Friday, October 11, 2013

ನನ್ನ ನಿನ್ನ ನಡುವೆ


ನನ್ನ ನಿನ್ನ ನಡುವೆ ಮಾತಿಲ್ಲ ಕಥೆಯಿಲ್ಲ
ಮೌನವೇ ಮಾತಾಗಿದೆ ಅಲ್ಲಿ ||2||

ನನ್ನ ನಿನ್ನ ನಡುವೆ ಮುನಿಸಿಲ್ಲ, ಸಿಟ್ಟಿಲ್ಲ
ಸಂತಸವೇ ಸೇತುವಾಗಿದೆ ಅಲ್ಲಿ ||4||

ನನ್ನ ನಿನ್ನ ನಡುವೆ ಮರೆವಿಲ್ಲ-ಮೆರೆವಿಲ್ಲ
ನೆನಪುಗಳೇ ತುಂಬುಬಿಟ್ಟಿದೆ ಅಲ್ಲಿ ||6||

ನನ್ನ ನಿನ್ನ ನಡುವೆ ಸೋಲಿಲ್ಲ ಸೆಡವಿಲ್ಲ
ಗೆಲುವೇ ಮೆರೆದು ನಿಂತಿದೆ ಅಲ್ಲಿ ||8||

ನನ್ನ ನಿನ್ನ ನಡುವೆ ಧೂಳಿಲ್ಲ-ಗೋಳಿಲ್ಲ
ನಲಿವೇ ಬೆರೆತ್ಹೋಗಿದೆ ಅಲ್ಲಿ ||10||

ನನ್ನ ನಿನ್ನ ನಡುವೆ ಗತ್ತಿಲ್ಲ-ಕುತ್ತಿಲ್ಲ
ಪ್ರೀತಿಯೇ ಆಟವಾಡಿದೆ ಅಲ್ಲಿ ||12||

ನನ್ನ ನಿನ್ನ ನಡುವೆ ಅಳುವಿಲ್ಲ-ಬಿಕ್ಕಿಲ್ಲ
ನಗುವೇ ಹರಿದಿದೆಯೋ ಅಲ್ಲಿ ||14||

ನನ್ನ ನಿನ್ನ ನಡುವೆ ಬತ್ತಿಲ್ಲ-ಬರಡಿಲ್ಲ
 ಹಸಿರೇ ಹೊನಲಿದೆಯೋ ಅಲ್ಲಿ||16|| 

(ಒಂದು ಗಝಲ್ ಬರೆಯಲು ವ್ಯರ್ಥ ಪ್ರಯತ್ನ.. ಇದು ಗಝಲ್ ಆಗಬಹುದಾ..? ಬಲ್ಲವರು ಹೇಳಬೇಕು...)
(20-08-2006ರಂದು ದಂಟಕಲ್ಲಿನಲ್ಲಿ ಈ ಕವಿತೆಯನ್ನು ಬರೆದಿದ್ದೇನೆ..)

Thursday, October 10, 2013

ಬಾವಲಿ ಗುಹೆ

    ಉತ್ತರಕನ್ನಡ ಜಿಲ್ಲೆ ಪ್ರಾಕೃತಿಕವಾಗಿ ಸಂಪದ್ಭರಿತ. ಹೆಜ್ಜೆ ಹೆಜ್ಜೆಗೂ ಜಲಪಾತ, ತೊರೆ, ಝರಿ, ಇಳಿಜಾರು, ಗುಡ್ಡ, ಕಣಿವೆ, ಕಾಡು, ಗುಹೆ ಹೀಗೆ ಒಂದಿಲ್ಲೊಂದು ಬಗೆಯ ಸೃಷ್ಟಿ ಸೌಂದರ್ಯಗಳನ್ನೊಳಗೊಂಡಿದೆ. ಪ್ರಕೃತಿಯ ಮಡಿಲಲ್ಲಿ ಅದೆಷ್ಟೋ ವಿಸ್ಮಯ, ವಿಶಿಷ್ಟ ಸಂಗತಿಗಳು ಅಗೋಚರವಾಗಿದೆ. ಕೆಲವೊಂದು ಗೋಚರಿಸುತ್ತವೆ. ಅಂತಹ ವಿಶಿಷ್ಟ ತಾಣಗಳಲ್ಲಿ ಯಲ್ಲಾಪುರ ತಾಲೂಕಿನ ಬಾವಲಿ ಗುಹೆ ಒಂದಾಗಿದೆ.
    ಯಲ್ಲಾಪುರ ನಗರದಿಂದ 22 ಕಿ.ಮಿ ಕಡಿದಾದ ಮಾರ್ಗದಲ್ಲಿ ಸಾಗಿದರೆ ಬಾವಲಿ ಗುಹೆ ತಲುಪಬಹುದು. ಯಲ್ಲಾಪುರ-ವಜ್ರಳ್ಳಿ ಮಾರ್ಗದಿಂದ 3 ಕಿ.ಮಿ ದಟ್ಟಡವಿಯ ಮಧ್ಯ ಸಂಚಾರಕ್ಕೆ ಯೋಗ್ಯವಾದ ರಸ್ತೆಯಿದೆ. ಆ ಮೂಲಕ ಬೆಣ್ಣೆಜಡ್ಡಿ ಎನ್ನುವ ಊರನ್ನು ತಲುಪಬೇಕು. ಅಲ್ಲಿಂದ ಕಾಲ್ನಡಿಗೆಯಲ್ಲಿ ತೋಟಪಟ್ಟಿ ಮತ್ತು ಗುಡ್ಡದ ಇಳಿಜಾರಿನಲ್ಲಿಯ ಅಂಚಿನಲ್ಲಿ ಬಾವಲಿಗುಹೆಗೆ ತಲುಪಬಹುದಾಗಿದೆ. ಬಾವಲಿ ಗುಹೆಗೆ ತಲುಪುವವರಲ್ಲಿ ಬಾಹುಗಳು ಗಟ್ಟಿಯಾಗಿರಬೇಕು. ಸಾಹಸಕ್ಕೆ ಮತ್ತು ಚಾರಣಕ್ಕೆ ಹೇಳಿ ಮಾಡಿಸಿದ ಸ್ಥಳ.
    ಕಡಿದಾದ ಇಳಿಜಾರಿ, ತಗ್ಗುದಿಣ್ಣೆಗಳ ಸಾಲಿನಲ್ಲಿ ಕೊಂಚ ಯಾಮಾದಿರೂ ಪ್ರಪಾತ. ಅಂತಹ ಸ್ಥಳದಲ್ಲೇ ಸಾಗಬೇಕು. ಬಾವಲಿಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿ ವಾಸಿಸುತ್ತಿರುವ ಪ್ರದೇಶಕ್ಕೆ ಕಲ್ಲಿನಿಂದಾವೃತವಾದ ಕಡಿದಾದ ಮಾರ್ಗದಲ್ಲಿ ಕಲ್ಲು ಬಂಡೆಗಳನ್ನು ಹತ್ತಿ ಗುಹೆ ತಲುಪಿವಷ್ಟರಲ್ಲಿ ಜೀವ ಹೈರಾಣ ಎಂದೆನಿಸಿದರೂ ಅಲ್ಲಿಯ ಪ್ರಕೃತಿಯ ಸೊಬಗನ್ನು ಸವಿದಾಗ ಶ್ರಮ ಸಾರ್ಥಕವೆನಿಸುತ್ತದೆ. ಗುಹೆ ಪ್ರವೇಶಿಸುವಾಗ ಬೆಳಕಿನ ವ್ಯವಸ್ಥೆ ಸ್ಪಷ್ಟವಾಗಿರಬೇಕು. ಒಬ್ಬರು ನುಸುಳಿ ಒಳ ಪ್ರವೇಶ ಮಾಡಬಹುದಾಗಿದೆ. ಬ್ಯಾಟರಿ ಬೆಳಕನ್ನು ಗುಹೆಯ ಒಳಗಡೆ ಹಾಯಿಸುತ್ತಿದ್ದಂತೆ ಬಾವಲಿಗಳ ಹಾರಾಟ ಶುರುವಾಗುತ್ತದೆ. ಅದೆಷ್ಟೋ ಬಾವಲಿಗಳು ನಮಗೆ ಢೀ ಕೊಟ್ಟು ಹೊರಹಾರುತ್ತವೆ. ಒಳಗಡೆ ಪ್ರವೇಶ ಮಾಡಿದರೆ ಅಲ್ಲೊಂದು ಕೊಳವಿದೆ. ವರ್ಷವಿಡೀ ಈ ಕೊಳದಲ್ಲಿ ನೀರು ತುಂಬಿಕೊಂಡಿರುತ್ತದೆ. ಈ ನೀರು ಬೇಸಿಗೆಯಲ್ಲೂ ಹರಿದು ಕೆಳಗಿರುವ ತೋಟಪಟ್ಟಿಗಳಿಗೆ ತಂಪೆರೆಯುತ್ತದೆ. ಈ ನೀರಿಗೆ ಅಬ್ಬಿ ನೀರು ಎನ್ನಲಾಗುತ್ತದೆ.
  ಬಾವಲಿ ಗುಹೆಯಲ್ಲಿ ಧೈರ್ಯವಿದ್ದರೆ ಎಷ್ಟು ದೂರ ಬೇಕಾದರೂ ಸಾಗಬಹುದು. ಆದರೆ ಬಾವಲಿಗಳ ಹಿಕ್ಕೆ ಮತ್ತು ಮೂತ್ರದ ವಾಸನೆಗಳನ್ನು ತಡೆದುಕೊಳ್ಳುವ ಶಕ್ತಿ ನಿಮ್ಮಲ್ಲಿರಬೇಕು. ಒಳ ಪ್ರವೇಶ ಮಾಡಿದ ಮೇಲೆ 5-6 ಜನ ನಿಲ್ಲುವಷ್ಟು ಸ್ಥಳಾವಕಾಶವಿದೆ. ಗುಹೆ ಎಷ್ಟು ದೂರವಿದೆ ಎನ್ನುವುದು ಈ ವರೆಗೆ ಯಾರಿಗೂ ನಿಖರ ಮಾಹಿತಿಯಿಲ್ಲ. ಮನುಷ್ಯರನ್ನು ಕಂಡ ಬಾವಲಿಗಳು ಹೊರಡಿಸುವ ಶಬ್ದಗಳು ಅಲ್ಪಮಟ್ಟಿನ ಭಯವನ್ನು ಹುಟ್ಟುಹಾಕುತ್ತದೆ. ಆದರೂ ಬಾವಲಿ ಗುಹೆ ಸಾಹಸಿಗರ ಮತ್ತು ಪರಿಸರ ಪ್ರೇಮಿಗಳ ಅಚ್ಚುಮೆಚ್ಚಿನ ತಾಣ.
    ಬಾವಲಿ ಗುಹೆಯೊಳಗಡೆ ಹೋದಂತೆ ಹಲವಾರು ಉಪ ಮಾರ್ಗಗಳೂ ಇವೆ. ಅವು ಎಲ್ಲಿ ಸೇರುತ್ತವೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಅಷ್ಟು ದೂರ ಕ್ರಮಿಸಲೂ ಸಾಧ್ಯವಿಲ್ಲ. ಪಕ್ಕದಲ್ಲಿ ಇನ್ನೊಂದು ಗುಹೆಯಿದೆ. ಈ ಗುಹೆಯನ್ನು ಯಾರೂ ಹೊಕ್ಕಿಲ್ಲ. ಕಾರಣ ಆ ಗುಹೆಯಲ್ಲಿ ಬಾವಲಿಗಳಿಲ್ಲ. ಬಾವಲಿಗಳಿಲ್ಲದ ಸ್ಥಳಗಳಲ್ಲಿ ಹಾವು, ಚೇಳುಗಳಂತಹ ಅಪಾಯಕಾರಿ ಜೀವಿಗಳಿರುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ. ಬಾವಲಿ ಗುಹೆ ಕುರಿತಂತೆ ಸ್ಥಳೀಯರು ಹೇಳುವಂತೆ ಮಹಾಭಾರತದ ಸಂದರ್ಭದಲ್ಲಿ ಪಾಂಡವರು ವನವಾಸದಲ್ಲಿದ್ದಾಗ ಈ ಗುಹೆಯಲ್ಲಿ ಆಶ್ರಯ ಪಡೆದಿದ್ದರು. ಅದೇ ರೀತಿ ಗುಹೆಯ ಮೇಲಿನ ಗುಡ್ಡದಲ್ಲಿ ವನದೇವತೆಯಿದೆ.
    ಬಾವಲಿಗಳು ರೈತಸ್ನೇಹಿ ಎನ್ನುವುದು ಅನೇಕರಿಗೆ ಗೊತ್ತಿಲ್ಲ. ಬಾವಲಿಗಳ ಹಿಕ್ಕೆ ಕೃಷಿಗೆ ಉತ್ಕೃಷ್ಟ ಸಾವಯವ ಗೊಬ್ಬರ. ಸುತ್ತಮುತ್ತಲ ಐದಾರು ಕಿಲೋಮೀಟರ್ನ ಜನ ತಮಗೆಷ್ಟು ಬೇಕೋ ಅಷ್ಟು ಬಾವಲಿ ಹಿಕ್ಕೆಗಳನ್ನು ಕೊಂಡೊಯ್ದು ಕೃಷಿಗೆ ಬಳಸುತ್ತಾರೆ. ಗುಹೆಯ ಹೊರಭಾಗದಲ್ಲಿ ಅಬ್ಬಿ ನೀರಿರುವುದರಿಂದ ಅಲ್ಲಿಯ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ. ಬಾವಲಿ ಗುಹೆಗೆ ತೆರಳಲು ಪಕ್ವ ಕಾಲವೆಂದರೆ ನವೆಂಬರ್ನಿಂದ ಮೇ ವರೆಗಿನ ಅವಧಿಯಲ್ಲಿ ಯಾವಾಗಲೂ ಈ ಪ್ರದೇಶಕ್ಕೆ ತೆರಳಬಹುದಾಗಿದೆ.

    ಬಾವಲಿ ಗುಹೆಗೆ ಹೋಗುವವರು ಕಟ್ಟುನಿಟ್ಟಾಗಿ ಪಾಲಿಸಲೇ ಬೇಕಾದ ಹಲವಾರು ಅಂಶಗಳಿವೆ. ಬಾವಲಿಗಳ ಶಾಂತತೆಗೆ ಭಂಗವನ್ನು ತರಬಾರದು. ಒಂದು ವೇಳೆ ಅವುಗಳು ಸಿಟ್ಟಾದರೆ ಪ್ರವಾಸಿಗರ ಮೇಲೆ ದಾಳಿ ಮಾಡುವ ಸಾಧ್ಯತೆಗಳೂ ಇರುತ್ತವೆ. ನಿಸರ್ಗ ಮಧ್ಯದಲ್ಲಿರುವ ಈ ಸ್ಥಳದಲ್ಲಿ ಪ್ಲಾಸ್ಟಿಕ್ ಮುಂತಾದ ತ್ಯಾಜ್ಯಗಳನ್ನು ಎಸೆಯುವುದು ನಿಷೇಧ. ಹಾಗೊಂದು ವೇಳೆ ಪ್ಲಾಸ್ಟಿಕ್ ಎಸೆದರೆ ಸ್ಥಳೀಯರು ದಂಡ ಹಾಕುತ್ತಾರೆ. ಬಾವಲಿ ಗುಹೆಗೆ ಹೋಗ ಬಯಸುವವರು ತಾರಗಾರಿನ ಗಣೇಶ ಕಿರಿಗಾರಿ ಮೊಬೈಲ್ ಸಂಖ್ಯೆ : 9449112440 ಅಥವಾ 08419-238070 ಈ ದೂರವಾಣಿಗಳಿಗೆ ಸಂಪಕರ್ಿಸಿದರೆ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳುತ್ತಾರೆ. ಮೊದಲೇ ತಿಳಿಸಿದ್ದರೆ ಊಟದ ವ್ಯವಸ್ಥೆಯನ್ನೂ ಕೈಗೊಳ್ಳುತ್ತಾರೆ. ಬಾವಲಿ ಗುಹೆಗೆ ತೆರಳುವವರಿಗೆ ಮಾರ್ಗದರ್ಶನ ನೀಡುತ್ತಾರೆ.

Tuesday, October 8, 2013

ಹೇಳಿ ಹೋಗು ಕಾರಣ


ನನ್ನ ಮನವ ತೊರೆವ ಮುನ್ನ
ಹೇಳಿಹೋಗು ಕಾರಣ..
ನನ್ನ ಕನಸ ಕೊಲುವ ಮುನ್ನ
ಹೇಳಿ ಹೋಗು ಕಾರಣ..||

ಅಂದು ನೀನು ಕಂಡುದೇಕೆ..?
ನನ್ನ ಮನವ ಸೆಳೆದುದೇಕೆ.?
ಪ್ರೀತಿ ಬಲೆಯ ಬೀಸಿದ್ದೇಕೆ..?
ಹೇಳಿ ಹೋಗು ಕಾರಣ..||

ಜೊತೆಗೆ ಹಲವು ಮಾತನಾಡಿ
ಮನದ ಜೊತೆಗೆ ಆಟವಾಡಿ
ಬಿಟ್ಟು ಓಡಿ ಹೋಗುವ ಮೊದಲು
ಹೇಳಿ ಹೋಗು ಕಾರಣ..||

ನನ್ನೊಳೇನು ತಪ್ಪು ಕಂಡೆ.?
ನನ್ನ ಪ್ರೀತಿ ಚುಚ್ಚಿ ಕೊಂದೆ
ನೀನು ದೂರವಾಗೋ ಮೊದಲು
ಹೇಳಿ ಹೋಗು ಕಾರಣ..||

ನೀನು ಪ್ರೀತಿಸಿದ್ದು ಸುಳ್ಳೆ?
ಏಕೆ ನನ್ನ ಸೆಳೆದೆ ಮರುಳೆ..?
ನನ್ನೊಡಲು ಸಾಯೋ ಮೊದಲು
ಹೇಳಿ ಹೋಗು ಕಾರಣ..||


(ಬರೆದಿದು : ಶಿರಸಿಯಲ್ಲಿ, 23-01-2006ರಂದು )
(ಈ ಕವಿತೆಯನ್ನು 24-01-2006ರಂದು ಶಿರಸಿ ತಾಲೂಕಿನ ಉಂಚಳ್ಳಿಯಲ್ಲಿ 
ಓದುಗರ ವೇದಿಕೆ ಹಮ್ಮಿಕೊಂಡಿದ್ದ ಯುವ ಕವಿಗೋಷ್ಟಿಯಲ್ಲಿ ವಾಚಿಸಲಾಗಿದೆ.)

Sunday, October 6, 2013

ಪ್ರೇಮಪತ್ರ -6 ಪ್ರೀತಿಯ ಓಲೆ

ಪ್ರೀತಿಯ ಗೆಳೆಯಾ..,
    ಅದೆಷ್ಟು ಬಗೆಯಿಂದ ಬೇರೆ ಬೇರೆ ಚಿಂತನೆಗಳ ಕಡೆಗೆ ನನ್ನನ್ನು ನಾನು ತೊಡಗಿಸಿಕೊಂಡರೂ ನಿನ್ನ ನೆನಪೇ ನನ್ನತ್ತ ಸುಳಿದುಬರುತ್ತಿದೆ. ಏನೇ ಮಾಡಿದರೂ ನನ್ನ ಕಣ್ಣೆದುರು ನೀನೇ ಸುಳಿದು ಬರುತ್ತೀಯಾ.., ನೆನಪಾಗ್ತೀಯಾ.. ಪದೇ ಪದೆ ಕಾಡ್ತೀಯಾ.. ಯಾಕೋ ಗೊತ್ತಿಲ್ಲ ಗೆಳೆಯಾ, ನಿನ್ನ ಮಡಿಲ ಮೇಲೆ ನನ್ನ ತಲೆಯನ್ನಿಟ್ಟು ನಲಿಯಬೇಕೆಂಬ ಆಸೆ ಮನದೊಳಗೆ ತುಂಬಿಕೊಂಡಿದೆ.. ಹಾಗೇ ಸುಮ್ಮನೆ ಕನ್ಣು ಮುಚ್ಚಿಕೊಂಡು ಯಾವುದೋ ಭಾವಗೀತೆಯನ್ನು ಗುನುಗಬೇಕು ಎನ್ನಿಸುತ್ತಿದೆ..
    ಬಹುದಿನಗಳಾಯ್ತಲ್ಲೋ ಗೆಳೆಯಾ.., ಕಾಲೇಜಿನಲ್ಲಿ ನಿನ್ನ ಮುಖ ಕಂಡು.. ಎಲ್ಲಿಗೆ ಹೋಗಿಬಿಟ್ಯೋ?? ಪ್ರತಿದಿನ ನಿನ್ನದೇ ನೆನಪು ನೆರಳಿನಲ್ಲಿ, ಕನಸು-ಕನವರಿಕೆಯಲ್ಲಿ ಕಾಲೇಜಿಗೆ ಎಡತಾಕುತ್ತಿದ್ದೇನೆ.. ಅಲ್ಲಿ ನಿನ್ನ ಬಿಂಬವನ್ನು ಕಾಣದೇ ಮುದುಡುತ್ತಿದ್ದೇನೆ..? ಯಾಕೋ ಶಂಕೆ ಮನದಲಿ.. ಕಾಣದ ಭೀತಿ ಎದೆಯಲ್ಲಿ ಎನ್ನುವಂತಾಗಿದೆ..
    ನಾನು ಪ್ರೀತಿಗೆ ಬಿದ್ದು ಅದೆಷ್ಟು ದಿನ ಸಂದಿತೋ.., ಅಂದಿನಿಂದ ಯಾಕೋ ನಿನ್ನ ಒಡನಾಟ ತಪ್ಪಿಯೇ ಹೋಗಿದೆ ಕಣೋ.. ನೀನು ಯಾವಾಗ ನನ್ನ ಕಣ್ಣೆದುರು ಕಾಣುತ್ತಿದ್ದೆಯೋ ಆಗೆಲ್ಲಾ ನಾನು ಹೂವಿನಂತಾಗುತ್ತಿದ್ದೆ ಮತ್ತೆ ಮತ್ತೆ ಅರಳುತ್ತಿದ್ದೆ ನಿನ್ನೆಡೆಗೆ ಹೊರಳುತ್ತಿದ್ದೆ. ಮುಖ ಕಂಡರೆ ಸಾಕಿತ್ತು ಸೋರ್ಯನತ್ತ ತಿರುಗುವ ಸೂರ್ಯಕಾಂತಿಯಂತೆ ಗೆಲುವಾಗುತ್ತಿದ್ದೆ.. ಚುಕ್ಕಿಯ ಜಿಂಕೆಮರಿಯಾಗುತ್ತಿದ್ದೆ.. ಹೊಟ್ಟೆತುಂಬಾ ಹಾಲುಕುಡಿದು ಧುತ್ತನೆ ಎದ್ದೋಡಿ ಬಿದ್ದೋಡಿ ಸೆಳೆಯುವಂತಹ `ಪುಟ್ಟಿಕರು'ವಾಗುತ್ತಿದ್ದೆ..
    ಅದೇನಾಯ್ತು ನಿಂಗೆ..? ಕಾಲೇಜಿನಲ್ಲಿ ನಿನ್ನ ಸುಳಿವಿಲ್ಲ. ಪ್ರತಿದಿನ ನೀನು ಹಾಯ್ದು ಬರುತ್ತಿದ್ದ ಜಾಗಗಳತ್ತ ಕಣ್ಣು ಹಾಯಿಸಿದರೆ ಅಲ್ಲೆಲ್ಲ ನೀನಿಲ್ಲ..? ನೀನೆಲ್ಲಿ.? ಯಾಕೋ ಏನೊಂದೂ ಗೊತ್ತಾಗುತ್ತಿಲ್ಲ.. ಮನಸ್ಸಿನಲ್ಲಿ ನೂರೊಂದು ಪ್ರಶ್ನೆಗಳ ಸುಳಿ.. ಅದ್ಯಾವ ಕೇಡು ಬಂದು ಕಾಡಿತು..? ನಿನ್ನ ಇರವೇ ಇಲ್ಲವಲ್ಲ..
    ಗೆಳೆಯಾ..
    ನೀನು ಇರದಿರುವ ಈ ಕ್ಷಣವನ್ನು ನಾನು ಬಹಳ ಬೇಸರದಿಂದ ಅನುಭವಿಸುತ್ತಿದ್ದೇನೆ.. ನನಗ್ಯಾಕೋ ಒಂದು ಕ್ಷಣವನ್ನೂ ಕಳೆಯಲಾಗುತ್ತಿಲ್ಲ.. ನೀನಿಲ್ಲದ ಒಂದು ಘಳಿಗೆಯೂ ನನಗೆ ವರುಷದಂತೆ ಕಾಣುತ್ತಿದೆ. ನಿನ್ನ ಕಡೆಗೆ ಕನಸನ್ನು ಕಂಡು ಕಂಡು ನಲಿಯುತ್ತಿದ್ದ ನಾನು ಇಂದೇಕೋ ಕಮರುತ್ತಿದ್ದೇನೆ..
    ನೀನಿಲ್ಲದ ಲೈಬ್ರರಿ ಎದುರಿನ ಕಟ್ಟೆ ಖಾಲಿ ಖಾಲಿಯಾಗಿ ಕುಂತಿದೆ. ಕಾಲೇಜಿನ ಪ್ರತಿ ಕೋಣೆಯಲ್ಲಿಯೂ ನಿನಗಾಗಿ ಇಣುಕು ಹಾಕಿದರೆ ಮೂಲೆಯಲ್ಲಿರುವ ಸಿಸಿ ಟಿವಿಗಳು ನನ್ನನ್ನು ಅಣಕಿಸುತ್ತಿವೆ.. ಆ ಭಟ್ಟರ ಕ್ಯಾಂಟೀನಿನ ಹೊಸ ಸಪ್ಲೈಯರ್ ಹುಡುಗ ವಿಸ್ಮಿತನಾಗಿ ನನ್ನನ್ನು ನೋಡುತ್ತಿದ್ದಾನೆ. ಕಾಲೇಜು ಎದುರಿಗಿನ ಹಸಿರು ವೃಕ್ಷ ಸಮೂಹವಂತೂ ಸುಳಿದು ತರುವ ಗಾಳಿ ನೀನಿಲ್ಲ ನೀನಿಲ್ಲ ಎಂದಂತೆ ಅನ್ನಿಸುತ್ತಿದೆ.. ಯಾಕೋ ಇವೆಲ್ಲದರಲ್ಲಿಯೂ ನಾನು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ..
    ಹೇಳದೇ ಕಾರಣ ಹೋದೆಯಾ ನೀ ದೂರ..?
    ನಿನ್ನ ಜೊತೆಗಿನ ಆ ದೋಸ್ತರ ಸಮೂಹ ಕಾಣುತ್ತಿದೆ.. ಆ ಗುಂಪಿನ ನಡುವೆ ನೀನಿಲ್ಲ.. ನೀನೆಲ್ಲಿ ಎಂದು ಅವರ ಬಳಿ ಕೇಳಲು ನಗೆ ಮುಜುಗರ, ನಾಚಿಕೆ.. ಅವ್ಯಕ್ತ ಭಯ.. ನಮ್ಮ ನಡುವೆ ಆಗಾಗ ಕಂಡು ಸೆಳೆಯುತ್ತಿದ್ದ ನೀನು ಇಲ್ಲದ ಈ ಸಂದರ್ಭ ಯಾಕೋ ನನ್ನನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ...
    ನಿನ್ನ ಮನೆಯ ಪರಿಸ್ಥಿತಿ ನನಗೆ ಅಸ್ಪಷ್ಟವಾಗಿ ಗೊತ್ತಿದೆ. ನಿಮ್ಮೂರಿನ ಆ ನಿನ್ನ ಪರಿಷಯದ ಹುಡುಗಿ ಯಾವಾಗಲೋ ಮಾತಿನ ಮಧ್ಯ ಹೇಳಿದಂತಹ ನೆನಪು.. ಸಮಸ್ಯೆಗಳ ಸುಳಿಯಲ್ಲಿ ಕೊಚ್ಚಿಹೋದೆಯಾ ಗೆಳೆಯಾ.? ಸಮಸ್ಯೆ ಕಾಡಿ ಕಾಡಿ ಕಾಲೇಜನ್ನೇ ಬಿಟ್ಟೆಯಾ...? ಅಥವಾ ಊರನ್ನೇ ಬಿಟ್ಟೆಯಾ..? ಮತ್ತೀನ್ನೇನಾದರೂ ಮಾಡಿಕೊಂಡೆಯಾ..? ದೇವರೆ ಹಾಗಾಗದಿರಲಿ..
    ನೀನು ಇಲ್ಲದ ಈ ಕಾಲವನ್ನು ನನ್ನ ಬಳಿ ಸಹಿಸಿಕೊಳ್ಳಲಾಗುತ್ತಿಲ್ಲ.. ಹಾಳಾದ್ದು ನಿನ್ನ ಬಳಿ ಮೊಬೈಲ್ ಇದೆಯೋ ಇಲ್ಲವೋ ಎನ್ನುವುದೂ ನನಗೆ ಗೊತ್ತಿಲ್ಲ ನೋಡು.. ಮೋಸ್ಟ್ ಲಿ ಇಲ್ಲ ಅನ್ಸುತ್ತೆ ಬಿಡು.. ಬಿಡು ಅದಕ್ಕೆ ಈ ರೀತಿ ಪತ್ರ ಬರೆಯುತ್ತಿದ್ದೇನೆ.. ನಿನಗೆ ತಲುಪುತ್ತದೆಯೋ ಇಲ್ಲವೋ ಗೊತ್ತಿಲ್ಲ.. ಆದರೆ ಬರೆದು ನನ್ನಲ್ಲಿಯಂತೂ ಇಟ್ಟುಕೊಳ್ಳುತ್ತಿದ್ದೇನೆ..
    ಐ ಮಿಸ್ ಯೂ ಗೆಳೆಯಾ.. ಎಲ್ಲಿದ್ದರೂ ಬೇಗ ಬಾ ಪ್ಲೀಸ್..

ಇಂತಿ ನಿನ್ನ
ಪ್ರೀತಿ

Thursday, October 3, 2013

ನನ್ನ ಕವನ


ನನ್ನ ಕವನ ತೊದಲು ನುಡಿ
ಬಿರಿದು ಹೊರಗೆ ಬಂದಿದೆ
ಈ ನಲಿವ ಜಗದ ಚೆಲುವ
ಕಂಡು ಬಾಯಿ ಬಿಟ್ಟಿದೆ..!!


ಕೌತುಕ ಭಯ ಭೀತಿಗಳೆಡೆ
ನನ್ನ ಕವನ ಸಿಲುಕಿದೆ
ಹಲ ಕೆಲವು ಪ್ರೀತಿ ನುಡಿಯ
ಕೇಳ ಬಯಸಿ ಕಾದಿದೆ ||

ಗಾನ ನೃತ್ಯ ನಟನೆಗಳನು
ನನ್ನ ಕವನ ಬಯಸಿದೆ
ನೂರಾರು ಕನಸುಗಳ
ಬಯಸಿ ಬೆನ್ನು ಹತ್ತಿದೆ
||

ನೂರಾರು ರಸ ನಿಮಿಷವ
ಕವನ ಬಳಸಿಕೊಂಡಿದೆ
ನನ್ನ ಎದೆಯ ಆಳದಿಂದ
ಕೊನರಿ ಹೊರಗೆ ಬಂದಿದೆ ||

(ಬರೆದಿದ್ದು ದಂಟಕಲ್ಲಿನಲ್ಲಿ, 25-09-2005ರಂದು, 
ಈ ಕವಿತೆಯನ್ನು ಪ್ರಕಟಿಸಿದ ಲೋಕಧ್ವನಿ ಪತ್ರಿಕೆಯ ಬಳಗಕ್ಕೆ ಧನ್ಯವಾದಗಳು)