Wednesday, September 11, 2013

ಅಜ್ಜಿ ಗುಂಡಿ


    ಕರ್ನಾಟಕದ ಕಾಶ್ಮೀರ ಎಂಬ ಖ್ಯಾತಿಗೆ ಪಾತ್ರವಾದ ಉತ್ತರಕನ್ನಡ ಜಿಲ್ಲೆಯಲ್ಲಿ ನೂರಾರು ಜಲಪಾತಗಳಿವೆ. ಹಲವು ಪ್ರಸಿದ್ಧಿಗೆ ಬಂದಿದ್ದರೂ ಮತ್ತೆ ಕೆಲವು ನಿಸರ್ಗದ ಮಡಿಲಿನಲ್ಲಿಯೇ ಉಳಿದುಕೊಂಡಿವೆ. ಅಂತವುಗಳ ಸಾಲಿಗೆ ಸೇರುವುದು ಯಲ್ಲಾಪುರ ತಾಲೂಕಿನ ಅಜ್ಜಿಗುಂಡಿ ಜಲಪಾತ.
    ಸುತ್ತಮುತ್ತಲೂ ಬೆಟ್ಟ, ಗುಡ್ಡ, ಕಾಡುಗಳು. ಜೊತೆ ಜೊತೆಗೆ ಹಸಿರು ಮೆರೆಯುವ ತೋಟಗಳು. ಇದರ ನಡುವೆ ಹರಿಯುವ ಬೆಣ್ಣೆ ಜಡ್ಡಿ ಹಳ್ಳ. ಕಾಳಿ ನದಿಯನ್ನು ಓಡೋಡಿ ಮುಟ್ಟುವ ತವಕದಲ್ಲಿ ಗುಡ್ಡಬೆಟ್ಟಗಳಿಂದ ಕೆಳಗೆ ಧುಮುಕುತ್ತಾಳೆ ಆಕೆ. ಇಂತಹ ಸಂದರ್ಭದಲ್ಲಿಯೇ ಜಲಪಾತವೂ ಸೃಷ್ಟಿಯಾಗಿದೆ.
    ಈ ಜಲಪಾತ ಅಷ್ಟೇನೂ ದೊಡ್ಡದಲ್ಲ. 40-50 ಅಡಿ ಎತ್ತರದಿಂದ ಜಲಲ ಜಲಲ ಜಲಧಾರೆಯಾಗಿ ಕುಣಿಯುತ್ತ ಇಳಿಯುತ್ತಾಳೆ. ಜಲಪಾತದಕ್ಕೆ ಎರಡು ಹಂತಗಳಿವೆ. ಮೆಲಿನ ಹಂತ ಆರು ಅಡಿ ಎತ್ತರದ್ದಾಗಿದ್ದರೆ ಕೆಳಗಿನದ್ದು ದೊಡ್ಡದು. ಆರು ಅಡಿ ಎತ್ತರದಿಂದ ಧುಮುಕುವ ಮೊದಲನೇ ಹಂತದ ಬುಡಕ್ಕೆ ಹೋಗಿ ಬೀಳುವ ನೀರಿಗೆ ತಲೆಕೊಟ್ಟು ಕುಳಿತರೆ ಜಲಪಾತಕ್ಕೆ ಬಂದಿದ್ದೂ ಸಾರ್ಥಕ ಎನ್ನಿಸುತ್ತದೆ. ಗುಡ್ಡಗಳನ್ನು ಇಳಿದು ಶ್ರಮಪಟ್ಟು ಬರುವ ಸುಸ್ತೆಲ್ಲ ಒಂದೇಟಿಗೆ ಮಾಯವಾಗುತ್ತದೆ.
    ಕೆಳಗಿನ ದೊಡ್ಡ ಹಂತ ಹಸಿರು ಹಾವಸೆಗಳ ಜೊತೆಗೆ ಕೂಡಿಕೊಂಡಿದ್ದು ನೀರಿರುವ ಸಂದರ್ಭದಲ್ಲಿ ಬಲು ಸುಂದರವಾಗಿ ಕಾಣುತ್ತದೆ. ವರ್ಷದ 365 ದಿನವೂ ಈ ಜಲಪಾತವನ್ನು ನೋಡಲು ಸಾಧ್ಯ. ಜಲಪಾತದ ಬುಡಕ್ಕೆ ಇಳಿಯುವುದೂ ಸುಲಭ. ಬೇಸಿಗೆಯಲ್ಲಿ ನೀರು ಕಡಿಮೆಯಾಗುತ್ತದೆ. ಆದರೆ ಜಲಪಾತದ ಆಕರ್ಷಣೆ ಹೆಚ್ಚುತ್ತದೆ. ತಟ್ಟನೆ ನೋಡಿದರೆ ಕೊಡಗಿನ ಅಬ್ಬಿ ಜಲಪಾತವನ್ನು ನೆನಪಿಸುವ ಅಜ್ಜಿಗುಂಡಿ ಜಲಪಾತದ ಸೌಂದರ್ಯದಲ್ಲಿ ಶೀಖರಪ್ರಾಯ.
    ಯಲ್ಲಾಪುರದಿಂದ 22 ಕಿ.ಮಿ ದೂರದ ಶಾಂತಿವನ ತಾರಗಾರ್ ಎಂಬಲ್ಲಿ ಈ ಜಲಪಾತವಿದೆ. ಯಲ್ಲಾಪುರದಿಂದ ದಿನಕ್ಕೆರಡು ಬಾರಿ ಬೀಗಾರ್ ಎಂಬಲ್ಲಿಗೆ ಬಸ್ ಸೌಕರ್ಯವಿದೆ. ಶಾಂತಿವನ ಕ್ರಾಸ್ನಲ್ಲಿ ಇಳಿದು ಕೂಗಳತೆ ದೂರದಲ್ಲಿರುವ ಜಲಪಾತಕ್ಕೆ ನಡೆದುಕೊಂಡು ಹೋಗಬಹುದು. ಹಸಿರು ಗುಡ್ಡ, ತೋಟ ಪಟ್ಟಿಗಳ ನಡುವೆ ಸರ್ವ ಋತುವಿನಲ್ಲಿಯೂ ಈ ಜಲಪಾತದ ದರ್ಶನ ಸಾಧ್ಯವಿದೆ.
ಜಲಪಾತದ ಮೇಲ್ಭಾಗದಲ್ಲಿ ತಾರಗಾರ್ ಊರಿಗೆ ನೀರಾವರಿ ವ್ಯವಸ್ಥೆಗಾಗಿ ಒಡ್ಡು ನಿಮರ್ಾಣ ಮಾಡಲಾಗಿದೆ. ಆದ್ದರಿಂದ ಪ್ರವಾಸಿಗರು ಆಗಮಿಸಿದ ಸಂದರ್ಭದಲ್ಲಿ ಜಲಪಾತಕ್ಕಾಗಿ ನೀರನ್ನು ಬಿಡಲಾಗುತ್ತದೆ. ಮಳೆಗಾಲದಲ್ಲಿ ದುದ್ರರಮಣೀಯವಾಗಿ ಕಾಣುವ ಈ ಅಜ್ಜಿಗುಂಡಿ ಜಲಪಾತ ಚಳಿಗಾಲ ಹಾಗೂ ಬೇಸಿಗೆಯಲ್ಲಿ ಕಿಲ ಕಿಲ ಕಲರವವನ್ನು ಮಾಡುತ್ತದೆ. ವಾರಾಂತ್ಯದಲ್ಲಿ ಆಗಮಿಸಿ ದಿನವಹಿ ಉಳಿದು ಸವಿಯನ್ನು ಸವಿಯಲು ಇದೊಂದು ಉತ್ತಮ ಪಿಕ್ನಿಕ್ ತಾಣ.
    ಜಲಪಾತದ ತಲೆಯ ಭಾಗದಲ್ಲಿಯೇ ಮನೆಯೊಂದಿದ್ದು ಜಲಪಾತದ ಸೌಂದರ್ಯಕ್ಕೆ ಕೀರೀಟದಂತೆ ಕಾಣಿಸುತ್ತದೆ. ಪ್ಲಾಸ್ಟಿಕ್ ಮುಂತಾದ ತ್ಯಾಜ್ಯಗಳನ್ನು ಈ ಪ್ರದೇಶದಲ್ಲಿ ಎಸೆಯುವುದು ನಿಷೇಧ. ಪ್ಲಾಸ್ಟಿಕ್ ಎಸೆದಿದ್ದು ಕಣ್ಣಿಗೆ ಬಿದ್ದರೆ ಸ್ಥಳೀಯರು ದಂಡವನ್ನು ಹಾಕುತ್ತಾರೆ. ತಾರಗಾರ್ನಲ್ಲಿ ಉಳಿದುಕೊಳ್ಳಲು ಸೌಕರ್ಯವಿದೆ. ಈ ಜಲಪಾತಕ್ಕಾಗಿ ಆಗಮಿಸಿದವರು ಸುತ್ತಮುತ್ತಲ ಸೌಂದರ್ಯವನ್ನು ಆಸ್ವಾದಿಸಬಹುದು. ಜೊತೆಗೆ ಸನೀಹದಲ್ಲೇ ಇರುವ ಬಾವಲಿಗುಹೆ, ಸಾತೊಡ್ಡಿ ಜಲಪಾತ ಸೇರಿದಂತೆ ಅನೇಕ ಪ್ರವಾಸಿ ತಾಣಗಳನ್ನು ನೋಡಬಹುದಾಗಿದೆ.
ಹೀಗೆ ಬನ್ನಿ
    ಈ ಜಲಪಾತಕ್ಕೆ ಆಗಮಿಸುವವರು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರಕ್ಕೆ ಆಗಮಿಸಿ, ಅಲ್ಲಿಂದ 22 ಕಿ.ಮಿ ದೂರದ ವಜ್ರಳ್ಳಿ ಬಳಿ ಬಂದು ಭಾಗಿನಕಟ್ಟಾ-ಬೀಗಾರ್ ಮಾರ್ಗದಲ್ಲಿ 5-6 ಕಿ.ಮಿ ಸಾಗಿದರೆ ತಾರಗಾರ್ ಊರು ಸಿಗುತ್ತದೆ. ಇಲ್ಲೇ ಈ ಜಲಪಾತವಿದೆ. ಇಲ್ಲಿಗೆ ಬರುವವರು ಗಣೇಶ ಹೆಗಡೆ ತಾರಗಾರ 8762951448 ಅಥವಾ ಗಣೇಶ ಕಿರಿಗಾರಿ 08419-238070, 944112440 ಈ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿದರೆ ಅಗತ್ಯ ಮಾರ್ಗದರ್ಶನ ನೀಡುತ್ತಾರಲ್ಲದೇ ಊಟ, ವಸತಿ ವ್ಯವಸ್ಥೆಯನ್ನೂ ಕಲ್ಪಿಸಿಕೊಡುತ್ತಾರೆ.
(ಕನ್ನಡಪ್ರಭದ ಬೈ2ಕಾಫಿಯಲ್ಲಿ ಪ್ರಕಟಗೊಂಡಿದೆ)

1 comment: