Friday, November 14, 2014

ಬೆಂಗಾಲಿ ಸುಂದರಿ-39

           ಸಾಕಷ್ಟು ದೊಡ್ಡದಾಗಿತ್ತು ತೀಸ್ತಾ ನದಿ. ಅಕ್ಕಪಕ್ಕದಲ್ಲಿ ಹಾದು ಹೋದಂತಿದ್ದ ಎರಡು ಸೇತುವೆಗಳು ನದಿಯ ಇಕ್ಕೆಲಗಳನ್ನು ಜೋಡಿಸಿದ್ದವು. ಬೇಸಿಗೆಯ ಆರಂಭವಾದ್ದರಿಂದ ನದಿಯಲ್ಲಿ ನೀರು ಕಡಿಮೆಯಿತ್ತು. ಉದ್ದನೆಯ ಬಯಲು ಮಲಗಿದೆಯೋ ಎಂಬಂತೆ ಕಾಣುತ್ತಿದ್ದ ಪ್ರದೇಶ. ಒಂದು ಕಡೆಯಲ್ಲಿ ಚಿಕ್ಕದೊಂದು ಸರೋವರದ ಆಕೃತಿಯಲ್ಲಿ ನೀರು ನಿಂತುಕೊಂಡಿತ್ತು. ಅರ್ಚಕರು `ಭಾರತಕ್ಕೂ ಬಾಂಗ್ಲಾದೇಶಕ್ಕೂ ತೀಸ್ತಾ ನದಿ ನೀರಿನ ಹಂಚಿಕೆಯ ಸಲುವಾಗಿ ಗಲಾಟೆಗಳು ನಡೆದಿವೆ. ಆಗೀಗ ವಿವಾದಗಳು ಉಂಟಾಗುತ್ತಲೂ ಇರುತ್ತವೆ. ಕಳೆದ ಎರಡು ದಶಕಗಳಿಂದ ಈ ನದಿ ನಿರಿನ ಹಂಚಿಕೆ ಜ್ವಲಂತವಾಗಿಯೇ ಇದೆ. ಎರಡೂ ರಾಷ್ಟ್ರಗಳು ಒಮ್ಮತಕ್ಕೆ ಬರುವಲ್ಲಿ ವಿಫಲವಾಗಿವೆ. ಹೀಗಾಗಿ ತೀಸ್ತಾನದಿ ನೀರು ಹಂಚಿಕೆ ಕಗ್ಗಂಟಾಗಿಯೇ ಉಳಿದಿದೆ' ಎಂದರು. ವಿನಯಚಂದ್ರ ಹಾಗೂ ಮಧುಮಿತಾ ಸುಮ್ಮನೇ ಕೇಳುತ್ತಿದ್ದರು.
           `ಭಾರತದ ಸಿಕ್ಕಿಂ ರಾಜ್ಯದಲ್ಲಿ ಹುಟ್ಟುವ ತೀಸ್ತಾ ನದಿ ನಂತರ ಪಶ್ಚಿಮ ಬಂಗಾಳದ ಫಾಸಲೆಯಲ್ಲಿ ಹರಿದು ಬಾಂಗ್ಲಾದೇಶವನ್ನು ಸೇರುತ್ತದೆ. ಭಾರತದಲ್ಲಿ ಈ ನದಿಗೆ ಹಲವಾರು ಅಣೆಕಟ್ಟುಗಳನ್ನೂ ಕಟ್ಟಲಾಗಿದೆ. ಹಿಮಾಲಯದಲ್ಲಿ ಹುಟ್ಟುವ ನದಿಯಾದ ಕಾರಣ ಸದಾಕಾಲ ತುಂಬಿರುತ್ತದೆ. ಇಂತಹ ನದಿ ನೀರನ್ನು ಭಾರತ ಅಣೆಕಟ್ಟಿ ತಾನೇ ಇಟ್ಟುಕೊಳ್ಳುತ್ತದೆ. ಪರಿಣಾಮವಾಗಿ ಬಾಂಗ್ಲಾದೇಶಕ್ಕೆ ಅಗತ್ಯವಾದ ನೀರು ಸಿಗುತ್ತಿಲ್ಲ ಎನ್ನುವ ವಾದ ಬಾಂಗ್ಲಾದೇಶದ್ದು. ಭಾರತವೂ ತನ್ನದೇ ಆದ ವಾದವನ್ನು ಮುಂದಿಡುತ್ತದೆ. ವಿಚಿತ್ರವೆಂದರೆ ನೀರು ಸರಿಯಾಗಿ ಹಂಚಿಕೆಯಾಗುತ್ತಿಲ್ಲ ಎಂದು ಕೂಗಾಡುವ ಬಾಂಗ್ಲಾದೇಶ ಮಾತ್ರ ತೀಸ್ತಾ ನದಿ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವುದೇ ಇಲ್ಲ. ಆದರೆ ಭಾರತ ಸಮರ್ಪಕವಾಗಿ ನೀರು ಹಂಚಿಕೆ ಮಾಡುವುದಿಲ್ಲ ಎಂದು ಕೂಗಾಡುವುದನ್ನು ನಿಲ್ಲಿಸುವುದೇ ಇಲ್ಲ.. ಇದೋ ನೋಡಿ ಈ ನದಿಯ ಇಕ್ಕೆಲಗಳೂ ಸದಾಕಾಲ ಹಸಿರಾಗಿ ಇರವಂತಾಗಬಹುದಿತ್ತು. ವರ್ಷಕ್ಕೆ ಮೂರು ಬೆಳೆಗಳನ್ನೂ ಬೆಳೆಯಬಹುದಿತ್ತು. ಆದರೆ ನದಿಯ ಅಕ್ಕಪಕ್ಕದ ಬಯಲುಗಳು ಮಾತ್ರ ಒಣಗಿ ನಿಂತಿವೆ..' ಎಂದರು ಅರ್ಚಕರು.
           ವಿಶಾಲವಾದ ನದಿ ಹರವಿನ ಪಾತ್ರ ಬತ್ತಿದಂತಿತ್ತು. ಉದ್ದವಾದ ಸೇತುವೆ ನದಿಯನ್ನು ಅಡ್ಡಡ್ಡ ಸೀಳಿದಂತೆ ಮುಂದಕ್ಕೆ ಸಾಗಿತ್ತು. ನದಿಯ ಪಾತ್ರದಲ್ಲಿ ಅದ್ಯಾರೋ ಉಸುಕನ್ನು ತೆಗೆಯುತ್ತಿದ್ದರು. ಸೇತುವೆಯ ಮೇಲೆ ವೇಗವಾಗಿ ಸಾಗುತ್ತಿದ್ದ ಬಸ್ಸಿನಿಂದ ಒಂದು ಪಕ್ಕದಲ್ಲಿ ಮಾತ್ರ ನೀರಿನ ಗುಂಡಿಯಿದ್ದರೆ ಅಲ್ಲೊಂದಿಷ್ಟು ಮಹಿಳೆಯರು ತಲೆಯ ಮೇಲೆ ನೀರಿನ ಕೊಡಗಳನ್ನು ಹೊತ್ತು ಸಾಗುತ್ತಿದ್ದರು. ನಂದನ ವನದಲ್ಲೂ ಬರವೇ ಎಂದುಕೊಂಡ ವಿನಯಚಂದ್ರ. ತೀಸ್ತಾ ನದಿ ಸೇತುವೆ ದಾಟಿ ಮುನ್ನಡೆಯಿತು ಬಸ್ಸು. ಸೇತುವೆ ದಾಟಿದ ನಂತರ ರಸ್ತೆಯಲ್ಲಿ ಹೊರಳಿ ಕುರಿಗ್ರಾಮದ ಕಡೆಗೆ ಹೊರಟಿತು. ರಸ್ತೆಯ ಇಕ್ಕೆಲಗಳಲ್ಲೂ ಮನೆಗಳು. ಪುಟ್ಟ-ಪುಟ್ಟ ಹಳ್ಳಿಗಳು ಕಾಣಿಸಿದವು. ಮುಂದೆ ಮುಂದೆ ಸಾಗಿದಂತೆಲ್ಲ ರಸ್ತೆ ಮತ್ತಷ್ಟು ಕಿರಿದಾಯಿತು. ಕಿರಿ ರಸ್ತೆಯಲ್ಲಿ ವಾಹನಗಳ ದಟ್ಟಣೆ ನಿಧಾನವಾಗಿ ಹೆಚ್ಚತೊಡಗಿತು.
           ಅಲ್ಲೊಂದು ಕಡೆ ತಿಂಡಿ ತಿನ್ನಲು ವಾಹನ ನಿಲ್ಲಿಸಲಾಯಿತು. ಅರ್ಚಕರ ಬಸ್ಸಿನಿಂದ ಇಳಿದರು. ಅಷ್ಟೇ ಅಲ್ಲ ವಿನಯಚಂದ್ರ ಹಾಗೂ ಮಧುಮಿತಾರನ್ನೂ ಇಳಿಯಲು ಹೇಳಿ ಅಲ್ಲೇ ಇದ್ದ ಹೊಟೆಲೊಂದಕ್ಕೆ ಕರೆದೊಯ್ದರು. ಹೊಟೆಲಿನಲ್ಲಿ ಬೆಂಗಾಲಿ ಸ್ಪೆಷಲ್ ರಸಗುಲ್ಲಕ್ಕೆ ಆರ್ಡರ್ ಕೊಟ್ಟರು. ಕೆಲವೇ ಕ್ಷಣಗಳಲ್ಲಿ ಕಣ್ಣೆದುರಿಗೆ ತಂದಿಟ್ಟ ರಸಗುಲ್ಲವನ್ನು ಮೂವರೂ ಸವಿಯುತ್ತಿದ್ದಾಗಲೇ `ರೋಶಗುಲಾ.. ಬೆಂಗಾಲಿಯ ವಿಶೇಷ ತಿಂಡಿ. ಈ ರಾಷ್ಟ್ರಕ್ಕೇನಾದರೂ ರಾಷ್ಟ್ರೀಯ ತಿಂಡಿ ಎನ್ನುವುದು ಇದ್ದರೆ ಅದು ರೋಶಗುಲಾ ವೇ ಹೌದು..' ಎಂದರು. ವಿನಯಚಂದ್ರ ರೋಶಗುಲಾದ ಹೆಸರು ಕೇಳಿ ಕೆಲಕಾಲ ಅವಾಕ್ಕಾಗಿ ನಿಂತಿದ್ದ. ಕೊನೆಗೆ ರಸಗುಲ್ಲಾವೇ ಬಾಂಗ್ಲಾದೇಶದಲ್ಲಿ ರಶೊಗುಲಾವಾಗಿ ಬದಲಾಗಿದೆ ಎಂಬುದು ನೆನಪಾಯಿತು. ಮಧುಮಿತಾಳಂತೂ ಖುಷಿಯಿಂದ ಸವಿದಳು. ಆಕೆಗೆ ಚಿಕ್ಕಂದಿನಿಂದ ಬಲು ಆಪ್ತ ತಿಂಡಿಯಾಗಿತ್ತದು. ಕಳೆದುಹೋಗಿದ್ದು ಮತ್ತೊಮ್ಮೆ ಸಿಕ್ಕಂತಾಯಿತು. ಮತ್ತೊಮ್ಮೆ ರೊಶಗುಲಾವನ್ನು ನೀಡಿದ್ದಕ್ಕಾಗಿ ಅರ್ಚಕರಿಗೆ ಧನ್ಯವಾದ ಹೇಳಿದಳು ಆಕೆ.
         ಮತ್ತೆ ಹೊರಡಲು ಅನುವಾದ ಬಸ್ಸನ್ನು ಏರಿದರು ಮೂವರೂ. ಬಸ್ಸು ರಾಜರಹಾಟ್ ಪ್ರದೇಶವನ್ನು ಹಾದು ಒಂದು ತಾಸಿನ ಅವಧಿಯಲ್ಲಿ ಕುರಿಗ್ರಾಮವನ್ನು ತಲುಪಿತು. ಅಲ್ಲಿ ಇಳಿದ ಮೂವರೂ ಆ ಗ್ರಾಮದ ಫಾಸಲೆಯಲ್ಲೇ ಇದ್ದ ಸ್ಥಳದತ್ತ ತೆರಳಿದರು. ಮುಖ್ಯ ಬೀದಿಯಿಂದ ಕವಲೊಡೆದ ಸಾದಾ ರಸ್ತೆಯಲ್ಲಿ ಸಾಗಿ ಅಲ್ಲೆಲ್ಲೋ ಒಂದು ಕಡೆ ಅರ್ಚಕರು ಇಬ್ಬರನ್ನು ಕರೆದೊಯ್ದರು. ಮನೆಯೊಂದರ ಬಳಿ ನಿಲ್ಲಿಸಿ ಮನೆಯ ಯಜಮಾನನನ್ನು ಕರೆದರು. ಮನೆಯ ಯಜಮಾನ ಹೊರಬಂದ ನಂತರ ಆತನನ್ನು ಅರ್ಚಕರು ಪರಿಚಯಿಸಿದರು.
         ಭಾರತಕ್ಕೆ ಕಳಿಸುವ ಅರ್ಚಕರ ಕೈಂಕರ್ಯದಲ್ಲಿ ಜೊತೆಗೂಡಿದ ವ್ಯಕ್ತಿಯಾಗಿದ್ದರು ಆತ. ಆತನೂ ಹಿಂದೂವೇ ಆಗಿದ್ದ. ಭಾರತ ತಲುಪುವ ವರೆಗೆ ಸಹಾಯ ಮಾಡುವುದು ಆತನ ಪ್ರಮುಖ ಕಾರ್ಯವಾಗಿತ್ತು. ತನ್ನ ಮನೆಯ ಪಕ್ಕದಲ್ಲೇ ಇದ್ದ ಕೊಠಡಿಯಲ್ಲಿ ಸಂಜೆಯಾಗುವ ವರೆಗೆ ಉಳಿಯಲು ಅವಕಾಶ ಮಾಡಿಕೊಟ್ಟ. ಮಾತಿಗೆ ನಿಂತ ಅರ್ಚಕರು `ಇಲ್ಲಿಯವರೆಗಿನ ನಮ್ಮ ಪ್ರಯಾಣ ನಿರಾಳ. ಯಾವುದೇ ತೊಂದರೆ ಆಗಿರಲಿಲ್ಲ. ಆದರೆ ಇನ್ನುಮುಂದಿನ ಹಾದಿಯಂತೂ ಬಹಳ ಕಠಿಣ. ಹೆಜ್ಜೆ ಹೆಜ್ಜೆಗೆ ಅಪಾಯವಿದೆ. ಮೊದಲಿಗೆ ನಾವು ಧರ್ಲಾ ನದಿಯನ್ನು ದಾಟಿ ಭಾರತದ ಗಡಿಯತ್ತ ಹೋಗಬೇಕು. ಅಲ್ಲಿ ಸಮಯ ನೋಡಿ ದಾಟಬೇಕು. ಅದೃಷ್ಟವಿದ್ದರೆ ಇವತ್ತೇ ದಾಟಬಹುದು. ಸಾಧ್ಯವಾಗದಿದ್ದರೆ ಕಾಯಬೇಕು. ಕೆಲವೊಮ್ಮೆ ನಾವು ಹೀಗೆ ಕಾಯುವುದು ಕನಿಷ್ಟ ಒಂದು ವಾರವೂ ಆಗಬಹುದು. ನೋಡೋಣ ಏನಾಗುತ್ತದೆ ಅಂತ..' ಎಂದರು.
         ಇಬ್ಬರೂ ತಲೆಯಲ್ಲಾಡಿಸಿ ಸುಮ್ಮನಾದರು. ಸಂಜೆಯಾಗುವುದನ್ನೇ ಕಾಯುತ್ತ ಕಳೆದರು. ಹೀಗೆ ಕಾಯುತ್ತಿದ್ದಾಗಲೇ ಉಳಿದಕೊಂಡಿದ್ದ ಮನೆಯ ಯಜಮಾನರು, ಅವರ ಪತ್ನಿ, ಮಕ್ಕಳು ಬಂದು ಪರಿಚಯ ಮಾಡಿಕೊಂಡರು. ವಿನಯಚಂದ್ರನಿಗೆ ಇವರೆಲ್ಲ ಎಷ್ಟು  ಆಪ್ತರು ಎನ್ನಿಸಿತು. ಕತ್ತಲಾಗುತ್ತಿದ್ದಂತೆ ಅರ್ಚಕರು ಭಾರತದ ಗಡಿಯತ್ತ ತೆರಳುವಂತೆ ಸೂಚಿಸಿದರು. ಬೇಗನೇ ತಯಾರಾದ ವಿನಯಚಂದ್ರ ಹಾಗೂ ಮಧುಮಿತಾ ಭಾರತದ ಗಡಿಯತ್ತ ಹೊರಟರು. ಸೈಕಲ್ ರಿಕ್ಷಾ ಒಂದನ್ನು ಬಾಡಿಗೆಗೆ ತಂದಿದ್ದ ಅರ್ಚಕರು ಸೀದಾ ಭಾರತದ ಗಡಿಯತ್ತ ತಮ್ಮನ್ನು ಕರೆದೊಯ್ಯಲು ಹೇಳಿದರು. ಅರ್ಚಕರ ಅಣತಿಯನ್ನು ಕೇಳಿದ ಸೈಕಲ್ ರಿಕ್ಷಾವಾಲಾ `ಏನು ಭಾರತಕ್ಕೆ ನುಸುಳಲು ಯತ್ನಿಸುತ್ತಿದ್ದೀರಾ..? ಹುಷಾರು..' ಎಂದ. ಅರ್ಚಕರು ಅದೇನೋ ಅಬೂಬು ಹೇಳಿದರಾದರೂ ಸೈಕಲ್ ರಿಕ್ಷಾವಾಲಾ ನಂಬಲಿಲ್ಲ.
         ಕೆಲ ಹೊತ್ತಿನಲ್ಲಿಯೇ ಧಾರ್ಲಾ ನದಿಯನ್ನು ದಾಟಿ ಸೈಕಲ್ ಮುಂದಕ್ಕೆ ಸಾಗಿತು.ಅಲ್ಲೆಲ್ಲೋ ಒಳ ಪ್ರದೇಶಗಳಲ್ಲಿ ಸೈಕಲ್ ಸಾಗುತ್ತಿದ್ದರೆ ವಿನಯಚಂದ್ರನಿಗೆ ತಾವು ಎತ್ತ ಸಾಗುತ್ತಿದ್ದೇವೆ ಎನ್ನುವುದು ಬಗೆ ಹರಿಯಲಿಲ್ಲ. ಅಕ್ಕಪಕ್ಕದಲ್ಲಿ ವಿಶಾಲವಾದ ಬಯಲು ಇರುವುದು ಗೊತ್ತಾಗುತ್ತಿತ್ತು. ಸೈಕಲ್ ರಿಕ್ಷಾವಾಲ ಸೈಕಲ್ಲಿಗೆ ಯಾವುದೇ ಬೆಳಕು ಅಳವಡಿಸಿರಲಿಲ್ಲ. ಕತ್ತಲೆಯಲ್ಲಿಯೇ ಮುಂದಕ್ಕೆ ಸಾಗುತ್ತಿದ್ದ. ಭಾರತದ ಗಡಿಯೊಳಕ್ಕೆ ನುಸುಳಲು ಅದೆಷ್ಟು ಜನರನ್ನು ಹೀಗೆ ಕರೆದೊಯ್ದಿದ್ದನೋ. ಪಳಗಿದ ಆತನಿಗೆ ಯಾವ ಕ್ಷಣದಲ್ಲಿ ಹೇಗೆ ಮಾಡಬೇಕು ಎನ್ನುವುದು ಗೊತ್ತಿತ್ತು. ಆದ್ದರಿಂದ ಕತ್ತಲೆಯಲ್ಲಿಯೇ ಹಳೆಯ ಜಾಡಿನ ರಸ್ತೆಯಲ್ಲಿ ಸಾಗುತ್ತಿದ್ದ. ಒಂದು ತಾಸಿನ ಪಯಣದ ನಂತರ ಭಾರತದ ಗಡಿ ಪ್ರದೇಶವೆನ್ನುವುದು ದೂರದಲ್ಲಿ ಕಾಣುತ್ತಿತ್ತು. ಹಾಕಿದ್ದ ಬೇಲಿ, ಅಲ್ಲೆಲ್ಲೋ ಒಂದು ಕಡೆಯಿದ್ದ ಸರ್ಚ್ ಲೈಟಿನಿಂದ ಭಾರತದ ಗಡಿಯನ್ನು ಗುರುತಿಸಬಹುದಿತ್ತು. ದೂರದಲ್ಲೇ ಸೈಕಲ್ ರಿಕ್ಷಾ ನಿಲ್ಲಿಸಿ ಸುಸಂದರ್ಭಕ್ಕಾಗಿ ಕಾಯುತ್ತ ನಿಂತರು.

(ಮುಂದುವರಿಯುತ್ತದೆ..)

No comments:

Post a Comment