Friday, December 29, 2017

ವಾರ್ತಾ ವಾಹಿನಿಗಳ ಅಮರ ಚಿತ್ರಕಥಾ

ಸಮಯ : 8.00 ಮುಂಜಾನೆ
ಸಂಗಪ್ಪ : ಆಲ್ ರೈಟ್.. ಎಲ್ಲಾ ಇದ್ದೀರಾ? ಶುರು ಹಚ್ಚಿಕೊಳ್ಳೋಣವಾ?
ರಂಗಮ್ಮ : ಯೆಸ್ ಸರ್.. ಶುರು ಹಚ್ಚಿಕೊಳ್ಳೋಣ..
ಸಂಗಪ್ಪ : ನೋಡಿ.. ಇವತ್ತು ಹೆಂಗೆ ನ್ಯೂಸ್ ಬರಬೇಕು ಅಂದ್ರೆ ಕರ್ನಾಟಕ ಹೊತ್ತಿಕೊಂಡು ಉರಿಯಬೇಕು ತೀಳೀತಾ? ರೀ ಕಾಪಿ ಎಡಿಟರ್.. ಕಾಪಿ ಸರಿ ಮಾಡಿ ಅಂದ್ರೆ ಕಾಪಿ ಕುಡಿತಾ ಇದ್ದೀರಾ? ನಾನ್ ಸೆನ್ಸ್.. ಹೇಳಿದ್ ಕೆಲಸ ಮಾಡ್ರೀ.. ಓಕೆ.. ಪ್ಯಾನಲ್ ಡಿಸ್ಕಷನ್ಗೆ ಬರೋದಿಕ್ಕೆ ಯಾರ್ ಯಾರಿಗೆ ಹೇಳಿದ್ದೀರಾ?
ರಂಗಮ್ಮ : ರಮೇಶ್ ಸುಮನ್ ಕುಟ್ಟು ಅವರು ಬರ್ತೀನಿ ಅಂದಿದ್ದಾರೆ. ಅವರಿಗೆ ಪಾಟೀ ಸವಾಲು ಹಾಕೋಕೆ ಯಾರೂ ಸಿಗ್ತಾ ಇಲ್ಲ.
ಸಂಗಪ್ಪ : ನೋಡೋಣ ಬಲಕ್ಕೆ ಹೊರಳೋಣ. ಯಾರಾದ್ರೂ ಸಿಕ್ತಾರೆ. ಸ್ವೀಟಿ ರವಿ ಅವರನ್ನ ವಿಚಾರಿಸಿ. bemki  ಹತ್ತಬೇಕು. ಅಂದ ಹಾಗೇ ಖನ್ನಡ ಮಾತಾಡೋ ಸಂಘಟನೆಯವರು ಯಾರಾದ್ರೂ ಇದ್ದರೆ ಅವರನ್ನು ಬರಕ್ ಹೇಳಿ.
ರಂಗಮ್ಮ : ರಾಮಾಯಣ ಗೌಡರಿಗೆ ಹೇಳಲಾ?
ಸಂಗಪ್ಪ  : ಆ ಯಪ್ಪಂಗೆ ಸರಿಯಾಗಿ ಕನ್ನಡ ಬರೋದಿಲ್ಲ. ಆ ವಯ್ಯನ್ನ ಕಟ್ಟಿಕಂಡು ನಾವ್ ಹೆಂಗ್ ಪ್ಯಾನಲ್ ಡಿಸ್ ಕಷನ್ ಮಾಡಣ ಹೇಳಿ? ಇರ್ಲಿ ಕರಕಂಡು ಬನ್ನಿ.
ರಂಗಮ್ಮ : ಆಯ್ತು. ಹಂಗೇ ಮಾಡ್ತೀನಿ ಬಿಡಿ
ಸಂಗಪ್ಪ  : ಆ ರಿಪೋರ್ಟರ್ ಎಂಡ್ ಕ್ಯಾಮರಾಮನ್ ಸ್ಯಾಟಲೈಟ್ ಬಸ್ ಸ್ಟಾಂಡ್ ಹತ್ತಿರ ಇದ್ದಾನೇನ್ರಿ? ವಾಟ್ ? ನಾನ್ ಸೆನ್ಸ್.. ಯೂಸ್ ಲೆಸ್ ಫೆಲ್ಲೋ..ಬೇಗನೆ ಹೋಗಕ್ಕೆ ಹೇಳ್ರಿ ಆ ವಯ್ಯಂಗೆ.. ಆಲ್ ರೈಟ್ ಶುರು ಹಚ್ಚಿಕೊಳ್ಳೋಣವಾ?

------------
ಸಂಗಪ್ಪ  :
ನಮಸ್ಕಾರ ದೊಡ್ ಸುದ್ದಿಗೆ ಸ್ವಾಗತ... ನೋಡುಗರಿಗೆಲ್ಲ ದೊಡ್ ನಮಸ್ಕಾರ..
ಎಲ್ಲರ ನಿರೀಕ್ಷೆಯಂತೆ ಬೆಂಗಳೂರು ಹೊತ್ತಿ ಉರಿಯುತ್ತಿದೆ. ಎಲ್ಲೆಡೆ ಗಲಾಟೆ... ದೊಂಬಿ.. ನಡೆಯುತ್ತಿದೆ.. ಎಲ್ಲಿ ಏನ್ ಆಗ್ತಾ ಇದೆ ಅನ್ನೋದು ಯಾರಿಗೂ ಗೊತ್ತಾಗ್ತಾ ಇಲ್ಲ.. ನಮಗೂ ಗೊತ್ತಾಗ್ತಾ ಇಲ್ಲ ಅನ್ನೋದು ಇಂಟರೆಸ್ಟಿಂಗ್..
ಪೊಲೀಸರು ಅವರ ಸಮವಸ್ತ್ರದಲ್ಲಿ ಬಂದಿದ್ದಾರೆ.. ಜನರೆಲ್ಲ ಬಟ್ಟೆ ಹಾಕಿಕೊಂಡು ಬಂದಿದ್ದಾರೆ. ಗಲಾಟೆ ನಡಿತಾ ಇದೆ. ಆದರೆ ಎಲ್ಲಿ ಯಾವ ರೀತಿ ಗಲಾಟೆ ಆಗ್ತಾ ಇದೆ ಅನ್ನೋದರ ಬಗ್ಗೆ ಇನ್ನೂ ಸ್ಪಷ್ಟವಾಗ್ತಾ ಇಲ್ಲ. ಮೆಜೆಸ್ಟಿಕ್ನಿಂದ ಹಿಡಿದು ಆನೇಕಲ್ಲು, ಕೆಂಗೇರಿಯಿಂದ ಹಿಡಿದು ಹೊಸಕೋಟೆ ತನಕ ಬೆಂಗಳೂರು ವೊತ್ತಿ ವೊತ್ತಿ ಹುರಿತಾ ಇರೋದು ಇವತ್ತಿನ ಸ್ಪೆಷಲ್ ಸುದ್ದಿ.
ರಂಗಮ್ಮ :
ಹೊತ್ತಿ ಉರಿತಾ ಇದೆ ಅಂದ್ರೆ ಎಲ್ಲ ಕಡೆ ಬೆಂಕಿನಾ ಸಾರ್..
ಸಂಗಪ್ಪ  :
ಹೊತ್ತಿ ಉರಿಯೋದು ಅಂದ್ರೆ ಬೆಂಕಿ ಅಲ್ದೆ ಇನ್ನೇನ್ ನೀರೇನಮ್ಮಾ.. ಆಲ್ ರೈಟ್ ಮುಂದಕ್ ಹೋಗೋಣ.. ಬೆಂಗಳೂರು ಹೊತ್ತಿ ಉರಿಯುತ್ತಿರುವುದು ನಮ್ಮ ಕಣ್ಣಿಗೆ ಹೇಗೆ ಕಾಣ್ತಾ ಇದೆ ಅಂದ್ರೆ ಒಂದೆರಡು ಹೆಣ ಬೀಳೋದಂತೂ ಗ್ಯಾರಂಟಿ.. ಹೆಣಗಳ ಸಂಕ್ಯೆ ಹೆಚ್ಚಾಗಲೂ ಬಹುದು.. ಎಷ್ಟು ನಿಮಿಷಕ್ಕೆ ಎಷ್ಟು ಹೆಣಬಿತ್ತು ಅನ್ನೋದನ್ನ ನಾವು ನಿಮಗೆ ಲೈವ್ ಆಗಿ ಕಾಲ ಕಾಲಕ್ಕೆ ತೋರಿಸ್ತಾ ಇರ್ತೀವಿ.. ಈ ನಡುವೆ ಒಂದು ಸಣ್ಣ ವಿರಾಮ.. ಎಲ್ಲೂ ಹೋಗಬೇಡಿ.. ಇಲ್ಲೇ ಇರಿ..

--------------
ಸಂಗಪ್ಪ  : ರಿಪೋರ್ಟರ್ ಸ್ಪಾಟಲ್ ಇದಾನಂತಾ... ಓಕೆ.. ಈಗ ಪೋನ್ ಇನ್ ಮಾಡೋಣ. ಸರಿ.. ಆ ರಿಪೋರ್ಟರ್ ಗೆ ಮೊದಲೇ ಹೇಳ್ರಪ್ಪಾ.. ಹೊತ್ತಿ ಉರಿಯೋ ಥರ ರಿಪೋರ್ಟ್ ಮಾಡೊಕೆ.. ಎಲ್ಲೂ ಇದು ಬಂದಿರಬಾರದು.. ಅಂತದ್ದು ಹೇಳೋಕೆ ಹೇಳಿ.. ಎಷ್ಟು.. ನಾಲ್ಕು ಜಾಹೀರಾತು ಆಯ್ತಾ.. ಇನ್ನೆರಡು ಹಾಕಿ... ರೈಟ್

-------------

ಸಂಗಪ್ಪ  : ಮತ್ತೊಮ್ಮೆ ದೊಡ್ ಸುದ್ದಿಗೆ ಸ್ವಾಗತ... ನೀವು ನೋಡುತ್ತಿದ್ದಂತೆಯೇ ಬೆಂಗಳೂರು ಇನ್ನಷ್ಟು ಹೊತ್ತಿ ಉರಿಯುತ್ತಿರುವುದು ಗಮನಕ್ಕೆ ಬರುತ್ತಿದೆ. ಎಲ್ಲೆಲ್ಲೂ ಗಲಾಟೆ, ದೊಂಬಿ.. ಇದು ನಮ್ ಚಾನಲ್ ನಲ್ಲಿ ಮಾತ್ರ.. ಬೇರೆಲ್ಲೂ ಇಲ್ಲ. ಈ ಕುರಿತು ಹೆಚ್ಚಿನ ಮಾಹಿತಿ ನೀಡೋಕೆ ಸ್ಥಳದಲ್ಲಿ ಇರೋ ನಮ್ ರಿಪೋರ್ಟರ್ ಗುಂಪಲ್ ಗೋವಿಂದ ಲೈನ್ ನಲ್ ಇದ್ದಾರೆ.. ಹೇಳಿ ಗುಂಪಲ್ ಗೋವಿಂದ ಅವರೇ.. ಏನಾಗ್ತಿದೆ ಅಲ್ಲಿ.. ಪರಿಸ್ಥಿತಿ ಹೇಗಿದೆ?
ಗುಂಪಲ್ ಗೋವಿಂದ : ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಬಿಗಡಾಯಿಸುತ್ತಿದೆ. ಈ ಒಂದು ಪರಿಸ್ಥಿತಿ ಯಾವ ಕ್ಷಣದಲ್ಲಿ ಕೈಮೀರುತ್ತದೆ ಎನ್ನುವುದು ಕಷ್ಟ ಇದೆ. ಬೆಂಗಳೂರು ವೊತ್ತಿ ಹುರಿಯುತ್ತಿದೆ.
ಸಂಗಪ್ಪ  : ಗೋವಿಂದ ಹೇಳಿ ಬೆಂಗಳೂರು ಹೇಗೆ ಹೊತ್ತಿ ಉರಿಯುತ್ತಿದೆ?
ಗು.ಗೋ : ಯೇಗೆ ವೊತ್ತು ಹುರಿಯುತ್ತಿದೆ ಎನ್ನುವುದು ಇನ್ನೂ ನಮಗೆ ಸ್ಪಷ್ಟವಾಗಬೇಕಿದೆ. ಆದರೆ ಈ ವೊಂದು ಬೆಂಕಿ ಕ್ಷಣ ಕ್ಷಣಕ್ಕೂ ಕೆನ್ನಾಲಿಗೆಯಂತೆ ಚಾಚುತ್ತಿರುವುದು ಸ್ಪಷ್ಟವಾಗುತ್ತಿದೆ. ನಾವು ನೋಡ್ತಾ ಇದ್ದಂತೆ ವೊಗೆ ಸಿಕ್ಕಾಪಟ್ಟೆ ಯೆಚ್ಚಿದೆ. ಎಲ್ಲೋ ಒಂದು ಕಡೆ ಬೆಂಕಿ ಇರೋದಂತೂ ಸ್ಪಷ್ಟ..
ಸಂಗಪ್ಪ : ಗೋವಿಂದ ಅವರೇ ಬೆಂಕಿ ಎಲ್ಲಿಂದ ಹೊತ್ಕೊಂಡಿದೆ ಅನ್ನೋದು ಗೊತ್ತಾಯ್ತಾ?
ಗು. ಗೋ : ಅದಿನ್ನೂ ಗೊತ್ತಾಗಿಲ್ಲ. ಈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಬರಬೇಕಿದೆ. ಆದರೆ ಎಲ್ಲೋ ಒಂದು ಕಡೆ ಬೆಂಕಿ ತೀವ್ರವಾಗಿದ್ದು ಸ್ಪಷ್ಟ. ಬೆಂಗಳೂರಿಗರು ಬೆಂಕಿಯಲ್ಲಿ ವೊತ್ತಿ ಹುರಿದು ಬೆಂದು ವೋಗ್ತಿದ್ದಾರೆ. ಈ ವೊಂದು ಪರಿಸ್ಥಿತಿ ಯೇನಿದೆ ಇದು ಏನು ಅಂತ ಇನ್ನೂ ಸ್ಪಷ್ಟವಾಗ್ತಾ ಇಲ್ಲ...
ಸಂಗಪ್ಪ  : ಆಲ್ ರೈಟ್ ಗೋವಿಂದ ಅವ್ರೇ.. ಅಲ್ಲಿಗೆ ಏನಾದ್ರೂ ಅಗ್ನಿಶಾಮಕ ವಾಹನಗಳು ಬಂದಿದೆಯಾ ಹೇಗೆ?
ಗು. ಗೋ :  ಹಗ್ನಿಶಾಮಕ ವಾಹನ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಈ ಕುರಿತಂತೆ ಇನ್ನೂ ಯೆಚ್ಚಿನ ಮಾಹಿತಿ ಕೇಳಿ ಬರಬೇಕಿದೆ. ಈ ಒಂದು ಸಂದರ್ಭದಲ್ಲಿ ನಾನು ಯೇಳೋದು ಹೇನು ಅಂದ್ರೆ ಬೆಂಕಿ ಧಗ ಧಗನೆ ಉರಿತಾ ಇದೆ..
ಸಂಗಪ್ಪ : ಹೊತ್ತಿ ಉರಿಯುವ ಬೆಂಕಿ ಈಗಾಗಲೇ ಬೆಂಗಳೂರನ್ನು ದಾಟಿ ಮುನ್ನುಗ್ಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಈ ಕೆನ್ನಾಲಿಗೆ ಯಾರ್ಯಾರನ್ನ ಬಲಿ ತೆಗೆದುಕೊಳ್ಳುಕಾದು ನೋಡಬೇಕಿದೆ. ಯಾವುದಕ್ಕೂ ನೋಡ್ತಾ ಇರಿ.. ನಮ್ ಟಿವಿ


(ಮುಂದುವರಿಯುವುದು...)

No comments:

Post a Comment