Wednesday, July 4, 2018

ನಾನು ಓದಿದ ಪುಸ್ತಕಗಳು -3 (ಕೇಪಿನ ಡಬ್ಬಿ)

ಕೇಪಿನ ಡಬ್ಬಿ

ಮತ್ತೊಮ್ಮೆ ಕೇಪಿನ ಡಬ್ಬಿ ಪುಸ್ತಕವನ್ನು ಓದಿದೆ.
ಹಿಂದೆ ಓದಿದಾಗ ಅನ್ನಿಸಿದ್ದ ಭಾವನೆಗಳೇ ಬೇರೆ. ಈ ಅನ್ನಿಸುತ್ತಿದ್ದ ಭಾವನೆಗಳೇ ಬೇರೆ.
ಹಿಂದೆ ಪದ್ಮನಾಭನ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಪದ್ಮನಾಭನ ಅಮ್ಮ ನನಗೆ ಕೇಪಿನ ಡಬ್ಬಿ ಪುಸ್ತಕದ ಕೇಪಿನ ಡಬ್ಬಿ ಕಥೆ ಸೇರಿದಂತೆ ಇನ್ನೊಂದೆರಡು ಕಥೆಗಳನ್ನು ಆರಿಸಿ ತಕ್ಷಣದಲ್ಲಿ ಓದಿ ಅಭಿಪ್ರಾಯ ಹೇಳು ಅಂದಿದ್ದರು. ನಾನು ಓದಿ ಏನೋ ಹೇಳಿದ್ದೆ. ನಂತರ ನನ್ನ ಅಮ್ಮ(ಅಮ್ಮ ಹಾಗೂ ಪದ್ಮನಾಭನ ಅಮ್ಮ ನೆಂಟರು ಹಾಗೂ ಬಾಲ್ಯದ ಗೆಳತಿಯರು) ಆ ಕಥೆಗಳನ್ನು ಓದಿ ಕಣ್ಣಂಚಲ್ಲಿ ನೀರು ತುಂಬಿಕೊಂಡಿದ್ದರು. ಅಷ್ಟೇ ಅಲ್ಲದೇ ತಮ್ಮದೂ ಬಾಲ್ಯ ನೆನಪಾಯಿತು ಎಂದಿದ್ದರು.

ಬಾಲ್ಯದಿಂದ ನೆಂಟನಾಗಿ, ದೋಸ್ತನಾಗಿ, ಜತೆ ಜತೆಗೆ ಬಳೆದವರು ನಾನು ಹಾಗೂ ಪದ್ಮನಾಭ ಭಟ್ಟ ಶೇವ್ಕಾರ್. ಆತ್ಮೀಯತೆಯ ಪದ್ದು. ನಾನು, ಪದ್ಮನಾಭ, ಪ್ರತಿಭಾ ಹಾಗೂ ನನ್ನ ತಂಗಿ ಸುಪರ್ಣ ಸೇರಿಕೊಂಡು ಮಾಡಿದ ಪುಂಡರಪೂಟು ಸಾಕಷ್ಟಿದೆ ಬಿಡಿ. ಹೊನ್ನೆಬೇಣ, ಕಪ್ಪು ಬಣ್ಣದ ಡಾಬರ್ ಮನ್ ನಾಯಿ (ಅದಕ್ಕೆ ಪದ್ಮನಾಭ ಇಟ್ಟ ಹೆಸರು ಡಾಬರ್ ಕುನ್ನಿ) ಹೊಟ್ಟೆಬಿರಿಯುವಂತೆ ತಿಂದ ಹಲಸಿನ ಹಣ್ಣು, ಕೊಂಕಿಕೋಟೆಗೆ ಹೋಗಬೇಕೆಂಬ ಅಂದಿನಿಂದ ಇಂದಿನವರೆಗೂ ಪೂರ್ಣಗೊಳ್ಳದ ನಮ್ಮ ಯೋಜನೆ, ಹೊನ್ನೆಬೇಣಕ್ಕೆ ಹೋದಾಗಲೆಲ್ಲ ಹತ್ತಿಳಿಯುವ ಜೋಗಿಕಲ್ಲು, ಪದ್ದುನ ಮನೆಯ ಬಳಿಯೇ ಅಗಲವಾಗಿ ಹರಿಯುವ ಆದರೆ ನೀರಿನ ಹರಿವು ಕಡಿಮೆ ಇರುವ ಗಂಗಾವಳಿ ನದಿ, ಪ್ರಭಾವತಿ ಅತ್ತೆ ಹಾಗೂ ನಾರಾಯಣ ಮಾವರ ಅಕ್ಕರೆ, ವಿನಯ ಇದ್ದಲ್ಲಿ ಕಿಲಾಡಿ ಜೋರು, ಎಂತಾರೂ ಭಾನಗಡಿ ಮಾಡಡಿ ಎನ್ನುವ ನಾರಾಯಣ ಮಾವನ ಎಚ್ಚರಿಕೆ.. ಆಹಾ... ಇವೆಲ್ಲ ನಮ್ಮ ಬಾಲ್ಯದ ನೆನಪುಗಳು. ನಾರಾಯಣ ಮಾವನ ಸೈಕಲ್ಲಿನಲ್ಲಿ ಒಳಪೆಡ್ಲು ಕಲ್ತಿದ್ದು, ಗುಳ್ಳಾಪುರದಲ್ಲಿ ನಡೆದಿದ್ದ ಯಲ್ಲಾಪುರ ಡಿಗ್ರಿ ಕಾಲೇಜಿನ ಎನ್ನೆಸ್ಸೆಸ್ ಕ್ಯಾಂಪಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಟ್ಟ ರಾತ್ರಿಯಲ್ಲಿ ನಕ್ಷತ್ರಗಳನ್ನು ನೋಡುತ್ತ ಹೊನ್ನೆಬೇಣದ ದಾರಿಯಲ್ಲಿ ನಡೆದು ಬಂದಿದ್ದು, ಪಿಯು ದಿನಗಳ ನಮ್ಮ ಒನ್ ಸೈಡ್ ಲವ್ ಹೆಸರನ್ನು ಜೋಗಿಕಲ್ಲಿನ ಯಾವುದೋ ಮರದ ಮೇಲೆ ಕೆತ್ತಿದ್ದು ಇತ್ಯಾದಿಗಳೆಲ್ಲ ನೆನಪಾಗುತ್ತಿರುವಂತಹ ಸಂಗತಿಗಳು. ಪುಸ್ತಕದ ಬಗ್ಗೆ ಬರೆಯಹೊರಟವನು ಬಾಲ್ಯದ ಬಗ್ಗೆ ಯಾಕೆ ಬರೆಯುತ್ತಿದ್ದಾನೆ ಎಂದುಕೊಳ್ಳಬೇಡಿ. ಕೇಪಿನ ಡಬ್ಬಿ ನಮ್ಮ ಹಲವಾರು ಬಾಲ್ಯದ ನೆನಪುಗಳನ್ನು ಕಟ್ಟಿಕೊಟ್ಟಿದೆ.
ಕೇಪಿನ ಡಬ್ಬಿ ಕಥಾ ಸಂಕಲನವನ್ನು ಓದಿದಂತೆಲ್ಲ ನಮ್ಮ ಅನೇಕ ನೆನಪುಗಳು ಮರುಕಳಿಸುತ್ತವೆ. ಯಾವುದೋ ಪಾತ್ರಗಳ, ಯಾವುದೋ ಸನ್ನಿವೇಶಗಳಲ್ಲಿ ನಾವಿದ್ದೇವಾ ಅನ್ನಿಸುತ್ತದೆ. ಕೆಲವು ಸಾರಿ ಬಾಲ್ಯದಲ್ಲಿ ನಾವೇ ಆಡಿದ ಮಾತುಗಳನ್ನು ಪದ್ಮನಾಭ ಇನ್ಯಾವುದೋ ಪಾತ್ರಗಳ ಮೂಲಕ ಆಡಿಸಿದ್ದಾರಾ ಎನ್ನಿಸುತ್ತದೆ. ಇಂತಹ ಕಾರಣಗಳಿಂದಲೇ ನನಗೆ ಕೇಪಿನ ಡಬ್ಬಿ ಮತ್ತಷ್ಟು ಆಪ್ತವಾಗಿದ್ದು.
ಪದ್ಮನಾಭ ಬರವಣಿಗೆ ಮೂಲಕ ನನಗೆ ಪರಿಚಯವಾಗಿದ್ದೂ ಬಾಲ್ಯದಲ್ಲೇ. ನಾನು ಪಿಯು ಓದುತ್ತಿದ್ದ ಸಂದರ್ಭದಲ್ಲಿ ಪದ್ಮನಾಭ ಹೈಸ್ಕೂಲು. ಆತ ಪತ್ರಗಳಲ್ಲಿ ನನಗೆ ಕಥೆಗಳನ್ನು ಕಳಿಸುತ್ತಿದ್ದ. ಪತ್ರಗಳಲ್ಲಿಯೇ ಒಂದು ಪೇಪರ್ ಹೊರತರುತ್ತಿದ್ದೆವು. ನಾನು ಬರೆಯುವ ಪತ್ರ ಯಾವುದೋ ಹೆಸರಿನಲ್ಲಿ ಅವನಿಗೆ ತಲುಪಿದರೆ, `ಸಿಡಿಲು` ಎನ್ನುವ ಹೆಸರಿನಲ್ಲಿ ಆತನಿಂದ ಬರುತ್ತಿದ್ದ ಪತ್ರ ಪುಸ್ತಕದ ಮುನ್ನುಡಿಯಲ್ಲಿ ಉಲ್ಲೇಖವಾಗಿರುವ `ಕೊಂಕಿ ದುರ್ಗದ ರಹಸ್ಯ' ಎಂಬ ಕಾದಂಬರಿಯನ್ನು ಒಳಗೊಂಡಿತ್ತು. ಆದರೆ ಇದ್ದಕ್ಕಿದ್ದಂತೆ ನಮ್ಮ ದಾರಿಗಳು ಬದಲಾದವು. ನಾವು ಪತ್ರಗಳನ್ನು ಬರೆದುಕೊಳ್ಳುವುದನ್ನು ನಿಲ್ಲಿಸಿದೆವು. ಪದ್ಮನಾಭ ಒಂದಷ್ಟು ವರ್ಷಗಳ ಕಾಲ ನಾಪತ್ತೆಯಾದ. ನಾನು ಅವನನ್ನು ಮರೆತೆ.
ನಾನು ಬಾಲ್ಯದಿಂದಲೂ ಕಂಡ, ಪರಮ ವಾಚಾಳಿ ಪದ್ಮನಾಭ ಈಗ ಬದಲಾಗಿದ್ದಾನೆ. ದಿನದಿಂದ ದಿನಕ್ಕೆ ಬೆರಗು ಮೂಡಿಸುತ್ತಿದ್ದಾನೆ. ಈಗ ನಮ್ಮಿಬ್ಬರ ಮಾತುಗಳೂ ಅಪರೂಪಕ್ಕೆ ಎನ್ನುವಷ್ಟು ಕಡಿಮೆಯಾಗಿದೆ. ಹೀಗಿದ್ದ ನಂತರ ಆತ ಮತ್ತೆ ಹತ್ತಿರಕ್ಕೆ ಬಂದಿದ್ದು ಕೇಪಿನ ಡಬ್ಬಿ ಕಥೆಯಿಂದಲೇ. ಆತನ ಪುಸ್ತಕ ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಬಾಲ್ಯದ ಮಿತ್ರ, ನೆಂಟ ಇತ್ಯಾದಿಗಳನ್ನು ನನ್ನ ತಲೆಯಿಂದ ತೆಗೆದುಹಾಕಿ ಪುಸ್ತಕವನ್ನು ಓದುವ ಯತ್ನ ಮಾಡಿದ್ದೇನೆ. ಆದರೆ ನಡು ನಡುವೆ ಕಥೆಯ ಪಾತ್ರಗಳು ನಮ್ಮ ಆ ದಿನಗಳನ್ನು ನೆನಪು ಮಾಡಿವೆ.

೧೧ ಕಥೆಗಳಿರುವ ಪುಸ್ತಕದಲ್ಲಿನ ಮೊದಲ ಕಥೆ ಚೇಳು ಕಚ್ಚಿದ ಗಾಯ. ಕೆಳ ಮಧ್ಯಮವರ್ಗದ ಕುಟುಂಬದ ಕಥೆ. ಒಂದೇ ಸಂಜೆಯಲ್ಲಿ ಕಥೆಯ ಪಾತ್ರಗಳು ಬಿಚ್ಚಿಕೊಳ್ಳುತ್ತ ಸಾಗುತ್ತವೆ. ರಾತ್ರಿಯಾದಂತೆಲ್ಲ ಪಾತ್ರಗಳು ಇನ್ನಷ್ಟು ವಿಸ್ತಾರಗೊಳ್ಳುತ್ತವೆ. ರಾಮಣ್ಣ, ಸುಮಿತ್ರಮ್ಮ, ರೇಣುಕಾ, ಪ್ರಶಾಂತರ ನಡುವಿನ ಸಂಭಾಷಣೆ ನಮ್ಮ ನಡುವೆ ನಿತ್ಯವೂ ನಡೆಯುತ್ತಿರುವ ಕಠು ವಾಸ್ತವವನ್ನು ಬಿಚ್ಚಿಡುತ್ತವೆ. ರೇಣುಕಾ ಹಾಗೂ ಸುಮಿತ್ರಳ ವರ್ಣನೆ ಸ್ವಲ್ಪ ಜಾಸ್ತಿಯೇ ಇದೆ. ರಾಮಣ್ಣನ ಹತಾಶೆ, ರೇಣುಕಾಳ ಸಿಟ್ಟು, ಚುಚ್ಚುನುಡಿ, ಸುಮಿತ್ರಮ್ಮನ ಅಸಹಾಯಕತೆ ಇತ್ಯಾದಿಗಳೆಲ್ಲ ಕಣ್ಣಿಗೆ ಕಟ್ಟುವಂತೆ ಚಿತ್ರಿತವಾಗಿದೆ. ಓದುತ್ತ ಓದುತ್ತ ಇಂತಹ ಹಲವಾರು ಘಟನೆಗಳನ್ನು ನಾನು ಕಂಡಿದ್ದು ನೆನಪಿಗೆ ಬಂದಿತು. ಕಥೆ ಓದಿ ಮುಗಿದ ಮೇಲೂ ಪ್ರಶಾಂತನಿಗೆ ಬಂದಿದ್ದು ಯಾರ ಪೋನ್? ಯಾವ ಕಾರಣಕ್ಕೆ ಅನಾಮಧೇಯ ಕರೆ ಪ್ರಶಾಂತನ ಕೊಲ್ಲುವ ಬೆದರಿಕೆಯನ್ನು ಹಾಕಿತು? ರೇಣುಕಾಳ ಗಂಡ ರೇಣುಕಾಳನ್ನೂ, ಆಕೆಯ ಮಗಳನ್ನೂ ನೋಡಲು ಬರುತ್ತಾನಯೇ?, ರಾಮಣ್ಣ ಚಿನ್ನದ ಉಡದಾರ ಕೊಂಡು ತಂದನೇ? ಮುಂದೇನಾಯ್ತು ಎನ್ನುವ ಕುತೂಹಲವನ್ನು ಹುಟ್ಟುಹಾಕಿಸುತ್ತದೆ.

ಬೆಳಕು ಬಿಡಿಸಿದ ಚಿತ್ರ, ಅಪ್ಪ-ಮಗನ ಕಥೆ. ಚಿಕ್ಕಂದಿನಲ್ಲೇ ಅಮ್ಮನನ್ನು ಕಳೆದುಕೊಂಡ ಮಗ. ಮಡದಿಯನ್ನು ಕಳೆದುಕೊಂಡ ಅಪ್ಪ. ಮಾಸ್ತರು. ಶಿಸ್ತಿನ ಸಿಪಾಯಿ. ಅಪ್ಪನ ವಿರುದ್ಧ ದ್ವೇಷದ ಭಾವನೆ ಬೆಳೆಸಿಕೊಂಡ ಮಗ. ಅಪ್ಪ-ಅವಳೊಂದಿಗೆ ಸಂಬಂಧ ಇರಿಸಿಕೊಂಡಿದ್ದಾನೆ ಎನ್ನುವ ಮಾತು ಕೇಳಿ, ಅಪ್ಪನ ಬಳಿ ಸಿಟ್ಟುಕಾರಿಕೊಳ್ಳಲು ಬಂದವನು, ಅಪ್ಪನ ಜಾಗದಲ್ಲಿಯೇ ನಿಂತು ಆಲೋಚಿಸುತ್ತಾನೆ. ಅವಳ ಮನೆಯಲ್ಲಿ ಅಪ್ಪ ಅವಳ ಮಗನೊಂದಿಗೆ ಆಡುತ್ತಿದ್ದುದನ್ನು ನೋಡಿದ ನಂತರ ಬದಲಾಗುವ ಮಗನ ಮನಸ್ಸಿನಲ್ಲಿನ ದ್ವೇಷ ಬದಲಾಗುತ್ತದೆ. ಕಾರ್ಮೋಡ ಸರಿದಂತಾಗುತ್ತದೆ. ಅಪ್ಪ ಮಗನ ನಡುವಿನ ವಿಶಿಷ್ಟ ಭಾವನೆಯೊಂದನ್ನು ಅಷ್ಟೇ ವಿಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ ಪದ್ಮನಾಭ. ಪದ್ದುನ ಸೂಕ್ಷ್ಮ ನೋಟಗಳಿಗೆ ನಿಜಕ್ಕೂ ಸಲಾಂ. ರಾತ್ರಿ ಮಳೆಗಾಲದಲ್ಲಿ ಡ್ರೋಂಕ್ ಎನ್ನುವ ಕಪ್ಪೆಗಳ ವರ್ಣನೆ, ಅಪರಿಚಿತರು ಬಂದಾಗ ಜೊರ್ ಜೊರ್ ಜೊರಕ್ ಎಂದು ಉಚ್ಚೆ ಹೊಯ್ಯುವ ದನಗಳು, ಕಾಯು ತುರಿಯುವ ಕೆರಮಣೆಯ ಮೇಲೆ ಕೂತು ಕೂತು ಸವೆದ ಚಿತ್ರ, ಆಹಾ ಇವೆಲ್ಲವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ ಪದ್ದುವಿನ ವೈಶಿಷ್ಟ್ಯಕ್ಕೊಂದು ಸಲಾಂ.

ಛದ್ಮವೇಶ, ಈ ನಡುವೆ, ಹೆಣದ ವಾಸನೆ... ಈ ಮೂರೂ ಕಥೆಗಳನ್ನು ಓದಿ ಬೆರಗು ಪಡುತ್ತಿದ್ದೇನೆ. ಅಬ್ಬಾ ಕಲ್ಪನೆಯೇ? ಆಗೊಮ್ಮೆ ಈಗೊಮ್ಮೆ ಇದು ನಿಜವೇ ಅನ್ನಿಸಿದ್ದೂ ಸುಳ್ಳಲ್ಲ. ಯಕ್ಷಗಾನ ವೇಶ ಹಾಕಿ ಛದ್ಮವೇಶ ಸ್ಪರ್ಧೆಯಲ್ಲಿ ಭಾಗವಹಿಸುವ ಕನಸಿನ ಮಧು ಹುಚ್ಚನ ವೇಷಧಾರಿಯಾಗುವುದು, ಇದರ ನಡುವೆ ವಿಶ್ವಣ್ಣ... ಅವಳ ಜತೆ ಎಲ್ಲವನ್ನೂ ಮಾಡುವ ಅವನು ಈಜು ಬಾರದೇ ನದಿಯಲ್ಲಿ ಕೊಚ್ಚಿಹೋಗಿ, ಮತ್ತೆ ದಡ ಸೇರುವುದು ಇಷ್ಟರ ಜತೆ ಸತ್ತ ಇಲಿಯ ವಾಸನೆಯ ಜಾಡಿನಲ್ಲಿ ಹುಚ್ಚು ಮನಸ್ಸು, ಕಪ್ಪು ಆಕೃತಿ... ಅಬಾಬಾಬಾ... ಪದ್ಮನಾಭನ ಅಭಿಮಾನಿ ಸಂಘ ಕಟ್ಟಿ ಅದರ ಅಧ್ಯಕ್ಷನಾಗೋಣ ಅನ್ನಿಸುತ್ತಿದೆ. ಅಮ್ಮಾ ಮುಂದೇನಾಯ್ತು... ನೀ ಯಕ್ಷಗಾನ ಆಡಿದ್ಯಾ? ಎಂದು ಮುಗ್ಧ ಮಧು ಕೇಳಿದ ಸಂದರ್ಭದಲ್ಲಿ ಆಗೋದೆಂಥದ್ದು, ಮದುವೆಯಾಯ್ತು ಎಂದು ನಿಟ್ಟುಸಿರುವ ಬಿಡುವ ಅಮ್ಮ. ಭಾಷೆ ಭಾರದ ಅವಳ ಬಳಿ 'ಸಂಗೀ.. ಹಾಳು ರಂಡೆ..ಇಷ್ಟುದಿನ ನನ್ನಿಂದ ಸರಿ ಜಡಿಸಿಕೊಂಡಿದ್ದಿ.. ನಿನ್ನ ಜತೆ ಮಜಾ ಮಾಡಿದ್ದೇನೆ ಮಜಾ... ಎಂದು ಆತ ಕೂಗಿ ಹೇಳುತ್ತಿದ್ದರೂ ನಗುತ್ತಲೇ ಇದ್ದ ಸಂಗಿ... ವಿವೇಕನ ಪರಿತಾಪ.. ಇವೆಲ್ಲವನ್ನೂ ಎಷ್ಟು ವಿಶಿಷ್ಟವಾಗಿ ಕಟ್ಟಿಕೊಟ್ಟಿದ್ದಾರೆಂದರೆ ಯಾವುದೋ ಘಳಿಗೆಯಲ್ಲಿ ಆ ಪಾತ್ರದೊಳಕ್ಕೆ ನಾವೂ ಹೊಕ್ಕಿಬಿಡುತ್ತೇವೆ.

ಅಮ್ಮಾ... ನನ್ನ ಮುಂದೆ ಚಾಚಿದ ಅವಳ ಪುಟ್ಟಪುಟ್ಟ ಮುದ್ದು ಕೈಗಳಲ್ಲಿ ಎಷ್ಟೊಂದು ಗೆರೆಗಳಿದ್ದವು ಗೊತ್ತೇನಮ್ಮಾ? ಆ ಕ್ಷಣದಲ್ಲಿ ನನ್ನ ಹಸ್ತಗಳಲ್ಲಿ ಸೆವೆದು ಹೋದ ಅದೃಷ್ಟದ ರೇಖೆಗಳನ್ನೂಅವಳೇ ತಂದಿದ್ದಾಳೇನೋ ಅನ್ನಿಸಿಬಿಟ್ಟಿತು ಎನ್ನುವ ಸಾಲುಗಳನ್ನು ಹೊಸೆಯುವ ಪದ್ಮನಾಭ ಅದೇ ಇನ್ನರ್ಧ ಕಥೆಯಲ್ಲಿ ಅಮ್ಮ ಮಗನ ನಡುವಿನ ಅದ್ಯಾವುದೋ ಅವ್ಯಕ್ತ ಭಾವಗಳನ್ನು ತೆರೆದಿಡುತ್ತಾರೆ. ಇನ್ನರ್ಧ, ಬಾಂದಳದ ಮಿಂಚು ಹಾಗೂ ಕಥೆ ಈ ಮೂರೂ ಕೂಡ ಆಪ್ತವಾಗುತ್ತದೆ.

ಕಥಾ ಸಂಕಲನದಲ್ಲಿ ನನಗೆ ಎಲ್ಲಕ್ಕಿಂತ ಹೆಚ್ಚು ಆಪ್ತವಾದದ್ದು, ಕಣ್ಣು ಹಾಗೂ ಮನಸ್ಸು ತೇವಗೊಳ್ಳುವಂತೆ ಮಾಡಿದ್ದು ಕೇಪಿನ ಡಬ್ಬಿ ಕಥೆ. ಪುಸ್ತಕದ ತಲೆಬರಹವಾಗಿರುವ ಕೇಪಿನ ಡಬ್ಬಿ ಕಥೆಯನ್ನು ಹಿಂದೊಮ್ಮೆ ನಾನು ಹೊನ್ನೆಬೇಣಕ್ಕೆ ಹೋದಾಗ ಪ್ರಭಾವತಿ ಅತ್ತೆ, ಪುಸ್ತಕವನ್ನು ಕೊಟ್ಟು ಓದಲು ಹೇಳಿದ್ದಳು. ಓದಿದ ನಂತರ ನನ್ನ ಮನಸ್ಸಿನಲ್ಲಿನ ತೆರೆಗಳನ್ನು ಸುಮ್ಮನೇ ಗಮನಿಸಿದ್ದಳು. ನನ್ನ ಜತೆಯಲ್ಲಿದ್ದ ಅಮ್ಮ ಕೂಡ ಅದನ್ನು ಓದಿ ನಿಟ್ಟುಸಿರು ಬಿಟ್ಟಿದ್ದಳು. ಪದ್ಮನಾಭ ಈ ಕಥೆಯ ಮೂಲಕ ಹಲವರನ್ನು ಅಳಿಸಿರಬಹುದು. ಕೇಪಿನ ಡಬ್ಬಿಯನ್ನು ಓದಿದ ನಂತರ ಅನ್ನಿಸುವ ಅಂಶಗಳಿಗೆ ಶಬ್ದಗಳು ಸಾಲುವುದಿಲ್ಲ. ನನಗಂತೂ ಹಳೆಯ ಯಾವುದೋ ನೆನಪಿನ ತರೆ ಸುಮ್ಮನೇ ಮನಸ್ಸಲ್ಲಿ ಜೀಕಿತು. ಎಷ್ಟೆಲ್ಲ ಕಥೆಗಳಿದ್ದೂ ಪುಸ್ತಕಕ್ಕೆ ಕೇಪಿನ ಡಬ್ಬಿ ಅಂತಲೆ ಯಾಕೆ ಹೆಸರಿಟ್ಟ ಎಂಬುದನ್ನು ನಾನು ಒಂದೆರಡು ಸಾರಿ ಆಲೋಚಿಸಿದ್ದಿದೆ. ಕಥೆ ಓದಿದಾಗ ಆ ಹೆಸರಿಟ್ಟಿದ್ದು ಸರಿಯೇ ಇದೆ ಅನ್ನಿಸಿತ್ತು.

ಇದೇ ಪುಸ್ತಕದಲ್ಲಿರುವ ಇನ್ನೆರಡು ಕಥೆಗಳು ಮಾತು ಮುಗಿಯುವ ಮೊದಲು ಹಾಗೂ ಇಲ್ಲದ ತೀರದ ಕಡೆಗೆ ಎನ್ನುವ ಹೆಸರಿನವು. ರಿಯಾಲಿಟಿ ಶೋ ಒಂದರಲ್ಲಿ ಹೇಗೆ ಮುಗ್ಧ ಮನಸ್ಸುಗಳನ್ನು ಹಾಳು ಮಾಡಲಾಗುತ್ತದೆ ಎನ್ನುವ ಅಂಶವನ್ನು ಹೊಂದಿರುವ ಇಲ್ಲದ ತೀರದ ಕಡೆಗೆ ಬಹಳ ಆಪ್ತವಾಗುತ್ತದೆ. ಕಥಾ ನಾಯಕನ ಪ್ರೀತಿ, ಜೋಗಿಕಲ್ಲು, ಜೋಗಿಕಲ್ಲಿನ ನೆತ್ತಿಯಲ್ಲಿ ಮರದ ಮೇಲೆ ಕೆತ್ತಿದ ಹೆಸರು.. ಇವು ಕೂಡ ಅಷ್ಟೇ ಇಷ್ಟವಾಗುತ್ತವೆ.

ಪುಸ್ತಕ ಓದಿ ಇಟ್ಟ ಎಷ್ಟೋ ಹೊತ್ತಿನ ವರೆಗೆ ಕಥೆಗಳು ನೆನಪಾಗುತ್ತಲೇ ಇರುತ್ತವೆ. ಹಾಂಗಾಗಕಾಗಿತ್ತಿಲ್ಲೆ, ಇದು ಹಿಂಗಾಗಿದ್ದರೆ ಚನ್ನಾಗಿತ್ತು ಎಂದು ಹಲವು ಬಾರಿ ಆಲೋಚಿಸುವಂತಾಗುತ್ತದೆ. ಆದರೂ ಒಂದು ಮಾತು ಹೇಳಲೇಬೇಕು. ಪದ್ಮನಾಭರ ಈ ಎಲ್ಲ ಕಥೆಗಳಲ್ಲಿ ವಿಷಾದದ ಭಾವನೆ ಸ್ವಲ್ಪ ಜಾಸ್ತಿಯೇ ಇದೆ.

ಈಗಾಗಲೇ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಛಂದದ ಪುಸ್ತಕವನ್ನು ಎಲ್ಲರೂ ಒಂದಲೇಬೇಕು. ೧೧೦ ರೂಪಾಯಿಯ ೧೫೦ ಪುಟಗಳ ಈ ಕಥಾ ಸಂಕಲನ ಓದುಗರ ಮನಸ್ಸನ್ನು ಸೆಳೆಯುತ್ತದೆ. ಅಂದಹಾಗೇ ಇಂತಹ ಪುಸ್ತಕ ಕೊಟ್ಟ ಪದ್ಮನಾಭನಿಗೆ ಇನ್ನೊಮ್ಮೆ ಸಲಾಂ. ಶೀಘ್ರದಲ್ಲಿಯೇ ಇನ್ನೊಂದು ಪುಸ್ತಕ ಬರಲಿ ಎನ್ನುವುದು ನನ್ನ ಹಾರೈಕೆ.

No comments:

Post a Comment