Saturday, July 21, 2018

ಕಾಲೇಜ್ ಲೈಫ್ ಗೋಲ್ಡನ್ ಲೈಫ್

ಮತ್ತೊಮ್ಮೆ ಕಾಲೇಜ್ ದಿನಗಳ ಆರಂಭವಾಗುತ್ತಿದೆ. ಈಗ ತಾನೇ ಅರಳುತ್ತಿರುವ ಮನಸ್ಸುಗಳು ನೂರೆಂಟು ಕನಸುಗಳನ್ನು ಕಟ್ಟಕೊಂಡು, ಹೊಸ ಹುಮ್ಮಸ್ಸಿನಿಂದ ಕಾಲೇಜು ಕಡೆಗೆ ಮುಖ ಮಾಡುತ್ತಿವೆ.
ಜುಲೈ.. ತಂಪೆರೆವ ಮಳೆಯಲ್ಲಿ ಅದೆಷ್ಟೋ ಜನರ ಇನ್ನೊದು ಸುಂದರ ಬದುಕು ಆರಂಭಗೊಳ್ಳುತ್ತದೆ. ಈಗ ತಾನೇ ಪ್ರೌಢಶಾಲೆಗಳಲ್ಲಿ ಓದಿ, ಉತ್ತಮ ಅಂಕ ಗಳಿಸಿದ ಹದಿ ಹರೆಯದವರೆಲ್ಲ ಕಾಲೇಜಿನ ಕಡೆಗೆ ಮುಖ ಮಾಡುತ್ತಿದ್ದಾರೆ. ಪಿಯು ಮುಗಿಸಿದವರೋ, ಉನ್ನತ ಶಿಕ್ಷಣದ ಕಡೆಗೆ ಹೊರಳುತ್ತಿದ್ದಾರೆ. ಅದೇ ರೀತಿ ಕಾಲೇಜು ಜೀವನ ಮುಗಿಸಿದವರು, ಅತ್ತ ಕಾಲೇಜಿನ ನೆನಪುಗಳನ್ನು ಮರೆಯಲೂ ಆಗದೆ, ಇತ್ತ ತೆರೆದುಕೊಂಡ ಹೊಸ ಬದುಕಿಗೆ ಸುಲಭವಾಗಿ ಒಗ್ಗಿಕೊಳ್ಳಲೂ ಆಗದೇ ಒದ್ದಾಡುತ್ತಿದ್ದಾರೆ.
ಕಾಲೇಜ್ ಇಂತಹದ್ದೊದು ಶಬ್ದವೇ ಸಾಕು ಅದೆಷ್ಟೋ ಜನರಲ್ಲಿ ರೋಮಾಂಚನವನ್ನು ಉಂಟುಮಾಡುತ್ತದೆ. ಪ್ರೌಢಶಾಲೆ ತನಕ ತಡೆದಿಟ್ಟ ಭಾವನೆಗಳೆಲ್ಲ ರೆಕ್ಕೆ, ಪುಕ್ಕ ಕಟ್ಟಿಕೊಂಡು ಹಾರಾಟ ಮಾಡುವ ಸಮಯ ಅದು. ನೂರಾರು ಕನಸುಗಳು ಅರಳುವ, ಮನಸುಗಳು ಮಿಡಿಯುವ ದಿನಗಳು ಅವು.
ಕಾಲೇಜು ದಿನಗಳ ಬಗ್ಗೆ ಆಗ ತಾನೆ ಕಾಲೇಜಿಗೆ ಕಾಲಿರಿಸಿದವರ ಮನಸ್ಸಿನಲ್ಲಿ ಅದೆಷ್ಟು ಕನಸುಗಳಿರುತ್ತವೆಯೋ ಅದಕ್ಕಿತ ಹೆಚ್ಚಿನ ನೆನಪುಗಳು ಕಾಲೇಜು ಮುಗಿಸಿ ಮುನ್ನಡೆದವರಲ್ಲಿ ಇರುತ್ತದೆ. ಛೇ.. ಇನ್ನಷ್ಟು ದಿನ ಇರಬೇಕಾಗಿತ್ತು ಎಂದ ಹಪಾಹಪಿ ಪಟ್ಟವರು ಹಲವರು. ಕಾಲೇಜು ದಿನಗಳ ಮಧುರ ನೆನಪುಗಳನ್ನು ಸದಾ ಮನಸ್ಸಿನಲ್ಲಿ ಮೆಲುಕು ಹಾಕಿ ಕೊರಗಿದವರು ಇನ್ನೂ ಕೆಲವರು. ಕಾಲೇಜು ಮುಗಿಸಿ ಉದ್ಯೋಗ ಅರಸಿ, ಬದುಕಿನಲ್ಲಿ ನಿಧಾನವಾಗಿ ಹೆಜ್ಜೆ ಊರುತ್ತಿರುವವರೂ ಕೂಡ ಆ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾರೆ.
ಕಾಲೇಜು ದಿನಗಳಲ್ಲಿ ನಡೆಸಿದ ಪುಂಡರಪೂಟುಗಳು ಯಾವಾಗಲೂ ಮಧುರವಾಗಿಯೇ ಇರುತ್ತವೆ. ಮೊಟ್ಟ ಮೊದಲ ದಿನ ಭಯದಿಂದಲೇ ಕಾಲೇಜು ಮೆಟ್ಟಿಲು ಹತ್ತಿದ್ದು, ಕಾಲೇಜಿನಲ್ಲಿ ಯಾವ ಕ್ಲಾಸು ಎಲ್ಲೆಲ್ಲಿದೆ, ಯಾರು ಯಾವ ವಿಷಯಗಳನ್ನು ಕಲಿಸುತ್ತಾರೆ ಎನ್ನುವುದು ಅರ್ಥವಾಗದೇ ಗೊಂದಲ ಪಟ್ಟುಕೊಂಡಿದ್ದು, ನೀವ್ ಫ್ರೆಷರ್ಸಾ... ಎಂದು ಗದರಿ ಕೇಳುವ ಸೀನಿಯರ್ಸ್ ಎದುರು ಭಯದಿಂದಲೇ ಉತ್ತರ ಹೇಳಿ, ಅವರು ಕೊಡುವ ಕೀಟಲೆಗೆ ಪಡಿಪಾಟಲು ಪಟ್ಟಿದ್ದು, ಕಾರಿಡಾರ್ನಲ್ಲಿ ಓಡಾಟ, ಯಾವುದೋ ಹುಡುಗಿಯ ಹಿಂದೆ ಬಿದ್ದು ಪ್ರೀತ್ಸೆ ಪ್ರೀತ್ಸೆ ಅಂದಿದ್ದು, ಗೆಳೆಯರ ಬಳಗವನ್ನು ಕಟ್ಟಿದ್ದು ಹೀಗೆ ಹತ್ತು ಹಲವು ರಸ ನಿಮಿಷಗಳು ನೆನಪಾಗಿ ಮನಸ್ಸಿನ ಸಂಭ್ರಮಕ್ಕೆ ಕಾರಣವಾಗುತ್ತವೆ.
 
ಮೊದಲ ದಿನ
ಕಾಲೇಜು ಮೊದಲ ದಿನ ಪ್ರತಿಯೊಬ್ಬರಲ್ಲೂ ನೆನಪಿನಲ್ಲಿ ಸದಾ ಉಳಿಯುತ್ತದೆ. ಕಾಲೇಜು ಹೇಗೋ, ಉಪನ್ಯಾಾಸಕರು ಹೇಗೋ ಏನೋ, ಯಾವ ಯಾವ ಕ್ಲಾಸುಗಳು ಎಲ್ಲೆಲ್ಲಿದೆಯೋ ಇಂತಹ ಹಲವು ಗೊಂದಲ, ಭಯ, ದುಗುಡದ ನಡುವೆ ಮೊದಲ ದಿನ ಚಿರಸ್ಥಾಯಿಯಾಗಿ ಉಳಿದುಬಿಡುತ್ತದೆ. ಯಾರ ಬಳಿ ಏನಾದರೂ ಕೇಳಿದರೆ ಎಲ್ಲಿ ನಾವು ಕಳಪೆಯಾಗಿಬಿಡುತ್ತೇವೆಯೋ ಎನ್ನುವ ಕೀಳರಿಮೆ ಕೂಡ ಕಾಡುತ್ತದೆ. ಕಾಲೇಜು ನೋಟಿಸ್ ಬೋರ್ಡಿನಲ್ಲಿ ಹಾಕಿದ ಟೈಂ ಟೇಬಲ್ ಅರ್ಥವಾಗದೇ ಪೇಚಾಡುವಂತಾಗುತ್ತದೆ. ಪ್ರತಿ ತರಗತಿಗಳ ನಡುವಿನ ಸೈಕಲ್ ಗ್ಯಾಪಲ್ಲಿ, ಕ್ಲಾಸ್ ರೂಮುಗಳನ್ನು ಹುಡುಕಿ ಹೋಗುವಾಗಿನ ಗಲಿಬಿಲಿ ಇವೆಲ್ಲ ಸದಾ ನೆನಪಿನಲ್ಲಿ ಉಳಿದುಬಿಡುತ್ತವೆ. ಇದರ ನಡುವೆಯೇ ಯಾರೋ ಚೆಂದದ ಹುಡುಗಿ ಕಣ್ಣಿಗೆ ಬಿದ್ದರೆ, ದೇವ್ರೇ.. ಈಕೆ ನಮ್ಮದೇ ಕ್ಲಾಸು.. ನಮ್ಮದೇ ಸೆಕ್ಷನ್ ಆಗಿರ್ಲಪ್ಪಾ ಎಂದು ಬೇಡಿಕೊಂಡಿದ್ದು.. ಅಪ್ಪಿತಪ್ಪಿ, ಯಾವುದಾದರೂ ಹುಡುಗಿ, ಈ ಕ್ಲಾಸ್ ಎಲ್ಲಿ ಬರುತ್ತೆ ಅಂತ ಕೇಳಿದರೆ, ಸ್ವರ್ಗವೇ ಕೈಗೆ ಸಿಕ್ಕಂತೆ ಮನಸ್ಸು ಹಸಿರಾದದ್ದೆಲ್ಲ ಕಾಲೇಜು ದಿನಗಳು ಮುಗಿದ ಎಷ್ಟೋ ವರ್ಷಗಳ ವರೆಗೂ ನೆನಪಿನಲ್ಲಿಯೇ ಇರುತ್ತವೆ ಬಿಡಿ.
 
ರ್ಯಾಗಿಂಗ್
ಕಾನೂನಿನ ಅನ್ವಯ ರ್ಯಾಗಿಂಗ್ ಎನ್ನುವುದು ಅಧಿಕೃತವಾಗಿ ನಿಷೇಧಕ್ಕೊಳಗಾಗಿ, ಶಿಕ್ಷಾರ್ಹ ಅಪರಾಧ ಎಂಬ ಪಟ್ಟ ಕಟ್ಟಿಕೊಂಡಿದ್ದರೂ, ಕಾಲೇಜಿನ ಮೊದ ಮೊದಲ ದಿನಗಳಲ್ಲಿ ಸೀನಿಯರ್ಸ್ ಕೊಡುವ ಪಡಿಪಾಟಲನ್ನು ಮರೆಯುವಂತೆಯೇ ಇಲ್ಲ. ಕೇಳಿದರೆ ಇದು ರ್ಯಾಗಿಂಗ್ ಅಲ್ಲ ಎನ್ನುವ ಸೀನಿಯರ್ ಮಂದಿ ಆಗ ತಾನೇ ಕಾಲೇಜಿಗೆ ಕಾಲಿಗೇ ಕಾಲಿರಿಸಿದವರಿಗೆ ನೀಡುವ ಕೀಟಲೆಗಳು ಒಂದೆರಡಲ್ಲ ಬಿಡಿ. ಸೀನಿಯರ್ಸ್ ಕಾಟಕ್ಕೆ ಹೊಸ ಹೈದರಿಗೆ ಕಾಲೇಜು ಸಾಕೋ ಸಾಕು ಅನ್ನಿಸಿ ಬಿಡುತ್ತವೆ. ಆದರೆ ಹೀಗೆ ಕೀಟಲೆ ಮಾಡಿ ಕಾಟ ಕೊಟ್ಟ ಸೀನಿಯರ್ಸ್ ಕೊನೆಗೆ ಜ್ಯೂನಿಯರ್ಸ್‌ಗಳಿಗೆ ಮಿತ್ರರಾಗುತ್ತಾರೆ. ಏನಾದರೂ ತೊಂದರೆಗಳು ಬಂದಾಗ ಜತೆಗೆ ನಿಲ್ಲುತ್ತಾರೆ.

ಮೊದಲ ಪ್ರೇಮ
ಯಾವುದೇ ವ್ಯಕ್ತಿಯ ಬದುಕಿನಲ್ಲಿ ಮೊಟ್ಟ ಮೊದಲ ಪೀತಿ ಅರಳುವುದು ಕಾಲೇಜು ದಿನಗಳಲ್ಲಿಯೇ. ಒನ್ ಸೈಡ್ ಇರಲಿ, ಎರಡೂ ಸೈಡ್ ಇರಲಿ, ಆ ದಿನಗಳಲ್ಲಿ ಪ್ರೀತಿ ಅರಳಿ ಹಸಿರಾದ ನೆನಪುಗಳನ್ನು ಕಟ್ಟಿಕೊಡುತ್ತವೆ. ಕಾಲೇಜು ದಿನಗಳ ಪ್ರೀತಿ ಹಲವು ಸಂದರ್ಭಗಳಲ್ಲಿ ಕಾಲೇಜಿನಲ್ಲಿಯೇ ಅಂತ್ಯವಾದ ನಿದರ್ಶನಗಳಿವೆ. ಇನ್ನೂ ಹತ್ತು-ಹಲವು ಪ್ರೇಮ ಕಥಾನಕಗಳು ಬದುಕಿನ ಜತೆಗೂಡುತ್ತವೆ. ಇನ್ನು ಪ್ರೇಮ ವೈಲ್ಯವಾದರಂತೂ ಅದರ ಗಾಯ ಸದಾ ಶಾಶ್ವತ ಎಂಬಂತಾಗುತ್ತದೆ.
 
ಕಾಲೇಜು ಚುನಾವಣೆ
ಬಹುತೇಕ ಕಾಲೇಜುಗಳಲ್ಲಿ ಚುನಾವಣೆಗಳು ನಡೆದೇ ಇರುತ್ತವೆ. ಹಲವರು ಗೆದ್ದಿದ್ದೂ, ಮತ್ತೆ ಹಲವರು ಸೋತಿದ್ದೂ, ಸೋತಿದ್ದನ್ನು ಮನಸ್ಸಿಗೆ ಹಚ್ಚಿಕೊಂಡಿದ್ದೂ, ಗೆದ್ದಿದ್ದನ್ನು ಬದುಕಿನ ಯಾವುದೋ ಗೆಲುವು ಎಂಬಂತೆ ಸಂಭ್ರಮಿಸಿದ್ದೂ ಇದೆ. ಚುನಾವಣೆಯ ಗೆಲುವಿಗಾಗಿಯೇ ಮಾಡಿದ ಗಿಮಿಕ್ಕುಗಳು, ರಾಜಕಾರಣಿಗಳನ್ನೂ ಮೀರಿಸಿದಂತೆ ಮಾಡಿದ ಭಾಷಣಗಳನ್ನು ಮರೆಯಲಾದೀತೆ?
 
ಹೀರೋ ಆಗೋಕೆ ಹೋಗಿ ಸ್ಟ್ರೈಕ್
ಕಾಲೇಜು ದಿನಗಳಲ್ಲಿ ಪ್ರತಿಯೊಬ್ಬರಿಗೂ ಹೀರೋ ಆಗಿ ಮೆರೆಯಬೇಕು, ತಾನು ಎಲ್ಲರಿಗೂ ನಾಯಕ ಎನ್ನಿಸಿಕೊಳ್ಳಬೇಕು ಎಂಬ ಕನಸು ಇದ್ದೇ ಇರುತ್ತದೆ. ಇದಕ್ಕಾಗಿ ಏನೇನೋ ಕಸರತ್ತುಗಳನ್ನು ಮಾಡಿಯೇ ಇರುತ್ತಾರೆ. ಇದರಲ್ಲಿ ಪ್ರಮುಖವಾಗಿ ಕಾಲೇಜ್ ಸ್ಟ್ರೈಕ್ ಎಂಬುದು ಹೀರೋಗಿರಿ ತೋರಿಸಿಕೊಳ್ಳುವ ಮುಖ್ಯ ಮಾರ್ಗವಾಗುತ್ತದೆ. ಹೀಗಾಗಿ ಸೆಮಿಸ್ಟರೋ, ಕಾಲೇಜು ಫೀಸೋ, ಸಬ್ಜೆಕಟ್ಗಳೋ, ಇನ್ಯಾವುದೋ ಸಮಸ್ಯೆಗಳನ್ನೋ ಎದುರಿಟ್ಟುಕೊಂಡು ಸ್ಟ್ರೈಕ್ ಮಾಡಿ ಪ್ರಸಿದ್ಧಿಗೆ ಬರಲು ಯತ್ನಿಸುತ್ತಾರೆ. ಇಂತಹ ಸ್ಟ್ರೈಕುಗಳು ವಿದ್ಯಾರ್ಥಿ ಬದುಕಿನಲ್ಲಿ ಮುಂದೆ ಪ್ಲಸ್ ಕೂಡ ಆಗಬಹುದು, ಮೈನಸ್ ಕೂಡ ಆಗಬಹುದು.
 
ಗಲಾಟೆ
ಕಾಲೇಜ್ ಎಂದ ಮೇಲೆ ಗಲಾಟೆ ಸರ್ವೇ ಸಾಮಾನ್ಯ. ಯಾವ್ಯಾವುದೋ ಕಾರಣಗಳಿಗಾಗಿ ಗಲಾಟೆ ಜಗಳ, ಹೊಡೆದಾಟಗಳು ನಡೆದೇ ಇರುತ್ತವೆ. ಕೆಲವೊಮ್ಮೆ ಕ್ಷುಲ್ಲಕ ಕಾರಣಗಳಿಂದಾಗಿ ಹುಟ್ಟಿಕೊಳ್ಳುವ ಜಗಳಗಳು ಹೊಡೆದಾಟದಲ್ಲಿ ಅಂತ್ಯಗೊಂಡಿದ್ದೂ ಇದೆ. ಕಾಲೇಜು ಜೀವನದ ಹಸಿ ಹಸಿ ನೆನಪುಗಳಲ್ಲಿ ಈ ಹೊಡೆದಾಟಗಳೂ ಪ್ರಮುಖವಾಗುತ್ತವೆ. ಕೆಲವೊಮ್ಮೆ ಈ ಹೊಡೆದಾಟಗಳಿಂದಲೇ ಬದುಕು ಅಂತ್ಯಗೊಳ್ಳುವುದು ಅಥವಾ ಯಾವುದೋ ತಿರುವು ಪಡೆದಿದ್ದೂ ಇದೆ. ಆದರೆ ಕಾಲೇಜು ದಿನಗಳಲ್ಲಿ ನಡೆಸಿದ ಗಲಾಟೆ, ಹೊಡೆದಾಟಗಳು ಸದಾ ನೆನಪಿನಲ್ಲಿ ಉಳಿದು ಬಿಡುತ್ತವೆ.
 
ಕ್ಲಾಸ್ ಬಂಕ್
ಕಾಲೇಜು ಅಂದ ಮೇಲೆ ಕ್ಲಾಸ್ ಬಂಕ್ ಮಾಡದಿದ್ದರೆ ಹೇಗೆ? ಮೊದಲ ಕ್ಲಾಸ್, ಮಧ್ಯದಲ್ಲಿ ಗ್ಯಾಪಲ್ಲಿ ಇನ್ಯಾವುದೋ ಕ್ಲಾಸ್, ಕೊನೆಯ ತರಗತಿ ಇರಬಹುದು ಹೀಗೆ ಕ್ಲಾಸ್ ಬಂಕ್ ಸಹಜ ಎಂಬಂತಾಗಿದೆ. ತರಗತಿ ತಪ್ಪಿಸಿ ಸಿನೆಮಾಕ್ಕೆ ಹೋಗುವುದೋ, ಇನ್ನೆಲ್ಲೋ ಅಡ್ಡಾಡುವುದೋ ಸಹಜ ಎಂಬಂತಾಗಿದೆ. ಎಂತಹ ವಿದ್ಯಾರ್ಥಿಯಾದರೂ ಕನಿಷ್ಟ ಒಂದಾದರೂ ಕ್ಲಾಸು ತಪ್ಪಿಸಿಯೇ ಇರುತ್ತಾನೆ. ವಿನಾಕಾರಣ ಕ್ಲಾಸಿಗೆ ಚಕ್ಕರ್ ಹೊಡೆಯುವದೂ ಕಾಲೇಜಿನ ರಸಘಳಿಗೆಗಳಲ್ಲಿ ಒಂದು.
 
ಗೆಳೆಯರ ಬಳಗ
ಕಾಲೇಜೆಂದ ಮೇಲೆ ಗೆಳೆಯರ ಬಳಗ ಇದ್ದೇ ಇರುತ್ತದೆ. ಕಾಲೇಜಿಗೆ ಕಾಲಿಟ್ಟ ದಿನಗಳಲ್ಲಿ ಹೊಸ ಹೊಸ ಗೆಳೆಯರನ್ನು ಮಾಡಿಕೊಳ್ಳುವುದು ಸಹಜ. ಇಬ್ಬರೋ, ಮೂವರೋ ಅಥವಾ ಹಲವಾರು ಜನರೋ ಜತೆ ಸೇರಿ ಬಳಗ ಕಟ್ಟಿಕೊಳ್ಳುತ್ತಾರೆ. ಒಟ್ಟಿಗೆ ಕ್ಲಾಸಿಗೆ ಹೋಗುತ್ತಾರೆ. ಜತೆಯಾಗಿ ಸಿನಿಮಾ, ಹಾಡು, ಹರಟೆ, ಕೀಟಲೆ, ಕಾರಿಡಾರ್ ಸುತ್ತಾಟ ಹೀಗೆ ಹಲವು ಕೆಲಸಗಳನ್ನು ಮಾಡುತ್ತಾರೆ. ಜೀವಮಾನದ ಜತೆಗಾರರಂತೆ ಕಲೆಯುತ್ತಾರೆ. ನಲಿಯುತ್ತಾರೆ. ಈ ಗೆಳೆಯರ ಬಳಕ ಅನೇಕ ಸಂದರ್ಭಗಳಲ್ಲಿ ಕಾಲೇಜು ಮುಗಿದ ನಂತರವೂ ಪದೇ ಪದೆ ಸೇರಿಯೂ ಸೇರುತ್ತಾರೆ.
 
ಅಟೆಂಡೆನ್ಸ್ ಶಾರ್ಟೇಜ್
ಮಾಸ್ ಬಂಕು, ಕ್ಲಾಸ್ ಬಂಕಿನಿಂದಾಗಿ ಅಟೆಂಡೆನ್ಸ್ ಶಾರ್ಟೇಜ್ ಸದಾ ಕಾಲ ಕಾಡುತ್ತದೆ. ಬೋರಾಗುವ ವಿಷಯದ ತರಗತಿಗೋ, ಅಥವಾ ಇನ್ಯಾವುದೋ ಕಾರಣದಿಂದ ತರಗತಿಗೆ ಹೋಗದೇ ತಪ್ಪಿಸಿಕೊಂಡ ಪರಿಣಾಮ ಅಟೆಂಡೆನ್ಸ್ ಶಾರ್ಟೇಜ್ ಬಂದೇ ಬರುತ್ತದೆ. ಪರೀಕ್ಷೆ ಸಂದರ್ಭದಲ್ಲಿ ಅಟೆಂಡೆನ್ಸ್ ಕಡಿಮೆ ಇರುವ ಕಾರಣದಿಂದಲೇ ಹಾಲ್ ಟಿಕೆಟ್ ನೀಡಲಾರೆ ಎನ್ನುವ ಪ್ರಿನ್ಸಿಪಾಲರ ಮುನಿಸು, ಸರ್ ಪ್ಲೀಸ್ ಅಟೆಂಡೆನ್ಸ್ ಕೊಡಿ ಎಂದು ಉಪನ್ಯಾಸಕರ ಬಳಿ ದುಂಬಾಲು ಬೀಳುವ ವಿದ್ಯಾರ್ಥಿ ಬಳಗ ಇವೆಲ್ಲ ಕಾಲೇಜು ದಿನಗಳ ಹಸಿ ಹಸಿ ನೆನಪುಗಳು.
 
ಸಾಂಸ್ಕೃತಿಕ ಕಾರ್ಯಕ್ರಮ
ಕಾಲೇಜಿನಲ್ಲಿ ವಾರ್ಷಿಕೋತ್ಸವ ನಡೆದೇ ಇರುತ್ತದೆ. ಅದರಲ್ಲಿ ಹಾಡೋ, ನೃತ್ಯವೋ, ನಾಟಕವೋ ಹೀಗೆ ಯಾವುದೋ ಒಂದು ವಿಶಿಷ್ಟ ಕಾರ್ಯಕ್ರಮ ನೀಡುವುದು ವಿದ್ಯಾರ್ಥಿ ಬದುಕಿನ ವಿಶಿಷ್ಟ ಘಳಿಗೆಗಳಲ್ಲಿ ಒಂದು. ಇಷ್ಟೇ ಅಲ್ಲ, ವಿಶ್ವವಿದ್ಯಾಲಯದ ಮಟ್ಟದಲ್ಲಿ ನಡೆಯುವ ಸಾಂಸ್ಕೃತಿಕ ಸ್ಪರ್ಧೆಗಳು, ದೈಹಿಕ ಕ್ರೀಡಾಕೂಟದಲ್ಲಿ ಪಾಲ್ಗೊಡು ಬಹುಮಾನಗಳನ್ನು ಗಳಿಸುವುದು ಕಾಲೇಜು ದಿನಗಳ ಮಹತ್ತರ ಘಟನೆಗಳಲ್ಲಿ ಒಂದು.
 

Thursday, July 19, 2018

ಮಳೆಯ ನಡುವೆ ಮನಸ್ಸಿಗೆ ಹಬ್ಬ

ಮಳೆ ಹಬ್ಬ : ಪರಿಸರ ಪೂರಕ ಪ್ರವಾಸೋದ್ಯಮಕ್ಕೆ ಮುನ್ನುಡಿ

ಜಿಟಿ ಜಿಟಿ ಮಳೆಯಲ್ಲಿ ನೆನೆಯುವ ಸಂಭ್ರಮ, ಅರಲು ಗದ್ದೆಯಲ್ಲಿ ಕುಣಿಯುತ್ತ, ಆಟವಾಡುತ್ತ ಎಲ್ಲರೊಳಗೊಂದಾಗಿ ಸಂತೋಷವನ್ನು ಅನುಭವಿಸುತ್ತ, ಕಾಡು, ಹಸಿರು, ಉಂಬಳಗಳ ರಾಶಿಯ ನಡುವೆ ಕಳೆದು ಹೋಗುತ್ತ, ದೂರದ ಬೆಟ್ಟದ ಮೇಲೆಬಂದು ಚುಂಬಿಸುವ ಮೋಡಗಳಿಗೆ ಹಾಯ್ ಹೇಳುತ್ತ, ಹತ್ತಿರದ ಜಲಧಾರೆ, ತೊರೆಯಲ್ಲಿ ಆಡುತ್ತ ದಿನ ಕಳೆದರೆ ಸ್ವರ್ಗಕ್ಕೆ ಮೂರೇ ಗೇಣು ಎನ್ನುವ ಭಾವನೆ. ಇಂತಹ ಎಲ್ಲ ಅನುಭವಗಳ ಬುತ್ತಿಯನ್ನು ನಗರವಾಸಿಗಳಿಗೆ ಕಟ್ಟಿಕೊಟ್ಟಿದ್ದೇ ಮಳೆ ಹಬ್ಬ.
ಮಳೆ ಹಬ್ಬ ಎನ್ನುವ ವಿನೂತನ ಕಲ್ಪನೆಯ, ಪರಿಸರ ಸ್ನೇಹಿ ಪ್ರವಾಸ ಅಭಿಯಾನ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ವಾನಳ್ಳಿಯಲ್ಲಿ ಆರಂಭಗೊಂಡಿತು. ಈ ಮಳೆ ಹಬ್ಬದಲ್ಲಿ ಎಲ್ಲವೂ ಇತ್ತು. ಹಸಿರು, ಸ್ನೇಹ, ಸಮ್ಮಿಲನ, ಬೆಟ್ಟ, ಕಾಡು, ಮಳೆ, ಜೀವಂತಿಕೆ, ಜಲಪಾತ, ಕ್ರಿಯಾಶೀಲತೆ, ಚಾರಣ ಹೀಗೆ ಹತ್ತು ಹಲವು ಅಅಂಶಗಳನ್ನು ಒಳಗೊಂಡಿದ್ದವು.
ದಿನವಿಡೀ ಎಡಬಿಡದೆ ಸುರಿಯುವ ಮುಂಗಾರು ಮಳೆ. ಹಸಿರು ಹೊತ್ತು, ಮೋಡಗಳನ್ನು ಮುತ್ತಿಕ್ಕಿ ನಗು ನಗುತ್ತಾ ಕಯ ಬೀಸಿ ಕರೆಯುವ ವೃಕ್ಷ ಸಂಕುಲಗಳು, ಜೀವೋತ್ಸಾಹವನ್ನು ಉದ್ದೀಪನಗೊಳಿಸುವ ಪುಟ್ಟ ಜಲಪಾತ, ಪುಟ್ಟ ಪುಟ್ಟದಾಗಿ ಇಣುಕುವ, ಪಾದ ತೊಳೆಯುವ ತೊರೆಗಳು. ಆಗಾಗ ಇಣುಕುವ ಸೂರ್ಯ, ಜತೆಗೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಮೂವತ್ತಕ್ಕೂ ಹೆಚ್ಚಿನ ಅತಿಥಿಗಳು.. ಮೊದಲ ಆವೃತ್ತಿಯ ಮಳೆ ಹಬ್ಬದ ಸಂಭ್ರಮವನ್ನು ನೂರ್ಮಡಿಸಿದ್ದು ಇಂತಹ ಹಲವು ಸಂಗತಿಗಳು.
ಪತ್ರಕರ್ತ ನಾಗರಾಜ ವೈದ್ಯ ಆಯೋಜಿಸಿದ್ದ ಈ ಮಳೆಹಬ್ಬ ಹಲವು ಹೊಸ ಸಾಧ್ಯತೆಗಳನ್ನು ತೆರೆದಿಡುವುದರ ಜತೆಗೆ ಅಭೂತಪೂರ್ವ ಯಶಸ್ಸು ಪಡೆಯಿತು. ರಾಜ್ಯದ ವಿವಿಧ ಪ್ರದೇಶಗಳಿಂದ ಬಂದ ೩೫ಕ್ಕೂ ಹೆಚ್ಚಿನ ಅತಿಥಿ ಅಭ್ಯಾಗತರು ಮಳೆ-ನಾಡಿನಲ್ಲಿ ಒಮದಾದರು. ಪ್ರಕೃತಿಯೊಳಗೆ ಮೈಮರೆತರು. ನಗರದ, ಧಾವಂತದ ಬದುಕನ್ನು ಎರಡು ದಿನಗಳ ಮಟ್ಟಿಗೆ ಮರೆತು ರಿಫ್ರೆಶ್ ಆದರು. ಮಲೆನಾಡಿನ ಆಹಾರ ಸಂಸ್ಕೃತಿ, ಜೀವನ ಕ್ರಮ ಹಾಗೂ ಪರಿಶುದ್ಧ ಪ್ರವಾಸೋದ್ಯಮದ ಸವಿಯನ್ನು ಮೈ-ಮನ ತುಂಬಿಕೊಂಡರು.

ಜಲಪಾತದಲ್ಲಿ ಸಾಹಸ:
ಜಲಪಾತ ವೀಕ್ಷಣೆಯ ಬಳಿಕ ದಾಂಡೇಲಿಯ ತಜ್ಞರ ಸಮ್ಮುಖದಲ್ಲಿ ರ್ಯಾಪ್ಟಿಂಗ್ ಕೂಡಾ ನಡೆಸಲಾಯಿತು. 25 ಕ್ಕೂ ಹೆಚ್ಚು ಜನ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು 200 ಅಡಿ ಎತ್ತರದ ಜಲಪಾತದಲ್ಲಿ ಜಾರಿಕೆ ಕಲ್ಲುಗಳ ಮೇಲಿಂದ ಇಳಿದು ಖುಷಿ ಪಟ್ಟರು. ಕಿರುತೆರೆ ನಿರ್ದೇಶಕ ರಾಮಚಂದ್ರ ವೈದ್ಯ ಇದರ ನೇತೃತ್ವ ವಹಿಸಿ ಎಲ್ಲರಿಗೂ ಮಾರ್ಗದರ್ಶನ ಮಾಡಿದರು.
ರೈತಾಪಿ ಕೆಲಸದ ಕಷ್ಟ ಸುಖದ ಅರಿವು:
ಕಾಯ್ರಕ್ರಮದ ಎರಡನೇ ದಿನ ಧೂಳಳ್ಳಿಯ ನಾರಾಯಣ ನಾಯ್ಕ ಅವರ ಹೊಲದಲ್ಲಿ ಕಂಬಳಿಕೊಪ್ಪೆ ಹೊದ್ದು ಗದ್ದೆ ಹೂಟಿ ಮಾಡುವ ಮೂಲಕ ಎಲ್ಲರೂ ಕೃಷಿ ಕೆಲಸದಲ್ಲಿ ತೊಡಗಿಕೊಂಡರು. ನಗರದಲ್ಲಿ ಕಂಪ್ಯೂಟರ್ ಕೀಲಿಮಣೆಯನ್ನು ಕುಟ್ಟುತ್ತಿದ್ದ ಕೈಗಳು ಗದ್ದೆಯಲ್ಲಿ ನೊಗವನ್ನು ಹಿಡಿದಿದ್ದವು, ಎತ್ತುಗಳ ಹಿಮದೆ ಹೈ ಹೈ ಎಂದರು. ಸ್ಥಳೀಯ ರೈತರ ಕಷ್ಟ ಸುಖಗಳನ್ನು ಆಲಿಸಿದರು. ಕೆಸರು ಗದ್ದೆಯಲ್ಲಿ ಕಬಡ್ಡಿ ಆಡಿ ನಲಿದರು. ಪರಸ್ಪರ ಕೆಸರೆರಚಿಕೊಂಡು ಸಂಭ್ರಮಿಸಿದ್ದಲ್ಲದೇ, ಅನೇಕರು ಐಟಿ ಕೆಲಸ ತೊರೆದು ಮತ್ತೆ ಕೃಷಿ ಜೀವನಕ್ಕೆ ಮರಳು ಬಗ್ಗೆ ತಮಗಿರುವ ಆಸಕ್ತಿಯನ್ನು ಹೇಳಿಕೊಂಡರು. ಈ ಎಲ್ಲ ಸಂಭ್ರಮದ ನಂತರ ಹಿರಿಯ ಕೃಷಿಕ ನಾರಾಯಣ ನಾಯ್ಕರಿಗೆ ಮಳೆಹಬ್ಬ ತಂಡದ ಪರವಾಗಿ ಗೌರವ ಸಮರ್ಪಿಸುವುದನ್ನು ಮರೆಯಲಿಲ್ಲ.
ಉಪಚಾರಕ್ಕೆ ಮನಸೋತ ಅತಿಥಿಗಳು:
ಮಲೆನಾಡಿನ ವಿಶೇಷ ಬೆಳಗಿನ ತಿಂಡಿ ನೀರ್ದೋಸೆ, ಜೇನು ತುಪ್ಪ, ರವೆರವೆ ತುಪ್ಪ, ಮಾವಿನ ಶೀಕರಣೆ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೇ ನಿಂತಿತು. ಮಲೆನಾಡಿನ ಸ್ಪೆಷಲ್ ಎಂದೇ ಕರೆಸಿಕೊಳ್ಳುವ ಹಲಸಿನ ಹಣ್ಣಿನ ಕಡುಬು, ಮನೆಯಲ್ಲೇ ತಯಾರಿಸಿದ ಕೊಬ್ಬರಿ ಎಣ್ಣೆ, ಉಪ್ಪಾಗೆ ಎಣ್ಣೆಯಲ್ಲಿ ಬೇಯಿಸಿದ ಅತ್ರಾಸ, ಗೆಣಸಲಕಿಳೆಯಲ್ಲಿ ಬೇಯಿಸಿದ ಕಾಯಿಕಡುಬು, ವಿವಿಧ ರೀತಿಯ ಕಟ್ನೆಗಳು, ತಂಬುಳಿ, ಭೂತ್ಗೊಜ್ಜು ಹೀಗೆ ಮಲೆನಾಡಿನದ್ದೇ ರಸಪಾಕಗಳು ಆಗಮಿಸಿದ ನಗರವಾಸಿಗಳನ್ನು ಖುಷಿಪಡಿಸಲು ಯಶಸ್ವಿಯಾಯಿತು. ವಾನಳ್ಳಿಯ ತವರುಮನೆಯ ಪಿಜಿ ಹೆಗಡೆ, ನಾಗವೇಣಿ ಹೆಗಡೆಯವರ ಕೈರುಚಿಗೆ ಪ್ರತಿಯೊಬ್ಬರೂ ಮೆಚ್ಚಿ ತಲೆದೂಗಿದರು.
ಆಟದ ಅಷ್ಟೇ ಅಲ್ಲ.. ಪಾಠವೂ..:
ಈ ಇಡೀ ಕಾರ್ಯಕ್ರಮದ ಗೆಲುವು ಇದ್ದಿದ್ದೇ ಆಟದ ಜತೆಗೆ ಪಾಟ ಎಂಬ ಪರಿಕಲ್ಪನೆಯಲ್ಲಿ. ಆಟ ಆಡಿಸುತ್ತಲೇ ಪರಿಸರದ ಪಾಠವನ್ನು, ಪ್ರಕೃತಿ ಪ್ರೇಮವನ್ನು ಮನವರಿಕೆ ಕಾಡಿಸುವಂತೆ ಕಾರ್ಯಕ್ರಮದ ರೂಪುರೇಷೆ ಸಿದ್ದಪಡಿಸಲಾಗಿತ್ತು ಎನ್ನುತ್ತಾರೆ ಆಯೋಜಕ ನಾಗರಾಜ ವೈದ್ಯ. ನಮ್ಮದೇ ನಾಡಿನ, ಈಗ ಗತಕಾಲವನ್ನು ಸೇರುತ್ತಿರುವ ಬುಗುರಿ, ಗಿಲ್ಲಿ-ದಾಂಡು ಆಟ, ಕಾಗದದ ದೋಣಿ ಮಾಡಿದ್ದು, ಹೊಡಸಲಿನಲ್ಲಿ ಚಳಿ ಕಾಯಿಸುತ್ತಾ ಗೇರುಬೀಜ ಸುಟ್ಟು ತಿಂದಿದ್ದು ಎಲ್ಲವೂ ಅತಿಥಿಗಳಿಗೆ ಹೊಸ ಅನುಭವ ನೀಡುವ ಜತೆಗೆ ಮಲೆನಾಡು ಹಳೆಯ ನೆನಪುಗಳನ್ನು ಮತ್ತೊಮ್ಮೆ ಕಣ್ಣೆಎದುರಿಗೆ ಕಟ್ಟಿಕೊಟ್ಟಿತು. ಇಷ್ಟೇ ಅಲ್ಲದೇ ಭೀಮತಾರಿಯಲ್ಲಿ ನೂರಾರು ಸೀಡ್ ಬಾಲ್ ಗಳ ಪ್ರಸರಣ ಮಾಡಿದ್ದು ವಿಶೇಷವಾಗಿತ್ತು. ಮುಂದಿನ ದಿನಗಳಲ್ಲಿ ಬೆಂಗಳೂರು, ಬಯಲು ಸೀಮೆ ಹಾಗೂ ಇನ್ನೂ ಅನೇಕ ಪ್ರದೇಶಗಳಲ್ಲಿ ಸಸಿ ನೆಡುವುದು, ಸೀಡ್ ಬಾಲ್ ಪ್ರಸರಣ ಮಾಡುವ ಮೂಲಕ ಪ್ರಕೃತಿಗೆ ತಮ್ಮಿಂದಾಗಬಹುದಾದ ಕಿರು ಸಹಾಯ ಮಾಡಲು ಮಳೆಹಬ್ಬದ ತಂಡ ನಿರ್ಧರಿಸಿತು.
ಮನರಂಜನೆ:
ಇದೇ ಸಂದರ್ಭದಲ್ಲಿ ರಂಗಾಯಣದ ಕಲಾವಿದ ಧನರಾಜ್ ಎಸ್ ಆರ್ ಅವರ ಮಿಮಿಕ್ರಿ, ಡಾನ್ಸ್ ಹಾಗೂ ಪ್ರಸನ್ನ ಜಾಜಿಗುಡ್ಡೆ, ಕಿರುತೆರೆ ಬರಹಗಾರ್ತಿ ಚೈತ್ರಿಕಾ ವೈದ್ಯ ಅವರ ಗಾಯನ ಎಲ್ಲರನ್ನೂ ಸೆಳೆಯುವಲ್ಲಿ ಯಶಸ್ವಿಯಾಯಿತು. ಪರಿಸರಸ್ನೇಹಿ, ಪರಿಸರ ಪೂರಕ ಎಲ್ಲ ಅಂಶಗಳನ್ನು ಹೊಂದಿದ್ದ ಮಳೆ ಹಬ್ಬ ಎಲ್ಲರ ಚಿತ್ತ ಭಿತ್ತಿಯಲ್ಲಿ ಅಚ್ಚಳಿಯದೇ ನಿಲ್ಲುವಲ್ಲಿ ಯಶಸ್ವಿಯಾಯಿತು. ಮತ್ತೊಮ್ಮೆ, ಮಗದೊಮ್ಮೆ ಮಳೆಹಬ್ಬದಲ್ಲಿ ಒಂದಾಗುವ ಭಾವನೆಯನ್ನು ಪ್ರತಿಯೊಬ್ಬರಲ್ಲಿಯೂ ಹುಟ್ಟು ಹಾಕುವಲ್ಲಿ ಯಶಸ್ಸನ್ನು ಕಂಡಿತು.
 -------
ಪ್ಲಾಸ್ಟಿಕ್ ಮುಕ್ತ ಮಳೆಎಹಬ್ಬ
ಮಳೆ ಎಂಬ ಕಲ್ಪನೆಯೇ ಅಷ್ಟು ಸೊಗಸು. ಮಳೆಯ ಹೆಸರ ಪ್ರವಾಸಕ್ಕೆ ಇನ್ನಷ್ಟು ಪುಷ್ಟಿ ಕೊಡುವ ಜತೆಗೆ ಪ್ಲಾಸ್ಟಿಕ್ ಮುಕ್ತ ಪರಿಶುದ್ಧ ಪ್ರವಾಸೋದ್ಯಮದ ಆಶಯದೊಂದಿಗೆ ಹಮ್ಮಿಕೊಂಡಿದ್ದ ಮಳೆಹಬ್ಬ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ಊರು ಮರೆತು ವರ್ಷವಿಡಿ ಕೆಲಸದಲ್ಲಿ ನಿರತರಾದವರಿಗೆ ನಿರುಮ್ಮಳತೆ ನೀಡುವ ಜತೆಗೆ ಜಾಗೃತಿ ಮೂಡಿಸುವಲ್ಲಿಯೂ ಯಶಸ್ವಿಯಾಗಿದೆ.
- ನಾಗರಾಜ ವೈದ್ಯ,
ಪತ್ರಕರ್ತ, ಮಳೆಹಬ್ಬ ಆಯೋಜಕ
 


Wednesday, July 11, 2018

ಕಣ್ಣ ಮಿಂಚು



ನಿನ್ನ ಕಣ್ಣಲೇನೋ ಮಿಂಚು
ನೋಡಿದಾಮನ ಬೆಳಗಲೇ?
ಹೊಳೆವ ಕಂಗಳ ಆಳದಾಳಕೆ
ನಾನು ಕೊಂಚ ಇಣುಕಲೇ?

ಕಪ್ಪು ಕಂಗಳು ಅರಳಿ ನಗುತಿವೆ
ನಲಿವ ನೆಚ್ಚನು ಹಚ್ಚಿವೆ
ಸ್ವಚ್ಛ ಮನಸಿನ ಮೆಚ್ಚು ನೋಟವು
ಒಲವ ಹಣತೆಯ ಹಚ್ಚಿವೆ |

ನಿನ್ನ ಕಂಗಳು ನಗುತಲಿರಲಿ
ಜಗವು ಎಂದಿಗು ಮೆಚ್ಚಲಿ
ನೀರು ಆರಲಿ, ನಲಿವು ಮೆರೆಯಲಿ
ನೋವು ದೂರದಿ ಉಳಿಯಲಿ |

Wednesday, July 4, 2018

ನಾನು ಓದಿದ ಪುಸ್ತಕಗಳು -3 (ಕೇಪಿನ ಡಬ್ಬಿ)

ಕೇಪಿನ ಡಬ್ಬಿ

ಮತ್ತೊಮ್ಮೆ ಕೇಪಿನ ಡಬ್ಬಿ ಪುಸ್ತಕವನ್ನು ಓದಿದೆ.
ಹಿಂದೆ ಓದಿದಾಗ ಅನ್ನಿಸಿದ್ದ ಭಾವನೆಗಳೇ ಬೇರೆ. ಈ ಅನ್ನಿಸುತ್ತಿದ್ದ ಭಾವನೆಗಳೇ ಬೇರೆ.
ಹಿಂದೆ ಪದ್ಮನಾಭನ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಪದ್ಮನಾಭನ ಅಮ್ಮ ನನಗೆ ಕೇಪಿನ ಡಬ್ಬಿ ಪುಸ್ತಕದ ಕೇಪಿನ ಡಬ್ಬಿ ಕಥೆ ಸೇರಿದಂತೆ ಇನ್ನೊಂದೆರಡು ಕಥೆಗಳನ್ನು ಆರಿಸಿ ತಕ್ಷಣದಲ್ಲಿ ಓದಿ ಅಭಿಪ್ರಾಯ ಹೇಳು ಅಂದಿದ್ದರು. ನಾನು ಓದಿ ಏನೋ ಹೇಳಿದ್ದೆ. ನಂತರ ನನ್ನ ಅಮ್ಮ(ಅಮ್ಮ ಹಾಗೂ ಪದ್ಮನಾಭನ ಅಮ್ಮ ನೆಂಟರು ಹಾಗೂ ಬಾಲ್ಯದ ಗೆಳತಿಯರು) ಆ ಕಥೆಗಳನ್ನು ಓದಿ ಕಣ್ಣಂಚಲ್ಲಿ ನೀರು ತುಂಬಿಕೊಂಡಿದ್ದರು. ಅಷ್ಟೇ ಅಲ್ಲದೇ ತಮ್ಮದೂ ಬಾಲ್ಯ ನೆನಪಾಯಿತು ಎಂದಿದ್ದರು.

ಬಾಲ್ಯದಿಂದ ನೆಂಟನಾಗಿ, ದೋಸ್ತನಾಗಿ, ಜತೆ ಜತೆಗೆ ಬಳೆದವರು ನಾನು ಹಾಗೂ ಪದ್ಮನಾಭ ಭಟ್ಟ ಶೇವ್ಕಾರ್. ಆತ್ಮೀಯತೆಯ ಪದ್ದು. ನಾನು, ಪದ್ಮನಾಭ, ಪ್ರತಿಭಾ ಹಾಗೂ ನನ್ನ ತಂಗಿ ಸುಪರ್ಣ ಸೇರಿಕೊಂಡು ಮಾಡಿದ ಪುಂಡರಪೂಟು ಸಾಕಷ್ಟಿದೆ ಬಿಡಿ. ಹೊನ್ನೆಬೇಣ, ಕಪ್ಪು ಬಣ್ಣದ ಡಾಬರ್ ಮನ್ ನಾಯಿ (ಅದಕ್ಕೆ ಪದ್ಮನಾಭ ಇಟ್ಟ ಹೆಸರು ಡಾಬರ್ ಕುನ್ನಿ) ಹೊಟ್ಟೆಬಿರಿಯುವಂತೆ ತಿಂದ ಹಲಸಿನ ಹಣ್ಣು, ಕೊಂಕಿಕೋಟೆಗೆ ಹೋಗಬೇಕೆಂಬ ಅಂದಿನಿಂದ ಇಂದಿನವರೆಗೂ ಪೂರ್ಣಗೊಳ್ಳದ ನಮ್ಮ ಯೋಜನೆ, ಹೊನ್ನೆಬೇಣಕ್ಕೆ ಹೋದಾಗಲೆಲ್ಲ ಹತ್ತಿಳಿಯುವ ಜೋಗಿಕಲ್ಲು, ಪದ್ದುನ ಮನೆಯ ಬಳಿಯೇ ಅಗಲವಾಗಿ ಹರಿಯುವ ಆದರೆ ನೀರಿನ ಹರಿವು ಕಡಿಮೆ ಇರುವ ಗಂಗಾವಳಿ ನದಿ, ಪ್ರಭಾವತಿ ಅತ್ತೆ ಹಾಗೂ ನಾರಾಯಣ ಮಾವರ ಅಕ್ಕರೆ, ವಿನಯ ಇದ್ದಲ್ಲಿ ಕಿಲಾಡಿ ಜೋರು, ಎಂತಾರೂ ಭಾನಗಡಿ ಮಾಡಡಿ ಎನ್ನುವ ನಾರಾಯಣ ಮಾವನ ಎಚ್ಚರಿಕೆ.. ಆಹಾ... ಇವೆಲ್ಲ ನಮ್ಮ ಬಾಲ್ಯದ ನೆನಪುಗಳು. ನಾರಾಯಣ ಮಾವನ ಸೈಕಲ್ಲಿನಲ್ಲಿ ಒಳಪೆಡ್ಲು ಕಲ್ತಿದ್ದು, ಗುಳ್ಳಾಪುರದಲ್ಲಿ ನಡೆದಿದ್ದ ಯಲ್ಲಾಪುರ ಡಿಗ್ರಿ ಕಾಲೇಜಿನ ಎನ್ನೆಸ್ಸೆಸ್ ಕ್ಯಾಂಪಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಟ್ಟ ರಾತ್ರಿಯಲ್ಲಿ ನಕ್ಷತ್ರಗಳನ್ನು ನೋಡುತ್ತ ಹೊನ್ನೆಬೇಣದ ದಾರಿಯಲ್ಲಿ ನಡೆದು ಬಂದಿದ್ದು, ಪಿಯು ದಿನಗಳ ನಮ್ಮ ಒನ್ ಸೈಡ್ ಲವ್ ಹೆಸರನ್ನು ಜೋಗಿಕಲ್ಲಿನ ಯಾವುದೋ ಮರದ ಮೇಲೆ ಕೆತ್ತಿದ್ದು ಇತ್ಯಾದಿಗಳೆಲ್ಲ ನೆನಪಾಗುತ್ತಿರುವಂತಹ ಸಂಗತಿಗಳು. ಪುಸ್ತಕದ ಬಗ್ಗೆ ಬರೆಯಹೊರಟವನು ಬಾಲ್ಯದ ಬಗ್ಗೆ ಯಾಕೆ ಬರೆಯುತ್ತಿದ್ದಾನೆ ಎಂದುಕೊಳ್ಳಬೇಡಿ. ಕೇಪಿನ ಡಬ್ಬಿ ನಮ್ಮ ಹಲವಾರು ಬಾಲ್ಯದ ನೆನಪುಗಳನ್ನು ಕಟ್ಟಿಕೊಟ್ಟಿದೆ.
ಕೇಪಿನ ಡಬ್ಬಿ ಕಥಾ ಸಂಕಲನವನ್ನು ಓದಿದಂತೆಲ್ಲ ನಮ್ಮ ಅನೇಕ ನೆನಪುಗಳು ಮರುಕಳಿಸುತ್ತವೆ. ಯಾವುದೋ ಪಾತ್ರಗಳ, ಯಾವುದೋ ಸನ್ನಿವೇಶಗಳಲ್ಲಿ ನಾವಿದ್ದೇವಾ ಅನ್ನಿಸುತ್ತದೆ. ಕೆಲವು ಸಾರಿ ಬಾಲ್ಯದಲ್ಲಿ ನಾವೇ ಆಡಿದ ಮಾತುಗಳನ್ನು ಪದ್ಮನಾಭ ಇನ್ಯಾವುದೋ ಪಾತ್ರಗಳ ಮೂಲಕ ಆಡಿಸಿದ್ದಾರಾ ಎನ್ನಿಸುತ್ತದೆ. ಇಂತಹ ಕಾರಣಗಳಿಂದಲೇ ನನಗೆ ಕೇಪಿನ ಡಬ್ಬಿ ಮತ್ತಷ್ಟು ಆಪ್ತವಾಗಿದ್ದು.
ಪದ್ಮನಾಭ ಬರವಣಿಗೆ ಮೂಲಕ ನನಗೆ ಪರಿಚಯವಾಗಿದ್ದೂ ಬಾಲ್ಯದಲ್ಲೇ. ನಾನು ಪಿಯು ಓದುತ್ತಿದ್ದ ಸಂದರ್ಭದಲ್ಲಿ ಪದ್ಮನಾಭ ಹೈಸ್ಕೂಲು. ಆತ ಪತ್ರಗಳಲ್ಲಿ ನನಗೆ ಕಥೆಗಳನ್ನು ಕಳಿಸುತ್ತಿದ್ದ. ಪತ್ರಗಳಲ್ಲಿಯೇ ಒಂದು ಪೇಪರ್ ಹೊರತರುತ್ತಿದ್ದೆವು. ನಾನು ಬರೆಯುವ ಪತ್ರ ಯಾವುದೋ ಹೆಸರಿನಲ್ಲಿ ಅವನಿಗೆ ತಲುಪಿದರೆ, `ಸಿಡಿಲು` ಎನ್ನುವ ಹೆಸರಿನಲ್ಲಿ ಆತನಿಂದ ಬರುತ್ತಿದ್ದ ಪತ್ರ ಪುಸ್ತಕದ ಮುನ್ನುಡಿಯಲ್ಲಿ ಉಲ್ಲೇಖವಾಗಿರುವ `ಕೊಂಕಿ ದುರ್ಗದ ರಹಸ್ಯ' ಎಂಬ ಕಾದಂಬರಿಯನ್ನು ಒಳಗೊಂಡಿತ್ತು. ಆದರೆ ಇದ್ದಕ್ಕಿದ್ದಂತೆ ನಮ್ಮ ದಾರಿಗಳು ಬದಲಾದವು. ನಾವು ಪತ್ರಗಳನ್ನು ಬರೆದುಕೊಳ್ಳುವುದನ್ನು ನಿಲ್ಲಿಸಿದೆವು. ಪದ್ಮನಾಭ ಒಂದಷ್ಟು ವರ್ಷಗಳ ಕಾಲ ನಾಪತ್ತೆಯಾದ. ನಾನು ಅವನನ್ನು ಮರೆತೆ.
ನಾನು ಬಾಲ್ಯದಿಂದಲೂ ಕಂಡ, ಪರಮ ವಾಚಾಳಿ ಪದ್ಮನಾಭ ಈಗ ಬದಲಾಗಿದ್ದಾನೆ. ದಿನದಿಂದ ದಿನಕ್ಕೆ ಬೆರಗು ಮೂಡಿಸುತ್ತಿದ್ದಾನೆ. ಈಗ ನಮ್ಮಿಬ್ಬರ ಮಾತುಗಳೂ ಅಪರೂಪಕ್ಕೆ ಎನ್ನುವಷ್ಟು ಕಡಿಮೆಯಾಗಿದೆ. ಹೀಗಿದ್ದ ನಂತರ ಆತ ಮತ್ತೆ ಹತ್ತಿರಕ್ಕೆ ಬಂದಿದ್ದು ಕೇಪಿನ ಡಬ್ಬಿ ಕಥೆಯಿಂದಲೇ. ಆತನ ಪುಸ್ತಕ ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಬಾಲ್ಯದ ಮಿತ್ರ, ನೆಂಟ ಇತ್ಯಾದಿಗಳನ್ನು ನನ್ನ ತಲೆಯಿಂದ ತೆಗೆದುಹಾಕಿ ಪುಸ್ತಕವನ್ನು ಓದುವ ಯತ್ನ ಮಾಡಿದ್ದೇನೆ. ಆದರೆ ನಡು ನಡುವೆ ಕಥೆಯ ಪಾತ್ರಗಳು ನಮ್ಮ ಆ ದಿನಗಳನ್ನು ನೆನಪು ಮಾಡಿವೆ.

೧೧ ಕಥೆಗಳಿರುವ ಪುಸ್ತಕದಲ್ಲಿನ ಮೊದಲ ಕಥೆ ಚೇಳು ಕಚ್ಚಿದ ಗಾಯ. ಕೆಳ ಮಧ್ಯಮವರ್ಗದ ಕುಟುಂಬದ ಕಥೆ. ಒಂದೇ ಸಂಜೆಯಲ್ಲಿ ಕಥೆಯ ಪಾತ್ರಗಳು ಬಿಚ್ಚಿಕೊಳ್ಳುತ್ತ ಸಾಗುತ್ತವೆ. ರಾತ್ರಿಯಾದಂತೆಲ್ಲ ಪಾತ್ರಗಳು ಇನ್ನಷ್ಟು ವಿಸ್ತಾರಗೊಳ್ಳುತ್ತವೆ. ರಾಮಣ್ಣ, ಸುಮಿತ್ರಮ್ಮ, ರೇಣುಕಾ, ಪ್ರಶಾಂತರ ನಡುವಿನ ಸಂಭಾಷಣೆ ನಮ್ಮ ನಡುವೆ ನಿತ್ಯವೂ ನಡೆಯುತ್ತಿರುವ ಕಠು ವಾಸ್ತವವನ್ನು ಬಿಚ್ಚಿಡುತ್ತವೆ. ರೇಣುಕಾ ಹಾಗೂ ಸುಮಿತ್ರಳ ವರ್ಣನೆ ಸ್ವಲ್ಪ ಜಾಸ್ತಿಯೇ ಇದೆ. ರಾಮಣ್ಣನ ಹತಾಶೆ, ರೇಣುಕಾಳ ಸಿಟ್ಟು, ಚುಚ್ಚುನುಡಿ, ಸುಮಿತ್ರಮ್ಮನ ಅಸಹಾಯಕತೆ ಇತ್ಯಾದಿಗಳೆಲ್ಲ ಕಣ್ಣಿಗೆ ಕಟ್ಟುವಂತೆ ಚಿತ್ರಿತವಾಗಿದೆ. ಓದುತ್ತ ಓದುತ್ತ ಇಂತಹ ಹಲವಾರು ಘಟನೆಗಳನ್ನು ನಾನು ಕಂಡಿದ್ದು ನೆನಪಿಗೆ ಬಂದಿತು. ಕಥೆ ಓದಿ ಮುಗಿದ ಮೇಲೂ ಪ್ರಶಾಂತನಿಗೆ ಬಂದಿದ್ದು ಯಾರ ಪೋನ್? ಯಾವ ಕಾರಣಕ್ಕೆ ಅನಾಮಧೇಯ ಕರೆ ಪ್ರಶಾಂತನ ಕೊಲ್ಲುವ ಬೆದರಿಕೆಯನ್ನು ಹಾಕಿತು? ರೇಣುಕಾಳ ಗಂಡ ರೇಣುಕಾಳನ್ನೂ, ಆಕೆಯ ಮಗಳನ್ನೂ ನೋಡಲು ಬರುತ್ತಾನಯೇ?, ರಾಮಣ್ಣ ಚಿನ್ನದ ಉಡದಾರ ಕೊಂಡು ತಂದನೇ? ಮುಂದೇನಾಯ್ತು ಎನ್ನುವ ಕುತೂಹಲವನ್ನು ಹುಟ್ಟುಹಾಕಿಸುತ್ತದೆ.

ಬೆಳಕು ಬಿಡಿಸಿದ ಚಿತ್ರ, ಅಪ್ಪ-ಮಗನ ಕಥೆ. ಚಿಕ್ಕಂದಿನಲ್ಲೇ ಅಮ್ಮನನ್ನು ಕಳೆದುಕೊಂಡ ಮಗ. ಮಡದಿಯನ್ನು ಕಳೆದುಕೊಂಡ ಅಪ್ಪ. ಮಾಸ್ತರು. ಶಿಸ್ತಿನ ಸಿಪಾಯಿ. ಅಪ್ಪನ ವಿರುದ್ಧ ದ್ವೇಷದ ಭಾವನೆ ಬೆಳೆಸಿಕೊಂಡ ಮಗ. ಅಪ್ಪ-ಅವಳೊಂದಿಗೆ ಸಂಬಂಧ ಇರಿಸಿಕೊಂಡಿದ್ದಾನೆ ಎನ್ನುವ ಮಾತು ಕೇಳಿ, ಅಪ್ಪನ ಬಳಿ ಸಿಟ್ಟುಕಾರಿಕೊಳ್ಳಲು ಬಂದವನು, ಅಪ್ಪನ ಜಾಗದಲ್ಲಿಯೇ ನಿಂತು ಆಲೋಚಿಸುತ್ತಾನೆ. ಅವಳ ಮನೆಯಲ್ಲಿ ಅಪ್ಪ ಅವಳ ಮಗನೊಂದಿಗೆ ಆಡುತ್ತಿದ್ದುದನ್ನು ನೋಡಿದ ನಂತರ ಬದಲಾಗುವ ಮಗನ ಮನಸ್ಸಿನಲ್ಲಿನ ದ್ವೇಷ ಬದಲಾಗುತ್ತದೆ. ಕಾರ್ಮೋಡ ಸರಿದಂತಾಗುತ್ತದೆ. ಅಪ್ಪ ಮಗನ ನಡುವಿನ ವಿಶಿಷ್ಟ ಭಾವನೆಯೊಂದನ್ನು ಅಷ್ಟೇ ವಿಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ ಪದ್ಮನಾಭ. ಪದ್ದುನ ಸೂಕ್ಷ್ಮ ನೋಟಗಳಿಗೆ ನಿಜಕ್ಕೂ ಸಲಾಂ. ರಾತ್ರಿ ಮಳೆಗಾಲದಲ್ಲಿ ಡ್ರೋಂಕ್ ಎನ್ನುವ ಕಪ್ಪೆಗಳ ವರ್ಣನೆ, ಅಪರಿಚಿತರು ಬಂದಾಗ ಜೊರ್ ಜೊರ್ ಜೊರಕ್ ಎಂದು ಉಚ್ಚೆ ಹೊಯ್ಯುವ ದನಗಳು, ಕಾಯು ತುರಿಯುವ ಕೆರಮಣೆಯ ಮೇಲೆ ಕೂತು ಕೂತು ಸವೆದ ಚಿತ್ರ, ಆಹಾ ಇವೆಲ್ಲವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ ಪದ್ದುವಿನ ವೈಶಿಷ್ಟ್ಯಕ್ಕೊಂದು ಸಲಾಂ.

ಛದ್ಮವೇಶ, ಈ ನಡುವೆ, ಹೆಣದ ವಾಸನೆ... ಈ ಮೂರೂ ಕಥೆಗಳನ್ನು ಓದಿ ಬೆರಗು ಪಡುತ್ತಿದ್ದೇನೆ. ಅಬ್ಬಾ ಕಲ್ಪನೆಯೇ? ಆಗೊಮ್ಮೆ ಈಗೊಮ್ಮೆ ಇದು ನಿಜವೇ ಅನ್ನಿಸಿದ್ದೂ ಸುಳ್ಳಲ್ಲ. ಯಕ್ಷಗಾನ ವೇಶ ಹಾಕಿ ಛದ್ಮವೇಶ ಸ್ಪರ್ಧೆಯಲ್ಲಿ ಭಾಗವಹಿಸುವ ಕನಸಿನ ಮಧು ಹುಚ್ಚನ ವೇಷಧಾರಿಯಾಗುವುದು, ಇದರ ನಡುವೆ ವಿಶ್ವಣ್ಣ... ಅವಳ ಜತೆ ಎಲ್ಲವನ್ನೂ ಮಾಡುವ ಅವನು ಈಜು ಬಾರದೇ ನದಿಯಲ್ಲಿ ಕೊಚ್ಚಿಹೋಗಿ, ಮತ್ತೆ ದಡ ಸೇರುವುದು ಇಷ್ಟರ ಜತೆ ಸತ್ತ ಇಲಿಯ ವಾಸನೆಯ ಜಾಡಿನಲ್ಲಿ ಹುಚ್ಚು ಮನಸ್ಸು, ಕಪ್ಪು ಆಕೃತಿ... ಅಬಾಬಾಬಾ... ಪದ್ಮನಾಭನ ಅಭಿಮಾನಿ ಸಂಘ ಕಟ್ಟಿ ಅದರ ಅಧ್ಯಕ್ಷನಾಗೋಣ ಅನ್ನಿಸುತ್ತಿದೆ. ಅಮ್ಮಾ ಮುಂದೇನಾಯ್ತು... ನೀ ಯಕ್ಷಗಾನ ಆಡಿದ್ಯಾ? ಎಂದು ಮುಗ್ಧ ಮಧು ಕೇಳಿದ ಸಂದರ್ಭದಲ್ಲಿ ಆಗೋದೆಂಥದ್ದು, ಮದುವೆಯಾಯ್ತು ಎಂದು ನಿಟ್ಟುಸಿರುವ ಬಿಡುವ ಅಮ್ಮ. ಭಾಷೆ ಭಾರದ ಅವಳ ಬಳಿ 'ಸಂಗೀ.. ಹಾಳು ರಂಡೆ..ಇಷ್ಟುದಿನ ನನ್ನಿಂದ ಸರಿ ಜಡಿಸಿಕೊಂಡಿದ್ದಿ.. ನಿನ್ನ ಜತೆ ಮಜಾ ಮಾಡಿದ್ದೇನೆ ಮಜಾ... ಎಂದು ಆತ ಕೂಗಿ ಹೇಳುತ್ತಿದ್ದರೂ ನಗುತ್ತಲೇ ಇದ್ದ ಸಂಗಿ... ವಿವೇಕನ ಪರಿತಾಪ.. ಇವೆಲ್ಲವನ್ನೂ ಎಷ್ಟು ವಿಶಿಷ್ಟವಾಗಿ ಕಟ್ಟಿಕೊಟ್ಟಿದ್ದಾರೆಂದರೆ ಯಾವುದೋ ಘಳಿಗೆಯಲ್ಲಿ ಆ ಪಾತ್ರದೊಳಕ್ಕೆ ನಾವೂ ಹೊಕ್ಕಿಬಿಡುತ್ತೇವೆ.

ಅಮ್ಮಾ... ನನ್ನ ಮುಂದೆ ಚಾಚಿದ ಅವಳ ಪುಟ್ಟಪುಟ್ಟ ಮುದ್ದು ಕೈಗಳಲ್ಲಿ ಎಷ್ಟೊಂದು ಗೆರೆಗಳಿದ್ದವು ಗೊತ್ತೇನಮ್ಮಾ? ಆ ಕ್ಷಣದಲ್ಲಿ ನನ್ನ ಹಸ್ತಗಳಲ್ಲಿ ಸೆವೆದು ಹೋದ ಅದೃಷ್ಟದ ರೇಖೆಗಳನ್ನೂಅವಳೇ ತಂದಿದ್ದಾಳೇನೋ ಅನ್ನಿಸಿಬಿಟ್ಟಿತು ಎನ್ನುವ ಸಾಲುಗಳನ್ನು ಹೊಸೆಯುವ ಪದ್ಮನಾಭ ಅದೇ ಇನ್ನರ್ಧ ಕಥೆಯಲ್ಲಿ ಅಮ್ಮ ಮಗನ ನಡುವಿನ ಅದ್ಯಾವುದೋ ಅವ್ಯಕ್ತ ಭಾವಗಳನ್ನು ತೆರೆದಿಡುತ್ತಾರೆ. ಇನ್ನರ್ಧ, ಬಾಂದಳದ ಮಿಂಚು ಹಾಗೂ ಕಥೆ ಈ ಮೂರೂ ಕೂಡ ಆಪ್ತವಾಗುತ್ತದೆ.

ಕಥಾ ಸಂಕಲನದಲ್ಲಿ ನನಗೆ ಎಲ್ಲಕ್ಕಿಂತ ಹೆಚ್ಚು ಆಪ್ತವಾದದ್ದು, ಕಣ್ಣು ಹಾಗೂ ಮನಸ್ಸು ತೇವಗೊಳ್ಳುವಂತೆ ಮಾಡಿದ್ದು ಕೇಪಿನ ಡಬ್ಬಿ ಕಥೆ. ಪುಸ್ತಕದ ತಲೆಬರಹವಾಗಿರುವ ಕೇಪಿನ ಡಬ್ಬಿ ಕಥೆಯನ್ನು ಹಿಂದೊಮ್ಮೆ ನಾನು ಹೊನ್ನೆಬೇಣಕ್ಕೆ ಹೋದಾಗ ಪ್ರಭಾವತಿ ಅತ್ತೆ, ಪುಸ್ತಕವನ್ನು ಕೊಟ್ಟು ಓದಲು ಹೇಳಿದ್ದಳು. ಓದಿದ ನಂತರ ನನ್ನ ಮನಸ್ಸಿನಲ್ಲಿನ ತೆರೆಗಳನ್ನು ಸುಮ್ಮನೇ ಗಮನಿಸಿದ್ದಳು. ನನ್ನ ಜತೆಯಲ್ಲಿದ್ದ ಅಮ್ಮ ಕೂಡ ಅದನ್ನು ಓದಿ ನಿಟ್ಟುಸಿರು ಬಿಟ್ಟಿದ್ದಳು. ಪದ್ಮನಾಭ ಈ ಕಥೆಯ ಮೂಲಕ ಹಲವರನ್ನು ಅಳಿಸಿರಬಹುದು. ಕೇಪಿನ ಡಬ್ಬಿಯನ್ನು ಓದಿದ ನಂತರ ಅನ್ನಿಸುವ ಅಂಶಗಳಿಗೆ ಶಬ್ದಗಳು ಸಾಲುವುದಿಲ್ಲ. ನನಗಂತೂ ಹಳೆಯ ಯಾವುದೋ ನೆನಪಿನ ತರೆ ಸುಮ್ಮನೇ ಮನಸ್ಸಲ್ಲಿ ಜೀಕಿತು. ಎಷ್ಟೆಲ್ಲ ಕಥೆಗಳಿದ್ದೂ ಪುಸ್ತಕಕ್ಕೆ ಕೇಪಿನ ಡಬ್ಬಿ ಅಂತಲೆ ಯಾಕೆ ಹೆಸರಿಟ್ಟ ಎಂಬುದನ್ನು ನಾನು ಒಂದೆರಡು ಸಾರಿ ಆಲೋಚಿಸಿದ್ದಿದೆ. ಕಥೆ ಓದಿದಾಗ ಆ ಹೆಸರಿಟ್ಟಿದ್ದು ಸರಿಯೇ ಇದೆ ಅನ್ನಿಸಿತ್ತು.

ಇದೇ ಪುಸ್ತಕದಲ್ಲಿರುವ ಇನ್ನೆರಡು ಕಥೆಗಳು ಮಾತು ಮುಗಿಯುವ ಮೊದಲು ಹಾಗೂ ಇಲ್ಲದ ತೀರದ ಕಡೆಗೆ ಎನ್ನುವ ಹೆಸರಿನವು. ರಿಯಾಲಿಟಿ ಶೋ ಒಂದರಲ್ಲಿ ಹೇಗೆ ಮುಗ್ಧ ಮನಸ್ಸುಗಳನ್ನು ಹಾಳು ಮಾಡಲಾಗುತ್ತದೆ ಎನ್ನುವ ಅಂಶವನ್ನು ಹೊಂದಿರುವ ಇಲ್ಲದ ತೀರದ ಕಡೆಗೆ ಬಹಳ ಆಪ್ತವಾಗುತ್ತದೆ. ಕಥಾ ನಾಯಕನ ಪ್ರೀತಿ, ಜೋಗಿಕಲ್ಲು, ಜೋಗಿಕಲ್ಲಿನ ನೆತ್ತಿಯಲ್ಲಿ ಮರದ ಮೇಲೆ ಕೆತ್ತಿದ ಹೆಸರು.. ಇವು ಕೂಡ ಅಷ್ಟೇ ಇಷ್ಟವಾಗುತ್ತವೆ.

ಪುಸ್ತಕ ಓದಿ ಇಟ್ಟ ಎಷ್ಟೋ ಹೊತ್ತಿನ ವರೆಗೆ ಕಥೆಗಳು ನೆನಪಾಗುತ್ತಲೇ ಇರುತ್ತವೆ. ಹಾಂಗಾಗಕಾಗಿತ್ತಿಲ್ಲೆ, ಇದು ಹಿಂಗಾಗಿದ್ದರೆ ಚನ್ನಾಗಿತ್ತು ಎಂದು ಹಲವು ಬಾರಿ ಆಲೋಚಿಸುವಂತಾಗುತ್ತದೆ. ಆದರೂ ಒಂದು ಮಾತು ಹೇಳಲೇಬೇಕು. ಪದ್ಮನಾಭರ ಈ ಎಲ್ಲ ಕಥೆಗಳಲ್ಲಿ ವಿಷಾದದ ಭಾವನೆ ಸ್ವಲ್ಪ ಜಾಸ್ತಿಯೇ ಇದೆ.

ಈಗಾಗಲೇ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಛಂದದ ಪುಸ್ತಕವನ್ನು ಎಲ್ಲರೂ ಒಂದಲೇಬೇಕು. ೧೧೦ ರೂಪಾಯಿಯ ೧೫೦ ಪುಟಗಳ ಈ ಕಥಾ ಸಂಕಲನ ಓದುಗರ ಮನಸ್ಸನ್ನು ಸೆಳೆಯುತ್ತದೆ. ಅಂದಹಾಗೇ ಇಂತಹ ಪುಸ್ತಕ ಕೊಟ್ಟ ಪದ್ಮನಾಭನಿಗೆ ಇನ್ನೊಮ್ಮೆ ಸಲಾಂ. ಶೀಘ್ರದಲ್ಲಿಯೇ ಇನ್ನೊಂದು ಪುಸ್ತಕ ಬರಲಿ ಎನ್ನುವುದು ನನ್ನ ಹಾರೈಕೆ.

Saturday, June 23, 2018

ಚೀನಾದ ಡ್ರಾಗನ್ ಗೆ ಕೊಡಬೇಕು ಭಾರತದ ಪಾಂಜಾ ಏಟು

ಪ್ರಸ್ತುತ ಜಗತ್ತಿನಲ್ಲಿ ಭಾರತಕ್ಕೆ ಚೀನಾ ಎಲ್ಲ ರಂಗಗಳಲ್ಲಿಯೂ ಎದುರಾಳಿ. ವ್ಯಾಪಾರ, ವೃತ್ತಿ, ಕೌಶಲ್ಯ, ರಾಜತಾಂತ್ರಿಕ, ಸೈನಿಕ ಹೀಗೆ ಎಲ್ಲ ರಂಗಗಳಲ್ಲಿಯೂ ಭಾರತಕ್ಕೆ ಅಡ್ಡಗಾಲು ಹಾಕುತ್ತಿರುವ ರಾಷ್ಟ್ರ ಚೀನಾ. ಭಾರತ ಯಾವುದೇ ಕಾರ್ಯಗಳನ್ನು ಕೈಗೊಳ್ಳಲಿ, ಅದಕ್ಕೆ ಚೀನಾದ ಅಡ್ಡಗಾಲು ಇದ್ದದ್ದೇ. ಇಂತಹ ಚೀನಾಕ್ಕೆ ಅದರದೇ ಹಾದಿಯಲ್ಲಿ ಉತ್ತರ ನೀಡುವ ಅಗತ್ಯವಿದೆ. ಚೀನಾ ಅನುಸರಿಸುತ್ತಿರುವ ನೀತಿಗಳನ್ನೇ ಅದರ ವಿರುದ್ಧವೇ ಬಳಕೆ ಮಾಡುವ ಮೂಲಕ ಚೀನಾದ ಮಗ್ಗಲು ಮುರಿಯಬೇಕಿದೆ. ಡ್ರ್ಯಾಗನ್ಗೆ ಭಾರತದ ಚಾಣಕ್ಯ ವಿದೇಶಾಂಗ ನೀತಿಯ ಪರಿಚಯ ಮಾಡಿಕೊಡಬೇಕಿದೆ. ಇಲ್ಲವಾದಲ್ಲಿ ಚೀನಾ ಇಂಚಿಂಚಾಗಿ ಭಾರತವನ್ನು ನುಂಗುವುದರಲ್ಲಿ ಸಂಶಯವಿಲ್ಲ.
ಭಾರತ ವಿಶ್ವಸಂಸ್ಥೆಯ ಖಾಯಂ ಸದಸ್ಯತ್ವಕ್ಕೆ ಪ್ರಯತ್ನಿಸುತ್ತಿದೆ. ಇದಕ್ಕೆ ಕುತಂತ್ರಿ ಚೀನಾ ಅಡ್ಡಗಾಲು ಹಾಕುತ್ತಿರುವುದು ಗುಟ್ಟಾಗೇನೂ ಇಲ್ಲ. ಅಷ್ಟಲ್ಲದೇ ಎನ್ಎಸ್ಜಿಗೂ ಕೂಡ ಚೀನಾದ ವಿರೋಧ ಇದ್ದೇ ಇದೆ. ಭಾರತದ ಪ್ರಭಾವವನ್ನು ಜಾಗತಿಕವಾಗಿ ತಗ್ಗಿಸಬೇಕೆಂಬ ಕಾರಣಕ್ಕಾಗಿ ಚೀನಾ ಕೈಗೊಳ್ಳುತ್ತಿರುವ ಕಾರ್ಯಗಳಲ್ಲಿ ಇದೂ ಒಂದು ಎಂದರೆ ತಪ್ಪಾಗಲಿಕ್ಕಿಲ್ಲ. ಇಷ್ಟೇ ಅಲ್ಲ, ಭಾರತದ ವಿರುದ್ಧ ಸದಾ ಭಯೋತ್ಪಾದನೆಯ ಮೂಲಕ ಕಿತ್ತಾಡುತ್ತಿರುವ ಪಾಕಿಸ್ತಾನದ ಬೆನ್ನಿಗೆ ನಿಂತಿರುವುದೂ ಚೀನಾವೇ. ಜಗತ್ತಿನ ಮೋಸ್ಟ್ ವಾಂಟೆಡ್ ಉಗ್ರರ ಯಾದಿಯಲ್ಲಿ ಹಫೀಜ್ ಸಯಿದ್ ಹೆಸರು ಸೇರಿಸಬೇಕೆಂಬ ನಿಟ್ಟಿನಲ್ಲಿ ಭಾರತ ವಿಶ್ವಸಂಸ್ಥೆಯಲ್ಲಿ ಪ್ರಯತ್ನ ಕೈಗೊಂಡಾಗ ಅದಕ್ಕೆ ಅಡ್ಡಗಾಲಾಗಿದ್ದು ಇದೇ ಚೀನಾ.
ಅರುಣಾಚಲ ಪ್ರದೇಶ ತನ್ನದು ಎಂದು ಆಗಾಗ ಗುಟುರು ಹಾಕುವ, ಅಕ್ಸಾಯ್ ಚೀನ್ ನ್ನು ವಶಪಡಿಸಿಕೊಂಡು, ಅಕ್ರಮವಾಗಿ ತನ್ನಲ್ಲಿ ಇಟ್ಟುಕೊಂಡಿರುವ, ಡೋಕ್ಲಾಂ ವಿವಾದವನ್ನು ಸದಾ ಜೀವಂತ ಇಟ್ಟು, ಭಾರತವನ್ನು ಬೆದರಿಸಲು ನೋಡುತ್ತಿರುವ ರಾಷ್ಟ್ರವೂ ಚೀನಾವೇ. ಇಂತಹ ಚೀನಾಕ್ಕೆ ಅದರದ್ದೇ ಆದ ರೀತಿಯಲ್ಲಿ ಉತ್ತರ ನೀಡುವುದು ಅಗತ್ಯ ಕ್ರಮಗಳಲ್ಲಿ ಒಂದೆನ್ನಿಸಿದೆ. ಚೀನಾ ಏನೇನು ಮಾರ್ಗ ಅನುಸರಿಸುತ್ತಿದೆಯೋ, ಆ ಮಾರ್ಗಗಳ ಮೂಲಕವೇ ಚೀನಾಕ್ಕೆ ಪಾಠ ಕಲಿಸಬಹುದು, ಮಣ್ಣು ಮುಕ್ಕಿಸಬಹುದು.
ಯಾವುದೋ ಶತಮಾನದಲ್ಲಿ ಚೀನಾವನ್ನು ಆಳಿದ ರಾಜ ಯಾವ್ಯಾವ ಪ್ರದೇಶವನ್ನು ಗೆದ್ದು, ತನ್ನ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿಕೊಂಡಿದ್ದನೋ, ಆ ಪ್ರದೇಶಗಳನ್ನೆಲ್ಲ ಇಂದಿಗೂ ತನ್ನದು ಎಂದು ವಾದ ಮಾಡುತ್ತಿರುವ ಚೀನಾ ಅದೇ ಕಾರಣಕ್ಕೆ ಇಂದಿಗೂ ಭಾರತದ ಅರುಣಾಚಲ ಪ್ರದೇಶ ತನ್ನದು ಎಂದು ವಾದ ಮಾಡುತ್ತಿದೆ. ಒಂದಾನೊಂದು ಕಾಲದಲ್ಲಿ ಸಿಕ್ಕೀಂ ಕುರಿತೂ ಹೀಗೆಯೇ ವಾದ ಮಾಡಿತ್ತು ಚೀನಾ. ಅಷ್ಟೇ ಅಲ್ಲದೇ ಅಕ್ಸಾಯ್ ಚೀನ್ನ್ನು ತನ್ನ ವಶದಲ್ಲಿ ಇಟ್ಟುಕೊಂಡಿರಲು ಪ್ರಮುಖ ಕಾರಣವೂ ಇದೆ. ಅಷ್ಟೇ ಏಕೆ ಬ್ರಿಟೀಷರು ಭಾರತವನ್ನು ಬಿಟ್ಟು ಹೋಗುವಾಗ ಭಾರತ-ಚೀನಾ ನಡುವಿನ ಮ್ಯಾಕ್ಮೋಹನ್ ರೇಖೆಯನ್ನು ಒಪ್ಪದೇ ಇರಲೂ ಇದೇ ಕಾರಣ. ಇಷ್ಟೇ ಅಲ್ಲ, ದಲಾಯಿ ಲಾಮಾರ ಟಿಬೆಟನ್ನು ಆಪೋಶನ ತೆಗೆದುಕೊಂಡಿರುವುದಕ್ಕೂ ಇದೇ ಕಾರಣ. ಭೂತಾನ್ನ ಕೆಲ ಪ್ರದೇಶ, ಮ್ಯಾನ್ಮಾರ್, ಲಾವೋಸ್, ವಿಯೆಟ್ನಾಂಗಳ ಜತೆಗೂ ಇದೇ ಕಾರಣಕ್ಕಾಗಿ ವಿವಾದವನ್ನು ಮಾಡಿಕೊಂಡು, ಜಗಳವಾಡುತ್ತಿರುವ ಧೂರ್ತ ರಾಷ್ಟ್ರವೂ ಚೀನಾವೇ. ಇಂತಹ ಚೀನಾಕ್ಕೆ ಚೀನಾದ ಮಾರ್ಗದಲ್ಲಿಯೇ ಉತ್ತರ ನೀಡಿದಾಗ ಮಾತ್ರ ಆ ದೇಶವನ್ನು ಮಟ್ಟ ಹಾಕಲು ಸಾಧ್ಯ.
ಚೀನಾದ ಕ್ವಾಂಗ್ಜು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮುಸ್ಲೀಮರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಈ ಮುಸ್ಲೀಮರು ಚೀನಾದಲ್ಲಿ ತಮ್ಮದೇ ಆದ ಹಕ್ಕುಗಳಿಗೆ ಹೋರಾಟ ಮಾಡುತ್ತಿದ್ದಾರೆ. ಮುಸ್ಲೀಮರಿಗೆ ಪ್ರತ್ಯೇಕ ಸ್ಮಶಾನಕ್ಕೆ ಅವಕಾಶ ಪಡೆಯುವುದು, ಹಲಾಲ್ ಆಹಾರ ಪದ್ಧತಿಯನ್ನು ಅನುಸರಿಸುವುದೂ ಸೇರಿದಂತೆ ಸಾಕಷ್ಟು ಬೇಡಿಕೆಗಳನ್ನು ಚೀನಾಅ ಸಕರ್ಾರದ ಮುಂದೆ ಮುಸ್ಲೀಮರು ಇಡುತ್ತಲೇ ಬಂದಿದ್ದಾರೆ. ಆದರೆ ಚೀನಾ ಇವುಗಳನ್ನೆಲ್ಲ ಮಿಲಿಟರಿ ಬಲದ ಮೂಲಕ ದಮನ ಮಾಡುತ್ತಿದೆ. ಚೀನಾಅದ ವಿರುದ್ಧ ಆಗಾಗ ಮುಸ್ಲೀಮರು ಸೊಲ್ಲೆತ್ತುತ್ತಿದ್ದರೂ ಅವನ್ನೆಲ್ಲ ನಿದರ್ಾಕ್ಷಿಣ್ಯವಾಗಿ ದಮನ ಮಾಡುವ ಕಾರ್ಯದಲ್ಲಿ ಅಲ್ಲಿನ ಸಕರ್ಾರ ನಿರತವಾಗಿದೆ. ಭಾರತದ ವಿಷಯಕ್ಕೆ ಬಂದರೆ ಹೇಗೆ ಪಾಕಿಸ್ತಾನದ ಬೆನ್ನಿಗೆ ನಿಂತು ಭಾರತದ ವಿರುದ್ಧ ಪಾಕ್ನ್ನು ಚೀನಾ ಎತ್ತಿಕಟ್ಟುತ್ತಿದೆಯೋ, ಅದೇ ರೀತಿ, ಕ್ವಾಂಗ್ಜು ಮುಸ್ಲೀಮರ ಬೆನ್ನಿಗೆ ಭಾರತ ನಿಲ್ಲುವ ಅಗತ್ಯವಿದೆ. ಶತ್ರುವಿನ ಶತ್ರು ಮಿತ್ರನಾಗುತ್ತಾನೆ ಎನ್ನುವ ಪಂಚತಂತ್ರದ ಉಕ್ತಿಯಂತೆ ಕ್ವಾಂಗ್ಜು ಮುಸ್ಲೀಮರ ಬೆನ್ನಿಗೆ ನಿಂತು, ಚೀನಾಕ್ಕೆ ಪಾಠ ಕಲಿಸಬಹುದಾಗಿದೆ.
ಭಾರತದ ತೆಕ್ಕೆಯಲ್ಲಿಯೇ ಇದ್ದಂತಿರುವ ದ್ವೀಪರಾಷ್ಟ್ರ ಮಾಲ್ಡೀವ್ಸ್ ಭಾರತದ ಜತೆಗೆ ಇದುವರೆಗೂ ವ್ಯಾಪಾರ-ವ್ಯವಹಾರ, ಸೈನಿಕ ನೆರವು ಹೊಂದಿತ್ತು. ಆದರೆ ಅಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ ಚೀನಾ ಹಸ್ತ ಕ್ಷೇಪ ಮಾಡಿ, ಮಾಲ್ಡೀವ್ಸ್ ಭಾರತದ ವಿರುದ್ಧ ತಿರುಗಿ ಬೀಳುವಂತೆ ಮಾಡಿತು. ಚೀನಾದೊಂದಿಗೆ ಸದಾ ಕಾಲ ಮುನಿಸನ್ನು ಹೊಂದಿರುವ ರಾಷ್ಟ್ರ ತೈವಾನ್. ಈ ತೈವಾನ್ ದ್ವೀಪ ತನ್ನದು ಎಂದು ಚೀನಾ ವಾದಿಸುತ್ತಲೇ ಬಂದಿದೆ. ಆದರೆ ತೈವಾನಿಗರು ಇದನ್ನು ಒಪ್ಪದೇ, ತಮ್ಮದು ಸ್ವತಂತ್ರ ದೇಶ ಎನ್ನುತ್ತಿದ್ದಾರೆ. ಇದೀಗ ಚೀನಾ ತೈವಾನ್ ವಿರುದ್ಧ ಬಲ ಪ್ರದರ್ಶನ ಮಾಡುತ್ತಿದೆ. ಭಾರತ ತೈವಾನ್ ಪರ ನಿಲ್ಲುವ ಅಗತ್ಯವಿದೆ. ಭಾರತದ ವಿರುದ್ಧ ಮಾಲ್ಡೀವ್ಸ್ನ್ನು ಚೀನಾ ಹೇಗೆ ಎತ್ತಿಕಟ್ಟಿ, ತನ್ನ ಬೆಂಬಲ ನೀಡಿತೋ, ಅದೇ ರೀತಿ ಭಾರತ ತೈವಾನ್ಗೆ ಸಂಪೂರ್ಣ ಬೆಂಬಲವನ್ನು ನೀಡುವ ಅಗತ್ಯವೂ ಇದೆ. ತೈವಾನ್ ನೊಂದಿಗೆ ವ್ಯಾಪಾರ ವ್ಯವಹಾರವನ್ನು ಭಾರತ ವೃದ್ಧಿಸಿ, ತೈವಾನ್ಗೆ ಅಗತ್ಯವಿರುವ ಎಲ್ಲ ರೀತಿಯ ಬೆಂಬಲ ಹಾಗೂ ಬಲವನ್ನು ಒದಗಿಸಿದಾಗ ಚೀನಾ ಹೈರಾಣಾಗುತ್ತದೆ.
ಭಾರತದ ಅರುಣಾಚಲ ಪ್ರದೇಶ ತನ್ನದು ಎಂದು ಚೀನಾ ವಾದಿಸುತ್ತಿದೆ. ಹಿಮದೆ ಚೀನಾ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುವ ತನ್ನ ಪ್ರವಾಸಿಗರಿಗೆ ಸ್ಟ್ಯಾಪಲ್ಡ್ ವಿಸಾವನ್ನು ನೀಡುವ ಮೂಲಕ ಅಹಂಕಾರವನ್ನು ಮೆರೆದಿತ್ತು. ಭಾರತವೂ ಚೀನಾದ ವಿರುದ್ಧ ಇಂತದ್ದೇ ಕ್ರಮವನ್ನು ಕೈಗೊಳ್ಳಬಹುದು. ಭಾರತದ ಪುರಾಣಗಳಲ್ಲಿ ಟಿಬೆಟ್ಗೆ ವಿಶೇಷವಾದ ಸ್ಥಾನವಿದೆ. ತ್ರಿವಿಷ್ಠಪ ಎಂದು ಕರೆಯಲ್ಪಡುತ್ತಿದ್ದ ಟಿಬೆಟ್ ಭಾರತೀಯರ ಪಾಲಿಗೆ ಕೈಲಾಸ ಎಂದೇ ನಂಬಿಕೆ. ಅಷ್ಟೇ ಅಲ್ಲದೇ ಪವಿತ್ರ ಸ್ಥಳಗಳಾದ ಕೈಲಾಸ ಪರ್ವತ ಹಾಗೂ ಮಾನಸ ಸರೋವರಗಳು ಟಿಬೆಟ್ನಲ್ಲಿಯೇ ಇದೆ. ಇಂತಹ ಟಿಬೆಟ್ನ್ನು 1950ರ ದಶಕದಲ್ಲಿ ಚೀನಾ ಅತಿಕ್ರಮಿಸಿಕೊಂಡಿದ್ದು ಎಲ್ಲರಿಗೂ ತಿಳಿದ ವಿಚಾರವೇ. ಭಾರತದ ಪುರಾಣಗಳಲ್ಲೂ ಉಲ್ಲೇಖವಾಗಿರುವ ಟಿಬೆಟ್ ಒಂದಾನೊಂದು ಕಾಲದಲ್ಲಿ ಭಾರತದ್ದೇ ಆಗಿತ್ತು. ಚೀನಾ ಹೇಗೆ ತನ್ನ ಸಾಮ್ರಾಜ್ಯದಲ್ಲಿದ್ದ ಪ್ರದೇಶಗಳು ತನ್ನದು ಎಂದು ವಾದಿಸುತ್ತದೋ ಭಾರತ ಕೂಡ ಟಿಬೆಟನ್ನು ತನ್ನದು ಎಂದು ವಾದಿಸಬಹುದು. ಪುರಾಣಗಳು, ವೇದಗಳ ಸಾಕ್ಷ್ಯಗಳನ್ನು ಚೀನಾದ ಮುಂದೆ ಇಡಬಹುದು. ಅಷ್ಟೇ ಅಲ್ಲದೇ ಟಿಬೆಟಿಯನ್ನರಿಗೆ ಆಶ್ರಯ ನೀಡಿದಂತೆಎ ಟಿವೆಟಿಯನ್ನರಿಗೆ ಪ್ರತ್ಯೇಕ ರಾಷ್ಟ್ರಕ್ಕಾಗಿ ಬೆಂಬಲವನ್ನೂ ನೀಡಬಹುದು. ಟಿಬೆಟ್ಗೆ, ಟಿಬೆಟಿನಲ್ಲಿರುವ ಮಾನಸ ಸರೋವರ ಹಾಗೂ ಕೈಲಾಸ ಪರ್ವತಕ್ಕೆ ತೆರಳುವವರಿಗೆ ಭಾರತ ಕೂಡ ಸ್ಟ್ಯಾಪಲ್ಡ್ ವೀಸಾವನ್ನು ನೀಡಿದಾಗ ಚೀನಾಕ್ಕೆ ಅದರದ್ದೇ ಆದ ರೀತಿಯಲ್ಲಿ ಉತ್ತರವನ್ನು ನೀಡಿದ ಹಾಗೆ ಆಗುತ್ತದೆ. ಆಗ ಚೀನಾ ಬಗ್ಗಿ ಬರುತ್ತದೆ.
ಡೋಕ್ಲಾಂನಲ್ಲಿ ಚೀನಾ ಕ್ಯಾತೆ ತೆಗೆದಿದ್ದು ಎಲ್ಲರಿಗೂ ತಿಳಿದಿರುವ ಸಂಗತಿಯೇ. ಡೋಕ್ಲಾಂ ವಿಷಯದಲ್ಲಿ ಭಾರತ ಬಹಳ ದಿಟ್ಟ ನಡೆಯನ್ನೇ ಇಟ್ಟಿದೆ. ಡೋಕ್ಲಾಂ ಅಲ್ಲದೇ ಚೀನಾ ಭೂತಾನ್ ಜತೆ, ಮ್ಯಾನ್ಮಾರ್ ಜತೆ, ಲಾವೋಸ್, ವಿಯೆಟ್ನಾಂ, ಮಂಗೋಲಿಯಾ, ಉತ್ತರ ಕೋರಿಯಾ, ರಷ್ಯಾ ಸರಿ ಹಲವು ರಾಷ್ಟ್ರಗಳ ಜತೆ ಗಡಿ ಹಂಚಿಕೊಂಡಿದೆ. ಈ ಎಲ್ಲ ರಾಷ್ಟ್ರಗಳ ಜತೆಯೂ ಒಂದಲ್ಲ ಒಂದು ಪ್ರದೇಶಗಳಿಗೆ ಸಂಬಂಧಿಸಿದಂತೆ ಚೀನಾ ವಿವಾದವನ್ನು ಸದಾ ಹಸಿಯಾಗಿ ಇಟ್ಟುಕೊಂಡಿದೆ. ಈ ಎಲ್ಲ ರಾಷ್ಟ್ರಗಳೂ ಒಗ್ಗಟ್ಟಾಗಿ ಚೀನಾ ವಿರುದ್ಧ ನಿಂತಾಗ ಚೀನಾವನ್ನು ತಣ್ಣಗೆ ಮಾಡಲು ಸಾಧ್ಯ. ಎಲ್ಲ ರಾಷ್ಟ್ರಗಳ ಒಕ್ಕೂಟವನ್ನು ಮಾಡಿ, ಚೀನಾವನ್ನು ಹಣಿಯಬಹುದು. ಯಾವುದೇ ಒಂದು ರಾಷ್ಟ್ರದ ಗಡಿಯ ಕುರಿತು ಚೀನಾ ಕಾಲು ಕೆರೆದು ನಿಂತಾಗಲೂ ಉಳಿದ ಎಲ್ಲ ಗಡಿ ರಾಷ್ಟ್ರಗಳೂ ಒಗ್ಗಟ್ಟಾಗಿ ಚೀನಾ ವಿರುದ್ಧ ನಿಂತು, ಅದನ್ನು ಬಗ್ಗುಬಡಿಯಬಹುದು.
ದಕ್ಷಿಣ ಚೀನಾ ಸಮುದ್ರದಲ್ಲಿ ಫಿಲಿಫೈನ್ಸ್ ಸಮುದ್ರ ವಲಯದಲ್ಲಿ ಚಿನಾ ಕೃತಕ ದ್ವೀಪವನ್ನು ನಿಮರ್ಿಸಿ, ಅಲ್ಲಿ ತನ್ನ ಮಿಲಿಟರಿ ಬಲವನ್ನು ನೆಲೆಗೊಳಿಸುವ ಚಿಂತನೆ ನಡೆಸುತ್ತಿದೆ. ಈ ಕೃತಕ ದ್ವೀಪದ ಕರಿತು ಈಗಾಗಲೇ ಫಿಲಿಫೈನ್ಸ್, ಜಪಾನ್ ಹಾಗೂ ಅಮೆರಿಕಗಳು ವಿರೋಧವನ್ನು ವ್ಯಕ್ತಪಡಿಸಿವೆ. ಅಲ್ಲದೇ ಆಗಾಗ ಈ ವಲಯದಲ್ಲಿ ಏರ್ಕ್ರಾಫ್ಟ್ ಕ್ಯಾರಿಯರ್ ನೌಕೆಗಳನ್ನು ಕಳುಹಿಸುವ ಮೂಲಕ ವಾತಾವರಣದಲ್ಲೂ ಬಿಸಿಯೇರಿಸಿವೆ. ಈ ಕೃತಕ ದ್ವೀಪಕ್ಕೆ ಸಂಬಂಧಿಸಿದಂತೆ ಭಾರತ ಫಿಲಿಫೈನ್ಸ್ನಂತಹ ರಾಷ್ಟ್ರಗಳ ಬೆನ್ನಿಗೆ ನಿಲ್ಲುವ ಅಗತ್ಯವಿದೆ. ಏಷ್ಯಾದಲ್ಲಿ ಚೀನಾಕ್ಕೆ ಸರಿಸಮಾನವಾಗಿ ನಿಲ್ಲುವ ಸಾಮಥ್ರ್ಯ ಹೊಮದಿರುವ ರಾಷ್ಟ್ರ ಭಾರತ ಫಿಲಿಫೈನ್ಸ್ ಬೆನ್ನಿಗೆ ನಿಂತರೆ ಸಹಜವಾಗಿಯೇ ಚೀನಾದ ಅಹಂಕಾಆರ ತಗ್ಗುತ್ತದೆ. ಮೊದಲಿನಷ್ಟು ಆಕ್ರಮಣಕಾರಿಯಾಗಿ ಮುಂದುವರಿಯುವುದನ್ನು ಕಡಿಮೆ ಮಾಡುತ್ತದೆ.
1890ರ ವೇಳೆಗೆ ಇಂಗ್ಲೆಂಡಿಗೂ-ಚೀನಾ ರಾಜರಿಗೂ ನಡೆದ ಯುದ್ಧದಲ್ಲಿ ಚೀನಾ ಸೋಲನ್ನು ಅನುಭವಿಸಿದ ಸಂದರ್ಭದಲ್ಲಿ ಹಾಂಗ್ ಕಾಂಗ್ನ್ನು 100 ವರ್ಷಗಳ ಅವಧಿಗೆ ಇಂಗ್ಲೆಂಡಿಗೆ ಬಿಟ್ಟುಕೊಡಬೇಕು ಎನ್ನುವ ಕರಾರಿನೊಂದಿಗೆ ಚೀನಾ ಆ ಪ್ರದೇಶವನ್ನು ಬ್ರಿಟನ್ ಆಡಳಿತಕ್ಕೊಳಪಡಿಸುತ್ತದೆ. ನಂತರ ಹಾಂಗ್ ಕಾಂಗ್ ಪ್ರಮುಖ ವ್ಯಾಪಾರಿ ಕೇಂದ್ರವಾಗಿ ಕಂಡು-ಕೇಳರಿಯದಷ್ಟು ಅಭಿವೃದ್ಧಿ ಸಾಧಿಸುತ್ತದೆ. 1990ರ ದಶಕದಲ್ಲಿ ಈ ಹಾಂಗ್ ಕಾಂಗ್ನ್ನು ಬ್ರಿಟನ್ ಮರಳಿ ಚೀನಾಕ್ಕೆ ಒಪ್ಪಿಸಿದ ಸಂದರ್ಭದಲ್ಲಿ ಹಾಂಗ್ಕಾಂಗ್ ನಿವಾಸಿಗಳಲ್ಲಿ ಹುಟ್ಟಿರುವ ಅಸಮಧಾನದ ಬಗ್ಗೆ ಯಾರೂ ಗಮನವನ್ನೇ ಹರಿಸಿಲ್ಲ. ಬ್ರಿಟನ್ ಆಡಳಿತದಲ್ಲಿದ್ದವರಿಗೆ ಚೀನಾ ಆಡಳಿತಕ್ಕೆ ಸೇರುವುದು ಇಷ್ಟವೇ ಇರಲಿಲ್ಲ. ಈಗಲೂ ಆಗೊಮ್ಮೆ, ಈಗೊಮ್ಮೆ ಹಾಂಗ್ ಕಾಂಗ್ನಲ್ಲಿ ಈ ಮುನಿಸು ಕಾಣಿಸಿಕೊಳ್ಳುತ್ತದೆ. ಪ್ರತಿಧ್ವನಿಸುತ್ತದೆ. ಚೀನಾಅ ಅವನ್ನು ದಮನ ಮಾಡುವವ ಕಾರ್ಯದಲ್ಲೂ ನಿರತವಾಗಿದೆ. ಭಾರತ ಹಾಂಗ್ಕಾಂಗ್ ನಿವಾಸಿಗಳ ಜತೆಗೆ ನಿಲ್ಲುವ ಅಗತ್ಯವೂ ಇದೆ.
ಭಾರತದಲ್ಲಿ ನಕ್ಸಲೀಯರಿಗೆ ಚೀನಾದ ನೆರವು ಗುಟ್ಟಾಗೇನೂ ಉಳಿದಿಲ್ಲ. ಪರೋಕ್ಷವಾಗಿ ಬಂದೂಕು, ಹಣ ಸಹಾಯ ಮಾಡುತ್ತಿರುವುದು ಚೀನಾವೇ. ಭಾರತದಲ್ಲಿ ನಕ್ಸಲಿಸಂ ಬೆಳೆಸಿ, ಆಂತರಿಕವಾಗಿ ಭಾರತವನ್ನು ಅಧೀರ ಮಾಡುವುದು ಚೀನಾಆದ ಆಲೋಚನೆ. ಇದಕ್ಕೆ ಭಾರತ ಪ್ರತ್ಯುತ್ತರವನ್ನೂ ನೀಡುವ ಅಗತ್ಯವಿದೆ. ಚೀನಾದಲ್ಲಿ ಕಮ್ಯುನಿಸ್ಟ್ ಪಕ್ಷಕ್ಕೆ ವಿರೋಧವಾಗಿ ಸಾಕಷ್ಟು ಜನರಿದ್ದಾರೆ. ಅದೆಷ್ಟೋ ಲಕ್ಷಗಟ್ಟಲೆ ಜನರು ಪೀಪಲ್ಸ್ ಲಿಬರೇಷನ್ ಆರ್ಮಿ ವಿರುದ್ಧ, ಅಧ್ಯಕ್ಷ ಕ್ಸಿ ಜೀನ್ ಪಿಂಗ್ ವಿರುದ್ಧ ಇದ್ದಾರೆ. ಅವರನ್ನೆಲ್ಲ ಬಲಪ್ರಯೋಗಿಸಿ ದಮನ ಮಾಡುವ ಕಾರ್ಯದಲ್ಲಿ ಚೀನಾ ನಿರತವಾಗಿದೆ. ಈ ಜನರಿಗೆ ಭಾರತ ಸಹಾಯ ಮಾಡಿದಾಗ ಚೀನಾಕ್ಕೆ ಭಾರತದಲ್ಲಿ ತಾನು ಮಾಡುತ್ತಿರುವ ಧೂರ್ತ ಕಾರ್ಯ ಅರಿವಿಗೆ ಬರಲು ಸಾಧ್ಯವಿದೆ. ಹೀಗೆ ಮಾಡಿದಲ್ಲಿ ಖಂಡಿತವಾಗಿಯೂ ಚೀನಾ ಹಣ್ಣಾಗುತ್ತದೆ. ತನ್ನೊಳಗಿನ ಸಮಸ್ಯೆಗಳನ್ನು ಪರಿಹಾರ ಮಾಡಿಕೊಲ್ಳಲಾಗದಷ್ಟು ಅಧೀರಗೊಳ್ಳುತ್ತದೆ. ಅಲ್ಲದೇ ತನ್ನ ಸಮಸ್ಯೆ ಪರಿಹಾರ ಮಾಡಿಕೊಂಡು, ಉಳಿದ ಕಡೆಗೆ ಗಮನ ಹರಿಸೋಣ ಎಂದುಕೊಳ್ಳುತ್ತದೆ.
ಚೀನಾಕ್ಕೆ ಚೀನಾದ ರೀತಿಯಲ್ಲಿ ಪಾಠ ಕಲಿಸದೇ ಹೋದರೆ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆಯನ್ನು ತರುತ್ತದೆ. ಓಬಿಓಆರ್ ಮೂಲಕ, ತನ್ನ ವಸ್ತುಗಳನ್ನು ಮಾರಾಟ ಮಾಡುವ ಮೂಲಕ, ಭಯೋತ್ಪಾದನೆ ಹೆಚ್ಚಿಸುವ ಮೂಲಕ ಹೀಗೆ ಹಲವಾರು ಮಾರ್ಗಗಳನ್ನು ಚೀನಾ ಅನುಸರಿಸುವುದರಲ್ಲಿ ಸಂಶಯವಿಲ್ಲ. ಅದಕ್ಕೆ ಅದರದೇ ಆದ ಮಾರ್ಗದ ಮೂಲಕ ಉತ್ತರ ಕೊಟ್ಟಾಗಲಷ್ಟೇ ಚೀನಾ ಬಗ್ಗಿ ಬರುತ್ತದೆ. ಭಾರತದ ವಿಷಯದಲ್ಲಿ ತಲೆ ಹಾಕದೇ ಸುಮ್ಮನಾಗುತ್ತದೆ.