Saturday, November 22, 2014

ಬೆಂಗಾಲಿ ಸುಂದರಿ-41

(ಖೈದಿಗಳ ಕೋಣೆ)
         ಗುಂಡಿಯ ಒಳಗೆ ಕತ್ತಲಿದ್ದ ಕಾರಣ ಏನೊಂದೂ ಗೊತ್ತಾಗಲಿಲ್ಲ. ಆದರೆ  ಮುಂಚಾಚಿಕೊಂಡಿದ್ದ ಆ ಹೊಂಡದಲ್ಲಿ ತಡವರಿಸುತ್ತಾ, ಎಡವುತ್ತಾ, ಏಳುತ್ತ ಬೀಳುತ್ತ ಮುಂದಕ್ಕೆ ಸಾಗಿದ ವಿನಯಚಂದ್ರ. ದೂರದಲ್ಲಿ ಮಬ್ಬು ಬೆಳಕು ಕಂಡಂತಾಯಿತು. ಸೀದಾ ಬಂದು ಆ ಬೆಳಕಿನ ಕಿಂಡಿಯಲ್ಲಿ ಇಣುಕಿದವನಿಗೆ ಭಾರತದ ಗಡಿಯಲ್ಲಿ ಬಂದಿರುವುದು ಖಾತ್ರಿಯಾಯಿತು. ಒಮ್ಮೆ ಮೈಮನಸ್ಸುಗಳಿಗೆ ರೆಕ್ಕೆ ಬಂದಂತಾಯಿತು. ಮಧುಮಿತಾಳನ್ನು ಕರೆದುಕೊಂಡು ಬರಬೇಕು ಎಂದುಕೊಂಡು ಅದೇ ಗುಂಡಿಯಲ್ಲಿ ಮತ್ತೆ ವಾಪಾಸಾದ. ವಿನಯಚಂದ್ರ ವಾಪಾಸು ಬರುವ ವೇಳೆಗೆ ಸರ್ಚ್ ಲೈಟ್ ಮತ್ತೆ ನಾಲ್ಕು ಸುತ್ತು ಸುತ್ತಿ ಬಂದಿತ್ತು. ಸಮಯವನ್ನು ನೋಡಿ ಮಧುಮಿತಾ ಅಡಗಿ ಕುಳಿತಿದ್ದ ಪೊದೆಯ ಬಳಿ ಹೋದರೆ ಅಲ್ಲಿ ಮಧುಮಿತಾಳಿಗಿಂತ ಮೊದಲು ಅಮ್ಜದ್ ಕಾಣಿಸಿದ. ವಿನಯಚಂದ್ರನಿಗೆ ಮತ್ತೆ ರೇಗಿಹೋಯಿತು. ಆವಾಗಲೇ ಹಿಂಬಾಲಿಸಬೇಡ ಎಂದರೂ ಮತ್ತೆ ಜೊತೆಗೆ ಬಂದಿದ್ದೀಯಾ ಎಂದು ಬೈದುಕೊಂಡು ಹೊಡೆತ ಹಾಕಲು ಮುನ್ನುಗ್ಗಿದವನನ್ನು ಮಧುಮಿತಾಳೇ ತಡೆದಳು.
          ತಾನು ಹೋಗಿಬಂದ ಸಂಗತಿಯನ್ನು ವಿವರಿಸಿದ ವಿನಯಚಂದ್ರ ಆಕೆಯನ್ನು ಆ ಗುಂಡಿಯ ಮೂಲಕ ಭಾರತಕ್ಕೆ ಕರೆದೊಯ್ಯಲು ಹವಣಿಸಿದ. ಮತ್ತೆರಡು ಸಾರಿ ಸರ್ಚ್ ಲೈಟ್ ಸುತ್ತು ಹೊಡೆಯಿತು. ಮಧ್ಯರಾತ್ರಿಯಾಗಿರುವುದು ಖಾತ್ರಿಯಾಗಿತ್ತು. ನಿಧಾನವಾಗಿ ಕೂರುತ್ತ, ಏಳುತ್ತ, ನಡೆಯುತ್ತ ಮುಂದಕ್ಕೆ ಸಾಗಿ ತಾನು ಹೊಂಡದಲ್ಲಿ ಇಳಿದ ವಿನಯಚಂದ್ರ ಮಧುಮಿತಾಳನ್ನು ಇಳಿಸಿದ. ಮುಂದಕ್ಕೆ ಸಾಗುತ್ತಿರುವ ವೇಳೆ ಧಬಾರ್ ಎನ್ನುವ ಸದ್ದಾಯಿತು. ಏನೋ ಯಡವಟ್ಟಾಗಿದೆ ಎಂದು ಆಲೋಚನೆ ಮಾಡುತ್ತಿದ್ದಂತೆ ತಮ್ಮನ್ನು ಹಿಂಬಾಲಿಸುತ್ತ ಬಂದ ಅಮ್ಜದ್ ನೆನಪಾದ. `ತಥ್.. ಹಾಳಾದವನು.. ನಮ್ಮ ಯೋಜನೆ ಹಾಳುಮಾಡುತ್ತಿದ್ದಾನೆ..' ಎಂದು ಬೈದುಕೊಂಡ. ವಿನಯಚಂದ್ರ ಹಾಗೂ ಮಧುಮಿತಾರನ್ನುಹಿಂಬಾಲಿಸಿ ಬಂದಿದ್ದ ಅಮ್ಜದ್ ಆ ಗುಂಡಿಯ ಆಳವನ್ನು ಅರಿಯದೇ ಉರುಳಿಬಿದ್ದಿದ್ದ. ಉರುಳಿದ್ದ ರಭಸಕ್ಕೆ ಆತನ ಕಾಲು ತಿರುಚಿಕೊಂಡಿತ್ತು. ಒಮ್ಮೆ ನರಳಿದ. ದೊಡ್ಡದಾಗಿ ಕೂಗಿದರೆ ಎಲ್ಲಿ ಭಾರತಕ್ಕೆ ನುಸುಳುವಲ್ಲಿ ತೊಂದರೆಯಾಗುತ್ತದೆಯೋ ಎಂದು ಬಾಯಿ ಕಚ್ಚಿ ನೋವನ್ನು ಸಹಿಸಿಕೊಂಡ. ವಿನಯಚಂದ್ರ ಮುಂದಕ್ಕೆ ಕತ್ತಲೆಯಲ್ಲಿ ಸಾಗುತ್ತಿದ್ದರೆ ಆತನ ಕೈ ಹಿಡಿದು ಮಧುಮಿತಾ ಹಿಂದಕ್ಕೆ ಅನುಸರಿಸಿಕೊಂಡು ಬರುತ್ತಿದ್ದಳು.
            20-25 ಮೀಟರ್ ದೂರವಿದ್ದ ಆ ಸುರಂಗ ಒಬ್ಬರು  ಕುಕ್ಕರು ಗಾಲಿನಲ್ಲಿ ಸಾಗುವಷ್ಟು ದೊಡ್ಡದಾಗಿತ್ತು. ಸಾಕಷ್ಟು ಇಕ್ಕಟ್ಟಾಗಿಯೂ ಇತ್ತು. ವಿನಯಚಂದ್ರ ಮುಂದೆ ಹೋಗುತ್ತಿದ್ದವನು ಭಾರತದ ಗಡಿಯೊಳಗಿನ ಗುಂಡಿಯಲ್ಲಿ ಇಣುಕಿದ. ಇಣುಕಿದವನು ಹಾಗೇ ಕೆಲ ಸಮಯ ಕಾಯುತ್ತ ನಿಂತ. ಹಿಂದೆ ಬರುತ್ತಿದ್ದ ಮಧುಮಿತಾ `ಏನಾಯ್ತು..?' ಎಂದು ಪಿಸುದನಿಯಲ್ಲಿ ಕೇಳಿದಳು. `ಶ್..' ಎಂದು ಸನ್ನೆ ಮಾಡಿದವನೇ ಮತ್ತೆ ಕಾಯುತ್ತ ಕುಳಿತ.
         ಸಮಯ ಸರಿಯುತ್ತಲೇ ಇತ್ತು. ಆದರೆ ವಿನಯಚಂದ್ರ ಆ ಸುರಂಗದಿಂದ ಹೊರ ಹೋಗುತ್ತಲೇ ಇಲ್ಲ. ಸುರಂಗದ ಒಳಗೆ ಕುಳಿತ ಮಧುಮಿತಾಳಿಗಂತೂ ಉಸಿರುಕಟ್ಟಿದ ಅನುಭವವಾಗತೊಡಗಿತ್ತು. ಭಾರತದ ಗಡಿಯೊಳಗೆ ಸೈನಿಕರು ಓಡಾಡಲು ಆರಂಭಿಸಿದ್ದರು. ಈ ಕಾರಣಕ್ಕಾಗಿ ವಿನಯಚಂದ್ರ ಮುಂದಕ್ಕೆ ಹೋಗದೆ ಕುಳಿತಿದ್ದ. ಭಾರತದ ಸೈನಿಕರ ಕಣ್ಣಿಗೆ ಬೀಳದಂತೆ ಇರಬೇಕಿತ್ತು. ಚಿಕ್ಕ ಸದ್ದಾದರೂ ಭಾರತದ ಸೈನಿಕರ ಮಿಷಿನ್ ಗನ್ನುಗಳು ದೇಹದಲ್ಲಿ ಗುಂಡುಗಳನ್ನು ಇಳಿಸುತ್ತಿದ್ದವು. ಆದ್ದರಿಂದ ವಿಳಂಬವಾದರೂ ಕಾಯುವುದು ಅನಿವಾರ್ಯವಾಗಿತ್ತು.
          ಮುಂಬದಿಯಲ್ಲಿ ವಿನಯಚಂದ್ರ, ಹಿಂಬದಿಯಲ್ಲಿ ಅಮ್ಜದ್ ಇದ್ದ ಕಾರಣ ನಡುವೆ ಸಿಕ್ಕಿಬಿದ್ದಂತಾಗಿದ್ದ ಮುಧುಮಿತಾಳಿಗೆ ಉಸಿರಾಡಲು ಅವಕಾಶವೇ ಇಲ್ಲ ಎನ್ನುವಂತಾಗಿತ್ತು. ಬೆವರು ಧಾರಾಕಾರವಾಗಿ ಇಳಿಯುತ್ತಿತ್ತು. ಸಮಯ ಕಳೆದಂತೆಲ್ಲ ಕಿರಿಕಿರಿಯುಮಟಾಗಲು ಆರಂಭವಾಯಿತು. ವಿನಯಚಂದ್ರನ ಬಳಿ ಬೇಗ ಹೋಗಲು ಸಾಧ್ಯವೇ ಎಂದು ಮತ್ತೊಮ್ಮೆ ಕೇಳಿದ್ದಳು. ಆದರೆ ಹೊರ ಭಾಗದಲ್ಲಿ ಸೈನಿಕರ ಸಂಚಾರ ಇನ್ನೂ ನಿಂತಂತಿರದ ಕಾರಣ ವಿನಯಚಂದ್ರನಿಗೆ ಏನು ಹೇಳಬೇಕೋ ಅರ್ಥವಾಗದೇ ಸುಮ್ಮನುಳಿದಿದ್ದ.
           ಮತ್ತೊಂದು ಅರ್ಧ ಗಂಟೆಯ ನಂತರ ಭಾರತೀಯ ಸೈನಿಕರು ದೂರಕ್ಕೆ ಹೋದಂತಾಯಿತು. ಅಷ್ಟರಲ್ಲಿ ಮಧುಮಿತಾ ಬಸವಳಿದಿದ್ದಳು. ಸರ್ಚ್ ಲೈಟ್ ಹಾದು ಹೋಗಿದ್ದನ್ನು ಗಮನಿಸಿ ನಿಧಾನಕ್ಕೆ ಹೊರಬಂದ. ಅವನ ಹಿಂದೆ ಮಧುಮಿತಾಳೂ ಬೇಗನೆ ಹೊರಕ್ಕೆ ಮುಖ ಹಾಕಿ ದೀರ್ಘವಾಗಿ ಉಸಿರೆಳೆದುಕೊಂಡಳು. ನಾಲ್ಕೈದು ಸಾರಿ ಉಸಿರೆಳೆದುಕೊಂಡ ನಂತರ ಆಕೆಗೆ ಸಮಾಧಾನವಾದಂತಾಯಿತು. ವಿನಯಚಂದ್ರ ಆ ಸುರಂಗವಿದ್ದ ಪ್ರದೇಶದಿಂದ ಸುತ್ತಮುತ್ತ ಎಲ್ಲಾದರೂ ಪೊದೆಗಳಿದೆಯೇ ಎನ್ನುವುದನ್ನು ವೀಕ್ಷಿಸಿದ. ಅಲ್ಲೆಲ್ಲೋ ಒಂದು ಕಡೆ ಚಿಕ್ಕದೊಂದು ಗಿಡವಿತ್ತು. ಮಧುಮಿತಾಳ ಕೈ ಹಿಡಿದವನೇ ಓಡಿದಂತೆ ಆ ಗಿಡದ ಬುಡಕ್ಕೆ ಹೋದ. ವಿಚಿತ್ರವೆಂದರೆ ಈ ಗಿಡದ ಹತ್ತಿರಕ್ಕೆ ಅಮ್ಜದ್ ಮಾತ್ರ ಬಂದಿರಲಿಲ್ಲ. ಎಲ್ಲಿ ಹೋಗಿಬಿಟ್ಟನೋ ಎಂದುಕೊಂಡ ವಿನಯಚಂದ್ರ. ಸುರಂಗದಲ್ಲಿ ಉಸಿರು ಕಟ್ಟಿ ಸಿಕ್ಕಿಬಿದ್ದನೇ ಎಂದುಕೊಂಡಳು ಮಧುಮಿತಾ. ಪಿಸುದನಿಯಲ್ಲಿ ವಿನಯಚಂದ್ರನ ಬಳಿ `ಅಮ್ಜದ್ ನನ್ನು ನೋಡಿ ಬರೋಣವೇ..?' ಎಂದು ಕೇಳಿದಳು. ವಿನಯಚಂದ್ರ ಸಿಟ್ಟಿನಿಂದ `ನಿನಗೆ ತಲೆಕೆಟ್ಟಿದೆಯಾ? ಈಗಲೇ ಕಷ್ಟಪಟ್ಟು ಇಲ್ಲಿಗೆ ಬಂದಾಗಿದೆ. ಇನ್ನು ಮತ್ತೆ ವಾಪಾಸು ಹೋಗಿ ಆತನನ್ನು ಹುಡುಕಿ ಬರೋದು ಅಂದ್ರೆ ಸುಮ್ಮನೆ ಆಗುವ ಕೆಲಸವಲ್ಲ. ಯಾರಿಗ್ಗೊತ್ತು ಮತ್ತೆ ಸೈನಿಕರು ವಾಪಾಸು ಬಂದರೆ..? ಸುಮ್ಮನೆ ಆ ಬಗ್ಗೆ ಮಾತನಾಡಬೇಡ..' ಎಂದ. 
            ದೂರದಲ್ಲೆಲ್ಲೋ ಯಾರದ್ದೋ ಹೆಜ್ಜೆಯ ಸಪ್ಪಳ ಕೇಳುತ್ತಿತ್ತು. ನಿಶ್ಶಬ್ಧವಾಗಿದ್ದ ಆ ಸ್ಥಳದಲ್ಲಿ ವಿನಯಚಂದ್ರ ಹಾಗೂ ಮಧುಮಿತಾ ಇಬ್ಬರು ತೆವಳುತ್ತ ತೆವಳುತ್ತ ಮುಂದಕ್ಕೆ ಸಾಗಿದ್ದರು. ಅರ್ಚಕರು ಭಾರತ ಗಡಿಯಲ್ಲೊಂದು ರಸ್ತೆಯಿದೆ ಎಂದು ಹೇಳಿದ್ದರಲ್ಲ ಅದರ ಕಡೆಗೆ ಸಾಗಬೇಕಿತ್ತು.  ನಡು ನಡುವೆ ಸರ್ಚ್ ಲೈಟಿನ ಕಣ್ಣು ತಪ್ಪಿಸಲೇ ಬೇಕಿತ್ತು. ಮುಂದೆ ಮುಂದೆ ಸಾಗುತ್ತಿದ್ದಂತೆ ಇದ್ದಕ್ಕಿದ್ದಂತೆ ಆ ಸಮಯದಲ್ಲೇ ಯಾರೋ ಓಡಿದಂತಹ ಅನುಭವವಾಯಿತು. ಹೆಜ್ಜೆಯ ಸಪ್ಪಳ ತೀವ್ರವಾಗಿತ್ತು. ಅದೇ ಸಮಯದಲ್ಲಿ ಇದ್ದಕ್ಕಿದ್ದಂತೆ ಗುಂಡಿನ ಮೊರೆತವೂ ಕೇಳಿತು. ಒಬ್ಬ ವಿಕಾರವಾಗಿ ಅರಚಿಕೊಂಡಿದ್ದೂ ಕೇಳಿಸಿತು. ಬೆಚ್ಚಿಬಿದ್ದ ವಿನಯಚಂದ್ರ ಹಾಗೂ ಮಧುಮಿತಾ ಒಮ್ಮೆಲೆ ಬೆವೆತುಬಿಟ್ಟರು.
           ಇಬ್ಬರಿಗೂ ಗುಂಡು ತಗುಲಿರಲಿಲ್ಲ. ಹಾಗಾದರೆ ಯಾರಿಗೆ ಗುಂಡು ತಾಗಿದೆ ಎನ್ನುವ ಪ್ರಶ್ನೆ ಉದ್ಭವವಾಗಿತ್ತು. ಮಧುಮಿತಾ ಮೆಲ್ಲಗೆ `ಅಮ್ಜದ್..' ಎಂದಳು. `ಇರಬಹುದು.. ಹಿಂಬಾಲಿಸಬೇಡ ಎಂದಿದ್ದೆ.. ಕೇಳಲಿಲ್ಲ.. ಗುಂಡಿಗೆ ಸಿಕ್ಕು ಸತ್ತನೇನೋ..' ಎಂದು ಪಿಸುಗುಟ್ಟಿದ ವಿನಯಚಂದ್ರ. `ಛೇ..' ಎಂದು ತಲೆಕೊಡವಿದಳು ಮಧುಮಿತಾ.. ಆದರೆ ಏನೂ ಸ್ಪಷ್ಟವಾಗಲಿಲ್ಲ. ಅಮ್ಜದ್ ಬದುಕಿದ್ದರೆ ಸಾಕಿತ್ತು ಎಂದುಕೊಂಡಳು.
           ಭಾರತದ ಫಾಸಲೆಯಲ್ಲಿ ಪೊದೆಯಂತಹ ರಚನೆಗಳು ಜಾಸ್ತಿಯಿದ್ದವು. ಗಡಿಯಿಂದ ಸಾಕಷ್ಟು ದೂರ ಬಂದಿದ್ದೇವೆ ಎನ್ನುವುದು ಅರಿವಾದಾಗ ಇಬ್ಬರೂ ನಿಂತುಕೊಂಡರು. ತೆವಳಿದ ಪರಿಣಾಮವಾಗಿ ಇಬ್ಬರ ಬಟ್ಟೆಗಳೂ ಅಲ್ಲಲ್ಲಿ ಸಾಕಷ್ಟು ಹರಿದಿತ್ತು. ತನ್ನನ್ನು ನಂಬಿ ಬಂದ ಮಧುಮಿತಾಳಿಗೆ ಏನೆಲ್ಲ ಕಷ್ಟಗಳನ್ನು ನೀಡಬೇಕಾಗಿ ಬಂತಲ್ಲ ಎಂದುಕೊಂಡ ವಿನಯಚಂದ್ರ. ಆಕೆಯ ಕಿವಿಯಲ್ಲಿ ಪಿಸುಗುಟ್ಟಿದ. ಆಕೆ ಆತನ ಬಾಯನ್ನು ಮುಚ್ಚಿ ಸುಮ್ಮನಿರುವಂತೆ ಹೇಳಿದಳು. `ಹಾಗೇಕೆ ಅಂದ್ಕೊಳ್ತೀಯಾ ವಿನು.. ಈಗ ಇಷ್ಟೆಲ್ಲ ಕಷ್ಟಗಳು ಬಂದಿದೆ ನಿಜ. ಆದರೆ ಮುಂದಿನ ದಿನಗಳು ಚನ್ನಾಗಿಯೇ ಇರುತ್ತವೆ. ಉಜ್ವಲವಾಗಿಯೂ ಇರುತ್ತವೆ.. ಇದಕ್ಕೆ ಬೇಜಾರು ಮಾಡ್ಕೋಬೇಡ್ವೋ..' ಎಂದಳು.
          ಅಷ್ಟರಲ್ಲಿ `ಕೌನ್ ಹೇ..' ಎಂಬ ಗಡುಸಾದ ಮಾತೊಂದು ಕೇಳಿಸಿತು. ಮಾತು ಕೇಳಿದ ತಕ್ಷಣವೇ ಇಬ್ಬರೂ ತಮ್ಮೆರಡೂ ಕೈಗಳನ್ನು ಮೇಲೆತ್ತಿ ದಬಾರನೆ ನೆಲದ ಮೇಲೆ ಬಿದ್ದುಕೊಂಡರು. ಒಬ್ಬ ಸೈನಿಕ ಬಂದೂಕನ್ನು ಹಿಡಿದು ಬಂದಿದ್ದ. ಬಂದವನೇ ವಿನಯಚಂದ್ರನ ಕಾಲಿಗೆ ಒಂದು ಗುಂಡನ್ನು ಹೊಡೆದೇಬಿಟ್ಟಿದ್ದ. ವಿನಯಚಂದ್ರ ಗುಂಡನ್ನು ತಿಂದ ಪರಿಣಾಮ ನರಳಲು ಆರಂಭಿಸಿದ. ಕಣ್ಣು ಮಂಜಾದಂತೆ ಆಗುತ್ತಿತ್ತು.  ಸೈನಿಕ ನಂತರ ಇಬ್ಬರನ್ನೂ ಕಟ್ಟಿಹಾಕಿದ್ದ. ಮಧುಮಿತಾಳ ತಲೆಗೊಂದು ಏಟನ್ನು ಹಾಕಿದ್ದ. ಇಬ್ಬರೂ ಎಚ್ಚರ ತಪ್ಪಿದ್ದರು.
          ವಿನಚಯಚಂದ್ರ ಕಣ್ಣುಬಿಡುವ ವೇಳೆಗೆ ಕೋಣೆಯೊಂದರಲ್ಲಿ ಬಂಧಿಯಾಗಿದ್ದ. ಎದುರು ಇದ್ದ ಸೈನಿಕ ಅಧಿಕಾರಿಗಳು ವಿನಯಚಂದ್ರನ ಮುಖಕ್ಕೆ ನೀರನ್ನು ಸೋಕುತ್ತಿದ್ದರು. ವಿನಯಚಂದ್ರನಿಗೆ ಎಚ್ಚರ ಬಂದಿದ್ದೇ ತಡ ಕಮಾಂಡರ್ ಒಬ್ಬ ಬಂದು ಮುಖಕ್ಕೆ ಏಟು ಕೊಟ್ಟು ಯಾರು ನೀನು, ಎಂಬಂತೆಲ್ಲ ವಿಚಾರಿಸತೊಡಗಿದ. ವಿನಯಚಂದ್ರ ಮಾತನಾಡಲು ಆರಂಭಿಸಿದ. ತನ್ನ ಕಥೆಯನ್ನು ಸಂಪೂರ್ಣ ಹೇಳಿದ. ಸೈನಿಕರು ಅದೆಷ್ಟು ನಂಬಿದರೋ ತಿಳಿಯಲಿಲ್ಲ. ಏಟುಗಳು ಬೀಳುತ್ತಲೇ ಇದ್ದವು.
          ಬಂಧಿಯಾಗಿದ್ದ ಒಂದು ದಿನದ ನಂತರ ಕಮಾಂಡರ್ ಒಬ್ಬ ಬಂದು ವಿನಯಚಂದ್ರನ ಬಳಿ ಆತನ ಕಥೆಯನ್ನು ಮತ್ತೊಮ್ಮೆ ಕೇಳಿದ. ವಿನಯಚಂದ್ರ ಹೇಳಿದ ನಂತರ `ನೀವು ಹೇಳಿದ್ದನ್ನು ಪರಿಶೀಲನೆ ಮಾಡುತ್ತೇವೆ. ಹೇಳಿದ್ದು ಸತ್ಯವಾಗಿದ್ದರೆ ತೊಂದರೆಯಿಲ್ಲ. ಆದರೆ ಸುಳ್ಳಾಗಿದ್ದರೆ ಇಬ್ಬರನ್ನೂ ಗುಂಡು ಹೊಡೆದು ಸಾಯಿಸಲಾಗುತ್ತದೆ.. ಎಚ್ಚರಿಕೆ..' ಎಂದರು.
          `ಆದರೂ ಭಾರತದ ಗಡಿಯೊಳಕ್ಕೆ ನುಸುಳು ಬರಬಾರದಿತ್ತು. ನೀವು ನುಸುಳಿ ಬಂದಿದ್ದಕ್ಕಾದರೂ ಶಿಕ್ಷೆಯನ್ನು ಅನುಭವಿಸಲೇಬೇಕಾಗುತ್ತದೆ..' ಎಂದು ಹೇಳಿ ಕಮಾಂಡರ್ ಕೋಣೆಯಿಂದ ಹೊರಕ್ಕೆ ಹೋದರು. ಮಧುಮಿತಾ ಅಲ್ಲೇ ಇದ್ದಾಳಾ ಎನ್ನುವುದು ವಿನಯಚಂದ್ರನಿಗೆ ಗೊತ್ತಾಗಲಿಲ್ಲ. ಸೈನಿಕರು ಆಕೆಯನ್ನೂ ಹಿಂಸಿಸುತ್ತಾರಾ ಎಂದುಕೊಂಡು ಭೀತಿಗೊಳಗಾದ. ಭಾರತದ ಸೈನಿಕರು ಹಾಗೆಲ್ಲ ಮಾಡೋದಿಲ್ಲ ಎಂದುಕೊಂಡು ಸಮಾಧಾನವನ್ನೂ ಪಟ್ಟುಕೊಂಡ. ದುರದ ಕರ್ನಾಟಕ ಕೈಬೀಸಿ ಕರೆಯುತ್ತಿತ್ತು. ಆಗಸದ ಅಂಚಿನಲ್ಲಿ  ಹೊಸ ಕನಸಿನ ಸೂರ್ಯೋದಯವಾಗುತ್ತಿತ್ತು.

(ಮುಗಿಯಿತು)

ಕಾದಂಬರಿ ಬರೆಯುವ ಸಂದರ್ಭದಲ್ಲಿ ಮಾಹಿತಿಗಾಗಿ ನಾನು ಮೊರೆ ಹೋದದ್ದು :

* ಬಾಂಗ್ಲಾದೇಶದ ಹಿಂದೂಗಳ ಮಾರಣಹೋಮದ ಕುರಿತು ಗೂಗಲ್ ವೀಕಿಪಿಡಿಯಾ ಮಾಹಿತಿಗಳು
* ಬಾಂಗ್ಲಾ ಹಿಸ್ಟರಿ (ಇಂಗ್ಲೀಷ್ ಪುಸ್ತಕ)
* ಕಬ್ಬಡ್ಡಿ ವೀಡಿಯೋಗಳು
* ಕಬ್ಬಡ್ಡಿ ಕುರಿತು ಯುಟ್ಯೂಬ್ ವೀಡಿಯೋಗಳು, ವೀಕಿಪಿಡಿಯಾ ಮಾಹಿತಿಗಳು
* ರವೀಂದ್ರನಾತ್ ಠ್ಯಾಗೂರ್ ರ ಪುಸ್ತಕಗಳು (ಕನ್ನಡ ಅನುವಾದ)
* ಅಮ್ಜದ್ ಹುಸೇನ್ (ಫೇಸ್ ಬುಕ್ಕಿನ ಬೆಂಗಾಲಿ ಗೆಳೆಯ) ಕೊಟ್ಟ ಕೆಲವು ಮಾಹಿತಿಗಳು
* 1971 (ಬಾಂಗ್ಲಾದೇಶದ ಕಾದಂಬರಿ)
* Bangladesh at war- biplob roy
* ಅಸ್ಲಂ ಶಫೀಕ್ ಅವರು ಬರೆದ ಹಿಂದೂ ಟೆಂಪಲ್ಸ್, ಹೋಮ್ಸ್ ಅಟ್ಯಾಕ್ಡ್ ಅಕ್ರಾಸ್ ಬಾಂಗ್ಲಾದೇಶ (ಲೇಖನ ಮಾಲಿಕೆ ಕೃಪೆ : ಇಂಟರ್ನೆಟ್)

ಇತ್ಯಾದಿ..

ಕೊನೆಯ ಮಾತು :
         ಈ ಕಾದಂಬರಿಯನ್ನು ಬರೆಯಲು ಆರಂಭಿಸಿ ಬಹುತೇಕ 10 ತಿಂಗಳುಗಳೇ ಕಳೆದುಹೋದವು. ಆಗೊಮ್ಮೆ ಈಗೊಮ್ಮೆ ಸಮಯ ಸಿಕ್ಕಾಗ ಬರೆಯುತ್ತಿದ್ದೆ. ಆದರೆ ಕಳೆದ ಜೂನ್ ನಿಂದ ಈಚೆಗೆ ಸೀರಿಯಸ್ ಆಗಿ ಬರೆಯಲು ಆರಂಭಿಸಿದ್ದೆ. ಬರವಣಿಗೆ ನಿಧಾನವಾದಾಗ ಎಚ್ಚರಿಸಿ ಬೇಗ ಬರೆಯಲು ಹೇಳಿದ್ದು, ಲೈಟಾಗಿ ಎಚ್ಚರಿಕೆ ನೀಡಿದ್ದು ನೀವು. ಬರೆದಿದ್ದನ್ನು ಯಾರು ಓದ್ತಾರೆ.. ಸುಮ್ಮನೆ ವೇಸ್ಟು ಎಂದುಕೊಂಡಾಗಲೆಲ್ಲಾ ಅಭಿಪ್ರಾಯ ತಿಳಿಸಿ, ನನ್ನ ಮನೋಭಾವವನ್ನು ಬದಲು ಮಾಡಿದ ನಿಮಗೆಲ್ಲರಿಗೆ ಮತ್ತೊಮ್ಮೆ ನಾನು ಧನ್ಯವಾದ ಹೇಳಲೇಬೇಕು. ಮೊದಲಿಗೆ 35 ಭಾಗಗಳಿಗೆ ಮುಗಿಸಬೇಕು ಎಂದುಕೊಂಡವನು ಕೊನೆಗೆ 41ಕ್ಕೆ ಮುಗಿಸಿದ್ದೇನೆ. ಇಷ್ಟವಾಗಿದೆ ಎನ್ನುವುದು ನನ್ನ ಮನದ ಭಾವನೆ. ನಿಜಕ್ಕೂ ನಾನು ಪೂರ್ಣವಾಗಿ ಬರೆದ ಮೊದಲ ಕಾದಂಬರಿ ಇದು. ಈ ಮೊದಲು `ಅಘನಾಶಿನಿ ಕಣಿವೆಯಲ್ಲಿ..' ಎಂಬ ಕಾದಂಬರಿಯೊಂದನ್ನು ಅರ್ಧ ಬರೆದು ಇಟ್ಟಿದ್ದೇನೆ. ಅದನ್ನು ಮುಂದಿನ ದಿನಗಳಲ್ಲಿ ಪೂರ್ಣಗೊಳಿಸುತ್ತೇನೆ. ಮುಂದೆ ಬೆಂಗಾಲಿ ಕಾದಂಬರಿ ಪುಸ್ತಕ ರೂಪದಲ್ಲಿ ಹೊರಬಂದರೆ ಬ್ಲಾಗಿನಲ್ಲಿ ಬರೆದಾಗ ನೀಡಿದ ಸಹಾಯ, ಸಹಕಾರ, ಪ್ರೀತಿ, ಆದರಗಳನ್ನು ನೀಡುತ್ತೀರಿ ಎಂಬ ನಂಬಿಕೆ ನನ್ನದು. ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳು

3 comments: