Saturday, February 23, 2019

ಒಳ್ಳೆಯ ಕಥೆ... ಕೆಟ್ಟ ನಿರೂಪಣೆ - ಮೆಹಬೂಬಾ (ನಾನು ನೋಡಿದ ಚಿತ್ರಗಳು-೫)

ಪ್ರೇಮಕಾವ್ಯ ಕಟ್ಟುವಲ್ಲಿ ಎಡವಿದ ಪುರಿ


ಒಂದು ಪೂರ್ವ ಜನ್ಮದ ಕಥೆ... ಆಗಾಗ ಬೀಳುವ ಕನಸು.. ಕನಸಿನಲ್ಲೇ ಕನವರಿಸುವ ಹುಡುಗ... ಥಟ್ಟನೆ ಪೂರ್ವ ಜನ್ಮದ ಹುಡುಗಿ ಕಣ್ಣೆದುರು ಬಂದರೆ....

ಇಂತದ್ದೊಂದು ಕಥೆ ಇಟ್ಟುಕೊಂಡು, ಭಾರತ ಹಾಗೂ ಪಾಕಿಸ್ಥಾನದ ಸಂಬಂಧದ ಕುರಿತು ತಿಳಿಸುವ ಸಿನಿಮಾ ಮೆಹಬೂಬಾ.

೧೯೭೧ ರ ಯುದ್ಧದ ಸಂದರ್ಭದಲ್ಲಿ ನಡೆಯುವ ಕಥೆ ಒಂದೆಡೆಯಾದರೆ, ೨೦೧೮ರ ವೇಳೆಗೆ ನಡೆಯುವ ಕಥೆ ಇನ್ನೊಂದು ಕಡೆ.

೧೯೭೧ರಲ್ಲಿ ಕಥಾ ನಾಯಕ ಪಾಕಿಸ್ಥಾನಿ ಸೈನಿಕ. ಆಗ ನಾಯಕಿ ಭಾರತದ ಹಿಂದೂ ಯುವತಿ. ೨೦೧೮ರಲ್ಲಿ ನಾಯಕ ಭಾರತದ ಸೈನಿಕನಾಗುವ ಮಹತ್ವಾಕಾಂಕ್ಷೆ ಉಳ್ಳವನು. ನಾಯಕಿ ಪಾಕಿಸ್ಥಾನಿ.

ನಾಯಕನಿಗೆ ಹಾಗೂ ನಾಯಕಿಗೆ ತನ್ನ ಹಿಂದಿನ ಜನ್ಮದ ಕಥೆ ಆಗಾಗ ಕನಸಿನಲ್ಲಿ ಕಾಡುತ್ತಿರುತ್ತದೆ. ವಾಸ್ತವದಲ್ಲಿ ನಾಯಕ- ನಾಯಕಿ ಎದುರಾಗುತ್ತಾರೆ. ಟ್ರೆಕ್ಕಿಂಗ್ ಹುಚ್ಚಿನ ನಾಯಕನಿಗೆ ಹಿಮಾಲಯದ ಪರ್ವತದ ನಡುವಿನ ಕಮರಿಯ ಆಳದಲ್ಲಿ ಸಿಗುವ ಹಿಂದಿನ ಜನ್ಮದ ನಾಯಕಿಯ ಮೃತದೇಹ. ಆಗ ಸಿಗುವ ಡೈರಿ, ಹಳೆಯ ಕಥೆ.. ಪ್ರಸ್ತುತ ಜನ್ಮದಲ್ಲಿ ನಾಯಕಿಯನ್ನು ಹುಡುಕಿ ಪಾಕಿಸ್ಥಾನ ಕ್ಕೆ ಹೊರಡುವುದು ಇತ್ಯಾದಿ..

ಕಥೆಯ ಒನ್ ಲೈನ್ ಚನ್ನಾಗಿದೆ. ಆದರೆ ನಿರ್ದೇಶಕರು ಅಲ್ಲಲ್ಲಿ ಸಿನಿಮಾವನ್ನು ಬಕ್ವಾಸ್ ಆಗಿಸಿದ್ದಾರೆ.

ಭಾರತ - ಪಾಕ್ ನಡುವೆ ಸಂಸ್ಕೃತಿ ವಿನಿಮಯದ ರೂಪದಲ್ಲಿ ವಿದ್ಯಾರ್ಥಿನಿ ಭಾರತಕ್ಕೆ ಬರುತ್ತಾಳೆ ಎನ್ನುವಂತದ್ದನ್ನು ನಿರ್ದೇಶಕರು ತೋರಿಸಿದ್ದಾರೆ.

ಸಿನಿಮಾ ಅಂತ್ಯದಲ್ಲಿ ಭಾರತದ ಮಹಿಳಾ ಸೈನಿಕರು ಗಡಿ ಕಾಯುವ ಅಂಶ ತೋರಿಸಿದ್ದಾರೆ. ಆದರೆ ಆ ಸಂದರ್ಭದಲ್ಲಿ ಪಾಕಿ ಸೈನಿಕರ ಆಕ್ರೋಶ, ಸುಮ್ಮ ಸುಮ್ಮನೆ ಗುಂಡು ಹಾರಿಸುವುದು ಇತ್ಯಾದಿ ತೋರಿಸಲಾಗಿದೆ. ಈ ಸಂದರ್ಭದಲ್ಲಿ ನಿರ್ದೇಶಕರು ಚಿತ್ರದ ಮೇಲೆ ತಮ್ಮ ಹಿಡಿತವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಗಟ್ಟಿ ನಿರೂಪಣೆ ಇದ್ದಿದ್ದರೆ ಕ್ಲೈಮ್ಯಾಕ್ಸ್ ಇನ್ನಷ್ಟು ಸುಂದರ ಹಾಗೂ ಸಹಜವಾಗಿ ಮೂಡಿ ಬರುತ್ತಿತ್ತು.

ಇಸ್ಲಾಂ ಜಿಂದಾಬಾದ್... ಎನ್ನುವುದು ನೋಡುಗರನ್ನು ಇನ್ನೊಂದು ಹಂತಕ್ಕೆ ತಲುಪಿಸುತ್ತದೆ. ಪಾಕಿಸ್ಥಾನಕ್ಕೆ ಜಿಂದಾಬಾದ್ ಹೇಳು ಎಂದು ಖಳ ನಾಯಕ, ನಾಯಕನ ಮೇಲೆ ಒತ್ತಡ ಹೇರಿದಾಗ ತಿರುಗಿ ಬೀಳುವ ನಾಯಕ ಸನ್ನಿವೇಶವನ್ನು ಚನ್ನಾಗಿ ಕಟ್ಟಿಕೊಟ್ಟಿದ್ದಾರೆ.

ಆದರೆ ಭಾರತೀಯ ಮಹಿಳಾ ಸೈನಿಕರನ್ನು ಕಾಮಿಡಿಯನ್ನಾಗಿಸಿದ್ದಾರೆ. ಇದು ಖಂಡಿತ ಸರಿಯಾದುದಲ್ಲ.

ತೆಲುಗಿನಲ್ಲಿ ಕಳೆದ ವರ್ಷ ತೆರೆಕಂಡ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು ಹೆಸರಾಂತ ನಿರ್ದೇಶಕ ಪುರಿ ಜಗನ್ನಾಥ್.

ಪುರಿ ಜಗನ್ನಾಥ್ ತಮ್ಮ ಪುತ್ರ ಆಕಾಶ್ ಪುರಿಯನ್ನು ಬೆಳ್ಳಿ ತೆರೆಗೆ ತರಲು ಆಯ್ದುಕೊಂಡ ಸಿನಿಮಾ ಮೆಹಬೂಬಾ. ಮೊದಲ ಚಿತ್ರದಲ್ಲಿ ಆಕಾಶ್ ಉತ್ತಮವಾಗಿ ನಟಿಸಿದ್ದಾರೆ. ಆದರೆ ಮತ್ತಷ್ಟು ಪಳಗುವ ಅಗತ್ಯವಿದೆ. ಮೊದಲ ಚಿತ್ರದ ಕಾರಣಕ್ಕೆ ಆಕಾಶ್ ಗೆ ಭೇಷ್ ಎನ್ನಬಹುದು.

ಚಿತ್ರದ ನಾಯಕಿ ಕನ್ನಡತಿ ನೇಹಾ ಶೆಟ್ಟಿ. ಮುಂಗಾರು ಮಳೆಯಲ್ಲಿ ನಟಿಸಿದ್ದ ಮಾದಕ ಚಲುವೆ ಚಿತ್ರದಲ್ಲಿ ಉತ್ತಮ ನಟನೆಯೊಂದಿಗೆ ಸೆಳೆಯುತ್ತಾಳೆ. ಮುಸ್ಲಿಂ ಯುವತಿಯಾಗಿ ನಟಿಸಿದ ಈಕೆ ಮನಸ್ಸಿನಲ್ಲಿ ನೆಲೆ ನಿಲ್ಲುತ್ತಾಳೆ. ಕನ್ನಡದ ಚಲನಚಿತ್ರ ರಂಗದವರು ನೇಹಾ ಶೆಟ್ಟಿಯವರಿಗೆ ಅವಕಾಶ ಯಾಕೆ ಕೊಡಲಿಲ್ಲ ಎನ್ನುವುದು ಇನ್ನೂ ನನಗೆ ಕಾಡುತ್ತಿದೆ.

ಉಳಿದಂತೆ ರಾಹುಲ್ ಶರ್ಮಾ, ಸಯ್ಯಾಜಿ ಶಿಂಧೆ, ಪ್ರಮೋದಿನಿ ನಟನೆ ಚನ್ನಾಗಿದೆ.

ಕನ್ನಡದವರೇ ಆದ ಅಜನೀಶ್ ಲೋಕನಾಥ್ ಸಂಗೀತ ಒಂದು ಮಟ್ಟಿಗೆ ಇದೆ. ಆದರೆ ಹಾಡುಗಳು ನೆನಪಿನಲ್ಲಿ ಇರುವುದಿಲ್ಲ.

ಎಲ್ಲ ತೆಲುಗು ಚಿತ್ರಗಳಂತೆ ನಾಟಕೀಯತೆ ಸಾಕಷ್ಟಿದೆ. ಸರಿಯಾಗಿ ಕೆತ್ತಿದ್ದರೆ ಪ್ರೇಮಕಾವ್ಯ ಆಗಬಹುದಿತ್ತು. ಆದರೆ ಮೆಹಬೂಬಾಳನ್ನು ನಿರ್ದೇಶಕರು ಕುರೂಪಿ ಮಾಡಿದ್ದಾರೆ. ಕನ್ನಡವೂ ಸೇರಿ ಹಲವು ಭಾಷೆಗಳಲ್ಲಿ ಒಳ್ಳೆಯ ಚಿತ್ರ ಕೊಟ್ಟ ಪುರಿ ಜಗನ್ನಾಥ್ ಹಲವು ಸಂದರ್ಭಗಳಲ್ಲಿ ಎಡವಿದ್ದಾರೆ. ಹಿಡಿತ ಕಳೆದುಕೊಂಡಿದ್ದಾರೆ.

ಚಿತ್ರ ಅತ್ಯುತ್ತಮವಲ್ಲ. ಆದರೆ ಒಮ್ಮೆ ನೋಡಬಹುದು ಅಷ್ಟೇ.
ಚಿತ್ರಕ್ಕೆ ನಾನು ಕೊಡುವ ಅಂಕ ೫ ಕ್ಕೆ ೨.೫

No comments:

Post a Comment