Wednesday, December 24, 2014

ಅಘನಾಶಿನಿ ಕಣಿವೆಯಲ್ಲಿ-4


          ಮೂರ್ತಿಗಳ ಮನೆಯನ್ನು ಸೇರುವ ವೇಳೆಗೆ ಆಗಲೇ ಮದ್ಯಾಹ್ನ ಕಳೆದು ಸಂಜೆ ಧಾವಿಸುತ್ತಿತ್ತು. ಬಂದವರು ವಿಶ್ರಾಂತಿಗಾಗಿ ನಿಲ್ಲಲೇ ಇಲ್ಲ. ಬೆಂಗಳೂರಿನ ಬೀದಿಗಳಲ್ಲಿ ತಿರುಗಾಡುವ ಹುಚ್ಚು ಎಲ್ಲರಿಗೂ. ತಿರುಗಿದರು. ಮೂರ್ತಿಯವರ ಮನೆಯಿದ್ದ ಮಲ್ಲೇಶ್ವರಂ, ಬ್ರಿಗೇಡ್ ರೋಡ್, ಎಂ. ಜಿ. ರೋಡ್ ಸೇರಿದಂತೆ ಬಹಳಷ್ಟು ಕಡೆಗಳಲ್ಲಿ ಓಡಾಡಿ ಬಂದರು. ಮರಳಿ ಮೂರ್ತಿಯವರ ಮನೆ ಸೇರುವ ವೇಳೆಗೆ ಸಂಜೆ 9ನ್ನೂ ದಾಟಿತ್ತು.
           ಬರುವ ವೇಳೆಗೆ ಅಲ್ಲಿಯೇ ಇದ್ದ ಮೂರ್ತಿಯವರು `ಏನ್ರಪ್ಪಾ ಬೆಂಗಳೂರು ತಿರುಗಾಡಿ ಬಂದಿರಾ? ಯಾವ್ ಯಾವ್ ಕಡೆಗೆ ಹೋಗಿದ್ರಿ?' ಎಂದು ಕೇಳಿದರು.
          `ಇಲ್ಲ.. ಇಲ್ಲ.. ಎಲ್ಲ ಕಡೆ ಹೋಗಿಲ್ಲ.. ಮಲ್ಲೇಶ್ವರಂ ಅಷ್ಟೇ ಓಡಾಡಿದ್ವಿ ನೋಡಿ..' ಎಂದು ತಮಾಷೆ ಮಾಡಿದ ವಿಕ್ರಂ. `ಹಿಡಿಸ್ತಾ ಬೆಂಗಳೂರು?' ಕೇಳಿದರು ಮೂರ್ತಿಗಳು.
           `ಹುಂ.. ಬೆಂಗಳೂರು ಹಿಡಿಸದರೇ ಇದ್ದರೆ ಹೇಗೆ ಹೇಳಿ? ಮಂಗಳೂರಿನಂತೆ ಸೆಖೆ, ಉಪ್ಪುನೀರು ಯಾವುದೂ ಇಲ್ಲಿಲ್ಲ. ತಂಪು ಹವೆ, ಆಹ್ಲಾದಕರ ವಾತಾವರಣ.. ಬಹಳ ಖುಷಿಯಾಗುತ್ತದೆ..' ಎಂದ ವಿಕ್ರಂ. ಆ ಸಮಯದಲ್ಲಿ ಮೂರ್ತಿಯವರ ಮನೆಯವರೆಲ್ಲ  ಆಗಮಿಸಿದ್ದರು. ಹೀಗಾಗಿ ಎಲ್ಲರನ್ನೂ ಮತ್ತೊಮ್ಮೆ ಪರಿಚಯಿಸಿದರು.

*****4*****

           `ನೋಡಿ.. ನಾಳೆ ಜವರಿ 26. ಎಲ್ಲರೂ ಗಣರಾಜ್ಯೋತ್ಸವದ ತಲೆಬಿಸಿಯಲ್ಲಿ ಇರ್ತಾರೆ. ಇಂಥ ಟೈಮನ್ನು ನಾವು ಹಾಳುಮಾಡ್ಕೋಬಾರ್ದು. ಇಂಥ ಹೊತ್ತಲ್ಲಿ ಪೊಲೀಸರು ಬೇರೆ ಕಡೆ ಯೋಚನೆ ಮಾಡ್ತಿರ್ತಾರೆ. ನಾವು ಹೆಚ್ಚು ಹೆಚ್ಚಿನ ಪ್ರಮಾಣದಲ್ಲಿ ಈ ವಸ್ತುಗಳನ್ನ ಅಂದ್ರೆ ಗಾಂಜಾ, ಕೋಕೋ ಎಲೆಗಳು, ಆಯುರ್ವೇದ ಔಷಧಿಗಳು, ಆಫೀಮು ಇವನ್ನೆಲ್ಲ ಸಾಗಿಸಬೇಕು. ಕಾರವಾರ, ತದಡಿ, ಭಟ್ಕಳ, ಅಂಕೋಲಾ, ಧಾರೇಶ್ವರ  ಈ ಭಾಗಗಳಲ್ಲಿ ಬೀಚಿನ ಮೂಲಕ ವಿದೇಶಗಳಿಗೆ ಈ ವಸ್ತುಗಳನ್ನು ಸಾಗಿಸುವುದು ಸುಲಭ. ನೆನಪಿರ್ಲಿ ಎಲ್ಲ ಕಡೆ ಹುಷಾರಾಗಿರಬೇಕು. ವಿದೇಶದಿಂದ ಬರುವ ಮಾಲುಗಳನ್ನು ಸರಿಯಾಗಿ ಸಂಗ್ರಹ ಮಾಡಿಕೊಳ್ಳಿ. ಬಂದ ಮಾದಕ ವಸ್ತುಗಳನ್ನು ಸರಿಯಾಗಿ ಹಂಚಿಕೆ ಮಾಡಬೇಕು. ಶಿರಸಿಯಲ್ಲೂ ಈ ಕಾರ್ಯ ಸಮರ್ಪಕವಾಗಿ ಆಗಬೇಕು. ನೆನಪಿರ್ಲಿ. ಸ್ವಲ್ಪ ಎಚ್ಚರ ತಪ್ಪಿದರೂ ನಿಮ್ಮೆಲ್ಲರ ತಲೆ ಎಗರುತ್ತದೆ ನೆನಪಿಟ್ಕೊಂಡಿರಿ..' ಎಂದು ಒಬ್ಬಾತ ಅದೊಂದು ನಿಘೂಡ ಸ್ಥಳದಲ್ಲಿ ತನ್ನವರಿಗೆ ಹೇಳುತ್ತಿದ್ದ. ಉಳಿದವರು ಅದಕ್ಕೆ ತಲೆಯಲ್ಲಾಡಿಸುತ್ತಿದ್ದರು.
           ಜನರನ್ನು ಒಳ್ಳೆಯತನದಿಂದ ಕೆಟ್ಟತನಕ್ಕೆಳೆಯುವ, ಅವರಿಗೆ ಬೇರೆ ಯಾವುದರೆಡೆಗೂ ಯೋಚನೆಯೇ ಇರದಂತೆ, ಮಾದಕ ವಸ್ತುಗಳ ದಾಸರನ್ನಾಗಿ ಮಾಡುವ ಜಾಲವೊಂದು ಅಲ್ಲಿತ್ತು. ಅಲ್ಲದೇ ಮಲೆನಾಡಿನ ಮಡಿಲಲ್ಲಿ ಬೆಳೆಯುವ ಅತ್ಯಮೂಲ್ಯ ಗಿಡಮೂಲಿಕೆಗಳನ್ನು ಕದ್ದು ಸಾಗಿಸಿ ಬಹು ರಾಷ್ಟ್ರೀಯ, ಔಷಧಿ ತಯಾರಿಕಾ ಸಂಸ್ಥೆಗಳಿಗೆ ಮಾರಾಟವನ್ನು ಮಾಡಲಾಗುತ್ತಿತ್ತು. ಈ ಜಾಲಕ್ಕೆ ಜನರ ಒಳಿತು, ಕೆಡುಕುಗಳು ಇಷ್ಟವಿರಲಿಲ್ಲ. ಹಣಗಳಿಕೆಯೊಂದೇ ಮೂಲೋದ್ಧೇಶವಾಗಿತ್ತು. ಪೊಲೀಸ್ ಇಲಾಖೆ ಇವರ ಬೆನ್ನು ಬಿದ್ದು ದಶಕಗಳೇ ಕಳೆದಿದ್ದವು. ಆದರೆ ಇಲಾಖೆ ಚಿಕ್ಕ ಜಾಡನ್ನು ಹಿಡಿಯಲೂ ವಿಫಲವಾಗಿತ್ತು. ಗೂಢಚರ ಇಲಾಖೆ ತಮ್ಮ ಅಧಿಕಾರಿಗಳನ್ನು ಈ ಜಾಲದ ಹಿಂದೆ ಬಿಟ್ಟಿತ್ತು. ಜೊತೆ ಜೊತೆಯಲ್ಲಿ ಖಾಸಗಿ ಗೂಢಚಾರರೂ ಕೂಡ ತಮ್ಮದೇ ಕೆಲಸವನ್ನು ಮಾಡಲು ಆರಂಭಿಸಿದ್ದರು. ಈ ಜಾಲವನ್ನು ಬೇಧಿಸಿದರೆ ತಮಗೆ ಹೆಮ್ಮೆ ಎಂದುಕೊಂಡಿದ್ದರು. ಆದರೆ ಒಂದು ಸಣ್ಣ ಎಳೆ ಸಿಕ್ಕಿತು ಎಂದು ಹುಡುಕಲು ಆರಂಭಿಸಿದರೆ ಗೊಂದಲ ಉಂಟಾಗಿ ಎತ್ತೆತ್ತಲೋ ಸಾಗುತ್ತಿತ್ತು.

****

         ಜನವರಿ 26. ಗಣರಾಜ್ಯದ ದಿನ. ಮೊದಲೇ ನಿರ್ಧರಿಸಿದಂತೆ ವಿಕ್ರಂ ಹಾಗೂ ಜೊತೆಗಾರರು ವಿಧಾನ ಸೌಧದ ಎದುರು ಬಂದು ಸೇರಿದರು. ಅಲ್ಲಿಂದ ಪರೇಡ್ ಗ್ರೌಂಡಿಗೆ ಹೋದರು. ಏನೋ ವಿಶೇಷ ನಡೆಯುತ್ತದೆ ಎಂದುಕೊಂಡು ಹೋದವರಿಗೆ ರಾಜಕಾರಣಿಗಳ ಭಾಷಣ ಬೇಸರವನ್ನು ತರಿಸಿತು. ನಿರಾಸೆಯಿಂದ ಸುತ್ತಮುತ್ತಲೂ ಓಡಾಡಲು ಆರಂಭಿಸಿದರು. ಚಿನ್ನಸ್ವಾಮಿ ಕ್ರೀಡಾಂಗಣವನ್ನು ವೀಕ್ಷಿಸಿ, ಹತ್ತಿರದಲ್ಲೇ ಇದ್ದ ಕಬ್ಬನ್ ಪಾರ್ಕನ್ನು ವೀಕ್ಷಣೆಗೆ ಹೊರಟರು. ಕಬ್ಬನ್ ಪಾರ್ಕಿನಲ್ಲಿದ್ದ ಪ್ರೇಮಿಗಳ ಜೋಡಿಗಳನ್ನು ನೋಡಿ ಬೆರಗಾದರು. ಕೆಲವೆಡೆ ಅಸಹ್ಯವನ್ನೂ ಪಟ್ಟುಕೊಂಡರು. ಜೊತೆಗಿದ್ದ ಪ್ರದೀಪನ ಕಣ್ಣಿಗೆ ವಿಶೇಷ ಸಂಗತಿಯೊಂದು ಬಿದ್ದಿತು. ವಿಕ್ರಂ ಹಾಗೂ ಅವನ ಜೊತೆಗಾರರು ಎಲ್ಲ ಕಡೆಗೆ ಓಡಾಡುತ್ತಿದ್ದರೂ ವ್ಯಕ್ತಿಯೊಬ್ಬ ಇವರನ್ನು ಹಿಂಬಾಲಿಸುತ್ತಿದ್ದ. ಬಹಳ ಸಮಯದಿಂದ ವಿಕ್ರಂ-ಜೊತೆಗಾರರು ಹೋದ ಕಡೆಯಲ್ಲೆಲ್ಲ ಬರುತ್ತಿದ್ದ. ಚಲನವಲನ ವೀಕ್ಷಿಸುತ್ತಿದ್ದ. ಪ್ರದೀಪ ಮೊದ ಮೊದಲು ಇದನ್ನು ಅಲಕ್ಷಿಸಿದನಾದರೂ ನಂತರ ಆ ವ್ಯಕ್ತಿ ಹಿಂಬಾಲಿಸುತ್ತಿದ್ದುದು ಖಚಿತವಾದ ನಂತರ ತಾನು ಸ್ವಲ್ಪ ಎಚ್ಚರಿಕಿಯಿಂದ ಇರತೊಡಗಿದೆ. ಈ ವಿಷಯವನ್ನು ಮೊದಲು ವಿಕ್ರಂನಿಗೆ ತಿಳಿಸೋಣ ಎಂದುಕೊಂಡನಾದರೂ ಕೊನೆಗೆ ಬೇಡ ಎಂದುಕೊಂಡು ಸುಮ್ಮನಾದ. ಹಾಗಾದರೆ ಹೀಗೆ ಹಿಂಬಾಲಿಸುತ್ತಿದ್ದ ವ್ಯಕ್ತಿ ಯಾರು? ಪ್ರದೀಪನೇನಾದರೂ ವಿಕ್ರಂನಿಗೆ ಈ ವಿಷಯ ತಿಳಿಸಿದ್ದರೆ ಮುಂದೇನಾದರೂ ತಿರುವು ಘಟಿಸುತ್ತಿತ್ತೇ? ಇದೇನಿದು ಇಂತಹ ಗೂಢತೆ?

*****

             ಒಂದೆರಡು ದಿನಗಳನ್ನು ಬೆಂಗಳೂರಿನಲ್ಲಿ ಕಳೆದ ಮೇಲೆ ನಿರ್ಣಾಯಕ ಎನ್ನಿಸಿದಂತಹ ದಿನಗಳು ಬಂದವು. ಜನವರಿ 28. ಆ ದಿನದ ಸೂರ್ಯ ಟೆನ್ಶನ್ ನೊಂದಿಗೆ ಹುಟ್ಟಿದನೇನೋ ಎನ್ನುವಂತೆ ಎಲ್ಲರಿಗೂ ಅನ್ನಿಸತೊಡಗಿತ್ತು. ಎಲ್ಲರೂ ಸಮಗ್ರ ತಯಾರಿಯೊಂದಿಗೆ ನಿಗದಿತ ಸ್ಥಳಕ್ಕೆ ಹೋದರು. ಅಲ್ಲಾಗಲೇ ಜನರೆಲ್ಲರೂ ಸೇರಿದ್ದರು.
             ಅದೊಂದು ದೊಡ್ಡ ಬಯಲಿನಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿದ್ದವು. ಅಲ್ಲಿ ಹೋಗಿ ಕುಳಿತುಕೊಳ್ಳುವ ವೇಳೆಗಾಗಲೇ ಸ್ಪರ್ಧಾ ಘೋಷಣೆಯೂ ಆಯುತು. ಪ್ರಾರಂಭದ ಒಂದೆರಡು ಸ್ಪರ್ಧೆಗಳಲ್ಲಿ ಗೆಲುವುಗಳನ್ನೇ ಕಾಣಲಿಲ್ಲ. ನಂತರ ಜೂಡೋದಲ್ಲಿ ಒಬ್ಬಾತ ಬಹುಮಾನ ಗಳಿಸಿದ. ನಂತರ ಗೆಲುವೆಂಬುದು ಎಲ್ಲ ಕಡೆಗಳಿಂದಲೋ ಎದ್ದೋಡಿ ಬಂದಿತು. ಕುಂಗ್-ಫೂ, ಕತ್ತಿ-ವರಸೆ, ಕರಾಟೆ, ವಾಲ್ ಕ್ಲೈಂಬಿಂಗ್ ಗಳಲ್ಲೆಲ್ಲಾ ಭರ್ಜರಿ ಗೆಲುವುದು ವಿಕ್ರಮನ ಅದ್ವೈತ ಆತ್ಮರಕ್ಷಣೆ ಕೇಂದ್ರದ ತಂಡಗಳಿಗಾಯಿತು.
            ತಮಾಷೆಗೆ ಎಂಬಂತೆ 3 ಸ್ಪರ್ಧೆಗಳಲ್ಲಿ ವಿಕ್ರಂ ಪಾಲ್ಗೊಂಡಿದ್ದ. ಆದರೆ ಆ ಮೂರೂ ಸ್ಪರ್ಧೆಯ ಪ್ರಥಮ ಸ್ಥಾನ ವಿಕ್ರಂನಿಗೆ ಮೀಸಲಾಯಿತು. ಇದರಿಂದ ಖುಷಿಯೋ ಖುಷಿ ಹೊಂದಿದ ಆತ.
            ಒಟ್ಟಿನಲ್ಲಿ ಬೆಂಗಳೂರಿನ ಪ್ರವಾಸ ಗೆಲುವನ್ನೇ ತಂದಿತು ಅವರಿಗೆ. ಮರುದಿನ ಕನ್ನಡದ ಬಹುತೇಕ ಎಲ್ಲಾ ಕ್ರೀಡಾ ಪುಟಗಳಲ್ಲಿ ಇವರ ಸಾಧನೆಯನ್ನು ಪ್ರಶಂಶಿಸಿ ಬರೆದಿದ್ದರು. ಮಂಗಳೂರ ಸಾಹಸಿಗರು, ವಿಕ್ರಂನ ತಂಡದ ವಿಕ್ರಮ ಮುಂತಾದ ತಲೆಬರಹದೊಂದಿಗೆ ವರದಿಗಳು ಬಂದಿದ್ದವು. ಹೀಗೆ ಒಮ್ಮಿಂದೊಮ್ಮೆಲೆ ವಿಕ್ರಮ ಕರ್ನಾಟಕದಾದ್ಯಂತ ಮನೆ ಮಾತಾದ. ಇದರಿಂದ ಮೂರ್ತಿಯವರ ಮನೆಯಲ್ಲಂತೂ ಬಹಳ ಸಂತಸ ಪಟ್ಟರು. ತಾವೇ ಗೆದ್ದಂತೆ ಕುಣಿದಾಡತೊಡಗಿದರು.
            ವಿಕ್ರಂ ತಂಡದವರು ಜನವರಿ 29ರಂದು ಬೆಂಗಳೂರಿನಲ್ಲೇ ಉಳಿದು ಜನವರಿ 30ರಂದು ಮಂಗಳೂರಿಗೆ ವಾಪಾಸಾದರು. ರೂಮಿನಲ್ಲಿ ಬಂದು ಕುಳಿತುಕೊಳ್ಳುವಷ್ಟರಲ್ಲೇ ವಿಕ್ರಮನ ಮೊಬೈಲ್ ಬಿಡುವಿಲ್ಲದಂತೆ ರಿಂಗಣಿಸತೊಡಗಿತ್ತು. ಪೋನಿನ ಮೇಲೆ ಫೋನ್. ಅಭಿನಂದನೆಗಳ ಸುರಿಮಳೆ. ಎಲ್ಲ ಕರೆಗಳನ್ನು ಸ್ವೀಕರಿಸಿ, ಅವರ ಅಭಿನಂದನೆಯನ್ನು ಸ್ವೀಕರಿಸುವಷ್ಟರಲ್ಲಿ ವಿಕ್ರಂ ಸುಸ್ತೋ ಸುಸ್ತು.
           ಆ ದಿನ ವಿಕ್ರಂ ಬಹಳ ಸಂತಸದಿಂದ ಸ್ವರ್ಗಕ್ಕೇ  ಮೂರು ಗೇಣು ಎಂಬಂತೆ ಆಡತೊಡಗಿದ್ದ. ಅದರ ನೆನಪಲ್ಲೇ ಆತ ಮಲಗಿ ಸವಿ ಕನಸನ್ನೂ ಕಾಣಲಾರಂಭಿಸಿದ.

****
     
          ಮರುದಿನ, ವಿಕ್ರಂ ಬಹಳ ಲೇಟಾಗಿ ಎದ್ದ. ತಿಂಡಿ ಇತ್ಯಾದಿಯನ್ನು ಮುಗಿಸುವ ವೇಳೆಗಾಗಲೇ ಆತನ ರೂಮಿನ ಕಾಲಿಂಗ್ ಬೆಲ್ ಸದ್ದಾಗತೊಡಗಿತು. ಹೋಗಿ ಬಾಗಿಲು ತೆಗೆದ. ಬಾಗಿಲಲ್ಲಿ ಒಬ್ಬಾಕೆ ನಿಂತಿದ್ದಳು. ಹಿಂದೆ ಒಬ್ಬಾತ ಗಡ್ಡದವನು ನಿಂತಿದ್ದ. ವಿಕ್ರಮನಿಗೆ ಒಮ್ಮೆಲೆ ಅಚ್ಚರಿಯಾದರೂ ಸಾವರಿಸಿಕೊಂಡು ಅವರನ್ನು ಒಳಕ್ಕೆ ಸ್ವಾಗತಿಸಿದ. ಬ್ಯಾಚುಲರ್ ರೂಮ್. ಒಳಗಿದ್ದ ವಸ್ತುಗಳು ಸಾಕಷ್ಟು ಅಸ್ತವ್ಯಸ್ತವಾಗಿದ್ದವು. ಮುಜುಗರದಿಂದ ಅವನ್ನೆಲ್ಲ ಮುಚ್ಚಿಡುವ ಪ್ರಯತ್ನ ಮಾಡಿದ. ಬಂದ ಆಗಂತುಕರು ನಕ್ಕರು.
          ಅವರೀರ್ವರೂ ಒಳಕ್ಕೆ ಬಂದವರೇ ತಮ್ಮ ಪರಿಚಯವನ್ನು ತಿಳಿಸಿದರು. ಅವರೀರ್ವರಲ್ಲಿ ಒಬ್ಬಾಕೆ ವಿಜೇತಾ ಎಂದೂ, ಇನ್ನೊಬ್ಬ ಗಡ್ಡಧಾರಿ ವ್ಯಕ್ತಿ ನವೀನಚಂದ್ರ ಎಂದೂ ತಿಳಿಯಿತು. ನವೀನಚಂದ್ರ ಮಂಗಳೂರು ಮೇಲ್ ಪತ್ರಿಕೆಯ ಉಪಸಂಪಾದಕರೆಂದೂ, ವಿಜೇಜಾ ಅದರ ವರದಿಗಾರ್ತಿಯೆಂದೂ ತಿಳಿಯಿತು. ನವೀನಚಂದ್ರ ಸುಮಾರು 50ರ ಆಸುಪಾಸಿನವನು. ವಿಜೇತಾಳಿಗೆ ಬಹುಶಃ 22-23 ಇರಬಹುದು. ಆಗ ತಾನೇ ಕಾಲೇಜನ್ನು ಮುಗಿಸಿ ಬಂದಿದ್ದಳೇನೋ ಎಂದುಕೊಂಡ. ಚಂದನೆಯ ದುಂಡು ಮುಖ. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕು ಎನ್ನಿಸುವಂತಿದ್ದಳು ಅವಳು.
         `ನಿಮ್ಮ ಬಗ್ಗೆ ಪೇಪರಿನಲ್ಲಿ ನೋಡಿದೆ. ನಿಮ್ಮಂಥವರು ಮಂಗಳೂರಿನವರು ಎಂದರೆ ಹೆಮ್ಮೆಯ ಸಂಗತಿ. ಹಾಳು ಬಿದ್ದು ಹೋಗುತ್ತಿರುವ ಇಂದಿನ ಯುವ ಜನತೆಗೆ ತಿಳಿ ಹೇಳಲು ನಿಮ್ಮನ್ನು ಬಳಸಿ, ನಿಮ್ಮ ಸಂದರ್ಶನ ಮಾಡಲು ಬಂದಿದ್ದೇವೆ.' ಎಂದು ನವೀನಚಂದ್ರ ಹೇಳಿದರು.
          `ಅಯ್ಯೋ ಅಂತಹ ದೊಡ್ಡ ಸಾಧನೆ ನಾವೇನೂ ಮಾಡಿಲ್ಲ.. ಥೋ... ಬಿಡಿ..' ಎಂದ ವಿಕ್ರಂ.
          `ಇಲ್ಲ.. ಇಲ್ಲ.. ನೀವು ಈಗ ಮಾಡಿರುವ ಸಾಧನೆ ಬಹು ದೊಡ್ಡದು ನೋಡಿ..' ಎಂದಳು ವಿಜೇತಾ. ಆಕೆಯ ಧ್ವನಿ ಮಧುರವಾಗಿತ್ತು.
          `ಏನೋ, ಎಂಥೋ.. ನಾನು ಕಲಿಸಿದೆ, ನನ್ನ ಪ್ರೆಂಡ್ಸ್ ಪ್ರದೀಪ್ ಜೊತೆಗಿದ್ದು ಸಹಾಯ ಮಾಡಿದ. ಗೆದ್ವಿ. ಅದಿರ್ಲಿ ಬಿಡಿ.. ನಿಮ್ಮನ್ನ ನನ್ನ ಸಾಹಸಿ ತಂಡದ ಬಳಿಗೆ ಕರೆದೊಯ್ಯುತ್ತೇನೆ. ಬನ್ನಿ ಎಂದು ಅವರನ್ನು ಕರೆದೊಯ್ದ.
           ಹೀಗೆ ಕರೆದೊಯ್ದಿದ್ದನ್ನೂ ಕೂಡ ಆ ಅಪರಿಚಿತ ವ್ಯಕ್ತಿ ವೀಕ್ಷಿಸಿ, ಫಾಲೋ ಮಾಡುತ್ತಿದ್ದ. ಆತ ತಾನು ಕಂಡಿದ್ದನ್ನು ಇನ್ನೊಬ್ಬರಿಗೆ ತಿಳಿಸುತ್ತಿದ್ದ. ಆದರೆ ಯಾಕೆ ಹೀಗೆ ಮಾಡುತ್ತಿದ್ದಾನೆ ಎನ್ನುವುದು ಮಾತ್ರ ನಿಘೂಡವಾಗಿತ್ತು.
          ವಿಕ್ರಂ ಅವರಿಬ್ಬರನ್ನೂ ಅದ್ವೈತ ಆತ್ಮರಕ್ಷಣೆ ಕೇಂದ್ರಕ್ಕೆ ಕರೆದೊಯ್ದ. ಎಲ್ಲರನ್ನೂ ಪರಿಚಯಿಸಿದ. ಅವರು ಏನೇನೋ ಪ್ರಶ್ನೆ ಕೇಳಿದರು. ಇವರು ಉತ್ತರಿಸಿದರು. ಆದರೆ ಆ ದಿನ ಮಾತ್ರ ಪ್ರದೀಪನ ಸುಳಿವೇ ಇರಲಿಲ್ಲ. ಆತನ ಪರಿಚಯಿಸಲು ಆದಿನ ಸಾಧ್ಯವಾಗಲೇ ಇಲ್ಲ. ನವೀನ ಚಂದ್ರ ಹಾಗೂ ವಿಜೇತಾ ಇಬ್ಬರೂ ತಮ್ಮನ್ನು ಮತ್ತೆ ಭೇಟಿಯಾಗಬೇಕೆಂದು ಹೇಳಿ ಹೊರಟುಹೋದರು.
          ಮರುದಿನ ಮಂಗಳೂರು ಮೇಲ್ ನಲ್ಲಿ ಇವರ ಸಂದರ್ಶನವೇ ಪ್ರಮುಖ ಸುದ್ದಿಯಾಗಿ ಹೊರಹೊಮ್ಮಿತ್ತು. ಇದರಿಂದ ಖುಷಿಯಾದ ವಿಕ್ರಂ ಅದಕ್ಕೆ ಕಾರಣರಾದವರಿಗೆ ಮನದಲ್ಲಿಯೇ ಥ್ಯಾಂಕ್ಸ್ ಎಂದುಕೊಂಡ. ಮುಂದೊಂದು ದಿನ ಇದೇ ಹೊಸ ತಿರುವನ್ನು ನೀಡಲಿತ್ತು.

*****

(ಮುಂದುವರಿಯುತ್ತದೆ)

No comments:

Post a Comment