Sunday, September 29, 2013

ಗುಡ್ಡೇತೋಟದ ಕೋಟೆ ವಿನಾಯಕ

ಗುಡ್ಡೇತೋಟದ ಕೋಟೆ ವಿನಾಯಕ ದೇವಸ್ಥಾನ ಸಿದ್ದಾಪುರ ತಾಲೂಕಿನ ಹೆಸರಾಂತ ಕ್ಷೇತ್ರಗಳಲ್ಲೊಂದು. ಇಡಗುಂಜಿಯ ಗಣಪನಷ್ಟೇ ಶಕ್ತಿಯನ್ನು ಹೊಂದಿರುವ ಈ ದೇವಸ್ಥಾನ ಮೂಲಭೂತ ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿದೆ.
    ಸಿದ್ದಾಪುರ ತಾಲೂಕಿನ ಹಸರಗೋಡ ಗ್ರಾ.ಪಂ ವ್ಯಾಪ್ತಿಯ ಗುಡ್ಡೇತೋಟದಲ್ಲಿರುವ ಕೋಟೆ ವಿನಾಯಕನ ದೇವಸ್ಥಾನ ಇತಿಹಾಸ ಪ್ರಸಿದ್ಧವಾದುದು. ಬೇಡಿದ್ದನ್ನು ಕೊಡುವ ಗಣಪನ ಸನ್ನಿಧಿ ಭಕ್ತರ ಮನದ ಇಚ್ಛೆಯನ್ನು ಪೂರೈಸುತ್ತದೆ. ಶ್ರೀಕ್ಷೇತ್ರ ಇಡಗುಂಜಿಗೆ ಹೋಗಲು ಸಾಧ್ಯವಾಗದಿದ್ದವರು ಗುಡ್ಡೇತೋಟದ ಗಣಪನ ದರ್ಶನ ಮಾಡಿ ಬಂದರೆ ಧನ್ಯರಾಗುತ್ತಾರೆ ಎನ್ನುವ ನಂಬಿಕೆಗಳೂ ಇವೆ.
    ಸಹ್ಯಾದ್ರಿಯ ದಡ್ಡ ಕಾಡಿನ ಮಧ್ಯದಲ್ಲಿರುವ ಸುಂದರ ದೇವಾಲಯ ಗುಡ್ಡೇತೋಟ. ಪುಟ್ಟ ಊರು. ಹೆಸರಿಗೆ ತಕ್ಕಂತೆ ಗುಡ್ಡದ ಮೇಲೆ ದೇವಸ್ಥಾನವಿದೆ. ದೇವಸ್ಥಾನವನ್ನು ತಲುಪುವಾಗ ಬಹುದೊಡ್ಡ ಗುಡ್ಡವನ್ನು ಹತ್ತಿಳಿಯಬೇಕು. ಸೂರ್ಯನ ಕಿರಣಗಳು ಭೂಮಿಯನ್ನು ತಲುಪದಂತಹ ದಡ್ಡ ಕಾಡಿನ ಪ್ರದೇಶದಲ್ಲಿರುವ ದೇವಸ್ಥಾನ ನಿಸರ್ಗ ಸೌಂದರ್ಯದಲ್ಲೂ ಸಮೃದ್ಧವಾಗಿದೆ. ಶ್ರದ್ಧಾ ಭಕ್ತಿಯ ತಾಣವಾಗಿರುವ ಗುಡ್ಡೇತೋಟದಲ್ಲಿ ಹರಕೆಯನ್ನು ಹೊತ್ತುಕೊಂಡರೆ ಬಹುಬೇಗನೇ ಈಡೇರುತ್ತವೆ. ಹರಕೆಯ ರೂಪದಲ್ಲಿ ಗಂಟೆಯನ್ನು ಅರ್ಪಣೆ ಮಾಡಬೇಕು. ಆಗ ಗಣಪ ಬೇಡಿದ್ದನ್ನು, ಇಷ್ಠಾರ್ಥಗಳನ್ನು ಪೂರೈಸುತ್ತಾನೆ ಎನ್ನುವ ಭಾವನೆ ದೇವಸ್ಥಾನಕ್ಕೆ ನಡೆದುಕೊಳ್ಳುವ ಭಕ್ತಸಮೂಹದ್ದಾಗಿದೆ.
    ಸಾವಿರಾರು ವರ್ಷ ಪ್ರಾಚೀನವಾದ ದೇಗುಲದಲ್ಲಿ ಚಿಕ್ಕದಾದ ಆಕರ್ಷಕ ಮೂರ್ತಿ, ಸುಂದರ ಪಾಣಿಪೀಠ ಗುಡ್ಡೇತೋಟದ ಗಣಪನ ವಿಶೇಷತೆಯಾಗಿದೆ. ದೇವಸ್ಥಾನದ ಎದುರು ಭಾಗದಲ್ಲಿರುವ ಬಸವನ ಮೂರ್ತಿ ಆಗಮಿಸುವ ಭಕ್ತರ ಮನಸ್ಸಿನಲ್ಲಿ ವಿಸ್ಮಯವನ್ನು ಮೂಡಿಸುತ್ತದೆ. ಈಶ್ವರನ ದೇವಸ್ಥಾನದಲ್ಲಿ ಶಿವಲಿಂಗವನ್ನು ನೋಡುತ್ತಿರುವ ಬಸವನ ಮೂರ್ತಿ ಎಲ್ಲ ಕಡೆ ಕಾಣಸಿಕ್ಕರೆ ಗುಡ್ಡೇತೋಟದಲ್ಲಿ ಗಣಪನನ್ನು ಬಸವ ನೋಡುತ್ತಿದೆ. ಈ ಬಸವ ಬಾಳೂರಿನ ಗೌಡನ ಸೂಚಕ ಎಂದು ಹೇಳಲಾಗುತ್ತದೆ. ಸಿದ್ದಾಪುರ ತಾಲೂಕಿನ ಹೂವಿನಮನೆಯ ಕೋಟೆಗುಡ್ಡೆ ಎಂಬಲ್ಲಿದ್ದ ಈ ದೇವಸ್ಥಾನವನ್ನು ಸೋದೆಯ ಅರಸರ ಪಾಳೆಯಗಾರರಾಗಿದ್ದ ಬಾಳೂರ ಗೌಡರು ಗುಡ್ಡೇತೋಟದಲ್ಲಿ ನಿರ್ಮಿಸಿದರು ಎಂಬ ಪ್ರತೀತಿಯಿದೆ.
    ಚುನಾವಣಾ ಗಣಪ ಎಂಬ ಹೆಸರಿನಿಂದಲೂ ಖ್ಯಾತಿಯಾಗಿರುವ ಈ ದೇವ ಸನ್ನಿಧಿಗೆ ಪೂಜೆ ಸಲ್ಲಿಸಿದವರಿಗೆ ಚುನಾವಣೆಯಲ್ಲಿ ಟಿಕೆಟ್ ಲಭಿಸುತ್ತದೆ ಎನ್ನುವ ಮಾತುಗಳಿವೆ. ಪೂಜೆ ಸಲ್ಲಿಸಿದವರು ಚುನಾವಣೆಯಲ್ಲಿ ಗೆಲುವನ್ನೂ ಕಂಡಿದ್ದಾರೆ. ದೇವಸ್ಥಾನದಲ್ಲಿ ಕಾರ್ತೀಕ ಬಹುಳ ದ್ವಾದಶಿಯಂದು ದೇವಕಾರ್ಯ ನಡೆಯುತ್ತದೆ. ಅದೇ ದಿನ ಸಂಜೆ ದೀಪೋತ್ಸವ ಅದ್ಧೂರಿಯಾಗಿ ನಡೆಯುತ್ತದೆ. ದೀಪೋತ್ಸವದ ಸಂದರ್ಭದಲ್ಲಿ ಸುತ್ತಮುತ್ತಲ ಗ್ರಾಮಸ್ಥರು ಸಾವಿರ ಸಂಖ್ಯೆಯಲ್ಲಿ ಪಾಲ್ಗೊಂಡು ಭಕ್ತಿ ಭಾವದಲ್ಲಿ ಮೈಮರೆಯುತ್ತಾರೆ. ದೀವಗಿ ಆಶ್ರಮದ ರಾಮಾನಂದ ಸ್ವಾಮೀಜಿಯವರ ದಿವ್ಯ ಆಶೀರ್ವಾದದಲ್ಲಿ ಚಂದ್ರಶಾಲೆ ನಿರ್ಮಾಣಗೊಂಡಿದೆ. ಇದು ದೇವಸ್ಥಾನದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳ ಉಪಯೋಗಕ್ಕೆ ಅನುಕೂಲ ಕಲ್ಪಿಸಿದೆ.
    ಈ ದೇವಸ್ಥಾನ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ದಟ್ಟಡವಿಯ ನಡುವಿನಲ್ಲಿ ಪ್ರತಿಷ್ಠಾಪನೆಗೊಂಡಿರುವ ಗಣಪನ ಆಲಯಕ್ಕೆ ಹೋಗಲು ಸಮರ್ಪಕ ಸಂಚಾರ ವ್ಯವಸ್ಥೆಯಿಲ್ಲ. ಇರುವ ರಸ್ತೆಯಲ್ಲಿ ಮಳೆಗಾಲದಲ್ಲಿ ಹೋಗಲು ಹರಸಾಹಸ ಪಡಬೇಕಿದೆ. ರಸ್ತೆಯನ್ನು ಡಾಂಬರೀಕರಣಗೊಳಿಸುವ ಬದಲು ಇರುವ ರಸ್ತೆಯನ್ನು ಸುಸ್ಥಿತಿಯಲ್ಲಿಡಬೇಕಾಗಿದೆ. ಅಕ್ಕಪಕ್ಕದಲ್ಲಿ ನೀರುಕಾಲುವೆಯನ್ನು ಮಾಡಿಕೊಡಬೇಕಾಗಿದೆ. ಎರಡು ವರ್ಷಗಳ ಹಿಂದೆ ಕಾನಸೂರು ತಟ್ಟಿಕೈ ರಸ್ತೆಯ ಹಿತ್ಲಕೈನಿಂದ ಕಂಚಿಮನೆಗೆ ಕಚ್ಚಾರಸ್ತೆ ನಿರ್ಮಾಣ ಮಾಡಲಾಗಿದೆ. ಯೋಜನೆಯ ಪ್ರಕಾರ ಕಂಚಿಮನೆ ಕಚ್ಚಾರಸ್ತೆಯ ಜೊತೆ ಜೊತೆಯಲ್ಲಿ ಗುಡ್ಡೇತೋಟದ ದೇವಸ್ಥಾನಕ್ಕೂ ರಸ್ತೆ ನಿರ್ಮಾಣ ಮಾಡುವ ಪ್ರಸ್ತಾವನೆಯಿತ್ತು. ಸ್ಥಳೀಯರು ಈ ಕುರಿತು ಆಗ್ರಹಿಸಿದ್ದರೂ ಕೂಡ ಅದನ್ನು ಕಡೆಗಣಿಸಲಾಗಿದೆ. ಯೋಜನೆ ಅನುಷ್ಠಾನವನ್ನು ಕಡೆಗಣಿಸಿದ್ದರಿಂದಾಗಿ ದೇವಸ್ಥಾನಕ್ಕೆ ಹೋಗಿಬರುವ ಭಕ್ತಾದಿಗಳಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಈಗಲಾದರೂ ಸಂಬಂಧಪಟ್ಟ ಇಲಾಖೆಯವರು ರಸ್ತೆ ಕಾಮಗಾರಿ ಕೈಗೊಳ್ಳುತ್ತಾರಾ ಎನ್ನುವ ಪ್ರಶ್ನೆ ಸಾರ್ವಜನಿಕರದ್ದಾಗಿದೆ.



++++++++++++++

    ದೇವಸ್ಥಾನಕ್ಕೆ ಸರ್ವಋತು ರಸ್ತೆ ನಿರ್ಮಾಣ ಮಾಡಿಕೊಡಬೇಕು ಎಂಬುದು ನಮ್ಮ ಹಲವು ವರ್ಷಗಳ ಬೇಡಿಕೆ. ಈ ಕುರಿತು ಹಸರಗೋಡ ಪಂಚಾಯತಕ್ಕೆ ಹಲವು ಬಾರಿ ಅರ್ಜಿ ನೀಡಿದ್ದೇವೆ. ಆದರೆ ಇದುವರೆಗೂ ರಸ್ತೆಯನ್ನು ಸಮರ್ಪಕವಾಗಿ ಮಾಡಲಾಗಿಲ್ಲ. ಇದರಿಂದಾಗಿ ಸಂಚಾರ ದುಸ್ತರವಾಗಿದೆ. ದೇವಸ್ಥಾನಕ್ಕೆ ದಿನಂಪ್ರತಿ ಹಲವಾರು ಭಕ್ತರು ಆಗಮಿಸುತ್ತಾರೆ. ಭಕ್ತರಿಗೆ ಸಂಪರ್ಕಕ್ಕಾಗಿ ಶಿರಸಿ-ಅಡ್ಕಳ್ಳಿ-ತಟ್ಟೀಕೈ ನಡುವೆ ಸಂಚರಿಸುವ ಬಸ್ಸುಗಳನ್ನು ಹೆಚ್ಚಿಸಬೇಕಾದ ಅಗತ್ಯವಿದೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತರ ವಾಸ್ತವ್ಯಕ್ಕಾಗಿ ಸೌಲಭ್ಯ ಕಲ್ಪಿಸುವ ಅಗತ್ಯವಿದೆ. ದೂರದ ಊರುಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ. ಅಂತವರ ಅನುಕೂಲಕ್ಕಾಗಿ ಮೂಲಭೂತ ಸೌಕರ್ಯಗಳ ಕುರಿತಂತೆ ಕಾರ್ಯಕ್ರಮ ರೂಪಿಸಬೇಕಾಗಿದೆ.

ದತ್ತಾತ್ರೇಯ ಭಟ್ಟ
ಅರ್ಚಕರು, ಗುಡ್ಡೇತೋಟ

2 comments:

  1. sooper... thanks for posting this article....

    ReplyDelete
  2. This is just one example, but if we search we will get many more good temples, having the same problem.

    ReplyDelete