Friday, February 25, 2011

ದೇವಣ್ಣ ಸ್ವರ್ಗಾಧಿಪತಿಯಾದ ಕಥೆ

ಭೂಲೋಖದ ಮಹಾಪಿತ ದೇವಣ್ಣ ಇಂದ್ರನಾದ ಕಥೆ ಇದು..
ಓದಿ.. ಎರಡು ಸಾಲು ಬರೆಯಿರಿ..

ಸ್ವರ್ಗದ ಇಂದ್ರ ಪದವಿಗಾಗಿ ದೇವಲೋಕದ ತುಂಬ ಚುನಾವಣೆ ನಡೆಯಲು ದೇವಣ್ಣ ಸತ್ತು ಸೀದಾ ನರಕಕ್ಕೆ ಹೋಗಿದ್ದು ಪ್ರಮುಖ ಕಾರಣವಾಗಿತ್ತು. ಆತ ಕರ್ನಾಟಕ ರಾಜಕೀಯವನ್ನು ಗಬ್ಬೆಬ್ಬಿಸಿ ಕೊನೆಗೊಮ್ಮೆ ಸತ್ತಾಗ ನೇರವಾಗಿ ನರಕಕ್ಕೇ ಹೋದ.
ದೇವಣ್ಣ ಅದ್ಯಾಕೆ ಸ್ವರ್ಗಕ್ಕೆ ಹೋಗಲಿಲ್ಲ ಎಂಬ ಕುತೂಹಲ ನಿಮ್ಮಲ್ಲಿರಬಹುದು. ಆತ ಸತ್ತು ಸ್ವರ್ಗದ ಕಡೆಗೆ ಪಯಣ ಬೆಳೆಸುವ ವೇಳೆಗಾಗಲೆ ಸ್ವರ್ಗದ ಬಾಗಿಲನ್ನು ಹಾಕಿ ಕೆಲವೇ ನಿಮಿಷಗಳಾಗಿತ್ತು. ಹೀಗಾಗಿ ದೇವಣ್ಣ ಸ್ವರ್ಗಕ್ಕೆ ಹೋಗುವುದನ್ನು ಜಸ್ಟ್ ಮಿಸ್ ಮಾಡಿಕೊಂಡಿದ್ದ.
ದೇವಣ್ಣ ನರಕಕ್ಕೆ ಹೋದ. ಆದರೆ ಅಲ್ಲಿ ಚಿತ್ರಗುಪ್ತ ಈತನ ತಂಟೆ ಬೇಡ ಎಂದು ಇವನ ಕೇಸಿನ ಫೈಲಿನ ಹಿಯರಿಂಗನ್ನು ತಡಮಾಡುತ್ತಲೇ ಇದ್ದ. ದೇವಣ್ಣನಿಗಿಂತ ಮುಂಚೆ ಮರಣಿಸಿದ ಅನೇಕ ಘಟಾನುಗಟಿ ನಾಯಕರ ಕೇಸಿನ ಹಿಯರಿಂಗು ಬಾಕಿ ಇದ್ದಿದ್ದೂ, ದೇವಣ್ಣನ ಕೇಸಿನ ಹಿಯರಿಂಗ್ ತಡವಾಗಲು ಮುಖ್ಯ ಕಾರಣವಿರಬಹುದು. ಈ ಕಾರಣಕ್ಕಾಗಿ ನರಕಕ್ಕೆ ಹೋದರೂ ದೇವಣ್ಣನಿಗೆ ಯಾವುದೇ ಶಿಕ್ಷೆ ಇಲ್ಲ ಎಂಬಂತಾಗಿ ಆತ ಹಾಯಾಗಿದ್ದ.
ಆತ ಹೇಳಿ ಕೇಳಿ ದೇವಣ್ಣ. ಸುಮ್ಮನಿರುವ ಜಾಯಮಾನದವನ್ನಲ್ಲ. ನರಕಕ್ಕೆ ಹೋದ ಕೆಲವೇ ಸಮಯದಲ್ಲಿ ಚಿತ್ರಗುಪ್ತನ ಗೆಳೆತನ ಮಾಡಿಯೇ ಬಿಟ್ಟ. ಮಾಡಿದ್ದಷ್ಟೇ ಅಲ್ಲ, ಯಾವಾಗಲೂ ಚಿತ್ರಗುಪ್ತನ ಅಕ್ಕಪಕ್ಕದಲ್ಲಿಯೇ ಸುಳಿದಾಡುತ್ತಾ ಕಟ್ಟೆ ಪಂಚಾಯ್ತಿ ಪ್ರಾರಂಭಿಸಿದ್ದ.
ಹೀಗಿರಲು ಹಲವು ವಸಂತಗಳು ಕಳೆದವು. ಒಂದು ದಿನ ಯಾವುದೋ ದುರ್ಮುಹೂರ್ತದಲ್ಲಿ ನರಕಾಧಿಪತಿ ಯವನ ಕಣ್ಣಿಗೆ ದ್ಯಾವಣ್ಣ ಬಿದ್ದನೋ ಅಥವಾ ದ್ಯಾವಣ್ಣನ ಕಣ್ಣಿಗೆ ನರಕಾಧಿಪತಿ ಬಿದ್ದನೋ ಗೊತ್ತಿಲ್ಲ. ಒಟ್ಟಿನಲ್ಲಿ ಇಬ್ಬರೂ ಮುಖಾಮುಖಿಯಾದರು. ಮಾನವನಾದ ದ್ಯಾವಣ್ಣ  ಯಮರಾಜನ ಜೊತೆ ಮಾತುಕಥೆ ಪ್ರಾರಂಭಿಸಿದ. ಅಷ್ಟೇ ಅಲ್ಲ, ತೀರಾ ಹತ್ತಿರದ ವ್ಯಕ್ತಿಯಾಗಿ ರೂಪುಗೊಂಡು ಬಿಟ್ಟ. ಯಮನೂ ಇತ್ತೀಚೆಗೆ ತುಂಬಾ ಪಾಸ್ಟಾಗಿ ಓಡುತ್ತಿರುವ ಬೂಮಿಯ ವಿಷಯವನ್ನು ಅರಿತಿರದ ಕಾರಣ ದೇವಣ್ಣನಿಂದ ಅದನ್ನು ಕೆಲಿ ತಿಳಿದುಕೊಂಡ. ದ್ಯಾವಣ್ಣನಿಗೂ ತನ್ನ ಮಾತನ್ನು ಕೆಳುವವರು ಬೇಕಿತ್ತು. ಸಿಕ್ಕಿದ್ದೇ ಛಾನ್ಸು ಎಂಬಂತೆ ದ್ಯಾವಣ್ಣ ತನ್ನ ಎಂದಿನ ಬೆಣ್ಣೆ ಮಾತನ್ನು ಶುರು ಹಚ್ಚಿದ ಅಲ್ಲದೆ ಯಮನಿಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಬೆಣ್ಣೆ ಹಚ್ಚಿದ. ತನ್ನ ರಾಜಕೀಯ ವಿವಿಧ ಚತುರಪಟ್ಟುಗಳು, ತಾನು ಅಧಿಕಾರ ಹಿಡಿಯಲು ಮಾಡಿದ ಪ್ರಯತ್ನಗಳು ಈ ಮುಂತಾದವುಗಳನ್ನೆಲ್ಲ ಪುರಾಣದ ಕಥೆಗಳಂತೆ ಹೇಳಿದ. ಜೊತೆಗೆ ತಾನು ಕರ್ನಾಟಕದಲ್ಲಿ ಹುಟ್ಟಲೆ ಬಾರದಿತ್ತು ಎಂದೂ ಹೇಳಿ ಕನ್ನಡಿಗರೆಡೆಗಿನ ತನ್ನ ಶತಮಾನದ ದ್ವೇಷವನ್ನೂ ಕಾರಿಕೊಂಡ.
ಮಾತು ಲೋಕಾಭಿರಾಮದ ಡೆಡ್ ಎಂಡ್ನಲ್ಲಿ ಇನ್ನೇನು ಟರ್ನ್ ತೆಗೆದುಕೊಳ್ಳಬೇಕು ಎಂಬಂತಿದ್ದಾಗ ಯಮನ ಬಳಿ ದ್ಯಾವಣ್ಣ ತನ್ನ ಕೂದಲಿಲ್ಲದ ತಲೆಯನ್ನು ಓಡಿಸಿದ. ಅಲ್ಲದೆ ನೀನ್ಯಾಕೆ ಸ್ವರ್ಗಾಧಿಪತಿಯಾಗಬಾರದು ಎಂದು ಯಮರಾಜನನ್ನು ಪ್ರಶ್ನಿಸಿಬಿಟ್ಟ. ಇಲ್ಲಿಯವರೆಗೂ ಕೊಟ್ಟ ಕುದುರೆಯನ್ನು ಏರಿ ಸವಾರಿ ಮಾಡುತ್ತಿದ್ದ ಯಮನಿಗೆ ದ್ಯಾವಣ್ಣ ಕೇಳಿದ ಪ್ರಶ್ನೆ ಕಾಡಿಬಿಟ್ಟಿತು. ಅಲ್ಲದೆ ಆತನ ಪ್ರಶ್ನೆಯಲ್ಲೂ ತರ್ಕವಿದೆಯಲ್ಲ ಎನಿಸಿತು.
ಕೊನೆಗೆ ಯಮ ಡೈರೆಕ್ಟಾಗಿ ಇಂದ್ರನ ಬಳಿ ಹೋಗಿ ನಿನ್ನ ಸ್ಥಾನವನ್ನು ನನಗೆ ಬಿಟ್ಟುಕೊಡು ಎಂದು ಕೇಳಿದ. ದಕ್ಕೆ ಇಂದ್ರ ಒಪ್ಪಲಿಲ್ಲ. ಪರಿಣಾಮ ಇಂದ್ರ ಹಾಗೂ ಯಮನಿಗೆ ಶರಂಪರ ಜಗಳವಾಯಿತು. ಪರಿಹಾರ ದೊರೆಯದಾದಾಗ ಯಮ ದ್ಯಾವಣ್ಣನ ಸಲಹೆಯ ಮೆರೆಗೆ ಹೈಕಮಾಂಡ್ ವಿಷ್ಣುವಿನ ಅಪೀಲ್ ಹೋದ. ವಿಷ್ಣುವಿಗೂ ಮೊದಲು ಈ ಸಮಸ್ಯೆಯನ್ನು ಬಗೆ ಹರಿಸಲು ಸಾಧ್ಯವಾಗಲೇ ಇಲ್ಲ.
ಕೊನೆಗೆ ಸಂಚಾರಿ ನಾರದರು ಬಂದು ಇಬ್ಬರಿಗೂ ಚುನಾವಣೆ ನಡೆಸಿ ಗೆದ್ದವರು ಇಂದ್ರನಾಗಲಿ ಎಂದಾಗ ಎಲ್ಲರೂ ಹೌದೆಂದರು. ಈ ಕಾರಣದಿಂದ ದೇವಲೋಕದಲ್ಲಿ ಚುನಾವಣೆ ನಡೆಯಲು ಮೊದಲಾಯಿತು. ಇಂದ್ರ ಹಾಗೂ ಆತನ ಬೆಂಬಲಿಗರು, ಯಮ ಹಾಗೂ ಆತನ ಬೆಂಬಲಿಗರು ದೇವಲೋಕದಲ್ಲಿ ಚುನಾವಣೆಗೆ ನಿಂತುಬಿಟ್ಟರು. ಇಷ್ಟರಲ್ಲಾಗಲೇ ದೇವಲೋಕದಲ್ಲಿಯೂ ವರ್ಡ್ ಫೆಮಸ್ ಆಗಿದ್ದ ದ್ಯಾವಣ್ಣ ಸಹ ಒಂದು ಕೈ ನೋಡಿಬಿಡುವಾ ಎಂದು ಚುನಾವಣೆಗೆ ಸ್ಪರ್ಧಿಸಿದ್ದ.!!
ಕೊನೆಗೊಮ್ಮೆ ಚುನಾವಣೆ ಸಾಂಗವಾಗಿ ನೆರವೇರಿ ಫಲಿತಾಂಶವೂ ಹೊರಬಿದ್ದಿತು. ವಿಚಿತ್ರವೆಂದರೆ ಇಂದ್ರ ಹಾಗೂ ಯಮ ಅವರವರ ಜೊತೆಗಾರರೊಡನೆ ಸಮ ಪ್ರಮಾಣದ ಕ್ಷೇತ್ರಗಳಲ್ಲಿ ಗೆದ್ದು ಬಿಟ್ಟಿದ್ದರು. ಮತ್ತೆ ಹಲೆ ಸಮಸ್ಯೆಯೆ ಮುಂದುವರಿಯುವ ಲಕ್ಷಣಗಳೆಲ್ಲ ನಿಚ್ಚಳವಾಗಿ ಕಣ್ಣೆದುರು ರಾಚತೊಡಗಿತು. ಆದರೆ ವಿಚಿತ್ರವೆಂದರೆ ದ್ಯಾವಣ್ಣ ದೇವಲೋಕದಲ್ಲಿ ಒಂದು ಕ್ಷೇತ್ರದಲ್ಲಿ ಗೆದ್ದುಬಿಟ್ಟಿದ್ದ. ! ಹೀಗಾಗಿ ದ್ಯಾವಣ್ಣ ಸ್ವರ್ಗದ ಅಧಿಪತಿಯ ನಿರ್ಣಯಿಸುವ ನಿರ್ಣಾಯಕ ವ್ಯಕ್ತಿಯಾಗಿಬಿಟ್ಟಿದ್ದ. ಆತ ಬೆಂಬಲ ನೀಡಿದ ವ್ಯಕ್ತಿಗಳು ಇಂದ್ರನಾಗುವ ಸಾಧ್ಯತೆಗಳಿದ್ದವು.
ಆಗ ಪುನಃ ತನ್ನ ಬೋಳು ತಲೆಯನ್ನು ಓಡಿಸಿದ ದ್ಯಾವಣ್ಣ ಸೀದಾ ಇಂದ್ರನ ಬಳಿ ಹೋಗಿ ಮೈತ್ರಿ ಮಾಡಿಕೊಂಡ. ಮೈತ್ರಿಗೆ ಮುನ್ನ ಹಲವಾರು ಕರಾರು ಪತ್ರಗಳನ್ನಿಟ್ಟು ಅದಕ್ಕೆ ಸಹಿಯನ್ನೂ ಹಾಕಿಸಿಕೊಂಡ.! ಆ ಪ್ರಕಾರವಾಗಿ ದೇವಲೋಕದಲ್ಲಿ ತಾನೆ ಮೊದಲ ಅವಧಿಕೆ ಇಂದ್ರನಾಗಬೇಕು ಎಂದು ಪಟ್ಟುಹಿಡಿದ. ಮೊದಲಿನ ಅಧಿಕಾರದ ರುಚಿ ಕಂಡಿದ್ದ ಇಂದ್ರ ಇದಕ್ಕೆ ಕಣ್ಣು ಮುಚ್ಚಿ ಒಪ್ಪಿಕೊಂಡ. ಪರಿಣಾಮವಾಗಿ ದ್ಯಾವಣ್ಣ ಸ್ವರ್ಗಕ್ಕೇ ರಾಜನಾಗಿ ಎಲ್ಲರ ಅಚ್ಚರಿಗೆ ಕಾರಣನಾಗಿಬಿಟ್ಟ.
ಇಷ್ಟೇ ಆಗಿದ್ದಿದ್ದರೆ ದೇವಣ್ಣನ ವ್ಯಕ್ತಿತ್ವಕ್ಕೆ ಅಂತಹ ವಿಶೇಷ ಅರ್ಥಗಳೇ ಬರುತ್ತಿರಲಿಲ್ಲ. ತನ್ನ ಇಂದ್ರಾವಧಿ ಮುಗಿಯುತ್ತ ಬಂದಂತೆ ದ್ಯಾವಣ್ಣ ತನ್ನ ಎಂದಿನ ಡಬ್ಬಲ್ಗೇಮ್ ಪ್ರಾರಂಭಿಸಿದ. ಇದರಿಂದ ಮಾಜಿ ಇಂದ್ರ ಸಿಟ್ಟಾದ. ದ್ಯಾವಣ್ಣ ತನಗೂ ಮಾಜಿ ಇಂದ್ರನಿಗೂ ನಡುವೆ ಸಿದ್ಧಾಂತ ಬೇಧವಿದೆ ಎಂದು ದೇವಲೋಕದ ಪತ್ರಕರ್ತ ನಾರದರಲ್ಲಿ ಪೇಪರ್ ಸ್ಟೇಟ್ಮೆಂಟ್ ಕೊಟ್ಟ.! ಕೊನೆಗೊಮ್ಮೆ ಎಲ್ಲರ ನಿರೀಕ್ಷೆಯಂತೆ ಆ ಮಧುರ ಮೈತ್ರಿ ಮುರಕೊಂಡು ಬಿತ್ತು.
ಹೀಗಾದ ನಂತರ ದ್ಯಾವಣ್ಣ ಮತ್ತೆ ಯಮನ ಬಳಿ ಬಂದ. ಮೊದ ಮೊದಲು ಯಮ ದ್ಯಾವಣ್ಣನ ವಿರುದ್ಧ ಎಗರಾಡಿದರೂ, ಆ ನಂತರ ದ್ಯಾವಣ್ಣನ ರಂಗುರಂಗಿನ ರಂಗೀನ್ ಮಾತಿಗೆ ಕರಗಿ ನೀರಾಗಿ ದ್ಯಾವಣ್ಣನ ಜೊತೆ ಹೊಂದಾಣಿಕೆಗೆ ಮುಂದಾದ. ಮತ್ತದೇ ಅಧಿಕಾರದ ಆಮಿಷ ಎದುರಿಟ್ಟ. ಒಪ್ಪದಿದ್ದ ಯಮನಿಗೆ ಉಪೇಂದ್ರ (ಉಪ + ಇಂದ್ರ) ಪಟ್ಟವನ್ನು ನೀಡುವುದಾಗಿ ಪುಸಲಾಯಿಸಿದ. ಹಲವಾರು ಆಣೆ ಪ್ರಮಾಣಗಳನ್ನೂ ನೀಡಿದ. ಕೊನೆಗೊಮ್ಮೆ ಯಮ ಒಪ್ಪಿಕೊಂಡ ಇದರಿಂದಾಗಿ ದ್ಯಾವಣ್ಣ ಮತ್ತೊಮ್ಮೆ ಇಂದ್ರ ಪದವಿಗೆ ಏರಿದ. ಯಮ ಉಪೆಂದ್ರನಾಗಿಬಿಟ್ಟ.
ಹಲವು ವರ್ಷಗಳವರೆಗೆ ಅಧಿಕಾರ ನಡೆಸಿದ ನಂತರ ಕೊನೆಗೊಮ್ಮೆ ಅಧಿಕಾರವನ್ನು ನಡೆಸಿದ ನಂತರ ಯಮನಿಗೆ ಅಧಿಕಾರ ಬಿಟ್ಟುಕೊಡುವ ಕಾಲ ಹತ್ತಿರಕ್ಕೆ ಬಂತು. ಮತ್ತೆ ಗೌಡಣ್ಣ ತನ್ನ ವರಾತ ಪ್ರಾರಮಭಿಸಿದ. ಆದರೆ ಯಮ ಈ ಸಾರಿ ದ್ಯಾವಣ್ಣನ ವಿರುದ್ಧ ತಿರುಗಿ ಬಿದ್ದ.! ಮತ್ತೆ ಮೈತ್ರಿ ಮುರಿದುಬಿತ್ತು. ಬಗೆಹರಿಯದಂತಹ ಹಳೆಯ ಸಮಸ್ಯೆ ಮತ್ತೆ ಮುಂದುವರಿಯಿತು. ಕೊನೆಗೆ ಭಗವಾನ್ ಮಹಾವಿಷ್ಣುವಿಗೆ ಸಮಸ್ಯೆ ಪರಿಹಾರ ಮಾಡಲಾಗದೇ ಕೆಲಕಾಲ  ರಾಷ್ಟ್ರಪತಿ ಆಳ್ವಿಕೆ ಹೇರಿದ. ಇದರಿಂದ ಯಮ ಹಾಗೂ ಇಂದ್ರರು ಕಂಗಾಲಾದರು. ರಾಷ್ಟ್ರಪತಿ ಆಳ್ವಿಕೆ ಬೇಡವೆಂದರು. ಅಷ್ಟರಲ್ಲಿ ಬುದ್ದಿ ಬಂದಿದ್ದ ಯಮ ತನಗೆ ಕೊಟ್ಟಕುದುರೆಯೇ ಸಾಕು, ತಾನು ನರಕಾಧಿಪತಿಯಾಗಿದ್ದರೇ ಒಳ್ಳೆಯದು ಎಂದು  ಒಪ್ಪಿಕೊಂಡ ಕಾರಣ ಸಮಸ್ಯೆ ಅರಾಮಾವಾಗಿ ಕಳೆದುಹೋಯಿತು.
ಅಷ್ಟರಲ್ಲಿ ದ್ಯಾವಣ್ಣನ ಕೆಸು ಹಿಯರಿಂಗಿಗೆ ಬಂತು. ಎಲ್ಲರೂ ದ್ಯಾವಣ್ಣನಿಗೆ ಶಿಕ್ಷೆ ನೀಡಬೇಕು ಅಂದುಕೊಂಡರೂ ಯಾವ ಶಿಕ್ಷೆ ನೀಡಬೇಕೆಂಬುದು ಬಗೆ ಹರಿಯಲಿಲ್ಲ. ಕೊನೆಗೆ ಎಲ್ಲರೂ ನಾರದರು ಕೊಟ್ಟ ’ಗೌಡಣ್ಣ ಮತ್ತೆ ಪುನಃ ಕರ್ನಾಟಕದಲ್ಲೇ ಹಾ(ಆ)ಸನದಲ್ಲೇ ಹುಟ್ಟಲಿ’ ಎಂಬ ನಿರ್ಣಯಕ್ಕೆ ಒಪ್ಪಿ ಶಿಕ್ಷೆ ಜಾರಿಮಾಡಿದರು. ಅಷ್ಟರಲ್ಲಿ ಕಾಂಪ್ರಮೈಸ್ ಆಗಿದ್ದ ಯಮ ಹಾಗೂ ಇಂದ್ರರಿಗೆ ತಮ್ಮ ತಮ್ಮ ಹಳೆಯ ಕೆಲಸಗಳೇ ಮುಂದುವರಿದಿದ್ದವು.
ಕರ್ನಾಟಕದಲ್ಲಿ ಮರಳಿ ಹುಟ್ಟುವ ಮುನ್ನ ದ್ಯಾವಣ್ಣ ದೇವಲೋಕದ ಪತ್ರಕರ್ತ ನಾರದರ ಬಳಿ ಪೇಪರ್ ಸ್ಟೇಟ್ಮೆಂಟ್ ಕೊಡುತ್ತಾ ’ಛೇ ನಾನು ದೇವಲೋಕಕ್ಕೆ ಕಾಲಿಡಬಾರದಿತ್ತು. ಕಾಲಿಟ್ಟು ತಪ್ಪು ಮಾಡಿಬಿಟ್ಟೆ....’ ಎಂದ !!

Thursday, February 24, 2011

ಇವರ ಸಾಧನೆಗೆ ಸಾಟಿ ಯಾರು??

ಕಾಲಿಲ್ಲದ ರಾಘವೇಂದ್ರ ಸಮುದ್ರ ನದಿಗಳನ್ನು ಗೆದ್ದ...

ನಮ್ಮ ಸಮಾಜದಲ್ಲಿ, ನಮ್ಮ ನಡುವೆ ನೂರಾರು ಅಂಗವಿಕಲ ವ್ಯಕ್ತಿಗಳನ್ನು ಕಾಣುತ್ತಿರುತ್ತೇವೆ. ಯಾವುದೋ ಒಂದು ರೀತಿಯಲ್ಲಿ ಅಂಗವೈಕಲ್ಯವನ್ನು ಹೊಂದಿರುವ ಇವರಿಗೆ ಜನ್ಮಜಾತವಾಗಿ ಕೆಲವು ಪ್ರತಿಭೆಗಳು ಬಂದಿರುತ್ತವೆ. ಮತ್ತೆ ಕೆಲವರು ತಮ್ಮ ಅಂಗವೈಕಲ್ಯ ಮರೆತು ಹೋಗುವಂತೆ ಕಷ್ಟಪಟ್ಟು ಸಾಧನೆ ಮಾಡುತ್ತಾರೆ. ವಿಶ್ವದಾದ್ಯಂತ ಹೆಸರುವಾಸಿಯಾಗುತ್ತಾರೆ. ಅಂತವರ ಸಾಲಿಗೆ ಸೇರುವ ಓರ್ವ ಸಾಧಕ ನಮ್ಮ ಕನ್ನಡ ನಾಡಿನಲ್ಲಿಯೇ ಇರುವ ರಾಘವೇಂದ್ರ ಅಣ್ವೇಕರ್. ನಮ್ಮ ನಾಡಿನಲ್ಲೇ ಇದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ ವ್ಯಕ್ತಿ ಈತ.
ರಾಘವೇಂದ್ರ ಅಣ್ವೇಕರ್ ತನ್ನ ಅಂಗವೈಕಲ್ಯವನ್ನೂ ಮೀರಿ ನಿಂತ ಛಲಗಾರ. ಹುಟ್ಟಿದ ಕೆಲವೇ ದಿನಗಳಲ್ಲಿ ಕಾಡಿದ್ದು ಪೋಲಿಯೋ. ಅದರಿಂದಾಗಿ ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡರೂ ಎದೆಗುಂದದೇ ಅಂತರಾಷ್ಟ್ರೀಯ ಈಜುಪಟುವಾಗಿ ರಾಘವೇಂದ್ರ ಬೆಳೆದುನಿಂತಿದ್ದಾನೆ. ದೈಹಿಕ ದೌರ್ಬಲ್ಯಗಳನ್ನು ಲೆಕ್ಕಿಸದೇ ಭಾರತಕ್ಕೆ ಕೀರ್ತಿ ತಂದುಕೊಟ್ಟ ಸಾಧಕ.
ಈಜಲಿಕ್ಕೆ ಕಾಲುಗಳೇಕೆ ಬೇಕು? ನಾನು ಕೈಗಳ ಮೂಲಕವೇ ಈಜಿ ತೋರಿಸಬಲ್ಲೆ ಎಂಬ ಛಲತೊಟ್ಟು ಅದನ್ನು ಮಾಡಿ ತೋರಿಸಿದ ಅಪರೂಪದ ಸಾಧಕ ರಾಘವೇಂದ್ರ. ಇವರ ಸಾಧನೆಗಳು ಬಹಳಷ್ಟು. ತಾವು ಪ್ರತಿನಿಧಿಸಿದ ಮೊಟ್ಟ ಮೊದಲ ರಾಷ್ಟ್ರೀಯ ವಿಶೇಷ ಚೇತನರ ಕ್ರೀಡಾಕೂಟದಲ್ಲಿ ಪದಕ ಗೆದ್ದು ತಮ್ಮ ಗೆಲುವಿನ ಅಭಿಯಾನ ಸಾಧಿಸಿದ ಇವರು ಇದುವರೆಗೂ ಹಿಮ್ಮೆಟ್ಟಿದ್ದೇ ಇಲ್ಲ. ಎದೆಗುಂದಿದ್ದಂತೂ ಇಲ್ಲವೇ ಇಲ್ಲ. ತಾವು ಭಾಗವಹಿಸಿದ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ 42 ಪದಕಗಳನ್ನು ಗೆಲ್ಲುವ ಮೂಲಕ ಯಾರೂ ಮಾಡದಂತಹ ಸಾಧನೆ ಮಾಡಿ ನಾಡಿಗೆ ಕೀರ್ತಿ ಕಲಶವಾಗಿದ್ದಾರೆ ರಾಘವೇಂದ್ರ.
ಈ ವಿಶಿಷ್ಟ ಈಜು ಪಟುವಿನ ಸಾಧನೆಗೆ ಕೊನೆಯಿಲ್ಲ. 2003ರಲ್ಲಿ ಹಾಂಕಾಂಗ್ನಲ್ಲಿ ನಡೆದಿದ್ದ ಅಂತರಾಷ್ಟ್ರೀಯ ಈಜು ಸ್ಫರ್ಧೆಯಲ್ಲಿ ಮೊಟ್ಟಮೊದಲ ಬಾರಿಗೆ ಭಾಗವಹಿಸಿ ಭಾರತವನ್ನು ಪ್ರತಿನಿಧಿಸಿ, ಚೊಚ್ಚಲ ಪ್ರಯತ್ನದಲ್ಲಿಯೇ 3 ಬೆಳ್ಳಿ ಹಾಗೂ 3 ಕಂಚುಗಳನ್ನು ಗೆದ್ದು ರಾಷ್ಟ್ರಕ್ಕೆ ಗೌರವ ತಂದಿದ್ದಾರೆ. ಅಲ್ಲದೆ ಕನ್ನಡ ನಾಡಿನ ಗೌರವವನ್ನು ವಿಶ್ವದ ಎಲ್ಲಡೆ ಪ್ರಚುರಪಡಿಸಿದ್ದರು.
ಇವರ ಸಾಧನೆಗೆ ಕೊನೆಯೇ ಇಲ್ಲ. ಇದುವರೆಗೆ 6 ಬಾರಿ ಅಂತರಾಷ್ಟ್ರೀಯ ಈಹು ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿರುವ ರಾಘವೇಂದ್ರ ಅಣ್ವೇಕರ್ 20ಕ್ಕೂ ಹೆಚ್ಚಿನ ಪದಕಗಳನ್ನು ಗೆದ್ದಿದ್ದಾರೆ. ಇವಷ್ಟೇ ಅಲ್ಲ. ಸಮುದ್ರದಲ್ಲಿ ಈಜುವ ಕಷ್ಟಕರ ಸಾಹಸಕ್ಕೂ ಕೈಹಾಕಿ ಅದರಲ್ಲೂ ಜಯಗಳಿಸಿದ್ದಾರೆ. ಅರಬ್ಬೀ ಸಮುದ್ರದಲ್ಲಿ 38 ಕಿಲೋಮೀಟರ್ ದೂರದವರೆಗೆ ಈಜುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. ಈ ದೂರವನ್ನು ಇವರು 5 ಗಂಟೆ56 ನಿಮಿಷಗಳಲ್ಲಿ ಕ್ರಮಿಸಿ ಸಾಧನೆ ಮಾಡಿದ್ದಾರೆ. ಅಷ್ಟೇ ಏಕೆ ಭಾಗೀರತಿ ನದಿಯಲ್ಲಿ 81 ಕಿಲೋಮೀಟರ್ ದೂರವನ್ನು ಸತತ 11 ಗಂಟೆ 50 ನಿಮಿಷಗಳಕಾಲ ಈಜಿ ಗುರಿ ತಲುಪಿದ ಸಾಧನೆ ಮಾಡಿದ್ದಾರೆ. ಈಜುವುದರಲ್ಲಿ ಇನ್ನೂ ಹಲವೆಂಟು ಸಾಧನೆಗಳನ್ನು ಕೈಗೊಂಡಿರುವ ಇವರು ಸತತ 12 ಗಂಟೆಗಳ ಕಾಲ ಹಿಮ್ಮುಖವಾಗಿ ಈಜುವ ಹಾಗೂ ತೇಲುವ ಸಾಧನೆಯನ್ನು ಕೈಗೊಂಡಿದ್ದಾರೆ. ಇವರ ಈ ಸಾಧನೆಗೆ, ಶ್ರಮಕ್ಕೆ ನದಿ, ಸಮುದ್ರಗಳೇ ಹೆದರಿ ನಿಂತು ಬಿಟ್ಟಿವೆ.
ದೈಹಿಕ ದೌರ್ಬಲ್ಯವನ್ನು ಹೊಂದಿದ್ದರೂ ಅದಕ್ಕೆ ಅಂಜದೇ. ಅಳುಕದೆ ಶ್ರಮ ಹಾಕಿ, ಸಾಧನೆ ಮಾಡಿ ಎಲ್ಲರ ಪಾಲಿಗೆ ಪ್ರೇರಣೆಯಾಗವಂತಹ ಈ ತ್ರಿವಿಕ್ರಮ ಈಜುಪಟು ರಾಘವೇಂದ್ರ ಅಣ್ವೇಕರ್ ವಿಶಿಷ್ಟ ಸಾಧಕ. ಎಲ್ಲ ಅಂಗಗಳೂ ಸರಿಯಾಗಿ ಇದ್ದೂ, ಯಾವುದಕ್ಕೂ ಬಾರದಂತಿರುವವರ ನಡುವೆ ಈತ ವಿಶಿಷ್ಟವಾಗಿ ಕಾಣುತ್ತಾನೆ. ಅಷ್ಟೇ ಅಲ್ಲ ಬದುಕಿನಲ್ಲಿ ಪದೆ ಪದೆ ಎಡವಿದವರಿಗೆ ಸ್ಫೂರ್ತಿಯಾಗುತ್ತಾರೆ.

ನಿಕ್ ವುಸಿಸಿಕ್
ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡು ನಿರಾಶರಾದವರಿಗೆ, ಅನೇಕ ಕಷ್ಟಗಳನ್ನು ಎದುರಿಸಿ ಹತಾಶೆ ಹೊಂದಿದವರಿಗೆ ಬದುಕಿನ ಬಗ್ಗೆ ಛಲ ಮೂಡಲು ಸ್ಫೂರ್ತಿಯಾಗುವಂತಹ ವ್ಯಕ್ತಿ ನಿಕ್ ವುಸಿಸಿಕ್.
ಆಸ್ಟ್ರೇಲಿಯಾದ ಬ್ರಿಸ್ಬೇನ್ನಲ್ಲಿ ಹುಟ್ಟಿದ ನಿಕನ  ಕಥೆ ಕೇಳಿದರೆ ಎಂತಹ ಕಲ್ಲೆದೆಯ ವ್ಯಕ್ತಿಗಳೂ ಒಮ್ಮೆ ಕಣ್ಣೀರಾಗುತ್ತಾರೆ. ಈ ವಿಶಿಷ್ಟ ವ್ಯಕ್ತಿಗೆ ಹುಟ್ಟಿನಿಂದಲೇ ಕೈಗಳಿಲ್ಲ, ಕಾಲುಗಳೂ ಇಲ್ಲ. ಅವೆರಡರ ಬದಲಿಗೆ ಆ ಜಾಗದಲ್ಲಿ ಒಮದೆರಡು ಚಿಕ್ಕ ಚಿಕ್ಕ ಮಾಂಸದ ತುಂಡುಗಳಿವೆ ಅಷ್ಟೇ.
ಈತ ಹುಟ್ಟಿದ ತಕ್ಷಣ ನಿಕ್ನ ತಾಯಿ ಈತನನ್ನು ನೋಡಿ ಒಮ್ಮ ಮೂರ್ಛೆ ಬಿದ್ದಿದ್ದಳಂತೆ. ನೋಡಿದ ವೈದ್ಯರೂ ಹೌಹಾರಿ ಈತ ಬದುಕುವವನಲ್ಲ ಎಂದಿದ್ದರಂತೆ. ಆದರೆ ನಿಕ್ ಬದುಕಿ ಬಿಟ್ಟ. ಆತನ ತಾಯಿ ಆತನನ್ನು ಸಾಧಕನನ್ನಾಗಿ ಮಾಡಲು ಪಣ ತೊಟ್ಟಳು. ಆತನಿಗೆ ಚಿಕ್ಕಂದಿನಿಂದಲೇ ಈಜುವುದನ್ನು ಕಲಿಸಿದಳು. ಓದಲು ಕಲಿಸಿದಳು, ಬಾಯಿಯ ಮೂಲಕ ಬರೆಯಲು ಕಲಿಸಿದಳು. ತಾಯಿಯ ಒತ್ತಾಸೆಯಂತೆ ನಿಕ್ ಬಹು ಬೇಗನೆ ಅವೆಲ್ಲವನ್ನೂ ಕಲಿತ. ಕಷ್ಟಪಟ್ಟು ಈಜುವುದನ್ನು ಕಲಿತ. ಎಲ್ಲ ಕ್ಲಾಸುಗಳನ್ನೂ ಉತ್ತಮ ದರ್ಜೆಯಲ್ಲಿ ಪಾಸುಮಾಡುತ್ತ ಕಳೆದ. ಅಷ್ಟೇ ಅಲ್ಲ ಆತ ಗಾಲ್ಫ್ ಆಡುವುದನ್ನೂ ಕಲಿತ.
ಅಯ್ಯೋ ಹೀಗಾಯಿತಲ್ಲ, ಎಂದು ಆತ ಎಂದಿಗೂ ಹೇಳಲಿಲ್ಲ. ತನ್ನ ವೈಕಲ್ಯಗಳನ್ನೇ ತನ್ನ ಸಾಧನೆಗೆ ಮೆಟ್ಟಿಲನ್ನಾಗಿ ಮಾಡಿಕೊಂಡ ನಿಕ್ ನಮ್ಮೆಲ್ಲರಿಗಿಂತ ಮೇಲ್ಮಟ್ಟಕ್ಕೇರಿದ. ಈಗ ನಿಕ್ಗೆ 28 ವರ್ಷ ವಯಸ್ಸು. ವಿಶ್ವದಾದ್ಯಂತ ಪ್ರವಾಸ ಮಾಡುವ ಈತ ಅಲ್ಲಿನ ಜನರಿಗೆ ತನ್ನ ಸಾಧನೆಯ ಚಿತ್ರಣಗಳನ್ನು ತೋರಿಸಿ ಅವರಲ್ಲಿ ಆಶಾವಾದ ಹುಟ್ಟಿಸುವ ಕಾರ್ಯ ಮಾಡುತ್ತಿದ್ದಾನೆ. ಬದುಕಿನಲ್ಲಿ ಸೋತವರಿಗೆ ಬದುಕಿನ ಕಡೆಗೆ ಉತ್ಸಾಹ ಮೂಡಿಸುವ ಕೆಲಸವನ್ನು ನಿಕ್ ಯಾವಾಗಲೂ ಕೈಗೊಳ್ಳುತ್ತಿರುತ್ತಾನೆ. ಈತ ಮಾತಾಡಿರುವ ಸಿಡಿಗಳು ವಿಶ್ವದಲ್ಲಿ ಅದೆಸ್ಸ್ಟಾ ಸಂಖ್ಯೆಯಲ್ಲಿ ಮಾರಾಟವಾಗಿವೆ. ಆತನ ಸಾಧನೆಯ ವೀಡಿಯೋ ತುಣುಕುಗಳಿಗೆ ವಿಶ್ವದಾದ್ಯಂತ ಬೇಡಿಕೆ ಇವೆ. ಪಾಶ್ಚಾತ್ಯ ರಾಷ್ಟ್ರಗಳ ಅದೆಷ್ಟೋ ಯುವಕರು ನಿಕ್ನ ಮಾತಿಗೆ ಮರುಳಾಗಿ ಬದುಕಿನೆಡೆಗೆ ಪ್ರೀತಿ ಬೆಳೆಸಿಕೊಂಡಿದ್ದಾರೆ. ಅದೆಷ್ಟೋ ಜನ ನಿಕ್ನ ಅಭಿಮಾನಿಗಳಾಗಿದ್ದಾರೆ. ಕೈಕಾಲುಗಳಿಲ್ಲದಿದ್ದರೂ ಸಾಧಿಸಬಲ್ಲೆ ಎಂಬುದಕ್ಕೆ ನಿಕ್ನೇ ಸ್ಫೂರ್ತಿ.
ಇಂತಹ ಸಾಧಕರ ನಡುವೆ ನಾವು ಅದೆಷ್ಟು ಕುಬ್ಜರಾಗುತ್ತೇವೆ ಅಲ್ಲವೇ. ನಮಗೆ ಇಂತಹ ವ್ಯಕ್ತಿಗಳು ಅದೆಷ್ಟು ಸ್ಫೂರ್ತಿಯನ್ನು ನೀಡುತ್ತಾರೆ ಅಲ್ಲವೇ?


Monday, February 21, 2011

ಕರ್ನಾಟಕದ ಅಣೆಕಟ್ಟುಗಳು


ಅಣೆಕಟ್ಟುಗಳು ಎಂದರೆ ‘ಭವ್ಯ ಭಾರತ ನಿರ್ಮಾಣದ ದೇಗುಲಗಳಿದ್ದಂತೆ ಎಂದು ‘ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರ ಲಾಲ್ ನೆಹರೂ ಹೇಳಿದ್ದರು. ಅವರ ಮಾತಿನಂತೆ ‘ಭಾರತದಲ್ಲಿ ಅದೆಷ್ಟೋ ಅಣೆಕಟ್ಟುಗಳು ನಿರ್ಮಾಣವಾಗಿವೆ. ಕರ್ನಾಟಕದಲ್ಲಿಯೂ ‘ಭಾರಿ ಸಂಖ್ಯೆಯಲ್ಲಿಯೇ  ಅಣೆಕಟ್ಟುಗಳು ನಿರ್ಮಿಸಲಾಗಿದೆ. ಕರ್ನಾಟಕದಲ್ಲಿ ಇರುವ ದೊಡ್ಡ ಅಣೆಕಟ್ಟುಗಳ ಸಂಖ್ಯೆ 23. ಅವುಗಳಲ್ಲದೇ ಚಿಕ್ಕಪುಟ್ಟ ಅಣೆಕಟ್ಟುಗಳ ಸಂಖ್ಯೆಗಲೂ ಹಲವಷ್ಟಿವೆ. ಅವುಗಳಲ್ಲಿ ಕೆಲವು ಅಣೆಕಟ್ಟುಗಳ ಬಗ್ಗೆ ಕಿರು ನೋಟ.

ಕೃಷ್ಣರಾಜ ಸಾಗರ ಅಣೆಕಟ್ಟು
‘ಭಾರತದ, ಏಷ್ಯಾದ ಅತ್ಯಂತ ಹಳೆಯ ಅಣೆಕಟ್ಟುಗಳಲ್ಲಿ ಒಂದಾಗಿರುವ ಇದು ‘ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯನವರ ಕನಸಿನ ಕೂಸು. ಕಾವೇರಿ ನದಿಗೆ ಶ್ರೀರಂಗಪಟ್ಟಣದಿಂದ ಕೇವಲ 12 ಕಿಲೋಮೀಟರ್ ದೂರದಲ್ಲಿ ನಿರ್ಮಿಸಲಾಗಿರುವ ಈ ಅಣೆಕಟ್ಟು 130 ಅಡಿ ಎತ್ತರವಾಗಿದೆ. ಕೆಆರ್ಎಸ್ ಎಂದೇ ಹೆಸರಾಗಿರುವ ಈ ಅಣೆಕಟ್ಟು ಮಂಡ್ಯ, ಮೈಸೂರು ಜಿಲ್ಲೆಗಳ ಸಾವಿರಾರು ಎಕರೆಗೆ ನೀರುಣ್ಣಿಸುತ್ತದೆ. ‘ಭಾರತ ಸ್ವತಂತ್ರವಾಗುವ ಮೊದಲೇ ನಿರ್ಮಾಣಗೊಂಡಿರುವ ಈ ಅಣೆಕಟ್ಟು ಹಿಂದಿನ ತಲೆಮಾರಿನ ತಂತ್ರಕ್ಞರ ಯಶಸ್ವಿ ತಂತ್ರಜ್ಞಾನಕ್ಕೆ ಸಾಕ್ಷಿ. ಈ ಅಣೆಕಟ್ಟಿನ ಕೆಳ‘ಾಗದಲ್ಲಿ ನಿರ್ಮಿಸಲಾಗಿರುವ ಬೃಂದಾವನ ಉದ್ಯಾನವನವೂ ಅಷ್ಟೇ ಪ್ರಸಿದ್ಧಿ ಹೊಂದಿದ್ದು ವಿಶ್ವ ವಿಖ್ಯಾತಿ ಗಳಿಸಿದೆ.

ಲಿಂಗನ ಮಕ್ಕಿ ಅಣೆಕಟ್ಟು.
ಶರಾವತಿ ನದಿಗೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಲಿಂಗನಮಕ್ಕಿ ಎಂಬಲ್ಲಿ ನಿರ್ಮಿಸಲಾಗಿರುವ ಈ ಅಣೆಕಟ್ಟು 1819 ಅಡಿ ಎತ್ತರವಾಗಿದೆ. 1964ರಲ್ಲಿ ಉದ್ಘಾಟನೆಯಾದ ಈ ಅಣೆಕಟ್ಟಿನಿಂದ ಸುಮಾರು 300 ಕಿಲೋಮೀಟರ್ಗಳಷ್ಟು  ‘ಭಾಗ ನೀರಿನಲ್ಲಿ ಮುಳುಗಡೆಯಾಗಿದೆ. ಕರ್ನಾಟಕಕ್ಕೆ ಅಗತ್ಯವಿರುವ ವಿದ್ಯುತ್ತಿನಲ್ಲಿ ಹೆಚ್ಚಿನ ಪ್ರಮಾಣದ ವಿದ್ಯುತ್ ಲಿಂಗನಮಕ್ಕಿಯಲ್ಲೇ ಉತ್ಪಾದನೆಯಾಗುತ್ತದೆ. ಈ ಅಣೇಕಟ್ಟಿನಲ್ಲಿ 4368 ಮುಲಿಯನ್ ಕ್ಯೂಬಿಕ್ ಮೀಟರ್ನಷ್ಟು ನೀರನ್ನು ಸಂಗ್ರಹಿಸಿ ಇಡಬಹುದಾಗಿದೆ.

ಸುಪಾ ಅಣೆಕಟ್ಟು
ಕಾಳಿ ನದಿಗೆ ನಿರ್ಮಿಸಲಾಗಿರುವ ಸುಪಾ ಅಣೆಕಟ್ಟು ಕರ್ನಾಟಕದ ಅತ್ಯಂತ ಎಲ್ಲರವಾದ ಅಣೆಕಟ್ಟು ಎಂಬ ಖ್ಯಾತಿ ಗಳಿಸಿದೆ. ಉತ್ತರ ಕನ್ನಡ ಜಿಲ್ಲೆಯ ಸುಪಾದಲ್ಲಿ ನಿರ್ಮಿಸಲಾಗಿರುವ ಈ ಅಣೆಕಟ್ಟು ವಿದ್ಯುತ್ ಉತ್ಪಾದನೆಯ ಕಾರಣಕ್ಕಾಗಿಯೇ ನಿರ್ಮಾಣಗೊಂಡಿದೆ. 1101 ಮೀಟರ್ ಎತ್ತರ ಇರುವ ಸುಪಾ ಅಣೆಕಟ್ಟು 332 ಮೀಟರ್ ಉದ್ದವಾಗಿದೆ. ಅಣೆಕಟ್ಟನ್ನು 1985ರಂದು ಉದ್ಘಾಟಿಸಲಾಗಿದೆ. ಇದು ಕರ್ನಾಟಕದ ಎರಡನೇ ಅತಿದೊಡ್ಡ ಅಣೆಕಟ್ಟು ಎಂಬ ಖ್ಯಾತಿಯನ್ನೂ ಗಳಿಸಿಕೊಂಡಿದೆ. ಕಾಳಿನದಿಗೆ ಕಟ್ಟಲಾಗಿರುವ ಹಲವಾಸು ದೊಡ್ಡ ಅಣೆಕಟ್ಟುಗಳಲ್ಲಿ ಇದೂ ಒಂದು.

ತುಂಗಭದ್ರಾ ಅಣೆಕಟ್ಟು
2441ಮೀಟರ್ ಉದ್ದ ಹಾಗೂ 49.38 ಮೀಟರ್ ಎತ್ತರ ಹೊಂದಿರುವ ತುಂಗಭದ್ರಾ ಅಣೆಕಟ್ಟು ನೀರಾವರಿ ಉದ್ದೇಶದಿಂದ ನಿರ್ಮಾಣಗೊಂಡಿದೆ. ಇದು ಹೊಸಪೇಟೆಯಿಂದ ಕೇವಲ 5 ಕಿಲೋಮೀಟರ್ ದೂರದಲ್ಲಿದೆ. 33 ಬಹುದೊಡ್ಡ ಗೇಟುಗಳನ್ನು ಹೊಂದಿರುವ ತುಂಗ‘ದ್ರಾ ಅಣೆಕಟ್ಟು ಬಹುದೊಡ್ಡ ಗಾತ್ರವನ್ನು ಹೊಂದಿದೆ. ಈ ಅಣೆಕಟ್ಟಿನಿಂದ ಸಂಗ್ರಹಿಸಲಾದ ನೀರನ್ನು ಕಾಲುವೆಗಳ ಮೂಲಕ ಕರ್ನಾಟಕದ ಚಿಕ್ಕಮಂಗಳೂರು, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ರಾಯಚೂರು, ಕೊಪ್ಪಳ, ಹಾವೇರಿ ಹಾಗೂ ಆಂದ್ರಪ್ರದೇಶದ ಕರ್ನೂಲು, ಮೆಹಬೂಬ್ ನಗರ ಮುಂತಾದ ಜಿಲ್ಲೆಗಳಿಗೆ ನಿರಾವರಿ ಉದ್ದೇಶಕ್ಕಾಗಿ ಬಳಸಲಾಗುತ್ತದೆ.

ಕೊಡಸಳ್ಳಿ ಅಣೆಕಟ್ಟು.
ಕಾಳಿನದಿಗೆ ಯಲ್ಲಾಪುರ ತಾಲೂಕಿನ ಕೊಡಸಳ್ಳಿ ಬಳಿ ನಿರ್ಮಿಸಲಾಗಿರುವ ಈ ಅಣೆಕಟ್ಟನ್ನು 1997ರಲ್ಲಿ ಉದ್ಘಾಟಿಸಲಾಯಿತು. ವಿದ್ಯುತ್ ಉತ್ಪಾದನೆಯ ಉದ್ದೇಶದಿಂದಲೇ ನಿರ್ಮಾಣಗೊಂಡ ಅಣೆಕಟ್ಟು ಇದಾಗಿದೆ. ಪಶ್ಚಿಮ ಘಟ್ಟಗಳ ನಡುವೆ ಇರುವ ಈ ಅಣೆಕಟ್ಟು ನಿರ್ಮಾದ ಸಮಯದಲ್ಲಿ ಕಾಡಿನ ನಾಶದ ವಿರುದ್ಧ ಹಲವು ಹೋರಾಟಗಳು ನಡೆದಿದ್ದವು.

ಆಲಮಟ್ಟಿ ಅಣೆಕಟ್ಟು
ಜುಲೈ2005ರಲ್ಲಿ ಉದ್ಘಾಟನೆಯಾದ ಆಲಮಟ್ಟಿ ಅಣೆಕಟ್ಟು 509 ಮಿಟರ್ ಎತ್ತರವಾಗಿದೆ. ಇದನ್ನು ಈಗ ಸುಪ್ರಿಂ ಕೋರ್ಟಿನ ಆದೇಶದ ಮೇರೆಗೆ 519 ಮೀಟರ್ಗೆ ಏರಿಸಲಾಗುತ್ತಿದೆ. ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ಈ ಅಣೆಕಟ್ಟು ನಿರಾವರಿ ಹಾಗೂ ವಿದ್ಯುತ್ ಉತ್ಪಾದನೆ ಈ ಎರಡೂ ಉದ್ದೇಶ ಹೊಂದಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ನಿರಮಿಸಲಾಗಿರುವ ಈ ಅಣೆಕಟ್ಟು 1565.15 ಮೀಟರ್ ಉದ್ದವಾಗಿದೆ. 42.19 ಟಿಎಂಸಿ ನೀರನ್ನು ಹಿಡಿದಿಡುವ ಸಾಮರ್ಥ್ಯವನ್ನು ಈ ಅಣೆಕಟ್ಟು ಹೊಂದಿದೆ.

ಇವು ಕರ್ನಾಟಕದ ಪ್ರಮುಖ ಅನೆಕಟ್ಟುಗಳು. ಇವಲ್ಲದೆ ಕದ್ರಾ ಅಣೆಕಟ್ಟು, ನಾರಾಯಣಪುರ, ಕಬಿನಿ, ಹಾರಂಗಿ, ಗಾಜನೂರು, ಕದ್ರಾ, ಬಾಚಣಕಿ, ಗೋರೂರು, ಬಸವಸಾಗರ, ಹಿಡಕಲ್, ಕಣ್ವ, ಲಕ್ಕವಳ್ಳಿ, ಮಾರ್ಕೋನಹಳ್ಳಿ, ಸಾತನೂರು, ವಾಣಿವಿಲಾಸ ಸಾಗರ ಮುಂತಾದ ಹಲವು ಮಧ್ಯಮ ಗಾತ್ರದ ಅಣೆಕಟ್ಟುಗಳಿವೆ. ಅದಲ್ಲದೆ ನೂರಕ್ಕೂ ಹೆಚ್ಚಿನ ಚಿಕ್ಕಪುಟ್ಟ ಅಣೆಕಟ್ಟುಗಳಿವೆ. ಇವುಗಳ ಜೊತೆಗೆ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ನೂರಾರು ಚಿಕ್ಕ ಪುಟ್ಟ ಅಣೆಕಟ್ಟುಗಳ ನಿರ್ಮಾಣಕ್ಕೆ ಸಮೀಕ್ಷೆ ನಡೆಸಲಾಗಿದೆ. ಇವುಗಳ ವಿರುದ್ಧ ಪರಿಸರವಾದಿಗಳು ಹೋರಾಟ ಪ್ರಾರಂಭಿಸಿದ್ದಾರೆ.
ಕನ್ನಡ ನಾಡಿಗೆ ವಿದ್ಯುತ್ತಿನ ಜೊತೆಗೆ ಬೆಳೆಗಳಿಗೆ ನೀರನ್ನೂ ನೀಡುತ್ತಿರುವ ಈ ಅಣೆಕಟ್ಟುಗಳು ಭವ್ಯ ಭಾರತದ ದೇಗುಲಗಳೇ ಹೌದು






Thursday, February 3, 2011

ತಾ ತಾ ಗುಬ್ಬಿ ತಾವನ ಗುಬ್ಬಿ.. ಮುಚ್ಚಳ ತೆಗೆದರೆ ಮುನ್ನೂರು ಗುಬ್ಬಿ


ಮನೆಯ  ಮಾಳಿಗೆಯ ಮೇಲೆ ಅತ್ತ ಇತ್ತ ಹಾರಾಡುತ್ತಾ, ಚಿಂವ್ ಚಿಂವ್ ಎನ್ನುವ ಕೂಗು ಹಾಕುತ್ತಾ ಮನುಷ್ಯ ವಾಸಸ್ಥಾನದ ಸುತ್ತಮುತ್ತ ಅಡ್ಡಾಡುವ ಗುಬ್ಬಿಗಳು ಮಾನವನ ಪ್ರಾಚೀನ ಒಡನಾಡಿ. ಗುಬ್ಬಿಯನ್ನು ಇಂಗ್ಲೀಷಿನಲ್ಲಿ ಸ್ಪಾರೋ ಎಂದು ಕರೆಯುತ್ತಾರೆ. 
ಎನಿಮೇಲಿಯಾ ಪ್ರಬೇ‘ಕ್ಕೆ ಸೇರಿದ ಇದು ಪೆಸ್ಸಿರೈಡೆ ಕುಟುಂಬದ ಜೀವಿ.

ಆಹಾರ-ವಿಹಾರ-ವೈವಿಧ್ಯ 
ಗುಬ್ಬಿಗಳಲ್ಲಿ ಮುಖ್ಯವಾಗಿ ಎರಡು ವಿಧ. ಮನೆ ಗುಬ್ಬಿ ಹಾಗೂ ಕಾಡಿನ ಗುಬ್ಬಿ ಎಂಬ ಎರಡು ವಿಧವಿರುವ ಗುಬ್ಬಿಗಳಲ್ಲಿ ಒಂದು ವರ್ಗ ಸದಾ ಮಾನವನ ಇರುವಿಕೆಯನ್ನು ಬಯಸುತ್ತದೆ. ಮತ್ತೊಂದು ವರ್ಗ ಕಾಡಿನಲ್ಲಿಯೇ ವಾಸಿಸುತ್ತದೆ.
ಇವು ಯಾವಾಗಲೂ ಗುಂಪು ಗುಂಪಾಗಿಯೇ ವಾಸಿಸುತ್ತವೆ. ನೂರಕ್ಕೂ ಹೆಚ್ಚಿನ ಸಂಖ್ಯೆಯ ಗುಂಪುಗುಂಪುಗಳನ್ನು ರಚಿಕೊಂಡಿರುವ ಗುಬ್ಬಿಗಳು ಬಹಳ ಚಿಕ್ಕ ಪಕ್ಷಿಗಳು. ಇವುಗಳ ಗಾತ್ರ 11 ಸೆಂಟೀಮೀಟರರ್ನಿಂದ 15 ಸೆಂಟಿಮೀಟರ್ಗಳು. ಕೆಲವೊಂದು ಗುಬ್ಬಿಗಳು 18 ಸೆಂಟೀಮೀಟರ್ಗಳಷ್ಟು ದೊಡ್ಡದಾಗಿ ಬೆಳೆಯುವುದೂ ಉಂಟು. 
ಗುಬ್ಬಿ ವಿಶ್ವವ್ಯಾಪಿ ಪಕ್ಷಿ. ಗುಬ್ಬಿಗಳಿಲ್ಲದ ಪ್ರದೇಶವೇ ಇಲ್ಲ. ಏಷ್ಯಾ, ಅಮೇರಿಕಾ, ಆಫ್ರಿಕಾ, ಆಸ್ಟ್ರೇಲಿಯಾಗಳಲ್ಲಿ ಗುಬ್ಬಿಗಳು ಕಾಣಸಿಗುತ್ತವೆಯಾದರೂ ಅವುಗಳ ಗಾತ್ರದಲ್ಲಿ ಬದಲಾವಣೆಯಿರುತ್ತವೆ.ಗುಬ್ಬಿಗಳು ಹೆಚ್ಚಾಗಿ ಹಣ್ಣುಗಳು, ಬೀಜಗಳು, ಕಾಳುಗಳು ಹಾಗೂ ಚಿಕ್ಕ ಚಿಕ್ಕ ಕೀಟಗಳನ್ನು ತಿನ್ನುತ್ತವೆ. ಸೀಬೆ ಹಣ್ಣುಗಳೆಂದರೆ ಇವಕ್ಕೆ ಅಚ್ಚುಮೆಚ್ಚು. ಆದ್ದರಿಂದಲೇ ಸೀಬೆ ಮರದ ಸುತ್ತ ಇವುಗಳು ದಂಡುಕಟ್ಟಿಕೊಂಡು ವಾಸಿಸುತ್ತವೆ.ಬಣ್ಣ-ಅಂದ-ಚೆಂದಸಾಮಾನ್ಯವಾಗಿ ಮಾಸಲು ಬಣ್ಣ ಹೊಂದಿರುವ ಈ ಗುಬ್ಬಿಯ ದೇಹದ ಮೆಲೆ ಅಲ್ಲಲ್ಲಿ ಬಿಳಿ ಬಣ್ಣದ ರೋಮಗಳಿರುತ್ತವೆ. ಉದ್ದನೆಯ ಪುಕ್ಕ ಹೊಂದಿರುವ ಇವು ರೆಕ್ಕೆ ಬಡಿಯುವ ವೇಗ ಬಹಳ ಜೋರು.ಹೆಣ್ಣು ಗುಬ್ಬಿಯನ್ನು ಆಕರ್ಷಿಸಲು ಗಂಡು ಗುಬ್ಬಿ ತನ್ನ ದೇಹ ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ. ಅಲ್ಲದೆ ತನ್ನ ದೇಹವನ್ನು ವಿಶಿಷ್ಟವಾಗಿ ಬಾಗಿಸಿ ಬಳುಕಿಸುವ ಮೂಲಕ ಅದು ಎಲ್ಲರನ್ನೂ ಆಕರ್ಷಿಸುತ್ತದೆ.

ಗೌರವದ ಭಾವನೆ
ಕರ್ನಾಟಕದಲ್ಲಿ ಸುಗ್ಗಿ ಕಾಲದಲ್ಲಿ ಗುಬ್ಬಿಗಳು ಹೆಚ್ಚಳವಾಗುತ್ತವೆ. ಆದ್ದರಿಂದಲೇ ಕರ್ನಾಟಕದ ಹಳ್ಳಿಗರು ಗುಬ್ಬಿಯನ್ನು ಸುಗ್ಗಿಯ ದೂತರು ಎಂದೇ ಕರೆಯುತ್ತಾರೆ. ಹಳ್ಳಿಗರಿಗೆ ಗುಬ್ಬಿ ಎಂದರೆ ಪವಿತ್ರ ಭಾವನೆ. ಅದನ್ನು ಬಹಳ ಗೌರವದಿಂದ ಕಾಣುತ್ತಾರೆ. ಕೆಲವೊಮ್ಮೆ ಇವು ಭತ್ತದ ಬೆಳೆಯನ್ನು ತಿಂದರೂ ಹೆಚ್ಚಿನ ವೇಳೆ ಇವು ಭತ್ತಕ್ಕೆ ಕಾಟ ಕೊದುವ ಕೀಟಗಳನ್ನು ತಿನ್ನುತ್ತವೆ. ಆದ್ದರಿಂದ ಇವುಗಳೂ ರೈತನ  ಮಿತ್ರನಾಗಿಯೇ ಹೆಸರುವಾಸಿ.

ಮೊಟ್ಟೆ-ಮರಿ
ಮನೆಯ ಮಾಡಿನ ಮೇಲೆ, ತಾರಸಿ ಮೇಲೆ ಗೂಡು ಕಟ್ಟುವ ಗುಬ್ಬಿಗಳು ಒಮ್ಮೆಲೆ 2-3 ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಗೆ ಗಂಡು ಹಾಗೂ ಹೆಣ್ಣು ಗುಬ್ಬಿಗಳು ಸರದಿ ಪ್ರಕಾರ ಕಾವು ಕೂರುತ್ತವೆ. ಮೊಟ್ಟೆಯೊಡೆದು ಹೊರ ಬರುಬ ಮರಿ ದೊಡ್ಡದಾಗಿ, ರೆಕ್ಕೆ ಬಲಿತು ಹಾರಲು ಪ್ರಾರಂಭಿಸುವವರೆಗೂ ಅದರ ಆರೈಕೆ ಈ ಎರಡೂ ಗುಬ್ಬಿಗಳದ್ದು. ಇವು ಹೆಚ್ಚು ಸಂಘ ಜೀವಿಗಳು. ಜೊತೆ ಜೊತೆಯಾಗಿ ಜೀವಿಸುವ ಇವು ಬಹಳ ಚೊಕ್ಕಟ ಪ್ರಾಣಿಗಳು. ತಮ್ಮ ದೇಹವನ್ನು ಶುಚಿಯಾಗಿಡಲು ಹೆಚ್ಚಿನ ಮಹತ್ವ ನೀಡುವ ಇವು ನೀರಿನಲ್ಲಿ ಆಗಾಗ ಸ್ನಾನ ಮಾಡುತ್ತವೆ. ಅಲ್ಲದೆ ಆಗಾಗ ತಮ್ಮ ದೇಹವನ್ನು ಶುಚಿಯಾಗಿಡಲು ಅಗತ್ಯವಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳುತ್ತವೆ.
ಈ ಗುಬ್ಬಿಗಿಗೂ ಮಕ್ಕಳೆಂದರೆ ಪ್ರೀತಿ. ಪುಟ್ಟ ಪುಟ್ಟ ಮಕ್ಕಳು ಬಯಲಿನಲ್ಲಿ ಕೈಯಲ್ಲಿ ಏನಾದರೂ ತಿಂಡಿಗಳನ್ನು ಹಿಡಿದುಕೊಂಡಿದ್ದರೆ ಇವು ತುಸು ಹೆಚ್ಚು ಸಲಿಗೆ ತೆಗೆದುಕೊಂಡು ಯಾವುದೇ ಭಯವಿಲ್ಲದೆ ಮಕ್ಕಳ ಕೈಯಲ್ಲಿನ ತಿಂಡಿಗಳಿಗೆ ಬಾಯಿ ಹಾಕುತ್ತವೆ. ಬೆಕ್ಕುಗಳು, ಕಾಗೆಗಳು, ಗೂಬೆಗಳು, ಈ ಮುಂತಾದ ಪ್ರಾಣಿಗಳು ಗುಬ್ಬಿ ಪಾಲಿಗೆ ಯಮದೂತರು. ತಮ್ಮ ಆಹಾರಕ್ಕಾಗಿ ಗುಬ್ಬಿಗಳನ್ನಿವು ಬೇಟೆಯಾಡಿ ತಿನ್ನುತ್ತವೆ.

ಅಳಿವಿನ ಅಂಚಿನಲ್ಲಿ..
ಸುಮಾರು 10 ಸಾವಿರ ವರ್ಷಗಳಿಗಿಂತ ಹಿಂದಿನಿಂದಲೂ ಮಾನವ ಹಾಗೂ ಗುಬ್ಬಿಯ ಒಡನಾಟ ಸಾಗಿ ಬಂದಿದೆ. ನಮ್ಮ ಜನಪದದ ಕಥೆಗಳಲ್ಲೂ ಗುಬ್ಬಿಗಳು ಹಾಸು ಹೊಕ್ಕಾಗಿವೆ. ಮಕ್ಕಳ ಪ್ರೀತಿಯ ಕಾಕಣ್ಣ ಗುಬ್ಬಣ್ಣ ಕಥೆಯಲ್ಲಿಯೂ ಇವುಗಳಿಗೆ ಬಹು ಮುಖ್ಯ ಸ್ಥಾನ. ಆಸೆ ಬುರುಕ ಕಾಗೆಗೆ ಪುಟಾಣಿ ಗುಬ್ಬಿ ಬಿದ್ಧಿಕಲಿಸುವ ಬಗೆಯಂತೂ ಮಕ್ಕಳನ್ನು ಆಧುನಿಕ ಕಾರ್ಟೂನುಗಳಿಗಿಂತ ಹೆಚ್ಚಾಗಿ ಸೆಳೆಯುತ್ತವೆ. ಇಂತಹ ಗುಬ್ಬಿಗಳು ಇದೀಗ ಅಳಿವಿನ ಅಂಚಿನಲ್ಲಿವೆ. ಮಾನವ ಆಧುನಿಕತೆಯತ್ತ ಸಾಗಿದಂತೆಲ್ಲ ಗುಬ್ಬಿ ಅವನತಿಯತ್ತ ಸಾಗುತ್ತಿದೆ. 
5-10 ವರಷಳ ಹಿಂದೆ ಲಕ್ಷಾಂತರ ಗುಬ್ಬಿಗಳು ಕಾಣಸಿಗುತ್ತಿದ್ದವು. ಆದರೆ ಈಗ ಒಂದೆರಡು ಗುಬ್ಬಿಯನ್ನು ನೋಡಬೇಕಾದರೂ ಕಷ್ಟ ಪಡಬೇಕು. ಮಾನವ ತೀವ್ರಗತಿಯಲ್ಲಿ ಯಾಂತ್ರೀಕೃತನಾಗುತ್ತಿದ್ದಾನೆ. ಇದರ ಪರಿಣಾಮ ಇಂತಹ ಮುಗ್ಧ ಪ್ರಾಣಿ ಹಾಗೂ ಪಕ್ಷಿಗಳ ಮೇಲಾಗುತ್ತಿದೆ. ಮೊಬೈಲ್ ತರಂಗಾಂತರಗಳು ಗುಬ್ಬಿಗಳ ಆರೋಗ್ಯಕ್ಕೆ ಮಾರಕ ಎಂಬ ಸಂಶೋಧನೆಯೊಂದು ಹೊರಬಿದ್ದಿದೆ. ಅದಕ್ಕೆ ತಕ್ಕಂತೆ ಗುಬ್ಬಿಗಳೂ ಕಣ್ಮರೆಯಾಗುತ್ತಿವೆ. ಗುಬ್ಬಿಗಳನ್ನು ರಕ್ಷಿಸಿ ಅವುಗಳ ಜೀವನಕ್ಕೆ ಬದುಕಿಗೆ ನೆರವಾಗದಿದ್ದಲ್ಲಿ ಮುಂದೊಮ್ಮೆ ಕಾಕಣ್ಣ ಗುಬ್ಬಣ್ಣ ಕಥೆಗಳಲ್ಲಿ ಮಾತ್ರ ಇವು ಉಳಿದುಕೊಳ್ಳುವ ಸಾಧ್ಯತೆಗಳಿವೆ. ಮಕ್ಕಳ ಪ್ರೀತಿಯ ಗುಬ್ಬಿಗಳು ಕಣ್ಮರೆಯಾಗುವ ಸಾಧ್ಯತೆಗಳು ಹೆಚ್ಚಿವೆ.

ವಿ ಸು...
ಪತ್ರಿಕೆಯೊಂದಕ್ಕೆ ಬರೆದ ಬರಹದ ಯಥಾವತ್ ಪ್ರತಿ..

Sunday, September 26, 2010

ಕೆಲವು ಹನಿಗಳು

ಕರ್ಮವೀರ ವಿಶೇಷಾಂಕ ಕ್ಕೆ ನೀಡಿರುವ ಕೆಲವು ಚುಟುಕಗಳು..
ನಿಮ್ಮ ಓದಿಗಾಗಿ.
ಅನಿಸಿಕೆ ತಿಳಿಸಿ..

11) ಹೃದಯದ ಸ್ಥಿತಿ
ನಲ್ಲೆ ನೀನು ಒಪ್ಪಿದರೆ
ಈ ಹೃದಯ ನಿನದು
ಆದರೆ ನೀನು ಒಪ್ಪದಿದ್ದರೆ
ಇದರ ಸ್ಥಿತಿ ಬರ್ಬಾದು !
       
12) ತಾಳಿ
ಹರೆಯಕ್ಕೆ,
ಯವ್ವನದೊಡಲಿಗೆ
ಸಿಕ್ಕ ಒಂದು
ಕಡಿವಾಣ.
ಗಂಡಿನ ಲಗಾಮು.

13) ಸೂರ್ಯ
ಭೂಮಿಯೊಡಲ
ಸಂಪತ್ತು ಹುಡುಕಲು
ದೇವರು ಬಿಡುವ
ಟಾರ್ಚು !

14)ಸ್ವಾತಂತ್ರ್ಯ ದಿನ
ದೇಶ
ಬ್ರಿಟೀಷರ ಕೈತಪ್ಪಿ
ರಾಜಕಾರಣಿಗಳ ಕೈ
ಅಪ್ಪಿದ ದಿನ !

15)ಚಂದ್ರ
ರಾತ್ರಿ ಭೂಮಿಗೆ
ನಿದ್ರೆಯ ಕೊಡದೇ,
ಕಾವಲು ನಿಂತು
ಲೈನ್ ಹೊಡೆಯುತ್ತಿರುವ ಭೂಪ !!

16)ಹನಿಗವಿ
ಯುವ ಕವಿಯಾದ ನಾನು
ಅವಳನ್ನು ಕಂಡಾಗಲೆಲ್ಲಾ
ಆಗುತ್ತೇನೆ ಠಟಿಜಥಿ ಕವಿ
ಹನಿ ಕವಿ ಹಾಗೂ `ಹನಿ' ಕವಿ !!

17).ಮದುವೆ
ಮದುವೆಯೆಂದರೆ
ಎರಡು ನಿಷ್ಪಾಪಿ
ಜೀವಿಗಳನ್ನು
ನರಕಕ್ಕೆ ಕಳಿಸುವ
ದಾರಿ!

18)ದೀಪಾವಳಿ
ಬಾಳನ್ನು ಬೆಳಗಿದೆ
ದೀಪಾವಳಿ!
ಸಂತಸ ಪಡುವವನ
ಕಿಸೆಯೊಳಗಣ ಹಣವಾಗಿದೆ
ದಿವಾಳಿ!!

19)ಕಾರಣ
ವಿಶ್ವಕ್ಕೆಲ್ಲ ಜಾಗತೀಕರಣ,
ಔದ್ಯೋಗೀಕರಣ, ಖಾಸಗೀಕರಣ,
ಸಾಮಾಜೀಕರಣ, ಆಧುನೀಕರಣ
ಹೀಗೆಲ್ಲ ಇದ್ದರೆ, ಭಾರತಕ್ಕೆ
ಒಂದೇ ಕಾರಣ, ರಾಜಕಾರಣ !!

20)ಗೋರ್ಮೆಟ್ ನೌಕರ
ಜನರ ಸೇವೆಯನ್ನು
ದನದ ಸೇವೆ
ಎಂದು ತಿಳಿದವ
ಸರಕಾರಿ ನೌಕರ!!

21)ಹುಚ್ಚು
ಭೂಮಿಯ ಮೇಲೆ
ಎಲ್ಲರಿಗೂ ಹಿಡಿದಿದೆ ಹುಚ್ಚು !
ಅದರಲ್ಲೂ ಮೆಗಾ
ಸೀರಿಯಲ್ ನೋಡುವವರಿಗೆ
ತುಸು ಹೆಚ್ಚು !!

22)ಚಂದ್ರನಲ್ಲಿ ಬಾವುಟ
ನಮ್ಮ ಜನ
ಚಂದ್ರನಿಗೂ ಕೊಟ್ಟರು ಕಾಟ!
ನೆಟ್ಟರು ಗೂಟ, ಜೊತೆಗೆ
ಅಮೆರಿಕೆಯ ಬಾವುಟ !!

23)ನಾಕ-ನರಕ
ನಾಕ ನಾಕ ಎನ್ನುತ್ತಿದ್ದ
ಜನರಿಗೆ ಅರ್ಥವಾಗಲಿಲ್ಲ,
ಜಗತ್ತಿನ ಅತಿದೊಡ್ಡ ನರಕವೆಂದರೆ
ಅದು ಅಮೆರಿಕ !!

24)(ವಾ)ನರ
ನರ, ನಾಗರಿಕತೆಯಲ್ಲಿ
ಸಿಲುಕಿ, ಆಧುನೀಕತೆಯಲ್ಲಿ
ಮುಂದುವರಿದು ಆಗುತ್ತಿದ್ದಾನೆ
ವಾನರ !!

25)ವಾಸ್ತವ
ದೂರದ ಗುಡ್ಡ
ಕಣ್ಣಿಗೆ ನುಣುಪು!
ಗೆಳತೀ ಹಾಗೇ ನಿನ್ನ
ಮುಖವೂ ಕೂಡ !!
ದೂರವಿದ್ದರಷ್ಟೇ
ಕಾಣುವುದು ನುಣುಪು !!!

26)ಮೊಡವೆ
ಮದುವೆಗೆ ಮುನ್ನ
ಹುಡುಗಿಯರ ಕಾಡುವ
ಅವರ ಸೊಕ್ಕನ್ನು ಮುರಿಯುವ
ಏಕೈಕ ಸಾಧನ ಮೊಡವೆ !!

27)ಜಮ್ಮು-ಕಾಶ್ಮೀರ
ಭಾರತದ ಅತ್ಯಂತ ಚೆಂದದ ಭಾಗ
ಜಮ್ಮು ಕಾಶ್ಮೀರ !
ಆದರೆ ಅಲ್ಲಿದೆ ಪ್ರತಿದಿನ ಗುಂಡಿನ
ನೆಗಡಿ, ಕೆಮ್ಮು, ದಮ್ಮು, ಜ್ವರ !!

Monday, September 13, 2010

ಏಕ ರೇಖಾ ಗಣಪ ಬಲು ಅಪರೂಪ

ವಿಘ್ನನಿವಾರಕ ಗಣೇಶನ ಚಿತ್ರವನ್ನು ಬಿಡಿಸುವವರು, ಮೂರ್ತಿ ಕೆತ್ತುವವರು ಬಹಳ ಮಂದಿ ಇದ್ದಾರೆ. ಆದರೆ ಕೇವಲ ಒಂದೇ ಸಾಲಿನ ಮೂಲಕ ಗಣೇಶನನ್ನು ಮೂಡಿಸುವ ಚಿತ್ರಕಾರರು ಸ್ವಲ್ಪ ವಿರಳವೆಂದೇ ಹೇಳಬಹುದು. ಈ ರೀತಿಯ ಅಪರೂಪದ ಚಿತ್ರ ಬಿಡಿಸುವುದು ಸವಾಲಿನ ಕೆಲಸವೇ ಸರಿ. ಇಂತಹ ಬಹು ಕಠಿಣ ಕಲೆಯನ್ನು ಒಲಿಸಿಕೊಂಡು ಚಿತ್ರವನ್ನು ರಚಿಸುವ ಕಲಾವಿದರೊಬ್ಬರಿದ್ದಾರೆ. ಅವರೇ ಸೈಯದ್ ಹುಸೈನಿ.
ಲಲಿತಕಲೆಯಲ್ಲಿ ಡಿಪ್ಲೊಮಾ ಮುಗಿಸಿರುವ ಇವರು ಏಕ ರೇಖೆಯಲ್ಲಿ ಗಣೇಶನನ್ನು ಚಿತ್ರಿಸುತ್ತಾರೆ. ಇವರ ಚಿತ್ರದಲ್ಲಿ ಗಣೇಶನ ಕಿರೀಟದಿಂದ ಇಲಿಯ ಬಾಲದವರೆಗೂ ಕೇವಲ ಒಂದೇ ರೇಖೆ ಇರುವುದು ವಿಶೇಷ. ಇದುವರೆಗೆ ಸುಮಾರು 100ಕ್ಕೂ ಹೆಚ್ಚು ಏಕರೇಖಾ ಗಣೇಶನ ಚಿತ್ರ ಬಿಡಿಸಿದ್ದಾರೆ.
ಹುಸೈನಿ ಮೊದಲ ಸಾರಿ ಚಿತ್ರ ಬಿಡಿಸಿದ್ದು ಮೂರನೇ ತರಗತಿಯಲ್ಲಿದ್ದಾಗ. ಆ ನಂತರ ಅವರು ಇದುವರೆಗೂ ಬಹಳಷ್ಟು ಚಿತ್ರಗಳನ್ನು ಬಿಡಿಸಿದ್ದಾರೆ. ಕನರ್ಾಟಕ ವಿಶ್ವವಿದ್ಯಾಲಯದಲ್ಲಿ ಲಲಿತಕಲೆಯಲ್ಲಿ ಪದವಿ ಮುಗಿಸಿರುವ ಇವರಿಗೆ ಚಿತ್ರ ಬಿಡಿಸುವುದು ನೀರು ಕುಡಿದಷ್ಟು ಸುಲಭ.
ಇವರು ಸುಮಾರು 3000ಕ್ಕೂ ಹೆಚ್ಚು ಏಕರೇಖಾ ಚಿತ್ರವನ್ನು ಬಿಡಿಸಿದ್ದಾರೆ. ಕೇವಲ ಗಣೇಶನ ಚಿತ್ರವನ್ನಷ್ಟೇ ಅಲ್ಲ, ಕುದುರೆ ಮುಂತಾದ ಹಲವು ಚಿತ್ರಗಳನ್ನು, ಹಲವು ವ್ಯಕ್ತಿಗಳ ಭಾವ ಚಿತ್ರಗಳನ್ನೂ ರಚಿಸಿದ್ದಾರೆ.
ಏಳೆಂಟು ವರ್ಷಗಳ ಹಿಂದೆ ಗಣೇಶನ ಚಿತ್ರ ಬಿಡಿಸಲು ಪ್ರಾರಂಭಿಸಿದ ಇವರಿಗೆ ಇಂದು ಏಕರೇಖಾ ಗಣೇಶನ ಚಿತ್ರ ಬಿಡಿಸಲು ಕನಿಷ್ಟ ಅರ್ಧ ಗಂಟೆ ಸಾಕು. ಕೆಲವೊಮ್ಮೆ ಕೆಲವು ಚಿತ್ರ ಬಿಡಿಸಲು ದಿನಗಟ್ಟಲೆ ಸಮಯವನ್ನು ತೆಗೆದುಕೊಂಡಿದ್ದೂ ಇದೆ. ಹುಸೈನಿ ಪ್ರಾರಂಭದಲ್ಲಿ ಗಣೇಶನ ಆಯಿಲ್ ಪೇಂಟ್ ಹಾಗೂ ಇತರೆ ಚಿತ್ರಗಳನ್ನು ಬಿಡಿಸುತ್ತಿದ್ದರು. ಆ ನಂತರ ಒಂದು ದಿನ ಗಣೇಶನ ಚಿತ್ರವನ್ನು ಏಕರೇಖೆಯಲ್ಲಿ ಬಿಡಿಸುವ ಆಲೋಚನೆ ಮೂಡಿತು. ಆ ನಂತರ ಕೆಲವು ದಿನಗಳು ಪ್ರಯತ್ನಿಸಿ ಚಿತ್ರ ಬಿಡಿಸಲು ಪ್ರಾರಂಭಿಸಿದರು.
ಚಿಕ್ಕಂದಿನಲ್ಲಿ ಹುಸೈನಿ ಅವರ ತಾಯಿ ಉಲ್ಲನ್ನಿನ ಸ್ವೆಟರ್ ಹಾಕುವ ವೇಳೆ ಇವರು ಆ ಉಲ್ಲನ್ನಿನ ಉಂಡೆಯ ಜೊತೆ ಆಟವಾಡುತ್ತಿದ್ದರು. ಅಷ್ಟೇ ಅಲ್ಲದೆ ಅದರಿಂದ ವಿವಿಧ ಚಿತ್ರಗಳನ್ನು ನೆಲದ ಮೇಲೆ ಮೂಡಿಸುತ್ತಿದ್ದರು. ಇದೇ ಅವರ ಏಕ ರೇಖಾ ಚಿತ್ರಕ್ಕೆ ಸ್ಫೂರ್ತಿ ನೀಡಿತು. ನಂತರ ಅವರ ತಾಯಿ ಹುಸೈನಿ ಅವರ ಕಲೆಗೆ ನೀರೆರೆದು ಪೋಷಿಸಿದರು.
ಚಿಕ್ಕಂದಿನಿಂದಲೆ ಒಲಿದುಬಂದ ಕಲೆಯನ್ನು ಬೆಳೆಸಿಕೊಂಡ ಇವರು ಹಲವು ರೀತಿಯ ಚಿತ್ರಗಳನ್ನು ಬಿಡಿಸಿದ್ದರೂ ಹೆಸರು ಗಳಿಸಿದ್ದು ಏಕರೇಖೆಯ ಗಣಪನ ಚಿತ್ರಗಳ ಮೂಲಕ. ಕಷ್ಟದ ಕಲೆಯಲ್ಲೂ ವಿಭಿನ್ನತೆ ಮೆರೆದ ಇವರು, ನಿಂತಿರುವ ಗಣೇಶ, ಕುಳಿತ ಏಕದಂತ, ಇಲಿಯ ಮೇಲೆ ಗಣೇಶನ ಸವಾರಿ, ನೃತ್ಯ ಮಾಡುತ್ತಿರುವ ಗಣಪ-ಹೀಗೆ ಹಲವು ಬಗೆಯ ಗಣಪನ ಚಿತ್ರಗಳನ್ನು ಬಿಡಿಸಿದ್ದಾರೆ.
ಚಿತ್ರ ಬಿಡಿಸುವುದೇ ಇವರ ವೃತ್ತಿ. ಅವರು ಬಿಡಿಸಿರುವ ಅದೆಷ್ಟೋ ಚಿತ್ರಗಳು ಉತ್ತಮ ಬೆಲೆಗೆ ಮಾರಾಟವಾಗಿವೆ.
ಕೇವಲ ಚಿತ್ರ ಬಿಡಿಸುವುದು ಮಾತ್ರ ಇವರ ಕೆಲಸವಲ್ಲ. ಪೇಪರ್ ಕಟಿಂಗ್ನಲ್ಲೂ ಇವರದ್ದು ಎತ್ತಿದ ಕೈ. ಬಗೆಬಗೆಯ ನಮೂನೆ ಗಳು, ಹಲವು ಆಕಾರಗಳು ಇವರ ಕೈಯಲ್ಲಿ ಅರಳಿವೆ. ಇವರ ಕೈಗೆ ಕುಂಚ ಸಿಕ್ಕರೆ ಹೇಗೆ ಗೆರೆಗಳು ಮಾತನಾಡುತ್ತವೆಯೋ ಹಾಗೆಯೆ ಖಾಲಿ ಪೇಪರ್ ಹಾಗೂ ಕತ್ತರಿ ಸಿಕ್ಕರೆ ಸಾಕು ಅವು ಜೀವ ತಳೆಯುತ್ತವೆ.
ಬೆಂಗಳೂರಿನ ಜಯನಗರದಲ್ಲಿ ವಾಸ ಮಾಡುತ್ತಿರುವ ಹುಸೈನಿ ಏಕರೇಖೆಯ ಚಿತ್ರಕಲೆ ಹಾಗೂ ಪೇಪರ್ ಕ್ರಾಫ್ಟ್ ಬಗ್ಗೆ ಹಲವು ಕಡೆ ತರಬೇತಿ, ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ. 34 ವರ್ಷದ ಹುಸೈನಿ ಮೂಲತಃ ಮಂಡ್ಯ ಜಿಲ್ಲೆಯ ಶಿವನಸಮುದ್ರದವರು.
ಅಂಚೆಕುಂಚ ಪ್ರಶಸ್ತಿಯನ್ನು ನಾಲ್ಕು ಸಾರಿ ಮುಡಿಗೇರಿಸಿ ಕೊಂಡಿರುವ ಹುಸೈನಿ 2009ರಲ್ಲಿ ಜಪಾನ್ ಹಬ್ಬದಲ್ಲೂ ಭಾಗವಹಿಸಿ ಬಂದಿದ್ದಾರೆ. ಬೆಂಗಳೂರು, ಮೈಸೂರು, ಉಡುಪಿ, ಧಾರವಾಡ ಮುಂತಾದ ಕಡೆಗೆಲ್ಲ ಇವರು ಏಕವ್ಯಕ್ತಿ ಪ್ರದರ್ಶನ ಗಳನ್ನು ನೀಡಿದ್ದಾರೆ. ಹುಸೈನಿ ಅವರನ್ನು 9845153277. ಈ ಸಂಖ್ಯೆ ಮೂಲಕ ಸಂಪರ್ಕಿಸಬಹುದು.

Tuesday, August 24, 2010

ವಿದ್ಯುತ್ ಬಿಲ್ ಗೆ ವಿನಾಯಿತಿ ಇಲ್ಲವೆ?

ಕರ್ನಾಟಕ ವಿದ್ಯುತ್ ಮಂಡಳಿ ಪ್ರತಿ ಸಾರಿ ವಿದ್ಯುತ್ ಬಿಲ್ ನೀಡುವಾಗಲೂ ಅದರಲ್ಲಿ ಅಧಿಕ ಪ್ರಮಾಣದ ಮೇಲೆ ದಂಡ ಎಂಬ ವಾಖ್ಯವೊಂದು ಕಾಣಿಸುತ್ತದೆ. ಈ ಬಗ್ಗೆ ಇಲಾಖೆಯಯನ್ನು ಕೇಳಿದರೆ ನಿಗದಿತ ಪ್ರಮಾಣಕ್ಕಿಂತ ಅಧಿಕ ವಿದ್ಯುತ್ ಬಳಸಿದರೆ ಈ ದಂಡವನ್ನು ಹಾಕಲಾಗುತ್ತದೆ ಎಂದು ಹೇಳುತ್ತಾರೆ. ಹೆಚ್ಚಿನ ವಿದ್ಯುತ್ ಬಳಸಿದಾಗ ಹೆಚ್ಚಿನ ದಂಡವನ್ನೂ ಹಾಕಿದ ಉದಾಹರಣೆಗಳಿವೆ.
ಆದರೆ ನನ್ನಲ್ಲಿ ಮೂಡುತ್ತಿರುವ ಪ್ರಶ್ನೆ ಇಷ್ಟೇ. ವಿದ್ಯುತ್ತನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿಗೆ ಬಳಸಿದಾಗ ದಂಡ ಹಾಕುವ ವಿದ್ಯುತ್ ಇಲಾಖೆ ಅತ್ಯಲ್ಪ ಪ್ರಮಾಣದಲ್ಲಿ ವಿದ್ಯುತ್ ಬಳಸುವ ಕುಟುಂಬಗಳಿಗೆ ವಿನಾಯಿತಿ ಯಾಕೆ ನೀಡುವುದಿಲ್ಲ?
ಕೆಲವು ಕುಟುಂಬಗಳು ತಿಗಳಿಗೆ 10 ಯುನಿಟ್ಗಿಂತ ಕಡಿಮೆ ವಿದ್ಯುತ್ ಬಳಸುತ್ತವೆ. ಅವುಗಳ ವಿದ್ಯುತ್ ಬಿಲ್ ಮೊತ್ತ 50 ರೂಪಾಯಿಗಳನ್ನೂ ಮುಟ್ಟುವುದಿಲ್ಲ. ಇಂತಹ ಕುಟುಂಬಗಳ ವಿದ್ಯುತ್ ಬಿಲ್ಗೆ ವಿನಾಯಿತಿಯನ್ನು ಇಲಾಖೆ ನೀಡದೇ ಇರುವುದು ವಿಚಿತ್ರ ಎನಿಸುತ್ತದೆ.
ಇಲಾಖೆ ಈ ಬಗ್ಗೆ ತಕ್ಷಣ ಚಿಂತಿಸಿ ವಿದ್ಯುತ್ ಬಿಲ್ ವಿನಾಯಿತಿಯನ್ನು ನೀಡುತ್ತದೆ ಎಂಬುದು ನಮ್ಮ ಆಶಯ.

Monday, August 23, 2010

`ಆಸರೆ' ಸಖ್ಯವಾಗುವಂತಾದರೆ...

ಅಲ್ಲಲ್ಲಿ ಮೂತ್ರದ ವಾಸನೆ, ಎಲ್ಲೆಂದರಲ್ಲಿ ಬಿದ್ದುಕೊಂಡಿರುವ ಭಿಕ್ಷುಕರು, ಸುಕ್ಕು ಗಟ್ಟಿದ ಮುಖ. ಹರಡಿಕೊಂಡ ತಲೆಕೂದಲು, ಆ ಕೂದಲುಗಳಿಗೆ ಎಣ್ಣೆಯಿಲ್ಲ, ದೇಹಕ್ಕೆ ಸ್ನಾನವಿಲ್ಲ. ಎತ್ತ ನೋಡಿದರತ್ತ ಕೊಳಕು, ಅಸಹ್ಯ ವಾತಾವರಣ, ಕೆಲವರು ಕಾಯಿಲೆಯಿಂದ ನರಳುತ್ತಿರುವವರು. ಇಂತಹವರನ್ನು ಸರಿಯಾಗಿ ನೋಡುವವರಿಲ್ಲ. ಸ್ನಾನ ಮಾಡಿಸುವವರಿಲ್ಲ. ದನದ ಕೊಟ್ಟಿಗೆಯಂತೆ ಕಾಣುವ ಕೊಠಡಿಗಳು. ಇದು  ಬೆಂಗಳೂರು ಮಹಾನಗರಿಯ ನಿರಾಶ್ರಿತರ ಕೇಂದ್ರದಲ್ಲಿ ಕಂಡುಬಂದ ಸ್ಥಿತಿ-ಗತಿ. ಇದೇ ಸುಮನಹಳ್ಳಿಯಲ್ಲಿರುವ ನಿರಾಶ್ರಿತರ ಕೇಂದ್ರದ ಪರಿಸ್ಥಿತಿ.
ಬೀದಿ ಬದಿಯಲ್ಲಿ ಭಿಕ್ಷೆ ಬೇಡುವ ಭಿಕ್ಷುಕರಿಗೆ ಪುನರ್ವಸತಿ ನೀಡಬೇಕೆಂದು ಸ್ಥಾಪಿಸಲಾಗಿರುವ ಈ ಕೇಂದ್ರದಲ್ಲಿನ ಸರಣಿ ಸಾವು ಮತ್ತು ಅದರ ದುಸ್ಥಿತಿಯಿಂದಾಗಿ ಈಗ ಸುದ್ದಿ ಮಾಡಿದೆ.
ಈ ಭಿಕ್ಷುಕರ ಪುನರ್ವಸತಿ ಕೇಂದ್ರದ ಒಳಗೆ ಕಾಲಿಟ್ಟರೆ ಸಾಕು ಅಸಹ್ಯಕರ ವಾತಾವರಣ. ಆರೋಗ್ಯವಂತರು, ಅನಾರೋಗ್ಯಕ್ಕೊಳಗಾದವರು, ಬಡಕಲು ಶರೀರದವರು ಹೀಗೆ ವಿವಿಧ ರೀತಿಯ ನಿರಾಶ್ರಿತರು, ಭಿಕ್ಷುಕರ ಕಣ್ಣುಗಳಲ್ಲಿನ ಯಾಚನೆ, ಅಸಹಾಯಕ ನೋಟ ಎಂತಹವರಲ್ಲಾದರೂ ಮರುಕ ಹುಟ್ಟಿಸುತ್ತದೆ.
ಎಲ್ಲೋ ಭಿಕ್ಷೆ ಬೇಡುತ್ತಿದ್ದ ಭಿಕ್ಷುಕರನ್ನು ಹಿಡಿದು ತಂದು ಈ ನಿರಾಶ್ರಿತರ ಶಿಬಿರದಲ್ಲಿಡಲಾಗಿದೆ. ಈ ಭಿಕ್ಷುಕರ ದುಸ್ಥಿತಿ ಹೇಳತೀರದು. ಸರಿಯಾದ ಆಹಾರವಿಲ್ಲದೆ, ದಿನನಿತ್ಯ ಸ್ನಾನವಿಲ್ಲ, ರೋಗಬಂದರೆ ಸೂಕ್ತ ಚಿಕಿತ್ಸೆಯಿಲ್ಲ, ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ ಈ ಭಿಕ್ಷುಕರದ್ದು ನಾಯಿಪಾಡು ಎಂದರೂ ತಪ್ಪಾಗಲಾರದು.
ಈ ಜನರ ಪಾಲಿಗೆ ಯಾವುದಾದರೂ ಸರ್ಕಾರಿ ಕಾರ್ಯಕ್ರಮಗಳು ಬಂತೆಂದರೆ ಹಬ್ಬ. ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿ ಮುಂತಾದ ಸಕರ್ಾರಿ ಕಾರ್ಯಕ್ರಮಗಳಂದು ಇವರಿಗೆ ಸಿಹಿ ತಿಂಡಿ ಹಾಗೂ ವಿಶೇಷ ಊಟಗಳು ಲಭ್ಯ. ಇಲ್ಲದಿದ್ದರೆ ಹಳಸಲನ್ನವೇ ಗತಿ.
ಈ ಪುನರ್ವಸತಿ ಕೇಂದ್ರದಲ್ಲಿ ಅಲ್ಲಲ್ಲಿ ಅಡ್ಡಾಡುತ್ತಿರುವ ಭಿಕ್ಷುಕರು ಒಂದೆಡೆಯಾದರೆ, ಲೋಕದ ಪರಿವೆಯೆ ಇಲ್ಲದಂತೆಮಲಗಿಕೊಂಡಿರುವವರು ಮತ್ತೊಂದೆಡೆ. ಇನ್ನು ಈ ಕೇಂದ್ರದಲ್ಲಿರುವ ಹಲವು ಭಿಕ್ಷುಕರು ಬುದ್ದಿಮಾಂದ್ಯರು. ಇವರನ್ನು ಇಲ್ಲಿ ಯಾರೂ ಕೇಳುವವರೇ ಇಲ್ಲ.
 ಇವರನ್ನು ನೋಡಿಕೊಳ್ಳುತ್ತಿರುವ ಸಿಬ್ಬಂದಿಗಳು ತಮಗೆ ಬೇಕಾದ ಎಲ್ಲ ಕೆಲಸಗಳನ್ನು ಈ ಭಿಕ್ಷುಕರ ಕೈಯಲ್ಲಿ ಮಾಡಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಗಾಯಾಳುಗಳಿಗೆ ಸೂಕ್ತ ಔಷಧ ನೀಡದ ಪರಿಣಾಮ ಗಾಯದಿಂದ ಕೀವು ಸೋರುತ್ತಿದ್ದ ದೃಶ್ಯವೂ ಕಾಣಬಹುದಾಗಿತ್ತು.
ಈ ವಸತಿಗೃಹವೂ ಅಷ್ಟೇ. ಅದರ ಒಳಗೆ ಕಾಲಿಟ್ಟರೆ ಸಾಕು ಗಬ್ಬು ವಾಸನೆ. ರೋಗಗಳಿಂದ ಹಾಸಿಗೆ ಹಿಡಿದ ಭಿಕ್ಷುಕರು ಅಲ್ಲೆ ಮಲ, ಮೂತ್ರ ವಿಸರ್ಜನೆ ಮಾಡಿಕೊಂಡಿದ್ದರಿಂದ ಒಳಗಡೆ ಗಬ್ಬು ವಾಸನೆ. ಇಂತಹ ವಾತಾವರಣದಲ್ಲೇ ಅವರು ಮಲಗಿ ನಿದ್ರಿಸಬೇಕಾಗುತ್ತದೆ. ಇವರು ಊಟ ಮಾಡುವ ಕೋಣೆಯ ಪರಿಸ್ಥಿತಿಯೂ ಭಿನ್ನವಾಗೇನೂ ಇಲ್ಲ. ಶುಚಿತ್ವ ಇಲ್ಲದ ಈ ಕೋಣೆಯಲ್ಲಿಯೇ ಊಟ ನೀಡಲಾಗುತ್ತಿದೆ.
ಭಿಕ್ಷುಕರಲ್ಲಿ ಹಲವರು ಸಾಂಕ್ರಾಮಿಕ ರೋಗಗಳಿಂದ ನರಳುತ್ತಿದ್ದಾರೆ. ಆದರೆ ಇವರನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡುವ ಕೆಲಸ ನಡೆದಿಲ್ಲ. ಇವರನ್ನೂ ಆರೋಗ್ಯವಂತ ವ್ಯಕ್ತಿಗಳ ಜೊತೆ ಇರಿಸಲಾಗುತ್ತಿದೆ. ಇದರಿಂದ ಆರೋಗ್ಯವಂತರೂ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಜೊತೆಗೆ ಬುದ್ಧಿಮಾಂದ್ಯರ ಜೊತೆಗೆ ಆರೋಗ್ಯವಂತ ಭಿಕ್ಷುಕರನ್ನು ಇಡಲಾಗುತ್ತಿದೆ. ಇದು ಆರೋಗ್ಯವಂತ ಭಿಕ್ಷುಕರ ಮೇಲೆ ತೀವ್ರವಾದ ಪರಿಣಾಮ ಉಂಟು ಮಾಡುತ್ತಿದೆ.
 ಈ ನರಕದ ಸಹವಾಸ ಸಾಕು ಎಂದೇ ಹಲವು ಭಿಕ್ಷುಕರು ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ ಎಂಬ ಮಾತು ಕೇಳಿಬಂದಿದೆ. ಕೆಲವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿ ವಿಫಲರಾಗಿದ್ದಾರೆ.
ಈ ಕೇಂದ್ರದಲ್ಲಿ ಈಗಾಗಲೆ 286 ಜನರು ಸಾವನ್ನಪ್ಪಿದ್ದಾರೆ. ಇವರ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಒಟ್ಟಿನಲ್ಲಿ ಬೆಂಕಿಯಿಂದ ಬಾಣಲೆಗೆ ಹಾಕಿದಂತಾಗಿದೆ ಈ ಭಿಕ್ಷುಕರ ಸ್ಥಿತಿ. ಕಳೆದ ಶನಿವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯರೂಪ್ಪ ಅವರು ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಿತಿಯನ್ನು ಅರಿತಿದ್ದು, ಈ ನಿರಾಶ್ರಿತರ ಕೇಂದ್ರವನ್ನು ಮಾದರಿ ಕೇಂದ್ರವನ್ನಾಗಿ ಮಾಡುವ ಆಶ್ವಾಸನೆ ನೀಡಿದ್ದಾರೆ. ಇದು ಕಾರ್ಯರೂಪಕ್ಕೆ ಆದಷ್ಟು ಬೇಗ ಬಂದು, ನಿರಾಶ್ರಿತರಿಗೆ `ಆಸರೆ' ನೀಡುತ್ತಿರುವ ಕೇಂದ್ರವು ಅಲ್ಲಿರುವವರಿಗೆ ಸಖ್ಯವಾಗುವಂತಾದರೆ ಸ್ಥಾಪನೆಯ ಉದ್ದೇಶವೂ ಸಾರ್ಥಕವಾಗುತ್ತದೆ.

Saturday, August 21, 2010

ಮನ ಸೆಳೆಯುವ ಉತ್ತರ ಕನ್ನಡ ಜಲಪಾತಗಳು

ಉತ್ತರ ಕನ್ನಡ ಜಿಲ್ಲೆಯಲ್ಲಿ ನೂರಾರು ಸುಂದರ ಜಲಪಾತಗಳಿವೆ. ಸುರಿಯುತ್ತಿರುವ ಮುಂಗಾರಿನಿಂದ ಇಲ್ಲಿನ ಜಲಪಾತಗಳಿಗೆ ಮತ್ತೆ ಜೀವಕಳೆ ಬಂದಿದೆ. ಮುಂಗಾರಿನಲ್ಲಿ ಹೊಸ ಜೀವ ಪಡೆಯುವ ಈ ಜಲಪಾತಗಳು ಎಲ್ಲರ ಆಕರ್ಷಣೆಯ ತಾಣಗಳು. ಮಳೆ ಹನಿಯಿಂದಾಗಿ ಮನಸೆಳೆಯುತ್ತಿರುವ ಈ ಜಲಪಾತಗಳ ಬಗ್ಗೆ ಕಿರು ಪರಿಚಯ ಹೀಗಿದೆ.

ಬಳುಕುವ ಉಂಚಳ್ಳಿ ಜಲಪಾತ
ಅಘನಾಶಿನಿ ನದಿಯಿಂದ ಸೃಷ್ಟಿಯಾಗುವ ಈ ಜಲಪಾತವನ್ನು ಲೂಷಿಂಗ್ಟನ್ ಜಲಪಾತ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಶಿರಸಿಯಿಂದ 30 ಕಿಲೋಮೀಟರ್ ಅಂತರದಲ್ಲಿರುವ ಈ ಜಲಪಾತದ ಎತ್ತರ 116 ಮೀಟರ್. 1845ರಲ್ಲಿ ಉತ್ತರ ಕನ್ನಡದಲ್ಲಿ ಸವರ್ೇ ಕಾರ್ಯ ನಿರ್ವಹಿಸುತ್ತಿದ್ದ ಬ್ರಿಟೀಷ್ ಅಧಿಕಾರಿ ಜೆ. ಡಿ. ಲೂಷಿಂಗ್ಟನ್ ಈ ಜಲಪಾತವನ್ನು ಕಂಡುಹಿಡಿದ ಎಂಬ ಮಾಹಿತಿಯಿದೆ. ಆದ್ದರಿಂದ ಈ ಜಲಪಾತವನ್ನು ಲೂಷಿಂಗ್ಟನ್ ಜಲಪಾತ ಎಂದು ಕರೆಯುತ್ತಾರೆ. ಈ ಜಲಪಾತದ ನೀರು ಬೀಳುವಾಗ ಭಾರಿ ದೊಡ್ಡ ಶಬ್ದ ಉಂಟುಮಾಡುತ್ತದೆ. ಆ ಕಾರಣದಿಂದ ಸ್ಥಳೀಯರು ಈ ಜಲಪಾತವನ್ನು `ಕೆಪ್ಪ ಜೋಗ' ಎಂದು ಕರೆಯುತ್ತಾರೆ. ವರ್ಷದ ಎಲ್ಲ ಕಾಲದಲ್ಲಿಯೂ ಈ ಜಲಪಾತದ ದರ್ಶನ ಲಭ್ಯ. ಮಳೆಗಾಲದಲ್ಲಂತೂ ಇದು ರುದ್ರರಮಣೀಯ.

ಸೊಬಗಿನ ಸಾತೊಡ್ಡಿ ಜಲಪಾತ
ಯಲ್ಲಾಪುರ ತಾಲೂಕಿನಲ್ಲಿರುವ ಈ ಜಲಪಾತ ತಾಲೂಕಿನ ಮುಖ್ಯ ಪಟ್ಟಣದಿಂದ 30 ಕಿ.ಮಿ ದೂರದಲ್ಲಿದೆ. ಕಾಳಿ ನದಿಯ ಉಪ ನದಿಯಿಂದ ಸೃಷ್ಟಿಯಾಗುವ ಈ ಜಲಪಾತವನ್ನು ಮಿನಿ ಜೋಗ ಎಂದೂ ಕರೆಯುತ್ತಾರೆ. ನಿಸರ್ಗದ ನಟ್ಟ ನಡುವೆ ಇರುವ ಈ ಜಲಪಾತ ಮಳೆಗಾಲದಲ್ಲಿ ಅತ್ಯಂತ ಆಕರ್ಷಣೀಯ. ಬಳುಕುತ್ತಾ ಕಮರಿಗೆ ಇಳಿಯುವ ಈ ಜಲಪಾತದ ಸೊಬಗು ವರ್ಣನಾತೀತ. ಜಲಪಾತದ ದಾರಿಯಲ್ಲಿ ಕಾಣಸಿಗುವ ಕಾಳಿ ಹಿನ್ನೀರಿನ ದೃಶ್ಯ ಪ್ರವಾಸಿಗರಿಗೆ ಬೋನಸ್ ಖುಷಿ ನೀಡುತ್ತದೆ.

ಹೊಳೆಯುವ ಬೆಣ್ಣೆಹೊಳೆ ಜಲಪಾತ
ಅಘನಾಶಿನಿಯ ಉಪನದಿಯ ಸೃಷ್ಟಿ ಈ ಬೆಣ್ಣೆಹೊಳೆ ಜಲಪಾತ. ದಟ್ಟ ಕಾನನದ ನಡುವೆ ಇರುವ ಈ ಜಲಪಾತದ ಎತ್ತರ 200 ಅಡಿಗಿಂತ ಹೆಚ್ಚು. ಜಲಪಾತಕ್ಕೆ ಸಾಗುವ ಮಾರ್ಗ ಕೊಂಚ ಕಷ್ಟಕರವಾದುದು. ಆದರೆ ಕಣ್ಮನ ಸೆಳೆಯುವ ದೃಶ್ಯವೈಭವ ಜಲಪಾತದಿಂದ ಸಾಧ್ಯ. ಶಿರಸಿಯಿಂದ ಕುಮಟಾ ಕಡೆಗೆ ಸಾಗುವ ದಾರಿಯ ನಡುವೆ ಈ ಜಲಪಾತದ ಮಾರ್ಗ ಸಿಗುತ್ತದೆ. ಅತ್ಯುತ್ತಮ ಟ್ರೆಕ್ಕಿಂಗ್ ಸ್ಪಾಟ್. ಮಳೆಗಾಲದಲ್ಲಿ ಜಲಪಾತದ ಬಳಿ ಸಾಗುವುದು ಅಪಾಯಕಾರಿ. ಆದರೆ ಉಳಿದ ಕಾಲಗಳಲ್ಲಿ ಜಲಪಾತದ ದರ್ಶನಕ್ಕೆ ಹೇಳಿಮಾಡಿಸಿದ ಹಾಗಿದೆ. ಕಾಡು, ಕಾಡುಪ್ರಾಣಿಗಳ ಪ್ರದೇಶ ಇದು.

ಅಭಯಾರಣ್ಯದ ಒಡಲಿನ ಕೂಸು ಅಣಶಿ ಜಲಪಾತ
ಕಾರವಾರ ದಾಂಡೆಲಿ ಮಾರ್ಗ ಮಧ್ಯ ಇರುವ ಅಣಶಿ ಜಲಪಾತ ನೋಡುಗರನ್ನು ತಟ್ಟನೆ ಸೆಳೆಯುವಂತಹುದು. ಅಣಶಿ ರಾಷ್ಟ್ರೀಯ ಉದ್ಯಾನದ ನಡುವೆ ಇರುವ ಈ ಜಲಪಾತ ಕಾರವಾರದಿಂದ 32 ಕಿಲೋಮೀಟರ್ ದೂರದಲ್ಲಿದೆ. ಪಶ್ಚಿಮ ಘಟ್ಟದ ಹಾಗೂ ಕಾನನದ ನಡುವೆ ಇರುವ ಈ ಜಲಪಾತ ಮಳೆಗಾಲದಲ್ಲಿ ಮೈದುಂಬುತ್ತದೆ. ಈ ಜಲಪಾತ ಹಲವು ಹಂತಗಳಲ್ಲಿ ಧುಮ್ಮಿಕ್ಕುತ್ತದೆ. ಇದರ ಎಲ್ಲರ 150 ಅಡಿಗಳು. ಈ ಜಲಪಾತ ಛಾಯಾಚಿತ್ರಕಾರರಿಗೆ ಹಬ್ಬ ಉಂಟುಮಾಡುತ್ತದೆ. ಕದ್ರಾ ಅಣೆಕಟ್ಟೆಯಿಂದ 8 ಕಿಲೋಮೀಟರ್ ದೂರದಲ್ಲಿರುವ ಈ ಜಲಪಾತ ರಸ್ತೆ ಪಕ್ಕದಲ್ಲಿಯೇ ಇರುವುದರಿಂದ ಇದರ ಬುಡಕ್ಕೆ ತಲುಪಲು ಕಷ್ಟಪಡಬೇಕಿಲ್ಲ.


ಲವಲವಿಕೆಯ ಲಾಲಗುಳಿ ಜಲಪಾತ
ಮಳೆಗಾಲದಲ್ಲಿ ಮೈದುಂಬುವ ಜಲಪಾತಗಳ ಜಾತಿಗೆ ಇದು ಸೇರುತ್ತದೆ. ಕಾಳಿ ನದಿಗೆ ಬೊಮ್ಮನಹಳ್ಳಿಯಲ್ಲಿ ಅಣೆಕಟ್ಟು ನಿಮರ್ಾಣವಾಗುವ ಮೊದಲು ವರ್ಷದ ಎಲ್ಲ ಕಾಲದಲ್ಲಿಯೂ ಕಾಣಸಿಗುತ್ತಿದ್ದ ಈ ಜಲಪಾತ ಈಗ ಮಳೆಗಾಲದಲ್ಲಿ ಮಾತ್ರ ಮೈದುಂಬುತ್ತದೆ. ಯಲ್ಲಾಪುರದಿಂದ 13 ಕಿಲೋಮೀಟರ್ ದೂರದಲ್ಲಿರುವ ಈ ಜಲಪಾತ ಧುಮ್ಮಿಕ್ಕುವುದನ್ನು ನೋಡುವುದು ಬಲು ಅಂದ.



ಮನ ಸೆಳೆಯುವ ಮಾಗೋಡು ಜಲಪಾತ
ಯಲ್ಲಾಪುರದಿಂದ 20 ಕಿಲೋಮೀಟರ್ ದೂರದಲ್ಲಿರುವ ಮಾಗೋಡು ಜಲಪಾತ ಬೇಡ್ತಿ (ಗಂಗಾವಳಿ) ನದಿಯ ಸೃಷ್ಟಿ. 200 ಮೀಟರ್ ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತವನ್ನು ವರ್ಷದ ಎಲ್ಲ ಕಾಲದಲ್ಲಿಯೂ ವೀಕ್ಷಿಸಬಹುದು. ಮಳೆಗಾಲದಲ್ಲಿ ರುದ್ರರಮಣೀಯವಾಗಿ ಕಾಣುವ ಈ ಜಲಪಾತ ಎರಡು ಹಂತಗಳಲ್ಲಿ ದುಮ್ಮಿಕ್ಕುತ್ತದೆ. ಈ ಜಲಪಾತದ ಬಳಿ ವೀಕ್ಷಣಾ ಗೋಪುರ ನಿಮರ್ಿಸಿರುವ ಪ್ರವಾಸೋದ್ಯಮ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ. ಜಲಪಾತದವರೆಗೂ ಉತ್ತಮ ರಸ್ತೆ ಇರುವುದರಿಂದ ಯಾವುದೆ ಕಾಲದಲ್ಲಿಯೂ ಪ್ರವಾಸ ಮಾಡಬಹುದಾಗಿದೆ.

ಭಯ ಹುಟ್ಟಿಸುವ ಬುರುಡೆ ಜಲಪಾತ
ಮಲೆನಾಡ ಮಡಿಲಿನಲ್ಲಿರುವ ಈ ಸುಂದರ ಜಲಪಾತ ಅಘನಾಶಿನಿ ನದಿಯ ಉಪನದಿಯ ಸೃಷ್ಟಿ. ನಾಲ್ಕು ಹಂತಗಳಲ್ಲಿ ದುಮ್ಮಿಕ್ಕುವ ಈ ಜಲಪಾತ ವೀಕ್ಷಣೆ ಮಾಡಲು ಮಳೆಗಾಲದಲ್ಲಿ ಹೋಗಲು ಸಾಧ್ಯವೇ ಇಲ್ಲ. ಸಿದ್ದಾಪುರದಿಂದ 20 ಕಿಲೋಮೀಟರ್ ದೂರದಲ್ಲಿರುವ ಈ ಜಲಪಾತ ದರ್ಶನ ಮಾಡಬೇಕೆಂದರೆ ಕನಿಷ್ಟ 6 ಕಿಲೋಮೀಟರ್ ನಡಿಗೆಯನ್ನು ಕೈಗೊಳ್ಳಲೇಬೇಕು. ಇಳಿಮನೆ ಜಲಪಾತ ಎಂದೂ ಕರೆಯಲಾಗುವ ಈ ಜಲಪಾತದ ಎರಡು ಹಂತಗಳನ್ನು ಸುಲಭವಾಗಿ ನೋಡಬಹುದು.

ಸ್ನಿಗ್ಧ ಸುಂದರ ವಿಭೂತಿ ಜಲಪಾತ
ಶಿರಸಿಯಿಂದ 40 ಕಿಲೋಮೀಟರ್ ದೂರದಲ್ಲಿರುವ ವಿಭೂತಿ ಜಲಪಾತ ವಿಭೂತಿ ಹೊಳೆಯ ಸೃಷ್ಟಿ. ವಿಶ್ವ ಪ್ರಸಿದ್ಧ ಯಾಣದ ಹತ್ತಿರದಲ್ಲಿರುವ ಈ ಜಲಪಾತದ ಎತ್ತರ 100 ಅಡಿಗಿಂತ ಹೆಚ್ಚು. ಎರಡು ಹಂತಗಳಲ್ಲಿ ದುಮ್ಮಿಕ್ಕುವ ಈ ಜಲಪಾತ ಮಳೆಗಾಲದಲ್ಲಿ ಬಹಳ ಸುಂದರವಾಗಿ ಕಾಣಿಸುತ್ತದೆ. ವರ್ಷದ ಎಲ್ಲ ಸಮಯದಲ್ಲಿಯೂ ಜಲಪಾತವನ್ನು ನೋಡಬಹುದು. ನಿಸರ್ಗದ ನಡುವೆ ಇರುವ ಈ ಜಲಪಾತ ಒಳ್ಳೆಯ ಪಿಕ್ನಿಕ್ ಸ್ಪಾಟ್.


ಶಿವಗಂಗಾ ಜಲಪಾತ
74 ಅಡಿ ಎತ್ತರದ ಶಿವಗಂಗಾ ಜಲಪಾತ ಶಿರಸಿಯಿಂದ 22 ಕಿಲೋಮೀಟರ್ ದೂರದಲ್ಲಿದೆ. ಸೋಂದಾ ಹೊಳೆಯಿಂದ ಸೃಷ್ಟಿಯಾಗಿರುವ ಈ ಜಲಪಾತ ದಟ್ಟ ಕಾಡಿನ ನಡುವೆ ಇದೆ. ಮಳೆಗಾಲದಲ್ಲಿ ಬಹಳ ಸುಂದರವಾಗಿ ಕಾಣುವ ಈ ಜಲಪಾತ ಅತ್ಯಂತ ಅಪಾಯಕಾರಿಯಾದುದು. ಜಲಪಾತಕ್ಕೆ ಸಾಗುವ ಮಾರ್ಗದಲ್ಲಿ ಸೋಂದಾ, ವಾದಿರಾಜ ಮಠ ಮುಂತಾದ ಕ್ಷೇತ್ರಗಳಿವೆ. ಅವುಗಳನ್ನು ನೋಡಿ ಬರಲು ಸಾಧ್ಯ.


ಕಾನನದ ಮಡಿಲ ವಾಟೆಹಳ್ಳ ಜಲಪಾತ
ಪಶ್ಚಿಮ ಘಟ್ಟದ ದಟ್ಟ ಕಾಡಿನ ಮಧ್ಯದಲ್ಲಿರುವ ಜಲಪಾತ ವಾಟೆಹಳ್ಳ. ಹಲವು ಹಂತಗಳಲ್ಲಿ ಧುಮ್ಮಿಕ್ಕುಪ ಈ ಜಲಪಾತದ ಸೊಬಗು ಬಹು ಸುಂದರ. ಸಿದ್ದಾಪುರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಈ ಜಲಪಾತವನ್ನು ಮಳೆಗಾಲದಲ್ಲಿ ವೀಕ್ಷಣೆ ಮಾಡಲು ಸಾಧ್ಯವೇ ಇಲ್ಲ. ನಿಲ್ಕುಂದ ಬಳಿ ಇರುವ ಈ ಜಲಪಾತವನ್ನು ವೀಕ್ಷಿಸಲು ಕನಿಷ್ಟ 2 ಕಿಲೋಮೀಟರ್ ಕಾಲ್ನಡಿಗೆ ಸವೆಸಬೇಕು. ಕಡಿದಾದ ಬೆಟ್ಟವನ್ನು ಜಾಗ್ರತೆಯಿಂದ ಇಳಿದರೆ ಇದರ ದರ್ಶನ ಸಾಧ್ಯ. ಅದೃಷ್ಟವಿದ್ದರೆ ವನ್ಯ ಮೃಗಗಳೂ ಕಾಣಬಹುದು. ಹಲವು ಹಂತಗಳು ಜಲಪಾತಕ್ಕೆ ಇದ್ದರೂ ಒಂದೆ ದಿನದಲ್ಲಿ ಅವುಗಳಷ್ಟನ್ನೂ ನೋಡುವುದು ಕಷ್ಟ. ಚಿಕ್ಕ ಹಳ್ಳ ಸೃಷ್ಟಿಸಿದ ಈ ಜಲಪಾತ ನೋಡುಗರನ್ನು ಸೇಳೆಯುತ್ತದೆ. ಒಳ್ಳೆಯ ಟ್ರೆಕ್ಕಿಂಗ್ ತಾಣ

ಇಷ್ಟೇ ಅಲ್ಲದೆ ಉತ್ತರ ಕನ್ನಡದಲ್ಲಿ ಇನ್ನೂ ಹಲವಾರು ಜಲಪಾತಗಳಿವೆ. ಪಶ್ಚಿಮ ಘಟ್ಟಗಳ ಶ್ರೇಣಿ ಈ ಜಿಲ್ಲೆಯಲ್ಲಿ ಹಾದುಹೋಗುತ್ತದೆ. ಈ ಪಶ್ಚಿಮ ಘಟ್ಟ ಶ್ರೇಣಿಯಲ್ಲಿ ನೂರಾರು ಜಲಪಾತಗಳಿವೆ. ಮಳೆಗಾಲ ಬಂತೆಂದರೆ ಈ ಜಲಪಾತಗಳಿಗೆ ಮತ್ತೆ ಜೀವಕಳೆ ಬರುತ್ತವೆ. ತುಂಬ್ರಿಕೊಡ್ಲು, ಸೂಸಬ್ಬಿಕೊಡ್ಲು, ವಜ್ರದುಂಡಿ, ಮುರೇಗಾರ, ಕರೂರು ಈ ಮುಂತಾದ ಹಲವಾರು ಜಲಪಾತಗಳು ಉತ್ತರ ಕನ್ನಡದ ಕಾನನದ ನಡುವೆ ಇವೆ. ಮಳೆಗಾಲದಲ್ಲಿ ಇವುಗಳು ನಯನಮನೋಹರ.

Thursday, August 19, 2010

ಇವರಿಗೆ ವಯಸ್ಸೇ ಆಗೋಲ್ವಾ?



ಭಾರತದ ವಿವಿಎಸ್ ಲಕ್ಷ್ಮಣ್, ಸಚಿನ್ ತೆಂಡೂಲ್ಕರ್, ಶ್ರೀಲಂಕಾದ ಸನತ್ ಜಯಸೂರ್ಯ, ವೆಸ್ಟ್ ಇಂದಿಸ ನ ಶಿವನಾರಾಯಣ್ ಚಂದ್ರಪಾಲ್, ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್ ಈ ಮುಂತಾದ ಕ್ರಿಕೆಟ್ ಆಟಗಾರರ ಉತ್ಸಾಹವನ್ನು, ಆಟದ ವೈಖರಿಯನ್ನು ಗಮನಿಸಿದರೆ ಇವರಿಗೆ ವಯಸ್ಸೇ ಆಗುವುದಿಲ್ಲವೇ ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿ ಮೂಡುತ್ತದೆ.
ಈ ಎಲ್ಲ ಆಟಗಾರರಿಗೆ 35ರ ಆಜುಬಾಜು ವಯಸ್ಸು. ಆದರೆ ಇವರ ಕಲಾತ್ಮಕ ಆಟಗಳು ಮಾತ್ರ ಯುವ ಹೊಡೆಬಡಿ ಆಟಗಾರರನ್ನು ಮೀರಿಸುವಂತಿದೆ. ಯುವ ಆಟಗಾರರು ಕ್ರೀಸಿನಲ್ಲಿ ನೆಲೆನಿಂತು ಬಾಲನ್ನು ಎದುರಿಸಲು ಪರದಾಡುವ ಸಮಯದಲ್ಲಿಯೇ ಇವರು ಆಟದ ಮರ್ಮ ಅರಿತು ಸಮಯಕ್ಕೆ ತಕ್ಕಂತೆ ಆಟವಾಡುತ್ತಾರೆ.
ಈ ಆಟಗಾರರದ್ದು ಎಲ್ಲ ರೀತಿಯ ಕ್ರೀಡೆಗೆ ಹೇಳಿಮಾಡಿಸಿದಂತಹ ಆಟ. ಅದು ಟೆಸ್ಟ್ ಇರಲಿ. ಒಂದು ದಿನದ ಪಂದ್ಯಗಳೇ ಇರಲಿ ಅಥವಾ ಇಂದಿನ ಜಮಾನಾದ ಟಿ20 ಪಂದ್ಯಗಳೇ ಇರಲಿ ಅಗತ್ಯಕ್ಕೆ ತಕ್ಕ ಆಟ ಇವರಿಂದ ಸಾಧ್ಯ. ಯುವ ಆಟಗಾರರು ಪ್ರತಿ ಪಂದ್ಯಗಳಲ್ಲಿ ಒಂದೇ ರೀತಿಯ ಆಟವನ್ನು ಪ್ರದರ್ಶಿಸಲು ವಿಫಲರಾಗುತ್ತಾರೆ. ಆದರೆ ಇವರು ಹಾಗಲ್ಲ. ಯಾವಾಗಲೂ ಉತ್ತಮ ಕ್ರಿಕೆಟ್ ಇವರಿಂದ ಸಾಧ್ಯ. ಈ ಆಟಗಾರರು ಆಡುವ ಕ್ರಿಕೆಟ್ ಸಹ ಅಷ್ಟೇ ಕಾವ್ಯಾತ್ಮಕ. ಪುಟ್ ವರ್ಕ್ ಗಳು, ಕವರ್ ಡ್ರೈವಳು, ಬ್ಯಾಕಪುಟ್ ಆಟಗಳು, ಹುಕ್ ಶಾಟ್ಗಳು  ಪ್ರತಿಯೊಂದೂ ಬಹಳ ಸುಂದರ.
ಈ ಆಟಗಾರರ ಆಟದ ವೈಖರಿಯೆ ಬದಲಾದುದು. ಇವರು ಮೇಲ್ನೋಟಕ್ಕೆ ನಿಧಾನವಾದ ಆಟವನ್ನು ಆಡಿದರೂ ಉತ್ತಮ ಸರಾಸರಿಯನ್ನೇ ಹೊಂಡಿರುತ್ತಾರೆ. ಇವರ ಇನ್ನೊಂದು ಮುಖ್ಯ ಲಕ್ಷಣಗಳೆಂದರೆ ಇವರು ಸಿಕ್ಸರ್ ಬಾರಿಸಲು ಹೆಚ್ಚು ಮುಂದಾಗುವುದಿಲ್ಲ. ಆದರೆ ಬೌಂಡರಿಗಳನ್ನು ಒಂದರ ಹಿಂದೆ ಒಂದರಂತೆ ಬಾರಿಸುತ್ತಾರೆ. ಬೌಲರ್ಗಳ ಸಹನೆಯನ್ನು ಪರೀಕ್ಷಿಸಿ ಬೆವರಿಳಿಸುತ್ತಾರೆ.
ಇವರು ಪಂದ್ಯಗಳಲ್ಲಿ ಪಕ್ಕಾ ಆಪತ್ಭಾಂದವರು. ಸೋಲಿನ ಸುಳಿಯಲ್ಲಿ ತಂಡವಿದ್ದರೆ ಅದನ್ನು ಬದಲಾಯಿಸುವ ಛಾತಿಯನ್ನು ಹೊಂದಿರುವವರು. ಇವರ ಕಲಾತ್ಮಕ ಆಟಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಗಾಯಗಳಾದರೂ ಇವರು ಅದಕ್ಕೆ ಜಗ್ಗವುದಿಲ್ಲ. ಗಾಯಕ್ಕಿಂತ ತಂಡ, ದೇಶ, ಗೆಲುವು ಮುಖ್ಯ ಎಂಬುದು ಇವರ ಗುಣ.
ಹಿರಿಯರ ಆಟಕ್ಕೆ ಅವರೆ ಸಾಕ್ಷಿ. ಯುವಕರ ಪಡೆ ಸಾಲು ಸಾಲು ಸೋಲನ್ನು ಅನುಭವಿಸುತ್ತಿರುವುದರಿಂದಲೆ ಪಾಕ್ ತಂಡ ನಿವೃತ್ತಿ ಹೊಂದಿದ್ದ ಮೊಹಮ್ಮದ್ ಯುಸುಫ್ರನ್ನು ಮತ್ತೆ ತಂಡಕ್ಕೆ ಆಯ್ಕೆ ಮಾಡಿದ್ದು. ಅನುಭವ, ಉತ್ತಮ ಆಟವೇ ಇವರ ಆಸ್ತಿ. ಯುವ ಆಟಗಾರರು ನೂರು ರನ್ನುಗಳನ್ನು ಹೊಡೆಯಲು ಇವರು ಕಷ್ಟಪಟ್ಟರೆ, ಹಿರಿಯ ಆಟಗಾರರಿಗೆ ಅದು ಸಲೀಸು. ಶತಕ, ದ್ವಿಶತಕ ಇವರಿಗೆ ಸುಲಭ. ಯುವಕರು ಫಿಟ್ನೆಸ್ ಇಲ್ಲದೆ ಬಳಲಿ, ಸೋತು, ರನ್ನರ್ ಸಹಾಯದಿಂದ ಹಾಗೂ ಹೀಗೂ ರನ್ ಹೊಡೆದರೆ, ಇವರು ಯುವಕರನ್ನೇ ನಾಚಿಸುವಂತೆ ಆಡುತ್ತಾರೆ. ಎರಡು ಮೂರು ರನ್ನುಗಳನ್ನು ಸುಲಭವಾಗಿ ತೆಗೆಯುತ್ತಾರೆ.
ವೆಸ್ಟ್ ಇಂಡೀಸ್ನ ತಂಡವನ್ನೇ ತೆಗೆದುಕೊಳ್ಳಿ, ಆ ತಂಡದಲ್ಲಿ ಎಷ್ಟೇ ಹೊಸ, ಹೊಡೆ ಬಡಿ ಆಟಗಾರರು ಬಂದರೂ ತಂಡದ ಪಾಲಿಗೆ ಆಪದ್ಭಾಂದವನಂತೆ ಇರುವುದು ಚಂದ್ರಪಾಲ್ ಮಾತ್ರ. ಅದೇ ರೀತಿ ದಕ್ಷಿಣ ಆಫ್ರಿಕಾ ತಂಡದ ಜೀವಾಳ ಜಾಕ್ ಕಾಲಿಸ್ ಎಂದರೂ ತಪ್ಪಿಲ್ಲ. ಅದೆ ಆಸ್ಟ್ರೇಲಿಯಾ ತಂಡವನ್ನು ಗಮನಿಸಿ ಅಲ್ಲಿ ಸ್ಟೀವ್ ವಾ, ಹೇಡನ್ ಅಂತಹ ಆಟಗಾರರು ಇದ್ದಾಗ ಸಾಲು ಸಾಲು ಗೆಲುವನ್ನು ಅದು ಕಂಡಿದ್ದು ಇತಿಹಾಸ. ಆದರೆ ಅಂತಹ ಆಟಗಾರರು ಇಗ ಇಲ್ಲವೇ ಇಲ್ಲ. ಪರಿಣಾಮ ಅದಕ್ಕೆ ಸೋಲಿನ ರುಚಿ ಗೊತ್ತಾಗತೊಡಗಿದೆ.
ಶ್ರೀಲಂಕಾದ ಅರವಿಂದ್ ಡಿಸಿಲ್ವಾ ಅಂತೂ ತನ್ನ 40ನೇ ವರ್ಷದ ವರೆಗೆ ಕ್ರಿಕೆಟ್ ಆಡಿದ್ದ. ಈಗ ಸನತ್ ಜಯಸೂರ್ಯ ಸಹ ಹಾಗೆಯೇ ಆಡುತ್ತಿದ್ದಾನೆ. ಅಷ್ಟು ವಯಸ್ಸಾಗಿದ್ದರೂ ಅವರ ಆಟಕ್ಕೆ ಯಾವುದೆ ಕುಂದು ಉಂಟಾಗಿಲ್ಲ. ಮೊದಲಿಗಿಂತ ಉತ್ತಮವಾಗಿಯೆ ಆಡುತ್ತಿದ್ದಾರೆ. ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪಲ್ಲ ಎನ್ನುವುದು ಇದಕ್ಕೇ ಇರಬೇಕು.
ತಂಡದ ಪಾಲಿನ ಆಪದ್ಭಾಂಧವ ಆಟಗಾರರಾದ ಇವರಿಗೆ ಹ್ಯಾಟ್ಸಾಪ್...