Saturday, December 20, 2014

ಅಘನಾಶಿನಿ ಕಣಿವೆಯಲ್ಲಿ-3

(ಮಲೆನಾಡ ಸೌಂದರ್ಯ)
              ಆ ದಿನ ವಿಕ್ರಮ ಪ್ರದೀಪನನ್ನು ಕಂಡೊಡನೆ `ಅರೇ.. ಇದೇನಿದು ಆಶ್ಚರ್ಯ.. ಬಹಳ ದಿನವಾಗಿತ್ತಲ್ಲಾ.. ನಿನ್ನನ್ನು ನೋಡಿ. ಏನು? ಯಾವ ಕಡೆಗೆ ಹೋಗಿತ್ತೋ ಸವಾರಿ? ಮತ್ತೆ ಏನಪ್ಪಾ ಸಮಾಚಾರ?..' ಎಂದು ಕೇಳಿದ.
               `ಹುಂ.. ಸಮಾಚಾರ ಏನು ಬಂತು? ಎಲ್ಲಾ ಒಳ್ಳೇದೆ. ಅಂದ ಹಾಗೆ ನಿನ್ನನ್ನು ಸ್ವಲ್ಪ ಅರ್ಜೆಂಟಾಗಿ ನೋಡ್ಬೇಕಿತ್ತು ಅದಕ್ಕೆ ಬಂದೆ..' ಎಂದ ಪ್ರದೀಪ.
               `ಏನಪ್ಪಾ ಅಂತ ಅರ್ಜೆಂಟು? ಏನು ವಿಷ್ಯ?' ಎಂದ ವಿಕ್ರಂ.
               `ಏನಿಲ್ಲಾ ನಾನು ಮೊನ್ನೆ ಒಂದು ವಾರ ಬೆಂಗಳೂರಿಗೆ ಹೋಗಿದ್ದೆ. ಬಹಳ ತುರ್ತು ವಿಷಯ ಆಗಿದ್ದರಿಂದ ನಿನಗೂ ಹೇಳಿರಲಿಲ್ಲ. ಅಲ್ಲಿಗೆ ಹೋಗಿದ್ದಾಗ ಒಬ್ರು ಸಿಕ್ಕಿದ್ರು ಅವ್ರ ಹೆಸರು ಜಯಂತರಾಮ್ ಅಂತ. ಅವರೊಂದು ಕಂಪ್ನಿಯಿಂದ ದೊಡ್ಡದೊಂದು ಸ್ಪರ್ಧೆ ಇಟ್ಟಿದ್ದಾರೆ. ಬಾಡಿ ಬಿಲ್ಡಿಂಗು, ಕರಾಟೆ, ಟ್ರೆಕ್ಕಿಂಗು, ಕುಂಗ್ ಫೂ, ವಾಲ್ ಕ್ಲೈಂಬಿಂಗ್ ಇತ್ಯಾದಿಗಳ ಬಗ್ಗೆ ಸ್ಪರ್ಧೆ ನಡೆಸಲಾಗುತ್ತಿದೆ. ಅದನ್ನ ನಿಂಗೆ ತಿಳಿಸೋಣ ಅಂತಲೇ ಬಂದೆ. ಅದು ಇರೋದು ಜನವರಿ 28ಕ್ಕೆ. ಬೆಂಗಳೂರ್ನಲ್ಲೇ..' ಎಂದು ಹೇಳಿದ ಪ್ರದೀಪ.
                 `ಅಂದ್ರೆ ಇವತ್ತು ಜನವರಿ 17. ಇನ್ನು ಬರೀ 11 ದಿನಗಳು ಇದೆಯಲ್ಲೋ. ಅಷ್ಟು ಟೈಮ್ನಲ್ಲಿ ಹೇಗೆ ತಯಾರಿ ಮಾಡಲಿ? ಯಾವಾಗ ಹೋಗ್ಲಿ? ಎಷ್ಟು ಜನರನ್ನು ಕರೆದುಕೊಂಡು ಹೋಗ್ಲಿ? ಜೊತೆಗೆ ಇಲ್ಲಿ ಪೈಪೋಟಿ ಬೇರೆ ಇದೆ. ಹತ್ತಿರದಲ್ಲೇ ಇನ್ನೊಂದು ಮಾರ್ಷಲ್ ಆರ್ಟ್ಸ್ ತರಬೇತಿ ಕೇಂದ್ರ ಬೇರೆ ಶುರುವಾಗಿದೆ. ಯಾಕೋ ಇದೆಲ್ಲಾ ಬೇಡ ಅನ್ನಿಸ್ತಿದೆ ದೀಪು. ಸುಮ್ನೆ ಎಲ್ಲಾ ಬಿಟ್ಟು ಮತ್ತೆ ಊರಿಗೆ ವಾಪಾಸು ಹೋಗ್ಲಾ ಅನ್ನಿಸ್ತಾ ಇದೆ..' ಎಂದು ಅರ್ಧ ನಿರಾಶೆಯೂ, ಅರ್ಧ ದುಃಖವೂ, ಖಿನ್ನತೆಯಿಂದಲೂ ಹೇಳಿದ ವಿಕ್ರಂ.
                `ಅದಕ್ಕೆಲ್ಲಾ ಯಾಕಪ್ಪಾ ಹಾಗೆ ಬೇಜಾರು ಮಾಡ್ಕೋತಿಯಾ? ನಾನಿದ್ದೀನಲ್ಲಾ ಮಾರಾಯಾ. ಎಲ್ಲಾ ವ್ಯವಸ್ಥೆ ಆಗಿದೆ. ನಿನ್ಜೊತೆ ನಾನೂ ಬರ್ತಿದ್ದೀನಿ. ಜನವರಿ 25ಕ್ಕೆ ಹೊರಡೋದು. ಜನವರಿ 30ಕ್ಕೆ ವಾಪಾಸು ಹೊರಡೋದು. ಮತ್ತೆ ಅದು, ಇದು ಅನ್ನೋದೆಲ್ಲಾ ಬಿಟ್ಟು ಸುಮ್ಮನೆ ಒಪ್ಕೋ. ತೀರಾ ಮತ್ತೆ ಕ್ಯಾತೆ ತೆಗೀಬೇಡ...ನಿನ್ ಸಮಸ್ಯೆಗಳೆಲ್ಲ ಏನೇ ಇರಲಿ. ಈ ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ನಿನಗೆ ನಿನ್ನ ತರಬೇತಿ ಕೇಂದ್ರಕ್ಕೆ ಲಾಭವಾಗುವುದೇ ಜಾಸ್ತಿ. ಗೆದ್ದರಂತೂ ಸಾಕಷ್ಟು ಹೆಸರು ಬರುತ್ತದೆ ಮಾರಾಯಾ.. ರಿಜೆಕ್ಟ್ ಮಾಡಬೇಡ.. ' ಎಂದ ಪ್ರದೀಪ.
              `ಅದೇನೋ ಸರಿ.. ಆ ವಿಷ್ಯ ಹಾಗಿರಲಿ. ನೀನ್ಯಾಕೆ ಬೆಂಗಳೂರಿಗೆ ಹೋಗಿದ್ದೆ? ' ಎಂದು ಕೇಳಿದ ವಿಕ್ರಂ.
              `ಅದನ್ನೆಲ್ಲಾ ಇನ್ನೊಮ್ಮೆ ಹೇಳ್ತೀನಿ. ಅಂದ ಹಾಗೆ ನಾನು ಸಧ್ಯ ನಿನ್ನ ಜೊತೆ ಇರೋಕಾಗೋದಿಲ್ಲ. ರೂಮು ಚೇಂಜ್ ಮಾಡ್ತಾ ಇದ್ದೀನಿ.' ಎಂದು ಹೇಳಿದ ಪ್ರದೀಪ್.
              `ಏನೋ ಇದು? ಎಲ್ಲಿಗೆ ಹೋಗ್ತಾ ಇದ್ದೀಯೋ? ಯಾಕೋ.. ಏನಾಯ್ತೋ? ಎಲ್ಲಿಗೆ ಹೋಗ್ತಾ ಇದ್ದೀಯೋ?'
              `ಥೋ ಮಾರಾಯಾ ಅದರದ್ದೊಂದು ದೊಡ್ಡ ಕಥೆ. ಯಾಕೂ ಇಲ್ಲ. ಇವತ್ತು ಬೇಡ. ಇನ್ನೊಮ್ಮೆ ಹೇಳ್ತೀನಿ. ನೀನು ನಿನ್ನ ಕನಿಷ್ಟ 10 ಜನರ ಟೀಂ ಸಜ್ಜು ಮಾಡಿ ಇಟ್ಕೋ. 25ಕ್ಕೆ ಹೊರಡೋದು ನೆನಪಿರ್ಲಿ. ಇನ್ನೊಂದ್ಸಾರಿ ಸಿಕ್ತೀನಿ.' ಎಂದು ಹೇಳುತ್ತಾ ಹೊರಟೇಹೋದ ಪ್ರದೀಪ. ಅವನ ಬಾಯಲ್ಲಿ `ಕಾಲವನ್ನು ತಡೆಯೋರು ಯಾರೂ ಇಲ್ಲ.. ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾ..' ಎಂಬ ಹಾಡು ಕೇಳಿಬರುತ್ತಿತ್ತು.
              ಈ ಘಟನೆಗಳನ್ನೆಲ್ಲಾ ಅನಾಮಿಕ ಜೋಡಿಕಂಗಳು ವೀಕ್ಷಿಸುತ್ತಿದ್ದವು. ಮಾತು ಕತೆಗಳನ್ನೆಲ್ಲ ಆಲಿಸಲು ಪ್ರಯತ್ನಿಸುತ್ತಿದ್ದವು. ವಿಕ್ರಮನಿಗಾಗಲೀ, ಪ್ರದೀಪನಿಗಾಗಲೀ ಇದು ಗೊತ್ತಾಗಲೇ ಇಲ್ಲ.

*********2**********

               ನೋಡ ನೋಡ್ತಾ ಇದ್ದಂತೆ ಜನವರಿ 25 ಬಂದೇ ಬಿಟ್ಟಿತು. ತೀರಾ ಹೊರಡುವ ಮುನ್ನ ಕಣ್ಣೀರು ಮನೆಗೆ ಪೋನ್ ಮಾಡಿದ. ಕಣ್ಣೀರು ಮನೆಯ ಲ್ಯಾಂಡ್ಲೈನ್ ಅದೇನಾಗಿತ್ತೋ. ಎಷ್ಟು ಸಾರಿ ಪ್ರಯತ್ನಿಸಿದರೂ ಸದ್ದು ಮಾಡಲಿಲ್ಲ. ಮೊಬೈಲ್ ಸಿಗ್ನಲ್ ಸಿಗದ ಪ್ರದೇಶವಾದ ಕಾರಣ ಮನೆಗೆ ಸುದ್ದಿ ತಿಳಿಸುವುದು ಹೇಗೆ ಎನ್ನುವ ಗೊಂದಲಕ್ಕೆ ಬಿದ್ದ. ಹಳೆಯ ಗಂಡನ ಪಾದವೇ ಗತಿ ಎನ್ನುವಂತೆ ಕೊನೆಯ ಕ್ಷಣದಲ್ಲಿ ಮನೆಗೆ ಪತ್ರವನ್ನು ಬರೆದು ಪೋಸ್ಟ್ ಮಾಡಿ ಬಂದ.
(ಅಘನಾಶಿನಿ ನದಿ)
             ಆ ದಿನ ಹೊರಡುವ ಮುನ್ನ ತನ್ನ ಜೊತೆಗಾರರೆಲ್ಲರೂ ಬಂದಿದ್ದಾರೋ ಇಲ್ಲವೋ ಎಂದು ನೋಡಿಕೊಂಡು ಬಸ್ಸನ್ನೇರಿದ. ಆಗಲೇ ಪ್ರದೇಪ ಬಂದು ತನ್ನ ಎಂದಿನ ಶೈಲಿಯ ವಾಗ್ಝರಿ ಹಾಗೂ ಗಾನಲಹರಿ ಪ್ರಾರಂಭಿಸಿದ್ದ. ಅವರು ಮಂಗಳೂರನ್ನು ಬಿಟ್ಟಿದ್ದು 7.30ಕ್ಕೆ.
            ಪ್ರದೀಪನ ಹರಟೆಗೋ ಅಥವಾ ಬೇರೇನೋ ಕಾರಣಕ್ಕೆ ಅವರಿಗೆಲ್ಲ ದಾರಿ ಸಾಗಿದ್ದೇ ಗೊತ್ತಾಗಲಿಲ್ಲ. ಅವರು ಬೆಂಗಳೂರನ್ನು ತಲುಪುವ ವೇಳೆಗೆ ಸಂಜೆ ಆರಾಗಿತ್ತು. ಅಲ್ಲಿ ಬಸ್ಸನ್ನು ಇಳಿಯುವ ಹೊತ್ತಿಗಾಗಲೇ ಒಬ್ಬ ಇಳಿ ವಯಸ್ಸಿನ ವ್ಯಕ್ತಿ ಎದುರಾದ. ಪ್ರದೀಪ ಅವರನ್ನು ವಿಕ್ರಮ ಹಾಗೂ ಅವನ ಜೊತೆಗಾರರಿಗೆ ಪರಿಚಯಿಸಿದ. ಅವರು ಕೃಷ್ಣಮೂರ್ತಿ ಎಂದೂ ಬಹಳ ಕಾಲದಿಂದ ಪರಿಚಯವೆಂದೂ ಕಷ್ಟಕಾಲದಲ್ಲಿ ತನಗೆ ಸಹಾಯ ಮಾಡಿದವರೆಂದೂ ತಿಳಿಸಿದ ಪ್ರದೀಪ. ಜೊತೆಗೆ ಆ ಮಹಾನುಭಾವರ ಮನೆಯಲ್ಲೇ ಉಳಿದುಕೊಳ್ಳುವ ವ್ಯವಸ್ಥೆ ಆಗಿದೆಯೆಂದೂ ತಿಳಿಸಿದ. ಕೊನೆಗೆ ಎಲ್ಲರೂ ಸೇರಿ ಮೂರ್ತಿಗಳ ಮನೆಗೆ ಹೊರಟರು.

*************

             ಅದೊಂದು ತೀರಾ ದೊಡ್ಡದಲ್ಲದಿದ್ದರೂ ತಕ್ಕಮಟ್ಟಿಗೆ ದೊಡ್ಡದಾಗಿ ಕಾಣುತ್ತಿದ್ದ, ಬಂಗಲೆಯಂತಹ ಮನೆ. ಆ ಮನೆಯ ಮುಂದೆ ಬಹುತೇಕ ಆ ಊರಿನ ಎಲ್ಲ ಜನರೂ ಸೇರಿದ್ದರು. ಅವರ ಮುಖಭಾವ ಅಲ್ಲಿಗೆ ಯಾರೋ ಒಬ್ಬ ಪ್ರಮುಖ ವ್ಯಕ್ತಿ ಬರುತ್ತಾನೆ ಎಂಬುದನ್ನು ತೋರಿಸುತ್ತಿತ್ತು,
             ಆ ಮನೆಯ ಯಜಮಾನನೇ ಬೇಣದಗದ್ದೆಯ ಶಿವರಾಮ. ಆ ಶಿವರಾಮ ಅವರೂ ಮನೆಯೆದುರು ನಿಂತು ಕಾಯುತ್ತಿದ್ದರು. ಸ್ವಲ್ಪ ಹೊತ್ತಿನಲ್ಲಿಯೇ  ಮನೆಯ ಕಂಪೌಂಡಿನ ಎದುರಿಗೆ ಒಂದು ಕಾರು ಬಂದು ನಿಂತಿತು. ಆ ಕಾರಿನಿಂದ ಓರ್ವ ಆಜಾನುಬಾಹು ವ್ಯಕ್ತಿ ಕೆಳಗಿಳಿದ. ನೋಡಲು ಎಣ್ಣೆಗೆಂಪು ಬಣ್ಣ. ಸಾಕಷ್ಟು ದಿನದಿಂದ ಕತ್ತರಿ ಪ್ರಯೋಗ ಮಾಡದಿದ್ದ ಮೀಸೆ. ಉದ್ದಾಗಿ ತುಟಿಯನ್ನು ಮುಚ್ಚಿತ್ತು. ಇನ್ ಷರ್ಟ್ ಮಾಡಿದ ಕಾರಣ ಶಿಸ್ತಿನಂತೆ ಕಾಣುತ್ತಿದ್ದ ವ್ಯಕ್ತಿತ್ವ. ಸಿಗರೇಟು ಸೇದುತ್ತಿದ್ದ ಎನ್ನುವುದರ ಕುರುಹಾಗಿ ಕಪ್ಪಾಗಿದ್ದ ಕೆಳತುಟಿ. ಇವಿಷ್ಟು ಆತನ ಮೇಲ್ಚಹರೆಯಾಗಿತ್ತು. ಕಾರಿನಿಂದ ಇಳಿದವನೇ ಸುಬ್ರಹ್ಮಣ್ಯ. ಬೇಣದಗದ್ದೆಯ ಶಿವರಾಮನ ತಮ್ಮ. ಕಾರಿನಿಂದಿಳಿದವನನ್ನು ಮನೆಯ ಕೆಲಸಗಾರರೆಲ್ಲ ಸ್ವಾಗತಿಸಿದರು. ಸಿಂಗಾಪುರದಲ್ಲಿ ಕೆಲಸದ ನಿಮಿತ್ತ ಉಳಿದಿದ್ದ ಸುಬ್ರಹ್ಮಣ್ಯ 8-10 ವರ್ಷಗಳ ಹಿಂದೆ ಊರಿಗೆ ಬಂದಿದ್ದ. ಆ ನಂತರ ಈಗಲೇ ಊರಿಗೆ ಬರುತ್ತಿದ್ದುದು.
            `ಬಂದ್ಯಾ ಸುಬ್ಬು.. ಬಾ.. ಒಳಗೆ... ಪ್ರಯಾಣ ಚಂದ ಆತಾ?' ಎಂದು ಕೇಳಿದ ಶಿವರಾಮ್. ಅದಕ್ಕೆ ಚುಟುಕಾಗಿ ಉತ್ತರಿಸಿದ ಸುಬ್ರಹ್ಮಣ್ಯ. ಸೀದಾ ಸರಸರನೆ ಮನೆಯೊಳಕ್ಕೆ ಹೋದ. ಉಳಿದವರು ಹಿಂಬಾಲಿಸಿದರು.
             ಬೇಣದಗದ್ದೆ ಅಪ್ಪಟ ಮಲೆನಾಡಿನ ಹಳ್ಳಿ. ಕೇವಲ ಮೂರೋ ನಾಲ್ಕೋ ಮನೆಗಳಿರುವ ಊರು ಇದು. ಮಲೆನಾಡಿನ ದಟ್ಟ ಕಾನನದೊಳಗೆ ಇರುವ ಈ ಹಳ್ಳಿಯ ಒಂದು ಪಕ್ಕದಲ್ಲಿ ದಡ್ಡ ಕಾಡು ಹಾಗೂ ಕಡಿದಾದ ದೈತ್ಯ ಬೆಟ್ಟ. ಇನ್ನುಳಿದ ಕಡೆಗಳಲ್ಲಿ ಬಳಸಿ ಹರಿಯುವ ಪಾಪನಾಶಿನಿಯಾದ ಅಘನಾಶಿನಿ ನದಿ. ಇದೇ ನದಿ ಜೀವದಾಯಿ. ಈ ನದಿಯ ಸುತ್ತಲೂ ಕತ್ತಲೆಯಂತಹ ಕಾನು. ಬೇಣದಗದ್ದೆಯೂ ಹೊಂದಿ ಕೋಂಡೇ ಇರುವ ಕಾರಣ ಇಲ್ಲೂ ದಟ್ಟ ಕಾನನವೇ ಇತ್ತು. ಇರುವ ಮನೆಗಳಲ್ಲಿ ಶಿವರಾಮ ಅವರ ಮನೆಯೇ ದೊಡ್ಡದು. ಇದಕ್ಕೆ ಕಾರಣಗಳಂತೂ ಸಾಕಷ್ಟಿದೆ. ಶಿವರಾಮ ಅವರ ತಂದೆ ತಲೆ ತಲಾಂತರದಿಂದ ಆಸ್ತಿವಂತರು. ದೊಡ್ಡ ಭಾಗಾಯ್ತದ ಜಮೀನು. ಊರಿನಲ್ಲಿ ಇರುವ ಉಳಿದ ಕುಟುಂಬಗಳು ಬೇರೆ ಕಡೆಯಿಂದ ಬಂದು ನೆಲೆಸಿದಂತವರು. ಶಿವರಾಮ್ ಅವರ ತಮ್ಮ ಸುಬ್ರಹ್ಮಣ್ಯ ಮನೆ ಕಟ್ಟಿಸಲು ಸಾಕಷ್ಟು ಖರ್ಚನ್ನು ಮಾಡಿದ್ದಾರೆ. ದೊಡ್ಡ ಮನೆ ಎಷ್ಟು ಭವ್ಯವೋ ಅಷ್ಟೇ ನಿಘೂಡವೂ ಆಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
             ಶಿವರಾಮ್ ಅವರ ಮನೆಯಲ್ಲಿ 8-10 ಎಕರೆಗೂ ಹೆಚ್ಚಿನ ಅಡಿಕೆ ತೋಟವಿದೆ. ಅಡಿಕೆ ತೋಟದಲ್ಲಿ ಯಾಲಕ್ಕಿ, ಕಾಳುಮೆಣಸು, ಕೊಕ್ಕೋ, ವೆನ್ನಿಲಾಗಳು ಬೆಳೆಯುತ್ತಿವೆ. ನಾಲ್ಕೆಕರೆ ಗದ್ದೆಯೂ ಇದೆ. ಗದ್ದೆಯಲ್ಲಿ ಭತ್ತದ ಜೊತೆಗೆ ಕಬ್ಬು, ಕೆಲವೊಂದು ಋತುವಿನಲ್ಲಿ ಉದ್ದು, ವಟಾಣಿ, ಕಡಲೆ, ಶೇಂಗಾಗಳನ್ನು ಬೆಳೆಯಲಾಗುತ್ತದೆ. ಶಿವರಾಮ್ ಅವರು ಚಿಕ್ಕಂದಿನಿಂದ ಕೃಷಿಯತ್ತ ಒಲವು ಬೆಳೆಸಿಕೊಂಡು ಮನೆಯಲ್ಲಿಯೇ ಉಳಿದರೆ ಸುಬ್ರಹ್ಮಣ್ಯ ಮಾತ್ರ ಕೃಷಿಯತ್ತ ಅನಾಸಕ್ತಿ ಬೆಳಸಿಕೊಂಡು ಮನೆಯಿಂದ ಹೊರಕ್ಕೆ ಹೋಗಿ ಮಾರ್ಕೇಟಿಂಗ್ ವೃತ್ತಿಯನ್ನು ಕೈಗೊಂಡು ಅದರಲ್ಲಿ ಹಂತ ಹಂತವಾಗಿ ಯಶಸ್ಸನ್ನು ಗಳಿಸಿ ಸಿಂಗಾಪುರಕ್ಕೆ ಹೋಗಿ ಅಲ್ಲಿಯೇ ನೆಲೆ ಕಂಡುಕೊಂಡಿದ್ದರು.
         ಊರಿನಲ್ಲಿ ಸುಬ್ರಹ್ಮಣ್ಯನನ್ನು ಸುಬ್ಬು, ಸುಬ್ಬಣ್ಣ ಎಂದು ಎಲ್ಲರೂ ಕರೆಯುತ್ತಾರಾದರೂ ಆತನ ಶ್ರೀಮಂತಿಕೆ, ಸಿಂಗಾಪುರದಲ್ಲಿ ನೆಲೆಸಿರುವ ಬಗೆಗೆ ಊರಿನವರು ಮಾತನಾಡುವುದೇ ಬೇರೆಯ ರೀತಿ. ಸುಬ್ರಹ್ಮಣ್ಯನದ್ದು ಮಾರ್ಕೇಟಿಂಗ್ ಕೆಲಸ ಅಲ್ಲವೇ ಅಲ್ಲ. ಬದಲಾಗಿ ಸ್ಮಗ್ಲಿಂಗು, ಅದೂ ಇದೂ ಕೆಲಸವಿದೆ. ಪಶ್ಚಿಮ ಘಟ್ಟದ ಕಾಡಿನಿಂದ ಆಯುರ್ವೇದ ಔಷಧಿಗಳನ್ನು ಕದ್ದು ವಿದೇಶಕ್ಕೆ ಸಾಗಿಸುವ ದೊಡ್ಡದೊಂದು ಜಾಲ ಸುಬ್ರಹ್ಮಣ್ಯನ ಜೊತೆಯಿದೆ ಎಂದೆಲ್ಲ ಮಾತನಾಡಿಕೊಳ್ಳುತ್ತಿದ್ದರು. ಎಂತಾ  ಒಳ್ಳೆಯ ಅಣ್ಣನಿಗೆ ಎಂತಾ ತಮ್ಮ ಎಂದೂ ಮಾತನಾಡಿಕೊಳ್ಳುತ್ತಿದ್ದರು. ಇಂತಹ ಮಾತುಗಳು ಅಣ್ಣ ಶಿವರಾಮನ ಕಿವಿಗೂ ಬಿದ್ದಿತ್ತಾದರೂ ಆ ಕುರಿತು ಹೆಚ್ಚು ತಲೆಕೆಡಿಸಿಕೊಳ್ಳದೇ ಸುಮ್ಮನುಳಿದಿದ್ದ.

****
(ಮುಂದುವರಿಯುತ್ತದೆ)

No comments:

Post a Comment