Sunday, September 29, 2013

ಗುಡ್ಡೇತೋಟದ ಕೋಟೆ ವಿನಾಯಕ

ಗುಡ್ಡೇತೋಟದ ಕೋಟೆ ವಿನಾಯಕ ದೇವಸ್ಥಾನ ಸಿದ್ದಾಪುರ ತಾಲೂಕಿನ ಹೆಸರಾಂತ ಕ್ಷೇತ್ರಗಳಲ್ಲೊಂದು. ಇಡಗುಂಜಿಯ ಗಣಪನಷ್ಟೇ ಶಕ್ತಿಯನ್ನು ಹೊಂದಿರುವ ಈ ದೇವಸ್ಥಾನ ಮೂಲಭೂತ ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿದೆ.
    ಸಿದ್ದಾಪುರ ತಾಲೂಕಿನ ಹಸರಗೋಡ ಗ್ರಾ.ಪಂ ವ್ಯಾಪ್ತಿಯ ಗುಡ್ಡೇತೋಟದಲ್ಲಿರುವ ಕೋಟೆ ವಿನಾಯಕನ ದೇವಸ್ಥಾನ ಇತಿಹಾಸ ಪ್ರಸಿದ್ಧವಾದುದು. ಬೇಡಿದ್ದನ್ನು ಕೊಡುವ ಗಣಪನ ಸನ್ನಿಧಿ ಭಕ್ತರ ಮನದ ಇಚ್ಛೆಯನ್ನು ಪೂರೈಸುತ್ತದೆ. ಶ್ರೀಕ್ಷೇತ್ರ ಇಡಗುಂಜಿಗೆ ಹೋಗಲು ಸಾಧ್ಯವಾಗದಿದ್ದವರು ಗುಡ್ಡೇತೋಟದ ಗಣಪನ ದರ್ಶನ ಮಾಡಿ ಬಂದರೆ ಧನ್ಯರಾಗುತ್ತಾರೆ ಎನ್ನುವ ನಂಬಿಕೆಗಳೂ ಇವೆ.
    ಸಹ್ಯಾದ್ರಿಯ ದಡ್ಡ ಕಾಡಿನ ಮಧ್ಯದಲ್ಲಿರುವ ಸುಂದರ ದೇವಾಲಯ ಗುಡ್ಡೇತೋಟ. ಪುಟ್ಟ ಊರು. ಹೆಸರಿಗೆ ತಕ್ಕಂತೆ ಗುಡ್ಡದ ಮೇಲೆ ದೇವಸ್ಥಾನವಿದೆ. ದೇವಸ್ಥಾನವನ್ನು ತಲುಪುವಾಗ ಬಹುದೊಡ್ಡ ಗುಡ್ಡವನ್ನು ಹತ್ತಿಳಿಯಬೇಕು. ಸೂರ್ಯನ ಕಿರಣಗಳು ಭೂಮಿಯನ್ನು ತಲುಪದಂತಹ ದಡ್ಡ ಕಾಡಿನ ಪ್ರದೇಶದಲ್ಲಿರುವ ದೇವಸ್ಥಾನ ನಿಸರ್ಗ ಸೌಂದರ್ಯದಲ್ಲೂ ಸಮೃದ್ಧವಾಗಿದೆ. ಶ್ರದ್ಧಾ ಭಕ್ತಿಯ ತಾಣವಾಗಿರುವ ಗುಡ್ಡೇತೋಟದಲ್ಲಿ ಹರಕೆಯನ್ನು ಹೊತ್ತುಕೊಂಡರೆ ಬಹುಬೇಗನೇ ಈಡೇರುತ್ತವೆ. ಹರಕೆಯ ರೂಪದಲ್ಲಿ ಗಂಟೆಯನ್ನು ಅರ್ಪಣೆ ಮಾಡಬೇಕು. ಆಗ ಗಣಪ ಬೇಡಿದ್ದನ್ನು, ಇಷ್ಠಾರ್ಥಗಳನ್ನು ಪೂರೈಸುತ್ತಾನೆ ಎನ್ನುವ ಭಾವನೆ ದೇವಸ್ಥಾನಕ್ಕೆ ನಡೆದುಕೊಳ್ಳುವ ಭಕ್ತಸಮೂಹದ್ದಾಗಿದೆ.
    ಸಾವಿರಾರು ವರ್ಷ ಪ್ರಾಚೀನವಾದ ದೇಗುಲದಲ್ಲಿ ಚಿಕ್ಕದಾದ ಆಕರ್ಷಕ ಮೂರ್ತಿ, ಸುಂದರ ಪಾಣಿಪೀಠ ಗುಡ್ಡೇತೋಟದ ಗಣಪನ ವಿಶೇಷತೆಯಾಗಿದೆ. ದೇವಸ್ಥಾನದ ಎದುರು ಭಾಗದಲ್ಲಿರುವ ಬಸವನ ಮೂರ್ತಿ ಆಗಮಿಸುವ ಭಕ್ತರ ಮನಸ್ಸಿನಲ್ಲಿ ವಿಸ್ಮಯವನ್ನು ಮೂಡಿಸುತ್ತದೆ. ಈಶ್ವರನ ದೇವಸ್ಥಾನದಲ್ಲಿ ಶಿವಲಿಂಗವನ್ನು ನೋಡುತ್ತಿರುವ ಬಸವನ ಮೂರ್ತಿ ಎಲ್ಲ ಕಡೆ ಕಾಣಸಿಕ್ಕರೆ ಗುಡ್ಡೇತೋಟದಲ್ಲಿ ಗಣಪನನ್ನು ಬಸವ ನೋಡುತ್ತಿದೆ. ಈ ಬಸವ ಬಾಳೂರಿನ ಗೌಡನ ಸೂಚಕ ಎಂದು ಹೇಳಲಾಗುತ್ತದೆ. ಸಿದ್ದಾಪುರ ತಾಲೂಕಿನ ಹೂವಿನಮನೆಯ ಕೋಟೆಗುಡ್ಡೆ ಎಂಬಲ್ಲಿದ್ದ ಈ ದೇವಸ್ಥಾನವನ್ನು ಸೋದೆಯ ಅರಸರ ಪಾಳೆಯಗಾರರಾಗಿದ್ದ ಬಾಳೂರ ಗೌಡರು ಗುಡ್ಡೇತೋಟದಲ್ಲಿ ನಿರ್ಮಿಸಿದರು ಎಂಬ ಪ್ರತೀತಿಯಿದೆ.
    ಚುನಾವಣಾ ಗಣಪ ಎಂಬ ಹೆಸರಿನಿಂದಲೂ ಖ್ಯಾತಿಯಾಗಿರುವ ಈ ದೇವ ಸನ್ನಿಧಿಗೆ ಪೂಜೆ ಸಲ್ಲಿಸಿದವರಿಗೆ ಚುನಾವಣೆಯಲ್ಲಿ ಟಿಕೆಟ್ ಲಭಿಸುತ್ತದೆ ಎನ್ನುವ ಮಾತುಗಳಿವೆ. ಪೂಜೆ ಸಲ್ಲಿಸಿದವರು ಚುನಾವಣೆಯಲ್ಲಿ ಗೆಲುವನ್ನೂ ಕಂಡಿದ್ದಾರೆ. ದೇವಸ್ಥಾನದಲ್ಲಿ ಕಾರ್ತೀಕ ಬಹುಳ ದ್ವಾದಶಿಯಂದು ದೇವಕಾರ್ಯ ನಡೆಯುತ್ತದೆ. ಅದೇ ದಿನ ಸಂಜೆ ದೀಪೋತ್ಸವ ಅದ್ಧೂರಿಯಾಗಿ ನಡೆಯುತ್ತದೆ. ದೀಪೋತ್ಸವದ ಸಂದರ್ಭದಲ್ಲಿ ಸುತ್ತಮುತ್ತಲ ಗ್ರಾಮಸ್ಥರು ಸಾವಿರ ಸಂಖ್ಯೆಯಲ್ಲಿ ಪಾಲ್ಗೊಂಡು ಭಕ್ತಿ ಭಾವದಲ್ಲಿ ಮೈಮರೆಯುತ್ತಾರೆ. ದೀವಗಿ ಆಶ್ರಮದ ರಾಮಾನಂದ ಸ್ವಾಮೀಜಿಯವರ ದಿವ್ಯ ಆಶೀರ್ವಾದದಲ್ಲಿ ಚಂದ್ರಶಾಲೆ ನಿರ್ಮಾಣಗೊಂಡಿದೆ. ಇದು ದೇವಸ್ಥಾನದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳ ಉಪಯೋಗಕ್ಕೆ ಅನುಕೂಲ ಕಲ್ಪಿಸಿದೆ.
    ಈ ದೇವಸ್ಥಾನ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ದಟ್ಟಡವಿಯ ನಡುವಿನಲ್ಲಿ ಪ್ರತಿಷ್ಠಾಪನೆಗೊಂಡಿರುವ ಗಣಪನ ಆಲಯಕ್ಕೆ ಹೋಗಲು ಸಮರ್ಪಕ ಸಂಚಾರ ವ್ಯವಸ್ಥೆಯಿಲ್ಲ. ಇರುವ ರಸ್ತೆಯಲ್ಲಿ ಮಳೆಗಾಲದಲ್ಲಿ ಹೋಗಲು ಹರಸಾಹಸ ಪಡಬೇಕಿದೆ. ರಸ್ತೆಯನ್ನು ಡಾಂಬರೀಕರಣಗೊಳಿಸುವ ಬದಲು ಇರುವ ರಸ್ತೆಯನ್ನು ಸುಸ್ಥಿತಿಯಲ್ಲಿಡಬೇಕಾಗಿದೆ. ಅಕ್ಕಪಕ್ಕದಲ್ಲಿ ನೀರುಕಾಲುವೆಯನ್ನು ಮಾಡಿಕೊಡಬೇಕಾಗಿದೆ. ಎರಡು ವರ್ಷಗಳ ಹಿಂದೆ ಕಾನಸೂರು ತಟ್ಟಿಕೈ ರಸ್ತೆಯ ಹಿತ್ಲಕೈನಿಂದ ಕಂಚಿಮನೆಗೆ ಕಚ್ಚಾರಸ್ತೆ ನಿರ್ಮಾಣ ಮಾಡಲಾಗಿದೆ. ಯೋಜನೆಯ ಪ್ರಕಾರ ಕಂಚಿಮನೆ ಕಚ್ಚಾರಸ್ತೆಯ ಜೊತೆ ಜೊತೆಯಲ್ಲಿ ಗುಡ್ಡೇತೋಟದ ದೇವಸ್ಥಾನಕ್ಕೂ ರಸ್ತೆ ನಿರ್ಮಾಣ ಮಾಡುವ ಪ್ರಸ್ತಾವನೆಯಿತ್ತು. ಸ್ಥಳೀಯರು ಈ ಕುರಿತು ಆಗ್ರಹಿಸಿದ್ದರೂ ಕೂಡ ಅದನ್ನು ಕಡೆಗಣಿಸಲಾಗಿದೆ. ಯೋಜನೆ ಅನುಷ್ಠಾನವನ್ನು ಕಡೆಗಣಿಸಿದ್ದರಿಂದಾಗಿ ದೇವಸ್ಥಾನಕ್ಕೆ ಹೋಗಿಬರುವ ಭಕ್ತಾದಿಗಳಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಈಗಲಾದರೂ ಸಂಬಂಧಪಟ್ಟ ಇಲಾಖೆಯವರು ರಸ್ತೆ ಕಾಮಗಾರಿ ಕೈಗೊಳ್ಳುತ್ತಾರಾ ಎನ್ನುವ ಪ್ರಶ್ನೆ ಸಾರ್ವಜನಿಕರದ್ದಾಗಿದೆ.



++++++++++++++

    ದೇವಸ್ಥಾನಕ್ಕೆ ಸರ್ವಋತು ರಸ್ತೆ ನಿರ್ಮಾಣ ಮಾಡಿಕೊಡಬೇಕು ಎಂಬುದು ನಮ್ಮ ಹಲವು ವರ್ಷಗಳ ಬೇಡಿಕೆ. ಈ ಕುರಿತು ಹಸರಗೋಡ ಪಂಚಾಯತಕ್ಕೆ ಹಲವು ಬಾರಿ ಅರ್ಜಿ ನೀಡಿದ್ದೇವೆ. ಆದರೆ ಇದುವರೆಗೂ ರಸ್ತೆಯನ್ನು ಸಮರ್ಪಕವಾಗಿ ಮಾಡಲಾಗಿಲ್ಲ. ಇದರಿಂದಾಗಿ ಸಂಚಾರ ದುಸ್ತರವಾಗಿದೆ. ದೇವಸ್ಥಾನಕ್ಕೆ ದಿನಂಪ್ರತಿ ಹಲವಾರು ಭಕ್ತರು ಆಗಮಿಸುತ್ತಾರೆ. ಭಕ್ತರಿಗೆ ಸಂಪರ್ಕಕ್ಕಾಗಿ ಶಿರಸಿ-ಅಡ್ಕಳ್ಳಿ-ತಟ್ಟೀಕೈ ನಡುವೆ ಸಂಚರಿಸುವ ಬಸ್ಸುಗಳನ್ನು ಹೆಚ್ಚಿಸಬೇಕಾದ ಅಗತ್ಯವಿದೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತರ ವಾಸ್ತವ್ಯಕ್ಕಾಗಿ ಸೌಲಭ್ಯ ಕಲ್ಪಿಸುವ ಅಗತ್ಯವಿದೆ. ದೂರದ ಊರುಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ. ಅಂತವರ ಅನುಕೂಲಕ್ಕಾಗಿ ಮೂಲಭೂತ ಸೌಕರ್ಯಗಳ ಕುರಿತಂತೆ ಕಾರ್ಯಕ್ರಮ ರೂಪಿಸಬೇಕಾಗಿದೆ.

ದತ್ತಾತ್ರೇಯ ಭಟ್ಟ
ಅರ್ಚಕರು, ಗುಡ್ಡೇತೋಟ

Wednesday, September 25, 2013

ಚನ್ನೈ ಎಕ್ಸ್ ಪ್ರೆಸ್ ನಲ್ಲಿ ಭಾಗ್ ಮಿಲ್ಖಾ ಭಾಗ್

ನಾನು ಚಿತ್ರ ವಿಮರ್ಷೆ ಮಾಡದೇ ಬಹಳ ದಿನಗಳಾಗಿತ್ತು.. ಇದನ್ನು ವಿಮರ್ಷೆ ಎನ್ನಿ ಅಥವಾ ಸ್ವಗತ ಎನ್ನಿ.. ಏನೆಂದು ಕರೆದೂ ಅಡ್ಡಿಯಿಲ್ಲ ... ಇತ್ತೀಚೆಗೆ ಎರಡು ಚಿತ್ರಗಳನ್ನು ಎಡಬಿಡದೇ ನೋಡಿದೆ... ಯಾಕೋ ಹಂಚಿಕೊಳ್ಳದೇ ಹೋದರೆ ಮನಸ್ಸಿಗೆ ತೃಪ್ತಿ ಸಿಗೋದಿಲ್ಲ ಎನ್ನಿಸುತ್ತದೆ.. ಇರಡೂ ಚಿತ್ರಗಳೂ ಬಿಡುಗಡೆಗೊಂಡು ತಿಂಗಳಾಯಿತು.. ನಾನು ನೋಡಿದ್ದು ಲೇಟಾಯಿತು.. ಲೇಟಾಗಿದ್ದಕ್ಕೆ ನಗಬಹುದು.. ಇರಲಿ ಬಿಡಿ..

ಭಾಗ್ ಮಿಲ್ಖಾ ಭಾಗ್ ಹಾಗೂ ಚನ್ನೈ ಎಕ್ಸ್ ಪ್ರೆಸ್.. ಇವುಗಳೇ ನಾನು ನೋಡಿದ ಎರಡು ಸಿನಿಮಾಗಳು.. ಎರಡೂ ವಿಭಿನ್ನ ಕಥೆಗಳು.. ಬಾಕ್ಸ್ ಆಫೀಸಿನಲ್ಲಿ ಹೆಸರು ಗಳಿಸಿ, ಹಣ ಬಾಚಿಕೊಂಡವುಗಳು.. ಇವೆರಡರ ಬಗ್ಗೆ ಹೇಳಲೇಬೇಕು..
ಭಾಗ್ ಮಿಲ್ಖಾ.. ಬಹಳ ಒಳ್ಳೆಯ ಸಿನಿಮಾ.. ಬಹಳಷ್ಟು ಚಿತ್ರಗಳನ್ನು ನಾನು ನೋಡಿದ್ದೇನೆ, ನೋಡುತ್ತೇನೆ.. ಆದರೆ ಇತ್ತೀಚೆಗೆ ನೋಡಿದ ಒಳ್ಳೆಯ ಸಿನಿಮಾಗಳ ಸಾಲಿನಲ್ಲಿ ಭಾಗ್ ಮಿಲ್ಖಾ ಕೂಡ ಒಂದು..
ಸಿನಿಮಾ ನೋಡುವ ವರೆಗೂ ಮಿಲ್ಖಾ ಸಿಂಗ್ ಕುರಿತು ನನ್ನಲ್ಲಿ ಒಳ್ಳೆಯ ಅಭಿಪ್ರಾಯವಿರಲಿಲ್ಲ.. ಹೀಗೆ ಹೇಳಿದರೆ ತಪ್ಪಾಗಬಹುದು.. ಮಿಲ್ಖಾ ಸಿಂಗ್ ಜೀವನದ ಕುರಿತು ಅಷ್ಟೇನೂ ಗೊತ್ತಿರಲಿಲ್ಲ.. ಸುಮ್ನೇ ಬಿಲ್ಡಪ್ ಕೊಡ್ತಾರೆ ಎಂದುಕೊಂಡು ಮಿಲ್ಖಾ ಬಗ್ಗೆ ತಿಳಿದುಕೊಳ್ಳುವ ಆಲೋಚನೆಯನ್ನೂ ಮಾಡಿರಲಿಲ್ಲ.. ಇಂತಹ ಸಂದರ್ಭಗಳಲ್ಲಿ ನಾನು ಅನೇಕ ಪತ್ರಿಕೆಗಳಲ್ಲಿ ಚಿತ್ರದ ಕುರಿತು ಒಳ್ಳೆಯ ವಿಮರ್ಷೆಗಳನ್ನು ಓದಿದೆ.. ಅದಕ್ಕೂ ಮಿಗಿಲಾಗಿ ಫರ್ಹಾನ್ ಚಿತ್ರ ಎಂಬ ಕುತೂಹಲವಿತ್ತು.. ಸೀದಾ ಸಾದಾ ಚಿತ್ರಗಳಲ್ಲಿ ಆತ ನಟನೆ ಮಾಡುವುದಿಲ್ಲ ಎಂಬುದೂ ನನ್ನ ಮತ್ತೊಂದು ಭಾವನೆಯಾಗಿತ್ತು.. ಟಾಕೀಸುಗಳಲ್ಲಿ ಚಿತ್ರ ನೋಡಲು ಮನಸ್ಸಾಗಲಿಲ್ಲ.. ವೀಡಿಯೋ ಸಿಕ್ಕಿತು..
ಅಫ್ಕೋರ್ಸ್.. 3 ಗಂಟೆ 15-20 ನಿಮಿಷ ಸಿಸ್ಟಂ ಎದುರಿನಿಂದ ಅಲ್ಲಾಡಲಿಲ್ಲ.. ಚಿತ್ರ ಬಿಡದೇ ಕಾಡಿತು.. ಇಷ್ಟವಾಯಿತು.. ವಿಶ್ವದಾಖಲೆಗಳು ಎಂದ ಕೂಡಲೇ ಅಮೇರಿಕಾ, ಕೀನ್ಯಾ, ಇಥಿಯೋಪಿಯಾ, ಚೀನಾ, ರಷಿಯಾ ಹೀಗೆ ವಿದೇಶಗಳತ್ತ ನೋಡುತ್ತಿದ್ದ, ನೋಡುತ್ತಿರುವ ಸಂದರ್ಭದಲ್ಲಿ ಅಥ್ಲೆಟಿಕ್ಸ್ ನಲ್ಲಿ ಭಾರತೀಯನೊಬ್ಬ ವಿಶ್ವದಾಖಲೆ ಮಾಡಿದ್ದಾನೆಂದರೆ ನಿಜಕ್ಕೂ ಆಸಮ್...
ಚಿತ್ರದಲ್ಲಿ ಇಷ್ಟವಾಗಿದ್ದು ಫರ್ಹಾನ್ ನ ಮನೋಜ್ನ ನಟನೆ.. ಹಲವು ಸಾರಿ ಮಿಲ್ಖಾನಂತೆ ಕಾಣುವ ಆತನನ್ನು ಬಿಟ್ಟರೆ ಚಿತ್ರಕ್ಕೆ ಮತ್ಯಾರೂ ಹೊಂದಿಕೆಯೂ ಆಗೋದಿಲ್ಲವೇನೋ ಎನ್ನುವಂತಹ ನಟನೆ.. ಹೀಗೆ ಬಂದು ಕ್ಷಣಕಾಲ ಮನಸ್ಸಿನಲ್ಲಿ ಅಚ್ಚಳಿಯದ ಗಾಯ ಮಾಡಿ ಹೋಗುವ ಸೋನಂ ಕಪೂರ್ ಕೂಡ ಇಷ್ಟವಾಗುತ್ತಾಳೆ.. ಮುಗ್ಧತನದ ಭಾರತೀಯನನ್ನು ಇಷ್ಟಪಟ್ಟು ಕಾಡುವ ಆಸ್ಟ್ರೇಲಿಯನ್ ಹುಡುಗಿ, ದಕ್ಷಣ ಭಾರತೀಯ ಮಿಲಿಟರಿ ಅಧಿಕಾರಿ ಪರ್ಫೆಕ್ಟ್ ಪ್ರಕಾಶ್ ರೈ, ದೇವ್ ಗಿಲ್.. ಹೀಗೆ ಚಿತ್ರದಲ್ಲಿ  ಸಾಲು ಸಾಳು ಬೆರಗುಗಳು.. ಜೊತೆಗೆ 1950-60ರ ದಶಕದ ಭಾರತವನ್ನು ಕಟ್ಟಿಕೊಡುವ ಬಗೆ.. ಭಾರತ-ಪಾಕ್ ವಿಭಜನೆ.. ಎಲ್ಲ ಇಷ್ಟವಾಯಿತು.. ಜೀವ ಉಳಿಸಿಕೊಳ್ಳಲು ಓಡುವ, ಹೊಟ್ಟೆಪಾಡಿಗಾಗಿ ಓಡುವ, ಪೊಲೀಸರಿಂದ ತಪ್ಪಿಸಿಕೊಳ್ಳಲು ಓಡುವ, ಹಾಲಿಗಾಗಿ ಓಡುವ, ಮಿಲಿಟರಿ ಮಾರ್ಚ್ ಫಾಸ್ಟಿನಲ್ಲಿ ಓಡುವ, ಅವಳನ್ನು ಕಾಡುವ ಸಲುವಾಗಿ ಓಡುವ ಮಿಲ್ಖಾ ಹೊಸ ಭಾವನೆಯನ್ನೇ ಕಟ್ಟಿಕೊಟ್ಟಿದ್ದಾನೆ.. ಅದರಲ್ಲೂ ಕೊಟ್ಟಕೊನೆಯಲ್ಲಿ ಪಾಕಿಸ್ತಾನದ ಖಾಲೀದ್ ನನ್ನು ಸೋಲಿಸುವ ಬಗೆಇದೆಯಲ್ಲ.. ಒಮ್ಮೆ ಸಿಳ್ಳೆ ಹಾಕಿ ಕುಣಿಯಬೇಕೆನ್ನಿಸುತ್ತದೆ..
ಹಲವು ಯುವಕರು ಮಿಲ್ಖಾನನ್ನು ನೋಡಿ ಇಂಪ್ರೆಸ್ ಆಗಿದ್ದಾರೆ.. ಅಲ್ಲಾ.. ಆ ನೆಹರೂ ಪಾತ್ರದಾರಿ ರಾಕೇಶ್ ಓಂ ಪ್ರಕಾಶ್ ಮೆಹ್ರಾಗೆ ಅದೆಲ್ಲಿ ಸಿಕ್ಕರೋ.. ನೆಹರೂ ಅಂತೆ ಕಾಣುತ್ತಾರೆ.. ತುಂಬ ಮಜವನ್ನಿಸಿತು.. 5 ದಶಕಗಳ ಹಿಂದಿನ ಕಥೆಯನ್ನು ಇಂದಿನ ದಿನಮಾನಕ್ಕೆ, ಎಲ್ಲೂ ಇತಿಹಾಸ ತಿರುಚದಂತೆ, ಲೋಪವಾಗದಂತೆ ಕಟ್ಟಿಕೊಟ್ಟ ನಿರ್ದೇಶಕರಿಗೆ, ಕಥಾ ಹಂದರವನ್ನು ತೆರೆದಿಟ್ಟವರಿಗೆ ನಮಸ್ಕಾರವೆನ್ನಲೇಬೇಕು..
ಉರಿಯುವ ಮರಳಲ್ಲಿ ಓಡುವ ಬಾಲಕ ಮಿಲ್ಖಾ, ವಿಭಜನೆಯ ದಗೆಯಲ್ಲೂ ಆತನ ಪ್ರೀತಿಯ ಅಕ್ಕನನ್ನು ಹಾಸಿಗೆಗೆ ಕೆಡವಿಕೊಂಡು ಅನುಭವಿಸುವ ವ್ಯಕ್ತಿ, ಅದನ್ನು ಕಂಡು ಖುಷಿ ಪಡುವ ಮಿಲ್ಖಾನ ಕುಟುಂಬದವರು, ಮಿಲ್ಕಾ ಸಿಟ್ಟಿಗೇಳುವ ಬಗೆ, ಕಳ್ಳತನ, ದರೋಡೆ, ಕಾಲಿಗೆ ಕಲ್ಲು ಚುಚ್ಚಿದ್ದರೂ ಓಡಿ ಸೋಲುವ ಆತನನ್ನು ಸೆಲೆಕ್ಟ್ ಮಾಡುವು ಅಧಿಕಾರಿಗಳು.. ಹೀಗೆ ಎಷ್ಟೊಂದು ಚಿಕ್ಕ ಚಿಕ್ಕ ಸನ್ನಿವೇಶಗಳನ್ನು ಕಟ್ಟಿಕೊಡುತ್ತಾರೆ ನಿರ್ದೇಶಕರು.. ಸಾಮಾನ್ಯರಿಗೆ ಚಿತ್ರ ಸ್ವಲ್ಪ ಸ್ಲೋ ಅನ್ನಿಸಬಹುದು.. ಆದರೆ ವ್ಯಕ್ತಿ ಚಿತ್ರ ಕಟ್ಟಿಕೊಡುವಾಗ ಚಿಕ್ಕ ಚಿಕ್ಕ ಸಂಗತಿಗಳನ್ನೂ ಹೇಳುವ ಅಗತ್ಯವಿರುವುದರಿಂದ ನಿಧಾನವಾದರೂ ತೊಂದರೆಯಿಲ್ಲ ಸಿನಿಮಾ ಬೋರಾಗುವುದಿಲ್ಲ.. ಸಿನೆಮಾದಲ್ಲಿ 2-3 ಹಾಡಿದೆ.. ಹವನ ಕರೇಂಗೆ ಹಾಡು ಟಪ್ಪಾಂಗುಚ್ಚಿಯಾಗಿ ನೆನಪಾಗುತ್ತದೆ.. ಸೋನಂ ಜೊತೆ ಡ್ಯೂಯೆಟ್ ನೆನಪಾಗುವುದಿಲ್ಲ.. ಇನ್ನೊಂದು ಭಾಗ್ ಮಿಲ್ಖಾ ಹಾಡು .. ಕೇಳುವಂತಿದೆ..
ಹೊಸ ಹುಮ್ಮಸ್ಸು ಪಡೆಯುವ ವ್ಯಕ್ತಿಗಳಿಗೆ ನೋಡಲೇಬೇಕು ಎನ್ನಿಸುವ ಸಿನೆಮಾ.. ಜೀವನದಲ್ಲಿ ಎಲ್ಲಾ ಮುಗೀತು ಅಂದುಕೊಂಡವರಿಗೆ ಒಮ್ಮೆ ತೋರಿಸಬಹುದು..

ಭಾಗ್ ಜೊತೆ ಜೊತೆಯಲ್ಲಿಯೇ ನೋಡಿದ ಇನ್ನೊಂದು ಸಿನೆಮಾ ಶಾರುಕ್ ನ ಚನ್ನೈ ಎಕ್ಸ್ ಪ್ರೆಸ್.. ಅರ್ಧ ತಮಿಳು ಅರ್ಧ ಹಿಂದಿಯ ಸಿನೆಮಾ ಪಕ್ಕಾ ಕಮರ್ಷಿಯಲ್.. ಹಾಸ್ಯದ ಎಳೆ, ಲವ್ ಸ್ಟೋರಿ, ಮುಂಗಾರುಮಳೆ, ಎರಡು ತೆಲಗು ಸಿನಿಮಾ ಎರಡು ತಮಿಳು, ಮಲೆಯಾಳಿ ಸಿನಿಮಾಗಳನ್ನು ಸೇರಿಸಿದರೆ ಒಂದು ಚನ್ನೈ ಎಕ್ಸ್ ಪ್ರೆಸ್ ಕಥೆ ಲಭ್ಯವಾಗುತ್ತದೆ.. ಹಣಗಳಿಕೆಯ ಮೂಲ ಕಾರಣದಿಂದ ತಮಿಳನ್ನು ಬಳಸಿಕೊಂಡು, ಅವರ ಹಾವ ಭಾವವನ್ನು ಅನುಕರಿಸುವಂತೆ ಮಾಡಿ ಎಲ್ಲೋ ಒಂದು ಕಡೆ ತಮಿಳು ಅಥವಾ ದಕ್ಷಿಣ ಭಾರತೀಯರನ್ನು ಶಾರುಕ್ ಲೇವಡಿ ಮಾಡುತ್ತಿದ್ದಾನಾ ಎನ್ನುವ ಭಾವನೆ ಆಗೊಮ್ಮೆ ಈಗೊಮ್ಮೆ ಹಾದು ಹೋಗುತ್ತದೆ.. ಸಿನೆಮಾ ಚನ್ನಾಗಿದೆ.. ಹಾಗೆಂದ ಮಾತ್ರಕ್ಕೆ 2-3 ಸಾರಿ ಹೋಗಿ ನೋಡುವಂತಹ ಸಿನೆಮಾ ಇದಲ್ಲ.. ಒಮ್ಮೆ ನೋಡಿ ನಕ್ಕು, ಆ ನಗುವನ್ನು ಥಿಯೇಟರಿನಲ್ಲಿಯೇ ಬಿಟ್ಟು ಹೊರಬರಬಹುದಾದಂತಹ ಸಿನೆಮಾ..
ಚಿತ್ರದಲ್ಲಿ ಇಷ್ಟಪಡುವಂತಹ ಅನೇಕ ಅಂಶಗಳಿವೆ.. ಥಟ್ಟನೆ ಮುಂಗಾರು ಮಳೆಯಲ್ಲಿ ನೋಡಿದ್ದೇನೆ, ಮೈನಾದಲ್ಲಿ ನೋಡಿದ್ದೇನೆ ಅನ್ನಿಸುವ ಸನ್ನಿವೇಶಗಳಿವೆ.. ಅಲ್ಲೊಮ್ಮೆ ಬರುವ ಜಲಪಾತ ನಮ್ಮ ಧೂದ್ ಸಾಗರವನ್ನು ನೆನಪಿಸುತ್ತದೆ.. ಅಚ್ಚರಿ, ಬೆರಗನ್ನು ಮೂಡಿಸುತ್ತದೆ.. ದೀಪಿಕಾ ಪಡುಕೋಣೆ ಪಕ್ಕಾ ತಮಿಳರ ಹುಡುಗಿಯಂತೆ `ಛಲೋ..' ಎಂದಿದ್ದಾಳೆ.. ಶಾರುಕ್ ಎಂದಿನಂತೆ .. ಉಳಿದವರು ನೆನಪಾಗುತ್ತಾರೆ.. ಆದರೆ ತಮಿಳು, ತೆಲಗು ಸಿನೆಮಾಗಳಂತೆ ಅಬ್ಬರದ ಫೈಟಿಂಗ್, ಕತ್ತಿಯಲ್ಲಿ ಹೊಡೆದ ತಕ್ಷಣ ಕಾರು ಪಲ್ಟಿಯಾಗುವುದು, ಮುಂತಾದ ಅತಿಮಾನುಶ ಶಕ್ತಿಗಳನ್ನು ಹಿಂದಿ ಚಿತ್ರರಂಗ ಎರವಲು ಪಡೆಯುತ್ತಿರುವುದು/ಕದಿಯುತ್ತಿರುವುದು ಅಲ್ಲಿಯ ಕ್ರಿಯೇಟಿವಿಟಿಗೆ ಹಿಡಿದ ಕೈಗನ್ನಡಿ ಎಣ್ನಬಹುದು.  ಚನ್ನೈ ಎಕ್ಸ್ ಪ್ರೆಸ್ ಹಾಗೂ ಚಿಪಕ್ ಚಿಪಕ್ ಕೆ ಹಾಡು ನೆನಪಾಗುತ್ತವೆ..
ಹಿಂದಿ ಚಿತ್ರರಂಗದಲ್ಲಿ ದುಬಾರಿ ಸೆಟ್ಟುಗಳನ್ನು ನೋಡಿದವರಿಗೆ ದಕ್ಷಿಣ ಭಾರತದ ಹಸಿರು ಹಿನ್ನೆಲೆಯ ದೃಶ್ಯಾವಳಿ ಇಷ್ಟವಾಗುತ್ತವೆ.. ಫೈಟಿಂಗು ಚನ್ನಾಗಿದೆ.. ಕಾಮನ್ ಮ್ಯಾನಿನ ಕರಾಮತ್ತು ಬಾಕ್ಸಾಫಿಸಿನಲ್ಲಿ ಕರಾಮತ್ತು ಮಾಡಿದೆ.. ಆದರೆ ಭಾಗ್ ನಂತೆ ಸ್ಫೂರ್ತಿ ನೀಡುವಂತಹ ಯಾವುದೇ ಕಥೆ ಇದರದ್ದಲ್ಲ.. ಸರಳ ಲವ್ ಸ್ಟೋರಿ.. ನಿರೂಪಣೆ ಚನ್ನಾಗಿದೆ.. ಕನ್ನಡಿಗ ರೋಹಿತ್ ಶೆಟ್ಟಿ ಉತ್ತಮ ಡಬ್ಬಿಂಗ್ ನಿರ್ದೆಶಕರೆಂಬ ಬಿರುದನ್ನು ಸುಲಭವಾಗಿ ಪಡೆದುಕೊಳ್ಳಬಹುದು..

ಇದು ನನಗನಿಸಿದ್ದು.. ಸಿನೆಮಾ ನೀವು ನೋಡಿ ಬರಬಹುದು.. ಎರಡರ ಕುರಿತು ಅಭಿಪ್ರಾಯವನ್ನೂ ಹೇಳಬಹುದು..

Wednesday, September 18, 2013

ಆಶಯ


ಜಾರಿಬಿಡಲಿ ಕಣ್ಣಬಿಂದು
ನೋವ ಮರೆಸುವಲ್ಲಿ
ಚಿಮ್ಮಿ ಬರಲಿ ನಗುವ ಬುಗ್ಗೆ
ನೋವ ನಗಿಸುವಲ್ಲಿ..||

ಕಳೆದಾಗಿದೆ ನೂರು ಕಷ್ಟ
ಮುಂದೆ ಇರಲಿ ನಲಿವ ಬೆಟ್ಟ
ಬಾಳಬುತ್ತಿ ಅರಳೋಮುನ್ನ
ಜಾರಿ ಬಿಡಲಿ ಕಣ್ಣಬಿಂದು..||

ನಲಿವು ಬಾಳ ಸ್ವಪ್ನದಂತೆ
ಮನವ ಮೆರೆಸುತಿರುವುದು
ನೂರು ನೋವು ಎದುರುಬರಲಿ
ನಲಿವು ಹಿಂದೆ ಬರುವುದು..||

(ಇದನ್ನು ಬರೆದಿದ್ದು 23-10-2006ರಂದು ದಂಟಕಲ್ಲಿನಲ್ಲಿ )
(ಈ ಕವಿತೆಯನ್ನು ತಂಗಿ ಸುಪರ್ಣ ಹಾಗೂ ಪೂರ್ಣಿಮಾ ಅವರು ರಾಗ ಹಾಕಿ ಹಾಡಿದ್ದಾರೆ.. ಅವರಿಗೆ ಧನ್ಯವಾದಗಳು..)
(ಕವಿತೆಯನ್ನು ಆಕಾಶವಾಣಿ ಕಾರವಾರದಲ್ಲಿ 23-01-2008ರಂದು ವಾಚಿಸಲಾಗಿದೆ. 
ಜೂನ್-ಜುಲೈ 2009ರ ಚೈತ್ರರಶ್ಮಿಯಲ್ಲಿ ಪ್ರಕಟವಾಗಿದೆ)

Saturday, September 14, 2013

ದ್ಯುಮಣಿ ಧಾಮ




ನೀರಿದ್ದರೆ ನಾಡು ಎನ್ನುವ ಮಾತನ್ನೇ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಜೀವನದುದ್ದಕ್ಕೂ ಪರಿಸರ ಮಾತೆಯನ್ನು ಪೂಜಿಸಿದವರು ಕಲ್ಕಟ್ಟೆಯ ದ್ಯುಮಣಿ ಶಾಸ್ತ್ರಿ ದಂಪತಿ. ನೀರಿಲ್ಲದೆ ಬದುಕಿಲ್ಲ ಎನ್ನುವುದನ್ನು ಸ್ವತಃ ಅನುಭವದ ಮೂಲಕ ತಿಳಿದುಕೊಂಡು ಅದಕ್ಕಾಗಿ ಜೀವನ ಸವೆಸಿದರು. ನೀರಿಗೆ ಪೂರಕ ಕಾಡು ಎನ್ನುವುದನ್ನರಿತು ಕಾಡು ಬೆಳೆಸಿದರು.ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕುಳವೆ ಗ್ರಾಮದವರಾಗಿದ್ದ ದ್ಯುಮಣಿ ಶಾಸ್ತ್ರಿ 30 ವರ್ಷಗಳ ಹಿಂದೆ ಶಿರಸಿ ನಗರಕ್ಕೆ ಹೊಂದಿಕೊಂಡಿರುವ ಕಲ್ಕಟ್ಟೆ ಎಂಬ ಊರಿನಲ್ಲಿದ್ದ ಜಮೀನಿನ ಉಸ್ತುವಾರಿ ವಹಿಸಿಕೊಂಡರು. ಜಮೀನಿಗೆ ಹೊಂದಿಕೊಂಡಂತೆ ಇದ್ದ ಬೆಟ್ಟ ಪ್ರದೇಶದಲ್ಲಿ ಕಾಡು ಗಿಡ ಮರಗಳಿರಲಿಲ್ಲ. ಬೇಸಿಗೆಯಲ್ಲಿ ಜಮೀನಿಗೆ ನೀರಿನ ಕೊರತೆ ಉಂಟಾಗುತ್ತಿತ್ತು. ಪ್ರಯೋಗಾರ್ಥವಾಗಿ ಕಾಡನ್ನು ಬೆಳೆಸಿದರೆ ನೀರಿಗೆ ಬರ ಬರಲಾರದು ಎನ್ನುವ ಸಾಮಾನ್ಯ ಜ್ಞಾನ ಬಳಸಿ ಕಾಡು ಬೆಳೆಸಲು ಮುಂದಾದರು. ಅಡಕೆ ತೋಟಕ್ಕಾಗಿ ಬಳಸಲ್ಪಡುವ ಹಸಿರೆಲೆ, ಒಣ ಎಲೆಗಳನ್ನು ತರುವುದನ್ನು ನಿಲ್ಲಿಸಿದರು. ಮರಗಿಡಗಳಿಗೆ ರಕ್ಷಣೆ ಒದಗಿಸಿದರು. ಎರಡು ಮೂರು ವರ್ಷಗಳಲ್ಲಿ ಅದರ ಪರಿಣಾಮ ಗೋಚರಿಸತೊಡಗಿತು. ಗಿಡ- ಮರಗಳ ಉದುರಿದ ಎಲೆಗಳು ಭೂಮಿಯ ಮೇಲ್‌ಸ್ತರದ ಮಣ್ಣಿನ ಸವಕಳಿ ತಡೆಯಿತು. ಹಾಗಾಗಿ ಬೆಟ್ಟದಲ್ಲಿ ಬಿದ್ದ ಮಳೆಯ ನೀರು ಅಲ್ಲೇ ಇಂಗಿತು. ಅಂತರ್ಜಲ ಮಟ್ಟವೂ ಏರಿತು.  
ಸಮೃದ್ಧ ಕಾಡು
 ತೋಟಕ್ಕಾಗಿ ಮೀಸಲಾಗಿದ್ದ ಬೆಟ್ಟ ಈಗ ನಳನಳಿಸುವ ಸಮೃದ್ಧ ಕಾಡಾಗಿದೆ. ಈ ಕಾಡಿನಲ್ಲಿ ವನ್ಯಜೀವಿಗಳೂ ಇವೆ. ಆದರೆ ಯಾವುದೇ ಸಂದರ್ಭದಲ್ಲೂ ಅವು ಬೆಳೆಯ ಮೇಲೆ ದಾಳಿ ಮಾಡುವುದಿಲ್ಲ. ಅವುಗಳಿಗೆ ಅದಕ್ಕಾಗಿ ಪುರುಸೊತ್ತೂ ಇಲ್ಲ. ಕಾಡಿನಲ್ಲಿ ವಿವಿಧ ಬಗೆಯ ಹಣ್ಣಿನ ಮರಗಳನ್ನೇ ಸೃಷ್ಟಿಸಿದ್ದಾರೆ. ವರ್ಷಕಾಲವೂ ಒಂದಿಲ್ಲೊಂದು ಜಾತಿಯ ಹಣ್ಣುಗಳು ಯಥೇಚ್ಛವಾಗಿ ವನ್ಯಜೀವಿಗಳಿಗೆ ಸಿಗುತ್ತದೆ. ಹಲಸು, ಮಾವು, ಪೇರಲ, ಮುರುಗಲ, ಉಪ್ಪಾಗೆ ಹೀಗೆ ಹತ್ತು ಹಲವು ಜಾತಿಯ ಹಣ್ಣುಗಳು ಇವರ ಕಾಡಿನಲ್ಲಿವೆ. ಕಾಡು ಜಾತಿಯ ಹಣ್ಣುಗಳೂ ವಿಫುಲವಾಗಿದೆ. ಮಂಗ, ನವಿಲುಗಳಾದಿಯಾಗಿ ಪ್ರತಿಯೊಂದು ವನ್ಯಜೀವಿಗಳು ತಮಗಿಷ್ಟ ಬಂದಂತೆ ಸಂಚರಿಸಿಕೊಂಡು ಕಾಡಿನ ಉತ್ಪನ್ನಗಳನ್ನು ಆಹಾರವನ್ನಾಗಿ ಮಾಡಿಕೊಂಡಿವೆ. ಬೇಟೆಗಾರರಿಂದಲೂ ಅವುಗಳ ರಕ್ಷಣೆಗೆ ಸಾಕಷ್ಟು ಕ್ರಮ ಕೈಗೊಂಡಿದ್ದಾರೆ. 

ಒಮ್ಮೆ ನೋಡಬೇಕು...
ದ್ಯುಮಣಿ ಶಾಸ್ತ್ರಿಯವರ ಅಡಕೆ ತೋಟವನ್ನು ಪ್ರತಿಯೊಬ್ಬ ಅಡಕೆ ಬೆಳೆಗಾರನೂ ನೋಡಲೇ ಬೇಕು. ತೋಟಕ್ಕೆ ನೀರಾವರಿ ಇಲ್ಲವೇ ಇಲ್ಲ. ತೋಟದಲ್ಲಿ ಜವುಳು ಆಗದಂತೆ ತೋಡುವ ಕಾಲುವೆಗಳಿಲ್ಲ. ಅಡಕೆ ಮರಕ್ಕೆ ಬೇಕಾಗಬಹುದಾದ ಗೊಬ್ಬರ ಹಾಕುವುದಿಲ್ಲ. ತೋಟದಲ್ಲಿ ಬೆಳೆಯುವ ಕಳೆಯನ್ನು ಹಾಗೇ ಬಿಡಲಾಗುತ್ತದೆ. ತೋಟಕ್ಕಾಗಿ ಇವರು ನೀಡುತ್ತಿರುವುದೆಂದರೆ ಸಗಣಿಯ ಸ್ಲರಿಯ ಸಿಂಪಡಣೆ. ಅದು ಅಡಕೆ ಮರಗಳಿಗೆ ಸಾಕಾಗುತ್ತದೆ. ಮರದ ಬುಡದಲ್ಲಿ ನೀರಿಗೇನೂ ಕೊರತೆಯಿಲ್ಲ. ಹಾಗಾಗಿ ಅಡಕೆ ಬೆಳೆಗೆ ಇನ್ನೇನು ಬೇಕು ಎನ್ನುವ ಮನೋಭಾವದಲ್ಲಿ ಕೃಷಿ ಮಾಡಿದ್ದಾರೆ. ಕೂಲಿ ಕಾರ್ಮಿಕರ ಸಮಸ್ಯೆಗೂ ಇದು ಉತ್ತರವಾಗುತ್ತದೆ. ತೋಟದ ಬೆಳೆಯಲ್ಲಿ ಉತ್ತಮ ಇಳುವರಿಯನ್ನೇ ಪಡೆಯುತ್ತಾರೆ. ಅಡಕೆ ತೋಟದಲ್ಲಿ ಬಾಳೆ, ಪೇರಲ, ನೇರಳೆ, ಬೆಣ್ಣೆ ಹಣ್ಣುಗಳಿದ್ದರೆ ಅಂಚಿನಲ್ಲಿ ಹುಲುಸಾಗಿ ಬೆಳೆ ನೀಡುತ್ತಿರುವ ತೆಂಗು ಕಂಗೊಳಿಸುತ್ತದೆ. ತೋಟದ ಬುಡದಲ್ಲಿ ನೋಡಿದವರು ಯಜಮಾನನ ನಡೆ ಕುರಿತು ಟೀಕಿಸುತ್ತಾರೆ. ಆದರೆ, ಅಡಕೆ ಮರದ ತುದಿಯಲ್ಲಿರುವ ಕೊನೆ ನೋಡಿ ಕಂಗಾಲಾಗುತ್ತಾರೆ.  
ನಿಸರ್ಗ ಬಳಕೆ 
ದ್ಯುಮಣಿ ಶಾಸ್ತ್ರಿಯವರು ಸೌರಮನೆ ಕಟ್ಟಿಕೊಂಡಿದ್ದಾರೆ. ಮಳೆಗಾಲದಲ್ಲಿ ಒಣಗಿಸಬಹುದಾದ ತೋಟದ ಬೆಳೆಗಳು, ಹಣ್ಣು, ಸಂಗ್ರಹಿಸಿಟ್ಟಿರುವ ಧಾನ್ಯ ಕೆಡದಂತೆ ಸೌರಮನೆಯಲ್ಲಿಡಲಾಗುತ್ತದೆ. ಬೇಸಿಗೆಯಲ್ಲೂ ಮೋಡ ಕವಿದ ವಾತಾವರಣವಿದ್ದರೂ ಅಡಕೆ ಒಣಗಿಸಲು ಯಾವುದೇ ತೊಂದರೆಯಿಲ್ಲ. ವರ್ಷವಿಡೀ ಶಾಖ ಶಕ್ತಿ ಉತ್ಪಾದನೆಯಾಗುತ್ತದೆ. ಇದರಿಂದಾಗಿ ಉರುವಲು ಕಟ್ಟಿಗೆಯ ಅವಲಂಬನೆ ತಪ್ಪಿದೆ. ಬಟ್ಟೆಯನ್ನು ಇಲ್ಲೇ ಒಣಹಾಕಲಾಗುತ್ತದೆ. ಎಲ್ಲ ರೀತಿಯಲ್ಲೂ ಪ್ರಕೃತಿಯ ಮೇಲೆ ಒತ್ತಡ ಹಾಕದೇ, ನೈಸರ್ಗಿಕವಾಗಿ ಸಿಗಬಹುದಾದ ನೀರು, ಶಕ್ತಿ ಇಂಥವುಗಳ ಬಳಕೆ ಮಾಡಿಕೊಂಡಿದ್ದಾರೆ.  
ಕಾಡಿನ ಕೊಡುಗೆ 
ತಿಂದ ಹಣ್ಣಿನ ಬೀಜ, ಒರಟೆಗಳನ್ನು ಕಾಡಿಗೆ ಚೆಲ್ಲಲಾಗುತ್ತದೆ. ತಮ್ಮಷ್ಟಕ್ಕೆ ತಾವು ಚಿಗುರಿ ಸಸಿಯಾಗಿ ಮರವಾಗುತ್ತಿದೆ. ಕಾಡನ್ನು ಅದರ ಪಾಡಿಗೆ ಬಿಟ್ಟಿದ್ದಾರೆ. ಕಾಡಿನ ಪ್ರಾಣಿಗಳು ಇದರ ಹೊರಗೆ ಬರುವ ಅಗತ್ಯವೇ ಇಲ್ಲ. ಕಾಡುಕುರಿ, ಜಿಂಕೆ, ನವಿಲು ಹೀಗೆ ಪ್ರಾಣಿ ಸಂಕುಲಗಳ ತಂಡವೇ ಇವರ ಕಾಡಿನಲ್ಲಿದೆ. ಕಾಡು ಬೆಳೆಯಲು ಅವು ತಮ್ಮದೇ ಆದ ಕೊಡುಗೆಯನ್ನು ಕೊಡುತ್ತಿವೆ. ಕಾಡಿಗೆ ಬೆಂಕಿ ತಗುಲದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಕಾಡುಮಲ್ಲಿಗೆ, ಹೆಗ್ಗರಣಿ, ಮಧುನಾಶಿನಿ, ಗಣಪೆ, ಸೀಗೆ ಮುಂತಾದ ಬಳ್ಳಿಗಳು ಮರಗಳ ಆಶ್ರಯ ಪಡೆದಿವೆ. ಅನೇಕ ಬೆಟ್ಟ ಪ್ರದೆಶಗಳಲ್ಲಿ ಕಣ್ಮರೆಯಾಗುತ್ತಿರುವ ಕುಂಟುನೇರಳೆ, ಚಂದಕಲು, ಬಿಕ್ಕೆ, ಸುರಹೊನ್ನೆ, ಹೆಬ್ಬೇವು, ಸಂಪಿಗೆ, ಹೆಬ್ಬಲಸು, ಅಮಟೆ, ನೆಲ್ಲಿ, ಮದ್ದಾಲೆ, ಬೊಬ್ಬಿ ಮುಂತಾದ ಮರಗಳು ಸೋಂಪಾಗಿ ಬೆಳೆದು ನಿಂತಿವೆ. ಇವೆಲ್ಲ ಕಾಡಿನ ಕಥೆಯನ್ನು ಹೇಳುತ್ತ ನೀರನ್ನು ಕೊಡುತ್ತಿವೆ.

Wednesday, September 11, 2013

ಅಜ್ಜಿ ಗುಂಡಿ


    ಕರ್ನಾಟಕದ ಕಾಶ್ಮೀರ ಎಂಬ ಖ್ಯಾತಿಗೆ ಪಾತ್ರವಾದ ಉತ್ತರಕನ್ನಡ ಜಿಲ್ಲೆಯಲ್ಲಿ ನೂರಾರು ಜಲಪಾತಗಳಿವೆ. ಹಲವು ಪ್ರಸಿದ್ಧಿಗೆ ಬಂದಿದ್ದರೂ ಮತ್ತೆ ಕೆಲವು ನಿಸರ್ಗದ ಮಡಿಲಿನಲ್ಲಿಯೇ ಉಳಿದುಕೊಂಡಿವೆ. ಅಂತವುಗಳ ಸಾಲಿಗೆ ಸೇರುವುದು ಯಲ್ಲಾಪುರ ತಾಲೂಕಿನ ಅಜ್ಜಿಗುಂಡಿ ಜಲಪಾತ.
    ಸುತ್ತಮುತ್ತಲೂ ಬೆಟ್ಟ, ಗುಡ್ಡ, ಕಾಡುಗಳು. ಜೊತೆ ಜೊತೆಗೆ ಹಸಿರು ಮೆರೆಯುವ ತೋಟಗಳು. ಇದರ ನಡುವೆ ಹರಿಯುವ ಬೆಣ್ಣೆ ಜಡ್ಡಿ ಹಳ್ಳ. ಕಾಳಿ ನದಿಯನ್ನು ಓಡೋಡಿ ಮುಟ್ಟುವ ತವಕದಲ್ಲಿ ಗುಡ್ಡಬೆಟ್ಟಗಳಿಂದ ಕೆಳಗೆ ಧುಮುಕುತ್ತಾಳೆ ಆಕೆ. ಇಂತಹ ಸಂದರ್ಭದಲ್ಲಿಯೇ ಜಲಪಾತವೂ ಸೃಷ್ಟಿಯಾಗಿದೆ.
    ಈ ಜಲಪಾತ ಅಷ್ಟೇನೂ ದೊಡ್ಡದಲ್ಲ. 40-50 ಅಡಿ ಎತ್ತರದಿಂದ ಜಲಲ ಜಲಲ ಜಲಧಾರೆಯಾಗಿ ಕುಣಿಯುತ್ತ ಇಳಿಯುತ್ತಾಳೆ. ಜಲಪಾತದಕ್ಕೆ ಎರಡು ಹಂತಗಳಿವೆ. ಮೆಲಿನ ಹಂತ ಆರು ಅಡಿ ಎತ್ತರದ್ದಾಗಿದ್ದರೆ ಕೆಳಗಿನದ್ದು ದೊಡ್ಡದು. ಆರು ಅಡಿ ಎತ್ತರದಿಂದ ಧುಮುಕುವ ಮೊದಲನೇ ಹಂತದ ಬುಡಕ್ಕೆ ಹೋಗಿ ಬೀಳುವ ನೀರಿಗೆ ತಲೆಕೊಟ್ಟು ಕುಳಿತರೆ ಜಲಪಾತಕ್ಕೆ ಬಂದಿದ್ದೂ ಸಾರ್ಥಕ ಎನ್ನಿಸುತ್ತದೆ. ಗುಡ್ಡಗಳನ್ನು ಇಳಿದು ಶ್ರಮಪಟ್ಟು ಬರುವ ಸುಸ್ತೆಲ್ಲ ಒಂದೇಟಿಗೆ ಮಾಯವಾಗುತ್ತದೆ.
    ಕೆಳಗಿನ ದೊಡ್ಡ ಹಂತ ಹಸಿರು ಹಾವಸೆಗಳ ಜೊತೆಗೆ ಕೂಡಿಕೊಂಡಿದ್ದು ನೀರಿರುವ ಸಂದರ್ಭದಲ್ಲಿ ಬಲು ಸುಂದರವಾಗಿ ಕಾಣುತ್ತದೆ. ವರ್ಷದ 365 ದಿನವೂ ಈ ಜಲಪಾತವನ್ನು ನೋಡಲು ಸಾಧ್ಯ. ಜಲಪಾತದ ಬುಡಕ್ಕೆ ಇಳಿಯುವುದೂ ಸುಲಭ. ಬೇಸಿಗೆಯಲ್ಲಿ ನೀರು ಕಡಿಮೆಯಾಗುತ್ತದೆ. ಆದರೆ ಜಲಪಾತದ ಆಕರ್ಷಣೆ ಹೆಚ್ಚುತ್ತದೆ. ತಟ್ಟನೆ ನೋಡಿದರೆ ಕೊಡಗಿನ ಅಬ್ಬಿ ಜಲಪಾತವನ್ನು ನೆನಪಿಸುವ ಅಜ್ಜಿಗುಂಡಿ ಜಲಪಾತದ ಸೌಂದರ್ಯದಲ್ಲಿ ಶೀಖರಪ್ರಾಯ.
    ಯಲ್ಲಾಪುರದಿಂದ 22 ಕಿ.ಮಿ ದೂರದ ಶಾಂತಿವನ ತಾರಗಾರ್ ಎಂಬಲ್ಲಿ ಈ ಜಲಪಾತವಿದೆ. ಯಲ್ಲಾಪುರದಿಂದ ದಿನಕ್ಕೆರಡು ಬಾರಿ ಬೀಗಾರ್ ಎಂಬಲ್ಲಿಗೆ ಬಸ್ ಸೌಕರ್ಯವಿದೆ. ಶಾಂತಿವನ ಕ್ರಾಸ್ನಲ್ಲಿ ಇಳಿದು ಕೂಗಳತೆ ದೂರದಲ್ಲಿರುವ ಜಲಪಾತಕ್ಕೆ ನಡೆದುಕೊಂಡು ಹೋಗಬಹುದು. ಹಸಿರು ಗುಡ್ಡ, ತೋಟ ಪಟ್ಟಿಗಳ ನಡುವೆ ಸರ್ವ ಋತುವಿನಲ್ಲಿಯೂ ಈ ಜಲಪಾತದ ದರ್ಶನ ಸಾಧ್ಯವಿದೆ.
ಜಲಪಾತದ ಮೇಲ್ಭಾಗದಲ್ಲಿ ತಾರಗಾರ್ ಊರಿಗೆ ನೀರಾವರಿ ವ್ಯವಸ್ಥೆಗಾಗಿ ಒಡ್ಡು ನಿಮರ್ಾಣ ಮಾಡಲಾಗಿದೆ. ಆದ್ದರಿಂದ ಪ್ರವಾಸಿಗರು ಆಗಮಿಸಿದ ಸಂದರ್ಭದಲ್ಲಿ ಜಲಪಾತಕ್ಕಾಗಿ ನೀರನ್ನು ಬಿಡಲಾಗುತ್ತದೆ. ಮಳೆಗಾಲದಲ್ಲಿ ದುದ್ರರಮಣೀಯವಾಗಿ ಕಾಣುವ ಈ ಅಜ್ಜಿಗುಂಡಿ ಜಲಪಾತ ಚಳಿಗಾಲ ಹಾಗೂ ಬೇಸಿಗೆಯಲ್ಲಿ ಕಿಲ ಕಿಲ ಕಲರವವನ್ನು ಮಾಡುತ್ತದೆ. ವಾರಾಂತ್ಯದಲ್ಲಿ ಆಗಮಿಸಿ ದಿನವಹಿ ಉಳಿದು ಸವಿಯನ್ನು ಸವಿಯಲು ಇದೊಂದು ಉತ್ತಮ ಪಿಕ್ನಿಕ್ ತಾಣ.
    ಜಲಪಾತದ ತಲೆಯ ಭಾಗದಲ್ಲಿಯೇ ಮನೆಯೊಂದಿದ್ದು ಜಲಪಾತದ ಸೌಂದರ್ಯಕ್ಕೆ ಕೀರೀಟದಂತೆ ಕಾಣಿಸುತ್ತದೆ. ಪ್ಲಾಸ್ಟಿಕ್ ಮುಂತಾದ ತ್ಯಾಜ್ಯಗಳನ್ನು ಈ ಪ್ರದೇಶದಲ್ಲಿ ಎಸೆಯುವುದು ನಿಷೇಧ. ಪ್ಲಾಸ್ಟಿಕ್ ಎಸೆದಿದ್ದು ಕಣ್ಣಿಗೆ ಬಿದ್ದರೆ ಸ್ಥಳೀಯರು ದಂಡವನ್ನು ಹಾಕುತ್ತಾರೆ. ತಾರಗಾರ್ನಲ್ಲಿ ಉಳಿದುಕೊಳ್ಳಲು ಸೌಕರ್ಯವಿದೆ. ಈ ಜಲಪಾತಕ್ಕಾಗಿ ಆಗಮಿಸಿದವರು ಸುತ್ತಮುತ್ತಲ ಸೌಂದರ್ಯವನ್ನು ಆಸ್ವಾದಿಸಬಹುದು. ಜೊತೆಗೆ ಸನೀಹದಲ್ಲೇ ಇರುವ ಬಾವಲಿಗುಹೆ, ಸಾತೊಡ್ಡಿ ಜಲಪಾತ ಸೇರಿದಂತೆ ಅನೇಕ ಪ್ರವಾಸಿ ತಾಣಗಳನ್ನು ನೋಡಬಹುದಾಗಿದೆ.
ಹೀಗೆ ಬನ್ನಿ
    ಈ ಜಲಪಾತಕ್ಕೆ ಆಗಮಿಸುವವರು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರಕ್ಕೆ ಆಗಮಿಸಿ, ಅಲ್ಲಿಂದ 22 ಕಿ.ಮಿ ದೂರದ ವಜ್ರಳ್ಳಿ ಬಳಿ ಬಂದು ಭಾಗಿನಕಟ್ಟಾ-ಬೀಗಾರ್ ಮಾರ್ಗದಲ್ಲಿ 5-6 ಕಿ.ಮಿ ಸಾಗಿದರೆ ತಾರಗಾರ್ ಊರು ಸಿಗುತ್ತದೆ. ಇಲ್ಲೇ ಈ ಜಲಪಾತವಿದೆ. ಇಲ್ಲಿಗೆ ಬರುವವರು ಗಣೇಶ ಹೆಗಡೆ ತಾರಗಾರ 8762951448 ಅಥವಾ ಗಣೇಶ ಕಿರಿಗಾರಿ 08419-238070, 944112440 ಈ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿದರೆ ಅಗತ್ಯ ಮಾರ್ಗದರ್ಶನ ನೀಡುತ್ತಾರಲ್ಲದೇ ಊಟ, ವಸತಿ ವ್ಯವಸ್ಥೆಯನ್ನೂ ಕಲ್ಪಿಸಿಕೊಡುತ್ತಾರೆ.
(ಕನ್ನಡಪ್ರಭದ ಬೈ2ಕಾಫಿಯಲ್ಲಿ ಪ್ರಕಟಗೊಂಡಿದೆ)