Thursday, March 27, 2014

ಮರೆತೆನೆಂದರೂ..(ಕಥಾ ಸರಣಿ ಭಾಗ-3)

         `ಯೇ ವಾಣಿ.. ಮಗಂಗೆ ನಕ್ಷತ್ರರಿತ್ಯಾ   ಅಕ್ಷರದ ಹೆಸರು ಇಡಲೆ ಅಡ್ಡಿಲ್ಲೆ ಹೇಳಿ ಭಟ್ರು ಹೇಳ್ತಾ ಇದ್ರು.. ಎಂತಾ ಹೇಳಿ ಹೆಸರು ಇಡಲಕ್ಕು.? ಎಂತಾದ್ರೂ ನೆನಪು ಮಾಡ್ಕಂಜ್ಯಾ..? ಅಚ್ಚೆಮನೆ ತಂಗಿ ಹತ್ರ ಹೆಸರಿನ ಪುಸ್ತಕ ತಗಂಡುಬಪ್ಪಲೆ ಹೇಳಿದಿದ್ಯಲೆ. ಯಾವುದಾದ್ರೂ ಚೊಲೋ ಹೆಸ್ರು ಇದ್ರೆ ಆರ್ಸು ನೋಡನಾ.. ' ಎಂದು ವಾಣಿಯ ಗಂಡ ಹೇಳಿದಾಗ ವಾಣಿಗೆತಟ್ಟನೆ ನೆನಪಾದ ಹೆಸರು ವಿನಾಯಕ.
                  ಮದುವೆಯಾಗಿ ಮಗುವಿನ ತಾಯಿಯಾದರೂ ಈ ಹೆಸರು ಮರೆಯುತ್ತಿಲ್ಲವಲ್ಲ ಎಂದುಕೊಂಡಳು ವಾಣಿ. ಜಾತ್ರೆಯಲ್ಲಿ ಸಿಕ್ಕು ಮಾತನಾಡಿದ ನಂತರ ವಿನಾಯಕನ ಕುರಿತು ಒಂದೆ ಒಂದು ನೆನಪಿನ ಸಾಲು ಕೂಡ ವಾಣಿಯ ಮನಸ್ಸಿನಲ್ಲಿ ಹಾಯ್ದಿರಲಿಲ್ಲ. ಜಾತ್ರೆಯ ಜನಜಂಗುಳಿಯಲ್ಲಿ ಕಣ್ಣಂಚಿನಲ್ಲಿ ಮೂಡಿದ್ದ ಹನಿ ನೀರನ್ನು ಮನೆಯವರಿಗೂ ಕಾಣದಂತೆ ಒರೆಸಿಕೊಂಡು ನಿಟ್ಟುಸಿರುವ ಬಿಟ್ಟಿದ್ದಳು. ಹೋಗುವ ಮುನ್ನ ಕೊನೆಯ ಸಾರಿ ಮಾತನಾಡಬೇಕಿತ್ತು ಎಂದು ಜಾತ್ರೆಯಲ್ಲಿ ಅನ್ನಿಸಿತ್ತಾದರೂ ಅದಕ್ಕೆ ಅವಕಾಶವನ್ನೇ ನೀಡದಂತೆ ವಿನಾಯಕನ ದೋಸ್ತರು ಆತನನ್ನು ದೂರಕ್ಕೆ ಕರೆದೊಯ್ದಿದ್ದರು.
                  ಆ ನಂತರದ ದಿನಗಳಲ್ಲಿ ವಾಣಿಗೆ ವಿನಾಯಕ ನಿಜಕ್ಕೂ ಮರೆತು ಹೋಗಿದ್ದ. ದಿನಕಳೆದಂತೆಲ್ಲ ವಾಣಿ ಮನೆಯ-ಸಂಸಾರದ ಒತ್ತಡಗಳಲ್ಲಿ ಸಿಲುಕಿದ್ದಳು. ವಿನಾಯಕನನ್ನು ನೆನಪು ಮಾಡಿಕೊಳ್ಳಲೂ ಪುರಸೊತ್ತು ಸಿಗುತ್ತಿರಲಿಲ್ಲ. ಮನಸ್ಸಿನ ತುಂಬ ನೆನಪಾಗಿ ಕಾಡಿದ್ದ, ಮದುವೆಯ ನಂತರವೂ ಮತ್ತೆ ಮತ್ತೆ ಕನಸಾಗಿದ್ದ ಹುಡುಗ ಈ ನಡುವೆ ಬಾ ಎಂದರೂ ಕನಸಿನಲ್ಲಿ ಬರುತ್ತಿರಲಿಲ್ಲ. ಕಾಡುತ್ತಿರಲಿಲ್ಲ. ವಿನಾಯಕನಿಗೆ ಜಾಗಕೊಟ್ಟಿದ್ದ ಹೃದಯದಲ್ಲಿ ತನ್ನ ಗಂಡನನ್ನು ನಿಧಾನವಾಗಿ ಕೆತ್ತಿಕೊಳ್ಳುತ್ತಿದ್ದಳು. ವಿನಾಯಕ ಸ್ಮೃತಿ ಪಟಲದಿಂದ ಮರೆಯಾಗುತ್ತಿದ್ದ.
                  ಹೀಗೆ ದಿನಕಳೆದಾಗ ಅದ್ಯಾವ ಮಾಯೆಯಲ್ಲಿ ತಾನು ತನ್ನೊಡಲಲ್ಲಿ ಇನ್ನೊಂದು ಜೀವವನ್ನು ಹೊತ್ತುಕೊಂಡಿದ್ದೆ ಎನ್ನುವುದು ವಾಣಿಗೆ ಮಾಯೆಯಂತಾಗಿತ್ತು. ಅದ್ಯಾವುದೋ ಶುಭ ಗಳಿಗೆಯಲ್ಲಿ ತನ್ನೊಳಗೆ ಇನ್ನೊಂದು ಜೀವ ಮೊಳೆಯಲು ಕಾತರವಾಗಿತ್ತು. ಗರ್ಭದೊಳಗಿನ ಶಿಶು ಬೆಳೆದಂತೆಲ್ಲ ವಾಣಿ ಮನದೊಳಗೆ ಖುಷಿಯನ್ನು ಅನುಭವಿಸಿದ್ದಳು. ಅದ್ಯಾವುದೋ ತಿಂಗಳಲ್ಲಿ ಒಡಲೊಳಗಿನ ಜೀವ ಚಲನೆಯನ್ನೂ ಪಡೆದುಕೊಂಡಿತು. ಗರ್ಭಗುಡಿಯೊಳಗೆ ಆಡಹತ್ತಿತು. ಬೆಳೆದು ಒಡಲಿನ ಗೋಡೆಯನ್ನು ಫುಟಬಾಲಿನಂತೆ ಒದೆಯಲು ಆರಂಭಿಸಿದಾಗ ಹುಟ್ಟುವ ಮಗು ಗಂಡೇ ಆಗಿರಲಿ ಎಂದು ಆಶಿಸಿಕೊಂಡಿದ್ದಳು. ಗಂಡ ಹಲವು ಸಾರಿ ಸ್ಕ್ಯಾನಿಂಗ್ ಮಾಡಿಸಿಕೊಂಡು ಹುಟ್ಟಲಿರುವ ಮಗು ಗಂಡೋ ಹೆಣ್ಣೋ ನೋಡಿಸೋಣ ಎಂದಿದ್ದಾಗ ವಾಣಿ ಮೊಟ್ಟ ಮೊದಲ ಬಾರಿಗೆ `ಅದು ತಪ್ಪು ಕಣ್ರಿ. ಬದುಕಿನಲ್ಲಿ ಕೆಲವು ಸಾರಿಯಾದರೂ ಕುತೂಹಲ ಇರಲಿ. ಮಗು ಗಂಡಾಗಲಿ ಅಥವಾ ಹೆಣ್ಣಾಗಲಿ.. ಈಗ ಅದರ ಪರೀಕ್ಷೆ ಬೇಡವೇ ಬೇಡ..' ಎಂದು ಹೇಳಿದ್ದಳು. ಹೀಗೆ ಹೇಳಿದ ನಂತರ ವಾಣಿಗೆ ಸಿಕ್ಕಾಪಟ್ಟೆ ಆತ್ಮವಿಶ್ವಾಸ ಬಂದಿತ್ತು.
                  ಬಹುಶಃ ವಾಣಿ ಹೀಗೆ ಹೇಳಿದಳು ಎಂದು ಗೊತ್ತಾದ ನಂತರವೇ ಆಕೆಯ ಅತ್ತೆಯ ಸಿಡಿಮಿಡಿ ಹೆಚ್ಚಾಗಿದ್ದಿರಬೇಕು. ಸುಮ್ಮನೆ ಇದನ್ನು ಗಮನಿಸಿದ್ದ ವಾಣಿ ಮಾತಾಡಲು ಹೋಗಿರಲಿಲ್ಲ. `ವಾಣಿಗೆ ಗಂಡು ಮಗುವೇ ಹುಟ್ಟಬೇಕು. ಹೆಣ್ಣು ಬೇಡವೇ ಬೇಡ..' ಎಂದು ಆಗಾಗ ಅತ್ತೆ ಹೇಳುತ್ತಿದ್ದ ಮಾತು ಕೇಳಿ ವಾಣಿ ಮನಸ್ಸಿನೊಳಗೆ ಕುದ್ದುಹೋಗಿದ್ದರೂ ಅದನ್ನು ಅವರೆದುರು ಆಡಿರಲಿಲ್ಲ.
                 ನವ ವಸಂತಗಳು ತುಂಬಿ ಅದೊಂದು ಶುಭದಿನ ಒಡಲೊಳಗಿನ ಭುವಿಗಿಳಿದಿತ್ತು. `ಗಂಡು ಮಗು..' ಎಂದು ವೈದ್ಯರು ಹೇಳಿದ್ದೇ ತಡ ಮೊದಲಿಗೆ ನಿಟ್ಟುಸಿರು ಬಿಟ್ಟ ವಾಣಿ ತನ್ನ ಆರಾಧ್ಯದೈವ ವರದಮೂರ್ತಿ ಗಣಪತಿಗೆ ಮನಸಾರೆ ವಂದಿಸಿದ್ದಳು. `ಯಮ್ಮನೆದಕ್ಕೆ ಅಂತೂವಾ ಗಂಡೇ ಹುಟ್ಟಿದ್ದು.. ಕೂಸು ಹುಟ್ಟಿದ್ರೆ ಆನಂತೂ ಅದನ್ನ ಮನೆಯೊಳಗೆ ಸೇರಿಸ್ತಿದ್ನಿಲ್ಲೆ..' ಎಂದು ಅತ್ತೆ ಕೊಂಕು ನುಡಿದಿದ್ದು ಕೇಳಿದ್ದರೂ ಕೇಳಿಸದಂತಿದ್ದಳು ವಾಣಿ. ಮಗು ಬೆಳ್ಳಗಿತ್ತು. ಗುಂಡಗಿತ್ತು. ನಕ್ಕರೆ ಮುತ್ತು ಉದುರುವಂತಿದ್ದವು. ವಾಣಿ ಹಾಗೂ ಆಕೆಯ ಗಂಡನಿಗೆ ಸ್ವರ್ಗವೇ ಧರೆಗಿಳಿದು ಬಂದಂತಿತ್ತು.
                 ನಂತರದ ದಿನಗಳು ಕನಸಿನಂತೆ ಕಳೆದವು. ಸೂತಕದ ಶಾಸ್ತ್ರದ ಕೊನೆಯ ದಿನ ಮಗುವಿಗೆ ನಾಮಕರಣ ಮಾಡಬೇಕು. ಮನೆಗೆ ಬಂದಿದ್ದ ಪುರೋಹಿತ ಭಟ್ಟರು ಪಂಚಗವ್ಯ ಕುಡಿಸಿ ಶುದ್ಧಿ ಮಾಡಿ ಪಂಚಾಂಗ ತೆಗೆದು `ವ' ಅಕ್ಷರ ಬರುತ್ತದೆ. ವ ಅಕ್ಷರದ ಹೆಸರನ್ನಿಡಿ ಎಂದು ಹೇಳಿದಾಗ ವಾಣಿಗೆ ತಟ್ಟನೆ ನೆನಪಾಗಿದ್ದು ವಿನಾಯಕ. ತನಗ್ಯಾಕೆ ಈ ಹೆಸರೇ ನೆನಪಾಯಿತು ಎಂದು ಅನೇಕ ಸಾರಿ ಆಲೋಚಿಸಿದ್ದಳು ವಾಣಿ. ವಿನಾಯಕನನ್ನು ಮರೆತು ಆಗಲೇ ಬಹಳ ಸಮಯ ಘಟಿಸಿ ಹೋಗಿದೆ. ಆದರೂ ಆತನೇ ಯಾಕೆ ನೆನಪಾಗಬೇಕು. ಆ ಹೆಸರೇ ಯಾಕೆ ಕಣ್ಮುಂದೆ ಸುಳಿಯಬೇಕು..? ಬಿಟ್ಟೆನೆಂದರೂ ಆತನ ಹೆಸರು ಮತ್ತೆ ಮತ್ತೆ ನೆನಪಾಗುತ್ತಿದೆ ಎಂದಾದರೆ ವಿನಾಯಕನ ಬಗ್ಗೆ ನನ್ನ ಮನಸ್ಸಿನಲ್ಲಿ ಇನ್ನೂ ಸ್ಥಾನವಿದೆಯಾ..? ಎಂದೆಲ್ಲ ಆಲೋಚಿಸಿದ್ದರೂ ಗಂಡನ ಬಳಿ ಅದೇ ಹೆಸರನ್ನು ಸೂಚಿಸಿದ್ದಳು.
                 `ವಿನಾಯಕ... ವಿನಾಯಕ.. ವಿನಾಯಕ...' ಎಂದು ಮಗುವಿನ ಬಲಗಿವಿಯಲ್ಲಿ ಮೂರು ಸಾರಿ ಹೆಸರು ಉಚ್ಛರಿಸುವುದರ ಜೊತೆಗೆ ವಿನಾಯಕ ಎಂಬ ಹೆಸರನ್ನು ಮಗು ಪಡೆದುಕೊಂಡಿತ್ತು.

***
               `ಇದೆಂತಾ ಮಳ್ಳು ಹುಚ್ಚು ನಿಂಗೆ..? ಮಗು ಹುಟ್ಟುವುದಕ್ಕೂ ಮುನ್ನ ಅದರ ಲಿಂಗ ಪರೀಕ್ಷೆ ಮಾಡಲಾಗ. ಹುಟ್ಟೋ ಮಗು ಗಂಡೋ ಹೆಣ್ಣೋ ಹೇಳಿ ಪರೀಕ್ಷೆ ಮಾಡಿಸಿದ್ದ ಹೇಳಿ ಗೊತ್ತಾದರೆ ಜೈಲಿಗೆ ಹೋಗಕಾಗ್ತು. ಗಂಡು ಹುಟ್ಟಲಿ, ಹೆಣ್ಣು ಹುಟ್ಟಲಿ. ಯಂದೆ ಮಗು ಅಲ್ದ. ಹುಟ್ಟ ಮಗುವಿನ ಮೇಲೆ, ವಾಣಿಯ ಮೇಲೆ ಎಂತೆಂತಾದ್ರೂ ಆರೋಪ ಹೊರಸಿದ್ರೆ ಸರಿಯಿರ್ತಿಲ್ಲೆ ನೋಡು..' ಎಂದು ಸುಧೀರ ಮೊಟ್ಟ ಮೊದಲು ತನ್ನ ತಾಯಿಯ ಎದುರು ಮಾತನಾಡಿದ್ದ.
               ನಾಲ್ಕೆಕರೆ ಜಮೀನಿನ ಒಡೆಯ ಸುಧೀರ ಹೆಗಡೆ. ಆತನಿಗೆ ವಾಣಿಯ ಜಾತಕ ಬಂದಾಗ ಮೊದಲಿಗೆ ಪೋಟೋ ನೋಡಬೇಕು. ಕೂಸು ಚನ್ನಾಗಿದ್ದರೆ ಮದುವೆಗೆ ಒಪ್ಪಿಕೊಳ್ಳುತ್ತೇನೆ ಎಂದು ಖಡಾಖಂಡಿತವಾಗಿ ಹೇಳಿದ್ದ. ಕೊನೆಗೆ ವಾಣಿಯ ಪೋಟೋವನ್ನು ನೋಡಿದ್ದ. ಚನ್ನಾಗಿದ್ದಾಳೆ ಕೂಸು. ಬಿ.ಕಾಂ ಓದಿದ್ದಾಳೆ ಎಂದಾಗ ಮಾತ್ರ ಸುಧೀರನ ಮನಸ್ಸಿನಲ್ಲಿ ಕೊಂಚ ಅಳುಕು ಉಂಟಾಗಿದ್ದು ನಿಜ. ಓದಿದ ಹುಡುಗಿ. ಕಾಮರ್ಸ್ ಕಾಲೇಜಿನವಳು. ಆ ಕಾಲೇಜಿನ ಹುಡುಗಿಯರು ಸ್ವಲ್ಪ ಜೋರಿರುತ್ತಾರೆ ಎಂದು ಕೇಳಿ ತಿಳಿದಿದ್ದ ಸುಧೀರ ಕೊನೆಗೊಮ್ಮೆ ಮದುವೆಗೆ ಒಪ್ಪಿಕೊಂಡಿದ್ದ. ಶಿರಸಿಯಲ್ಲಿ ಕೆಲಸದಲ್ಲಿದ್ದವನಿಗೆ ವಾಣಿಯ ಕುರಿತು ಅಲ್ಲಿ ಇಲ್ಲಿ ವಿಚಾರಿಸಿದಾಗ ಮಾಹಿತಿ ನೀಡಿದವರು ಅನೇಕ ಜನರಿದ್ದರು. ಆತ ಹಲವರ ಬಳಿ ವಾಣಿಯ ಬಗ್ಗೆ ಕೇಳಿದ್ದ. ಅವರೆಲ್ಲರೂ ಕೂಸಿನ ಒಳ್ಳೆಯ ಗುಣಗಳ ಬಗ್ಗೆ ಹೇಳಿದ್ದರು. ಆದರೆ ಯಾರೂ ಕೂಡ ವಾಣಿ ಹಾಗೂ ವಿನಾಯಕರ ಬಗ್ಗೆ ಹೇಳಿರಲಿಲ್ಲ. ಹುಡುಗಿ ಒಳ್ಳೆಯವಳು ಎಂಬುದು ಗೊತ್ತಾದ ತಕ್ಷಣ ಮದುವೆಗೆ ಒಪ್ಪಿಕೊಂಡುಬಿಟ್ಟಿದ್ದ.
               ಸ್ವರ್ಗದಲ್ಲಿ ನಡೆಯಿತು ಎಂಬಂತೆ ಮದುವೆಯಾಗಿತ್ತು. ಮದುವೆಯಾದ ನಂತರ ಶುಭಗಳಿಗೆಯಲ್ಲಿ ವಾಣಿ ಮನೆಯೊಳಗೆ ಕಾಲಿಟ್ಟಿದ್ದಳು. ಮೊದ ಮೊದಲು ವಾಣಿಯ ಮನಸ್ಸಿನಲ್ಲಿ ಅದೇನು ಬೇಜಾರೋ. ಅದೇನೋ ಆಲೋಚನೆ ಮಾಡುತ್ತ ಕುಳಿತಿರುತ್ತಿದ್ದಳು. ಆಕೆಯ ಅನ್ಯಮನಸ್ಕತೆಗೆ ಕಾರಣವನ್ನರಿಯದ ಸುಧೀರ ಮದುವೆಯಾಗಿ ಬಂದ ಹೊಸತಾದ ಕಾರಣ ಹೀಗೆ ಎಂದುಕೊಂಡಿದ್ದ. ವಾಣಿಯ ಜೊತೆಗೆ ಹೆಚ್ಚು ಹೆಚ್ಚು ಬೆರೆಯಲು ಯತ್ನಿಸುತ್ತಿದ್ದ. ಆದರೆ ಶಿರಸಿಯಲ್ಲಿ ಮಾಡುತ್ತಿದ್ದ ಶೇರ್ ಮಾರ್ಕೇಟ್ ಬಿಸಿನೆಸ್ ಲಾಭದಲ್ಲಿತ್ತು. ಅದು ಲಾಭದತ್ತ ಮುಖ ಮಾಡಿದಂತೆಲ್ಲ ಮನೆಗೆ ಬರುವುದು ಲೇಟಾಗುತ್ತಿತ್ತು. `ಛೇ.. ವಾಣಿಯೆಷ್ಟು ಬೇಜಾರು ಮಾಡಿಕೊಳ್ಳುತ್ತಾಳೋ..' ಎಂದು ಅನೇಕ ಸಾರಿ ಅಂದುಕೊಂಡಿದ್ದ ಸುಧೀರ. `ಖಂಡಿತ ಇವತ್ತು ಮನೆಗೆ ಬೇಗನೇ ಹೋಗಿ ವಾಣಿಯ ಜೊತೆಗೆ ಪ್ರೀತಿಯಿಂದ ಮಾತನಾಡಬೇಕು. ಮುದ್ದುಮಾಡಿ ರಮಿಸಬೇಕು... ' ಎಂದು ಹಗಲು ಹೊತ್ತಿನಲ್ಲೆಲ್ಲ ಎಂದುಕೊಳ್ಳುತ್ತಿದ್ದ ಸುಧೀರನಿಗೆ ರಾತ್ರಿ ಮಾತ್ರ ಏನು ಮಾಡಿದರೂ ಲೇಟಾಗಿ ಹೋಗುತ್ತಿತ್ತು. ತಥ್.. ಎಂದು ತನ್ನನ್ನೇ ತಾನು ಬೈದುಕೊಂಡು  ಮನೆಗೆ ಹೋಗುವ ವೇಳೆಗೆ ಗಂಡನಿಗಾಗಿ ಕಾಯುತ್ತಿರುವ ವಾಣಿಯ ಬಾಡಿದ ಮುಖ ಕಾಣುತ್ತಿತ್ತು. ತನಗರಿವಿಲ್ಲದಂತೆ ಮನಸ್ಸಿನಲ್ಲಿ ಪಾಪಪ್ರಜ್ಞೆ ಮೂಡಿದಂತಾದರೂ ಸುಧೀರ ಅಸಹಾಯಕನಾಗಿದ್ದ.
              `ಹಗಲಿಡಿ ಅದೇನು ಮಾಡುತ್ತಾಳೋ ಪಾ..ಪ. ಹೊತ್ತು ಕಳೆಯುವ ಕಷ್ಟ ಗೊತ್ತಿದೆ. ಮನೆಯಲ್ಲಿ ಆಳುಗಳಿಗೆ ಬರವಿಲ್ಲ. ಆದರೆ ಅವರಿಗೆಲ್ಲ ಅಡುಗೆ ಸೇರಿದಂತೆ ಎಲ್ಲ ರೀತಿಯ ಕಾರ್ಯಗಳನ್ನು ಕೈಗೊಳ್ಳುವುದು ವಾಣಿಯ ಕೆಲಸ. ಅದಕ್ಕೆಲ್ಲ ಎಷ್ಟು ಕಷ್ಟ ಪಡುತ್ತಾಳೋ.. ವಾರಕ್ಕೊಂದು ದಿನವಾದರೂ ಲಕ್ಷ್ಮೀ ಟಾಕೀಸಿಗೆ ಹೋಗಿ ಹೊಚ್ಚ ಹೊಸ ಸಿನೆಮಾ ತೋರಿಸಿಕೊಂಡು ಬರೋಣ ಎಂದರೆ ಬಿಡುವೇ ಸಿಗುತ್ತಿಲ್ಲ. ಮನೆಯಲ್ಲಿ ಅಲ್ಪಸ್ವಲ್ಪ ಸಮಯ ಸಿಕ್ಕರೂ ಜಮೀನಿನ ದೇಖರಿಕೆ ನೋಡಿಕೊಳ್ಳಬೇಕು. ಇಂತಹ ಹಲವು ಹಳವಂಡಗಳ ನಡುವೆ ಹೆಂಡತಿಯನ್ನು ಮರೆಯುತ್ತಿದ್ದೇನಾ..?' ಎಂದು ಸುಧೀರ ರಾತ್ರಿ ಊಟಕ್ಕೆ ಕುಳಿತಾಗ ಯೋಚಿಸುತ್ತಿದ್ದ. ಮೌನವಾಗಿ ಬಡಿಸುವ ವಾಣಿಯ ಕುರಿತು ಮರುಕವಾಗುತ್ತಿತ್ತು. ಊಟ ಮುಗಿಯುವ ವೇಳೆಗೆ ಹಾಸಿಗೆಯ ಕಡೆಗೆ ಹೋಗಬೇಕು. ನಿಜವಾಗಿಯೂ ಹೇಳಬೇಕೆಂದರೆ ಹಾಸಿಗೆಯಲ್ಲಿ ಮಾತ್ರ ವಾಣಿ ಹಾಗೂ ಸುಧೀರ ಗಂಡ-ಹೆಂಡಿರಾಗುತ್ತಿದ್ದರು. ಉಳಿದಂತೆ ಗಂಡ ಎಂಬ ಪಾತ್ರದಲ್ಲಿ ಅವನಿರುತ್ತಿದ್ದ. ಹೆಂಡತಿ ಎಂಬ ಪಾತ್ರದಲ್ಲಿ ಅವಳಿರುತ್ತಿದ್ದಳು. ಬದುಕು ಯಾಂತ್ರೀಕರಣದಂತಾಗಿಬಿಟ್ಟಿತ್ತು.
                ಈ ನಡುವೆ ಆಯಿ ವಾಣಿಗೆ ಇಲ್ಲ ಸಲ್ಲದ ಕಿರಿ ಕಿರಿಗಳನ್ನು ನೀಡುತ್ತಿದ್ದಾಳೆ ಎಂಬುದು ಅದ್ಹೇಗೋ ಗೊತ್ತಾದ ನಂತರ ಸುಧೀರ ತನ್ನನ್ನು ತಾನು ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಳ್ಳಲು ಯತ್ನಿಸಿ ಅದರಲ್ಲಿ ಯಶಸ್ವಿಯೂ ಆಗಿದ್ದ. ಅದರ ಫಲವಾಗಿಯೇ ಆತ ವಾಣಿಯನ್ನು ಶಿರಸಿ ಮಾರಿಕಾಂಬಾ ಜಾತ್ರೆಗೆ ಕರೆದೊಯ್ದಿದ್ದ. ಜಾತ್ರೆಯ ಕಲರವವಿರಬೇಕು. ವಾಣಿ ಹೂವಿನಂತಾಗಿದ್ದಳು. ಬಲೂನಿನಂತೆ ಹಾರಾಡಿದ್ದಳು. ಅಲ್ಲೊಂದು ಕಡೆ ಅದ್ಯಾರೋ ದೋಸ್ತರ ದಂಡಿರಬೇಕು. ಕಾಲೇಜಿನವರಂತೆ ಸಿಕ್ಕಾಗ ಮಾತ್ರ ವಾಣಿ ಮೌನಿಯಾಗಿದ್ದಳು. ತನಗೆ ಪರಿಚಯ ಮಾಡಿಸಿದ್ದಳು. ಅದ್ಯಾರೋ ಹುಡುಗನ ಬಳಿ ಮಾತನಾಡಿದ್ದಳು. ತನ್ನನ್ನೂ ಪರಿಚಯ ಮಾಡಿಸಿದ್ದಳು. ಈ ಹುಡುಗರ ದಂಡು ಸಿಗುವ ಮುನ್ನ ಖುಷಿ ಖುಷಿಯಾಗಿದ್ದ ವಾಣಿ ಆ ನಂತರ ಇದ್ದಕ್ಕಿದ್ದಂತೆ ತನ್ನನ್ನು ಅಲ್ಲಿಂದ ಕರೆದೊಯ್ದದ್ದು, ಕಣ್ಣಿನಂಚಿನಲ್ಲಿ ಮೂಡಿದ್ದ ನೀರನ್ನು ಒರೆಸಿಕೊಂಡಿದ್ದು. ನಂತರ ಜಾತ್ರೆಯ ತುಂಬೆಲ್ಲ ಮೌನವಾಗಿದ್ದನ್ನು ಕಂಡಾಗ ಮಾತ್ರ ಸುಧೀರ ಕುಸಿದುಹೋಗಿದ್ದ. ಖುಷಿಪಟ್ಟುಕೊಂಡು ಇರಬೇಕಿದ್ದ ಹುಡುಗಿಯನ್ನು ಮದುವೆಯಾಗಿ ತಾನು ಕೂಡಿ ಹಾಕಿಬಿಟ್ಟೆನೆ? ಮದುವೆಗೂ ಮುನ್ನ ವಾಣಿ ಬಹಳ ಖುಷಿಯಿಂದಿದ್ದಳು. ಅವಳನ್ನು ಆದರಿಸುವ, ಇಷ್ಟಪಡುವ ಗೆಳೆಯರ ದಂಡು ಬಹಳ ದೊಡ್ಡದಿತ್ತು. ತಾನು ಮದುವೆಯಾಗುವ ಮೂಲಕ ಹಾರುವ ಹಕ್ಕಿಯನ್ನು ತಂದು ಪಂಜರದಲ್ಲಿ ಕೂಡಿಟ್ಟೆನಾ..? ಯಾಕೋ ತಪ್ಪು ಮಾಡಿದೆ ಎಂದೆಲ್ಲ ಆಲೋಚಿಸಿದ್ದ ಸುಧೀರ.  ವಾಣಿಯ ಕಣ್ಣೀರಿನ ನಿಜವಾದ ಕಾರಣ ಗೊತ್ತಾಗದಿದ್ದರೂ ತನ್ನ ನೇರಕ್ಕೆ ಆಲೋಚನೆ ಮಾಡಿದ್ದ ಸುಧೀರ. ಏನಾದರಾಗಲಿ ವಾಣಿಗಾಗಿಯೇ ದಿನದಲ್ಲಿ ಒಂದಷ್ಟು ದಿನವನ್ನು ಮೀಸಲಿರಿಸಬೇಕು ಎನ್ನುವ ನಿರ್ಧಾರವನ್ನು ಸುಧೀರ ತೆಗೆದುಕೊಂಡು ಅದರಂತೆಯೇ ನಡೆದುಕೊಳ್ಳ ಹತ್ತಿದ್ದನ್ನು ವಾಣಿಯೂ ಗಮನಿಸಿದ್ದಳು.
                ಇದ್ದಕ್ಕಿದ್ದಂತೆ ಒಂದು ದಿನ ವಾಣಿ ತನ್ನಲ್ಲಿ ಇನ್ನೊಂದು ಜೀವ ಮೊಳೆತಿದೆ ಎಂದಾಗ ಸುಧೀರ ಬಾನಿಗೆ ಜಿಗಿದಿದ್ದ. ಆ ನಂತರವಂತೂ ದೈನಂದಿನ ಶೇರ್ ಮಾರ್ಕೇಟಿನ ಕೆಲಸವನ್ನು ಬದಿಗೊತ್ತಿ ಹೆಂಡತಿಯ ಜೊತೆಗೆ ಕಳೆಯತೊಡಗಿದ್ದ. ಹುಟ್ಟುವ ಮಗು ಹಾಗಿರುತ್ತದೆ, ಹೀಗಿರುತ್ತದೆ ಎಂದೆಲ್ಲ ಕನಸನ್ನು ಕಟ್ಟಲಾರಂಭಿಸಿದ್ದ. ಗಂಡು ಮಗುವೇ ಹುಟ್ಟಲಿ ದೇವರೆ ಎಂದೂ ಆಗಾಗ ಬೇಡಿಕೊಳ್ಳುತ್ತಿದ್ದ. ಹೀಗಿದ್ದಾಗಲೇ ಒಂದಿನ ಇದ್ದಕ್ಕಿದ್ದಂತೆ ಆಯಿ ಬಂದು `ಯೇ ತಮಾ.. ವಾಣಿಯ ಹೊಟ್ಟೆಲಿರೋ ಮಗು ಕೂಸಾ..? ಮಾಣಿಯಾ ಹೇಳಿ ನೋಡಿಸ್ಕ್ಯಂಡು ಬರಕಾಗಿತ್ತಲಾ.. ಮಾಣಿಯಾದ್ರೆ ಅಡ್ಡಿಲ್ಯಾ.. ಕೂಸಾದ್ರೆ ಬ್ಯಾಡದಾ..' ಎಂದು ಹೇಳಿದ್ದಳು. ಸುಧೀರನೂ ಹುಂ ಎಂದು ವಾಣಿಯ ಬಳಿ ಬಂದು ಕೇಳಿದ್ದ. ಆಗ ವಾಣಿ ಸಿಟ್ಟಿನಿಂದ ಬೇಡವೇ ಬೇಡ ಎಂದಿದ್ದಳು. ಅದಕ್ಕೆ ಪ್ರತಿಯಾಗಿ ಸುಧೀರ ಆಯಿಯನ್ನು ಎದುರುಹಾಕಿಕೊಂಡು ಮಾತನಾಡಿದ್ದ. ವಾಣಿಗೆ ಸುಧೀರ ಆಯಿಯ ಬಳಿ ಹೇಳಿದ್ದ ಮಾತನ್ನು ಕೇಳಿದ ನಂತರ ಗಂಡನ ಕುರಿತು ಮೂಡಿದ್ದ ಅಭಿಮಾನ ಇಮ್ಮಡಿಸಿತ್ತು.
                ವಾಣಿಗೆ ಒಂಭತ್ತು ತಿಂಗಳು ತುಂಬಿದಾಗಲೇ ಸುಧೀರ ನಿಂತಲ್ಲಿ ನಿಲ್ಲಲಿಲ್ಲ ಕೂತಲ್ಲಿ ಕೂರಲಿಲ್ಲ ಎನ್ನುವಂತಾಗಿದ್ದ. ಶುಭಗಳಿಗೆಯಲ್ಲಿ ವಾಣಿ ಹಡೆದಳು. ಹುಟ್ಟಿದ ಮಗು ಗಂಡಾಗಿತ್ತು. ಹರಕೆ ಹೊತ್ತುಕೊಂಡಿದ್ದ ಪರಿಣಾಮ ಹೀಗಾಗಿದೆ ಎಂದುಕೊಂಡ ಸುಧೀರ. ನಂತರದ ದಿನಗಳೆಲ್ಲ ಕನಸಿನಂತೆ ಕಳೆದುಹೋದವು. ಭಟ್ಟರು ಪಂಚಾಂಗ ನೋಡಿದವರೇ ವ ಅಕ್ಷರದ ಹೆಸರನ್ನು ಇಡಬೇಕು ಎಂದಾಗ ಮಾತ್ರ ಆಲೋಚನೆಗೆ ಬಿದ್ದಿದ್ದ ಸುಧೀರ. ಶಾಲೆಗೆ ಸೇರಿಸಿದರೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕಾಗಿ ಅ ಅಕ್ಷರದಿಂದ ಆರಂಭವಾಗುವ ಹೆಸರನ್ನಿಡಬೇಕು ಎಂದಾಗ ಭಟ್ಟರು ವ ಅಕ್ಷರವನ್ನು ಸೂಚಿಸಿದ್ದರು. ಈ ಕುರಿತು ಆಲೋಚನೆಗೆ ಬಿದ್ದಿದ್ದರೂ ವ ಅಕ್ಷರದಿಂದ ಶುರುವಾಗುವ ಹೆಸರನ್ನಿಡುವುದೇ ಸೂಕ್ತ ಎಂದುಕೊಂಡ ಸುಧೀರ. ತಕ್ಷಣವೇ ಫೇಸ್ ಬುಕ್ಕಿಗೆ ತೆರಳಿ ತನ್ನ ಗೋಡೆಯಲ್ಲಿ `ವ..' ಅಕ್ಷರದಿಂದ ಆರಂಭವಾಗುವ ಗಂಡು ಮಗುವಿನ ಹೆಸರನ್ನು ಸೂಚಿಸಿ. ತನ್ನ ಮಗುವಿಗೆ ಇಡಬೇಕು ಎಂದೂ ಸ್ಟೇಟಸ್ ಅಪ್ ಡೇಟ್ ಮಾಡಿ ಬಂದಿದ್ದ. ಹೀಗೆ ಅಪ್ ಡೇಟ್ ಮಾಡಿದ್ದ ಅರ್ಧ ಗಂಟೆಯಲ್ಲಿ ವ ಅಕ್ಷರದ ವಿಚಿತ್ರ, ವಿಕ್ಷಿಪ್ತ, ವಿಲಕ್ಷಣ ಹೆಸರುಗಳನ್ನೆಲ್ಲ ಫೇಸ್ ಬುಕ್ ಮಂದಿ ಬರೆದು ಬಿಸಾಡಿದ್ದರು. ಅದನ್ನು ನೋಡಿ ಸುಮ್ಮನಾಗಿದ್ದ ಸುಧೀರ ಹೆಂಡತಿಯ ಬಳಿ ಬಂದು `ವ' ಅಕ್ಷರದ ವಿಷಯ ತಿಳಿಸಿದ್ದ ತಕ್ಷಣ ಆಕೆ ಆಲೋಚಿಸಿ ವಿನಾಯಕ ಎಂದಿದ್ದಳು.
                 ವ ಅಕ್ಷರದಿಂದ ಎಷ್ಟೆಲ್ಲ ಮಾಡರ್ನ್ ಹೆಸರುಗಳಿವೆ. ವಿನಾಯಕ ಎಂಬುದು ಹಳೆಯದಾಗಿಲ್ಲವಾ..? ಎಂದು ವಾಣಿಯ ಬಳಿ ಕೇಳಬೇಕೆನ್ನುವಷ್ಟರಲ್ಲಿ ವಾಣಿಯೇ `ವರದಮೂರ್ತಿ ಗಣಪತಿಯ ಬಳಿ ಗಂಡು ಮಗು ಹುಟ್ಟಿದರೆ ನಿನ್ನ ಹೆಸರನ್ನು ಇಡುತ್ತೇನೆ ಎಂದುಕೊಂಡಿದ್ದೆ.. ಅದಕ್ಕೆ ಹಳೆಯದಾದರೂ ಪರವಾಗಿಲ್ಲ ಈ ಹೆಸರನ್ನಿಟ್ಟಿದ್ದೇನೆ..' ಎಂದು ಹೇಳಿದ್ದಳು.
                 ವಾಣಿಗೆ ಮತ್ತೆ ವಿನಾಯಕ ನೆನಪಾಗಿದ್ದ. ಸುಧೀರ ವಿನಾಯಕನ ಹೆಸರನ್ನೇ ಮಗುವಿನ ಕಿವಿಯಲ್ಲಿ ಉಚ್ಛರಿಸಿದ್ದ.

***

Wednesday, March 26, 2014

ಪ್ರೇಮಪತ್ರ (ಕಥೆ)

 `ಪ್ರೀತಿಯ ಜಯಾಳಿಗೆ..
ನಿನ್ನ ಕಂಡ್ರೆ ನಂಗೆ ಒಂಥರಾ ಆಕ್ತು. ಮನಸೆಲ್ಲಾ ಹೂವಿನಂಗೆ ಹಾರಾಡಲೆ ಹಿಡಿತು. ನಿನ್ನ ಉದ್ದ ಜಡೆ, ಆಗಾಗ ನೀನು ಹರಡಿಕೊಂಡು ಬರುವ ಕೂದಲು, ಹೈಸ್ಕೂಲಿಗೆ ಬಪ್ಪಕೀದ್ರೆ ಆನು ನೋಡ್ತಾ ಇದ್ದಿ ಹೇಳಿ ಗೊತ್ತಿದ್ರೂ ನನ್ನ ನೋಡದೇ ಸತಾಯಿಸದು ಈ ಮುಂತಾದ ಹಲವಾರು ಕಾರಣಗಳೇ ನನ್ನನ್ನು ಸೆಳೆದಿದ್ದು.
             ಸುಮಾರ್ ದಿನದಿಂದ ಆನು ನಿಂಗೆ ಹೇಳವು ಅಂದ್ ಕಂಡಿದ್ದಿದ್ದಿ. ನಿನ್ನನ್ನು ನೋಡವು ಹೇಳಿ ನಿಮ್ಮನೆ ಹತ್ರನೂ ಬಂದಿದ್ದಿದ್ದಿ. ನಿನ್ ಅಪ್ಪಯ್ಯ ಅಲ್ಲಿ ಕಂಡ ತಕ್ಷಣ ಆನು ಹಂಗೆ ಓಡ್ ಬಂದ್ ಬಿಟ್ಟಿದ್ದಿ. ನನ್ನ ಮನಸ್ಸಿನ ಭಾವನೆ ನಿಂಗೆ ಹೇಳದು ಹೆಂಗೆ ಹೇಳಿ ಆಲೋಚನೆ ಮಾಡ್ತಾ ಇದ್ದಾಗಲೇ ಪಕ್ಕದ ಮನೆಯ ನವೀನ ಹಾಗೂ ರಾಜೇಂದ್ರ ಯನ್ನ ಹತ್ರ ಪತ್ರ ಬರಿ ಹೇಳಿದ್ದ ಅದಕ್ಕೆ ಆನು ಬರೀತಾ ಇದ್ದಿ.
              ನಾನು ಬಹಳ ದಿನಗಳಿಂದ ನಿನ್ನನ್ನು ಇಷ್ಟ ಪಟ್ಟಿದ್ದಿ. ಆದರೆ ಹೇಳ್ ಕ್ಯಂಬಲೆ ಒಂಥರಾ ಆಗ್ತಾ ಇತ್ತು. ಈ ಪತ್ರದ ಮೂಲಕ ನನ್ನ ಮನಸಿನ ಭಾವನೆಗಳನ್ನು ನಿನ್ ಹತ್ರಕ್ಕೆ ಹೇಳ್ತಾ ಇದ್ದಿ...

....

          ಇಷ್ಟು ಬರೆದಿದ್ದ ಪತ್ರವೊಂದು ಗಂಗೆಯ ಕೈಗೆ ಸಿಕ್ಕಾಗ ಇದ್ಯಾರ ಕೆಲಸವಿರಬಹುದು ಎನ್ನುವ ಆಲೋಚನೆ ಮೂಡಿದ್ದಂತೂ ಸತ್ಯ. ಮನೆಯಲ್ಲಿ ನಾಲ್ಕು ಜನ ಮೈದುನರಿದ್ದ. ನಾಲ್ವರಲ್ಲಿ ಹೈಸ್ಕೂಲಿಗೆ ಹೋಗುವ ಮೈದುನರು ಇಬ್ಬರು. ಅವರಲ್ಲಿ ಯಾರೋ ಒಬ್ಬರು ಯಾವುದೋ ಹುಡುಗಿಗೆ ಪತ್ರ ಬರೆದಿದ್ದಾರೆ ಎಂದುಕೊಂಡಳು ಗಂಗೆ.
           ಹೀಗೆ ಒಂದು ದಿನ ಬಟ್ಟೆ ತೊಳೆದು ವಸ್ತ್ರ ಒಣಗಿಸಲು ಮೇಲ್ಮೆತ್ತಿಗೆ ಹೋಗಿದ್ದಾಗ ಗಂಗತ್ತಿಗೆಯ ಕೈಗೆ ಆ ಪತ್ರ ಸಿಕ್ಕಿತ್ತು. ಪತ್ರವನ್ನು ಓದಿದ ತಕ್ಷಣ ಯಾರ ಕೆಲಸ ಇರಬಹುದು ಇರು ಎನ್ನುವುದು ಗಂಗೆಗೆ ಗೊತ್ತಾಗಿರಲಿಲ್ಲ. ಜೊತೆಗಿದ್ದ ವಸುಮತಿ ಪತ್ರವನ್ನು ನೋಡಿ `ಇದು ನಾಗಣ್ಣಯ್ಯನ ಅಕ್ಷರ.. ಅಂವ ಯಾರಿಗೋ ಪತ್ರ ಬರದ್ದಾ..' ಎಂದಾಗಲೇ ನಾಗೇಶ ಹೀಗೂ ಮಾಡುತ್ತಾನೆ ಎನ್ನುವುದರ ಅರಿವಾಗಿದ್ದು. ನಾಗೇಶನ ಪ್ರೇಮ ಪುರಾಣ ಬೆಳಕಿಗೆ ಬಂದಿದ್ದು.
              ತನ್ನ ಪ್ರೇಮಪುರಾಣ ಗಂಗತ್ತಿಗೆಗೆ ತಿಳಿದುಹೋಗಿದೆ ಎಂಬ ಸಂಗತಿ ಗೊತ್ತಾದಾಗಿನಿಂದ ನಾಗೇಶ ಮೊಸರಲ್ಲಿ ಕಲ್ಲು ಹುಡುಕುವ ಕಾರ್ಯವನ್ನು ಆರಂಭಿಸಿದ್ದ. ಪಕ್ಕದ ಮನೆಯ ಇಬ್ಬರು ಓರಗೆಯ ಹುಡುಗರ ಜೊತೆಗೆ ಸೇರಿಕೊಂಡು ತೋಟದ ಗುಡ್ಡೆಯ ಜಯಾಳಿಗೆ ಪತ್ರಬರೆಯುವ ಮೂಲಕ ತಮ್ಮ ಪೌರುಷ ಪ್ರದರ್ಶನ ಮಾಡಿದ್ದ ನಾಗೇಶ.  ಹುಮ್ಮಸ್ಸಿನಲ್ಲಿ ಹಾಗೂ ಪಕ್ಕದ ಮನೆಯ ಇಬ್ಬರ ಬೆಂಬಲಕ್ಕೆ ಪ್ರತಿಯಾಗಿ ಬರೆದಿದ್ದ ಪತ್ರವನ್ನು ಕೊಡುವ ಧೈರ್ಯ ನಾಗೇಶನಿಗೆ ಇರದಿದ್ದ ಕಾರಣ ಮೇಲ್ಮೆತ್ತಿಯ ಟ್ರಂಕಿನ ಮೇಲೆ ಪತ್ರ ಕುಳಿತಿತ್ತು. ಅರ್ಧಮರ್ಧ ಬರೆದ ನಂತರ ಅದನ್ನು ಮುಂದುವರಿಸಿ ಮುಕ್ತಾಯಗೊಳಿಸುವ ಬಗೆಯನ್ನೂ ತಿಳಿಯದೇ ಹಾಗೆ ಬಿಟ್ಟಿದ್ದ ಆತ.
                  ನಾಗೇಂದ್ರ ಇಂತದ್ದೊಂದು ಕೆಲಸಕ್ಕೆ ಕೈಹಾಕಿರುವ ವಿಷಯವನ್ನು ಗಂಗೆ ತನ್ನ ಯಜಮಾನ ಸುಬ್ರಾಯಂಗೆ ತಿಳಿಸಲೇಬೇಕು. ಇಲ್ಲದಿದ್ದರೆ ಮನೆಯ ಮಾನವನ್ನು ನಾಗೇಶ ಹರಾಜು ಮಾಡಿಬಿಡುತ್ತಾನೆ ಎಂದುಕೊಂಡ ಆಕೆ ಸಂಜೆ ಮನೆಯವರಿಗೆ ವಿಷಯವನ್ನು ತಿಳಿಸಿದ್ದಳು. ಅದಕ್ಕೆ ಪ್ರತಿಯಾಗಿ ಸುಬ್ರಾಯ `ಹೌದಾ..? ನಾಗೇಶ ಹಿಂಗೆ ಮಾಡಿದ್ದು ಖರೆ ಹೌದಾ..?' ಎಂದು ಕೇಳಿ ಸುಮ್ಮನಾಗಿದ್ದ.

**

                ಯಲ್ಲಾಪುರ ಕಡೆಯ ಗಂಗೆ ಶಿರಸಿ ಕಡೆಗೆ ಮದುವೆಯಾಗಿ ಬಂದ ಸಂದರ್ಭದಲ್ಲಿ ಹವ್ಯಕರಲ್ಲಿ ಹೆಣ್ಣು ಹೆಚ್ಚಾಗಿತ್ತು. ಅವಿಭಕ್ತ ಕುಟುಂಬ ಹಾಗೂ ಸ್ವಲ್ಪ ದೂರದ ಸೀಮೆ. ಆದರೂ ಪರವಾಗಿಲ್ಲ ಸಾಕಷ್ಟು ಆಸ್ತಿಯಿದೆ. ಒಳ್ಳೆಯ ಜನ ಎನ್ನುವ ಕಾರಣಕ್ಕೆ ಗಂಗೆಯ ಮನೆಯವರು ಶಿರಸಿ ಸೀಮೆಗೆ ಮದುವೆ ಮಾಡಿಕೊಟ್ಟಿದ್ದರು. ಗಂಗೆಯ ಗಂಡ ಸುಬ್ರಾಯ, ಮಾವ ವಿಶ್ವೇಶ್ವರ, ಸುಬ್ರಾಯನ ಐದು ಜನ ತಮ್ಮಂದಿರು, ಆರು ಜನ ಅಕ್ಕತಂಗಿಯರೆಲ್ಲ ಮದುವೆಯಾಗಿ ಆರು ತಿಂಗಳವರೆಗೆ ಗಂಗೆಗೆ ಬಹಳ ಒಳ್ಳೆಯವರಂತೆ ಕಂಡಿದ್ದರು. ಆದರೆ ಆ ನಂತರದ ದಿನಗಳಲ್ಲಿಯೇ ಮನೆಯ ಸದಸ್ಯರೆಲ್ಲರ ದುರ್ಗುಣಗಳು ಒಂದೊಂದಾಗಿ ಹೊರಬರತೊಡಗಿತ್ತು.
              ನಾಗೇಶ ಆಗ ಹೈಸ್ಕೂಲು ಓದುತ್ತಿದ್ದ ಮಾಣಿ. ಆಗ ತಾನೆ ಪಿಯುಸಿಗೆ ಬರಲು ಹಾತೊರೆಯುತ್ತಿದ್ದ. ಸರಿಯಾಗಿ ಓದಿದ್ದರೆ ಪಿಯುಸಿ ಮೆಟ್ಟಿಲನ್ನು ಹಾರಾಡುತ್ತ ಹತ್ತಬಲ್ಲ ಸಾಮರ್ಥ್ಯವಿದ್ದ ನಾಗೇಶ ಜಯಾಳ ಹಿಂದೆ ಬಿದ್ದ ಪರಿಣಾಮ ಆರು ವಿಷಯಗಳಲ್ಲಿ ಮೂರರಲ್ಲಿ ಫೇಲಾಗಿದ್ದ. ಪರಿಣಾಮ ತನ್ನ ಓದಿಗೂ ನಮಸ್ಕಾರ ಹೇಳಿದ್ದ. ಓದು ಮುಗಿದ ನಂತರ ಈತ ಬರೆದ ಪತ್ರ ಗಂಗತ್ತಿಗೆಯ ಕೈಗೆ ಸಿಕ್ಕಿಬಿದ್ದಿತ್ತು. ಮನೆಯಲ್ಲಿ ಎಲ್ಲಾದರೂ ಹೇಳಿಬಿಟ್ಟರೆ ಎನ್ನುವ ಭಯ ಆತನನ್ನು ಆವರಿಸಿದ ಪರಿಣಾಮ ಗಂಗತ್ತಿಗೆಯ ಉಳಿದ ಕೆಲಸಗಳಲ್ಲಿ ತಪ್ಪು ಹುಡುಕಿ ಸುಮ್ಮನಿರಿಸಲು ಪ್ರಯತ್ನ ಮಾಡಿದ್ದ.
              ಪ್ರೇಮಪತ್ರ ಪ್ರಕರಣ ಇಡೀ ಊರಿನಲ್ಲಿ ನಾಲ್ಕೈದು ದಿನ ಎಲ್ಲರ ಬಾಯಲ್ಲೂ ನಲಿದಾಡುತ್ತಿತ್ತು. ನಾಗೇಶ ಎಲ್ಲಾದರೂ ರಂಪಾಟ ಮಾಡಿಬಿಟ್ಟರೆ ಎನ್ನುವ ಕಾರಣಕ್ಕಾಗಿ ಊರಿನವರೆಲ್ಲ ಸುಮ್ಮನಿದ್ದರು. ತನ್ನ ಪ್ರೇಮಪುರಾಣ ಗಂಗೆಯಿಂದಾಗಿಯೇ ಲೋಕಾರ್ಪಣೆಯಾಯಿತು ಎನ್ನುವುದು ನಾಗೇಶನ ಸಿಟ್ಟು. ಹೇಗಾದರೂ ತೀರಿಸಿಕೊಳ್ಳಬೇಕೆಂದುಕೊಳ್ಳುತ್ತಿದ್ದ ನಾಗೇಶ.

***
           ದೊಡ್ಡಮನೆ ವಿಶ್ವೇಶ್ವರ ಭಾವ ತೀರಿಕೊಂಡಿದ್ದು ಸುಬ್ರಾಯ ಮನೆಯ ಯಜಮಾನನಾಗಲು ಪ್ರಮುಖ ಕಾರಣವಾಯಿತು. ವಯಸ್ಸಿನಲ್ಲಿ ಹಿರಿಯ ಹಾಗೂ ಮನೆಯ ಹಿರೇ ಅಣ್ಣ ಎನ್ನುವ ಕಾರಣಕ್ಕಾಗಿ ಸುಬ್ರಾಯ ಯಜಮಾನ್ತನಿಗೆ ವಹಿಸಿಕೊಂಡಿದ್ದ. ಮೊದ ಮೊದಲಿಗೆ ಎಲ್ಲ ಸುರಳೀತವೇ ಇತ್ತು. ಆದರೆ ಮೊದಲಿಗೆ ವರಾತ ಆರಂಭಿಸಿದವನೇ ನಾಗೇಶ. ಗಂಗೆಗೆ ಇದು ಗೊತ್ತಾಗಿದ್ದು. ಮನೆಯಲ್ಲಿ ಎಲ್ಲರದ್ದೂ ಒಂದು ದಾರಿಯಾದರೆ ನಾಗೇಶನದ್ದೇ ಇನ್ನೊಂದು ದಾರಿಯೆಂಬಂತಾಗಿತ್ತು. ಬೆಳಗಿನ ಆಸರಿಗೆಯನ್ನು ಎಲ್ಲರೂ ಕುಡಿದು ಗದ್ದೆಯೋ-ತೋಟವೋ ಎಂಬಂತೆ ತಮ್ಮ ತಮ್ಮ ಕೆಲಸಕ್ಕೆ ಹೋದರೆ ಎಲ್ಲರಿಗಿಂತ ತಡವಾಗಿ ಬಂದು ತಿಂಡಿ ತಿನ್ನಲು ಕುಳಿತುಕೊಳ್ಳುವ ನಾಗೇಶ ಅದು ಸರಿಯಿಲ್ಲ ಇದು ಸರಿಯಿಲ್ಲ ಎಂದು ಸೊಖಾ ಸುಮ್ಮನೆ ಹೇಳತೊಡಗಿದಾಗಲೇ ಗಂಗೆಗೆ ನಾಗೇಶ ವಿಚಿತ್ರವಾಗಿ ಆಡುತ್ತಿದ್ದಾನೆ ಎನ್ನಿಸಿದ್ದು.
             ಇಷ್ಟಕ್ಕೆ ನಿಲ್ಲದ ನಾಗೇಶ ತಾಯಿ ಮಹಾಕಾಳಕ್ಕನ ಬಳಿ ಚಾಡಿ ಮಾತನ್ನು ಹೇಳಲು ಆರಂಭಿಸಿದಾಗ ಗಂಗೆ ಮೊದಲ ಬಾರಿಗೆ ಆಸ್ಫೋಟಿಸಿ ನಾಗೇಶ ಹಾಗೂ ಮಹಾಕಾಳಕ್ಕನ ಬಳಿ ಜಗಳಕ್ಕೆ ನಿಂತಿದ್ದಳು. ಆದರೆ ಮಹಾಕಾಳಕ್ಕ-ನಾಗೇಶರ ಎದುರು ಒಬ್ಬಂಟಿ ಗಂಗೆ ಸೋತು ಸುಮ್ಮನಾಗಿದ್ದಳು. ಆದರೆ ಆ ನಂತರ ಮಾತು ಮಾತಿಗೆ ಜಗಳ, ಕಿರಿ ಕಿರಿ ಹೆಚ್ಚಿ ಕೊನೆಗೊಮ್ಮೆ ಗಂಗೆ ಇನ್ನು ಈ ಮನೆಯಲ್ಲಿರುವುದು ಅಸಾಧ್ಯ. ಮನೆ ಪಾಲಾಗೋದೇ ಸೈ ಎನ್ನುವ ನಿರ್ಧಾರಕ್ಕೂ ಬಂದಿದ್ದಳು. ಪ್ರೇಮಪತ್ರ ಪ್ರಕರಣವೊಂದು ಮನೆಯ ಒಡೆಯುವ ವರೆಗೂ ಬಂದು ನಿಂತಿದ್ದು ವಿಚಿತ್ರವಾಗಿತ್ತು.


***

          ಗಂಗೆ ಬಯಸಿದರೆ ಮನೆ ಪಾಲಾಗಬೇಕಲ್ಲ. ಗಂಗೆಯ ಹಾಗೂ ಮನೆಯ ಯಜಮಾನ ಸುಬ್ರಾಯನೂ ಪಾಲಿನ ಕುರಿತು ಮಾತಾಡಿದಾಗ ಮಾತ್ರ ಒಂದು ನಿರ್ಣಯ ಸಾಧ್ಯವಿದೆ. ಹೀಗಿದ್ದಾಗ ಒಂದಿನ ಸುಬ್ರಾಯನ ಎದುರಿಗೆ ಗಂಗೆಯ ವಿರುದ್ಧ ಚಾಡಿ ಹೇಳಲು ಬಂದ ನಾಗೇಶ. ಸುಬ್ರಾಯನಿಗೂ ಒಳಗಿಂದೊಳಗೆ ಈ ವಿಷಯ ತಿಳಿದಿದ್ದ ಕಾರಣ ಮೊದ ಮೊದಲು ಸುಮ್ಮನಿದ್ದ. ಆದರೆ ಈ ಸಾರಿ ಸುಬ್ರಾಯನಿಂದಲೂ ಸುಮ್ಮನಿರಲು ಆಗಲಿಲ್ಲ.
          `ಎಂತದಾ ನಿನ್ ಹೆಂಡ್ತಿ ಹೇಳಿ ನೀನು ವಹಿಸ್ಕಂಡು ಬರ್ತ್ಯನಾ..?' ನಾಗೇಶ ಸುಬ್ರಾಯನಿಗೆ ಮಾರುತ್ತರ ನೀಡಿದ್ದ.
          `ನಿನ್ ಹಣೆಬರಹ ಯಂಗೆ ಗೊತ್ತಿದ್ದಾ.. ನೀ ಎಂತಕ್ಕೆ ಹಿಂಗೆ ಚಾಡಿ ಹೇಳ್ತಾನೂ ಇದ್ದೆ ಹೇಳೂ ಯಂಗೆ ಗೊತ್ತಿದ್ದು.. ಹೇಳವನಾ..?' ಎಂದು ಸುಬ್ರಾಯ ಗುಡುಗಿದಾಗ ತಬ್ಬಿಬ್ಬಾಗಿದ್ದ ನಾಗೇಶ ಬಾಲಮುಚ್ಚಿಕೊಂಡ ಕುನ್ನಿಯಂತಾಗಿ ಸುಮ್ಮನೆ ಹೋಗಿದ್ದ.
       
***

         ಮನೆಯಲ್ಲಿ ಸ್ಥಿರಾಸ್ತಿ ಪಾಲು ಮಾಡುವ ಸಲುವಾಗಿ ಪಂಚರು ಸೇರಿದ್ದರು. ನಾಗೇಶ ಮತ್ತೆ ಪುನಃ ತನ್ನ ಹಳೆಯ ವರಾತ ಆರಂಭಿಸಿದ. `ಸುಬ್ಬಣ್ಣಯ್ಯ ಮಾಡ್ತಾ ಇದ್ದಿದ್ದು ಸರಿಯಿಲ್ಲೆ.. ಗಂಗತ್ತಿಗೆ ಅವನ ಮನಸ್ಸಿನಲ್ಲಿ ಹಚ್ಚಿಕೊಟ್ಟಿದ್ದಕ್ಕೆ ಹಿಂಗೆ ಮಾಡ್ತಾ ಇದ್ದ...' ಎಂದು ಮಾತನಾಡಲು ಆರಂಭಿಸಿದ.
          ಸುಬ್ರಾಯನಿಗೆ ಇನ್ನು ತಡೆದುಕೊಳ್ಳುವುದು ಅಸಾಧ್ಯ ಎಂಬಂತಾಯಿತು. `ಸುಮ್ಮಂಗಿರಾ ಕಂಡಿದ್ದಿ.. ಆ ಜಯಂಗೆ ಅಲ್ದನಾ ನೀ ಪತ್ರ ಬರೆದಿದ್ದಿದ್ದು. ಅದನ್ನು ಹುಗಸಿಟ್ಟಿದಿದ್ಯಲಾ ಮ್ಯಾಲ್ ಮೆತ್ತಿಗೆ. ಅದು ಯಮ್ಮನೇದರ ಕೈಗೆ ಸಿಕ್ಚು ಹೇಳೆ ಅಲ್ದನಾ ನಿಂಗೆ ಸಿಟ್ಟು ಬಂದಿದ್ದು. ಅಲ್ದಾ.. ಪತ್ರ ಬರೆದ ಮೇಲೆ ಅದನ್ನ ದಾಢಸಿಕ್ಯಂಬಲೆ ಆಕ್ತಿಲ್ಲೆ ಹೇಳಾದ್ರೆ ಪತ್ರ ಎಂತಕ್ಕೆ ಬರಿಯವಾ..? ಹೋಗ್ಲಿ ಬರೆದಿದ್ದಾದ್ರೂ ಅದನ್ನ ಸರಿಯಾದ ಜಾಗದಲ್ಲಿ ಇಡವಾ ಬ್ಯಾಡದಾ.. ಹೋಗಿ ಹೋಗಿ ಎಲ್ಲಾರೂ ಓಡಾಡೋ ಜಾಗದಲ್ಲಿ ಇಟ್ರೆ ಹಿಂಗಾಗದೆ ಇನ್ನೆಂತಾ ಆಕ್ತಾ..? ಸುಮ್ ಸುಮ್ನೆ ಇನ್ನೊಬ್ಬರ ಬಗ್ಗೆ ಹೇಳಕಿಂತಾ ಮೊದಲು ನೀನು ಸರಿ ಆಲೋಚನೆ ಮಾಡ್ಕ್ಯ..' ಎಂದ.
           ಪಂಚರು ಸ್ಥಿರಾಸ್ತಿಗಳನ್ನು ಪಾಲು ಮಾಡಿ, ಚರಾಸ್ತಿಯ ಲೆಕ್ಖಹಾಕಲು ಆರಂಭಿಸಿದ್ದರು.

Saturday, March 22, 2014

ನಿರಾಸೆಯ ಕವನ

ನಿರಾಸೆಯಲ್ಲಿ ಸೈನಾ?
ನಾ ಉಸಿರು ಕಟ್ಟಿ ಓಡಿ ಮುಟ್ಟಿದ
ಬೆಟ್ಟದ ತುದಿಯಲ್ಲಿ ಏನಿದೆ?
ಬಟ್ಟ ಬಯಲು !
ಓಡಿ ತಲುಪಿದ್ದಷ್ಟೇ ಬಂತು |

ನಾಗರೀಕತೆಯ ಮೆಟ್ಟಿಲೇರಿ
ಪುಟ್ಟ ನಗು ಕಟ್ಟಿ, ನೆಟ್ಟ
ನರನಾದರೇನು ಬಂತು?
ಬಿಡಲೊಲ್ಲ ವಾನರ
ಬದಲಾಗಲು ಪ್ರಯತ್ನಿಸಿದ್ದಷ್ಠ ಬಂತು |

ಮರೀಚಿಕೆ ಮೆರೆಯುವ ಮರಳು
ಗಾಡಿನ ಬಯಲು ನಾಡಿನಲ್ಲಿ
ನಡೆದಿದ್ದಷ್ಟೇ ಬಂತು |
ಕೊನೆಯಾಗದ ಉಸುಕು.
ಸುಮ್ಮನೆ ಹಾದಿ ಸಾಗಿದ್ದಷ್ಟೇ ಬಂತು |

ಉಕ್ಕಿ ಹರಿಯುವ ನದಿ ನೀರೊಳು
ಮಂತ್ರಘೋಷದೊಳು ಹವನ-
ಹೋಮವ ಮಾಡಿದರೇನು ಬಂತು ?
ಉರಿಯಲೊಲ್ಲ ಸಮಿಧ |
ಕಿಚ್ಚಿಗೆ ಪ್ರಯತ್ನಿಸಿದ್ದಷ್ಟೇ ಬಂತು |

ಕರಿ ಕಲ್ಲು ಬಂಡೆಯ ನೆತ್ತಿಯಲಿ
ನೀರ ಧುಮ್ಮೆಂದು ಸುರಿದರೆ
ಏನು ಬಂತು ?
ಕುಡಿಯದು ನೀರ ಕಲ್ಲು |
ನೆತ್ತಿಯಲಿ ಸುರಿದಿದ್ದಷ್ಟೇ ಬಂತು |

ನಿರಾಸೆಯೇ ಮೆರೆದ ಬದುಕಿನೊಳು
ಆಸೆಯ ಬಿಸಿಲ್ಗುದುರೆ ಏರಿ ಸಾಧನೆಯ
ಜೊತೆ ಓಡಿದ್ದಷ್ಟೇ ಬಂತು |
ಸಿಗಲೊಲ್ಲದು ಗುರಿ-ಗೆಲುವು |
ಓಡಿ ಸುಸ್ತಾಗಿದ್ದೇ ಬಂತು |

ಎಲ್ಲ ಅರಿತಾಗ ಮೆರೆದು ನಿಂತಿದ್ದು
ಅನುಭವವೆಂಬ ನಿಘಂಟು|
ಸಾಧಿಸುವ ಛಲದ ಗಂಟು |
ಗಂಟಿದ್ದರೆ ಕುಂಟನ್ನೂ ಗೆದ್ದು
ಮುದ್ದು ಗೆಲುವನ್ನು ಪಡೆಯಬಹುದು ||

**
(ಈ ಕವಿತೆಯನ್ನು ಬರೆದಿದ್ದು 5-01-2007ರಂದು ದಂಟಕಲ್ಲಿನಲ್ಲಿ)
(ಈ ಕವಿತೆಯ ಮೊದಲಿನ ಪ್ಯಾರಾ ನೇಮಿಚಂದ್ರರದ್ದು. ಅವರ ಬರಹದಿಂದ ಸ್ಪೂರ್ತಿಯಾಗಿ ಬರೆದದ್ದು. ನಿರಾಸೆಯ ಕೋಡಿಯಲ್ಲಿ ಸಿಲುಕಿದ್ದಾಗ ಬರೆದ ನಿರಾಸೆಯ ಕವಿತೆ )

Thursday, March 20, 2014

ಬೆಂಗಾಲಿ ಸುಂದರಿ-10

ಏಕಾದಶೀ ಗುಡ್ಡದ ಮೇಲಿನ ಸೂರ್ಯೋದಯ
                  ಕಾಂತಾಜಿ ದೇವಾಲಯದಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಸಾಮಾನ್ಯ ಹೊಟೆಲಿನಲ್ಲಿ ಉಳಿದಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಸಂಜೆಯಾಗುತ್ತಿದ್ದಂತೆ ದೂರದ ಹಿಮಾಲಯದ ಮಾಲೆಯಿಂದ ಬೀಸಿ ಬರತೊಡಗಿದ ಚಳಿಗಾಳಿ ಮೈಮೂಳೆಯಲ್ಲಿ ನಡುಕವನ್ನು ಹುಟ್ಟುಹಾಕಲು ಆರಂಭಿಸಿತ್ತು. ಬಿಸಿಲ ನಾಡಿನಿಂದ ಬಂದ ಸೂರ್ಯನ್ ಆಗಲೇ ಮೈಮೇಲೆ ರಗ್ಗನ್ನು ಹೊತ್ತು ಕುಳಿತಿದ್ದ. ವಿನಯಚಂದ್ರ ಜರ್ಕಿನ್ನು ಹಾಕಿಕೊಂಡಿದ್ದರೂ ಹಲ್ಲು ಕಟಕಟನೆ ಕಡಿಯಲಾರಂಭಿಸಿದ್ದ. ಹಿಮಾಲಯದ ತಪ್ಪಲಿನ ನಾಡಿನಿಂದ ಬಂದ ಕೆಲ ಆಟಗಾರರಿಗೆ ಚಳಿಯ ಅನುಭವವಿದ್ದುದರಿಂದ ಅವರು ಸಾಮಾನ್ಯವಾಗಿ ಹೊಟೆಲಿನ ಎದುರು ಬಯಲಿನಲ್ಲಿ ಅಡ್ಡಾಡುತ್ತಿದ್ದರು. ಆದರೂ ಬಾಯಲ್ಲಿ ಬಿಸಿಯುಸಿರು ಸಾಮಾನ್ಯವಾಗಿತ್ತು.
                   ವಿನಯಚಂದ್ರನಿಗೆ ಉತ್ತರ ಕನ್ನಡದ ಚಳಿಯ ಪರಿಚಯವಿತ್ತು. ಕೆಲದಿನಗಳು ಮಾತ್ರ ಹಲ್ಲು ಕಟೆಯುವಂತಹ ಚಳಿಯದು. ಆದರೆ ಉತ್ತರ ಕನ್ನಡಕ್ಕಿಂತ ಹೆಚ್ಚಿನ ಚಳಿ ಇಲ್ಲಿತ್ತು. ಕೆಲವೇ ಕ್ಷಣಗಳಲ್ಲಿ ಇಬ್ಬನಿ ಮಾಲೆ ಮಾಲೆಯಾಗಿ ಇಳಿಯಲಾರಂಭಿಸಿತು. ಐದು ಮೀಟರ್ ದೂರದಲ್ಲಿ ಏನಿದೆ ಎನ್ನುವುದೂ ಕಾಣಿಸದಷ್ಟು ದಟ್ಟವಾಗಿ ಮಂಜು ಬೀಳಲು ಆರಂಭಗೊಂಡಿತು. ವಿನಯಚಂದ್ರ ಮಂಜು ಮುಸುಕುವುದನ್ನು ನೋಡಿದ್ದ. ಖುಷಿಯಿಂದ ಆಸ್ವಾದಿಸಿದ್ದ. ಮಂಜಿನ ಅಡಿಯಲ್ಲಿ ನಿಂತು ಶೀತ ಮಾಡಿಕೊಂಡಿದ್ದ. ತನ್ನ ಧ್ವನಿಯನ್ನೂ ಕೂರಿಸಿಕೊಂಡಿದ್ದ. ನಂತರ ಕಷ್ಟದಿಂದ ಮಾತನಾಡಿದ್ದ. ನಕ್ಕಿದ್ದ. ಬವಣೆಯನ್ನು ಅನುಭವಿಸಿದ್ದ. ಬೆಳಗು ಮುಂಜಾವಿನಲ್ಲಿ ಜೇಡ ಕಟ್ಟಿದ ಬಲೆಯ ಮೇಲೆ ಮಂಜು ಬಿದ್ದು ಬೆಳ್ಳಗೆ ಹೊಳೆಯುವ ಗೂಡನ್ನು ಕಾಲಿನಿಂದ ಒತ್ತಿ ಏನೋ ಖುಷಿಯನ್ನು ಅನುಭವಿಸಿದ್ದ. ಯಾಕೋ ಮತ್ತೆ ಮನಸ್ಸು ಪ್ರಫುಲ್ಲಗೊಂಡಂತಾಗಿತ್ತು.
                    ವಿನಯಚಂದ್ರ ಫೈರ್ ಕ್ಯಾಂಪಿನ ಸೌಲಭ್ಯ ಇದೆಯೇ ಎಂದು ಕೇಳುವುದನ್ನು ಇತರರೂ ಕಾಯುತ್ತಿದ್ದರೋ ಎಂಬಂತೆ ತವಕಿಸಿದರು. ಅದ್ಯಾರೋ ಫೈರ್ ಕ್ಯಾಂಪಿಗೆ ಬೇಕಾಗುವ ವಸ್ತುಗಳನ್ನು ತಂದರು. ಹೊಟೆಲಿನ ಬಯಲಿನ ಚಿಕ್ಕದೊಂದು ಮೂಲಕೆಯಲ್ಲಿ ಫೈರ್ ಕ್ಯಾಂಪ್ ಹೊತ್ತಿಸಿಯೇ ಬಿಟ್ಟರು. ಸಮಯ ಕಳೆಯಲು ಏನಾದರೂ ಮಾಡಬೇಕಲ್ಲ, ಆಟಗಾರರೆಲ್ಲ ಭಾರತದ ಹಲವಾರು ರಾಜ್ಯಗಳಿಂದ ಬಂದವರು. ತಮ್ಮ ತಮ್ಮ ರಾಜ್ಯದ ವಿಶೇಷತೆಗಳ ಬಗ್ಗೆ ಹೇಳಿ ಎಂದರು. ಪಂಜಾಬಿಗರು ತಮ್ಮೂರಿನ ಬಗ್ಗೆ, ವಿಶೇಷತೆ, ವಿಶಿಷ್ಟತೆಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರು. ತಮ್ಮೂರಿಗರು ಯಾವ ರೀತಿ ಖಡಕ್ ಎಂಬುದನ್ನೂ, ತಮ್ಮ ಆಹಾರ ಶೈಲಿ, ತಮ್ಮೂರ ಹುಡುಗಿಯರ ಬಗ್ಗೆಯೆಲ್ಲ ಹೇಳಿದರು. ತಮಿಳ್ನಾಡಿನ ಸೂರ್ಯನ್ ತಮ್ಮ ನಾಡಿನ ಬಗ್ಗೆ ಹೇಳಿದ. ಯಾವಾಗಲೂ ತಮಾಷೆಯಿಂದ ಕಾಲೆಳೆಯುತ್ತ ಮಾತಾಡುತ್ತಿದ್ದ ಸೂರ್ಯನ್ ತಮ್ಮೂರಿನ ಬಗ್ಗೆ ಹೇಳುವಾಗ ತುಸು ಗಂಭೀರನಾಗಿ ಹೇಳಿದ್ದು ವಿನಯಚಂದ್ರನಿಗೆ ಅಚ್ಚರಿಯಾಯಿತು. ತಮ್ಮೂರಿನ ಬಗ್ಗೆ ಆತನಿಗೆ ಇರುವ ಅಭಿಮಾನದ ಬಗ್ಗೆಯೂ ಹೆಮ್ಮೆ ಮೂಡಿತು. ಎಷ್ಟೇ ತಮಾಷೆ ಮಾಡಿದ್ದರೂ ತಮ್ಮೂರಿನ ಬಗ್ಗೆ ಮಾತ್ರ ಗಂಭೀರವಾಗಿ ಮಾತನಾಡಿದ್ದು ವಿಶೇಷವಾಗಿತ್ತು. ಮಹಾರಾಷ್ಟ್ರದವರು, ಉತ್ತರಪ್ರದೇಶದವರೆಲ್ಲ ತಮ್ಮ ತಮ್ಮ ನಾಡಿನ ಬಗ್ಗೆ ಹೇಳಿದರು.
                    ನಂತರ ಬಂದಿದ್ದು ವಿನಯಚಂದ್ರನ ಸರದಿ. ಮಾತಾಡಲು ಆರಂಭಿಸಿದವನಿಗೆ ಏನು ಹೇಳಬೇಕೆಂಬುದೇ ಗೊತ್ತಾಗಲಿಲ್ಲ. ಮಾತನಾಡುವ ಮುನ್ನ ಹಾಗೆ ಹೇಳಬೇಕು, ಹೀಗೆ ಹೇಳಬೇಕು ಎಂದುಕೊಂಡವನಿಗೆ ತನ್ನ ಸರದಿ ಬಂದಾಗ ಎದೆಯೊಳಗೆ ನಡುಕ ಶುರುವಾದಂತಾಯಿತು. ಅಳುಕಿನಿಂದಲೇ ತನ್ನೂರಿನ ಬಗ್ಗೆ ಶುರು ಮಾಡಿದ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ತನ್ನ ಮನೆ, ಅಪ್ಪನ ಹಳೆಯ ಮಹೀಂದ್ರಾ ಕಾರು, ಹವ್ಯಕ ಸಂಪ್ರದಾಯದ ಹಳ್ಳಿ ಹಾಡುಗಳು, ತೊಡದೇವು, ವಿಶೇಷವಾದ ಹವ್ಯಕ ನುಡಿ, ಅಡಿಕೆ, ಅಘನಾಶಿನಿ ನದಿಗಳ ಬಗ್ಗೆಯೆಲ್ಲ ಹೇಳಿದ. ಆರಂಭದಲ್ಲಿ ಅಳುಕಿದರೂ ನಂತರ ಆತನ ಮಾತು ಸ್ಫುಟವಾಗಿತ್ತು. ತಾಸುಗಳ ಕಾಲ ಮಾತನಾಡಿದ. ಕಬ್ಬಡ್ಡಿ ತಂಡದ ಪಾಲಿಗೆ ಹೊಸ ಆಟಗಾರನಾಗಿ ಸೇರಿದ್ದ ವಿನಯಚಂದ್ರ ತನ್ನ ಮಾತಿನಿಂದ ಹಲವು ಆಟಗಾರರನ್ನು ಸೆಳೆದುಕೊಳ್ಳುವಲ್ಲಿ ಸಫಲನಾಗಿದ್ದ. ತಂಡದಲ್ಲಾಗಲೇ ಇದ್ದ ಹಿರಿಯ ಆಟಗಾರರಿಗೆ ಈತನ ಮಾತು ಬಹಳ ಹಿಡಿಸಿತ್ತು. ಒಮ್ಮೆಯಾದರೂ ಕರ್ನಾಟಕದ ಕಾಶ್ಮೀರ ಉತ್ತರ ಕನ್ನಡವನ್ನು ನೋಡಬೇಕು. ಅದರಲ್ಲಿಯೂ ವಿನಯಚಂದ್ರನ ಊರನ್ನು ನೋಡಬೇಕು ಎಂಬಂತಹ ಇಂಗಿತವನ್ನು ವ್ಯಕ್ತಪಡಿಸಿದರು. ತನ್ನೂರಿಗೆ ಖಂಡಿತವಾಗಿಯೂ ಕರೆದೊಯ್ಯುತ್ತೇನೆ ಎಂಬ ಭರವಸೆಯನ್ನು ವಿನಯಚಂದ್ರ ನೀಡಿದ. ಹಲವರಿಗೆ ಉತ್ತರ ಕನ್ನಡದ ಪ್ರಸಿದ್ಧ ಯಾತ್ರಾ ಸ್ಥಳವಾದ ಯಾಣದ ಬಗ್ಗೆ ತಿಳಿದಿತ್ತು. ಒಂದಿಬ್ಬರು ಯಾಣದ ವಿಷಯದ ಬಗ್ಗೆ ಕೇಳಿದರು. ವಿನಯಚಂದ್ರ ಯಾಣಕ್ಕೆ ಎಲ್ಲರನ್ನೂ ಕರೆದೊಯ್ಯುವ ಭರವಸೆಯನ್ನು ನೀಡಿದ.
                     ಎಲ್ಲರ ಮಾತು ಮುಗಿಯುವ ವೇಳೆಗೆ ಸಮಯ ಹನ್ನೆರಡನ್ನೂ ಮೀರಿತ್ತು. ಉತ್ತರದಿಂದ ಬೀಸಿ ಬರುವ ಚಳಿಗಾಳಿ ಮತ್ತಷ್ಟು ಜೋರಾಗಿತ್ತು. ಕೊರೆಯುವ ಚಳಿಗೆ ಹಾಕಿದ್ದ ಫೈರ್ ಕ್ಯಾಂಪಿನಲ್ಲಿ ಬಿದ್ದು ಬಿಡಬೇಕು ಎನ್ನಿಸುತ್ತಿತ್ತು. ಚಳಿಯ ಭಯಕ್ಕೆ ಒಬ್ಬೊಬ್ಬರಾಗಿ ಫೈರ್ ಕ್ಯಾಂಪಿನಿಂದ ರೂಮಿಗೆ ಮರಳಿದರು. ಕೊನೆಯಲ್ಲಿ ಉಳಿದವರು ವಿನಯಚಂದ್ರ ಹಾಗೂ ಮಧುಮಿತಾ ಇಬ್ಬರೆ.
                  `ಮಾತು ತುಂಬ ಚನ್ನಾಗಿತ್ತು' ಎಂದಳು ಮಧುಮಿತಾ.
                  `ಹುಂ.'
                 `ನೀವು ಓದಿದ್ದು ಏನು..?'
                 `ಡಿಗ್ರಿ..'
                 `ಬಹಳ ಚನ್ನಾಗಿ ಮಾತನಾಡುತ್ತೀರಾ..'
                  `ಹೇ.. ಹಾಗೇನಿಲ್ಲ.. ಸುಮ್ಮನೆ ಮಾತನಾಡುತ್ತ ಹೋದೆ.. ಅಷ್ಟೇ..' ಎಂದ.
                  `ನಿಮ್ಮೂರಿನ ಬಗ್ಗೆ ನನಗೆ ಬಹಳ ಕುತೂಹಲ ಆಗ್ತಾ ಇದೆ. ನಿಮ್ಮೂರನ್ನು ನೋಡಬೇಕು ಎನ್ನಿಸುತ್ತಿದೆ.'
                  `ಪಾಸ್ ಪೋರ್ಟ್ ಆಗಿದ್ದರೆ ಹೇಳು. ಖಂಡಿತ ಕರೆದೊಯ್ಯುತ್ತೇನೆ. ನಮ್ಮೂರನ್ನು ನೋಡಲೇಬೇಕು ನೀನು.'
                   `ಹುಂ. ಭಾರತಕ್ಕೆ ಬರುವ ಆಸೆಯಿಂದ ಪಾಸ್ ಪೋರ್ಟ್ ಮಾಡಿಸಿದ್ದೆ. ಮುಂದೆಂದಾದರೂ ಬಾಂಗ್ಲಾದೇಶ ನಮ್ಮನ್ನು ಹೊರ ಹಾಕಿದರೆ ಭಾರತದಲ್ಲಿ ನಮಗೆ ಅವಕಾಶ ಸಿಗಬಹುದು ಎನ್ನುವ ಕಾರಣಕ್ಕೆ ನಮ್ಮ ಮನೆಯಲ್ಲಿ ಎಲ್ಲರೂ ಪಾಸ್ ಪೋರ್ಟ್ ಮಾಡಿಟ್ಟುಕೊಂಡಿದ್ದಾರೆ. ನನ್ನನ್ನು ನಿಮ್ಮೂರಿಗೆ ಕರೆದೊಯ್ಯುತ್ತೀಯಾ?' ಎಂದಳು ಮಧುಮಿತಾ. ವಿನಯಚಂದ್ರ ತಲೆ ಅಲ್ಲಾಡಿಸಿದ.
                   ವಿನಯಚಂದ್ರನಿಗೆ ಮತ್ತೆ ಬಾಂಗ್ಲಾದೇಶ ವಿಚಿತ್ರವೆನ್ನಿಸಿತು. ಬಾಯ್ಬಿಟ್ಟು ಕೇಳಲಿಲ್ಲ.
                   ಮಧುಮಿತಾಳೇ ಮುಂದುವರಿದಳು `ಅದೇನೋ ಹೇಳಿದ್ಯಲ್ಲ ಹವ್ಯಕ ಹಳ್ಳಿ ಹಾಡು ಅಂದ್ಯಲ್ಲ.. ಅದೇನು? ಏನದು? ಹವ್ಯಕರು ಎಂದರೆ ? ಅದೇನದು ತೊಡದೇವು?' ಪ್ರಶ್ನೆಗಳನ್ನು ಸುರಿಸಿದಳು.
                   `ಹವ್ಯಕರೆಂದರೆ ಬ್ರಾಹ್ಮಣರೇ. ಹವಿಸ್ಸನ್ನು ಅರ್ಪಿಸುವವರು ಎನ್ನುವ ಅರ್ಥವಿದೆಯಂತೆ. ನನಗೆ ಪೂರ್ತಿಯಾಗಿ ಗೊತ್ತಿಲ್ಲ. ಹವ್ಯಕರಲ್ಲಿ ಭಟ್ಟರು, ಹೆಗಡೆ, ಜೋಶಿ, ಗಾಂವ್ಕಾರ, ಶಾಸ್ತ್ರಿ, ದೀಕ್ಷಿತ ಹೀಗೆ ಹಲವು ಉಪನಾಮಗಳೂ ಇವೆ. ಉತ್ತರ ಭಾರತದಿಂದ ವಲಸೆ ಬಂದವರೆಂದು ಹೇಳಲಾಗುತ್ತದೆ. ಇತಿಹಾಸ ನನಗೆ ಗೊತ್ತಿಲ್ಲ. ಬಹಳ ಬುದ್ಧಿವಂತರು ಹೌದು.. ಎಲ್ಲರೂ ಸಿಕ್ಕಾಪಟ್ಟೆ ಓದಿಕೊಂಡವರು. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಓದಿಕೊಂಡು ಸಮುದಾಯದವರು ಎನ್ನುವ ಖ್ಯಾತಿ ಹವ್ಯಕರದ್ದು..' ಎಂದ ವಿನಯಚಂದ್ರ.
                 ಮುಂದುವರೆದು `ಮದುವೆ, ಮುಂಜಿ ಸೇರಿದಂತೆ ಹಲವಾರು ಮಂಗಲ ಕಾರ್ಯಗಳಲ್ಲಿ ಹವ್ಯಕರದ್ದೇ ಆದ ವಿಶಿಷ್ಟ ಶೈಲಿಯಲ್ಲಿ ಹಾಡನ್ನು ಹಾಡುತ್ತಾರೆ. ಅದನ್ನು ಹವ್ಯಕರ ಹಳ್ಳಿ ಹಾಡು ಎನ್ನಬಹುದು..' ಎಂದ ವಿನಯಚಂದ್ರ.
                 `ಚಂದ್ರಗೆ ಮುನಿದು ನಿಂದು ಶಾಪವನಿತ್ತು
                 ತಂದು ಸುತ್ತಿದ ಕಿರು ಡೊಳ್ಳಿಗೆ ಉರುಗನ
                  ಸುಂಡಿಲ ಗಣಪತಿಗೆ ಶರಣೆಂದು...'
ಆಕೆಗೆ ಅರ್ಥವಾಗಲಿ ಎಂಬಂತೆ ಒಂದು ಹಾಡನ್ನೂ ಹಾಡಿ ತೋರಿಸಿದ. ಆಕೆಗೆಷ್ಟು ಅರ್ಥವಾಯಿತೋ ಗೊತ್ತಾಗಲಿಲ್ಲ. ಆದರೆ ಮುಖವರಳಿಸಿ ಚಪ್ಪಾಳೆ ತಡ್ಡಿ ವಾವ್ ಸೂಪರ್ ಎಂದು ಹೇಳಿದ್ದು ವಿನಯಚಂದ್ರನಿಗೆ ಖುಷಿಯನ್ನು ತಂದಿತು. ಕೊನೆಗೆ ತೊಡದೇವು ಮಾಡುವ ಬಗೆಯನ್ನೂ ಹೇಳಿದ. ಮಧುಮಿತಾಳಿಗೆ ವಿನಯಚಂದ್ರ ವಿವರಿಸಿ ಹೇಳುತ್ತಿದ್ದ ಬಗೆ ವಿಶೇಷ ಅನುಭವವನ್ನು ನೀಡಿತು. ಈತನಿಗೆ ಏನೆಲ್ಲ ಗೊತ್ತಿದೆಯಲ್ಲ ಎಂದೂ ಅನ್ನಿಸಿತು. ರಾತ್ರಿ ಮತ್ತಷ್ಟು ಆಗುವ ವೇಳೆಗೆ ಇಬ್ಬರೂ ತಮ್ಮ ತಮ್ಮ ರೂಮನ್ನು ಸೇರಿದ್ದರು.

**

ಮಂಜಿನ ಪಂಜರದೊಳಗೆ ಏಕಾದಶಿ ಗುಡ್ಡ ಹಾಗೂ ಅಘನಾಶಿನಿ ಕಣಿವೆ
                           ಕಣ್ಮುಚ್ಚಿ ಅರೆಗಳಿಗೆಯಾದಂತೆನ್ನಿಸಿದೆ ಎನ್ನುವಾಗಲೇ ಯಾರೋ ವಿನಯಚಂದ್ರನ ರೂಮಿನ ಬಾಗಿಲನ್ನು ಬಡಿಯುತ್ತಿದ್ದಾರೆ ಎನ್ನುವ ಅನುಭವ. ಈಗಷ್ಟೇ ಬಂದು ಮಲಗಿದ್ದೇನೆ. ಚಳಿ ಬೇರೆ ಕೊರೆಯುತ್ತಿದೆ. ಮೂಳೆ ಮೂಳೆಗಳನ್ನು ತೂತು ಮಾಡುತ್ತಿದೆಯೇನೋ ಎನ್ನುವ ಅನುಭವ. ಇದ್ಯಾರಪ್ಪಾ ನಿದ್ದೆ ಹಾಳುಮಾಡಿದೋರು ಎಂದುಕೊಳ್ಳುತ್ತಿರುವಾಗ ಮಧುಮಿತಾಳ ಧ್ವನಿ ಕೇಳಿಸಿ ದಿಗ್ಗನೆ ಎದ್ದು ಕುಳಿತ. ನಿದ್ದೆ ಕಡಿಮೆಯಾಗಿದ್ದರಿಂದ ಕಣ್ಣು ಕೆಂಪಾಗಿತ್ತು. ಹೊರ ಬಂದವನನ್ನು ಮಧುಮಿತಾ ಕಾಂತಾನಗರವನ್ನು ಬೆಳಗಿನ ಸೌಂದರ್ಯ ವೀಕ್ಷಣೆಗೆ ಹೇಳಿದಾಗಲೇ ಬೆಳಗಾಗುತ್ತಿರುವ ಅರಿವು ಆತನಿಗಾದದ್ದು. ಎರಡು ಅಚ್ಚರಿ ಆತನನ್ನು ಆ ಸಂದರ್ಭದಲ್ಲಿ ಕಾಡಿದ್ದು ಸುಳ್ಳಲ್ಲ. ಇಷ್ಟು ಬೇಗ ಬೆಳಗಾಯಿತಾ ಎನ್ನುವುದು ಮೊದಲ ಅಚ್ಚರಿಯಾದರೆ ಈಕೆ ತನಗಿಂತ ಲೇಟಾಗಿ ನಿದ್ದೆ ಮಾಡಿದ್ದಾಳೆ. ಇಷ್ಟು ಬೇಗ ಎದ್ದಿದ್ದಾಳಲ್ಲ ಎನ್ನುವುದು ಇನ್ನೊಂದು ಅಚ್ಚರಿ. ತಯಾರಾಗಿ ಬಂದವನನ್ನು ಮಧುಮಿತಾ ಅಲ್ಲೇ ಸನಿಹದ ಚಿಕ್ಕ ಗುಡ್ಡವೊಂದಕ್ಕೆ ಕರೆದೊಯ್ದಳು. ಯಾಕೋ ವಾಚು ನೋಡಿದ ವಿನಯಚಂದ್ರನಿಗೆ ಬೆಳಗಿನ 5.30 ಕಾಣಿಸಿತು. ರಾತ್ರಿಯಂತೆ ಮಾಲೆ ಮಾಲೆಯಾಗಿ ಮಂಜು ಬೀಳುತ್ತಿತ್ತು. ದೂರದಿಗಂತದಲ್ಲೆಲ್ಲೋ ಬಾನಿಗೆ ಕಿತ್ತಳೆ ಬಣ್ಣವನ್ನು ಹಚ್ಚಿದ್ದಾರೋ ಎಂಬಂತಾಗಿತ್ತು.
ಯಾಕೋ ಈ ಊರು ನಮ್ಮ ಮಲೆನಾಡಿನಂತಿದೆಯಲ್ಲ ಎಂದುಕೊಂಡ ವಿನಯಚಂದ್ರನಿಗೆ ಕಂಡಿದ್ದು ಗುಡ್ಡ ಬೆಟ್ಟಗಳ ಸಾಲು.
                      ಅಲ್ಲೆಲ್ಲೋ ದೂರದಲ್ಲಿ ಗಂಗೆಯ ಹಾಗೂ ಬ್ರಹ್ಮಪುತ್ರಾ ನದಿಗಳ ಬಯಲು ಅಸ್ಪಷ್ಟವಾಗಿ ಕಾಣಿಸಿದಂತಾಯಿತು. ಸೂರ್ಯ ಮೂಡಲು ತವಕಿಸುತ್ತಿದ್ದ. ಭಾರತದಲ್ಲಿ ಹುಟ್ಟುವ ಸೂರ್ಯ ನಮ್ಮದೇ ಅರುಣಾಚಲ, ತ್ರಿಪುರಾ, ಮಣಿಪುರಗಳನ್ನು ಮೀಜೋರಾಮ್ ಗಳನ್ನು ಹಾದು ಬಂದು ಬಾಂಗ್ಲಾದೊಳಕ್ಕೆ ತೂರುತ್ತದೆ. ಮತ್ತೆ ಭಾರತಕ್ಕೆ ಕಾಲಿಡುತ್ತದೆಯಲ್ಲ ಎಂತ ಮಜವಾಗಿದೆಯಲ್ಲ ಎಂದುಕೊಂಡ. ತಮ್ಮೂರ ಫಾಸಲೆಯಲ್ಲಿದ್ದ ಏಕಾದಶಿ ಗುಡ್ಡ ವಿನಯಚಂದ್ರನಿಗೆ ನೆನಪಾಯಿತು. ಚಿಕ್ಕಂದಿನಲ್ಲಿ ಸೂರ್ಯೋದಯವನ್ನು ನೋಡಬೇಕೆಂಬ ಕಾರಣಕ್ಕೆ ಒಂದೇ ಗುಕ್ಕಿಗೆ ಏಕಾದಶಿ ಗುಡ್ಡವನ್ನು ಓಡಿ ಹತ್ತುತ್ತಿದ್ದ ವಿನಯಚಂದ್ರ ತನ್ನೂರನ್ನು ಇಬ್ಬನಿ ತಬ್ಬಿ ನಿಂತಿದ್ದ ಬಗೆಯನ್ನೆಲ್ಲ ನೋಡಿ ಆಸ್ವಾದಿಸುತ್ತಿದ್ದ. ದೂರದಲ್ಲೆಲ್ಲೋ ಹುಟ್ಟುವ ಸೂರ್ಯ ಮಂಜಿನ ಮುಸುಕನ್ನು ಸೀಳಿ ತನ್ನತ್ತ ನೋಡಿದಾಗಲೆಲ್ಲ ಅನಿರ್ವಚನೀಯ ಆನಂದವನ್ನು ಆತ ಅನುಭವಿಸುತ್ತಿದ್ದ. ಅಂತಹದೇ ಅನುಭವ ಮತ್ತೊಮ್ಮೆ ಆತನಿಗಾಯಿತು. ಪಕ್ಕದಲ್ಲಿಯೇ ಮಧುಮಿತಾ ನಿಂತಿದ್ದಳು. ಇಂತಹ ಸಡಗರದಲ್ಲಿ ಇಂತಹ ಒಳ್ಳೆಯ ದೃಶ್ಯವನ್ನು ಎಷ್ಟೋ ವರ್ಷಗಳ ನಂತರ ಮತ್ತೆ ತನಗೆ ನೀಡಿದಳಲ್ಲ ಈಕೆ.. ಒಮ್ಮೆ ಹೋಗಿ ತಬ್ಬಿಕೊಳ್ಳಲಾ ಎನ್ನಿಸಿತು. ಮನಸ್ಸನ್ನು ಕಷ್ಟಪಟ್ಟು ನಿಯಂತ್ರಿಸಿಕೊಂಡ.
                     `ನಾನು ಅದೆಷ್ಟೋ ಸಾರಿ ಈ ಊರಿಗೆ ಬಂದಿದ್ದೇನೆ. ಬಾಂಗ್ಲಾ ಸರ್ಕಾರ ನೀಡಿದ ಕೆಲಸ ವರ್ಷಕ್ಕೆ ಕನಿಷ್ಟ 25ಕ್ಕೂ ಅಧಿಕ ಸಾರಿ ನಾನು ಇಲ್ಲಿಗೆ ಬರಬೇಕಾಗುತ್ತದೆ. ಬಂದಾಗಲೆಲ್ಲ ಬೆಳಿಗ್ಗೆ ಮುಂಚೆ ಇಲ್ಲಿಗೆ ಬಂದುಬಿಡುತ್ತೇನೆ. ಎಷ್ಟೇ ಒತ್ತಡವಿರಲಿ, ಬೇಜಾರು, ಸುಸ್ತಾಗಿರಲಿ ಇಲ್ಲಿ ಬಂದಾಗ ಮನಸ್ಸು ಪ್ರಫುಲ್ಲ. ಹಾಯಾಗುತ್ತದೆ. ಕಳೆದುಕೊಂಡ ಚೈತನ್ಯವನ್ನು ಮರಳಿ ಪಡೆದುಕೊಂಡಂತಾಗುತ್ತದೆ. ಏನೋ ಒಂದು ಸೆಳೆತವಿದೆ ಇಲ್ಲಿ..' ಎಂದಳು ಮಧುಮಿತಾ.
                    `ನನಗೆ ನಮ್ಮೂರು ನೆನಪಾಯಿತು.. ನಮ್ಮೂರ ಏಕಾದಶಿ ಗುಡ್ಡ ನೆನಪಾಯಿತು..' ಎಂದ ವಿನಯಚಂದ್ರ ಅದರ ಬಗ್ಗೆ ಹೇಳಿದ.
                      `ನಿಮ್ಮೂರಲ್ಲಿ ಏನಿಲ್ಲ ಹೇಳು ಮಾರಾಯಾ.. ಎಲ್ಲಾ ಇದೆಯಲ್ಲೋ..' ಎಂದಳು ಮಧುಮಿತಾ.
                      `ಹೂಂ..' ಅಂದ ವಿನಯಚಂದ್ರ.
                       ಮತ್ತೊಂದು ಅರ್ಧಗಂಟೆಯಲ್ಲಿ ಸೂರ್ಯನ ಕಿರಣಗಳು ಆ ಗುಡ್ಡವನ್ನು ಸ್ಪರ್ಷಿಸಿದ್ದವು. ಮಂಜಿನ ಹನಿಗಳ ಮೇಲೆ ಬಿದ್ದ ಸೂರ್ಯರಶ್ಮಿ ಫಳ್ಳನೆ ಹೊಳೆಯುತ್ತಿತ್ತು. ಎಷ್ಟು ನೋಡಿದರೂ ಮನಸ್ಸು ತಣಿಯುವುದಿಲ್ಲ. ನೋಡಿದಷ್ಟೂ ನೋಡಬೇಕೆನ್ನಿಸಿತು.  ಮತ್ತೊಂದು ಸ್ವಲ್ಪ ಹೊತ್ತು ಅಲ್ಲಿದ್ದು ಇಬ್ಬರೂ ವಾಪಸಾದರು.
                       ವಾಪಾಸು ತಾವುಳಿದಿದ್ದ ರೂಮಿನ ಬಳಿಗೆ ಬರುವ ವೇಳೆಗೆ ಕೆಲವರು ಎದ್ದಿದ್ದರು. ಇನ್ನೂ ಹಲವರು ಹಾಸಿಗೆಯಲ್ಲಿಯೇ ಇದ್ದರು. ಅವರ್ಯಾರಿಗೂ ಇವರು ಮಲಗಿದ್ದು, ಮುಂಜಾನೆದ್ದು ಗುಡ್ಡವನ್ನು ಹತ್ತಿದ್ದು ಗೊತ್ತೇ ಇರಲಿಲ್ಲ. ಎತ್ಲಾಗೆ ಹೋಗಿದ್ದಿರಿ? ರಾತ್ರಿಯಿಡಿ ನಿದ್ದೆಯನ್ನೇ ಮಾಡಿಲ್ಲವಾ..? ಎಂಬಂತೆ ನೋಡಿದರು. ಹಾಗೆಯೇ ಕೇಳಿದರೂ ಕೂಡ. ಅವರಿಗೆಲ್ಲ ಮುಗುಳ್ನಗುವಿನ ಉತ್ತರವನಿತ್ತು, ತಿಂಡಿ ತಿಂದು ಮತ್ತೊಮ್ಮೆ ಕಾಂತಾಜಿ ದೇವಾಲಯಕ್ಕೆ ತೆರಳಿದರು.
                       ದೇಗುಲದಲ್ಲಿ ಬೆಳಗಿನ ಪೂಜೆ ನಡೆಯುತ್ತಿತ್ತು. ದೇವರಿಗೆ ನಮಿಸಿ, ವಿಶ್ವಕಪ್ ತಮಗೆ ಸಿಗಲಿ ಎಂಬ ಬೇಡಿಕೆಯನ್ನು ದೇವರ ಬಳಿಯಿತ್ತು, ಆಶೀರ್ವಾದ ಪಡೆಯುವ ವೇಳೆಗೆ ಸೂರ್ಯ ಬಾನಿನಲ್ಲಿ ಆಗಲೆ ಸೈಕಲ್ ಹೊಡೆಯಲಾರಂಭಿಸಿದ್ದ.
                       ಮತ್ತೆ ಬಸ್ಸನ್ನು ಹತ್ತಿ ಢಾಕಾದ ಕಡೆಗೆ ಹೊರಳುವ ವೇಳೆಗೆ ಮಧುಮಿತಾ ಹಾಗೂ ವಿನಯಚಂದ್ರ ಇಬ್ಬರಲ್ಲೂ ಸ್ನೇಹಕ್ಕಿಂತ ಮಿಗಿಲಾದ ಭಾವ ಬೆಳೆದಿತ್ತು. ಅದು ಪ್ರೀತಿಯ ಕಡೆಗೆ ಹೊರಳುತ್ತಿತ್ತು. ವಿಷಯ ಅರಿತಿದ್ದ ಸೂರ್ಯನ್ ನಗುತ್ತಿದ್ದ. ಬಸ್ಸಿನಲ್ಲಿ ಒಂದೆರಡು ಸಾರಿ ಕೀಟಲೆಯನ್ನೂ ಮಾಡಿದ್ದ. ಆಗ ಇಬ್ಬರೂ ನಾಚಿದ್ದರು.

(ಮುಂದುವರಿಯುತ್ತದೆ..)

Wednesday, March 19, 2014

ಏನ ಮಾಡಲೆ ಗೆಳತಿ

ಏನು ಮಾಡಲೆ ಗೆಳತಿ
ನೆನಹುಗಳು ನಲಿಯುತಿವೆ
ಬದುಕ ಬೀದಿಯ ಹಲವು
ಕವನಗಳು ಜೊತೆಯಲಿವೆ |

ಹೊಸ ನೀರು ಹರಿಯುತಿದೆ
ಹಳೆ ನೀರ ಮರೆಸುತಿದೆ
ಹಳೆ ಕುರುಹ ನಡುವಿನಲಿ
ಹೊಸ ಚಿಗುರು ಉದಿಸುತಿದೆ |

ಏನ ಮಾಡಲೆ ಗೆಳತಿ
ನೆನಹುಗಳು ಸವೆಯುತಿದೆ
ಹಳೆ ಬಾಲ್ಯ ಹಸಿ ಹರೆಯ
ಕಾಣದಲೆ ಮರೆಯುತಿದೆ |

ಹೊಸತನವು ಉದಿಸುತಿದೆ
ಹಳೆಕಾಲ ಕಮರುತಿದೆ
ಹಳೆ ನೆನಪ ಸಖ್ಯದೊಳು
ಜಗ ಜೀವ ಓಡುತಿದೆ |

ಏನ ಮಾಡಲೆ ಗೆಳತಿ
ನೆನಹುಗಳು ಮರಳುತಿದೆ
ಕಳೆದ ಕ್ಷಣಗಳ ನೂರು
ಘಟನೆಗಳು ಹೊರಳುತಿದೆ |

***
(ಈ ಕವಿತೆಯನ್ನು ಬರೆದಿದ್ದು 24.03.2007ರಂದು ದಂಟಕಲ್ಲಿನಲ್ಲಿ)