Monday, July 14, 2014

ಗಣಪಜ್ಜಿಯ ಹಾಡುಗಳು-3

        ಗಣಪಜ್ಜಿಯ ಕುರಿತು ಎರಡು ಕಂತುಗಳನ್ನು ಈಗಾಗಲೇ ಬರೆದಿದ್ದೇನೆ. ಮೂರನೇ ಕಂತು ಬರೆಯದಿದ್ದರೆ ಮನಸ್ಸು ತಡೆಯಲಾರದೇನೋ ಎಂದುಕೊಂಡು ಬರೆಯಲು ಕುಂತಿದ್ದೇನೆ. ಗಣಪಜ್ಜಿಯ ಬಾಯಿಂದ ಕೇಳಿದ ಹಾಡುಗಳನ್ನು ನಾನು ಹಾಗೂ ಸಂಜಯ ಬರೆದುಕೊಂಡು ಬಂದಿದ್ದೇವೆ ಎಂದು ಹೇಳಿದ್ದೆನಷ್ಟೆ. ಇನ್ನೂ ಹಲವು ಹಾಡುಗಳು ನನ್ನಲ್ಲಿ ಬಾಕಿ ಉಳಿದುಬಿಟ್ಟಿವೆ. ಮೊನ್ನೆ ತಾನೆ ಸಂಜಯ ಸಿಕ್ಕಿದ್ದ. ನಾನು ಗಣಪಜ್ಜಿಯ ಹಾಡುಗಳನ್ನು ಬ್ಲಾಗುಗಳ ಮೂಲಕ ಬರೆದ ವಿಷಯವನ್ನು ಅವನ ಮುಂದಿಟ್ಟೆ. ಖಂಡಿತ ಒಳ್ಳೆಯ ಕೆಲಸ. ಅದನ್ನು ಮುದ್ದಾಂ ಮಾಡು ಎಂದು ಹಾರೈಸಿದ್ದಲ್ಲದೇ ತನ್ನ ಬಳಿ ಇರುವ ಹಾಡಿನ ಸಂಗ್ರಹವನ್ನೂ ತಂದುಕೊಡುವ ಭರವಸೆಯನ್ನು ನೀಡಿದ್ದಾನೆ. ಆತನಿಗೆ ಖಂಡಿತವಾಗಿಯೂ ಧನ್ಯವಾದ ಹೇಳಲೇಬೇಕು.
          ಗಣಪಜ್ಜಿಯಿಂದ ಬರೆದುಕೊಂಡು ಬಂದ ಹಾಡುಗಳಲ್ಲಿ ಹೆಚ್ಚಿನವು ತಮಾಷೆ ಹಾಗೂ ಪೋಲಿಯ ಹಾಡುಗಳು. ಆದರೂ ನಡು ನಡುವೆ ಒಂದೆರಡು ಪುರಾಣದ ಹಾಡುಗಳೂ ಇವೆ. ದೊಡ್ಡ ಹಬ್ಬದಲ್ಲಿ ಗೋವನ್ನು ಬಿಟ್ಟಿದ್ದು, ಗೋವಿನ ಬಳಿ ಮಾತನಾಡಿದ್ದು ಸೇರಿದಂತೆ ಹಲವಾರು ಹಾಡುಗಳು ಆಕೆಯಿಂದ ಹೇಳಲ್ಪಟ್ಟಿವೆ. ಅಂತದ್ದೇ ಒಂದು ತಮಾಷೆಯ ಹಾಡು ಇಲ್ಲಿದೆ ನೋಡಿ. ಈ ಹಾಡು ದೊಡ್ಡ ಹಬ್ಬದ ಸಂದರ್ಭದಲ್ಲಿ ಗೋವುಗಳನ್ನು ಬಿಡುವುದು ಹಾಗೂ ಗೋವಿನ ಜೊತೆಗೆ ಮನೆಯ ಯಜಮಾನ್ತಿ ಮಾತನಾಡುವುದು, ಗೋವಿಗೆ ಜಾಗೃತೆಯಿಂದ ಇರು ಎನ್ನುವ ಭಾವಗಳಿವೆ.

ಗೋವು ಕಣ್ಣಿಯ ಬಿಡುವನಕ
ಮನೆ ದೇವರ ಕೃಪೆಯಿರಲೆ
ಹೋಕ್ಹೋಗಿ ಮನೆಗೆ ಬರುವನಕ
ಹುಲಿದೇವರ ಕೃಪೆಯಿರಲೆ..|
-ಆಕಳು ಮೇಯಲು ಹೋಗಿ ಮನೆಗೆ ಸುರಕ್ಷಿತವಾಗಿ ಬರುವಾಗ ದೇವರು ಹಾಗೂ ಹುಲಿ ಕೂಡ ಕೃಪೆ ತೋರಿಸು ಎಂದು ಮನುಷ್ಯ ಬೇಡಿಕೊಳ್ಳುವುದು ಇನ್ನೆಲ್ಲಿ ಕಾಣಲು ಸಾಧ್ಯವಿದೆ.?
ಅದೇ ಹಾಡು ಮುಂದುವರಿಯುತ್ತದೆ..

ಅಪ್ಪನ ಮನೆ ತುರುಹಿಂಡು ಎಪ್ಪತ್ತು ಸಾವಿರ
ಹೊಸ್ತಿಲೊಳಗವರು ನಡೀವಾಗ
ನಡೀವಾಗ ಗೋವಕ್ಕನ
ಹತ್ತು ಸಾವಿರ ಗಂಟೆ ಗುಯ್ಯಲೆಂದು..|
-ಆಹಾ.. ಗೋವನ್ನೂ ಅಕ್ಕನೆಂದು ಕರೆಯುತ್ತಾಳಲ್ಲ... ಈ ಹವ್ಯಕ ಹಾಡನ್ನು ಅದ್ಯಾರು ಬರೆದರೋ.. ಅಂತಹ ಆಶುಕವಿಗೆ ಧನ್ಯೋಸ್ಮಿ.

ಹತ್ತಲಾರದ ಗುಡ್ಡೆ ಹತ್ತೇಳು ಪಶುತಾಯಿ
ತಿರುಗಿ ನೋಡಲಿಕೆ ಅರಿಯಾಳು
ಅರಿಯಾಳು ಗೋಮಾಳ
ಮುತ್ತಿನ ಸನ್ನೆಯಲಿ ಹೊಡತಾರೋ..|

ಕೊಟ್ಟಿಗೆ ಕೆಸರೆಂದು ಹಾದಿ ದೂರ ಎಂದು
ಬಾರದುಳಿಯಡ ಪಶುತಾಯೆ
ಪಶುತಾಯೆ ನಿನ್ನೊಡೆಯರು
ಹಾಲಿಲ್ಲದುಣ್ಣರು ಇರುಳೂಟ |
-ಆಕಳನ್ನು ಪಶುವೆಂದು ಭಾವಿಸದೆ ಮನೆಯ ಒಬ್ಬ ಸದಸ್ಯನೆಂದು ಪರಿಗಣಿಸಿ, ವಿನಮ್ರನಾಗಿ ಆಕಳ ಬಳಿ ಕೇಳಿಕೊಳ್ಳುವ ಪರಿ ಬಹಳ ಕಾಡುತ್ತದೆ. ಆಕಳ ಬಳಿ ನೆಪ ಹೂಡಬೇಡ. ಸುಮ್ಮನೆ ಸಿಟ್ಟಾಗಿ ಕೊಟ್ಟಿಗೆಗೆ ಬರದೇ ಉಳಿದುಬಿಡಬೇಡ ಎನ್ನುವ ಈ ಹವ್ಯಕ ಹಾಡುಗಳು ಎಂತವನನ್ನೂ ಸೆಳೆದುಬಿಡುತ್ತವೆ.

**

ಈ ಮೇಲಿನ ಹಾಡು ಬೆಳಿಗ್ಗೆ ಮುಂಚೆ ಆಕಳ ಬಳಿ ಹೀಗೆ ಹೇಳುವಂತದ್ದಾದರೆ ಸಂಜೆಯ ವೇಳೆಗೆ ಕೊಟ್ಟಿಗೆಗೆ ಆಗಮಿಸುವ ಆಕಳನ್ನು ಸ್ವಾಗತಿಸುವ ಸಲುವಾಗಿ ಇನ್ನೊಂದು ಸುಂದರ ಹಾಡನ್ನೂ ಹಾಡಲಾಗುತ್ತದೆ. ಆ ಹಾಡು ಇನ್ನೂ ಮಜವಾಗಿದೆ ನೋಡಿ. ಈ ಹಾಡಿನಲ್ಲಿ ಆಕಳು ದೂರನ್ನೂ ಹೇಳುತ್ತದೆ ಗಮನಿಸಿ.

ಗೋವು ಬರುವ ಬಾಗಿಲಿಗೆ
ತಟ್ಟನಿಕ್ಕಿದರು ಒನಕೆಯನು
ಅಪ್ಪ ಕೃಷ್ಣರ ಮನೆಯ
ಗೋವು ಬರುವ ಬಾಗಿಲಿಗೆ |
ಎತ್ತು ಬರುವ ಬಾಗಿಲಿಗೆ
ತಟ್ಟನಿಕ್ಕಿದರು ಒನಕೆಯನು
ಅಪ್ಪ ಕೃಷ್ಣರ ಮನೆಯ
ಎತ್ತು ಬರುವ ಬಾಗಿಲಿಗೆ |
**

ಮನೆಗೆ ಬರುವ ಗೋವು (ಎತ್ತು) ಮನೆಯೊಡತಿಯ ಬಳಿ ದೂರನ್ನು ಹೇಳುತ್ತದೆ.. ಇದು ಮಜವಾಗಿದೆ ನೋಡಿ

ಗುಡ್ಡ ಬೆಟ್ಟಗಳೆಲ್ಲ ತಿರುಗಿಸಿ
ಅಟ್ಟು ಹೊಡೆದನೇ ಗೋವಳನು
ಬೆತ್ತದ ಶೆಳೆಯಲಿ
ಹೊಡೆದನೆಂದ್ವಡೆಯಗೇಳಿದವೇ..
**
ಮುಂದುವರಿದು ಗೋವು ಇನ್ನೂ ಪುಕಾರು ಹೇಳುತ್ತವೆ ಕೇಳಿ.. ಓದಿದಂತೆಲ್ಲ ನಿಮ್ಮ ಮನಸ್ಸು ಮುದಗೊಳ್ಳುವುದು ಖಚಿತ

ಹುಲ್ಲು ಸತ್ತಿತು ಹೊಲನೊಳಗೆ
ನೀರು ಬತ್ತಿತು ಕೊಣದೊಳಗೆ
ಹ್ಯಾಂಗೆ ಜೀವಿಸಲೆಂದು
ಯೋಚನೆಗೊಂಡವು ಪಶುಗಳು..
**

ಗೋವಿನ ಪುಕಾರಿಗೆ ಪ್ರತಿಯಾಗಿ ಮನೆಯೊಡತಿ ಗೋವನ್ನು ಸಮಾಧಾನ ಮಾಡಿ ಸಂತೈಸುವ ಪರಿ ನೋಡಿ ಹೇಗಿದೆ.. ಅಂತ..

ಗುತ್ತಿಯ ಹೊಲನೊಳಗೆ
ಮುತ್ತಿನ ದೋಣಿಯ ಕಳುಸಿ
ಮತ್ತೊಮ್ಮೆ ಅದರ ತರಿಸೂವಿ
ಮುತ್ತಿನ ದೋಣಿಯ ಕಳುಸಿ
ಮಿತ್ರೆಯರ ಕೂಡ ಉದುಕವ
ಉದುಕವ ಹೊಯ್ಸೂವಿ ಗೋವೆ
ನೀ ಚಿಂತೆ ಪಡದೀರು |

ಬಡಗೀಯ ಮನೆಗ್ಹೋಗಿ
ಕುಡುಗೋಲು ಮಾಡ್ತರಿಸಿ
ಬಡ ಬಟ್ಟನ ಕೂಡ ಹೊರೆ ಹುಲ್ಲ
ಬಡ ಬಟ್ಟನ ಕೂಡ ಹೊರೆಹುಲ್ಲ ತರಿಸೂವಿ
ಗೋವೆ ನೀ ಚಿಂತಿ ಪಡದೀರು. |
-ಆಹಾ.. ನಮ್ಮ ಹಿರೀಕರು ಅದೆಷ್ಟು ಸಹೃದಯಿಗಳಾಗಿರಬೇಕು. ಅವರ ಮನದಲ್ಲಿನ ಪ್ರಾಣಿಪ್ರೀತಿಗಳನ್ನು ಇಂದಿನವರಾದ ನಾವು ಖಂಡಿತವಾಗಿಯೂ ವಿವರಿಸುವುದು ಅಸಾದ್ಯ. ನಮ್ಮ ಹಿರಿಯರ ಪ್ರಾಣಿಪ್ರಿಯ ಗುಣ ಎಂತಹ ಕಾಲದಲ್ಲೂ ಎಂತವರನ್ನೂ ಮೋಡಿ ಮಾಡಬಲ್ಲದು.

***
ಇನ್ನೊಂದು ಮಜವಾದ ಹಾಡಿದೆ. ಈ ಹಾಡಿನಲ್ಲಿ ಪ್ರಶ್ನೋತ್ತರ ಸರಣಿಗಳಿವೆ.. ಓದಿ ಮಜಾ ಅನುಭವಿಸಿ.

ಉತ್ತುಮರಾ ಮಗನೆಂದು
ಉಪ್ಪರಿಗೆ ಕರೆಸಿದ್ಯ
ಪೆಟ್ಟಿಗೆಯ ಬೀಗ ತೆಗೆಸಿದ್ಯ..|
ಪೆಟ್ಟಿಗೆಯ ಬೀಗ ತೆಗೆಸಿದ್ಯ ಮಾವಯ್ಯ
ತಾಳಿ ಸರ ಕದ್ದು ಹುಗಸೀದ |

ಒಳ್ಯವರ ಮಗನೆಂದು
ಮಾಳಿಗೆ ಕರೆಸಿದ್ಯ
ಪೆಟ್ಟಿಗೆಯ ಬೀಗ ತೆಗೆಸಿದ್ಯ
ಪೆಟ್ಟಿಗೆಯ ಬೀಗ ತೆಗೆಸಿದ್ಯ ಅತ್ಯವ್ವ
ಮುತ್ತಿನ ಸರ ಕದ್ದು ಹುಗಸೀದ..|

-ಇದು ಆರೋಪವಾದರೆ.. ಇದಕ್ಕೆ ಪ್ರಿಯಾಗಿ ಸಮಝಾಯಿಶಿ ಅಥವಾ ಸಮರ್ಥನೆಯನ್ನು ನೀಡುವ ಪರಿ ಗಮನಿಸಿ

ಮಾವುಗಳ ಸಂತಿಗೆ
ತ್ವಾಟಕ್ಕೆ ಹೋಗಿಕ್ಕು
ನೆರೆಮನೆಯ ಬಾಳೆಕೊನೆ ಕಳಹೂದ
ಕಳಹೂದ ಕಂಡ್ಕಂಡು
ಕದಿಯುವ ಬುದ್ದಿ ಕಲಿತಿಕ್ಕು |

ಅತ್ಯಗುಳ ಸಂತಿಗೆ
ಹಿತ್ತಲಿಗೆ ಹೋಗಿಕ್ಕು
ನೆರೆಮನೆಯ ಬದ್ನೆಕಾಯಿ ಕಳಹೂದ
ಹಳಹೂದ ಕಂಡ್ಕಂಡು
ಕಳುವ ಬುದ್ದಿಯನೇ ಕಲಿತಿಕ್ಕು |

ಯಾವಾಗಲೂ ನನ ಮಗಗೆ
ಕಳುವ ಬುದ್ಧಿಗಳಿಲ್ಲೆ
ಅತ್ತೆಯ ಮನೆಯ ಹಸೆ ಮೇಲೆ
ಹಸೆ ಮೇಲೆ ಇದ್ದಾಗ
ಅತ್ಯಗ್ಯಕ್ಕಳು ಕಳವ ಹೊರಸೀರಿ..|

ಇಂದು ಬಟ್ಟಲ ಕದ್ದ
ನಾಳೆ ಗಿಂಡಿಯ ಕದ್ದ
ನಾಡದತ್ತೆಯಾ ಮಗಳ ಕದ್ದು
ಮಗಳ ಕದ್ದು ಹೋಪಾಗ
ಯಾರ ಮೇಲೆ ಕಳುವ ಹೊರಿಸೂವಿ..|
-ಈ ಹಾಡನ್ನು ಹೇಳುವ ವೇಳೆಗೆ ಅಜ್ಜಿಗೆ ಹಲವಾರು ತಮಾಷೆಯ ಹಾಡುಗಳು ನೆನಪಾಗ ಹತ್ತಿದ್ದವು. ನಾನು ಹಾಗೂ ಸಂಜಯ ರೋಮಾಂಚನದಿಂದ ಬರೆದುಕೊಳ್ಳಹತ್ತಿದ್ದೆವು. ಅಜ್ಜಿಯೂ ತಮಾಷೆ ಮಾಡುತ್ತಲೇ ಹಾಡನ್ನು ಹೇಳುತ್ತಿತ್ತು. ಆದರೆ ವಯಸ್ಸಾದ ಅಜ್ಜಿ ಒಂದು ಕಡೆ ಕುಳಿತಲ್ಲಿ ಕೂರಲಾಗದೇ ಚಡಪಡಿಸುತ್ತಿತ್ತು. ಆಗೀಗ ನಿಲ್ಲುತ್ತ, ಆಗೀಗ ಕೂರುತ್ತ `ತಮಾ.. ಯನ್ನ ಸ್ವಂಟ ಹಿಡದೋತು.. ಹನೀ ಕೈ ಹಿಡ್ಕಳ.. ಯನ್ನ ಒಂಚೂರು ಎತ್ತ ಮಾರಾಯಾ..' ಎನ್ನುತ್ತ ಕರೆದಾಗಲೆಲ್ಲ ನಾನು ಆಜ್ಞಾ ಪಾಲಕನಾಗಿ ಆಕೆಯ ಕೈಯನ್ನು ಹಿಡಿದು ಎಳೆದು ಕೂರಿಸುತ್ತಿದ್ದೆ. ಪ್ರತಿಯಾಗಿ ಅಜ್ಜಿ `ನಿಂಗೆ ಗನಾ ಕೂಸು ಸಿಗಲ.. ದಂಟಕಲ್ ಮಂಕಾಳಕ್ಕನ ಹಾಂಗೆ ಇರಲಿ..' ಎಂದು ಹಾರೈಸುತ್ತಿತ್ತು. ನಾನು ಪೆಚ್ಚುನಗೆಯನ್ನು ಹಾರಿಸುತ್ತಿದ್ದೆ. ಈ ಅಜ್ಜಿ ನಮಗೆ ಬೆಳಿಗ್ಗೆಯಿಂದ ರಾತ್ರಿಯ ತನಕ ಅಜಮಾಸು 10 ತಾಸುಗಳ ಕಾಲ ಹಾಡನ್ನು ಹೇಳಿತ್ತು. ಪಾಪ ಅದೆಷ್ಟು ತೊಂದರೆಯನ್ನು ಅನುಭವಿಸಿದ್ದರೋ ಅಜ್ಜಿ. ಏನನ್ನೂ ಹೇಳದೆ ನಾವು ಕೇಳುತ್ತಿದ್ದೇವೆ ಎನ್ನುವ ಕಾರಣಕ್ಕಾಗಿ ತನ್ನ ದೈಹಿಕ ಸಮಸ್ಯೆಗಳನ್ನೆಲ್ಲ ಮರೆತು ಹಾಡುತ್ತಿದ್ದುದನ್ನು ನೆನಪು ಮಾಡಿಕೊಂಡರೆ ಹಾಡು ಸಂಗ್ರಹದ ನೆಪದಲ್ಲಿ ಅಜ್ಜಿಗೆ ತ್ರಾಸು ಕೊಟ್ಟೆವಾ ಎಂದುಕೊಂಡಿದ್ದಿದೆ. ಆದರೆ ಅಜ್ಜಿ `ತಮಾ.. ನಿಂಗ ಒಳ್ಳೆ ಕೆಲಸ ಮಾಡ್ತಾ ಇದ್ದಿ.. ಹಿಂಗಿದ್ ಮಾಡವ್ ಯಾರಾದ್ರೂ ಶಿಕ್ತ್ವಾ ಹೇಳಿ ಆನೂ ಕಾಯ್ತಾ ಇದ್ದಿದ್ದಿ.. ನಿಂಗವ್ವು ಶಿಕ್ದಿ.. ಚೊಲೋ ಆತು..' ಎಂದು ಹೇಳಿದ್ದು ನಮ್ಮ ಪಾಲಿಗೆ ಸಿಕ್ಕ ಬಹುದೊಡ್ಡ ಸರ್ಟಿಫಿಕೆಟ್ ಎಂದುಕೊಂಡು ಖುಷಿಯಾಗಿದ್ದೇವೆ.

(ಅಜ್ಜಿಯ ಹಾಡುಗಳು ಇನ್ನಷ್ಟಿದ್ದು.. ಮುಂದಿನ ಭಾಗದಲ್ಲಿ ಅದನ್ನು ತಿಳಿಸಲಾಗುವುದು)



No comments:

Post a Comment