Friday, January 18, 2019

ಕರ್ನಾಟಕಕ್ಕೆ ಬೇಕು ಇನ್ನೊಂದು ರಣಜಿ ತಂಡ

ಪ್ರಸ್ತುತ ಕ್ರಿಕೆಟ್‌ನಲ್ಲಿ ರಾಜ್ಯದಲ್ಲಿ ಹೇರಳ ಪ್ರತಿಭೆಗಳು ಬೆಳಕಿಗೆ ಬರುತ್ತಿವೆ. ಇದರಿಂದಾಗಿ ಹಲವು ಕ್ರಿಕೆಟ್ ಆಟಗಾರರು ರಾಜ್ಯದ ತಂಡದಲ್ಲಿ ಅವಕಾಶ ಸಿಗದೇ ಬೇರೆ ರಾಜ್ಯಗಳ ಕಡೆಗೆ ಮುಖ ಮಾಡಿದ ನಿದರ್ಶನಗಳೂ ಇದೆ. ಹೀಗಿದ್ದಾಗಲೇ ರಾಜ್ಯಕ್ಕೆ ಇನ್ನೊಂದು ರಣಜಿ ತಂಡಕ್ಕೆ ಅವಕಾಶ ಸಿಗಲಿ ಎನ್ನುವ ಅಭಿಪ್ರಾಯ ವ್ಯಾಪಕವಾಗಿದೆ.
ಪ್ರಸ್ತುತ ರಣಜಿ ಪಂದ್ಯಾವಳಿಯಲ್ಲಿ  ಗುಜರಾತ್ ರಾಜ್ಯದಿಂದ ಗುಜರಾತ್, ಬರೋಡಾ ಹಾಗೂ ಸೌರಾಷ್ಟ್ರ ತಂಡಗಳು ಆಡುತ್ತಿವೆ. ಮಹಾರಾಷ್ಟ್ರ ರಾಜ್ಯದಿಂದ ಮುಂಬೈ, ಮಹಾರಾಷ್ಟ್ರ ಹಾಗೂ ವಿದರ್ಭ ತಂಡಗಳು ಆಡುತ್ತಿವೆ. ತೆಲಂಗಾಣ ರಾಜ್ಯ ವಿಭಜನೆಯಾಗುವ ಮೊದಲು ಆಂಧ್ರದಲ್ಲಿ ಹೈದರಾಬಾದ್ ಹಾಗೂ ತೆಲಂಗಾಣ ತಂಡಗಳಿದ್ದವು. ಇದೀಗ ತೆಲಂಗಾಣ ಹಾಗೂ ಹೈದರಾಬಾದ್ ತಂಡಗಳಿವೆ. ರಣಜಿ ಟ್ರೋಫಿ ಆರಂಭದ ದಿನಗಳಿಂದಲೂ ಈ ತಂಡಗಳು ಅಸ್ತಿತ್ವದಲ್ಲಿದೆ. ಭಾಷಾವಾರು ಪ್ರಾಂತ್ಯ  ರಚನೆಗೂ ಮೊದಲು ಇದ್ದ ಪ್ರದೇಶಗಳನ್ನು ಪ್ರತಿನಿಧಿಸಿ ಈ ತಂಡಗಳು ಆಡುತ್ತಿವೆ. ಅದೇ ಮಾನದಂಡದಲ್ಲಿ ಕರ್ನಾಟಕಕ್ಕೆ ಇನ್ನೊಂದು ತಂಡ ರಚನೆಗೆ ಅವಕಾಶ ನೀಡಲಿ ಎನ್ನುವ ಅಭಿಪ್ರಾಯಗಳು ವ್ಯಾಪಕವಾಗಿದೆ.
ಕರ್ನಾಟಕದಲ್ಲಿ ಕ್ರಿಕೆಟ್ ಪ್ರತಿಭೆಗಳು ಸಾಕಷ್ಟಿವೆ. ಕನಿಷ್ಟ 3 ತಂಡಗಳನ್ನು ರಚನೆ ಮಾಡುವಷ್ಟು ಗುಣಮಟ್ಟದ ಕ್ರಿಕೆಟ್ ಆಟಗಾರರು ರಾಜ್ಯದಲ್ಲಿದ್ದಾರೆ. ಆದರೆ ರಣಜಿ ಸೇರಿದಂತೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ರಾಜ್ಯದಿಂದ ಒಂದೇ ತಂಡ ಆಡಬೇಕು. ಇದರಿಂದ ಹಲವು ಆಟಗಾರರು ಅವಕಾಶ ವಂಚಿತರಾಗುತ್ತಿದ್ದಾರೆ. ಈ ಕಾರಣದಿಂದ ಹುಬ್ಬಳ್ಳಿ, ಬೆಳಗಾವಿ ಅಥವಾ ಉತ್ತರ ಕರ್ನಾಟಕದ ಯಾವುದೇ ಪ್ರಮುಖ ಸ್ಥಳವನ್ನು ಕೇಂದ್ರವಾಗಿರಿಸಿಕೊಂಡು ಇನ್ನೊಂದು ತಂಡವನ್ನು ರಣಜಿಯಂತಹ ಪ್ರಮುಖ ಟೂರ್ನಿಗಳಿಗೆ ಕಳಿಸಬೇಕು ಎನ್ನುವ ಆಗ್ರಹ ಹೆಚ್ಚಿದೆ.
ಹುಬ್ಬಳ್ಳಿ, ಶಿವಮೊಗ್ಗಗಳಂತಹ ನಗರಗಳಲ್ಲಿ ಉತ್ತಮ ಕ್ರಿಕೆಟ್ ಮೈದಾನಗಳಿವೆ. ಉತ್ತರ ಕರ್ನಾಟಕದಲ್ಲಿ  ಗ್ರಾಮೀಣ ಭಾಗಗಳಲ್ಲಿ ಗುಣಮಟ್ಟದ ಕ್ರಿಕೆಟ್ ಕಲಿಗಳಿದ್ದಾರೆ. ಕರ್ನಾಟಕದಿಂದ ಇನ್ನೊಂದು ತಂಡವನ್ನು ಕಳಿಸಿದರೆ ಹಲವು ಗ್ರಾಮೀಣ ಪ್ರತಿಭೆಗಳನ್ನು ಪೋಷಿಸಿದಂತಾಗುತ್ತದೆ. ಅಲ್ಲದೇ ಇತರ ಭಾಗಗಳಿಗೂ ಹೆಚ್ಚಿನ ಪ್ರಾಾಮುಖ್ಯತೆ ನೀಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ ಗಮನ ಹರಿಸಲಿ ಎನ್ನುವುದು ಅಭಿಮಾನಿಗಳ ಆಶಯ.

ಪ್ರತಿಭೆಗಳ ವಲಸೆ
ಕರ್ನಾಟಕ ತಂಡದಲ್ಲಿ ಅವಕಾಶ ಸಿಗದೇ ಹಲವು ಆಟಗಾರರು ಬೇರೆ ಬೇರೆ ರಾಜ್ಯಗಳ ಕಡೆಗೆ ಮುಖ ಮಾಡಿದ್ದಾರೆ. ಕರ್ನಾಟಕ ತಂಡದ ಆರಂಬಿಕ ಆಟಗಾರನಾಗಿದ್ದ ಕೆ. ಬಿ. ಪವನ್ ಹಾಗೂ ಬೌಲರ್ ಅಬ್ರಾರ್ ಖಾಜಿ ಪ್ರಸ್ತುತ ರಣಜಿ ಪಂದ್ಯಾವಳಿಯಲ್ಲಿ ನಾಗಾಲ್ಯಾಂಡ್ ಪರ  ಆಡುತ್ತಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ರಾಬಿನ್ ಉತ್ತಪ್ಪ ಪ್ರಸ್ತುತ ಸೌರಾಷ್ಟ್ರ ತಂಡದ ಪರ ಆಡುತ್ತಿದ್ದಾರೆ. ಇವರಷ್ಟೇ ಅಲ್ಲದೇ ಇನ್ನೂ ಹಲವು ಕ್ರಿಕೆಟ್ ಆಟಗಾರರು ಬೇರೆ ಬೇರೆ ರಾಜ್ಯಗಳ ಕಡೆಗೆ ಮುಖ ಮಾಡಿದ್ದಾರೆ. ಆ ರಾಜ್ಯಗಳ ಪರ ಉತ್ತಮವಾಗಿ ಆಟವನ್ನಾಡುತ್ತಿದ್ದಾರೆ. ಹೀಗಿದ್ದಾಗ ಕರ್ನಾಟಕ ರಣಜಿಯಂತಹ ದೇಸೀಯ ಟೂರ್ನಿಗಳಲ್ಲಿ ಇನ್ನೊಂದು ತಂಡವನ್ನು ಕಳಿಸುವುದು ಉತ್ತಮ ಎನ್ನುವ ಅಭಿಮತ ಕ್ರಿಕೆಟ್ ಅಭಿಮಾನಿಗಳು ಹಾಗೂ ಪಂಡಿತರದ್ದಾಗಿದೆ.

Friday, January 11, 2019

ಮತ್ತೆ ಮತ್ತೆ ಅವಕಾಶ ಸಿಕ್ಕರೂ ಎಡವುತ್ತಿರುವ ರಾಹುಲ್

ಕ್ರಿಕೆಟ್‌ನಲ್ಲಿ ಕೆಲವು ಆಟಗಾರರಿದ್ದಾರೆ. ಹೇರಳ ಪ್ರತಿಭೆಯನ್ನು ಹೊಂದಿದ್ದರೂ, ಪದೇ ಪದೆ ಅವಕಾಶಗಳನ್ನು ಪಡೆಯುತ್ತಿದ್ದರೂ ಉತ್ತಮ ಪ್ರದರ್ಶನ ನೀಡಲು ವಿಫಲರಾಗುತ್ತಿದ್ದಾರೆ. ಟೀಕಾಕಾರರ ಬಾಯಿಗೆ ಆಹಾರವಾಗುತ್ತಿದ್ದಾರೆ. ಉತ್ತಮ ಆಟ ಆಡುವ ಸಾಮರ್ಥ್ಯ ಇದ್ದರೂ ಕಳಪೆ ಆಟದ ಮೂಲಕ ತಂಡದಿಂದ ಹೊರಹಾಕಲ್ಪಡುತ್ತಿದ್ದಾರೆ. ಅಂತವರಲ್ಲಿ ಒಬ್ಬ ಕೆ. ಎಲ್. ರಾಹುಲ್.
ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಬೇಕು ಎಂದು ಹಲವಾರು ವರ್ಷಗಳ ಕಾಲ ಕನಸು ಕಂಡು, ಶ್ರಮ ಪಟ್ಟವರು ಅನೇಕರು. ಇನ್ನೂ ಕೆಲವರು ಕೆಲವೇ ದಿನಗಳ ಕಾಲ ಶ್ರಮ ಪಟ್ಟು ತಂಡದಲ್ಲಿ ತಂಡಕ್ಕೆ ಆಯ್ಕೆಯಾಗುತ್ತಾರೆ. ಅವಕಾಶ ಸಿಕ್ಕ ತಕ್ಷಣ ಪ್ರಾರಂಭದಲ್ಲಿ ಮೂರ್ನಾಲ್ಕು ಪಂದ್ಯಗಳನ್ನು ಉತ್ತಮವಾಗಿ ಆಡುವ ಮೂಲಕ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಮುಂದಾಗುತ್ತಾರೆ. ತದನಂತರದಲ್ಲಿ ಅವರುಗಳಿಗೆ ಅಭಿಮಾನಿ ಬಳಗವೂ ಹುಟ್ಟಿಕೊಳ್ಳುತ್ತದೆ. ಜಾಹಿರಾತುದಾರರು ಬೆನ್ನು ಬೀಳುತ್ತಾರೆ. ಆದರೆ ನಂತರದ ದಿನಗಳಲ್ಲಿ ಮಾತ್ರ ಅವರು ತಮ್ಮ ಜವಾಬ್ದಾರಿಯನ್ನೇ ಮರೆತರೋ ಎಂಬಂತಾಗುತ್ತಾರೆ.
ಅಗಾಧ ಪ್ರತಿಭೆಯನ್ನು ಹೊಂದಿದ ಅದೆಷ್ಟೋ ಆಟಗಾರರು ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆದರೆ ಬೇಜವಾಬ್ದಾರಿಯುತ ಆಟದಿಂದಾಗಿ ಅಂತವರು ಸ್ಥಾನ ಕಳೆದುಕೊಂಡ ನಿದರ್ಶನಗಳು ಸಾಕಷ್ಟಿದೆ. ಪ್ರತಿಭೆಯಿದ್ದರೂ, ಕಳಪೆ ಆಟ ಪ್ರದರ್ಶಿಸಿ ತಂಡದಿಂದ ಹೊರ ನಡೆದ ನಿದರ್ಶನಗಳು ಸಾಕಷ್ಟಿದೆ. ಅಂತಹ ಸಾಲಿಗೆ ಹೊಸದಾಗಿ ಸೇರ್ಪಡೆಯಾಗುತ್ತಿರುವ ಆಟಗಾರ ಕನ್ನಡಿಗ ಕೆ. ಎಲ್. ರಾಹುಲ್.
ರಾಹುಲ್ ತಂಡಕ್ಕೆ ಸೇರಿದ ಮೊದಲ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್‌ಟ್‌‌ನಲ್ಲಿ ಆಕರ್ಷಕ ಶತಕ ಭಾರಿಸಿದಾಗ ಈತನ ಬಗ್ಗೆ ಹೊಗಳಿದವರು ಅನೇಕ ಜನ. ರಾಹುಲ್ ದ್ರಾವಿಡ್‌ರ ನಂತರ ಭಾರತ ತಂಡಕ್ಕೆ ಆಸ್ತಿಯಾಗಬಲ್ಲ ಆಟಗಾರ ಎಂದು ವಿಶ್ಲೇಷಿಸಿದವರೂ ಅನೇಕ ಜನ. ಅದಕ್ಕೆ ತಕ್ಕಂತೆ ಒಂದಷ್ಟು ಸರಣಿಗಳಲ್ಲಿ ಸತತ ಶತಕಗಳನ್ನು ಭಾರಿಸಿ ಭೇಷ್ ಎನ್ನಿಸಿಕೊಂಡ ಕೆ. ಎಲ್. ರಾಹುಲ್ ನಂತರದಲ್ಲಿ ಮಾತ್ರ ಕಳಪೆ ಆಟದಿಂದ ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ತಂಡದಲ್ಲಿ ಸತತ ಅವಕಾಶ ಪಡೆದರೂ ಕೂಡ ಅದರ ಲಾಭ ಪಡೆಯಲು ರಾಹುಲ್ ವಿಫಲರಾಗುತ್ತಿದ್ದಾರೆ. ಎರಡಂಕಿ ಮೊತ್ತವನ್ನು ತಲುಪಲೂ ಕೂಡ ಒದ್ದಾಡುತ್ತಿದ್ದಾರೆ. ಸಾಲು ಸಾಲು ವೈಲ್ಯ ಇದೀಗ ರಾಹುಲ್ ಸ್ಥಾನಕ್ಕೆ ಕುತ್ತನ್ನು ತರುತ್ತಿದೆ. ತಾವೇ ಮಾಡಿಕೊಳ್ಳುತ್ತಿರುವ ಯಡವಟ್ಟುಗಳು ರಾಹುಲ್‌ರ ಕ್ರೀಡಾಬದುಕಿಗೆ ಕರಿನೆರಳಾಗಿ ಪರಿಣಮಿಸುತ್ತಿದೆ.
ಕೆ. ಎಲ್. ರಾಹುಲ್‌ರ ಕೆಲವು ಇನ್ನಿಂಗ್ಸ್ ಗಳನ್ನು 8 ಗಮನಿಸಿದರೆ ಅವರ ಬ್ಯಾಟಿನಿಂದ ಅರ್ಧಶತಕ ದಾಖಲಾಗಿ ಹಲವು ಕಾಲಗಳೇ ಆಗಿದೆ. 9, 2, 0, 2, 44, 14, 13, 17, 26, 16 ಇವು ರಾಹುಲ್‌ರ ಕಳೆದ 10 ಇನ್ನಿಂಗ್ಸ್ ಗಳ ಸ್ಕೋರ್. ಇದರಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರಿಸಿದ 44 ರನ್ ಗರಿಷ್ಠ ಸ್ಕೋರ್. ಈ ಎಲ್ಲ 10 ಇನ್ನಿಂಗ್ಸ್ ಗಳಿಂದ  ರಾಹುಲ್ ರನ್ ಗಳಿಕೆ 143.
ಇತ್ತೀಚಿನ ದಿನಗಳಲ್ಲಿ ಭಾರತದ ತಂಡದಲ್ಲಿ ಸ್ಥಾನ ಪಡೆಯಲು ತೀವ್ರ ಸ್ಪರ್ಧೆ ನಡೆಯುತ್ತಿದೆ. ಅದರಲ್ಲೂ ಆರಂಭಿಕ ಸ್ಥಾನಕ್ಕಂತೂ ಹೇರಳ ಸ್ಪರ್ಧೆ ನಡೆಯುತ್ತಿದೆ. ರಾಹುಲ್, ಮುರಳಿ ವಿಜಯ್, ಪೃಥ್ವಿ ಶಾ ಹಾಗೂ ಮಾಯಾಂಕ್ ಅಗರ್ವಾಲ್ ಆರಂಭಿಕ ಸ್ಥಾಾನಕ್ಕೆ ಪೈಪೋಟಿ ನಡೆಸುತ್ತಿದ್ದಾರೆ. ರಾಹುಲ್ ಹಾಗೂ ಮುರಳಿ ವಿಜಯ್ ವಿಲವಾಗುತ್ತಿರುವ ಸಂದರ್ಭದಲ್ಲಿ ಪೃಥ್ವಿ ಶಾ ಹಾಗೂ ಮಾಯಾಂಕ್ ಅಗರ್ವಾಲ್ ಉತ್ತಮ ಆಟದ ಮೂಲಕ ತಂಡದಲ್ಲಿ ಖಾಯಂ ಸ್ಥಾಾನ ಪಡೆದುಕೊಳ್ಳಲು ಮುಂದಾಗುತ್ತಿದ್ದಾರೆ. ಹೀಗೆಯೇ ಮುಂದುವರಿದಲ್ಲಿ ರಾಹುಲ್ ತಂಡದಿಂದ ಹೊರಬೀಳುವುದು ಖಚಿತ ಎಂಬಂತಾಗಿದೆ. ಮುಂದಿನ ದಿನಗಳಲ್ಲಿ ರಾಹುಲ್ ಎಚ್ಚೆತ್ತುಕೊಳ್ಳದಿದ್ದಲ್ಲಿ ಅವರ ಸ್ಥಾನ ಇನ್ನೊಬ್ಬರ ಪಾಲಿಗೆ ಮೀಸಲಾಗುವುದು ನಿಶ್ಚಿತ.

------------

ಮುಳುವಾಯಿತೆ ಪ್ರಸಿದ್ಧಿ
ಭಾರತ ಕ್ರಿಕೆಟ್ ತಂಡದ ಮೋಸ್ಟ್ ಪ್ಯಾಷನೇಬಲ್ ಪ್ಲೇಯರ್ ಎನ್ನುವ ಖ್ಯಾತಿ ರಾಹುಲ್ ಪಾಲಿಗಿದೆ. ವಿಶಿಷ್ಟ ಕೇಶ ವಿನ್ಯಾಸ, ಹೊಸ ಬಗೆಯ ಸ್ಟೈಲ್ ಮೂಲಕ ಎಲ್ಲರ ಮನಸ್ಸನ್ನು ಸೆಳೆದಾತ ರಾಹುಲ್. ಸಾಲು ಸಾಲು ಜಾಹೀರಾತುಗಳಲ್ಲಿಯೂ ಮಿಂಚುತ್ತಿರುವ ರಾಹುಲ್ ಪಾಲಿಗೆ ಪ್ರಸಿದ್ಧಿಯೇ ಮುಳುವಾಗುತ್ತಿದೆಯೇ ಎನ್ನುವ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಮೂಡಿದೆ. ಆಟದ ಕಡೆಗೆ ಗಮನ ಕೊಡುವುದಕ್ಕಿಿಂತ ಇತರ ಕಡೆಗೆ ಗಮನ ಕೊಡುವುದು ಜಾಸ್ತಿಯಾಗುತ್ತಿದೆಯೇ? ಟಿವಿ ಶೋಗಳು, ಜಾಹೀರಾತುಗಳು, ಪ್ಯಾಶನ್  ಜಗತ್ತು ರಾಹುಲ್ ಆಟವನ್ನು ಹಾಳು ಮಾಡುತ್ತಿವೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಇವನ್ನು ದೂರವಿಟ್ಟು ಸಂಪೂರ್ಣ ತನ್ನ ಬ್ಯಾಟಿಂಗ್ ಬಗ್ಗೆಯೇ ಆದ್ಯತೆ ನೀಡಿದಾಗ ಮಾತ್ರ ರಾಹುಲ್‌ರಿಂದ ಉತ್ತಮ ಆಟವನ್ನು ನಿರೀಕ್ಷೆ ಮಾಡಲು ಸಾಧ್ಯ.

Sunday, December 2, 2018

ಮಕ್ಕಳೆಂಬ ಆಸ್ತಿ ಜೋಪಾನ ಮಾಡುವುದು ಹೇಗೆ?


ಮಕ್ಕಳು ಮನೆಯ ಆಸ್ತಿ. ದೇಶದ ಸಂಪತ್ತು. ಮಕ್ಕಳಿರಲವ್ವ ಮನೆತುಂಬ ಎಂಬುದು ಹಿರಿಯರ ಆಡುನುಡಿ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬುದು ನಮ್ಮ ನಾಡನ್ನಾಳಿದ ನಾಯಕರುಗಳ ಉದ್ಘೋಷ. ಈಗೀಗ ಮನೆಗಳಲ್ಲಿ ಒಂದೆರಡೇ ಮಕ್ಕಳು. ಮುದ್ದು, ಬೇಕು ಬೇಕೆನ್ನಿಸಿದ್ದನ್ನು ಕೊಡಿಸುವುದು ಸೇರಿದಂತೆ ಹಲವು ಕಾರಣಗಳಿಂದ ಮಕ್ಕಳು ಹಾಳಾಗುತ್ತಿದ್ದಾರೆ.
ಮೊಬೈಲ್ ಮೇನಿಯಾ ಜಗತ್ತು ಮಕ್ಕಳ ಪಾಲಿಗೆ ಮಾರಕವಾಗುತ್ತಿದೆ. ಮಕ್ಕಳ ಕ್ರಿಯಾಶೀಲತೆಯನ್ನು, ಚೈತನ್ಯವನ್ನು ಕೊಂದು ಹಾಕುವ ಕೆಲಸ ಮಾಡುತ್ತಿದೆ. ಮೊಬೈಲ್ ಹಿಡಿದು ಕೂರುತ್ತಿರುವ ಮಕ್ಕಳು ಮನೆಗುಬ್ಬಿಯಾಗುತ್ತಿದ್ದಾರೆ. ಬುದ್ಧಿವಂತರ ವಸ್ತು, ಬುದ್ಧಿವಂತಿಕೆಯ ಸಾಧನವಾದ ಮೊಬೈಲ್ ಮಕ್ಕಳನ್ನು ಬುದ್ದುಗಳನ್ನಾಗಿ ಮಾಡುತ್ತಿದೆ. ಮೊಬೈಲ್ ನಲ್ಲಿಯೇ ಸಿಗುವ ಹಲವಾರು ಆಪ್ ಗಳು, ವೆಬ್ ಸೈಟ್ ಗಳಿಂದಾಗಿ ಮಕ್ಕಳು ಬಹುಬೇಗ ಅಡ್ಡದಾರಿಯನ್ನು ಹಿಡಿಯುತ್ತಿದ್ದಾರೆ. ಬ್ಲೂ ವೇಲ್ ನಂತಹ ಮಾರಕ ಮೊಬೈಲ್ ಗೇಮ್ ಗಳಿಗೆ ಬಲಿಯಾಗಿ ಜೀವ-ಜೀವನ ಎರಡನ್ನೂ ಕಳೆದುಕೊಂಡವರ ನಿದರ್ಶನ ಸಾಕಷ್ಟಿದೆ. ಮೊಬೈಲ್ ಗೇಮ್ ಗಳು ಮಕ್ಕಳ ಬುದ್ಧಿಶಕ್ತಿಯನ್ನು ತಿಂದು ಹಾಕುತ್ತಿದೆ. ಮೊಬೈಲ್ ಇಲ್ಲದೇ ಮಕ್ಕಳ ಜಗತ್ತೇ ಇಲ್ಲ ಎನ್ನುವ ಹಂತ ತಲುಪಿದ್ದೇವೆ. ಹಲವು ತಂದೆ-ತಾಯಿಯರು ಮಕ್ಕಳನ್ನು ಬೆಳೆಸುವಲ್ಲಿ ಎಡವುತ್ತಿದ್ದಾರೆ. ಮಕ್ಕಳ ಕಡೆಗೆ ಗಮನ ಹರಿಸದೇ ಮಕ್ಕಳ ಬದುಕು ಹಾಳಾಗಲು ಕಾರಣರಾಗುತ್ತಿದ್ದಾರೆ. ಮೊಬೈಲ್ ಹೊರತಾದ ಜಗತ್ತು ಇತ್ತು, ಇದೆ ಹಾಗೂ ಮುಂದೆಯೂ ಕೂಡ ಇದ್ದೇ ಇರುತ್ತದೆ ಎನ್ನುವುದನ್ನು ಅರ್ಥ ಮಾಡಿಸುವಲ್ಲಿ ವಿಫಲರಾಗುತ್ತಿದ್ದಾರೆ. ತಂದೆ-ತಾಯಿಗಳೇ ಬದಲಾಗಿ. ಮೊಬೈಲ್ ಬದಿಗಿಟ್ಟು ಮಕ್ಕಳಿಗೆ ಹೊಸ ಲೋಕ ತೋರಿಸಿ.

ಮಕ್ಕಳನ್ನು ಕಾಡು ಸುತ್ತಿಸಿ:
ಕಾಡೆಂಬುದು ಬೆರಗಿನ, ಬೆಡಗಿನ ಲೋಕ. ಕಾಡೆಂಬುದು ಕುತೂಹಲದ ಜಗತ್ತು. ಇಂತಹ ಕಾಡನ್ನು ಸುತ್ತಿಸುವ ಅಗತ್ಯ ತ್ವರಿತವಾಗಿ ಆಗಬೇಕಿದೆ. ಮಕ್ಕಳನ್ನು ಕಾಡಿನಲ್ಲಿ ಸುತ್ತಿಸಿ, ಕಾಡಿನಲ್ಲಿನ ಚಿಕ್ಕ ಕೀಟದಿಂದ ಹಿಡಿದು, ದೊಡ್ಡ ಮರಗಳ ವರೆಗೆ, ಮೃಗ, ಖಗ, ಖೇಚರ ಸಂಪತ್ತನ್ನು ಅನಾವರಣಗೊಳಿಸುವ ಅಗತ್ಯವಿದೆ. ಕಾಡಿನ ಕಡೆಗೆ ಇರುವ ಭಯ ಹೋಗಲಾಡಿಸಿ ಕುತೂಹಲವನ್ನು ಹುಟ್ಟು ಹಾಕುವ ತ್ವರಿತ ಕಾರ್ಯ ಆಗಬೇಕಾಗಿದೆ. ಕಾಡು ರಕ್ಷಿಸುವ ಕುರಿತು ಮಕ್ಕಳಿಗೆ ಪಾಟ ಮಾಡಬೇಕಾಗಿದೆ. ಮಕ್ಕಳನ್ನು ಯಾವುದೋ ಸ್ವಿಮ್ಮಿಂಗ್ ಫೂಲ್ ಗಳಲ್ಲಿ ಈಜಲು ಬಿಡದೇ, ನದಿ, ಹಳ್ಳ, ತೊರೆ, ಕೆರೆಗಳಲ್ಲಿ ಈಜಲು ಬಿಡಬೇಕು. ಸರಿಯಾಗಿ ಈಜು ಕಲಿಯುವ ವರೆಗೂ ಮಾರ್ಗದರ್ಶನ ಮಾಡಬೇಕು. ಯಾವುದೇ ಪ್ರವಾಹಕ್ಕೂ ಹೆದರದೇ ಈಜಿ ದಡ ಸೇರುವ ದೃಢತೆಯನ್ನು ಮಕ್ಕಳ ಮನಸ್ಸಿನಲ್ಲಿ ಹುಟ್ಟು ಹಾಕಬೇಕಿದೆ.
ಯಾವುದೋ ಸುಂದರ ಜಲಪಾತವನ್ನೋ, ಬೆಟ್ಟವನ್ನೋ ಹತ್ತಿಸಿ, ಪ್ರಕೃತಿಯ ಕಡೆಗೆ ಒಲವು ಮೂಡಿಸುವ ಕಾರ್ಯವನ್ನು ತಂದದೆ-ತಾಯಿಗಳಲ್ಲದೇ ಬೇರೆಯವರು ಮಾಡುವುದು ಅಸಾಧ್ಯ. ಯಾವುದೋ ಹಣ್ಣಿನ ಮರವನ್ನು ಹತ್ತಿಸಿ, ಮಕ್ಕಳಿಂದಲೆ ಅದರ ಹಣ್ಣುಗಳನ್ನು ಕೊಯ್ಯಿಸಿದರೆ ಆಗ ಮಕ್ಕಳಿಗೆ ಸಿಗುವ ಆನಂದವಿದೆಯಲ್ಲ ಅದನ್ನು ಬಣ್ಣಿಸುವುದು ಅಸಾಧ್ಯ.

ಮೊಬೈಲ್ ತ್ಯಜಿಸಿ, ಆಟ ಆಡಿಸಿ
ಮಕ್ಕಳ ಕೈಯಿಂದ ಮೊಬೈಲ್ ಕೆಳಗಿರಿಸಿ ಬೇರೆ ಬೇರೆ ಆಟವನ್ನು ಆಡಿಸುವ ಅಗತ್ಯವಿದೆ. ಇದರಿಂದಾಗಿ ದೈಹಿಕವಾಗಿ ವ್ಯಾಯಾಮ ಸಸಿಗುತ್ತದೆ. ಮನಸ್ಸಿಗೆ ಚೈತನ್ಯವೂ ಸಿಗಬಹುದಾಗಿದೆ. ಕ್ರಿಕೆಟ್ ಇರಲಿ ಅಥವಾ ಇನ್ಯಾವುದೇ ದೈಹಿಕ ಕ್ರೀಡೆಗಳಿರಲಿ, ಮಕ್ಕಳು ಆಡಲಿ, ಇತರ ಮಕ್ಕಳ ಜತೆ ಸೇರಿ ಬೆರೆಯಲಿ. ತಂಡೆ ಮಾಡಲಿ. ಮಕ್ಕಳನ್ನು ಗದರ ಬೇಡಿ. ಬಯ್ಯಲು ಮುಂದಾಗಬೇಡಿ. ಮಕ್ಕಳ ಬಗ್ಗೆ ಸುಮ್ಮನೇ ಸಿಟ್ಟಾಗಬೇಡಿ. ಅವರನ್ನು ಆಟದ ಅಂಗಳದಲ್ಲಿ ಅವರ ಪಾಡಿಗೆ ಬಿಡಿ.

ಕಥೆ ಹೇಳಿ, ಸಂಸ್ಕೃತಿ ಕಲಿಸಿ
ಹಿಂದೆ ಅಜ್ಜ-ಅಜ್ಜಿಯರು ಕತೆ ಹೇಳುತ್ತಿದ್ದರೆ ಮಕ್ಕಳು ಕುತೂಹಲದಿಂದ, ಬಿಟ್ಟ ಕಣ್ಣು ಬಿಟ್ಟಂತೆ ಕೇಳುತ್ತಿದ್ದರು. ಕ್ರಮೇಣ ತಂದೆ ತಾಯಿಯರು ಮಕ್ಕಳನ್ನು ಅಜ್ಜ ಅಜ್ಜಿಯರಿಂದ ದೂರ ಮಾಡಿದರು. ಮಕ್ಕಳಿಗೆ ಕಥಾ ಲೋಕದ ಕೊಂಡಿಯೂ ಕಳಚಿತು. ಮಕ್ಕಳಿಗೆ ತ್ತೊಮ್ಮೆ ಕಥೆ ಹೇಳುವ ಅಗತ್ಯವಿದೆ. ಅಜ್ಜ-ಅಜ್ಜಿಯರ ಜತೆ ಮಕ್ಕಳನ್ನು ಬಿಟ್ಟು, ಅವರು ಹೇಳುವ ಪಂಚತಂತ್ರದ, ಕಾಕಣ್ಣ-ಗುಬ್ಬಣ್ಣನ, ಪುಣ್ಯಕೋಟಿಯ ಕಥೆಗಳನ್ನು ಕೇಳುವಂತೆ ಮಾಡುವ ಅಗತ್ಯವಿದೆ. ಹೀಗೆ ಮಾಡಿದಾಗ ಮಾತ್ರ ಮಕ್ಕಳು ಸಂಸ್ಕೃತಯ ಕಡೆಗೆ ಪ್ರೀತಿ ಬೆಳೆಸಿಕೊಳ್ಳುತ್ತಾರೆ. ಪುಣ್ಯಕೋಟಿಯಂತಹ ಕಥೆಗಳನ್ನು ಮನಮುಟ್ಟುವಂತೆ ಮಕ್ಕಳಿಗೆ ಹೇಳಿದರೆ ಅದನ್ನು ಕೇಳುವ ಮಕ್ಕಳು ಮುಂದೆ ದೊಡ್ಡವರಾದ ಮೇಲೆ ಸಮಾಜಘಾತಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಾರ. ಅಲ್ಲದೇ ಒಳ್ಳೆಯ ರೂಪದಲ್ಲಿ ತನ್ನ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುತ್ತಾನೆ. ತದೇಕಚಿತ್ತದಿಂದ ಕತೆ ಕೇಳುವ ಮಕ್ಕಳು ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸುತ್ತಾರೆ. ಏಕಾಗ್ರತೆಯನ್ನುಸಾಧಿಸುತ್ತಾರೆ.

ಪಾಲಕರೇ, ಎಚ್ಚೆತ್ತುಕೊಳ್ಳಿ. ನಿಮ್ಮ ಹಲವು ಧಾವಂತ, ಹಳವಂಡದ ನಡುವೆಯೂ ಮಕ್ಕಳಿಗಾಗಿ ಸಮಯ ಮೀಸಲಿಡಿ. ಅವರಿ ಪ್ರಕೃತಿಯನ್ನು ಪರಿಚಯಿಸಿ, ಕಥೆ ಹೇಳಿ, ಹೊರ ಜಗತ್ತಿನಲ್ಲಿ ಬೆರೆಯುವಂತೆ ಮಾಡಿ. ಸಮಾಜದ ಪರಿಚಯವನ್ನು ಮಾಡಿಕೊಡಿ. ಮೊಬೈಲ್ ಲೋಕದ ಹೊರತಾಗಿ ಬೇರೆಯ ವಿಸ್ಮಯ ಜಗತ್ತಿದೆ ಎನ್ನುವುದನ್ನು ತಿಳಿ ಹೇಳಿ. ಇದೆಲ್ಲವನ್ನು ಅರಿತುಕೊಳ್ಳುವ ಮಕ್ಕಳು ಸಮಾಜದಲ್ಲಿ ಉತ್ತಮ ಸಾಧನೆ ಮಾಡಬಲ್ಲ. ಮೊಬೈಲ್ ಜಗತ್ತಿನಲ್ಲಿ ಬದುಕು ಹಾಳುಮಾಡಿಕೊಳ್ಳುವ ಮಕ್ಕಳಿಗೆ ತಂದೆ-ತಾಯಿಯರು ದಾರಿ ದೀಪವಾಗಲಿ.

Sunday, November 4, 2018

ಅವರು ರಸ್ತೆಗಳಿಗೆ ಹೆಸರಾಗಲಿಲ್ಲ, ಮನ ಮನಗಳಲ್ಲಿ ನೆಲೆ ನಿಂತರು

ನಾನು ಚಿಕ್ಕವನಾಗಿದ್ದಾಗ, ನಮ್ಮ ಅವಿಭಕ್ತ ಕುಟುಂಬದ ಮನೆಯ ಮಹಡಿಯ ಮೇಲೆ ಭಾರತದ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಕೆಲವು ನಾಯಕರ ಭಾವಚಿತ್ರಗಳು ಕಂಬಗಳಿಗೆ ತೂಗು ಹಾಕಲ್ಪಟ್ಟಿದ್ದವು. ಚಂದ್ರಶೇಖರ ಆಜಾದ್, ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಭೋಸ್ ಹೀಗೆ ಹಲವು ನಾಯಕರುಗಳ ಚಿತ್ರಗಳು ಅಲ್ಲಿದ್ದವು. ಅಂತಹ ನಾಯಕರ ಸಾಲಿನಲ್ಲಿದ್ದ ಇನ್ನೊಂದು ಚಿತ್ರ ಸರ್ದಾರ ವಲ್ಲಭ ಭಾಯ್ ಪಟೇಲರದ್ದು.
ಆಜಾದ್, ಭಗತ್, ನೇತಾಜಿ ಮುಂತಾದ ಸ್ವಾತಂತ್ರ್ಯದ ಕಿಡಿಗಳ ಚಿತ್ರಗಳನ್ನು ನೋಡಿದಾಗಲೆಲ್ಲ ನಮಗೆ ಅವರ ಕತೆಗಳು ನೆನಪಾಗುತ್ತಿದ್ದವು. ಬಹುತೇಕ ಯುವ ಭಾವಚಿತ್ರಗಳು ಮನಸ್ಸನ್ನು ಸೂಜಿಗಲ್ಲಿನಂತೆಯೇ ಸೆಳೆಯುತ್ತಿದ್ದವು. ಆದರೆ ಈ ಸಾಲಿನಲ್ಲಿ ವಯಸ್ಸಾಗಿದ್ದ ಸರ್ದಾರ ವಲ್ಲಭ್ ಭಾಯ್ ಪಟೇಲರ ಚಿತ್ರವಿದ್ದುದು ನನ್ನ ಮನಸ್ಸಿನಲ್ಲಿ ಅಚ್ಚರಿಯನ್ನು ಮೂಡಿಸಿ, ನನ್ನ ಅಜ್ಜನ ಬಳಿ ಕೇಳಿಯೂ ಇದ್ದೆ. ಆಗ ಪಟೇಲರ ಕುರಿತು ಸುದೀರ್ಘ ವಿವರಣೆ ನೀಡಿದ್ದ ಅಜ್ಜ ಭಾರತದ ಏಕೀಕರಣದ ರೂವಾರಿಯ ಕುರಿತು ಹೆಮ್ಮೆ ಮೂಡುವಂತೆ ಮಾಡಿದ್ದರು. ಅಂದಿನಿಂದ ಪಟೇಲರ ಕುರಿತು ಕುತೂಹಲ ಇಮ್ಮಡಿಸುತ್ತಲೇ ಇದೆ. ಅಂದ ಹಾಗೇ ನಮ್ಮ ಮನೆಯ ಮಹಡಿಯ ಯಾವುದೇ ಮೂಲೆಯಲ್ಲಿಯೂ ಕೂಡ ಜವಾಹರ ಲಾಲ್ ನೆಹರೂ ಅವರ ಚಿತ್ರಗಳಿರಲಿಲ್ಲ.
ನನ್ನ ಅಜ್ಜ ಕಾಂಗ್ರೆಸ್ ನಲ್ಲಿ ನಂಬಿಕೆ ಇಟ್ಟವರಾಗಿದ್ದರು. ಬಹುಶಃ ಚಿಕ್ಕಂದಿನಿಂದಲೂ ಕಾಂಗ್ರೆಸ್ ನ ಕಾರ್ಯಕರ್ತನಾಗಿಯೋ ಅಥವಾ ಇನ್ಯಾವುದೋ ರೀತಿಯಿಂದಲೋ ಕೆಲಸ ಮಾಡಿರಬೇಕು. ಆದರೆ ಅಂತಹ ಅಜ್ಜ ಕಾಂಗ್ರೆಸ್ ಅಧಿನಾಯಕರಾದ, ಭಾರತದ ಪ್ರಧಾನ ಮಂತ್ರಿಗಳಾದ, ಮಕ್ಕಳ ಪಾಲಿಗೆ ಪ್ರೀತಿಯ ಚಾಚಾ ಆಗಿ ಹೊರಹೊಮ್ಮಿದ ಪಂಡಿತ ಜವಾಹರ ಲಾಲ್ ನೆಹರೂ ಅವರ ಪೋಟೋವನ್ನು ಹಾಕಿರಲಿಲ್ಲ. ಉಳಿದೆಲ್ಲ ನಾಯಕರ ಚಿತ್ರಗಳನ್ನು ಹಾಕಿದ ಕಾಂಗ್ರೆಸ್ಸಿಗ ಅಜ್ಜ ನೆಹರೂ ಪೋಟೋವನ್ನು ಹಾಕದೇ ಬಿಟ್ಟಿದ್ಯಾಕೆ ಎನ್ನುವ ಅಂಶ ಆಗ ಕಾಡದಿದ್ದರೂ, ಇತ್ತೀಚೆಗೆ ಆಲೋಚನೆಗೆ ಹಚ್ಚಿತ್ತು. ಕ್ರಾಂತಿಕಾರಿಗಳೆನ್ನಿಸಿಕೊಂಡು, ಮಂದಗಾಮಿಗಳ ಮಾರ್ಗಕ್ಕಿಂತ ಹೊರತಾಗಿ ದೇಶವನ್ನು ಮುನ್ನಡೆಸಲು ಯತ್ನಿಸಿ, ತಮ್ಮದೇ ತೀವ್ರಗಾಮಿ ಆಲೋಚನೆ ಹಾಗೂ ಮಾರ್ಗಗಳ ಮೂಲಕ ಆಂಗ್ಲರ ದಾಸ್ಯ ಕಿತ್ತೊಗೆಯಲು ಮುಂದಾದ ಭಾರತದ ಕುದಿಬಿಂದುಗಳ ಪೋಟೋಗಳು ಸ್ಫೂರ್ತಿಯ ಸೆಲೆಯಾಗಿ ನಮ್ಮ ಮನೆಯ ಮಹಡಿಯ ಮೇಲೆ ನೆಲೆ ನಿಂತಿದ್ದವು. ಅವುಗಳ ಜತೆಯಲ್ಲಿ ಸ್ವಾತಂತ್ರ್ಯಾನಂತರ ದೇಶವನ್ನು ಒಗ್ಗೂಡಿಸಲು ಶ್ರಮಪಟ್ಟು, ಸಾಮ-ಧಾನ-ಬೇಧ ಹಾಗೂ ದಂಡ ಮಾರ್ಗದಿಂದ ಏಕ ಭಾರತವನ್ನು ಸೃಷ್ಟಿ ಮಾಡಿದ ಸರ್ದಾರರ ಪೋಟೋ ಕೂಡ ಗಂಭೀರವಾಗಿ ನೆಲೆನಿಂತಿತ್ತು. ಮುಖ ಸುಕ್ಕುಗಟ್ಟಿದ್ದರೂ ಅವರ ಕಣ್ಣುಗಳಲ್ಲಿನ ಕಾಂತಿ, ತೇಜಸ್ಸು, ದೃಢತೆ ಎಂತವರನ್ನೂ ಕೂಡ ಸೆಳೆಯುವಂತಿತ್ತು. ನನ್ನಂತಹ ಹತ್ತಾರು ಮಕ್ಕಳು ನಮ್ಮ ಮನೆಯ ಮಹಡಿಯನ್ನೇರಿದಾಗಲೆಲ್ಲ ಕುತೂಹಲದಿಂದ ಈ ಎಲ್ಲ ಪೋಟೋಗಳ ಕುರಿತು ಕೇಳಿದಾಗಲೆಲ್ಲ ಅಜ್ಜ ಅಷ್ಟೇ ಸಹನೆಯಿಂದ ವಿವರಿಸುತ್ತಿದ್ದುದು ಕಣ್ಣ ಮುಂದಿದೆ.
ನೆಹರೂ ಹೊರತು ಪಡಿಸಿ ಉಳಿದ ನಾಯಕರಿಗೆ ನನ್ನ ಅಜ್ಜನಂತಹ ಅದೆಷ್ಟೋ ದೇಶವಾಸಿಗಳು ವಿಶೇಷ ಸ್ಥಾನವನ್ನೇ ಕೊಟ್ಟುಬಿಟ್ಟಿದ್ದರು. ನೆಹರೂ ದೇಶವಾಸಿಗಳ ಮನಸ್ಸಿನಲ್ಲಿ ನೆಲೆ ನಿಲ್ಲುವುದು ಹಾಗಿರಲಿ, ಕೋಣೆಯ ಮೂಲೆಯೊಂದರಲ್ಲಿ ಪೋಟೋ ರೂಪದಲ್ಲಿ ನಿಲ್ಲುವುದಕ್ಕೂ ನಾಲಾಯಕ್ ಎನ್ನಿಸುವಂತಹ ಹಂತ ತಲುಪಿದ್ದರು. ನೆಹರೂ ಅಪ್ಪಟ ದೇಶಭಕ್ತ ಕಾಂಗ್ರೆಸ್ಸಿಗರ ಮನಸ್ಸಿನಲ್ಲಿ ಯಾವ ಭಾವನೆಯನ್ನು ಹೊಂದಿದ್ದರು ಎಂಬುದಕ್ಕೆ ಇದೊಂದು ಚಿಕ್ಕ ಉದಾಹರಣೆಯಷ್ಟೇ.

--------

ಭಾರತದ ಸ್ವಾತಂತ್ರ್ಯದ ನಂತರ ಹಲವು ಭಾರತೀಯ ಮನಸ್ಸುಗಳು ಸರ್ದಾರ ವಲ್ಲಭ ಭಾಯ್ ಪಟೇಲರೇ ಮುಂದಿನ ಪ್ರಧಾನಿಯಾಗಲಿ ಎಂಬ ಭಾವನೆಯನ್ನು ಹೊಂದಿತ್ತು. ಆದರೆ ಮಹಾತ್ಮಾಗಾಂಧಿಯವರ ಹಠದಿಂದಾಗಿ ಅವರ ಪ್ರೀತಿಪಾತ್ರ ನೆಹರೂ ಪ್ರಧಾನಿಯಾದ ವಿವರಗಳೆಲ್ಲ ಪದೇ ಪದೆ ಇತಿಹಾಸದ ಪುಟಗಳಲ್ಲಿ ಇಣುಕುತ್ತವೆ. ಅದರ ಜತೆ ಜತೆಯಲ್ಲಿಯೇ ಸರ್ದಾರ್ ಪಟೇಲರು ಗೃಹ ಸಚಿವರಾದರು, ದೇಶದ ತುಂಬೆಲ್ಲ ಚಿಕ್ಕ ಚಿಕ್ಕ ರೂಪದಲ್ಲಿ ಹರಿದು ಹಂಚಿಕೊಂಡು, ತಮ್ಮದೇ ಸ್ವತಂತ್ರ ಅಸ್ತಿತ್ವ ಎಂದು ಹೇಳಲು ಹವಣಿಸುತ್ತಿದ್ದ ರಾಜ್ಯಗಳನ್ನು, ಸಂಸ್ಥಾನಗಳನ್ನೆಲ್ಲ ಒಗ್ಗೂಡಿಸಿದರು ಎಂಬುದನ್ನೆಲ್ಲ ಓದಿ ತಿಳಿದುಕೊಂಡಿದ್ದೇವೆ.
ಸ್ವಾತಂತ್ರ ಪೂರ್ವದಲ್ಲಿ ಆಜಾದ್ ಇರಲಿ, ಭಗತ್ ಸಿಂಗ್ ಇರಲಿ ಅಥವಾ ನೇತಾಜಿ ಅವರೇ ಇರಲಿ, ಈ ಧೀಮಂತ ನಾಯಕರುಗಳು ಮಾಡಿದ ಮಹಾನ್ ಕಾರ್ಯದ ಹಾಗೆಯೇ ಸ್ವಾತಂತ್ರ್ಯಾನಂತರ ಸರ್ದಾರ್ ವಲ್ಲಭ ಭಾಯ್ ಪಟೇಲ್ ಕೈಗೊಂಡರು ಎಂದರೆ ತಪ್ಪಾಗಲಿಕ್ಕಿಲ್ಲ. ಬ್ರಿಟೀಷರ ಎದೆ ನಡುಗಿಸಲು ಕ್ರಾಂತಿ ಮಾರ್ಗ ಹಿಡಿದ ಆಜಾದ್, ಭಗತ್, ನೇತಾಜಿಯವರ ಮಾರ್ಗದಷ್ಟೇ, ದೇಶದಲ್ಲೇ ಇರುವ ಕಿರು ಸಂಸ್ಥಾನಗಳನ್ನು ಮನವೊಲಿಸಿ ಬೃಹದ್ ಭಾರತ ಸೃಷ್ಟಿ ಮಾಡಿದ ಸರ್ದಾರರ ಕಾರ್ಯವೂ ಮಹತ್ವದ್ದೆನ್ನಿಸುತ್ತದೆ.
ಸರ್ದಾರ್ ವಲ್ಲಭ್ ಭಾಯ್ ಪಟೇಲ್. ಭಾರತ ಕಂಡ ಮಹಾನ್ ನಾಯಕರಲ್ಲೊಬ್ಬರು. ಭಾರತದ ಉಕ್ಕಿನ ಮನುಷ್ಯ ಎಂದು ಕರೆಸಿಕೊಂಡವರು. ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರೂ, ನಿಜವಾದ ಅರ್ಥದಲ್ಲಿ ಒಬ್ಬ ಪ್ರಧಾನಿ ಮಾಡುವ ಕಾರ್ಯಗಳಿಗಿಂತ ಮಹತ್ತರ ಕಾರ್ಯವನ್ನು ನಿರ್ವಹಿಸಿದವರು. ಅರಾಜಕತೆ ಸೃಷ್ಟಿಯಾಗಿ, ಒಂದು ಭಾರತದೊಳಕ್ಕೆ ನೂರಾರು ಕಿರು ದೇಶಗಳು ಹುಟ್ಟುವ ಸಾಧ್ಯತೆಯನ್ನು ನಿರ್ದಾಕ್ಷಿಣ್ಯವಾಗಿ ಚಿವುಟಿ ಹಾಕಿ ಏಕತೆಯನ್ನು ಸೃಷ್ಟಿ ಮಾಡಿದವರು.
ವಲ್ಲಭ್ ಭಾಯ್ ಪಟೇಲ್ ಮಾಡಿದ್ದು ಒಂದೆರಡಲ್ಲ ಬಿಡಿ. ಮೈಸೂರು ಸಂಸ್ಥಾನವನ್ನು ಮನವೊಲಿಸಿ ಭಾರತ ಒಕ್ಕೂಟ ಸೇರುವಂತೆ ಮಾಡಿದರು. ಜುನಾಗಡದ ನವಾಬನನ್ನು ಓಡಿಸಿ, ಆ ಪ್ರದೇಶವನ್ನು ಭಾರತದ ಪಾಲಾಗುವಂತೆ ಮಾಡಿದರು, ಹೈದರಾಬಾದ್ ನಿಜಾಮ ಉದ್ಧಟತನ ತೋರಿದಾಗ ಆತನ ಕಿವಿ ಹಿಂಡಿ, ಯುದ್ಧ ಸಾರಿ ಹೆಡೆಮುರಿ ಕಟ್ಟಿ ಸೋತು ಶರಣಾಗುವಂತೆ ಮಾಡಿದ್ದು ಸರ್ದಾರ್ ವಲ್ಲಭ ಭಾಯ್ ಪಟೇಲ್.
ನನ್ನ ಭಾರತ ಏಕ ಭಾರತವಾಗಿರಬೇಕು. ಶ್ರೇಷ್ಟ ಭಾರತವಾಗಿರಬೇಕು ಎಂಬ ದೃಢ ಸಂಕಲ್ಪ ಹೊಂದಿದ್ದ ವಲ್ಲಭ್ ಭಾಯ್ ಪಟೇಲರನ್ನು ಜನರೇ ಪ್ರೀತಿಯಿಂದ ಸರ್ದಾರ ಎಂದು ಕರೆದರು. ಉಕ್ಕಿನ ಮನುಷ್ಯ ಎಂಬ ಬಿರುದನ್ನು ನೀಡಿದರು. ಆದರೆ ಇಂತಹ ಧೀಮಂತ, ನಿಸ್ವಾರ್ಥ ನಾಯಕನನ್ನೂ ತೆರೆಯ ಮರೆಗೆ ಸರಿಸುವ ಯತ್ನ ಕೈಗೊಂಡಿದ್ದು ನೆಹರೂ ಪಟಾಲಂ. ದಿನದಿಂದ ದಿನಕ್ಕೆ ದೇಶದಲ್ಲೆಲ್ಲ ದೊಡ್ಡ ಪ್ರಭೆಯಾಗುತ್ತ ಸಾಗುತ್ತಿದ್ದ ಸರ್ದಾರ ವಲ್ಲಭ ಭಾಯ್ ಪಟೇಲರನ್ನು ತೆರೆ ಮರೆಗೆ ಸರಿಸುವ ಯತ್ನವನ್ನು ಕಾಂಗ್ರೆಸ್ಸು ಕೈಗೊಂಡಿದ್ದಂತೂ ಸುಳ್ಳಲ್ಲ ಬಿಡಿ. ಎಲ್ಲಿಯೂ ಅವರ ಹೆಸಸರಿರಬಾರದು ಎಂದುಕೊಂಡ ಕಾಂಗ್ರೆಸ್ ಪಟೇಲರನ್ನು ಕಡೆಗಣಿಸಿಬಿಟ್ಟಿತು.
ಸರ್ದಾರ್ ಪಟೇಲರು ಯಾವುದೇ ಬೀದಿಗೆ ಹೆಸರಾಗಲಿಲ್ಲ. ವಿಮಾನ ನಿಲ್ದಾಣಗಳಿಗೆ, ಕಾಲೇಜುಗಳಿಗೆ, ವಿಶ್ವವಿದ್ಯಾಲಯಗಳಿಗೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳಿಗೆ ತಮ್ಮ ಹೆಸರನ್ನಿಡಿ ಎಂದು ಹೇಳಲಿಲ್ಲ. ಕಂಡ ಕಂಡಲ್ಲಿ ಪ್ರತಿಮೆಗಳಾಗಲಿಲ್ಲ. ವೃತ್ತಗಳಿಗೆ ಹೆಸರಾಗಲಿಲ್ಲ. ಜನರ ಮನಸ್ಸಿನ ಮೇಲೆ ತಮ್ಮ ಹೆಸರನ್ನುಒತ್ತಡದ ರೂಪದಲ್ಲಿ ನೆಲೆ ನಿಲ್ಲುವಂತೆ ಮಾಡಲಿಲ್ಲ. ಮಕ್ಕಳನ್ನು ಕರೆದು ಚಾಚಾ ಎಂದು ಹೇಳಿಸಲಿಲ್ಲ. ತಮ್ಮದೇ ಜನ್ಮದಿನ, ಪುಣ್ಯತಿಥಿಗಳಂದು ದೇಶಕ್ಕೆ ರಜಾ ನೀಡಿ, ಉತ್ಸವದ ರೂಪದಲ್ಲಿ ಆಚರಣೆ ಮಾಡಿ ಎನ್ನಲಿಲ್ಲ. ದೇಶದ ಸಾರ್ವಭೌಮತ್ವ, ಐಕ್ಯತೆ ವಿಷಯ ಬಂದಾಗ ರಾಜಿ ಮಾಡಿಕೊಳ್ಳಲಿಲ್ಲ. ದೃಢ ನಿರ್ಧಾರ ತಳೆಯಲು ಹಿಂದೆ ಮುಮದೆ ಯೋಚಿಸಲಿಲ್ಲ. ತನ್ನಿಂದ ತಾನೇ ಪಟೇಲರು ಜನರ ಮನದಲ್ಲಿ ಸದಾ ನೆಲೆ ನಿಂತರು. ಭಾರತದ ಜನರು ಪಟೇಲರನ್ನು ಗುಜರಾತಿ ಎಂದುಕೊಳ್ಳಲಿಲ್ಲ. ಉತ್ತರ ಭಾರತೀಯ ಎಂದೂ ಕರೆಯಲಿಲ್ಲ. ಬದಲಾಗಿ ಅವರು ತಮ್ಮದೇ ಮನೆಯವರು ಎಂದುಕೊಂಡರು. ಮನಸ್ಸಿನಲ್ಲಿ ಉಕ್ಕಿನ ಮನುಷ್ಯನಿಗೆ ಸ್ಥಾನ ಕೊಟ್ಟರು.
ಭಾರತದ್ದೇ ಕೆಲವು ನಾಯಕರು ತಮ್ಮದೇ ಹೆಸರನ್ನು ಹೆಚ್ಚು ಹೆಚ್ಚು ಮೆರೆಸಿಕೊಳ್ಳುವ ಯತ್ನ ನಡೆಸಿದ್ದಾರೆ. ಹೊಟೆಲುಗಳಿಗೆ, ಕ್ಯಾಂಟೀನುಗಳಿಗೆ, ವಿದ್ಯಾರ್ಥಿಗಳ ಸಹಾಯ ಧನಕ್ಕೆ, ಎದೆ ಸೀಳಿದರೆ ಕ್ರೀಡೆಯ ಕುರಿತು ಲವ ಲೇಶವೂ ಗೊತ್ತಿಲ್ಲದಿದ್ದರೂ, ಕ್ರೀಡಾಲೋಕದ ಬಹುಮಾನಗಳಿಗೆ ಅಷ್ಟೇ ಏಕೆ ವಿದ್ಯುತ್ ಸಂಪರ್ಕ ಯೋಜನೆಗಳಿಗೆ, ಶೌಚಾಲಯ ಯೋಜನೆಗಳಿಗೂ ತಮ್ಮ ಹೆಸರುಗಳನ್ನು ಇರಿಸಿಕೊಂಡ ನಾಯಕರಿದ್ದಾರೆ. ಕೆಲಸ ನಾಸ್ತಿ, ಹೆಸರು ಜಾಸ್ತಿ ಎಂದು ಮೆರೆದಾಡಿದವರ ನಡುವೆ ಸರ್ದಾರ ಪಟೇಲರು ವಿಭಿನ್ನವಾಗಿ ನಿಲ್ಲುತ್ತಾರೆ. ಜನನಾಯಕರಾಗೆ ಮೆರೆದಾಡುತ್ತಾರೆ.
ಕೊನೆಗೂ ಸರ್ದಾರ್ ವಲ್ಲಭ ಭಾಯ್ ಪಟೇಲರದ್ದೊಂದು ಭವ್ಯ ಪ್ರತಿಮೆ ಲೋಕಾರ್ಪಣೆಗೊಂಡಿದೆ. ಪಟೇಲರು ಜನಿಸಿದ ನಾಡಿನಲ್ಲೇ, ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಎನ್ನುವ ಖ್ಯಾತಿಯೊಂದಿಗೆ ಜಗತ್ತಿನ ಎದುರು ಅನಾವರಣಗೊಂಡಿದೆ. ಇಂತಹ ಪ್ರತಿಮೆ ನಿರ್ಮಾಣದ ಸಂದರ್ಭದಲ್ಲಿಯೂ ಕಾಂಗ್ರೆಸ್ಸು ಮತ್ತೊಮ್ಮೆ ಪಟೇಲರಿಗೆ ಅವಮಾನ ಮಾಡುವ ಯತ್ನವನ್ನೇ ನಡೆಸಿತು. ಅವರ ಪ್ರತಿಮೆ ನಿರ್ಮಾಣ ಅನಗತ್ಯ ಎಂದು ಹುಯ್ಯಲಿಟ್ಟಿತು. ಪಟೇಲರ ಪ್ರತಿಮೆ ಪೋಟೋ ಜತೆ ಯಾವುದೋ ದೇಶದ ಆಹಾರಕ್ಕಾಗಿ ಪರಿತಪಿಸುತ್ತಿರುವ ಮಕ್ಕಳ ಪೋಟೋವನ್ನು ಅಂಟಿಸಿ, ತಮ್ಮೊಳಗಿನ ವಿಕೃತಿಯನ್ನು ಮೆರೆಯುವ ಯತ್ನ ಕೈಗೊಂಡಿತು. ಆದರೆ ಜನಸಾಮಾನ್ಯರು ತಲೆ ಕೆಡಿಸಿಕೊಳ್ಳಲಿಲ್ಲ ಬಿಡಿ.
ಏಕತೆಯ ಪ್ರತಿಮೆ ಜತೆ ಜತೆಯಲ್ಲಿ ಮತ್ತೊಮ್ಮೆ ಸರ್ದಾರ ವಲ್ಲಭ ಭಾಯ್ ಪಟೇಲರನ್ನು ಭಾರತೀಯರು ನೆನಪು ಮಾಡಿಕೊಂಡು, ಮನದಲ್ಲಿ ಮೌನವಾಗಿ ಪೂಜಿಸುವ ಮೂಲಕ ಮಹಾ ನಾಯಕನಿಗೆ ಗೌರವ ಸಮರ್ಪಣೆ ಮಾಡಿದ್ದು ವಿಶೇಷ.

Thursday, November 1, 2018

ಗಡಿನಾಡ ಕನ್ನಡ ಶಾಲೆ ; ಇನ್ನೂ ಮುಕ್ತವಾಗಲಿಲ್ಲ ಸಮಸ್ಯೆ

(ಗುರುಗಳು, ಹಿರಿಯ ಸಾಹಿತಿಗಳೂ, ರಾಯಲ ಸೀಮೆಯ ನೆತ್ತರ ಇತಿಹಾಸವನ್ನು ಕನ್ನಡ ನಾಡಿನ ಓದುಗ ಅಭಿಮಾನಿಗಳ ಎದುರು ತೆರೆದಿಟ್ಟ ಕುಂ. ವೀರಭದ್ರಪ್ಪ ಅವರನ್ನು ಮತ್ತೆ ಮಾತಾಡಿಸುವ ಅವಕಾಶ ಸಿಕ್ಕಿತ್ತು. ಹಿಂದೆ ಶಿರಸಿಯಲ್ಲಿ ಇದ್ದಾಗ ಅವರ ಜತೆ ಒಂದೆರಡು ದಿನ ಉಳಿದಿದ್ದೆ. ಮತ್ತೊಮ್ಮೆ ಆ ದಿನ ನೆನಪಿಸಿ ಅವರನ್ನು ಮಾತನಾಡಿಸಿದೆ. ಖುಷಿಯಿಂದಲೇ ಮಾತನಾಡಿದರು. ಆಂಧ್ರ ಪ್ರದೇಶದ ಕನ್ನಡ ಶಾಲೆಗಳ ಕುರಿತು ಮಾಹಿತಿ ನೀಡಿದರು. ಅವರ ಮಾತುಗಳು ಇಲ್ಲಿದೆ. ಅಂದ ಹಾಗೆ ಇದು ಹೊಸದಿಗಂತದಲ್ಲಿ ಪ್ರಕಟವಾಗಿದೆ)

ಗಡಿನಾಡ ಕನ್ನಡ ಶಾಲೆಗಳ ಪರಿಸ್ಥಿತಿ ಸಾಕಷ್ಟು ಸಮಸ್ಯೆಗಳಿಂದ ಕೂಡಿದೆ. ಹಲವಾರು ಕಾರಣಗಳಿಂದಾಗಿ ಗಡಿನಾಡ ಕನ್ನಡ ಶಾಲೆಗಳು ಒದ್ದಾಾಡುತ್ತಿವೆ. ಅಧ್ಯಾಪಕರು, ಬೋಧಕ ಸಿಬ್ಬಂದಿ, ಕಟ್ಟಡ, ಶಿಕ್ಷಣ ಸಾಮಗ್ರಿಗಳ ಕೊರತೆ ಹೀಗೆ ಹಲವಾರು ಇಲ್ಲಗಳ ನಡುವೆಯೇ ಗಡಿನಾಡಿನಲ್ಲಿ ಕನ್ನಡ ಪ್ರೇಮ ಜೀವಂತವಾಗಿದೆ. ಕನ್ನಡ ಪ್ರೇಮಿಗಳ ಒತ್ತಾಸೆ ಫಲವಾಗಿ ಈ ಶಾಲೆಗಳು ಉಸಿರು ಹಿಡಿದುಕೊಂಡಿವೆ. ಇಂತಹ ಶಾಲೆಗಳ ಉಳಿವಿಗಾಗಿ ಕರ್ನಾಟಕ ಸರ್ಕಾರದ ಸಹಾಯ ಹಸ್ತ ಅತ್ಯಗತ್ಯವಾಗಿದೆ.
ಕುಂ. ವೀರಭದ್ರಪ್ಪ ಕನ್ನಡದ ಸಾಹಿತ್ಯ ಲೋಕದ ಹೆಸರಾಂತ ಬರಹಗಾರರು. ಹಲವು ಪುಸ್ತಕಗಳ ಮೂಲಕ ಕನ್ನಡಿಗರ ಮನಸ್ಸನ್ನು ವೀರಭದ್ರಪ್ಪ ಗೆದ್ದಿದ್ದಾರೆ. ಕಾದಂಬರಿಗಳ ಮೂಲಕ ನೆಲೆ ನಿಂತಿದ್ದಾರೆ. ರಾಯಲಸೀಮೆಯ ಕೆಂಪು ನೆಲದ ಇತಿಹಾಸವನ್ನು, ಕರಾಳ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಠೊಣ್ಣಿ ಹಾಗೂ ಡೋಮನ ಮೂಲಕ ಹುಲುಲಿ ಹಳ್ಳದ, ಆಂಧ್ರದ ಕರ್ನೂಲಿನ ಬದುಕನ್ನು ತೆರೆದಿಟ್ಟಿದ್ದಾರೆ. ಕುಂ ವೀರಭದ್ರಪ್ಪ ಕರ್ಮಭೂಮಿ ಆಂದ್ರಪ್ರದೇಶ. ರಾಯಲಸೀಮೆಯಲ್ಲಿನ ಕನ್ನಡ ಶಾಲೆಗಳಲ್ಲಿ ಅಧ್ಯಾಪಕರಾಗಿ ಕನ್ನಡದ ಉಸಿರನ್ನು ಜೀವಂತವಾಗಿ ಇರಿಸಿದವರು.
ಆಂದ್ರ ಪ್ರದೇಶ ಸರ್ಕಾರದಿಂದ ಕನ್ನಡ ಅಧ್ಯಾಪಕರಾಗಿ ನೇಮಕವಾದವರು ವೀರಭದ್ರಪ್ಪನವರು. ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ವಂದವಾಗಿಲಿಯಲ್ಲಿ 11 ವರ್ಷ, ಗೂಳ್ಯಂನಲ್ಲಿ 14 ವರ್ಷ ಹಾಗೂ ಅನಂತಪುರ ಜಿಲ್ಲೆಯ ಹಿರೇಹಾಳು ಗ್ರಾಮದಲ್ಲಿ 11 ವರ್ಷ ಸೇರಿ 36 ವರ್ಷಗಳ ಕಾಲ ತೆಲುಗರ ನಾಡಿನಲ್ಲಿ ಕನ್ನಡ ಬೋಧನೆಯ ಕೆಲಸವನ್ನು ಮಾಡಿದವರು ಕುಂ. ವೀರಭದ್ರಪ್ಪನವರು. ತೆಲುಗರ ನಾಡಿನಲ್ಲಿ ಕನ್ನಡದ ಉಳಿವಿಗಾಗಿ ಹೋರಾಟ, ಪ್ರತಿಭಟನೆಗಳನ್ನು ಕೈಗೊಂಡವರು. ಮನೆ ಮನೆಗಳಿಗೆ ತೆರಳಿ, ಕನ್ನಡಿಗರ ಬಳಿ ಸಹಾಯ ಯಾಚಿಸಿ ಗೂಳ್ಯಂನಲ್ಲಿ ಪ್ರೌೌಢಶಾಲೆ ನಿರ್ಮಾಣ ಮಾಡಿದವರು.
ವೀರಭದ್ರಪ್ಪನವರೇ ಹೇಳುವಂತೆ ಆಂಧ್ರಪ್ರದೇಶದ ಕನ್ನಡ ಶಾಲೆಗ ಪರಿಸ್ಥಿತಿ ತೀರಾ ಶೋಚನೀಯವಾಗಿದೆ. ಅವರು ಅಧ್ಯಾಪಕರಾಗಿ ಕರ್ನೂಲಿನ ವಂದವಾಗಿಲಿಯಲ್ಲಿ ವೃತ್ತಿ ಆರಂಭಿಸಿದಾಗ ಇದ್ದ ವಿದ್ಯಾರ್ಥಿಗಳು 11. ತದನಂತರದಲ್ಲಿ ಅವರು 300ಕ್ಕೂ ಅಧಿಕ ಕನ್ನಡ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿ, ಅವರ ಬದುಕನ್ನು ರೂಪಿಸಿಕೊಟ್ಟಿದ್ದಾರೆ. ಗೂಳ್ಯಂನಲ್ಲಿ ಕುಂ.ವಿ ಅವರು ತಮ್ಮದೇ ಸಮಾನಮನಸ್ಕ ಮೂವರು ಶಿಕ್ಷಕರ ಜತೆಗೂಡಿ ಕನ್ನಡ ಪ್ರೇಮಿಗಳು, ಕನ್ನಡ ಭಾಷಿಕರ ಜತೆಗೂಡಿ ಪ್ರೌಢಶಾಲೆ ಕಟ್ಟಿದ್ದಾರೆ. ಈ ಪ್ರೌಢಶಾಲೆ ಆರಂಭದ 7-8 ವರ್ಷ ಸ್ವಲ್ಪ ಶ್ರಮವನ್ನು ಬೇಡಿದರೂ, ಇದೀಗ ಬಹಳ ಚನ್ನಾಗಿ ನಡೆಯುತ್ತಿದೆ.
ಆಂದ್ರಪ್ರದೇಶದ ಹಲವು ಜಿಲ್ಲೆಗಳಲ್ಲಿ ಅಪ್ಪಟ ಕನ್ನಡಿಗರಿದ್ದಾರೆ. ಭಾಷಾವಾರು ಪ್ರಾಾಂತ್ಯಗಳ ವಿಂಗಡಣೆಗೂ ಮೊದಲು ಬಳ್ಳಾರಿ ಜಿಲ್ಲೆಯದೇ ಭಾಗವಾಗಿದ್ದ ಅಪ್ಪಟ ಕನ್ನಡಿಗ ಪ್ರದೇಶಗಳೆಲ್ಲ ಇದೀಗ ಆಂಧ್ರದಲ್ಲಿ ಸೇರಿ ಹೋಗಿದೆ. ರಾಜ್ಯ ವಿಂಗಡಣೆ ಸಂದರ್ಭದಲ್ಲಿ ಈ ಪ್ರದೇಶದಲ್ಲಿ 300-400ರಷ್ಟಿದ್ದ ಕನ್ನಡ ಶಾಲೆಗಳು ಇದೀಗ 80-90ಕ್ಕೆ ಇಳಿದಿದೆ. ಆಂಧ್ರದಲ್ಲಿ ಕನ್ನಡ ಶಾಲೆಗಳ ಸಂಖ್ಯೆ ಬಹಳ ಇಳಿಕೆಯಾಗಿದೆ. ಇಳಿಯುತ್ತಲೇ ಇದೆ. ನಾನು ಆಂದ್ರ ಪ್ರದೇಶ ಸರ್ಕಾರದಿಂದ ಕನ್ನಡ ಶಿಕ್ಷಕನಾಗಿ ನೇಮಕವಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಆ ರಾಜ್ಯ ಸರ್ಕಾರ ಕನ್ನಡ ಶಿಕ್ಷಕರನ್ನು ನೇಮಕ ಮಾಡುತ್ತಿಲ್ಲ. ಸಾವಿರಾರು ಶಿಕ್ಷಕರ ನೇಮಕ ಆಗಬೇಕಿದೆ ಎಂದು ವೀರಭದ್ರಪ್ಪನವರು ಆಂದ್ರದ ಶಾಲೆಗಳ ಹಾಗೂ ಅಲ್ಲಿನ ಸರ್ಕಾರಗಳ ಪರಿಸ್ಥಿತಿಯನ್ನು ಬಿಚ್ಚಿಡುತ್ತಾರೆ.
ಭಾಷಾವಾರು ರಾಜ್ಯ ವಿಂಗಡಣೆ ಸಂದರ್ಭದಲ್ಲಿ ಭಾಷಾವಾರು ಸಮಿತಿಯನ್ನೇನೋ ರಚನೆ ಮಾಡಲಾಗಿದೆ. ಆದರೆ ಅದು ಸಮರ್ಪಕವಾಗಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ. ಯಾವ ಪ್ರದೇಶದಲ್ಲಿ ಯಾವ ಭಾಷೆಯ ಜನರು ಶೇ.60ಕ್ಕಿಿಂತ ಅಧಿಕವಾಗಿದ್ದಾರೋ, ಅಂತಹ ಸ್ಥಳಗಳಲ್ಲಿ ಆಯಾಯಾ ಭಾಷೆಗಳಲ್ಲಿಯೇ ಸುತ್ತೋಲೆ ಹೊರಡಿಸಬೇಕೆಂಬ ನಿಯಮವಿದೆ. ಆದರೆ ಆಂಧ್ರದ ಕನ್ನಡ ಬಹುಸಂಖ್ಯಾತ ಪ್ರದೇಶದಲ್ಲಿ ಇದು ಸಮರ್ಪಕವಾಗಿ ಅನುಷ್ಠಾಾನಗೊಳ್ಳುತ್ತಿಲ್ಲ. ಆಂಧ್ರದ ಕನ್ನಡ ಶಾಲೆಗಳಲ್ಲಿ ಬೋಧನೆ ಮಾಡಲು ಉತ್ಸಾಹಿಗಳಿದ್ದಾರೆ. ಆದರೆ ಕೆಲಸ ಮಾಡಲು ಬೇಕಾದ ಪೀಠೋಕರಣಗಳು, ಪಾಠೋಪಕರಣಗಳನ್ನು ಸರ್ಕಾರ ನೀಡುತ್ತಿಲ್ಲ. ಇತ್ತೀಚೆಗೆ ಆಂಧ್ರ ಸರ್ಕಾರ ಪುಸ್ತಕಗಳನ್ನೇನೋ ನೀಡುತ್ತಿದೆ. ಆದರೆ ಶಾಲೆಗೆ ಕಟ್ಟಡಗಳೇ ಸಮರ್ಪಕವಾಗಿಲ್ಲ ಎಂದು ವೀರಭದ್ರಪ್ಪ ಅಲ್ಲಿನ ಶಾಲೆಗಳ ದುಸ್ಥಿತಿಯನ್ನು ತೆರೆದಿಟ್ಟರು.
ಎರಡು ದೊಡ್ಡ ಕೋಣಗಳ ಕಾದಾಟದ ನಡುವೆ ಸಣ್ಣ ಗಿಡ ಬಲಿ ಆಯ್ತು ಎಂಬ ಅವಸ್ಥೆ ಗಡಿನಾಡ ಕನ್ನಡಿಗರದ್ದಾಗಿದೆ. ಎರಡು ರಾಜ್ಯಗಳ ಗುದ್ದಾಟದ ನಡುವೆ ಮುಗ್ಧ ಮಕ್ಕಳು ಒದ್ದಾಾಡುತ್ತಿದ್ದಾರೆ. ಕರ್ನಾಟಕದಲ್ಲಿರುವ ಹೊರ ರಾಜ್ಯಗಳ ಭಾಷಿಕರಿಗೆ ಕನ್ನಡ ನಾಡಿನಲ್ಲಿ ಎಲ್ಲ ಸೌಲಭ್ಯ ನೀಡಲಾಗುತ್ತದೆ. ಆದರೆ ಗಡಿನಾಡ ಶಾಲೆಗಳಲ್ಲಿ ಓದುತ್ತಿರುವವರಿಗೆ ಆ ರಾಜ್ಯದವರು ಹಾಗಿರಲಿ, ಕರ್ನಾಟಕದವರು ಸಹಾಯ ಮಾಡುತ್ತಿಲ್ಲ. ಆ ಶಾಲೆಗಳ ಮಕ್ಕಳು ಉಚಿತ ಪುಸ್ತಕ, ಬ್ಯಾಗ ಪಡೆದು ಸಂಭ್ರಮ ಪಟ್ಟುಕೊಂಡರೆ, ಕನ್ನಡ ಶಾಲೆಯ ಮಕ್ಕಳ ಯಾವುದೇ ಸೌಲಭ್ಯ ಇಲ್ಲದಂತೆ ಬೇಸರ ಪಟ್ಟುಕೊಳ್ಳಬೇಕಾಗುತ್ತದೆ. ಕರ್ನಾಟಕ ಸರ್ಕಾರ 1-2 ಕೋಟಿ ಖರ್ಚು ಮಾಡಿದರೆ ಈ ಮಕ್ಕಳ ಮುಖದಲ್ಲಿ ಸಂಭ್ರಮ ಮೂಡಿಸಬಹುದು ಎಂದು ಹೇಳುವ ವೀರಭದ್ರಪ್ಪನವರು, ಆಂಧ್ರದಲ್ಲಿ ಓದಿದ ಮಕ್ಕಳು ಉನ್ನತ ವ್ಯಾಸಂಗಕ್ಕಾಗಿ ಕರ್ನಾಟಕದ ಶಾಲೆಗಳಿಗೆ ಬಂದರೆ ಅಧಿಕಾರಿಗಳು ನೀಡುವ ಕಿರುಕುಳ, ಹೆಚ್ಚಿನ ಡೊನೇಶನ್ ಹಾವಳಿಯ ಕುರಿತು ಬೇಸರ ವ್ಯಕ್ತಪಡಿಸುತ್ತಾರೆ.
ಕರ್ನಾಟಕ ಹಾಗೂ ಆಂಧ್ರ ಪ್ರದೇಶಗಳ ಪರಸ್ಪರ ಅರ್ಥೈಸಿಕೊಳ್ಳುವಿಕೆಯಿಂದ ಹಲವು ಸಮಸ್ಯೆಗಳನ್ನು ಪರಿಹಾರ ಮಾಡಬಹುದು. ಕರ್ನಾಟಕದಲ್ಲಿನ ತೆಲುಗು ಭಾಷಿಕರಿಗೆ ಆಂಧ್ರದ ಸರ್ಕಾರ ಹಾಗೂ ಆಂಧ್ರದಲ್ಲಿನ ಕನ್ನಡ ಭಾಷಿಕರಿಗೆ ಕರ್ನಾಟಕ ಸರ್ಕಾರ ಸಮರ್ಪಕ ಸವಲತ್ತು ಒದಗಿಸಿದರೆ ಹಲವು ಸಮಸ್ಯೆ ಪರಿಹಾರವಾಗಬಲ್ಲದು. ಮಾನವೀಯ ನೆಲೆಯಲ್ಲಿ ಸಮಸ್ಯೆಗಳನ್ನು ಪರಿಹಾರ ಮಾಡಿದಾಗ ಹಲವು ಸಮಸ್ಯೆಗಳು ತನ್ನಿಿಂದ ತಾನೆ ಕಡಿಮೆಯಾಗುತ್ತದೆ. ಆಂಧ್ರದ ಕನ್ನಡ ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಅಧ್ಯಯನ ಮಾಡುತ್ತೇವೆ ಎಂದು ಹೋರಾಟದ ಹಾದಿ ಹಿಡಿದ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ಮನು ಬಳಿಗಾರ್ ಅವರು ಈ ಹಿಂದೆ ಆಂಧ್ರದ ಕನ್ನಡ ವಿದ್ಯಾಾರ್ಥಿಗಳ ಪರಿಸ್ಥಿತಿ ಅರಿಯಲು ನನ್ನನ್ನು ಏಕವ್ಯಕ್ತಿ ಸಮಿತಿಯ ಮುಖ್ಯಸ್ಥನಾಗಿ ಮಾಡಿ ಸಮೀಕ್ಷೆಗೆ ಕಳುಹಿಸಿದ್ದರು. ನಾನು ವರದಿಕೊಟ್ಟ ನಂತರ ಅದನ್ನು ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಆ ಸಂದರ್ಭದಲ್ಲಿ ಅಲ್ಲಿನ ಕನ್ನಡಿಗರಿಗೆ ಕರ್ನಾಟಕ ಸರ್ಕಾರ ಉದ್ಯೋಗದಲ್ಲಿ ಶೆ.5ರಷ್ಟು ಮೀಸಲಾತಿ ನೀಡುವ ನಿರ್ಧಾರಕ್ಕೆೆ ಬಂದಿತ್ತು. ಇಂತಹ ಅಂಶಗಳು ಹೆಚ್ಚಬೇಕು. ಆಂಧ್ರದಲ್ಲಿಯೇ ಇದ್ದು, ಕನ್ನಡ ಮಾಧ್ಯಮದಲ್ಲಿಯೇ ಓದಿದ ವಿದ್ಯಾರ್ಥಿಗಳಿಗೆ ಉದ್ಯೋಗ ಸೇರಿದಂತೆ ಹಲವು ಸವಲತ್ತುಗಳು ಹಾಗೂ ಮೀಸಲಾತಿಗಳನ್ನು ನೀಡಿದಾಗ, ಆ ರಾಜ್ಯಗಳಲ್ಲಿನ ಕನ್ನಡಿಗರ ಬದುಕು ಹಸನಾಗುತ್ತದೆ ಎನ್ನುವುದು ಕುಂ. ವೀರಭದ್ರಪ್ಪನವರು ನೀಡುವ ಸಲಹೆ. ರಾಜ್ಯಸರ್ಕಾರ ಈ ನಿಟ್ಟಿನಲ್ಲಿ ತ್ವರಿತಗತಿಯಲ್ಲಿ ಕ್ರಮ ಕೈಗೊಂಡಾಗ ಗಡಿನಾಡಿನಲ್ಲಿ ಕನ್ನಡದ ಕಹಳೆ ಸ್ಫೂಟವಾಗಿ ಕೇಳಲು ಸಾಧ್ಯ.