Monday, January 1, 2018

ದಾಸ್ಯ (ಕಥೆ ಭಾಗ-3)

ನನ್ನ ಹಾಗೂ ಪಟೇಲರ ನಡುವಿನ ಜಗಳ ತಾರಕಕ್ಕೇರಿದಾಗಲೇ ನನ್ನ ಕೆನ್ನೆಗೆ ಅವರು ಫಟಾರೆಂದು ಹೊಡೆದಿದ್ದರು. ಬೆನ್ನಿಗೆ ಬಡಿಯಲು ಆರಂಭಿಸಿದ್ದರು. ನನಗೆ ಮಾತ್ರ ಈಗ ಸಿಟ್ಟು ತೀವ್ರವಾಗಿತ್ತು. ಒಂದು ಕ್ಷಣವೂ ಪಟೇಲರ ಮನೆಯಲ್ಲಿ ನಿಲ್ಲದೇ, ಮನೆ ಬಿಟ್ಟು ಬಂದಿದ್ದೆ.
ಅದಾದ ಮೇಲೆ ನನಗೆ ಒಂದೊಂದೆ ಮಾಹಿತಿಗಳು ಬರಲಾರಂಭಿಸಿದ್ದವು. ಪಟೇಲರು ನನ್ನ ಮದುವೆಯಾಗುವುದರ ಹಿಂದೆ ದೊಡ್ಡದೊಂದು ಹುನ್ನಾರವೇ ಅಡಗಿತ್ತು ಎನ್ನುವುದು ತಿಳಿದು ಬಂದಿತ್ತು. ನಾನು ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದ್ದು, ಕ್ರಾಂತಿ ಮಾರ್ಗವನ್ನು ಅನುಸರಿಸಿದ್ದು ಎಲ್ಲವನ್ನೂ ಅರಿತಿದ್ದ ಪೊಲೀಸ್ ಪಡೆ ಹಾಗೂ ಅಂಗ್ರೇಜಿ ಸರಕಾರ ನನ್ನನ್ನು ಹದ್ದುಬಸ್ತಿನಲ್ಲಿ ಇಡಲು ಮೋಸದ ಹೂಟವನ್ನು ಹೂಡಿತ್ತು. ಗಣಪಯ್ಯ ಪಟೇಲರ ಬಳಿ ಮದುವೆಯ ಪ್ರಸ್ತಾಪ ಮಾಡಿ, ಮದುವೆಯಾಗುವಂತೆ ಹೇಳಿ ನನ್ನನ್ನು ಚಳವಳಿಯಿಂದ ದೂರ ಇಡುವ ಯೋಜನೆ ಅವರದ್ದಾಗಿತ್ತು. ಅದರಲ್ಲಿ ಅವರು ಯಶಸ್ವಿಯೂ ಆಗಿದ್ದರು. ಈ ಸುದ್ದಿ ನನಗೆ ತಿಳಿದ ಕ್ಷಣವೇ ನನಗೆ ಸಿಟ್ಟು ಹೆಚ್ಚಿತು. ನಖಶಿಖಾಂತ ಕೋಪ ಬಂದಿತು. ಆದರೆ ಮಾಡುವುದು ಏನು ಎನ್ನುವುದು ತಿಳಿಯದೇ ಕಂಗಾಲಾದೆ. ಆಗಿದ್ದ ಮೋಸಕ್ಕೆ ಧುಃಖವೂ ಕಟ್ಟೆಯೊಡೆದಿತ್ತು. ತುಂಬಿದ ಬಸುರಿ ಬೇರೆ. ಇದಕ್ಕೊಂದು ಉತ್ತರ ನೀಡಲೇಬೇಕಿತ್ತು.
ನಾನು ಬಸುರಿಯಾದರೂ ತೊಂದರೆಯಿಲ್ಲ ಚಳುವಳಿಯಲ್ಲಿ ಮತ್ತೆ ಪಾಲ್ಗೊಳ್ಳಲೇಬೇಕೆಂದು ನಿರ್ಧರಿಸಿದೆ. ಯಥಾ ಪ್ರಕಾರ ಸುದ್ದಿ ತಿಳಿದ ಪಟೇಲರು ನನ್ನ ಬಳಿ ಬಂದು, `ಚಳವಳಿ ಬಿಟ್ಟು, ಜೊತೆಗೆ ಬಂದರೆ ಮನೆಯಲ್ಲಿ ಅವಕಾಶ. ಇಲ್ಲವಾದರೆ ನಿನ್ನನ್ನು ಬಿಟ್ಟು ಬಿಡುತ್ತೇನೆ ಎಂದು ಬೆದರಿಸಿದರು. ನಾನು ಜಗ್ಗಲಿಲ್ಲ. ಗಂಡ ಬಿಟ್ಟವಳು ಎನ್ನುವ ಅಪಖ್ಯಾತಿ ಬಂದರೂ ಚಿಂತೆಯಿಲ್ಲ. ದೇಶಸೇವೆಯೇ ಮುಖ್ಯ ಎಂದುಕೊಂಡೆ.
ಅಷ್ಟರ ನಂತರ ಇನ್ನೊಂದು ಪ್ರಮುಖ ಘಟನೆ ನಡೆಯಿತು. ಚಳವಳಿಯನ್ನು ಹತ್ತಿಕ್ಕಲು ನನ್ನ ಯಜಮಾನರಾದ ಗಣಪಯ್ಯ ಪಟೇಲರು ಬ್ರಿಟೀಷರ ಜೊತೆ ಕೈ ಜೋಡಿಸಿದರು. ಅದೇ ಸಂದರ್ಭದಲ್ಲಿ ತೀವ್ರಗಾಮಿಗಳ ಗುಂಪೊಂದು ನನ್ನ ಸಂಪರ್ಕಕ್ಕೆ ಬಂದಿತು. ನಾನು ಪೊಲೀಸರಿಗೆ ಕಲ್ಲು ಹೊಡೆದಿದ್ದ ವಿಷಯ ತಿಳಿದಿದ್ದ ಆ ಗುಂಪು ನನ್ನನ್ನು ಭೇಟಿ ಮಾಡಿ, ತಮ್ಮ ಗುಂಪಿನ ಮುಂದಾಳತ್ವ ವಹಿಸಿಕೊಳ್ಳಬೇಕೆಂದು ಕೋರಲು ಬಂದಿತ್ತು. ಆದರೆ ನಾನು ಆಗ ತುಂಬಿದ ಬಸುರಿ. ನನ್ನ ಪರಿಸ್ಥಿತಿಯನ್ನು ನೋಡಿ ಅವರು ನನ್ನ ಬಳಿ ವಿಷಯವನ್ನು ಅರುಹಲು ಹಿಂದೇಟು ಹಾಕಿದರು. ನನಗೆ ಅದು ಗೊತ್ತಾಗಿ, ನಾನೇ ಅವರ ಬಳಿ ವಿಷಯ ಪ್ರಸ್ತಾಪಿಸಿದ್ದೆ.
ನಿಧಾನವಾಗಿ ಆ ಗುಂಪಿನ ಸದಸ್ಯರಲ್ಲಿ ಒಬ್ಬಿಬ್ಬರು ನನ್ನ ಬಳಿ ಮಾತನಾಡಿದಾಗ, ನಾನು ಬಸುರಿಯಾಗಿದ್ದರೂ ತೊಂದರೆಯಿಲ್ಲ. ಹೋರಾಟದ ಮುಂದಾಳತ್ವ ವಹಿಸಿಕೊಳ್ಳಲು ಸಿದ್ಧನಿದ್ದೇನೆ. ಏನು ಮಾಡಬೇಕು ಹೇಳಿ ಎಂದೆ.
ಅವರು ಮೊದಲ ಹಂತದಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸುವುದು, ನಂತರದಲ್ಲಿ ಬ್ರಿಟೀಷರನ್ನೋ ಅಥವಾ ಪೊಲೀಸರನ್ನೋ ಅಥವಾ ಅವರಿಗೆ ಸಹಾಯ ಮಾಡುತ್ತಿದ್ದವರನ್ನೋ ಹತ್ಯೆ ಮಾಡುವ ಆಲೋಚನೆ ಹೊಂದಿರುವುದಾಗಿ ಹೇಳಿದರು. ನಾನು ಅದಕ್ಕೆ ಮೆಚ್ಚುಗೆ ಹಾಗೂ ಒಪ್ಪಿಗೆ ಎರಡನ್ನೂ ಸೂಚಿಸಿದೆ. ಅದರಂತೆ ಕೆಲವು ದಿನಗಳ ಕಾಲ ನಮ್ಮ ಕ್ರಾಂತಿಕಾರಿ ಗುಂಪು ಅಲ್ಲಲ್ಲಿ ಉಗ್ರ ಚಟುವಟಿಕೆಗಳನ್ನೂ ಕೈಗೊಂಡಿತು. ಈ ಸಂದರ್ಭದಲ್ಲಿಯೇ ನಾನು ಗಂಡು ಮಗುವಿಗೆ ಜನ್ಮ ನೀಡಿದೆ. ಆ ಮಗುವಿಗೆ ನಮ್ಮ ಬಳಗದವರು ಭರತ ಎಂಬ ಹೆಸರನ್ನಿರಿಸಿದ್ದರು. ಭಾರತ ದೇಶಕ್ಕೆ ಭಾರತ ಎನ್ನುವ ಹೆಸರು ಬರಲು ಮುಖ್ಯ ಕಾರಣನಾದ ಭರತ ಮಹಾರಾಜನ ಹೆಸರು ಅದು.
1947ರ ಜನವರಿಯೋ ಅಥವಾ ಇನ್ಯಾವುದೋ ತಿಂಗಳು ಅದು. ಇನ್ನೇನು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕೇ ಸಿಗುತ್ತದೆ ಎನ್ನುವ ಗುಲ್ಲೆದ್ದಿತ್ತು. ಬ್ರಿಟೀಷರು ಜಿಗುಟುತನ ತೋರುತ್ತಿದ್ದರು. ಭಾರತ ಬಿಟ್ಟು ಹೋಗುವ ದಿನಾಂಕವನ್ನು ನಾಳೆ, ನಾಡಿದ್ದು ಎಂಬಂತೆ ಮುಂದೂಡುತ್ತಲೇ ಇದ್ದರು. ಮಂದಗಾಮಿಗಳು ಆಶಾವಾದಿಗಳಾಗಿದ್ದರು. ಆದರೆ ನಮ್ಮ ಬಳಗಕ್ಕೆ ಮಾತ್ರ ಸಹನೆಯ ಕಟ್ಟೆ ಒಡೆದಿತ್ತು. ಹೀಗಿದ್ದಾಗಲೇ ನಮ್ಮ ಸಂಘಟನೆಯ ವಿಚಾರ ಬ್ರಿಟೀಷರಿಗೂ, ಅವರ ಪರವಾಗಿದ್ದ ಪೊಲೀಸರಿಗೂ ಗೊತ್ತಾಗಿ ಎಲ್ಲೆಂದರಲ್ಲಿ ನಮ್ಮ ಹುಡುಕಾಟವನ್ನು ಕೈಗೊಂಡಿದ್ದರು.
ಭರತನಿಗೆ ಮೂರೋ ನಾಲ್ಕೋ ತಿಂಗಳಾಗಿತ್ತಷ್ಟೇ. ಕ್ರಾಂತಿಕಾರಿಗಳ ಗುಂಪಿನ ಮುಂದಾಳತ್ವ ವಹಿಸಿದ್ದ ನಾನು ತಲೆಮರೆಸಿಕೊಂಡು ಓಡಾಡುತ್ತಿದ್ದೆ. ನೆಂಟರ ಮನೆಯೋ, ಗುಂಪಿನ ಸದಸ್ಯರ ಮನೆಯೋ ಇನ್ನೆಲ್ಲೋ. ಹೀಗಿದ್ದಾಗಲೇ ಒಂದು ದಿನ ನನ್ನನ್ನು ಪೊಲೀಸರು ಹುಡುಕಿಯೇ ಬಿಟ್ಟರು. ನಾನು ತಲೆತಪ್ಪಿಸಿಕೊಳ್ಳುವಲ್ಲಿ ಹೇಗೋ ಯಶಸ್ವಿಯಾದೆ. ಆದರೆ ಅಂದಿನಿಂದ ನನ್ನ ಜಾಡು ಅವರಿಗೆ ಗೊತ್ತಾಗತೊಗಿತ್ತು. ನಾನು ಎತ್ತ ಹೋದರೂ ನನ್ನನ್ನು ಬೆನ್ನಟ್ಟಲು ಆರಂಭಿಸಿದ್ದರು. ತಲೆ ತಪ್ಪಿಸಿಕೊಳ್ಳುವ ಭರದಲ್ಲಿ ಎಲ್ಲೆಲ್ಲೋ ಅಲೆದಿದ್ದೆ. ಕಂಕುಳಲ್ಲಿ ಭರತನಿದ್ದ.
ಹೀಗಿದ್ದಾಗ ಒಮ್ಮೆ ಅಲೆದಾಡಿ ನಮ್ಮೂರಿನ ಬಳಿಯೇ ಬಂದೆ. ಅಲ್ಲಿಗೆ ಬಂದಿದ್ದ ಸುದ್ದಿ ಪಟೇಲರಿಗೆ ಹೇಗೆ ಗೊತ್ತಾಗಿತ್ತೇನೋ. ಸೀದಾ ನನ್ನನ್ನು ಹುಡುಕಿ ಬಂದರು. ಬಂದವರೇ ನನ್ನ ಬಳಿ ರೇಗಾಡಲು ಆರಂಭಿಸಿದರು. ನಾನು ಸ್ವಾತಂತ್ರ್ಯ ಹೋರಾಟದಲ್ಲಿ ಮತ್ತೆ ಪಾಲ್ಗೊಂಡಿದ್ದಕ್ಕೆ ಸಿಟ್ಟಾದರು. ಅಷ್ಟೇ ಅಲ್ಲದೇ ನನ್ನ ಜೊತೆಗೆ ಭರತನನ್ನು ಬಿಡಲು ವಿರೋಧಿಸಿ, ಭರತನನ್ನು ನಾನೇ ಕರೆದೊಯ್ಯುತ್ತೇನೆ ಎಂದು ಮುಂದಾದರು. ನನಗೂ ಸಿಟ್ಟು ಉಕ್ಕಿತು. ಅಲ್ಲಿಗೆ ಒಂದು ನಿಕ್ಕಿಯಾಗಿತ್ತು. ಪಟೇಲರು ನನ್ನ ಸ್ವಾತಂತ್ರ್ಯ ಹೋರಾಟಕ್ಕೆ ತಡೆ ಒಡ್ಡಬೇಕೆಂಬ ಕಾರಣಕ್ಕೇ ನನ್ನನ್ನು ಹುಡುಕಿ ಬಂದಿದ್ದಾರೆ ಎಂಬುದು ಅರ್ಥವಾಗಿತ್ತು. ನನ್ನ ಜತೆ ವಿಪರೀತ ಜಗಳವಾಡಿದ ಪಟೇಲರು ಭರತನನ್ನು ನನ್ನಿಂದ ಕಿತ್ತುಕೊಂಡು ಹೊರಟೇ ಹೋದರು. ನನಗೆ ಒಮ್ಮೆ ಆಕಾಶವೇ ಕಳಚಿ ಬಿದ್ದಿತ್ತು.

------------

ಇದಾಗಿ ಮೂರನೇ ದಿನಕ್ಕೆ ಪಟೇಲರು ತೀರಿಕೊಂಡಿದ್ದರು. ಅವರದು ಸಹಜ ಸಾವಾಗಿರಲಿಲ್ಲ. ಅವರ ಹತ್ಯೆಯಾಗಿತ್ತು. ಚಾಕುವಿನಿಂದ ಇರಿದ ಗುರುತುಗಳು ಮೈಮೇಲಿದ್ದವು. ನನಗೆ ಆಘಾತವಾಗಲಿಲ್ಲ. ನಾನು ನಿರೀಕ್ಷಿಸಿದ್ದೆ. ಸೀದಾ ಪಟೇಲರ ಮನೆಗೆ ನಾನು ಹೋಗುವ ವೇಳೆಗೆ ಅಲ್ಲಿದ್ದ ಪೊಲೀಸರು ನನ್ನನ್ನು ಬಂಧಿಸಿದ್ದರು.
ಪಟೇಲರ ಹತ್ಯೆಗೆ ಕಾರಣ ಸರಳವಾಗಿತ್ತು. ಭರತನನ್ನು ನನ್ನಿಂದ ಕಿತ್ತುಕೊಂಡು ಹೋದ ಸಂಗತಿ ನಮ್ಮ ಕ್ರಾಂತಿಕಾರಿ ಗುಂಪುಗಳಿಗೆ ತಿಳಿದಿತ್ತು. ಅವರು ನನ್ನ ಬಳಿ ಬಂದು ನನ್ನನ್ನು ಸಮಾಧಾನ ಮಾಡಿದ್ದರಲ್ಲದೇ, ಪಟೇಲರಿಂದ ಭರತನ್ನು ಮತ್ತೊಮ್ಮೆ ವಾಪಾಸು ಕರೆತರುವುದಾಗಿ ಹೇಳಿ ಹೋಗಿದ್ದರು. ನಾನು ಗುಂಪನ್ನು ಸಮಾಧಾನ ಮಾಡುವ ಯತ್ನ ಮಾಡಿದ್ದೆ. ಆದರೆ ನನ್ನ ಮಾತು ಕೇಳದ ಗುಂಪು ಸೀದಾ ಪಟೇಲರ ಮನೆಗೆ ಹೋಗಿತ್ತು. ಅಲ್ಲಿ ವಾಗ್ವಾದಗಳೂ ಆಗಿದ್ದವಂತೆ. ಜೊತೆಗೆ ಪಟೇಲರ ಮೇಲೆ ಏರಿ ಹೋಗಿದ್ದ ಗುಂಪಿನ ಸದಸ್ಯರು ಭರತನನ್ನು ಅವರ ಕೈಯಿಂದ ಕಿತ್ತುಕೊಂಡು ಬರಲು ಯತ್ನಿಸಿದ್ದರಂತೆ. ಹೀಗಿದ್ದಾಗಲೇ ಪಟೇಲರು ಮನೆಯಲ್ಲಿದ್ದ ಹಳೆಯ ಬಂದೂಕನ್ನು ತಂದು ಹೆದರಿಸಲು ಯತ್ನಿಸಿದ್ದರು. ತಕ್ಷಣವೇ ಗುಂಪಿನ ಸದಸ್ಯರಲ್ಲೋರ್ವ ಅವರ ಮೇಲೆ ನುಗ್ಗಿ ಚಾಕುವಿನಿಂದ ಇರಿದಿದ್ದ. ಒಂದೇ ಇರಿತಕ್ಕೆ ಪಟೇಲರು ತೀರಿಕೊಂಡಿದ್ದರು.
ತದನಂತರದಲ್ಲಿ ಪಟೇಲರ ಸಾವಿಗೆ ನಾನೇ ಕಾರಣ ಎಂದು ಕೆಲ ತಿಂಗಳುಗಳ ಜೈಲಾಯಿತು. ಅಷ್ಟರಲ್ಲಿ ಭಾರತ ಸ್ವಾತಂತ್ರ್ಯಗೊಂಡಿತ್ತು. ನಾನು ಬಿಡುಗಡೆಯೂ ಆದೆ. ಇದೇ ನೋಡು ನನ್ನ ಕಥೆ...' ಎಂದರು ಅಜ್ಜಿ.
ನನ್ನಲ್ಲಿ ಮಾತುಗಳಿರಲಿಲ್ಲ.

(ಮುಗಿಯಿತು)

No comments:

Post a Comment