Sunday, December 3, 2017

ಭಾರತವನ್ನು ಕಾಡಿದ ಚಂಡಮಾರುತಗಳು

ಚಂಡಮಾರುತಗಳು ಭಾರತವನ್ನು ಪದೇ ಪದೆ ಕಾಡುತ್ತವೆ. ಬಂಗಾಳಕೊಲ್ಲಿ ಹಾಗೂ ಅರಬ್ಬೀ ಸಮುದ್ರಗಳಲ್ಲಿ ರೂಪುಗೊಳ್ಳುವ ಚಂಡಮಾರುತಗಳು ಭಾರತದ ಕಡೆಗೆ ಬೀಸಿ ಬಂದು ಭಾರತದಲ್ಲಿ ಭಾರಿ ಪ್ರಮಾಣದ ಹಾನಿಯನ್ನು ಕೈಗೊಳ್ಳುತ್ತವೆ. ಇತ್ತೀಚೆಗಂತೂ ವರ್ಷಕ್ಕೆ ಕನಿಷ್ಟ ಎರಡಾದರೂ ಚಂಡಮಾರುತ ಭಾರತದ ಕಡೆಗೆ ಬೀಸಿ ಬರುತ್ತಿವೆ. ಇವುಗಳ ಮಾಡುವ ಹಾನಿ ಭಾರೀ ಪ್ರಮಾಣದ್ದಾಗಿದೆ. ಇದೀಗ ಒಖಿ ಚಂಡಮಾರುತ ತಮಿಳುನಾಡು, ಕೇರಳ ಹಾಗೂ ಲಕ್ಷದ್ವೀಪಗಳಲ್ಲಿ ಹಾವಳಿಯನ್ನು ಎಬ್ಬಿಸುತ್ತಿದೆ.


ಭಾರತದಲ್ಲಿಯೂ ಪ್ರಮುಖವಾಗಿ ದಕ್ಷಿಣ ಭಾರತದ ರಾಜ್ಯಗಳು, ಓರಿಸ್ಸಾ, ಪಶ್ಚಿಮ ಬಂಗಾಳ, ತಮಿಳುನಾಡುಗಳ ಮೇಲೆ ಚಂಡಮಾರುತಗಳ ಪ್ರಭಾವ ತೀವ್ರವಾಗಿದೆ. ಈ ರಾಜ್ಯಗಳಲ್ಲಿ ಆಗಾಗ ಚಂಡ ಮಾರುತಗಳು ಎಬ್ಬಿಸಿದ ಹಾವಳಿ ಬಹಳ. ಲಕ್ಷಾಂತರ ಜನರು ಮನೆ-ಆಸ್ತಿಗಳನ್ನು ಕಳೆದುಕೊಂಡಿದ್ದಾರೆ. ಸಾವಿರಾರು ಜನರು ಚಂಡಮಾರುತಕ್ಕೆ ಜೀವ ಕಳೆದುಕೊಂಡಿದ್ದಾರೆ. ಭಾರತ ಉಪಖಂಡದಲ್ಲಿ ಸಾಮಾನ್ಯವಾಗಿ ಚಳಿಗಾಲದ ನಂತರ ಹಾಗೂ ಬೇಸಿಗೆಯಲ್ಲಿ ಚಂಡಮಾರುತಗಳು ಕಾಣಿಸಿಕೊಳ್ಳುವುದು ಸಹಜ ಎಂಬಂತಾಗಿದೆ. ಯಾವುದೇ ಕಡೆಗಳಲ್ಲಿಯೂ ಗಾಳಿಯ  ಒತ್ತಡ ಕಡಿಮೆಯಾದ ಸಂದರ್ಭಗಳಲ್ಲಿ ಚಂಡಮಾರುತಗಳು ರೂಪುಗೊಂಡು ಹಾವಳಿ ಉಂಟುಮಾಡುತ್ತವೆ. ಭಾರತದ ಮೇಲೆ ಬೀಸಿ, ಅಪಾರ ಹಾನಿಯನ್ನು ಉಂಟುಮಾಡಿದ ಚಂಡಮಾರುತಗಳ ಕುರಿತು ಕೆಲವು ಮಾಹಿತಿಗಳು ಇಲ್ಲಿವೆ.

ಪಶ್ಚಿಮ ಬಂಗಾಳದಲ್ಲಿ ಚಂಡಮಾರುತದ ಹಾನಿ :
1970ರಿಂದೀಚೆಗೆ ಪಶ್ಚಿಮ ಬಂಗಾಳ ಹಲವಾರು ಚಂಡಮಾರುತಗಳಿಗೆ ಸಾಕ್ಷಿಯಾಗಿದೆ. 1970ರ ಭೋಲಾ ಚಂಡಮಾರುತ, 1981ರ ಬಾಬ್ 3, 1988ರಲ್ಲಿ ಬೀಸಿದ ಬಾಬ್ 5, 1997ರಲ್ಲಿ ಬೀಸಿದ ಬಾಬ್ 7, 1998ರಲ್ಲಿ ಬೀಸಿದ ಬಾಬ್ 6, 2000ರ ಬಾಬ್ 4, 2002ರಲ್ಲಿ ಬಾಬ್ 3 ಚಂಡಮಾರುತಗಳು ಹಾವಳಿ ಎಬ್ಬಿಸಿದೆ. 2007ರಲ್ಲಿ ಸಿದ್ರ್‌, 2008ರಲ್ಲಿ ರಶ್ಮಿ, 2009ರಲ್ಲಿ ಆಲಿಯಾ, 2015ರಲ್ಲಿ ಕೋಮೆನ್, 2016ರಲ್ಲಿ ರೌನು ಹಾಗೂ 2017ರಲ್ಲಿ ಮೋರಾ ಚಂಡಮಾರುತಗಳು ಹಾವಳಿ ಎಬ್ಬಿಸಿವೆ.

ಆಂಧ್ರ ಪ್ರದೇಶದಲ್ಲಿ ಚಂಡಮಾರುತದ ಹಾವಳಿ
ಆಂದ್ರಪ್ರದೇಶದಲ್ಲಿ 1990ರಲ್ಲಿ ಬಾಬ್ 1, 1998ರಲ್ಲಿ ಬಾಬ್ 5, 2003ರಲ್ಲಿ 03ಬಿ, 2007ರಲ್ಲಿ ಯೇಮೈನ್, 2008ರಲ್ಲಿ ಖೈಮುಕ್, 2010ರಲ್ಲಿ ಲೈಲಾ, 2012ರಲ್ಲಿ ನೀಲಂ, 2013ರಲ್ಲಿ ಹೆಲನ್ ಹಾಗೂ ಲೆಹರ್, 2014ರಲ್ಲಿ ಹುಡ್‌ಹುಡ್ ಹಾಗೂ 2016ರಲ್ಲಿ ಕ್ಯಾಂಟ್ ಚಂಡಮಾರುತಗಳು ಅಪ್ಪಳಿಸಿ ಹಾನಿ ಮಾಡಿವೆ.

ಗುಜರಾತ್‌ಗೆ ಅಪ್ಪಳಿಸಿದ ಚಂಡಮಾರುತಗಳು
1996ರಲ್ಲಿ ಎಆರ್‌ಬಿ01, 1998ರಲ್ಲಿ ಎಆರ್‌ಬಿ 02 ಹಾಗೂ ಎಆರ್ ಬಿ 05, 2001ರಲ್ಲಿ ಎಆರ್‌ಬಿ 01, 2004ರಲ್ಲಿ ಓನಿಲ್, 2007ರಲ್ಲಿ ಯೇಮೈನ್, 2016ರಲ್ಲಿ ಎಆರ್‌ಬಿ 02 ಚಂಡಮಾರುತಗಳು ಗುಜರಾತಿನಲ್ಲಿ ಹಾವಳಿ ಮಾಡಿವೆ.

ಮಹಾರಾಷ್ಟ್ರದಲ್ಲಿ ಚಂಡಮಾರುತ
1994ರಲ್ಲಿ ಎಆರ್‌ಬಿ 02 ಹಾಗೂ 2009ರಲ್ಲಿ ಫಿಯಾನ್ ಚಂಡಮಾರುತಗಳು ಮಹಾರಾಷ್ಟ್ರವನ್ನು ನಡುಗಿಸಿವೆ.

ಓಡಿಸ್ಸಾದಲ್ಲಿ ಚಂಡಮಾರುತದ ಅವಾಂತರ
ಓಡಿಸ್ಸಾದಲ್ಲಿ 1999ರಲ್ಲಿ ಬಾಬ್ 05 ಹಾಗೂ ಬಾಬ್ 06, 2013ರಲ್ಲಿ ೈಲಿನ್ ಚಂಡಮಾರುತಗಳು ವಿನಾಶವನ್ನು ಕೈಗೊಂಡಿವೆ.

ತಮಿಳುನಾಡಿನಲ್ಲಿ ಚಂಡಮಾರುತದ ನರ್ತನ
ಅತ್ಯಂತ ಹೆಚ್ಚು ಚಂಡಮಾರುತಗಳು ತೊಂದರೆ ನೀಡಿದ್ದು ತಮಿಳುನಾಡಿಗೆ. 1991ರಲ್ಲಿ ಬಾಬ್ 09, 1992ರಲ್ಲಿ ಬಾಬ್ 06, 1993ರಲ್ಲಿ ಬಾಬ್ 03, 1996ರಲ್ಲಿ 08ಬಿ, 2000ರಲ್ಲಿ  ಬಾಬ್ 05, 2005ರಲ್ಲಿ ನೂಸ್, 2008ರಲ್ಲಿ ನಿಶಾ, 2010ರಲ್ಲಿ ಜಲ್, 2011ರಲ್ಲಿ ಥೇನ್, 2012ರಲ್ಲಿ ನೀಲಂ, 2013ರಲ್ಲಿ ಮ್ಯಾಡಿ, 2016ರಲ್ಲಿ  ರೌನು, ಕ್ಯಾಂಟ್, ನಾಡಾ ಹಾಗೂ ವಾರ್‘ಾ ಚಂಡಮಾರುತಗಳು ಅಪ್ಪಳಿಸಿವೆ.


ಹುಡ್‌ಹುಡ್ - 2014
2014 ರಲ್ಲಿ ಒಡಿಶಾ ಮತ್ತು ಆಂಧ್ರಪ್ರದೇಶಗಳಿಗೆ ಅಪ್ಪಳಿಸಿದ ಹುಡ್‌ಹುಡ್ ಎಂಬ ಚಂಡಮಾರುತ 185 ಕಿ.ಮೀ.ವೇಗದಲ್ಲಿ ವಿಶಾಖಪಟ್ಟಣಂ ಅನ್ನು ಅಪ್ಪಳಿಸಿತ್ತು. ಈ ಚಂಡಮಾರುತದಿಂದ 124 ಜನ ಮೃತರಾಗಿದ್ದರೆ, 21,900 ಕೋಟಿ ರೂ.ಗೂ ಹೆಚ್ಚು ಹಾನಿಹಾಗಿತ್ತು. ಈ ಸಮಯದಲ್ಲಿ ಎರಡೂ ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ಹಲವು ದಿನ ವಿದ್ಯುತ್ ಕೈಕೊಟ್ಟು ಜನ ಪರಿತಪಿಸಿದ್ದರು.

ಫೈಲಿನ್ - 2013
2013 ರ ಅಕ್ಟೋಬರ್‌ನಲ್ಲಿ ಒಡಿಶಾಕ್ಕೆ ಅಪ್ಪಳಿಸಿದ್ದ ಫೈಲಿನ್ ಎಂಬ ಚಂಡಮಾರುತ, ದಸರಾ ಸಂಭ್ರಮವನ್ನೇ ನಾಶಗೊಳಿಸಿ 1,154,725 ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿತ್ತು. ತಕ್ಷಣವೇ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದರೂ 3000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿ ಪಾಸ್ತಿ ಹಾನಿಯಾಗಿತ್ತು.

ನೀಲಂ - 2012
2012 ಅಕ್ಟೋಬರ್ 31 ರಂದು ತಮಿಳುನಾಡಿನ ಕರಾವಳಿ ಪ್ರದೇಶವಾದ ಮಹಾಬಲಿಪುರಂ ಅನ್ನು ಅಪ್ಪಳಿಸಿದ್ದ ನೀಲಂ ಚಂಡಮಾರುತಕ್ಕೆ 12 ಜನ ಮೃತರಾಗಿದ್ದರು. 3000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿತ್ತು. 100 ಕೋಟಿ ರೂ.ಗೂ ಅಕ ಮೌಲ್ಯದ ಆಸ್ತಿ ಹಾನಿಯಾಗಿತ್ತು.

ಜಾಲ್ - 2010
2010 ರಲ್ಲಿ ಆಂಧ್ರಪ್ರದೇಶ ಮತ್ತು ಒಡಿಶಾಕ್ಕೆ ಅಪ್ಪಳಿಸಿದ ಜಾಲ್ ಚಂಡಮಾರುತಕ್ಕೆ 54 ಜನ ಬಲಿಯಾಗಿದ್ದರು. 70,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು. ಈ ಚಂಡಮಾರುತಕ್ಕೆ 3,00,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆಯೆಲ್ಲವೂ ನಾಶವಾಗಿ ರೈತರ ಬದುಕನ್ನು ಮೂರಾಬಟ್ಟೆ ಮಾಡಿತ್ತು.

ಫಿಯಾನ್ - 2009
2009 ರಲ್ಲಿ ಸಂಭವಿಸಿದ ಫಿಯಾನ್ ಚಂಡಮಾರುತಕ್ಕೆ 300 ಕ್ಕೂ ಹೆಚ್ಚು ಮೀನುಗಾರರು ನಾಪತ್ತೆಯಾಗಿದ್ದರು. ಮುಂಬೈ, ಡಿಯು, ದಮನ್, ಥಾಣೆ ಮುಂತಾದ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ಅಸಂಖ್ಯ ಆಸ್ತಿ-ಪಾಸ್ತಿ ಹಾನಿಯಾಗಿತ್ತು.

ನಿಶಾ- 2008
2008 ರ ನವೆಂಬರ್‌ನಲ್ಲಿ ತಮಿಳುನಾಡಿಗೆ ಅಪ್ಪಳಿಸಿದ ನಿಶಾ ಚಂಡಮಾರುತಕ್ಕೆ 180 ಕ್ಕೂ ಹೆಚ್ಚು ಜನ ಅಸುನೀಗಿದ್ದರು. ಈ ಸಮಯದಲ್ಲಿ 1280 ಮಿ.ಮೀ. ಗೂ ಹೆಚ್ಚು ಮಳೆ ಸುರಿದು ದಾಖಲೆಯಾಗಿತ್ತು. ಬಂಗಾಳಕೊಲ್ಲಿಯಲ್ಲಿ ಹುಟ್ಟಿದ ಈ ಚಂಡಮಾರುತ ತಮಿಳುನಾಡಿನ ಕರಾವಳಿ ತತ್ತರಿಸುವಂತೆ ಮಾಡಿತ್ತು.

ರಶ್ಮಿ- 2008
2008 ರಲ್ಲಿ ಆಂಧ್ರಪ್ರದೇಶದಲ್ಲಿ ಸಂಭವಿಸಿದ ರಶ್ಮಿ ಚಂಡಮಾರುತಕ್ಕೆ ಬಲಿಯಾದವರು 15 ಜನ. ಅತಿಯಾಗಿ ಮಳೆಯಾಗುವ ಎಚ್ಚರಿಕೆಯನ್ನು ಜನರಿಗೆ ಮೊದಲೇ ನೀಡಿದ್ದರೂ 15 ಜನರ ಸಾವನ್ನು ತಪ್ಪಿಸುವುದಕ್ಕೆ ಮಾತ್ರ ಸಾಧ್ಯವಾಗಲಿಲ್ಲ. ಅಕ್ಟೋಬರ್ 27 ರಂದು ಸಂಭವಿಸಿದ ಈ ಚಂಡಮಾರುತ ಕಳೆದು ಕೇವಲ ಹದಿನೈದು ದಿನಗಳಲ್ಲಿ, ಇದೇ ಪ್ರದೇಶದಲ್ಲಿ ಖಾಯ್ ಮುಕ್ ಎಂಬ ಮತ್ತೊಂದು ಚಂಡಮಾರುತ ಅಪ್ಪಳಿಸಿತ್ತು.

ಇತರ ಭಯಾನಕ ಚಂಡಮಾರುತಗಳು
1977ರಲ್ಲಿ  ಆಂಧ್ರಪ್ರದೇಶಕ್ಕೆ ಅಪ್ಪಳಿಸಿದ್ದ ಚಂಡಮಾರುತದಿಂದಾಗಿ ಕನಿಷ್ಟ 50 ಸಾವಿರ ಜನರು ಸಾವನ್ನಪ್ಪಿದ್ದರು. ದೇಶದ ಅತ್ಯಂತ ಭೀಕರ ಚಂಡಮಾರುತಗಳ ಸಾಲಿನಲ್ಲಿ ಇದು ಮೊದಲ ಸ್ಥಾನದಲ್ಲಿದೆ. 1999ರಲ್ಲಿ ಓರಿಸ್ಸಾಕ್ಕೆ ಅಪ್ಪಳಿಸಿದ್ದ ಚಂಡಮಾರುತಕ್ಕೆ ಕನಿಷ್ಟ 15 ಸಾವಿರ ಜನರು ಸಾವನ್ನಪ್ಪಿದ್ದರು. ಸೂಪರ್ ಸೈಕ್ಲೋನ್ ಎಂದೇ ಹೆಸರಾಗಿದ್ದ ಈ ಚಂಡಮಾರುತ ಗಂಟೆಗೆ 260 ಕಿಮಿ ವೇಗದಲ್ಲಿ ಬೀಸಿತ್ತು.

ಚಂಡಮಾರುತದ ವಿಶಿಷ್ಟ ಹೆಸರುಗಳು

ಸಾಮಾನ್ಯವಾಗಿ ಸೀಯರ ಹೆಸರುಗಳನ್ನೇ ಹೆಚ್ಚಿರುವ ಚಂಡಮಾಡುತಗಳಿಗೆ ಹೆಚ್ಚಾಗಿ ಇಡಲಾಗುತ್ತದೆ. ಪೂರ್ವ ನಿರ್ಧಾರಿತ ಪಟ್ಟಿಯಂತೆ ಅರ್ದದಷ್ಟು ಮಾತ್ರ ಮಹಿಳೆಯರ ಹೆಸರಿರುತ್ತದೆ. ಪುರುಷರು, ಹಕ್ಕಿಗಳ ಹೆಸರನ್ನೂ ಕೂಡ ಚಂಡಮಾರುತಗಳಿಗೆ  ಇಡಲಾಗುತ್ತದೆ.
ಎರಡನೇ ಮಹಾ ಸಮರದ ಸಮಯದಲ್ಲಿ ಸುಮಾರು 1950 ರಲ್ಲಿ ವಿಶ್ವ ಹವಾಮಾನ ಸಂಸ್ಥೆ (ಡಬ್ಲೂಎಂಒ) ಹಾಗೂ ಮಿಲಿಟರಿ ಹವಾಮಾನ ತಜ್ಞ ಮೊದಲ ಬಾರಿಗೆ ಮಹಿಳೆಯರ ಹೆಸರುಗಳನ್ನು ಚಂಡಮಾರುತಗಳಿಗೆ ಇಡಲು ಆರಂಭಿಸಿದರು. ಡಬ್ಲೂಎಂಒ ಅಕ್ಷರ ಮಾಲೆ ಪ್ರಕಾರ ಹೆಸರುಗಳನ್ನು ಇಡಲಾರಂಭಿಸಿತು. ನಂತರದ ದಿನಗಳಲ್ಲಿ ಚಂಡಮಾರುತದ ಬಾಧೆಗೆ ಒಳಗಾದ ದೇಶಗಳ ಮನವಿ ಮೇರೆಗೆ ಹೆಸರುಗಳನ್ನು ಡಬ್ಲೂಎಂಒ ಸೂಚಿಸುತ್ತಾ ಬಂದಿದೆ. ಒಮ್ಮೆ ಬಳಸಿದ ಹೆಸರನ್ನು 10 ವರ್ಷಗಳವರೆಗೂ ಬಳಸುವುದಿಲ್ಲ. ಇದು ಐತಿಹಾಸಿಕವಾಗಿ ಹಾಗೂ ವಿಮೆ ಹಿಂಪಡೆಯುವುದಕ್ಕೆ ಸುಲಭವಾಗುವಂಥ ವ್ಯವಸ್ಥೆಯಾಗಿದೆ.

ಡಬ್ಲೂಎಂಒ ಹೆಸರುಗಳ ಪಟ್ಟಿ
ಪ್ರಸ್ತುತ ವಿಶ್ವ ಹವಾಮಾನ ಸಂಸ್ಥೆ( ಡಬ್ಲೂಎಂಒ) ಸುಮಾರು 6 ಪಟ್ಟಿ ಹೊಂದಿದ್ದು ಸುಮಾರು 21 ಹೆಸರುಗಳಿದೆ.( ಕ್ಯೂ, ಯು, ಎಕ್ಸ್‌ಘಿ, ವೈ ಹಾಗೂ ಝಡ್ ಅಕ್ಷರದಿಂದ ಬರುವ ಹೆಸರುಗಳನ್ನು ಬಳಕೆ ಮಾಡುತ್ತಿಲ್ಲ) ಪ್ರತಿ 6 ವರ್ಷಕ್ಕೊಮ್ಮೆ ಪಟ್ಟಿ ಬದಲಾಗುತ್ತದೆ. 2005ರಲ್ಲಿ ಆದಂತೆ ವರ್ಷದಲ್ಲಿ 21ಕ್ಕೂ ಅಕ ಚಂಡ ಮಾರುತ ಕಂಡು ಬಂದರೆ ಇಂಗ್ಲೀಷ್ ವರ್ಣಮಾಲೆ ಬದಲಿಗೆ ಗ್ರೀಕ್ ವರ್ಣಮಾಲೆ ಅಕ್ಷರದಂತೆ ಹೆಸರು ಸೂಚಿಸಲಾಗುತ್ತದೆ. ಒಂದು ಸಾಗರದಲ್ಲಿ ಕಾಣಿಸಿಕೊಂಡ ಚಂಡಮಾರುತ ಮತ್ತೊಂದು ಸಾಗರಕ್ಕೆ ಸಾಗುವಷ್ಟರಲ್ಲೇ ಅವಸಾನ ಹೊಂದಿ ಮತ್ತೆ ಮೊದಲಿಂದ ಮೇಲಕ್ಕೇದ್ದರೆ ಹೆಸರಿಡುವುದು ಕಷ್ಟ. ಆಗ ಐಡೆಂಟಿಟಿ ಬಿಕ್ಕಟ್ಟು ತಲೆ ದೋರುತ್ತದೆ.

ಪುರುಷರ ಹೆಸರೂ ಬಳಕೆ
1978ರಲ್ಲಿ ಚಂಡಮಾರುತಗಳಿಗೆ ಮಹಿಳೆಯರ ಜೊತೆಗೆ ಪುರುಷ ಹೆಸರುಗಳನ್ನೂ ಇಡುವುದು ರೂಢಿಗೆ ಬಂತು. ಅಟ್ಲಾಂಟಿಕ್ ಹರಿಕೇನ್ ಹೆಸರುಗಳ ಪಟ್ಟಿಗೆ ಪುರುಷರ ಹೆಸರುಗಳು ಸೇರ್ಪಡೆಗೊಂಡವು. ಸಾಮಾನ್ಯವಾಗಿ ಪ್ರೆಂಚ್ ಹಾಗೂ ಸ್ಪಾನೀಷ್ ಹೆಸರುಗಳನ್ನೇ ಬಳಸಲು ಆರಂಭಿಸಲಾಯಿತು. ರಾಕ್ಸಿ ಬೋಲ್ಟನ್ ಅವರು ಮಹಿಳೆಯ ಹೆಸರಿನ ಬದಲಾಗಿ ಅಮೆರಿಕದ ಸೆನೆಟರ್ ಗಳ ಹೆಸರುಗಳನ್ನು ಸೂಚಿಸಿದರು.

ದಕ್ಷಿಣ ಏಷ್ಯಾದಲ್ಲಿ ಹೆಸರುಗಳು
ದಕ್ಷಿಣ ಏಷ್ಯಾದಲ್ಲಿ ಪ್ರಮುಖವಾಗಿ ಹಿಂದೂ ಮಹಾಸಾಗರದಲ್ಲಿ ಏಳುವ ಚಂಡಮಾರುತಗಳಿಗೆ  ಮಹಾಸಾಗರದ ವ್ಯಾಪ್ತಿಯಲ್ಲಿ ಬರುವ ಬಾಂಗ್ಲಾದೇಶ, ಭಾರತ, ಮಾಲ್ಡೀವ್ಸ್, ಮಯನ್ಮಾರ್, ಓಮಾನ್, ಪಾಕಿಸ್ತಾನ, ಶ್ರೀಲಂಕಾ ಮತ್ತು ಥಾಯ್ಲೆಂಡ್‌ಗಳು ವಿವಿಧ ಹೆಸರುಗಳನ್ನು ಇಡುತ್ತವೆ. ಹಿಂದೂ ಮಹಾಸಾಗರದ ಬಂಗಾಳಕೊಲ್ಲಿಯಲ್ಲಿ ಚಂಡಮಾರುತಗಳು ಏಳುವುದು ಹೆಚ್ಚು. 2000ರ ವರ್ಷದಿಂದ ಚಂಡಮಾರುತಗಳಿಗೆ ಹೆಸರನ್ನಿಡುವ ಪರಿಪಾಠ ರೂಢಿಗೆ ಬಂದಿದೆ. 2004ರಲ್ಲಿ ನಾಮಕರಣಕ್ಕೆ ಹೊಸ ಸೂತ್ರ ಬಳಕೆ ತರಲಾಗಿದೆ.ಮೇಲ್ಕಂಡ ರಾಷ್ಟ್ರಗಳು ಸರದಿ ಪ್ರಕಾರ ಚಂಡಮಾರುತಗಳಿಗೆ ಹೆಸರನ್ನಿಡುತ್ತವೆ.

ವೈವಿಧ್ಯ ಮಯ ಹೆಸರುಗಳು
ಭಾರತದಲ್ಲಿ 2004ರಲ್ಲಾದ ಚಂಡಮಾರುತಗಳಿಗೆ ಲೆಹೆರ್, ಆಕಾಶ್, ಅಗ್ನಿ, ಬಿಜಲಿ, ಜಲ್ ಹೆಸರನ್ನಿಡಲಾಗಿದೆ. ಮೇಘ್, ಸಾಗರ್ ಮತ್ತು ವಾಯು ಮೊದಲಾದ ಭಾರತೀಯ ಹವಾಮಾನ ಇಲಾಖೆ ಪಟ್ಟಿಯಲ್ಲಿದೆ. ಇತ್ತೀಚೆಗೆ ಥಾಯ್ಲೆಂಡ್ ನಿಂದ ಮೋರಾ ಹೆಸರು ಸಿಕ್ಕಿತ್ತು. ಇದೀಗ ಕಾಣಿಸಿಕೊಂಡಿರುವ ಚಂಡಮಾರುತಕ್ಕೆ ಓಖಿ ಎಂಬ ಹೆಸರನ್ನು ಇಡಲಾಗಿದೆ. ಈ ಹೆಸರನ್ನು ಸೂಚಿಸಿದ್ದು ಬಾಂಗ್ಲಾದೇಶ. ಬೆಂಗಾಲಿಯಲ್ಲಿ ಓಖಿ ಎಂದರೆ ಕಣ್ಣು ಎಂದರ್ಥ. ತಮಿಳುನಾಡು, ಆಂಧ್ರಪ್ರದೇಶಕ್ಕೆ ಅಪ್ಪಳಿಸಿದ್ದ ನೀಲಂ ಚಂಡಮಾರುತಕ್ಕೆ ಪಾಕಿಸ್ತಾನ ಹೆಸರು ನೀಡಿತ್ತು. ಮುರ್ಜಾನ್ ಚಂಡಮಾರುತಕ್ಕೆ ಓಮನ್ ಹೆಸರು ನೀಡಿತ್ತು. ಹೀಗೆ ವಿವಿಧ ರಾಷ್ಟ್ರಗಳು ತಮ್ಮ ಸರದಿ ಬಂದಾಗ ಹೆಸರು ನೀಡುತ್ತವೆ.

ಭಯಂಕರ ಚಂಡಮಾರುತಗಳು
1970ರಲ್ಲಿ ಬಾಂಗ್ಲಾದೇಶದ ಮೇಲೆ ಅಪ್ಪಳಿಸಿದ್ದ ದಿ ಗ್ರೇಟ್ ಓಟಾ ಭೋಲಾ ಚಂಡಮಾರುತದಿಂದಾಗಿ 3 ರಿಂದ 5 ಲಕ್ಷ ಜನರು ಸಾವನ್ನಪ್ಪಿದ್ದರು. 1737ರಲ್ಲಿ ಭಾರತ ಹಾಗೂ ಬಾಂಗ್ಲಾದೇಶದ ಮೇಲೆ ಅಪ್ಪಳಿಸಿದ್ದ ಹೂಗ್ಲಿ ನದಿ ಚಂಡಮಾರುತ, 1881ರಲ್ಲಿ ವಿಯೆಟ್ನಾಮಿನಲ್ಲಿ ಹಾವಳಿ ಮಾಡಿದ್ದ ಹೈಪಾಂಗ್ ಚಂಡಮಾರುತ, 1839ರಲ್ಲಿ ಅಪ್ಪಳಿಸಿದ ಭಾರತದ ಕೊರಿಂಗಾ ಚಂಡಮಾರುತಗಳಲ್ಲಿ ತಲಾ 3 ಲಕ್ಷಕ್ಕೂ ಅಕ ಜನ ಸಾವನ್ನಪ್ಪಿದ್ದರು. ಇತಿಹಾಸದ ಪುಟಗಳನ್ನು ತೆರೆದಾಗ ಬಂಗಾಳ ಕೊಲ್ಲಿಯಲ್ಲಿಯೇ ಅತ್ಯಂತ ಹೆಚ್ಚಿನ ಚಂಡಮಾರುತಗಳು ಎದ್ದಿದ್ದು ಗಮನಕ್ಕೆ ಬರುತ್ತವೆ. ಅತ್ಯಂತ ಭೀಕರ ಚಂಡಮಾರುತಗಳು ಕಾಣಿಸಿಕೊಂಡಿದ್ದೂ ಕೂಡ ಇದೇ ಕೊಲ್ಲಿಯಲ್ಲಿ. ದಕ್ಷಿಣ ಭಾರತದ ರಾಜ್ಯಗಳ ಮೇಲೆ ಚಂಡಮಾರುತ ಎಷ್ಟೇ ಪ್ರತಾಪ ತೋರಿದ್ದರೂ ಇದುವರೆಗಿನ ಒಂದೇ ಒಂದು ಚಂಡಮಾರುತವೂ ಕರ್ನಾಟಕದ ಮೇಲೆ ನೇರವಾಗಿ ಅಪ್ಪಳಿಸದೇ ಇರುವುದು ಅದೃಷ್ಟ ಹಾಗೂ ವಿಶೇಷ ಸಂಗತಿಯಾಗಿದೆ.

ಓಖಿ ಅಬ್ಬರ
ಇದೀಗ ತಮಿಳುನಾಡು, ಕೇರಳ ಹಾಗೂ ಲಕ್ಷದ್ವೀಪಗಳಲ್ಲಿ ಓಖಿ ಚಂಡಮಾರುತ ಅಬ್ಬರಿಸಿದೆ. ಈಗಾಗಲೇ 9 ಜನರನ್ನು ಬಲಿತೆಗೆದುಕೊಂಡ ಓಖಿ, ತಮಿಳುನಾಡು, ಕೇರಳ ರಾಜ್ಯಗಳ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ಮಳೆಯ ಅಬ್ಬರದಿಂದ ಈ ರಾಜ್ಯಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಇನ್ನು ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದಲ್ಲಂತೂ ಓಖಿ ಉಂಟುಮಾಡಿರುವ ಅವಾಂತರ ಹೇಳತೀರದು. ಈಗಾಗಲೇ ನೂರಾರು ಮನೆಗಳು ನಾಶವಾಗಿವೆ. 150ರಷ್ಟು ಮೀನುಗಾರರು ಕಾಣೆಯಾಗಿದ್ದಾರೆ. ಓಖಿ ಚಂಡಮಾರುತದ ಕುರಿತಂತೆ ಹವಾಮಾನ ಇಲಾಖೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಸಿದ್ದರೂ ಕೂಡ, ಅದೆಷ್ಟೋ ಜನರು ಮೀನುಗಾರಿಕೆಗಾಗಿ ಸಮುದ್ರಕ್ಕಿಳಿದು, ಜೀವಕಳೆದುಕೊಂಡಿದ್ದಾರೆ. ನೌಕಾಸೇನೆ ಇವರಲ್ಲಿ ಹಲವರನ್ನು ರಕ್ಷಿಸಿದೆ. ಲಕ್ಷದ್ವೀಪದಲ್ಲಿ ಸಾವು-ನೋವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿದೆ.


No comments:

Post a Comment