Tuesday, November 21, 2017

ಕೃಷ್ಣನೇಕೆ ಸಾರಥಿಯೇ ಆದ?


------------------------

ಆತ ಮನಸ್ಸು ಮಾಡಿದ್ದರೆ
ಕೌರವರನ್ನೆಲ್ಲ ಉಣುಗು
ನೊರೆದಂತೆ ನೊರೆಯಬಹುದಿತ್ತು |
ಪಂಚ ಪಾಂಡವರನ್ನೆಲ್ಲ
ಕಿರುಬೆರಳಿನಲ್ಲಿಯೇ ಗೋವರ್ಧನ
ಗಿರಿಯೆತ್ತರಕ್ಕೆ ನಿಲ್ಲಿಸಬಹುದಿತ್ತು |

ಆತ ಮನಸ್ಸು ಮಾಡಿದ್ದರೆ
ಕುರುಕ್ಷೇತ್ರದಲ್ಲಿ ಸುದರ್ಶನನ
ನರ್ತನ ಮಾಡಿಸಬಹುದಿತ್ತು |
ಕೌರವ ಕುಲವನ್ನೆಲ್ಲ
ಕಂಸನಂತೆ ಕೊಲ್ಲಬಹುದಿತ್ತು
ಕ್ಷಣ ಮಾತ್ರದಲ್ಲಿ ಹನನ ಮಾಡಬಹುದಿತ್ತು |

ಆತ ಮನಸ್ಸು ಮಾಡಿದ್ದರೆ
ಶಕಟನ ಒದ್ದಂತೆ ಲಟಲಟನೆ
ಅರೆಘಳಿಗೆಯಲ್ಲಿ ಮುರಿದು ಹಾಕಬಹುದಿತ್ತು |
ಪೂತನಿಯೆದೆಯ ಹಾಲಿನೊಡನೆ
ರಕುತವ ಹೀರಿದಂತೆ
ತಮವ ಹೀರಬಹುದಿತದತ್ತು |

ಹಾಗಾಗದ ಕೃಷ್ಣ
ಹೀಗೇಕೆ ಆದ?

ಗೀತೆಯ ಸಾರ ತಿಳಿಸಲು
ಸಾರಥಿಯಾದ
ಉಡುಗಿದ್ದ ಆತದಮಸ್ಥೈರ್ಯ
ಮೆರೆಸಲು ಮುನ್ನಡೆದ |

ಕೈಕಲ್ಲಿ ಕಿರುಗತ್ತಿ ಇಲ್ಲದೆಯೂ
ಯುದ್ಧಗೆಲ್ಲಬಹುದೆಂದು ಸಾರಿದ
ನಾ ನಾರಾಯಣ.. ನೀನು ನರ
ಎಂಬ ತತ್ವ ಮೆರೆಸಿದ |

ನಾನು ನೆಪ ಮಾತ್ರ
ನಿನ್ನೊಳಗೆ ಎಲ್ಲವೂ ಇದೆ ಎಂದು
ನರನ ಕೈಹಿಡಿದು ಮುನ್ನಡೆಸಿದ
ನಮ್ಮೊಳಗಿನ ಸುಪ್ತ ಶಕ್ತಿ ಮೆರೆಸಲು
ಕೃಷ್ಣ ಸಾರಥಿಯೇ ಆದ |


-------------------

(ಈ ಕವಿತೆಯನ್ನು ಬರೆದಿದ್ದು 21 ನವೆಂಬರ್ 2017ರಂದು ಬೆಂಗಳೂರಿನಲ್ಲಿ)

No comments:

Post a Comment