Tuesday, March 18, 2014

ಲೋಕಸಭಾ ಟಿಕೆಟ್ ಪಡೆಯಲು ಕೆಲವು ಸೂತ್ರಗಳು

                 ಲೋಕಸಭಾ ಟಿಕೆಟ್ ಬೇಕಾದರೆ ತಾವು ಈ ಸೂತ್ರಗಳನ್ನು ಅಳವಡಿಸಿಕೊಳ್ಳಿ. ನಿಮಗೆ ಟಿಕೆಟ್ ಲಭ್ಯವಾಗುತ್ತದೆ. ಈ ಸೂತ್ರಗಳನ್ನು ಗಂಭೀರವಾಗಿ ಪರಿಗಣಿಸಿದರೆ ಟಿಕೆಟ್ ಸಿಗಬಲ್ಲದು. ಫನ್ನಿಯಾಗಿ ತೆಗೆದುಕೊಂಡರೆ ನಿಮ್ಮ ಮೂಡು ಸರಿಯಾಗಬಹುದು. ಯಾವ ಯಾವ ಪಕ್ಷಗಳ ಟಿಕೆಟ್ ಬೇಕಾದರೆ ಯಾವ ಯಾವ ರೀತಿ ಮಾಡಬೇಕು ಎನ್ನುವುದು ಇಲ್ಲಿದೆ ನೋಡಿ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಪಕ್ಷಗಳು ಹಾಗೂ ಇತರೆ ಕೆಲವು ಪಕ್ಷಗಳ ಟಿಕೆಟ್ ಬೇಕಾದಲ್ಲಿ ನೀವು ಅನುಸರಿಸಬೇಕಾದ ಸೂತ್ರಗಳು ಇಲ್ಲಿವೆ. ನಿಮಗೆ ಖಂಡಿತ ಇಷ್ಟವಾಗಬಹುದು.

ಬಿಜೆಪಿ ಟಿಕೆಟ್ ಬೇಕಾದರೆ
1) ದೇಶ ಕಟ್ಟುವ ಮಾತುಗಳನ್ನು ದೊಡ್ಡ ದೊಡ್ಡ ರೂಪದಲ್ಲಿ ಆಡಿ.
2) ಆಗಾಗ ರಾಮ ಹಾಗೂ ರಾಮಮಂದಿರದ ಭಜನೆ ಮಾಡಿ
3) ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮದ ಕುರಿತು ಮಾತನಾಡಿ
4) ಆಗಾಗ ಮುಸ್ಲಿಮರಲ್ಲಿ ನಮ್ಮ ತಪ್ಪಿದ್ದರೆ ಕ್ಷಮೆ ಇರಲಿ ಎಂದೂ ಹೇಳಿ
5) ಭ್ರಷ್ಟಾಚಾರದ ವಿರುದ್ಧ ಉದ್ದುದ್ದದ ಭಾಷಣ ಬಿಗಿಯಿರಿ
6) ನಮೋ ಭಜನೆ ಮಾಡಿ
7) ಪತ್ರಿಕೆಗಳಲ್ಲಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪ್ರೇಮದ ಕುರಿತು ಸರಣಿ ಲೇಖನಗಳನ್ನು, ಅಂಕಣಗಳನ್ನು ಬರೆಯಿರಿ


ಕಾಂಗ್ರೆಸ್ ಟಿಕೆಟ್ ಬೇಕಾದರೆ
1) ಮೋದಿಯವರನ್ನು ಯದ್ವಾ ತದ್ವಾ ಬಯ್ಯಿರಿ
2) ಮೋದಿಯವರನ್ನು ಕೋಮುವಾದಿ ಎನ್ನಿ
3) ರಾಹುಲ್ ಗಾಂಧಿ ಮುಂದಿನ ಪ್ರಧಾನಿ ಎಂದು ಆಗಾಗ ಹೇಳಿ
4) ಸೋನಿಯಾಗಾಂದಿಗಿಂತ ಮಹಾನ್ ನಾಯಕರಿಲ್ಲ ಎಂದು ಹೇಳುತ್ತಿರಿ
5) ಹಿಂದುಳಿದವರು, ಅಲ್ಪಸಂಖ್ಯಾತರ ಧ್ಯೇಯವೇ ಪರಮಗುರಿ ಎಂದು ಭಾಷಣ ಕೊಚ್ಚಿ
6) ಮುಸ್ಲಿಮರನ್ನು ಎಷ್ಟು ಸಾಧ್ಯವೋ ಅಷ್ಟು ಓಲೈಕೆ ಮಾಡಿ
7) ದೇವಸ್ಥಾನವೊಂದನ್ನು ಬಿಟ್ಟು ಆಗಾಗ ಚರ್ಚು, ಮಸೀದಿಗಳಿಗೆ ಹೋಗಿ ಬರುತ್ತಿರಿ

ಜೆಡಿಎಸ್ ಟಿಕೆಟ್ ಬೇಕಾದರೆ
1) ಸ್ವಲ್ಪ ಕಾಲ ಬಿಜೆಪಿ, ಸ್ವಲ್ಪ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದು ಬಂಡೆದ್ದು ಬನ್ನಿ
2) ಅಪ್ಪ-ಮಗನ ಭಜನೆ ಮಾಡಿ
3) ನಿದ್ದೆಯನ್ನು ನಿಮ್ಮ ಖಾಯಂ ಹವ್ಯಾಸವನ್ನಾಗಿ ಮಾಡಿಕೊಳ್ಳಿ
4) ಬೇರೆ ಪಕ್ಷದಿಂದ ಪಕ್ಷಾಂತರ ಮಾಡಿ ಬಂದ ತಕ್ಷಣ ಆ ಪಕ್ಷಗಳನ್ನು ಯದ್ವಾ ತದ್ವಾ ಬೈಯಿರಿ
5) ತಮ್ಮನ್ನು ಬಿಟ್ಟು ಉಳಿದವರೆಲ್ಲರೂ ಮೋಸಗಾರರು ಎಂದು ಹೇಳಿರಿ
6) ಅಪ್ಪ-ಮಗ-ಸೊಸೆ-ಮೊಮ್ಮಗನ ಪೋಟೋಕ್ಕೆ ಆಗಾಗ ಪೂಜೆ ಮಾಡುವ ಪೋಸು ಕೊಡಿ
7) ಭವಿಷ್ಯ, ಜಾತಕ, ನಂಬಿಕೆ, ಮಾಟ, ಮಂತ್ರ ಇವುಗಳಲ್ಲೆಲ್ಲ ಸಿಕ್ಕಾಪಟ್ಟೆ ನಂಬಿಕೆ ಇದೆ ಎನ್ನುವುದನ್ನು ಆಗಾಗ ಪ್ರೂವ್ ಮಾಡಿ ತೋರಿಸಿ

ಉಳಿದಂತೆ ಇರುವುದು ದಿ ಗ್ರೇಟ್ ಆಮ್ ಆದ್ಮಿ ಪಕ್ಷ.
1) ಭ್ರಷ್ಟಾಚಾರದ ವಿರೋಧಿ ಉಪವಾಸ ಮಾಡಿ
2) ಭ್ರಷ್ಟಾಚಾರ ವಿರೋಧಿ ಭಾಷಣ ಹಾಗೂ ಪ್ರತಿಭಟನೆಗಳನ್ನು ಸರಣಿಗಳಂತೆ ಮಾಡಿ, ಆಗಾಗ ಮಾಧ್ಯಮದವರನ್ನು ಜೈಲಿಗೆ ಅಟ್ಟುತ್ತೇನೆ ಎಂದು ಗುಡುಗಿ
3) ನಿಮಗೆ ಯಾರು ಆಗುವುದಿಲ್ಲವೋ ಅವರನ್ನು ನರೇಂದ್ರ ಮೋದಿ ಹಾಗೂ ಅಂಬಾನಿ ಏಜೆಂಟ್ ಎಂದು ಬಯ್ಯಿರಿ
4) ಜನಸಾಮಾನ್ಯ ಎಂದು ಬಿಂಬಿಸಿಕೊಳ್ಳಲು ರೈಲು, ಬೈಕು, ಕಾರು, ಸೈಕಲ್ಲು, ಬಸ್ಸು ಸೇರಿದಂತೆ ಎಷ್ಟು ಸಾಧ್ಯವೋ ಅಷ್ಟು ಜನಸಾಮಾನ್ಯರ ಗಾಡಿಯಲ್ಲಿ ಓಡಾಡಿ ಅವರಿಗೆ ಕಿರಿ ಕಿರಿ ಉಂಟು ಮಾಡಿ
5) ಕುತ್ತಿಗೆಗೆ ಒಂದು ಮಫ್ಲರ್ ಹಾಕಿಕೊಂಡು ಸದಾಕಾಲ ಓಡಾಡಿ
6) ಯಾವುದೇ ಕ್ಷೇತ್ರದಲ್ಲಿ ಬೇಕಾದರೂ ಗುರುತಿಸಿ ತಾಕತ್ತಿದ್ದರೆ ನನ್ನ ವಿರುದ್ಧ ಸ್ಪರ್ಧೆ ಮಾಡಿ ಎಂದು ಮೋದಿಗೆ ಸವಾಲು ಹಾಕಿ
7) ಪ್ರತಿಭಟನೆಯ ವಿರುದ್ಧ ಪ್ರತಿಭಟನೆ ಮಾಡಿ ನೀವೊಬ್ಬ ಉಗ್ರ ಪ್ರತಿಭಟನಾಕಾರ ಎಂಬುದನ್ನು ಸಾಬೀತು ಮಾಡಿ

Monday, March 17, 2014

ಹೇಳದೇ ಉಳಿದ ಮಾತು (ಕಥಾ ಸರಣಿ ಭಾಗ-2)

 `ಹಲೋ...
ವಾಣಿ ಇದ್ದಾ..?' ವಿನಾಯಕ ಮನಸ್ಸು ತಾಳಲಾರದೇ ಪೋನ್ ಮಾಡಿದ್ದ.
                   ಆತ ಪೋನ್ ಮಾಡುವ ವೇಳೆಗಾಗಲೇ ವಾಣಿಯ ಮದುವೆಯಾಗಿ ಮೂರ್ನಾಲ್ಕು ತಿಂಗಳು ಕಳೆದಿತ್ತು.
`ಇಲ್ಯಲಾ ತಮಾ.. ನೀ ಯಾರಾ..? ವಾಣಿ ಅದರ ಗಂಡನ ಮನೆಲ್ಲಿ ಇದ್ದಲ್ಲ..' ವಾಣಿಯ ಆಯಿ ಉತ್ತರ ನೀಡಿದ್ದಳು.
                   `ಹೌದಾ.. ಯಂಗೆ ಅಮೃತಬಳ್ಳಿಮನೆಯಾತು.. ವಿನಾಯ್ಕ ಹೇಳಿ ಯನ್ನ ಹೆಸ್ರು. ವಾಣಿ ಕ್ಲಾಸಿನವ್ವ. ಅವಳ ಪ್ರೆಂಡು.. ಯಂಗೆ ವಾಣಿ ಮನೆಯ ಪೋನ್ ನಂಬರ್ ಸಿಗ್ಲಕ್ಕಾ..?' ವಿನಾಯಕ ಕೇಳಿದ್ದ.
                    `ಓ.ವಿನಾಯಕನನಾ ತಮಾ.. ಅರಾಮ್ ಇದ್ಯಾ.. ವಾಣಿ ಆಗಾಗ ಹೇಳ್ತಾ ಇರ್ತಿತ್ತಾ.. ನೀನು ಯಂಗಳ ನೆಂಟರಡಲಾ..' ವಾಣಿಯ ಆಯಿ ಉತ್ತರ ನೀಡಿದ್ದಳು.
                    `ಹುಂ.. ಹೌದಡಾ.. ಯಾವಾಗಲೋ ವಾಣಿ ಹೇಳಿದ ನೆನಪು.. ವಾಣಿಗೆ ಪೋನ್ ಮಾಡಿದ್ರೆ ಸಿಗ್ಲಕ್ಕಾ ಈಗ..?' ವಿನಾಯ್ಕ ಮತ್ತೆ ಕೇಳಿದ್ದ..
                    `ತಮಾ ನಿನ್ ಆಯಿ ಅಪ್ಪಯ್ಯ ಎಲ್ಲಾ ಅರಾಮ್ ಇದ್ವಾ.. ಎಂತಾ ಮಾಡ್ತಾ ಇದ್ದೆ ನೀನು ಈಗ..?' ವಾಣಿಯ ಆಯಿ ವಿನಾಯಕನ ಪ್ರಶ್ನೆಗೆ ಉತ್ತರಿಸದೇ ತಾನೇ ಪ್ರಶ್ನೆ ಮಾಡಿದಳು.
                    `ಆನು ಬೆಂಗಳೂರಲ್ಲಿ ಇದ್ದಿ ಈಗ. ಯಮ್ಮನೆಲಿ ಎಲ್ಲಾ ಅರಾಮ್ ಇದ್ದ. ನಂಗೆ ಕಾಲೇಜು ದಿನಗಳಲ್ಲಿ ವಾಣಿ ಪ್ರೆಂಡ್ ಆಗಿತ್ತು. ಇವತ್ತು ನೆನಪಾತು ಮಾತಾಡನಾ ಹೇಳಿ ಮಾಡಿದ್ದಿ.. ಅದರ ಮನೆಯ ನಂಬರ್ ಇತ್ತಿಲ್ಲೆ.. ಹಂಗಾಗಿ ನಿಮ್ಮನಿಗೆ ಮಾಡಿದ್ದು..' ವಿನಾಯಕ ಇದ್ದ ವಿಷಯವನ್ನು ಹೇಳಿದ್ದ.
                     ಕೊನೆಗೂ ಉತ್ತರ ನೀಡಲು ಮುಂದಾದ ವಾಣಿಯ ಆಯಿ `ತಮಾ ಆನು ನಂಬರ್ ಕೊಡ್ತಿ ತಡಿ.. ಪಟ್ಟಿ ನೋಡ್ಕ್ಯಂಡು ಹೇಳವು............... ....... ........ ...... ಹಿಡಿ ಇಕಾ ಬರಕಾ..' ವಿನಾಯಕ ಬರೆದುಕೊಂಡ. ವಾಣಿಯ ಆಯಿಯೇ ಮುಂದುವರಿಸಿದಳು `... ಆದರೆ ತಮಾ ಒಂದ್ ಮಾತು ಹೇಳಲಾ.. ನೀನು ಈಗ ವಾಣಿಗೆ ಪೋನ್ ಮಾಡದು ಯಂಗೆಂತಕ್ಕೋ ಸರಿ ಕಾಣ್ತಿಲ್ಲೆ ತಮಾ.. ವಾಣಿಯ ಅತ್ತೆಗೆ ಇದೆಲ್ಲಾ ಸರಿ ಕಾನ್ತಿಲ್ಲೆ.. ರಾಶಿ ಕಟ್ಟು ನಿಟ್ಟಲಾ..' ಎಂದಾಗ ವಿನಾಯಕ ಒಮ್ಮೆ ಪೆಚ್ಚಾದ ಅಷ್ಟೇ ಅಲ್ಲದೇ ವಾಣಿಗೆ ಪೋನ್ ಮಾಡಲೋ ಬೇಡವೋ ಎನ್ನುವ ದ್ವಂದ್ವಕ್ಕೆ ಸಿಲುಕಿದ. ಮನಸು ಒಮ್ಮೆ ಪೋನ್ ಮಾಡು ಎಂದರೆ ಮತ್ತೊಮ್ಮೆ ಬೇಡ ಎನ್ನುವಂತೆ ಅನ್ನಿಸುತ್ತಿತ್ತು. ಪೋನ್ ಹಿಡಿದುಕೊಂಡೇ ಇದ್ದ ವಿನಾಯಕನಿಗೆ ಇದೇ ಆಲೋಚನೆಯಲ್ಲಿ ವಾಣಿಯ ಆಯಿ ಮತ್ತೇನೋ ಹೇಳುತ್ತಿದ್ದರೂ ಕಿವಿಗೆ ಹೋಗಲಿಲ್ಲ. ಎಲ್ಲ ಮಾತುಗಳಿಗೂ ಹೂ.. ಹೂ ಎಂದು ಪೋನಿಟ್ಟ.
                       ಪೋನಿಟ್ಟ ಘಳಿಗೆಯಿಂದ ಹೊಸದೊಂದು ದ್ವಂದ್ವ ವಿನಾಯಕನನ್ನು ಕಾಡಹತ್ತಿತು. ತಾನೀಗ ವಾಣಿಗೆ ಪೋನ್ ಮಾಡಿದರೆ ಆಕೆ ಮಾತನಾಡುತ್ತಾಳೋ ಇಲ್ಲವೋ ಎಂಬ ಬಾವ ಕಾಡಿತು. ಒಂದು ವೇಳೆ ಮಾತನಾಡಿದರೂ ಏನು ಮಾತಾಡಬಹುದು..?  ಪೋನ್ ಮಾಡಿದ ತನ್ನ ಮೇಲೆ ಬೈದು ಇನ್ನು ಮೇಲೆ ಹೀಗೆ ಮಾಡಬೇಡ ಎಂದರೆ..? ವಾಣಿಯ ಬದಲು ಅವಳ ಮನೆಯಲ್ಲಿ ಆಕೆಯ ಅತ್ತೆಯೋ, ಮಾವನೋ, ಗಂಡನೋ ಪೋನ್ ತೆಗೆದುಕೊಂಡರೆ ತಾನ್ಯಾರು ಎಂದು ಹೇಗೆ ಹೇಳುವುದು? ವಾಣಿಯ ಗೆಳೆಯ ತಾನು ಎಂದರೆ ಅವರು ಏನೆಂದುಕೊಂಡಾರು..? ತಾನು ಮಾಡಿದ ಒಂದೇ ಒಂದು ಪೋನು ವಾಣಿಯ ಬದುಕನ್ನು ಹಾಳು ಮಾಡಿದರೆ ಏನು ಮಾಡೋದು..? ಸುಮ್ಮನೆ ಮಾಡಿದೆ ಎನ್ನಲಾ..? ಬಿಟ್ಟು ಬಿಡದೆ ವಿನಾಯಕ ಆಲೋಚಿಸಿದ. ಕೊನೆಗೊಮ್ಮೆ ಪೋನ್ ಮಾಡುವುದು ಬೇಡ ಎನ್ನುವ ನಿರ್ಧಾರಕ್ಕೆ ಬಂದ.
                     `ಛೇ... ಅಷ್ಟು ಪ್ರೀತಿಯಿತ್ತಲ್ಲ.. ನಾನು ಪ್ರಪೋಸ್ ಮಾಡಿಬಿಡಬೇಕಿತ್ತು.. ಅವಳು ನನ್ನನ್ನು ತಿರಸ್ಕರಿಸಿದ್ದರೆ ಮನಸ್ಸಿಗೆ ಸಮಾಧಾನವಾದರೂ ಇರುತ್ತಿತ್ತು. ಆದರೆ ಈಗ ಮನಸ್ಸಿನಲ್ಲಿ ನೂರಾರು ಪ್ರಶ್ನೆಗಳು ಹಾಗೆಯೇ ಉಳಿದುಹೋಗಿಬಿಟ್ಟವು. ಅಲ್ಲಾ ಅವಳಾದರೂ ನನ್ನ ಬಳಿ ನೀನಂದ್ರೆ ನನಗಿಷ್ಟ ಕಣೋ ಎಂದು ಹೇಳಬಹುದಾಗಿತ್ತು..' ಎಂದು ಹಲುಬಿಕೊಂಡ ವಿನಾಯಕ `ಷಿಟ್..' ಎಂದು ಒಮ್ಮೆ ತಲೆಕೊಡವಿಕೊಂಡ.

***
                        ವಿನಾಯಕ ಈಗ ಹೇಗಿರಬಹುದು..? ತಾನೇನೋ ಮದುವೆಯಾಗಿ ಬಂದು ಬಿಟ್ಟೆ. ಆದರೆ ವಿನಾಯಕನ ಪಾಡು ಯಾವ ರೀತಿ ಇದೆ ಎಂಬುದು ಗೊತ್ತಾಗುತ್ತಿಲ್ಲವಲ್ಲ ಎಂದು ವಾಣಿ ಆಲೋಚಿಸುವ ವೇಳೆಗೆ ಆಕೆಗೆ ತನ್ನ ಸಂಸಾರದ ಅನೇಕ ಮಜಲುಗಳನ್ನು ದಾಟಿದ್ದಳು. ಶಿರಸಿಯಲ್ಲಿ ಕೆಲಸ ಮಾಡುವ ಗಂಡ ಬೆಳಿಗ್ಗೆ ಶಿರಸಿಗೆ ಹೋದರೆ ಬರುವುದು ಕತ್ತಲಾದ ಮೇಲೆಯೆ. ಅಲ್ಲಿಯವರೆಗೂ ಮನೆಯಲ್ಲಿ ತಾನು ಸುಮ್ಮನೇ ಇರಬೇಕು. ಅತ್ತೆಯಿದ್ದಾಳೆ. ಮಾವನೂ ಇದ್ದಾನೆ. ಮನೆಯಲ್ಲಿ ಜಮೀನು ಸಾಕಷ್ಟಿರುವ ಕಾರಣ ಆಳು-ಕಾಳುಗಳೂ ತುಂಬಿದ್ದಾರೆ. ಬೆಳಿಗ್ಗೆ ಅಡಿಗೆ ಮಾಡಿ ಗಂಡನನ್ನು ಶಿರಸಿಗೆ ಕಳಿಸಿದ ನಂತರ ಒಂದೆರಡು ತಾಸುಗಳ ಕಾಲ ಪುರಸೊತ್ತು ಲಭಿಸುತ್ತದೆ. ಅಷ್ಟರಲ್ಲಿ ಅತ್ತೆಯವರು ಬಂದು `ಮಧ್ಯಾಹ್ನಕ್ಕೆ ಎಂತಾ ಆಸೆ ಮಾಡ್ತೆ..? ಬೆಂಡೆಕಾಯಿ ಹಶಿ ಅಂದ್ರೆ ಯಂಗೆ ಪಂಚಪ್ರಾಣ ಅದನ್ನೇ ಮಾಡ್ತ್ಯಾ..?' ಎಂದು ಕೇಳುತ್ತಾರೆ.
                    ಅತ್ತೆ ಹೀಗೆ ಹೇಳುವುದು ತನಗಿಷ್ಟ ಮಾಡು ಎಂಬ ಇನ್ ಡೈರೆಕ್ಟ್ ಆದ ಆರ್ಡರ್ ಎಂಬುದು ವಾಣಿಗೆ ಗೊತ್ತಾಗುತ್ತಿದ್ದರೂ ತನ್ನ ಮಾತಿಗೆ ಗಂಡನ ಮನೆಯಲ್ಲಿ ಬೆಲೆ ಇಲ್ಲ ಎಂಬುದನ್ನು ಮದುವೆಯಾಗಿ ಬಂದ ಹದಿನೈದೇ ದಿನಗಳಲ್ಲಿ ತಿಳಿದುಕೊಂಡಿದ್ದಾಳೆ.  ತನ್ನ ಮಾತಿಗೊಂದೆ ಅಲ್ಲ ತನ್ನ ಭಾವನೆಗಳಿಗೂ ಕಿಮ್ಮತ್ತಿಲ್ಲ ಎಂಬುದು ನಂತರದ ದಿನಗಳಲ್ಲಿ ವಾಣಿಗೆ ಅರಿವಾಗಿದೆ. ಮದ್ಯಾಹ್ನದ ಊಟದ ಶಾಸ್ತ್ರ ಮಾಡಿ ಮುಗಿದ ನಂತರ ಟಿವಿಯಲ್ಲಿ ಯಾವುದೋ ಮೂರ್ನಾಲ್ಕು ಬಾಗಿಲುಗಳ ಧಾರಾವಾಹಿ ಕಳೆದಿರುತ್ತದೆ. ಅವನ್ನೆಲ್ಲ ನೋಡಿದ ಹಾಗೇ ಮಾಡುವ ವೇಳೆಗೆ ಇಳಿಸಂಜೆ ಆವರಿಸಿ ಮನಸ್ಸೆಲ್ಲ ಖಾಲಿ ಖಾಲಿಯಾದ ಅನುಭವ. ಮತ್ತೆ ಸಂಜೆಯ ಊಟಕ್ಕೆ ಮಾಡಬೇಕಲ್ಲ ಎನ್ನುವ ಆಲೋಚನೆ ವಾಣಿಯದ್ದು. ಮನೆಯಲ್ಲಿ ಅತ್ತೆ-ಮಾವ ಬೇಗನೆ ಊಟ ಮಾಡಿದರೂ ಗಂಡ ಬಂದ ನಂತರವೇ ಊಟ ಮಾಡಬೇಕು. ಇದು ಅತ್ತೆ ಹೊರಡಿಸಿದ ಫರ್ಮಾನು. ಆದ ಕಾರಣ ಎಷ್ಟೇ ಹಸಿವಾಗಿದ್ದರೂ ತಡರಾತ್ರಿ ಬರುವ ಗಂಡನಿಗಾಗಿ ಕಾಯಲೇ ಬೇಕು. ಆ ವೇಳೆಗೆ ಮತ್ತೆ ಟಿವಿಯ ಸಾನ್ನಿಧ್ಯ ಲಭ್ಯ. ತರಹೇವಾರಿ ಧಾರಾವಾಹಿಗಳು. ಹೆಚ್ಚಿನವುಗಳು ಅತ್ತೆಗೆ ಇಷ್ಟ. ಆದ್ದರಿಂದ ಅತ್ತೆಗೆ ಏನಿಷ್ಟವೋ ಅದನ್ನೇ ನೋಡಬೇಕು. ಬೋರಾದರೂ ಪ್ರಶ್ನೆ ಮಾಡುವಂತಿಲ್ಲ. ಚಾನಲ್ ಬದಲು ಮಾಡುವಂತಿಲ್ಲ.
                     ರಾತ್ರಿ ಬರುವ ಗಂಡನನ್ನು ಕಾಯುವ ವಾಣಿಗೆ ಗಂಡ ಬಂದ ನಂತರ ಮನಸ್ಸಿನಲ್ಲಿ ಎಷ್ಟೇ ಬೇಸರವಿದ್ದರೂ ಚೈತನ್ಯಯುತವಾಗಿದ್ದೇನೆ, ಖುಷಿಯಿಂದ ಇದ್ದೇನೆ ಎಂದು ತೋರಿಸಬೇಕು. ಮೊದ ಮೊದಲು ಈ ಭಾವಗಳು ನಾಟಕೀಯ ಎನ್ನಿಸಿದರೂ ಈಗ ಅದು ರೂಢಿಯಾಗಿದೆ. ಗಂಡ ಹೆಚ್ಚಿನ ದಿನ ಶಿರಸಿಯಲ್ಲೇ ಊಟ ಮಾಡಿ ಬರುತ್ತಾನೆ. ಅಂತಹ ದಿನಗಳಲ್ಲೆಲ್ಲ ತಾನೊಬ್ಬನೇ ಮೌನದಿಂದ ಊಟಮಾಡಿ ಎದ್ದು ಬರುವಾಗ ಆಕೆಗೆ ಜೊತೆಯಾಗುವುದು ನಿಟ್ಟುಸಿರು. ಊಟ ಮುಗಿಸಿ ಮನೆವಾರ್ತೆಯನ್ನು ಮುಗಿಸುವ ವೇಳೆಗೆ ಗಂಡ ಹಾಸಿಗೆಗೆ ಕರೆದಿರುತ್ತಾನೆ. ಆತನನ್ನು ರಮಿಸಿ, ಮನದಣಿಯೆ ಖುಷಿ ಪಡುವಲ್ಲಿಗೆ ವಾಣಿಯ ದಿನವೊಂದು ಸುಮ್ಮನೆ ಕಳೆದುಹೋಗುತ್ತದೆ.
                    ಇಂತಹ ಏಕತಾನತೆಯ ದಿನಗಳಲ್ಲೇ ಒಮ್ಮೆ ವಾಣಿಗೆ ನೆನಪಾದದ್ದು ವಿನಾಯಕ. ತಾನೇ ಮುಂದಾಗಿ ವಿನಾಯಕನಿಗೆ ಪ್ರಪೋಸ್ ಮಾಡಿ ಬಿಡಬೇಕಿತ್ತು ಎನ್ನಿಸಿದ್ದೂ ಸುಳ್ಳಲ್ಲ. ತಾನು ಒಂಚೂರು ಧೈರ್ಯ ಮಾಡಿ ಏನಾದರಾಗಲಿ ಎಂದು ವಿನಾಯಕನಿಗೆ ಪ್ರಪೋಸ್ ಮಾಡಿಬಿಟ್ಟಿದ್ದರೆ ಬದುಕು ಹೀಗೆ ಖಂಡಿತ ಇರುತ್ತಿರಲಿಲ್ಲ ಎಂದುಕೊಮಡಳು. ಯಾಕೋ ತನ್ನ ಮನಸ್ಸಿನ ಭಾವನೆಗಳನ್ನು ವಿನಾಯಕನ ಬಳಿ ಹೇಳಿಕೊಳ್ಳಬೇಕು ಎಂದುಕೊಂಡಳು ವಾಣಿ. ವಿನಾಯಕನಿಗೆ ಪೋನ್ ಮಾಡಿಬಿಡಲಾ ಎಂದುಕೊಂಡಳು. ಆದರೆ ಪೋನ್ ಮಾಡಲು ಧೈರ್ಯ ಸಾಕಾಗಲಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ಈಗ ತಾನು ಪೋನ್ ಮಾಡುವುದು ಅಷ್ಟು ಸಮಂಜಸವಾಗಲಾರದು ಎಂದುಕೊಂಡಳು.
                  `ಹಾಳಾದವನು.. ಎಷ್ಟೆಲ್ಲ ಇಷ್ಟಪಟ್ಟಿದ್ದೆ. ಆತನಿಗೂ ಖಂಡಿತ ನನ್ನ ಮೇಲೆ ಮನಸ್ಸಿದ್ದೇ ಇರುತ್ತದೆ. ಪ್ರಪೋಸ್ ಮಾಡಲಿಕ್ಕೇನಾಗಿತ್ತು ಧಾಡಿ..? ನನಗೆ ಈ ಜಂಜಡಗಳು ಇರುತ್ತಿರಲಿಲ್ಲವೇನೋ. ಬೇರೆ ತೆರನಾದ ಬದುಕನ್ನು ಬಾಳಬಹುದಿತ್ತೇನೋ. ನಾನು-ಅವನು ಇಬ್ಬರೇ ಇರಬಹುದಾಗಿತ್ತೇನೋ..' ಎಂದೆಲ್ಲಾ ಎಂದುಕೊಂಡವಳಿಗೆ ವಿನಾಯಕನಾದರೂ ಒಮ್ಮೆ ಪೋನ್ ಮಾಡಬಾರದೇ ಅನ್ನಿಸಿತ್ತು. ಇನ್ನು ಪೋನ್ ಮಾಡಿ ಏನು ಪ್ರಯೋಜನ ಎಂದುಕೊಂಡಳು.

***
                ಶಿರಸಿ ಜಾತ್ರೆಯ ನೆಪದಿಂದ ವಿನಾಯಕ ಬೆಂಗಳೂರಿನಿಂದ ಊರಿಗೆ ಮರಳಿದ್ದ.  ವೀಕೆಂಡಿನಲ್ಲಿ ಜಾತ್ರೆ ತಿರುಗಲು ದೋಸ್ತರು ಕರೆದಿದ್ದರು. ಹೋಗಿದ್ದ. ಜಾತ್ರೆಯೆಂಬ ಜನಜಂಗುಳಿ ವಿನಾಯಕನನ್ನು ಬೇರೆಯ ಲೋಕಕ್ಕೆ ಒಯ್ದಿತ್ತು. ಜಾತ್ರೆಯಲ್ಲಿ ಮಾರಿಕಾಂಬಾ ದೇವಿಯ ದರ್ಶನದ ನೆಪದಲ್ಲಿ ಪೇಟೆ ಸುತ್ತಲು ದೋಸ್ತರ ಜೊತೆಗೆ ಹೊರಟಿದ್ದ ವಿನಾಯಕ. ಗಿಜುಗುಡುವ ಜನಸಾಗರದಲ್ಲಿ ಯಾರ್ಯಾರದ್ದೋ ಮೈಗೆ ಮೈಯನ್ನು ತಾಗಿಸುತ್ತ, ಒಳಗೊಳಗೆ ಖುಷಿ ಪಡುತ್ತ ವಿನಾಯಕ ಹಾಗೂ ದೋಸ್ತರ ದಂಡು ಹೊರಟಿದ್ದು. ಕೋಟೆಕೆರೆಯ ಸರ್ಕಸ್ಸು, ಟೊರಟೊರ, ಜಾಯಿಂಟ್ ವೀಲ್, ಕ್ರೊಕೋಡೈಲ್, ದೋಣಿ ಸೇರಿದಂತೆ ತರಹೇವಾರಿ ಮನರಂಜನೆಯನ್ನು ಪಡೆದುಕೊಂಡು ವಾಪಾಸಾಗುತ್ತಿದ್ದಾಗ ವಿನಾಯಕನ ಕಣ್ಣಿಗೆ ವಾಣಿ ಬಿದ್ದಳು. ವಿನಾಯಕ ಬೇಕಂತಲೇ ಕಣ್ತಪ್ಪಿಸಲು ಯತ್ನಿಸಿದ. ಅದೇ ಸಮಯಕ್ಕೆ ವಾಣಿಯೂ ವಿನಾಯಕನತ್ತ ನೋಡಿದಳು. ಒಮ್ಮೆ ಇಬ್ಬರಲ್ಲೂ ಹಳೆಯ ದಿನಗಳು ನೆನಪಾದವು.
                 ದೋಸ್ತರ ಜೊತೆಗೆ ಬಂದಿದ್ದ ವಿನಾಯಕನನ್ನು ವಾಣಿ ದೂರದಿಂದಲೇ ಅಳೆದಳು. ವಿನಾಯಕ ಆಕೆಯನ್ನೂ ಆಕೆಯ ಪಕ್ಕದಲ್ಲಿ ಬರುತ್ತಿದ್ದ ಗಂಡನನ್ನೂ ನೋಡಿದಂತೆ ಮಾಡಿ ಮುಖ ತಿರುಗಿಸಲು ಯತ್ನಿಸಿದ. ದೋಸ್ತರ ಬಳಿ ಬೇರೆ ಕಡೆಗೆ ಹೋಗೋಣ ಎಂದು ಹೇಳಿ ಒತ್ತಾಯ ಮಾಡಲು ಯತ್ನಿಸಿದ. ಆದರೆ ದೋಸ್ತರು ವಾಣಿ ಕಂಡ ದಿಕ್ಕಿನತ್ತಲೇ ಸಾಗಿದರು. ಕೊನೆಗೊಮ್ಮೆ ವಾಣಿ-ವಿನಾಯಕ ಎದುರಾಬದರಾದರು.
                 ಅವಳೇ ಮಾತಾಡಿಸಲಿ ಎಂದುಕೊಂಡ ವಿನಾಯಕ. ಮಾತಾಡ್ಸೋ ಮಾರಾಯಾ ಎಂದುಕೊಂಡಳು. ಇಬ್ಬರಲ್ಲಿ ಯಾರೊಬ್ಬರೂ ಮಾತನಾಡಿಸುವ ಲಕ್ಷಣಗಳಿರಲಿಲ್ಲ. ಕೊನೆಗೆ ವಾಣಿಯೇ `ಅರೇ ವಿನಾಯ್ಕಾ... ಅರಾಮನಾ..?' ಎಂದಳು.
                ಮುಗುಳ್ನಕ್ಕ ವಿನಾಯಕ `ಹೇಯ್ ವಾಣಿ.. ಎಂತಾ ಸರ್ ಪ್ರೈಸ್ ಮಾರಾಯ್ತಿ.. ಫುಲ್ ಬಿಂದಾಸ್.. ನೀ ಹೆಂಗಿದ್ದೆ..?' ಎಂದು ಕೇಳುತ್ತಿದ್ದಂತೆ ಇತ್ತ ವಿನಾಯಕನ ದೋಸ್ತರು ಹಾಗೂ ಅತ್ತ ವಾಣಿಯ ಗಂಡ ಇವರಿಬ್ಬರನ್ನೂ ಬೆಕ್ಕಸ ಬೆರಗಿನಿಂದ ನೋಡತೊಡಗಿದ್ದರು.
               `ಇಂವ ವಿನಾಯ್ಕ ಹೇಳಿ. ನನ್ನ ಕ್ಲಾಸಿನವನೇಯಾ.. ಡಿಗ್ರಿಲಿ ಓದಕಿದ್ರೆ ಬರ್ತಿದ್ದ.. ನೆಂಟರಾಗವು..' ಗಂಡನಿಗೆ ಪರಿಚಯಿಸಿದಳು ವಾಣಿ. ಹಲೋ ಎಂದದ್ದು ಆಕೆಯ ಗಂಡ. ಅದಕ್ಕೆ ಪ್ರತಿಯಾಗಿ ತಾನೂ ತನ್ನ ದೋಸ್ತರನ್ನು ಪರಿಚಯ ಮಾಡಿಸಿದ ವಿನಾಯಕ.
               ಮುಂದಿನ ಮಾತುಗಳಲ್ಲಿ ವಾಣಿ ವಿನಾಯಕನ ಕೆಲಸ, ವೃತ್ತಿ, ಬೆಂಗಳೂರಿನಿಂದ ಬಂದಿದ್ದು, ಮನೆಯವರ ಬಗ್ಗೆಯೆಲ್ಲಾ ವಿಚಾರಿಸಿದಳು. ವಿನಾಯಕನೂ ಪ್ರತಿಯಾಗಿ ಉತ್ತರಿಸಿ ಕೆಲವು ಪ್ರಶ್ನೆಗಳನ್ನು ಕೇಳಿದ.
               `ಅಲ್ದಾ ವಿನಾಯಕಾ.. ರಾಶಿ ಬಡಿ ಬಿದ್ದೋಜ್ಯಲಾ.. ಎಂತಕ್ಕಾ.. ಸರಿಯಾಗಿ ಊಟ-ತಿಂಡಿ ಮಾಡ್ತಾ ಇದ್ಯಾ ಇಲ್ಯಾ..?' ಎಂದು ವಾಣಿ ಕೇಳುವ ವೇಳೆಗೆ ವಿನಾಯಕನ ಕಣ್ಣಲ್ಲಿ ನೀರು ಬರುವುದೊಂದೇ ಬಾಕಿ.
               ಕೀಟಲೆಯ ಸ್ವಭಾವದ ವಿನಾಯಕನ ದೋಸ್ತರಲ್ಲೊಬ್ಬ `ಅದೆಂತಾ ಕೇಳ್ತೀರಿ.. ಅಂವ ಡಿಗ್ರಿಯಲ್ಲಿ ಯಾರನ್ನೋ ಲವ್ ಮಾಡಿದ್ನಡಾ.. ಕೊನೆಗೂ ಹೇಳ್ಕಂಬಲೆ ಆಜಿಲ್ಯಡಾ.. ಅದೇ ಮನಸ್ಸಿನಲ್ಲಿ ಇದ್ದಾ.. ಲವ್ ಫೇಲ್ಯೂರ್ ಆದವರ ಹಣೇಬರಹವೇ ಇಷ್ಟು ನೋಡಿ..' ಎಂದಾಗ ವಾಣಿಯ ಗಂಡನಾದಿಯಾಗಿ ಎಲ್ಲರೂ ನಕ್ಕರು. ವಾಣಿ ಹಾಗೂ ವಿನಾಯಕ ಇಬ್ಬರೂ ನಗಲಿಲ್ಲ. ಇಬ್ಬರ ಕಣ್ಣಲ್ಲೂ ನೀರು ಇಳಿಯಲು ತವಕಿಸುತ್ತಿತ್ತು.
                ಅಷ್ಟರಲ್ಲಿ ದೋಸ್ತರು ವಿನಾಯಕನನ್ನು ಬೇರೆಡೆಗೆ ಕರೆದೊಯ್ದರು. ವಾಣಿ ಹಾಗೂ ಆಕೆಯ ಗಂಡ ಮತ್ತೆಲ್ಲೋ ಜಾತ್ರೆಯಲ್ಲಿ ಕಳೆದು ಹೋದರು. ಎಂದೋ ತಿಳಿಯಬೇಕಿದ್ದ ವಿಷಯ ಈ ರೂಪದಲ್ಲಿ ತಿಳಿಯುತ್ತದೆ ಎಂದು ಇಬ್ಬರೂ ಅಂದುಕೊಂಡಿರಲಿಲ್ಲ. ಇಬ್ಬರ ಮನಸ್ಸೂ ಭಾವನೆಗಳ ಮಳೆಯಲ್ಲಿ ತೊಯ್ದು ತೊಪ್ಪೆಯಾಗಿತ್ತು. ಜಾತ್ರೆಯ ಜನಸಮುದ್ರದಲ್ಲಿ ಕಣ್ಣೀರು ಉರುಳಿದ್ದು ಯಾರಿಗೂ ಕಾಣಲಿಲ್ಲ. 

Saturday, March 15, 2014

ಹಮ್ ಆಪ್ ಕೆ ಹೈ ಕೌನ್ (ಕಥಾ ಸರಣಿ ಭಾಗ-1)

                  ವಾಣಿಗೆ ವಿನಾಯಕನ ಮೇಲೆ ಸಿಕ್ಕಾಪಟ್ಟೆ ಲವ್ವಾಗಿತ್ತು. ಆದರೆ ತಾನಾಗಿಯೇ ಯಾಕೆ ಹೇಳಬೇಕು. ಅವನೇ ಹೇಳಲಿ ಎನ್ನುವ ಹಮ್ಮು-ಬಿಮ್ಮು.  ಪ್ರತಿದಿನ ಸಿಗುತ್ತಿದ್ದ ವಿನಾಯಕ ಗಂಟೆಗಟ್ಟಲೆ ಹರಟೆ ಹೊಡೆಯುತ್ತಿದ್ದ. ಮಾತಾಡುತ್ತಿದ್ದ. ನಗುತ್ತಿದ್ದ. ನಗಿಸುತ್ತಿದ್ದ. ಮಾತಿಗೊಮ್ಮೆ ಕೆಣಕುತ್ತಿದ್ದ. ಇಂತಹ ಹುಡುಗನ ಮೇಲೆ ವಾಣಿಗೆ ಲವ್ವಾಗದೇ ಇರಲು ಸಾಧ್ಯವೇ ಇರಲಿಲ್ಲ ಬಿಡಿ.
                  ವಾಣಿಗೆ ವಿನಾಯಕನ ಪರಿಚಯ ಆಗಿದ್ದು ವಿಚಿತ್ರ ರೂಪದಲ್ಲಿ. ಆಗಿನ್ನೂ ನೋಕಿಯಾ ಬೇಸಿಕ್ ಸೆಟ್ ಕೂಡ ಮಾರ್ಕೇಟಿಗೆ ಬರದಿದ್ದ ಕಾಲ. ಕಾಲೇಜು ಲೋಕ. ಕಾಲೇಜಿನ ಹುಡುಗ-ಹುಡುಗಿಯರಿಗೆಲ್ಲ `ಹಾಯ್ ಮನಸೆ' ಎಂಬ ಪಾಕ್ಷಿಕವೇ ಗೆಳೆಯ, ಗೆಳತಿ, ಮನಶಾಸ್ತ್ರ ಗೃಂಥಿಕೆ. ಎದೆಗವಚಿಕೊಂಡು ಹೋಗಲು ಇರುವ ಪುಸ್ತಿಕೆ. ಹಾಯ್ ಮನಸೆಯ ಮುಖ್ಯ ಪುಟದಲ್ಲಿ ಬರುವ ಚಿಕ್ಕ ಚಿಕ್ಕ ಮಕ್ಕಳ ಪೋಟೋಗಳನ್ನು ಕತ್ತರಿಸಿ ಇಟ್ಟುಕೊಳ್ಳುವವರು ಅನೇಕ, ಅದರ ಮುಖಪುಟದಲ್ಲಿ ತಮ್ಮದಾದರೂ ಚಿತ್ರ ಬರಬಾರದೇ ಎಂದುಕೊಂಡವರೂ ಹಲವರು. ಇಂತಹ ಹಾಯ್ ಮನಸೆಗೆ ರೆಗ್ಯೂಲರ್ ಆಗಿ ಬರೆಯುತ್ತಿದ್ದವ ವಿನಾಯಕ.
                  ಒಂದು ದಿನ ಅದೇ ಪಾಕ್ಷಿಕದ ಗೆಳೆತನದ ಕಾಲಮ್ಮಿನಲ್ಲಿ ವಿನಾಯಕನ ಪೋಟೋ ಜೊತೆಗೆ ವಿಳಾಸ ಬಂದಾಗ ವಾಣಿ ಕಣ್ಣಿಗೆ ಮೊದಲ ಬಾರಿ ಬಿದ್ದಿದ್ದ ವಿನಾಯಕ. ಯಾಕೋ ಕೀಟಲೆ ಮಾಡೋಣ ಎಂದುಕೊಂಡು ಪತ್ರ ಬರೆದಿದ್ದಳು. ವಿನಾಯಕನಿಂದ ಮರು ಉತ್ತರ ಬಂದಿದ್ದಾಗ ವಾಣಿ ಅಚ್ಚರಿಯ ಜೊತೆಗೆ ಖುಷಿಯನ್ನೂ ಅನುಭವಿಸಿದ್ದಳು ವಾಣಿ. ಪತ್ರಗಳು ಮುಂದುವರಿದವು. ಪರಿಚಯ ಸ್ನೇಹವಾಯಿತು. ಕೊನೆಗೊಮ್ಮೆ ಶಿರಸಿಯ ದೊಡ್ಡ ಕಾಲೇಜಿನಲ್ಲಿ ಓದುತ್ತಿದ್ದ ವಿನಾಯಕ, ಕಾಮರ್ಸ್ ಕಾಲೇಜಿನಲ್ಲಿ ಓದುತ್ತಿದ್ದ ವಾಣಿ ಎದುರು ಸಿಕ್ಕು ಮಾತಾಡಬೇಕಲ್ಲ ಎಂದುಕೊಂಡು ಅದಕ್ಕೊಂದು ದಿನ ನಿಗದಿ ಮಾಡಿಕೊಂಡರು.
                  ಆದರ್ಶ ನಗರದಲ್ಲಿ ಕಾಮರ್ಸ್ ಕಾಲೇಜಿಗೂ ದೊಡ್ಡ ಕಾಲೇಜಿಗೂ ಸಮಾ ಮಧ್ಯ ಜಾಗದಲ್ಲಿ ಆಯಕಟ್ಟಿನ ಸ್ಥಳದಲ್ಲಿರುವ ವರದಮೂರ್ತಿ ಗಣಪತಿ ದೇವಾಲಯದಲ್ಲಿ ಅಂದು ಸಂಕಷ್ಟಿ ಉತ್ಸವ.  ವಾಣಿಗೆ ಸಂಕಷ್ಟಿಯ ನೆಪ. ವಿನಾಯಕನೊಂದಿಗೆ ಮಾತನಾಡುವ ತವಕ. ಪ್ರತಿ ಸಂಕಷ್ಟಿಯಂದೂ ತಪ್ಪದೆ ವಿನಾಯಕ ಗಣಪತಿ ದೇವಾಲಯಕ್ಕೆ ಹೋಗುತ್ತಾನೆ. ಆತನ ದೈವ ಭಕ್ತಿ ಕೊಂಚ ಪ್ರಮಾಣದ್ದು. ಆದರೆ ದೇವಾಲಯಕ್ಕೆ ಬರುವ ಹುಡುಗಿಯರನ್ನು ನೋಡು ಕಣ್ಣು ತಂಪು ಮಾಡಿಕೊಳ್ಳುವುದು ಆತನ ದೇಗುಲ ದರ್ಶನದ ಅಸಲಿಯತ್ತು.
                ಪತ್ರದ ಗೆಳತಿ ವಾಣಿಯೇ ತನ್ನನ್ನು ಭೇಟಿಯಾಗಲು ಹೇಳಿದ್ದಾಳೆ ಎನ್ನುವ ಕಾರಣಕ್ಕೆ ಎಂದಿಗಿಂತ ಸ್ವಲ್ಪ ಹೆಚ್ಚಾಗಿ ತಯಾರಾಗಿ ಆಕೆ ಹೇಳಿದ್ದ ಸಮಯಕ್ಕಿಂತ ಎರಡು ತಾಸು ಮೊದಲೇ ದೇವಾಲಯದ ಪಕ್ಕದಲ್ಲಿರುವ ವಾಹನಗಳ ವಾಯುಮಾಲಿನ್ಯ ಪರೀಕ್ಷಣಾ ಕೇಂದ್ರದ ಎದುರು ಹಾಜರಾದ ವಿನಾಯಕ ಕೆಮ್ಮುತ್ತ ನಿಂತಿದ್ದ. ದೋಸ್ತರು ಕಾಡುತ್ತಾರೆ ಎನ್ನುವ ಕಾರಣಕ್ಕೆ ಯಲ್ಲಾಪುರ ನಾಕೆಯಲ್ಲಿದ್ದ ಸರ್ಕೂಲೇಶನ್ ಲೈಬ್ರರಿಗೆ ಹೋಗುವ ಕಾಮನ್ ಸುಳ್ಳನ್ನೂ ಹೇಳಿದ್ದ. ಬರೀ ಓದುಗುಳಿ ಎಂಬ ಆರೋಪವನ್ನು ಹೊಂದಿದ್ದ ವಿನಾಯಕ ಸರ್ಕೂಲೇಶನ್ ಲೈಬ್ರರಿ ಹೆಸರೆತ್ತಿದಾಗ ದೋಸ್ತರೆಲ್ಲ `ಮಾರಾಯಾ ನೀ ಹೋಗಿ ಬಾ.. ನಾವ್ಯಾರೂ ಬರ್ತ್ವಿಲ್ಲೆ' ಎಂದು ಅವನನ್ನು ಸಾಗ ಹಾಕಿದ್ದರು. ಸರ್ಕೂಲೇಶನ್ ಲೈಬ್ರರಿಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಹುಡುಗಿಯರು ಬರುತ್ತಾರೆ. ಪಿಯು ಕಾಲೇಜಿನ ಹುಡುಗಿಯರು, ಕಾಮರ್ಸ್ ಕಾಲೇಜಿನ ಹುಡುಗಿಯರು, ದೊಡ್ಡ ಕಾಲೇಜಿನವರು, ಜೆಎಂಜೆಯವರು ಬಂದು ತುಂಬಿ ತುಳುಕುತ್ತಿರುತ್ತಾರೆ. ಅಲ್ಲಿ ಹೋಗಿ ಸಾಯಿಸುತೆಯೋ, ಕೌಂಡಿಣ್ಯ, ಯಂಡಮೂರಿ, ಭೈರಪ್ಪರದ್ದೋ ಕಾದಂಬರಿಗಳನ್ನು ತೆಗೆದುಕೊಂಡು ಹೋಗುವಂತೆ ನಟನೆ ಮಾಡುವುದು ವಿನಾಯಕನ ವಾಡಿಕೆ. ಈ ಬರಹಗಾರರ ಪುಸ್ತಕಗಳನ್ನು ಭಕ್ತಿಯಿಂದ ಹುಡುಗಿಯರು ಓದುತ್ತಾರೆ. ಅವನ್ನು ಒಯ್ಯುವ ಹುಡುಗರ ಕಡೆಗೆ ಆಸಕ್ತಿಯುತವಾದ ನೋಟವನ್ನು ಹರಿಸುತ್ತಾರೆ ಎನ್ನುವುದನ್ನು ತಿಳಿದುಕೊಂಡಿದ್ದ ವಿನಾಯಕ ಇಂತಹ ಗುಟ್ಟನ್ನು ಯಾವತ್ತೂ ದೋಸ್ತರಿಗೆ ಹೇಳುವ ಕೆಲಸ ಮಾಡಿರಲಿಲ್ಲ.
               ಸಮಯಕ್ಕೆ ಸರಿಯಾಗಿ ಯಲ್ಲಾಪುರ ನಾಕಾ ಕಡೆಯಿಂದ ಬಂದಳು ವಾಣಿ. ಬಹಳಷ್ಗುಟು ಹುಡುಗಿಯರು ಆ ದಾರಿಯಲ್ಲೆ ಬಂದಿದ್ದರೂ ಅವರನ್ನು ಕಣ್ಣಿನಲ್ಲಿ ತುಂಬಿಕೊಳ್ಳುತ್ತ ನಿಂತಿದ್ದ ವಿನಾಯಕ ಈಕೆಯನ್ನು ನೋಡಿದವನೇ ಇವಳೇ ವಾಣಿಯಾದರೆ ಸಾಕಿತ್ತು ಗಣೇಶಾ ಎಂದುಕೊಂಡಿದ್ದ. ತನ್ನ ಬಳಿ ಪತ್ರಮೈತ್ರಿಯಲ್ಲಿ ತನ್ನ ಪೋಟೋವನ್ನು ಕಳಿಸಿಕೊಡು ಎಂದು ಗೋಗರೆದು ಪಡೆದುಕೊಂಡಿದ್ದ ಈಕೆ ತಾನು ಮಾತ್ರ ತನ್ನ ಪೋಟೋ ಕಳಿಸದೇ, ಸಮಯ ಸಿಕ್ಕಾಗ ಕೊಡ್ತಿ ಎಂದೋ, ಸಸ್ಪೆನ್ಸ್ ಎಂದೋ ಸಾಗ ಹಾಕುತ್ತಿದ್ದಳು. ಕಾಲೇಜಿಗೆ ಯುನಿಫಾರ್ಮಿರಲಿಲ್ಲ. ಹುಡುಗಿಯರು ಹುಡುಗರನ್ನು ಭೇಟಿ ಮಾಡಬೇಕಾದರೆ ಯುನಿಫಾರ್ಮ್ ಇಲ್ಲದ ದಿನವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದುಕೊಂಡ. ಆಕಾಶ ನೀಲಿ ಕಲರಿನ ಚುಡಿಯಲ್ಲಿ ಚನ್ನಾಗಿ ಕಾಣುತ್ತಿದ್ದಳು ವಾಣಿ. ಯಾಕೋ ವಿನಾಯಕನಿಗೆ ಯಡಳ್ಳಿ ಕಾಲೇಜಿನ ಯುನೀಫಾರ್ಮ್ ತುತ್ತಾ ಸುಣ್ಣಾ ನೆನಪಾಯಿತು. ಬಂದವಳೇ ವರದಮೂರ್ತಿ ದೇವಾಲಯದ ಎದುರು ನಿಂತಿದ್ದ ವಿನಾಯಕನನ್ನು ನೋಡಿದಳು. ಪೋಟೋದಲ್ಲಿ ನೋಡಿದ್ದಕ್ಕೂ ಎದುರಾ ಬದರಾ ನೋಡುವುದಕ್ಕೂ ಬಹಳಷ್ಟು ವ್ಯತ್ಯಾಸಗಳಿವೆ ಎಂದುಕೊಂಡ ವಾಣಿ ಅನುಮಾನದಿಂದಲೇ `ನೀನು ವಿನಾಯಕ ಅಲ್ದಾ..?' ಎಂದು ಮಾತನಾಡಿಸಿದಳು.
ಪೆಚ್ಚುನಗೆಯಿಂದ ಹೌದೆಂದ ವಿನಾಯಕ. ತಾನು ಅಂದುಕೊಂಡಿದ್ದ ಹುಡುಗಿಯೇ ವಾಣಿಯಾಗಿದ್ದಳು ಎನ್ನುವ ಖುಷಿ, ಆಕೆಯೇ ಮೊದಲು ಬಂದು ಮಾತನಾಡಿಸಿದಳು ಎನ್ನುವ ಅಚ್ಚರಿಯಿಂದ ಪೆಚ್ಚಾಗಿ ನಿಂತಿದ್ದ ವಿನಾಯಕ.
                ಮಾಡಲು ಬೇರೇ ಏನೂ ಕೆಲಸವಿರದಿದ್ದ ಕಾರಣ ವಿನಾಯಕ ಅವಳ ಜೊತೆಗೆ ವರದಮೂರ್ತಿ ಗಣಪತಿಯನ್ನು ಸುತ್ತುಹಾಕಲು ಹೊರಟ. ಹುಡುಗಿಯೊಬ್ಬಳ ಜೊತೆಗೆ ಮೊತ್ತಮೊದಲ ಬಾರಿಗೆ ದೇವಸ್ಥಾನವನ್ನು ಸುತ್ತಲು ಹೊರಟಿದ್ದ ವಿನಾಯಕನಿಗೆ ಸಾಕಷ್ಟು ಮುಜುಗರವಾಗಿತ್ತು. ದೇಗುಲದಲ್ಲಿ ನಾಲ್ಕಾರು ಬಿಳಿಕೂದಲ ಮುದುಕಿಯರು ಕುಳಿತಿದ್ದವರು ವಾಣಿ-ವಿನಾಯಕನನ್ನು ದುರುಗುಟ್ಟು ನೊಡಲು ಆರಂಭಿಸಿದಾಗ ವಿನಾಯಕ ಕಸಿವಿಸಿಗೊಂಡ. ಹುಡುಗಿಯರು ಮುಖದ ಮೇಲೆ ಭಾವನೆಗಳನ್ನು ತೋರ್ಪಡಿಸದ ಕಾರಣ ಆಕೆಯ ಮನದಲ್ಲಿ ಯಾವ ಭಾವನೆಗಳೆದ್ದಿರಬಹುದು ಎನ್ನುವುದು ವಿನಾಯಕನಿಗೆ ಗೊತ್ತಾಗಲಿಲ್ಲ.
                 ದೇವಸ್ಥಾನ ಸುತ್ತುವ ಕೆಲಸ ಕೆಲವೇ ಕ್ಷಣಗಳಲ್ಲಿ ಸರಿದುಹೋಯಿತು. ವಾಣಿಗೆ ವಿನಾಯಕನ ಸಾನ್ನಿಧ್ಯ, ವಿನಾಯಕನಿಗೆ ವಾಣಿಯ ಸಾನ್ನಿಧ್ಯ ಖುಷಿಕೊಟ್ಟಿತ್ತು. ವಾಣಿಗೆ ವಿನಾಯಕ ಪರವಾಗಿಲ್ಲ, ಚನ್ನಾಗಿದ್ದಾನೆ ಎನ್ನಿಸಿದ್ದರಿಂದ ಆತನ ಬಳಿ ಮಾತಿಗೆ ನಿಂತಿದ್ದಳು. ದೇಗುಲ ದರ್ಶನದ ಕಾರ್ಯ ಮುಗಿದ ನಂತರ ಮುಂದೇನು ಮಾಡಬೇಕೋ ತಿಳಿಯಲಿಲ್ಲ.
              `ಸುರಭಿಗೆ ಹೋಪನಾ..?' ವಿನಾಯಕನೇ ಕೇಳಿದ್ದ.
              `ಮಂಜಣ್ಣನ ಕಂಡಾಂಗೆ ಆಜಿಲ್ಲೆ.. ಹುಂ ಹೋಪನ ಬಾ..'
              ಸುರಭಿಯಲ್ಲಿ ಮಂಜಣ್ಣನಿದ್ದ. ಮಸಾಲಾಪುರಿಗೆ ಆರ್ಡರ್ ಕೊಟ್ಟು ಮಾತಿಗೆ ನಿಂತರು. ನಿಮಿಷಕ್ಕೊಮ್ಮೆ ಜೋಕ್ ಕಟ್ ಮಾಡುತ್ತ ವಿನಾಯಕ ವಾಣಿಗೆ ಇಷ್ಟವಾದ. ಅಪರೂಪಕ್ಕೆಂಬಂತೆ ಕಾಮರ್ಸ್ ಕಾಲೇಜಿನ ಹುಡುಗಿಯೊಬ್ಬಳು ಆರ್ಟ್ ಎಂಡ್ ಸೈನ್ಸ್ ಕಾಲೇಜು ಹುಡುಗನನ್ನು ಇಷ್ಟಪಟ್ಟಿದ್ದಳು.
               ಆ ನಂತರದ ದಿನಗಳಲ್ಲಿ ವಿನಾಯಕ-ವಾಣಿ ಬಿಡುವಿದ್ದಾಗಲೆಲ್ಲ ಮಾತಾಡುತ್ತಿದ್ದರು. ಸಿಕ್ಕಾಗ ಮಂಜಣ್ಣನ ಸುರಭಿ ಹೊಟೆಲಿನಲ್ಲಿ ಮಸಾಲೆಪುರಿ ಖಾಯಂ ತಿನ್ನುವುದು ವಾಡಿಕೆಯಾಗಿಬಿಟ್ಟಿತ್ತು. ಇವರಿಬ್ಬರೂ ಈ ರೀತಿ ಮಾಡುತ್ತಿದ್ದಾರೆ ಎನ್ನುವುದು ವಿನಾಯಕನ ದೋಸ್ತರಿಗಾಗಲೀ ವಾಣಿಯ ಗೆಳತಿಯರಿಗಾಗಲೀ ಗೊತ್ತಾಗಲು ಬಿಡಲಿಲ್ಲ. ಅಂದ ಹಾಗೆ ಇಷ್ಟೆಲ್ಲ ನಡೆದಿದ್ದು ಡಿಗ್ರಿ ಫೈನಲ್ ಇಯರಿನಲ್ಲಿ. ಒಂದಾರು ತಿಂಗಳಾಗಿತ್ತು ಪರಿಚಯವಾಗಿ. ಇಬ್ಬರಲ್ಲೂ ಸ್ನೇಹದ ಜಾಗದಲ್ಲಿ ಪ್ರೀತಿ ಮನೆ ಮಾಡಿತ್ತು. ಆದರೆ ಇಬ್ಬರೂ ಅದನ್ನು ಹೇಳಿಕೊಳ್ಳಲು ಧೈರ್ಯ ತೋರಲಿಲ್ಲ. ಬಹುಶಃ ಹುಡುಗ-ಹುಡುಗಿಯರಲ್ಲಿ ಮೊದಲ ಪ್ರೇಮದ ದೊಡ್ಡ ಸಮಸ್ಯೆ ಇದೇ ಇರಬೇಕು. ಗೆಳೆಯ-ಗೆಳತಿಯರ ನಡುವೆ ಪ್ರೇಮಾಂಕುರವಾದಾಗ ಎಲ್ಲಿ ಅದನ್ನು ಹೇಳಿಕೊಂಡು ಬಿಟ್ಟರೆ ಮುಂದೆ ಮಾತುಕತೆ ಇರುವುದಿಲ್ಲವೋ? ಒಪ್ಪದಿದ್ದರೆ ಎಲ್ಲಿ ದೂರವಾಗಿಬಿಡಬೇಕಾಗುತ್ತದೋ ಎನ್ನುವ ಭಯವೇ ಕಾಡಿಬಿಡುತ್ತದೆ. ನಮ್ಮ ಈ ಕಥೆಯ ನಾಯಕ-ನಾಯಕಿಯರಿಗೂ ಹೀಗೆಯೇ ಆಯಿತು.
                 ಬನವಾಸಿ ರಸ್ತೆಯ ವಾಣಿ, ಬಾಳೇಸರ ಬಸ್ಸಿನ ವಿನಾಯಕನ ಪ್ರೇಮ ಕಥಾನಕ ಒಳಗೊಳಗೆ ಹೆಮ್ಮರವಾಗಿತ್ತು. ಹೀಗಿರುವ ವೇಳೆಗೆ ವಾಣಿ-ವಿನಾಯಕ ಇಬ್ಬರ ಕೈಯಲ್ಲೂ ನೋಕಿಯಾ ಬೇಸಿಕ್ ಸೆಟ್ ಬಂದಿತ್ತು. ವಾಣಿಗೆ ಮನೆ ಮನೆಯಲ್ಲೂ ನೆಟ್ ವರ್ಕ್ ಬರುತ್ತಿದ್ದ ಕಾರಣ ಯಾವಾಗಲೂ ಮೊಬೈಲ್ ನಲ್ಲಿ ಇರುತ್ತಿದ್ದರೆ ವಿನಾಯಕ ದಿನದ ಅರ್ಭ ಭಾಗ ನಾಟ್ ರೀಚೆಬಲ್. ಆದರೆ ವಾಣಿ ಮೆಸೇಜ್ ಮಾಡುತ್ತಾಳೆ ಎಂಬ ಕಾರಣಕ್ಕಾಗಿ ತಮ್ಮೂರಿನ ಅರ್ಧ ಕಿಲೋಮೀಟರ್ ಹುಡ್ಡವನ್ನು ಹತ್ತು ನಿಮಿಷದಲ್ಲಿ ಓಡಿ ಹತ್ತಬಂದು ಕುಳಿತು ನಂತರ ಎದುಸಿರು ಬಿಡುತ್ತ ಟೊಯ್ ಎನ್ನುತ್ತಿದ್ದ ಮೆಸೇಜ್ ಟೋನ್ ಕೇಳುತ್ತ ಮುಖವರಳಿಸುತ್ತಿದ್ದ. ರಾತ್ರಿ ಒಂಭತ್ತಾಗುವವರೆಗೂ ಮೆಸೇಜುಗಳ ಲೇವಾದೇವಿ ವ್ಯವಹಾರ ನಡೆಯುತ್ತಿತ್ತು. ಆದರೆ ಈ ಸಂದರ್ಭದಲ್ಲಿಯೂ ಅವಳು ತನ್ನ ಪ್ರೀತಿಯನ್ನು ಹೇಳಿಕೊಳ್ಳಲಿಲ್ಲ. ವಿನಾಯಕನೂ ಪ್ರೇಮನಿವೇದನೆ ಮಾಡಿಕೊಳ್ಳಲಿಲ್ಲ.
                 ಡಿಗ್ರಿ ಮುಗಿಯಿತು. ವಾಣಿ ಮನೆಯಲ್ಲೇ ಉಳಿದಳು. ವಿನಾಯಕ ಬೆಂಗಳೂರಿಗೆ ಹಾರಲು ಹವಣಿಸುತ್ತಿದ್ದ. ಬೆಂಗಳೂರಿಗೆ ಹೋಗುವ ಮುನ್ನ ಸ್ಥಳೀಯ ಬ್ಯಾಂಕೊಂದರಲ್ಲಿ ಡಾಟಾ ಎಂಟ್ರಿಯ ಕೆಲವೊಂದು ಆತನನ್ನು ಕೈ ಬೀಸಿ ಕರೆದಿತ್ತು. ಅಲ್ಲಿಗೆ ಹೋಗಿ ಕೆಲಸ ಮಾಡಲು ಆರಂಭಿಸಿದ್ದ. ಈ ಸಂದರ್ಭದಲ್ಲಿಯೇ ವಾಣಿಯ ಮನೆಯಲ್ಲಿ ವಾಣಿಯ ಮದುವೆಯ ಪ್ರಸ್ತಾಪ ಶುರುಮಾಡಿದ್ದರು. ಅಲ್ಲಿ ಇಲ್ಲಿ ಜಾತಕ ಕೇಳಲು ಆರಂಭಿಸಿದ್ದರು. ಈ ವಿಷಯ ವಾಣಿಗೆ ತಿಳಿದು ತಲ್ಲಣಗೊಂಡಿದ್ದಳು. ಕೊನೆಗೊಮ್ಮೆ ತನಗೆ ಮದುವೆ ಮಾಡಲು ಮನೆಯಲ್ಲಿ ಹಂಡು ಹುಡುಕುತ್ತಿದ್ದಾರೆ ಎಂದು ವಿನಾಯಕನಿಗೂ ಹೇಳಿದ್ದಳು. ವಿನಾಯಕನಿಗೆ ಈಗ ಅವಳ ಬಳಿ ತನ್ನ ಪ್ರೇಮ ನಿವೇದನೆ ಮಾಡಿಕೊಂಡು ಬಿಡೋಣ ಎನ್ನಿಸಿತ್ತು. ಆದರೆ ತಾನು ಬೆಂಗಳೂರಿಗೆ ಹೋದ ಮೇಲೆ ತನ್ನಲವ್ ವಿಷಯ ಹೇಳಿಕೊಂಡರೆ ಅದಕ್ಕೆ ಬೆಲೆ ಬರುತ್ತದೆ. ಆಗ ಆಕೆಯ ಮನೆಯಲ್ಲೂ ಒಪ್ಪಿಕೊಳ್ಳುತ್ತಾರೆ ಎಂದುಕೊಂಡು ಸುಮ್ಮನಾದ. ವಾಣಿ ಹತಾಶಳಾಗಿದ್ದಳು. ಆದರೆ ಆಕೆಯೂ ಆತನ ಬಳಿ ಹೇಳಿಕೊಳ್ಳಲಿಲ್ಲ.
                ಕೊನೆಗೊಂದು ಜಾತಕ ಹೊಂದಿಕೆಯಾಯಿತು. ಮನೆಯವರು ಒಪ್ಪಿಕೊಂಡರು. ವಾಣಿಗೆ ಮನಸ್ಸಿರಲಿಲ್ಲ. ಆದರೆ ಮನೆಯ ತೀರ್ಮಾನ ಅಂತಿಮವಾಗಿತ್ತು. ವಿನಾಯಕನ ಬಳಿ ಹೇಳಿದರೆ... ಎಂಬ ಆಲೋಚನೆ ಬಂತಾದರೂ ಏನು ಮಾಡಬೇಕೆಂದು ತೋಚಲಿಲ್ಲ. ತಾನಾಗಿಯೇ ವಿನಾಯಕನ ಬಳಿ ನಾ ನಿನ್ನ ಲವ್ ಮಾಡ್ತಾ ಇದ್ದೀನಿ ಅಂದರೆ ವಿನಾಯಕ ಎಲ್ಲಾದರೂ ವಿರೋಧ ಮಾಡಿದರೆ..? ಎಂಬ ಭೀತಿ ಕಾಡಿತು. ತಳಮಳದೊಂದಿಗೆ ಸುಮ್ಮನಾದಳು. ಇತ್ತ ವಿನಾಯಕ ಚಡಪಡಿಸಿದ.

**
`ವಿನಾಯ್ಕಾ.. ಮುಂದಿನ ವಾರ ನನ್ನ ಮದುವೆ.. ಮನೆಯಲ್ಲಿ ನಿಶ್ಚಯ ಮಾಡಿದ್ದ. ನಿಂಗೆ ಆನು ಸಿಕ್ಕಿ ಕರೆಯಕಾಗಿತ್ತು. ಆದರೆ ಕರೆಯಲಾಜಿಲ್ಲೆ.. ಸಾರಿ.. ಪೋನ್ ಮಾಡಿದ್ದಕ್ಕೆ ಬೇಜಾರಾಗಡಾ.. ಮದುವೆಗೆ ಬಾ. ಶಿರಸಿ ಲಿಂಗದಕೋಣ ಕಲ್ಯಾಣ ಮಂಟಪದಲ್ಲಿ ಆಕ್ತು. ನೀ ಹೆಂಗಂದ್ರೂ ದೂರದಿಂದ ನೆಂಟರಾಗವಡಲಾ..'
ವಿನಾಯಕನಿಗೆ ಒಮ್ಮೆ ದಿಗ್ಭ್ರಮೆ. ಆದರೆ ತೋರಿಸಿಕೊಳ್ಳದೇ `ವಾವ್.. ವಾಣಿ ಕಂಗ್ರಾಟ್ಸ್.. ಎಷ್ಟು ಖುಷಿಯಾಗ್ತಾ ಇದ್ದು ಗೊತ್ತಿದ್ದ ಯಂಗೆ. ಒಳ್ಳೆ ಸುದ್ದಿ ಹೇಳದೆ ಹಾಂ.. ನೋಡ್ತಿ. ನಾ ರಜಾಕ್ಕೆ ಅಪ್ಲೈ ಮಾಡ್ತಿ. ಕೊಟ್ರೆ ಖಂಡಿತ ಬರ್ತಿ.. ಹಾ..'
ಈಗಲಾದರೂ ತನಗೆ ಪ್ರಪೋಸ್ ಮಾಡುತ್ತಾನೆ ಎಂದುಕೊಂಡಿದ್ದ ವಾಣಿ ನಿಜಕ್ಕೂ ಹತಾಶಳಾದಳು. `ಮತ್ತೆ ವಿನಾಯ್ಕಾ.. ಇನ್ನೆಂತಾದ್ರೂ ಹೇಳದು ಇದ್ದಾ..?'
`ಊಹೂ.. ಎಂತಾ ಇಲ್ಯೆ.. ನಿಮ್ಮನೇಲಿ ಕೇಳಿದ್ದಿ ಹೇಳು..' ವಿನಾಯಕನೂ ಹೇಳು ಸಿದ್ಧನಿರಲಿಲ್ಲ..
`ಎಂತಾದ್ರೂ ಹೇಳದಿದ್ರೆ ಹೇಳಾ.. ಆಮೇಲೆ ನಾ ನಿಂಗೆ ಸಿಗದು ಡೌಟು. ಬ್ಯುಸಿಯಾಗಿಬಿಡ್ತಿ. ಮದುವೆ ತಯಾರಿನಲಾ..'
ವಿನಾಯಕನ ಟ್ಯೂಬ್ ಲೈಟ್ ಈಗಲೂ ಹತ್ತಿಕೊಳ್ಳಲಿಲ್ಲ..`ಮತ್ತೆಂತಾ ಇಲ್ಯೆ.. ನೆನಪಾದ ಕೂಡಲೇ ಮೇಸೇಜ್ ಮಾಡ್ತಿ..' ಖಂಡಿತ ವಿನಾಯಕ ಈ ಸಾರಿ ಖಡ್ಡತನ ಮಾಡಿದ್ದ.
`ಸರಿ ಹಾಗಾದ್ರೆ.. ಮತ್ಯಾವಾಗಾದ್ರೂ ಲೈಫಲ್ಲಿ ಮೀಟ್ ಮಾಡನಾ..' ವಾಣಿ ಪೋನ್ ಇಟ್ಟಿದ್ದಳು.

**
ವಿನಾಯಕನ ಕಣ್ಣು ಹನಿಗೂಡಿತ್ತು. ವಾಣಿ ಪೋನ್ ಇಡುವ ಮುನ್ನ ಹೇಳಿದ ಸಾಲಿನ ಜೊತೆಗಿದ್ದ ಗದ್ಗದಿತ ಭಾವ ಕೊನೆಗೂ ವಿನಾಯಕನಿಗೆ ತಿಳಿಯಲೇ ಇಲ್ಲ. ತಿಳಿದರೂ ಸುಮ್ಮನುಳಿದಿದ್ದ.

Thursday, March 13, 2014

ನದಿಯ ಆತ್ಮಕಥೆ

ಗಣೇಶಪಾಲದಲ್ಲಿ ಹರಿಯುತ್ತಿರುವ ಶಾಲ್ಮಲೆ
ದಟ್ಟ ವೃಕ್ಷಗಳ ಮಧ್ಯ ಜನಿಸಿದೆನು ನಾನು
ಸುತ್ತಮುತ್ತಲೂ ತುಂಬಿತ್ತು ಕಾನು |

ಚಿಕ್ಕಂದಿನಲಿ ನಾನು ಕುಣಿಕುಣಿಯುತಿದ್ದೆ
ಜುಳು ಜುಳು ನಾದದಲಿ ನಲಿ ನಲಿಯುತಿದ್ದೆ |

ನನ್ನೆಡೆಗೆ ಹರಿದವು ನೂರಾರು ಹಳ್ಳ
ಹಳ್ಳಗಳ ಹೀರುತಲಿ ನಾನಾದೆ ಕೊಳ್ಳ |

ನೋಡ ನೋಡುತಲೆ ನಾನಾದೆ ಹೊಳೆ
ತೊಳೆಯತೊಡಗಿದೆನು ಎಲ್ಲರ ಕೊಳೆ |

ಮುಂದೊಮ್ಮೆ ಕಣಿವೆಗೆ ಭೋರೆಂದು ಹಾರಿ
ಸೌಂದರ್ಯ ಜಲಪಾತಕ್ಕೆ ನಾನಾದೆ ದಾರಿ |

ಮುಂದೊಮ್ಮೆ ಮರೆಯಿತು ನನ್ನ ಚಿನ್ನಾಟ
ಮೈಮೇಲೆ ಶುರುವಾಯ್ತು ದೋಣಿಗಳ ಕಾಟ |

ಸಹ್ಯಾದ್ರಿ ಕಳೆದು ಬಳಿ ಬಂತು ಬಯಲು
ಇನ್ನೇನು ಸನಿಹ ಕರೆಯುತಿದೆ ಕಡಲು |

ಮುಂದೆಲ್ಲಾ ಬಂತು ಬಹು ಕರಾವಳಿ
ಎಲ್ಲ ಕಡೆ ಮೆರೆಯಿತು ಹಡಗುಗಳ ಹಾವಳಿ |

ನೋಡುತಿರುವಂತೆಯೇ ಕುಡಿಯಿತು ಕಾರ್ಖಾನೆ ನೀರು
ಮೈನದ ತುಂಬೆಲ್ಲ ಕೀವು ಒಸರು |

ನನ್ನನ್ನು ಬಳಸಿ ಮಾನವ ಮೆರೆದ
ಬದುಕಿನ ನಡುವಲ್ಲಿ ಮಾನವತೆ ಮರೆತ |

ಇದ್ದಕ್ಕಿದ್ದಂತೆ ಮರೆಯಿತು ನಲಿವು
ಒಡಲಿನ ತುಂಬ ತುಂಬಿತು ನೋವು |

ಸಾಕಪ್ಪಾ ಸಾಕಯ್ಯ ಈ ನದಿಯ ಬಾಳು
ಕೇಳದೇ ದೇವನೆ ಈ ಬಾಳ ಗೋಳು |

ಕೊನೆಗೊಮ್ಮೆ ನಾನು ಕಡಲಿಗೆ ಜಿಗಿದೆ
ನದಿಯಾಗಿ-ಕೊನೆಯಾಗಿ ಸಾರ್ಥಕ್ಯ ಪಡೆದೆ |

**
(ಈ ಕವಿತೆ ಬರೆದಿದ್ದು 10-04-2007ರಂದು ದಂಟಕಲ್ಲಿನಲ್ಲಿ)
(ಎತ್ತಿನಹೊಳೆ ತಿರುವು ಮಾಡಿ ಬಯಲಿಗೆ ಹರಿಸಿ, ಅಘನಾಶಿನಿಯನ್ನು ಬೆಂಗಳೂರಿಗೆ ಒಯ್ಯಿರಿ, ಶಾಲ್ಮಲೆಗೆ ಅಣೆಕಟ್ಟುಗಳನ್ನು ಕಟ್ಟಿ ಬತ್ತಿಸಿ, ಕೃಷ್ಣ, ತುಂಗಭದ್ರಾ, ಕಾವೇರಿ, ಮಲಪ್ರಭೆ, ನೇತ್ರಾವತಿ, ಕಾಳಿ ನದಿಗಳನ್ನೆಲ್ಲ ಹೊಲಸೆಬ್ಬಿಸಿ... ಮನಸೋ ಇಚ್ಛೆ ನದಿಯ ಮೇಲೆ ದಬ್ಬಾಳಿ ಕಾಡಲಾಗುತ್ತಿದೆ. ಇವುಗಳಲ್ಲಿ ಹಲವು ಯೋಜನೆಗಳು ಕೈಗೊಳ್ಳಲಾಗಿದೆ. ಇನ್ನೂ ಹಲವು ಯೋಜನೆಗಳು ರಾಜಕೀಯದ ಕಣ್ಣಾ ಮುಚ್ಚಾಲೆಯಲ್ಲಿ ನರಳುತ್ತ ಬಿದ್ದಿವೆ. ಹಸಿರು ಹಸಿರಾಗಿ ಹರಿಯುತ್ತಿರುವ ನದಿಯನ್ನು ಯೋಜನೆಯ ನೆಪದಲ್ಲಿ ಬರಿದು ಮಾಡುವುದು, ಆ ಸಂದರ್ಭದಲ್ಲಿ ಏನು ಸಿಗುತ್ತದೋ ಅದೆಲ್ಲವನ್ನೂ ದೋಚಿಕೊಳ್ಳುವುದು ರಾಜಕಾರಣಿಗಳ ಹುನ್ನಾರ. ಸಾಧಕ-ಬಾಧಕ ಚಿಂತಿಸದೇ ಒಟ್ಟೂ ತಮ್ಮ ಬೇಳೆ ಬೆಯ್ದರೆ ಸಾಕು ಎನ್ನುವ ಗೂಸುಂಬೆ ರಾಜಕಾರಣಿಗಳ ದಾಹಕ್ಕೆ ನದಿಗಳು ಬಲಿಯಾಗುತ್ತಿವೆ. ನದಿಯೊಂದು ಹೇಗೆ ಹುಟ್ಟಿ, ಹೇಗೆಲ್ಲಾ ಆಗಿ ಕೊನೆಗೆ ಏನಾಗುತ್ತದೆ ಎನ್ನುವುದರ ಬಗ್ಗೆ ಒಂದು ಚಿಕ್ಕ ಕವಿತೆ ಇದು)
(ನದಿಗಳಲ್ಲಿ ನೀರಿರುವ ಚಿತ್ರಗಳನ್ನು ಅಪ್ ಲೋಡ್ ಮಾಡಲು ಭಯವಾಗುತ್ತದೆ.. ಮತ್ಯಾರಾದರೂ ಅದರಲ್ಲಿ ನೀರನ್ನು ಕಂಡು ಯೋಜನೆಗಳನ್ನು ರೂಪಿಸಿಬಿಟ್ಟಾರು ಎನ್ನುವ ಭಯದೊಂದಿಗೆ ಇಲ್ಲೊಂದು ಪೋಟೋ ಹಾಕಿದ್ದೆನೆ.)


Monday, March 3, 2014

ಬಸ್ಸಿನ ಕಂಬಿಯಲ್ಲಿ ತಲೆ ಸಿಕ್ಕಿಸಿಕೊಂಡಿದ್ದು

(ಇಂತದ್ದೇ ಕಂಬಿಯಲ್ಲಿ ತಲೆ ಸಿಕ್ಕಿಸಿಕೊಂಡಿದ್ದು-ಬಾಣದ ಗುರುತಿದ್ದಲ್ಲಿ ಗಮನಿಸಿ)
         ಯಾವಾಗ್ಲೂ ಇವನು ತನ್ನ ಅನುಭವಗಳನ್ನೇ ಬರೆದುಕೊಳ್ಳುತ್ತಾನೆ ಎಂದುಕೊಳ್ಳಬೇಡಿ. ನನ್ನ ಬದುಕಿನಲ್ಲಿ ಕೆಲವೊಂದು ಅಪರೂಪದ ಅನುಭಗಳಾಗಿವೆ. ಅವನ್ನು ಹಂಚಿಕೊಳ್ಳುತ್ತಿದ್ದೇನೆ ಅಷ್ಟೇ.
           ಇದು ಚಿಕ್ಕವನಿದ್ದಾಗ ಎಂದೋ ನಡೆದ ಘಟನೆ. ನನಗೆ ಆ ಚಿಕ್ಕಂದಿನ ಘಟನೆ ಅಲ್ಪ ಸ್ವಲ್ಪ ನೆನಪಿನಲ್ಲಿದೆ. ಅದಕ್ನಕಿಂತ ಹಿರಿಯರು ಹೆಚ್ಚು ಹೇಳಿದ್ದರಿಂದ ಘಟನೆ ನೆನಪಿದೆ. ಆಗ ನನಗೆ ಮೂರೋ ನಾಲ್ಕೋ ವರ್ಷ ವಯಸ್ಸು ಇರಬಹುದು. ಕಿಲಾಡಿ ಹುಡುಗ ನಾನು ಎಂದೇ ವರ್ಡ್ ಫೇಮಸ್ಸು. ನಿಂತಲ್ಲಿ ನಿಲ್ಲದ ಪೋಕರಿ ಮಾಣಿ.
            ಅಂದು ಅಮ್ಮ ಹಾಗೂ ಅರುಂಧತಿ ಅತ್ತೆ (ಅಪ್ಪನ ಅಕ್ಕ. ಅವರು ಈಗಿಲ್ಲ) ಇವರಿಬ್ಬರೂ ಸೇರಿ ನನ್ನನ್ನು ಕರೆದುಕೊಂಡು ಸಾಗರದ ಹತ್ತಿರ ಭೀಮನಕೋಣೆಯಲ್ಲಿರುವ ನೆಂಟರಮನೆಯ ಕಡೆಗೆ ಹೊರಟಿದ್ದರು. ಸಾಗರದಿಂದ ಅನತಿ ದೂರದಲ್ಲಿರುವ ಈ ಊರಿಗೆ ಹೋಗಬೇಕೆಂದರೆ ಖಾಸಗಿ ಬಸ್ಸುಗಳನ್ನೇ ಹಿಡಿಯಬೇಕು. ಸರ್ಕಾರಿ ಬಸ್ಸುಗಳು ಅಲ್ಲೊಂದು ಇಲ್ಲೊಂದು ಇದ್ದ ಕಾಲದಲ್ಲಿ ನಾವು ಒಂದು ಖಾಸಗಿ ಬಸ್ಸನ್ನೇರಿ ಹೊರಟೆವು.
             ನಾನು ಕಿಲಾಡಿ ಎಂದು ಮೊದಲೇ ಹೇಳಿದ್ದೆನಲ್ಲ. ಸುಮ್ಮನೆ ಇರದ ನಾನು ಬಸ್ಸಿನಲ್ಲಿ ಪುಂಡರಪೂಟನ್ನು ಶುರುಹಚ್ಚಿಕೊಂಡೆ. ಅಮ್ಮ ಬೈದು ಹಿಡಿಶಾಪ ಹಾಕಿದರೂ ಕೇಳಲಿಲ್ಲ. ಬಸ್ಸ್ಇನಲ್ಲಿ ಓಡುವುದು, ಸೀಟಿನಿಂದ ಸೀಟಿಗೆ ಜಿಗಿಯುವುದು.. ಹೀಗೆ ಹಲವಾರು ಕೆಲಸಗಳನ್ನು ಮಾಡಿದೆ. ಅದ್ಯಾವುದೋ ಪುಣ್ಯಾತ್ಮ ಬಸ್ಸಿನ ತಲೆಯ ಮೇಲೆ ಹತ್ತಿ ಯಾವುದೋ ಲಗೇಜನ್ನು ಏರಿಸುತ್ತಿದ್ದ. ನನಗೆ ಕುತೂಹಲ ತಡೆಯಲು ಸಾಧ್ಯವಾಗಲಿಲ್ಲ. ಬಸ್ಸಿನಲ್ಲಿ ಕಂಡಕ್ಟರ್ ಕೂರುವ ಸೀಟಿನ ಪಕ್ಕದಲ್ಲಿ ಹಾಕಿರುತ್ತಾರಲ್ಲ ಲಗೇಜ್  ಕಂಬಿಗಳು ಅದರೊಳಗೆ ತಲೆ ತೂರಿಸಿಬಿಟ್ಟೆ.
             ತೂರಿಸುವುದು ತೂರಿಸಿದೆ. ಆದರೆ ತೆಗೆಯಲಿಕ್ಕಾಗಬೇಕಲ್ಲ. ಊಹೂ.. ಏನು ಮಾಡಿದರೂ ತಲೆಯನ್ನು ಹೊರಕ್ಕೆ ತೆಗೆಯಲು ಆಗುತ್ತಿಲ್ಲ. ಬಸ್ಸಿನ ಮೇಲೆ ಲಗೇಜು ಏರಿಸುವವರೆಲ್ಲ ಗದರಲು ಆರಂಭಿಸಿದರು. ನಾನು ಹೋ ಎಂದು ಅರಚಲು ಆರಂಭಿಸಿದೆ.
             ದುರಾದೃಷ್ಟಕ್ಕೆ ಆಗಲೇ ಬಸ್ಸನ್ನೂ ಬಿಟ್ಟುಬಿಟ್ಟರು.ದೇಹ-ತಲೆ ಬೇರೆ ಬೇರೆ ಆದಂತೆ. ದೇಹ ಒಳಗೆ, ತಲೆ ಹೊರಗೆ. ನನ್ನ ಅಳು ಜೋರಾಯಿತು. ಅಮ್ಮ ಹಾಗೂ ಅತ್ತೆಗೆ ದಿಗ್ಭ್ರಮೆ.
             ಅಷ್ಟರಲ್ಲಾಗಲೇ ಬಸ್ಸಿನಲ್ಲಿದ್ದ ಜನರು, ಕಂಡಕ್ಟರ್-ಡ್ರೈವರ್ ಇವರ ಗಮನ ನನ್ನ ಕಡೆಗೆ ಹರಿದಿತ್ತು. ಮಗನನ್ನು ಸರಿಯಾಗಿ ನೋಡಿಕೊಂಡಿಲ್ಲ. ಭಾನಗಡಿ ಮಾಡಿಕೊಂಡಿದೆ ಎಂದು ಎಲ್ಲರೂ ಅಮ್ಮನಿಗೆ ಬೈಯುವವರೇ. ಭಯ ಹಾಗೂ ನಾಚಿಕೆಯಿಂದ ಅಮ್ಮ ಹಾಗೂ ಅತ್ತೆಯ ಮುಖ ಕೆಂಪಾಗಿತ್ತು.
             ಅಮ್ಮ ಅದೇನು ಮಾಡಿದರೂ ತಲೆಯನ್ನು ಸಿಕ್ಕಿಬಿದ್ದ ಕಂಬಿಯಿಂದ ತೆಗೆಯಲಿಕ್ಕಾಗುತ್ತಿಲ್ಲ. ಗಿಲೋಟಿನ್ ಯಂತ್ರಕ್ಕೆ ಹಾಕಿದಾಗ ಹೇಗೆ ತಲೆ ಸಿಕ್ಕಿಬಿದ್ದು ಒದ್ದಾಡುತ್ತೇವೋ ಹಾಗೆ ನಾನು ಒದ್ದಾಡತೊಡಗಿದ್ದೆ. ಕೊನೆಗೊಮ್ಮೆ ಅಮ್ಮ ದೇವರ ಮೇಲೆ ಭಾರ ಹಾಕಿ ಕಣ್ಣು ಮುಚ್ಚಿ ಜೋರಾಗಿ ಎಳೆದಳು. ಪುಣ್ಯಕ್ಕೆ ತಲೆ ಕಂಬಿಯಿಂದ ಬಿಡಿಸಿಕೊಂಡು ಬಂದಿತು. ಉಫ್.. ನನ್ನ ಪ್ರಾಣ ಉಳಿಯಿತು. ಎಳೆದ ರಭಸಕ್ಕೆ ನನ್ನ ತಲೆಯ ಎರಡೂ ಪಕ್ಕ ಕೆಂಪಗಾಗಿ ಕಿನ್ನೆತ್ತರು ಗಟ್ಟಿತ್ತಲ್ಲದೇ ಈಗಲೋ ಆಗಲೋ ರಕ್ತ ಸುರಿಯುತ್ತದೆ ಎನ್ನುವಂತಾಗಿತ್ತು. ಹಿಂಗಾದರೆ ಆಗಲಿ ಜೀವ ಉಳಿಯಿತಲ್ಲ.. ಸಾಕು. ಎಂದು ನಿಟ್ಟುಸಿರಾಗಿದ್ದರು ಮನೆಯಲ್ಲಿ.
**
             ಇಂತಹ ನನ್ನ ಅನೇಕ ಲಿಗಾಡಿತನಗಳನ್ನು ಅಮ್ಮ ಸೈರಿಸಿಕೊಂಡಿದ್ದಾಳೆ. ಹೆಚ್ಚಿನ ಸಾರಿ ಸಹನೆಯಿಂದ ಮತ್ತೆ ಹಲವು ಸಾರಿ ಸಹನೆಯನ್ನೂ ಬಿಟ್ಟು ಏಟು ಹಾಕಿದವಳು ಅಮ್ಮ. ಅವಿಭಕ್ತ ಕುಟುಂಬದಲ್ಲಿ  ಹಿರಿಯ ಮೊಮ್ಮಗನಾಗಿ ಹುಟ್ಟಿದ ತಪ್ಪಿಗೆ ಯಾರೇ ತಪ್ಪು ಮಾಡಿದರೂ ನನ್ನ ಮೇಲೆ ಅದು ಬರುತ್ತಿತ್ತು. ಶಿಕ್ಷೆ ಅನುಭವಿಸಬೇಕಾಗುತ್ತಿತ್ತು. ಆಗೆಲ್ಲ ನನ್ನ ಬೆನ್ನಿಗೆ ನಿಂತು ನನ್ನ ಪರವಾಗಿ ವಾದಿಸಿದವಳು ಅಮ್ಮ. ಪರಿಣಾಮವಾಗಿ ಅಮ್ಮ ಬೈಗುಳಗಳನ್ನು ಕೇಳಬೇಕಿತ್ತು. ನನ್ನ ಬಾಲ್ಯದ ಕಿಲಾಡಿತನಗಳ ದೆಸೆಯಿಂದ ಅನೇಕ ಸಾರಿ ಅಮ್ಮ ಕಣ್ಣೀರು ಹಾಕಿದ್ದೂ ಇದೆ. ಆದರೆ ಈಗ ಅವುಗಳನ್ನು ಮೆಲುಕು ಹಾಕುವ ಅಮ್ಮ ಅವೆಲ್ಲ ಎಷ್ಟು ಮಜವಾಗಿದ್ದವಲ್ಲಾ ಎಂದು ನಗುತ್ತಾಳೆ. ಅಮ್ಮನಿಗೆ ಹಾಗೂ ಅಮ್ಮನ ಪ್ರೀತಿಗೆ ಸಲಾಂ. ಮಾ.8 ವಿಶ್ವಮಹಿಳಾ ದಿನಾಚರಣೆ. ಅಮ್ಮನಿಗೆ ಶುಭಾಷಯ ಹೇಳಲು ಮತ್ತೊಮ್ಮೆ ನೆಪ ಸಿಕ್ಕಂತಾಗಿದೆ.
ಅಮ್ಮಾ. ವಿಶ್ವ ಮಹಿಳಾ ದಿನಾಚರಣೆಯ ಶುಭಾಷಯಗಳು.