Saturday, March 29, 2014

ಮರುಕಳಿಸಿತು ಇತಿಹಾಸ (ಕಥಾ ಸರಣಿ ಭಾಗ-4)

       ವಸಂತಗಳುರುಳಿದ್ದವು. ಜಾತ್ರೆಯಲ್ಲಿ ಸಿಕ್ಕು ಕಣ್ಣ ಹನಿಯೊಂದಿಗೆ ವಾಣಿಯನ್ನು ಬೀಳ್ಕೊಟ್ಟಿದ್ದ ವಿನಾಯಕನಿಗೆ ಮತ್ತೆ ನೆನಪಾಗಿರಲಿಲ್ಲ. ತಾನಿಲ್ಲದೆಯೂ ಆಕೆ ಚನ್ನಾಗಿದ್ದಾಳಲ್ಲ ಎಂಬ ಭಾವನೆ ವಿನಾಯಕನಲ್ಲಿ ವಾಣಿಯನ್ನು ಮರೆಸುವಂತೆ ಮಾಡಿತ್ತು. ಬೆಂಗಳೂರಿನ ಸಾಪ್ಟ್ ವೇರ್ ಕಂಪನಿಯೊಂದು ವಿನಾಯಕನನ್ನು ಕೆಲಸಕ್ಕಾಗಿ ಕೈಬೀಸಿ ಕರೆದಿತ್ತು. ವಿನಾಯಕನೂ ಕೆಲವನ್ನು ರಪಕ್ಕನೆ ಬಾಚಿಕೊಂಡಿದ್ದ. ಸಂಬಳ ಐವತ್ತರು ಸಹಸ್ರಗಳ ಮೇಲೆ ಎಣಿಸಲೂ ಆರಂಭಿಸಿದ್ದ. ಹೀಗಿದ್ದಾಗಲೇ ವಿನಾಯಕನ ಮನೆಯಲ್ಲಿ ಆತನ ಮದುವೆಯ ಕುರಿತು ಮಾತನಾಡತೊಡಗಿದ್ದರು. ಮನೆಯವರು ಹುಡುಗಿಯನ್ನು ಹುಡುಕಲಿ ಎಂದು ವಿನಾಯಕನೂ ಸುಮ್ಮನುಳಿದಿದ್ದ. ಒಳ್ಳೆಯವಳಾಗಿ ತನ್ನ ಗುಣಗಳನ್ನು ಇಷ್ಟಪಟ್ಟು ಚನ್ನಾಗಿದ್ದರೆ ಸಾಕು. ಅಂತಹ ಹುಡುಗಿಯನ್ನು ಒಪ್ಪಿಕೊಳ್ಳೋಣ ಎಂಬ ನಿರ್ಧಾರಕ್ಕೆ ವಿನಾಯಕ ಬಂದಿದ್ದ.
                   ವಿನಾಯಕ ಸಾಫ್ಟ್ ವೇರ್ ಕಂಪನಿಯ ಕೆಲಸಗಾರನಾಗಿದ್ದ ಕಾರಣ ಸಾಕಷ್ಟು ಜಾತಕಗಳೂ ಬಂದಿದ್ದವು. ಅವುಗಳಲ್ಲಿ ಹಲವು ವಿನಾಯಕನ ಜಾತಕದೊಂದಿಗೆ ಹೊಂದಿಕೆಯಾಗುತ್ತಿದ್ದವು. ಹೊಂದಿಕೆಯಾಗುವ ನಾಲ್ಕೈದು ಜಾತಕಗಳೊಂದಿಗೆ ಬಂದಿದ್ದ ಹುಡುಗಿಯರ ಪೋಟೋಗಳನ್ನು ವಿನಾಯಕನಿಗೆ ಕಳಿಸಲಾಯಿತು. ವಿನಾಯಕ ಅವೆಲ್ಲವನ್ನೂ ನೋಡಿದ. ಅವುಗಳಲ್ಲಿ ಮೂರು ಹುಡುಗಿಯರು ವಿನಾಯಕನಿಗೆ ಇಷ್ಟವಾಗಲಿಲ್ಲ. ನಾಲ್ಕನೆಯ ಹುಡುಗಿ ಚನ್ನಾಗಿದ್ದಳು. ಐದನೆಯವಳು ನಾಲ್ಕನೆಯವಳಷ್ಟು ಚನ್ನಾಗಿರದಿದ್ದರೂ ಲಕ್ಷಣವಾಗಿದ್ದಳು. ಕೊನೆಗೆ ಸಾಕಷ್ಟು ಅಳೆದು-ತೂಗಿ ಐದನೆಯವಳಿಗೆ ಗ್ರೀನ್ ಸಿಗ್ನಲ್ ಕೊಟ್ಟ. ಶುಭದಿನವೊಂದರಂದು ವಿನಾಯಕನ ಮದುವೆ ಆ ಹುಡುಗಿಯ ಜೊತೆಗೆ ತನ್ನ ಹಳ್ಳಿಮನೆಯಲ್ಲಿ ನಡೆಯಿತು. ನಂತರದ ದಿನಗಳು ವಿನಾಯಕನಿಗೆ ಬಹಳ ಸಂತಸವನ್ನು ನೀಡುವಂತವಾಗಿದ್ದವು.

***
                  ಅರ್ಚನಾಳ ಮನೆಯಲ್ಲೂ ಗಂಡು ನೋಡುತ್ತಿದ್ದರು. ಹುಡುಗ ಸಾಫ್ಟ್ ವೇರ್ ಕೆಲಸದಲ್ಲಿಯೇ ಇರಬೇಕು ಎನ್ನುವುದು ಮನೆಯ ಹಿರಿಯರ ಆಸೆಯಾಗಿದ್ದ ಕಾರಣ ಹೆಚ್ಚಿನ ಆಯ್ಕೆಗಳಿರಲಿಲ್ಲ. ಒಂದೆರಡು ಸಂಬಂಧಗಳು ಬಂದಿದ್ದರೂ ಅರ್ಚನಾ ಅವುಗಳನ್ನು ಒಪ್ಪಿಕೊಂಡಿರಲಿಲ್ಲ. ಕೊನೆಗೊಂದು ದಿನ ವಿನಾಯಕನ ಜಾತಕ ಬಂದಾಗ ಪೋಟೋ ನೋಡಿದವಳೇ ಇಷ್ಟಪಟ್ಟು ಬಿಟ್ಟಿದ್ದಳು. ಹೀಗಾಗಿ ವಿನಾಯಕ-ಅರ್ಚನಾಳ ಮದುವೆ ಅದ್ಧೂರಿಯಾಗಿ ಜರುಗಿತ್ತು.
                  ಹಳ್ಳಿ ಹುಡುಗಿ ಅರ್ಚನಾ ಪದವಿಯ ವರೆಗೆ ಓದಿದ್ದಾಳೆ. ನಗರಜೀವನ ಹೊಸದಾಗಿದ್ದರೂ ಆಕೆಗದು ಆಕರ್ಷಣೀಯವಾಗಿರುವ ಕಾರಣ ಬೇಗನೆ ಹೊಂದಿಕೊಂಡಳು. ಮದುವೆಯಾದ ನಾಲ್ಕೇ ದಿನದಲ್ಲಿ ವಿನಾಯಕ ಹಾಗೂ ಅರ್ಚನಾ ದಂಪತಿಗಳು ಬೆಂಗಳೂರು ವಾಸಿಯಾಗಿಬಿಟ್ಟರು. ಬೆಂಗಳೂರು ಸೇರಿದ ಕೆಲವೇ ವಾರಗಳಲ್ಲಿ ಅರ್ಚನಾಳಿಗೂ ಒಳ್ಳೆಯ ಕಂಪನಿಯೊಂದರಲ್ಲಿ ಜಾಬ್ ಸಿಕ್ಕಿತು. ನಂತರ ಇವರ ಬದುಕು ಯಾಂತ್ರೀಕೃತವಾಗತೊಡಗಿತು. ವಾರದಲ್ಲಿ ಐದು ದಿನ ಬಿಡುವಿಲ್ಲದ ಕೆಲಸ. ಉಳಿದೆರಡು ದಿನ ಪಂಜರದಿಂದ ಹಾರಿಬಿಟ್ಟಂತೆ ಬದುಕು. ಪುರಸೊತ್ತು ಸಿಗುವ ಎರಡು ದಿನಗಳಲ್ಲಿ ಏನು ಮಾಡೋಣ, ಏನು ಮಾಡಬಾರದು ಎನ್ನುವ ಗೊಂದಲ. ಮೊದ ಮೊದಲು ಈ ಕೆಲಸ-ಬಿಡುವಿಲ್ಲದ ಓಟ ಅರ್ಚನಾ ಹಾಗೂ ವಿನಾಯಕರಿಗೆ ಖುಷಿಕೊಟ್ಟವಾದರೂ ನಂತರದ ದಿನಗಳಲ್ಲಿ ಇಬ್ಬರಲ್ಲೂ ಏನೋ ಅಸಹನೆ ಕಾಡಲು ಆರಂಭವಾಯಿತು. ಯಾಂತ್ರೀಕೃತ ಬದುಕಿನಲ್ಲಿ ಏನನ್ನೋ ಕಳೆದುಕೊಳ್ಳುತ್ತಿದ್ದೇವೆ ಎಂಬ ಭಾವನೆ ದಟ್ಟವಾಗತೊಡಗಿತು. ಇದನ್ನು ಮರೆಸಲೋ ಎಂಬಂತೆ ವೀಕೆಂಡಿನಲ್ಲಿ ಸಿನೆಮಾ, ಟೂರು, ಪೋಟೋಗ್ರಫಿ, ಟ್ರೆಕ್ಕಿಂಗ್ ಹೀಗೆ ಹಲವು ವಿಧದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲಾರಂಭಿಸಿದರು.
                  ಆದರೆ ದಿನಗಳೆದಂತೆ ಟೂರು ಬೋರಾಗತೊಡಗಿತು, ಸಿನೆಮಾ ಗಳು ಬಾಲಿಶವೆನ್ನಿಸತೊಡಗಿದವು. ಕ್ಲಿಕ್ಕಿಸುತ್ತಿದ್ದ ಪೋಟೋಗಳೆಲ್ಲ ಬಣ್ಣಕಳೆದುಕೊಂಡಂತೆ ಬಾಸವಾಗಲಾರಂಭಿಸಿದವು. ಟ್ರೆಕ್ಕಿಂಗೂ ಮನಸ್ಸನ್ನು ಆವರಿಸಲಿಲ್ಲ. ಕೆಲಸದ ಕಾರಣವೋ ಎಂಬಂತೆ ಸಂಸಾರವೂ ಯಾಂತ್ರೀಕೃತವಾಗಲಾರಂಭಿಸಿದ್ದವು.  ಸಂಸಾರದಲ್ಲಿ ಎಲ್ಲ ಇದ್ದರೂ ಏನೂ ಇಲ್ಲ ಎನ್ನುವಂತಾಗಲಾರಂಭಿಸಿತ್ತು. ಗಂಡ-ಹೆಂಡತಿಯರಾಗಿ ಬದುಕು ನಡೆಡುತ್ತಿದ್ದರಾದರೂ ಹೊತ್ತಲ್ಲದ ಹೊತ್ತಿನಲ್ಲಿ ಕೆಲಸಕ್ಕೆ ಹೊರಡಬೇಕು. ಜಗತ್ತು ನಗುತ್ತ ಓಡಾಡುವ ಹೊತ್ತಿನಲ್ಲಿ ಬಂದು ಮನೆ ಸೇರಿ ನಿದ್ದೆ ಮಾಡಬೇಕು, ಎಲ್ಲ ಬೆಚ್ಚಗೆ ಗೂಡಿನಲ್ಲಿ ಇರುವ ಸಮಯದಲ್ಲಿ ಇವರು ಮಾತ್ರ ಯಾವುದೋ ಕಾಂಕ್ರೀಟು ಕೋಣೆಯಲ್ಲಿ ಕಂಪ್ಯೂಟರಿನ ಮುಂದೆ ಕೆಲಸವನ್ನು ಮಾಡುತ್ತ, ಹಣೆಬರಹವನ್ನು ಹಳಿಯುತ್ತ ಕೂರಬೇಕು. ತಿಂಗಳ ಆರಂಭದಲ್ಲಿ ಶ್ರೀಮಂತರಂತೆ ಅಡ್ಡಾಡುತ್ತ, ತಿಂಗಳಾಂತ್ಯದಲ್ಲಿ ಬಡತನದ ಬೇಗೆಯಲ್ಲಿ ಬೇಯುತ್ತ, ಪ್ರೆಸ್ಟಿಜ್ ಪ್ರಶ್ನೆಯಾಗಿ ದುಬಾರಿ ಜೀವನದಲ್ಲೇ ಬದುಕುತ್ತ ಹೈರಾಣಾದರು.
                 ಇಂತಹ ಸಮಯದಲ್ಲೇ ವಿನಾಯಕ ಅನೇಕ ಸಾರಿ ಈ ಹಾಳಾದ ಕೆಲಸವನ್ನು ಬಿಟ್ಟು ತಮ್ಮೂರಿಗೆ ವಾಪಾಸಾಗಿಬಿಡಲಾ ಎಂದುಕೊಂಡಿದ್ದಿದೆ. ಆದರೆ ಒಂದು ಚಕ್ರಕ್ಕೆ ಸಿಕ್ಕಿಬಿದ್ದಾಗ ಏನೆಂದರೂ ಬದಲಾವಣೆ ಕಷ್ಟ. ವರ್ಷಗಳೆರಡು ಉರುಳಿದವು. ಕೊನೆಗೊಮ್ಮೆ ಇಬ್ಬರೂ ಬೆಂಗಳೂರಿನ ಬದುಕಿಗೆ ಶರಣು ಹೊಡೆದು ತಮ್ಮೂರಿಗೆ ವಾಪಾಸಾಗಲು ಒಂದು ಬಲವಾದ ನೆಪ ಸಿಕ್ಕೇಬಿಟ್ಟಿತು. ಅರ್ಚನಾ ತಾಯಿಯಾಗಿದ್ದಳು.  ಮುದ್ದಾದ ಕೂಸಿಗೆ ವಿನಾಯಕ ಅಪ್ಪನಾಗಿದ್ದ. ಕೂಸಿನ ನಗು, ಕೂಸಿನ ಸೆಳೆತ, ಕೂಸಿನ ಪ್ರೀತಿ ವಿನಾಯಕ-ಅರ್ಚನಾರನ್ನು ಹಳ್ಳಿಯ ಕಡೆಗೆ ಎಳೆದುಕೊಂಡು ಬಂದಿತ್ತು. ಅಷ್ಟರಲ್ಲಿ ಸಂಪಾದನೆಯೂ ಸಾಕಷ್ಟಾದ್ದರಿಂದ ಇನ್ನು ಬೆಂಗಳೂರು ಸಾಕು ಎನ್ನುವ ನಿರ್ಧಾರವನ್ನು ಮಾಡಿಯೇ ವಿನಾಯಕ-ಅರ್ಚನಾ ದಂಪತಿಗಳು ರಾತ್ರಿಯೇ ಇಲ್ಲದ ಊರನ್ನು ಬಿಟ್ಟು ಬಂದಿದ್ದರು. ಅಲ್ಲೊಂದು ಕಡೆಗೆ ಜಮೀನನ್ನು ಕೊಂಡು ಹಳ್ಳಿಗನಾಗಿ ಬದುಕಲು ತೀರ್ಮಾನಿಸಿದ್ದರು.

***
               ವಿನಾಯಕ ಕೂಸು ಹುಟ್ಟಿದ ಘಳಿಗೆಯಲ್ಲಿ ಹೆಸರಿಗೆ ಆಲೋಚನೆ ಮಾಡಿದ್ದ. ಅರ್ಚನಾಳೂ ಯಾವ ಹೆಸರಿಡಬೇಕೆಂದು ಆಲೋಚಿಸಿದ್ದಳು. ಅದ್ಯಾವುದೋ ಘಳಿಗೆಯಲ್ಲಿ ವಿನಾಯಕನಿಗೆ ಹೊಣೆದ ಹೆಸರು `ವಾಣಿ..'. ಈ ಹೆಸರು ಹೊಳೆದಿದ್ಯಾಕೆ ಎನ್ನುವ ಕಾರಣ ವಿನಾಯಕನಿಗೆ ಅರಿವಾಗಲಿಲ್ಲ. ವಾಣಿಯ ಹೆಸರೇ ಮತ್ತೆ ನೆನಪಾಗಿದ್ದಕ್ಕೆ ವಿನಾಯಕ ತನ್ನೊಳಗೆ ತಾನು ವಿಸ್ಮಿತನೂ ಆಗಿದ್ದ. ಬೆಂಗಳೂರಿನಲ್ಲಿದ್ದಷ್ಟು ದಿನಗಳೂ ವಾಣಿ ನೆನಪಾಗಿರಲಿಲ್ಲ. ಮರಳಿ ಊರಿಗೆ ಬಂದಾಗ ನೆನಪಾದಳೇ ಎಂದುಕೊಂಡ. ಇಷ್ಟೆಲ್ಲ ದಿನಗಳು ಕಳೆದಿದ್ದರೂ ವಾಣಿಯ ಬಗೆಗಿನ ಭಾವನೆ ಹಾಗೂ ಆಕೆಯ ನೆನಪು ತನ್ನಲ್ಲಿನ್ನೂ ಶಾಶ್ವತವಾಗಿದೆಯಲ್ಲ ಎಂದುಕೊಂಡ. ಮೊದಲ ಪ್ರೇಮವೇ ಹೀಗಿರಬೇಕು. ಎಷ್ಟು ಕಷ್ಟಪಟ್ಟು ಮರೆತರೂ ಮರೆಯಲೊಲ್ಲದು. ಮತ್ತೆ ಮತ್ತೆ ನೆನಪಾಗಿ ಬದುಕಿನ ತಿರುವಿನಲ್ಲೆಲ್ಲೋ ಧುತ್ತನೆ ಪ್ರತ್ಯಕ್ಷವಾಗಿ ಅಚ್ಚರಿಯ ಕಚಗುಳಿಯನ್ನಿತ್ತು, ಬೆಚ್ಚಿ ಬೀಳಿಸುತ್ತದೆ. ಹುಚ್ಚು ಹಿಡಿಸುತ್ತದೆ ಎಂದುಕೊಂಡ. ವಾಣಿಯ ಹೆಸರೇ ಮಗಳಿಗಿರಲಿ. ಮಗಳಲ್ಲಿ ವಾಣಿಯನ್ನು ಕಾಣುತ್ತೇನೆ ಎಂದುಕೊಂಡ. ತನ್ನೂರಿನ ತೋಟದ ನಡುವಿನಿಂದ ಹಾದು ಬಂದ ತಂಗಾಳಿಯೊಂದು ಆತನ ಮುಖದ ಮೇಲೆ ನರ್ತನ ಮಾಡಿದಂತೆ ಸುಳಿದಾಡಿ ಸುಮ್ಮನೆ ಸರಿದುಹೋದಂತಾಯಿತು. ವಿನಾಯಕನ ಮನಸ್ಸು ತಂಪಾಗಿತ್ತು.
                ವಿನಾಯಕ ಹಾಗೂ ವಾಣಿ ಮತ್ತೊಮ್ಮೆ ಹುಟ್ಟಿ ಬಂದಿದ್ದರು. ಇತಿಹಾಸ ಮತ್ತೊಮ್ಮೆ ಮರುಕಳಿಸಿ ನಕ್ಕಿತ್ತು. ಮತ್ತೆ ಹುಟ್ಟಿದ ವಾಣಿ-ವಿನಾಯಕರ ನಡುವೆಯಾದರೂ ಪ್ರೇಮ ಹುಟ್ಟಲಿ.. ಅದು ಸುಖಾಂತ್ಯವಾಗಲಿ ಎಂದು ಹಾರೈಸಿತ್ತು.

**
(ನಮಸ್ಕಾರ
ನಾನು ಈ ಕಥೆಯ ಮೊದಲ ಭಾಗವನ್ನು ಬರೆಯುವಾಗ ಖಂಡಿತ ಇಷ್ಟು ಮುಂದುವರಿಯುತ್ತದೆ ಎಂದುಕೊಂಡಿರಲಿಲ್ಲ. ಮೊದಲ ಭಾಗಕ್ಕೆ ಒಳ್ಳೆಯ ರೆಸ್ಪಾನ್ಸ್ ನೀಡಿದ ಕಾರಣ ಎರಡನೇ ಭಾಗಕ್ಕೆ ಮುಂದುವರಿಯಿತು. ನಂತರ ಇದೇ ಮೂರಾಗಿ ಇದೀಗ ನಾಲ್ಕಕ್ಕೆ ಬಂದು ನಿಂತಿದೆ. ಖಂಡಿತ ಇದೇ ಕೊನೆಯ ಭಾಗ. ಇನ್ನು ಮುಂದುವರಿಸಲಾರೆ. ಈ ಕಥೆಯ ಮೊದಲ ಭಾಗ ಖಂಡಿತ ನಡೆದಿದ್ದು. ಆದರೆ ಉಳಿದ ಭಾಗಗಳು ಮಾತ್ರ ಕಲ್ಪನೆ. ಸ್ವಲ್ಪ ಎಳೆದಿದ್ದು ಹೆಚ್ಚಾಗಿರಬಹುದು.. ಹೇಳಿದ ವಿಷಯವೇ ಮತ್ತೆ ಮತ್ತೆ ಬಂದು ಕಿರಿಕಿರಿಯಾಗಿರಬಹುದು. ಖಂಡಿತ ಇದು ನೆನಪುಗಳೊಂದಿಗೆ ಆಟವಾಡಿದ ಕಥೆ ಎಂದುಕೊಳ್ಳಬಹುದು. ಕಾಡುವ ಮೊದಲ ಪ್ರೇಮದ ಕುರಿತಾದ ಕಥೆ. ಸಲಹೆ ನೀಡಿ ಸೂಚನೆಗಳನ್ನು ಕೊಟ್ಟಿದ್ದಕ್ಕೆ ಮತ್ತೊಮ್ಮೆ ಧನ್ಯವಾದ ಹೇಳಲೇ ಬೇಕು.
ಥ್ಯಾಂಕ್ಯೂ )

ಕಲ್ಪನಾ

ಆಕೆಯೊಂದು ಕಲ್ಪನಾ ಕಾವ್ಯ |

ಅಂಗೈ ಮುಷ್ಟಿಯೊಳಗೆ ಇಡಿಯ
ಆಗಸವ ಹಿಡಿಯ ಬಯಸಿದಾಕೆ.. |
ಕಲ್ಲು ಮಣ್ಣುಗಳ ನಡುವೆ
ಸುಮ್ಮನೆ ಅರಳಿದಾಕೆ ..|
ಬಡತನವೇ ಒಡಮೂಡಿದಂತಿಹ
ನಿಘೂಡ ಹಳ್ಳಿಯೊಳು ಜನಿಸಿದಾಕೆ
ನಮ್ಮ ಕಲ್ಪನಾ |

ಹೊಸ ಉತ್ಸಾಹದ ಚಿಲುಮೆ ಚಿಮ್ಮಿ
ಚೆಲ್ಲುವಾಕೆ ಕಲ್ಪನಾ..|
ನಮ್ಮ ನಿಮ್ಮೊಳಗಣ ಮೂರ್ತ-
ಅಮೂರ್ತ ಕನಸು ಕಲ್ಪನಾ,
ಅಂದೊಮ್ಮೆ ಆಗಸಕ್ಕೆ ಹಾರಿ
ಆಗಸವ ಅಂಗೈಯೊಳಗೆ ಹಿಡಿದು
ಮಿನುಗಿದಳು ಕಲ್ಪನಾ |

ಕಾವ್ಯವಾಗಲೇ ಕವನವಾಯಿತು
ಸುಂದರ ಹಾಡಾಯಿತು..
ಕಲ್ಪನೆ ವಾಸ್ತವವಾಯಿತು |

ಆಗಸದ ಚಂದ್ರ ನಕ್ಷತ್ರಗಳೊಳಗೆ
ಅರಳಿ ನಿಂತಳು ಕಲ್ಪನಾ..
ಆಗಸಕ್ಕೇರಿದ ಕಲ್ಪನಾ
ಮರಳಿ ಭುವಿಗೆ ಬಂದು
ಭುವಿ ಭಾರತದ ಕನಸು ಕಂಡು
ಚುಂಬಿಸಬಯಸಿದಳು |
ಬಯಸಿದಾಗಸವೇ ಬೆಂಕಿ
ಮಳೆಯಂತಾಯ್ತು |
ವಾಸ್ತವ ಕಹಿಯಾಯ್ತು |

ರಂಗಿನ ಲೋಕದಲ್ಲಿ ವಿಹಾರ
ಮಾಡಬಯಸಿದ್ದಳು ಕಲ್ಪನಾ
ರಂಗು ರಂಗಾಗಿದ್ದಳು ಕಲ್ಪನಾ |
ರಂಗಿನ ರಂಗಮಂಚವೇ ಹಾವಾಯಿತು |

ಚಿಟ್ಟೆಯಂತಾದ ಕಲ್ಪನಾ
ಆ ಬೆಂಕಿಯೊಳು ಕರಕಲಾಗಿ
ಸುಟ್ಟು-ಬೆಂದು-ಸೀದು ಹೋದಳು...

ಮತ್ತೊಮ್ಮೆ ಕಲ್ಪನೆ
ವಾಸ್ತವವಾಯಿತು |
ಕಲ್ಪನಾ ಮಿನುಗುತಾರೆಯಾದಳು |

(ಈ ಕವಿತೆಯನ್ನು ಬರೆದಿದ್ದು 3.04.2007ರಂದು ದಂಟಕಲ್ಲಿನಲ್ಲಿ)

Thursday, March 27, 2014

ಮರೆತೆನೆಂದರೂ..(ಕಥಾ ಸರಣಿ ಭಾಗ-3)

         `ಯೇ ವಾಣಿ.. ಮಗಂಗೆ ನಕ್ಷತ್ರರಿತ್ಯಾ   ಅಕ್ಷರದ ಹೆಸರು ಇಡಲೆ ಅಡ್ಡಿಲ್ಲೆ ಹೇಳಿ ಭಟ್ರು ಹೇಳ್ತಾ ಇದ್ರು.. ಎಂತಾ ಹೇಳಿ ಹೆಸರು ಇಡಲಕ್ಕು.? ಎಂತಾದ್ರೂ ನೆನಪು ಮಾಡ್ಕಂಜ್ಯಾ..? ಅಚ್ಚೆಮನೆ ತಂಗಿ ಹತ್ರ ಹೆಸರಿನ ಪುಸ್ತಕ ತಗಂಡುಬಪ್ಪಲೆ ಹೇಳಿದಿದ್ಯಲೆ. ಯಾವುದಾದ್ರೂ ಚೊಲೋ ಹೆಸ್ರು ಇದ್ರೆ ಆರ್ಸು ನೋಡನಾ.. ' ಎಂದು ವಾಣಿಯ ಗಂಡ ಹೇಳಿದಾಗ ವಾಣಿಗೆತಟ್ಟನೆ ನೆನಪಾದ ಹೆಸರು ವಿನಾಯಕ.
                  ಮದುವೆಯಾಗಿ ಮಗುವಿನ ತಾಯಿಯಾದರೂ ಈ ಹೆಸರು ಮರೆಯುತ್ತಿಲ್ಲವಲ್ಲ ಎಂದುಕೊಂಡಳು ವಾಣಿ. ಜಾತ್ರೆಯಲ್ಲಿ ಸಿಕ್ಕು ಮಾತನಾಡಿದ ನಂತರ ವಿನಾಯಕನ ಕುರಿತು ಒಂದೆ ಒಂದು ನೆನಪಿನ ಸಾಲು ಕೂಡ ವಾಣಿಯ ಮನಸ್ಸಿನಲ್ಲಿ ಹಾಯ್ದಿರಲಿಲ್ಲ. ಜಾತ್ರೆಯ ಜನಜಂಗುಳಿಯಲ್ಲಿ ಕಣ್ಣಂಚಿನಲ್ಲಿ ಮೂಡಿದ್ದ ಹನಿ ನೀರನ್ನು ಮನೆಯವರಿಗೂ ಕಾಣದಂತೆ ಒರೆಸಿಕೊಂಡು ನಿಟ್ಟುಸಿರುವ ಬಿಟ್ಟಿದ್ದಳು. ಹೋಗುವ ಮುನ್ನ ಕೊನೆಯ ಸಾರಿ ಮಾತನಾಡಬೇಕಿತ್ತು ಎಂದು ಜಾತ್ರೆಯಲ್ಲಿ ಅನ್ನಿಸಿತ್ತಾದರೂ ಅದಕ್ಕೆ ಅವಕಾಶವನ್ನೇ ನೀಡದಂತೆ ವಿನಾಯಕನ ದೋಸ್ತರು ಆತನನ್ನು ದೂರಕ್ಕೆ ಕರೆದೊಯ್ದಿದ್ದರು.
                  ಆ ನಂತರದ ದಿನಗಳಲ್ಲಿ ವಾಣಿಗೆ ವಿನಾಯಕ ನಿಜಕ್ಕೂ ಮರೆತು ಹೋಗಿದ್ದ. ದಿನಕಳೆದಂತೆಲ್ಲ ವಾಣಿ ಮನೆಯ-ಸಂಸಾರದ ಒತ್ತಡಗಳಲ್ಲಿ ಸಿಲುಕಿದ್ದಳು. ವಿನಾಯಕನನ್ನು ನೆನಪು ಮಾಡಿಕೊಳ್ಳಲೂ ಪುರಸೊತ್ತು ಸಿಗುತ್ತಿರಲಿಲ್ಲ. ಮನಸ್ಸಿನ ತುಂಬ ನೆನಪಾಗಿ ಕಾಡಿದ್ದ, ಮದುವೆಯ ನಂತರವೂ ಮತ್ತೆ ಮತ್ತೆ ಕನಸಾಗಿದ್ದ ಹುಡುಗ ಈ ನಡುವೆ ಬಾ ಎಂದರೂ ಕನಸಿನಲ್ಲಿ ಬರುತ್ತಿರಲಿಲ್ಲ. ಕಾಡುತ್ತಿರಲಿಲ್ಲ. ವಿನಾಯಕನಿಗೆ ಜಾಗಕೊಟ್ಟಿದ್ದ ಹೃದಯದಲ್ಲಿ ತನ್ನ ಗಂಡನನ್ನು ನಿಧಾನವಾಗಿ ಕೆತ್ತಿಕೊಳ್ಳುತ್ತಿದ್ದಳು. ವಿನಾಯಕ ಸ್ಮೃತಿ ಪಟಲದಿಂದ ಮರೆಯಾಗುತ್ತಿದ್ದ.
                  ಹೀಗೆ ದಿನಕಳೆದಾಗ ಅದ್ಯಾವ ಮಾಯೆಯಲ್ಲಿ ತಾನು ತನ್ನೊಡಲಲ್ಲಿ ಇನ್ನೊಂದು ಜೀವವನ್ನು ಹೊತ್ತುಕೊಂಡಿದ್ದೆ ಎನ್ನುವುದು ವಾಣಿಗೆ ಮಾಯೆಯಂತಾಗಿತ್ತು. ಅದ್ಯಾವುದೋ ಶುಭ ಗಳಿಗೆಯಲ್ಲಿ ತನ್ನೊಳಗೆ ಇನ್ನೊಂದು ಜೀವ ಮೊಳೆಯಲು ಕಾತರವಾಗಿತ್ತು. ಗರ್ಭದೊಳಗಿನ ಶಿಶು ಬೆಳೆದಂತೆಲ್ಲ ವಾಣಿ ಮನದೊಳಗೆ ಖುಷಿಯನ್ನು ಅನುಭವಿಸಿದ್ದಳು. ಅದ್ಯಾವುದೋ ತಿಂಗಳಲ್ಲಿ ಒಡಲೊಳಗಿನ ಜೀವ ಚಲನೆಯನ್ನೂ ಪಡೆದುಕೊಂಡಿತು. ಗರ್ಭಗುಡಿಯೊಳಗೆ ಆಡಹತ್ತಿತು. ಬೆಳೆದು ಒಡಲಿನ ಗೋಡೆಯನ್ನು ಫುಟಬಾಲಿನಂತೆ ಒದೆಯಲು ಆರಂಭಿಸಿದಾಗ ಹುಟ್ಟುವ ಮಗು ಗಂಡೇ ಆಗಿರಲಿ ಎಂದು ಆಶಿಸಿಕೊಂಡಿದ್ದಳು. ಗಂಡ ಹಲವು ಸಾರಿ ಸ್ಕ್ಯಾನಿಂಗ್ ಮಾಡಿಸಿಕೊಂಡು ಹುಟ್ಟಲಿರುವ ಮಗು ಗಂಡೋ ಹೆಣ್ಣೋ ನೋಡಿಸೋಣ ಎಂದಿದ್ದಾಗ ವಾಣಿ ಮೊಟ್ಟ ಮೊದಲ ಬಾರಿಗೆ `ಅದು ತಪ್ಪು ಕಣ್ರಿ. ಬದುಕಿನಲ್ಲಿ ಕೆಲವು ಸಾರಿಯಾದರೂ ಕುತೂಹಲ ಇರಲಿ. ಮಗು ಗಂಡಾಗಲಿ ಅಥವಾ ಹೆಣ್ಣಾಗಲಿ.. ಈಗ ಅದರ ಪರೀಕ್ಷೆ ಬೇಡವೇ ಬೇಡ..' ಎಂದು ಹೇಳಿದ್ದಳು. ಹೀಗೆ ಹೇಳಿದ ನಂತರ ವಾಣಿಗೆ ಸಿಕ್ಕಾಪಟ್ಟೆ ಆತ್ಮವಿಶ್ವಾಸ ಬಂದಿತ್ತು.
                  ಬಹುಶಃ ವಾಣಿ ಹೀಗೆ ಹೇಳಿದಳು ಎಂದು ಗೊತ್ತಾದ ನಂತರವೇ ಆಕೆಯ ಅತ್ತೆಯ ಸಿಡಿಮಿಡಿ ಹೆಚ್ಚಾಗಿದ್ದಿರಬೇಕು. ಸುಮ್ಮನೆ ಇದನ್ನು ಗಮನಿಸಿದ್ದ ವಾಣಿ ಮಾತಾಡಲು ಹೋಗಿರಲಿಲ್ಲ. `ವಾಣಿಗೆ ಗಂಡು ಮಗುವೇ ಹುಟ್ಟಬೇಕು. ಹೆಣ್ಣು ಬೇಡವೇ ಬೇಡ..' ಎಂದು ಆಗಾಗ ಅತ್ತೆ ಹೇಳುತ್ತಿದ್ದ ಮಾತು ಕೇಳಿ ವಾಣಿ ಮನಸ್ಸಿನೊಳಗೆ ಕುದ್ದುಹೋಗಿದ್ದರೂ ಅದನ್ನು ಅವರೆದುರು ಆಡಿರಲಿಲ್ಲ.
                 ನವ ವಸಂತಗಳು ತುಂಬಿ ಅದೊಂದು ಶುಭದಿನ ಒಡಲೊಳಗಿನ ಭುವಿಗಿಳಿದಿತ್ತು. `ಗಂಡು ಮಗು..' ಎಂದು ವೈದ್ಯರು ಹೇಳಿದ್ದೇ ತಡ ಮೊದಲಿಗೆ ನಿಟ್ಟುಸಿರು ಬಿಟ್ಟ ವಾಣಿ ತನ್ನ ಆರಾಧ್ಯದೈವ ವರದಮೂರ್ತಿ ಗಣಪತಿಗೆ ಮನಸಾರೆ ವಂದಿಸಿದ್ದಳು. `ಯಮ್ಮನೆದಕ್ಕೆ ಅಂತೂವಾ ಗಂಡೇ ಹುಟ್ಟಿದ್ದು.. ಕೂಸು ಹುಟ್ಟಿದ್ರೆ ಆನಂತೂ ಅದನ್ನ ಮನೆಯೊಳಗೆ ಸೇರಿಸ್ತಿದ್ನಿಲ್ಲೆ..' ಎಂದು ಅತ್ತೆ ಕೊಂಕು ನುಡಿದಿದ್ದು ಕೇಳಿದ್ದರೂ ಕೇಳಿಸದಂತಿದ್ದಳು ವಾಣಿ. ಮಗು ಬೆಳ್ಳಗಿತ್ತು. ಗುಂಡಗಿತ್ತು. ನಕ್ಕರೆ ಮುತ್ತು ಉದುರುವಂತಿದ್ದವು. ವಾಣಿ ಹಾಗೂ ಆಕೆಯ ಗಂಡನಿಗೆ ಸ್ವರ್ಗವೇ ಧರೆಗಿಳಿದು ಬಂದಂತಿತ್ತು.
                 ನಂತರದ ದಿನಗಳು ಕನಸಿನಂತೆ ಕಳೆದವು. ಸೂತಕದ ಶಾಸ್ತ್ರದ ಕೊನೆಯ ದಿನ ಮಗುವಿಗೆ ನಾಮಕರಣ ಮಾಡಬೇಕು. ಮನೆಗೆ ಬಂದಿದ್ದ ಪುರೋಹಿತ ಭಟ್ಟರು ಪಂಚಗವ್ಯ ಕುಡಿಸಿ ಶುದ್ಧಿ ಮಾಡಿ ಪಂಚಾಂಗ ತೆಗೆದು `ವ' ಅಕ್ಷರ ಬರುತ್ತದೆ. ವ ಅಕ್ಷರದ ಹೆಸರನ್ನಿಡಿ ಎಂದು ಹೇಳಿದಾಗ ವಾಣಿಗೆ ತಟ್ಟನೆ ನೆನಪಾಗಿದ್ದು ವಿನಾಯಕ. ತನಗ್ಯಾಕೆ ಈ ಹೆಸರೇ ನೆನಪಾಯಿತು ಎಂದು ಅನೇಕ ಸಾರಿ ಆಲೋಚಿಸಿದ್ದಳು ವಾಣಿ. ವಿನಾಯಕನನ್ನು ಮರೆತು ಆಗಲೇ ಬಹಳ ಸಮಯ ಘಟಿಸಿ ಹೋಗಿದೆ. ಆದರೂ ಆತನೇ ಯಾಕೆ ನೆನಪಾಗಬೇಕು. ಆ ಹೆಸರೇ ಯಾಕೆ ಕಣ್ಮುಂದೆ ಸುಳಿಯಬೇಕು..? ಬಿಟ್ಟೆನೆಂದರೂ ಆತನ ಹೆಸರು ಮತ್ತೆ ಮತ್ತೆ ನೆನಪಾಗುತ್ತಿದೆ ಎಂದಾದರೆ ವಿನಾಯಕನ ಬಗ್ಗೆ ನನ್ನ ಮನಸ್ಸಿನಲ್ಲಿ ಇನ್ನೂ ಸ್ಥಾನವಿದೆಯಾ..? ಎಂದೆಲ್ಲ ಆಲೋಚಿಸಿದ್ದರೂ ಗಂಡನ ಬಳಿ ಅದೇ ಹೆಸರನ್ನು ಸೂಚಿಸಿದ್ದಳು.
                 `ವಿನಾಯಕ... ವಿನಾಯಕ.. ವಿನಾಯಕ...' ಎಂದು ಮಗುವಿನ ಬಲಗಿವಿಯಲ್ಲಿ ಮೂರು ಸಾರಿ ಹೆಸರು ಉಚ್ಛರಿಸುವುದರ ಜೊತೆಗೆ ವಿನಾಯಕ ಎಂಬ ಹೆಸರನ್ನು ಮಗು ಪಡೆದುಕೊಂಡಿತ್ತು.

***
               `ಇದೆಂತಾ ಮಳ್ಳು ಹುಚ್ಚು ನಿಂಗೆ..? ಮಗು ಹುಟ್ಟುವುದಕ್ಕೂ ಮುನ್ನ ಅದರ ಲಿಂಗ ಪರೀಕ್ಷೆ ಮಾಡಲಾಗ. ಹುಟ್ಟೋ ಮಗು ಗಂಡೋ ಹೆಣ್ಣೋ ಹೇಳಿ ಪರೀಕ್ಷೆ ಮಾಡಿಸಿದ್ದ ಹೇಳಿ ಗೊತ್ತಾದರೆ ಜೈಲಿಗೆ ಹೋಗಕಾಗ್ತು. ಗಂಡು ಹುಟ್ಟಲಿ, ಹೆಣ್ಣು ಹುಟ್ಟಲಿ. ಯಂದೆ ಮಗು ಅಲ್ದ. ಹುಟ್ಟ ಮಗುವಿನ ಮೇಲೆ, ವಾಣಿಯ ಮೇಲೆ ಎಂತೆಂತಾದ್ರೂ ಆರೋಪ ಹೊರಸಿದ್ರೆ ಸರಿಯಿರ್ತಿಲ್ಲೆ ನೋಡು..' ಎಂದು ಸುಧೀರ ಮೊಟ್ಟ ಮೊದಲು ತನ್ನ ತಾಯಿಯ ಎದುರು ಮಾತನಾಡಿದ್ದ.
               ನಾಲ್ಕೆಕರೆ ಜಮೀನಿನ ಒಡೆಯ ಸುಧೀರ ಹೆಗಡೆ. ಆತನಿಗೆ ವಾಣಿಯ ಜಾತಕ ಬಂದಾಗ ಮೊದಲಿಗೆ ಪೋಟೋ ನೋಡಬೇಕು. ಕೂಸು ಚನ್ನಾಗಿದ್ದರೆ ಮದುವೆಗೆ ಒಪ್ಪಿಕೊಳ್ಳುತ್ತೇನೆ ಎಂದು ಖಡಾಖಂಡಿತವಾಗಿ ಹೇಳಿದ್ದ. ಕೊನೆಗೆ ವಾಣಿಯ ಪೋಟೋವನ್ನು ನೋಡಿದ್ದ. ಚನ್ನಾಗಿದ್ದಾಳೆ ಕೂಸು. ಬಿ.ಕಾಂ ಓದಿದ್ದಾಳೆ ಎಂದಾಗ ಮಾತ್ರ ಸುಧೀರನ ಮನಸ್ಸಿನಲ್ಲಿ ಕೊಂಚ ಅಳುಕು ಉಂಟಾಗಿದ್ದು ನಿಜ. ಓದಿದ ಹುಡುಗಿ. ಕಾಮರ್ಸ್ ಕಾಲೇಜಿನವಳು. ಆ ಕಾಲೇಜಿನ ಹುಡುಗಿಯರು ಸ್ವಲ್ಪ ಜೋರಿರುತ್ತಾರೆ ಎಂದು ಕೇಳಿ ತಿಳಿದಿದ್ದ ಸುಧೀರ ಕೊನೆಗೊಮ್ಮೆ ಮದುವೆಗೆ ಒಪ್ಪಿಕೊಂಡಿದ್ದ. ಶಿರಸಿಯಲ್ಲಿ ಕೆಲಸದಲ್ಲಿದ್ದವನಿಗೆ ವಾಣಿಯ ಕುರಿತು ಅಲ್ಲಿ ಇಲ್ಲಿ ವಿಚಾರಿಸಿದಾಗ ಮಾಹಿತಿ ನೀಡಿದವರು ಅನೇಕ ಜನರಿದ್ದರು. ಆತ ಹಲವರ ಬಳಿ ವಾಣಿಯ ಬಗ್ಗೆ ಕೇಳಿದ್ದ. ಅವರೆಲ್ಲರೂ ಕೂಸಿನ ಒಳ್ಳೆಯ ಗುಣಗಳ ಬಗ್ಗೆ ಹೇಳಿದ್ದರು. ಆದರೆ ಯಾರೂ ಕೂಡ ವಾಣಿ ಹಾಗೂ ವಿನಾಯಕರ ಬಗ್ಗೆ ಹೇಳಿರಲಿಲ್ಲ. ಹುಡುಗಿ ಒಳ್ಳೆಯವಳು ಎಂಬುದು ಗೊತ್ತಾದ ತಕ್ಷಣ ಮದುವೆಗೆ ಒಪ್ಪಿಕೊಂಡುಬಿಟ್ಟಿದ್ದ.
               ಸ್ವರ್ಗದಲ್ಲಿ ನಡೆಯಿತು ಎಂಬಂತೆ ಮದುವೆಯಾಗಿತ್ತು. ಮದುವೆಯಾದ ನಂತರ ಶುಭಗಳಿಗೆಯಲ್ಲಿ ವಾಣಿ ಮನೆಯೊಳಗೆ ಕಾಲಿಟ್ಟಿದ್ದಳು. ಮೊದ ಮೊದಲು ವಾಣಿಯ ಮನಸ್ಸಿನಲ್ಲಿ ಅದೇನು ಬೇಜಾರೋ. ಅದೇನೋ ಆಲೋಚನೆ ಮಾಡುತ್ತ ಕುಳಿತಿರುತ್ತಿದ್ದಳು. ಆಕೆಯ ಅನ್ಯಮನಸ್ಕತೆಗೆ ಕಾರಣವನ್ನರಿಯದ ಸುಧೀರ ಮದುವೆಯಾಗಿ ಬಂದ ಹೊಸತಾದ ಕಾರಣ ಹೀಗೆ ಎಂದುಕೊಂಡಿದ್ದ. ವಾಣಿಯ ಜೊತೆಗೆ ಹೆಚ್ಚು ಹೆಚ್ಚು ಬೆರೆಯಲು ಯತ್ನಿಸುತ್ತಿದ್ದ. ಆದರೆ ಶಿರಸಿಯಲ್ಲಿ ಮಾಡುತ್ತಿದ್ದ ಶೇರ್ ಮಾರ್ಕೇಟ್ ಬಿಸಿನೆಸ್ ಲಾಭದಲ್ಲಿತ್ತು. ಅದು ಲಾಭದತ್ತ ಮುಖ ಮಾಡಿದಂತೆಲ್ಲ ಮನೆಗೆ ಬರುವುದು ಲೇಟಾಗುತ್ತಿತ್ತು. `ಛೇ.. ವಾಣಿಯೆಷ್ಟು ಬೇಜಾರು ಮಾಡಿಕೊಳ್ಳುತ್ತಾಳೋ..' ಎಂದು ಅನೇಕ ಸಾರಿ ಅಂದುಕೊಂಡಿದ್ದ ಸುಧೀರ. `ಖಂಡಿತ ಇವತ್ತು ಮನೆಗೆ ಬೇಗನೇ ಹೋಗಿ ವಾಣಿಯ ಜೊತೆಗೆ ಪ್ರೀತಿಯಿಂದ ಮಾತನಾಡಬೇಕು. ಮುದ್ದುಮಾಡಿ ರಮಿಸಬೇಕು... ' ಎಂದು ಹಗಲು ಹೊತ್ತಿನಲ್ಲೆಲ್ಲ ಎಂದುಕೊಳ್ಳುತ್ತಿದ್ದ ಸುಧೀರನಿಗೆ ರಾತ್ರಿ ಮಾತ್ರ ಏನು ಮಾಡಿದರೂ ಲೇಟಾಗಿ ಹೋಗುತ್ತಿತ್ತು. ತಥ್.. ಎಂದು ತನ್ನನ್ನೇ ತಾನು ಬೈದುಕೊಂಡು  ಮನೆಗೆ ಹೋಗುವ ವೇಳೆಗೆ ಗಂಡನಿಗಾಗಿ ಕಾಯುತ್ತಿರುವ ವಾಣಿಯ ಬಾಡಿದ ಮುಖ ಕಾಣುತ್ತಿತ್ತು. ತನಗರಿವಿಲ್ಲದಂತೆ ಮನಸ್ಸಿನಲ್ಲಿ ಪಾಪಪ್ರಜ್ಞೆ ಮೂಡಿದಂತಾದರೂ ಸುಧೀರ ಅಸಹಾಯಕನಾಗಿದ್ದ.
              `ಹಗಲಿಡಿ ಅದೇನು ಮಾಡುತ್ತಾಳೋ ಪಾ..ಪ. ಹೊತ್ತು ಕಳೆಯುವ ಕಷ್ಟ ಗೊತ್ತಿದೆ. ಮನೆಯಲ್ಲಿ ಆಳುಗಳಿಗೆ ಬರವಿಲ್ಲ. ಆದರೆ ಅವರಿಗೆಲ್ಲ ಅಡುಗೆ ಸೇರಿದಂತೆ ಎಲ್ಲ ರೀತಿಯ ಕಾರ್ಯಗಳನ್ನು ಕೈಗೊಳ್ಳುವುದು ವಾಣಿಯ ಕೆಲಸ. ಅದಕ್ಕೆಲ್ಲ ಎಷ್ಟು ಕಷ್ಟ ಪಡುತ್ತಾಳೋ.. ವಾರಕ್ಕೊಂದು ದಿನವಾದರೂ ಲಕ್ಷ್ಮೀ ಟಾಕೀಸಿಗೆ ಹೋಗಿ ಹೊಚ್ಚ ಹೊಸ ಸಿನೆಮಾ ತೋರಿಸಿಕೊಂಡು ಬರೋಣ ಎಂದರೆ ಬಿಡುವೇ ಸಿಗುತ್ತಿಲ್ಲ. ಮನೆಯಲ್ಲಿ ಅಲ್ಪಸ್ವಲ್ಪ ಸಮಯ ಸಿಕ್ಕರೂ ಜಮೀನಿನ ದೇಖರಿಕೆ ನೋಡಿಕೊಳ್ಳಬೇಕು. ಇಂತಹ ಹಲವು ಹಳವಂಡಗಳ ನಡುವೆ ಹೆಂಡತಿಯನ್ನು ಮರೆಯುತ್ತಿದ್ದೇನಾ..?' ಎಂದು ಸುಧೀರ ರಾತ್ರಿ ಊಟಕ್ಕೆ ಕುಳಿತಾಗ ಯೋಚಿಸುತ್ತಿದ್ದ. ಮೌನವಾಗಿ ಬಡಿಸುವ ವಾಣಿಯ ಕುರಿತು ಮರುಕವಾಗುತ್ತಿತ್ತು. ಊಟ ಮುಗಿಯುವ ವೇಳೆಗೆ ಹಾಸಿಗೆಯ ಕಡೆಗೆ ಹೋಗಬೇಕು. ನಿಜವಾಗಿಯೂ ಹೇಳಬೇಕೆಂದರೆ ಹಾಸಿಗೆಯಲ್ಲಿ ಮಾತ್ರ ವಾಣಿ ಹಾಗೂ ಸುಧೀರ ಗಂಡ-ಹೆಂಡಿರಾಗುತ್ತಿದ್ದರು. ಉಳಿದಂತೆ ಗಂಡ ಎಂಬ ಪಾತ್ರದಲ್ಲಿ ಅವನಿರುತ್ತಿದ್ದ. ಹೆಂಡತಿ ಎಂಬ ಪಾತ್ರದಲ್ಲಿ ಅವಳಿರುತ್ತಿದ್ದಳು. ಬದುಕು ಯಾಂತ್ರೀಕರಣದಂತಾಗಿಬಿಟ್ಟಿತ್ತು.
                ಈ ನಡುವೆ ಆಯಿ ವಾಣಿಗೆ ಇಲ್ಲ ಸಲ್ಲದ ಕಿರಿ ಕಿರಿಗಳನ್ನು ನೀಡುತ್ತಿದ್ದಾಳೆ ಎಂಬುದು ಅದ್ಹೇಗೋ ಗೊತ್ತಾದ ನಂತರ ಸುಧೀರ ತನ್ನನ್ನು ತಾನು ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಳ್ಳಲು ಯತ್ನಿಸಿ ಅದರಲ್ಲಿ ಯಶಸ್ವಿಯೂ ಆಗಿದ್ದ. ಅದರ ಫಲವಾಗಿಯೇ ಆತ ವಾಣಿಯನ್ನು ಶಿರಸಿ ಮಾರಿಕಾಂಬಾ ಜಾತ್ರೆಗೆ ಕರೆದೊಯ್ದಿದ್ದ. ಜಾತ್ರೆಯ ಕಲರವವಿರಬೇಕು. ವಾಣಿ ಹೂವಿನಂತಾಗಿದ್ದಳು. ಬಲೂನಿನಂತೆ ಹಾರಾಡಿದ್ದಳು. ಅಲ್ಲೊಂದು ಕಡೆ ಅದ್ಯಾರೋ ದೋಸ್ತರ ದಂಡಿರಬೇಕು. ಕಾಲೇಜಿನವರಂತೆ ಸಿಕ್ಕಾಗ ಮಾತ್ರ ವಾಣಿ ಮೌನಿಯಾಗಿದ್ದಳು. ತನಗೆ ಪರಿಚಯ ಮಾಡಿಸಿದ್ದಳು. ಅದ್ಯಾರೋ ಹುಡುಗನ ಬಳಿ ಮಾತನಾಡಿದ್ದಳು. ತನ್ನನ್ನೂ ಪರಿಚಯ ಮಾಡಿಸಿದ್ದಳು. ಈ ಹುಡುಗರ ದಂಡು ಸಿಗುವ ಮುನ್ನ ಖುಷಿ ಖುಷಿಯಾಗಿದ್ದ ವಾಣಿ ಆ ನಂತರ ಇದ್ದಕ್ಕಿದ್ದಂತೆ ತನ್ನನ್ನು ಅಲ್ಲಿಂದ ಕರೆದೊಯ್ದದ್ದು, ಕಣ್ಣಿನಂಚಿನಲ್ಲಿ ಮೂಡಿದ್ದ ನೀರನ್ನು ಒರೆಸಿಕೊಂಡಿದ್ದು. ನಂತರ ಜಾತ್ರೆಯ ತುಂಬೆಲ್ಲ ಮೌನವಾಗಿದ್ದನ್ನು ಕಂಡಾಗ ಮಾತ್ರ ಸುಧೀರ ಕುಸಿದುಹೋಗಿದ್ದ. ಖುಷಿಪಟ್ಟುಕೊಂಡು ಇರಬೇಕಿದ್ದ ಹುಡುಗಿಯನ್ನು ಮದುವೆಯಾಗಿ ತಾನು ಕೂಡಿ ಹಾಕಿಬಿಟ್ಟೆನೆ? ಮದುವೆಗೂ ಮುನ್ನ ವಾಣಿ ಬಹಳ ಖುಷಿಯಿಂದಿದ್ದಳು. ಅವಳನ್ನು ಆದರಿಸುವ, ಇಷ್ಟಪಡುವ ಗೆಳೆಯರ ದಂಡು ಬಹಳ ದೊಡ್ಡದಿತ್ತು. ತಾನು ಮದುವೆಯಾಗುವ ಮೂಲಕ ಹಾರುವ ಹಕ್ಕಿಯನ್ನು ತಂದು ಪಂಜರದಲ್ಲಿ ಕೂಡಿಟ್ಟೆನಾ..? ಯಾಕೋ ತಪ್ಪು ಮಾಡಿದೆ ಎಂದೆಲ್ಲ ಆಲೋಚಿಸಿದ್ದ ಸುಧೀರ.  ವಾಣಿಯ ಕಣ್ಣೀರಿನ ನಿಜವಾದ ಕಾರಣ ಗೊತ್ತಾಗದಿದ್ದರೂ ತನ್ನ ನೇರಕ್ಕೆ ಆಲೋಚನೆ ಮಾಡಿದ್ದ ಸುಧೀರ. ಏನಾದರಾಗಲಿ ವಾಣಿಗಾಗಿಯೇ ದಿನದಲ್ಲಿ ಒಂದಷ್ಟು ದಿನವನ್ನು ಮೀಸಲಿರಿಸಬೇಕು ಎನ್ನುವ ನಿರ್ಧಾರವನ್ನು ಸುಧೀರ ತೆಗೆದುಕೊಂಡು ಅದರಂತೆಯೇ ನಡೆದುಕೊಳ್ಳ ಹತ್ತಿದ್ದನ್ನು ವಾಣಿಯೂ ಗಮನಿಸಿದ್ದಳು.
                ಇದ್ದಕ್ಕಿದ್ದಂತೆ ಒಂದು ದಿನ ವಾಣಿ ತನ್ನಲ್ಲಿ ಇನ್ನೊಂದು ಜೀವ ಮೊಳೆತಿದೆ ಎಂದಾಗ ಸುಧೀರ ಬಾನಿಗೆ ಜಿಗಿದಿದ್ದ. ಆ ನಂತರವಂತೂ ದೈನಂದಿನ ಶೇರ್ ಮಾರ್ಕೇಟಿನ ಕೆಲಸವನ್ನು ಬದಿಗೊತ್ತಿ ಹೆಂಡತಿಯ ಜೊತೆಗೆ ಕಳೆಯತೊಡಗಿದ್ದ. ಹುಟ್ಟುವ ಮಗು ಹಾಗಿರುತ್ತದೆ, ಹೀಗಿರುತ್ತದೆ ಎಂದೆಲ್ಲ ಕನಸನ್ನು ಕಟ್ಟಲಾರಂಭಿಸಿದ್ದ. ಗಂಡು ಮಗುವೇ ಹುಟ್ಟಲಿ ದೇವರೆ ಎಂದೂ ಆಗಾಗ ಬೇಡಿಕೊಳ್ಳುತ್ತಿದ್ದ. ಹೀಗಿದ್ದಾಗಲೇ ಒಂದಿನ ಇದ್ದಕ್ಕಿದ್ದಂತೆ ಆಯಿ ಬಂದು `ಯೇ ತಮಾ.. ವಾಣಿಯ ಹೊಟ್ಟೆಲಿರೋ ಮಗು ಕೂಸಾ..? ಮಾಣಿಯಾ ಹೇಳಿ ನೋಡಿಸ್ಕ್ಯಂಡು ಬರಕಾಗಿತ್ತಲಾ.. ಮಾಣಿಯಾದ್ರೆ ಅಡ್ಡಿಲ್ಯಾ.. ಕೂಸಾದ್ರೆ ಬ್ಯಾಡದಾ..' ಎಂದು ಹೇಳಿದ್ದಳು. ಸುಧೀರನೂ ಹುಂ ಎಂದು ವಾಣಿಯ ಬಳಿ ಬಂದು ಕೇಳಿದ್ದ. ಆಗ ವಾಣಿ ಸಿಟ್ಟಿನಿಂದ ಬೇಡವೇ ಬೇಡ ಎಂದಿದ್ದಳು. ಅದಕ್ಕೆ ಪ್ರತಿಯಾಗಿ ಸುಧೀರ ಆಯಿಯನ್ನು ಎದುರುಹಾಕಿಕೊಂಡು ಮಾತನಾಡಿದ್ದ. ವಾಣಿಗೆ ಸುಧೀರ ಆಯಿಯ ಬಳಿ ಹೇಳಿದ್ದ ಮಾತನ್ನು ಕೇಳಿದ ನಂತರ ಗಂಡನ ಕುರಿತು ಮೂಡಿದ್ದ ಅಭಿಮಾನ ಇಮ್ಮಡಿಸಿತ್ತು.
                ವಾಣಿಗೆ ಒಂಭತ್ತು ತಿಂಗಳು ತುಂಬಿದಾಗಲೇ ಸುಧೀರ ನಿಂತಲ್ಲಿ ನಿಲ್ಲಲಿಲ್ಲ ಕೂತಲ್ಲಿ ಕೂರಲಿಲ್ಲ ಎನ್ನುವಂತಾಗಿದ್ದ. ಶುಭಗಳಿಗೆಯಲ್ಲಿ ವಾಣಿ ಹಡೆದಳು. ಹುಟ್ಟಿದ ಮಗು ಗಂಡಾಗಿತ್ತು. ಹರಕೆ ಹೊತ್ತುಕೊಂಡಿದ್ದ ಪರಿಣಾಮ ಹೀಗಾಗಿದೆ ಎಂದುಕೊಂಡ ಸುಧೀರ. ನಂತರದ ದಿನಗಳೆಲ್ಲ ಕನಸಿನಂತೆ ಕಳೆದುಹೋದವು. ಭಟ್ಟರು ಪಂಚಾಂಗ ನೋಡಿದವರೇ ವ ಅಕ್ಷರದ ಹೆಸರನ್ನು ಇಡಬೇಕು ಎಂದಾಗ ಮಾತ್ರ ಆಲೋಚನೆಗೆ ಬಿದ್ದಿದ್ದ ಸುಧೀರ. ಶಾಲೆಗೆ ಸೇರಿಸಿದರೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕಾಗಿ ಅ ಅಕ್ಷರದಿಂದ ಆರಂಭವಾಗುವ ಹೆಸರನ್ನಿಡಬೇಕು ಎಂದಾಗ ಭಟ್ಟರು ವ ಅಕ್ಷರವನ್ನು ಸೂಚಿಸಿದ್ದರು. ಈ ಕುರಿತು ಆಲೋಚನೆಗೆ ಬಿದ್ದಿದ್ದರೂ ವ ಅಕ್ಷರದಿಂದ ಶುರುವಾಗುವ ಹೆಸರನ್ನಿಡುವುದೇ ಸೂಕ್ತ ಎಂದುಕೊಂಡ ಸುಧೀರ. ತಕ್ಷಣವೇ ಫೇಸ್ ಬುಕ್ಕಿಗೆ ತೆರಳಿ ತನ್ನ ಗೋಡೆಯಲ್ಲಿ `ವ..' ಅಕ್ಷರದಿಂದ ಆರಂಭವಾಗುವ ಗಂಡು ಮಗುವಿನ ಹೆಸರನ್ನು ಸೂಚಿಸಿ. ತನ್ನ ಮಗುವಿಗೆ ಇಡಬೇಕು ಎಂದೂ ಸ್ಟೇಟಸ್ ಅಪ್ ಡೇಟ್ ಮಾಡಿ ಬಂದಿದ್ದ. ಹೀಗೆ ಅಪ್ ಡೇಟ್ ಮಾಡಿದ್ದ ಅರ್ಧ ಗಂಟೆಯಲ್ಲಿ ವ ಅಕ್ಷರದ ವಿಚಿತ್ರ, ವಿಕ್ಷಿಪ್ತ, ವಿಲಕ್ಷಣ ಹೆಸರುಗಳನ್ನೆಲ್ಲ ಫೇಸ್ ಬುಕ್ ಮಂದಿ ಬರೆದು ಬಿಸಾಡಿದ್ದರು. ಅದನ್ನು ನೋಡಿ ಸುಮ್ಮನಾಗಿದ್ದ ಸುಧೀರ ಹೆಂಡತಿಯ ಬಳಿ ಬಂದು `ವ' ಅಕ್ಷರದ ವಿಷಯ ತಿಳಿಸಿದ್ದ ತಕ್ಷಣ ಆಕೆ ಆಲೋಚಿಸಿ ವಿನಾಯಕ ಎಂದಿದ್ದಳು.
                 ವ ಅಕ್ಷರದಿಂದ ಎಷ್ಟೆಲ್ಲ ಮಾಡರ್ನ್ ಹೆಸರುಗಳಿವೆ. ವಿನಾಯಕ ಎಂಬುದು ಹಳೆಯದಾಗಿಲ್ಲವಾ..? ಎಂದು ವಾಣಿಯ ಬಳಿ ಕೇಳಬೇಕೆನ್ನುವಷ್ಟರಲ್ಲಿ ವಾಣಿಯೇ `ವರದಮೂರ್ತಿ ಗಣಪತಿಯ ಬಳಿ ಗಂಡು ಮಗು ಹುಟ್ಟಿದರೆ ನಿನ್ನ ಹೆಸರನ್ನು ಇಡುತ್ತೇನೆ ಎಂದುಕೊಂಡಿದ್ದೆ.. ಅದಕ್ಕೆ ಹಳೆಯದಾದರೂ ಪರವಾಗಿಲ್ಲ ಈ ಹೆಸರನ್ನಿಟ್ಟಿದ್ದೇನೆ..' ಎಂದು ಹೇಳಿದ್ದಳು.
                 ವಾಣಿಗೆ ಮತ್ತೆ ವಿನಾಯಕ ನೆನಪಾಗಿದ್ದ. ಸುಧೀರ ವಿನಾಯಕನ ಹೆಸರನ್ನೇ ಮಗುವಿನ ಕಿವಿಯಲ್ಲಿ ಉಚ್ಛರಿಸಿದ್ದ.

***

Wednesday, March 26, 2014

ಪ್ರೇಮಪತ್ರ (ಕಥೆ)

 `ಪ್ರೀತಿಯ ಜಯಾಳಿಗೆ..
ನಿನ್ನ ಕಂಡ್ರೆ ನಂಗೆ ಒಂಥರಾ ಆಕ್ತು. ಮನಸೆಲ್ಲಾ ಹೂವಿನಂಗೆ ಹಾರಾಡಲೆ ಹಿಡಿತು. ನಿನ್ನ ಉದ್ದ ಜಡೆ, ಆಗಾಗ ನೀನು ಹರಡಿಕೊಂಡು ಬರುವ ಕೂದಲು, ಹೈಸ್ಕೂಲಿಗೆ ಬಪ್ಪಕೀದ್ರೆ ಆನು ನೋಡ್ತಾ ಇದ್ದಿ ಹೇಳಿ ಗೊತ್ತಿದ್ರೂ ನನ್ನ ನೋಡದೇ ಸತಾಯಿಸದು ಈ ಮುಂತಾದ ಹಲವಾರು ಕಾರಣಗಳೇ ನನ್ನನ್ನು ಸೆಳೆದಿದ್ದು.
             ಸುಮಾರ್ ದಿನದಿಂದ ಆನು ನಿಂಗೆ ಹೇಳವು ಅಂದ್ ಕಂಡಿದ್ದಿದ್ದಿ. ನಿನ್ನನ್ನು ನೋಡವು ಹೇಳಿ ನಿಮ್ಮನೆ ಹತ್ರನೂ ಬಂದಿದ್ದಿದ್ದಿ. ನಿನ್ ಅಪ್ಪಯ್ಯ ಅಲ್ಲಿ ಕಂಡ ತಕ್ಷಣ ಆನು ಹಂಗೆ ಓಡ್ ಬಂದ್ ಬಿಟ್ಟಿದ್ದಿ. ನನ್ನ ಮನಸ್ಸಿನ ಭಾವನೆ ನಿಂಗೆ ಹೇಳದು ಹೆಂಗೆ ಹೇಳಿ ಆಲೋಚನೆ ಮಾಡ್ತಾ ಇದ್ದಾಗಲೇ ಪಕ್ಕದ ಮನೆಯ ನವೀನ ಹಾಗೂ ರಾಜೇಂದ್ರ ಯನ್ನ ಹತ್ರ ಪತ್ರ ಬರಿ ಹೇಳಿದ್ದ ಅದಕ್ಕೆ ಆನು ಬರೀತಾ ಇದ್ದಿ.
              ನಾನು ಬಹಳ ದಿನಗಳಿಂದ ನಿನ್ನನ್ನು ಇಷ್ಟ ಪಟ್ಟಿದ್ದಿ. ಆದರೆ ಹೇಳ್ ಕ್ಯಂಬಲೆ ಒಂಥರಾ ಆಗ್ತಾ ಇತ್ತು. ಈ ಪತ್ರದ ಮೂಲಕ ನನ್ನ ಮನಸಿನ ಭಾವನೆಗಳನ್ನು ನಿನ್ ಹತ್ರಕ್ಕೆ ಹೇಳ್ತಾ ಇದ್ದಿ...

....

          ಇಷ್ಟು ಬರೆದಿದ್ದ ಪತ್ರವೊಂದು ಗಂಗೆಯ ಕೈಗೆ ಸಿಕ್ಕಾಗ ಇದ್ಯಾರ ಕೆಲಸವಿರಬಹುದು ಎನ್ನುವ ಆಲೋಚನೆ ಮೂಡಿದ್ದಂತೂ ಸತ್ಯ. ಮನೆಯಲ್ಲಿ ನಾಲ್ಕು ಜನ ಮೈದುನರಿದ್ದ. ನಾಲ್ವರಲ್ಲಿ ಹೈಸ್ಕೂಲಿಗೆ ಹೋಗುವ ಮೈದುನರು ಇಬ್ಬರು. ಅವರಲ್ಲಿ ಯಾರೋ ಒಬ್ಬರು ಯಾವುದೋ ಹುಡುಗಿಗೆ ಪತ್ರ ಬರೆದಿದ್ದಾರೆ ಎಂದುಕೊಂಡಳು ಗಂಗೆ.
           ಹೀಗೆ ಒಂದು ದಿನ ಬಟ್ಟೆ ತೊಳೆದು ವಸ್ತ್ರ ಒಣಗಿಸಲು ಮೇಲ್ಮೆತ್ತಿಗೆ ಹೋಗಿದ್ದಾಗ ಗಂಗತ್ತಿಗೆಯ ಕೈಗೆ ಆ ಪತ್ರ ಸಿಕ್ಕಿತ್ತು. ಪತ್ರವನ್ನು ಓದಿದ ತಕ್ಷಣ ಯಾರ ಕೆಲಸ ಇರಬಹುದು ಇರು ಎನ್ನುವುದು ಗಂಗೆಗೆ ಗೊತ್ತಾಗಿರಲಿಲ್ಲ. ಜೊತೆಗಿದ್ದ ವಸುಮತಿ ಪತ್ರವನ್ನು ನೋಡಿ `ಇದು ನಾಗಣ್ಣಯ್ಯನ ಅಕ್ಷರ.. ಅಂವ ಯಾರಿಗೋ ಪತ್ರ ಬರದ್ದಾ..' ಎಂದಾಗಲೇ ನಾಗೇಶ ಹೀಗೂ ಮಾಡುತ್ತಾನೆ ಎನ್ನುವುದರ ಅರಿವಾಗಿದ್ದು. ನಾಗೇಶನ ಪ್ರೇಮ ಪುರಾಣ ಬೆಳಕಿಗೆ ಬಂದಿದ್ದು.
              ತನ್ನ ಪ್ರೇಮಪುರಾಣ ಗಂಗತ್ತಿಗೆಗೆ ತಿಳಿದುಹೋಗಿದೆ ಎಂಬ ಸಂಗತಿ ಗೊತ್ತಾದಾಗಿನಿಂದ ನಾಗೇಶ ಮೊಸರಲ್ಲಿ ಕಲ್ಲು ಹುಡುಕುವ ಕಾರ್ಯವನ್ನು ಆರಂಭಿಸಿದ್ದ. ಪಕ್ಕದ ಮನೆಯ ಇಬ್ಬರು ಓರಗೆಯ ಹುಡುಗರ ಜೊತೆಗೆ ಸೇರಿಕೊಂಡು ತೋಟದ ಗುಡ್ಡೆಯ ಜಯಾಳಿಗೆ ಪತ್ರಬರೆಯುವ ಮೂಲಕ ತಮ್ಮ ಪೌರುಷ ಪ್ರದರ್ಶನ ಮಾಡಿದ್ದ ನಾಗೇಶ.  ಹುಮ್ಮಸ್ಸಿನಲ್ಲಿ ಹಾಗೂ ಪಕ್ಕದ ಮನೆಯ ಇಬ್ಬರ ಬೆಂಬಲಕ್ಕೆ ಪ್ರತಿಯಾಗಿ ಬರೆದಿದ್ದ ಪತ್ರವನ್ನು ಕೊಡುವ ಧೈರ್ಯ ನಾಗೇಶನಿಗೆ ಇರದಿದ್ದ ಕಾರಣ ಮೇಲ್ಮೆತ್ತಿಯ ಟ್ರಂಕಿನ ಮೇಲೆ ಪತ್ರ ಕುಳಿತಿತ್ತು. ಅರ್ಧಮರ್ಧ ಬರೆದ ನಂತರ ಅದನ್ನು ಮುಂದುವರಿಸಿ ಮುಕ್ತಾಯಗೊಳಿಸುವ ಬಗೆಯನ್ನೂ ತಿಳಿಯದೇ ಹಾಗೆ ಬಿಟ್ಟಿದ್ದ ಆತ.
                  ನಾಗೇಂದ್ರ ಇಂತದ್ದೊಂದು ಕೆಲಸಕ್ಕೆ ಕೈಹಾಕಿರುವ ವಿಷಯವನ್ನು ಗಂಗೆ ತನ್ನ ಯಜಮಾನ ಸುಬ್ರಾಯಂಗೆ ತಿಳಿಸಲೇಬೇಕು. ಇಲ್ಲದಿದ್ದರೆ ಮನೆಯ ಮಾನವನ್ನು ನಾಗೇಶ ಹರಾಜು ಮಾಡಿಬಿಡುತ್ತಾನೆ ಎಂದುಕೊಂಡ ಆಕೆ ಸಂಜೆ ಮನೆಯವರಿಗೆ ವಿಷಯವನ್ನು ತಿಳಿಸಿದ್ದಳು. ಅದಕ್ಕೆ ಪ್ರತಿಯಾಗಿ ಸುಬ್ರಾಯ `ಹೌದಾ..? ನಾಗೇಶ ಹಿಂಗೆ ಮಾಡಿದ್ದು ಖರೆ ಹೌದಾ..?' ಎಂದು ಕೇಳಿ ಸುಮ್ಮನಾಗಿದ್ದ.

**

                ಯಲ್ಲಾಪುರ ಕಡೆಯ ಗಂಗೆ ಶಿರಸಿ ಕಡೆಗೆ ಮದುವೆಯಾಗಿ ಬಂದ ಸಂದರ್ಭದಲ್ಲಿ ಹವ್ಯಕರಲ್ಲಿ ಹೆಣ್ಣು ಹೆಚ್ಚಾಗಿತ್ತು. ಅವಿಭಕ್ತ ಕುಟುಂಬ ಹಾಗೂ ಸ್ವಲ್ಪ ದೂರದ ಸೀಮೆ. ಆದರೂ ಪರವಾಗಿಲ್ಲ ಸಾಕಷ್ಟು ಆಸ್ತಿಯಿದೆ. ಒಳ್ಳೆಯ ಜನ ಎನ್ನುವ ಕಾರಣಕ್ಕೆ ಗಂಗೆಯ ಮನೆಯವರು ಶಿರಸಿ ಸೀಮೆಗೆ ಮದುವೆ ಮಾಡಿಕೊಟ್ಟಿದ್ದರು. ಗಂಗೆಯ ಗಂಡ ಸುಬ್ರಾಯ, ಮಾವ ವಿಶ್ವೇಶ್ವರ, ಸುಬ್ರಾಯನ ಐದು ಜನ ತಮ್ಮಂದಿರು, ಆರು ಜನ ಅಕ್ಕತಂಗಿಯರೆಲ್ಲ ಮದುವೆಯಾಗಿ ಆರು ತಿಂಗಳವರೆಗೆ ಗಂಗೆಗೆ ಬಹಳ ಒಳ್ಳೆಯವರಂತೆ ಕಂಡಿದ್ದರು. ಆದರೆ ಆ ನಂತರದ ದಿನಗಳಲ್ಲಿಯೇ ಮನೆಯ ಸದಸ್ಯರೆಲ್ಲರ ದುರ್ಗುಣಗಳು ಒಂದೊಂದಾಗಿ ಹೊರಬರತೊಡಗಿತ್ತು.
              ನಾಗೇಶ ಆಗ ಹೈಸ್ಕೂಲು ಓದುತ್ತಿದ್ದ ಮಾಣಿ. ಆಗ ತಾನೆ ಪಿಯುಸಿಗೆ ಬರಲು ಹಾತೊರೆಯುತ್ತಿದ್ದ. ಸರಿಯಾಗಿ ಓದಿದ್ದರೆ ಪಿಯುಸಿ ಮೆಟ್ಟಿಲನ್ನು ಹಾರಾಡುತ್ತ ಹತ್ತಬಲ್ಲ ಸಾಮರ್ಥ್ಯವಿದ್ದ ನಾಗೇಶ ಜಯಾಳ ಹಿಂದೆ ಬಿದ್ದ ಪರಿಣಾಮ ಆರು ವಿಷಯಗಳಲ್ಲಿ ಮೂರರಲ್ಲಿ ಫೇಲಾಗಿದ್ದ. ಪರಿಣಾಮ ತನ್ನ ಓದಿಗೂ ನಮಸ್ಕಾರ ಹೇಳಿದ್ದ. ಓದು ಮುಗಿದ ನಂತರ ಈತ ಬರೆದ ಪತ್ರ ಗಂಗತ್ತಿಗೆಯ ಕೈಗೆ ಸಿಕ್ಕಿಬಿದ್ದಿತ್ತು. ಮನೆಯಲ್ಲಿ ಎಲ್ಲಾದರೂ ಹೇಳಿಬಿಟ್ಟರೆ ಎನ್ನುವ ಭಯ ಆತನನ್ನು ಆವರಿಸಿದ ಪರಿಣಾಮ ಗಂಗತ್ತಿಗೆಯ ಉಳಿದ ಕೆಲಸಗಳಲ್ಲಿ ತಪ್ಪು ಹುಡುಕಿ ಸುಮ್ಮನಿರಿಸಲು ಪ್ರಯತ್ನ ಮಾಡಿದ್ದ.
              ಪ್ರೇಮಪತ್ರ ಪ್ರಕರಣ ಇಡೀ ಊರಿನಲ್ಲಿ ನಾಲ್ಕೈದು ದಿನ ಎಲ್ಲರ ಬಾಯಲ್ಲೂ ನಲಿದಾಡುತ್ತಿತ್ತು. ನಾಗೇಶ ಎಲ್ಲಾದರೂ ರಂಪಾಟ ಮಾಡಿಬಿಟ್ಟರೆ ಎನ್ನುವ ಕಾರಣಕ್ಕಾಗಿ ಊರಿನವರೆಲ್ಲ ಸುಮ್ಮನಿದ್ದರು. ತನ್ನ ಪ್ರೇಮಪುರಾಣ ಗಂಗೆಯಿಂದಾಗಿಯೇ ಲೋಕಾರ್ಪಣೆಯಾಯಿತು ಎನ್ನುವುದು ನಾಗೇಶನ ಸಿಟ್ಟು. ಹೇಗಾದರೂ ತೀರಿಸಿಕೊಳ್ಳಬೇಕೆಂದುಕೊಳ್ಳುತ್ತಿದ್ದ ನಾಗೇಶ.

***
           ದೊಡ್ಡಮನೆ ವಿಶ್ವೇಶ್ವರ ಭಾವ ತೀರಿಕೊಂಡಿದ್ದು ಸುಬ್ರಾಯ ಮನೆಯ ಯಜಮಾನನಾಗಲು ಪ್ರಮುಖ ಕಾರಣವಾಯಿತು. ವಯಸ್ಸಿನಲ್ಲಿ ಹಿರಿಯ ಹಾಗೂ ಮನೆಯ ಹಿರೇ ಅಣ್ಣ ಎನ್ನುವ ಕಾರಣಕ್ಕಾಗಿ ಸುಬ್ರಾಯ ಯಜಮಾನ್ತನಿಗೆ ವಹಿಸಿಕೊಂಡಿದ್ದ. ಮೊದ ಮೊದಲಿಗೆ ಎಲ್ಲ ಸುರಳೀತವೇ ಇತ್ತು. ಆದರೆ ಮೊದಲಿಗೆ ವರಾತ ಆರಂಭಿಸಿದವನೇ ನಾಗೇಶ. ಗಂಗೆಗೆ ಇದು ಗೊತ್ತಾಗಿದ್ದು. ಮನೆಯಲ್ಲಿ ಎಲ್ಲರದ್ದೂ ಒಂದು ದಾರಿಯಾದರೆ ನಾಗೇಶನದ್ದೇ ಇನ್ನೊಂದು ದಾರಿಯೆಂಬಂತಾಗಿತ್ತು. ಬೆಳಗಿನ ಆಸರಿಗೆಯನ್ನು ಎಲ್ಲರೂ ಕುಡಿದು ಗದ್ದೆಯೋ-ತೋಟವೋ ಎಂಬಂತೆ ತಮ್ಮ ತಮ್ಮ ಕೆಲಸಕ್ಕೆ ಹೋದರೆ ಎಲ್ಲರಿಗಿಂತ ತಡವಾಗಿ ಬಂದು ತಿಂಡಿ ತಿನ್ನಲು ಕುಳಿತುಕೊಳ್ಳುವ ನಾಗೇಶ ಅದು ಸರಿಯಿಲ್ಲ ಇದು ಸರಿಯಿಲ್ಲ ಎಂದು ಸೊಖಾ ಸುಮ್ಮನೆ ಹೇಳತೊಡಗಿದಾಗಲೇ ಗಂಗೆಗೆ ನಾಗೇಶ ವಿಚಿತ್ರವಾಗಿ ಆಡುತ್ತಿದ್ದಾನೆ ಎನ್ನಿಸಿದ್ದು.
             ಇಷ್ಟಕ್ಕೆ ನಿಲ್ಲದ ನಾಗೇಶ ತಾಯಿ ಮಹಾಕಾಳಕ್ಕನ ಬಳಿ ಚಾಡಿ ಮಾತನ್ನು ಹೇಳಲು ಆರಂಭಿಸಿದಾಗ ಗಂಗೆ ಮೊದಲ ಬಾರಿಗೆ ಆಸ್ಫೋಟಿಸಿ ನಾಗೇಶ ಹಾಗೂ ಮಹಾಕಾಳಕ್ಕನ ಬಳಿ ಜಗಳಕ್ಕೆ ನಿಂತಿದ್ದಳು. ಆದರೆ ಮಹಾಕಾಳಕ್ಕ-ನಾಗೇಶರ ಎದುರು ಒಬ್ಬಂಟಿ ಗಂಗೆ ಸೋತು ಸುಮ್ಮನಾಗಿದ್ದಳು. ಆದರೆ ಆ ನಂತರ ಮಾತು ಮಾತಿಗೆ ಜಗಳ, ಕಿರಿ ಕಿರಿ ಹೆಚ್ಚಿ ಕೊನೆಗೊಮ್ಮೆ ಗಂಗೆ ಇನ್ನು ಈ ಮನೆಯಲ್ಲಿರುವುದು ಅಸಾಧ್ಯ. ಮನೆ ಪಾಲಾಗೋದೇ ಸೈ ಎನ್ನುವ ನಿರ್ಧಾರಕ್ಕೂ ಬಂದಿದ್ದಳು. ಪ್ರೇಮಪತ್ರ ಪ್ರಕರಣವೊಂದು ಮನೆಯ ಒಡೆಯುವ ವರೆಗೂ ಬಂದು ನಿಂತಿದ್ದು ವಿಚಿತ್ರವಾಗಿತ್ತು.


***

          ಗಂಗೆ ಬಯಸಿದರೆ ಮನೆ ಪಾಲಾಗಬೇಕಲ್ಲ. ಗಂಗೆಯ ಹಾಗೂ ಮನೆಯ ಯಜಮಾನ ಸುಬ್ರಾಯನೂ ಪಾಲಿನ ಕುರಿತು ಮಾತಾಡಿದಾಗ ಮಾತ್ರ ಒಂದು ನಿರ್ಣಯ ಸಾಧ್ಯವಿದೆ. ಹೀಗಿದ್ದಾಗ ಒಂದಿನ ಸುಬ್ರಾಯನ ಎದುರಿಗೆ ಗಂಗೆಯ ವಿರುದ್ಧ ಚಾಡಿ ಹೇಳಲು ಬಂದ ನಾಗೇಶ. ಸುಬ್ರಾಯನಿಗೂ ಒಳಗಿಂದೊಳಗೆ ಈ ವಿಷಯ ತಿಳಿದಿದ್ದ ಕಾರಣ ಮೊದ ಮೊದಲು ಸುಮ್ಮನಿದ್ದ. ಆದರೆ ಈ ಸಾರಿ ಸುಬ್ರಾಯನಿಂದಲೂ ಸುಮ್ಮನಿರಲು ಆಗಲಿಲ್ಲ.
          `ಎಂತದಾ ನಿನ್ ಹೆಂಡ್ತಿ ಹೇಳಿ ನೀನು ವಹಿಸ್ಕಂಡು ಬರ್ತ್ಯನಾ..?' ನಾಗೇಶ ಸುಬ್ರಾಯನಿಗೆ ಮಾರುತ್ತರ ನೀಡಿದ್ದ.
          `ನಿನ್ ಹಣೆಬರಹ ಯಂಗೆ ಗೊತ್ತಿದ್ದಾ.. ನೀ ಎಂತಕ್ಕೆ ಹಿಂಗೆ ಚಾಡಿ ಹೇಳ್ತಾನೂ ಇದ್ದೆ ಹೇಳೂ ಯಂಗೆ ಗೊತ್ತಿದ್ದು.. ಹೇಳವನಾ..?' ಎಂದು ಸುಬ್ರಾಯ ಗುಡುಗಿದಾಗ ತಬ್ಬಿಬ್ಬಾಗಿದ್ದ ನಾಗೇಶ ಬಾಲಮುಚ್ಚಿಕೊಂಡ ಕುನ್ನಿಯಂತಾಗಿ ಸುಮ್ಮನೆ ಹೋಗಿದ್ದ.
       
***

         ಮನೆಯಲ್ಲಿ ಸ್ಥಿರಾಸ್ತಿ ಪಾಲು ಮಾಡುವ ಸಲುವಾಗಿ ಪಂಚರು ಸೇರಿದ್ದರು. ನಾಗೇಶ ಮತ್ತೆ ಪುನಃ ತನ್ನ ಹಳೆಯ ವರಾತ ಆರಂಭಿಸಿದ. `ಸುಬ್ಬಣ್ಣಯ್ಯ ಮಾಡ್ತಾ ಇದ್ದಿದ್ದು ಸರಿಯಿಲ್ಲೆ.. ಗಂಗತ್ತಿಗೆ ಅವನ ಮನಸ್ಸಿನಲ್ಲಿ ಹಚ್ಚಿಕೊಟ್ಟಿದ್ದಕ್ಕೆ ಹಿಂಗೆ ಮಾಡ್ತಾ ಇದ್ದ...' ಎಂದು ಮಾತನಾಡಲು ಆರಂಭಿಸಿದ.
          ಸುಬ್ರಾಯನಿಗೆ ಇನ್ನು ತಡೆದುಕೊಳ್ಳುವುದು ಅಸಾಧ್ಯ ಎಂಬಂತಾಯಿತು. `ಸುಮ್ಮಂಗಿರಾ ಕಂಡಿದ್ದಿ.. ಆ ಜಯಂಗೆ ಅಲ್ದನಾ ನೀ ಪತ್ರ ಬರೆದಿದ್ದಿದ್ದು. ಅದನ್ನು ಹುಗಸಿಟ್ಟಿದಿದ್ಯಲಾ ಮ್ಯಾಲ್ ಮೆತ್ತಿಗೆ. ಅದು ಯಮ್ಮನೇದರ ಕೈಗೆ ಸಿಕ್ಚು ಹೇಳೆ ಅಲ್ದನಾ ನಿಂಗೆ ಸಿಟ್ಟು ಬಂದಿದ್ದು. ಅಲ್ದಾ.. ಪತ್ರ ಬರೆದ ಮೇಲೆ ಅದನ್ನ ದಾಢಸಿಕ್ಯಂಬಲೆ ಆಕ್ತಿಲ್ಲೆ ಹೇಳಾದ್ರೆ ಪತ್ರ ಎಂತಕ್ಕೆ ಬರಿಯವಾ..? ಹೋಗ್ಲಿ ಬರೆದಿದ್ದಾದ್ರೂ ಅದನ್ನ ಸರಿಯಾದ ಜಾಗದಲ್ಲಿ ಇಡವಾ ಬ್ಯಾಡದಾ.. ಹೋಗಿ ಹೋಗಿ ಎಲ್ಲಾರೂ ಓಡಾಡೋ ಜಾಗದಲ್ಲಿ ಇಟ್ರೆ ಹಿಂಗಾಗದೆ ಇನ್ನೆಂತಾ ಆಕ್ತಾ..? ಸುಮ್ ಸುಮ್ನೆ ಇನ್ನೊಬ್ಬರ ಬಗ್ಗೆ ಹೇಳಕಿಂತಾ ಮೊದಲು ನೀನು ಸರಿ ಆಲೋಚನೆ ಮಾಡ್ಕ್ಯ..' ಎಂದ.
           ಪಂಚರು ಸ್ಥಿರಾಸ್ತಿಗಳನ್ನು ಪಾಲು ಮಾಡಿ, ಚರಾಸ್ತಿಯ ಲೆಕ್ಖಹಾಕಲು ಆರಂಭಿಸಿದ್ದರು.

Saturday, March 22, 2014

ನಿರಾಸೆಯ ಕವನ

ನಿರಾಸೆಯಲ್ಲಿ ಸೈನಾ?
ನಾ ಉಸಿರು ಕಟ್ಟಿ ಓಡಿ ಮುಟ್ಟಿದ
ಬೆಟ್ಟದ ತುದಿಯಲ್ಲಿ ಏನಿದೆ?
ಬಟ್ಟ ಬಯಲು !
ಓಡಿ ತಲುಪಿದ್ದಷ್ಟೇ ಬಂತು |

ನಾಗರೀಕತೆಯ ಮೆಟ್ಟಿಲೇರಿ
ಪುಟ್ಟ ನಗು ಕಟ್ಟಿ, ನೆಟ್ಟ
ನರನಾದರೇನು ಬಂತು?
ಬಿಡಲೊಲ್ಲ ವಾನರ
ಬದಲಾಗಲು ಪ್ರಯತ್ನಿಸಿದ್ದಷ್ಠ ಬಂತು |

ಮರೀಚಿಕೆ ಮೆರೆಯುವ ಮರಳು
ಗಾಡಿನ ಬಯಲು ನಾಡಿನಲ್ಲಿ
ನಡೆದಿದ್ದಷ್ಟೇ ಬಂತು |
ಕೊನೆಯಾಗದ ಉಸುಕು.
ಸುಮ್ಮನೆ ಹಾದಿ ಸಾಗಿದ್ದಷ್ಟೇ ಬಂತು |

ಉಕ್ಕಿ ಹರಿಯುವ ನದಿ ನೀರೊಳು
ಮಂತ್ರಘೋಷದೊಳು ಹವನ-
ಹೋಮವ ಮಾಡಿದರೇನು ಬಂತು ?
ಉರಿಯಲೊಲ್ಲ ಸಮಿಧ |
ಕಿಚ್ಚಿಗೆ ಪ್ರಯತ್ನಿಸಿದ್ದಷ್ಟೇ ಬಂತು |

ಕರಿ ಕಲ್ಲು ಬಂಡೆಯ ನೆತ್ತಿಯಲಿ
ನೀರ ಧುಮ್ಮೆಂದು ಸುರಿದರೆ
ಏನು ಬಂತು ?
ಕುಡಿಯದು ನೀರ ಕಲ್ಲು |
ನೆತ್ತಿಯಲಿ ಸುರಿದಿದ್ದಷ್ಟೇ ಬಂತು |

ನಿರಾಸೆಯೇ ಮೆರೆದ ಬದುಕಿನೊಳು
ಆಸೆಯ ಬಿಸಿಲ್ಗುದುರೆ ಏರಿ ಸಾಧನೆಯ
ಜೊತೆ ಓಡಿದ್ದಷ್ಟೇ ಬಂತು |
ಸಿಗಲೊಲ್ಲದು ಗುರಿ-ಗೆಲುವು |
ಓಡಿ ಸುಸ್ತಾಗಿದ್ದೇ ಬಂತು |

ಎಲ್ಲ ಅರಿತಾಗ ಮೆರೆದು ನಿಂತಿದ್ದು
ಅನುಭವವೆಂಬ ನಿಘಂಟು|
ಸಾಧಿಸುವ ಛಲದ ಗಂಟು |
ಗಂಟಿದ್ದರೆ ಕುಂಟನ್ನೂ ಗೆದ್ದು
ಮುದ್ದು ಗೆಲುವನ್ನು ಪಡೆಯಬಹುದು ||

**
(ಈ ಕವಿತೆಯನ್ನು ಬರೆದಿದ್ದು 5-01-2007ರಂದು ದಂಟಕಲ್ಲಿನಲ್ಲಿ)
(ಈ ಕವಿತೆಯ ಮೊದಲಿನ ಪ್ಯಾರಾ ನೇಮಿಚಂದ್ರರದ್ದು. ಅವರ ಬರಹದಿಂದ ಸ್ಪೂರ್ತಿಯಾಗಿ ಬರೆದದ್ದು. ನಿರಾಸೆಯ ಕೋಡಿಯಲ್ಲಿ ಸಿಲುಕಿದ್ದಾಗ ಬರೆದ ನಿರಾಸೆಯ ಕವಿತೆ )