Monday, September 1, 2014

ಚಕ್ಕುಲಿ ಡಾಕ್ಟರ್

ಗಣೇಶ ಚತುರ್ಥಿಯ ವಿಶೇಷವಾಗಿ ಎಲ್ಲರ ಮನೆಗಳಲ್ಲಿ ಚಕ್ಕುಲಿ ಮಾಡುವುದು ಸಾಮಾನ್ಯ. ಚಕ್ಕುಲಿ ಮಾಡುವ ಸಲುವಾಗಿಯೇ ಯಂತ್ರಗಳೂ ಬಂದಿವೆ. ಯಂತ್ರದ ಸಹಾಯದಿಂದ ಸರಸರನೆ ಚಕ್ಕುಲಿ ಮಾಡಲಾಗುತ್ತದೆ. ಇಂತಹ ಬದಲಾವಣೆಯ ನಡುವೆಯೇ ಕೈಯಲ್ಲಿ ಚಕ್ಕುಲಿ ಸುತ್ತುವವರು ಅಲ್ಲೊಮ್ಮೆ ಇಲ್ಲೊಮ್ಮೆ ಸಿಗುತ್ತಾರೆ. ಕೈಚಕ್ಕುಲಿಯನ್ನು ಮಾಡುವವರಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ವಾಸವಾಗಿರುವ ಕೆಶಿನ್ಮನೆಯ ಡಾ|| ಶೇಷಗಿರಿ ಹೆಗಡೆ ಮತ್ತು ಚೈತ್ರಿಕಾ ದಂಪತಿಗಳೂ ಒಬ್ಬರು.
ಮಲೆನಾಡಿನಲ್ಲಿ ಗಣೇಶ ಚತುರ್ಥಿಗೆ ಚಕ್ಕುಲಿ ಕಡ್ಡಾಯ. ಬಾಯಲ್ಲಿಟ್ಟರೆ ಕರಕನೆ ಸದ್ದು ಮಾಡುತ್ತ, ರುಚಿಯನ್ನೂ ಮೂಡಿಸುತ್ತ ಆಹಾ ಎನ್ನಿಸುವ ಚಕ್ಕುಲಿಯನ್ನು ಪ್ರತಿಯೊಬ್ಬರ ಮನೆಯಲ್ಲಿಯೂ ತಯಾರಿಸಲೇ ಬೇಕು. ಮೂರ್ನಾಲ್ಕು ದಶಕಗಳ ಹಿಂದೆ ಮನೆ ಮನೆಗಳಲ್ಲಿ ಕೈಯ ಮೂಲಕವೇ ಚಕ್ಕುಲಿಗಳನ್ನು ಮಾಡಲಾಗುತ್ತಿತ್ತು. ಈಗ ಚಕ್ಕುಲಿ ತಯಾರಿಸಲು ಎಲ್ಲೆಡೆ ಯಂತ್ರಗಳನ್ನು ಕಾಣಬಹುದು. ಈ ಯಂತ್ರಗಳಿಗೆ ಚಕ್ಕುಲಿ ಮಟ್ಟು ಎಂದು ಕರೆಯಲಾಗುತ್ತದೆ. ಚಕ್ಕುಲಿ ಮಟ್ಟಿನ ಸಹಾಯದಿಂದ ಒಂದು ತಾಸಿಗೆ ನೂರಾರು ಚಕ್ಕುಲಿಗಳನ್ನು ಮಾಡಲಾಗುತ್ತದೆ. ಚಕ್ಕುಲಿ ಮಾಡುವುದನ್ನು ಚಕ್ಕುಲಿ ಕಂಬಳ ಎಂದೇ ಕರೆಯಲಾಗುತ್ತದೆ. ಆಧುನಿಕ ಕಾಲದಲ್ಲಿ ಚಕ್ಕುಲಿ ಮಾಡುವ ಶೈಲಿ ಬದಲಾಗಿರುವ ಸಂದರ್ಭದಲ್ಲಿಯೇ ಅಲ್ಲೊಬ್ಬರು ಇಲ್ಲೊಬ್ಬರು ಹಳೆ ಸಂಪ್ರದಾಯವನ್ನು ಮರೆಯದೇ ಅದೇ ವಿಧಾನದಿಂದ ಚಕ್ಕುಲಿ ಮಾಡುತ್ತಿದ್ದಾರೆ.
ಕೈಚಕ್ಕುಲಿ ಬಹಳ ರುಚಿಕಟ್ಟಾದುದು ಎಂದು ಹೇಳುತ್ತಾರೆ. ಈಗೀಗ ಮನೆಗಳಲ್ಲಿ ತಯಾರು ಮಾಡಲಾಗುವ ಚಕ್ಕುಲಿಗಿಂತ ಭಿನ್ನವಾಗಿರುವ ಈ ಕೈಚಕ್ಕುಲಿ ಸವಿದವರಿಗಷ್ಟೇ ಅದರ ವಿಶೇಷತೆ ತಿಳಿಯಬಲ್ಲದು. ಕೆಶಿನ್ಮನೆಯ ಡಾ|| ಶೇಷಗಿರಿ ಹೆಗಡೆ ಮತ್ತು ಚೈತ್ರಿಕಾ ದಂಪತಿಗಳು ಕೈಚಕ್ಕುಲಿ ತಯಾರು ಮಾಡುವ ಮೂಲಕ ಹಳೆಯ ಸಂಪ್ರದಾಯವನ್ನು ಇಂದಿಗೂ ಮುಂದುವರಿಸಿಕೊಂಡು ಬಂದಿದ್ದಾರೆ. ಅಷ್ಟೇ ಅಲ್ಲದೇ ಇತರರಿಗೂ ಕೈಚಕ್ಕುಲಿ ತಯಾರು ಮಾಡುವುದನ್ನು ಹೇಳಿಕೊಡುತ್ತಾರೆ. ಮನೆಯಲ್ಲಿಯೇ ಚಕ್ಕುಲಿ ಕಂಬಳವನ್ನು ಮಾಡುವ ಮೂಲಕ ನೆರೆ-ಹೊರೆಯವರಿಗೆಲ್ಲ ಕೈಚಕ್ಕುಲಿಯ ಸವಿಯನ್ನು ಉಣ್ಣಿಸುವ ಕಾರ್ಯ ಮಾಡುತ್ತಿದ್ದಾರೆ.
ಕೆಶಿನ್ಮನೆಯ ಡಾ. ಶೇಷಗಿರಿ ಹೆಗಡೆ ವೃತ್ತಿಯಿಂದ ವೈದ್ಯರು. ಆಸ್ಪತ್ರೆಯ ಕೆಲಸದ ಜಂಜಾಟದಿಂದ ಕೆಲಕಾಲ ಮುಕ್ತನಾಗಿ, ತನಗೆ ಖುಷಿ ಕೊಟ್ಟ ಕೆಲಸವನ್ನು ಮಾಡಬೇಕೆನ್ನುವುದು ಅವರ ಅಭಿಲಾಷೆ. ಆದರೆ ವೃತ್ತಿಯ ನಡುವೆ ಬಿಡುವೆನ್ನುವುದು ಅಸಾಧ್ಯವಾಗುತ್ತಿತ್ತು. ಕೊನೆಗೂ ಕೈಚಕ್ಕುಲಿ ತಯಾರಿಸುವ ನೆಪದಲ್ಲಿ ಆಸ್ಪತ್ರೆಯಿಂದ ದೂರ ಉಳಿಯುವ ನಿರ್ಧಾರ ಕೈಗೊಂಡರು ಡಾಕ್ಟರು. ಮನೆಯಲ್ಲಿ ಕೈಚಕ್ಕುಲಿ ತಯಾರಿಸುತ್ತ ತೀರಾ ಪರಿಚಿತರ ಕಾಯಿಲೆಗೆ ಔಷಧಿ ಹೇಳುತ್ತ ಅವಶ್ಯ ಬಿದ್ದರೆ ಅವರನ್ನು ಮನೆಗೇ ಕರೆಸಿಕೊಂಡು ನೋಡಿ ಪರಿಹಾರ ನೀಡುತ್ತ ಮಡದಿ ಚೈತ್ರಿಕಾ ಹದಮಾಡಿಕೊಡುವ ಹಿಟ್ಟನ್ನು ಕೈಯ್ಯಲ್ಲಿ ಮುದ್ದೆಮಾಡಿ ಚಕ್ಕುಲಿ ಎಳೆ ತೆಗೆದು ಮಣೆಯ ಮೇಲೆ ಸುರಳಿ ಸುತ್ತುವುದಕ್ಕೆ ಆರಂಭಿಸಿದರೆ ಅದನ್ನು ನೋಡುವುದೇ ಆನಂದ.
ಕಳೆದ 35 ವರ್ಷಗಳಿಂದ ಕೈಚಕ್ಕುಲಿ ಮಾಡುತ್ತ ಬಂದಿರುವ ಡಾ. ಶೇಷಗಿರಿ ಹೆಗಡೆ ತಮ್ಮ ಅಜ್ಜಿ ಈ ಕಲೆಯನ್ನು ಕಲಿತುಕೊಳ್ಳಲು ಹೇಳಿದ್ದನ್ನೇ ಪ್ರೇರಣೆಯನ್ನಾಗಿ ತೆಗೆದುಕೊಂಡು ಕಲಿತಿದ್ದಾಗಿ ಅವರು ಹೇಳುತ್ತಾರೆ. ಡಾಕ್ಟರ್ನ್ನು ಮದುವೆಯಾಗಿ ಬಂದ ಮೇಲೆ ತಾನೂ ಕೈಯ್ಯಲ್ಲಿ ಚಕ್ಕುಲಿ ಸುತ್ತುವುದನ್ನು ಕಲಿತಿದ್ದೇನೆ ಎನ್ನುವ ಚೈತ್ರಿಕಾ, ಹಿಟ್ಟು ಹದಮಾಡಿ ಕೊಟ್ಟು ತಾನೂ ಚಕ್ಕುಲಿ ಸುತ್ತಿ ಸಂಬ್ರಮಿಸುತ್ತಾರೆ.
ಕೈಯ್ಯಲ್ಲಿ ಸುತ್ತುವ ಚಕ್ಕುಲಿ ಹಿಟ್ಟನ್ನು ಹದಮಾಡಿ ಬಹಳ ಹೊತ್ತು ಇಡುವಂತಿಲ್ಲ. ಸಿದ್ಧವಾದದ್ದನ್ನು ಚಕ್ಕುಲಿ ಮಾಡಿಕೊಂಡು ಮತ್ತೆ ಹಿಟ್ಟು ಹದಗೊಳಿಸಿಕೊಳ್ಳಬೇಕು. ತಾವು ಸಣ್ಣವರಿದ್ದಾಗ ಹಿಟ್ಟು ಹದಮಾಡುವ ಕೆಲಸ ಮಾಡುತ್ತಿದ್ದೆವು. ಆಗ ಊರಿನ ಅನೇಕರು ಈ ಕಲೆಯಲ್ಲಿ ಪಳಗಿದವರು ಇರುತ್ತಿದ್ದುದರಿಂದ ತಮ್ಮಂಥ ಹುಡುಗರಿಗೆ ಹಿಟ್ಟು ನಾದುವ ಕೆಲಸವಿರುತ್ತಿತ್ತು.
ಹಿಂದೆ ಹಿಟ್ಟಿಗೆ ನೀರು ಬಳಸುತ್ತಿರಲಿಲ್ಲ. ಯಾಕೆಂದರೆ ನೀರು ಬಳಸಿದರೆ ಮೈಲಿಗೆ ಎಂಬ ಭಾವನೆಯಿತ್ತು. ಅದಕ್ಕಾಗಿ ಅತ್ತಿ ಮರದಿಂದ ತೆಗೆದ ರಸ ಬಳಸಲಾಗುತ್ತಿತ್ತು. ಒಮ್ಮೆ ಅತ್ತಿರಸ ಸಿಗಲಿಲ್ಲ, ಮನೆಯಲ್ಲಿ ಸಮೃದ್ಧ ಹಾಲು ಕೊಡುವ ಜಸರ್ಿ ಆಕಳಿನ ಹಾಲನ್ನೇ ಬಳಸಿ ಕೈಚಕ್ಕುಲಿ ಮಾಡಿದ್ದೇವೆಂಬ ನೆನಪು ಡಾ|| ಹೆಗಡೆಯವರದ್ದು. ಈಗಲೂ ಚೌತಿ ಸಂದರ್ಭದಲ್ಲಿ ಮುಂಜಾನೆಯಿಂದ ಸಂಜೆಯ ವರೆಗೂ ಚಕ್ಕುಲಿ ತಯಾರಿಸಿ ಕಂಬಳವನ್ನು ಕೈಗೊಳ್ಳುತ್ತಾರೆ. ಅಕ್ಕಪಕ್ಕದವರನ್ನೂ ಕರೆದು, ಕೈಚಕ್ಕುಲಿಯನ್ನು ನೀಡಿ ಹರ್ಷಿಸುತ್ತಾರೆ. ಇವರ ಕೈಯಲ್ಲಿ ತಯಾರಾಗುವ ಚಕ್ಕಲಿಯ ಸವಿಯೇ ಬೇರೆ. ಕೈಚಕ್ಕುಲಿ ತಯಾರಿಸುವ ಮೂಲಕ ಅಪರೂಪದ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರುತ್ತಿರುವ ಈ ವೈದ್ಯರು ಅಚ್ಚರಿಯನ್ನು ಹುಟ್ಟುಹಾಕುತ್ತಾರೆ.


***
(ಈ ಲೇಖನವು ಸೆ.1, 2014ರ ಕನ್ನಡಪ್ರಭದ ಬೈ2ಕಾಫಿಯಲ್ಲಿ ಪ್ರಕಟಗೊಂಡಿದೆ)

No comments:

Post a Comment