Tuesday, December 2, 2014

ಸಾಧನೆಗೆ ಅಂಗವೈಕಲ್ಯ ಅಡ್ಡಿಯಲ್ಲ

ಅಂಗವೈಕಲ್ಯದಲ್ಲೂ ಸಾಧನೆ ಮಾಡುತ್ತಿರುವ ವಿನಾಯಕ ಹೆಗಡೆ
***
(\ವಿನಾಯಕ ಹೆಗಡೆ/)
ಸಾಧಿಸುವ ಛಲ ಎಂತವರಲ್ಲೂ ಕಿಚ್ಚನ್ನು ಹಚ್ಚಿಸುತ್ತದೆ. ಸಾಧಿಸಬೇಕೆಂಬ ಮನಸ್ಸಿದ್ದರೆ ಅಂಗವೈಕಲ್ಯವೂ ತಡೆಯಾಗುವುದಿಲ್ಲ. ಅಂಗವೈಕಲ್ಯವಿದ್ದರೂ ಸಾಧನೆ ಮಾಡುತ್ತಿರುವ ವ್ಯಕ್ತಿಯೊಬ್ಬರು ಶಿರಸಿಯಲ್ಲಿದ್ದಾರೆ ಅವರೇ ವಿನಾಯಕ ಹೆಗಡೆ.
ನಗರದಲ್ಲಿ ಊದಬತ್ತಿ ವಿನಾಯಕ ಎಂದೇ ಖ್ಯಾತಿಯನ್ನು ಗಳಿಸಿರುವ ವಿನಾಯಕ ಹೆಗಡೆ ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ. ವಿನಾಯಕ ಹೆಗಡೆಯವರನ್ನು ಸಮಾಜ ಬುದ್ಧಿಮಾಂದ್ಯ ಎಂದು ಕಡೆಗಣಿಸಿಬಿಟ್ಟಿದೆ. ನಗರದ ಕೆ.ಎಚ್.ಬಿ. ಕಾಲೋನಿಯ ನಿವಾಸಿಯಾಗಿರುವ ವಿನಾಯಕ ಹೆಗಡೆ ಊದಬತ್ತಿ, ಧೂಪ, ಕಪರ್ೂರ, ಲೋಬಾನ ಈ ಮುಂತಾದ ಗೃಂಧಿಗೆ  ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಜೀವನವನ್ನು ನಡೆಸುತ್ತಿದ್ದಾರೆ.
ವಿನಾಯಕನ ಶೃದ್ಧೆ, ಛಲ, ಹೋರಾಟ ಮನೋಭಾವ, ಗುರಿ ಇತ್ಯಾದಿಗಳ ಬಗ್ಗೆ ಎರಡು ಮಾತಿಲ್ಲ. ಕೇವಲ 24 ವರ್ಷ ವಯಸ್ಸಿನ ವಿನಾಯಕ ಹೆಗಡೆ ಹತ್ತನೇ ತರಗತಿಯ ವರೆಗೆ ಓದಿದ್ದಾನೆ. ಜೀವನದಲ್ಲಿ ಕಠಿಣ ಶ್ರಮ ವಹಿಸಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ವಿನಾಯಕನೇ ಸಾಕ್ಷಿ. ಪ್ರಾರಂಭದ ದಿನಗಳಲ್ಲಿ ವಿನಾಯಕ ಹೆಗಡೆ ನಗರದಲ್ಲಿ ಊದಬತ್ತಿ ತಂದು ಮಾರಾಟ ಮಾಡಲು ಆರಂಭಿಸಿದರೆ ಕೊಳ್ಳುವವರೇ ಇರಲಿಲ್ಲ. ಬೇಡವೇ ಬೇಡ ಎಂದು ಹೀಗಳೆದವರು ಅನೇಕಮಂದಿ. ಹೀಗಿದ್ದಾಗಲೇ ಸ್ಥಳೀಯರ ನೆರವಿನಿಂದಲೇ ಊದಬತ್ತಿ ಮಾರಾಟದ ಪಟ್ಟುಗಳನ್ನು ಕಲಿತವನು ವಿನಾಯಕ ಹೆಗಡೆ. ಕೆಲವೇ ವರ್ಷಗಳ ಹಿಂದೆ ಸಮಾಜ ಈತನನ್ನು ಬುದ್ಧಿಮಾಂದ್ಯ, ಮಾನಸಿಕ ಅಸ್ವಸ್ಥ ಎಂದೆಲ್ಲ ಕರೆದಿತ್ತು. ಇಂತಹ ವ್ಯಕ್ತಿ ಈಗ ಸಂಪೂರ್ಣ ಸ್ವಾವಲಂಬಿ. ಮಾನಸಿಕವಾಗಿ ಸ್ವಸ್ಥಡೀಗ ಒಬ್ಬನೇ ಹುಬ್ಬಳ್ಳಿಗೆ ಹೋಗಿ, ಹುಬ್ಬಳ್ಳಿ ನಗರವನ್ನು ಸುತ್ತಾಡಿ ಊದಬತ್ತಿ, ಲೋಬಾನ, ಕಪರ್ೂರ ಸೇರಿದಂತೆ ಅಗತ್ಯವಸ್ತುಗಳನ್ನು ಯಾರ ಸಹಾಯವಿಲ್ಲದೇ ತರಬಲ್ಲ. ಅದನ್ನು ಶಿರಸಿಗೆ ತಂದು ಮಾರಾಟ ಮಾಡಬಲ್ಲವನಾಗಿದ್ದಾನೆ.
ಊದಬತ್ತಿ ಮಾರಾಟದ ಆರಂಭದ ದಿನಗಳಲ್ಲಿ ಅಪಾರ ಕಷ್ಟವನ್ನು ಅನುಭವಿಸಿದ ವಿನಾಯಕನನ್ನು ಹೀಗಳೆದವರೇ ಅನೇಕ. ಆದರೆ ಆತನ ಶೃದ್ಧೆ, ಛಲ, ವಿಶ್ವಾಸ, ಸಾಧಿಸಬೇಕೆಂಬ ಬಯಕೆ ಎಲ್ಲರನ್ನೂ ಮರುಳು ಮಾಡಿಬಿಟ್ಟಿದೆ. ಹೀಗಳೆದವರೇ ಈಗ ಆತನ ಬೆನ್ನಿಗೆ ನಿಂತಿದ್ದಾರೆ. ಆರಂಭದ ದಿನಗಳಲ್ಲಿ ವಿನಾಯಕನಿಂದ ಊದಬತ್ತಿಯನ್ನು ಕೊಂಡವರು ದುಡ್ಡನ್ನು ಕೊಡದೇ ಸತಾಯಿಸಿದ್ದಾರೆ. ಆದರೆ ವಿನಾಯಕನ ಶ್ರಮ ಅವರ ಮನಸ್ಸನ್ನು ಬದಲಿಸಿಬಿಟ್ಟಿದೆ. ಊದಬತ್ತಿ ಕೊಳ್ಳಲು ಯಾರು ಹಿಂದೇಟು ಹಾಕಿದ್ದರೋ ಅವರೇ ತಮ್ಮ ಪರಿಚಯದವರಿಗೆ ಹೇಳಿ ವಿನಾಯಕನ ಬಳಿ ಊದಬತ್ತಿಯನ್ನು ಕೊಳ್ಳುವಂತೆ ಮಾಡುತ್ತಿದ್ದಾರೆ. ನಗರದ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವವರು ವಿನಾಯಕನ ಊದಬತ್ತಿಯ ಖಾಯಂ ಗಿರಾಕಿಗಳು. ಬ್ಯಾಂಕ್ ನೌಕರರು, ಲಾಯರ್ಗಳೂ ಈತನ ಊದಬತ್ತಿಯನ್ನು ಕೊಳ್ಳುವವರೇ. ದೈಹಿಕ ವೈಕಲ್ಯದ ಕಾರಣದಿಂದಾಗಿ ಮಾತನಾಡಲು ಕಷ್ಟಪಡುವ ವಿನಾಯಕನ ಸ್ನೇಹಮಯ ಮನೋಭಾವ ಎಲ್ಲರನ್ನು ಸೇಳೆದುಬಿಟ್ಟಿದೆ. ಇದೀಗ ವಿನಾಯಕ ಹೆಗಡೆ ಊದಬತ್ತಿಯನ್ನು ಮಾರಾಟ ಮಾಡಲು ಹಿಡಿದು ಐದು ವರ್ಷಗಳಾಗಿವೆ.
ವಿನಾಯಕನ ಮನೆಯಲ್ಲಿ ತಾಯಿ, ಮಗ ಇಬ್ಬರೇ. ತಾಯಿಗೆ ಅನಾರೋಗ್ಯ. ಊದಬತ್ತಿಯನ್ನು ಮಾರಾಟ ಮಾಡುವ ಮಗ ತಾಯಿಯನ್ನು ಸಾಕುತ್ತಿದ್ದಾನೆ. ಬದುಕಿನಲ್ಲಿ ಅದಿಲ್ಲ, ಇದಿಲ್ಲ, ಉದ್ಯೋಗವಿಲ್ಲ, ಸೌಲಭ್ಯವಿಲ್ಲ ಎಂದು ಕೊರಗುವವರಿಗೆ ವಿನಾಯಕ ಒಂದು ಮಾದರಿಯಾಗುತ್ತಾನೆ. ಜೀವನದಲ್ಲಿ ಮುಂದೆ ಊದಬತ್ತಿ ಮಾರಾಟವನ್ನು ದೊಡ್ಡ ಉದ್ಯಮವನ್ನಾಗಿ ಮಾಡಿ ನಾಲ್ಕಾರು ಜನರಿಗೆ ಕೆಲಸವನ್ನು ನೀಡಬೇಕು ಎನ್ನುವ ಕನಸನ್ನು ಹೊಂದಿರುವ ವಿನಾಯಕ ಹೆಗಡೆಯ ಶ್ರಮಕ್ಕೆ ಎಲ್ಲರೂ ಬೆಂಬಲ ನೀಡುತ್ತಿದ್ದಾರೆ. ಇಂತಹ ವಿನಾಯಕನಿಗೆ ಶಿರಸಿ ನಗರದಾದ್ಯಂತ ಮಿತ್ರರೇ. ಕೆಲವು ಮೊಬೈಲ್ ಶಾಪಿನವರು ಈತನಿಗೆ ವ್ಯಾಪಾರ ಮಾಡಿಸಿಕೊಟ್ಟರೆ ನಗರದ ಅನೇಕ ಆಟೋಗಳವರು ವಿನಾಯಕನಿಂದ ದುಡ್ಡನ್ನು ತೆಗೆದುಕೊಳ್ಳದೇ ಬೇಕಾದಲ್ಲಿಗೆ ಆತನನ್ನು ಕರೆದೊಯ್ದು ಬಿಡುತ್ತಾರೆ. ನಗರದ ಬಹುತೇಕ ಬ್ಯಾಂಕುಗಳ ನೌಕರರು ಈತನ ಬಳಿ ವ್ಯಾಪಾರ ಮಾಡುತ್ತಾರೆ. ಈತನ ಶ್ರಮವನ್ನು ಕಂಡ ನಗರವಾಸಿಗಳು ನಗರದ ಬ್ಯಾಂಕಿನಲ್ಲಿ ಸಾಲವನ್ನೂ ಕೊಡಿಸಿದ್ದಾರೆ.
ಯಾರೂ ತನ್ನನ್ನು ಕರುಣೆಯಿಂದ ಕಾಣುವುದು ಬೇಡ. ಹೀಗಳೆಯುವುದು ಬೇಡ. ಕಷ್ಟಪಟ್ಟು ವ್ಯಾಪಾರ ಮಾಡುತ್ತೇನೆ. ಅದಕ್ಕೆ ಬೆಲೆ ನೀಡಿದರೆ ಸಾಕು ಎನ್ನುವ ವಿನಾಯಕ ಹೆಗಡೆ ಊದಬತ್ತಿ ವ್ಯಾಪಾರದಲ್ಲಿ ಮಹತ್ ಸಾಧನೆಯನ್ನು ಮಾಡುವ ಗುರಿ ಇಟ್ಟುಕೊಂಡಿದ್ದಾನೆ. ಸಾಧನೆಯ ಮಾರ್ಗದಲ್ಲಿ ಅಂಗವೈಕಲ್ಯತೆ ಸಮಸ್ಯೆಯೇ ಅಲ್ಲ ಎನ್ನುವುದು ಈತನ ಮನದಾಳದ ಮಾತು. ನೂರಾರು ಜನ ನಿರುದ್ಯೋಗಿಗಳಿಗೆ, ವಿಕಲಚೇತನರಿಗೆ ವಿನಾಯಕ ಹೆಗಡೆ ಮಾದರಿಯಾಗಿದ್ದಾನೆ. ತಮ್ಮ ಕಾಲಿನ ಮೇಲೆ ತಾವೇ ನಿಂತುಕೊಳ್ಳಲು ಸ್ಪೂರ್ತಿಯಾಗಿದ್ದಾನೆ. ಊದಬತ್ತಿ ವಿನಾಯಕ ಹೆಗಡೆಯವರನ್ನು ಸಂಪರ್ಕಿಸಬೇಕಾದರೆ 9483068087 ಈ ದೂರವಾಣಿಗೆ ಕರೆ ಮಾಡಬಹುದಾಗಿದೆ.

No comments:

Post a Comment