Friday, January 18, 2019

ಕರ್ನಾಟಕಕ್ಕೆ ಬೇಕು ಇನ್ನೊಂದು ರಣಜಿ ತಂಡ

ಪ್ರಸ್ತುತ ಕ್ರಿಕೆಟ್‌ನಲ್ಲಿ ರಾಜ್ಯದಲ್ಲಿ ಹೇರಳ ಪ್ರತಿಭೆಗಳು ಬೆಳಕಿಗೆ ಬರುತ್ತಿವೆ. ಇದರಿಂದಾಗಿ ಹಲವು ಕ್ರಿಕೆಟ್ ಆಟಗಾರರು ರಾಜ್ಯದ ತಂಡದಲ್ಲಿ ಅವಕಾಶ ಸಿಗದೇ ಬೇರೆ ರಾಜ್ಯಗಳ ಕಡೆಗೆ ಮುಖ ಮಾಡಿದ ನಿದರ್ಶನಗಳೂ ಇದೆ. ಹೀಗಿದ್ದಾಗಲೇ ರಾಜ್ಯಕ್ಕೆ ಇನ್ನೊಂದು ರಣಜಿ ತಂಡಕ್ಕೆ ಅವಕಾಶ ಸಿಗಲಿ ಎನ್ನುವ ಅಭಿಪ್ರಾಯ ವ್ಯಾಪಕವಾಗಿದೆ.
ಪ್ರಸ್ತುತ ರಣಜಿ ಪಂದ್ಯಾವಳಿಯಲ್ಲಿ  ಗುಜರಾತ್ ರಾಜ್ಯದಿಂದ ಗುಜರಾತ್, ಬರೋಡಾ ಹಾಗೂ ಸೌರಾಷ್ಟ್ರ ತಂಡಗಳು ಆಡುತ್ತಿವೆ. ಮಹಾರಾಷ್ಟ್ರ ರಾಜ್ಯದಿಂದ ಮುಂಬೈ, ಮಹಾರಾಷ್ಟ್ರ ಹಾಗೂ ವಿದರ್ಭ ತಂಡಗಳು ಆಡುತ್ತಿವೆ. ತೆಲಂಗಾಣ ರಾಜ್ಯ ವಿಭಜನೆಯಾಗುವ ಮೊದಲು ಆಂಧ್ರದಲ್ಲಿ ಹೈದರಾಬಾದ್ ಹಾಗೂ ತೆಲಂಗಾಣ ತಂಡಗಳಿದ್ದವು. ಇದೀಗ ತೆಲಂಗಾಣ ಹಾಗೂ ಹೈದರಾಬಾದ್ ತಂಡಗಳಿವೆ. ರಣಜಿ ಟ್ರೋಫಿ ಆರಂಭದ ದಿನಗಳಿಂದಲೂ ಈ ತಂಡಗಳು ಅಸ್ತಿತ್ವದಲ್ಲಿದೆ. ಭಾಷಾವಾರು ಪ್ರಾಂತ್ಯ  ರಚನೆಗೂ ಮೊದಲು ಇದ್ದ ಪ್ರದೇಶಗಳನ್ನು ಪ್ರತಿನಿಧಿಸಿ ಈ ತಂಡಗಳು ಆಡುತ್ತಿವೆ. ಅದೇ ಮಾನದಂಡದಲ್ಲಿ ಕರ್ನಾಟಕಕ್ಕೆ ಇನ್ನೊಂದು ತಂಡ ರಚನೆಗೆ ಅವಕಾಶ ನೀಡಲಿ ಎನ್ನುವ ಅಭಿಪ್ರಾಯಗಳು ವ್ಯಾಪಕವಾಗಿದೆ.
ಕರ್ನಾಟಕದಲ್ಲಿ ಕ್ರಿಕೆಟ್ ಪ್ರತಿಭೆಗಳು ಸಾಕಷ್ಟಿವೆ. ಕನಿಷ್ಟ 3 ತಂಡಗಳನ್ನು ರಚನೆ ಮಾಡುವಷ್ಟು ಗುಣಮಟ್ಟದ ಕ್ರಿಕೆಟ್ ಆಟಗಾರರು ರಾಜ್ಯದಲ್ಲಿದ್ದಾರೆ. ಆದರೆ ರಣಜಿ ಸೇರಿದಂತೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ರಾಜ್ಯದಿಂದ ಒಂದೇ ತಂಡ ಆಡಬೇಕು. ಇದರಿಂದ ಹಲವು ಆಟಗಾರರು ಅವಕಾಶ ವಂಚಿತರಾಗುತ್ತಿದ್ದಾರೆ. ಈ ಕಾರಣದಿಂದ ಹುಬ್ಬಳ್ಳಿ, ಬೆಳಗಾವಿ ಅಥವಾ ಉತ್ತರ ಕರ್ನಾಟಕದ ಯಾವುದೇ ಪ್ರಮುಖ ಸ್ಥಳವನ್ನು ಕೇಂದ್ರವಾಗಿರಿಸಿಕೊಂಡು ಇನ್ನೊಂದು ತಂಡವನ್ನು ರಣಜಿಯಂತಹ ಪ್ರಮುಖ ಟೂರ್ನಿಗಳಿಗೆ ಕಳಿಸಬೇಕು ಎನ್ನುವ ಆಗ್ರಹ ಹೆಚ್ಚಿದೆ.
ಹುಬ್ಬಳ್ಳಿ, ಶಿವಮೊಗ್ಗಗಳಂತಹ ನಗರಗಳಲ್ಲಿ ಉತ್ತಮ ಕ್ರಿಕೆಟ್ ಮೈದಾನಗಳಿವೆ. ಉತ್ತರ ಕರ್ನಾಟಕದಲ್ಲಿ  ಗ್ರಾಮೀಣ ಭಾಗಗಳಲ್ಲಿ ಗುಣಮಟ್ಟದ ಕ್ರಿಕೆಟ್ ಕಲಿಗಳಿದ್ದಾರೆ. ಕರ್ನಾಟಕದಿಂದ ಇನ್ನೊಂದು ತಂಡವನ್ನು ಕಳಿಸಿದರೆ ಹಲವು ಗ್ರಾಮೀಣ ಪ್ರತಿಭೆಗಳನ್ನು ಪೋಷಿಸಿದಂತಾಗುತ್ತದೆ. ಅಲ್ಲದೇ ಇತರ ಭಾಗಗಳಿಗೂ ಹೆಚ್ಚಿನ ಪ್ರಾಾಮುಖ್ಯತೆ ನೀಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ ಗಮನ ಹರಿಸಲಿ ಎನ್ನುವುದು ಅಭಿಮಾನಿಗಳ ಆಶಯ.

ಪ್ರತಿಭೆಗಳ ವಲಸೆ
ಕರ್ನಾಟಕ ತಂಡದಲ್ಲಿ ಅವಕಾಶ ಸಿಗದೇ ಹಲವು ಆಟಗಾರರು ಬೇರೆ ಬೇರೆ ರಾಜ್ಯಗಳ ಕಡೆಗೆ ಮುಖ ಮಾಡಿದ್ದಾರೆ. ಕರ್ನಾಟಕ ತಂಡದ ಆರಂಬಿಕ ಆಟಗಾರನಾಗಿದ್ದ ಕೆ. ಬಿ. ಪವನ್ ಹಾಗೂ ಬೌಲರ್ ಅಬ್ರಾರ್ ಖಾಜಿ ಪ್ರಸ್ತುತ ರಣಜಿ ಪಂದ್ಯಾವಳಿಯಲ್ಲಿ ನಾಗಾಲ್ಯಾಂಡ್ ಪರ  ಆಡುತ್ತಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ರಾಬಿನ್ ಉತ್ತಪ್ಪ ಪ್ರಸ್ತುತ ಸೌರಾಷ್ಟ್ರ ತಂಡದ ಪರ ಆಡುತ್ತಿದ್ದಾರೆ. ಇವರಷ್ಟೇ ಅಲ್ಲದೇ ಇನ್ನೂ ಹಲವು ಕ್ರಿಕೆಟ್ ಆಟಗಾರರು ಬೇರೆ ಬೇರೆ ರಾಜ್ಯಗಳ ಕಡೆಗೆ ಮುಖ ಮಾಡಿದ್ದಾರೆ. ಆ ರಾಜ್ಯಗಳ ಪರ ಉತ್ತಮವಾಗಿ ಆಟವನ್ನಾಡುತ್ತಿದ್ದಾರೆ. ಹೀಗಿದ್ದಾಗ ಕರ್ನಾಟಕ ರಣಜಿಯಂತಹ ದೇಸೀಯ ಟೂರ್ನಿಗಳಲ್ಲಿ ಇನ್ನೊಂದು ತಂಡವನ್ನು ಕಳಿಸುವುದು ಉತ್ತಮ ಎನ್ನುವ ಅಭಿಮತ ಕ್ರಿಕೆಟ್ ಅಭಿಮಾನಿಗಳು ಹಾಗೂ ಪಂಡಿತರದ್ದಾಗಿದೆ.

No comments:

Post a Comment