Saturday, March 22, 2014

ನಿರಾಸೆಯ ಕವನ

ನಿರಾಸೆಯಲ್ಲಿ ಸೈನಾ?
ನಾ ಉಸಿರು ಕಟ್ಟಿ ಓಡಿ ಮುಟ್ಟಿದ
ಬೆಟ್ಟದ ತುದಿಯಲ್ಲಿ ಏನಿದೆ?
ಬಟ್ಟ ಬಯಲು !
ಓಡಿ ತಲುಪಿದ್ದಷ್ಟೇ ಬಂತು |

ನಾಗರೀಕತೆಯ ಮೆಟ್ಟಿಲೇರಿ
ಪುಟ್ಟ ನಗು ಕಟ್ಟಿ, ನೆಟ್ಟ
ನರನಾದರೇನು ಬಂತು?
ಬಿಡಲೊಲ್ಲ ವಾನರ
ಬದಲಾಗಲು ಪ್ರಯತ್ನಿಸಿದ್ದಷ್ಠ ಬಂತು |

ಮರೀಚಿಕೆ ಮೆರೆಯುವ ಮರಳು
ಗಾಡಿನ ಬಯಲು ನಾಡಿನಲ್ಲಿ
ನಡೆದಿದ್ದಷ್ಟೇ ಬಂತು |
ಕೊನೆಯಾಗದ ಉಸುಕು.
ಸುಮ್ಮನೆ ಹಾದಿ ಸಾಗಿದ್ದಷ್ಟೇ ಬಂತು |

ಉಕ್ಕಿ ಹರಿಯುವ ನದಿ ನೀರೊಳು
ಮಂತ್ರಘೋಷದೊಳು ಹವನ-
ಹೋಮವ ಮಾಡಿದರೇನು ಬಂತು ?
ಉರಿಯಲೊಲ್ಲ ಸಮಿಧ |
ಕಿಚ್ಚಿಗೆ ಪ್ರಯತ್ನಿಸಿದ್ದಷ್ಟೇ ಬಂತು |

ಕರಿ ಕಲ್ಲು ಬಂಡೆಯ ನೆತ್ತಿಯಲಿ
ನೀರ ಧುಮ್ಮೆಂದು ಸುರಿದರೆ
ಏನು ಬಂತು ?
ಕುಡಿಯದು ನೀರ ಕಲ್ಲು |
ನೆತ್ತಿಯಲಿ ಸುರಿದಿದ್ದಷ್ಟೇ ಬಂತು |

ನಿರಾಸೆಯೇ ಮೆರೆದ ಬದುಕಿನೊಳು
ಆಸೆಯ ಬಿಸಿಲ್ಗುದುರೆ ಏರಿ ಸಾಧನೆಯ
ಜೊತೆ ಓಡಿದ್ದಷ್ಟೇ ಬಂತು |
ಸಿಗಲೊಲ್ಲದು ಗುರಿ-ಗೆಲುವು |
ಓಡಿ ಸುಸ್ತಾಗಿದ್ದೇ ಬಂತು |

ಎಲ್ಲ ಅರಿತಾಗ ಮೆರೆದು ನಿಂತಿದ್ದು
ಅನುಭವವೆಂಬ ನಿಘಂಟು|
ಸಾಧಿಸುವ ಛಲದ ಗಂಟು |
ಗಂಟಿದ್ದರೆ ಕುಂಟನ್ನೂ ಗೆದ್ದು
ಮುದ್ದು ಗೆಲುವನ್ನು ಪಡೆಯಬಹುದು ||

**
(ಈ ಕವಿತೆಯನ್ನು ಬರೆದಿದ್ದು 5-01-2007ರಂದು ದಂಟಕಲ್ಲಿನಲ್ಲಿ)
(ಈ ಕವಿತೆಯ ಮೊದಲಿನ ಪ್ಯಾರಾ ನೇಮಿಚಂದ್ರರದ್ದು. ಅವರ ಬರಹದಿಂದ ಸ್ಪೂರ್ತಿಯಾಗಿ ಬರೆದದ್ದು. ನಿರಾಸೆಯ ಕೋಡಿಯಲ್ಲಿ ಸಿಲುಕಿದ್ದಾಗ ಬರೆದ ನಿರಾಸೆಯ ಕವಿತೆ )

Thursday, March 20, 2014

ಬೆಂಗಾಲಿ ಸುಂದರಿ-10

ಏಕಾದಶೀ ಗುಡ್ಡದ ಮೇಲಿನ ಸೂರ್ಯೋದಯ
                  ಕಾಂತಾಜಿ ದೇವಾಲಯದಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಸಾಮಾನ್ಯ ಹೊಟೆಲಿನಲ್ಲಿ ಉಳಿದಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಸಂಜೆಯಾಗುತ್ತಿದ್ದಂತೆ ದೂರದ ಹಿಮಾಲಯದ ಮಾಲೆಯಿಂದ ಬೀಸಿ ಬರತೊಡಗಿದ ಚಳಿಗಾಳಿ ಮೈಮೂಳೆಯಲ್ಲಿ ನಡುಕವನ್ನು ಹುಟ್ಟುಹಾಕಲು ಆರಂಭಿಸಿತ್ತು. ಬಿಸಿಲ ನಾಡಿನಿಂದ ಬಂದ ಸೂರ್ಯನ್ ಆಗಲೇ ಮೈಮೇಲೆ ರಗ್ಗನ್ನು ಹೊತ್ತು ಕುಳಿತಿದ್ದ. ವಿನಯಚಂದ್ರ ಜರ್ಕಿನ್ನು ಹಾಕಿಕೊಂಡಿದ್ದರೂ ಹಲ್ಲು ಕಟಕಟನೆ ಕಡಿಯಲಾರಂಭಿಸಿದ್ದ. ಹಿಮಾಲಯದ ತಪ್ಪಲಿನ ನಾಡಿನಿಂದ ಬಂದ ಕೆಲ ಆಟಗಾರರಿಗೆ ಚಳಿಯ ಅನುಭವವಿದ್ದುದರಿಂದ ಅವರು ಸಾಮಾನ್ಯವಾಗಿ ಹೊಟೆಲಿನ ಎದುರು ಬಯಲಿನಲ್ಲಿ ಅಡ್ಡಾಡುತ್ತಿದ್ದರು. ಆದರೂ ಬಾಯಲ್ಲಿ ಬಿಸಿಯುಸಿರು ಸಾಮಾನ್ಯವಾಗಿತ್ತು.
                   ವಿನಯಚಂದ್ರನಿಗೆ ಉತ್ತರ ಕನ್ನಡದ ಚಳಿಯ ಪರಿಚಯವಿತ್ತು. ಕೆಲದಿನಗಳು ಮಾತ್ರ ಹಲ್ಲು ಕಟೆಯುವಂತಹ ಚಳಿಯದು. ಆದರೆ ಉತ್ತರ ಕನ್ನಡಕ್ಕಿಂತ ಹೆಚ್ಚಿನ ಚಳಿ ಇಲ್ಲಿತ್ತು. ಕೆಲವೇ ಕ್ಷಣಗಳಲ್ಲಿ ಇಬ್ಬನಿ ಮಾಲೆ ಮಾಲೆಯಾಗಿ ಇಳಿಯಲಾರಂಭಿಸಿತು. ಐದು ಮೀಟರ್ ದೂರದಲ್ಲಿ ಏನಿದೆ ಎನ್ನುವುದೂ ಕಾಣಿಸದಷ್ಟು ದಟ್ಟವಾಗಿ ಮಂಜು ಬೀಳಲು ಆರಂಭಗೊಂಡಿತು. ವಿನಯಚಂದ್ರ ಮಂಜು ಮುಸುಕುವುದನ್ನು ನೋಡಿದ್ದ. ಖುಷಿಯಿಂದ ಆಸ್ವಾದಿಸಿದ್ದ. ಮಂಜಿನ ಅಡಿಯಲ್ಲಿ ನಿಂತು ಶೀತ ಮಾಡಿಕೊಂಡಿದ್ದ. ತನ್ನ ಧ್ವನಿಯನ್ನೂ ಕೂರಿಸಿಕೊಂಡಿದ್ದ. ನಂತರ ಕಷ್ಟದಿಂದ ಮಾತನಾಡಿದ್ದ. ನಕ್ಕಿದ್ದ. ಬವಣೆಯನ್ನು ಅನುಭವಿಸಿದ್ದ. ಬೆಳಗು ಮುಂಜಾವಿನಲ್ಲಿ ಜೇಡ ಕಟ್ಟಿದ ಬಲೆಯ ಮೇಲೆ ಮಂಜು ಬಿದ್ದು ಬೆಳ್ಳಗೆ ಹೊಳೆಯುವ ಗೂಡನ್ನು ಕಾಲಿನಿಂದ ಒತ್ತಿ ಏನೋ ಖುಷಿಯನ್ನು ಅನುಭವಿಸಿದ್ದ. ಯಾಕೋ ಮತ್ತೆ ಮನಸ್ಸು ಪ್ರಫುಲ್ಲಗೊಂಡಂತಾಗಿತ್ತು.
                    ವಿನಯಚಂದ್ರ ಫೈರ್ ಕ್ಯಾಂಪಿನ ಸೌಲಭ್ಯ ಇದೆಯೇ ಎಂದು ಕೇಳುವುದನ್ನು ಇತರರೂ ಕಾಯುತ್ತಿದ್ದರೋ ಎಂಬಂತೆ ತವಕಿಸಿದರು. ಅದ್ಯಾರೋ ಫೈರ್ ಕ್ಯಾಂಪಿಗೆ ಬೇಕಾಗುವ ವಸ್ತುಗಳನ್ನು ತಂದರು. ಹೊಟೆಲಿನ ಬಯಲಿನ ಚಿಕ್ಕದೊಂದು ಮೂಲಕೆಯಲ್ಲಿ ಫೈರ್ ಕ್ಯಾಂಪ್ ಹೊತ್ತಿಸಿಯೇ ಬಿಟ್ಟರು. ಸಮಯ ಕಳೆಯಲು ಏನಾದರೂ ಮಾಡಬೇಕಲ್ಲ, ಆಟಗಾರರೆಲ್ಲ ಭಾರತದ ಹಲವಾರು ರಾಜ್ಯಗಳಿಂದ ಬಂದವರು. ತಮ್ಮ ತಮ್ಮ ರಾಜ್ಯದ ವಿಶೇಷತೆಗಳ ಬಗ್ಗೆ ಹೇಳಿ ಎಂದರು. ಪಂಜಾಬಿಗರು ತಮ್ಮೂರಿನ ಬಗ್ಗೆ, ವಿಶೇಷತೆ, ವಿಶಿಷ್ಟತೆಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರು. ತಮ್ಮೂರಿಗರು ಯಾವ ರೀತಿ ಖಡಕ್ ಎಂಬುದನ್ನೂ, ತಮ್ಮ ಆಹಾರ ಶೈಲಿ, ತಮ್ಮೂರ ಹುಡುಗಿಯರ ಬಗ್ಗೆಯೆಲ್ಲ ಹೇಳಿದರು. ತಮಿಳ್ನಾಡಿನ ಸೂರ್ಯನ್ ತಮ್ಮ ನಾಡಿನ ಬಗ್ಗೆ ಹೇಳಿದ. ಯಾವಾಗಲೂ ತಮಾಷೆಯಿಂದ ಕಾಲೆಳೆಯುತ್ತ ಮಾತಾಡುತ್ತಿದ್ದ ಸೂರ್ಯನ್ ತಮ್ಮೂರಿನ ಬಗ್ಗೆ ಹೇಳುವಾಗ ತುಸು ಗಂಭೀರನಾಗಿ ಹೇಳಿದ್ದು ವಿನಯಚಂದ್ರನಿಗೆ ಅಚ್ಚರಿಯಾಯಿತು. ತಮ್ಮೂರಿನ ಬಗ್ಗೆ ಆತನಿಗೆ ಇರುವ ಅಭಿಮಾನದ ಬಗ್ಗೆಯೂ ಹೆಮ್ಮೆ ಮೂಡಿತು. ಎಷ್ಟೇ ತಮಾಷೆ ಮಾಡಿದ್ದರೂ ತಮ್ಮೂರಿನ ಬಗ್ಗೆ ಮಾತ್ರ ಗಂಭೀರವಾಗಿ ಮಾತನಾಡಿದ್ದು ವಿಶೇಷವಾಗಿತ್ತು. ಮಹಾರಾಷ್ಟ್ರದವರು, ಉತ್ತರಪ್ರದೇಶದವರೆಲ್ಲ ತಮ್ಮ ತಮ್ಮ ನಾಡಿನ ಬಗ್ಗೆ ಹೇಳಿದರು.
                    ನಂತರ ಬಂದಿದ್ದು ವಿನಯಚಂದ್ರನ ಸರದಿ. ಮಾತಾಡಲು ಆರಂಭಿಸಿದವನಿಗೆ ಏನು ಹೇಳಬೇಕೆಂಬುದೇ ಗೊತ್ತಾಗಲಿಲ್ಲ. ಮಾತನಾಡುವ ಮುನ್ನ ಹಾಗೆ ಹೇಳಬೇಕು, ಹೀಗೆ ಹೇಳಬೇಕು ಎಂದುಕೊಂಡವನಿಗೆ ತನ್ನ ಸರದಿ ಬಂದಾಗ ಎದೆಯೊಳಗೆ ನಡುಕ ಶುರುವಾದಂತಾಯಿತು. ಅಳುಕಿನಿಂದಲೇ ತನ್ನೂರಿನ ಬಗ್ಗೆ ಶುರು ಮಾಡಿದ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ತನ್ನ ಮನೆ, ಅಪ್ಪನ ಹಳೆಯ ಮಹೀಂದ್ರಾ ಕಾರು, ಹವ್ಯಕ ಸಂಪ್ರದಾಯದ ಹಳ್ಳಿ ಹಾಡುಗಳು, ತೊಡದೇವು, ವಿಶೇಷವಾದ ಹವ್ಯಕ ನುಡಿ, ಅಡಿಕೆ, ಅಘನಾಶಿನಿ ನದಿಗಳ ಬಗ್ಗೆಯೆಲ್ಲ ಹೇಳಿದ. ಆರಂಭದಲ್ಲಿ ಅಳುಕಿದರೂ ನಂತರ ಆತನ ಮಾತು ಸ್ಫುಟವಾಗಿತ್ತು. ತಾಸುಗಳ ಕಾಲ ಮಾತನಾಡಿದ. ಕಬ್ಬಡ್ಡಿ ತಂಡದ ಪಾಲಿಗೆ ಹೊಸ ಆಟಗಾರನಾಗಿ ಸೇರಿದ್ದ ವಿನಯಚಂದ್ರ ತನ್ನ ಮಾತಿನಿಂದ ಹಲವು ಆಟಗಾರರನ್ನು ಸೆಳೆದುಕೊಳ್ಳುವಲ್ಲಿ ಸಫಲನಾಗಿದ್ದ. ತಂಡದಲ್ಲಾಗಲೇ ಇದ್ದ ಹಿರಿಯ ಆಟಗಾರರಿಗೆ ಈತನ ಮಾತು ಬಹಳ ಹಿಡಿಸಿತ್ತು. ಒಮ್ಮೆಯಾದರೂ ಕರ್ನಾಟಕದ ಕಾಶ್ಮೀರ ಉತ್ತರ ಕನ್ನಡವನ್ನು ನೋಡಬೇಕು. ಅದರಲ್ಲಿಯೂ ವಿನಯಚಂದ್ರನ ಊರನ್ನು ನೋಡಬೇಕು ಎಂಬಂತಹ ಇಂಗಿತವನ್ನು ವ್ಯಕ್ತಪಡಿಸಿದರು. ತನ್ನೂರಿಗೆ ಖಂಡಿತವಾಗಿಯೂ ಕರೆದೊಯ್ಯುತ್ತೇನೆ ಎಂಬ ಭರವಸೆಯನ್ನು ವಿನಯಚಂದ್ರ ನೀಡಿದ. ಹಲವರಿಗೆ ಉತ್ತರ ಕನ್ನಡದ ಪ್ರಸಿದ್ಧ ಯಾತ್ರಾ ಸ್ಥಳವಾದ ಯಾಣದ ಬಗ್ಗೆ ತಿಳಿದಿತ್ತು. ಒಂದಿಬ್ಬರು ಯಾಣದ ವಿಷಯದ ಬಗ್ಗೆ ಕೇಳಿದರು. ವಿನಯಚಂದ್ರ ಯಾಣಕ್ಕೆ ಎಲ್ಲರನ್ನೂ ಕರೆದೊಯ್ಯುವ ಭರವಸೆಯನ್ನು ನೀಡಿದ.
                     ಎಲ್ಲರ ಮಾತು ಮುಗಿಯುವ ವೇಳೆಗೆ ಸಮಯ ಹನ್ನೆರಡನ್ನೂ ಮೀರಿತ್ತು. ಉತ್ತರದಿಂದ ಬೀಸಿ ಬರುವ ಚಳಿಗಾಳಿ ಮತ್ತಷ್ಟು ಜೋರಾಗಿತ್ತು. ಕೊರೆಯುವ ಚಳಿಗೆ ಹಾಕಿದ್ದ ಫೈರ್ ಕ್ಯಾಂಪಿನಲ್ಲಿ ಬಿದ್ದು ಬಿಡಬೇಕು ಎನ್ನಿಸುತ್ತಿತ್ತು. ಚಳಿಯ ಭಯಕ್ಕೆ ಒಬ್ಬೊಬ್ಬರಾಗಿ ಫೈರ್ ಕ್ಯಾಂಪಿನಿಂದ ರೂಮಿಗೆ ಮರಳಿದರು. ಕೊನೆಯಲ್ಲಿ ಉಳಿದವರು ವಿನಯಚಂದ್ರ ಹಾಗೂ ಮಧುಮಿತಾ ಇಬ್ಬರೆ.
                  `ಮಾತು ತುಂಬ ಚನ್ನಾಗಿತ್ತು' ಎಂದಳು ಮಧುಮಿತಾ.
                  `ಹುಂ.'
                 `ನೀವು ಓದಿದ್ದು ಏನು..?'
                 `ಡಿಗ್ರಿ..'
                 `ಬಹಳ ಚನ್ನಾಗಿ ಮಾತನಾಡುತ್ತೀರಾ..'
                  `ಹೇ.. ಹಾಗೇನಿಲ್ಲ.. ಸುಮ್ಮನೆ ಮಾತನಾಡುತ್ತ ಹೋದೆ.. ಅಷ್ಟೇ..' ಎಂದ.
                  `ನಿಮ್ಮೂರಿನ ಬಗ್ಗೆ ನನಗೆ ಬಹಳ ಕುತೂಹಲ ಆಗ್ತಾ ಇದೆ. ನಿಮ್ಮೂರನ್ನು ನೋಡಬೇಕು ಎನ್ನಿಸುತ್ತಿದೆ.'
                  `ಪಾಸ್ ಪೋರ್ಟ್ ಆಗಿದ್ದರೆ ಹೇಳು. ಖಂಡಿತ ಕರೆದೊಯ್ಯುತ್ತೇನೆ. ನಮ್ಮೂರನ್ನು ನೋಡಲೇಬೇಕು ನೀನು.'
                   `ಹುಂ. ಭಾರತಕ್ಕೆ ಬರುವ ಆಸೆಯಿಂದ ಪಾಸ್ ಪೋರ್ಟ್ ಮಾಡಿಸಿದ್ದೆ. ಮುಂದೆಂದಾದರೂ ಬಾಂಗ್ಲಾದೇಶ ನಮ್ಮನ್ನು ಹೊರ ಹಾಕಿದರೆ ಭಾರತದಲ್ಲಿ ನಮಗೆ ಅವಕಾಶ ಸಿಗಬಹುದು ಎನ್ನುವ ಕಾರಣಕ್ಕೆ ನಮ್ಮ ಮನೆಯಲ್ಲಿ ಎಲ್ಲರೂ ಪಾಸ್ ಪೋರ್ಟ್ ಮಾಡಿಟ್ಟುಕೊಂಡಿದ್ದಾರೆ. ನನ್ನನ್ನು ನಿಮ್ಮೂರಿಗೆ ಕರೆದೊಯ್ಯುತ್ತೀಯಾ?' ಎಂದಳು ಮಧುಮಿತಾ. ವಿನಯಚಂದ್ರ ತಲೆ ಅಲ್ಲಾಡಿಸಿದ.
                   ವಿನಯಚಂದ್ರನಿಗೆ ಮತ್ತೆ ಬಾಂಗ್ಲಾದೇಶ ವಿಚಿತ್ರವೆನ್ನಿಸಿತು. ಬಾಯ್ಬಿಟ್ಟು ಕೇಳಲಿಲ್ಲ.
                   ಮಧುಮಿತಾಳೇ ಮುಂದುವರಿದಳು `ಅದೇನೋ ಹೇಳಿದ್ಯಲ್ಲ ಹವ್ಯಕ ಹಳ್ಳಿ ಹಾಡು ಅಂದ್ಯಲ್ಲ.. ಅದೇನು? ಏನದು? ಹವ್ಯಕರು ಎಂದರೆ ? ಅದೇನದು ತೊಡದೇವು?' ಪ್ರಶ್ನೆಗಳನ್ನು ಸುರಿಸಿದಳು.
                   `ಹವ್ಯಕರೆಂದರೆ ಬ್ರಾಹ್ಮಣರೇ. ಹವಿಸ್ಸನ್ನು ಅರ್ಪಿಸುವವರು ಎನ್ನುವ ಅರ್ಥವಿದೆಯಂತೆ. ನನಗೆ ಪೂರ್ತಿಯಾಗಿ ಗೊತ್ತಿಲ್ಲ. ಹವ್ಯಕರಲ್ಲಿ ಭಟ್ಟರು, ಹೆಗಡೆ, ಜೋಶಿ, ಗಾಂವ್ಕಾರ, ಶಾಸ್ತ್ರಿ, ದೀಕ್ಷಿತ ಹೀಗೆ ಹಲವು ಉಪನಾಮಗಳೂ ಇವೆ. ಉತ್ತರ ಭಾರತದಿಂದ ವಲಸೆ ಬಂದವರೆಂದು ಹೇಳಲಾಗುತ್ತದೆ. ಇತಿಹಾಸ ನನಗೆ ಗೊತ್ತಿಲ್ಲ. ಬಹಳ ಬುದ್ಧಿವಂತರು ಹೌದು.. ಎಲ್ಲರೂ ಸಿಕ್ಕಾಪಟ್ಟೆ ಓದಿಕೊಂಡವರು. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಓದಿಕೊಂಡು ಸಮುದಾಯದವರು ಎನ್ನುವ ಖ್ಯಾತಿ ಹವ್ಯಕರದ್ದು..' ಎಂದ ವಿನಯಚಂದ್ರ.
                 ಮುಂದುವರೆದು `ಮದುವೆ, ಮುಂಜಿ ಸೇರಿದಂತೆ ಹಲವಾರು ಮಂಗಲ ಕಾರ್ಯಗಳಲ್ಲಿ ಹವ್ಯಕರದ್ದೇ ಆದ ವಿಶಿಷ್ಟ ಶೈಲಿಯಲ್ಲಿ ಹಾಡನ್ನು ಹಾಡುತ್ತಾರೆ. ಅದನ್ನು ಹವ್ಯಕರ ಹಳ್ಳಿ ಹಾಡು ಎನ್ನಬಹುದು..' ಎಂದ ವಿನಯಚಂದ್ರ.
                 `ಚಂದ್ರಗೆ ಮುನಿದು ನಿಂದು ಶಾಪವನಿತ್ತು
                 ತಂದು ಸುತ್ತಿದ ಕಿರು ಡೊಳ್ಳಿಗೆ ಉರುಗನ
                  ಸುಂಡಿಲ ಗಣಪತಿಗೆ ಶರಣೆಂದು...'
ಆಕೆಗೆ ಅರ್ಥವಾಗಲಿ ಎಂಬಂತೆ ಒಂದು ಹಾಡನ್ನೂ ಹಾಡಿ ತೋರಿಸಿದ. ಆಕೆಗೆಷ್ಟು ಅರ್ಥವಾಯಿತೋ ಗೊತ್ತಾಗಲಿಲ್ಲ. ಆದರೆ ಮುಖವರಳಿಸಿ ಚಪ್ಪಾಳೆ ತಡ್ಡಿ ವಾವ್ ಸೂಪರ್ ಎಂದು ಹೇಳಿದ್ದು ವಿನಯಚಂದ್ರನಿಗೆ ಖುಷಿಯನ್ನು ತಂದಿತು. ಕೊನೆಗೆ ತೊಡದೇವು ಮಾಡುವ ಬಗೆಯನ್ನೂ ಹೇಳಿದ. ಮಧುಮಿತಾಳಿಗೆ ವಿನಯಚಂದ್ರ ವಿವರಿಸಿ ಹೇಳುತ್ತಿದ್ದ ಬಗೆ ವಿಶೇಷ ಅನುಭವವನ್ನು ನೀಡಿತು. ಈತನಿಗೆ ಏನೆಲ್ಲ ಗೊತ್ತಿದೆಯಲ್ಲ ಎಂದೂ ಅನ್ನಿಸಿತು. ರಾತ್ರಿ ಮತ್ತಷ್ಟು ಆಗುವ ವೇಳೆಗೆ ಇಬ್ಬರೂ ತಮ್ಮ ತಮ್ಮ ರೂಮನ್ನು ಸೇರಿದ್ದರು.

**

ಮಂಜಿನ ಪಂಜರದೊಳಗೆ ಏಕಾದಶಿ ಗುಡ್ಡ ಹಾಗೂ ಅಘನಾಶಿನಿ ಕಣಿವೆ
                           ಕಣ್ಮುಚ್ಚಿ ಅರೆಗಳಿಗೆಯಾದಂತೆನ್ನಿಸಿದೆ ಎನ್ನುವಾಗಲೇ ಯಾರೋ ವಿನಯಚಂದ್ರನ ರೂಮಿನ ಬಾಗಿಲನ್ನು ಬಡಿಯುತ್ತಿದ್ದಾರೆ ಎನ್ನುವ ಅನುಭವ. ಈಗಷ್ಟೇ ಬಂದು ಮಲಗಿದ್ದೇನೆ. ಚಳಿ ಬೇರೆ ಕೊರೆಯುತ್ತಿದೆ. ಮೂಳೆ ಮೂಳೆಗಳನ್ನು ತೂತು ಮಾಡುತ್ತಿದೆಯೇನೋ ಎನ್ನುವ ಅನುಭವ. ಇದ್ಯಾರಪ್ಪಾ ನಿದ್ದೆ ಹಾಳುಮಾಡಿದೋರು ಎಂದುಕೊಳ್ಳುತ್ತಿರುವಾಗ ಮಧುಮಿತಾಳ ಧ್ವನಿ ಕೇಳಿಸಿ ದಿಗ್ಗನೆ ಎದ್ದು ಕುಳಿತ. ನಿದ್ದೆ ಕಡಿಮೆಯಾಗಿದ್ದರಿಂದ ಕಣ್ಣು ಕೆಂಪಾಗಿತ್ತು. ಹೊರ ಬಂದವನನ್ನು ಮಧುಮಿತಾ ಕಾಂತಾನಗರವನ್ನು ಬೆಳಗಿನ ಸೌಂದರ್ಯ ವೀಕ್ಷಣೆಗೆ ಹೇಳಿದಾಗಲೇ ಬೆಳಗಾಗುತ್ತಿರುವ ಅರಿವು ಆತನಿಗಾದದ್ದು. ಎರಡು ಅಚ್ಚರಿ ಆತನನ್ನು ಆ ಸಂದರ್ಭದಲ್ಲಿ ಕಾಡಿದ್ದು ಸುಳ್ಳಲ್ಲ. ಇಷ್ಟು ಬೇಗ ಬೆಳಗಾಯಿತಾ ಎನ್ನುವುದು ಮೊದಲ ಅಚ್ಚರಿಯಾದರೆ ಈಕೆ ತನಗಿಂತ ಲೇಟಾಗಿ ನಿದ್ದೆ ಮಾಡಿದ್ದಾಳೆ. ಇಷ್ಟು ಬೇಗ ಎದ್ದಿದ್ದಾಳಲ್ಲ ಎನ್ನುವುದು ಇನ್ನೊಂದು ಅಚ್ಚರಿ. ತಯಾರಾಗಿ ಬಂದವನನ್ನು ಮಧುಮಿತಾ ಅಲ್ಲೇ ಸನಿಹದ ಚಿಕ್ಕ ಗುಡ್ಡವೊಂದಕ್ಕೆ ಕರೆದೊಯ್ದಳು. ಯಾಕೋ ವಾಚು ನೋಡಿದ ವಿನಯಚಂದ್ರನಿಗೆ ಬೆಳಗಿನ 5.30 ಕಾಣಿಸಿತು. ರಾತ್ರಿಯಂತೆ ಮಾಲೆ ಮಾಲೆಯಾಗಿ ಮಂಜು ಬೀಳುತ್ತಿತ್ತು. ದೂರದಿಗಂತದಲ್ಲೆಲ್ಲೋ ಬಾನಿಗೆ ಕಿತ್ತಳೆ ಬಣ್ಣವನ್ನು ಹಚ್ಚಿದ್ದಾರೋ ಎಂಬಂತಾಗಿತ್ತು.
ಯಾಕೋ ಈ ಊರು ನಮ್ಮ ಮಲೆನಾಡಿನಂತಿದೆಯಲ್ಲ ಎಂದುಕೊಂಡ ವಿನಯಚಂದ್ರನಿಗೆ ಕಂಡಿದ್ದು ಗುಡ್ಡ ಬೆಟ್ಟಗಳ ಸಾಲು.
                      ಅಲ್ಲೆಲ್ಲೋ ದೂರದಲ್ಲಿ ಗಂಗೆಯ ಹಾಗೂ ಬ್ರಹ್ಮಪುತ್ರಾ ನದಿಗಳ ಬಯಲು ಅಸ್ಪಷ್ಟವಾಗಿ ಕಾಣಿಸಿದಂತಾಯಿತು. ಸೂರ್ಯ ಮೂಡಲು ತವಕಿಸುತ್ತಿದ್ದ. ಭಾರತದಲ್ಲಿ ಹುಟ್ಟುವ ಸೂರ್ಯ ನಮ್ಮದೇ ಅರುಣಾಚಲ, ತ್ರಿಪುರಾ, ಮಣಿಪುರಗಳನ್ನು ಮೀಜೋರಾಮ್ ಗಳನ್ನು ಹಾದು ಬಂದು ಬಾಂಗ್ಲಾದೊಳಕ್ಕೆ ತೂರುತ್ತದೆ. ಮತ್ತೆ ಭಾರತಕ್ಕೆ ಕಾಲಿಡುತ್ತದೆಯಲ್ಲ ಎಂತ ಮಜವಾಗಿದೆಯಲ್ಲ ಎಂದುಕೊಂಡ. ತಮ್ಮೂರ ಫಾಸಲೆಯಲ್ಲಿದ್ದ ಏಕಾದಶಿ ಗುಡ್ಡ ವಿನಯಚಂದ್ರನಿಗೆ ನೆನಪಾಯಿತು. ಚಿಕ್ಕಂದಿನಲ್ಲಿ ಸೂರ್ಯೋದಯವನ್ನು ನೋಡಬೇಕೆಂಬ ಕಾರಣಕ್ಕೆ ಒಂದೇ ಗುಕ್ಕಿಗೆ ಏಕಾದಶಿ ಗುಡ್ಡವನ್ನು ಓಡಿ ಹತ್ತುತ್ತಿದ್ದ ವಿನಯಚಂದ್ರ ತನ್ನೂರನ್ನು ಇಬ್ಬನಿ ತಬ್ಬಿ ನಿಂತಿದ್ದ ಬಗೆಯನ್ನೆಲ್ಲ ನೋಡಿ ಆಸ್ವಾದಿಸುತ್ತಿದ್ದ. ದೂರದಲ್ಲೆಲ್ಲೋ ಹುಟ್ಟುವ ಸೂರ್ಯ ಮಂಜಿನ ಮುಸುಕನ್ನು ಸೀಳಿ ತನ್ನತ್ತ ನೋಡಿದಾಗಲೆಲ್ಲ ಅನಿರ್ವಚನೀಯ ಆನಂದವನ್ನು ಆತ ಅನುಭವಿಸುತ್ತಿದ್ದ. ಅಂತಹದೇ ಅನುಭವ ಮತ್ತೊಮ್ಮೆ ಆತನಿಗಾಯಿತು. ಪಕ್ಕದಲ್ಲಿಯೇ ಮಧುಮಿತಾ ನಿಂತಿದ್ದಳು. ಇಂತಹ ಸಡಗರದಲ್ಲಿ ಇಂತಹ ಒಳ್ಳೆಯ ದೃಶ್ಯವನ್ನು ಎಷ್ಟೋ ವರ್ಷಗಳ ನಂತರ ಮತ್ತೆ ತನಗೆ ನೀಡಿದಳಲ್ಲ ಈಕೆ.. ಒಮ್ಮೆ ಹೋಗಿ ತಬ್ಬಿಕೊಳ್ಳಲಾ ಎನ್ನಿಸಿತು. ಮನಸ್ಸನ್ನು ಕಷ್ಟಪಟ್ಟು ನಿಯಂತ್ರಿಸಿಕೊಂಡ.
                     `ನಾನು ಅದೆಷ್ಟೋ ಸಾರಿ ಈ ಊರಿಗೆ ಬಂದಿದ್ದೇನೆ. ಬಾಂಗ್ಲಾ ಸರ್ಕಾರ ನೀಡಿದ ಕೆಲಸ ವರ್ಷಕ್ಕೆ ಕನಿಷ್ಟ 25ಕ್ಕೂ ಅಧಿಕ ಸಾರಿ ನಾನು ಇಲ್ಲಿಗೆ ಬರಬೇಕಾಗುತ್ತದೆ. ಬಂದಾಗಲೆಲ್ಲ ಬೆಳಿಗ್ಗೆ ಮುಂಚೆ ಇಲ್ಲಿಗೆ ಬಂದುಬಿಡುತ್ತೇನೆ. ಎಷ್ಟೇ ಒತ್ತಡವಿರಲಿ, ಬೇಜಾರು, ಸುಸ್ತಾಗಿರಲಿ ಇಲ್ಲಿ ಬಂದಾಗ ಮನಸ್ಸು ಪ್ರಫುಲ್ಲ. ಹಾಯಾಗುತ್ತದೆ. ಕಳೆದುಕೊಂಡ ಚೈತನ್ಯವನ್ನು ಮರಳಿ ಪಡೆದುಕೊಂಡಂತಾಗುತ್ತದೆ. ಏನೋ ಒಂದು ಸೆಳೆತವಿದೆ ಇಲ್ಲಿ..' ಎಂದಳು ಮಧುಮಿತಾ.
                    `ನನಗೆ ನಮ್ಮೂರು ನೆನಪಾಯಿತು.. ನಮ್ಮೂರ ಏಕಾದಶಿ ಗುಡ್ಡ ನೆನಪಾಯಿತು..' ಎಂದ ವಿನಯಚಂದ್ರ ಅದರ ಬಗ್ಗೆ ಹೇಳಿದ.
                      `ನಿಮ್ಮೂರಲ್ಲಿ ಏನಿಲ್ಲ ಹೇಳು ಮಾರಾಯಾ.. ಎಲ್ಲಾ ಇದೆಯಲ್ಲೋ..' ಎಂದಳು ಮಧುಮಿತಾ.
                      `ಹೂಂ..' ಅಂದ ವಿನಯಚಂದ್ರ.
                       ಮತ್ತೊಂದು ಅರ್ಧಗಂಟೆಯಲ್ಲಿ ಸೂರ್ಯನ ಕಿರಣಗಳು ಆ ಗುಡ್ಡವನ್ನು ಸ್ಪರ್ಷಿಸಿದ್ದವು. ಮಂಜಿನ ಹನಿಗಳ ಮೇಲೆ ಬಿದ್ದ ಸೂರ್ಯರಶ್ಮಿ ಫಳ್ಳನೆ ಹೊಳೆಯುತ್ತಿತ್ತು. ಎಷ್ಟು ನೋಡಿದರೂ ಮನಸ್ಸು ತಣಿಯುವುದಿಲ್ಲ. ನೋಡಿದಷ್ಟೂ ನೋಡಬೇಕೆನ್ನಿಸಿತು.  ಮತ್ತೊಂದು ಸ್ವಲ್ಪ ಹೊತ್ತು ಅಲ್ಲಿದ್ದು ಇಬ್ಬರೂ ವಾಪಸಾದರು.
                       ವಾಪಾಸು ತಾವುಳಿದಿದ್ದ ರೂಮಿನ ಬಳಿಗೆ ಬರುವ ವೇಳೆಗೆ ಕೆಲವರು ಎದ್ದಿದ್ದರು. ಇನ್ನೂ ಹಲವರು ಹಾಸಿಗೆಯಲ್ಲಿಯೇ ಇದ್ದರು. ಅವರ್ಯಾರಿಗೂ ಇವರು ಮಲಗಿದ್ದು, ಮುಂಜಾನೆದ್ದು ಗುಡ್ಡವನ್ನು ಹತ್ತಿದ್ದು ಗೊತ್ತೇ ಇರಲಿಲ್ಲ. ಎತ್ಲಾಗೆ ಹೋಗಿದ್ದಿರಿ? ರಾತ್ರಿಯಿಡಿ ನಿದ್ದೆಯನ್ನೇ ಮಾಡಿಲ್ಲವಾ..? ಎಂಬಂತೆ ನೋಡಿದರು. ಹಾಗೆಯೇ ಕೇಳಿದರೂ ಕೂಡ. ಅವರಿಗೆಲ್ಲ ಮುಗುಳ್ನಗುವಿನ ಉತ್ತರವನಿತ್ತು, ತಿಂಡಿ ತಿಂದು ಮತ್ತೊಮ್ಮೆ ಕಾಂತಾಜಿ ದೇವಾಲಯಕ್ಕೆ ತೆರಳಿದರು.
                       ದೇಗುಲದಲ್ಲಿ ಬೆಳಗಿನ ಪೂಜೆ ನಡೆಯುತ್ತಿತ್ತು. ದೇವರಿಗೆ ನಮಿಸಿ, ವಿಶ್ವಕಪ್ ತಮಗೆ ಸಿಗಲಿ ಎಂಬ ಬೇಡಿಕೆಯನ್ನು ದೇವರ ಬಳಿಯಿತ್ತು, ಆಶೀರ್ವಾದ ಪಡೆಯುವ ವೇಳೆಗೆ ಸೂರ್ಯ ಬಾನಿನಲ್ಲಿ ಆಗಲೆ ಸೈಕಲ್ ಹೊಡೆಯಲಾರಂಭಿಸಿದ್ದ.
                       ಮತ್ತೆ ಬಸ್ಸನ್ನು ಹತ್ತಿ ಢಾಕಾದ ಕಡೆಗೆ ಹೊರಳುವ ವೇಳೆಗೆ ಮಧುಮಿತಾ ಹಾಗೂ ವಿನಯಚಂದ್ರ ಇಬ್ಬರಲ್ಲೂ ಸ್ನೇಹಕ್ಕಿಂತ ಮಿಗಿಲಾದ ಭಾವ ಬೆಳೆದಿತ್ತು. ಅದು ಪ್ರೀತಿಯ ಕಡೆಗೆ ಹೊರಳುತ್ತಿತ್ತು. ವಿಷಯ ಅರಿತಿದ್ದ ಸೂರ್ಯನ್ ನಗುತ್ತಿದ್ದ. ಬಸ್ಸಿನಲ್ಲಿ ಒಂದೆರಡು ಸಾರಿ ಕೀಟಲೆಯನ್ನೂ ಮಾಡಿದ್ದ. ಆಗ ಇಬ್ಬರೂ ನಾಚಿದ್ದರು.

(ಮುಂದುವರಿಯುತ್ತದೆ..)

Wednesday, March 19, 2014

ಏನ ಮಾಡಲೆ ಗೆಳತಿ

ಏನು ಮಾಡಲೆ ಗೆಳತಿ
ನೆನಹುಗಳು ನಲಿಯುತಿವೆ
ಬದುಕ ಬೀದಿಯ ಹಲವು
ಕವನಗಳು ಜೊತೆಯಲಿವೆ |

ಹೊಸ ನೀರು ಹರಿಯುತಿದೆ
ಹಳೆ ನೀರ ಮರೆಸುತಿದೆ
ಹಳೆ ಕುರುಹ ನಡುವಿನಲಿ
ಹೊಸ ಚಿಗುರು ಉದಿಸುತಿದೆ |

ಏನ ಮಾಡಲೆ ಗೆಳತಿ
ನೆನಹುಗಳು ಸವೆಯುತಿದೆ
ಹಳೆ ಬಾಲ್ಯ ಹಸಿ ಹರೆಯ
ಕಾಣದಲೆ ಮರೆಯುತಿದೆ |

ಹೊಸತನವು ಉದಿಸುತಿದೆ
ಹಳೆಕಾಲ ಕಮರುತಿದೆ
ಹಳೆ ನೆನಪ ಸಖ್ಯದೊಳು
ಜಗ ಜೀವ ಓಡುತಿದೆ |

ಏನ ಮಾಡಲೆ ಗೆಳತಿ
ನೆನಹುಗಳು ಮರಳುತಿದೆ
ಕಳೆದ ಕ್ಷಣಗಳ ನೂರು
ಘಟನೆಗಳು ಹೊರಳುತಿದೆ |

***
(ಈ ಕವಿತೆಯನ್ನು ಬರೆದಿದ್ದು 24.03.2007ರಂದು ದಂಟಕಲ್ಲಿನಲ್ಲಿ)

Tuesday, March 18, 2014

ಲೋಕಸಭಾ ಟಿಕೆಟ್ ಪಡೆಯಲು ಕೆಲವು ಸೂತ್ರಗಳು

                 ಲೋಕಸಭಾ ಟಿಕೆಟ್ ಬೇಕಾದರೆ ತಾವು ಈ ಸೂತ್ರಗಳನ್ನು ಅಳವಡಿಸಿಕೊಳ್ಳಿ. ನಿಮಗೆ ಟಿಕೆಟ್ ಲಭ್ಯವಾಗುತ್ತದೆ. ಈ ಸೂತ್ರಗಳನ್ನು ಗಂಭೀರವಾಗಿ ಪರಿಗಣಿಸಿದರೆ ಟಿಕೆಟ್ ಸಿಗಬಲ್ಲದು. ಫನ್ನಿಯಾಗಿ ತೆಗೆದುಕೊಂಡರೆ ನಿಮ್ಮ ಮೂಡು ಸರಿಯಾಗಬಹುದು. ಯಾವ ಯಾವ ಪಕ್ಷಗಳ ಟಿಕೆಟ್ ಬೇಕಾದರೆ ಯಾವ ಯಾವ ರೀತಿ ಮಾಡಬೇಕು ಎನ್ನುವುದು ಇಲ್ಲಿದೆ ನೋಡಿ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಪಕ್ಷಗಳು ಹಾಗೂ ಇತರೆ ಕೆಲವು ಪಕ್ಷಗಳ ಟಿಕೆಟ್ ಬೇಕಾದಲ್ಲಿ ನೀವು ಅನುಸರಿಸಬೇಕಾದ ಸೂತ್ರಗಳು ಇಲ್ಲಿವೆ. ನಿಮಗೆ ಖಂಡಿತ ಇಷ್ಟವಾಗಬಹುದು.

ಬಿಜೆಪಿ ಟಿಕೆಟ್ ಬೇಕಾದರೆ
1) ದೇಶ ಕಟ್ಟುವ ಮಾತುಗಳನ್ನು ದೊಡ್ಡ ದೊಡ್ಡ ರೂಪದಲ್ಲಿ ಆಡಿ.
2) ಆಗಾಗ ರಾಮ ಹಾಗೂ ರಾಮಮಂದಿರದ ಭಜನೆ ಮಾಡಿ
3) ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮದ ಕುರಿತು ಮಾತನಾಡಿ
4) ಆಗಾಗ ಮುಸ್ಲಿಮರಲ್ಲಿ ನಮ್ಮ ತಪ್ಪಿದ್ದರೆ ಕ್ಷಮೆ ಇರಲಿ ಎಂದೂ ಹೇಳಿ
5) ಭ್ರಷ್ಟಾಚಾರದ ವಿರುದ್ಧ ಉದ್ದುದ್ದದ ಭಾಷಣ ಬಿಗಿಯಿರಿ
6) ನಮೋ ಭಜನೆ ಮಾಡಿ
7) ಪತ್ರಿಕೆಗಳಲ್ಲಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪ್ರೇಮದ ಕುರಿತು ಸರಣಿ ಲೇಖನಗಳನ್ನು, ಅಂಕಣಗಳನ್ನು ಬರೆಯಿರಿ


ಕಾಂಗ್ರೆಸ್ ಟಿಕೆಟ್ ಬೇಕಾದರೆ
1) ಮೋದಿಯವರನ್ನು ಯದ್ವಾ ತದ್ವಾ ಬಯ್ಯಿರಿ
2) ಮೋದಿಯವರನ್ನು ಕೋಮುವಾದಿ ಎನ್ನಿ
3) ರಾಹುಲ್ ಗಾಂಧಿ ಮುಂದಿನ ಪ್ರಧಾನಿ ಎಂದು ಆಗಾಗ ಹೇಳಿ
4) ಸೋನಿಯಾಗಾಂದಿಗಿಂತ ಮಹಾನ್ ನಾಯಕರಿಲ್ಲ ಎಂದು ಹೇಳುತ್ತಿರಿ
5) ಹಿಂದುಳಿದವರು, ಅಲ್ಪಸಂಖ್ಯಾತರ ಧ್ಯೇಯವೇ ಪರಮಗುರಿ ಎಂದು ಭಾಷಣ ಕೊಚ್ಚಿ
6) ಮುಸ್ಲಿಮರನ್ನು ಎಷ್ಟು ಸಾಧ್ಯವೋ ಅಷ್ಟು ಓಲೈಕೆ ಮಾಡಿ
7) ದೇವಸ್ಥಾನವೊಂದನ್ನು ಬಿಟ್ಟು ಆಗಾಗ ಚರ್ಚು, ಮಸೀದಿಗಳಿಗೆ ಹೋಗಿ ಬರುತ್ತಿರಿ

ಜೆಡಿಎಸ್ ಟಿಕೆಟ್ ಬೇಕಾದರೆ
1) ಸ್ವಲ್ಪ ಕಾಲ ಬಿಜೆಪಿ, ಸ್ವಲ್ಪ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದು ಬಂಡೆದ್ದು ಬನ್ನಿ
2) ಅಪ್ಪ-ಮಗನ ಭಜನೆ ಮಾಡಿ
3) ನಿದ್ದೆಯನ್ನು ನಿಮ್ಮ ಖಾಯಂ ಹವ್ಯಾಸವನ್ನಾಗಿ ಮಾಡಿಕೊಳ್ಳಿ
4) ಬೇರೆ ಪಕ್ಷದಿಂದ ಪಕ್ಷಾಂತರ ಮಾಡಿ ಬಂದ ತಕ್ಷಣ ಆ ಪಕ್ಷಗಳನ್ನು ಯದ್ವಾ ತದ್ವಾ ಬೈಯಿರಿ
5) ತಮ್ಮನ್ನು ಬಿಟ್ಟು ಉಳಿದವರೆಲ್ಲರೂ ಮೋಸಗಾರರು ಎಂದು ಹೇಳಿರಿ
6) ಅಪ್ಪ-ಮಗ-ಸೊಸೆ-ಮೊಮ್ಮಗನ ಪೋಟೋಕ್ಕೆ ಆಗಾಗ ಪೂಜೆ ಮಾಡುವ ಪೋಸು ಕೊಡಿ
7) ಭವಿಷ್ಯ, ಜಾತಕ, ನಂಬಿಕೆ, ಮಾಟ, ಮಂತ್ರ ಇವುಗಳಲ್ಲೆಲ್ಲ ಸಿಕ್ಕಾಪಟ್ಟೆ ನಂಬಿಕೆ ಇದೆ ಎನ್ನುವುದನ್ನು ಆಗಾಗ ಪ್ರೂವ್ ಮಾಡಿ ತೋರಿಸಿ

ಉಳಿದಂತೆ ಇರುವುದು ದಿ ಗ್ರೇಟ್ ಆಮ್ ಆದ್ಮಿ ಪಕ್ಷ.
1) ಭ್ರಷ್ಟಾಚಾರದ ವಿರೋಧಿ ಉಪವಾಸ ಮಾಡಿ
2) ಭ್ರಷ್ಟಾಚಾರ ವಿರೋಧಿ ಭಾಷಣ ಹಾಗೂ ಪ್ರತಿಭಟನೆಗಳನ್ನು ಸರಣಿಗಳಂತೆ ಮಾಡಿ, ಆಗಾಗ ಮಾಧ್ಯಮದವರನ್ನು ಜೈಲಿಗೆ ಅಟ್ಟುತ್ತೇನೆ ಎಂದು ಗುಡುಗಿ
3) ನಿಮಗೆ ಯಾರು ಆಗುವುದಿಲ್ಲವೋ ಅವರನ್ನು ನರೇಂದ್ರ ಮೋದಿ ಹಾಗೂ ಅಂಬಾನಿ ಏಜೆಂಟ್ ಎಂದು ಬಯ್ಯಿರಿ
4) ಜನಸಾಮಾನ್ಯ ಎಂದು ಬಿಂಬಿಸಿಕೊಳ್ಳಲು ರೈಲು, ಬೈಕು, ಕಾರು, ಸೈಕಲ್ಲು, ಬಸ್ಸು ಸೇರಿದಂತೆ ಎಷ್ಟು ಸಾಧ್ಯವೋ ಅಷ್ಟು ಜನಸಾಮಾನ್ಯರ ಗಾಡಿಯಲ್ಲಿ ಓಡಾಡಿ ಅವರಿಗೆ ಕಿರಿ ಕಿರಿ ಉಂಟು ಮಾಡಿ
5) ಕುತ್ತಿಗೆಗೆ ಒಂದು ಮಫ್ಲರ್ ಹಾಕಿಕೊಂಡು ಸದಾಕಾಲ ಓಡಾಡಿ
6) ಯಾವುದೇ ಕ್ಷೇತ್ರದಲ್ಲಿ ಬೇಕಾದರೂ ಗುರುತಿಸಿ ತಾಕತ್ತಿದ್ದರೆ ನನ್ನ ವಿರುದ್ಧ ಸ್ಪರ್ಧೆ ಮಾಡಿ ಎಂದು ಮೋದಿಗೆ ಸವಾಲು ಹಾಕಿ
7) ಪ್ರತಿಭಟನೆಯ ವಿರುದ್ಧ ಪ್ರತಿಭಟನೆ ಮಾಡಿ ನೀವೊಬ್ಬ ಉಗ್ರ ಪ್ರತಿಭಟನಾಕಾರ ಎಂಬುದನ್ನು ಸಾಬೀತು ಮಾಡಿ

Monday, March 17, 2014

ಹೇಳದೇ ಉಳಿದ ಮಾತು (ಕಥಾ ಸರಣಿ ಭಾಗ-2)

 `ಹಲೋ...
ವಾಣಿ ಇದ್ದಾ..?' ವಿನಾಯಕ ಮನಸ್ಸು ತಾಳಲಾರದೇ ಪೋನ್ ಮಾಡಿದ್ದ.
                   ಆತ ಪೋನ್ ಮಾಡುವ ವೇಳೆಗಾಗಲೇ ವಾಣಿಯ ಮದುವೆಯಾಗಿ ಮೂರ್ನಾಲ್ಕು ತಿಂಗಳು ಕಳೆದಿತ್ತು.
`ಇಲ್ಯಲಾ ತಮಾ.. ನೀ ಯಾರಾ..? ವಾಣಿ ಅದರ ಗಂಡನ ಮನೆಲ್ಲಿ ಇದ್ದಲ್ಲ..' ವಾಣಿಯ ಆಯಿ ಉತ್ತರ ನೀಡಿದ್ದಳು.
                   `ಹೌದಾ.. ಯಂಗೆ ಅಮೃತಬಳ್ಳಿಮನೆಯಾತು.. ವಿನಾಯ್ಕ ಹೇಳಿ ಯನ್ನ ಹೆಸ್ರು. ವಾಣಿ ಕ್ಲಾಸಿನವ್ವ. ಅವಳ ಪ್ರೆಂಡು.. ಯಂಗೆ ವಾಣಿ ಮನೆಯ ಪೋನ್ ನಂಬರ್ ಸಿಗ್ಲಕ್ಕಾ..?' ವಿನಾಯಕ ಕೇಳಿದ್ದ.
                    `ಓ.ವಿನಾಯಕನನಾ ತಮಾ.. ಅರಾಮ್ ಇದ್ಯಾ.. ವಾಣಿ ಆಗಾಗ ಹೇಳ್ತಾ ಇರ್ತಿತ್ತಾ.. ನೀನು ಯಂಗಳ ನೆಂಟರಡಲಾ..' ವಾಣಿಯ ಆಯಿ ಉತ್ತರ ನೀಡಿದ್ದಳು.
                    `ಹುಂ.. ಹೌದಡಾ.. ಯಾವಾಗಲೋ ವಾಣಿ ಹೇಳಿದ ನೆನಪು.. ವಾಣಿಗೆ ಪೋನ್ ಮಾಡಿದ್ರೆ ಸಿಗ್ಲಕ್ಕಾ ಈಗ..?' ವಿನಾಯ್ಕ ಮತ್ತೆ ಕೇಳಿದ್ದ..
                    `ತಮಾ ನಿನ್ ಆಯಿ ಅಪ್ಪಯ್ಯ ಎಲ್ಲಾ ಅರಾಮ್ ಇದ್ವಾ.. ಎಂತಾ ಮಾಡ್ತಾ ಇದ್ದೆ ನೀನು ಈಗ..?' ವಾಣಿಯ ಆಯಿ ವಿನಾಯಕನ ಪ್ರಶ್ನೆಗೆ ಉತ್ತರಿಸದೇ ತಾನೇ ಪ್ರಶ್ನೆ ಮಾಡಿದಳು.
                    `ಆನು ಬೆಂಗಳೂರಲ್ಲಿ ಇದ್ದಿ ಈಗ. ಯಮ್ಮನೆಲಿ ಎಲ್ಲಾ ಅರಾಮ್ ಇದ್ದ. ನಂಗೆ ಕಾಲೇಜು ದಿನಗಳಲ್ಲಿ ವಾಣಿ ಪ್ರೆಂಡ್ ಆಗಿತ್ತು. ಇವತ್ತು ನೆನಪಾತು ಮಾತಾಡನಾ ಹೇಳಿ ಮಾಡಿದ್ದಿ.. ಅದರ ಮನೆಯ ನಂಬರ್ ಇತ್ತಿಲ್ಲೆ.. ಹಂಗಾಗಿ ನಿಮ್ಮನಿಗೆ ಮಾಡಿದ್ದು..' ವಿನಾಯಕ ಇದ್ದ ವಿಷಯವನ್ನು ಹೇಳಿದ್ದ.
                     ಕೊನೆಗೂ ಉತ್ತರ ನೀಡಲು ಮುಂದಾದ ವಾಣಿಯ ಆಯಿ `ತಮಾ ಆನು ನಂಬರ್ ಕೊಡ್ತಿ ತಡಿ.. ಪಟ್ಟಿ ನೋಡ್ಕ್ಯಂಡು ಹೇಳವು............... ....... ........ ...... ಹಿಡಿ ಇಕಾ ಬರಕಾ..' ವಿನಾಯಕ ಬರೆದುಕೊಂಡ. ವಾಣಿಯ ಆಯಿಯೇ ಮುಂದುವರಿಸಿದಳು `... ಆದರೆ ತಮಾ ಒಂದ್ ಮಾತು ಹೇಳಲಾ.. ನೀನು ಈಗ ವಾಣಿಗೆ ಪೋನ್ ಮಾಡದು ಯಂಗೆಂತಕ್ಕೋ ಸರಿ ಕಾಣ್ತಿಲ್ಲೆ ತಮಾ.. ವಾಣಿಯ ಅತ್ತೆಗೆ ಇದೆಲ್ಲಾ ಸರಿ ಕಾನ್ತಿಲ್ಲೆ.. ರಾಶಿ ಕಟ್ಟು ನಿಟ್ಟಲಾ..' ಎಂದಾಗ ವಿನಾಯಕ ಒಮ್ಮೆ ಪೆಚ್ಚಾದ ಅಷ್ಟೇ ಅಲ್ಲದೇ ವಾಣಿಗೆ ಪೋನ್ ಮಾಡಲೋ ಬೇಡವೋ ಎನ್ನುವ ದ್ವಂದ್ವಕ್ಕೆ ಸಿಲುಕಿದ. ಮನಸು ಒಮ್ಮೆ ಪೋನ್ ಮಾಡು ಎಂದರೆ ಮತ್ತೊಮ್ಮೆ ಬೇಡ ಎನ್ನುವಂತೆ ಅನ್ನಿಸುತ್ತಿತ್ತು. ಪೋನ್ ಹಿಡಿದುಕೊಂಡೇ ಇದ್ದ ವಿನಾಯಕನಿಗೆ ಇದೇ ಆಲೋಚನೆಯಲ್ಲಿ ವಾಣಿಯ ಆಯಿ ಮತ್ತೇನೋ ಹೇಳುತ್ತಿದ್ದರೂ ಕಿವಿಗೆ ಹೋಗಲಿಲ್ಲ. ಎಲ್ಲ ಮಾತುಗಳಿಗೂ ಹೂ.. ಹೂ ಎಂದು ಪೋನಿಟ್ಟ.
                       ಪೋನಿಟ್ಟ ಘಳಿಗೆಯಿಂದ ಹೊಸದೊಂದು ದ್ವಂದ್ವ ವಿನಾಯಕನನ್ನು ಕಾಡಹತ್ತಿತು. ತಾನೀಗ ವಾಣಿಗೆ ಪೋನ್ ಮಾಡಿದರೆ ಆಕೆ ಮಾತನಾಡುತ್ತಾಳೋ ಇಲ್ಲವೋ ಎಂಬ ಬಾವ ಕಾಡಿತು. ಒಂದು ವೇಳೆ ಮಾತನಾಡಿದರೂ ಏನು ಮಾತಾಡಬಹುದು..?  ಪೋನ್ ಮಾಡಿದ ತನ್ನ ಮೇಲೆ ಬೈದು ಇನ್ನು ಮೇಲೆ ಹೀಗೆ ಮಾಡಬೇಡ ಎಂದರೆ..? ವಾಣಿಯ ಬದಲು ಅವಳ ಮನೆಯಲ್ಲಿ ಆಕೆಯ ಅತ್ತೆಯೋ, ಮಾವನೋ, ಗಂಡನೋ ಪೋನ್ ತೆಗೆದುಕೊಂಡರೆ ತಾನ್ಯಾರು ಎಂದು ಹೇಗೆ ಹೇಳುವುದು? ವಾಣಿಯ ಗೆಳೆಯ ತಾನು ಎಂದರೆ ಅವರು ಏನೆಂದುಕೊಂಡಾರು..? ತಾನು ಮಾಡಿದ ಒಂದೇ ಒಂದು ಪೋನು ವಾಣಿಯ ಬದುಕನ್ನು ಹಾಳು ಮಾಡಿದರೆ ಏನು ಮಾಡೋದು..? ಸುಮ್ಮನೆ ಮಾಡಿದೆ ಎನ್ನಲಾ..? ಬಿಟ್ಟು ಬಿಡದೆ ವಿನಾಯಕ ಆಲೋಚಿಸಿದ. ಕೊನೆಗೊಮ್ಮೆ ಪೋನ್ ಮಾಡುವುದು ಬೇಡ ಎನ್ನುವ ನಿರ್ಧಾರಕ್ಕೆ ಬಂದ.
                     `ಛೇ... ಅಷ್ಟು ಪ್ರೀತಿಯಿತ್ತಲ್ಲ.. ನಾನು ಪ್ರಪೋಸ್ ಮಾಡಿಬಿಡಬೇಕಿತ್ತು.. ಅವಳು ನನ್ನನ್ನು ತಿರಸ್ಕರಿಸಿದ್ದರೆ ಮನಸ್ಸಿಗೆ ಸಮಾಧಾನವಾದರೂ ಇರುತ್ತಿತ್ತು. ಆದರೆ ಈಗ ಮನಸ್ಸಿನಲ್ಲಿ ನೂರಾರು ಪ್ರಶ್ನೆಗಳು ಹಾಗೆಯೇ ಉಳಿದುಹೋಗಿಬಿಟ್ಟವು. ಅಲ್ಲಾ ಅವಳಾದರೂ ನನ್ನ ಬಳಿ ನೀನಂದ್ರೆ ನನಗಿಷ್ಟ ಕಣೋ ಎಂದು ಹೇಳಬಹುದಾಗಿತ್ತು..' ಎಂದು ಹಲುಬಿಕೊಂಡ ವಿನಾಯಕ `ಷಿಟ್..' ಎಂದು ಒಮ್ಮೆ ತಲೆಕೊಡವಿಕೊಂಡ.

***
                        ವಿನಾಯಕ ಈಗ ಹೇಗಿರಬಹುದು..? ತಾನೇನೋ ಮದುವೆಯಾಗಿ ಬಂದು ಬಿಟ್ಟೆ. ಆದರೆ ವಿನಾಯಕನ ಪಾಡು ಯಾವ ರೀತಿ ಇದೆ ಎಂಬುದು ಗೊತ್ತಾಗುತ್ತಿಲ್ಲವಲ್ಲ ಎಂದು ವಾಣಿ ಆಲೋಚಿಸುವ ವೇಳೆಗೆ ಆಕೆಗೆ ತನ್ನ ಸಂಸಾರದ ಅನೇಕ ಮಜಲುಗಳನ್ನು ದಾಟಿದ್ದಳು. ಶಿರಸಿಯಲ್ಲಿ ಕೆಲಸ ಮಾಡುವ ಗಂಡ ಬೆಳಿಗ್ಗೆ ಶಿರಸಿಗೆ ಹೋದರೆ ಬರುವುದು ಕತ್ತಲಾದ ಮೇಲೆಯೆ. ಅಲ್ಲಿಯವರೆಗೂ ಮನೆಯಲ್ಲಿ ತಾನು ಸುಮ್ಮನೇ ಇರಬೇಕು. ಅತ್ತೆಯಿದ್ದಾಳೆ. ಮಾವನೂ ಇದ್ದಾನೆ. ಮನೆಯಲ್ಲಿ ಜಮೀನು ಸಾಕಷ್ಟಿರುವ ಕಾರಣ ಆಳು-ಕಾಳುಗಳೂ ತುಂಬಿದ್ದಾರೆ. ಬೆಳಿಗ್ಗೆ ಅಡಿಗೆ ಮಾಡಿ ಗಂಡನನ್ನು ಶಿರಸಿಗೆ ಕಳಿಸಿದ ನಂತರ ಒಂದೆರಡು ತಾಸುಗಳ ಕಾಲ ಪುರಸೊತ್ತು ಲಭಿಸುತ್ತದೆ. ಅಷ್ಟರಲ್ಲಿ ಅತ್ತೆಯವರು ಬಂದು `ಮಧ್ಯಾಹ್ನಕ್ಕೆ ಎಂತಾ ಆಸೆ ಮಾಡ್ತೆ..? ಬೆಂಡೆಕಾಯಿ ಹಶಿ ಅಂದ್ರೆ ಯಂಗೆ ಪಂಚಪ್ರಾಣ ಅದನ್ನೇ ಮಾಡ್ತ್ಯಾ..?' ಎಂದು ಕೇಳುತ್ತಾರೆ.
                    ಅತ್ತೆ ಹೀಗೆ ಹೇಳುವುದು ತನಗಿಷ್ಟ ಮಾಡು ಎಂಬ ಇನ್ ಡೈರೆಕ್ಟ್ ಆದ ಆರ್ಡರ್ ಎಂಬುದು ವಾಣಿಗೆ ಗೊತ್ತಾಗುತ್ತಿದ್ದರೂ ತನ್ನ ಮಾತಿಗೆ ಗಂಡನ ಮನೆಯಲ್ಲಿ ಬೆಲೆ ಇಲ್ಲ ಎಂಬುದನ್ನು ಮದುವೆಯಾಗಿ ಬಂದ ಹದಿನೈದೇ ದಿನಗಳಲ್ಲಿ ತಿಳಿದುಕೊಂಡಿದ್ದಾಳೆ.  ತನ್ನ ಮಾತಿಗೊಂದೆ ಅಲ್ಲ ತನ್ನ ಭಾವನೆಗಳಿಗೂ ಕಿಮ್ಮತ್ತಿಲ್ಲ ಎಂಬುದು ನಂತರದ ದಿನಗಳಲ್ಲಿ ವಾಣಿಗೆ ಅರಿವಾಗಿದೆ. ಮದ್ಯಾಹ್ನದ ಊಟದ ಶಾಸ್ತ್ರ ಮಾಡಿ ಮುಗಿದ ನಂತರ ಟಿವಿಯಲ್ಲಿ ಯಾವುದೋ ಮೂರ್ನಾಲ್ಕು ಬಾಗಿಲುಗಳ ಧಾರಾವಾಹಿ ಕಳೆದಿರುತ್ತದೆ. ಅವನ್ನೆಲ್ಲ ನೋಡಿದ ಹಾಗೇ ಮಾಡುವ ವೇಳೆಗೆ ಇಳಿಸಂಜೆ ಆವರಿಸಿ ಮನಸ್ಸೆಲ್ಲ ಖಾಲಿ ಖಾಲಿಯಾದ ಅನುಭವ. ಮತ್ತೆ ಸಂಜೆಯ ಊಟಕ್ಕೆ ಮಾಡಬೇಕಲ್ಲ ಎನ್ನುವ ಆಲೋಚನೆ ವಾಣಿಯದ್ದು. ಮನೆಯಲ್ಲಿ ಅತ್ತೆ-ಮಾವ ಬೇಗನೆ ಊಟ ಮಾಡಿದರೂ ಗಂಡ ಬಂದ ನಂತರವೇ ಊಟ ಮಾಡಬೇಕು. ಇದು ಅತ್ತೆ ಹೊರಡಿಸಿದ ಫರ್ಮಾನು. ಆದ ಕಾರಣ ಎಷ್ಟೇ ಹಸಿವಾಗಿದ್ದರೂ ತಡರಾತ್ರಿ ಬರುವ ಗಂಡನಿಗಾಗಿ ಕಾಯಲೇ ಬೇಕು. ಆ ವೇಳೆಗೆ ಮತ್ತೆ ಟಿವಿಯ ಸಾನ್ನಿಧ್ಯ ಲಭ್ಯ. ತರಹೇವಾರಿ ಧಾರಾವಾಹಿಗಳು. ಹೆಚ್ಚಿನವುಗಳು ಅತ್ತೆಗೆ ಇಷ್ಟ. ಆದ್ದರಿಂದ ಅತ್ತೆಗೆ ಏನಿಷ್ಟವೋ ಅದನ್ನೇ ನೋಡಬೇಕು. ಬೋರಾದರೂ ಪ್ರಶ್ನೆ ಮಾಡುವಂತಿಲ್ಲ. ಚಾನಲ್ ಬದಲು ಮಾಡುವಂತಿಲ್ಲ.
                     ರಾತ್ರಿ ಬರುವ ಗಂಡನನ್ನು ಕಾಯುವ ವಾಣಿಗೆ ಗಂಡ ಬಂದ ನಂತರ ಮನಸ್ಸಿನಲ್ಲಿ ಎಷ್ಟೇ ಬೇಸರವಿದ್ದರೂ ಚೈತನ್ಯಯುತವಾಗಿದ್ದೇನೆ, ಖುಷಿಯಿಂದ ಇದ್ದೇನೆ ಎಂದು ತೋರಿಸಬೇಕು. ಮೊದ ಮೊದಲು ಈ ಭಾವಗಳು ನಾಟಕೀಯ ಎನ್ನಿಸಿದರೂ ಈಗ ಅದು ರೂಢಿಯಾಗಿದೆ. ಗಂಡ ಹೆಚ್ಚಿನ ದಿನ ಶಿರಸಿಯಲ್ಲೇ ಊಟ ಮಾಡಿ ಬರುತ್ತಾನೆ. ಅಂತಹ ದಿನಗಳಲ್ಲೆಲ್ಲ ತಾನೊಬ್ಬನೇ ಮೌನದಿಂದ ಊಟಮಾಡಿ ಎದ್ದು ಬರುವಾಗ ಆಕೆಗೆ ಜೊತೆಯಾಗುವುದು ನಿಟ್ಟುಸಿರು. ಊಟ ಮುಗಿಸಿ ಮನೆವಾರ್ತೆಯನ್ನು ಮುಗಿಸುವ ವೇಳೆಗೆ ಗಂಡ ಹಾಸಿಗೆಗೆ ಕರೆದಿರುತ್ತಾನೆ. ಆತನನ್ನು ರಮಿಸಿ, ಮನದಣಿಯೆ ಖುಷಿ ಪಡುವಲ್ಲಿಗೆ ವಾಣಿಯ ದಿನವೊಂದು ಸುಮ್ಮನೆ ಕಳೆದುಹೋಗುತ್ತದೆ.
                    ಇಂತಹ ಏಕತಾನತೆಯ ದಿನಗಳಲ್ಲೇ ಒಮ್ಮೆ ವಾಣಿಗೆ ನೆನಪಾದದ್ದು ವಿನಾಯಕ. ತಾನೇ ಮುಂದಾಗಿ ವಿನಾಯಕನಿಗೆ ಪ್ರಪೋಸ್ ಮಾಡಿ ಬಿಡಬೇಕಿತ್ತು ಎನ್ನಿಸಿದ್ದೂ ಸುಳ್ಳಲ್ಲ. ತಾನು ಒಂಚೂರು ಧೈರ್ಯ ಮಾಡಿ ಏನಾದರಾಗಲಿ ಎಂದು ವಿನಾಯಕನಿಗೆ ಪ್ರಪೋಸ್ ಮಾಡಿಬಿಟ್ಟಿದ್ದರೆ ಬದುಕು ಹೀಗೆ ಖಂಡಿತ ಇರುತ್ತಿರಲಿಲ್ಲ ಎಂದುಕೊಮಡಳು. ಯಾಕೋ ತನ್ನ ಮನಸ್ಸಿನ ಭಾವನೆಗಳನ್ನು ವಿನಾಯಕನ ಬಳಿ ಹೇಳಿಕೊಳ್ಳಬೇಕು ಎಂದುಕೊಂಡಳು ವಾಣಿ. ವಿನಾಯಕನಿಗೆ ಪೋನ್ ಮಾಡಿಬಿಡಲಾ ಎಂದುಕೊಂಡಳು. ಆದರೆ ಪೋನ್ ಮಾಡಲು ಧೈರ್ಯ ಸಾಕಾಗಲಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ಈಗ ತಾನು ಪೋನ್ ಮಾಡುವುದು ಅಷ್ಟು ಸಮಂಜಸವಾಗಲಾರದು ಎಂದುಕೊಂಡಳು.
                  `ಹಾಳಾದವನು.. ಎಷ್ಟೆಲ್ಲ ಇಷ್ಟಪಟ್ಟಿದ್ದೆ. ಆತನಿಗೂ ಖಂಡಿತ ನನ್ನ ಮೇಲೆ ಮನಸ್ಸಿದ್ದೇ ಇರುತ್ತದೆ. ಪ್ರಪೋಸ್ ಮಾಡಲಿಕ್ಕೇನಾಗಿತ್ತು ಧಾಡಿ..? ನನಗೆ ಈ ಜಂಜಡಗಳು ಇರುತ್ತಿರಲಿಲ್ಲವೇನೋ. ಬೇರೆ ತೆರನಾದ ಬದುಕನ್ನು ಬಾಳಬಹುದಿತ್ತೇನೋ. ನಾನು-ಅವನು ಇಬ್ಬರೇ ಇರಬಹುದಾಗಿತ್ತೇನೋ..' ಎಂದೆಲ್ಲಾ ಎಂದುಕೊಂಡವಳಿಗೆ ವಿನಾಯಕನಾದರೂ ಒಮ್ಮೆ ಪೋನ್ ಮಾಡಬಾರದೇ ಅನ್ನಿಸಿತ್ತು. ಇನ್ನು ಪೋನ್ ಮಾಡಿ ಏನು ಪ್ರಯೋಜನ ಎಂದುಕೊಂಡಳು.

***
                ಶಿರಸಿ ಜಾತ್ರೆಯ ನೆಪದಿಂದ ವಿನಾಯಕ ಬೆಂಗಳೂರಿನಿಂದ ಊರಿಗೆ ಮರಳಿದ್ದ.  ವೀಕೆಂಡಿನಲ್ಲಿ ಜಾತ್ರೆ ತಿರುಗಲು ದೋಸ್ತರು ಕರೆದಿದ್ದರು. ಹೋಗಿದ್ದ. ಜಾತ್ರೆಯೆಂಬ ಜನಜಂಗುಳಿ ವಿನಾಯಕನನ್ನು ಬೇರೆಯ ಲೋಕಕ್ಕೆ ಒಯ್ದಿತ್ತು. ಜಾತ್ರೆಯಲ್ಲಿ ಮಾರಿಕಾಂಬಾ ದೇವಿಯ ದರ್ಶನದ ನೆಪದಲ್ಲಿ ಪೇಟೆ ಸುತ್ತಲು ದೋಸ್ತರ ಜೊತೆಗೆ ಹೊರಟಿದ್ದ ವಿನಾಯಕ. ಗಿಜುಗುಡುವ ಜನಸಾಗರದಲ್ಲಿ ಯಾರ್ಯಾರದ್ದೋ ಮೈಗೆ ಮೈಯನ್ನು ತಾಗಿಸುತ್ತ, ಒಳಗೊಳಗೆ ಖುಷಿ ಪಡುತ್ತ ವಿನಾಯಕ ಹಾಗೂ ದೋಸ್ತರ ದಂಡು ಹೊರಟಿದ್ದು. ಕೋಟೆಕೆರೆಯ ಸರ್ಕಸ್ಸು, ಟೊರಟೊರ, ಜಾಯಿಂಟ್ ವೀಲ್, ಕ್ರೊಕೋಡೈಲ್, ದೋಣಿ ಸೇರಿದಂತೆ ತರಹೇವಾರಿ ಮನರಂಜನೆಯನ್ನು ಪಡೆದುಕೊಂಡು ವಾಪಾಸಾಗುತ್ತಿದ್ದಾಗ ವಿನಾಯಕನ ಕಣ್ಣಿಗೆ ವಾಣಿ ಬಿದ್ದಳು. ವಿನಾಯಕ ಬೇಕಂತಲೇ ಕಣ್ತಪ್ಪಿಸಲು ಯತ್ನಿಸಿದ. ಅದೇ ಸಮಯಕ್ಕೆ ವಾಣಿಯೂ ವಿನಾಯಕನತ್ತ ನೋಡಿದಳು. ಒಮ್ಮೆ ಇಬ್ಬರಲ್ಲೂ ಹಳೆಯ ದಿನಗಳು ನೆನಪಾದವು.
                 ದೋಸ್ತರ ಜೊತೆಗೆ ಬಂದಿದ್ದ ವಿನಾಯಕನನ್ನು ವಾಣಿ ದೂರದಿಂದಲೇ ಅಳೆದಳು. ವಿನಾಯಕ ಆಕೆಯನ್ನೂ ಆಕೆಯ ಪಕ್ಕದಲ್ಲಿ ಬರುತ್ತಿದ್ದ ಗಂಡನನ್ನೂ ನೋಡಿದಂತೆ ಮಾಡಿ ಮುಖ ತಿರುಗಿಸಲು ಯತ್ನಿಸಿದ. ದೋಸ್ತರ ಬಳಿ ಬೇರೆ ಕಡೆಗೆ ಹೋಗೋಣ ಎಂದು ಹೇಳಿ ಒತ್ತಾಯ ಮಾಡಲು ಯತ್ನಿಸಿದ. ಆದರೆ ದೋಸ್ತರು ವಾಣಿ ಕಂಡ ದಿಕ್ಕಿನತ್ತಲೇ ಸಾಗಿದರು. ಕೊನೆಗೊಮ್ಮೆ ವಾಣಿ-ವಿನಾಯಕ ಎದುರಾಬದರಾದರು.
                 ಅವಳೇ ಮಾತಾಡಿಸಲಿ ಎಂದುಕೊಂಡ ವಿನಾಯಕ. ಮಾತಾಡ್ಸೋ ಮಾರಾಯಾ ಎಂದುಕೊಂಡಳು. ಇಬ್ಬರಲ್ಲಿ ಯಾರೊಬ್ಬರೂ ಮಾತನಾಡಿಸುವ ಲಕ್ಷಣಗಳಿರಲಿಲ್ಲ. ಕೊನೆಗೆ ವಾಣಿಯೇ `ಅರೇ ವಿನಾಯ್ಕಾ... ಅರಾಮನಾ..?' ಎಂದಳು.
                ಮುಗುಳ್ನಕ್ಕ ವಿನಾಯಕ `ಹೇಯ್ ವಾಣಿ.. ಎಂತಾ ಸರ್ ಪ್ರೈಸ್ ಮಾರಾಯ್ತಿ.. ಫುಲ್ ಬಿಂದಾಸ್.. ನೀ ಹೆಂಗಿದ್ದೆ..?' ಎಂದು ಕೇಳುತ್ತಿದ್ದಂತೆ ಇತ್ತ ವಿನಾಯಕನ ದೋಸ್ತರು ಹಾಗೂ ಅತ್ತ ವಾಣಿಯ ಗಂಡ ಇವರಿಬ್ಬರನ್ನೂ ಬೆಕ್ಕಸ ಬೆರಗಿನಿಂದ ನೋಡತೊಡಗಿದ್ದರು.
               `ಇಂವ ವಿನಾಯ್ಕ ಹೇಳಿ. ನನ್ನ ಕ್ಲಾಸಿನವನೇಯಾ.. ಡಿಗ್ರಿಲಿ ಓದಕಿದ್ರೆ ಬರ್ತಿದ್ದ.. ನೆಂಟರಾಗವು..' ಗಂಡನಿಗೆ ಪರಿಚಯಿಸಿದಳು ವಾಣಿ. ಹಲೋ ಎಂದದ್ದು ಆಕೆಯ ಗಂಡ. ಅದಕ್ಕೆ ಪ್ರತಿಯಾಗಿ ತಾನೂ ತನ್ನ ದೋಸ್ತರನ್ನು ಪರಿಚಯ ಮಾಡಿಸಿದ ವಿನಾಯಕ.
               ಮುಂದಿನ ಮಾತುಗಳಲ್ಲಿ ವಾಣಿ ವಿನಾಯಕನ ಕೆಲಸ, ವೃತ್ತಿ, ಬೆಂಗಳೂರಿನಿಂದ ಬಂದಿದ್ದು, ಮನೆಯವರ ಬಗ್ಗೆಯೆಲ್ಲಾ ವಿಚಾರಿಸಿದಳು. ವಿನಾಯಕನೂ ಪ್ರತಿಯಾಗಿ ಉತ್ತರಿಸಿ ಕೆಲವು ಪ್ರಶ್ನೆಗಳನ್ನು ಕೇಳಿದ.
               `ಅಲ್ದಾ ವಿನಾಯಕಾ.. ರಾಶಿ ಬಡಿ ಬಿದ್ದೋಜ್ಯಲಾ.. ಎಂತಕ್ಕಾ.. ಸರಿಯಾಗಿ ಊಟ-ತಿಂಡಿ ಮಾಡ್ತಾ ಇದ್ಯಾ ಇಲ್ಯಾ..?' ಎಂದು ವಾಣಿ ಕೇಳುವ ವೇಳೆಗೆ ವಿನಾಯಕನ ಕಣ್ಣಲ್ಲಿ ನೀರು ಬರುವುದೊಂದೇ ಬಾಕಿ.
               ಕೀಟಲೆಯ ಸ್ವಭಾವದ ವಿನಾಯಕನ ದೋಸ್ತರಲ್ಲೊಬ್ಬ `ಅದೆಂತಾ ಕೇಳ್ತೀರಿ.. ಅಂವ ಡಿಗ್ರಿಯಲ್ಲಿ ಯಾರನ್ನೋ ಲವ್ ಮಾಡಿದ್ನಡಾ.. ಕೊನೆಗೂ ಹೇಳ್ಕಂಬಲೆ ಆಜಿಲ್ಯಡಾ.. ಅದೇ ಮನಸ್ಸಿನಲ್ಲಿ ಇದ್ದಾ.. ಲವ್ ಫೇಲ್ಯೂರ್ ಆದವರ ಹಣೇಬರಹವೇ ಇಷ್ಟು ನೋಡಿ..' ಎಂದಾಗ ವಾಣಿಯ ಗಂಡನಾದಿಯಾಗಿ ಎಲ್ಲರೂ ನಕ್ಕರು. ವಾಣಿ ಹಾಗೂ ವಿನಾಯಕ ಇಬ್ಬರೂ ನಗಲಿಲ್ಲ. ಇಬ್ಬರ ಕಣ್ಣಲ್ಲೂ ನೀರು ಇಳಿಯಲು ತವಕಿಸುತ್ತಿತ್ತು.
                ಅಷ್ಟರಲ್ಲಿ ದೋಸ್ತರು ವಿನಾಯಕನನ್ನು ಬೇರೆಡೆಗೆ ಕರೆದೊಯ್ದರು. ವಾಣಿ ಹಾಗೂ ಆಕೆಯ ಗಂಡ ಮತ್ತೆಲ್ಲೋ ಜಾತ್ರೆಯಲ್ಲಿ ಕಳೆದು ಹೋದರು. ಎಂದೋ ತಿಳಿಯಬೇಕಿದ್ದ ವಿಷಯ ಈ ರೂಪದಲ್ಲಿ ತಿಳಿಯುತ್ತದೆ ಎಂದು ಇಬ್ಬರೂ ಅಂದುಕೊಂಡಿರಲಿಲ್ಲ. ಇಬ್ಬರ ಮನಸ್ಸೂ ಭಾವನೆಗಳ ಮಳೆಯಲ್ಲಿ ತೊಯ್ದು ತೊಪ್ಪೆಯಾಗಿತ್ತು. ಜಾತ್ರೆಯ ಜನಸಮುದ್ರದಲ್ಲಿ ಕಣ್ಣೀರು ಉರುಳಿದ್ದು ಯಾರಿಗೂ ಕಾಣಲಿಲ್ಲ.