Saturday, June 23, 2018

ಚೀನಾದ ಡ್ರಾಗನ್ ಗೆ ಕೊಡಬೇಕು ಭಾರತದ ಪಾಂಜಾ ಏಟು

ಪ್ರಸ್ತುತ ಜಗತ್ತಿನಲ್ಲಿ ಭಾರತಕ್ಕೆ ಚೀನಾ ಎಲ್ಲ ರಂಗಗಳಲ್ಲಿಯೂ ಎದುರಾಳಿ. ವ್ಯಾಪಾರ, ವೃತ್ತಿ, ಕೌಶಲ್ಯ, ರಾಜತಾಂತ್ರಿಕ, ಸೈನಿಕ ಹೀಗೆ ಎಲ್ಲ ರಂಗಗಳಲ್ಲಿಯೂ ಭಾರತಕ್ಕೆ ಅಡ್ಡಗಾಲು ಹಾಕುತ್ತಿರುವ ರಾಷ್ಟ್ರ ಚೀನಾ. ಭಾರತ ಯಾವುದೇ ಕಾರ್ಯಗಳನ್ನು ಕೈಗೊಳ್ಳಲಿ, ಅದಕ್ಕೆ ಚೀನಾದ ಅಡ್ಡಗಾಲು ಇದ್ದದ್ದೇ. ಇಂತಹ ಚೀನಾಕ್ಕೆ ಅದರದೇ ಹಾದಿಯಲ್ಲಿ ಉತ್ತರ ನೀಡುವ ಅಗತ್ಯವಿದೆ. ಚೀನಾ ಅನುಸರಿಸುತ್ತಿರುವ ನೀತಿಗಳನ್ನೇ ಅದರ ವಿರುದ್ಧವೇ ಬಳಕೆ ಮಾಡುವ ಮೂಲಕ ಚೀನಾದ ಮಗ್ಗಲು ಮುರಿಯಬೇಕಿದೆ. ಡ್ರ್ಯಾಗನ್ಗೆ ಭಾರತದ ಚಾಣಕ್ಯ ವಿದೇಶಾಂಗ ನೀತಿಯ ಪರಿಚಯ ಮಾಡಿಕೊಡಬೇಕಿದೆ. ಇಲ್ಲವಾದಲ್ಲಿ ಚೀನಾ ಇಂಚಿಂಚಾಗಿ ಭಾರತವನ್ನು ನುಂಗುವುದರಲ್ಲಿ ಸಂಶಯವಿಲ್ಲ.
ಭಾರತ ವಿಶ್ವಸಂಸ್ಥೆಯ ಖಾಯಂ ಸದಸ್ಯತ್ವಕ್ಕೆ ಪ್ರಯತ್ನಿಸುತ್ತಿದೆ. ಇದಕ್ಕೆ ಕುತಂತ್ರಿ ಚೀನಾ ಅಡ್ಡಗಾಲು ಹಾಕುತ್ತಿರುವುದು ಗುಟ್ಟಾಗೇನೂ ಇಲ್ಲ. ಅಷ್ಟಲ್ಲದೇ ಎನ್ಎಸ್ಜಿಗೂ ಕೂಡ ಚೀನಾದ ವಿರೋಧ ಇದ್ದೇ ಇದೆ. ಭಾರತದ ಪ್ರಭಾವವನ್ನು ಜಾಗತಿಕವಾಗಿ ತಗ್ಗಿಸಬೇಕೆಂಬ ಕಾರಣಕ್ಕಾಗಿ ಚೀನಾ ಕೈಗೊಳ್ಳುತ್ತಿರುವ ಕಾರ್ಯಗಳಲ್ಲಿ ಇದೂ ಒಂದು ಎಂದರೆ ತಪ್ಪಾಗಲಿಕ್ಕಿಲ್ಲ. ಇಷ್ಟೇ ಅಲ್ಲ, ಭಾರತದ ವಿರುದ್ಧ ಸದಾ ಭಯೋತ್ಪಾದನೆಯ ಮೂಲಕ ಕಿತ್ತಾಡುತ್ತಿರುವ ಪಾಕಿಸ್ತಾನದ ಬೆನ್ನಿಗೆ ನಿಂತಿರುವುದೂ ಚೀನಾವೇ. ಜಗತ್ತಿನ ಮೋಸ್ಟ್ ವಾಂಟೆಡ್ ಉಗ್ರರ ಯಾದಿಯಲ್ಲಿ ಹಫೀಜ್ ಸಯಿದ್ ಹೆಸರು ಸೇರಿಸಬೇಕೆಂಬ ನಿಟ್ಟಿನಲ್ಲಿ ಭಾರತ ವಿಶ್ವಸಂಸ್ಥೆಯಲ್ಲಿ ಪ್ರಯತ್ನ ಕೈಗೊಂಡಾಗ ಅದಕ್ಕೆ ಅಡ್ಡಗಾಲಾಗಿದ್ದು ಇದೇ ಚೀನಾ.
ಅರುಣಾಚಲ ಪ್ರದೇಶ ತನ್ನದು ಎಂದು ಆಗಾಗ ಗುಟುರು ಹಾಕುವ, ಅಕ್ಸಾಯ್ ಚೀನ್ ನ್ನು ವಶಪಡಿಸಿಕೊಂಡು, ಅಕ್ರಮವಾಗಿ ತನ್ನಲ್ಲಿ ಇಟ್ಟುಕೊಂಡಿರುವ, ಡೋಕ್ಲಾಂ ವಿವಾದವನ್ನು ಸದಾ ಜೀವಂತ ಇಟ್ಟು, ಭಾರತವನ್ನು ಬೆದರಿಸಲು ನೋಡುತ್ತಿರುವ ರಾಷ್ಟ್ರವೂ ಚೀನಾವೇ. ಇಂತಹ ಚೀನಾಕ್ಕೆ ಅದರದ್ದೇ ಆದ ರೀತಿಯಲ್ಲಿ ಉತ್ತರ ನೀಡುವುದು ಅಗತ್ಯ ಕ್ರಮಗಳಲ್ಲಿ ಒಂದೆನ್ನಿಸಿದೆ. ಚೀನಾ ಏನೇನು ಮಾರ್ಗ ಅನುಸರಿಸುತ್ತಿದೆಯೋ, ಆ ಮಾರ್ಗಗಳ ಮೂಲಕವೇ ಚೀನಾಕ್ಕೆ ಪಾಠ ಕಲಿಸಬಹುದು, ಮಣ್ಣು ಮುಕ್ಕಿಸಬಹುದು.
ಯಾವುದೋ ಶತಮಾನದಲ್ಲಿ ಚೀನಾವನ್ನು ಆಳಿದ ರಾಜ ಯಾವ್ಯಾವ ಪ್ರದೇಶವನ್ನು ಗೆದ್ದು, ತನ್ನ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿಕೊಂಡಿದ್ದನೋ, ಆ ಪ್ರದೇಶಗಳನ್ನೆಲ್ಲ ಇಂದಿಗೂ ತನ್ನದು ಎಂದು ವಾದ ಮಾಡುತ್ತಿರುವ ಚೀನಾ ಅದೇ ಕಾರಣಕ್ಕೆ ಇಂದಿಗೂ ಭಾರತದ ಅರುಣಾಚಲ ಪ್ರದೇಶ ತನ್ನದು ಎಂದು ವಾದ ಮಾಡುತ್ತಿದೆ. ಒಂದಾನೊಂದು ಕಾಲದಲ್ಲಿ ಸಿಕ್ಕೀಂ ಕುರಿತೂ ಹೀಗೆಯೇ ವಾದ ಮಾಡಿತ್ತು ಚೀನಾ. ಅಷ್ಟೇ ಅಲ್ಲದೇ ಅಕ್ಸಾಯ್ ಚೀನ್ನ್ನು ತನ್ನ ವಶದಲ್ಲಿ ಇಟ್ಟುಕೊಂಡಿರಲು ಪ್ರಮುಖ ಕಾರಣವೂ ಇದೆ. ಅಷ್ಟೇ ಏಕೆ ಬ್ರಿಟೀಷರು ಭಾರತವನ್ನು ಬಿಟ್ಟು ಹೋಗುವಾಗ ಭಾರತ-ಚೀನಾ ನಡುವಿನ ಮ್ಯಾಕ್ಮೋಹನ್ ರೇಖೆಯನ್ನು ಒಪ್ಪದೇ ಇರಲೂ ಇದೇ ಕಾರಣ. ಇಷ್ಟೇ ಅಲ್ಲ, ದಲಾಯಿ ಲಾಮಾರ ಟಿಬೆಟನ್ನು ಆಪೋಶನ ತೆಗೆದುಕೊಂಡಿರುವುದಕ್ಕೂ ಇದೇ ಕಾರಣ. ಭೂತಾನ್ನ ಕೆಲ ಪ್ರದೇಶ, ಮ್ಯಾನ್ಮಾರ್, ಲಾವೋಸ್, ವಿಯೆಟ್ನಾಂಗಳ ಜತೆಗೂ ಇದೇ ಕಾರಣಕ್ಕಾಗಿ ವಿವಾದವನ್ನು ಮಾಡಿಕೊಂಡು, ಜಗಳವಾಡುತ್ತಿರುವ ಧೂರ್ತ ರಾಷ್ಟ್ರವೂ ಚೀನಾವೇ. ಇಂತಹ ಚೀನಾಕ್ಕೆ ಚೀನಾದ ಮಾರ್ಗದಲ್ಲಿಯೇ ಉತ್ತರ ನೀಡಿದಾಗ ಮಾತ್ರ ಆ ದೇಶವನ್ನು ಮಟ್ಟ ಹಾಕಲು ಸಾಧ್ಯ.
ಚೀನಾದ ಕ್ವಾಂಗ್ಜು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮುಸ್ಲೀಮರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಈ ಮುಸ್ಲೀಮರು ಚೀನಾದಲ್ಲಿ ತಮ್ಮದೇ ಆದ ಹಕ್ಕುಗಳಿಗೆ ಹೋರಾಟ ಮಾಡುತ್ತಿದ್ದಾರೆ. ಮುಸ್ಲೀಮರಿಗೆ ಪ್ರತ್ಯೇಕ ಸ್ಮಶಾನಕ್ಕೆ ಅವಕಾಶ ಪಡೆಯುವುದು, ಹಲಾಲ್ ಆಹಾರ ಪದ್ಧತಿಯನ್ನು ಅನುಸರಿಸುವುದೂ ಸೇರಿದಂತೆ ಸಾಕಷ್ಟು ಬೇಡಿಕೆಗಳನ್ನು ಚೀನಾಅ ಸಕರ್ಾರದ ಮುಂದೆ ಮುಸ್ಲೀಮರು ಇಡುತ್ತಲೇ ಬಂದಿದ್ದಾರೆ. ಆದರೆ ಚೀನಾ ಇವುಗಳನ್ನೆಲ್ಲ ಮಿಲಿಟರಿ ಬಲದ ಮೂಲಕ ದಮನ ಮಾಡುತ್ತಿದೆ. ಚೀನಾಅದ ವಿರುದ್ಧ ಆಗಾಗ ಮುಸ್ಲೀಮರು ಸೊಲ್ಲೆತ್ತುತ್ತಿದ್ದರೂ ಅವನ್ನೆಲ್ಲ ನಿದರ್ಾಕ್ಷಿಣ್ಯವಾಗಿ ದಮನ ಮಾಡುವ ಕಾರ್ಯದಲ್ಲಿ ಅಲ್ಲಿನ ಸಕರ್ಾರ ನಿರತವಾಗಿದೆ. ಭಾರತದ ವಿಷಯಕ್ಕೆ ಬಂದರೆ ಹೇಗೆ ಪಾಕಿಸ್ತಾನದ ಬೆನ್ನಿಗೆ ನಿಂತು ಭಾರತದ ವಿರುದ್ಧ ಪಾಕ್ನ್ನು ಚೀನಾ ಎತ್ತಿಕಟ್ಟುತ್ತಿದೆಯೋ, ಅದೇ ರೀತಿ, ಕ್ವಾಂಗ್ಜು ಮುಸ್ಲೀಮರ ಬೆನ್ನಿಗೆ ಭಾರತ ನಿಲ್ಲುವ ಅಗತ್ಯವಿದೆ. ಶತ್ರುವಿನ ಶತ್ರು ಮಿತ್ರನಾಗುತ್ತಾನೆ ಎನ್ನುವ ಪಂಚತಂತ್ರದ ಉಕ್ತಿಯಂತೆ ಕ್ವಾಂಗ್ಜು ಮುಸ್ಲೀಮರ ಬೆನ್ನಿಗೆ ನಿಂತು, ಚೀನಾಕ್ಕೆ ಪಾಠ ಕಲಿಸಬಹುದಾಗಿದೆ.
ಭಾರತದ ತೆಕ್ಕೆಯಲ್ಲಿಯೇ ಇದ್ದಂತಿರುವ ದ್ವೀಪರಾಷ್ಟ್ರ ಮಾಲ್ಡೀವ್ಸ್ ಭಾರತದ ಜತೆಗೆ ಇದುವರೆಗೂ ವ್ಯಾಪಾರ-ವ್ಯವಹಾರ, ಸೈನಿಕ ನೆರವು ಹೊಂದಿತ್ತು. ಆದರೆ ಅಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ ಚೀನಾ ಹಸ್ತ ಕ್ಷೇಪ ಮಾಡಿ, ಮಾಲ್ಡೀವ್ಸ್ ಭಾರತದ ವಿರುದ್ಧ ತಿರುಗಿ ಬೀಳುವಂತೆ ಮಾಡಿತು. ಚೀನಾದೊಂದಿಗೆ ಸದಾ ಕಾಲ ಮುನಿಸನ್ನು ಹೊಂದಿರುವ ರಾಷ್ಟ್ರ ತೈವಾನ್. ಈ ತೈವಾನ್ ದ್ವೀಪ ತನ್ನದು ಎಂದು ಚೀನಾ ವಾದಿಸುತ್ತಲೇ ಬಂದಿದೆ. ಆದರೆ ತೈವಾನಿಗರು ಇದನ್ನು ಒಪ್ಪದೇ, ತಮ್ಮದು ಸ್ವತಂತ್ರ ದೇಶ ಎನ್ನುತ್ತಿದ್ದಾರೆ. ಇದೀಗ ಚೀನಾ ತೈವಾನ್ ವಿರುದ್ಧ ಬಲ ಪ್ರದರ್ಶನ ಮಾಡುತ್ತಿದೆ. ಭಾರತ ತೈವಾನ್ ಪರ ನಿಲ್ಲುವ ಅಗತ್ಯವಿದೆ. ಭಾರತದ ವಿರುದ್ಧ ಮಾಲ್ಡೀವ್ಸ್ನ್ನು ಚೀನಾ ಹೇಗೆ ಎತ್ತಿಕಟ್ಟಿ, ತನ್ನ ಬೆಂಬಲ ನೀಡಿತೋ, ಅದೇ ರೀತಿ ಭಾರತ ತೈವಾನ್ಗೆ ಸಂಪೂರ್ಣ ಬೆಂಬಲವನ್ನು ನೀಡುವ ಅಗತ್ಯವೂ ಇದೆ. ತೈವಾನ್ ನೊಂದಿಗೆ ವ್ಯಾಪಾರ ವ್ಯವಹಾರವನ್ನು ಭಾರತ ವೃದ್ಧಿಸಿ, ತೈವಾನ್ಗೆ ಅಗತ್ಯವಿರುವ ಎಲ್ಲ ರೀತಿಯ ಬೆಂಬಲ ಹಾಗೂ ಬಲವನ್ನು ಒದಗಿಸಿದಾಗ ಚೀನಾ ಹೈರಾಣಾಗುತ್ತದೆ.
ಭಾರತದ ಅರುಣಾಚಲ ಪ್ರದೇಶ ತನ್ನದು ಎಂದು ಚೀನಾ ವಾದಿಸುತ್ತಿದೆ. ಹಿಮದೆ ಚೀನಾ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುವ ತನ್ನ ಪ್ರವಾಸಿಗರಿಗೆ ಸ್ಟ್ಯಾಪಲ್ಡ್ ವಿಸಾವನ್ನು ನೀಡುವ ಮೂಲಕ ಅಹಂಕಾರವನ್ನು ಮೆರೆದಿತ್ತು. ಭಾರತವೂ ಚೀನಾದ ವಿರುದ್ಧ ಇಂತದ್ದೇ ಕ್ರಮವನ್ನು ಕೈಗೊಳ್ಳಬಹುದು. ಭಾರತದ ಪುರಾಣಗಳಲ್ಲಿ ಟಿಬೆಟ್ಗೆ ವಿಶೇಷವಾದ ಸ್ಥಾನವಿದೆ. ತ್ರಿವಿಷ್ಠಪ ಎಂದು ಕರೆಯಲ್ಪಡುತ್ತಿದ್ದ ಟಿಬೆಟ್ ಭಾರತೀಯರ ಪಾಲಿಗೆ ಕೈಲಾಸ ಎಂದೇ ನಂಬಿಕೆ. ಅಷ್ಟೇ ಅಲ್ಲದೇ ಪವಿತ್ರ ಸ್ಥಳಗಳಾದ ಕೈಲಾಸ ಪರ್ವತ ಹಾಗೂ ಮಾನಸ ಸರೋವರಗಳು ಟಿಬೆಟ್ನಲ್ಲಿಯೇ ಇದೆ. ಇಂತಹ ಟಿಬೆಟ್ನ್ನು 1950ರ ದಶಕದಲ್ಲಿ ಚೀನಾ ಅತಿಕ್ರಮಿಸಿಕೊಂಡಿದ್ದು ಎಲ್ಲರಿಗೂ ತಿಳಿದ ವಿಚಾರವೇ. ಭಾರತದ ಪುರಾಣಗಳಲ್ಲೂ ಉಲ್ಲೇಖವಾಗಿರುವ ಟಿಬೆಟ್ ಒಂದಾನೊಂದು ಕಾಲದಲ್ಲಿ ಭಾರತದ್ದೇ ಆಗಿತ್ತು. ಚೀನಾ ಹೇಗೆ ತನ್ನ ಸಾಮ್ರಾಜ್ಯದಲ್ಲಿದ್ದ ಪ್ರದೇಶಗಳು ತನ್ನದು ಎಂದು ವಾದಿಸುತ್ತದೋ ಭಾರತ ಕೂಡ ಟಿಬೆಟನ್ನು ತನ್ನದು ಎಂದು ವಾದಿಸಬಹುದು. ಪುರಾಣಗಳು, ವೇದಗಳ ಸಾಕ್ಷ್ಯಗಳನ್ನು ಚೀನಾದ ಮುಂದೆ ಇಡಬಹುದು. ಅಷ್ಟೇ ಅಲ್ಲದೇ ಟಿಬೆಟಿಯನ್ನರಿಗೆ ಆಶ್ರಯ ನೀಡಿದಂತೆಎ ಟಿವೆಟಿಯನ್ನರಿಗೆ ಪ್ರತ್ಯೇಕ ರಾಷ್ಟ್ರಕ್ಕಾಗಿ ಬೆಂಬಲವನ್ನೂ ನೀಡಬಹುದು. ಟಿಬೆಟ್ಗೆ, ಟಿಬೆಟಿನಲ್ಲಿರುವ ಮಾನಸ ಸರೋವರ ಹಾಗೂ ಕೈಲಾಸ ಪರ್ವತಕ್ಕೆ ತೆರಳುವವರಿಗೆ ಭಾರತ ಕೂಡ ಸ್ಟ್ಯಾಪಲ್ಡ್ ವೀಸಾವನ್ನು ನೀಡಿದಾಗ ಚೀನಾಕ್ಕೆ ಅದರದ್ದೇ ಆದ ರೀತಿಯಲ್ಲಿ ಉತ್ತರವನ್ನು ನೀಡಿದ ಹಾಗೆ ಆಗುತ್ತದೆ. ಆಗ ಚೀನಾ ಬಗ್ಗಿ ಬರುತ್ತದೆ.
ಡೋಕ್ಲಾಂನಲ್ಲಿ ಚೀನಾ ಕ್ಯಾತೆ ತೆಗೆದಿದ್ದು ಎಲ್ಲರಿಗೂ ತಿಳಿದಿರುವ ಸಂಗತಿಯೇ. ಡೋಕ್ಲಾಂ ವಿಷಯದಲ್ಲಿ ಭಾರತ ಬಹಳ ದಿಟ್ಟ ನಡೆಯನ್ನೇ ಇಟ್ಟಿದೆ. ಡೋಕ್ಲಾಂ ಅಲ್ಲದೇ ಚೀನಾ ಭೂತಾನ್ ಜತೆ, ಮ್ಯಾನ್ಮಾರ್ ಜತೆ, ಲಾವೋಸ್, ವಿಯೆಟ್ನಾಂ, ಮಂಗೋಲಿಯಾ, ಉತ್ತರ ಕೋರಿಯಾ, ರಷ್ಯಾ ಸರಿ ಹಲವು ರಾಷ್ಟ್ರಗಳ ಜತೆ ಗಡಿ ಹಂಚಿಕೊಂಡಿದೆ. ಈ ಎಲ್ಲ ರಾಷ್ಟ್ರಗಳ ಜತೆಯೂ ಒಂದಲ್ಲ ಒಂದು ಪ್ರದೇಶಗಳಿಗೆ ಸಂಬಂಧಿಸಿದಂತೆ ಚೀನಾ ವಿವಾದವನ್ನು ಸದಾ ಹಸಿಯಾಗಿ ಇಟ್ಟುಕೊಂಡಿದೆ. ಈ ಎಲ್ಲ ರಾಷ್ಟ್ರಗಳೂ ಒಗ್ಗಟ್ಟಾಗಿ ಚೀನಾ ವಿರುದ್ಧ ನಿಂತಾಗ ಚೀನಾವನ್ನು ತಣ್ಣಗೆ ಮಾಡಲು ಸಾಧ್ಯ. ಎಲ್ಲ ರಾಷ್ಟ್ರಗಳ ಒಕ್ಕೂಟವನ್ನು ಮಾಡಿ, ಚೀನಾವನ್ನು ಹಣಿಯಬಹುದು. ಯಾವುದೇ ಒಂದು ರಾಷ್ಟ್ರದ ಗಡಿಯ ಕುರಿತು ಚೀನಾ ಕಾಲು ಕೆರೆದು ನಿಂತಾಗಲೂ ಉಳಿದ ಎಲ್ಲ ಗಡಿ ರಾಷ್ಟ್ರಗಳೂ ಒಗ್ಗಟ್ಟಾಗಿ ಚೀನಾ ವಿರುದ್ಧ ನಿಂತು, ಅದನ್ನು ಬಗ್ಗುಬಡಿಯಬಹುದು.
ದಕ್ಷಿಣ ಚೀನಾ ಸಮುದ್ರದಲ್ಲಿ ಫಿಲಿಫೈನ್ಸ್ ಸಮುದ್ರ ವಲಯದಲ್ಲಿ ಚಿನಾ ಕೃತಕ ದ್ವೀಪವನ್ನು ನಿಮರ್ಿಸಿ, ಅಲ್ಲಿ ತನ್ನ ಮಿಲಿಟರಿ ಬಲವನ್ನು ನೆಲೆಗೊಳಿಸುವ ಚಿಂತನೆ ನಡೆಸುತ್ತಿದೆ. ಈ ಕೃತಕ ದ್ವೀಪದ ಕರಿತು ಈಗಾಗಲೇ ಫಿಲಿಫೈನ್ಸ್, ಜಪಾನ್ ಹಾಗೂ ಅಮೆರಿಕಗಳು ವಿರೋಧವನ್ನು ವ್ಯಕ್ತಪಡಿಸಿವೆ. ಅಲ್ಲದೇ ಆಗಾಗ ಈ ವಲಯದಲ್ಲಿ ಏರ್ಕ್ರಾಫ್ಟ್ ಕ್ಯಾರಿಯರ್ ನೌಕೆಗಳನ್ನು ಕಳುಹಿಸುವ ಮೂಲಕ ವಾತಾವರಣದಲ್ಲೂ ಬಿಸಿಯೇರಿಸಿವೆ. ಈ ಕೃತಕ ದ್ವೀಪಕ್ಕೆ ಸಂಬಂಧಿಸಿದಂತೆ ಭಾರತ ಫಿಲಿಫೈನ್ಸ್ನಂತಹ ರಾಷ್ಟ್ರಗಳ ಬೆನ್ನಿಗೆ ನಿಲ್ಲುವ ಅಗತ್ಯವಿದೆ. ಏಷ್ಯಾದಲ್ಲಿ ಚೀನಾಕ್ಕೆ ಸರಿಸಮಾನವಾಗಿ ನಿಲ್ಲುವ ಸಾಮಥ್ರ್ಯ ಹೊಮದಿರುವ ರಾಷ್ಟ್ರ ಭಾರತ ಫಿಲಿಫೈನ್ಸ್ ಬೆನ್ನಿಗೆ ನಿಂತರೆ ಸಹಜವಾಗಿಯೇ ಚೀನಾದ ಅಹಂಕಾಆರ ತಗ್ಗುತ್ತದೆ. ಮೊದಲಿನಷ್ಟು ಆಕ್ರಮಣಕಾರಿಯಾಗಿ ಮುಂದುವರಿಯುವುದನ್ನು ಕಡಿಮೆ ಮಾಡುತ್ತದೆ.
1890ರ ವೇಳೆಗೆ ಇಂಗ್ಲೆಂಡಿಗೂ-ಚೀನಾ ರಾಜರಿಗೂ ನಡೆದ ಯುದ್ಧದಲ್ಲಿ ಚೀನಾ ಸೋಲನ್ನು ಅನುಭವಿಸಿದ ಸಂದರ್ಭದಲ್ಲಿ ಹಾಂಗ್ ಕಾಂಗ್ನ್ನು 100 ವರ್ಷಗಳ ಅವಧಿಗೆ ಇಂಗ್ಲೆಂಡಿಗೆ ಬಿಟ್ಟುಕೊಡಬೇಕು ಎನ್ನುವ ಕರಾರಿನೊಂದಿಗೆ ಚೀನಾ ಆ ಪ್ರದೇಶವನ್ನು ಬ್ರಿಟನ್ ಆಡಳಿತಕ್ಕೊಳಪಡಿಸುತ್ತದೆ. ನಂತರ ಹಾಂಗ್ ಕಾಂಗ್ ಪ್ರಮುಖ ವ್ಯಾಪಾರಿ ಕೇಂದ್ರವಾಗಿ ಕಂಡು-ಕೇಳರಿಯದಷ್ಟು ಅಭಿವೃದ್ಧಿ ಸಾಧಿಸುತ್ತದೆ. 1990ರ ದಶಕದಲ್ಲಿ ಈ ಹಾಂಗ್ ಕಾಂಗ್ನ್ನು ಬ್ರಿಟನ್ ಮರಳಿ ಚೀನಾಕ್ಕೆ ಒಪ್ಪಿಸಿದ ಸಂದರ್ಭದಲ್ಲಿ ಹಾಂಗ್ಕಾಂಗ್ ನಿವಾಸಿಗಳಲ್ಲಿ ಹುಟ್ಟಿರುವ ಅಸಮಧಾನದ ಬಗ್ಗೆ ಯಾರೂ ಗಮನವನ್ನೇ ಹರಿಸಿಲ್ಲ. ಬ್ರಿಟನ್ ಆಡಳಿತದಲ್ಲಿದ್ದವರಿಗೆ ಚೀನಾ ಆಡಳಿತಕ್ಕೆ ಸೇರುವುದು ಇಷ್ಟವೇ ಇರಲಿಲ್ಲ. ಈಗಲೂ ಆಗೊಮ್ಮೆ, ಈಗೊಮ್ಮೆ ಹಾಂಗ್ ಕಾಂಗ್ನಲ್ಲಿ ಈ ಮುನಿಸು ಕಾಣಿಸಿಕೊಳ್ಳುತ್ತದೆ. ಪ್ರತಿಧ್ವನಿಸುತ್ತದೆ. ಚೀನಾಅ ಅವನ್ನು ದಮನ ಮಾಡುವವ ಕಾರ್ಯದಲ್ಲೂ ನಿರತವಾಗಿದೆ. ಭಾರತ ಹಾಂಗ್ಕಾಂಗ್ ನಿವಾಸಿಗಳ ಜತೆಗೆ ನಿಲ್ಲುವ ಅಗತ್ಯವೂ ಇದೆ.
ಭಾರತದಲ್ಲಿ ನಕ್ಸಲೀಯರಿಗೆ ಚೀನಾದ ನೆರವು ಗುಟ್ಟಾಗೇನೂ ಉಳಿದಿಲ್ಲ. ಪರೋಕ್ಷವಾಗಿ ಬಂದೂಕು, ಹಣ ಸಹಾಯ ಮಾಡುತ್ತಿರುವುದು ಚೀನಾವೇ. ಭಾರತದಲ್ಲಿ ನಕ್ಸಲಿಸಂ ಬೆಳೆಸಿ, ಆಂತರಿಕವಾಗಿ ಭಾರತವನ್ನು ಅಧೀರ ಮಾಡುವುದು ಚೀನಾಆದ ಆಲೋಚನೆ. ಇದಕ್ಕೆ ಭಾರತ ಪ್ರತ್ಯುತ್ತರವನ್ನೂ ನೀಡುವ ಅಗತ್ಯವಿದೆ. ಚೀನಾದಲ್ಲಿ ಕಮ್ಯುನಿಸ್ಟ್ ಪಕ್ಷಕ್ಕೆ ವಿರೋಧವಾಗಿ ಸಾಕಷ್ಟು ಜನರಿದ್ದಾರೆ. ಅದೆಷ್ಟೋ ಲಕ್ಷಗಟ್ಟಲೆ ಜನರು ಪೀಪಲ್ಸ್ ಲಿಬರೇಷನ್ ಆರ್ಮಿ ವಿರುದ್ಧ, ಅಧ್ಯಕ್ಷ ಕ್ಸಿ ಜೀನ್ ಪಿಂಗ್ ವಿರುದ್ಧ ಇದ್ದಾರೆ. ಅವರನ್ನೆಲ್ಲ ಬಲಪ್ರಯೋಗಿಸಿ ದಮನ ಮಾಡುವ ಕಾರ್ಯದಲ್ಲಿ ಚೀನಾ ನಿರತವಾಗಿದೆ. ಈ ಜನರಿಗೆ ಭಾರತ ಸಹಾಯ ಮಾಡಿದಾಗ ಚೀನಾಕ್ಕೆ ಭಾರತದಲ್ಲಿ ತಾನು ಮಾಡುತ್ತಿರುವ ಧೂರ್ತ ಕಾರ್ಯ ಅರಿವಿಗೆ ಬರಲು ಸಾಧ್ಯವಿದೆ. ಹೀಗೆ ಮಾಡಿದಲ್ಲಿ ಖಂಡಿತವಾಗಿಯೂ ಚೀನಾ ಹಣ್ಣಾಗುತ್ತದೆ. ತನ್ನೊಳಗಿನ ಸಮಸ್ಯೆಗಳನ್ನು ಪರಿಹಾರ ಮಾಡಿಕೊಲ್ಳಲಾಗದಷ್ಟು ಅಧೀರಗೊಳ್ಳುತ್ತದೆ. ಅಲ್ಲದೇ ತನ್ನ ಸಮಸ್ಯೆ ಪರಿಹಾರ ಮಾಡಿಕೊಂಡು, ಉಳಿದ ಕಡೆಗೆ ಗಮನ ಹರಿಸೋಣ ಎಂದುಕೊಳ್ಳುತ್ತದೆ.
ಚೀನಾಕ್ಕೆ ಚೀನಾದ ರೀತಿಯಲ್ಲಿ ಪಾಠ ಕಲಿಸದೇ ಹೋದರೆ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆಯನ್ನು ತರುತ್ತದೆ. ಓಬಿಓಆರ್ ಮೂಲಕ, ತನ್ನ ವಸ್ತುಗಳನ್ನು ಮಾರಾಟ ಮಾಡುವ ಮೂಲಕ, ಭಯೋತ್ಪಾದನೆ ಹೆಚ್ಚಿಸುವ ಮೂಲಕ ಹೀಗೆ ಹಲವಾರು ಮಾರ್ಗಗಳನ್ನು ಚೀನಾ ಅನುಸರಿಸುವುದರಲ್ಲಿ ಸಂಶಯವಿಲ್ಲ. ಅದಕ್ಕೆ ಅದರದೇ ಆದ ಮಾರ್ಗದ ಮೂಲಕ ಉತ್ತರ ಕೊಟ್ಟಾಗಲಷ್ಟೇ ಚೀನಾ ಬಗ್ಗಿ ಬರುತ್ತದೆ. ಭಾರತದ ವಿಷಯದಲ್ಲಿ ತಲೆ ಹಾಕದೇ ಸುಮ್ಮನಾಗುತ್ತದೆ.

No comments:

Post a Comment