ಕಡೆ ಒಳ್ಳೆಯ ಊಟ ಸಿಗುತ್ತದೆ.. 60 ರು. ಆದರೂ ಚನ್ನಾಗಿದೆ.. ಎಂದು ರಾಘವ ಐಡೀರಿಯಾ ಕೊಟ್ಟ..
ಸರಿ ಎಂದೆವು..
ಅಲ್ಲಿ ಮಾರ್ಕೇಟ್ ಸುತ್ತಾಡಿ ಕೊಳ್ಳುವುದನ್ನು ಕೊಳ್ಳೊಣ ಎಂದು ಹೊರಟೆವು..

(ಮುಂದುವರಿಯುತ್ತದೆ)

Friday, June 7, 2013

ಸುಜುಕಿ ಸರದಾರ

ಸುಜುಕಿ ಸರದಾರ

        ಅವನು ಹೆಸರಿಗೆ ತಕ್ಕಂತೆ ಸುಝುಕಿಯ ಸರದಾರ. ಊರಿನಲ್ಲೆಲ್ಲಾ ಆತನನ್ನು ಹಾಗೇಯೇ ಕರೆದು ಕರೆದು ಆತನ ಮೂಲನಾಮಧೇಯವೇ ಮರೆತಂತೆ ಆಗಿಬಿಟ್ಟಿತ್ತು. ಹಾಂ. ಸುಝುಕಿ ಸರದಾರನಿಗೆ ಆ ಹೆಸರು ಬರಲು ಮುಖ್ಯ ಕಾರಣವಾದ ಸುಝುಕಿ ಸಮುರಾಯ್ ಎಂಬ ಬೈಕೇ ಆತನ ಅತ್ಯಮೂಲ್ಯ ಆಸ್ತಿ. ಹಳೆಯದಾಗಿ, ಲಟ್ಟು ಹಿಡಿದು, ಪ್ರತಿಭಾಗವೂ ಗಡ ಗಡ ಅಲುಗುತ್ತಿದ್ದ ಆ ಬೈಕನ್ನು ಅದ್ಯಾವ ಕಾಲದಲ್ಲಿ ತಯಾರುಮಾಡಿದ್ದೋ..?
    ಹಾಗೆಯೇ, ಆ ಜುಝುಕಿಗೆ ಈತ ಬಹುಶಃ ಇಪ್ಪತ್ತೈದನೆಯ ಯಜಮಾನನಿರಬೇಕು..! ಸರದಾರನಿಗೂ ಅಷ್ಟೇ ತಂದ ಯಾವುದೇ ಕಂಪನಿಯ ಬೈಕುಗಳೂ ಅದೃಷ್ಟ ತರಲಿಲ್ಲ. ಕೈ ಹಿಡಿಯಲಿಲ್ಲ. ಕೊನೆಗೆ ಈ ಸಮುರಾಯ್ ಸುಝುಕಿ ಬೈಕನ್ನು ಗೆಳೆಯ ಅಮೀರ್ ಖಾನನಿಂದ ಚೌಕಾಸಿಗೆ ಕೊಂಡುಕೊಂಡಿದ್ದ. ಸರದಾರ ಅದನ್ನು ಕೊಂಡುಕೊಂಡ ನಂತರ ಕನಿಷ್ಠವೆಂದರೂ ಒಂದು ದಶಕದಿಂದೀಚೆಗೆ ಅದು ಆತನ ಸಾಥಿಯಾಗಿತ್ತು.
    ಸುಝುಕಿ ಸರದಾರ ಆ ಬೂಕು ಸಿಕ್ಕ ಮೇಲೆ ಅದೆಷ್ಟು ಪ್ರದೇಶಗಳವರೆಗೆ ಸವಾರಿ ಮಾಡಿದ್ದಾನೋ.. ಮೂಡುಬಂತೆಂದರೆ ಸಾಕು ಹೊಟ್ಟೆಗಷ್ಟು ಪೆಟ್ರೂಲು ಸುರಿದು ಯಾವುದಾದರೊಂದು ದಿಕ್ಕಿನ ಹಾದಿ ಹಿಡಿದು ಹೊರಟುಬಿಡುತ್ತಿದ್ದ. ಮತ್ತೆ ಆತ ಮರಳುತ್ತಿದ್ದುದು ಮನೆಯ ನೆನಪಾದಾಗಲೇ.
    ಈ ಸುಝುಕಿ ಸರದಾರನಿಗೆ ಹೆಂಡಲಿಯಿಲ್ಲ. ಮಕ್ಕಳಿಲ್ಲ. ಈತನೊಬ್ಬ ಅಖಂಡ ಬ್ರಹ್ಮಚಾರಿ.. ಹಾಂ. ಈತ ಅನಾಥನೇನಲ್ಲ. . ಹೆತ್ತವರಿದ್ದಾರೆ., ತಕ್ಕಮಟ್ಟಿಗೆ ಇಂಗ್ಲೀಷನ್ನು ಎತ್ತಿ ಬಿಸಾಡುವಷ್ಟು ಓದಿಕೊಂಡಿದ್ದಾನೆ ಕೂಡ. ಹರೆಯದ ಹುಮ್ಮಸ್ಸಿನಲ್ಲಿ ಬೈಕು ಹೊಡೆಯುವ ಚಟ ಆತನಿಗೆ ಅಂಟಿಕೊಳ್ಳದೇ ಇದ್ದಿದ್ದರೆ ಇಷ್ಟುಹೊತ್ತಿಗೆ ಯಾವುದಾದರೂ ದೊಡ್ಡ ಕಾಂಟ್ರಾಕ್ಟ್ ಕೆಲಸ ಸಿಕ್ಕಿ ಮದುವೆಯೂ ಆಗಿ ಹೋಗಿತ್ತು.
    ಇಷ್ಟೆಲ್ಲ ಹೇಳಿಯೂ ಆತನ ಉದ್ಯೋಗದ ಬಗ್ಗೆ ಹೇಳದಿದ್ದರೆ ತಪ್ಪಾಗುತ್ತದೆ ನೋಡಿ.. ಆತ ತನ್ನ ಊರಿನ ಸರಹದ್ದಿನಲ್ಲಿ ಎಲ್ಲೇ ಮನೆಯ ಗಿಲಾವು ಕೆಲಸವಿದ್ದಲ್ಲಿ ಮುದ್ದಾಂ ಮಾಡಿಬರುತ್ತಿದ್ದ.. ಗಿಲಾಯವೇ ಆತನಿಗ ಬರುತ್ತಿದ್ದ ಪರಮೋಚ್ಛ ಕೆಲಸ. ಹೀಗಿರುವ ಈ ಸರದಾರನ ಪರಿಚಯ ನನಗಾಗಿದ್ದು ಆಕಸ್ಮಿಕ. ಕೆಲವು ದಿನಗಳ ಹಿಂದೆ ನನಗೂ ಬೈಕೊಂದನ್ನು ಕೊಳ್ಳುವ ಉಮೇದಿಯಾಯಿತು. ಅದಕ್ಕಾಗಿಯೇ ಹುಡುಕುತ್ತಿದ್ದಾಗ ಯಾರೋ ಒಬ್ಬರು ಈ ಸರದಾರನನ್ನು ಪರಿಚಯಿಸಿ, ಈತನಿಗೆ ಬೈಕುಗಳ ಬಗ್ಗೆ ಸಂಪೂರ್ಣ ಗೊತ್ತು ಎಂದರು..
    ನನಗೆ ಪರಿಚಯವಾದ ಕೂಡಲೇ ಈ ಸರದಾರ ಎಲ್ಲಾ ಬೈಕುಗಳೂ `ವೇಸ್ಟ್..' ಎಂದೂ, ತನ್ನ ಸುಝುಕಿ ಸಮುರಾಯ್ ಬೈಕೇ ಬೆಸ್ಟ್ ಎಂದೂ ಹೇಳಿ, ಬಹಳೇ ಬಹಳ `ಕಾಯ್ದೆ ಕೊಚ್ಚಲಾರಂಭಿಸಿದ..'. ನಾನು ಅವನ ಹೊಗಳಿಕೆಗೆ ಮರುಳುಬಿದ್ದು ಬೈಕನ್ನು ಕೊಂಡುಕೊಳ್ಳುತ್ತಿದ್ದೆನೇನೋ.. ಆದರೆ ಒಮ್ಮೆ ಏಕೋ ಆ ಬೈಕನ್ನು ನೋಡಿಬಿಡಬೇಕೆಂದು ಅನ್ನಿಸಿತು... ನೋಡಿದೆ.. ನೋಡಿದರೆ ಅದನ್ನು ಬೈಕೆಂದು ಕರೆಯುವುದು ಹೇಗೆ..? ಯಾವ ದಿಕ್ಕಿನಿಂದ ಅದು ಬೈಕಿನಂತೆ ಕಾಣುತ್ತದೆ ಎಂಬ ಸಂದೇಹ ಮನದಲ್ಲಿ ಕಾಡಿತು. ಆ ಬೈಕು ಎಲುಬಿನ ಹಂದರವಾಗಿತ್ತು. ಮೂಳೆ ಚಕ್ಕಳವಾಗಿಬಿಟ್ಟಿತ್ತು... ಅಷ್ಟೇ ಅಲ್ಲದೇ ಆ ಬೈಕಿಗೆ ಮೈ ತುಂಬಾ ಕಲೆಗಳು, ಗಾಯದ ಗುರುತು.. `ಸಾಕಪ್ಪಾ ಸಾಕು..' ಎಂದು ಬೈಕನ್ನು ದೂರವಿಟ್ಟೆ.. ಸುಝುಕಿ ಸರದಾರ ನಕ್ಷತ್ರಿಕನಂತೆ ನನ್ನ ಪರಿಚಯಸ್ತನಾಗಿ ಕಾಡಲಾರಂಭಿಸಿದ.
    ಮರೆತೆಬಿಟ್ಟಿದ್ದೆ.. ಅವನ ಒತ್ತಾಯಕ್ಕೆ ಮಣಿದು ನಾಲ್ಕೈದು ಬಾರಿ ಅವನೊಡನೆ ಬೇರೆ ಬೇರೆಯ ಒಂದೆರಡು ಪ್ರಸಿದ್ಧ ತಾಣಗಳಿಗೆ ಆ ಬೈಕಿನೊಂದಿಗೆ ಹೋಗಿದ್ದೆ.. ದಾರಿಯ ನಡುವೆ ಎಲ್ಲಾದರೂ ಕೈ ಕೊಡಬಹುದೇನೋ ಎನ್ನುವ ಭಯ ಕೊನೆಯವರೆಗೂ ನನ್ನನ್ನು ಕಾಡದೇ ಬಿಡಲಿಲ್ಲ. ಕೈಕೊಟ್ಟಿದ್ದರೆ ಕಥೆ ಕರ್ಮಕಾಂಡವಾಗಿಬಿಡುತ್ತಿತ್ತು.. ಅದನ್ನು ನಾನೇ ತಳ್ಳಬೇಕಿತ್ತಲ್ಲ... ಆದರೆ ಸಧ್ಯ ಹಾಗಾಗಲಿಲ್ಲ.. ಬೈಕಿಗೆ ಸಲಾಂ ಹೊಡೆದರೂ ನನ್ನನ್ನು ಯಾವುದೋ ಮಾಯೆಯಲ್ಲಿ ಕಾಡಲು ಪ್ರಾರಂಭಿಸಿಯೂ ಇತ್ತು.
    ಜಪಾನಿನ ಯಾವುದೋ ಕಂಪನಿಯಲ್ಲಿ ತಯಾರಾಗಿ ಭಾರತದ ಮಾರುಕಟ್ಟೆಯನ್ನು ಹೊಕ್ಕಿದ್ದ ಸಮುರಾಯ್ ನ ಸುಝುಕಿ ಬೈಕು ಯಾರ್ಯಾರದ್ದೋ ಮೂಲಕ ನಮ್ಮೂರ ಸರದಾರನ ಕೈ ತಲುಪಿತ್ತು.. ಆ ಬೈಕು ತನ್ನ ಯವ್ವನದ ಹಾದಿಯಲ್ಲಿ ಒಂದು ಗುಟುಕು ಪೆಟ್ರೂಲಿಗೆ ಅದೆಷ್ಟು ದೂರದ ವರೆಗೆ ಕುದುರೆಯಂತೆ ಓಡುತ್ತಿತ್ತೋ.. ಆದರೆ ಈಗ ಅದರ ಹೊಟ್ಟೆಗೆ ಕುಡಿದಷ್ಟೂ ಪೆಟ್ರೂಲು ಸಾಲದು.. ಜೊತೆಗೆ ಬೈಕೂ ಸಹ ಕೆಲವು ಕಿಲೋಮೀಟರುಗಳವರೆಗೆ ಜೋರಾಗಿ ಓಡಿದರೂ ದಮ್ಮು ಹಿಡಿದ ರೋಗಿಯು ಕೆಮ್ಮುವಂತೆ ಆಗಾಗ ಕೆಮ್ಮುತ್ತಾ ನಿಂತುಬಿಡುತ್ತದೆ.
    ಇಷ್ಟರ ಜೊತೆಗೆ ಪೆಟ್ರೂಲಿನ ಬೆಲೆಯೂ ಗಗನಮುಖಿಯಾಗಿದೆ.. 2 ರು. ಕಡಿಮೆ ಯಾಗುವ ಪೆಟ್ರೂಲ್ ಮರುದಿನವೇ 3.50 ರು ಜಾಸ್ತಿಯಾಗಿ ಬಿಡುತ್ತದೆ. ಇಂತಹ ಸಮಯದಲ್ಲಿಯೇ ಸರದಾರ ಬುದ್ಧಿವಂತಿಕೆಯನ್ನು ಪ್ರದರ್ಶಿಸತೊಡಗಿದ್ದಾನೆ. ಸುಮ್ಮನೆ ಆ ಬೈಕಿನ ಹೊಟ್ಟೆಗೆ ಪೆಟ್ರೂಲು ಹಾಕುವ ಬದಲಾಗಿ ಎಷ್ಟು ಬೇಕೋ.. ಅಷ್ಟು ಕುಡಿ ಎಂದು ಸೀಮೆಎಣ್ಣೆಯನ್ನು ಹಾಕತೊಡಗಿದ್ದಾನೆ. ಹಾಗಾಗಿ ಆತನ ಬೈಕು ಆ ದಾರಿಯಲ್ಲಿ ಸಾಗಿಹೋದ ಹತ್ತು ನಿಮಿಷಗಳಾದರೂ ಅಲ್ಲಿ ಸೀಮೆ ಎಣ್ಣೆಯ ಘಮಲು ಮೂಗಿಗೆ ರಪ್ಪಂತ ಬಡಿಯುತ್ತಲೇ ಇರುತ್ತದೆ.
    ಇತ್ತೀಚೆಗೆ ಅವನಿಗೆ ಆ ಬೈಕನ್ನು ಮಾರಾಟ ಮಾಡಬೇಕೆಂಬ ಹುಚ್ಚು ಹತ್ತಿಬಿಟ್ಟಿತ್ತು. ತಾನು ಅಲ್ಲಿ ಇಲ್ಲಿ ಮನೆಯ ಗಿಲಾಯ ಮಾಡಿ ದುಡಿಯುತ್ತಿದ್ದ ಕಾಸನ್ನೆಲ್ಲ ಆ ಬೈಕು ಒಂದೇ ಗುಕ್ಕಿಗೆ ನುಂಗಲಾರಂಭಿಸಿದಾಗ ಆತನಿಗೆ ಆಗ ಬೈಕೆಂಬುದು ಬಿಳಿ ಆನೆಯನ್ನು ಕಟ್ಟಿ ಸಾಕಿದಂತೆ ಅನ್ನಿಸಿತ್ತು.. ಆದರೆ ಲಡಕಾಸಿ ಬೈಕನ್ನು ಕೊಳ್ಳುವವರು ಬೇಕಲ್ಲ..!! ಹಾಗಾಗಿಯೇ ಆತ `ಏನಯ್ಯಾ.. ಸರದಾರ . ಬೈಕನ್ನು ಮಾರ್ತೀಯಂತೆ..' ಎಂದು ಯಾರಾದರೂ ಕೇಳಿದ ತಕ್ಷಣ `ಯಾಕೆ..? ತಗೋಳ್ತೀಯಾ..? ಹೆಚ್ಚೇನೂ ಬೇಡ . ಒಂದು ಸಾವ್ರ ಸಾಕು ಅಷ್ಟೇ ' ಎನ್ನುತ್ತಿದ್ದ. ಕೆಳಿದವರು ನಗುತ್ತ ಸದ್ದಿಲ್ಲದೇ ಎದ್ದು ಬರುತ್ತಿದ್ದರು.

    ಸರದಾರನ ಪುರಾಣ ಹೇಳುವದರಲ್ಲಿ ಮುಳುಗಿದ್ದ ನಾನು ಮುಖ್ಯ ವಿಷಯವನ್ನು ಹೇಳಲು ಮರೆತೇಬಿಟ್ಟಿದ್ದೆ ನೋಡಿ.. ನಾನೊಮ್ಮೆ ಏನೋ ತುರ್ತು ಕಾರಣವೆಂದು ಆ ಬೈಕನ್ನು ತೆಗೆದುಕೊಂಡು ಹೋಗಿದ್ದೆ. ಅದರ ಆತ್ಮಚರಿತ್ರೆಯನ್ನು ನಾನು ತಿಳಿದಿದ್ದರೂ, ಏನೋ ಅರ್ಜೆಂಟು ಕೆಲಸವಿತ್ತಾದ್ದರಿಂದ ಸರ್ದಾರನ ಬಳಿ `ಪೆಟ್ರೂಲ್ ಹಾಕಿಸ್ತೀನಿ ಮಾರಾಯಾ..' ಎನ್ನುವ ಆಣೆ ಮುತ್ತುಗಳನ್ನು ಉದುರಿಸಿ ಬೈಕನ್ನು ಒಯ್ದಿದ್ದೆ.. ಆ ಬೈಕು ನಾನು ಕೊಂಡು ಹೋಗುವಾಗಲೇನೋ ಸರಿಯಾಗಿಯೇ ಇತ್ತು. ತವರಿಗೆ ಹೊರಟ ಹೆಂಡತಿಯಂತೆ.. ಆದರೆ ಮರಳಿ ಬರುವಾಗ ಶುರುಹಚ್ಚಿಕೊಂಡಳು ನೋಡಿ ತನ್ನ ವರಾತವ.. !! ಒಮ್ಮೆ ಕೆಮ್ಮಿತು.. ಸುಮ್ಮನಾಗಿಸಿದೆ. ಚೈನಿನ ಆಳದಲ್ಲೆಲ್ಲೋ ಶಬ್ದಮಾಡಿತು. ಬಿಚ್ಚಿ ಸರಿ ಮಾಡಿದೆ. ಏನೇನೋ ತರಲೆ ತಾಪತ್ರಯ ಶುರುಮಾಡಿತು.. ನಾನು ಸರಿಮಾಡಿಯೇ ಸಿದ್ಧ ಎಂದು ಮುಂದುವರಿದೆ. ಕೊನೆಗೊಮ್ಮೆ ಎಲ್ಲ ಸರಿಯಾಯಿತೆಂದು ಗಾಡಿ ಚಾಲೂಮಾಡಿ ಹೊರಟೆ. ಗಾಡಿಗೂ ಸ್ವಲ್ಪ ಸುಸ್ತಾಗಿತ್ತೇನೆಓ.. ಕೆಲವು ಕಿ.ಮಿಗಳ ವರೆಗೆ ನಿರಾತಂಕವಾಗಿ ಸಾಗಿತು.. ಆದರೆ ನಮ್ಮೂರು ಇನ್ನೂ 5 ಕಿಲೋಮೀಟರ್ ಇದೆ ಎನ್ನುವಾಗ ಮಾತ್ರ ನೋಡಿ.. ಗ್ರಾಚಾರ ಭಯಂಕರ ಖರಾಬ್ ಇತ್ತು.. ವೇಗದೂತನಂತೆ ಸಾಗುತ್ತಿದ್ದೆ. ಇದ್ದಕ್ಕಿದ್ದಂತೆ ಬ್ರೇಕ್ ಫೇಲ್ ಆಗಿಬಿಟ್ಟಿತು. ಗೇರ್ ಹಾಕಿ ವೇಗ ಕಡಿಮೆ ಮಾಡೋಣ ಎಂದರೆ ಊಹೂಂ ಸರಿಯಾದ ಸಮಯಕ್ಕೆ ಸಿಕ್ಕಿಬಿದ್ದೀದೀಯಾ ಎನ್ನುವಂತೆ ಗೇರಿಗೂ ಬೀಳೋದಿಲ್ಲ.. ಏನೇ ಶತಪ್ರಯತ್ನ ಮಾಡಿದರೂ ಬೈಕು ನಿಲ್ಲುತ್ತಿಲ್ಲ.. ಸಾಬರ ತರಾ ಕಾಲನ್ನು ನೆಲಕ್ಕೆ ಒತ್ತಿ ಹಿಡಿದು ಬೈಕ್ ನಿಲ್ಲಿಸಲು ಯತ್ನಿಸಿದೆ. ಕಾಲು ನೋವು ಮಾಡಿಕೊಂಡದ್ದೇ ಬಂತು.. ಕೊನೆಗೂ ದೇವರು ದೊಡ್ಡವನಿದ್ದ.. ಗಾಡಿ ಅದ್ಹೇಗೋ ನಿಂತಿತು.. ಉಸಿರನ್ನು ಎರಡೆರಡು ಸಲ ಬಿಟ್ಟೆ..
    ಇನ್ನು ಮುಂದೆ ಈ ಬೈಕಿನಲ್ಲಿಯೇ ನಮ್ಮೂರಿಗೆ ಹೋದರೆ `ಬಿದಿರು ಮೋಟಾರಿನ ಪ್ರಯಾಣ' ಕಟ್ಟಿಟ್ಟ ಬುತ್ತಿ ಎನ್ನಿಸಿತು. ತಳ್ಳಲು ಪ್ರಾರಂಭಿಸಿದೆ.. ನಾನು ಬೈಕ್ ತಳ್ಳುವುದನ್ನು ನೋಡಿದ ಇತರರಿಗೆ ನಗುವೋ ನಗು.. ನಾನು, ಸರದಾರನ ಸುಝುಕಿ ಬೈಕನ್ನು ತಳ್ಳುವುದು ಅವರಿಗೆ ಅತ್ಯಾನಂದ ನೀಡಿರಬೇಕು..!! ಯಾರೋ ಒಬ್ಬಿಬ್ಬರು `ಮಾರಾಯ್ರೆ ನಿಮಗೆ ನಾನಾದ್ರೂ ನನ್ನ ಸೈಕಲ್ಲನ್ನಾದ್ರೂ ಕೊಡ್ತಿದ್ದೆ.. ಈ ಸರದಾರನ ಬೈಕೆಂತಕ್ಕೆ ಬೇಕಿತ್ರಾ..? ನೋಡಿ.. ಈಗ ಹಣೆಬರಹ ನಿಮ್ದು.. ತಳ್ಳಿ.. ' ಎಂದು ನನ್ನ ನಸೀಬಿಗಷ್ಟು ಉಪ್ಪುಖಾರ ಹಚ್ಚಿದರು. ಮನಸ್ಸು ಚುರ್ರೆಂದು ಸಿಟ್ಟಾಯಿತಾದರೂ ಸುಮ್ಮನಾದೆ.. ಕೊನೆಗೂ ಮದ್ಯಾಹ್ನದ ಉರಿಬಿಸಿಲಿನಲ್ಲಿ 3-4 ಕಿ.ಮಿ ದೂರ ಬೈಕನ್ನು ತಳ್ಳಿಕೊಂಡು ಸರದಾರನಿಗೆ ಬೈಕನ್ನು ಕೊಟ್ಟೆ.. ಆಗಲೇ ಮಿರಾಕಲ್ ಸಂಭವಿಸಿದ್ದು ನೋಡಿ.. ಹಾಳಾದ ಬೈಕು ತಕ್ಷಣವೇ `ಕೈ ಮರಚಲು ಎಮ್ಮೆಯಂತೆ.. ಆತ ಹೇಳಿದಂತೆ ಕೇಳಲು ಪ್ರಾರಂಭಿಸಿತು.. ನಾನು ಬೈಕಿಗೆ ಸಲಾಮು ಹೊಡೆದೆ..
    ಇಂತಹ ಸುಝುಕಿ ಸಮುರಾಯ್ ಬೈಕನ್ನು ಕೊನೆಗೂ ಕೊಳ್ಳುವವರು ಸಿಗಲಿಲ್ಲ. ಅದು ಮತ್ತೊಮ್ಮೆ ಮಾರಾಟವಾಗಿ ಗಿನ್ನಿಸ್ ದಾಖಲೆಗೆ ಪಾತ್ರವಾಗುವ ಸುಸಂದರ್ಭ ತಪ್ಪಿಹೋಯಿತು ಎಂದು ನಮಗೆ ಅನ್ನಿಸತೊಡಗಿತು. ಆದರೆ ಸರದಾರ ಸುಮ್ಮನೆ ಇರುವವನಲ್ಲ ನೋಡಿ.. ಬುದ್ಧಿ ಓಡಿಸಿದ.. ಪರಿಣಾಮ ಗುಜರಿ ಅಂಗಡಿಗೆ ಕೆ.ಜಿ. ಗೆ 10ರುಪಾಯಿಯಂತೆ 95 ಕೆಜಿಯ ಬೈಕನ್ನು ಮಾರಿ 950 ರೂಪಾಯಿ ಮಾಡಿಕೊಂಡು ಬದುಕಿದೆಯಾ ಬಡಜೀವವೆ ಎಂದುಕೊಂಡ.. ಬೈಕು ಮಾರಿದರೂ ಆತ ಈಗಲೂ ಸುಝುಕಿ ಸರದಾರನಾಗಿಯೇ ಇದ್ದಾನೆ.
    ಈಗಲೂ ನಮ್ಮೂರಿನ ಜಡ್ಡೀರಾಮನ ಗುಜರಿ ಅಂಗಡಿಯ ಟಾಪಿನ ಮೇಲೆ ಸುಝುಕಿ ಸಮುರಾಯ್ ಬೈಕಿನ ಪಳೆಯುಳಿಕೆಗಳಾದ ಎರಡು ಗಾಲಿಗಳು ಹುಡುಕಿದರೆ ಕಣ್ಣಿಗೆ ಬೀಳುತ್ತವೆ.. ಶತಮಾನದ ಪಳೆಯುಳಿಕೆಗಳಂತೆ.. ವೀರಗಲ್ಲುಗಳಂತೆ.

Sunday, June 2, 2013

ಚಿನ್ನು ಮೊಲ ಹಾಗೂ ಕಣ್ಣೀರು..

ಚಿನ್ನು ಮೊಲ ಹಾಗೂ ಕಣ್ಣೀರು..


ಬಾಂಧವ್ಯ ನೋಡಿ ಹೇಗಿರುತ್ತದೆ ಅಂತ,...
ಅದೆಲ್ಲಿ ಅಮ್ಮನ ಮಡಿಲಲ್ಲಿ ಬೆಚ್ಚಗೆ ಮಲಗಿ ಹಾಲು ಕುಡಿಯಬೇಕಿತ್ತೋ...
ಅದೆಷ್ಟು ಚೆಂದವಾಗಿ ಚೆಂಗನೆ ನೆಗೆಯುತ್ತ ಹುಲ್ಲು ಹಾಸಿನ ಮೇಲೆ ನರ್ತನ ಮಾಡಬೇಕಿತ್ತೋ...
ಆದರೆ ಹಾಗಾಗಲಿಲ್ಲ...

ಈಗ ಎರಡು ದಿನಗಳ ಹಿಂದೆ  ನನ್ನ ಭಾವ ಬೈಕೇರಿ ಮನೆಯ ಕಡೆಗೆ ಮರಳುತ್ತಿದ್ದಾಗ ರಸ್ತೆ ಮಧ್ಯ ಮಳೆಯಲ್ಲಿ ಏನೋ ಬಿದ್ದುಕೊಂಡಿದ್ದು ಕಾಣಿಸಿತು... ರಾತ್ರಿಯಾಗಿತ್ತು. ಲೈಟಿನ ಬೆಳಕಿನಲ್ಲಿ ಅದೇನೆಂಬುದು ಸ್ಪಷ್ಟವಾಗಿರಲಿಲ್ಲ..
ಗಾಡಿ ನಿಲ್ಲಿಸದಾಗ ನಿಧಾನವಾಗಿ ಪಕ್ಕಕ್ಕೆ ಸರಿದು ಹೋಯಿತೆಂಬುದು ಆತನೇ ಹೇಳಿದ ಸಂಗತಿ..
ಬೈಕಿನಡಿಯಲ್ಲಿ ಬಿತ್ತೇ?
ಹುಡುಕಿದಾಗ ಕಂಡಿದ್ದ ಪುಟ್ಟ ಮೊಲದ ಮರಿ..
ಅದೆಷ್ಟು ಪುಟ್ಟದು ಅಂದರೆ ಗುಬ್ಬಿಗಿಂತ ಸ್ವಲ್ಪ ದೊಡ್ಡ ಗಾತ್ರವಿರಬೇಕು ಅಷ್ಟೇ..

ಮಳೆಯಲ್ಲಿ ನಡುಗುತ್ತಾ.. ಓಡಿಹೋಗಲೂ ಶಕ್ತಿಯಿಲ್ಲದೇ..
ಅಮ್ಮನ ಸುಳಿವಿಲ್ಲದೆ ಕಂಗಾಲಾಗಿತ್ತು...
ಸಾಮಾನ್ಯವಾಗಿ ರಾತ್ರಿಯ ವೇಳೆಯಲ್ಲಿ ನಾನು ಬೈಕ್ ಮೇಲೆ ಹೋಗುವಾಗಲೆಲ್ಲ ದೊಡ್ಡ ದೊಡ್ಡ ಮೊಲಗಳು ಬೈಕಿನ ಲೈಟಿಗೆ ಕಣ್ಣು ಕೊಡುತ್ತ ಬೆಳಕು ಕಂಡಲ್ಲಿ ದಾರಿಗಡ್ಡವಾಗಿ ಓಡುತ್ತವೆ.. ನಮಗಿನಂತ ಮುಂದೆ.. ನಾವು ಅಥವಾ ಮೊಲ ಸ್ವಲ್ಪ ಯಾಮಾರಿದರೂ ಮೈಕಡಿಗೆ ಜೀವ ಕೊನೆಯಾಗುತ್ತದೆ.. ಅದಕ್ಕೆ ರಾತ್ರಿ ನಾನು ಮೊಲ ಕಂಡಾಗಲೆಲ್ಲ ಬಹಳ ಸ್ಲೋ ರೈಡಿಂಗ ಮಾಡುತ್ತೇನೆ..

ಬಹುಶಃ ಆ ಮರಿಯ ತಾಯಿ ಯಾವುದೋ ಬೈಕಿನಡಿ ಬಿದ್ದಿರಬೇಕು..
ಅಥವಾ ಮೊಲವನ್ನು ತಿನ್ನುವವರ ಕೈಗೆ ಸಿಕ್ಕಿತೋ ಕಾಣೆ..
ಮಳೆಯಿತ್ತಲ್ಲ ಪುಟ್ಟಮರಿಯನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯುವಾಗ ಅಮ್ಮ ಎಲ್ಲೋ ಕಾಣೆಯಾಯಿತು..
ಮರಿಗೆ ದಿಕ್ಕೇ ತೋಚಲಿಲ್ಲ..
ಭಾವನ ಕೈಗೆ ಸಿಕ್ಕಿತು..
ಕಾಲು ಮೈ, ಕಣ್ಣಲೆಲ್ಲ ಮಣ್ಣುರಾಡಿ.. ಮನ್ಣಿನ ಮುದ್ದೆಯಂತಾಗಿದ್ದ ಮರಿಯನ್ನು ನಾಜೂಕಿನಿಂದ ಎತ್ತಿಕೊಂಡು ಬಂದಿದ್ದ..
ಮನೆಗೆ ಬಂದು ಬೆಚ್ಚನೆಯ ಬಟ್ಟೆಯಲ್ಲಿ ಒರೆಸಿ ಬೆಚ್ಚಗೆ ಗೋಣಿಯ ಚಾದರ ಮಾಡಿ ಹೊದೆಸಿ ಬೆಕ್ಕಿನ ಕಾಟ ತಪ್ಪಿಸುವ ಸಲುವಾಗಿ ಡಬ್ಬಿಯಲ್ಲಿ ಗೂಡು ಮಾಡಿ ಮಲಗಿಸಿದ್ದ..

ಆಮೇಲೆ ಸಮಸ್ಯೆ ಶುರು..
ತಂದಿದ್ದೇವೆ..? ಅದೆಂತ ತಿನ್ನುತ್ತದೆ ಎಂಬುದು ಗೊತ್ತಿಲ್ಲ
ಮೊಲಕೆ ಉಪ್ಪು ಅಂದರೆ ಆಗದು ಹುಷಾರು ಅಂತ ಯಾರೋ ಹೇಳಿದ್ದರು..
ಉಪ್ಪನ್ನು ದೂರವಿಟ್ಟೆವು..
ಮೊಲ ತಾಯಿ ಹಾಲನ್ನು ಬಿಟ್ಟು ಉಳಿದಂತೆ ನೀರನ್ನು ಮಾತ್ರ ಕುಡಿಯುತ್ತದೆ ಎಂದು ಯಾರೋ ಹೇಳಿದರು..
ಗೊಂದಲವಾಯಿತು.. ಒಂದಷ್ಟು ಎಳೆಯ ಹುಲ್ಲು, ಬೆಂಡೆಕಾಯಿ ಮುಂತಾದ ತರಕಾರಿ ತಂದೆವು..
ಚಿಕ್ಕ ಚಿಕ್ಕ ತುಂಡನ್ನಾಗಿ ಮಾಡಿ ಅದರ ಎದುರು ಇಟ್ಟದ್ದೂ ಆಯ್ತು..
ಕ್ಯಾರೇಟ್ ಇಸ್ಟ ಎಂದು ಯಾರದ್ದೋ ಮನೆಯಿಂದ ತಂದು ಇಟ್ಟದ್ದಾಯ್ತು..
ನಮ್ಮೆದುರು ಏನೆಂದರೆ ಏನನ್ನೂ ತಿನ್ನಲಿಲ್ಲ..

ಆದರೆ ನಾವು ಅತ್ತ ಇತ್ತ ಹೋದಾಗ ತಿನ್ನುತ್ತಿತ್ತೆಂದು ಕಾಣುತ್ತದೆ..
ಅರ್ಧ ತಿಂದು ಬಿಟ್ಟಿದ್ದ ಹಣ್ಣಿನ ಸಿಪ್ಪೆಗಳು ಸಾಕ್ಷಿ ಹೇಳುತ್ತಿದ್ದವು..
ಆದರೆ ನಮ್ಮೆದುರು ಮಾತ್ರ ಮಂಗನ ಉಪವಾಸ...

ಈ ಮರಿ ಬಂದದ್ದೇ ತಡ ಮನೆಯಲ್ಲಿ ಜೀವಕಳೆ..
ತಂಗಿಗಂತೂ ಸ್ವರ್ಗವೇ ಧರೆಗಿಳಿದಂತೆ ಆಗಿತ್ತು..
ಇನ್ನು ತಂಗಿ ಮಗನಿಗೆ ಬಹಳ ಸಂತೋಷವಾಗಿತ್ತು..
ಒಂದೂ ವರೆ ವರ್ಷದ ಆತನಿಗೆ ಎಲ್ಲ ಪ್ರಾಣಿಗಳೂ, ಪಕ್ಷಗಳೂ ಸೇರಿದಂತೆ ಸಕಲ ಜಗತ್ತುಗಳೂ ಕುತೂಹಲದ, ಬೆರಗುಹುಟ್ಟಿಸುವ ಅಂಶಗಳು.. ಮನೆಗೆ ಬಂದು ಕಾಟ ಕೊಡುತ್ತಿದ್ದ ಮಾಳಬೆಕ್ಕನ್ನು ಮನೆಯ ಸದಸ್ಯನನ್ನಾಗಿ ಮಾಡಿದ್ದ ಕೀರ್ತಿ ಆತನಿಗೆ ಸಲ್ಲಬೇಕು.. (ಅದಕ್ಕೇ ನಾವು ಕಾಮರಾಜ ಅಂತ ಹೆಸರನ್ನಿಟ್ಟಿದ್ದೆವು.) ಆ ಬೆಕ್ಕೂ ಕೂಡ ಆತನಿಗೆ ಬಹಳ ಒಗ್ಗಿಬಿಟ್ಟಿದೆ...
ನಾವು ಮುಟ್ಟಲು ಹೋದರೆ ಓಡಿಹೋಗುವ ಆಥವಾ ಸಿಟ್ಟನ್ನು ಮಾಡಿಕೊಳ್ಳುವ ಆ ಬೆಕ್ಕಿಗೆ ಆತ ಏನು ಮಾಡಿದರೂ ತೊಂದರೆಯಿಲ್ಲ.. ತಂಗಿಮಗ ಶ್ರೀವತ್ಸ ಅದಕ್ಕಾಗಿಯೇ  ಬೆಕ್ಕಿನ ಬಾಲವನ್ನು ಎಳೆಯುವುದರ ಆದಿಯಾಗಿ ಅದನ್ನು ಗೊಂಬೆಯಂತೆ ತಿರುಗಿಸುವುದು, ಅದರ ಜೊತೆಗೆ ಆಡುವುದು ಮಾಡುತ್ತಿದ್ದ.. ಅದಕ್ಕೆ ತಕ್ಕಂತೆ ಅದೂ ಕೂಡ ಆಡುತ್ತಿತ್ತು...
ಈಗ ಮೊಲದ ಮರಿ ಮನೆಗೆ ಬಂದರೆ ಆತನನ್ನು ತಡೆಯುವವರ್ಯಾರು..?

ಮೊಲವನ್ನು ಇಟ್ಟಿದ್ದ ಡಬ್ಬಿಯತ್ತ ನಿಮಿಷಕ್ಕೊಂದು ಬಾರಿ ಹೋಗಿ ಕುಕ್ಕರುಗಾಲಲ್ಲಿ ಕುಳಿತು ಕುತೂಹಲದಿಂದ ಅದನ್ನು ನೋಡುವುದು ಕಣ್ಣರಳಿಸುವುದು, ಅಚ್ಚರಿಯಿಂದ ಆಮ್ಮನನ್ನು ಕರೆಯುವುದು ಆತನ ಆಟವಾಗಿಬಿಟ್ಟಿತು..
ಮೊಲದ ಮರಿಗೂ ಏನನ್ನಿಸಿತೋ ಗೊತ್ತಿಲ್ಲ..
ಆತ ಬಂದಾಗಲೆಲ್ಲ ಚಂಗನೆ ನೆಗೆದು ಕುಣಿಯುತ್ತಿತ್ತು..
ಡಬ್ಬಿಯಿಂದ ಹೊರಬರಲು ಯತ್ನಿಸುತ್ತಿತ್ತು..
ಇದನ್ನು ನೋಡಿ ಮತ್ತಷ್ಟು ಹರ್ಷ ಗೊಳ್ಳುತ್ತಿದ್ದುದು ಶ್ರೀವತ್ಸ...

ತಂಗಿ ಈ ಮೊಲದ ಮರಿಗೆ ಚಿನ್ನು ಎನ್ನುವ ಹೆಸರನ್ನಿಟ್ಟೇ ಬಿಟ್ಟಳು...
ಮೊದಲಿಂದಲೂ ಮೊಲವನ್ನು ಸಾಕಬೇಕೆಂಬ ನಮ್ಮ ಉತ್ಕಟ ಇಚ್ಛೆ ಈ ಮೂಲಕ ಪೂರ್ತಿಯಾಗಿತ್ತು..
ಜೊತೆಯಲ್ಲಿ ಹೊಸ ಸಮಸ್ಯೆಗಳು ಹುಟ್ಟಿದ್ದವು.. ಬೆಕ್ಕಿನ ಕಾಟ ತಡೆಯುವುದು, ಆಹಾರ ಹುಡುಕುವುದು, ರಕ್ಷಣೆ ಮಾಡುವುದು ಇತ್ಯಾದಿ.. ಇದಕ್ಕೆ ತಕ್ಕಂತೆ ನನ್ನ ಅಪ್ಪನ ಬಳಿ ಅದ್ಯಾರೋ ಮೊಲವನ್ನು ಮನೆಯಲ್ಲಿ ಸಾಕಿದರೆ ಮಕ್ಕಳು ಸಾಯುತ್ತಾರೆ ಎಂದು ಹೇಳಿದರಂತೆ... ಪ್ರಾರಂಭವಾಯಿತು ವಿರೋಧ ಪಕ್ಷದ ಧರಣಿ... ಬಹುಮತ ನಮ್ಮ ಪರವಿತ್ತು... ವಿರೋಧಿಗಳ ಅಲೆ ಸಣ್ಣದಾಯಿತು.. ಬಡಪಾಯಿ ಮೊಲ ಉಳಿಯಿತು..

ಎರಡು ದಿನ ಮೊಲದೊಡನೆ ಸಹಜವಾಗಿ, ತಮಾಷೆಯಾಗಿ ಕಳೆಯಿತು..
ಆದರೆ ನಿನ್ನೆ ರಾತ್ರಿ (ಜೂನ್ 1ರಂದು) ಮೊಲ ಇದ್ದಕ್ಕಿದ್ದಂತೆ ಮಲಗಿತು.. ಎಂದಿನ ಲವಲವಿಕೆಯಿಲ್ಲ.. ಮಲಗಿಯೇ ಇತ್ತು.. ಹುಷಾರಿಲ್ಲವೋ ಗೊತ್ತಾಗಲಿಲ್ಲ.. ಸತ್ತೇ ಹೋಯಿತೆ..? ಊಹುಂ.. ಉಸಿರಾಟ ಮಾಡುತ್ತಿದೆ. ಆದರೆ ಮೊಲವನ್ನು ನಿಲ್ಲಿಸ ಹೋದರೆ ಬುಡುಕ್ಕನೆ ಬೀಳುವುದು, ಮುಂದಿನ ಎರಡು ಕಾಲನ್ನು ಒದ್ದುಕೊಳ್ಳುವುದು ಮಾಡಲು ಆರಮಬಿಸಿತು. ಹಸಿವಾಯಿತೆ ಎಂದುಕೊಂಡು ತಿಂಡಿ ಕೊಟ್ಟೆವು, ಕ್ಯಾರೆಟ್ ಇಟ್ಟೆವು..ಊಹೂಂ ಏನನ್ನೂ ಮುಟ್ಟುತ್ತಿಲ್ಲ...
ಯಾಕೋ ಮನಸ್ಸಿನಲ್ಲಿ ಅಳುಕು..

ಅಷ್ಟರಲ್ಲಿ ಅದನ್ನು ನೋಡಿದ ಅಮ್ಮ `ತಮಾ.. ಇದು ಬದುಕುವುದು ಕಷ್ಟ .. ತಾಯಿ ಹಾಲು ಕುಡಿದು ಬೆಳೆದ ಮೊಲಕ್ಕೆ ನಾವು ತಿಂಡಿಕೊಟ್ಟರೂ ಒಗ್ಗಿಕೊಳ್ಳಲಿಲ್ಲ.. ಏನೋ ಹೆಚ್ಚು ಕಡಿಮೆ ಆದಂತಿದೆ..'ಎಂದಾಗ ಮನಸ್ಸು ಭಾರ ಭಾರ...
`ಮೊಲಕ್ಕೆ ಅಷ್ಟುದ್ದದ ಹಲ್ಲಿದೆ.. ಏನನ್ನಾದರೂ ತಿನ್ನುತ್ತದೆ..' ಎಂದು ವಿಚಿತ್ರ ವಾದವನ್ನು ಮಾಡಿದ್ದು ತಂಗಿ..
ಶ್ರೀವತ್ಸ ಮಲಗಿದ್ದನಾದ್ದರಿಂದ ಈ ಸಂದರ್ಭದಲ್ಲಿ ಅವನ ಉಪಸ್ಥಿತಿ ಇರಲಿಲ್ಲ..
ಭಾವನಿಗೆ ಯಾಕಾದರೂ ತಂದೆನೋ ಎನ್ನುವಷ್ಟು ಮನಸ್ಸು ವಿಚಲಿತವಾಗಿತ್ತು..
ಮಳೆಯಲ್ಲಿ ಸಾಯುತ್ತಿತ್ತು.. ಕಾಗೆ ಗೆ ಆಹಾರವಾಗುತ್ತಿತ್ತು.. ಛೇ.. ಇಲ್ಲಿ ತಂದರೂ ಬದುಕುತ್ತಿಲ್ಲವಲ್ಲ ಎಂದು ಪೇಚಾಡಿದ..

ರಾತ್ರಿ ಅದಕ್ಕೆ ಸಾಕಷ್ಟು ಬಂದೋಬಸ್ತು ಮಾಡಿ ಬೆಚ್ಚಗೆ ಮಲಗಿಸಿದೆವು..
ಬೆಳಗಾಗುವ ವೇಳೆಗೆ ಮೊಲ ಬದುಕಿರಲಿಲ್ಲ..
ಚಿನ್ನು ಜೀವ ಬಿಟ್ಟಿತ್ತು...

ಯಾಕೋ ಮನಸ್ಸೆಲ್ಲ ಒದ್ದೆಯಾದಂತೆನಿಸಿತು..
ಬೆಳಿಗ್ಗೆ ಎದ್ದವನೆ ಓಡಿಬಂದು ಡಬ್ಬಿಯನ್ನು ನೋಡಿದ ಶ್ರೀವತ್ಸ ನೋಡುತ್ತಲೇ ಇದ್ದ..
ನೋಡುತ್ತಲೇ ಇದ್ದ..
ಮೊಲ ಕುಣಿಯುತ್ತಲೇ ಇಲ್ಲ...
ಕೊನೆಗೆ ಆತನಿಗೆ ಏನನ್ನಿಸಿತೋ ಏನೋ.. ಅಳಲು ಪ್ರಾರಂಭಿಸಿದ... ಹೇಳಲು ಆತನಿಗಿನ್ನೂ ಮಾತು ಬರುವುದಿಲ್ಲವಲ್ಲ...
ಅಮ್ಮಾ..  ಮೀ.. ಮೀ... ಅಮ್ಮಾ.. ಮೀ.. ಮೀ.. ಎಂದು ಮೊಲವನ್ನು ತೋರಿಸುತ್ತ ಻ಳಲು ಪ್ರಾರಮಭಿಸಿದ.. ಚಾಕ್ಲೆಟ್ ತೋರಿಸಿ ಆಮಿಷವೊಡ್ಡಿದರೂ ಮರುಳಾಗುತ್ತಿಲ್ಲ..
ಮೊಲದ ಮರಿ ಆತನನ್ನು ಅಷ್ಟು ಕಾಡಿತ್ತು.. ಆತ ಅಷ್ಟು ಹಚ್ಚಿಕೊಂಡಿದ್ದ..

ಈ ಚಿತ್ರಣವನ್ನು ನೋಡಿ ನಮ್ಮ ಕಣ್ಣಂಚಲ್ಲೂ ನೀರು...
ನೆನಪಾದಾಗ ಮನಸ್ಸು ಕಲ್ಲವಿಲ...

Saturday, June 1, 2013

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು - ಭಾಗ 3

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು - ಭಾಗ 3


ಮಾಸಿಲ ಮಣಿಯಿಂದ ಕಣ್ಣೆತ್ತಿ ನೋಡಿದರೆ ದೂರದಲ್ಲಿ ಊಟಿಯ ಗಿರಿಶಿಖರಗಳು ನಮ್ಮನ್ನು ಕೈಬೀಸಿ ಕರೆಯುತ್ತವೆ...
ಬಾನು ಚುಂಬಿಸಿದಂತೆ ಕಾಣು ಈ ಗಿರಿಶಿಖರಗಳ ಮರೆಯಿಂದ ಸೂರ್ಯ ಆಣುಕುತ್ತಾನೆ..
ಆಗ ಕಾಣುವ ದೃಶ್ಯ ಚಿತ್ತಾರ ವರ್ಣನೆಗೆ ನಿಲುಕದ್ದು..

ಇಲ್ಲಿ ಕೊಂಚ ಮಾಸಿಲಮಣಿಯ ರಸ್ತೆಯ ಬಗ್ಗೆ ಹೇಳಬೇಕು...
ಮೈಸೂರಿನಿಂದ ಊಟಿಗೆ ಹೋಗುವುದಾದರೆ ಮುಖ್ಯವಾಗಿ ಇರುವುದು ರಾಷ್ಟ್ರೀಯ ಹೆದ್ದಾರಿ.. ಬಂಡಿಪುರದಿಂದ ಮಧುಮಲೈ ಅರಣ್ಯಕ್ಕೆ ಪ್ರವೇಶ ಮಾಡುವಾಗ ಒಂದು ಡಾಂಬರು ರಸ್ತೆ ಸಾಗುತ್ತದೆ.. ಇದು ಮಾಸಿಲಮಣಿಯ ಮೂಲಕ ಊಟಿಗೆ ಹೋಗುತ್ತದೆ.. ರಾಷ್ಟ್ರೀಯ ಹೆದ್ದಾರಿಯ ಮೂಲಕ ಘಟ್ಟ ಹತ್ತಿದರೆ 65-70 ಕಿ.ಮಿ ದೂರ. ಆದರೆ ಮಾಸಿಲ ಮಣಿಯದ್ದು ಶಾರ್ಟ್ ಕಟ್ ರಸ್ತೆ.. 36-40 ಕಿ.ಮಿಗೆ ಊಟಿ ಕಾಣಬಲ್ಲದು..

ರಸ್ತೆ ಚನ್ನಾಗಿದೆ ಎಂದು ಯಾರೋ ಹೇಳಿದರು..
ನಾವು ಹೊರಟೆವು..
ಅದು ನೋಡಿದರೆ ಯದ್ವಾತದ್ವಾ ಘಟ್ಟ...
36 ಕಿ.ಮಿ ಏರುವಷ್ಟರಲ್ಲಿ 70 ಕಿ.ಮಿ ಸುತ್ತಿಬಂದಷ್ಟೇ ಅನುಭವವಾಗುತ್ತದೆ.. ಹೆಚ್ಚೂ ಕಡಿಮೆ 65 ಡಿಗ್ರಿ ಕೋನದಲ್ಲಿ ಏರಬೇಕು..
ಹತ್ತಿರ ಹತ್ತಿರ 70ಕ್ಕೂ ಹೆಚ್ಚು ಹೇರ್ ಪಿನ್ ತಿರುವುಗಳು.. ಟೆರ್ರಿಬಲ್...
ನಮ್ಮ ಹುಚ್ಚುಖೋಡಿಗೆ ಇದೆಲ್ಲಾ ಎಲ್ಲಿ ತಾಗ್ತದೆ ಹೇಳಿ...

ಸಿನೆಮಾ ಇದ್ದಿದ್ದು ತ್ರೀ ಈಡಿಯೆಟ್ಸ್ ಆದರೂ ನಾವು ಫೋರ್ ಈಡಿಯೆಟ್ಸ್ ಹೊರಟಿದ್ದೆವು...
ಏನೋ ಥ್ರಿಲ್ಲು... ಮನಸ್ಸು ಫ್ರಿಲ್ಲು...

ಮಂಗದ ಜೊತೆಗೆ ಮಂಗನಾಟ... 

ಮಾಸಿಲಮಣಿಯಲ್ಲಿ ಚಾ ಕುಡಿದ ಸುದ್ದಿ ಆಗಲೆ ಹೇಳಿದ್ದೇನೆ...
ಇಬ್ಬನಿ ತಬ್ಬಿದ ಇಳೆಯಲ್ಲಿ...4-5 ಕಿ.ಮಿ ಸಾಗಿದೆವು...
ಅಲ್ಲೊಂದು ಸೇತುವೆ...
ಮಂಗಗಳ ಸಾಲು..
ರಸ್ತೆಗಡ್ಡಲಾಗಿ ನಿಂತಿದ್ದವು...

ನಾವು ಗಾಡಿ ನಿಲ್ಲಿಸಿದೆವು..
ಮಂಗಗಳು ಮುಗಿಬಿದ್ದಿದ್ದವು..
ಓಡಿಸಿದೆವಾದರೂ ಒಂದು ಮಂಗ ಅಲ್ಲಾಡಲೇ ಇಲ್ಲ...
ಸುತ್ತೆಲ್ಲ ಕಾಡು..
ನಾವು ನಿಂತದ್ದು ಸೇತುವೆಯ ಮೇಲೆ...
ಬೈಕಿನ ಹಾರನ್ ಸದ್ದಿಗೆ ಮಂಗ ಹೆದರಲಿಲ್ಲ...
ನಮ್ಮಂತವರನ್ನು ಅದೆಷ್ಟು ಜನರನ್ನು ಕಂಡಿತ್ತೋ...
ಹಫ್ತಾ ವಸೂಲಿಗೆ ನಿಂತು ಬಿಟ್ಟಿತ್ತು ಅನ್ನಿಸುತ್ತದೆ.. ನಮ್ಮ ಕೈಯಲ್ಲಿ ಏನೆಂದರೆ ಏನೂ ಇರಲಿಲ್ಲ.. ಅದು ತಿನ್ನುವಂತದ್ದು...
ಇದೊಳ್ಳೆ ಗ್ರಾಚಾರಕ್ಕೆ ಬಂತಲ್ಲಾ ಸಿವಾ ಅಂದ್ಕೊಂಡೆವು...
ಮಂಗ ದಾರಿಯನ್ನು ಬಿಡುತ್ತಿಲ್ಲ...

ನಾವು ಬೈಕಿಂದ ಇಳಿದೆವು..
ಮೋಹನ ಫುಲ್ ಜೋಷಲ್ಲಿದ್ದ..
ಕೈತೋಳು ಮಡಿಸುತ್ತಲೂ ಇದ್ದ...
ಹಿಂದೆ ಕಿಟ್ಟು ಕ್ಯಾಮರಾ ರೆಡಿ ಇಟ್ಕೊಂಡಿದ್ದ...
ನಾನು ಕಾಮೆಂಟರಿ ಹೇಳಬೇಕಾ.. ಸುದ್ದಿ ಬರೆಯಲು ರೆಡಿ ಆಗಬೇಕಾ.. ಅನ್ನೋ ಗೊಂದಲದಲ್ಲಿದ್ದೆ..
ಮಂಗಕ್ಕೂ ಮೋಹನನಿಗೂ ಮಾರಾಮಾರಿ ಗ್ಯಾರಂಟಿ ಅಂದ್ಕೊಂಡಿದ್ದೆವು..
ಮೋಹನ ಬರುವ ಸ್ಟೈಲಿಗೆ ಮಂಗ ಗುರ್ ಎಂದಿತು..
ಒಮ್ಮೆ ಹಿಂದೇಟು ಹಾಕಿದ..
`ಸಾಯ್ಲಪಾ.. ಇದೊಳ್ಳೆ ಗ್ರಾಚಾರ ಬಂತಲೋ ಮಾರಾಯಾ..' ಅಂದ...
ಮಾರಾಮಾರಿಗೆ ಮುಗಿಯುವುದಿಲ್ಲ ಪ್ರಕರಣ ಅನ್ನಿಸಿತು..
ರಾಜಿ ಪಂಚಾಯ್ತಿಗೆ ಮಾಡುವುದೊಂದೆ ಬಾಕಿ...

ಇಳಿದು ರಸ್ತೆ ಪಕ್ಕದಲ್ಲಿ ಹೋಗಿ ನಿಂತೆವು.. ಸೇತುವೆ ತಡೆಗೋಡೆಯಬಳಿ ಆಪ್ತ ಸಮಾಲೋಚನೆ ಸಾಗಿತು..
ಮಂಗಕ್ಕೂ ಕುತೂಹಲ ಅನ್ನಿಸ್ತು.. ಸೀದಾ ಬಂದು ನಮ್ಮ ನಡುವೆ ಕುಳಿತಿತು..
ರಾಘವ ಸಿಕ್ಕಿದ್ದೇ ಛಾನ್ಸು ಅಂದುಕೊಂಡು ಪೋಟೋ ತೆಗೆದ...
ಮಂಗನ ಜೊತೆಗೂ ಫೋಟೋ ಸೆಷನ್ನು... ಮುಗಿಯಿತು...
ಮಂಗ ಪೋಟೋಕ್ಕೆ ಪೋಸು ಕೊಟ್ಟು... ಸುಮ್ಮನೆ ಹೋಯಿತು...
ಮಂಗನ ಭಾಷೆ ನಮೆಗ ಬರೋದಿಲ್ಲವಲ್ಲ...
`ಕಂಜೂಸಿ ನನ್ಮಕ್ಕಳು..' ಅಂತ ಬೈದಿರಬೇಕು... ಇನ್ನೇನೇನು.. `ಎ..' ಸರ್ಟಿಪೀಕೇಟ್ ಡೈಲಾಗುಗಳನ್ನು ಹೊಡೆಯಿತೋ.. ನಮಗೆ ಅರ್ಥವಾಗಲಿಲ್ಲ... ಮಂಗಕ್ಕೆ ಮಂಗನಾಟಕ್ಕೆ ಸಲಾಮು ಹೊಡೆದು ಮುಂದಕ್ಕೆ ಹೊರಟೆವು...

****

ಅಲ್ಲಿಂದ ಮುಂದೆ ಶುರುವಾದದ್ದು ಊಟಿಯ ಘಟ್ಟ..
ಅಂಕುಡೊಂಕಿನ ಹಾದಿ...
ಎಂಟೆದೆಯ ಭಂಟರೆಂಬ ಪೋಸಿನಲ್ಲಿ ನಾವು ಹತ್ತಲು ಗಾಡಿಯನ್ನು ಗುರ್ರೆನ್ನಿಸಿದೆವು...
ಎಷ್ಟೇ ಎಕ್ಸಲರೇಟರ್ ವತ್ತಿದರೂ ಗಾಡಿಯ ಕಿಲೋಮೀಟರ್ ಕಡ್ಡಿ 5-10ಕ್ಕಿಂತ ಜಾಸ್ತಿಯನ್ನು ತೋರಿಸುತ್ತಿರಲಿಲ್ಲ..
ಹೊಸ ಗಾಡಿಯಾದರೂ ಉಬ್ಬಸ ಬಿಡುತ್ತದೆಯೇ..
ಆಗಾಗ ಇಂಜಿನ್ನನ್ನು ತಣಿಸಲು 5 ನಿಮಿಷಗಳ ಬಿಡುವು...


ಅಲ್ಲೆಲ್ಲೋ...
ಬಾನಿನಿಂದ ಮುತ್ತಿನ ನೀರ ಹನಿ ಕೆಳಗಿಳಿದು ಬರುತ್ತಿತ್ತು...
ಹಣೆಯ ಮೇಲೆ ವಿಭೂತಿಯಂತೆ ನೀಳ...
ಬಿಳಿ ಮುತ್ತುಗಳು...
ದೂರದಲ್ಲಿ ಜುಳು ಜುಳು ನಿನಾದ...
ತಮಿಳು ಭಾಷೆಯಲ್ಲಿ ಜಲಪಾತದ ಹೆಸರು ಬರೆದಿತ್ತು...
ಈ ಜಲಪಾತಕ್ಕೆ ಎಂತಾ ಹೆಸರು ಎಂದು ತಲೆ ಕೆರೆದುಕೊಳ್ಳುವಷ್ಟರಲ್ಲಿ ಆಂಗ್ಲರು `ಕಲ್ಲಟ್ಟಿ ಫಾಲ್ಸ್...' ಎಂದು ಬರೆದಿಟ್ಟಿದ್ದೂ ಕಂಡಿತು..
ತಮಿಳರಿಗೆ ಬೈದು...
ಇಂಗ್ಲೀಷಿನವರಿಗೆ ಥ್ಯಾಂಕ್ಸುಗಳನ್ನು ಹೇಳಿ ಮುಂದೆ ಹೆಜ್ಜೆ ಹಾಕಿದೆವು...

ಏರಿದಂತೆಲ್ಲ... ತೂಕ ಕಳೆದುಕೊಳ್ಳುತ್ತ ಹೋದೆವೇನೋ ಅನ್ನುವ ಅನುಭವ..
ನಾವು ಚಿಕ್ಕವರಾದಂತೆ... ಕಾಡುವ ಭಾವ..
ಮನಸ್ಸು ಉಲ್ಲಾಸಂಗಾ ಉತ್ಸಾಹಂಗಾ...

ಮೇಲೆರಿ ಒಮ್ಮೆ ಹಿಂತಿರುಗಿ ನೋಡಿದರೆ ನಾವು ಬಂದ ಜಾಗದ ಸುಳಿವೇ ಇಲ್ಲ..
ಮೋಡ ಮುತ್ತಿಕ್ಕಿ ಸಂಪೂರ್ಣ ಪ್ರದೇಶವನ್ನು ತನ್ನ ತೆಕ್ಕೆಯೊಳಗೆ ಸೆಳೆದು ಬಚ್ಚಿಟ್ಟುಕೊಂಡಿದೆ...
ಚಿಕ್ಕ ಚಿಕ್ಕ ಮನೆಗಳು ಕಾಣುತ್ತಿತ್ತು..
ಹೂಕೋಸು, ಎಲೆಕೋಸು, ಚಹಾ ಗಿಡಗಳ ಪ್ಲಾಂಟೇಷನ್ನುಗಳು ಕಾಣತೊಡಗಿದೆವು...
ವಾಸ್ತುಪ್ರಕಾರ ಊಟಿಗೆ ಬಂದಂತಾಯಿತು.. ಎಂದುಕೊಂಡೆವು...

ಬಂಡೆಗಲ್ಲಿನ ಗುಡ್ಡ, ಒಂದಕ್ಕಿಂತ ಒಂದು ದೊಡ್ಡದು.. ಅದರ ಎದುರು ನಾವು ಇರುವೆಯಂತವರು ಎನ್ನಿಸುವಂತಹ ದೈತ್ಯದೇಹಿ ಗುಡ್ಡಗಳು... ಒಂದೊಂದು ಗುಡ್ಡಕ್ಕೂ ಅಲ್ಲಿ ನೋಡಲೆ.. ಇಲ್ಲಿ ನೋಡಲೆ ವಾಹ್... ಸೂಪರ್ರ ಎನ್ನವು ಉದ್ಗಾರ..

ನಾವು ಚಳಿಗಾಲ ಸೂರ್ಯನ ಬಿಸಿಲಿಗೆ ಮೈ ಒಡ್ಡಿ ನಿಲ್ಲುತ್ತೇವೆ..
ಹವ್ಯಕರು ಅದನ್ನು ಬಿಸಿಲು ಕಾಸುವುದು ಎನ್ನುತ್ತಾರೆ..
ಊಟಿಯ ಜನರು ಬಿಸಿಲು ಕಾಯಿಸುತ್ತ ರಸ್ತೆ ಪಕ್ಕ ನಿಂತಿದ್ದರೆಂದರೆ ಊಹಿಸಿಕೊಳ್ಳಿ ಚಳಿಯ ಅಗಾಧತೆ ಎಷ್ಟಿರಬಹುದೆಂದು..

ಅಷ್ಟರಲ್ಲಿ ನಾವು ಬಿಟ್ಟು ಬಂದಿದ್ದ ರಾಷ್ಟ್ರೀಯ ಹೆದ್ದಾರಿ ಸುತ್ಹಾಕಿಕೊಂಡು ಬಂದಿದ್ದು.. ಅದನ್ನು ಹಿಡಿದು ಹೊರಟೆವು...
ಅಲ್ಲೆಲ್ಲೋ.. ಎತ್ತೆತ್ತರದ ನೀಲಗಿರಿ ಮರಗಳು...
ಮೂಗಿನ ತುಂಬ ನೀಲಗಿರಿಯ ಕಂಪು..
ಜೊತೆ ಜೊತೆಗೆ ಮೆಂಥಾಲನ್ನು ಹಾಕಿದಂತಹ ತಂಪು ತಂಗಾಳಿ ನಮ್ಮ ಮೂಗಿನ ಮೂಲಕ ನಮ್ಮ ಹೃದಯವನ್ನು ನಾಟಿ ಹಾಯೆನಿಸಿತಯ,,,..

ರಸ್ತೆಗೆ ಫ್ಲೆವರ್ಸುಗಳನ್ನು ಹಾಕಿದ್ದರು..
ಟಾರು ರಸ್ತೆಯಲ್ಲ.. ಇಂಗ್ಲೆಂಡೋ.. ನೆದರ್ಲೆಂಡೋ...
ಯಾವುದೋ ಕೌಂಟಿಯನ್ನು ನೆನಪಿಗೆ ತಂದವು...
ಊಟಿಯ ಸರಹದ್ದಿಗೆ ಬಂದಿದ್ದರೂ ಊಟಿಯ ನಗರದೊಳಗೆ ನಾವುನ್ನೂ ಕಾಲಿರಿಸಿರಲಿಲ್ಲ...
ಅದಿನ್ನೂ ಬೋರ್ಡುಗಳ ಮೂಲಕ ಹೀಗೆ ಬನ್ನಿ.. ಹೀಗೆ ಬನ್ನಿ ಎಂದು ಹೇಳುತ್ತಲೇ ಇತ್ತು...

---

ತಮಿಳರಿಗೆ ಲೆಕ್ಖ ಬರೋದಿಲ್ವಾ ಸಾರ್...

ಈ ತಮಿಳರಿಗೆ ಲೆಕ್ಖ ಸರಿಯಾಗಿ ಬರೋದಿಲ್ಲವೇ ಅನ್ನುವ ಅನುಮಾನ ಊಟಿಗೆ ಹೋಗುವಾಗ ನಮಗೆ ಆಯಿತು..
ಕಿಲೋಮೀಟರು ಕಲ್ಲುಗಳಲ್ಲೆಲ್ಲ ತಪ್ಪು ತಪ್ಪು ಲೆಕ್ಖ..
ಒಂದು ಕಡೆ ಊಟಿ 10 ಕಿ.ಮಿ ಎಂದು ಬರೆಯುತ್ತಾರೆ.. ಮತ್ತೆ ನಾಲ್ಕೈದು ಕಿ.ಮಿ ಹಾದು ಬಂದ ನಂತರ ಊಟಿಯ ದೂರ 12 ಕಿಮಿ ಆಗಿರುತ್ತದೆ..
ದಾರಿ ಸಾಗಿದಂತೆಲ್ಲ ಖರ್ಚಾಗಬೇಕು ತಾನೆ.. ಆದರೆ ತಮಿಳಿಗರ ಲೆಕ್ಖ ಹೆಚ್ಚಾಗಿತ್ತು..
ನಾಲ್ಕೈದು ಕಡೆಗಳಲ್ಲಿ ಇಂತಹ ಅನುಭವ ಆದ ನಂತರ ನಮಗೆ ಲೆಕ್ಖ ಬರೋದಿಲ್ಲ ಎನ್ನುವುದು ಕನ್ ಫರ್ಮ್ ಆಯಿತು...

ಇತ್ತೀಚೆಗೆ ಜಯಲಲಿತಾ ಮು.ಮಂ ಆದ ನಂತರ ಕಾವೇರಿ ವಿಷಯದಲ್ಲಿ ಎಷ್ಟು ನೀರು ಕೊಟ್ಟರೂ ಕಡಿಮೆ ಎಂದಳಲ್ಲಾ.. ಆಗ ಪಕ್ಕಾ ಆಯ್ತು ನೋಡಿ.. ತಮಿಳಿಗರ ಲೆಕ್ಖ ಹಾಕುವ ರೀತಿ...
ಅವರಿಗೊಂಡು ವಣಕ್ಕಂ ಹೇಳುತ್ತ ನಾವು ಒಣಗಿದೆವು...


(ಮುಂದುವರಿಯುತ್ತದೆ...)

Thursday, May 30, 2013

ಮಿಡಿ-ಮಿನಿ ಕಥೆಗಳು

ಮಿನಿ ಕಥೆಗಳು...
 ಒಂದೆರಡು ಮಾತುಗಳು :
ಹಾಗೆ ಸುಮ್ಮನೆ ಬರೆದಿದ್ದು... ಇವು ನ್ಯಾನೋ ಕಥೆಗಳ ಜಾತಿಗೆ ಸೇರುತ್ತವಾ.. ಗೊತ್ತಿಲ್ಲ..
ಸುಮ್ಮ ಸುಮ್ಮನೆ ನೀನು ಉದ್ದುದ್ದ ಕಥೆಗಳನ್ನು ಬರೀತಿಯಾ.. ಎಳೀತೀಯಾ ಅಂತ ಯಾರೋ ಭಯಂಕರ ಕಾಮೆಂಟು ಮಾಡಿದ್ದರು..
ಚಿಕ್ಕ ಕಥೆ ಬರೆಯಲು ಬರುತ್ತದಾ ಎಂದು ಪ್ರಯತ್ನ ಮಾಡಿದಾಗ ಹೊರಬಿದ್ದದ್ದು... ಓದ್ಹೇಳಿ..

=========================================

ಸೇಡು

ಅವಳನ್ನು ತಿರಸ್ಕರಿಸಿ ಅವಳ ಮೇಲೆ ಸೇಡು ತೀರಿಕೊಳ್ಳಬೇಕೆಂದು ಹವಣಿಸಿದ್ದೆ...
ಮರೆಯಲು ಯತ್ನಿಸಿದಂತೆಲ್ಲ ನೆನಪಾಗಿ ಕಾಡಿದಳು..


**

ಭೀತಿ

ಯಾವುದೇ ಮದುವೆ ದಿಬ್ಬಣಗಳು ಕಂಡರೂ... ಬೋರ್ಡುಗಳು ಕಣ್ಣಿಗೆ ಬಿದ್ದರೂ...
ಮನಸ್ಸು ದೇವರೆ ಅಲ್ಲಿ ಅವಳ ಹೆಸರು ಕಾಣದಿರಲಿ... ಎಂದು ಯಾಚಿಸುತ್ತದೆ..

**

ಮೌನ..

ಗಂಡನನ್ನು ಬಯ್ಯುತ್ತಿದ್ದ ನೇತ್ರಕ್ಕನ ಬಾಯಿ ಕೊನೆಗೂ ಬಂದಾಯಿತು...
ಮಣ್ಣಾದಳು...ಹೆಣ್ಣಾದಳು..

***


ದುರ್ವಿಧಿ

ಭವಿಷ್ಯ ಹೇಳುವುದೇ ಅನ್ನ ಎಂದುಕೊಂಡಿದ್ದವನಿಗೆ ಸಾಡೇಸಾತ್ ಶನಿ ಹಿಡಿದದ್ದು ಗೊತ್ತಾಗಲೇ ಇಲ್ಲ..

****

ದೂರಾಲೋಚನೆ

ಅವಳಿಗೆ ಇಷ್ಟ ಅನ್ನುವ ಕಾರಣಕ್ಕಾಗಿ ಅವನು ಮನೆಯ ಜಮೀನಿನ ತುಂಬ ಪಪ್ಪಾಯಿ ಗಿಡಗಳನ್ನು ಹಚ್ಚಿದ. ಅದು ದೊಡ್ಡದಾಗಿ ಬೆಳೆದು ಹಣ್ಣು ನೀಡುವ ಹೊತ್ತಿಗೆ ಅವಳು ಅವನನ್ನು ಬಿಟ್ಟು ಹೋದಳು.
ಅವನೀಗ ಪಪ್ಪಾಯಿ ವ್ಯಾಪಾರಿ.
ಕೈಯಲ್ಲಿ ಝಣ ಝಣ ರುಪಾಯಿ.


**
ಅಭಿಮಾನಿ

ನನ್ನ ಗೆಳತಿ ಬಿಟ್ಟೂ ಬಿಡದೆ ಕಾಡಿಸಿ ನಿನಾಸಂ ಸತೀಶನ ಸಿನೆಮಾಗಳನ್ನು ತೋರಿಸಿದಳು..
ಅವಳ ಒತ್ತಾಯಕ್ಕೆ ನೋಡಿದೆ. ಅವಳ ಬಿಟ್ಟು ಹೋದಳು..
ನಾನು ಸತೀಶನ ಫ್ಯಾನ್ ಆಗಿಬಿಟ್ಟೆ.

Tuesday, May 28, 2013

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು - ಭಾಗ 2

(ಎಂದೋ ಅರ್ಧ ಬರೆದಿಟ್ಟಿದ್ದ ನಮ್ಮ ಪ್ರವಾಸ ಕಥನಕ್ಕೆ ಮರು ಚಾಲನೆ.. ಈ ಪ್ರವಾಸ ಹೊರಟಿದ್ದು ನಾನು, ಕಿಟ್ಟು, ರಾಘವ ಹಾಗೂ ಮೋಹನ.. ಅದರ ಸಂತಸದ ಝಲಕ್ ಇಲ್ಲಿದೆ.)
(ಇಲ್ಲಿಯವರೆಗೆ.. ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಗುಂಡ್ಲುಪೇಟೆಗೆ ಬಂದಿದ್ದನ್ನು ಈ ಮೊದಲೇ ಹೇಳಿದ್ದೇನೆ.. ಹಳೆಯ ಪೋಸ್ಟನ್ನು ನೋಡಿ)

ಡವ ಡವ ನಡುಕವ..

ಮರುದಿನ ಮುಂಜಾನೆ 4 ಗಂಟೆಗೆಲ್ಲಾ ಎದ್ದು ಗುಂಡ್ಲುಪೇಟೆಯನ್ನು ಬಿಟ್ಟೆವು..
ರಾತ್ರಿ ಬಂಡಿಪುರ ಅರಣ್ಯದ ಬಾಗಿಲು ಮುಚ್ಚುತ್ತಾರೆ. ನಂತರ ಅದನ್ನು ತೆರೆಯುವುದು ಮುಂಜಾನೆಯೇ..
ಬೆಳಗಿನ ಕಾನನದ ನಿಸರ್ಗ ಸೌಂದರ್ಯವನ್ನು ಮಿಸ್ ಮಾಡ್ಕೋಬಾರದು ಎನ್ನುವ ದೃಷ್ಟಿಯಿಂದ ನಾವು ಮುಂಜಾನೆ ಹೊರಟೆವು.. ಅದಲ್ಲದೆ ಬಂಡಿಪುರ ಅರಣ್ಯ ತನಿಖಾ ಠಾಣೆಯಲ್ಲಿ ಸಾಕಷ್ಟು ಟ್ರಾಫಿಕ್ ಕೂಡ ಇರುತ್ತದೆಂಬುದು ನಮ್ಮ ಮುಖ್ಯ ಕಾರಣವಾಗಿತ್ತು.
ನಾವು ಅರಣ್ಯದ ಗೇಟ್ ತಲುಪುವ ವೇಳೆಗೆ ಆಗಲೇ ಗಂಟೆ ಐದನ್ನೂ ದಾಟಿತ್ತು..
ಮಧ್ಯದಲ್ಲಿ ಚಳಿ ನಡುಕ ಶುರುವಾಯಿತು ನೋಡಿ...
 ಹಲ್ಲು ಕಟ ಕಟ.. ಕೈಕಾಲು ಥರ ಥರ...
ಮೋಹನನಿಗೆ ಬೈಕ್ ಹೊಡೆಯುವ ಮನಸ್ಸೇ ಇಲ್ಲ..
ಅಲ್ಲೆಲ್ಲೋ ಒಂದು ಕಡೆ ಬೈಕ್ ನಿಲ್ಲಿಸಿದೆವು...
ರಸ್ತೆ ಪಕ್ಕದ ದರಕು, ಇತ್ಯಾದಿ ಸೇರಿಸಿ ಬೆಂಕಿ ಹಾಕಿಯೇಬಿಟ್ಟೆವು...
ಚಳಿ ಕಾಸಿದ ನಂತರವೇ ನಮ್ಮ ಕೈಗಳಿಗೆ ಜೀವ ಬಂದಿದ್ದು,,,!!!

ಅದ್ಯಾವುದೋ ಕಡೆ ಸೂರ್ಯ ನಿಧಾನವಾಗಿ ಬೆಳಗನ್ನು ಪಸರಿಸುತ್ತಿದ್ದ..
ಗುಂಡ್ಲುಪೇಟೆಯಿಂದ ಬಂಡಿಪುರದ ಕಡೆಗೆ ಹೋಗುವಾಗ ಬಲಭಾಗದಲ್ಲಿ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಕಾಣುತ್ತದೆ..
ಬಾನನ್ನು ಮುಟ್ಟಿದಂತೆ ಕಾಣುವ ಬೆಟ್ಟದ ಬೆಡಗು ಮೂಕ ವಿಸ್ಮಿತಗೊಳಿಸುತ್ತದೆ..
ನಾನು ಹಾಗೂ ಕಿಟ್ಟು ಇಬ್ಬರೂ ಅದೆಷ್ಟು ಬೆರಗುಗೊಂಡೆವೆಂದರೆ.. ಪದಗಳೇ ಸಾಲುತ್ತಿಲ್ಲ..
ರಾಘುವಿನ ಟಿವಿಎಸ್ ಎಕ್ಸಿಡಿ.. ಹಾಗೂ ಮೋಹನನ ವಿಕ್ಟರ್... ಝುಂ ಅನ್ನುತ್ತಿತ್ತು..

ಇಬ್ಬನಿ ಮಾಲೆ ಮಾಲೆಯಾಗಿ ಇಳಿಯುತ್ತಲಿತ್ತು....
10-15 ಮೀಟರ್ ದೂರದ ಇದುರು ಭಾಗ ಕಾಣುತ್ತಲೇ ಇಲ್ಲ...
ಇದೇ ಕಾರಣಕ್ಕೆ ಎದುರು ಬದಿ ಯಾರೇ ಬಂದರೂ ನಮಗೆ ಕಾಣುತ್ತಲೇ ಇರಲಿಲ್ಲ...
ಫೆ.19ರ ದಿನ..
ಇಬ್ಬನಿಯ ಕಾರಣದಿಂದಲೇ  ನಮಗೆ ಬಂಡಿಪುರದ ಕಾನನ ಸೌಂದರ್ಯ ಕೊಂಚ ತಪ್ಪಿಹೋಯಿತೆಂದರೂ ತಪ್ಪಿಲ್ಲ...
ಮುಂದೆ ಸಾಗಿದಂತೆ.. ಅದೊಂದು ಊರು.. ತಮಿಳಿನಲ್ಲಿ ಬರೆದಿತ್ತು ಹೆಸರು..
ಮಧುಮಲೆ ಅರಣ್ಯ ವ್ಯಾಪ್ತಿಯ ಒಳಗಿದೆ...
ಎದುರು ಭಾಗದಲ್ಲಿ ಒಂದು ದೈತ್ಯ ಆನೆ ನಿಂತಿದೆ....

ನನಗೆ ಏನೂ ಅನ್ನಿಸಲಿಲ್ಲ... ರಾಘುವಿನ ಬೈಕೇರಿ ಕುಳಿತಿದ್ದ ಕಿಟ್ಟು ಒಮ್ಮೆ ಹೌಹಾರಿದ್ದ...
ನಾನು, ರಾಘು ಆಗಲೇ ಅಧೇ ಮಾರ್ಗದಲ್ಲಿ ಊಟಿಗೆ ಒಂದು ಟ್ರಿಪ್ ಹಾಕಿ ಬಂದಿದ್ದರಿಂದ ಆ ಆನೆಯನ್ನು ಅದ್ಯಾವಾಗಲೋ ನೋಡಿದ್ದೆವು..
ಕಿಟ್ಟುವಿನ ಹೌಹಾರಿಕೆ ಕಂಡು ನನಗಂತೂ ಒಳಗೊಳಗೆ ನಗು...
ರಾಘವನ ಕ್ಯಾಮರಾ ಕಿಟ್ಟುವಿನ ಕೈಲಿತ್ತು...
ಬೈಕು ಚಲಿಸುತ್ತಿದ್ದಂತೆಯೇ ಪೋಟೋ ತೆಗೆಯುತ್ತಿದ್ದ...

ನಡುವೆ ತಮಿಳುನಾಡು ರಾಜ್ಯದ ಚೆಕ್ ಪೋಸ್ಟ್..
ಎಲ್ಲ ವಾಹನಗಳನ್ನೂ ಚೆಕ್ ಮಾಡುತ್ತಿದ್ದರು..
ನಾನು ರಾಘುವಿನ ಬೈಕ್ ಹೊಡೆಯುತ್ತಿದ್ದೆ..
ಹೆಲ್ ಮೆಟ್ ಹಾಕಿರಲಿಲ್ಲ..
ಹಿಂದೆ ಕುಳಿತ ರಾಘು ಹಾಕಿದ್ದ..
ಅಲ್ಲಿದ್ದ ಪೊಲೀಸ್ ಅಧಿಕಾರಿ ನನ್ನನ್ನು ನಿಲ್ಲಿಸಿ ಹೆಲ್ ಮೆಟ್ ಎಂದ...
ರಾಘುವನ್ನು ತೋರಿಸಿದೆ...
ಡೋಂಟ್ ಕ್ಯಾರ್ ಎಂದ...ಅಧಿಕಾರಿ..
ಪೇಪರ್ ಜಾಬಿತ್ತಲ್ಲ... ಪ್ರೆಸ್ ಕಾರ್ಡ್ ತೋರಿಸಿದೆ...
ಸಂಯುಕ್ತ ಕರ್ನಾಟಕದ ಜಾಬಿನಲ್ಲಿದ್ದ ಕಾಲ...
ಕನ್ನಡ ಪತ್ರಿಕೆ ಕಾರ್ಡು ತೋರಿಸಿದ್ದೇ ತಡ.. ಮತ್ತಷ್ಟು ಸಿಟ್ಟು ಏರಿತು ಅನ್ನಿಸುತ್ತದೆ...
ಸಿಟ್ಟಾಗಿ ಫೈನ್ ಹಾಕಿಯೇ ಬಿಟ್ಟ..

ಕಿಟ್ಟು.. ನಿನ್ನ ಜರ್ನಲಿಸಂ ಜಾಣತನ ಇಲ್ಲಿ ತೋರಿಸಬೇಡ ಮಾರಾಯ ಎಂದ..
ಒಂಥರಾ ಎನ್ನಿಸಿತು ನನಗೆ...ಅವಮಾನ..
ಝಾಡಿಸೋಣ ಎನ್ನಿಸಿಕೊಂಡರೂ ಸುಮ್ಮನಾದೆ..

ಅರ್ಣಯವಲಯ ದಾಟಿ ಕೊಂಚ ಮುಂದಕ್ಕೆ ಹೋದಂತೆ ರಸ್ತೆಯಲ್ಲಿ ಮಾರ್ಗ ಬದಲಾಯಿಸಬೇಕು...
ರಾಷ್ಟ್ರೀಯ ಹೆದ್ದಾರಿಯನ್ನು ಪಕ್ಕಕ್ಕೆ ಬಿಟ್ಟು ಇನ್ನೊಂದು ಸೀದಾ ಸಾದಾ ಹಾದಿಯಲ್ಲಿ ಹೋಗಬೇಕು..
ಆ ಮಾರ್ಗ ಹಿಡಿದೆವು.. ಊಟಿಗೆ ಮಾಸಿಲಮಣಿಯ ಮಾರ್ಗದಲ್ಲಿ ಹೋಗುವಂತಹ ದಾರಿ ಅದು.
ನಡುವೆಯೆಲ್ಲೋ ಹುಲಿ ರಕ್ಷಿತಾರಣ್ಯದ ಬೋರ್ಡಿತ್ತು...

ಕರ್ನಾಟಕ ಸರ್ಕಾರ ದ ಚಿತ್ರವೂ ಇತ್ತು... ಅರೆ ತಮಿಳುನಾಡಿನಿಂದ ಮತ್ತೆ ಕರ್ನಾಟಕಕ್ಕೆ ಬಂದೆವೆ..? ಎಂದು ಕೊಂಡೆವು...
ಸ್ವಲ್ಪ ಹೊತ್ತಿನ ನಂತರ ಮಾಸಿಲ ಮಣಿ ಎನ್ನುವ ಕರ್ನಾಟಕ ವ್ಯಾಪ್ತಯ ಊರು ಸಿಕ್ಕಿತು. ಸಂಪೂರ್ಣ ತಮಿಳರೇ ಇದ್ದ, ತಮಿಳು ಬೋರ್ಡುಗಳೇ ಇರುವ ಕರ್ನಾಟಕದ ಊರು.. ಸರಿಯಾಗಿ ಅಭಿವೃದ್ಧಿ ಮಾಡಿದ್ದರೆ ತಾಲೂಕಾ ಕೇಂದ್ರವಾಗಬಹುದಿತ್ತು.. ಅಂತಹ ಊರದು... ಕರ್ನಾಟಕದ ಯಾವುದೇ ರಾಜಕಾರಣಿ ಆ ಊರಿಗೆ ಹೋಗಿದ್ದಿಲ್ಲವೇನೋ... ಇಬ್ಬನಿಯ ಹಾಲೆಯೊಳಗೆ ಹುದುಗಿಹೋಗಿತ್ತು...

ಅಲ್ಲಿ ಹೋಗಿ ಹೊಟೆಲೊಂದನ್ನು ಹುಡುಕಿ ಬಿಸ್ಸಿ ಬಿಸ್ಸಿ ಮಸಾಲೆ ಟೀ ಕುಡಿದು .. ತಿಂಡಿ ತಿಂದೆವು... ಸೂರ್ಯ ಇಣುಕಿದ್ದ..
ಯಾವುದೋ ಕಲ್ಲುಬಂಡೆಯ ಮೇಲೆ ಆಡೊಂದು ಬಿಸಿಲು ಕಾಯಿಸುತ್ತಿತ್ತು...
ಕಿಟ್ಟು ಕ್ಯಾಮರಾ ಹಿಡಿದ...

ತಕ್ಷಣ ಎದ್ದು ನಿಂತ ಆಡು.. ಮೈ ಕೊಡವಿ.. ಮೊಖವನ್ನೊಮ್ಮೆ ತಿರುಗಿ ಪೋಸ್ ಕೊಟ್ಟಿತು... ಪೋಟೋ ತೆಗೆದ ಕಿಟ್ಟು ಥ್ಯಾಂಕ್ಸ್ ಎಂದರೆ ಆಡು ಕೇಳುತ್ತದೆಯೇ..? ಬೆನ್ನತ್ತಿತು... ಕೊನೆಗೆ ಬಾಳೆ ಹಣ್ಣಿನ ಹಪ್ತಾ ವಸೂಲಿ ಮಾಡಿ ಜಾಗ ಖಾಲಿ ಮಾಡಿತು...

ಮಾಸಿಲಮಣಿಯಲ್ಲಿ ನಮ್ಮದೂ ಪೋಟೋ ಸೆಷನ್ ನಡೆಯಿತು...
ಬೈಕೇರಿ ಊಟಿಯ ಗುಡ್ಡವನ್ನು ಹತ್ತಲು ಅನುವಾಗಿ ಹೊರಟೆ..
(ಮುಂದುವರಿಯುತ್ತದೆ..)



ವಿಸ್ಮಯಗಳ ಗೂಡು ಈ ಮಲೆನಾಡು ಭಾಗ -3

    ಮಲೆನಾಡಿಗೆ ಮಲೆನಾಡೇ ಸಾಟಿ. ಇಲ್ಲಿನ ವೃಕ್ಷ ಸಂಕುಲ, ಪಕ್ಷಿ, ಮೃಗ ಸಮೂಹ ಇವುಗಳಿಗೆ ಮಲೆನಾಡನ್ನು ಬಿಟ್ಟರೆ ಬೇರೆ ಏನೂ ಇಲ್ಲ. ಇಲ್ಲಿನ ಕಾನನ-ತಾಣಗಳೆಲ್ಲ ನಿತ್ಯ ಹಸಿರು ಹಸಿರು.
    ಮಲೆನಾಡೇ ಹಾಗೆ ದೂರದಿಂದ ನೋಡಿದರೆ ಅರ್ಥವೇ ಆಗದು. ಒಳಹೊಕ್ಕರೆ ವಿಸ್ಮಯ ಲೋಕ. ಇಲ್ಲಿ ಸಿಕಾಡಗಳ ಮಧುರಾತಿ ಮಧುರ ಉಲಿಯಿದೆ. ರಕ್ತ ಹೀರುವ ಉಂಬಳಗಳ ಜೊತೆಯಿದೆ. ವಿಶಿಷ್ಟ ಎನ್ನಿಸುವ ಬಸವನ ಹುಳುಗಳಿವೆ. ಮಂಗಟ್ಟೆ ಹಕ್ಕಿಯ ಶ್ರೀಮಂತ ತಾಣವೂ ಇದೇ ಮಲೆನಾಡು. ಇಲ್ಲಿ ಬಣ್ಣಬಣ್ಣಗಳ ಅಣಿಬೆಗಳಿವೆ. ಮಿಗಿಲಾಗಿ ಹಸುರು ಎಲೆಯನ್ನೂ ಮರೆಸುವ ಹಸುರುಳ್ಳೆ ಹಾವಿದೆ. ಪ್ರೀತಿಯ, ದುರ್ಬೀನಿಗೆ ಮಾತ್ರ ಕಾಣಿಸುವಂತಹ ದಾಟುಬಳ್ಳಿ ಹಾವಿದೆ.
    ಜೊತೆ ಜೊತೆಗೆ ಇಲ್ಲಿ ನಮ್ಮನ್ನೇ ಆಕರ್ಷಿಸಬಲ್ಲಂತಹ ನಿಸರ್ಗ ಧಾಮಗಳಿವೆ. ಜಲಪಾತಗಳಿವೆ. ಮಹಾರಾಷ್ಟ್ರದಿಂದ ಕೇರಳದವರೆಗೆ ಹಬ್ಬಿರುವ ಪಶ್ಚಿಮ ಘಟ್ಟದ ಸೆರಗಿನಲ್ಲಿಯೇ ಇರುವ ಮಲೆನಾಡು ಎಂದರೆ ಮಲೆಗಳ ನಾಡು. ಭೂದೇವಿಯ ಮೊಲೆ ನಾಡು. ಇದೇ ಜೀವಸದೃಷ ಅಮೃತಸವಿಯನ್ನೂ, ಜೀವರಸವನ್ನೂ ಹಿಡಿದಿಟ್ಟ ತಾಣ.
    ಬಾನೆತ್ತರಕ್ಕೆ ಚಾಚಿ ನಿಂತ ಮರಗಳು ಮಲೆನಾಡಿಗೆ ಕಿರೀಟದಂತೆ ಕಂಡರೆ ಬಳುಕುವ ನದಿಗಳು ಹಳ್ಳಗಳು ಮಲೆನಾಡಿನ ಆಭರಣಗಳು. ಅಲ್ಲಲ್ಲಿ ಕಾಣುವ ಜಲಪಾತ ಆಭರಣದ ಹೊಳೆಯುವ ಮಣಿಗಳು. ಹಸಿರು ಕಾನನವೇ ಮಲೆನಾಡಿನ ಸೀರೆ. ಗಿರಿ ಕಂದರಗಳು ಮೇಳೈಸಿ, ಮೆರೆವ ಈ ನಾಡೇ ವಿಸ್ಮಯಗಳ ಗೂಡು. ಭುವಿಯ ಸ್ವರ್ಗ. ಬೊಮ್ಮನ ಕಲ್ಪನೆಯ ಪ್ರದೇಶ.
    ಯಾಕೋ ಗೊತ್ತಿಲ್ಲ....
    ಹುಟ್ಟುವಿಯಾದರೆ
    ಇಲ್ಲೇ ಇನ್ನು...
    ಈ ಮಲೆನಾಡಲ್ಲೇ ಅನ್ನು...
    ಎಂದು ಹಾಡೋಣ ಅನ್ನಿಸುತ್ತಿದೆ. ಕವಿ ದಿನಕರದ ಹಾಡುಗಳು ಹಾಗೇ ಸುಮ್ಮನೆ ಕಿವಿಯ ಮೇಲೆ ಸುಳಿದು ಹೋಗುತ್ತವೆ..
    ಬ್ರಹ್ಮ ಪುರಸೊತ್ತು ಸಿಕ್ಕಾಗ ಬಿಡಿಸಿದ ಚಿತ್ರವೇ ಮಲೆನಾಡು ಇರಬೇಕು. ಅಷ್ಟು ಸುಂದರವಾಗಿದೆ. ಸೊಗಸಾಗಿ ಮೂಡಿಬಂದಿದೆ. ಈ ನಾಡಿನಲ್ಲಿ ಭೀಮ, ಪರಶುರಾಮ ಅಡ್ಡಾಡಿದ್ದಾರಂತೆ. ಅಲ್ಲಲ್ಲಿ ಕುರುಹಗಳನ್ನು ಬಿಟ್ಟುಹೊಗಿದ್ದು ಈಗಲೂ ನಮಗೆ ಕಾಣಸಿಗುತ್ತದೆ. ದೇವತೆಗಳು ಇಲ್ಲೆಲ್ಲೋ ಬಂದು ಅಡಗಿ ಕುಳಿತಂತೆ ನಮಗೆ ಭಾಸವಾಗುತ್ತದೆ.
    ಇಲ್ಲಿ ನಿಸರ್ಗ ಮಾತೆ ನಿಂತು ಮೆರೆದಿದ್ದಾಳೆ. ಮೆರೆದು ನಲಿದಿದ್ದಾಳೆ. ನಲಿದು ಕುಣಿದಿದ್ದಾಳೆ. ಕುಣಿದು ದಣಿದಿದ್ದಾಳೆ. ದಣಿದು ಮೈಚೆಲ್ಲಿ ಮಲಗಿಬಿಟ್ಟಿದ್ದಾಳೆ. ಆಕೆಗೆ ಎಚ್ಚರವೇ ಇಲ್ಲ. ಅಂತಹ ಮೈಮರೆವಿನಲ್ಲಿಯೂ ಚೆಲುವು ಚೆಲ್ಲಿ ನಿಂತಿದೆ..
    ಯಾಕೋ ಗೊತ್ತಿಲ್ಲ.. ಇಂತಹ ಮಲೆನಾಡಿನ ನಡುವೆ ಕಳೆದುಹೋಗಬೇಕು ಎನ್ನಿಸುತ್ತಿದೆ. ಗವ್ವೆನ್ನುವ ಕಾಡುಗಳು, ಟ್ವಂಯ್ ಟ್ವಂಯ್ ಎಂದು ಕೂಗುವ ಸಿಕಾಡಗಳ ಸದ್ದಿನ ನಡುವೆ ನನ್ನನ್ನೇ ನಾನು ಮರೆತು ಬಿಡಬೇಕು ಎನ್ನಿಸುತ್ತಿದೆ. ಅದ್ವಾವನೋ ಅಧಿಕಾರಿ.. ಬ್ರಿಟೀಷರವನು.. ಉತ್ತರಕನ್ನಡದ ಕಾಡುಗಳನ್ನೆಲ್ಲ ಪಾದಯಾತ್ರೆಯ ಮೂಲಕ ಸುತ್ತಿದ್ದನಂತೆ.. ನನಗೂ ಅದೇ ಆಸೆ.. ಶಿವಾನಂದ ಕಳವೆಯಂತೆ ಮತ್ತೊಮ್ಮೆ ಕಾಡು ಮೇಡಿನ ಜಾಡು ಹಿಡಿದು ಸಾಗಬೇಕು.. ಆಗಾಗ ಕಣ್ಣೆದುರು ಬರುವ ಮೃಗ ಸಮೂಹಕ್ಕೆ ಹಾಯ್ ಹೇಳಿ ಬರಬೇಕು..ಅನ್ನಿಸುತ್ತಿದೆ..
    ಭಯವಾಗುತ್ತಿದೆ.. ವಿಸ್ಮಯಗಳ ಗೂಡಿಗೆ ಯಾರದ್ದೂ ದೃಷ್ಟಿ ತಾಗಿದಂತಿದೆ. ಒಂದಾದ ಮೇಲೆ ಒಂದರಂತೆ ಯೋಜನೆಗಳ ಶಾಪ ಬಂದೆರಗುತ್ತಿದೆ. ಯೋಜನೆಗಳ ಭಾರಕ್ಕೆ ಕಾಳಿ ನದಿ ಸುಸ್ತಾಗಿದೆ. ಭದ್ರಾ ಬಣ್ಣಕಳೆದುಕೊಂಡಿದ್ದಾಳೆ. ತುಂಗಿ ಅಳುತ್ತಿದ್ದಾಳೆ. ಶರಾವತಿಯ ಚೆಲುವು ಮರೆತಿದೆ. ಇನ್ನುಳಿದವುಗಳು ಅಘನಾಶಿನಿ, ನೇತ್ರಾವತಿ, ಗಂಗಾವಳಿ.. ಮುಂತಾದ ಮೂರೋ ನಾಲ್ಕೋ ನದಿಗಳು... ಅವುಗಳ ಕಡೆಗೂ ಆಡಳಿತ ಶಾಹಿಗಳ ಕಣ್ಣು ಬಿದ್ದಂತಿದೆ. ಅಘನಾಶಿನಿಗೆ ಅಣೆಕಟ್ಟು ಕಟ್ಟಿ ವಿದ್ಯುತ್ ಉತ್ಪಾದನೆಗೆ ತೊಡಗುವ ಹವಣಿಕೆ ಅವರದ್ದು. ನೇತ್ರಾವತಿಯನ್ನೇ ತಿರುಗಿಸಿ ಬಿಡುವ ಹೂಟವೂ ಅವರದ್ದು. ಆದರೆ ಬಲಿಯಾಗುವುದು ಮಾತ್ರ ಮಲೆನಾಡು. ಇಲ್ಲಿನ ಜೀವಿ ಸಂಕುಲ.
    ಈಗಲೇ ಹಲವಾರು ಯೋಜನೆಗಳಿಂದ ಬೆಂದಿದೆ ಮಲೆನಾಡು. ಇನ್ನೆಷ್ಟು ಯೋಜನೆಗಳು ಬೇಕೋ.. ಮಲೆನಾಡಿನ ಒಡಲು ಭೂದೇವಿಯ ಗುಡಿ. ಅದನ್ನು ಹಾಳುಮಾಡುವ ಯತ್ನ ನಡೆಯುತ್ತಿದೆ. ಅಧಿಕಾರ ಶಾಹಿಗಳಿಗೆ ಧಿಕ್ಕಾರ ಹೇಳೋಣ. ಮಲೆನಾಡಿನ ಮಡಿಲಲ್ಲಿ ನನಗೆ ವಾಸಸ್ಥಾನ ನೀಡಿ ಪೋಷಿಸುತ್ತಿರುವಾಕೆಗೆ ಥ್ಯಾಂಕ್ಸ್ ಹೇಳೋಣ.