Thursday, August 20, 2015

ಟೀಂ ಇಂಡಿಯಾಗೆ ಟೆಸ್ಟ್

            ಒಂದಾನೊಂದು ಕಾಲದ ಕ್ರಿಕೆಟ್ ಲೋಕದ ನಂಬರ್ 1 ಟೆಸ್ಟ್ ರಾಂಕಿನ ರಾಷ್ಟ್ರ ಭಾರತ ಇದೀಗ ಬಕ್ಕಾಬೋರಲು ಬಿದ್ದಿದೆ. ಒಂದರ ಹಿಂದೆ ಒಂದರಂತೆ ಸೋಲುಗಳನ್ನು ಕಾಣಲು ಆರಂಭಿಸಿದೆ. ಡ್ರಾ ಸಾಧಿಸಿಕೊಳ್ಳುವಂತಹ ಪಂದ್ಯಗಳಲ್ಲಿಯೂ ಸೋಲನ್ನು ಕಾಣುವ ಮೂಲಕ ಮಾನ ಹರಾಜು ಮಾಡಿಕೊಳ್ಳುತ್ತಿದೆ. ಇನ್ನು ವಿದೇಶಿ ನೆಲದಲ್ಲಂತೂ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡರೆ ಸಾಕಪ್ಪಾ ಸಾಕು ಎನ್ನಿಸುವಂತಹ ದಯನೀಯ ಸ್ಥಿತಿಗೆ ತಲುಪಿದೆ. ಇಂತಹ ಸೋಲಿಗೆ ಕಾರಣಗಳನ್ನು ಹುಡುಕಿದರೆ ಅನೇಕ ಸಂಗತಿಗಳು ಹೊರಬೀಳುತ್ತವೆ.
           ದಶಕಗಳ ಹಿಂದೆ ಭಾರತ ಕ್ರಿಕೆಟ್ ತಂಡ ಟೆಸ್ಟ್ ರಾಂಕಿಂಗಿನಲ್ಲಿ ಮೊದಲ ಸ್ಥಾನವನ್ನು ಎಡತಾಕುತ್ತಿತ್ತು. 2007-08ರ ಆಜೂಬಾಜಿನಲ್ಲಿ ಮೊದಲ ಸ್ಥಾನದಲ್ಲಿದ್ದು ನಂತರ ಒಂದೆರಡು ವರ್ಷಗಳ ವರೆಗೂ ಅದೇ ಸ್ಥಾನವನ್ನು ಕಾಪಾಡಿಕೊಂಡಿತ್ತು. ಆದರೆ ಕಳೆದ ನಾಲ್ಕು ವರ್ಷಗಳಿಂದ ಭಾರತದ ಪರಿಸ್ಥಿತಿ ಅಯ್ಯೋ ಪಾಪ ಎನ್ನಿಸಲು ಆರಂಭವಾಗಿದೆ. ಸಾಲು ಸಾಲು ಸೋಲುಗಳು ತಂಡದ ಆತ್ಮಸ್ಥೈರ್ಯವನ್ನೇ ಕಂಗೆಡಿಸಿಬಿಟ್ಟಿದೆ. ಆಷ್ಟ್ರೇಲಿಯಾದಂತಹ ದೈತ್ಯ ಕ್ರಿಕೆಟ್ ತಂಡವನ್ನು ಅದರ ನೆಲದಲ್ಲಿಯೇ ಸೋಲಿಸಿದ್ದ ಭಾರತ ತಂಡ ಇದೇನಾ ಎಂದು ಅನುಮಾನಿಸುವಷ್ಟರ ಮಟ್ಟಿಗೆ ಭಾರತದ ಟೆಸ್ಟ್ ಕ್ರಿಕೆಟ್ ತಳಕಂಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
          ಗಂಗೂಲಿ, ದ್ರಾವಿಡ್, ತೆಂಡೂಲ್ಕರ್, ಲಕ್ಷ್ಮಣ್ ಇವರಂತಹ ದೈತ್ಯರು ಭಾರತೀಯ ತಂಡದಲ್ಲಿ ಇದ್ದಷ್ಟು ಕಾಲ ತಂಡಕ್ಕೆ ಸೋಲೆಂಬುದೇ ಇರುತ್ತಿರಲಿಲ್ಲ. ಸೋಲಿನ ಸಂದರ್ಭದಲ್ಲೆಲ್ಲ ಡ್ರಾ ಆದರೂ ಸಾಧಿಸಿಕೊಳ್ಳುತ್ತಿತ್ತು. ಕನಿಷ್ಟ ಮೂರು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಗೆಲ್ಲುವ ಮೂಲಕ ಟೆಸ್ಟ್ ಕ್ರಿಕೆಟ್ ನ ರಾಜನಾಗಿ ಮೆರೆಯುತ್ತಿತ್ತು. ಆದರೆ ಅಂತಹ ತಂಡ ಇದೀಗ ಸೋಲನ್ನು ತಪ್ಪಿಸಿಕೊಳ್ಳಲಾಗದೇ ವಿದೇಶಿ ನೆಲದಲ್ಲಿ ಮುಗ್ಗರಿಸುತ್ತಿದೆ.
           ಭಾರತ ಕ್ರಿಕೆಟ್ ತಂಡದ ಗುಣಮಟ್ಟ ಚನ್ನಾಗಿಲ್ಲ, ಅನುಭವದ ಕೊರತೆ ಈ ಮುಂತಾದ ಮಾತುಗಳು ಸದಾಕಾಲ ಚಾಲ್ತಿಯಲ್ಲಿದೆ. 2000ದಿಂದ ಆರಂಭಗೊಂಡ ಭಾರತೀಯ ಟೆಸ್ಟ್ ಕ್ರಿಕೆಟ್ ನ ಸುವರ್ಣಯುಗ 2011ರ ವರೆಗೂ ನಿರಾತಂಕವಾಗಿ ಮುಂದುವರಿದಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ. ಇದಕ್ಕೆ ಕಾರಣಗಳು ಹಲವಾರು. ಸೆಹವಾಗ್ ಅವರ ಆರಂಭಿಕ ಆಟ. ಮಧ್ಯಮ ಕ್ರಮಾಂಕದಲ್ಲಿ ಮಾತ್ರವಲ್ಲ ಆಪತ್ತಿನ ಸಂದರ್ಭದಲ್ಲಿ ತಂಡವನ್ನು ಬೆನ್ನಿಗೆ ಕಟ್ಟಿಕೊಂಡು ಆಡುತ್ತಿದ್ದ ರಾಹುಲ್ ದ್ರಾವಿಡ್, ಕ್ರಿಕೆಟ್ ಗಾಡ್ ಸಚಿನ್ ತೆಂಡೂಲ್ಕರ್, ಕಲಾತ್ಮಕ ಆಟಗಾರ ವಿವಿಎಸ್ ಲಕ್ಷ್ಮಣ್, ಸೌರವ್ ಗಂಗೂಲಿ ಅವರುಗಳು ಬ್ಯಾಟಿಂಗಿನ ಮೂಲಕ ಭಾರತ ಟೆಸ್ಟ್ ತಂಡವನ್ನು ರಕ್ಷಣೆ ಮಾಡುತ್ತಿದ್ದರೆ ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್ ಸ್ಪಿನ್ ಮೂಲಕ ಬೌಲಿಂಗ್ ಮುಂದಾಳುಗಳಾಗಿದ್ದರು. ನಡು ನಡುವೆ ಜಹೀರ್ ಖಾನ್ ಕೂಡ ಮಿಂಚುತ್ತಿದ್ದರು. ಜಾವಗಲ್ ಶ್ರೀನಾಥ್ ಕೂಡ ಆ ದಶಕದ ಮೊದಲ ಭಾಗದಲ್ಲಿ ಬೌಲಿಂಗ್ ಸಾರಥ್ಯ ವಹಿಸಿಕೊಂಡಿದ್ದವರೇ. ಆದರೆ ಇಂತಹ ಆಟಗಾರರು ನಿವೃತ್ತಿಯಾದ ನಂತರ ಭಾರತ ತಂಡದಲ್ಲಿ ಕಾಣಿಸಿಕೊಂಡ ಶೂನ್ಯತೆ ಇನ್ನೂ ಭರ್ತಿಯಾಗಿಲ್ಲ ಎನ್ನುವುದು ದುರಂತ.


ಸೂಕ್ತ ಆರಂಭಿಕ ಆಟಗಾರರ ಕೊರತೆ :
          ಭಾರತದ ಟೆಸ್ಟ್ ಇತಿಹಾಸದಲ್ಲಿ ತ್ರಿಶತಕ ದಾಖಲಿಸಿದ ಏಕೈಕ ಆಟಗಾರ ವೀರೇಂದ್ರ ಸೆಹ್ವಾಗ್. ಸ್ಲಿಪ್ ನಲ್ಲಿ ಕ್ಯಾಚ್ ಕೊಟ್ಟು ಔಟಾಗುತ್ತಾರೆ, ಬೇಗನೆ ಔಟಾಗುತ್ತಾರೆ ಈ ಮುಂತಾದ ಅಪವಾದಗಳಿದ್ದರೂ ಕೂಡ ಸೆಹ್ವಾಗ್ ಆಡುತ್ತಿದ್ದಷ್ಟು ಕಾಲ ಭಾರತದ ಟೆಸ್ಟ್ ತಂಡ ಆತ್ತಮ ಆರಂಭವನ್ನು ಪಡೆಯುತ್ತಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ. ಸೆಹ್ವಾಗ್ ಹೊರತು ಪಡಿಸಿದರೆ ಇನ್ನೊಂದು ತುದಿಯಲ್ಲಿ ಸದೃಢ ಆರಂಭಿಕ ಆಟಗಾರನಿರಲಿಲ್ಲ ಎನ್ನುವುದನ್ನು ಬಿಟ್ಟರೆ ತಂಡ ಉತ್ತಮ ಆರಂಭವನ್ನೇ ಪಡೆಯುತ್ತಿತ್ತು. ಆದರೆ ಈಗ ಗಮನಿಸಿದರೆ ಅಂತಹ ಆರಂಭಿಕ ಆಟಗಾರರ ಕೊರತೆಯನ್ನು ತಂಡ ಎದುರಿಸುತ್ತಲೇ ಇದೆ. ಆಡುವ ಕಸುವಿದ್ದರೂ ಸೆಹ್ವಾಹ್ ರನ್ನು ಕಡೆಗಣಿಸಲಾಗಿದೆ. ಮುರುಳಿ ವಿಜಯ್ ಆಸ್ಟ್ರೇಲಿಯಾ ನೆಲಕ್ಕೆ ಮಾತ್ರ ಸೀಮಿತರಾಗಿದ್ದಾರೆ. ಇನ್ನು ಶಿಖರ್ ಧವನ್ ಒಂದು ಪಂದ್ಯದಲ್ಲಿ ಶತಕ ಭಾರಿಸಿ ನಾಲ್ಕು ಪಂದ್ಯದಲ್ಲಿ ಎರಡಂಕಿ ಮೊತ್ತ ಬಾರಿಸಲು ತಿಣುಕಾಡುತ್ತಾರೆ. ಹೊಸ ಹುಡುಗರ ಪೈಕಿ ಕೆ. ಎಲ್. ರಾಹುಲ್ ಭರವಸೆ ಮೂಡಿಸಿದ್ದಾರಾದರೂ ಅನುಭವ ಸಾಲದು. ರಹಾನೆ, ರೋಹಿತ್ ಶರ್ಮಾ ಅವರಂತಹ ಆಟಗಾರರು ಆಗೀಗ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಪ್ರಯೋಗಕ್ಕೆ ಬಲಿಯಾಗುತ್ತಿದ್ದಾರೆ. ಇಂತಹ ಅಪಸವ್ಯಗಳಿಂದಾಗಿ ಭಾರತ ಟೆಸ್ಟ್ ತಂಡಕ್ಕೆ ಉತ್ತಮ ಆರಂಭವೇ ದೊರಕುತ್ತಿಲ್ಲ.

ನಿರ್ವಹಣೆ ಕೊರತೆಯಲ್ಲಿ ಮಧ್ಯಮಕ್ರಮಾಂಕ :
          ಕೆಲವು ವರ್ಷಗಳ ಹಿಂದೆ ಭಾರತದ ಮಧ್ಯಮ ಕ್ರಮಾಂಕವನ್ನು ಗಮನಿಸಿ. ಒನ್ ಡೌನ್ ಆಟಗಾರ ರಾಹುಲ್ ದ್ರಾವಿಡ್ ಸದಾಕಾಲ ತಂಡದ ಆಪದ್ಬಾಂಧವನಾಗಿ ರಕ್ಷಣೆಗೆ ಧಾವಿಸುತ್ತಿದ್ದ. ನಂತರ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ತಂಡವನ್ನು ಉಳಿಸುತ್ತಿದ್ದ. ಇಷ್ಟರ ಜೊತೆಗೆ ಪಿಳಿ ಪಿಳಿ ಕಣ್ಣು ಬಿಡುತ್ತ ಗಂಗೂಲಿ ಕೂಡ ರಕ್ಷಣೆ ಮಾಡುತ್ತಿದ್ದ. ಇವರೆಲ್ಲರೂ ಫೇಲಾದರು ಎಂದರೆ ಅವನೊಬ್ಬನಿದ್ದ ವಿವಿಎಸ್. ಲಕ್ಷ್ಮಣ್. ಎಂತಹ ತಂಡವೇ ಇರಲಿ, ಬಾಲಂಗೋಚಿಗಳನ್ನು ಕಟ್ಟಿಕೊಂಡಾದರೂ ಸರಿ ತಂಡವನ್ನು ದಡ ಮುಟ್ಟಿಸುತ್ತಿದೆ. ಆದರೆ ಈಗ ಏನಾಗಿದೆ ನೋಡಿ. ಭಾರತ ಟೆಸ್ಟ್ ತಂಡದ ಮಧ್ಯಮ ಕ್ರಮಾಂಕದಲ್ಲಿ ಸಾಕಷ್ಟು ಹೆಸರು ಗಳಿಸಿದ ಆಟಗಾರರೇ ಇದ್ದಾರೆ. ಕೋಹ್ಲಿ, ಪೂಜಾರಾ, ರಹಾನೆ, ರೋಹಿತ್ ಶರ್ಮಾ ಅವರಂತಹ ಆಟಗಾರರು ಇದ್ದಾರೆ. ಇವರ ಪೈಕಿ ವಿರಾಟ್ ಕೋಹ್ಲಿ ಸಾಕಷ್ಟು ಚನ್ನಾಗಿ ಆಡುತ್ತಿದ್ದಾರೆ. ಆದರೆ ಇದೀಗ ನಾಯಕನ ಅವತಾರ ತೊಟ್ಟಿರುವ ಕೋಹ್ಲಿಯಲ್ಲಿ ಏಕದಿನದ ಆಟದ ಅನುಭವ ಸಾಕಷ್ಟಿದೆ. ಅದು ಟೆಸ್ಟ್ ಆಟಕ್ಕೆ ಸಾಲದು. ಅಲ್ಲದೇ ಕೋಹ್ಲಿಯ ಸಿಟ್ಟಿನ ಮನೋಭಾವ ಕೂಡ ಟೆಸ್ಟ್ ಪಂದ್ಯಕ್ಕೆ ಹಿಡಿಸುವುದಿಲ್ಲ. ಟೆಸ್ಟ್ ಏನಿದ್ದರೂ ಶಾಂತ ಸ್ವಭಾವವನ್ನು ಬಯಸುತ್ತದೆ. ಈ ನಿಟ್ಟಿನಲ್ಲಿ ಕೊಹ್ಲಿ ಇನ್ನೂ ಪಳಗಬೇಕಾದದ್ದು ಸಾಕಷ್ಟಿದೆ.
            ದ್ರಾವಿಡ್ ನಂತರ ಯಾರು ಎಂಬ ಪ್ರಶ್ನೆ ಉದ್ಭವವಾದಾಗ ಎಲ್ಲರ ಕಣ್ಣಿಗೆ ಬಿದ್ದಿದ್ದು ಚೆತೆಶ್ವರ ಪೂಜಾರ. ಅದಕ್ಕೆ ತಕ್ಕಂತೆ ಪೂಜಾರಾ ಟೆಸ್ಟ್ ಪಂದ್ಯದಲ್ಲಿ ಸ್ವದೇಶದಲ್ಲಿ ಯಾವಾಗ ಶತಕಗಳ ಮೇಲೆ ಶತಕ ಬಾರಿಸಿದರೋ ತಂಡಕ್ಕೆ ಮತ್ತೊಬ್ಬ ದ್ರಾವಿಡ್ ಸಿಕ್ಕ ಎಂದುಕೊಂಡವರು ಹಲವರು. ದ್ರಾವಿಡ್ ಸಾಧನೆಯನ್ನೇ ಮರೆಯುವಂತೆ ಹುಯ್ಯಲಿಟ್ಟು ಪೂಜಾರಾನನ್ನು ಆಕಾಶಕ್ಕೆ ಏರಿಸಿದವರು ಮಾಧ್ಯಮದ ಜನರು. ಆದರೆ ಅದೇ ಪೂಜಾರಾ ವಿದೇಶಿ ನೆಲದಲ್ಲಿ ಒಂದಂಕಿ, ಎರಡಂಕಿಗೆ ಔಟಾಗತೊಡಗಿದಾಗ ಮಾತ್ರ ಎಂತಹ ಆಟಗಾರನನ್ನು ದ್ರಾವಿಡ್ ಗೆ ಹೋಲಿಸಿದೆವು ಛೇ ಎಂದುಕೊಂಡವರು ಹಲವರು. ಚೆತೇಶ್ವರ ಪೂಜಾರರಲ್ಲಿ ಪ್ರತಿಭೆಯಿದೆ. ಆದರೆ ವಿದೇಶಿ ನೆಲದಲ್ಲಿ ಈ ಪ್ರತಿಭೆ ಸೋತು ಸುಣ್ಣವಾಗುತ್ತಿದೆ. ಸ್ವದೇಶಕ್ಕಷ್ಟೇ ಸೀಮಿತವಾಗಿರುವ ಈ ಪ್ರತಿಭೆ ವಿದೇಶದ ನೆಲದಲ್ಲಿ ಉತ್ತಮವಾಗಿ ಆಡಿದಾಗ ಮಾತ್ರ ತಂಡಕ್ಕೆ ನಂಬಿಕಸ್ಥನಾಗಬಲ್ಲ.
             ದ್ರಾವಿಡ್ ಗರಡಿಯಲ್ಲಿ ಪಳಗಿರುವ ಅಜಿಂಕ್ಯಾ ರಹಾನೆಗೆ ಪ್ರತಿಭೆಯಿದೆ. ಪಂದ್ಯದಲ್ಲಿ ದೀರ್ಘಕಾಲ ನೆಲಕಷ್ಷಿ ಆಡಬಲ್ಲ ಸಾಮರ್ಥ್ಯವೂ ಇದೆ. ಆದರೆ ನಾಯಕನ ಅಥವಾ ತಂಡದ ನಿರ್ಧಾರಕ್ಕೆ ಬಲಿಯಾಗಬೇಕಾಗುತ್ತದೆ. ಒಮ್ಮೆ ಆರಂಭಿಕನಾಗಿ, ಇನ್ನೊಮ್ಮೆ ಒನ್ ಡೌನ್, ಮತ್ತೊಮ್ಮೆ ಸೆಕೆಂಡ್ ಡೌನ್, ಐದನೇ ಕ್ರಮಾಂಕ, ಆರನೇ ಕ್ರಮಾಂಕ ಹೀಗೆ ಕ್ರಮಾಂಕ ಬದಲಾವಣೆಯ ಪ್ರಯೋಗದಿಂದಾಗಿ ರಹಾನೆಯ ಆಟವೇ ಹಾಳಾಗುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ದ್ರಾವಿಡ್ ಗರಡಿಯಲ್ಲಿ ಪಳಗಿದ ಆಟಗಾರ ಎಂಬ ಮಾತ್ರಕ್ಕೆ ದ್ರಾವಿಡ್ ಹೇಗೆ ವಿವಿಧ ಪ್ರಯೋಗಗಳಿಗೆ ಬಲಿಯಾದರೋ ಅದೇ ರೀತಿ ರಹಾನೆಯನ್ನೂ ಪ್ರಯೋಗಕ್ಕೆ ಒಳಪಡಿಸುತ್ತಿರುವುದು ಸರಿಯಲ್ಲ. ರಹಾನೆಗೆ ಸೂಕ್ತವೆನ್ನಿಸಿದ ಕ್ರಮಾಂಕದಲ್ಲಿ ಆಡಲು ಬಿಟ್ಟರೆ ಮುಂದಿನ ದಿನಗಳಲ್ಲಿ ಆತ ಖಂಡಿತವಾಗಿಯೂ ಭಾರತ ಟೆಸ್ಟ್ ತಂಡದ ಆಪದ್ಭಾಂಧವನಾಗಲು ಸಾಧ್ಯವಿದೆ.
            ರೋಹಿತ್ ಶರ್ಮಾ ಬಗ್ಗೆ ಹೇಳುವುದಕ್ಕಿಂತ ಹೇಳದೇ ಇರುವುದೇ ಒಳ್ಳೆಯದು. ಕಾಮೆಂಟರಿ ಹೇಳುವವರ ಬಾಯಲ್ಲಿ ರೋಹಿತ್ ಒಬ್ಬ ಪ್ರತಿಭೆಯ ಖನಿ. ಆದರೆ ಐಪಿಎಲ್, ಹಾಗೂ ಟಿ20 ಪಂದ್ಯಗಳಲ್ಲಿ ಮಾತ್ರ ಸದಾ ಫಾರ್ಮಿನಲ್ಲಿರುವ ರೋಹಿತ್  ಏಕದಿನ ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ ಪಂದ್ಯಗಳಿಗಿಂತ ಆಡದೇ ಇರುವ ಪಂದ್ಯಗಳೇ ಅಧಿಕ. ಟೆಸ್ಟ್ ಪಂದ್ಯಗಳಲ್ಲಂತೂ ಪ್ರಥಮ ಪಂದ್ಯದಲ್ಲಿ ಶತಕ ಬಾರಿಸಿದ್ದೇ ಸಾಧನೆ. ಆ ನಂತರದ ಎಲ್ಲ ಪಂದ್ಯಗಳಲ್ಲಿಯೂ ರೋಹಿರ್ ಟುಸ್ ಪಟಾಕಿಯೇ. ಇಂತಹ ಆಟಗಾರರಿಗೆ ಪದೇ ಪದೆ ಅವಕಾಸಕೊಡುವುದಕ್ಕಿಂತ ಕೇದಾರ್ ಜಾಧವ್, ಕರುಣ್ ನಾಯರ್, ಮನೀಶ್ ಪಾಂಡೆ ಅವರಂತಹ ಆಟಗಾರರಿಗೆ ಅವಕಾಶ ಕೊಟ್ಟು ನೋಡುವುದು ಉತ್ತಮ.
       
ಅವಾಂತರಕ್ಕೆಲ್ಲ ಧೋನಿಯೇ ಹೊಣೆಯೇ?
             ಹೀಗೊಂದು ಅನುಮಾನ ಎಲ್ಲರಲ್ಲೂ ಕಾಡಿದರೆ ತಪ್ಪಾಗಲಿಕ್ಕಿಲ್ಲ. ಧೋನಿ ಭಾರತ ತಂಡದ ಕ್ಯಾಪ್ಟನ್ ಆಗುವ ಮೊದಲು ತಂಡಕ್ಕೆ ಖಾಯಂ ಕೀಪರ್ ಇರಲಿಲ್ಲ ಎನ್ನುವುದು ನಿಜ. ಪಾರ್ಟ್ ಟೈಂ ಆಗಿದ್ದ ದ್ರಾವಿಡ್ ಆಗೀಗ ಕೀಪಿಂಗ್ ಕೆಲಸ ಮಾಡುತ್ತಿದ್ದ. ಜೊತೆಗೆ ಅಜಯ್ ರಾತ್ರ, ಪಾರ್ಥಿವ್ ಪಟೇಲ್ ಮುಂತಾದವರು ಅನೇಕ ಪಂದ್ಯಗಳನ್ನು ಆಡಿದ್ದರೂ ರೆಗ್ಯೂಲರ್ ಕೀಪರ್, ಬ್ಯಾಟ್ಸಮನ್ ಆಗಿ ನೆಲೆನಿಂತು ತಂಡದ ಸಾರಥ್ಯವನ್ನೂ ವಹಿಸಿಕೊಂಡಿದ್ದು ಧೋನಿ. ಏಕದಿನ ಹಾಗೂ ಟಿ20ಯಲ್ಲಿ ಧೋನಿಯ ಸಾಧನೆ ಆಕಾಶದೆತ್ತರ. ಆದರೆ ಟೆಸ್ಟ್ ನಲ್ಲಿ ಮಾತ್ರ ಅಷ್ಟಕ್ಕಷ್ಟೆ. ತನ್ನ ಚಾಣಾಕ್ಷತೆಯಿಂದ ಆರಂಭಿಕ ದಿನಗಳಲ್ಲಿ ಉತ್ತಮ ಸಾಧನೆಗೆ ಕಾರಣವಾದ ಧೋನಿ ಕೊನೆ ಕೊನೆಗೆ ತನ್ನ ವಿಫಲ ಪ್ರಯೋಗದಿಂದಾಗಿಯೇ ಇಂದಿನ ಕಳಪೆ ಸಾಧನೆಗೂ ಕಾರಣ ಎಂದರೆ ತಪ್ಪೇನಲ್ಲ ಬಿಡಿ. ತನ್ನ ನಂಬಿಗಸ್ತರು ಎನ್ನುವ ಕಾರಣಕ್ಕೆ ಕೆಲಸಕ್ಕೆ ಬಾರದ ರವೀಂದ್ರ ಜಡೇಜಾ, ಅಶ್ವಿನ್ ಅವರನ್ನು ಪದೇ ಪದೆ ಟೆಸ್ಟ್ ಪಂದ್ಯಗಳಲ್ಲಿ ಅವಕಾಶ ಕೊಟ್ಟ. ಟೆಸ್ಟ್ ನಲ್ಲಿ ವಿಫಲ ಎಂಬ ಅಪಖ್ಯಾತಿಯಿದ್ದರೂ ಸುರೇಶ್ ರೈನಾ ತಂಡದಲ್ಲಿ ಸ್ಥಾನ ಪಡೆದ. ಬದಲಾಗಿ ಉತ್ತಮ ಆಟ ಆಡುತ್ತಿದ್ದ ಗೌತಮ್ ಗಂಭೀರ್, ಸೆಹ್ವಾಗ್, ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಅವರನ್ನು ತಂಡದಿಂದ ದೂರವಿಟ್ಟ ಎನ್ನುವ ಆರೋಪವನ್ನೂ ಮುಡಿಗೇರಿಸಿಕೊಂಡಿರುವುದು ಸುಳ್ಳಲ್ಲ. ಇಂತಹ ವಿಫಲ ಪ್ರಯೋಗಗಳಿಂದ ಧೋನಿ ಕೊನೆಗೆ ತಂಡದ ಸಾರಥ್ಯ ಮಾತ್ರವಲ್ಲಿ ತಂಡದಿಂದಲೂ ಹೊರ ಬಿದ್ದ. ಕೆಲವು ಗೆಲುವುಗಳನ್ನು ಕಂಡಿದ್ದರೂ ವಿದೇಶದಲ್ಲಿ ಸತತವಾಗಿ ಸೋಲುಗಳನ್ನು ಅನುಭವಿಸಿದ್ದು ಧೋನಿಗೆ ಮುಳುವಾಯಿತು. ಪ್ರತಿಭೆಯಿದ್ದ ಸಂಜೂ ಸ್ಯಾಮ್ಸನ್, ವೃದ್ಧಿಮಾನ್ ಸಾಹಾ ಅವರಂತಹ ಆಟಗಾರರಿಗೆ, ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಗಳಿಗೆ ಹೆಚ್ಚುವಿಯಾಗಿ ತಂಡದಲ್ಲಿ ಸೇರಿಸಿಕೊಂಡು ಆರಂಭಿಕರೋ ಅಥವಾ ಇನ್ಯಾವುದೋ ಸ್ಥಾನದಲ್ಲಿ ಆಡಿಸುವ ಮೂಲಕ ಅವರನ್ನು ಬೆಳೆಸಬಹುದಾಗಿದ್ದರೂ ಅವರೆಲ್ಲರನ್ನು ದೂರವಿಟ್ಟ ಎನ್ನುವ ಆರೋಪಗಳು ಎಲ್ಲರ ಬಾಯಲ್ಲಿ ಕೇಳಿಬರುತ್ತಲಿದೆ.

ಮಾಗಬೇಕಿರುವ ಸ್ಪಿನ್ನರುಗಳು :
            ಅನಿಲ್ ಕುಂಬ್ಳೆಯ ನಂತರದ ದಿನಗಳಲ್ಲಿ ಭಾರತದ ಸ್ಪಿನ್ನರುಗಳು ಹೆಸರು ಗಳಿಸಲೇ ಇಲ್ಲ. ಕುಂಬ್ಳೆ ಸಮಕಾಲೀನರಾಗಿ ಖ್ಯಾತಿ ಪಡೆದ ಹರ್ಭಜನ್ ಸಿಂಗ್ ನಂತರದ ದಿನಗಳಲ್ಲಿ ಫಾರ್ಮ್ ಕಳೆದುಕೊಂಡರು. ಅಷ್ಟೇ ಅಲ್ಲ ತಂಡದಿಂದಲೂ ಹೊರಬಿದ್ದಿದ್ದರು. ಇದೀಗ ಮತ್ತೆ ತಂಡಕ್ಕೆ ವಾಪಾಸಾಗಿದ್ದರೂ ಮೊದಲಿನ ಚಾರ್ಮ್ ಉಳಿದಿಲ್ಲ. ಅಶ್ವಿನ್ ಇದ್ದವರ ಪೈಕಿ ಪರವಾಗಿಲ್ಲ. ಆದರೂ ಅಗತ್ಯವಿದ್ದಾಗ ವಿಫಲರಾಗುತ್ತಾರೆ ಎನ್ನುವ ಆರೋಪವಿದೆ. ಮಿಶ್ರಾರಲ್ಲಿ ಪ್ರತಿಭೆಯಿದ್ದರೂ ಅವರನ್ನು ಕಡೆಗಣಿಸಲಾಗಿತ್ತು. ಇದೀಗ ಅವಕಾಶ ಸಿಕ್ಕಿರುವುದು ಉತ್ತಮ ಬೆಳವಣಿಗೆ. ಓಝಾರಿಗೆ ಇನ್ನೊಂದು ಅವಕಾಶ ನೀಡಬಹುದು. ಆದರೆ ರವೀಂದ್ರ ಜಡೇಜಾ ಅಗತ್ಯವಿಲ್ಲ. ಬದಲಾಗಿ ಶ್ರೇಯಸ್ ಗೋಪಾಲ್, ಅಕ್ಷರ್ ಪಟೇಲ್, ಪರ್ವೇಜ್ ರಸೂಲ್ ರಂತಹ ಸ್ಪಿನ್ನರ್ ಗಳನ್ನು ಬೆಳೆಸಬಹುದಾಗಿದೆ.

ವೇಗದ ಬೌಲರ್ ಗಳಿಗೆ ಅನುಭವದ ಕೊರತೆ :
           ಸದಾಕಾಲ ಗಾಯಗೊಂಡೇ ಇರುವ ಜಾಹೀರ್ ಖಾನ್ ಇನ್ನು ಕ್ರಿಕೆಟ್ ಗೆ ಮರಳಿದಂತೆಯೇ. ಅವರ ನಂತರ ಮುಂದಾಳುವಾಗುವ ನೆಹ್ರಾ ನಿರ್ವಹಣೆ ಕೊರತೆಯಿಂದ ಬಳಲಿದರು. ಇಶಾಂತ್ ಶರ್ಮಾ ಕೆಲವು ಪಂದ್ಯಗಳಲ್ಲಿ ಮಾತ್ರ ಉತ್ತಮವಾಗಿ ಬೌಲಿಂಗ್ ಮಾಡುತ್ತಾರೆ. ತಮ್ಮ ಉದ್ದದ ಕೂದಲಿಗೆ ಕೊಟ್ಟ ಗಮನವನ್ನು ಬೌಲಿಂಗಿಗೆ ಕೊಟ್ಟಿದ್ದರೆ ಇನ್ನಷ್ಟು ಪರಿಣಾಮಕಾರಿಯಾಗುತ್ತಿದ್ದರು. ವೇಗದ ಬೌಲಿಂಗಿಗೆ ಗಮನ ಕೊಡುವ ವರುಣ್ ಆರನ್ ಹಾಗೂ ಉಮೇಶ್ ಯಾದವ್ ಇನ್ನಷ್ಟು ಮಾಗಿದರೆ ಉತ್ತಮ ಆಟ ಸಾಧ್ಯವಿದೆ.

            ಕ್ರೀಡಾ ಜ್ಯೋತಿ (ಬೇಕನ್) ಒಂದು ಕೈಯಿಂದ ಇನ್ನೊಂದು ಕೈಗೆ ಬದಲಾವಣೆಯಾಗುತ್ತಲೇ ಇರಬೇಕು. ಒಬ್ಬನೇ ವ್ಯಕ್ತಿ ಎಷ್ಟು ದೂರ ಅದನ್ನು ಕೊಂಡೊಯ್ಯಲು ಸಾಧ್ಯ? ಆದರೆ ಭಾರತ ಕ್ರಿಕೆಟ್ ತಂಡದಲ್ಲಿ ಬೇಕನ್ ಬದಲಾವಣೆ ಆಗಲೇ ಇಲ್ಲ. ಸೌರವ್ ಗಂಗೂಲಿಯಿಂದ ಆರಂಭಗೊಂಡ ನಿವೃತ್ತಿಯ ಕುಂಬ್ಳೆ, ದ್ರಾವಿಡ್, ಲಕ್ಷ್ಮಣ್, ತೆಂಡೂಲ್ಕರ್ ಮೂಲಕ ವರ್ಷಕ್ಕೊಬ್ಬರಂತೆ ನಿವೃತ್ತಿಯ ಹಾದಿಯನ್ನು ಹಿಡಿದರು. ಈ ಆಟಗಾರರಿಗೆ ಸಮರ್ಥವಾಗಿ ಇನ್ನೊಬ್ಬ ಆಟಗಾರ ಹುಟ್ಟಿಕೊಳ್ಳಲೇ ಇಲ್ಲ. ಅಂತಹ ಆಟಗಾರರನ್ನು ಬೆಳೆಸುವ ಕಾರ್ಯಕ್ಕೆ ಬಿಸಿಸಿಐ ಕೂಡ ಮುಂದಾಗಲಿಲ್ಲ. ಪರಿಣಾಮವಾಗಿ ಭಾರತದ ಟೆಸ್ಟ್ ಕ್ರಿಕೆಟ್ ತಂಡ ಇಂದು ಹೀನಾಯ ಸ್ಥಿತಿಗೆ ತಲುಪಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
             ದಶಕದ ಹಿಂದೆ ಭಾರತ ತಂಡದಲ್ಲಿ ಒಂದೆರಡು ಸ್ಥಾನಗಳಲ್ಲಿ ಕೊರತೆಯಿತ್ತು. ಆಗ ಬೇರೆ ಯಾರಾದರೂ ಉತ್ತಮ ಆಟಗಾರನಿಗೆ ಅವಕಾಶ ಕೊಟ್ಟಿದ್ದರೆ ಇಂದಿನ ಇಂತಹ ದುರಂತದ ಸ್ಥಿತಿ ಕೊಂಚ ಕಡಿಮೆಯಾಗುತ್ತಿತ್ತೇನೋ. ಈಗ ತಂಡದಲ್ಲಿ ಇರುವ ಬಹುತೇಕರು 28-30 ವರ್ಷದ ಆಜೂಬಾಜಿನಲ್ಲಿದ್ದಾರೆ. ಒಂದಿಬ್ಬರು 22 ರಿಂದ 26 ವರ್ಷದ ಎಡಬಲದಲ್ಲಿದ್ದಾರೆ. ಹೀಗಿದ್ದಾಗ ತಂಡದಲ್ಲಿ ಕೆಲವು ಪ್ರಯೋಗ ಮಾಡಲೇಬೇಕು. 18 ರಿಂದ 20 ವರ್ಷದೊಳಗಿನ ಯುವ ಆಟಗಾರರಿಗೆ ಅಪರೂಪಕ್ಕಾದರೂ ಅವಕಾಶ ನೀಡಲೇಬೇಕು. ಒಬ್ಬ ಸಂಜೂ ಸ್ಯಾಮ್ಸನ್, ಕರುಣ್ ನಾಯರ್, ಮನೀಶ್ ಪಾಂಡೆ, ಕೇದಾರ ಜಾಧವ್ ಮಂದೀಪ್ ಸಿಂಗ್ ಅವರಂತಹ ಆಟಗಾರರಿಗೆ ಆಗೀಗ ಅವಕಾಶ ಕೊಡುವ ಮೂಲಕ ಅಗತ್ಯ ಬಿದ್ದಾಗ, ಯಾರಾದರೂ ದಿಢೀರ್ ನಿವೃತ್ತಿ ಘೋಷಿಸಿದಾಗ ಅನುಕೂಲಕ್ಕೆ ಬರುತ್ತಾರೆ.
             ಆಷ್ಟ್ರೇಲಿಯಾ ತಂಡವನ್ನು ಗಮನಿಸಿ. ಅಲ್ಲಿ ತಂಡದ ಕ್ಯಾಪ್ಟನ್ ಆಗುತ್ತಾನೆ ಎಂದೇ ಆಟಗಾರನನ್ನು ರೂಪಿಸುತ್ತಾರೆ. ಸ್ಟೀವ್ ವಾ ಇದ್ದಾಗಲೇ ಪಾಂಟಿಂಗ್ ರನ್ನು ಕ್ಯಾಪ್ಟನ್ ರೀತಿ ಬೆಳೆಸಿದರು. ಪಾಂಟಿಂಗ್ ಕಾಲದಲ್ಲಿ ಮೈಕಲ್ ಕ್ಲಾರ್ಕ್ ಅವರನ್ನು ಬೆಳೆಸಿದರು. ಕ್ಲಾರ್ಕ್ ಕಾಲದಲ್ಲೇ ಸ್ಟೀವನ್ ಸ್ಮಿತ್ ಅವರನ್ನು ಬೆಳೆಸಿದ್ದರು. ಇದೀಗ ಕ್ಲಾರ್ಕ್ ನಿವೃತ್ತಿಯಾಗಿದ್ದಾರೆ. ಆದರೆ ಸ್ಟೀವನ್ ಸ್ಮಿತ್, ಕ್ಲಾರ್ಕ್ ಜಾಗವನ್ನು ಸಮರ್ಥವಾಗಿ ನಿಭಾಯಿಸುತ್ತಾರೆ. ಅಂತಹ ವಾತಾವರಣ ಭಾರತ ಕ್ರಿಕೆಟ್ ತಂಡದಲ್ಲಿಯೂ ರೂಪುಗೊಳ್ಳಬೇಕಿದೆ. ಹೀಗಾದಾಗ ಮಾತ್ರ ತಂಡದಲ್ಲಿ ಶೂನ್ಯಭಾವ ಕಾಡುವುದನ್ನು ತಡೆಯಬಹುದಾಗಿದೆ. ಅದೇನೇ ಇರಲಿ ಭಾರತ ತಂಡದಲ್ಲಿ ಇರುವವರೆಲ್ಲ ಯುವಕರು. ಅನುಭವವನ್ನು ಇದೀಗತಾನೆ ಪಡೆದುಕೊಳ್ಳುತ್ತಿದ್ದಾರೆ. ಇನ್ನೂ ಕೆಲವು ಪಂದ್ಯಗಳು ಬೇಕಾಗಬಹುದು. ಆದರೆ ಒಮ್ಮೆ ಅನುಭವ ಪಡೆದು ಲಯಕ್ಕೆ ಮರಳಿದರೆ ಮಾತ್ರ ಉತ್ತಮ ಫಲಿತಾಂಶವನ್ನು ನೀಡಬಲ್ಲರು. ಇನ್ನೊಂದು ದಶಕಗಳ ಕಾಲ ಭಾರತದ ಕ್ರಿಕೆಟ್ ತಂಡಕ್ಕೆ ಉತ್ತಮ ಭವಿಷ್ಯವಿದೆ. ಆದರೆ ಕ್ರಿಕೆಟ್ ಬೇಕನ್ ಅನ್ನು ಸದಾಕಾಲು ಮುಂದುವರಿಯುವಂತೆ ನೋಡಿಕೊಂಡಾಗ ಮಾತ್ರ ಗೆಲುವಿನ ಸರಣಿಯನ್ನೂ ಮುಂದುವರಿಸಬಹುದು. ಇಲ್ಲವಾದಲ್ಲಿ ಸಾಲು ಸಾಲು ಸೋಲು ಸದಾಕಾಲ ಇದ್ದರೂ ಅಚ್ಚರಿ ಪಡಬೇಕಿಲ್ಲ ಬಿಡಿ.            

No comments:

Post a Comment