Thursday, November 30, 2017

ದಾಸ್ಯ (ಕಥೆ)-2

ಏನಾಗಿರಬಹುದು ಎನ್ನುವ ಕುತೂಹಲ ನನ್ನನ್ನು ಕಾಡುತ್ತಿರುವಂತೆಯೇ ಅಜ್ಜಿ ಮಾತನ್ನು ಮುಂದುವರಿಸಿದರು.
ಯಾರೋ ನಮ್ಮನ್ನೆಲ್ಲ ಸುತ್ತುವರಿದಿದ್ದರು. ನಮಗೆಲ್ಲ ಏನಾಗುತ್ತಿದೆ ಎಂಬುದು ಗೊತ್ತೇ ಆಗಲಿಲ್ಲ. ನೋಡಿದರೆ ಬ್ರಿಟೀಷರ ಪರ ಕೆಲಸ ಮಾಡುತ್ತಿದ್ದ ನಮ್ಮದೇ ನಾಡಿನ ಪೊಲೀಸರು ಬಂದು ಮುತ್ತಿಗೆ ಹಾಕಿದ್ದರು. ನಮ್ಮದೇ ಬಟ್ಟೆ ಧರಿಸಿದ್ದರು. ತಕ್ಷಣ ನಮ್ಮಲ್ಲಿ ಗೊಂದಲ ಶುರುವಾಯಿತು. ಪೊಲೀಸರು ಲಾಠಿಯ ಮೂಲಕ ನಮ್ಮನ್ನು ಹೆಡೆಮುರಿ ಕಟ್ಟಲು ಆರಂಭಿಸಿದ್ದರು. ನಾವು ಎದ್ದೆವೋ ಬಿದ್ದೆವೋ ಎಂದು ಓಡಲು ಆರಂಬಿಸಿದ್ದೆವು. ಈ ನಡುವೆ ಯಾರೋ ಬಿದ್ದರು. ಯಾರೋ ಎದ್ದರು. ಬಿದ್ದವರ ಮೇಲೆ ಇನ್ನಷ್ಟು ಜನರು ಬಿದ್ದರು. ಮೆಟ್ಟಿದ್ದರು. ತುಳಿದರು. ನಾವು ಚಿಕ್ಕವರು. ಹುರುಪಿನಲ್ಲಿ ಓಡಿದೆವು. ಓಡುತ್ತಲೇ ಇದ್ದೆವು. ಅಲ್ಲೆಲ್ಲೋ ಸ್ವಲ್ಪ ದೂರ ಹೋದ ಮೇಲೆ ನಮ್ಮ ಹಿಂದೆ ಯಾರೂ ಬರುತ್ತಿಲ್ಲ ಎನ್ನುವುದು ಖಾತ್ರಿಯಾಯಿತು. ನಾವು ತಿರುಗಿ ನೋಡಿದಾಗ ಭಾಷಣ ನಡೆಯುತ್ತಿದ್ದ ಕಟ್ಟೆಯ ಕಡೆಯಿಂದ ಕೂಗಾಟ, ಚೀರಾಟ ಕೇಳುತ್ತಿತ್ತು...'
`ಇದೇ ಸಮಯದಲ್ಲಿ ನನಗೆ ಹುಚ್ಚು ಆವೇಶ ಬಂದಿತು ನೋಡು. ಸೀದಾ ವಾಪಾಸಾಗಲು ಆರಂಭಿಸಿದೆ. ನನ್ನ ಜೊತೆಗಿದ್ದವರು ನನ್ನನ್ನು ಹೋಗದೇ ಇರುವಂತೆ ಮಾಡುತ್ತಿದ್ದರೂ ನಾನು ಕೇಳಲಿಲ್ಲ. ಭಾಷಣ ನಡೆದ ಸ್ಥಳಕ್ಕೆ ಹತ್ತಿರ ಬರುತ್ತಿದ್ದಂತೆ ಯಾರೋ ಒಬ್ಬ ಪೊಲೀಸಿನವ ನನ್ನನ್ನು ಗಮನಿಸಿ ನನ್ನತ್ತ ನುಗ್ಗಿದ. ನಾನು ಸೀದಾ ಬಗ್ಗಿ ಕಾಲ ಬುಡದಲ್ಲಿದ್ದ ಕಲ್ಲೊಂದನ್ನು ಎತ್ತಿಕೊಂಡು ರಪ್ಪನೆ ಅವನ ಕಡೆಗೆ ಬೀಸಿದೆ. ಸೀದಾ ಅವನ ಹಣೆಗೆ ಬಿತ್ತು ಅದು. ಹಣೆಯಿಂದ ರಕ್ತ ಬರಲು ಆರಂಭಿಸಿತು. ಇಲ್ಲಿಯವರೆಗೂ ಹುಚ್ಚು ಹುಮ್ಮಸ್ಸಿದ್ದ ನನಗೆ ಯಾವಾಗ ರಕ್ತ ಕಂಡೆನೋ ಆಗ ಭಯವಾಯಿತು. ತಕ್ಷಣ ಓಡಲು ಆರಂಭಿಸಿದೆ. ಪೊಲೀಸಿನವನು ನನ್ನನ್ನು ಹಿಂಬಾಲಿಸಿದ. ನನ್ನ ಜೊತೆಗಿದ್ದವರೆಲ್ಲ ಚದುರಿದ್ದರು. ನಾನು ಹೇಗೋ ತಪ್ಪಿಸಿಕೊಂಡು ಮನೆ ಸೇರಿದ್ದೆ. ಹಿಂಬಾಲಿಸಿದ ಪೊಲೀಸ ಎಲ್ಲಿ ಹೋದನೋ ತಿಳಿಯಲಿಲ್ಲ..' ಅಜ್ಜಿ ಇನ್ನೊಮ್ಮೆ ಸುಮ್ಮನಾಗಿದ್ದರು.
ನಾನು ಇನ್ನಷ್ಟು ಕುತೂಹಲದಿಂದ ಅವರ ಮಾತನ್ನು ಆಲಿಸಲು ಆರಂಭಿಸಿದ್ದೆ. ಹಾಗೆಯೇ ತನ್ನ ಬಳಿ ಇದ್ದ ಕುಟ್ಟಾಣಿಯನ್ನು ತೆಗೆದುಕೊಂಡು ಅಡಿಕೆ ಹಾಗೂ ವೀಳ್ಯದೆಲೆಯನ್ನು ಸಣ್ಣದಾಗಿ ಕತ್ತರಿಸಿ, ಅದನ್ನು ಕುಟ್ಟಲು ಆರಂಭಿಸಿದರು.
`ನಾನು ಮಾಡಿದ ಘನಾಂದಾರಿ ಕೆಲಸ ನಿಧಾನವಾಗಿ ಎಲ್ಲ ಕಡೆ ಹಬ್ಬಲು ಆರಂಭವಾಗಿತ್ತು. ಆರಂಭದಲ್ಲಿ ನಾನು ಏನನ್ನೂ ಮಾಡದಿದ್ದರೂ ನಂತರದಲ್ಲಿ ನಿಧಾನವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ಆರಂಭಿಸಿದೆ. ಹರತಾಳದಲ್ಲಿ ತೊಡಗುವುದು, ಘೋಷಣೆ ಕೂಗುವುದು ಇತ್ಯಾದಿಗಳೆಲ್ಲ ನಡೆದೇ ಇದ್ದವು. ನನ್ನದು ಬಾಯಿ ಜೋರು. ಈ ಕಾರಣದಿಂದ ಹರತಾಳದಲ್ಲಿದ್ದ ನನಗೆ ನಿಧಾನವಾಗಿ ಮುಂದಾಳತ್ವವೂ ಸಿಕ್ಕಿತು. ನನ್ನ ಕುರಿತು ಸುತ್ತಮುತ್ತಲ ಫಾಸಲೆಯಲ್ಲಿ ಸುದ್ದಿಯಾಗಲು ಶುರುವಾಯಿತು. ಬಹುಶಃ ಆಗಲೇ ಬ್ರಿಟೀಷರಿಗೆ ಪೀಕಲಾಟ ಶುರುವಾಗಿರಬೇಕು..
ಆದರೆ ನಾನು ಹೆಂಗಸಾದ ಕಾರಣ, ಗಂಡಸರಂತೆ ನನ್ನ ವಿರುದ್ಧ ಕ್ರಮ ಕೈಗೊಳ್ಳುವುದು ಸಾಧ್ಯವಾಗಿರಲಿಲ್ಲ. ಈ ಸಂಗತಿಯ ಬಗ್ಗೆ ಬ್ರಿಟೀಷರು ತಲೆಕೆಡಿಸಿಕೊಂಡಿರಬೇಕು. ಆದರೆ ಆಗೀಗ ನನ್ನನ್ನು ಬಂಧಿಸುವುದು, ಬಿಡುಗಡೆ ಮಾಡುವುದು ನಡೆದೇ ಇತ್ತು. ಗಂಡಸರನ್ನಾದರೆ ಹೆಡೆಮುರಿ ಕಟ್ಟಿ ಬಿಡಬಹುದು. ಆದರೆ ನಮಗೆ ಹಾಗಾಗುವುದಿಲ್ಲವಲ್ಲ. ನಮಗೆ ಸ್ವಲ್ಪವೇ ಏನಾದರೂ ಆದರೆ ದೊಡ್ಡ ಸುದ್ದಿಯಾಗಿ ಆಮೇಲೆ ಅದು ಬ್ರಿಟೀಷರಿಗೆ ಅವಮಾನ ಉಂಟಾದರೆ... ಬ್ರಿಟಿಷ್ ರಾಣಿಗೆ ಅವಮಾನ ಆದರೆ ಅಂತೆಲ್ಲ ಆಲೋಚನೆ ಮಾಡಿದರು ಬ್ರಿಟೀಷರು. ನನ್ನನ್ನು ಸುಮ್ಮನೆ ಬಿಟ್ಟರೂ ಆಗುವುದಿಲ್ಲ. ಆದರೆ ಏನು ಮಾಡುವುದು ಎನ್ನುವ ವಿಷಯ ಅವರಿಗೂ ಗೊತ್ತಿರಲಿಲ್ಲ. ನಾನಂತೂ ಸ್ವಾತಂತ್ರ್ಯ ಚಳುವಳಿಯ ಕಾವಿನಲ್ಲಿ ಮನೆಯನ್ನೂ ಮರೆಯುವ ಹಂತಕ್ಕೆ ಬಂದಿದ್ದೆ. ಅಪ್ಪನಂತೂ ಅದೆಷ್ಟು ಸಿಟ್ಟಾಗಿದ್ದನೋ. ಆದರೆ ಕಾಂಗ್ರೆಸ್, ಚಳವಳಿ, ಗಾಂಧೀಜಿ ಬಗ್ಗೆ ಅಪಾರ ಗೌರವ ಹೊಂದಿದ್ದ ಅಪ್ಪ ಕೊನೆಗೊಮ್ಮೆ ನನ್ನ ಮೇಲಿನ ಸಿಟ್ಟನ್ನು ಕಡಿಮೆ ಮಾಡಿದ್ದ. ಏನಾದ್ರೂ ಮಾಡ್ಕೊ ಎಂದು ಬಿಟ್ಟು ಬಿಟ್ಟಿದ್ದ. ನನಗೆ ಇದರಿಂದ ರೆಕ್ಕೆ ಬಂದಂತಾಗಿ ಖುಷಿಯಾಗಿದ್ದೆ.
ಹಿಂಗೇ ಇದ್ದಾಗ ಒಂದಿನ ಒಬ್ಬಾತ ಬಂದ. ಅಪ್ಪನಿಗೆ ಹಳೆಯ ಪರಿಚಯವಂತೆ. ಆಗತಾನೆ ಯವ್ವನ ಮುಗಿದಿತ್ತು. ಆರಡಿಯ ಕಟ್ಟುಮಸ್ತಾದ ಆಳು. ನನಗೆ ಆತನನ್ನು ಎಲ್ಲೋ ನೋಡಿದಂತಿದೆಯಲ್ಲ ಅನ್ನಿಸಿತು. ಆದರೆ ಎಲ್ಲಿರಬಹುದು ಎನ್ನುವುದು ನೆನಪಾಗಲಿಲ್ಲ. ಆತ ಕೆಲಕಾಲ ಅಪ್ಪನ ಬಳಿ ಮಾತನಾಡಿ ಹೋದ. ಹೋಗುವ ಮೊದಲು ನನ್ನ ಬಳಿ ನಿಂತು ಹಾಗೆಯೇ ನಕ್ಕು ಹೋದ. ನನ್ನ ಮನಸ್ಸಿನಲ್ಲಿ ಗೊಂದಲ ಮೂಡಿತ್ತು. ಆ ವ್ಯಕ್ತಿ ಹೋದ ನಂತರ ಅಪ್ಪ ನನ್ನ ಬಳಿ ಬಂದು ನೋಡು ಅವರು ನಮ್ಮ ಪಕ್ಕದೂರಿನ ಪಟೇಲರು. ಅವರು ನಿನ್ನನ್ನು ಮದುವೆ ಮಾಡಿಕೊಳ್ಳಲು ಮುಂದೆ ಬಂದಿದ್ದಾರೆ. ಅವರಿಗೆ ನಿನ್ನ ಹರತಾಳ, ಚಳವಳಿಗಳ ಸುದ್ದಿ ಕಿವಿಗೆ ಬಿದ್ದಿದೆಯಂತೆ. ಅದನ್ನು ಕೇಳಿ, ಆದರೆ ನಿನ್ನಂತವಳನ್ನೇ ಮದುವೆ ಆಗಬೇಕು ಎಂದುಕೊಂಡು ಇಲ್ಲಿಯ ತನಕ ಬಂದಿದ್ದರಂತೆ ನೋಡು ಎಂದರು. ನಾನು ಮಾತನಾಡಲಿಲ್ಲ. ಭಾರತದ ಸ್ವಾತಂತ್ರದ ಬಗ್ಗೆ ಬಹಳ ಒಲವಿಟ್ಟುಕೊಂಡವರು. ಬಹಿರಂಗವಾಗಿ ಅಲ್ಲದಿದ್ದರೂ ಗುಟ್ಟಾಗಿ ಭಾರತದ ಸ್ವಾತಂತ್ರ ಹೋರಾಟಕ್ಕೆ ಸಹಾಯ ಮಾಡುತ್ತಿರುವ ಗಣಪಯ್ಯ ಪಟೇಲರು ಅವರು. ಅವರಿಗೆ ನಿನ್ನ ಮೇಲೆ ಮನಸ್ಸಾಗಿದೆಯಂತೆ. ಹೇಳು ಅವರಿಗೆ ನಾನು ಏನು ಹೇಳಲಿ? ನಿನ್ನನ್ನು ಕೇಳುವ ಜರೂರತ್ತಿರಲಿಲ್ಲ. ಆದರೂ ಕೇಳಿದೆ ಅಂದ ಅಪ್ಪ. ಆಗಲೂ ನಾನು ಸುಮ್ಮನೆ ಇದ್ದೆ.
ನನ್ನ ಮನಸ್ಸು ಹುಯ್ದಾಡುತ್ತಿತ್ತು. ಆ ವ್ಯಕ್ತಿಯನ್ನು ಮದುವೆಯಾಗಲೇ? ಬೇಡವೇ..? ಭಾರತದ ಸ್ವಾತಂತ್ರ್ಯಕ್ಕಾಗಿ ನನ್ನನ್ನು ನಾನು ಮುಡಿಪಾಗಿ ಇಡುವ ನಿಶ್ಚಯ ಮಾಡಿದ್ದೆ. ಆದರೆ ಮದುವೆಯಾದ ಮೇಲೆ ಅವೆಲ್ಲ ನಿಂತುಹೋದರೆ? ದ್ವಂದ್ವ ಕಾಡಿತು. ಅಪ್ಪ... ಮದುವೆಯ ನಂತರವೂ ನಾನು ಸ್ವಾತಂತ್ರ ಹೋರಾಟದಲ್ಲಿ ತೊಡಗಿಕೊಳ್ಳುತ್ತೇನೆ. ಇದಕ್ಕೆ ಅವರು ಒಪ್ಪುತ್ತಾರೋ ಇಲ್ಲವೋ ಗೊತ್ತಿಲ್ಲ. ಒಪ್ಪುತ್ತಾರೆ ಅಂತ ಆದರೆ ಮದುವೆಗೆ ನನ್ನ ಒಪ್ಪಿಗೆ ಇದೆ ಎಂದು ಹೇಳಿದ್ದೆ. ಅಪ್ಪ ನಿಟ್ಟುಸಿರು ಬಿಟ್ಟು ವಿಷಯವನ್ನು ಅವರಿಗೆ ತಿಳಿಸೋಣ. ಆಮೇಲೆ ಏನನ್ನುತ್ತಾರೋ ನೋಡೋಣ ಎಂದಿದ್ದ. ಮರುದಿನವೇ ಜನರನ್ನು ಕಳಿಸಿ ವಿಷಯವನ್ನು ಪಟೇಲರ ಮನೆಗೆ ಮುಟ್ಟಿಸಿದ್ದ.

--------------


ಇದಾಗಿ ಕೆಲವೇ ದಿನಗಳಲ್ಲಿ ಧಾಂ ಧೂಂ ಆಗಿ ನನ್ನ ಮದುವೆ ಆಯಿತು. ಶುಭಗಳಿಗೆಯಲ್ಲಿ ನಾನು ಅವರ ಮನೆಯ ಅವಿಭಾಜ್ಯ ಅಂಗವಾಗಿದ್ದೆ. ಇತ್ತ ಭಾರತದ ಸ್ವಾತಂತ್ರ್ಯ ಹೋರಾಟದ ಕಿಚ್ಚು ಇನ್ನಷ್ಟು ಉಗ್ರವಾಗಿತ್ತು. ಅಲ್ಲೆಲ್ಲೋ ಸುಭಾಷರ ಹೋರಾಟ, ಇನ್ನೆಲ್ಲೋ ಗಾಂಧೀಜಿಯವರ ಹರತಾಳ ಎಲ್ಲ ಕಿವಿಗೆ ಬೀಳುತ್ತಿತ್ತು. ಈ ನಡುವೆಯೇ ಸುಭಾಷರು ವಿಮಾನ ಅಪಘಾತದಲ್ಲಿ ಮಡಿದರಂತೆ ಎಂಬ ಸುದ್ದಿಯೂ ನನ್ನ ಕಿವಿಗೆ ಬಿದ್ದು ಅಪಾರ ದುಃಖವಾಗಿತ್ತು. ಹೀಗಿದ್ದಾಗಲೇ ನನ್ನ ಸಂಸಾರ ನೌಕೆಯೂ ಕೂಡ ಸಾಗಿತ್ತು. ಮದುವೆಯಾಗಿ ನಾಲ್ಕೈದು ತಿಂಗಳಿಗೆಲ್ಲ ನನಗೆ ಮುಟ್ಟು ನಿಂತಿತ್ತು. ಅಲ್ಲಿಗೆ ನಾನು ಗರ್ಭಿಣಿ ಎನ್ನುವ ವಿಷಯ ಪಕ್ಕಾ ಆಗಿತ್ತು. ಹೀಗಿದ್ದಾಗಲೇ ಒಂದಿಷ್ಟು ಚಳವಳಿಗಾರರು ಬಂದು ನನ್ನ ಬಳಿ, ಹೋರಾಟದ ಮುಂದಾಳತ್ವ ವಹಿಸಿಕೊಳ್ಳಬೇಕು ಎಂದು ಕೋರಿದ್ದರು. ನನಗೆ ಹೋಗಬೇಕೆಂಬ ಆಸೆ. ಬಸುರಿ ಬೇರೆ. ಪಟೇಲರು ಏನೆಂದಾರೋ ಎನ್ನುವ ಆತಂಕವೂ ಕಾಡದೇ ಇರಲಿಲ್ಲ. ಕೊನೆಗೊಮ್ಮೆ ಪಟೇಲರ ಬಳಿ ಕೇಳೀಯೂಬಿಟ್ಟೆ. ಅದಕ್ಕವರು ಹೇಳಿದ ಒಂದೇ ಉತ್ತರ `ಗರ್ಭಿಣೀ ನೀನು. ಇಂತಹ ಪರಿಸ್ಥಿತಿಯಲ್ಲಿ ಚಳವಳಿಯ ಉಸಾಬರಿ ಏಕೆ..?'
ನನಗೆ ಏನೆನ್ನಬೇಕೋ ತಿಳಿಯಲಿಲ್ಲ. ಪರಿಸ್ಥಿತಿ, ಪಟೇಲರು ಹೇಳಿದ ಉತ್ತರ, ಎಲ್ಲ ಸಮಂಜಸವಾಗಿದ್ದವು. ಆದರೆ ದೇಶಸೇವೆಯ ಬಯಕೆ ತಣಿಯಬೇಕಲ್ಲ. ನಾನು ಹಟ ಮಾಡಿದೆ. ಅವರು ನಕಾರಾತ್ಮಕವಾಗಿ ಮಾತನಾಡುತ್ತಲೇ ಇದ್ದರು. ಹೀಗೇ ಮೂರ್ನಾಲ್ಕು ತಿಂಗಳು ಕಳೆದವು. ಅಷ್ಟಾಗುವ ವೇಳೆಗೆ ನನಗೆ ಒಂದು ವಿಷಯ ಮನದಟ್ಟಾಗಿತ್ತು. ನಾನು ಏನೆಂದರೂ ಪಟೇಲರು ನನ್ನನ್ನು ಚಳವಳಿಗೆ ತೆರಳಲು ಬಿಡುವುದಿಲ್ಲ ಎನ್ನುವುದು. ಒಂದಿಷ್ಟು ದಿನಗಳ ಕಾಲ ನಾನು ಸಾವಧಾನದಿಂದ ಕೇಳಿದೆ. ಅದಕ್ಕೆ ನಕಾರಾತ್ಮಕ ಉತ್ತರವೇ ಬಂದಿತ್ತು. ಆದರೆ ದಿನಗಳೆದಂತೆಲ್ಲ ನನ್ನ ಸಹನೆಯ ಕಟ್ಟೆ ಒಡೆಯಲು ಆರಂಭವಾಗಿತ್ತು. ಭಾರತದ ಸ್ವಾತಂತ್ರ್ಯ ಹೋರಾಟದ ಕಿಚ್ಚು ತೀವ್ರವಾದಂತೆ ಒಂದು ದಿನ ನಾನು ಪಟೇಲರ ಬಳಿ ಜಗಳ ಕಾದೆ.


(ಮುಂದುವರಿಯುತ್ತದೆ)

No comments:

Post a Comment