Sunday, August 19, 2018

ಬನ್ನಿ ನೀರು ಕೊಟ್ಟ ನೆಲದ ಋಣ ತೀರಿಸೋಣ

ಇತಿಹಾಸದ ಪುಟಗಳನ್ನು ಗಮನಿಸಿದಾಗ ಕೊಡಗಿನಷ್ಟು ನತದೃಷ್ಟ ಜಿಲ್ಲೆ ಇನ್ನೊಂದಿಲ್ಲ. ಸಾಲು ಸಾಲು ದುರಂತಹಳು, ನರಮೇಧಗಳನ್ನು, ವಿಕೋಪಗಳನ್ನು ಕಂಡಜಿಲ್ಲೆ. ಅದೆಷ್ಟೋ ರೌದ್ರ ಘಟನೆಗಳಿಗೆ ಸಾಕ್ಷಿಯಾದ ಜಿಲ್ಲೆ. ಇಂತಹ ಕೊಡಗು ಮತ್ತೊಮ್ಮೆ ಪ್ರಕೃತಿ ವಿಕೋಪಕ್ಕೆ ನಲುಗಿದೆ. ಮಳೆಯ ರೌದ್ರ ನರ್ತನಕ್ಕೆ ವಿಲಿ ವಿಲಿ ಒದ್ದಾಡುತ್ತಿದೆ.
ಎಲ್ಲಿ ಭೂರಮೆ ದೇವ ಸನ್ನಿಧಿ
ಬಯಸಿ ಬಿಮ್ಮನೆ ಬಂದಳೋ..
ಎಂದು ಕವಿ ಪಂಜೆ ಮಂಗೇಶರಾಯರಿಂದ ಹೊಗಳಿಸಿಕೊಂಡ ನಾಡು ಕೊಡಗು. ಬೃಹ್ಮಗಿರಿಯಿಂದ ಪುಷ್ಪಗಿರಿವರೆಗೆ ಹಬ್ಬಿದ ನಾಡು, ಸೌಂದರ್ಯದ ಬೀಡು ಎಂದೆಲ್ಲ ಕರೆಸಿಕೊಂಡ ಸ್ಥಳ ಕೊಡಗು. ಕರ್ನಾಟಕದ ಕಾಶ್ಮೀರ, ಕರ್ನಾಟಕದ ಸ್ವಿಡ್ಜರ್ಲೆಂಡ್, ಕಾಫಿಯ ನಾಡು, ಕಿತ್ತಳೆಯ ಬೀಡು ಹೀಗೆ ಹತ್ತು ಹಲವು ಅಭಿದಾನಗಳು ಕೊಡಗಿಗೆ ಇದೆ. ಶೂರರ ನಾಡು, ವೀರರ ಬೀಡು ಎಂದೆಲ್ಲ ಕರೆಸಿಕೊಳ್ಳುತ್ತಿದೆ ಕೊಡಗು. ಭಾರತದ ಸೇನೆಗೆ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಯೋಧರನ್ನು ನೀಡಿದ ಜಿಲ್ಲೆ ಎನ್ನುವ ಹೆಸರೂ ಕೊಡಗಿಗೆ ಇದೆ. ಅತಿ ಹೆಚ್ಚು ಸೈನಿಕ ಅಧಿಕಾರಿಗಳನ್ನೂ ಕೊಟ್ಟ ಜಿಲ್ಲೆ. ಪರಮವೀರಚಕ್ರ ಒಂದನ್ನು ಹೊರತು ಪಡಿಸಿ ಉಳಿದೆಲ್ಲ ಶೌರ್ಯ ಫದಕಗಳೂ ಕೊಡವಿಗೆ ಸಿಕ್ಕಿದೆ. ಕರ್ನಾಟಕಕ್ಕೆ ಸಿಕ್ಕಿರುವ ಎರಡು ಮಹಾವೀರಚಕ್ರ ಪದಕಗಳಲ್ಲಿ ಎರಡೂ ಸಿಕ್ಕಿರುವುದು ಕೊಡಗಿಗೇ. ನಿಸರ್ಗ ಸಂಪತ್ತು, ಪ್ರವಾಸಿ ತಾಣಗಳ ಸಂಖ್ಯೆ ಹೇರಳವಾಗಿದೆ. ನೂರಕ್ಕೂ ಹೆಚ್ಚಿನ ಪ್ರವಾಸಿತಾಣಗಳನ್ನು ಹೊಂದಿದ್ದು ವರ್ಷಂಪ್ರತಿ ಲಕ್ಷಾಂತರ ಜನರು ಕೊಡಗಿನ ಸೌಂದರ್ಯಗಳನ್ನು ಕಣ್ತುಂಬಿಕೊಳ್ಳುತ್ತಾರೆ. ದಕ್ಷಿಣ ಭಾರತದ ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯನ್ನ ಹೊಂದಿರುವ ಜಿಲ್ಲೆ. ಕರ್ನಾಟಕ ಹಾಗೂ ಕೇರಳಗಳ ನಡುವೆ ೪೧೦೨ ಚದರ ಕಿಮಿಗಳಷ್ಟು ವ್ಯಾಪ್ತಿಯಲ್ಲಿ ಹರಡಿರುವ ಪುಟ್ಟ ಜಿಲ್ಲೆ.
ವಿಶೇಷ ಸಂಪ್ರದಾಯ, ವಿಶಿಷ್ಟ ಸಂಸ್ಕೃತಿ, ಆಚರಣೆಗಳನ್ನು ನಡೆಸಿಕೊಂಡು ಬರುತ್ತಿರುವ, ತಮ್ಮದೇ ಆದ ಭಾಷೆಯನ್ನೂ ಚಾಲ್ತಿಯಲ್ಲಿ ಇಟ್ಟುಕೊಂಡು ವಿವಿಧತೆಯ ನಡುವೆಯೂ ಏಕತೆಯನ್ನು ಪ್ರದರ್ಶಿಸುತ್ತಿರುವ ಜಿಲ್ಲೆ ಕೊಡಗು. ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿಯನ್ನು ಪ್ರತಿ ಕುಟುಂಬಗಳೂ ತಮ್ಮದನ್ನಾಗಿ ಮಾಡಿಕೊಂಡು, ಪ್ರತಿ ವರ್ಷ ಕೊಡಗಿನ ಕುಟುಂಬಗಳಲ್ಲೇ ನಡೆಸುತ್ತಿರುವ ಜಿಲ್ಲೆ. ಭಾರತ ಸ್ವತಂತ್ರಗೊಂಡ ನಂತರ ಇದುವರೆಗೂ ಕೊಡಗಿನ ೫೯ ಆಟಗಾರರು ಭಾರತ ಹಾಕಿ ತಂಡಲ್ಲಿ ಆಡಿದ್ದಾರೆ ಎಂದರೆ, ಜಿಲ್ಲೆಯಲ್ಲಿ ಹಾಕಿಯ ಕುರಿತು ಅದೆಷ್ಟು ಪ್ರೀತಿ ಇರಬಹುದು ಎನ್ನುವುದನ್ನು ನೀವೇ ಗಮನಿಸಿ. ಕೊಡಗಿನ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಬಿಡಿ.
ಇತಿಹಾಸದ ಪುಟಗಳಲ್ಲಿ ಇಣುಕಿದಾಗ ಕೊಡಗಿನ ದುರಂತಗಳಲ್ಲಿ ಮೊಟ್ಟ ಮೊದಲು ನಿಲ್ಲುವುದು ಟಿಪ್ಪುವಿನ ದಾಳಿಯ ಸಂದರ್ಭದಲ್ಲಿ. ಕೊಡಗಿನ ವೀರರನ್ನು ಎದುರು ಹಾಕಿಕೊಂಡ ಟಿಪ್ಪು ಸುಲ್ತಾನ ಪದೇ ಪದೆ ಕೊಡವರ ಮೇಲೆ ಯುದ್ಧ ಮಾಡಿ, ಸಾಕಷ್ಟು ಸಾರಿ ಸೋತು, ಕೊನೆಗೊಮ್ಮೆ ಗೆದ್ದು, ಗೆದ್ದ ನಂತರ ಸಾಲು ಸಾಲು ಮಾರಣ ಹೋಮ ನಡೆಸಿದ್ದು, ಅದೆಷ್ಟೋ ಸ್ತ್ರೀಯರ ಮಾನಭಂಗ ಮಾಡಿದ್ದು, ಸಹಸ್ರಾರು ಜನರ ಶಿರಚ್ಛೇಧ ಮಾಡಿದ್ದು, ಸಹಸ್ರ ಸಂಖ್ಯೆಯ ವೀರರನ್ನು ಮತಾಂತರ ಮಾಡಿದ್ದು ಕಣ್ಣ ಮುಂದೆ ಇದೆ. ಕೊಡಗಿನ ದೇವಟ್ಟಿ ಪರಂಬು ಎಂಬಲ್ಲಿ ನಡೆದ ಕೊಡವರ ಹತ್ಯಾಕಾಂಡದಲ್ಲಿ ೪೦ ಸಾವಿರ ಜನರನ್ನು ಹತ್ಯೆ ಮಾಡಿದ್ದ ಘಟನೆಗಳು ಇಂದಿಗೂ ಕೊಡವರ ಮನಸ್ಸಿನಿಂದ ಮರೆತಿಲ್ಲ. ಆ ಸಂದರ್ಭದಲ್ಲಿ ಆ ನಂತರದಲ್ಲಿಯೂ ಕೊಡಗು ಎದುರಿಸಿದ್ದು ದುರಂತಗಳ ಸರಮಾಲೆಯನ್ನೇ.
ಕಾಡು, ಹಸಿರನ್ನೇ ಹಾಸು ಹೊದ್ದಿರುವ ಕೊಡಗು ಸ್ವತಂತ್ರ ಭಾರತದಲ್ಲಿಯೂ ಸಾಕಷ್ಟು ನೋವುಗಳು, ದುರಂತಗಳನ್ನೇ ಎದುರಿಸಿದೆ. ವಿದ್ಯುತ್ ಮಾರ್ಗಗಳಿಗಾಗಿ ಸಮೃದ್ಧ ಕಾಡನ್ನು ಕಳೆದುಕೊಂಡು, ಕೊನೆಗೊಮ್ಮೆ ಈ ಕಾಡಿನ ಸಂರಕ್ಷಣೆಗಾಗಿ ಹೋರಾಟಕ್ಕೆ ಇಳಿದ ಜಿಲ್ಲೆ ಕೊಡಗು. ದೊಡ್ಡ ದೊಡ್ಡ ಹೈಟೆನ್ಶನ್ ವಿದ್ಯುತ್ ಮಾರ್ಗಗಳಿಗಾಗಿ ಅದೆಷ್ಟೋ ಕೊಡವರು ತಮ್ಮ ಜಮೀನುಗಳನ್ನು, ಮನೆಗಳನ್ನು ಕಳೆದುಕೊಂಡಿದ್ದಾರೆ.
ಕೊಡವರನ್ನು ಹೆಚ್ಚು ಕಾಡಿರುವ ಸಮಸ್ಯೆಗಳಲ್ಲಿ ಕೇರಳದಿಂದ ಬರುವ ಮಾಪಿಳ್ಳೆಗಳ ವಲಸೆ ಕೂಡ ಒಂದು. ಈ ವಲಸೆಯಿಂದಲೇ ಜಿಲ್ಲೆಯಲ್ಲಿ ಮತಾಂತರ ಸಮಸ್ಯೆ ತೀವ್ರವಾಗಿದೆ. ಈ ಕಾರಣದಿಂದಲೇ ಕೊಡವಿನಿಂದಲೇ ಕೆಲವು ಆತಂಕಕಾರಿ ಸಂಘಟನೆಗಳೂ ಹುಟ್ಟಿಕೊಂಡು, ಕಾಡುತ್ತಿದೆ. ಬೇರೆ ಬೇರೆ ರಾಜ್ಯಗಳಲ್ಲಿ ನಿಷೇಧಗೊಂಡ ದೇಶ ವಿರೋಧದ ಸಂಘಟನೆಗಳು ಕೊಡಗಿನಲ್ಲಿ ಹೆಜ್ಜೆ ಊರಿದೆ.
ಇದೀಗ ಕೊಡಗಿನಲ್ಲಿ ರೈಲ್ವೆಯದೇ ಸದ್ದು. ಇದುವರೆಗೂ ರೈಲ್ವೆ ಮಾರ್ಗವೇ ಇಲ್ಲದ ಜಿಲ್ಲೆ ಎನ್ನುವ ಖ್ಯಾತಿ ಗಳಿಸಿಕೊಂಡಿದ್ದ ಕೊಡಗಿನಲ್ಲಿ ರೈಲ್ವೆ ಮಾರ್ಗ ನಿರ್ಮಾಣ ಮಾಡುವ ಪ್ರಸ್ತಾವನೆಗಳು ದಡ್ಡವಾಗಿದೆ. ರೈಲ್ವೆ ಮಾರ್ಗ ನಿರ್ಮಾಣ ಮಾಡಲು ಸಮೀಕ್ಷೆಗಳೂ ನಡೆದಿವೆ. ಮೊದಲು ಮಡಿಕೆರಿಗೆ ರೈಲ್ವೆ ಸಂಪರ್ಕ ಕಲ್ಪಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಆದರೆ ಮಡಿಕೆರಿಯ ನಂತರ ಆ ರೈಲ್ವೆ ಸಂಪರ್ಕವನ್ನು ಕೇರಳದ ಕಣ್ಣೂರಿಗೆ ಜೋಡಿಸುವ ಹುನ್ನಾರವೂ ಇದ್ದು, ಈ ಮಾರ್ಗ ನಿರ್ಮಾಣದಿಂದ ಕೊಡಗಿಗೆ ಲಾಭವಾಗುವುದಕ್ಕಿಂತ ಜಾಸ್ತಿ ಕೇರಳಕ್ಕೇ ಆಗಲಿದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಈ ರೈಲ್ವೆ ಮಾರ್ಗಕ್ಕಾಗಿ ಇನ್ನೆಷ್ಟು ಅರಣ್ಯ ನಾಶವಾಆಗಬೇಕೋ? ಇನ್ನೆಷ್ಟು ಕೇರಳಿಗರ ವಲಸೆ ಕೊಡಗಿನ ಕಡೆ ಆಗಬೇಕೋ? ಈ ಕಾರಣದಿಂದಲೇ ಕೊಡಗಿನ ಜನರು ರೈಲ್ವೆ ಮಾರ್ಗವನ್ನು ಸ್ವಾಗತಿಸುವುದಕ್ಕಿಂತ ಹೆಚ್ಚಾಗಿ ವಿರೋಧಿಸುತ್ತಿದ್ದಾರೆ.
ಪ್ರವಾಸೋದ್ಯಮದಿಂದ ಬದುಕನ್ನು ಕಟ್ಟಿಕೊಂಡ ಜಿಲ್ಲೆ ಕೊಡಗು. ಈ ಪ್ರವಾಸೋದ್ಯಮದಿಂದಲೇ ಹಾನಿಗೂ ಜಿಲ್ಲೆ ಒಳಗಾಗಿದೆ. ಜಿಲ್ಲೆಯ ಧಾರಣಾ ಸಾಮರ್ಥ್ಯ ೬ ಲಕ್ಷ. ಆದರೆ ಪ್ರತಿ ವರ್ಷ ಜಿಲ್ಲೆಯ ಪ್ರವಾಸಿ ತಾಣಗಳಿಗಾಗಿ ಬೇರೆಡೆಯಿಂದ ಬರುವ ಪ್ರವಾಸಿಗರು ೬೦ ಲಕ್ಷಕ್ಕೂ ಅಧಿಕ. ಹೀಗೆ ಬಂದವರಂತೂ ಸುಮ್ಮನೆ ಬರುವುದಿಲ್ಲ. ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ತ್ಯಾಜ್ಯಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ. ಪರಿಣಾಮವಾಗಿ ಕೊಡಗಿನ ಪ್ರವಾಸಿ ತಾಣಗಳು ತ್ಯಾಜ್ಯಗಳ ಬೀಡಾಗುತ್ತಿದೆ. ಕೊಡಗಿನ ಪ್ರವಾಸಿ ತಾಣಗಳ ದುಸ್ಥಿತಿಗೆ ಬೆಂಗಳೂರಿನ ಬುದ್ಧಿವಂತರ ಕೊಡುಗೆ ಬಹು ದೊಡ್ಡದಿದೆ.
ಇವೆಲ್ಲವುಗಳ ಜತೆಯಲ್ಲಿ ಗಾಯದ ಮೇಲೆ ಬರೆ ಎಳೆದಂತಾಗಿದೆ ಕೊಡಗಿನ ಸ್ಥಿತಿ. ಕೇರಳದ ಮೇಲೆ ಮುನಿಸಿಕೊಂಡ ವರುಣರಾಯ ಇದೀಗ ಕೊಡಗಿನ ಮೇಲೂ ಸಿಟ್ಟಾಗಿದ್ದಾನೆ. ಕಳೆದೊಂದು ವಾರದಿಂದ ಕೊಡಗಿನಲ್ಲಿ ಎಡಬಿಡದೇ ಮಳೆ ಸುರಿಯುತ್ತಿದೆ. ಜತೆಗೆ ಗಾಆಳಿಯ ಅಬ್ಬರ ಕೂಡ ಕೊಡಗನ್ನು ಹೈರಾಣು ಮಾಡಿದೆ. ಗಾಳಿ, ಮಳೆ, ಪ್ರವಾಹದಿಂದಾಗಿ ಕೊಡಗು ಹೈರಾಣಾಗಿದೆ. ಕೊಡಗಿನ ಗುಡ್ಡಗಳು ನೋಡ ನೋಡುತ್ತಿದ್ದಂತೆಯೇ ಕುಸಿತಕ್ಕೊಳಗಾಗುತ್ತಿದೆ. ಮರ ಗಿಡಗಳು ಬುಡಮೇಲಾಗುತ್ತಿವೆ. ಉಕ್ಕೇರುತ್ತಿರುವ ನದಿಗಳು ಯಾವುದೇ ಬೇಧ-ಭಾವ ಮಾಡದೇ ಎಲ್ಲವನ್ನೂ ಕೊಚ್ಚಿಕೊಂಡು ಹೋಗುತ್ತಿವೆ. ಸಹಸ್ರ ಮನೆಗಳು ನೆಲಕಚ್ಚಿವೆ. ರಸ್ತೆಗಳಂತೂ ನಾಮಾವಶೇಷಗೊಂಡಿವೆ. ಕೆಲವು ಊರುಗಳಂತೂ ಅಸ್ತಿತ್ವವನ್ನೇ ಕಳೆದುಕೊಂಡಿವೆ. ಮಳೆ, ಭೂಕುಸಿತ, ಪ್ರವಾಹಗಳಿಂದ ನಾಪತ್ತೆಯಾದವರ ಸಂಕ್ಯೆ ಲೆಕ್ಕಕ್ಕೆ ಸಿಗುತ್ತಿಲ್ಲ.
ಕೊಡಗಿನಲ್ಲಿ ಈಗ ಎತ್ತ ನೋಡಿದರತ್ತ ನೀರು, ನೀರು, ಬರೀ ನೀರು ಎನ್ನುವ ಪರಿಸ್ಥಿತಿ ಉದ್ಭವವಾಗಿದೆ. ಕೆಂಪು, ಕಂದು ಬಣದ ನದಿಗಳು ರಕ್ಕಸ ಗಾತ್ರವನ್ನು ತಾಳಿ, ಮನೆ, ಜಮೀನುಗಳನ್ನು ಆಪೋಶನ ತೆಗೆದುಕೊಂಡು ಮುನ್ನುಗ್ಗುತ್ತಿವೆ. ಹೀಗೆ ಮುನ್ನುಗ್ಗುವ ಭರದಲ್ಲಿ ಎದುರು ಸಿಗುವ ರಸ್ತೆಗಳು, ಸೇತುವೆಗಳು, ವಾಹನಗಳು, ಮನುಷಷ್ಯರು ಹೀಗೆ ಎಲ್ಲವನ್ನೂ ನುಂಗುತ್ತಿವೆ. ಕೊಡಗಿನ ನಾಪೊಕ್ಲು, ಮಡಿಕೇರಿಯ ಸುತ್ತಮುತ್ತಲ ಎಲ್ಲ ಗ್ರಾಮಗಳು, ಕಾಲೂರು, ಕಗ್ಗೋಡು, ಪೊನ್ನಂಪೇಟೆ, ಕುಶಾನಗರ, ಕಕ್ಕಬ್ಬೆ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆಯ ಅಬ್ಬರ ತೀವ್ರವಾಗಿದೆ. ಕಾಳುಮೆಣಸು, ಕಾಫಿ ಸಂಪೂರ್ಣವಾಗಿ ನೆಲಕಚ್ಚಿದ್ದರೆ ಭತ್ತದ ಗದ್ದೆಗಳ ಪಾಡಂತೂ ಹೇಳುವುದೇ ಬೇಡ ಎನ್ನುವಂತಾಗಿದೆ. ಕೊಡಗಿನವರ ಪ್ರಕಾರ ಮುಂದಿನ ವರ್ಷ ಕಾಫಿ ಹಾಗೂ ಕಾಳುಮೆಣಸಿನ ಬೆಳೆ ತೆಗೆಯುವುದು ಕಷ್ಟ. ರೌದ್ರ ಮಳೆ ಕಾಫಿಯ ರೈತರ ಆದಾಯದ ಮೂಲವನ್ನು ಸಂಪೂರ್ಣವಾಗು ಕೊಚ್ಚಿಕೊಂಡು ಹೋಗಿದೆ. ಕಾವೇರಿ ನದಿಯ ಉಪನದಿಯಾಗಿರುವ (ಕಾವೇರಿ ನದಿಗೆ ಇರುವ ದೊಡ್ಡ ನೀರಿನ ಮೂಲ) ಲಕ್ಷ್ಮಣತೀರ್ಥ, ರಾಮತೀರ್ಥ, ಇತರ ಸಾವಿರಾತು ತೋಡುಗಳು ತುಂಬಿ ಹರಿಯುತ್ತಿದೆ. ಕೊಡಗಿಗೆ ಹೋಗುವ ಮಾರ್ಗಗಳೆಲ್ಲ ಬಂದಾಗಿದೆ. ಹಲವು ಕಡೆಗಳಲ್ಲಿ ಸೇತುವೆ, ರಸ್ತೆಗಳು ಕೊಚ್ಚಿಕೊಂಡು ಹೋಗಿದೆ. ವಿದ್ಯುತ್, ದೂರವಾಣಿ, ಅಂತರ್ಜಾಲಗಳೆಲ್ಲ ಕಾರ್ಯ ನಿಲ್ಲಿಸಿ ವಾರಗಳೇ ಸಂದಿವೆ. ಮಳೆರಾಯನ ಮುನಿಸು ಇನ್ನೂ ತಗ್ಗಿಲ್ಲ.
ಪ್ರಾಕೃತಿಕ ವಿಕೋಪಗಳಲ್ಲಿ ನಲುಗಿರುವ ಕೊಡಗಿಗೆ ಪ್ರತಿಯೊಬ್ಬರ ಸಹಾಯವೂ ಅಗತ್ಯವಿದೆ. ವಾರಾಂತ್ಯದಲ್ಲೋ, ರಜೆಯ ಸಂದರ್ಭದಲ್ಲೋ ದಿನಕಳೆದು, ಸಂಭ್ರಮ, ಸಂತಸವನ್ನು ಆಚರಿಸಲು ಕೊಡಗಿನ ಪ್ರವಾಸಿ ತಾಣಗಳಿಗೆ ಹೋದವರು ಇದೀಗ ತಮ್ಮ ಜವಾಬ್ದಾರಿಯನ್ನು ಅರಿತು, ಕೊಡಗಿಗೆ ಸಹಾಯ ಮಾಡುವ ಅಗತ್ಯವಿದೆ. ಮಂದಾಲಪಟ್ಟಿ, ಇರ್ಪು ಜಲಪಾತ, ಅಬ್ಬಿ ಮುಂತಾದ ಕಡೆಗಳಿಗೆ ಪ್ರವಾಸಕ್ಕೆ ಹೋಗಿ ಕೇಕೆ ಹೊಡೆದ ಪ್ರವಾಸಿಗರೆಲ್ಲ ಕೊಡಗಿನ ಮಳೆಯಲ್ಲಿ ಬದುಕು ಕಳೆದುಕೊಂಡ ನತದೃಷ್ಟರ ಬೆನ್ನಿಗೆ ನಿಲ್ಲುವ ಜರೂರತ್ತಿದೆ. ಬೆಂಗಳೂರಿಗರು ಸೇರಿದಂತೆ ಕೋಟ್ಯಂತರ ಜನರು ಕುಡಿಯುವ ಕಾವೇರಿ ನದಿಯ ನೀರಿನ ಮೂಲ ಕೊಡಗು. ಇಂತಹ ಕೊಡಗು ಇದೀಗ ಪ್ರಕೃತಿಯ ವೈಪರಿತ್ಯಕ್ಕೆ ಸಿಲುಕಿ ವಿಲಿ ವಿಲಿ ಒದ್ದಾಟ ನಡೆಸುತ್ತಿದೆ. ನಾವು ಕುಡಿಯುವ ನೀರಿನ ನೆಲದ ಋಣ ತೀರಿಸಲು ಇದೊಂದು ಸದವಕಾಶ.
ಸರ್ವಸ್ವವನ್ನೂ ಕಳೆದುಕೊಂಡು ಬೀದಿಗೆ ಬೀಳುವಂತಹ ಪರಿಸ್ಥಿತಿಯಲ್ಲಿ ಕೊಡಗಿನ ವೀರರ ಕೈಹಿಡಿಯುವ ಮಹತ್ತರ ಕಾರ್ಯವನ್ನು ಕೈಗೊಳ್ಳಬೇಕಿದೆ. ವರುಣನ ಬಾಧೆಗೆ ಬಲಿಯಾದವರು ತಮ್ಮ ಬದುಕನ್ನು ಮತ್ತೆ ಕಟ್ಟಿಕೊಳ್ಳಲು, ಹೊಸ ಜೀವನವನ್ನು ಮತ್ತೆ ಆರಂಭಿಸಲು, ಕೈಲಾದ ಸಹಾಯವನ್ನು ಒದಗಿಸುವ ಹೊಣೆಗಾರಿಕೆ ಇದೆ. ಪ್ರವಾಸಿ ತಾಣಕ್ಕೆ ಹೋಗಿ ಸಂತೋಷವನ್ನು ಪಡುವಾಗ ಇರುವ ನಮ್ಮ ಉತ್ಸಾಹ, ಆಸಕ್ತಿಯನ್ನು ಇಂತಹ ಅನಿವಾರ್ಯ ಸಂದರ್ಭದಲ್ಲೂ ತೋರಿಸಬೇಕಾದ ಅಗತ್ಯವಿದೆ. ಆಹಾರವನ್ನೋ, ಹಣವನ್ನೋ ಅಥವಾ ಅಗತ್ಯ ಸಾಮಗ್ರಿಗಳನ್ನೋ ಸರ್ಕಾರದ ಮೂಲಕವೋ ಅಥವಾ, ಕೊಡಗಿನ ಪುನರ್ ನಿರ್ಮಾಣಕ್ಕಾಗಿ ಈಗಾಗಲೇ ಮೊದಲ ಹೆಜ್ಜೆ ಇಟ್ಟಿರುವ ಸ್ವಯಂಸೇವಕರ ತಂಡಗಳಿಗೋ ನೀಡುವ ಮೂಲಕ ಕೊಡಗಿಗೆ ಯತ್ಕಿಂಚಿತ್ ಸಹಾಯವನ್ನಾದರೂ ನಾವು ಮಾಡಬೇಕಿದೆ.
ಕೊಡವರು ದುರಂತಗಳನ್ನು ಹೇಗೆ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೋ, ಅದೇ ರೀತಿ ಸಹಾಯ ಮಾಡಿದವರನ್ನು, ಬದುಕು ಕಟ್ಟಿಕೊಟ್ಟವರನ್ನು, ಬದುಕಿಗೆ ಆಸರೆಯಾದವರನ್ನು ಸದಾ ನೆನಪಿನಲ್ಲಿ ಇಟ್ಟುಕೊಂಡು, ಆರಾಧಿಸುತ್ತಾರೆ. ಪದೇ ಪದೆ ದುರಂತಕ್ಕೆ ಈಡಾಗುತ್ತಿರುವ ನತದೃಷ್ಟ ಜಿಲ್ಲೆಯ ಬೆನ್ನಿಗೆ ನಾವು ನಿಲ್ಲೋಣವೇ? ಕೊಡಗಿನ ವೀರರ ಸಹಾಯಕ್ಕೆ ಕೈಜೋಡಿಸೋಣವೇ? ಇಂತಹ ಸಂದರ್ಭದಲ್ಲಿ ಬನ್ನಿ ಕೊಡವರ ಜತೆ ನಿಲ್ಲೋಣ. ಕೊಡವರಿಗೆ ಕೈಲಾದ ಸಹಾಯ ಮಾಡೋಣ. ಕೊಡಗಿನ ಜನಸ್ನೇಹಿಗಳಿಗೆ ಸಹಾಯ ಮಾಡುವ ಮೂಲಕ ಅವರ ಮನಸ್ಸಿನಲ್ಲಿ ಶಾಸ್ವತ ಸ್ಥಾನ ಪಡೆಯೋಣ.





No comments:

Post a Comment